ಕನ್ನಡ ವಿರೋಧಿಗಳಿಗೆ ಮಸಿ ಬಳಿಯುವ ಮುನ್ನ...




ಕಳೆದ ವಾರ ಕನ್ನಡ ಚಿತ್ರರಂಗದ ಕುರಿತು ಹಾಸ್ಯವಾಗಿ ಬರೆದಿದ್ದರೂ ಅದು ಇಂದಿನ ಚಿತ್ರರಂಗದ ನೈಜ ಚಿತ್ರಣವೇ ಅಗಿತ್ತೆಂದು ಓದುಗರು ತಿಳಿಸಿದಾಗ ಖುಷಿಗೊಳ್ಳುತ್ತ ಈ ಬಾರಿ ಕೊಂಚ ಸೀರಿಯಸ್ ಆಗಿ ಕನ್ನಡ ರಕ್ಷಣೆ ಹೇಗಿದ್ದರೆ ಚೆನ್ನವೆಂದು ಯೋಚಿಸಿದಾಗ ಕಂಡದ್ದು ಬಹಳಷ್ಟು...

ಅಲ್ಲ ನಮ್ಮ ಕನ್ನಡ ಹೋರಾಟಗಾರರಿಗೆ ಕನ್ನಡ ಹೋರಾಟವೆಂದರೆ ಬೆಂಗಳೂರಿನ ದಂಡು ಪ್ರದೇಶದ ಅಂಗಡಿಗಳ ಮುಂದೆ ಕನ್ನಡ ಫಲಕಗಳನ್ನು ಹಾಕಿಸುವುದೇ ಅಂದುಕೊಂಡಿದ್ದಾರೇಕೆ? ಆ ಪ್ರದೇಶದ ಹೆಸರೇ ಹೇಳುವಂತೆ ಅದು ಮಿಲಿಟರಿ ಪ್ರದೇಶವಾಗಿ ಭಾರತದೆಲ್ಲೆಡೆಯ ಯೋಧರು, ವಲಸೆಗಾರರು ನೆಲೆಗೊಂಡು ಬೆಂಗಳೂರಿನಲ್ಲಿಯೇ ಭಾರತದ ದರ್ಶನದ ಜೊತೆಗೆ ಐ.ಟಿ/ಬಿ.ಟಿ ಗಳ ದೆಸೆಯಿಂದ ವಿಶ್ವದರ್ಶನವನ್ನೂ ನೀಡುತ್ತಿರುವ ಪ್ರದೇಶವಾಗಿರುವಾಗ ಅಲ್ಲಿ ಕನ್ನಡ ಫಲಕಗಳಿದ್ದರೂ ಒಂದೆ ಇಲ್ಲದಿದ್ದರೂ ಒಂದೇ. ಯಾಕೆಂದರೆ ಅದನ್ನು ಓದಲು ನಮ್ಮ ಬೆಂಗಳೂರು ಕನ್ನಡಿಗರಿಗೂ ಬರುವುದಿಲ್ಲ.

ಯೋಚಿಸಿ, ಕೇವಲ ನಾಮಫಲಕಗಳಿಂದ ಕನ್ನಡ ಉದ್ಧಾರವಾಗುವುದೇ?

ಈ ಹೋರಾಟಗಾರರ ಹೋರಾಟದ ಕೆಲವು ಸ್ಯಾಂಪಲ್ಲುಗಳನ್ನು ನೋಡಿ, ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿಯುವುದು, ಐ.ಟಿ ಕಂಪೆನಿಗಳು ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂದು ಪ್ರದರ್ಶನ ಏರ್ಪಡಿಸುವುದು, ಭಾರೀ ನಿರೀಕ್ಷೆಯಲ್ಲಿರುವ ತಮಿಳು/ತೆಲುಗು ಸಿನೆಮಾದ ಪ್ರದರ್ಶನವನ್ನು ಬಂದ್ ಮಾಡಿಸುವುದು, ಬೆಳಗಾವಿಯ ಮರಾಠಿ ಹೋರಾಟಗಾರರು ಕೈಗೆ ಸಿಕ್ಕಿದಾಗ ಅವರ ಮುಖಕ್ಕೆ ಮಸಿ ಬಳಿಯುವುದು ಇನ್ನು ಇಂತಹುದೇ ಮಾದರಿಯ ಚಳವಳಿಗಳನ್ನು ಆಗಾಗ್ಗೆ ತಮ್ಮ ಕ್ಯಾಲೆಂಡರ್ ಪ್ರಕಾರ ಮಾಡುವುದು. ಒಟ್ಟಾರೆ ಇವರ ನಡುವಳಿಕೆ ನಮ್ಮ ಇತರೆ ಅಲ್ಪಜ್ಞ ರಾಜಕಾರಣಿಗಳಂತೆಯೇ ಬೆಂಗಳೂರೇ ಕರ್ನಾಟಕವೆಂದುಕೊಂಡತೆಯೇ ಇದೆ. ಅಲ್ಲ, ಬೆಂಗಳೂರು ಕನ್ನಡಿಗರು ತಮಿಳು/ತೆಲುಗು ಕಲಿತು ತಮ್ಮ ಭಾಷಾ ಪ್ರೌಢಿಮೆ ಮೆರೆಯುತ್ತಿದ್ದರೆ ಅದಕ್ಕೆ ತೆಲುಗರು ತಮಿಳರು ಕಾರಣರೇ ಇಲ್ಲಾ ಆ ಭಾಷೆಯ ಚಲನಚಿತ್ರಗಳು ಕಾರಣವೆ? ಈ ಹೋರಾಟಗಾರರಿಗೆ ಕರ್ನಾಟಕದ ಇತರೆ ಪಟ್ಟಣಗಳಾದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಹುಬ್ಬಳ್ಳಿ, ಮಂಗಳೂರು, ಬಿಜಾಪುರ ಮತ್ತಿತರೆ ಪಟ್ಟಣಗಳಲ್ಲಿ ವಾಸವಾಗಿರುವ ಮಾರ್ವಾಡಿಗಳು, ತೆಲುಗರು, ತಮಿಳರು, ಮರಾಠಿಗರು, ಸುಲಲಿತವಾಗಿ ಕನ್ನಡ ಮಾತನಾಡುತ್ತ ಕನ್ನಡದವರೇ ಆಗಿ ಇಲ್ಲಿಯೇ ಜೀವನವನ್ನು ಕಂಡುಕೊಂಡು, ಕನ್ನಡ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದು ಕಣ್ಣಿಗೆ ಕಾಣದೇ? ಕರ್ನಾಟಕದಲ್ಲಿ ವ್ಯಾಪಕವಾಗಿ ಕನ್ನಡದವರೇ ಆಗಿಹೋಗಿರುವ ಸವಿತಾ ಸಮಾಜದ ತೆಲುಗು ಭಾಷಿಗರು, ಮರಾಠಿ ಮನೆಮಾತಿನ ದರ್ಜಿಗಳು, ತಮಿಳು ಮನೆಮಾತಿನ ಐಯಂಗಾರರು...ಇನ್ನು ಅನೇಕರು ಬೆಂಗಳೂರು ಕನ್ನಡಿಗರಿಗಿಂತ ಹೆಚ್ಚಾಗಿ ಕನ್ನಡದವರೇ ಆಗಿಲ್ಲವೆ?

ಈ ಸಮಸ್ಯೆ ಬೆಂಗಳೂರಿನಲ್ಲೇ ಏಕಿದೆ? ಇದಕ್ಕೆಲ್ಲ ಮೂಲ, ಬೆಂಗಳೂರೇ ಕರ್ನಾಟಕ, ಬೆಂಗಳೂರು ಸಮಸ್ಯೆ ಕರ್ನಾಟಕದ ಸಮಸ್ಯೆ ಎಂದುಕೊಂಡಿರುವ ಅಲ್ಪ ದೃಷ್ಟಿಯ ರಾಜಕಾರಣೀ ಹೋರಾಟಗಾರರು, ಮೂಲತಃ ಕನ್ನಡಿಗರಾಗಿ ಯಾರಾದರೂ ಕನ್ನಡದಲ್ಲಿ ಮಾತನಾಡಿಸಿದರೆ ’ಐ ಡೋಂಟ್ ನೊ ಕನ್ನಡ’ ಎಂಬ ಬೆಂಗಳೂರು ಕನ್ನಡಿಗರು, ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆಂದು ಬೆಂಗಳೂರಿನ ಸೂಪರ್ ಮೇಯರ್ ಅಂತೆ ವರ್ತಿಸುತ್ತ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಕಿಕೊಟ್ಟ ಪೀಠಿಕೆ, ಕೊಟ್ಟ ಕೆಲಸ ಮಾಡಲಾಗದೆ ನೆಪ ಹೇಳಿ ತಪ್ಪಿಸಿಕೊಳ್ಳುವ ಸೋಮಾರಿ ಕನ್ನಡಿಗ ನೌಕರರು, ಪ್ರತಿಯೊಬ್ಬ ರಾಜಕಾರಣಿಯೂ ಬೆಂಗಳೂರಿನ ತಲೆಹಿಡಿಯುತ್ತ, ಉತ್ತರ ಭಾರತದ ತಮ್ಮ ತಮ್ಮ ಪಕ್ಷಗಳ ಮರಿ,ಪುಡಿ,ಪುಂಡ ರಾಜಕಾರಣಿಗಳಿಗೆಲ್ಲ ಬೆಂಗಳೂರಿನಲ್ಲಿ ಸೈಟ್ ಕೊಡಿಸುವ ವ್ಯವಹಾರಗಳನ್ನು ಮಾಡುತ್ತ ಬೆಂಗಳೂರನ್ನು ಮಾರುತ್ತಿರುವುದರ ಪರಿಣಾಮವೇ ಇಂದಿನ ಬೆಂಗಳೂರು ಮತ್ತದರ ಅಲ್ಪಸಂಖ್ಯಾತನಾದ ಕನ್ನಡಿಗನ ಸಮಸ್ಯೆ.

ದೂರದಲ್ಲೆಲ್ಲೋ ಸುನಾಮಿ ಬಂದಾಗ, ಅಮೇರಿಕಾದಲ್ಲಿ ಕಟ್ರೀನಾ ಬೀಸಿದಾಗ, ಪಾಕಿಸ್ತಾನದಲ್ಲಿ ಭೂಕಂಪವಾದಾಗ ತಮ್ಮ ಮನೆಯಲ್ಲೇ ಯಾರೋ ಸಂಕಷ್ಟಕ್ಕೆ ಬಿದ್ದಂತೆ ಚಡಪಡಿಸುವ ಬೆಂಗಳೂರಿಗರಿಗೆ ಶತಮಾನದಿಂದಲೂ ಬರ ಬಿದ್ದೋ ಇಲ್ಲ ನೆರೆ ಬಂದೋ ಮನೆ ಮಠ ಕಳೆದುಕೊಂಡು ಗುಳೇ ಹೋಗುತ್ತಿರುವ ಉತ್ತರ ಕರ್ನಾಟಕದವರ ಕಷ್ಟ ಕಾಣದೇ? ಇಪ್ಪತ್ತೊಂದನೇ ಶತಮಾನದಲ್ಲೂ ಹದಿನೆಂಟನೇ ಶತಮಾನದಂತಿರುವ ಮಧ್ಯ / ಉತ್ತರ ಕರ್ನಾಟಕವು ಅಭಿವೃದ್ಧಿಯ ಪರಿಚಯವೂ ಇಲ್ಲದೆ ಹಾಳು ಸುರಿಯುತ್ತಿರುವುದು ಕಾಣದೆ? ಬೆಂಗಳೂರಿಗರು ಅತ್ತ ಸುಳಿದಿದ್ದರೆ ತಾನೆ ಕಾಣುವುದು? ಬೆಂಗಳೂರು ಕನ್ನಡಿಗರು ತಮ್ಮ ತಮ್ಮ ನೆರೆಹೊರೆಯಲ್ಲಿರುವ ಕನ್ನಡಿಗರೊಂದಿಗೆ ಇಂಗ್ಲಿಷ್ ನಲ್ಲಿ ಮಾತನಾಡುತ್ತ, ದರ್ಶಿನಿ ಹೋಟೆಲ್ಲಿಗೆ ಹೋಗಿ ಅಲ್ಲಿನ ಬಡಪಾಯಿ ಕನ್ನಡ ಸಪ್ಲೈಯರ್ ಗೆ ಇಂಗ್ಲಿಷ್ ನಲ್ಲಿ ಆರ್ಡರ್ ಮಾಡುವ ಇವರು, ಗರುಡಾ ಮಾಲ್ ಇಲ್ಲ ಬ್ರಿಗೇಡ್ ನ ಪಬ್ ಗಳಿಗೆ ಹೋಗಿ ದಿಢೀರನೆ ಕನ್ನಡಿಗರಾಗಿ ಬಿಡುತ್ತಾರೆ. ಇಲ್ಲಾ, ಲೀಲಾ ಪ್ಯಾಲೇಸ್ ಗೆ ಹೋಗಿ ಅಲ್ಲಿನ ಕನ್ನಡ ಬಾರದ ವ್ಹೇಟರ್ ಗಳಿಗೆ ಕನ್ನಡದಲ್ಲಿ ಆಜ್ಞಾಪಿಸುವ ಇವರು, ಇದೀಗ ಬೆಂಗಳೂರಿಗೆ ಕಷ್ಟ ಬಂದೊಡೆ, ಅದು ಕನ್ನಡದ ಕಷ್ಟ, ಕರ್ನಾಟಕದ ಕಷ್ಟ ಅಂದರೆ ಹೇಗೆ? ಇದನ್ನೆಲ್ಲ ನೋಡಿ ಬೇಸತ್ತ ಕರ್ನಾಟಕ ಏಕೀಕರಣದ ಹೋರಾಟಗಾರ ಪಾಟೀಲ ಪುಟ್ಟಪ್ಪನವರೇ ಉತ್ತರ ಕರ್ನಾಟಕವನ್ನು ವಿಭಜಿಸಿ ಬೇರೆ ರಾಜ್ಯ ಬೇಡುವ ಸ್ಥಿತಿಗೆ ಬಂದಿದ್ದರೆ, ಅದನ್ನು ಸರಿಯಾಗಿ ಗ್ರಹಿಸುವ ಶಕ್ತಿಯೇ ಇಲ್ಲದ ಕನ್ನಡ ಹೋರಾಟದ ಕಾಂಟ್ರ್ಯಾಕ್ಟರರುಗಳು ಅವರನ್ನು ’ಕನ್ನಡದ್ರ್‍ಓಹಿ’ ಎಂದು ಕರೆದು ಅವರ ವಿರುದ್ಧ ಬೆಂಗಳೂರಿನಲ್ಲಿ ಮೆರವಣಿಗೆ ಮಾಡಲಿಲ್ಲವೆ?
ಇನ್ನು ಕನ್ನಡ ರಾಜಕಾರಣಿಗಳೋ ಆ ಕನ್ನಡಮ್ಮನಿಗೇ ಪ್ರೀತಿ. ಯಾವೊಬ್ಬ ರಾಜಕಾರಣಿಯಾಗಲಿ ತನ್ನ ಮುಂದಿನ ಎರಡು ವರ್ಷಗಳ ಯೋಜನೆಗಳ ಬಗ್ಗೆ ಒಂದು ನೀಲಿನಕಾಶೆ ತೋರಿಸೆಂದರೆ ಸೋಮಯಾಜಿಯೋ, ಜೈನ್ ವೊ, ನಾಡಿಶಾಸ್ತ್ರದವನ ಬಳಿಯೋ ಇಲ್ಲವೇ ಹಾರನಹಳ್ಳಿ ಮಠದಲ್ಲಿ ಹೊತ್ತಿಗೆ ತೆಗೆಸಲೋ ಓಡುವ, ಇಲ್ಲವೇ ನಮ್ಮದೆಲ್ಲ ಹೈಕಮ್ಯಾಂಡ್ ಹೇಳಿದಂತೆ ಎಂದು ತಲೆಯಾಡಿಸುವವರೇ ಆಗಿದ್ದಾರೆ. ಅಂತಹ ಅತಿರಥ ಮಹಾನಟ ಡಾ: ರಾಜ್ ಅವರೇ ತಮ್ಮ ಬಕ್ಕತಲೆಯನ್ನು ಮುಚ್ಚಿಕೊಳ್ಳದೆ ತೋರುತ್ತಿದ್ದರೆ, ಈ ಜನಸೇವಕ ನಂ. ೧ ಮುಖ್ಯಮಂತ್ರಿ ತಮ್ಮ ನೈಜ ರೂಪ ತೋರದೆ, ವಿಗ್ ಹಾಕಿ ತಲೆ ಮುಚ್ಚಿಕೊಳ್ಳುತ್ತಿರುವುದನ್ನು ನೋಡಿದರೆ ಅರ್ಥವಾಗದೇ ಇವರೆಷ್ಟು ಮುಕ್ತ ಮನಸ್ಸಿನವರೆಂದು? ಅದೇ ರೀತಿಯ ಫೋಟೋ ಪ್ರಿಯ ವಾಟಾಳು ಯಾವತ್ತಾದರೂ ಟೋಪಿ ತೆಗೆದಿದ್ದುದು ನೋಡಿರುವಿರೇ? ತಮ್ಮ ತಮ್ಮ ರೂಪವನ್ನೇ ಎದುರಿಸಲಾಗದ ಈ ಸುರಸುಂದರಾಂಗರು ಇನ್ನು ನಾಡಿನ ಸಮಸ್ಯೆಗಳನ್ನು ಎದುರಿಸುವರೇ? ಇನ್ನು ಕ.ರ.ವೇ ಎಂಬ ಕನ್ನಡ ಹೋರಾಟಗಾರರ ಸಂಘವು ಶುರುವಾಗುತ್ತಿದ್ದಂತೆಯೇ ಅವರ ಬಣ, ಇವರ ಬಣ, ಮಗದೊಬ್ಬರ ಬಣವೆಂದು ವಿಭಜನೆಗೊಂಡು ಕನ್ನಡಿಗರ ಒಗ್ಗಟ್ಟಿನ ಪ್ರದರ್ಶನ ನೀಡಲಿಲ್ಲವೇ? ಇಂದು ಇಂಜಿನಿಯರಿಂಗ್ ನ ಯಾವುದೇ ವಿಷಯದಲ್ಲಿ ಪದವಿ ಪಡೆದ ರಾಜ್ಯದೆಲ್ಲೆಡೆಯ ಯುವಕರು ನೌಕರಿ ಪಡೆಯಬೇಕಾದರೆ ಬೆಂಗಳೂರಿಗೇ ಗುಳೇ ಹೋಗಬೇಕಾದಂತಹ ಸ್ಥಿತಿ ರಾಜ್ಯದ ತುಂಬೆಲ್ಲಾ ಇರಲು ಯಾರು ಕಾರಣರು? ಸೋನಿಯಾ ನಮ್ಮ ಮನೆ ಸೊಸೆ ಎನ್ನುತ್ತ ತಮ್ಮ ಪುತ್ರನೋ / ಪುತ್ರಿಯೋ ಅಂತರ್ಜಾತೀಯ ವಿವಾಹವಾದರೆ ಅವರನ್ನು ಕೊಲ್ಲುತ್ತೇವೆನ್ನುವ, ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಿಸೆಂದು ಸಾಮರಸ್ಯದ ಪಾಠ ಹೇಳಿ ಓಟು ಬಾಚಿಕೊಳ್ಳುತ್ತ ಅಧಿಕಾರ ನನ್ನ ಪುತ್ರರಿಗೆ ಮಾತ್ರವೆನ್ನುವ, ಒಟ್ಟಿನಲ್ಲಿ ದೇಶ ಹಾಳಾಗಲಿ, ನಮ್ಮ ಮನೆ ಹಾಳಾಗಬಾರದೆಂಬ ಶೂನ್ಯ ದೇಶಾಭಿಮಾನಿ ನಾಯಕರುಗಳೂ ಜನರೂ ಇರುವವರೆಗೆ ದೇಶ, ಭಾಷೆ, ಸಂಸ್ಕೃತಿಯ ಉದ್ಧಾರ ಆಗುವುದೆ?

ಮಸಿ ಬಳಿಯುವುದಾದರೆ, ಬಳಿಯಬೇಕಾದ್ದು ನಮ್ಮ ನಾಯಕರುಗಳಿಗೇ ವಿನಹ ಮರಾಠಿಗರಿಗಲ್ಲ ಅಥವ ಕನ್ನಡ ಫಲಕ ತೂಗುಹಾಕದೇ ಇರುವ ಬ್ರಿಗೇಡ್/ ಎಮ್.ಜಿ. ರೋಡಿಗರಿಗಲ್ಲ. ಬಳಿಯಬೇಕಾದ್ದು ತಮ್ಮ ತಮ್ಮ ಹೈಕಮ್ಯಾಂಡ್ ಗಳನ್ನು ಮೆಚ್ಚಿಸಲು ರಾತ್ರೋರಾತ್ರಿ ಕಾವೇರಿ ನೀರು ಬಿಡುವ ಕನ್ನಡ ಮಂತ್ರಿಗಳಿಗೆ, ತಮ್ಮ ಸಂಸಾರವನ್ನು ಎಲ್ಲೋ ಬಿಟ್ಟು ತನ್ನ ರಾಜ್ಯಕ್ಕೆ ಉತ್ತಮ ರಸ್ತೆಗಳನ್ನು ಕೊಡಬೇಕೆಂದು ಬಂದಿರುವ ಕನ್ನಡಿಗನ ಕಾಲೆಳೆಯುವ ಕನ್ನಡದ ಮಣ್ಣಿನ ಮಗನಿಗೆ, ಕನ್ನಡ ಸಿನೆಮಾ ಎನ್ನುತ್ತ, ಸಂಪೂರ್ಣ ಪರಕೀಯ ಸಂಸ್ಕೃತಿಯನ್ನು ಮೆರೆಸುವ ಕನ್ನಡ ಚಿತ್ರರಂಗದ ಕನ್ನಡ ಕಂದಮ್ಮಗಳಿಗೆ.

ಇದನ್ನು ಬಿಡಿ, ಕೇವಲ ಭಾಷೆಯ ಬಗ್ಗೆ ಹೋರಾಡಿದರೆ ಸಾಕೆ? ನಮ್ಮ ಸಂಸ್ಕೃತಿ ಪರಂಪರೆಯ ಸ್ಮಾರಕಗಳಿಗೆ ಹೋರಾಡುವವರ್‍ಯಾರು? ಇಂದು ಹಂಪಿಯ ಐತಿಹಾಸಿಕ ಸ್ಮಾರಕವೊಂದರ ಮೇಲೆ ಹಸಿರು ಬಾವುಟದ ಪ್ರಾರ್ಥನಾ ಧ್ವಜವೆದ್ದಿರುವುದು, ಬಾದಾಮಿಯ ಕೋಟೆಯ ಮೇಲೆ ಕಟ್ಟಿರುವ ಇದೇ ರೀತಿಯ ಇನ್ನೊಂದು ಕಟ್ಟಡ (ಇಲ್ಲಿ ಟಿಪ್ಪು ಕಟ್ಟಿಸಿರುವ ಐತಿಹಾಸಿಕ ಮಸೀದಿಯೊಂದಿದ್ದು, ಅದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತೆ ಕಂಗೊಳಿಸುತ್ತಿದೆ. ಇದರ ಬಗ್ಗೆ ನಾನು ಹೇಳುತ್ತಿಲ್ಲ.) ಹಾಗೆಯೇ ಬಿಜಾಪುರದ ಸುಲ್ತಾನರು ಕಲಾಪೋಷಕರಾಗಿ, ತಮ್ಮ ಆಸ್ಥಾನದಲ್ಲಿದ್ದ ಉತ್ತಮ ಸಂಗೀತ ಕಲಾವಿದರುಗಳ ಸಂಗೀತವನ್ನು ಸವಿಯಲು ವಾಸ್ತುಶಿಲ್ಪದ ಆಶ್ಚರ್ಯವೇ ಎನ್ನುವಂತಹ ರಂಗಮಂದಿರವಾಗಿ ಕಟ್ಟಿಸಿರುವ ಗೋಲ್ ಗುಂಬಜ್ ನ ಮೂಲ ಉದ್ದೇಶವನ್ನು ಮರೆಮಾಚಿ, ಇಲ್ಲಿ ಒಮ್ಮೆ ಕೂಗಿದರೆ ಏಳು ಬಾರಿ ಪ್ರತಿಧ್ವನಿಸುತ್ತದೆಂಬ ಸಂಗತಿಯನ್ನೇ ಏಖಾಂಶ ಮಾಡಿ ನಮ್ಮ ಮಕ್ಕಳಿಗೆ ಬೋಧಿಸಿ, ಅದನ್ನೋದಿದ ಜನರು ಗುಂಬಜ್ ಗೆ ಭೇಟಿ ನೀಡಿ ’ಕುರ್‍ಯೋ’ ’ಮರ್‍ಯೋ’ ಎಂದು ಕರ್ಕಶವಾಗಿ ಕಿರುಚುವುದನ್ನು ಕೇಳಿ, ಮುಂದಿನ ಪೀಳಿಗೆ ಇಲ್ಲಿ ಸದಾ ಸಂಗೀತೋತ್ಸವವನ್ನು ಆಚರಿಸಲೆಂದು ಅದನ್ನು ಕಟ್ಟಿಸಿದ ಸುಲ್ತಾನರು ಗೋರಿಯಲ್ಲೇ ತಮ್ಮ ತಲೆಯನ್ನು ಚಚ್ಚಿಕೊಳ್ಳುತಿರಬಹುದು. ಇನ್ನು ಈ ರಂಗಸ್ಥಳದಲ್ಲಿ ಸರ್ಕಾರವೇ ಕೃತಕ ಸಮಾಧಿಗಳನ್ನು ಪ್ರತಿಷ್ಟಾಪಿಸಿ ಇದರ ಐತಿಹಾಸಿಕ ಪರಂಪರೆಗೆ ಚ್ಯುತಿ ತಂದಿರುವುದಕ್ಕೆ ಏನು ಹೇಳೋಣ (ಮೂಲ ಸಮಾಧಿಗಳು ನೆಲಮಾಳಿಗೆಯಲ್ಲಿವೆ)... ಈ ರೀತಿಯ ಇನ್ನು ಹತ್ತು ಹಲವಾರು ಅಭಾಸಗಳನ್ನು ತೊಡೆದು ರಕ್ಷಿಸುವವರ್‍ಯಾರು. ಹಂಪಿಯಂತಹ ಪ್ರಮುಖ ಐತಿಹಾಸಿಕ ಪರಂಪರೆಯ ಪಳೆಯುಳಿಕೆಗಳು ಮೂತ್ರಿಗಳಾಗಿ, ಪಾಯಿಖಾನೆಗಳಾಗಿ ಉಪಯೋಗಿಸಲ್ಪಡುತ್ತಿರುವಾಗ, ಇನ್ನು ಹಂಪಿಯಷ್ಟು ವಿಶೇಷವಿಲ್ಲದ ನಮ್ಮ ಇತರೆ ಐತಿಹಾಸಿಕ ಸ್ಮಾರಕಗಳ ಸ್ಥಿತಿಗತಿಗಳ ಕುರಿತಂತೂ ಹೇಳುವುದೇ ಬೇಡ. ಅವುಗಳೆಲ್ಲ ಇನ್ನೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಕಟ್ಟಿಸಿದ್ದ ವೀರ ಕನ್ನಡಿಗರ ಪ್ರೇತಾತ್ಮಗಳೂ ಅವುಗಳನ್ನು ನೋಡಿ, ನೇಣು ಹಾಕಿಕೊಳ್ಳಬೇಕಾದಂತಹ ಸ್ಥಿತಿಯಲ್ಲಿವೆ.
ಚಿತ್ರ: ಹಂಪಿ ವಿರುಪಾಕ್ಷೇಶ್ವರನ ಆವರಣದಲ್ಲಿಯೇ ಇರುವ ಒಂದು ಸ್ಮಾರಕದ ಸ್ಥಿತಿ. ಬಹುಶಃ ಅರ್ಚಕರ / ಕಾವಲುಭಟನ ವಾಸಸ್ಥಳವಾಗಿದ್ದಿರಬಹುದು.

ಇದಕ್ಕೆಲ್ಲ ಪರಿಹಾರ ಬೇಡವೆ? ಕಡೇ ಪಕ್ಷ, ಈ ಉದ್ದೇಶದಿಂದ ವಸ್ತುನಿಷ್ಟವಾಗಿ ದನಿ ಎತ್ತಿರುವ ಚಿದಾನಂದಮೂರ್ತಿಗಳನ್ನು ’ಚಡ್ಡಿ’ ಎಂದು ನಮ್ಮ ಕನ್ನಡ ಮುಖಂಡರೇ ಬ್ರ್ಯಾಂಡಿಸುತ್ತಿರುವುದರ ವಿರುದ್ಧವೆಂದಾದರೂ ಚಿದಾನಂದಮೂರ್ತಿಗಳ ಕಳಕಳಿಯನ್ನು ಎತ್ತಿ ಹಿಡಿದು ಅವರಾಸೆಗೆ ಒತ್ತಾಸೆಯಾಗಿದ್ದಾರೆಯೆ ಕನ್ನಡ ಹೋರಾಟಗಾರರು? ಬಹುಶಃ ತಮ್ಮ ಚಡ್ಡಿಯೊಳಗಿರಬೇಕಿದ್ದ ಪ್ರಮುಖ ಆಂಗಗಳನ್ನು ಕಳೆದುಕೊಂಡಿರುವ ಅಸೂಯೆ ಅವರನ್ನು ಭಾದಿಸುತ್ತಿರಬೇಕು.

ಎರಡನೇ ಪುಲಕೇಶಿ ಮರಾಠಿಗನೆಂದು ಐತಿಹಾಸಿಕವಾಗಿ ದಾಖಲಾಗಿರುವ ಸಂಗತಿಯಿದ್ದು, ಇತಿಹಾಸವನ್ನು ಕೊಂಚ ಆಳವಾಗಿ ಓದಿದವರಿಗೆ ಅವನು ಕನ್ನಡಿಗನೋ ಮರಾಠಿಗನೋ ಎಂಬ ಸಂದೇಹ ಬರುವಂತಿದ್ದರೂ, ಇದರ ಪರಿವೆಯೇ ಇಲ್ಲದಿರುವಂತಿರುವುದು, ವಿಜಯನಗರದ ಕೃಷ್ಣದೇವರಾಯ ಇಂದಿನ ರಾಜಕಾರಣಿಗಳಂತೆ ಅಂದೇ ಕನ್ನಡಿಗರಿಗೆ ನಾನು ಕನ್ನಡಿಗನೆಂದೂ ಅತ್ತ ತೆಲುಗರಿಗೆ ’ದೇಸಭಾಷಲಂದು ತೆಲುಗು ಲೇಸ’ (ದೇಶಭಾಷೆಗಳಲ್ಲೆಲ್ಲ ತೆಲುಗು ಲೇಸು) ಎಂದಿರುವುದು...ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಸರಿಪಡಿಸಬೇಕಾದ ಇತಿಹಾಸದ ಸಂಗತಿಗಳದ್ದು ಮತ್ತು ಕನ್ನಡಕ್ಕೊಂದು ಸರಿಯೆನ್ನಿಸುವಂತಹ ಕಾಯಕಲ್ಪ ಸೃಷ್ಟಿಸಬೇಕಾದ ಅನಿವಾರ್ಯತೆಯದ್ದು. ಇಂತಹ ವಿಷಯಗಳನ್ನೆಲ್ಲಾ ಮರೆತು ನಮ್ಮ ಸಂಶೋಧಕ ಸಾಹಿತಿ ವರ್ಗವೂ ಕೂಡ ಬಸವಣ್ಣನ ಮೂಲದಂತಹ ಇಲ್ಲದ ವಿವಾದಗಳನ್ನು ಸೃಷ್ಟಿಸುವ ವಿಷಯಗಳಲ್ಲಿ ಮಗ್ನರಾಗಿರುವುದು.. ಇವುಗಳಿಗೆಲ್ಲಾ ಕನ್ನಡ ಹೋರಾಟ ಬೇಡವೇ?

ಕನ್ನಡವು ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿ, ಸಾಹಿತ್ಯಿಕವಾಗಿ ಮುಂಚೂಣಿಯಲ್ಲಿದ್ದ ಬೆಂಗಾಳಿ, ಮರಾಠಿ ಭಾಷೆಗಳನ್ನು ಹಿಂದಿಕ್ಕಿ ಮುನ್ನುಗ್ಗಿರುವಾಗಿ, ನಮಗೇಕೆ ಬೇಕು ಈ ಶಾಸ್ತ್ರ್‍ಈಯ ಭಾಷೆಯ ಭಿಕ್ಷೆ? ಪ್ರತಿಯೊಂದು ಪ್ರಶಸ್ತಿ / ಸ್ಥಾನಮಾನಗಳಿಗೆ ಅರ್ಜಿ ಹಾಕಿ, ಮರ್ಜಿ ಹಿಡಿಯಬೇಕಾದ ಇಂದಿನ ಪರಿಸ್ಥಿಯಲ್ಲಿ ಅವುಗಳೆಲ್ಲ ತಲೆಹಿಡುಕರ ಪಾಲಾಗುತ್ತಿರುವುದು ಕಣ್ಣೆದುರೇ ಕಾಣುತ್ತಿರುವಾಗ ನಾವೇಕೆ ಅದಕ್ಕೆ ಹೋರಾಡಿ ಅಂತಹವರೆನ್ನಿಸಿಕೊಳ್ಳಬೇಕು? ಸಾಹಿತ್ಯ ಕ್ಷೇತ್ರದ ಮೇರು ಶಿಖರದಲ್ಲಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ಕೇಂದ್ರವು ಅಂಗೀಕರಿಸದಿದ್ದರೆ ಅದು ಕೇಂದ್ರ ಸರ್ಕಾರವು ನಾಚಿಕೆ ಪಡಬೇಕಾದ ವಿಷಯವೇ ಹೊರತು ಕನ್ನಡಿಗರಲ್ಲ.

ಹೋರ್‍ಆಟ ಬೇಕಿರುವುದು ಕರ್ನಾಟಕದ ನಿಜ ಏಕೀಕರಣಕ್ಕೆ. ಕೊಡವರು, ಕೊಂಕಣರು, ಡೆಂಕಣರು ನಮ್ಮವರೆಂದು ಭರವಸೆ ಮೂಡಿಸುವುದಕ್ಕೆ, ಕರ್ನಾಟಕದ ಸಮತೋಲನದ ಬೆಳವಣಿಗೆಗೆ, ಸಮಗ್ರ ಕರ್ನಾಟಕದ ಸಮೃದ್ಧಿಗೆ, ನಮ್ಮ ಸಂಸ್ಕೃತಿಯ ರಕ್ಷಣೆಗೆ.

ಕರ್ನಾಟಕ ಏಕೀಕರಣಗೊಂಡು ಅದೆಷ್ಟೋ ವರ್ಷಗಳೇ ಕಳೆದು ಆಂದು ಅಂದುಕೊಂಡ ಕನಸುಗಳೆಲ್ಲ ಇನ್ನೂ ಕನಸಾಗಿರುವುದಕ್ಕೆ ನಮಗೆ ನಾವೇ ಮಸಿ ಬಳಿದುಕೊಳ್ಳೋಣ.

ಅಣಕ:

ಮೊನ್ನೆ ಅರೇಕಲ್ ಎಂಬ ಸಂಸ್ಥೆಯ ನೌಕರರು ಮುತ್ತೆತ್ತಿಯಲ್ಲಿ ಕ್ಯಾಂಪ್ ಮಾಡಿ, ಪ್ಲಾಸ್ಟಿಕ್ ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ಆರಿಸಿ ಸ್ವಚ್ಚಗೊಳಿಸಿದರೆಂದು ಓದಿ ಖುಷಿಗೊಂಡೆ. ನಂತರ ಇದ್ಯಾವುದಪ್ಪ, ಅರೇಕಲ್ ಸಂಸ್ಥೆ? ಪರವಾಗಿಲ್ಲ ಯಾರೋ ಕನ್ನಡಿಗರೋ, ಕೇರಳಿಗರೋ, ತಮಿಳರೋ ತಮ್ಮ ಹಳ್ಳಿಯ (ಆನೇಕಲ್, ಮೂರ್ಕಲ್, ಇಳಕಲ್ ನಂತೆ) ಹೆಸರಲ್ಲೇ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿ ಸ್ಥಳೀಯ ಹೆಸರನ್ನು ಮೆರೆಸಿದ್ದಾರೆ ಎಂದು ಹೆಮ್ಮೆ ಪಡುತ್ತ ಇದು ಮಲಯಾಳೀ ಊರೋ ಕೊಡಗಿನ ಹಳ್ಳಿಯೋ ಕಂಡುಕೊಳ್ಳಬೇಕೆಂದು ಎಷ್ಟು ಹುಡುಕಿದರೂ ಈ ಸಂಸ್ಥೆಯ ಜಾತಕ ದೊರೆಯದಾಯಿತು. ಕಡೆಗೆ ಅದರ ಮೂಲಕ್ಕಿಂತ ಆ ಸಂಸ್ಥೆ ಸ್ಥಳೀಯತೆಯನ್ನು ಮೆರೆಸಿರುವುದು ಮುಖ್ಯವೆಂದು ಇದರ ಕುರಿತು ನನ್ನ ಸ್ನೇಹಿತರ ಮುಂದೆ ಕೊಚ್ಚಿಕೊಂಡು, ಕಡೆಗಾದರೂ ಒಂದು ಅಪ್ಪಟ ದೇಸೀ ಹೆಸರಿನ ತಂತ್ರಜ್ಞಾನ ಸಂಸ್ಥೆಯೊಂದಿದೆಯಲ್ಲ ಎಂದಾಗ, ಅವರು ಕೊಂಚ ಆಲೋಚಿಸಿ ನಂತರ ನನ್ನೆಡೆಗೆ ಮುಸಿಮುಸಿ ನಕ್ಕರು. ಇದು ಪ್ರಖ್ಯಾತ ಒರ್‍ಯಾಕಲ್ ಸಂಸ್ಥೆಯ ಬೆಂಗಳೂರಿನ ಕಟ್ಟಡದ ಮೇಲಿರುವ ಕನ್ನಡ ನಾಮಫಲಕ ’ಅರೇಕಲ್’ ಎಂದು ಸಾರುತ್ತಿರುವುದೆಂದು ಅವರು ಹೇಳಿದಾಗ ಏನೇನೋ ಯೋಚಿಸಿದ್ದ ನನಗೆ ಪೆಚ್ಚಾಯಿತು.

ಬೇಕೇ ನಮಗೆ ಈ ರೀತಿಯ ಕನ್ನಡ ಫಲಕ?

No comments: