ಕುಟಿಲ ಬುದ್ದಿಜೀವಿಗಳ ಓಲಾಟ

ಕಳೆದೆರಡು ವಾರಗಳ ಹಿಂದೆ ಮಠಾಧೀಶ್ವರರೋರ್ವರ ಅಧಿಕಾರ ಹಸ್ತಾಂತರದ ಅಭಿಪ್ರಾಯವನ್ನು ಕುರಿತು ವಿಶ್ಲೇಷಿಸಿದ್ದ ನಮಗೆ, ಈಗ ಸಾಹಿತಿಗಳ ವಲಯದಲ್ಲಿ ಮೂಡಿರುವ ಭಿನ್ನಾಭಿಪ್ರಾಯ ಈ ವಾರದ ಅಂಕಣವಾಗುತ್ತಿದೆ. ಒಟ್ಟಿನಲ್ಲಿ ಎಲ್ಲೆಲ್ಲೂ ಅಧಿಕಾರ ಹಸ್ತಾಂತರವೇ ಸುದ್ದಿಗೆ ಗ್ರಾಸವಾಗಿದ್ದರೂ ಇಲ್ಲಿ ಅದು ನೆಪ ಮಾತ್ರವಾಗಿ ಈ ಲೇಖನದ ಮುಖ್ಯಾಂಶ ಬೇರೆಯದೇ ಆಗಿದೆ.

ಇತ್ತೀಚೆಗೆ ಚಾಮರಾಜನಗರದ ಜಿಲ್ಲಾ ಕಸಾಪ ಸಭೆಯಲ್ಲಿ ಹಿರಿಯ ಸಾಹಿತಿ ಹಂಪನಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಸಮ್ಮಿಶ್ರ ಸರಕಾರದ ಪಾಲುದಾರ ಜೆಡಿಎಸ್ ಪಕ್ಷವು ಅಧಿಕಾರವನ್ನು ಹಸ್ತಾಂತರಿಸದಿದ್ದರೆ ತಾವು ವಿಧಾನಸಭೆಯ ಮುಂದೆ ನಿರಶನ ಹೂಡುವುದಾಗಿ ಹೇಳಿದ್ದನ್ನೂ ಮತ್ತು ಅಲ್ಲಿಯೇ ಇದ್ದ ಕಸಾಪ ಅಧ್ಯಕ್ಷ ಚಂಪಾ ಅವರು ಇದನ್ನು ವಿರೋಧಿಸುತ್ತ "ಸಾಹಿತಿಗಳು ಮಾಡಲಿಕ್ಕಿರುವ ಅನೇಕ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಹೀಗೆ ಅನವಶ್ಯಕವಾಗಿ ರಾಜಕೀಯವನ್ನು ಮಾತನಾಡಬಾರದು" ಎಂದು ವಿರೋಧಿಸಿದರೆಂದು ಪತ್ರಿಕೆಗಳಲ್ಲಿ ಓದಿದ ನನಗೆ ಆಶ್ಚರ್ಯವೇನೂ ಆಗಲಿಲ್ಲ.

ಸರಿಯಾಗಿ ಯೋಚಿಸಿದರೆ, ಸಾಮಾಜಿಕ ಬದ್ದತೆ ಮತ್ತು ಜವಾಬ್ದಾರಿಯನ್ನು ಹೊತ್ತ ಸಾಹಿತಿಗಳು ಸಾಮಾಜಿಕ ಕಳಕಳಿಗೆ, ಜನರಿಂದಾಗಲೀ, ಅಧಿಕಾರಿಗಳಿಂದಾಗಲೀ, ಮಠಾಧಿಪತಿಗಳಿಂದಾಗಲೀ, ಧೂರ್ತ ರಾಜಕಾರಣಿಗಳಿಂದಾಗಲೀ ಅಥವಾ ಅಂತಹ ಧೂರ್ತರೇ ತುಂಬಿರುವ ಸರ್ಕಾರದ ಯಾವುದೇ ಮೂರ್ಖ ನಿರ್ಧಾರಗಳಿಂದಾಗಲೀ ಧಕ್ಕೆಯುಂಟಾದಾಗ ಅಥವ ಅಂತಹ ಪರಿಸ್ಥಿತಿಯೊದಗಬಹುದೆಂಬ ಸುಳಿವು ಸಿಕ್ಕಾಗಲೆಲ್ಲ ದನಿಯೆತ್ತಿ ಜನಜಾಗೃತಿಗೊಳಿಸುವುದೂ ಮತ್ತು ಗಟ್ಟಿಯಾಗಿ ಹೋರಾಡುವುದೂ ಜವಾಬ್ದಾರಿಯುತ ಸಾಹಿತಿಗಳ ಕರ್ತವ್ಯವೇ ಆಗಿದೆ.

ನಮ್ಮ ಬುದ್ದಿಜೀವಿಗಳು ಹರೆಯದ ಬಿಸಿರಕ್ತದ ಹುರುಪಿನಲ್ಲಿ ಸಮಾಜದ ಹುಳುಕುಗಳನ್ನೆತ್ತಿ ತೋರಿಸುತ್ತ ತಮ್ಮ ಬರವಣಿಗೆಯಿಂದ ಕ್ರಾಂತಿಯನ್ನೇ ಮೆರೆದು, ಬೆಳೆಯುತ್ತಿದ್ದ ಅಂದಿನ ಯುವಪೀಳಿಗೆಗೆ ಮಾದರಿಯೆನಿಸಿ, ಯುವಜನಾಂಗದ ಅಘೋಷಿತ ’ರ್‍ಓಲ್ ಮಾಡೆಲ್’ಗಳೆನಿಸಿದ್ದ ಈ ಬುದ್ದಿಜೀವಿ ಸಾಹಿತಿಗಳು ವಯಸ್ಸಾದಂತೆ ಬಿಸಿ ಆರಿ, ಯಾವುದೇ ಒಬ್ಬ ಮಾಮೂಲೀ ವ್ಯಕ್ತಿಯಂತೆ ತಮ್ಮ ಆಸ್ತಿ, ಅಂತಸ್ತು, ಪ್ರತಿಷ್ಟೆ, ತಮ್ಮ ಮಕ್ಕಳ ಉನ್ನತಿ ಮತ್ತು ಅಧಿಕಾರದಾಹಗಳ ದಾಸರೇ ಆಗಿ ಮಾರ್ಪಾಟಾಗಿದ್ದಾರೆ.

ಇತ್ತೀಚಿನ ನಮ್ಮ ಬುದ್ದಿಜೀವಿ ಸಾಹಿತಿಗಳ ವರ್ತನೆಯನ್ನೇ ಗಮನಿಸಿ. ಬಹುಪಾಲು ಬುದ್ದಿಜೀವಿಗಳು ಜವಾಬ್ದಾರಿಯುತವಾಗಿ ವರ್ತಿಸದೆ ವಿವೇಚನೆಯಿಲ್ಲದೆ ಜಾತ್ಯಾತೀತ ರಾಜಕಾರಣಿಗಳನ್ನು ಮೀರಿಸುವಷ್ಟು ’ಓಲೈಕೆ’ ಗೆ ಶರಣಾಗಿದ್ದಾರೆ. ಒಂದು ಕೋಮಿನ ಜನ ಪೂಜಿಸುವ ದೇವತೆಗಳನ್ನು ಕಾಮಪ್ರಚೋದಕವಾಗಿ ಚಿತ್ರಿಸಿದ ಎಂ. ಎಫ್. ಹುಸೇನ್ ರನ್ನು ಅಪ್ರತಿಮ ಕಲಾಕಾರರೆಂದೂ ಮತ್ತೊಂದು ಕೋಮಿನ ದೇವನನ್ನು ಚಿತ್ರಿಸಿದ ನೆದರ್ ಲ್ಯಾಂಡಿನ ವ್ಯಂಗಚಿತ್ರಗಾರನನ್ನು ಕೋಮು ಗಲಭೆಯ ಪ್ರಚೋದಕನೆಂದೂ ಅಭಿವ್ಯಕ್ತಿತ್ವದ ಸಮನ್ವಯವನ್ನು ಮೆರೆಯುವುದು, ಇದನ್ನು ಪ್ರಶ್ನಿಸಿದವರನ್ನು ’ಚಡ್ಡಿ’ ಗಳೆಂದು (ಚಿದಾನಂದಮೂರ್ತಿಗಳನ್ನು ಜರೆದಂತೆ) ಜರೆಯುವುದು, ಒಂದೆಡೆ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಅರಿವಿದ್ದು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸಿ, ಬಡ ಮಕ್ಕಳು ಬರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಯನ್ನು ಸಲ್ಲದ ನೆಪಗಳನ್ನು ನೀಡಿ ವಿರೋಧಿಸುವುದು ಮತ್ತು ಇಂದು ಕೃಷಿಕರು ಕೃಷಿಕಾರ್ಮಿಕರು ಸಿಗದೆ ನೊಂದು ಫಲವತ್ತಾದ ಭೂಮಿಯನ್ನು ಪಾಳು ಬಿಡುವಂತಹ ಪರಿಸ್ಥಿತಿ ಕರ್ನಾಟಕದ ಉದ್ದಗಲಕ್ಕೂ ಇದ್ದರೂ ಈ ನಿಜಪರಿಸ್ಥಿತಿಯ ಅರಿವಿದ್ದೂ ಇಲ್ಲದಂತೆ ಯಾವೊತ್ತೋ ಸತ್ತು ಇತಿಹಾಸವಾಗಿ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಅಪ್ರಸ್ತುತವೂ ಅಭಾಸವೂ ಆದ ನಕ್ಸಲ್ (ಆದರ್ಶ?) ವಾದವನ್ನು ಬೆಂಬಲಿಸುತ್ತಿರುವ ಸಂಗತಿಗಳನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯದು.

ಅಷ್ಟೇ ಅಲ್ಲದೆ ಪ್ರಶಸ್ತಿಗಳ ಲಾಬಿಗೋ, ಪ್ರಚಾರದ ಹಪಾಹಪಿಗೋ, ತಮಗೊಂದು ಬೆಂಗಳೂರಿನಲ್ಲಿ ಸರ್ಕಾರೀ ಸೈಟು ಗಿಟ್ಟಿಸಿಕೊಳ್ಳಬೇಕೆಂದೋ ಅಥವಾ ತಮ್ಮೊಳಗೆ ಅವಿತಿರುವ ಕುಟಿಲ ಕಾಮನೆಯ ಕಡಿತದ ದೆಸೆಯಿಂದಲೋ ಇಂದು ಕನ್ನಡದ ಬಹುತೇಕ ಬುದ್ದಿಜೀವಿ ಸಾಹಿತಿಗಳು ಸೆಕ್ಯುಲರ್ ಪದದ ನಿಜ ಅರ್ಥವನ್ನು ’ಓಲೈಕೆ’ ಗೆ ವ್ಯಾಖ್ಯಾನಿಸಿ, ತಮ್ಮ ಅನುಕೂಲಕ್ಕನುಗುಣವಾಗಿ ಸೆಕ್ಯುಲರ್ ಪದವನ್ನು ತಿರುಚಿ, ಈ ಬುದ್ಧಿಜೀವಿ ಸಾಹಿತಿಗಳನ್ನು ತಮ್ಮ ’ರೋಲ್ ಮಾಡೆಲ್’ ಗಳೆಂದು ಬಗೆದು ಬೆಳೆದ ಯುವ ಜನಾಂಗವು ತಮ್ಮ ಅಂದಿನ ’ರ್‍ಓಲ್ ಮಾಡೆಲ್’ಗಳ ಬಗೆಗೆ ಅಸಹ್ಯ ಪಡುವಷ್ಟು ಲದ್ಧಿಜೀವಿಗಳೆನಿಸಿದ್ದಾರೆ.

ಇಂತಹ ಮೂರ್ಖರನ್ನು ’ರ್‍ಓಲ್ ಮಾಡೆಲ್’ಗಳೆಂದುಕೊಂಡಿದ್ದೆವೆಲ್ಲಾ ಎಂದು ಕೊರಗುತ್ತಿರುವ ಸಂದರ್ಭದಲ್ಲಿ ಹಂಪನಾ ಅವರು ದನಿಯೆತ್ತಿ, ರಾಜಕೀಯ ಪಕ್ಷಗಳ ಸಾಮಾಜಿಕ ವಚನಬದ್ಧತೆಯನ್ನು ಪ್ರಶ್ನಿಸಿ, ಸಾಹಿತಿಗಳಿಗೆ ತಕ್ಕುದಾದ ಕಾರ್ಯವನ್ನು ಮಾಡಹೊರಟಿರುವುದು ಒಂದು ಅತ್ಯಂತ ಸಮಾಧಾನಕರ ಬೆಳವಣಿಗೆ.

ಯಾಕೋ ಇದನ್ನೆಲ್ಲಾ ನೋಡಿದರೆ, ಕನ್ನಡ ಸಾರಸ್ವತ ಲೋಕದಲ್ಲಿ ಬರೆದಂತೆ ಬಾಳಿ, ಪ್ರತಿಪಾದಿಸಿದ್ದನ್ನು ಜೀವಿಸಿದ ಏಕೈಕ ನಿಜ ಬುದ್ದಿಜೀವಿ ಸಾಹಿತಿಗಳಾದ ಮತ್ತು ನಮ್ಮ ಯುವಜನಾಂಗಕ್ಕೆ ಹೆಮ್ಮೆಯ ಮಾದರೀ ವ್ಯಕ್ತಿಯಾಗಿದ್ದ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ಇನ್ನೂ ಬಹುಕಾಲ ನಮ್ಮೊಂದಿಗಿರಬೇಕಿತ್ತು ಎನಿಸುತ್ತದೆ.

ವಿನೋದ:

ಸಾಹಿತಿ ಚಂಪಾ ರವರಿಗೆ ಅವರದೇ ಸಾಹಿತ್ಯ ಶೈಲಿ ಚುಟುಕು ಮಾದರಿಯ ಕುಟುಕು.

ಚಂಪಾ,
ನೀವೇನಾ ಅಭಿವ್ಯಕ್ತಿತ್ವತೆಯ ಪಂಪ
ಇಲ್ಲಾ ಹಾಗೆಂದುಕೊಂಡವರ ಪಿಂಪಾ? (ಇಂಗ್ಲಿಷ್ ಪದ)
ಹಾಗಿದ್ದರೆ ನಿಮಗಿದೆ ನಮ್ಮ ಅನುಕಂಪ,
ಚಂಪಾ.

No comments: