ಹೊಣೆಗೇಡಿ ಪತ್ರಕರ್ತರ ಸೋಗು

ಇತ್ತೀಚೆಗೆ ’ಹೋಯ್ ಬೆಂದಗಾಳೂರ್’ ಪತ್ರಿಕೆಯಲ್ಲಿ ’ಇಂಡಿಯಾ ಟುಡೇ ಯಾವ ಮಟ್ಟಕ್ಕಿಳಿದಿದೆ ನೋಡಿ’ ಲೇಖನವನ್ನು ನೋಡಿ ಗಲಿಬಿಲಿಗೊಂಡೆನು. ತಮ್ಮ ಲೇಖನದಲ್ಲಿ ’ಇಂಡಿಯಾ ಟುಡೆ’ಯು ತನ್ನ ಸಪ್ಲಿಮೆಂಟ್ ಪತ್ರಿಕೆಯಲ್ಲಿ ಕಾಮಪ್ರಚೋದಕ ಚಿತ್ರಗಳಿಂದೊಡಗೂಡಿದ ಐಷಾರಾಮಿ ವಸ್ತುಗಳನ್ನು ಕುರಿತಾದ ಲೇಖನಗಳನ್ನು ನಮ್ಮ ಬುದ್ದಿಜೀವಿ ಪತ್ರಕರ್ತ/ಸಾಹಿತಿ ಸಂಪಾದಕರು ಹೀಗಳೆದು ಬರೆದಿದ್ದರು. ತಮ್ಮ ’ಹೋಯ್ ಬೆಂದಗಾಳೂರ್’ ಪತ್ರಿಕೆಯಲ್ಲಿ ರೌಡಿಯಿಸಂ, ಕ್ರೈಂ, ರೇಪ್, ಮರ್ಡರ್ ಗಳನ್ನು ವಿಜೃಂಭಿಸಿ ಬರೆದೇ ಈ ಮಟ್ಟಕ್ಕೆ ಬೆಳೆದಿರುವ ಈ ಮಹಾಶಯರು ಇದನ್ಯಾಕೆ ಹೀಗಳೆದರೆಂದು ಆಶ್ಚರ್ಯವಾಯಿತು. ವಿಕೃತ ಮನಸ್ಸುಗಳು, ’ರತಿವಿಜ್ಞಾನ’ದಂತಹ ಕೆಳಮಟ್ಟದ ಪತ್ರಿಕೆ ದೊರಕದೆ ಚಡಪಡಿಸುತ್ತಿದ್ದಾಗ ’ಹೋಯ್ ಬೆಂದಗಾಳೂರ್’, ’ಪೋಲೀ(ಸ್) ನ್ಯೂಸ್’ ಮುಂತಾದ ಪತ್ರಿಕೆಗಳು ಪರ್ಯಾಯವಾಗಿ ಆ ಗ್ಯಾಪ್ ಅನ್ನು ತುಂಬಿ ವಿಕೃತತೆಯನ್ನು ತೃಪ್ತಿಪಡಿಸಿಯೇ ಈ ಮಟ್ಟಕ್ಕೆ ಬೆಳೆದುವೆಂಬುದನ್ನು ಯಾರೂ ಅರಿಯರೆ?. ಕಾಲಕ್ರಮೇಣ ’ಹೋಯ್ ಬೆಂದಗಾಳೂರ್’ ತನ್ನ ದೃಷ್ಟಿಕೋನವನ್ನು ಬದಲಿಸಿಕೊಂಡಿರಬಹುದು. ಆದರೆ ಇಂದು ಕನ್ನಡದ ಯುವಜನತೆ ರೌಡಿಯಿಸಂ ಕಡೆಗೆ ತೀವ್ರ ಆಕರ್ಷಿತಗೊಂಡಿರುವುದರಲ್ಲಿ ’ಹೋಯ್ ಬೆಂದಗಾಳೂರ್’ ಕೊಡುಗೆ ಗಣನೀಯವಾಗಿದೆಯೆಂಬುದನ್ನು ಇದರ ಸಂಪಾದಕರು ಮರೆತಿರಬೇಕು.

ಈಗಲೂ ಅದೆಂತದೋ ಸುಡುಗಾಡು ಕ್ರೈಂ...... ಧಾರಾವಾಹಿಯನ್ನು ತೆಗೆಯುತ್ತ, ಕೀಳುಮಟ್ಟದ ಗೂಂಡಾಗಿರಿ ಸಿನೆಮಾಗಳಲ್ಲಿ ನಟಿಸುತ್ತ ತಮ್ಮ ತಿಕ್ಕಲುತನವನ್ನು ಮೆರೆಯುತ್ತಿರುವ ಈ ಬುದ್ದಿಜೀವಿ ಪತ್ರಕರ್ತ ಕಂ ಸಾಹಿತಿ ಕಂ ನಟ, ಇತ್ತೀಚೆಗೆ ಮಕ್ಕಳಿಂದ ಮುದುಕರಾದಿಯಾಗಿ ಎಲ್ಲರಿಗೂ ಲೈಫ್ ಕೋಚ್ ರಂತೆ ಪೋಸ್ ಕೊಡುತ್ತಿದ್ದಾರೆ. ಒಮ್ಮೊಮ್ಮೆ ಹೃದಯ ಚೆಕ್ ಮಾಡಿಸಿಕೊಳ್ಳಿರೆಂದೋ, ಒಮ್ಮೊಮ್ಮೆ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಿರೆಂದೋ, ಹುಡುಗಿಯರು ತಮ್ಮ ಬಾಯ್ ಫ್ರೆಂಡ್ ಗಳನ್ನು ಪರೀಕ್ಷಿಸಿರೆಂದೋ ಇಲ್ಲ ಗೃಹಿಣಿಯರು ತಮ್ಮ ಗಂಡಂದಿರ ನೆತ್ತಿಯನ್ನು ಕುಕ್ಕಿರೆಂದೋ ಉಚಿತ ಸಲಹೆ ಕೊಡುತ್ತಾರೆ. ಒಮ್ಮೊಮ್ಮೇ ದಿಢೀರೆಂದು ಅವರಲ್ಲಿನ ಕೀಳರಿಮೆ ಎದ್ದಾಗ ಇನ್ಫಿಯ ನಾರಾಯಣಮೂರ್ತಿಯವರನ್ನೋ ಅಥವಾ ಯು. ಆರ್. ಅನಂತಮೂರ್ತಿಯವರನ್ನೋ ಹೀಗಳೆದು ತಮ್ಮನ್ನು ಸಮಾಧಾನಿಸಿಕೊಳ್ಳುವುದು, ಮಗದೊಮ್ಮೆ ಗರ್ವದ ಮದವೇರಿದಾಗ, ಬದುಕಿದ್ದರೆ ಒಂದು ಕೈ ನೋಡಿಯೇ ಬಿಡುತ್ತಿದ್ದೆ ಎಂದು ಲಂಕೇಶ್ ರನ್ನು ಜರೆದು, ಮತ್ತೊಮ್ಮೆ ನೇರ ತಮ್ಮ ಲೆವೆಲ್ ಅನ್ನು ಇಂಟರ್ ನ್ಯಾಶನಲ್ ಮಟ್ಟಕ್ಕೆ ತೆಗೆದುಕೊಂಡುಹೋಗಿ ಬಿಲ್ ಗೇಟ್ಸ್, ಕ್ಲಿಂಟನ್ ರನ್ನೋ ಅಥವಾ ಒಟ್ಟಾರೆ ಅಮೆರಿಕಾವನ್ನು ಮೂದಲಿಸಿ ತಮ್ಮ ಲೆವೆಲ್ ಅನ್ನು ಐಟಿ/ಬಿಟಿಯಂತೆ ಗ್ಲೋಬಲ್ ಆಗಿ ಸಮೀಕರಿಸಿಕೊಳ್ಳುತ್ತ ತಮ್ಮನ್ನು ವಿಶ್ವದ ಒಬ್ಬ ವಿಶಿಷ್ಟ ಬುದ್ದಿಜೀವಿಯಂತೆ ಚಿತ್ರಿಸಿಕೊಳ್ಳುತ್ತಾರೆ.

ವಿಷಾದದ ಸಂಗತಿಯೆಂದರೆ ಬೆಂಗಳೂರಿನ ವಿಕೃತ ಪ್ರೇಮಿಯೊಬ್ಬನ ಆಸಿಡ್ ದಾಳಿಗೆ ತುತ್ತಾಗಿ ಇವರ ಸಹಾಯಹಸ್ತವನ್ನು ಪಡೆದಿರುವ ಮುಗ್ಧ ಯುವತಿಯೋರ್ವಳಿಗೆ ಈ ಮಹಾಶಯರು ಒಂದಾನೊಂದು ಕಾಲದಲ್ಲಿ ಕ್ರೌರ್ಯವನ್ನು ವಿಜೃಂಭಿಸಿ ಭೂಗತರಾಗಿದ್ದ ರೌಡಿಗಳಿಗೆಲ್ಲ ’ನಾಯಕ’ ಪಟ್ಟ ಕಟ್ಟಿ, ಆ ವಿಕೃತಪ್ರೇಮಿಯಷ್ಟೇ ಅಲ್ಲದೆ ಇಂದಿನ ಯುವಜನಾಂಗವೇ ಅಂತಹ ಕ್ರೌರ್ಯವನ್ನು ಮೆರೆಯುವ ರೌಡಿಯಿಸಂ ಗೆ ತೀವ್ರ ಆಕರ್ಷಿತರಾಗಿ ಅದನ್ನೇ ಮಾಡಹೊರಟಿರುವುದಕ್ಕೆ ಬೀಜ ನೆಟ್ಟಿದ್ದರೆಂಬುದನ್ನು ಅರಿಯದವಳಾಗಿದ್ದಾಳೆ.

ಹಾಗೆ ವಿಮರ್ಶಿಸುವುದಾದರೆ, ಕರ್ನಾಟಕದ ಇಂದಿನ ಸ್ಥಿತಿಗತಿಗಳಿಗೆ ಪತ್ರಕರ್ತರ (ದಿನಪತ್ರಿಕೆಗಳ) ಕೊಡುಗೆಯನ್ನೇ ಪ್ರಶ್ನಿಸಿಕೊಳ್ಳಿ. ಸುಮ್ಮನೆ ಇಂದಿನ ದಿನಪತ್ರಿಕೆಗಳ ಸುದ್ದಿಗಳೆಡೆ ಒಮ್ಮೆ ಕಣ್ಣು ಹಾಯಿಸಿ ನೋಡಿ. ಸಂಪುಟ ವಿಸ್ತರಣೆಯ ಸಮಯದಲ್ಲಾದರೆ ಒಬ್ಬ ರಾಜಕಾರಣಿ ತಾನು ಪ್ರಬಲ ಕೋಮಿನವನೆಂದೂ ತನಗೆ ಅಬಕಾರೀ ಖಾತೆ ಬೇಕೆಂದು ಹೇಳಿದ್ದನ್ನೋ ಅಥವ ಮತ್ತೊಬ್ಬ ತಾನು ಹಿಂದುಳಿದ ವರ್ಗದವನೆಂದೋ ತನಗೆ ಪ್ರಮುಖ ಖಾತೆ ಬೇಕೆಂತಲೂ ಕೇಳುವುದನ್ನೋ ರೋಚಕವಾಗಿ ವರದಿಸುವ ಈ ಪತ್ರಕರ್ತರು ಕಡೆಯಪಕ್ಷ ಕೊನೆಗೊಂದು ಸಾಲಾದರೂ ತಮ್ಮ ವಿವೇಚನೆಯ ವಾಕ್ಯವನ್ನು ಸೇರಿಸಿರುವುದಿಲ್ಲ. ಆ ರಾಜಕಾರಣಿಗೆ ಆ ಖಾತೆಯ ಕುರಿತಾದ ವಿದ್ಯಾಭ್ಯಾಸ, ಅನುಭವಗಳನ್ನು ಪ್ರಶ್ನಿಸಿಯೋ ಅಥವಾ ಆ ಖಾತೆಯಲ್ಲಿ ಅವನ ಉದ್ದೇಶ ಹೆಚ್ಚಿನ ಹಣ ಮಾಡುವುದೆಂದೋ ಒಂದು ವಾಕ್ಯವನ್ನಾದರೂ ಸೇರಿಸಿ, ಪ್ರಶ್ನಿಸಿ ಬರೆದರೆ ಎಷ್ಟೋ ಜನಜಾಗೃತಿಯನ್ನು ಮೂಡಿಸಬಹುದು. ಜಾತಿ ಪಂಗಡಗಳ ಸಂಘಗಳ ಸಭೆಗಳ ಕುರಿತು, ಬೇವಿನಮರದಲ್ಲಿ ಹಾಲು ಬರುವುದು, ಭಿಕ್ಷುಕನೊಬ್ಬ ಟ್ಯೂಬ್ ಲೈಟ್ ತಿನ್ನುವುದು, ತಲೆ ಕೆಟ್ಟ ಯಾವನೋ ಮರವೇರಿ ಕುಳಿತದ್ದು ಇನ್ನು ಮುಂತಾದ ವಿವೇಚನೆ, ವಿಶ್ಲೇಷಣೆ ಇಲ್ಲದ ವರದಿಗಳಿಂದ ಜಾತೀಯತೆ ಮೂಢತೆಗಳನ್ನು ಪ್ರಮುಖಾಂಶವಾಗಿ ಮೆರೆಸುವರು. ಕೆಲವೊಮ್ಮೆ ಪಾಶ್ಚಿಮಾತ್ಯ ಪತ್ರಿಕೆಗಳನ್ನು ಅನುಕರಿಸುತ್ತ ಜೂ ಒಂದರ ಹುಲಿ ನಾಲ್ಕು ಮರಿ ಹಾಕಿದ್ದು, ಒಬ್ಬ ಸಿನಿಮಾ ನಟ ಬಿರಿಯಾನಿ ತಿನ್ನುವುದೂ ಸುದ್ದಿಯಾಗುತ್ತವೆ. ನಿತ್ಯವೂ ಇಂತಹ ವರದಿಗಳನ್ನು ಓದಿದ ಜನರಲ್ಲಿ ಇನ್ನೆಲ್ಲಿಂದ ವಿವೇಚನೆಗಳು ಹುಟ್ಟುತ್ತವೆ?

ಗಮನಿಸಿ ನೋಡಿ, ಈ ವರದಿಗಾರರು ತಮ್ಮ ವರದಿಯನ್ನು ರೋಚಕಗೊಳಿಸುವ ಭರದಲ್ಲಿ, ’ಕುಮಾರಣ್ಣ’, ’ದಾವಣಗೆರೆ ದೊರೆ’, ’ಬಳ್ಳಾರಿ ಧಣಿ’, ’ಅಪ್ಪಾಜಿ’, ’ಅಮ್ಮ’, ’ನೀಲಿ ಕಣ್ಣಿನ ಹುಡುಗ’, ’ಮೇಡಂ’ ಇನ್ನು ಮುಂತಾದ ಪದಪ್ರಯೋಗದಿಂದ ಜನಗಳಲ್ಲಿ ಕೀಳರಿಮೆಯೆಂಬ ಮಾರಿಯನ್ನು ವ್ಯಾಪಕವಾಗಿ ಹಬ್ಬಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯದ ಮೇಲೆ ಯಾವ ರೀತಿಯ ಪರಿಣಾಮಗಳಾಗಬಹುದೆಂಬ ಕಲ್ಪನೆಯೂ ಇಲ್ಲದೆ ತಮ್ಮ ವರದಿಗಳನ್ನು ರೋಚಕಗೊಳಿಸುತ್ತ ರಾಜಕಾರಣಿಗಳ ಬಾಲಬಡುಕರೇ ಆಗಿಬಿಟ್ಟಿದ್ದಾರೆ.

ವೃತ್ತಪತ್ರಿಕೆಗಳು ಪ್ರಸ್ತುತ ವಿದ್ಯಾಮಾನಗಳನ್ನು ವಿಶ್ಲೇಷಿಸಿ ಜಾಗೃತಿ ಮೂಡಿಸುತ್ತಿವೆ ನಿಜ. ಆದರೆ ಈ ಪತ್ರಿಕೆಗಳು ಎಷ್ಟು ಜನರನ್ನು ಮುಟ್ಟುತ್ತಿವೆ? ಸಹಜವಾಗಿ ಹೆಚ್ಚು ಸರ್ಕ್ಯುಲೇಷನ್ ಇರುವ ದಿನಪತ್ರಿಕೆಗಳೇ ಹೆಚ್ಚು ಜನರನ್ನು ಮುಟ್ಟುವುದು. ಆದ್ದರಿಂದ ಈ ಪತ್ರಿಕೆಗಳು ತಮ್ಮ ವರದಿಗಳನ್ನು ಪ್ರಾಮಾಣಿಕವಾಗಿ ವರದಿಸುತ್ತ, ದೇವೇಗೌಡರ ಬಾಲಬಡುಕರು ಅವರನ್ನು ’ಅಪ್ಪಾಜಿ’ಯೆಂದೋ, ಕುಮಾರಸ್ವಾಮಿಯನ್ನು ’ಕುಮಾರಣ್ಣ’ನೆಂದೋ, ಕಾಂಗ್ರೆಸ್ಸಿಗರು ಸೋನಿಯಾರನ್ನು ’ಮೇಡಂ’ ಎಂದೋ ಗುಲಾಮರಂತೆ ಕರೆದರೆ ಕರೆದುಕೊಳ್ಳಲು ಬಿಟ್ಟು ತಮ್ಮ ಪಾಡಿಗೆ ತಾವು ಸುದ್ದಿಯನ್ನು ಸುಶಿಕ್ಷಿತ ಶೈಲಿಯಲ್ಲಿ ಬರೆದರೆ ಸಮಾಜದಲ್ಲಿ ಎಷ್ಟೋ ಕೀಳರಿಮೆ ನಿಲ್ಲುತ್ತದೆ.

ವಿಷಾದ:

ಒಟ್ಟಿನಲ್ಲಿ ಬ್ರಿಟಿಷರಿಂದ ಭ್ರಷ್ಟ ನೇತಾರರಿಗೂ, ಬಲಾಢ್ಯರಿಗೂ ಸ್ವೇಚ್ಚಾಚಾರ (ಸ್ವಾತಂತ್ರ್ಯವಲ್ಲ) ಹಸ್ತಾಂತರಗೊಂಡು ದಿನಪತ್ರಿಕೆಗಳು ಜನಸಾಮಾನ್ಯರಿಗೆ ಈ ಪುಢಾರಿಗಳ, ಬಲಾಢ್ಯರ ದಾಸ್ಯವನ್ನು ಪ್ರಸರಿಸುವ ಮಾಧ್ಯಮವಾಗಿ ಪರಿವರ್ತಿತಗೊಳ್ಳುತ್ತಿವೆಯೇನೋ ಎಂದಿನಿಸುತ್ತಿದೆ.

ನಿಜಕ್ಕೂ "ಭಾರತ ಪ್ರಕಾಶಿಸುತ್ತಿದೆ!"

1 comment:

Anonymous said...

Jana yahudo odali bidi marayare, bareyo dum nanagu-nimagu illa anda mele boguli keradalli hodesikollabaradu.