ದಾವಣಗೆರೆಯ ಹಂದಿಗಳು ಮತ್ತದರ ಆಕಾಶದಲ್ಲಿನ ಗಿಳಿಗಳು

ಈ ಶೀರ್ಷಿಕೆ ನೋಡಿ ಈ ಲೇಖನ ದಾವಣಗೆರೆಯ ರಾಜಕಾರಣಿಗಳನ್ನು ಹಂದಿಗಳಾಗಿಯೂ ಅಲ್ಲಿನ ಕನ್ಯೆಯರನ್ನು ಗಿಳಿಗಳಾಗಿಯೂ ಊಹಿಸಿಕೊಂಡು ನೀವು ಏನೇನೋ ಕಲ್ಪಿಸಿಕೊಂಡಿದ್ದರೆ ಕ್ಷಮಿಸಿ. ಅಲ್ಲಿನ ವರ್ತಕರು, ರಾಜಕಾರಣಿಗಳು ವರಾಹಾವತಾರವನ್ನು ಎತ್ತಿದ್ದರೂ ಇದು ಅವರನ್ನು ಕುರಿತಾಗಲೀ ಅಥವ ಯುವಕರು ಮಾತನಾಡಿಸಿದರೆ ಮಕ್ಕಳಾಗುತ್ತವೆಂಬ ಮಹಾ ಕಲ್ಪನೆಯ ಅಲ್ಲಿನ ಕನ್ಯಾಮಣಿಗಳನ್ನು ಕುರಿತಾಗಿಯೂ ಅಲ್ಲವೀ ಲೇಖನ.

ಮಧ್ಯ ಕರ್ನಾಟಕದ ವಿಶಿಷ್ಟ ಪಟ್ಟಣವಾದ ದಾವಣಗೆರೆ ಎಂದರೆ ಬಹುಜನರಿಗೆ ಅಲ್ಲಿನ ಮಂಡಕ್ಕಿ, ಮೆಣಸಿನಕಾಯಿ ಭಜ್ಜಿಯೋ, ಬೆಣ್ಣೆದೋಸೆಯೋ ನೆನಪಾಗಬಹುದು. ಅಥವಾ ಗಂಭೀರವಾಗಿ ಯೋಚಿಸುವವರಿಗೆ ಅಲ್ಲಿನ ಹತ್ತಿ ಮಿಲ್ಲುಗಳ ಆರ್ಥಿಕ ಉನ್ನತಿ, ಅವನತಿಗಳೂ ಮತ್ತದರ ಜೊತೆ ಜೊತೆಗೆ ಬೆಳೆದು ಕುಸಿದ ಕಮ್ಯುನಿಸ್ಟ್ ಪಕ್ಷವೂ ಮತ್ತದರ ಕಾಮ್ರೇಡ್ ಪಡೆಯೂ ನೆನಪಾಗಬಹುದು. ಇಲ್ಲಾ, ಅಲ್ಲಿನ ವರ್ತಕರ ವಹಿವಾಟು, ದಲಾಲರು, ಹಮಾಲರು, ಕುಬೇರರು ಮತ್ತಲ್ಲಿನ ವಿದ್ಯಾಸಂಸ್ಥೆಗಳೋ ನೆನಪಾಗಬಹುದು.

ದವಸ ಧಾನ್ಯಗಳ ವಹಿವಾಟುಗಳ ಭರಾಟೆಯ ದೆಸೆಯಿಂದ ಲೋಡುಗಟ್ಟಲೆ ಅಕ್ಕಿ,ಬೇಳೆಕಾಳುಗಳು ಅಲ್ಲಿನ ವರ್ತಕರ ಅಂಗಡಿಗಳಿಗೆ ಸರಬರಾಜಾಗಿಯೋ ಅಥವ ಆ ಅಂಗಡಿಗಳಿಂದ ಬೇರೆಡೆ ಸರಬರಾಜಾಗುತ್ತಲೋ ಒಟ್ಟಿನಲ್ಲಿ ಆ ನಗರ ಧೂಳುಮಯವಾಗಿ ಅಲ್ಲಲ್ಲಿ ಚೆಲ್ಲಿದ ಕಾಳುಕಡಿಗಳು ಆಹಾರದ ಮೂಲವಾಗಿ ಅದು ಹಂದಿಗಳಿಗೆ ಆಶ್ರಯತಾಣವಾಗಿದೆ. ದಾವಣಗೆರೆಯ ಉದ್ದಗಲ ಎತ್ತಲಾದರೂ ಹೋಗಿ, ನಿಮಗೆ ಅಲ್ಲಿನ ಗಣನೀಯ ಸಂಖ್ಯೆಯ ಹಂದಿಗಳು ನಿಮ್ಮ ಗಮನವನ್ನು ಸೆಳೆಯದಿದ್ದರೆ ಕೇಳಿ. ಈ ಹಂದಿಗಳನ್ನು ಅವುಗಳ ಮಾಲೀಕರು ದಾವಣಗೆರೆ ತುಂಬಾ ಗಸ್ತು ತಿರುಗಲು ಬಿಟ್ಟು, ನಗರದ ಮಲಮೂತ್ರ ಶುಚೀಕರಣಕ್ಕೆ ಉಚಿತ ಸೇವೆ ಸಲ್ಲಿಸುವ ಕೈಂಕರ್ಯವನ್ನು ಮನಗಂಡೇ ಇಲ್ಲಿನ ಪುರಪಿತೃಗಳು ಈ ಹಂದಿಗಳನ್ನು ತಮ್ಮ ಸಹೋದ್ಯೋಗೀ ಮಿತ್ರರೆಂದು ಭಾವಿಸಿ ಗೌರವಿಸುತ್ತಿದ್ದಾರೆಂದೇ ನನ್ನ ಭಾವನೆ. ಈ ದಾವಣಗೆರೆ ಹಂದಿಗಳು ಎಷ್ಟೊಂದು ಕಾರ್ಯಶೀಲವೆಂದರೆ ಬಯಲು ಬಹಿರ್ದೆಶೆಗೆ ಕುಳಿತ ಜನಸಾಮಾನ್ಯರಿಗೆ ಅವರವರ ಶಕ್ತಿಗನುಗುಣವಾಗಿ ಟೈಮರ್ ಸೆಟ್ ಮಾಡಿ, ಅವರ ಕಾಲ ಮೀರುತ್ತಿದ್ದಂತೆಯೆ ಅವರನ್ನು ತಮ್ಮ ಮೂತಿಯಿಂದ ತಿವಿದು ನೂಕಿ ಶುಚೀಕರಣಕ್ಕೆ ಮೊದಲ್ಗೊಳ್ಳುತ್ತವೆ.

ಹೀಗೆ ಕೊಬ್ಬಿದ ಈ ಹಂದಿಗಳನ್ನು ಅವುಗಳ ಮಾಲೀಕರು ಆಗಾಗ್ಗೆ ಹಿಡಿದು ತೂಕ ಹಾಕಿ ಹಾಸನ, ಮೈಸೂರಿಗೆ ಸರಬರಾಜು ಮಾಡುತ್ತಾರೆ. ನಿತ್ಯವೂ ಅಲ್ಲಿನ ರೈಲ್ವೆ ಸ್ಟೇಷನ್ನಿನಿಂದ ಕನಿಷ್ಟ ಐವತ್ತು ಹಂದಿಗಳು ಹಾಸನದೆಡೆಗೆ ಸಾಗಿ ’ಪಿಗ್ ಮಟನ್’ ಆಗಿಯೂ ಮುಂದೆ ಮೈಸೂರನ್ನೂ ಸೇರಿ ’ಚಿಲ್ಲಿ ಪೋರ್ಕ್’ ಆಗಿಯೂ ಅಲ್ಲಿನ ಹೋಟೇಲುಗಳ ತಟ್ಟೆಗಳ ಮೇಲೆ ಕಂಗೊಳಿಸುತ್ತವೆ. ಆಗಾಗ್ಗೆ ದಾವಣಗೆರೆಯಿಂದ ಹಾಸನದೆಡೆಗೆ ರೈಲಿನಲ್ಲಿ ಸಾಗುತ್ತಿದ್ದ ನನ್ನೊಂದಿಗೆ ಈ ಹಂದಿಗಳೂ ಬಹಳ ಸಾರಿ ಆ ದಾರಿಯಲ್ಲಿ ಸಾಗಿವೆ. ಬಹುಶಃ, ದಾವಣಗೆರೆಯ ಪ್ರಮುಖ ಜನಾಂಗವು ಹಂದಿಯನ್ನು ತಿನ್ನದೇ ಇರುವುದೂ ಅವುಗಳ ಸಂಖ್ಯೆಗೆ ಒಂದು ಕಾರಣವಿರಬಹುದು ಅಥವಾ ಅಲ್ಲಿನ ಮಾಂಸಹಾರಿಗಳು ಹಂದಿ ತಿನ್ನುವ ಹಂಬಲವಿದ್ದರೂ "ದಾವಣಗೆರೆಯ ಹಂದಿ"ಗಳ ಪ್ರಮುಖ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ವರ್ಜಿಸಿರಬಹುದು!

ಆದರೆ ಈ ಎಲ್ಲ ಸಾಮಾನ್ಯ ಸಂಗತಿಗಳನ್ನೂ ಮೀರಿ ಪರಿಸರಕ್ಕೆ ಸಂಬಂಧಿಸಿದ ಕೌತುಕವೊಂದು ಅಲ್ಲಿದೆಯೆಂದರೆ ನಿಮಗೆ ಆಶ್ಚರ್ಯವಾಗಬಹುದು!

ದಟ್ಟ ಅರಣ್ಯ ಪ್ರದೇಶವಲ್ಲದ, ಕುರುಚಲು ಕಾಡುಗಳೂ ಇಲ್ಲದ, ಭಾರೀ ಬಂಡೆಗಲ್ಲುಗಳ ಬೆಟ್ಟಗುಡ್ಡಗಳಿಲ್ಲದ ಸಮತಟ್ಟಾದ ಈ ನಗರದ ಮಧ್ಯಭಾಗದಲ್ಲಿ ಸಹಸ್ರಾರು ಹಸಿರು ಗಿಳಿಗಳು ಶತಮಾನದಿಂದಲೂ ವಾಸಿಸುತ್ತಿವೆ. ಹಾಗೆಂದ ಮಾತ್ರಕ್ಕೆ ಆ ಗಿಳಿಗಳೆಲ್ಲ ಇಲ್ಲಿನ ದವಸಧಾನ್ಯದ ವಹಿವಾಟಿನ ಭರದಲ್ಲಿ ಚೆಲ್ಲುವ ಕಾಳುಗಳನ್ನು ಹಂದಿಗಳೊಂದಿಗೆ ಹಂಚಿಕೊಂಡಾಗಲಿ, ನೆಚ್ಚಿಕೊಂಡಾಗಲಿ ಇಲ್ಲಿ ನೆಲೆಸಿಲ್ಲ. ’ಕಾಯಕವೇ ಕೈಲಾಸ’ವೆಂದು ನಂಬಿರುವ ಈ ಕರ್ಮಜೀವೀ ಗಿಳಿಗಳು ತಮ್ಮದೇ ಆದ ಕರಾರುವಕ್ಕಾದ ಟೈಂ ಟೇಬಲ್ ಹಾಕಿಕೊಂಡಿವೆ. ನಿತ್ಯವೂ ಬೆಳಗಿನ ಮುಂಜಾನೆ ತಮ್ಮ ತಮ್ಮ ನೆಲೆಯಿಂದ ಉತ್ತರ ದಿಕ್ಕಿಗೆ ಹಾರುತ್ತ ದೂರದ ಹೊಲಗದ್ದೆಗಳೆಡೆಯೋ, ಅಡವಿಯನ್ನೋ ಹುಡುಕಿಕೊಂಡು ಆಹಾರ ಬೇಟೆಗೆ ಹೊರ್‍ಅಡುತ್ತವೆ. ನಿತ್ಯವೂ ತಂಡ ತಂಡಗಳಲ್ಲಿ ಹಾರುವ ಆ ಗಿಳಿಗಳು ಪರೇಡಿನಲ್ಲಿ ಸಾಗುವ ಸ್ತಬ್ಧಚಿತ್ರಗಳಂತೆ ಸರಮಾಲೆಯಾಗಿ ಸಾಗುತ್ತಲೇ ಇರುತ್ತವೆ. ಸುಮಾರು ಬೆಳಗಿನ ಐದೂವರೆಯಿಂದ ಶುರುವಾಗಿ ಏಳರವರೆಗೆ ಹಳೇ ದಾವಣಗೆರೆಯ ಆಕಾಶದಲ್ಲಿ ಹಸಿರು ಗಿಳಿಗಳ ನಿತ್ಯ ಮೆರವಣಿಗೆ. ಮತ್ತದೇ ದೃಶ್ಯ ಸಂಜೆ ಸೂರ್ಯಾಸ್ತದ ಮೊದಲೆರಡು ಗಂಟೆಯಿಂದ ಸೂರ್ಯ ಮುಳುಗುವವರೆಗೆ. ಚಳಿಯಾಗಲಿ, ಮಳೆಯಾಗಲಿ ಅಥವ ಸುಡುಬಿಸಿಲಿರಲಿ, ಈ ಮೆರವಣಿಗೆಯಲ್ಲಿ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ.

ದಾವಣಗೆರೆಯ ಅಸಂಖ್ಯಾತ ಘಟನೆಗಳಿಗೆ ಸಾಕ್ಷಿಯಾಗಿರುವ ಈ ಗಿಳಿಗಳು ಅಲ್ಲಿನ ನಗರಸಭೆ ಕಟ್ಟಡ, ಕೋರ್ಟ್, ಪೊಲೀಸ್ ಠಾಣೆ ಆವರಣ, ಪ್ರವಾಸಿ ಮಂದಿರ ಮತ್ತು ಸುತ್ತಮುತ್ತಲ ರಸ್ತೆಗಳ ಇಕ್ಕೆಲಗಳಲ್ಲಿರುವ ಮರಗಳ ಮೇಲೆ ತಮ್ಮದೇ ಆದ ನಗರವನ್ನು ನಿರ್ಮಿಸಿಕೊಂಡಿವೆ. ದಾವಣಗೆರೆಯಂತಹ ಪಕ್ಕಾ ವ್ಯಾಪಾರೀ ನಗರದಲ್ಲಿ, ನವಿರೇಳುವಂತಹ ಭಾವನೆಗಳನ್ನು ಮೂಡಿಸುವಂತಹ ಸಂಗತಿಯೋ ಆಕರ್ಷಣೆಯೋ ಎಂದರೆ ನನಗೆ ಕಾಣುವುದು ಈ ಗಿಳಿಪಟ್ಟಣವೊಂದೇ. ಬೇಕಿದ್ದರೆ ಒಮ್ಮೆ ಸುಮ್ಮನೆ ಅಲ್ಲಿ ಸುತ್ತಿ ಬನ್ನಿ. ಆ ಗಿಳಿಗಳ ಕಲರವ ಕೇಳಿಸಿಕೊಂಡರೆ ಸಾಕು ನಿಮಗರಿವಾಗುತ್ತದೆ ಆ ಮರಗಳ ಮೇಲೇನಾಗುತ್ತಿದೆಯೆಂದು. ಇತ್ತೀಚೆಗೆ ನಾನು ಅಲ್ಲಿಗೆ ಹೋದಾಗ ಅಲ್ಲಿನ ಜನಪಟ್ಟಣ ಉನ್ನತಿಗೇರಿದಂತೆ ಈ ಗಿಳಿಪಟ್ಟಣ ಅವನತಿಯ ಅಂಚಿನಲ್ಲಿ ಬಂದು ನಿಂತಿರುವುದನ್ನು ಕಂಡೆ. ರಸ್ತೆ ಅಗಲೀಕರಣಕ್ಕೋ, ಆ ಮರಗಳು ಮುದಿಯಾಗಿ ಸಾಯುತ್ತಿರುವುದರಿಂದಲೋ ಒಟ್ಟಿನಲ್ಲಿ ದಾವಣಗೆರೆ ನಗರಸಭೆಯಾಗಿ, ಜಿಲ್ಲೆಯಾಗಿ, ಮಹಾಪಾಲಿಕೆಯಾಗಿ ಉನ್ನತಿ ಹೊಂದುತ್ತಾ ಸಾಗಿದಂತೆ, ಈ ಗಿಳಿಗಳು ಆಹಾರಕ್ಕೆ ನಂಬಿಕೊಂಡಿದ್ದ ತಾಣಗಳು, ಹೊಲಗಳೂ ’ಆಶ್ರಯ ಯೋಜನೆ’ ಯ ಮನೆಗಳಾಗಿ ಈ ಗಿಳಿಗಳ ಆಶ್ರಯಕ್ಕೆ ಕುತ್ತು ತಂದು ಇವುಗಳನ್ನು ಅವನತಿಯ ಅಂಚಿಗೆ ತಂದಿವೆ. ನಿತ್ಯವೂ ಉತ್ತರ ದಿಕ್ಕಿಗೆ ಹಾರಿ ಮತ್ತೆ ಸಂಜೆ ದಕ್ಷಿಣ ದಿಕ್ಕಿಗೆ ಮುಖ ಮಾಡುತ್ತಿದ್ದ ಈ ಗಿಳಿಗಳು ಇಂದು ತಮ್ಮ ಜೀವಸೆಲೆಯನ್ನು ಕಳೆದುಕೊಂಡು ದಿಕ್ಕು ತಪ್ಪಿ ಎತ್ತೆತ್ತಲೋ ಹಾರುತ್ತಿವೆ! ಈ ಗಿಳಿಗಳ ತಪ್ಪಿದ ಪಥಚಲನೆ ಮನುಕುಲದ ಪ್ರಗತಿ ಪಥದ ತುಲನೆಯೇನೋ ಅನ್ನಿಸುತ್ತಿದೆ.

ಇದು ಕೇವಲ ದಾವಣಗೆರೆ ನಗರದ ಕಥೆಯಾಗಿರದೇ ಭಾರತದ ಪ್ರತಿಯೊಂದು ಉದಯೋನ್ಮುಖ ನಗರಗಳಲ್ಲಿಯೂ ಈ ರೀತಿಯ ಹಲವಾರು ಜೀವಸಂಕುಲಗಳು ನಾಶವಾಗುತ್ತಿರುವುದರ ಭೀಕರ ಕಥಾನಕವೇ ಆಗಿದೆ. ಇದು ಹಾಸನ, ಮೈಸೂರು ಭಾಗದಲ್ಲಿ ವರ್ಷಕ್ಕೊಮ್ಮೆ ಕಾಣಬರುತ್ತಿದ್ದ ಕಂಬಳಿಹುಳುಗಳದ್ದಾಗಿರಬಹುದು, ರ್‍ಆಣಿಬೆನ್ನೂರಿನ ಕೃಷ್ಣಮೃಗಗಳದ್ದಾಗಿರಬಹುದು, ಬಯಲುಸೀಮೆಯ ಬೆಳವ, ಬ್ಯಾಡಗಿ / ಕೊಪ್ಪಳಗಳ ನವಿಲುಗಳದ್ದಾಗಿರಬಹುದು, ಆಥವಾ ನಿಮ್ಮೂರು ಹಳ್ಳಿಗಳಲ್ಲಿ ಯಥೇಚ್ಚವಾಗಿ ಕಾಣುತ್ತಿದ್ದ ಗುಬ್ಬಿ ಕಾಗೆಗಳಿರಬಹುದು. ಮಾನವ ಪ್ರಗತಿಪಥದತ್ತ ಸಾಗುವ ದೆಸೆಯಲ್ಲಿ ತನ್ನಂತೆಯೇ ಈ ಭೂಮಂಡಲದಲ್ಲಿ ವಾಸಿಸುವ ಇತರೆ ಜೀವಸಂಕುಲಗಳನ್ನು ವಿನಾಶದ ಅಂಚಿಗೆ ತಳ್ಳಿರುವುದನ್ನು ಮುಂಬರುವ ಜನಾಂಗ ಹೇಗೆ ಸ್ವೀಕರಿಸುವುದೋ ನಾನರಿಯೆ.

ಈ ಗಿಳಿಗಳ ಹಾರಾಟದಿಂದ ಹೊರಪ್ರಪಂಚದ ಜೀವಜಾಲದ ಪರಿಚಯವನ್ನು ಮಾಡಿಕೊಳ್ಳುತ್ತ ಬೆಳೆದ ನಾನು, ಪರಿಸರದ ಬಗ್ಗೆ ಕುತೂಹಲ ಮೂಡಿಸಿಕೊಂಡು ಕಾಲೇಜು ದಿನಗಳಲ್ಲಿ ಪಶ್ಚಿಮಘಟ್ಟಗಳಲ್ಲಿ ಸುತ್ತಿ, ಅಮೇರಿಕೆಗೆ ಬಂದು ನೆಲೆಸಿದ ನಂತರ ಅಮೆಜಾನ್ ಕೊಳ್ಳ ಸುತ್ತಿದರೂ ತೀರದ ಈ ಪರಿಸರದ ಕುತೂಹಲ ನನ್ನಲ್ಲಿ ಇನ್ನೂ ಹೆಚ್ಚಾಗುತ್ತಲೇ ಇದೆ. ಈ ಗಿಳಿಗಳಿಲ್ಲದ ದಾವಣಗೆರೆ, ಗುಬ್ಬಿ / ಕಾಗೆಗಳಿಲ್ಲದ ಊರುಕೇರಿಗಳು ಸ್ಮಶಾನಸದೃಶವಾಗಿ ಮುಂದಿನ ಜನಾಂಗಕ್ಕೆ ಹೇಗೆ ಸ್ಪೂರ್ತಿದಾಯಕವಾಗಿರುತ್ತವೋ?

ದಾವಣಗೆರೆಯ ಜನನಾಯಕರು, ಅಧಿಕಾರಿಗಳು, ವರ್ತಕರು, ಮಾಜಿ ಕಾಮ್ರೇಡುಗಳು, ಮಹಾಜನತೆಯೂ ಈ ಗಿಳಿಗಳ ಅಸ್ತಿತ್ವದ ಪರಿವೆಯೇ ಇಲ್ಲದೆ ತಮ್ಮೂರಿನ ಮಂಡಕ್ಕಿ ಮೆಣಸಿನಕಾಯಿ ಭಜ್ಜಿಗಳನ್ನು ಮೆಲ್ಲುತ್ತ, ಅರ್ಧ ’ಚ್ಚಾ’ (ಚಹಾ) ಹೀರಿ, ಯಾವ ಎಗ್ಗಿಲ್ಲದೇ ಸಶಬ್ದವಾಗಿ ಢರ್ರನೇ ಹೂಸಿಸುವುದರಲ್ಲೇ ಸ್ವರ್ಗ ಸುಖ ಕಾಣುತ್ತ, ಅಭಿವೃದ್ದಿಯ ಪಥದತ್ತ ಕಿಂಕರ್ತವ್ಯಮೂಢರಾಗಿ ಸಾಗುತ್ತಿರುವ ಪರಿಯನ್ನು ನೋಡಿದರೆ, ಆ ನಗರದ ಪ್ರಮುಖ ಜೀವಸಂಕುಲವೊಂದು ಮುಂದಿನ ಕಾಲಮಾನಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಮನುಕುಲದ ನೆಲೆಯ ಭದ್ರ(?) ಬುನಾದಿಗೆ ಬಲಿಯಾಗಿ, ಅದರ ತ್ಯಾಗದ ಕತೆ ಈ ನಗರದ ಇತಿಹಾಸದ ಪುಟಗಳನ್ನೂ ಸೇರದೆ ಕಣ್ಮರೆಯಾಗುವುದೇನೋ!

ಅಣಕ:

ಬೆಂಗಳೂರಿನ ’ಏನು ಗುರು’, ’ಏನ್ಲಾ ಮಗಾ’, ’ಮಚ್ಚಾ’ ಪದಗಳಂತೆ, ಶಿವಮೊಗ್ಗೆಯ ’ಲೋ’ ಪದದಂತೆ, ಹಾಸನದವರ ’ಏನ್ಲಾ’ ಎಂದಂತೆ ದಾವಣಗೆರೆ ಜನ ಏನೆಂದು ತಮ್ಮ ಸಂಭಾಷಣೆಯನ್ನು ಆರಂಭಿಸುತ್ತಾರೆ, ಗೊತ್ತೆ?

ಆಪ್ತಮಿತ್ರನಾಗಿರಲೀ ಅಥವ ಬದ್ಧಶತ್ರುವಾಗಿರಲೀ ಯಾವುದೇ ಭೇಧದಂಡವನ್ನು ಅನುಸರಿಸದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ’ಬಾರ್ಲೇ ಮಿಂಡ್ರಿಗುಟ್ಟಿದವನೇ’ ಎಂದೇ ಸಂಭೋಧಿಸುತ್ತಾರೆ.

ಅಪ್ಪ, ಮಗ, ಆಪ್ತರು, ಬಂಧು, ಮಿತ್ರರು, ಶತ್ರುಗಳನ್ನೆಲ್ಲಾ ಹೀಗೆಯೇ ಸಂಭೋಧಿಸುವುದರ ರಹಸ್ಯವನ್ನು ಭೇಧಿಸೋಣವೆಂದರೆ ಇಲ್ಲಿನ ಹುಡುಗಿಯರು ಹುಡುಗರು ಮಾತನಾಡಿಸಿದರೇ ಮುಟ್ಟು ನಿಲ್ಲುತ್ತದೆಂದು ಮುಗುಮ್ಮಾಗಿ, ಹುಡುಗರೆಡೆ ಕಣ್ಣೆತ್ತಿಯೂ ನೋಡದೆ ಅತ್ಯಂತ ಮಡಿವಂತಿಕೆಯಿಂದ ಇರುತ್ತಾರೆ. ಅಷ್ಟೊಂದು ಮಡಿವಂತಿಕೆಯ, ಪಾತಿವೃತ್ಯದ ಧರ್ಮಬೀರುಗಳ ನಗರವಾದ ಇಲ್ಲಿ ಅದು ಹೇಗೆ ಎಲ್ಲರೂ ಈ ರೀತಿ ಸಂಭೋಧಿಸುವಂತಾಯಿತೋ?

No comments: