ಗೆಂಡೆತಿಮ್ಮನ ಪ್ರಸಂಗವೂ, ಪಡುವಾರಹಳ್ಳಿಯ ಹುಚ್ಚಿಯೂ!

ಕಳೆದೆರೆಡು ವಾರಗಳ ಹಿಂದಿನ ಲೇಖನದ ಮೃತ್ಯುಂಜಯನು ಮೃತನಾದುದಕ್ಕೆ ಅನೇಕ ಓದುಗರು ಸಂತಾಪ ಸೂಚಿಸಿ ಮೃತ್ಯುಂಜಯನು ’ಮುತ್ತು’ ಎಂದೋ, ’ಜಯ್’ ಎಂದೋ ಆಗಬೇಕಿತ್ತೆಂದು ತಮ್ಮ ತಮ್ಮ ಸಲಹೆಗಳನ್ನು ನೀಡಿದ್ದರು. ಆದರೆ ಈ ಹೆಸರುಗಳು ಭಾರತದ ಸಾಮಾನ್ಯ ರೀತಿಯ ಅರ್ಧನಾಮಗಳಾದುದರಿಂದ ಈ ಮೊದಲೇ ಈ ರೀತಿಯ ನಾಮಾರ್ಧಗಳು ಗೊತ್ತಿದ್ದರೂ ಅವುಗಳೆಡೆ ಗಮನ ಕೊಡದೆ ವಿಶಿಷ್ಟತೆಯ ಅನ್ವೇಷಣೆಯಲ್ಲಿ ವಿಶೇಷ ಶೈಲಿಯ ಅನುಕರಣಾ ದಾಸನಾಗಿದ್ದ ಮೃತ್ಯುಂಜಯನು ’ಮೃತ್’ ಆಗಿ ಪರಿವರ್ತಿತಗೊಂಡಿದ್ದನು. ಇಂತಹ ಅನುಕರಣಾ ಸಂಸ್ಕೃತಿಯ ವ್ಯಕ್ತಿಗೆ ’ಪೂಜಾರಿ ಕೊಟ್ಟರೆ ಮಾತ್ರ ತೀರ್ಥ’ವಾದುದರಿಂದ ನಮ್ಮ ಮೈಕೆಲ್ ಡಫ್ ನು ’ಮೃತ’ನ ಹಿಂದೆ ಒಂದು ’ಅ’ ಸೇರಿಸಿ ’ಅಮೃತ’ ಪಾನ ಮಾಡಿಸಿ ’ಅಮೃತ್’ನಾಗಿಸಿದನು. ಮತ್ತೆ ತನ್ನ ಹೆಸರು ವಿಶೇಷತೆಯಿಂದ ಸಾಮಾನ್ಯವಾದುದಕ್ಕೆ ಒಳಗೆ ವ್ಯಥೆ ಪಟ್ಟರೂ ಅದು ಅಮೇರಿಕನ್ ಓರ್ವನು ಕೊಟ್ಟುದಾದುದರಿಂದ ಅದನ್ನು ಒಪ್ಪಿಕೊಂಡು ’ಅಮೃತ್’ ಅನ್ನು ’ಎಮೃತ್’ ಎಂದು ಹೇಳಿಕೊಳ್ಳುತ್ತಾ ಮೃತ್ಯುಂಜಯನು ಸಾಗಿದನು.

ಇನ್ನು ಇತ್ತೀಚಿನ ಸುದ್ದಿಯಂತೆ ಕನ್ನಡಿಗರಿಗೆ ದೇವೇಗೌಡ ಒಳ್ಳೆಯ ಪಾಠ ಕಲಿಸಿದ್ದಾರೆ. ತನ್ನಂಥಹ ಸ್ವಾರ್ಥಿ, ಕುಟುಂಬ ಪ್ರ್‍ಏಮಿ, ಸ್ನೇಹಿತರನ್ನು / ವಿರೋಧಿಗಳನ್ನು ಯಾರಾದರೇನಂತೆ ಅವರನ್ನು ಒಮ್ಮೆ ಕೆಡವೇ ತೀರುವ, ಕಂದಾಚಾರಗಳಿಗೂ ವಾಮಾಚಾರಗಳಿಗೂ ಕಟ್ಟುಬಿದ್ದಿರುವ, ನಂಬಿದವರು ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತೆ ’ಫ್’ ಮಾಡುವ, ರಾಜ್ಯದ ಯಾವುದೇ ದನ ಕಾಯುವವನೊಂದಿಗೂ ಪೈಪೋಟಿಗಿಳಿದು ಅವನ ಲಂಗೋಟಿಯನ್ನೆಳೆದು ಲಾತ ಕೊಡುವ, ರಾಜ್ಯ, ದೇಶಗಳೆಂದರೆ ಛಾಪಾ ಕಾಗದದ ಮೇಲೆ ತನ್ನಿತರೇ ಸ್ತಿರಾಸ್ಥಿ, ಚರಾಸ್ತಿಗಳಂತೆಯೇ ಕರಾರು ಪತ್ರ, ಹಕ್ಕು ಪತ್ರದಂತೆ ಬರೆಸಿಕೊಳ್ಳಬೇಕೆನ್ನುವ ತನ್ನಂಥಹ ಯಕಶ್ಚಿತ್ ಮುಗ್ಧ ಮಾನವನನ್ನು ಮುಖ್ಯಮಂತ್ರಿಯಾಗಿಸಿ, ಈ ದೇಶದ ಪ್ರಧಾನಿ ಪಟ್ಟಕ್ಕೇರಿಸಿದ್ದೇ ಅಲ್ಲದೇ ತನ್ನ ಪುತ್ರರತ್ನಗಳನ್ನೂ ಮಂತ್ರಿ ಮುಖ್ಯಮಂತ್ರಿಯಾಗಿಸಿದ್ದ ಮೂರ್ಖ ಕನ್ನಡಿಗರಿಗೆ ತಮ್ಮದೇ ಆದ ’ಫ್’ ಮಾಡುವ ಶೈಲಿಯಲ್ಲಿ ಸೊಂಟ ಮುರಿದಿದ್ದಾರೆ. ಇದನ್ನೆಲ್ಲಾ ಕಂಡು ಇತರೆ ರಾಜ್ಯದವರು ಕನ್ನಡಿಗರಿಗೆ ಐಯೋಡೆಕ್ಸ್ ಬೇಕೇ ಎಂದು ತಮ್ಮ ಮರುಕ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಮಣ್ಣಿನ ಮಗ ಮತ್ತು ಮೊಮ್ಮಕ್ಕಳಿಗೆ ಅತ್ಯಂತ ಅಪ್ಯಾಯಮಾನವಾಗಿ, ಅವರು ಬಹುಪಾಲು ತಮ್ಮ ಪ್ರತಿಯೊಂದು ವಾಕ್ಯಗಳಲ್ಲೂ ಬಳಸುವಂತಹ ಎರಡು ಅತೀ ಕನ್ನಡವೆನ್ನುವಂತಹ ಶಬ್ದಗಳಿವೆ. ಅದರಲ್ಲಿ ಒಂದನ್ನು ಆಲೋಚಿಸಿ ಸಭ್ಯವಾದ ರೀತಿಯಲ್ಲಿ ಹೇಗೆ ಪ್ರಯೋಗಿಸಬಹುದೆಂದು ತಲೆಕೆರೆದುಕೊಂಡು ’ನಿಕೃಷ್ಟ ರೋಮ’ವೆಂದು ಹಿಂದೆ ಬಳಸಿದ್ದೆ. ಆದರೆ ಅವರ ಇನ್ನೊಂದು ಪ್ರೀತಿ ಪಾತ್ರ, ಕಾಂಗ್ರೆಸ್ ನ ಗುರುತಾದ ’ಕೈ’ ಪದದಂತಿರುವ ಪದದ ಸಭ್ಯರೂಪ ದೊರಕದೆ ಅದನ್ನು ’ಫ್’ ಎಂದಿದ್ದೇನೆ. ನನ್ನ ಮಟ್ಟಿಗೆ ಈ ಎರಡೂ ಕನ್ನಡ ಪದಗಳನ್ನು ಕೇಳದವರು ಕನ್ನಡಿಗರೇ ಅಲ್ಲವೆಂದು ಭಾವಿಸಿದ್ದೇನೆ. ಏಕೆಂದರೆ ಉತ್ತರ ಕರ್ನಾಟಕದಲ್ಲಿ ಈ ಪದಗಳಿಗೆ ಬೇರೆ ಪರ್ಯಾಯ ಪದಗಳು ಬಳಕೆಯಲ್ಲಿದ್ದರೂ ಅಲ್ಲಿನ ಕನ್ನಡ ಬಂಧುಗಳು ಈ ಪದಗಳಿಗೆ ದಕ್ಷಿಣ ಕರ್ನಾಟಕದವರು ಏನೆನ್ನುತಾರೆಂದು ಕುತೂಹಲಿಗಳಾಗಿ ಅರಿತುಕೊಂಡು ತಮ್ಮ ಕನ್ನಡ ಜ್ಞಾನವನ್ನು ವಿಸ್ತರಿಸಿಕೊಂಡಿರುತ್ತಾರೆ!

ಇರಲಿ, ಮೇಲಿನೆರಡೂ ಘಟನೆಗಳನ್ನು ಸಮೀಕರಿಸಿ ನೋಡಿದಾಗ ಅವುಗಳಲ್ಲಿ ಒಂದು ಬಹುಮುಖ್ಯ ಸಾಮ್ಯತೆಯಿದೆ! ವ್ಯತ್ಯಾಸವಿದೆ!

ಮೊದಲನೇ ಘಟನೆಯಲ್ಲಿ ತನ್ನ ಬೇರುಗಳನ್ನು ಸರಿಯಾಗಿ ಗ್ರಹಿಸದೆ, ದೀಪಕ್ಕೆ ಹುಳುವು ಆಕರ್ಷಿತಗೊಂಡು ದಹಿಸಿಹೋಗುವಂತೆ, ಶ್ರೀ ಕೃಷ್ಣ ಆಲನಹಳ್ಳಿಯವರ ’ಪರಸಂಗದ ಗೆಂಡೆತಿಮ್ಮ’ ನ ಕತೆಯಲ್ಲಿನ ಗೆಂಡೆತಿಮ್ಮನ ಹೆಂಡತಿ ಘಮಲುದೆಣ್ಣೆ (ಸೆಂಟ್ / ಪರ್ಫ್ಹೂಮ್) ಪೂಸಿಕೊಂಡು, ಲಂಗ, ಬ್ರಾ ಗಳ ತೊಟ್ಟುಕೊಂಡು ತಾನು ಇತರೆ ಹಳ್ಳಿ ಹೆಂಗಸರಿಗಿಂತ ಭಿನ್ನವೆಂದು ತೋರಿಸುತ್ತ ಈ ಆಧುನಿಕತೆಯ ತಪ್ಪು ಗ್ರಹಿಕೆಯಿಂದಾಗಿ ತನಗರಿವಿಲ್ಲದಂತೆಯೇ ಅದಕ್ಕೆ ಬಲಿಯಾಗಿ ತನ್ನ ಸಂಸಾರವನ್ನೂ ಬಲಿಯಾಗಿಸಿಕೊಂಡಂತೆಯೇ ನಮ್ಮ ನವ ಯುವಕ ಮೃತ್ಯುಂಜಯನು ಬಲಿಯಾಗುವುದನ್ನು, ತನಗೆ ಆತನ ಹಿತಾಸಕ್ತಿಯಲ್ಲಿ ಯಾವುದೇ ಸಂಬಂಧವಿರದಿದ್ದರೂ ಆಧುನಿಕತೆಯ ಹರಿಕಾರ ಅಮೇರಿಕನ್ ಪ್ರಜೆಯೊಬ್ಬ ಅದನ್ನು ತಪ್ಪಿಸಿ ಸರಿದಾರಿಗೆ ತಂದರೆ, ಎರಡನೇ ಘಟನೆಯಲ್ಲಿ ಜನನಾಯಕ, ಜನೋದ್ಧಾರಕ ತನ್ನನ್ನು ನಂಬಿ ಗೆಲ್ಲಿಸಿ ಕಳುಹಿಸಿದ ಜನಗಳ ಹಿತಾಸಕ್ತಿಯನ್ನು ಆದ್ಯ ಕರ್ತವ್ಯದಂತೆ ಕಾಪಾಡಬೇಕಾದ ಧುರೀಣನೊಬ್ಬ ಹೇಗೆ ತನ್ನ ರಾಜ್ಯದ ಜನಾಸಕ್ತಿಯನ್ನು ತನ್ನ ವೈಯುಕ್ತಿಕ ಬಳಕೆಗೆ ಬಳಸಿಕೊಳ್ಳುತ್ತಿದ್ದಾನೆಂದು ತೋರಿಸುತ್ತದೆ.

ಒಟ್ಟಿನಲ್ಲಿ ವಿದೇಶೀ ಮೈಕೆಲ್ ಡಫ್ ನಮ್ಮ ಮೃತ್ಯುಂಜಯನ ಹಿತಾಸಕ್ತಿಯನ್ನು ಕಾಪಾಡಿದರೆ, ನಮ್ಮ ಅತೀ ಸ್ವದೇಶೀ ನಾಯಕ ರಾಜ್ಯವನ್ನು ತನ್ನ ಹೆಸರಿಗೆ ನಮೂದಿಸಿ ಕೊಡೆನ್ನುತ್ತಿದ್ದಾನೆ. ಈ ಪ್ರಸಕ್ತ ವಿದ್ಯಾಮಾನಗಳನ್ನು ಗಮನಿಸಿದರೆ ಕೆಲವು ಹಿರಿಯರು ಹೇಳುವಂತೆ ಬ್ರಿಟಿಷ್ ಆಳ್ವಿಕೆ ಭಾರತದಲ್ಲಿ ಇನ್ನೂ ಬಹುಕಾಲವಿರಬೇಕಿತ್ತೇನೋ?

ಪ್ರಜಾಪ್ರಭುತ್ವದ ಯಾವ ರಾಷ್ಟ್ರಗಳಲ್ಲಿಯೂ ಈ ರೀತಿ ಅತ್ಯಂತ ಕಡಿಮೆ ಸಂಖ್ಯೆಯನ್ನು ಹೊಂದಿದ ಪಕ್ಷಗಳು ಬಹುಮುಖ್ಯ ಪ್ರಧಾನಿ, ಮುಖ್ಯಮಂತ್ರಿಯಂತಹ ಹುದ್ದೆಗಳನ್ನು ಪಡೆದ ಘಟನೆಗಳಿಲ್ಲ. ಈ ಮಟ್ಟಿಗೆ ಇದು ಭಾರತದ ಪ್ರಜಾಪ್ರಭುತ್ವದ ಅಭೂತಪೂರ್ವ ಸಾಧನೆ, ಇರಾಕ್ ಒಂದನ್ನು ಹೊರತುಪಡಿಸಿ! ಏಕೆಂದರೆ ಅಲ್ಲಿಯೂ ಬಹುಪಕ್ಷಗಳ ಸರ್ಕಾರವಿದ್ದು ಮತ್ತು ನೀವದನ್ನು ಪ್ರಜಾಪ್ರಭುತ್ವದ ರಾಷ್ಟ್ರವೆಂದು ಪರಿಗಣಿಸಿದ್ದರೆ, ಅದನ್ನು ಹೊರತುಪಡಿಸಬೇಕಾಗುತ್ತದೆ.

ಈ ತಲೆಹಿಡುಕ ಸಂತತಿಯ ನಾಯಕರು ಮತ್ತೆ ಮುಂದಿನ ಚುನಾವಣೆಗಳಲ್ಲಿ ಮತ ಯಾಚಿಸುತ್ತ ಬಂದಾಗ ಮತದಾರರು ಏನು ಮಾಡಬೇಕೆಂದು ಯೋಚಿಸಿದಾಗ ನನಗೆ ಹೊಳೆದಿದ್ದು ಇಷ್ಟು... ಅತ್ಯಂತ ಬುದ್ಧಿವಂತ ಮತದಾರರೆಂದು ಖ್ಯಾತಿಗೊಂಡಿದ್ದ ಕನ್ನಡಿಗರಿಗೆ ’ಪಡುವಾರಹಳ್ಳಿ ಪಾಂಡವರು’ ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ಹುಚ್ಚಿಯೊಬ್ಬಳನ್ನು ’ಇಂತಹ ನಾಯಕರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು?" ಎಂದು ಕೇಳಿದಾಗ, ಅವಳು "ಇಂತವ್ರು ಬರ್‍ತಲೇ ಇರ್‍ತಾರೆ, ನೀವು ಅವ್ರನ್ನ ಓಡುಸ್ತಲೇ ಇರ್ಬೇಕು. ಇಂತವ್ರು ಬರ್‍ತಲೇ ಇರ್‍ತಾರೆ, ನೀವು ಓಡುಸ್ತಲೇ ಇರ್ಬೇಕು" ಎನ್ನುವ ಸಲಹೆ ಅತ್ಯಂತ ಅನಿವಾರ್ಯವಾಗಿದೆಯೇನೋ ಅನ್ನಿಸಿತು!

ಆದರೂ ಇಂದಿನ ನವೀನ ತಂತ್ರಜ್ಜಾನದ ಬೌದ್ಧಿಕ ಉನ್ನತಿಯ ಬುದ್ಧಿವಂತ ಜನರಿಗೆ ಹಳೇ ಸಿನಿಮಾದ ಹಳ್ಳಿಯ ಅನಕ್ಷರಸ್ಥ, ಮತಿಭ್ರಮಣೆಗೊಂಡ, ಹುಚ್ಚಿಯೊಬ್ಬಳ ಸಲಹೆ ಅನ್ವಯವಾಗುತ್ತಿರುವುದು ವಿಪರ್ಯಾಸವೇ ಸರಿ.

ಆಣಕ:

ಯಥಾಪ್ರಕಾರ ಈ ವಾರದ ಆಣಕವನ್ನು ದೇವೇಗೌಡ ಮಂಡಳಿ ನೈಜವಾಗಿ ಅಭಿನಯಿಸುತ್ತ ನಿತ್ಯವೂ ನವ್ಯ ಪ್ರಯೋಗಗಳನ್ನು ಪ್ರಯೋಗಿಸುತ್ತ ತಮ್ಮ ಎಲ್ಲಾ ರಸಗಳನ್ನು ಹೊಮ್ಮಿಸುತ್ತಿದೆ! ಆದನ್ನು ನೋಡಿ ಆನಂದಿಸಿ.

ವಿಶೇಷ ಸೂಚನೆ: ಈ ರಸಗಳು ನೋಡಲು ಮಾತ್ರ ದಯವಿಟ್ಟು ಆ ರಸಗಳನ್ನು ’ಅಮೃತ’ವೆಂದು ಸೇವಿಸಲು ಹೋಗಬೇಡಿ!

ದಾವಣಗೆರೆಯ ಹಂದಿಗಳು ಮತ್ತದರ ಆಕಾಶದಲ್ಲಿನ ಗಿಳಿಗಳು

ಈ ಶೀರ್ಷಿಕೆ ನೋಡಿ ಈ ಲೇಖನ ದಾವಣಗೆರೆಯ ರಾಜಕಾರಣಿಗಳನ್ನು ಹಂದಿಗಳಾಗಿಯೂ ಅಲ್ಲಿನ ಕನ್ಯೆಯರನ್ನು ಗಿಳಿಗಳಾಗಿಯೂ ಊಹಿಸಿಕೊಂಡು ನೀವು ಏನೇನೋ ಕಲ್ಪಿಸಿಕೊಂಡಿದ್ದರೆ ಕ್ಷಮಿಸಿ. ಅಲ್ಲಿನ ವರ್ತಕರು, ರಾಜಕಾರಣಿಗಳು ವರಾಹಾವತಾರವನ್ನು ಎತ್ತಿದ್ದರೂ ಇದು ಅವರನ್ನು ಕುರಿತಾಗಲೀ ಅಥವ ಯುವಕರು ಮಾತನಾಡಿಸಿದರೆ ಮಕ್ಕಳಾಗುತ್ತವೆಂಬ ಮಹಾ ಕಲ್ಪನೆಯ ಅಲ್ಲಿನ ಕನ್ಯಾಮಣಿಗಳನ್ನು ಕುರಿತಾಗಿಯೂ ಅಲ್ಲವೀ ಲೇಖನ.

ಮಧ್ಯ ಕರ್ನಾಟಕದ ವಿಶಿಷ್ಟ ಪಟ್ಟಣವಾದ ದಾವಣಗೆರೆ ಎಂದರೆ ಬಹುಜನರಿಗೆ ಅಲ್ಲಿನ ಮಂಡಕ್ಕಿ, ಮೆಣಸಿನಕಾಯಿ ಭಜ್ಜಿಯೋ, ಬೆಣ್ಣೆದೋಸೆಯೋ ನೆನಪಾಗಬಹುದು. ಅಥವಾ ಗಂಭೀರವಾಗಿ ಯೋಚಿಸುವವರಿಗೆ ಅಲ್ಲಿನ ಹತ್ತಿ ಮಿಲ್ಲುಗಳ ಆರ್ಥಿಕ ಉನ್ನತಿ, ಅವನತಿಗಳೂ ಮತ್ತದರ ಜೊತೆ ಜೊತೆಗೆ ಬೆಳೆದು ಕುಸಿದ ಕಮ್ಯುನಿಸ್ಟ್ ಪಕ್ಷವೂ ಮತ್ತದರ ಕಾಮ್ರೇಡ್ ಪಡೆಯೂ ನೆನಪಾಗಬಹುದು. ಇಲ್ಲಾ, ಅಲ್ಲಿನ ವರ್ತಕರ ವಹಿವಾಟು, ದಲಾಲರು, ಹಮಾಲರು, ಕುಬೇರರು ಮತ್ತಲ್ಲಿನ ವಿದ್ಯಾಸಂಸ್ಥೆಗಳೋ ನೆನಪಾಗಬಹುದು.

ದವಸ ಧಾನ್ಯಗಳ ವಹಿವಾಟುಗಳ ಭರಾಟೆಯ ದೆಸೆಯಿಂದ ಲೋಡುಗಟ್ಟಲೆ ಅಕ್ಕಿ,ಬೇಳೆಕಾಳುಗಳು ಅಲ್ಲಿನ ವರ್ತಕರ ಅಂಗಡಿಗಳಿಗೆ ಸರಬರಾಜಾಗಿಯೋ ಅಥವ ಆ ಅಂಗಡಿಗಳಿಂದ ಬೇರೆಡೆ ಸರಬರಾಜಾಗುತ್ತಲೋ ಒಟ್ಟಿನಲ್ಲಿ ಆ ನಗರ ಧೂಳುಮಯವಾಗಿ ಅಲ್ಲಲ್ಲಿ ಚೆಲ್ಲಿದ ಕಾಳುಕಡಿಗಳು ಆಹಾರದ ಮೂಲವಾಗಿ ಅದು ಹಂದಿಗಳಿಗೆ ಆಶ್ರಯತಾಣವಾಗಿದೆ. ದಾವಣಗೆರೆಯ ಉದ್ದಗಲ ಎತ್ತಲಾದರೂ ಹೋಗಿ, ನಿಮಗೆ ಅಲ್ಲಿನ ಗಣನೀಯ ಸಂಖ್ಯೆಯ ಹಂದಿಗಳು ನಿಮ್ಮ ಗಮನವನ್ನು ಸೆಳೆಯದಿದ್ದರೆ ಕೇಳಿ. ಈ ಹಂದಿಗಳನ್ನು ಅವುಗಳ ಮಾಲೀಕರು ದಾವಣಗೆರೆ ತುಂಬಾ ಗಸ್ತು ತಿರುಗಲು ಬಿಟ್ಟು, ನಗರದ ಮಲಮೂತ್ರ ಶುಚೀಕರಣಕ್ಕೆ ಉಚಿತ ಸೇವೆ ಸಲ್ಲಿಸುವ ಕೈಂಕರ್ಯವನ್ನು ಮನಗಂಡೇ ಇಲ್ಲಿನ ಪುರಪಿತೃಗಳು ಈ ಹಂದಿಗಳನ್ನು ತಮ್ಮ ಸಹೋದ್ಯೋಗೀ ಮಿತ್ರರೆಂದು ಭಾವಿಸಿ ಗೌರವಿಸುತ್ತಿದ್ದಾರೆಂದೇ ನನ್ನ ಭಾವನೆ. ಈ ದಾವಣಗೆರೆ ಹಂದಿಗಳು ಎಷ್ಟೊಂದು ಕಾರ್ಯಶೀಲವೆಂದರೆ ಬಯಲು ಬಹಿರ್ದೆಶೆಗೆ ಕುಳಿತ ಜನಸಾಮಾನ್ಯರಿಗೆ ಅವರವರ ಶಕ್ತಿಗನುಗುಣವಾಗಿ ಟೈಮರ್ ಸೆಟ್ ಮಾಡಿ, ಅವರ ಕಾಲ ಮೀರುತ್ತಿದ್ದಂತೆಯೆ ಅವರನ್ನು ತಮ್ಮ ಮೂತಿಯಿಂದ ತಿವಿದು ನೂಕಿ ಶುಚೀಕರಣಕ್ಕೆ ಮೊದಲ್ಗೊಳ್ಳುತ್ತವೆ.

ಹೀಗೆ ಕೊಬ್ಬಿದ ಈ ಹಂದಿಗಳನ್ನು ಅವುಗಳ ಮಾಲೀಕರು ಆಗಾಗ್ಗೆ ಹಿಡಿದು ತೂಕ ಹಾಕಿ ಹಾಸನ, ಮೈಸೂರಿಗೆ ಸರಬರಾಜು ಮಾಡುತ್ತಾರೆ. ನಿತ್ಯವೂ ಅಲ್ಲಿನ ರೈಲ್ವೆ ಸ್ಟೇಷನ್ನಿನಿಂದ ಕನಿಷ್ಟ ಐವತ್ತು ಹಂದಿಗಳು ಹಾಸನದೆಡೆಗೆ ಸಾಗಿ ’ಪಿಗ್ ಮಟನ್’ ಆಗಿಯೂ ಮುಂದೆ ಮೈಸೂರನ್ನೂ ಸೇರಿ ’ಚಿಲ್ಲಿ ಪೋರ್ಕ್’ ಆಗಿಯೂ ಅಲ್ಲಿನ ಹೋಟೇಲುಗಳ ತಟ್ಟೆಗಳ ಮೇಲೆ ಕಂಗೊಳಿಸುತ್ತವೆ. ಆಗಾಗ್ಗೆ ದಾವಣಗೆರೆಯಿಂದ ಹಾಸನದೆಡೆಗೆ ರೈಲಿನಲ್ಲಿ ಸಾಗುತ್ತಿದ್ದ ನನ್ನೊಂದಿಗೆ ಈ ಹಂದಿಗಳೂ ಬಹಳ ಸಾರಿ ಆ ದಾರಿಯಲ್ಲಿ ಸಾಗಿವೆ. ಬಹುಶಃ, ದಾವಣಗೆರೆಯ ಪ್ರಮುಖ ಜನಾಂಗವು ಹಂದಿಯನ್ನು ತಿನ್ನದೇ ಇರುವುದೂ ಅವುಗಳ ಸಂಖ್ಯೆಗೆ ಒಂದು ಕಾರಣವಿರಬಹುದು ಅಥವಾ ಅಲ್ಲಿನ ಮಾಂಸಹಾರಿಗಳು ಹಂದಿ ತಿನ್ನುವ ಹಂಬಲವಿದ್ದರೂ "ದಾವಣಗೆರೆಯ ಹಂದಿ"ಗಳ ಪ್ರಮುಖ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ವರ್ಜಿಸಿರಬಹುದು!

ಆದರೆ ಈ ಎಲ್ಲ ಸಾಮಾನ್ಯ ಸಂಗತಿಗಳನ್ನೂ ಮೀರಿ ಪರಿಸರಕ್ಕೆ ಸಂಬಂಧಿಸಿದ ಕೌತುಕವೊಂದು ಅಲ್ಲಿದೆಯೆಂದರೆ ನಿಮಗೆ ಆಶ್ಚರ್ಯವಾಗಬಹುದು!

ದಟ್ಟ ಅರಣ್ಯ ಪ್ರದೇಶವಲ್ಲದ, ಕುರುಚಲು ಕಾಡುಗಳೂ ಇಲ್ಲದ, ಭಾರೀ ಬಂಡೆಗಲ್ಲುಗಳ ಬೆಟ್ಟಗುಡ್ಡಗಳಿಲ್ಲದ ಸಮತಟ್ಟಾದ ಈ ನಗರದ ಮಧ್ಯಭಾಗದಲ್ಲಿ ಸಹಸ್ರಾರು ಹಸಿರು ಗಿಳಿಗಳು ಶತಮಾನದಿಂದಲೂ ವಾಸಿಸುತ್ತಿವೆ. ಹಾಗೆಂದ ಮಾತ್ರಕ್ಕೆ ಆ ಗಿಳಿಗಳೆಲ್ಲ ಇಲ್ಲಿನ ದವಸಧಾನ್ಯದ ವಹಿವಾಟಿನ ಭರದಲ್ಲಿ ಚೆಲ್ಲುವ ಕಾಳುಗಳನ್ನು ಹಂದಿಗಳೊಂದಿಗೆ ಹಂಚಿಕೊಂಡಾಗಲಿ, ನೆಚ್ಚಿಕೊಂಡಾಗಲಿ ಇಲ್ಲಿ ನೆಲೆಸಿಲ್ಲ. ’ಕಾಯಕವೇ ಕೈಲಾಸ’ವೆಂದು ನಂಬಿರುವ ಈ ಕರ್ಮಜೀವೀ ಗಿಳಿಗಳು ತಮ್ಮದೇ ಆದ ಕರಾರುವಕ್ಕಾದ ಟೈಂ ಟೇಬಲ್ ಹಾಕಿಕೊಂಡಿವೆ. ನಿತ್ಯವೂ ಬೆಳಗಿನ ಮುಂಜಾನೆ ತಮ್ಮ ತಮ್ಮ ನೆಲೆಯಿಂದ ಉತ್ತರ ದಿಕ್ಕಿಗೆ ಹಾರುತ್ತ ದೂರದ ಹೊಲಗದ್ದೆಗಳೆಡೆಯೋ, ಅಡವಿಯನ್ನೋ ಹುಡುಕಿಕೊಂಡು ಆಹಾರ ಬೇಟೆಗೆ ಹೊರ್‍ಅಡುತ್ತವೆ. ನಿತ್ಯವೂ ತಂಡ ತಂಡಗಳಲ್ಲಿ ಹಾರುವ ಆ ಗಿಳಿಗಳು ಪರೇಡಿನಲ್ಲಿ ಸಾಗುವ ಸ್ತಬ್ಧಚಿತ್ರಗಳಂತೆ ಸರಮಾಲೆಯಾಗಿ ಸಾಗುತ್ತಲೇ ಇರುತ್ತವೆ. ಸುಮಾರು ಬೆಳಗಿನ ಐದೂವರೆಯಿಂದ ಶುರುವಾಗಿ ಏಳರವರೆಗೆ ಹಳೇ ದಾವಣಗೆರೆಯ ಆಕಾಶದಲ್ಲಿ ಹಸಿರು ಗಿಳಿಗಳ ನಿತ್ಯ ಮೆರವಣಿಗೆ. ಮತ್ತದೇ ದೃಶ್ಯ ಸಂಜೆ ಸೂರ್ಯಾಸ್ತದ ಮೊದಲೆರಡು ಗಂಟೆಯಿಂದ ಸೂರ್ಯ ಮುಳುಗುವವರೆಗೆ. ಚಳಿಯಾಗಲಿ, ಮಳೆಯಾಗಲಿ ಅಥವ ಸುಡುಬಿಸಿಲಿರಲಿ, ಈ ಮೆರವಣಿಗೆಯಲ್ಲಿ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ.

ದಾವಣಗೆರೆಯ ಅಸಂಖ್ಯಾತ ಘಟನೆಗಳಿಗೆ ಸಾಕ್ಷಿಯಾಗಿರುವ ಈ ಗಿಳಿಗಳು ಅಲ್ಲಿನ ನಗರಸಭೆ ಕಟ್ಟಡ, ಕೋರ್ಟ್, ಪೊಲೀಸ್ ಠಾಣೆ ಆವರಣ, ಪ್ರವಾಸಿ ಮಂದಿರ ಮತ್ತು ಸುತ್ತಮುತ್ತಲ ರಸ್ತೆಗಳ ಇಕ್ಕೆಲಗಳಲ್ಲಿರುವ ಮರಗಳ ಮೇಲೆ ತಮ್ಮದೇ ಆದ ನಗರವನ್ನು ನಿರ್ಮಿಸಿಕೊಂಡಿವೆ. ದಾವಣಗೆರೆಯಂತಹ ಪಕ್ಕಾ ವ್ಯಾಪಾರೀ ನಗರದಲ್ಲಿ, ನವಿರೇಳುವಂತಹ ಭಾವನೆಗಳನ್ನು ಮೂಡಿಸುವಂತಹ ಸಂಗತಿಯೋ ಆಕರ್ಷಣೆಯೋ ಎಂದರೆ ನನಗೆ ಕಾಣುವುದು ಈ ಗಿಳಿಪಟ್ಟಣವೊಂದೇ. ಬೇಕಿದ್ದರೆ ಒಮ್ಮೆ ಸುಮ್ಮನೆ ಅಲ್ಲಿ ಸುತ್ತಿ ಬನ್ನಿ. ಆ ಗಿಳಿಗಳ ಕಲರವ ಕೇಳಿಸಿಕೊಂಡರೆ ಸಾಕು ನಿಮಗರಿವಾಗುತ್ತದೆ ಆ ಮರಗಳ ಮೇಲೇನಾಗುತ್ತಿದೆಯೆಂದು. ಇತ್ತೀಚೆಗೆ ನಾನು ಅಲ್ಲಿಗೆ ಹೋದಾಗ ಅಲ್ಲಿನ ಜನಪಟ್ಟಣ ಉನ್ನತಿಗೇರಿದಂತೆ ಈ ಗಿಳಿಪಟ್ಟಣ ಅವನತಿಯ ಅಂಚಿನಲ್ಲಿ ಬಂದು ನಿಂತಿರುವುದನ್ನು ಕಂಡೆ. ರಸ್ತೆ ಅಗಲೀಕರಣಕ್ಕೋ, ಆ ಮರಗಳು ಮುದಿಯಾಗಿ ಸಾಯುತ್ತಿರುವುದರಿಂದಲೋ ಒಟ್ಟಿನಲ್ಲಿ ದಾವಣಗೆರೆ ನಗರಸಭೆಯಾಗಿ, ಜಿಲ್ಲೆಯಾಗಿ, ಮಹಾಪಾಲಿಕೆಯಾಗಿ ಉನ್ನತಿ ಹೊಂದುತ್ತಾ ಸಾಗಿದಂತೆ, ಈ ಗಿಳಿಗಳು ಆಹಾರಕ್ಕೆ ನಂಬಿಕೊಂಡಿದ್ದ ತಾಣಗಳು, ಹೊಲಗಳೂ ’ಆಶ್ರಯ ಯೋಜನೆ’ ಯ ಮನೆಗಳಾಗಿ ಈ ಗಿಳಿಗಳ ಆಶ್ರಯಕ್ಕೆ ಕುತ್ತು ತಂದು ಇವುಗಳನ್ನು ಅವನತಿಯ ಅಂಚಿಗೆ ತಂದಿವೆ. ನಿತ್ಯವೂ ಉತ್ತರ ದಿಕ್ಕಿಗೆ ಹಾರಿ ಮತ್ತೆ ಸಂಜೆ ದಕ್ಷಿಣ ದಿಕ್ಕಿಗೆ ಮುಖ ಮಾಡುತ್ತಿದ್ದ ಈ ಗಿಳಿಗಳು ಇಂದು ತಮ್ಮ ಜೀವಸೆಲೆಯನ್ನು ಕಳೆದುಕೊಂಡು ದಿಕ್ಕು ತಪ್ಪಿ ಎತ್ತೆತ್ತಲೋ ಹಾರುತ್ತಿವೆ! ಈ ಗಿಳಿಗಳ ತಪ್ಪಿದ ಪಥಚಲನೆ ಮನುಕುಲದ ಪ್ರಗತಿ ಪಥದ ತುಲನೆಯೇನೋ ಅನ್ನಿಸುತ್ತಿದೆ.

ಇದು ಕೇವಲ ದಾವಣಗೆರೆ ನಗರದ ಕಥೆಯಾಗಿರದೇ ಭಾರತದ ಪ್ರತಿಯೊಂದು ಉದಯೋನ್ಮುಖ ನಗರಗಳಲ್ಲಿಯೂ ಈ ರೀತಿಯ ಹಲವಾರು ಜೀವಸಂಕುಲಗಳು ನಾಶವಾಗುತ್ತಿರುವುದರ ಭೀಕರ ಕಥಾನಕವೇ ಆಗಿದೆ. ಇದು ಹಾಸನ, ಮೈಸೂರು ಭಾಗದಲ್ಲಿ ವರ್ಷಕ್ಕೊಮ್ಮೆ ಕಾಣಬರುತ್ತಿದ್ದ ಕಂಬಳಿಹುಳುಗಳದ್ದಾಗಿರಬಹುದು, ರ್‍ಆಣಿಬೆನ್ನೂರಿನ ಕೃಷ್ಣಮೃಗಗಳದ್ದಾಗಿರಬಹುದು, ಬಯಲುಸೀಮೆಯ ಬೆಳವ, ಬ್ಯಾಡಗಿ / ಕೊಪ್ಪಳಗಳ ನವಿಲುಗಳದ್ದಾಗಿರಬಹುದು, ಆಥವಾ ನಿಮ್ಮೂರು ಹಳ್ಳಿಗಳಲ್ಲಿ ಯಥೇಚ್ಚವಾಗಿ ಕಾಣುತ್ತಿದ್ದ ಗುಬ್ಬಿ ಕಾಗೆಗಳಿರಬಹುದು. ಮಾನವ ಪ್ರಗತಿಪಥದತ್ತ ಸಾಗುವ ದೆಸೆಯಲ್ಲಿ ತನ್ನಂತೆಯೇ ಈ ಭೂಮಂಡಲದಲ್ಲಿ ವಾಸಿಸುವ ಇತರೆ ಜೀವಸಂಕುಲಗಳನ್ನು ವಿನಾಶದ ಅಂಚಿಗೆ ತಳ್ಳಿರುವುದನ್ನು ಮುಂಬರುವ ಜನಾಂಗ ಹೇಗೆ ಸ್ವೀಕರಿಸುವುದೋ ನಾನರಿಯೆ.

ಈ ಗಿಳಿಗಳ ಹಾರಾಟದಿಂದ ಹೊರಪ್ರಪಂಚದ ಜೀವಜಾಲದ ಪರಿಚಯವನ್ನು ಮಾಡಿಕೊಳ್ಳುತ್ತ ಬೆಳೆದ ನಾನು, ಪರಿಸರದ ಬಗ್ಗೆ ಕುತೂಹಲ ಮೂಡಿಸಿಕೊಂಡು ಕಾಲೇಜು ದಿನಗಳಲ್ಲಿ ಪಶ್ಚಿಮಘಟ್ಟಗಳಲ್ಲಿ ಸುತ್ತಿ, ಅಮೇರಿಕೆಗೆ ಬಂದು ನೆಲೆಸಿದ ನಂತರ ಅಮೆಜಾನ್ ಕೊಳ್ಳ ಸುತ್ತಿದರೂ ತೀರದ ಈ ಪರಿಸರದ ಕುತೂಹಲ ನನ್ನಲ್ಲಿ ಇನ್ನೂ ಹೆಚ್ಚಾಗುತ್ತಲೇ ಇದೆ. ಈ ಗಿಳಿಗಳಿಲ್ಲದ ದಾವಣಗೆರೆ, ಗುಬ್ಬಿ / ಕಾಗೆಗಳಿಲ್ಲದ ಊರುಕೇರಿಗಳು ಸ್ಮಶಾನಸದೃಶವಾಗಿ ಮುಂದಿನ ಜನಾಂಗಕ್ಕೆ ಹೇಗೆ ಸ್ಪೂರ್ತಿದಾಯಕವಾಗಿರುತ್ತವೋ?

ದಾವಣಗೆರೆಯ ಜನನಾಯಕರು, ಅಧಿಕಾರಿಗಳು, ವರ್ತಕರು, ಮಾಜಿ ಕಾಮ್ರೇಡುಗಳು, ಮಹಾಜನತೆಯೂ ಈ ಗಿಳಿಗಳ ಅಸ್ತಿತ್ವದ ಪರಿವೆಯೇ ಇಲ್ಲದೆ ತಮ್ಮೂರಿನ ಮಂಡಕ್ಕಿ ಮೆಣಸಿನಕಾಯಿ ಭಜ್ಜಿಗಳನ್ನು ಮೆಲ್ಲುತ್ತ, ಅರ್ಧ ’ಚ್ಚಾ’ (ಚಹಾ) ಹೀರಿ, ಯಾವ ಎಗ್ಗಿಲ್ಲದೇ ಸಶಬ್ದವಾಗಿ ಢರ್ರನೇ ಹೂಸಿಸುವುದರಲ್ಲೇ ಸ್ವರ್ಗ ಸುಖ ಕಾಣುತ್ತ, ಅಭಿವೃದ್ದಿಯ ಪಥದತ್ತ ಕಿಂಕರ್ತವ್ಯಮೂಢರಾಗಿ ಸಾಗುತ್ತಿರುವ ಪರಿಯನ್ನು ನೋಡಿದರೆ, ಆ ನಗರದ ಪ್ರಮುಖ ಜೀವಸಂಕುಲವೊಂದು ಮುಂದಿನ ಕಾಲಮಾನಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಮನುಕುಲದ ನೆಲೆಯ ಭದ್ರ(?) ಬುನಾದಿಗೆ ಬಲಿಯಾಗಿ, ಅದರ ತ್ಯಾಗದ ಕತೆ ಈ ನಗರದ ಇತಿಹಾಸದ ಪುಟಗಳನ್ನೂ ಸೇರದೆ ಕಣ್ಮರೆಯಾಗುವುದೇನೋ!

ಅಣಕ:

ಬೆಂಗಳೂರಿನ ’ಏನು ಗುರು’, ’ಏನ್ಲಾ ಮಗಾ’, ’ಮಚ್ಚಾ’ ಪದಗಳಂತೆ, ಶಿವಮೊಗ್ಗೆಯ ’ಲೋ’ ಪದದಂತೆ, ಹಾಸನದವರ ’ಏನ್ಲಾ’ ಎಂದಂತೆ ದಾವಣಗೆರೆ ಜನ ಏನೆಂದು ತಮ್ಮ ಸಂಭಾಷಣೆಯನ್ನು ಆರಂಭಿಸುತ್ತಾರೆ, ಗೊತ್ತೆ?

ಆಪ್ತಮಿತ್ರನಾಗಿರಲೀ ಅಥವ ಬದ್ಧಶತ್ರುವಾಗಿರಲೀ ಯಾವುದೇ ಭೇಧದಂಡವನ್ನು ಅನುಸರಿಸದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ’ಬಾರ್ಲೇ ಮಿಂಡ್ರಿಗುಟ್ಟಿದವನೇ’ ಎಂದೇ ಸಂಭೋಧಿಸುತ್ತಾರೆ.

ಅಪ್ಪ, ಮಗ, ಆಪ್ತರು, ಬಂಧು, ಮಿತ್ರರು, ಶತ್ರುಗಳನ್ನೆಲ್ಲಾ ಹೀಗೆಯೇ ಸಂಭೋಧಿಸುವುದರ ರಹಸ್ಯವನ್ನು ಭೇಧಿಸೋಣವೆಂದರೆ ಇಲ್ಲಿನ ಹುಡುಗಿಯರು ಹುಡುಗರು ಮಾತನಾಡಿಸಿದರೇ ಮುಟ್ಟು ನಿಲ್ಲುತ್ತದೆಂದು ಮುಗುಮ್ಮಾಗಿ, ಹುಡುಗರೆಡೆ ಕಣ್ಣೆತ್ತಿಯೂ ನೋಡದೆ ಅತ್ಯಂತ ಮಡಿವಂತಿಕೆಯಿಂದ ಇರುತ್ತಾರೆ. ಅಷ್ಟೊಂದು ಮಡಿವಂತಿಕೆಯ, ಪಾತಿವೃತ್ಯದ ಧರ್ಮಬೀರುಗಳ ನಗರವಾದ ಇಲ್ಲಿ ಅದು ಹೇಗೆ ಎಲ್ಲರೂ ಈ ರೀತಿ ಸಂಭೋಧಿಸುವಂತಾಯಿತೋ?

ಹೊಮ್ಮುತ್ತಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತ

ಕಳೆದ ವಾರ ನನಗೊಂದು ’ಎಮರ್ಜಿಂಗ್ ಇಕಾನಮೀಸ್’ ಎಂಬ ವಿಷಯವಾಗಿ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳುವಂತೆ ನನ್ನ ಕಂಪೆನಿ ಕಳುಹಿಸಿಕೊಟ್ಟಿತ್ತು. ಸಾಮಾನ್ಯವಾಗಿ ಶಿಕಾಗೋ ಅಥವಾ ನ್ಯೂಯಾರ್ಕ್ ನಗರಗಳಲ್ಲಿ ಹೆಚ್ಚಾಗಿ ಆಯೋಜಿತಗೊಳ್ಳುತ್ತಿದ್ದ ಆರ್ಥಿಕ ಗೋಷ್ಠಿ, ಸಮಾವೇಶಗಳಿಗಿಂತ ಈ ಬಾರಿ ’ಫಾರ್ ಎ ಚೇಂಜ್’ ಎಂಬಂತೆ ಜಗಮಗಿಸುವ ಲಾಸ್ ವೇಗಸ್ ನಲ್ಲಿ ಈ ಸಮಾವೇಶ ಆಯೋಜಿತಗೊಂಡಿತ್ತು. ನನ್ನ ಸಹೋದ್ಯೋಗಿ ಮಿತ್ರ ಫ್ರ್ಯಾಂಕ್ ನನ್ನು ವೇಗಸ್ ನ ಏರ್ ಪೋರ್ಟ್ ನಲ್ಲಿ ಕಲೆತು ಬಾಡಿಗೆ ಕಾರು ಪಡೆದುಕೊಂಡು ನಾವಿಳಿದುಕೊಳ್ಳಬೇಕಿದ್ದ ಹೋಟೆಲ್ ನೆಡೆಗೆ ಲಾಸ್ ವೇಗಸ್ ನ ಪ್ರಮುಖ ಸ್ಟ್ರಿಪ್ ಮೂಲಕ ಹಾದು ನಾನು ಮತ್ತು ಫ್ರ್ಯಾಂಕ್ ಹೋಗುತ್ತಿದ್ದೆವು.

ಅದಾಗಲೇ ಸಂಜೆ ಆರರ ಸಮಯವಾಗಿ ಲಾಸ್ ವೇಗಸ್ ಎಂದಿನಂತೆ ಜಗಮಗಿಸುತ್ತ ಸಂಪೂರ್ಣ ಜಾತ್ರೆಯ ಕಳೆ ತುಂಬಿಕೊಂಡು ಜನಜಂಗುಳಿಯಿಂದ ತುಂಬಿತುಳುಕುತ್ತಿತ್ತು. ಹಾಗೆಯೇ ಪ್ರಮುಖ ಲಾಸ್ ವೇಗಸ್ ಸ್ಟ್ರಿಪ್ ನ ಟ್ರ್ಯಾಫಿಕ್ ಕೂಡ. ಸರಿ, ಹಾಗೆಯೇ ತೆವಳುತ್ತ ಸಾಗುತ್ತಿದ್ದ ಟ್ರಾಫಿಕ್ಕಿನಲ್ಲಿ ಇತರೆ ಕಾರುಗಳೆಡೆ ಕಣ್ಣಾಡಿಸುತ್ತ ಅಲ್ಲಿರಬೇಕಾದ ಎರಡು ಸಂಜೆಗಳಲ್ಲಿ ಏನೇನು ಮಾಡಬೇಕೆಂದು ಚರ್ಚಿಸುತ್ತ ಸಾಗುತ್ತಿದ್ದ ನಮಗೆ ಪಕ್ಕದಲ್ಲಿಯೇ ಸಾಗಿ ಬಂದ ಕನ್ವರ್ಟಿಬಲ್ ಫೋರ್ಡ್ ಮಸ್ಟ್ಯಾಂಗ್ ಕಾರಿನಲ್ಲಿದ್ದ ನಾಲ್ಕು ಲಲನೆಯರು ನಮ್ಮೆಡೆಗೆ ಮುಗುಳ್ನಗೆ ಹಾಯಿಸಿದರು. ಆ ಟ್ರಾಫಿಕ್ ನಲ್ಲಿ ಬೇಯುತ್ತಿದ್ದ ನಮಗೆ ಆ ಹರೆಯದ ಹೆಣ್ಣುಗಳ ಮುಗುಳ್ನಗೆ ತಂಗಾಳಿಯಂತೆ ಬೀಸಿತು. ಈ ಹುಡುಗಿಯರ ವಿಷಯದಲ್ಲಿ ಪರಿಣಿತನಾಗಿದ್ದ ನನ್ನ ಗೆಳೆಯ ಫ್ರ್ಯಾಂಕ್ ಅವರೊಂದಿಗೆ ಹರಟತೊಡಗಿದ. ಆಗಷ್ಟೇ ಇಪ್ಪತ್ತೊಂದಕ್ಕೆ ಕಾಲಿಟ್ಟು ಮದ್ಯಪಾನ / ಧೂಮಪಾನ ಮಾಡಲು ಲೈಸೆನ್ಸ್ ಗಿಟ್ಟಿಸಿಕೊಂಡಿದ್ದ ಆ ಕನ್ಯೆಯರು ಅದನ್ನು ಆಚರಿಸಿಕೊಳ್ಳಲು ಲಾಸ್ ವೇಗಸ್ ಗೆ ಬಂದಿದ್ದರು. ಆಗಷ್ಟೇ ದೊರಕಿದ ಸ್ವಾತಂತ್ರ್ಯದ ಉನ್ಮಾದದಲ್ಲಿದ್ದ ಆ ತರುಣಿಯರು ಅದನ್ನಾಚರಿಸಿಕೊಳ್ಳುವ ವಿಶಿಷ್ಟ ವಿಧಗಳ ಬಗೆಗೆ ಫ್ರ್ಯಾಂಕ್ ನ ಸಲಹೆ ಕೇಳಿದಾಗ, ನನ್ನ ಗೆಳೆಯನು ಅವರಿಗೆ "ಈ ದರಿದ್ರ ಟ್ರಾಫಿಕ್ಕಿನಲ್ಲಿ ನೀವು ಎಲ್ಲರಿಗೂ ಮನರಂಜನೆಯನ್ನು ಒದಗಿಸುತ್ತ ಆಚರಿಸಿಕೊಳ್ಳುವ ಬಗೆಯೆಂದರೆ ಅತ್ತಿತ್ತ ಇರುವ ಕಾರಿನ ಚಾಲಕರಿಗೆ ’ಇಪ್ಪತ್ತು ಡಾಲರ್ ಕೊಟ್ಟರೆ ತೆರೆದೆದೆಯ ಸುಂದರಿಯರಾಗಿ ಎದೆ ಕುಣಿಸುತ್ತೇವೆ’ ಎನ್ನಿರಿ. ಅದು ನಿಮಗೆ ದೊರೆತ ಸ್ವಾತಂತ್ರ್ಯದ ಸಂಕೇತವೂ ಆಚರಣೆಯೂ ಆಗಿ, ಈ ಸಂಜೆಯ ಪಾರ್ಟಿಗೆ ಹಣ ಮತ್ತು ಟ್ರಾಫಿಕ್ ನಲ್ಲಿ ಸಿಕ್ಕಿರುವ ಎಲ್ಲರಿಗೂ ಕೊಂಚ ಮನರಂಜನೆ" ಎನ್ನುತ್ತ ಇಪ್ಪತ್ತು ಡಾಲರ್ ನ ನೋಟನ್ನು ಅವರೆಡೆಗೆ ಚಾಚಿದ. ಕೂಡಲೇ ಆ ಯುವತಿಯರು ’ಗ್ರೇಟ್ ಐಡಿಯಾ’ ಎನ್ನುತ್ತ ಫ್ರ್ಯಾಂಕ್ ಚಾಚಿದ ಇಪ್ಪತ್ತರ ನೋಟನ್ನು ತೆಗೆದುಕೊಂಡು ತೆರೆದ ಕಾರಿನಲ್ಲಿ ಎದ್ದು ನಿಂತು ಬಿಚ್ಚೆದೆಯ ಸುಂದರಿಯರಾಗಿ ತಮ್ಮ ಕೆಚ್ಚೆದೆಯನ್ನು ಕುಲುಕಿಸಿದರು. ಹಾಗೆಯೇ ಮುಂದೆ ಸಾಗುತ್ತ ಇತರೆ ಕಾರುಗಳ ಚಾಲಕರಿಂದ ಇಪ್ಪತ್ತು ಡಾಲರ್ ಪಡೆದು ತಮ್ಮ ಎದೆ ಕುಣಿಸುತ್ತ ಸಂಭ್ರಮಿಸುತ್ತ ಸಾಗಿದರು. ಲಾಸ್ ವೇಗಸ್ ನಲ್ಲಿ ಇದೇನು ಅಶ್ಲೀಲವಾಗಿರದೇ ತಮ್ಮ ಸ್ವಾತಂತ್ರ್ಯವನ್ನು, ಸಂತೋಷವನ್ನು ವ್ಯಕ್ತಪಡಿಸುವ / ಆಚರಿಸಿಕೊಳ್ಳುವ ಬಗೆಬಗೆಯ ಜನರ ಒಂದು ವಿಧವಾಗಿತ್ತು ಈ ತೆರೆದೆದೆಯ ಕುಣಿತ! ಆ ಎರಡು ಮೈಲಿಗಳ ದೂರದ ಪ್ರಮುಖ ರಸ್ತೆಯ ಟ್ರಾಫಿಕ್ಕಿನಲ್ಲಿ ಸುಮಾರು ಎಂಟುನೂರು ಡಾಲರ್ ಗಳನ್ನು ತಮ್ಮ ಸಾಯಂಕಾಲದ ಪಾರ್ಟಿಗೆ ಹುಡುಗಾಟದ ಚೇಷ್ಟೆಯಾಗಿ ಸಂಪಾದಿಸಿಕೊಂಡವು ಆ ಬಂಧಮುಕ್ತ ಹಕ್ಕಿಗಳು. ಬಹುಶಃ ಭಾರತದಲ್ಲಿ ಈ ರೀತಿಯಾಗಿದ್ದರೆ ಆ ತರುಣಿಯರ ಗತಿ ಏನಾಗುತ್ತಿತ್ತೋ ಊಹಿಸಲೂ ಅಸಾಧ್ಯ!

ಸರಿ, ಮರುದಿನ ಆ ಆರ್ಥಿಕ ಸಮಾವೇಶದಲ್ಲಿ ಕ್ರಿ.ಶ. ೨೦೨೦ ರ ಹೊತ್ತಿಗೆ ಕ್ರಮವಾಗಿ ಚೀನಾ, ಅಮೇರಿಕಾ, ಭಾರತ, ಜಪಾನ್, ಯುರೋಪ್ ಮತ್ತು ಬ್ರೆಜಿಲ್ ಗಳು ಆರ್ಥಿಕ ದೈತ್ಯರಾಗಿ ಹೊರಹೊಮ್ಮುತ್ತಾರೆಂದು, ಅದಕ್ಕೆ ಪರ್ಯಾಯವಾಗಿ ಕಂಪೆನಿಗಳು ಹೇಗೆ ಸಿದ್ಧವಾಗಿರಬೇಕೆಂದೂ, ಯಾವ ಯಾವ ಕೈಗಾರಿಕೆಗಳಲ್ಲಿ ಬಂಡವಾಳವನ್ನು ತೊಡಗಿಸಬೇಕೆಂದೂ ವಿವಿಧ ಪ್ರತಿಷ್ಟಿತ ಬಂಡವಾಳ ಹೂಡಿಕೆ ಕಂಪೆನಿಗಳ ದೊಡ್ಡ ಅಧಿಕಾರಿಗಳು ಅಂಕಿಸಂಖ್ಯೆಗಳೊಂದಿಗೆ ವಿಷಯವನ್ನು ಪ್ರಸ್ತುತಪಡಿಸಿದರು. ಈ ಅಂಕಿಸಂಖ್ಯೆಗಳನ್ನು ಪ್ರಸ್ತುತಪಡಿಸಿದ ಅಧಿಕಾರಿಗಳಲ್ಲಿ ಭಾರತೀಯ ಸಂಜಾತರೊಬ್ಬರೂ ಇದ್ದರು. ಮುಂಬೈನ ಕಾನ್ವೆಂಟ್ ಒಂದರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಪ್ರತಿಷ್ಟಿತ ಕಾಲೇಜೊಂದರಲ್ಲಿ ಪದವಿ ಪಡೆದು, ಅಮೇರಿಕಾದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರಿಗೆ ಭಾರತವೆಂದರೆ ಡೆಲ್ಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಗಳೇ ಆಗಿದ್ದವು.

ಸಂಜೆಯ ಪಾರ್ಟಿಯಲ್ಲಿ ನನ್ನ ಮಿತ್ರ ಫ್ರ್ಯಾಂಕ್ ಮತ್ತೆ ಆ ವ್ಯಕ್ತಿಯೊಂದಿಗೆ ಸಂಭಾಷಿಸುತ್ತ, ಮುಂಬೈನ ಜನನಿಬಿಡ ರೈಲುಗಳಲ್ಲಿ ಅವರು ಯಾವತ್ತಾದರೂ ಪ್ರಯಾಣಿಸಿದ್ದಾರೆಯೇ ಎಂದು ಕೇಳುತ್ತ ತನಗೆ ತುಂಬಿದ್ದ ಆ ರೈಲಿನಲ್ಲಿ ಒಮ್ಮೆ ಸಲಿಂಗಕಾಮಿಯೊಬ್ಬನು ತನ್ನ ಚಡ್ಡಿಯೊಳಗೆ ಕೈತೂರಿಸಿದ್ದ ಅನುಭವವನ್ನು ಹೇಳುತ್ತ, ಜನಭರಿತ ಆ ರೈಲಿನಲ್ಲಿ ಅದಾವ ಮಹಾಶಯನೆಂದು ಕಂಡುಹಿಡಿಯಲಾಗದೆ ಹಾಗೆಯೇ ಆ ಕೈಯನ್ನು ಹಿಡಿದು ತಿರುವಿ ಆ ಸಂಧಿಗ್ದತೆಯಿಂದ ಪಾರಾದ ಕತೆಯನ್ನು ಹೇಳಿದನು. ಹಾಗೆಯೇ ಅವರು ಹೇಳಿದ ಭಾರತದ ಐ.ಟಿ/ಬಿ.ಟಿ ಯಶೋಗಾಥೆಗಳು ಸೃಷ್ಟಿಸಿರುವ ಕೆಲವು ಸಂಕೀರ್ಣತೆಗಳನ್ನು ಬಿಡಿಸಿಡುತ್ತಾ ತನಗೆ ಬೆಂಗಳೂರಿನ ಪಬ್ ಗಳಲ್ಲಿ ಇನ್ನೂ ಹದಿನೆಂಟು ಮುಟ್ಟದ ಯುವಕ/ಯುವತಿಯರು ಯಾವುದೇ ಅಡೆತಡೆಗಳಿಲ್ಲದೆ ಸಿಗರೇಟು ಸೇದುತ್ತ ಬಿಯರ್ ಹೀರುವುದನ್ನು, ಮತ್ತು ತಾನು ನಿರ್ವಹಿಸಲು ಹೋಗಿದ್ದ ಕಾಲ್ ಸೆಂಟರ್ ನ ಯುವಕ ಯುವತಿಯರು ಅಮೇರಿಕೆಯ ಮಾದರಿಯಲ್ಲಿಯೇ ಜೊತೆಗೂಡಿ ವಾಸ ಮಾಡುತ್ತಿದ್ದುದು, ಅವರೆಲ್ಲ ನೀರು ಕುಡಿಯದೆ ಕೋಕ್ ಕುಡಿಯುತ್ತಿದುದನ್ನು ಉದಹರಿಸಿದನು. ಭಾರತದ ಬಗ್ಗೆ ಅಪಾರವಾಗಿ ಓದಿಕೊಂಡು ಪ್ರತ್ಯಕ್ಷವಾಗಿಯೂ ಭಾರತದ ಬಗ್ಗೆ ತಿಳಿದುಕೊಂಡಿದ್ದ ಬಿಳಿಯ ಫ್ರ್ಯಾಂಕ್ ನೊಂದಿಗೆ ವಾದಿಸುವುದರಲ್ಲಿ ಆ ಚಾಕೋಲೇಟ್ ಭಾರತೀಯ ಕಕ್ಕಾಬಿಕ್ಕಿಯಾಗಿದ್ದ. ಕಡೆಗೆ ಅವರು ತೋರಿಸಿದ್ದ ಭಾರತದ ಶೇರು ಮಾರುಕಟ್ಟೆಯ ಬೆಳವಣಿಗೆಯನ್ನು ಎತ್ತುತ್ತಾ ಅದರಲ್ಲಿ ಭಾರತೀಯ ಕಂಪೆನಿಗಳೆಷ್ಟು ಹಣ ತೊಡಗಿಸಿದ್ದಾವೆ ಮತ್ತು ವಿದೇಶೀ ಕಂಪೆನಿಗಳೆಷ್ಟು ಹಣ ತೊಡಗಿಸಿದ್ದಾವೆಂದು ವಿಶ್ಲೇಷಿಸುತ್ತ ಈ ವಿದೇಶೀ ಬಂಡವಾಳ ಹೂಡಿಕೆ ಕಂಪೆನಿಗಳ ’ಪಂಪ್ ಅಂಡ್ ಡಂಪ್’ ನ ಹುನ್ನಾರವಾಗಿ ಭಾರತದ ಶೇರು ಮಾರುಕಟ್ಟೆ ಈ ಪಾಟಿ ಮೇಲೇರಿರುವುದಾಗಿಯೂ ಅದೇ ರೀತಿ ಸುಲಭ ಸಾಲ ಸೌಲಭ್ಯಗಳ ಹುನ್ನಾರವಾಗಿ ಭಾರತದ ನಗರಗಳ ರಿಯಲ್ ಎಸ್ಟೇಟ್ ಗಗನಕ್ಕೇರಿರುವುದಾಗಿಯೂ ಹೇಳಿದನು. ಹಾಗೆಯೇ ತಾನು ಬೆಂಗಳೂರ್‍ಇನಲ್ಲೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ವಿರುದ್ಧವಾಗಿ ’ಬಂದ್’ ನಡೆದುದನ್ನು ನೋಡಿದ್ದಾಗಿಯೂ, ಅದೇ ಮಾದರಿಯಲ್ಲಿ ಮುಂದೆ ಭಾರತೀಯರು ಶೇರುಪೇಟೆ ಬಿದ್ದಾಗ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಸೋತಾಗ ಬಡ ಭಾರತೀಯ ಹೂಡಿಕೆದಾರರು ಭಾರತದ ರೈತರ ಮಾದರಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವರೆಂದನು.

ಹಾಗೆಯೇ ಭಾರತದಲ್ಲಿನ ಅಗ್ಗದ ಕಾರ್ಮಿಕರು ಇಂದು ಅಗ್ಗವಾಗಿರದೇ ರಷ್ಯಾ/ ಜೆಕ್ ರಿಪಬ್ಲಿಕ್ ಮತ್ತಿತರೆ ಪೂರ್ವ ಯುರೋಪಿನ ರಾಷ್ಟ್ರಗಳು ಭಾರತಕ್ಕಿಂತ ಅಗ್ಗವಾಗಿ, ಈ ಹೊರಗುತ್ತಿಗೆ ವ್ಯವಸ್ಥೆಯ ಕಂಪೆನಿಗಳು ಅಲ್ಲಿಗೆ ಸ್ಥಾನಪಲ್ಲಟ ಮಾಡುವತ್ತ ಯೋಚಿಸುತ್ತಿರುವುದರ ಬಗೆಗೆ ತಮ್ಮ ಅಭಿಪ್ರಾಯವೇನೆಂದು ಕೇಳಿ ಅವರನ್ನು ಸುಸ್ತುಗೊಳಿಸಿದನು. ಕಡೆಗೆ ಭಾರತದಲ್ಲಿ ತಾನು ಕಳೆದ ಎಂಟು ತಿಂಗಳುಗಳಲ್ಲಿ ತಾನು ಗೋವೆಯಲ್ಲಿ ಮಾಡಿದ ಮಜಾ, ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸಾರ್ವತ್ರಿಕವಾಗಿ ಕಾಣುವ ದೇಹದ ಮಾರುಕಟ್ಟೆ ಮತ್ತು ಮನುಕುಲದ ಮೇಲೆಯೇ ಜುಗುಪ್ಸೆ ತರಿಸುವಂತೆ ಅಲ್ಲಿ ಸಾಲು ಸಾಲಾಗಿ ನಿಲ್ಲಿಸಿರುವ ಅಬಾಲವೃದ್ಧ ವೇಶ್ಯೆಯರು, ಗೋಕರ್ಣದ ಓಂ ಬೀಚಿನಲ್ಲಿ ಒಂದಕ್ಕೆ ಹತ್ತರಷ್ಟು ಜಡಿದು ಸುಲಿಗೆ ಮಾಡುವ ಸ್ಥಳೀಯರು, ಭಾರತ ಸರಕಾರವೇ ತನ್ನ ಐತಿಹಾಸಿಕ ಆಕರ್ಷಣಾ ಸ್ಥಳಗಳಲ್ಲಿ ವಿದೇಶೀಯರಿಗೊಂದು ದರ / ದೇಶೀಯರಿಗೊಂದು ದರವೆಂದು ಭೇಧನೀತಿಯನ್ನು ಸಾರುತ್ತಿರುವುದು, ಹಂಪಿಯಲ್ಲಿನ ಗಲೀಜು, ಬೆಂಗಳೂರು ಬಾಲೆಯರ ಸ್ವೇಚ್ಛಾಚಾರ್‍ಅ, ಕೂರ್ಗ್ ನಲ್ಲಿ ಹೋಂ ಸ್ಟೇ ಎಂದು ಪಂಚತಾರಾ ಹೋಟೆಲ್ಲಿನ ಛಾರ್ಜು ಛಾರ್ಜಿಸುವ ಗತ್ತು, ’ಬಂದ್’ ಒಂದರಲ್ಲಿ ಸಿಲುಕಿ ಊಟಿ-ಮೈಸೂರು ಮಧ್ಯದಲ್ಲೆಲ್ಲೋ ವಿದೇಶೀಯನಾದ ತಾನು ರಾತ್ರಿ ವೀರಪ್ಪನ್ ನ ಭಯದಲ್ಲಿ ಕಾಲ ಕಳೆದಿದ್ದು ಮತ್ತವನನ್ನು ಹಿಡಿಯಲಾಗದ ಭಾರತ ಸರ್ಕಾರದ ಪೋಲೀಸರು, ಯಾವುದನ್ನೂ ವಿರೋಧಿಸದ ಸಾಮಾನ್ಯ ಜನತೆ...ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದನು.

ಹಾಗೆಯೇ ತಮ್ಮ ಈ ಸಂಶೋಧನೆಯಲ್ಲಿ ಭಾರತದ ರಾಜಕಾರಣಿಗಳ ಭ್ರಷ್ಟಾಚಾರವನ್ನು ಹತ್ತಿಕ್ಕಿಯೋ ಅಥವಾ ಅದನ್ನು ಆಫ್ ಸೆಟ್ ಮಾಡಿ ಈ ಮಟ್ಟವನ್ನು ಭಾರತವು ಹೇಗೆ ಮುಟ್ಟುವುದೆಂಬುದಕ್ಕೇನಾದರೂ ಪೂರಿತ ಅಂಶಗಳಿವೆಯೇ ಎಂದು ವಿಚಾರಿಸಿದನು. ಇದನ್ನೆಲ್ಲಾ ಕೇಳಿದ ಆ ಭಾರತೀಯ ಸಂಜಾತ ತನ್ನ ಅಂಕಿಆಂಶಗಳನ್ನು ತಲೆಕೆಳಗು ಮಾಡಿದ ಫ್ರ್ಯಾಂಕ್ ನ ವಾದದಿಂದ ಪೇಲವಗೊಂಡು ನಿರುತ್ತರನಾಗಿದ್ದ. ಕಡೆಗೆ ಫ್ರ್ಯಾಂಕ್, ಕ್ರಿ.ಶ. ೨೦೫೦ ಬಂದರೂ ಭಾರತವು ತನ್ನ ಪ್ರಜೆಗಳಿಗೆ ಒಂದೊಂದು ಪಾಯಿಖಾನೆಯನ್ನೂ ಕಟ್ಟಿಸಿಕೊಡಲಾಗದ ಸ್ಥಿತಿಯಲ್ಲಿಯೇ ಇರುತ್ತದೆಂದೂ, ತಾನು ಪ್ರತಿ ಸಾರಿ ಮುಂಬೈ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮುಂಜಾನೆ ಹಾರುವಾಗ ರನ್ ವೇ ಯ ಕೊನೆ ಭಾಗದ ಸಮೀಪದಲ್ಲಿಯೇ ಸಾಲು ಸಾಲಾಗಿ ಚಡ್ಡಿ ಬಿಚ್ಚಿ ಬೆಳಗಿನ ಬಹಿರ್ದೆಶೆಗೆ ಕುಳಿತ ಅಸಂಖ್ಯಾತ ಜನಗಳ ಆ ದೃಶ್ಯ ಈಗಲೂ ಕೂಡ ಹಾಗೆಯೇ ಇರುವುದನ್ನು ಹೇಳಿ ಮತ್ತೊಂದು ಬಿಯರ್ ಪಡೆಯಲು ಬಾರ್ ನೆಡೆಗೆ ನಡೆದ.

ಈ ಫ್ರ್ಯಾಂಕ್ ಮತ್ತು ನಾನು ಸುಮಾರು ಹತ್ತು ವರ್ಷಗಳಿಂದ ಸಹೋದ್ಯೋಗಿಗಳಾಗಿ, ಒಮ್ಮೊಮ್ಮೆ ಅವನಿಗೆ ನಾನು ಬಾಸ್ ಆಗಿಯೂ ಮಗದೊಮ್ಮೆ ಅವನು ನನಗೆ ಬಾಸ್ ಆಗಿಯೂ ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇವೆ. ಅಮೇರಿಕೆಯ ಜೀವನದ ಬಹು ಮಜಲುಗಳನ್ನು ನನಗೆ ಪರಿಚಯಿಸಿದ ಫ್ರ್ಯಾಂಕ್ ನಿಗೆ ನಾನೊಮ್ಮೆ ಭಾರತದಲ್ಲಿನ ಹೊರಗುತ್ತಿಗೆ ಪ್ರಾಜೆಕ್ಟ್ ನಿಭಾಯಿಸಲು ಕಳುಹಿಸಿದ್ದೆ. ಆಗ ಭಾರತದಾದ್ಯಂತ ಸುತ್ತಿ, ನನ್ನ ಅನೇಕ ಭಾರತದಲ್ಲಿನ ಸ್ನೇಹಿತರುಗಳನ್ನು ಭೇಟಿಸಿ, ಎಲ್ಲೆಡೆ ತಿರುಗಿ ಬಂದಿದ್ದ ಈ ಫ್ರ್ಯಾಂಕ್. ಹಾಗೆಯೇ ತಾನು ಉಳಿದುಕೊಂಡಿದ್ದ ಹೋಟೇಲಿನಲ್ಲಿ ನಿತ್ಯವೂ ಹಾಕುತ್ತಿದ್ದ ಭಾರತೀಯ ದಿನಪತ್ರಿಕೆಗಳನ್ನೂ ಓದಿದ್ದ. ಅವನ ಆ ದಿನಗಳ ಅನುಭವದ ನುಡಿಯೇ ಅವನ ಮೇಲಿನ ವಾದಕ್ಕೆ ಪುಷ್ಠಿ ನೀಡಿದ್ದವು. ಯಾರಾದರೂ ನಮ್ಮ ಸ್ನೇಹಿತರು ಬೆಂಗಳೂರಿನಲ್ಲಿ ಮನೆಯನ್ನೋ, ಸೈಟನ್ನೋ ಕೊಂಡೆವೆಂದು ಹೇಳಿದಾಗ ಅವರೆಲ್ಲ ಹುಚ್ಚರೆಂದು ಕರೆಯುವ ಫ್ರ್ಯಾಂಕ್ ಹಿಂದೊಮ್ಮೆ ಗೋವೆಯಲ್ಲೊಂದು ಬಾರ್ ಅನ್ನು ತೆರೆದು ವಿಶ್ರಾಂತ ಜೀವನ ನಡೆಸುವ ಯೋಜನೆಯಲ್ಲಿದ್ದು ತಾನು ವಾಪಸ್ ಬರುವುದಿಲ್ಲವೆಂದು ನನಗೆ ಈಮೈಲ್ ಮಾಡಿದ್ದ. ಆದರೆ ಭಾರತವನ್ನು ಪ್ರತ್ಯಕ್ಷ ದರ್ಶಿಸಿ ಪ್ರಮಾಣಿಸಿ ನೋಡಿದ ಮೇಲೆ ಜ್ಞಾನೋದಯಗೊಂಡು ’ಒಂದು ರಾಷ್ಟ್ರ ಎಷ್ಟೇ ಬಡವಾಗಿದ್ದರೂ ಅದರ ಪ್ರಜೆಗಳು ಪ್ರಾಮಾಣಿಕರಾಗಿ ದೇಶಭಕ್ತರಾಗಿದ್ದರೆ ಅದು ಮುಂದೊಂದು ದಿನ ಉನ್ನತಿಗೇರಿಯೇ ಏರುತ್ತದೆ. ಆದರೆ ಎಲ್ಲಿ ಜನರು ಅಪ್ರಮಾಣಿಕರೂ, ಭ್ರಷ್ಟರೂ ಆಗಿರುವರೋ ಆ ದೇಶ ಎಷ್ಟೇ ಉನ್ನತಿಯಲ್ಲಿದ್ದರೂ ಅದರ ಅವನತಿ ಕಟ್ಟಿಟ್ಟಿದ್ದೇ’ ಎಂದುಕೊಂಡು ತನ್ನ ತಾಯ್ನಾಡಾದ ಅಮೇರಿಕೆಯೇ ವಾಸಿಯೆಂದು ಭ್ರಮನಿರಸನಗೊಂಡು ಹಿಂದಿರುಗಿದ್ದ.

ಕೇವಲ ಕೆಲವಾರು ತಿಂಗಳು ಭಾರತದಲ್ಲಿ ಸುತ್ತಿ, ಅಲ್ಲಿನ ಪತ್ರಿಕೆಗಳನ್ನು ಓದಿ ಫ್ರ್ಯಾಂಕ್ ನು ಕಂಡುಕೊಂಡ ಭಾರತವು, ಭಾರತದಲ್ಲಿಯೇ ಹುಟ್ಟಿ ಬೆಳೆದ ನಮಗೇಕೆ ಹಾಗೆ ಕಾಣುವುದಿಲ್ಲವೋ?

ಅಣಕ:

ಹಿಂದೊಮ್ಮೆ ನನಗೆ ಫ್ರ್ಯಾಂಕ್ ನಂತೆಯೇ ಭಾರತದ ಇತಿಹಾಸ, ಹಿಂದೂ ಧರ್ಮವನ್ನು ಓದಿಕೊಂಡಿದ್ದ ಮೈಕೆಲ್ ಡಫ್ ಎಂಬ ಸಹೋದ್ಯೋಗಿಯೊಬ್ಬನಿದ್ದ. ನಮ್ಮ ಕಂಪೆನಿಯ ಮತ್ತೊಂದು ಡಿಪಾರ್ಟಮೆಂಟಿನಲ್ಲಿ ಮೃತ್ಯುಂಜಯ ಎಂಬ ಭಾರತೀಯ ಸಂಜಾತನೋರ್ವನಿದ್ದು ಅವನು ತನ್ನ ಹೆಸರನ್ನು ’ಮೃತ್’ ಎಂದು ತುಂಡರಿಸಿಕೊಂಡಿದ್ದ (ಕೃಷ್ಣಮಾಚಾರಿ ಕ್ರಿಸ್ ಆದಂತೆ). ಅದನ್ನು ನಾನೂ ಹೆಚ್ಚಾಗಿ ಗಮನಿಸದೆ ’ಮೃತ್’ ಎಂದೇ ಸಂಭೋಧಿಸುತ್ತಿದ್ದೆನು. ಆದರೆ ಈ ಮೈಕೆಲ್ ಒಮ್ಮೆ ತುಂಬಿದ ಸಭೆಯಲ್ಲಿ "ಭಾರತೀಯರು ತಮ್ಮ ಹೆಸರುಗಳನ್ನು ಹೆಚ್ಚು ವಿಶ್ಲೇಷಿಸದೆ ತುಂಡರಿಸಿಕೊಳ್ಳುವ ಹವ್ಯಾಸ ಎಷ್ಟು ಅನರ್ಥವಾಗಿರುತ್ತದೆಂದು ವರ್ಣಿಸಿತ್ತ ’ಮೃತ್ಯುವನ್ನು ಜಯಿಸಿ ಮೃತ್ಯುಂಜಯನಾಗೆಂದು ಹರಸಿ ಹೆಸರಿಟ್ಟರೆ, ನಮ್ಮ ಸಹೋದ್ಯೋಗಿ ಮಿತ್ರ ’ಮೃತ್’ ತನ್ನ ಹೆಸರಿನ ಅರ್ಥದ ತದ್ವಿರುದ್ಧವಾಗಿ ’ಡೆಡ್ ಮ್ಯಾನ್’ ಆಗಿರುವುದೂ ಒಂದು ಉದಾಹರಣೆ" ಎಂದು ನಮ್ಮ ’ಮೃತ್’ ನಿಗೆ ಮೃತ್ಯು ಸಂದೇಶವನ್ನು ಕೊಟ್ಟನು.

ಮೃತ್ಯುಂಜಯನು ’ಮೃತ’ನಾದದ್ದು ಅತ್ಯಂತ ಸಣ್ಣ ನಿರ್ಲಕ್ಷಿಸುವಂತಹ ಘಟನೆಯಾದರೂ ಅದರರ್ಥ ಸುಧೀರ್ಘವೂ ಅತ್ಯಂತ ಗಾಢವೂ ಆಗಿದೆಯೇನೋ ಎಂದಿನಿಸುತ್ತದೆ!

ಹಳಸಿದ ಜೆಡಿಎಸ್, ಹಸಿದ ಬಿಜೆಪಿ, ಹೊಂಚುತ್ತಿರುವ ಕಾಂಗ್ರೆಸ್

ಮತ್ತೊಂದು ಸರ್ವಪಕ್ಷ ಪ್ರಹಸನ ಶುರುವಾಗಿದೆ. ಇದುವರೆಗೂ ಮಂತ್ರಿಗಳಷ್ಟೇ ಕಂತ್ರಿಯಾಗಿದ್ದ ಕಾಲ ಹೋಗಿ ರಾಜ್ಯಪಾಲರೂ ಲಜ್ಜೆಗೆಟ್ಟ ರಾಜಕೀಯ ದುಷ್ಟಕೂಟದಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ವಿಶ್ರಾಂತ ರಾಜಕಾರಣಿಗಳೇ ರಾಜ್ಯಪಾಲರುಗಳಾಗಿ ನೇಮಕಗೊಂಡರೂ ಯಾವುದೇ ರಾಜಕಾರಣಕ್ಕಿಳಿಯದೇ ಆ ಹುದ್ದೆಗೆ ಒಂದು ಘನತೆಯನ್ನು ಮೆರೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದರು. ಇದೀಗ ನಮ್ಮ ಮಣ್ಣಿನಮಗ ತಮ್ಮ ಘನತೆಯನ್ನೆಲ್ಲಾ ರಾಜ್ಯಕ್ಕಾಗಿ ತ್ಯಾಗ ಮಾಡಿ ಮಣ್ಣಿನ ಮೊಮ್ಮಕ್ಕಳ ಹಕ್ಕಿಗಾಗಿ ಹೋರಾಡುವ ಪರಿಯನ್ನು ನೋಡಿ ಇತರೆ ಘನವೆತ್ತ ಹುದ್ದೆಯ ಮಂದಿಯೆಲ್ಲ ಅವರ ಹಾದಿಯಲ್ಲಿ ನಡೆಯುವುದನ್ನು ನೋಡಿದರೆ ಭಾರತವು ನವ ನಾಗರೀಕತೆಯ ಪ್ರಗತಿಯ ಪಥದಲ್ಲಿದೆಯೋ ಅಥವಾ ತತ್ವ ಸಿದ್ಧಾಂತಗಳನ್ನೆಲ್ಲಾ ತೂರಿ ದುರ್ಗತಿಯ ಅಂಚಿನಲ್ಲಿದೆಯೋ ನಾನರಿಯೆ!

ಕೊನೆಯುಸಿರಿರುವ ತನಕ ಕೋಮುವಾದಿ ಬಿಜೆಪಿಗೆ ಅಧಿಕಾರ ಕೊಡೆನೆಂದು ಮಣ್ಣಿನ ಮಗ, ಮೊಮ್ಮಕಳು ಮತ್ತವರ ಪಡೆಯು ವಾಚಾಮಗೋಚರವಾಗಿ ಬಿಜೆಪಿಯನ್ನು ಜಾಡಿಸಿ, ಎಡೆಯೂರಪ್ಪನವರನ್ನು ’ಅಯೋಗ್ಯ’, ’ಕೈಲಾಗದವನು’ ಇನ್ನೂ ಏನೇನೋ ಅವರವರ ನಾಗರೀಕತೆಯನುಸಾರವಾಗಿ ಬೈಯ್ದವರು ಕೇವಲ ಎರಡೇ ವಾರಗಳ ಅಂತರದಲ್ಲಿ ಇದೇ ಅಯೋಗ್ಯ ಎಡೆಯೂರಪ್ಪ ತಮ್ಮ ಜಂಟೀ ಪಕ್ಷಗಳ ಶಾಸಕಾಂಗ ನಾಯಕನೆಂದು ಫೋಸ್ ಕೊಡುತ್ತಿರುವುದನ್ನು ನೋಡಿದರೆ ನಮಗೇ ನಾಚಿಕೆಯಾಗಬೇಕು, ಇಂತಹವರು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆಂದು.

ಮಾಜಿ ಪ್ರಧಾನಿಯವರಿಗೆ ಜನತೆಯಾದರೂ ಆ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ವಿಷವನ್ನೋ ಹಗ್ಗವನ್ನೋ ಕೊಟ್ಟು ಮಣ್ಣಿನ ಮಗ ಮಾತಿಗೆ ತಪ್ಪಿದ ಮಗನಾಗುವುದನ್ನು ತಪ್ಪಿಸಬೇಕು. ಬಹುಶಃ ಜನತೆಯೂ ಕೂಡ ಇದು 'ಮಾತಿಗೆ ತಪ್ಪಿದ ಮಗ' ಬಯಲಾಟದ ಮುಂದುವರಿದ ಭಾಗವಾಗಿ 'ಮಾತಿಗೆ ತಪ್ಪಿದ ಅಪ್ಪ' ಎಂದುಕೊಂಡಿರುವರೇನೋ?

ಕೊನೆಯುಸಿರು ಹೋಗುವಂತಹದ್ದು ಏನೇನೂ ಆಗದೆ, ಕೇವಲ ಅಧಿಕಾರ ದಾಹದ ಕೆಲವು ಶಾಸಕರು ಪಕ್ಷ ತೊರೆದು ಹೋಗುತ್ತೇವೆಂಬುದಕ್ಕೇ ನಮ್ಮ ಮಾಜಿ ಪ್ರಧಾನಿ ತಮ್ಮ ಮಾತನ್ನು ತಪ್ಪುವುದಾದರೆ ಇನ್ನು ದೇಶದ ಗಂಭೀರ ಸಮಸ್ಯೆಗಳ ವಿಷಯಗಳು ಬಂದಾಗ ಏನೇನು ತಪ್ಪುವರೋ? ಪಾಪ, ಕೇವಲ ಎರಡು ವಾರಗಳ ಹಿಂದಷ್ಟೇ ಕೋಮುವಾದಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದರೆ ನೇಣು ಹಾಕಿಕೊಳ್ಳುವೆನೆಂದ ಮಣ್ಣಿನಮಗ, ’ಅಯ್ಯೋ, ನನ್ನ ಮಾಂಗಲ್ಯ ಉಳಿಸಿ’ ಎಂದು ಇನ್ನೊಂದೆಡೆ ಒರಲಿಟ್ಟ ಮಣ್ಣಿನ ಸೊಸೆ, ’ಅಪ್ಪಯ್ಯನ್ನ ಏನಾದರೂ ಮಾಡಿ ಉಳಿಸು, ಕುಮ್ಮಿ’ ಎಂದು ಗಳಗಳನೆ ಅತ್ತ ಮಣ್ಣಿನ ಮೊಮ್ಮಗ, ’ವಚನಭ್ರಷ್ಟನೆಂಬ ಅಪವಾದವನ್ನು ಹೊತ್ತರೂ ಸರಿಯೇ, ಯಾವುದೇ ಕಾರಣಕ್ಕೂ ಕೋಮುವಾದಿಗಳಿಗೆ ಅಧಿಕಾರ ಹಸ್ತಾಂತರ ಮಾಡೆ’ ಎಂದು ಸಿನಿಮಾ ಹುಚ್ಚಿನ ಮತ್ತೊಂದು ಮೊಮ್ಮಗು ಅಂತಿಮವಾಗಿ ಘೋಷಿಸಿದಾಗ, ಇದಕ್ಕೆಲ್ಲ ’ಬಹುಪರಾಕ್, ಬಹುಪರಾಕ್’ ಎಂದ ಚೆಲುವ, ಚೆನ್ನಿಗರು, ’ಸುಭಾನ್ ಅಲ್ಲಾಹ್, ಸುಭಾನ್ ಅಲ್ಲಾಹ್’ ಎಂದ ಬಿಸಿಲ್ಗುದುರೆ ಮಿರಾಜ್...ಈ ಎಲ್ಲ ಭಯಂಕರ ಬಯಲಾಟ/ದೊಡ್ಡಾಟ/ಯಕ್ಷಗಾನ/ ಸೋಪ್ ಒಪೆರಾ ಗಳನ್ನು ನೋಡಿದ್ದ ಜನತೆಗೆ ಈಗ ಅದರ ಮುಂದಿನ ಭಾಗವಾಗಿಯೋ / ಅಂತಿಮ ಭಾಗವಾಗಿಯೋ ತೀವ್ರ ತಿರುವು ಬಂದು ಮತ್ತೊಂದಿಷ್ಟು ಕಾಲ ಮನರಂಜನೆಯೊದಗಿಸಲಿದೆ.

ಮೊದಲಾಟದಲ್ಲಿ ನಿರುಪದ್ರವೀ ಅಮವಾಸ್ಯೆ ಕಾಂತಿಯ ಪ್ರಕಾಶ, ದಿಢೀರನೆ ಕಾಂಗ್ರೆಸ್ ನ ಅನುಭವಿಗಳು ಕೊಟ್ಟ ವೈಯಾಗ್ರ ನುಂಗಿ ವೀರಾವೇಷ ಬಂದು ಗ್ರಹಣ ಬಿಟ್ಟ ಚಂದ್ರನಂತೆ ಪ್ರಕಾಶಿಸುತ್ತ ’ಪಢಪಢಾ ಶಿಖಂಡಿಯೆಂದಡಿಗಡಿಗೆ ನುಡಿಯಬೇಡೆಲೋ ಮೂಢ!’ ಎಂದು ತಮ್ಮ ಹಳೆಯ ನಾಟಕದ ಪಾತ್ರವೊಂದು ಪರಕಾಯ ಪ್ರವೇಶಗೊಂಡಂತೆ ಎಲ್ಲೆಡೆ ಮಿಂಚಿನ ಸಂಚಲನ ಮೂಡಿಸಿ ಸರ್ವಪಕ್ಷಗಳಿಗೂ ವೈಯಾಗ್ರ ಇಫೆಕ್ಟ್ ಮೂಡಿಸಿ, ತಕ್ಷಣ ಯಾವುದೋ ಒಂದು ಪಕ್ಷದ ಸಂಗವನ್ನು ಮಾಡಿ ಬಿಸಿ ಆರಿಸಿಕೊಂಡರೆ ಸಾಕೆಂಬುವಂತೆ ತೀವ್ರ ರೋಚನೆಯನ್ನೋ ಕಾಮನೆಯನ್ನೂ ಉಂಟುಮಾಡಿದ್ದಾರೆ. ಆದರೆ ಅವರ ಕಾಮನೆಯಾರುವ ಮುನ್ನವೇ, ಸಂಗ ಮಾಡುವುದರಲ್ಲಿ ಈಗಾಗಲೇ ಪರಿಣಿತರಾಗಿರುವ ಜೆಡಿಎಸ್ ನ ಅಧಿನಾಯಕರು ಈ ಪ್ರಕಾಶರ ಉತ್ಸಾಹ ಚುಂಬನದಲ್ಲೇ ಕೊನೆಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿಸಿದ್ದಾರೆ.

ಇನ್ನು ಎಡೆಯೂರಪ್ಪ ಮತ್ತು ಪಡೆ ಕರ್ನಾಟಕದ ಕಂಟಕ ಈ ಗೌಡ ಮತ್ತವರ ಕುಟುಂಬ, ಇದನ್ನು ಸಂಪೂರ್ಣ ನಾಶಮಾಡಿ ಎಂದು ಜಾಗಟೆ ಹೊಡೆದು, ಮಂಗಳಾರತಿ ಎತ್ತಿದ್ದು, ಈಗ ದಿಢೀರನೇ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಬಣ್ಣವನ್ನೂ ಬದಲಿಸಿಕೊಂಡಿರುವುದನ್ನು ನೋಡಿದರೆ ಅಧಿಕಾರದ ದಾಹ ಎಂತಹವರನ್ನು ಯಾವ ಯಾವ ಮಟ್ಟಕ್ಕೆ ತರುತ್ತದಲ್ಲವೆಂದು ವ್ಯಥೆಯಾಗುತ್ತದೆ. ಜೆಡಿಎಸ್ ಸಂಪೂರ್ಣ ಛಿದ್ರಗೊಂಡು ಕರ್ನಾಟಕಕ್ಕೆ ಅಂಟಿದ ಈ ಜೆಡಿಎಸ್ ಶಾಪ ವಿಮೋಚನೆಗೊಂಡು ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬಂದು ಇನ್ನೊಂದು ಪಕ್ಷದ ಹಂಗಿಲ್ಲದೆ ಏಕಪಕ್ಷೀಯ ಸರ್ಕಾರವೇರ್ಪಡುವಂತಿದ್ದ ಅವಕಾಶವನ್ನು ಶಾಪ ವಿಮೋಚನೆಗೊಳಿಸಬೇಕಾದ ಬಿಜೆಪಿಗಳೇ ಇನ್ನಷ್ಟು ಶಾಪವನ್ನು ತಗಲಿಸುವತ್ತ ಹೊರಟಿರುವುದು ನೈತಿಕತೆಯ ಅಧಃಪತನವೇ ಸರಿ. ’ವಚನಭ್ರಷ್ಟತೆ’ಯ ಸಂಪೂರ್ಣ ಫಲವನ್ನು ಪಡೆದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಎಲ್ಲಾ ಅವಕಾಶಗಳಿದ್ದರೂ ಈ ಅನುಮಾನದ ಹದಿನೆಂಟು ತಿಂಗಳುಗಳ ಅಧಿಕಾರಕ್ಕೆ ಹಪಹಪಿಸುತ್ತಿರುವುದು ಅವರುಗಳ ಅಧಿಕಾರದ ಹಸಿವಲ್ಲದೇ ಇನ್ನೇನೋ?

ಇನ್ನು ಸದಾ ಅಧಿಕಾರವನ್ನು ಅನುಭವಿಸುತ್ತಲಿದ್ದ ಕಾಂಗ್ರೆಸ್ಸಿಗರೋ ತಾವೇನೂ ಕಡಿಮೆಯವರಲ್ಲವೆಂದು ತೋರಿಸಲು ರಾಜ್ಯಪಾಲರನ್ನೂ ತಮ್ಮ ’ಮೇಡಂ’ರಿಂದ ಮೋಡಿಗೊಳಿಸಿ ತಮಗಿಷ್ಟದಂತೆ ಕುಣಿಸುತ್ತ ಮತ್ತೊಂದೆಡೆ ಶಾಸಕರ ಕೊಳ್ಳುವಿಕೆಯಲ್ಲಿ ತೊಡಗಿರುವುದನ್ನು ನೋಡಿದರೆ ಅವರ ಅಧಿಕಾರ ಲೋಲುಪತೆ ಎಂತಹವರನ್ನೂ ಅಸಹ್ಯಗೊಳಿಸುತ್ತದೆ.

ಒಟ್ಟಾರೆ ಈ ಎಲ್ಲಾ ವರ್ತಮಾನಗಳನ್ನು ದೂರದಿಂದ ಏನೇನೂ ವಿಶ್ಲೇಷಣೆಯಿಲ್ಲದೆ ಕನಿಷ್ಟವಾಗಿ ಅವಲೋಕಿಸಿದರೇ ಸಾಕು, ಈ ವರ್ತಮಾನಗಳು ಇಂದಿನ ಭಾರತದ ನೈತಿಕತೆ, ಪ್ರಾಮಾಣಿಕತೆ, ದೇಶಭಕ್ತಿ, ಪ್ರಜಾಪ್ರಭುತ್ವದ ಪ್ರಗತಿ(?) ಗಳ ಪ್ರತಿರೂಪವೆನಿಸಿ ಕರ್ನಾಟಕವಷ್ಟೇ ಅಲ್ಲದೆ ಸಂಪೂರ್ಣ ನೈಜ ಭಾರತದ ಸಮಗ್ರ ದರ್ಶನವನ್ನು ನೀಡುತ್ತಿದೆ.

ಆರ್ಥಿಕವಾಗಿ ಏನೇ ಸಾಧನೆ ಮಾಡಿದ್ದರೂ, ಭಾರತದ ಕಣಕಣದಲ್ಲೂ ಹಬ್ಬಿರುವ ಅನೈತಿಕತೆ, ಭ್ರಷ್ಟಾಚಾರದ ಜ್ವಾಲೆಯು ಈ ಎಲ್ಲಾ ಪ್ರಗತಿಯನ್ನು ಕ್ವಚಿತ್ತಾಗಿ ಸುಟ್ಟುಹಾಕಲಿದೆ. ಸದ್ಯಕ್ಕೆ ಭಾರತ ಪ್ರಕಾಶಿಸುವಂತೆ ಕಂಡರೂ ಒಳಗಣ್ಣಿಂದ ನೋಡಿದಾಗ, ಭಾರತ ಉರಿಯುತ್ತಿದೆ!

ಅಣಕ:

ಅಯ್ಯೋ, ಇಲ್ಲಿ ಏನೇ ತಿಣುಕಿ ಅಣಕ ಬರೆದರೂ ಅವು ಜೆಡಿಎಸ್ ನವರ ಪ್ರಹಸನಗಳ ಮುಂದೆ ಅತ್ಯಂತ ಗಂಭೀರವೆನಿಸಿಬಿಡುತ್ತವೆ. ಅವರ ಪ್ರಹಸನಗಳು ಅಷ್ಟೊಂದು ರೋಚನೀಯವಾಗಿರುವಾಗ ನಮ್ಮ ಅಣಕಗಳೆಲ್ಲಾ ಶೋಚನೀಯವೆನಿಸುತ್ತಿವೆ.