ಮನೆಮುರುಕ ಧಾರಾವಾಹಿಗಳೂ, ಸ್ತ್ರೀಶಕ್ತಿ ಸಂಘಗಳೂ.

ನೀವು ಅನಿವಾಸೀ ಕನ್ನಡಿಗರಾಗಿದ್ದರೆ, ನೀಮೊಮ್ಮೆ ಈಟೀವಿ, ಆಟೀವಿಗಳಲ್ಲಿ ಬರುವ ಕನ್ನಡ ಧಾರಾವಾಹಿಗಳ ಒಂದೆರಡಾದರೂ ಎಪಿಸೋಡ್ ಗಳನ್ನು ನೋಡಿರಬೇಕು ಇಲ್ಲಾ ನೋಡಬೇಕು, ಈ ಲೇಖನವು ನಿಮ್ಮನ್ನು ಮುಟ್ಟಲು ತಟ್ಟಲು.

ದೂರದರ್ಶನ ಮಾಧ್ಯಮದಲ್ಲಿ ಕ್ರಾಂತಿಯಾಗಿ ಭಾರತದಲ್ಲಿ ನೂರೆಂಟು ಛಾನೆಲ್ಲುಗಳು ಹುಟ್ಟಿಕೊಂಡು, ಸಂಸಾರ / ಕುಟುಂಬವನ್ನು ಕೇಂದ್ರವಾಗಿಟ್ಟುಕೊಂಡು ಧಾರಾವಾಹಿಗಳನ್ನು ತೋರಿಸುತ್ತ ಭಾರತದ ಪ್ರಬಲ ಶಕ್ತಿಯಾದ ಗೃಹಿಣಿಯರನ್ನು ಹಾದಿ ತಪ್ಪಿಸುತ್ತಿವೆ. ಅದಾಗಲೇ ಸಿನಿಮಾರಂಗ ಸಾಕಷ್ಟು ಜನರನ್ನು ಉದ್ದರಿಸಿದ್ದರೂ, ಈ ಟೀವೀ ಮಾಧ್ಯಮದಷ್ಟು ಉದ್ದರಿಸಿರಲಿಲ್ಲ. ಮೊದಲೆಲ್ಲಾ ವಾರಕ್ಕೊಂದು ಎಪಿಸೋಡ್ ಗಳಿದ್ದರೆ ಇಂದು ಈ ಮೆಗಾಸೀರಿಯಲ್ ಗಳು ನಿತ್ಯವೂ ನೂತನ ಎಪಿಸೋಡ್ ನೀಡುತ್ತಿವೆ. ಪುಕ್ಕಟೆ ಮನರಂಜನೆಗೆಂದು ಇದನ್ನು ನೋಡುತ್ತಿದ್ದ ಗೃಹಿಣಿ, ಇಂದು ಇದಕ್ಕೆ ದಾಸಳಾಗಿರುವುದಷ್ಟೇ ಅಲ್ಲ ಆ ಧಾರಾವಾಹಿಗಳ ನಾಯಕಿಯೇ ತಾನಾಗುತ್ತಿದ್ದಾಳೆ.

ಈ ಎಲ್ಲಾ ಧಾರಾವಾಹಿಗಳ ಕತೆ ಏನು ಗೊತ್ತೆ? ಸಂಸಾರ, ಸಂಸಾರ ಮತ್ತು ಸಂಸಾರ. ಇದರ ಸುತ್ತಲೇ ಗಿರಿಕಿ ಹೊಡೆಯುತ್ತ, ಗಂಡನ ಮನೆಯೆಂದರೆ ಅದು ವೈರಿಭೂಮಿ, ಅಲ್ಲಿನವರೆಲ್ಲಾ ವೈರಿಗಳು, ತನ್ನ ಗಂಡ ಅವುರುಗಳ ಕಪಿಮುಷ್ಟಿಯಲ್ಲಿರುವ ಮಿಕ, ಅವನನ್ನು ಅಲ್ಲಿಂದ ಬಿಡಿಸಿಕೊಂಡು ತನ್ನ ತವರಿಗೆ ಕೊಂಡೊಯ್ಯಬೇಕೆಂದೋ; ಇಲ್ಲಾ ಅಲ್ಲಿನ ಅವಿಭಾಜ್ಯ ಕುಟುಂಬಗಳ ಮಧ್ಯದಲ್ಲಿನ ರಾಜಕೀಯ, ಅದರ ಹಿರಿಯನ ದರ್ಪ, ಕಿರಿಯನ ಮೌಢ್ಯ.......ಇತ್ಯಾದಿ, ಇತ್ಯಾದಿ; ಇನ್ನು ಕೆಲವೋ ಇದೇ ಕತೆಯನ್ನು ಕೊಂಚ ಹೈಟೆಕ್ ಆಗಿ ಮಾನವ ಸಂಬಂಧಗಳ ಸೂಕ್ಷ್ಮಗಳನ್ನು ತೋರುವ ಚತುರ್ಮತಿಗಳಂತೆ ಕತೆ ಹೆಣೆದು ತೋರಿಸುತ್ತವೆ. ಸಂಸಾರದ ಸದಸ್ಯರ ಪಾತ್ರಗಳನ್ನು ಪಗಡೆಯಾಟದ ದಾಳದಂತೆ ಈ ವಿಕೃತ ಧಾರಾವಾಹಿ ಅಜ್ಞಾನೀ ನಿರ್ದೇಶಕರುಗಳು ಆಡಿಸುತ್ತಾರೆ. ಈ ಪಾತ್ರಗಳಿಗೆ ಕತೆಯಲ್ಲಿ ಕೈತುಂಬ ಕೆಲಸವಿರದೆ ಕುಟುಂಬ ರಾಜಕೀಯವೇ ಬಹುಮುಖ್ಯ ಉದ್ಯೋಗವಾಗಿರುತ್ತದೆ. ಈ ಪಾತ್ರಗಳು ವ್ಯವಹಾರ/ಉದ್ಯೋಗದಲ್ಲಿದ್ದರೂ ಅದು ನೆಪಕ್ಕಷ್ಟೇ ಎಂಬಂತಿರುತ್ತದೆ. ಈ ರೀತಿ ಸೋಮಾರಿತನ/ ಸಣ್ಣತನ/ಸ್ವಾರ್ಥಗಳನ್ನೇ ವೈಚಾರಿಕತೆ, ಸ್ತ್ರೀ ಸ್ವಾತಂತ್ರ್ಯ, ಸ್ವಾಭಿಮಾನ, ತನ್ನತನಗಳೆಂದು ಪ್ರತಿಪಾದಿಸುತ್ತಾರೆ. ಅಷ್ಟೇ ಅಲ್ಲದೆ ತಮ್ಮನ್ನು ಸ್ತ್ರೀ ಸಂವೇದನೆಯ ಅಪ್ರತಿಮ ಬುದ್ದಿಜೀವಿಗಳೆಂದು ಬಿಂಬಿಸಿಕೊಳ್ಳುತ್ತಾರೆ. ಪುಟ್ಟಣ್ಣ ಕಣಗಾಲರ ವಾರಸುದಾರರೆಂದು ಕರೆಯಲ್ಪಡುವ ನಿರ್ದೇಶಕರೋರ್ವರ ಮೆಗಾ ಧಾರಾವಾಹಿಗಳನ್ನೇ ಗಮನಿಸಿ ನೋಡಿ! ಸಮಸ್ಯೆಯಲ್ಲದ ಸಮಸ್ಯೆಗಳನ್ನು ತೋರುತ್ತ ಆರೋಗ್ಯವಂತ ಸಮಾಜದಲ್ಲಿ ಈ ನಿರ್ದೇಶಕರು ’ಸಮೂಹ ಮನೋವ್ಯಾಧಿ’ಯನ್ನು ಪಸರಿಸುತ್ತಿದ್ದಾರೆಂದೇ ನನ್ನ ಅನಿಸಿಕೆ!

ಗಂಡನೆಂಬ ಪ್ರಾಣಿ ಹೇಗೆ ನಡೆದುಕೊಂಡರೂ ಅವನು ಹೆಂಡತಿಯನ್ನು ಅವಮಾನಿಸುತ್ತಿದ್ದಾನೆ, ಅನುಮಾನಿಸುತ್ತಿದ್ದಾನೆ, ಅವಳೊಂದಿಗೆ ಏನೋ ಮುಚ್ಚಿಡುತ್ತಿದ್ದಾನೆ ಎಂಬಂತೆಯೋ ಅಥವಾ ಈ ನಿರ್ದೇಶಕರುಗಳಿಗೆ ಸಂಸಾರ ಸೂಕ್ಷ್ಮಗಳು ಚೆನ್ನಾಗಿ ಅರಿತಂತೆಯೋ ಧಾರಾವಾಹಿಗಳನ್ನು ತೋರುತ್ತ ನಾರ್ಮಲ್ ಗೃಹಿಣಿಯರನ್ನು ಅಬ್ ನಾರ್ಮಲ್ ಮಾಡುತ್ತಿದ್ದಾರೆ. ಅನ್ಯೋನ್ಯವಾಗಿರುವ ಕುಟುಂಬವೊಂದರ ಅತ್ತೆ / ಸೊಸೆಯರು ಒಟ್ಟಿಗೆ ಕುಳಿತು ಈ ಧಾರಾವಾಹಿಗಳನ್ನು ನೋಡುತ್ತ ನೋಡುತ್ತ ಆ ಧಾರಾವಾಹಿ ಪಾತ್ರಗಳೇ ತಾವಾಗಿ ತಮ್ಮ ತಮ್ಮಲ್ಲೇ ಒಂದು ಬಗೆಯ ಸಂಕಟವನ್ನು ತುಂಬಿಕೊಳ್ಳುತ್ತ ತಮ್ಮ ಸಂಸಾರಗಳಲ್ಲಿ ಒಂದು ಸಣ್ಣ ಬಿರುಕನ್ನು ಸೃಷ್ಟಿಸಿಕೊಂಡುಬಿಡುತ್ತಾರೆ. ಈ ಧಾರಾವಾಹಿಗಳು ಮೆಗಾ ಧಾರಾವಾಹಿಗಳಾದಂತೆಯೇ, ಈ ಬಿರುಕು ಮೆಗಾ ಬಿರುಕಾಗಿ ತುಂಬಿದ ಸಂಸಾರಗಳನ್ನು ಒಡೆಯುತ್ತಿವೆ.

ಏನೇ ಕಷ್ಟ ಬಂದರೂ ಕುಟುಂಬವೇ ಮೇಲೆಂದು ಬಗೆದಿದ್ದ ಭಾರತೀಯ ಗೃಹಿಣಿ ಇಂದು ತನ್ನ ಸ್ವಾಭಿಮಾನವೇ (ಇದು ಸಣ್ಣತನದ ಪೊಳ್ಳು ಪ್ರತಿಷ್ಟೆಯಾದರೂ ಅವಳು ಅದನ್ನು ಸ್ವಾಭಿಮಾನವೆಂದೇ ಬಗೆಯುತ್ತಾಳೆ ಏಕೆಂದರೆ ಆ ಧಾರಾವಾಹಿಗಳ ನಿರ್ದೇಶಕ ಹಾಗೆ ಭಿತ್ತಿಸುತ್ತಿರುತ್ತಾನೆ!) ಬಹುಮುಖ್ಯವೆಂದು ಹೆಡೆ ಎತ್ತಿ ಬುಸುಗುಡುತ್ತಿದ್ದಾಳೆ!

ಈ ರೀತಿ ಬುಸುಗುಟ್ಟು ಗಂಡನೆಂಬ ಪ್ರಾಣಿಯನ್ನು ಬಿಟ್ಟ ಶಕ್ತ ಮಹಿಳೆ, ಆಶ್ರಯವಾಗಿ ಅಶಕ್ತ/ನೊಂದ ಮಹಿಳೆಯರಿಗಾಗಿ ಇರುವ ಸ್ತ್ರೀಶಕ್ತಿ ಸಂಘಕ್ಕೆ ಸೇರಿಕೊಳ್ಳುತ್ತಾಳೆ. ಈ ರೀತಿಯ ಮಹಿಳೆಯರಿಂದಾಗಿ ಸ್ತ್ರೀಶಕ್ತಿ ಸಂಘಗಳು ಅರ್ಥಹೀನವಾಗುತ್ತಿದ್ದಾವೆ. ಮೊದಲೆಲ್ಲಾ ನಿಜಾರ್ಥದಲ್ಲಿ ನೊಂದ, ಅಶಕ್ತ ಮಹಿಳೆಯರಿಗೆ ಬೆಳಕು ಕಾಣಿಸುವಂತಿದ್ದ ಈ ಮಹಿಳಾ ಸಂಘಗಳ ಉದ್ದೇಶಗಳು ಪ್ರಸ್ತುತ ವಿದ್ಯಮಾನದಲ್ಲಿ ಶಕ್ತ ಮಹಿಳೆಯರಿಂದ ತುಂಬಿ ವಿರೋಧಾಭಾಸವೆನಿಸುತ್ತವೆ. ಅಲ್ಲಿ ರೊಟ್ಟಿ ತಟ್ಟುತ್ತ ಹಪ್ಪಳ ಉದ್ದುತ್ತಾ ತನ್ನ ನೆಚ್ಚಿನ ಧಾರಾವಾಹಿಗಳನ್ನು ನೋಡುತ್ತ ತನ್ನ ಕತೆಯನ್ನು ತನ್ನಂತೆಯೇ ಇರುವ ಇತರೆ ಭಗಿನಿಯರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತ ತಾನೊಂದು ಒಳ್ಳೆಯ ನಿರ್ಧಾರವನ್ನು ಕೈಗೊಂಡೆನೆಂದು ಬೀಗುತ್ತಾಳೆ. ಹಾಗೆಯೇ ಇಂದಿನ ಗೃಹಿಣಿ ತಾನೀ ಧಾರಾವಾಹಿಗಳನ್ನು ನೋಡಲೋಸುಗ ತನ್ನ ಅಡಿಗೆ ಕಾರ್ಯವನ್ನು ಖೈದು ಮಾಡಿ ಸ್ತ್ರೀಶಕ್ತಿ ಸಂಘಗಳಿಂದ ತನ್ನೆಲ್ಲ ಅಡುಗೆ ಪದಾರ್ಥಗಳನ್ನು ಖರೀದಿಸಿ ಮೆಗಾಸೀರಿಯಲ್ ಗಳಿಗಾಗಿ ತನ್ನ ಮೆಗಾ ಸಮಯವನ್ನು ಕಾಯ್ದಿರಿಸುತ್ತಾಳೆ. ಈ ಸ್ತ್ರೀಶಕ್ತಿ ಸಂಘಗಳು ಇಂದು ಅನೇಕ ಖಾಂದಾನೀ ಹೋಟೆಲ್ಲಿಗರಿಗೆ ಸವಾಲೆಸೆಯುತ್ತ ರೊಟ್ಟಿ, ಚಪಾತಿ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮುಂತಾದ ಸಾಂಪ್ರದಾಯಿಕ ತಿಂಡಿಗಳನ್ನು ಮಾರುವುದಲ್ಲದೇ, ಭಾರತದ ಆಧುನಿಕ ತಿಂಡಿಗಳಾದ ಗೋಬೀ ಮಂಚೂರಿ, ಚಿಕನ್ ಕಬಾಬ್, ಕಟ್ಲೆಟ್, ಚೈನೀಸ್ ನೂಡಲ್, ಸ್ಯಾಂಡ್ವಿಚ್, ಪಿಜ್ಜಾಗಳನ್ನೂ ತಯಾರಿಸಿ ಮಾರುತ್ತ ಪೂರ್ವ ಪಶ್ಚಿಮಗಳ ಸಮನ್ವಯವನ್ನು ಮೆರೆಯುತ್ತಿವೆ. ಇವರ ಭರಾಟೆ ಮತ್ತು ಭಾರತೀಯರ ಪಾಶ್ಚಾತ್ಯ ತೀಟೆಯನ್ನು ನೋಡಿದರೆ ಮುಂದೆ ಈ ಸ್ತ್ರೀಶಕ್ತಿ ಸಂಘಗಳು ಬ್ಯಾಚೆಲರ್ ಪಾರ್ಟಿಗಳನ್ನು ಕೂಡಾ ನಡೆಸಿಕೊಡುವರೇನೋ ಎಂದು ಗಾಬರಿಯಾಗುತ್ತದೆ.

ಮೊದಲೆಲ್ಲಾ ಅತ್ಯಂತ ಶ್ರ್‍ಈಮಂತ ವರ್ಗದಲ್ಲೋ ಅಥವಾ ಅತೀ ವಿದ್ಯಾವಂತರಲ್ಲೋ ಕಾಣುತ್ತಿದ್ದ ಈ ಸೂಕ್ಷ್ಮ ಸಂವೇದನೆಯ ಸಮಸ್ಯೆಗಳನ್ನು, ಧಾರಾವಾಹಿ ನಿರ್ದೇಶಕ ಹಳ್ಳಿಯ ಕೂಲಿನಾಲಿ ಮಾಡುವ ಗೃಹಿಣಿಯರಿಗೂ ಪರಿಚಯಿಸಿ ಅತ್ಯಂತ ನಿಕಟವಾಗಿ ಮನದಟ್ಟು ಮಾಡಿಕೊಟ್ಟಿದ್ದಾನೆ. ಗಂಡ ’ಇವತ್ತು ಅಡಿಗೆ ಏನೇ?’ ಎಂದರೂ ಅವನು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂದುಕೊಳ್ಳುವ ಇಂದಿನ ಭಾರತನಾರೀ, ಗಂಡನೆಂಬ ಪ್ರಾಣಿ ’ಬಾರೆ ಮಂಚಕೆ’ ಎಂದರಂತೂ ಅವನು ತನ್ನನ್ನು ಕ್ಷುಲ್ಲಕವಾಗೇ ನೋಡುತ್ತಿದ್ದಾನೆ ಎಂದು ಮಹಾಮಾರಿಯಾಗಿ ಗಂಡನನ್ನು ಚಚ್ಚುತ್ತಿದ್ದಾಳೆ. ಈ ಧಾರಾವಾಹಿ ಮಹಿಮೆಯರಿಯದ ಗಂಡು ತನ್ನಲ್ಲೆನೋ ಐಬಿರಬಹುದೆಂದು ಡಾಕ್ಟರನ ಬಳಿ ಗುಪ್ತಸಮಾಲೋಚನೆಯಲ್ಲಿ ತೊಡಗುತ್ತಾನೆ ಅಥವಾ ಒಳಗೇ ಕೊರಗುತ್ತ ಮದ್ಯದಲ್ಲಿ ಮಜಾ ಕಾಣುತ್ತಾನೆ.

ಒಟ್ಟಾರೆ ಏರುತ್ತಿರುವ ಸ್ತ್ರೀಶಕ್ತಿ ಸಂಘಗಳ ಸಂಖ್ಯೆಗೂ, ಸೊರಗುತ್ತಿರುವ ಗಂಡಸರ ಸಂಖ್ಯೆಗೂ ಮತ್ತು ಮೆಗಾ ಸೀರಿಯಲ್ ಗಳ ಮೆಗಾತನಕ್ಕೂ ನೇರ ಸಂಬಂಧವಿದೆಯೆನಿಸುತ್ತದೆ.

ಸಾಮಾಜಿಕವಾಗಿಯೂ ಕೂಡ ಈ ಧಾರಾವಾಹೀ ಪಿಡುಗು ಎಷ್ಟು ವ್ಯಾಪಕವಾಗಿದೆಯೆಂದರೆ ನೀವು ನಿಮ್ಮ ನೆಂಟರ ಮನೆಗೋ ಸ್ನೇಹಿತರ ಮನೆಗೋ ಅಪರೂಪಕ್ಕೆ ಮನಸ್ಸನ್ನು ಮುದಗೊಳಿಸುವ ಆತ್ಮೀಯ ಮಾತುಕತೆಗಾಗಿ ಹೋದರೆ, ಅವರುಗಳು ನಿಮ್ಮನ್ನು ಕೂರಿಸಿ ಟೀವಿ ಹಾಕುತ್ತಾರೆ. ನೀವು ಮಾತನಾಡಬೇಕೆಂದುಕೊಂಡಿದ್ದುದೆಲ್ಲಾ ಉಭಯಕುಶಲೋಪರಿಯಲ್ಲೇ ಮುಗಿದು ಅವರಿಟ್ಟ ಟೀ/ಕಾಫಿಗಳನ್ನು ಕುಡಿದು ಒಂದು ’ಪ್ರೀತಿ ಇಲ್ಲದ ಮೇಲೆ’ ಎಂಬ ಧಾರಾವಾಹಿಯ ಎಪಿಸೋಡ್ ಅನ್ನು ನೋಡಿಕೊಂಡು ಬರುತ್ತೀರಿ. ಹೆಚ್ಚೆಂದರೆ ಎಪಿಸೋಡ್ ಮಧ್ಯದಲ್ಲಿ ಪರಸ್ಪರರ ಮುಖಗಳನ್ನು ನೋಡಿ ಹಲ್ಕಿರಿದಿರುತ್ತೀರಿ, ಅಷ್ಟೇ!

ಹಂಸಲೇಖಾ ಹಾಡಿಗೆ ಬೆಚ್ಚಗಾಗಿ, ಮಾಲಾಶ್ರೀ ಡ್ಯಾನ್ಸಿಗೇ ಒದ್ದೆಯಾಗುತ್ತಿದ್ದ ಜನ, ಈ ಧಾರಾವಾಹಿಗಳ ಪ್ರಭಾವದಿಂದಾಗಿ ಸದಾ ಚಿಂತೆಗೀಡಾದವರಂತೆ ತೋರುತ್ತಾರೆ! ಜೀವನೋತ್ಸಾಹವೇ ಬತ್ತಿದಂತೆ ಸದಾ ಸೀರಿಯಸ್ ಆಗಿ ಕಾಣುತ್ತ, ಎದ್ದು ಕೂರುವುದಕ್ಕೂ ವಿಟಮಿನ್ / ವೈಯಾಗ್ರ ಬೇಕೆನ್ನುತ್ತಿದ್ದಾರೆ. ಕಣ್ಬಿಟ್ಟು ಸುತ್ತಮುತ್ತಲೆಲ್ಲೇ ನೋಡಿದರೂ ಭಾರತದ ತುಂಬೆಲ್ಲಾ ಕಾಣಿಸಬಹುದಾದಂತಹ ಈ ಮಾಮೂಲೀ ಗೋಳಿನ ಕತೆಗಳಿಗಿಂತ ಭಿನ್ನವಾಗಿ ಬೇರೆಯದನ್ನು ಬಯಸದೇ ಭಾರತೀಯ ಮಹಿಳೆ ಮತ್ತದೇ ಗೋಳಿನ ಧಾರಾವಾಹಿಗಳನ್ನು ಬಯಸುವುದು ಜಗತ್ತಿನ ಅದ್ಭುತಗಳಲ್ಲೊಂದೋ ಅಥವಾ ಟೀವಿಯನ್ನು ಆರಿಸಲಾಗದ ಅಸಹಾಯಕತೆಯೋ ತಿಳಿಯದು! ಬಹುಶಃ, ಆ ಧಾರಾವಾಹಿಗಳಲ್ಲಿ ಪರಕಾಯ ಪ್ರವೇಶ ಮಾಡುತ್ತ ಭಾರತೀಯ ಗೃಹಿಣಿ ಅದ್ಭುತ ದುರಂತ ನಾಯಕಿಯಾಗುವತ್ತ ದಾಪುಗಾಲಿಡುತ್ತಿರುವದಂತೂ ದಿಟ.

ಇತ್ತ, ಧಾರಾವಾಹಿಗಳನ್ನು ನೋಡಿರದ ಬಡಪ್ರಾಣಿ ಗಂಡ, ತಾನು ತಪ್ಪಿದ್ದೆಲ್ಲಿ? ಎಂದು ಬಾರುಗಳನ್ನು ಸುತ್ತುತ್ತ ಕಂಡ ಕಂಡವರೊಂದಿಗೆ ತನ್ನ ಕರುಣಾಜನಕ ಕತೆಯನ್ನು ಹೇಳಿ ಪ್ರಶ್ನಿಸುತ್ತಿರುತ್ತಾನೆ! ಏಕೆಂದರೆ ಈ ರೀತಿ ನನಗೂ ಒಬ್ಬ ಬಾರೊಂದರಲ್ಲಿ ತನ್ನ ಕತೆಯನ್ನು ಸುತ್ತಿ ಸುಸ್ತುಗೊಳಿಸಿದ್ದ! ಅವನ ಕತೆಯನ್ನು ನನ್ನೊಂದಿಗೆ ಕೇಳಿದ ನನ್ನ ಆಪ್ತಮಿತ್ರ "ನೋಡಿದೆಯಾ, ತನ್ನ ಗಂಡನ ತಪ್ಪನ್ನೆಲ್ಲಾ ಮನ್ನಿಸಿ ತನ್ನ ಸಂಸಾರವನ್ನು ಉಳಿಸಿಕೊಳ್ಳುವುದರ ಮೂಲಕ ಅಮೇರಿಕನ್ ಹಿಲರಿ ಕ್ಲಿಂಟನ್ ಕುಟುಂಬ ಮೌಲ್ಯಗಳನ್ನು ಜಾಗತಿಕವಾಗಿ ಎತ್ತಿಹಿಡಿದರೆ, ಈ ಧಾರಾವಾಹಿಗಳನ್ನು ನೋಡಿದ ಭಾರತನಾರಿಯರು ಡೈವೋರ್ಸ್ ಡಿಮ್ಯಾಂಡಿಸುತ್ತಿದ್ದಾರೆ. ನಿಮ್ಮ ಅಮೇರಿಕಾದ ಹಿಲರಿ ಕ್ಲಿಂಟನ್, ಇಂದು ಅಮೇರಿಕೆಗಿಂತ ಹೆಚ್ಚಾಗಿ ಭಾರತಕ್ಕೇ ಅನಿವಾರ್ಯವಾಗಿದ್ದಾಳೆ" ಎಂದು ಮಾರ್ಮಿಕವಾಗಿ ನುಡಿದಾಗ ’ಹೌದಲ್ವೆ’ ಎನ್ನಿಸಿತು.

ಅಣಕ:

ಭಾರತದ ಇಂದಿನ ಯಾವುದೇ ಭಾಷೆಯ ಧಾರಾವಾಹಿಗಳನ್ನು ವಿನೋದಾರ್ಥವಾಗಿ ನೋಡಿ. ಅವುಗಳ ಕರುಣಾಜನಕ ಕತೆಗಳು, ಮತ್ತು ಅವುಗಳನ್ನು ಸೀರಿಯಸ್ ಆಗಿ ನೋಡುವ ಪ್ರೇಕ್ಷಕರು ನಿಮಗೆ ಇಲ್ಲಿನ ಅಣಕಕ್ಕಿಂತ ವಿನೋದವಾಗಿ ಕಾಣುತ್ತಾರೆ. ಸುಮ್ಮನೆ ನೀವೊಮ್ಮೆ ’ಸಿಲ್ಲಿ ಲಲ್ಲಿ’ ಎಂಬ ನಗೆ ಧಾರಾವಾಹಿಯೆಂಬ ಕರುಣಾಜನಕ ಧಾರಾವಾಹಿಯ ಕೆಲ ಎಪಿಸೋಡ್ ಗಳನ್ನು ನೋಡುಗರ ಹಿಂದಿನಿಂದ ನೋಡಿ! ಅದರಲ್ಲಿ ಇನ್ವಾಲ್ವ್ ಆಗದೆ ಈ ಧಾರಾವಾಹಿಯನ್ನು, ಅದರ ಪಾತ್ರಗಳನ್ನು ಗಮನಿಸಿದರೆ ನಿಮಗೆ ’ಇಂತಹ ಪ್ಯಾಥೆಟಿಕ್’ ಧಾರಾವಾಹಿಯನ್ನು ನೋಡುತ್ತ ಗಹಗಹಿಸಿ ನಗುವವರನ್ನು ಕಂಡು ನೀವು ಅನುಕಂಪಪಡದಿದ್ದರೆ ಕೇಳಿ!

ಜಾತ್ಯಾತೀತತೆಯಲ್ಲಿ ಜಾತಿಪೀಠಗಳು!

ಮತ್ತೊಂದು ಜಾತಿ ಪೀಠ ಅಸ್ತಿತ್ವಕ್ಕೆ ಬರುತ್ತಿದೆ! ಇರುವ ಐದು ವೀರಶೈವ ಪೀಠಗಳನ್ನು ಧಿಕ್ಕರಿಸಿ, ಮತ್ತೊಂದು ಪೀಠ ಬೇಕೆಂದು ವೀರಶೈವ ಪಂಚಮಸಾಲಿ ಜನಾಂಗವು ಆರನೇ ಪೀಠವನ್ನು ಸ್ಥಾಪಿಸುತ್ತಿದೆ. ಕೇವಲ ಧಾರ್ಮಿಕತೆಗಾಗಿ ಶತಮಾನಗಳ ಹಿಂದೆ ಸ್ಥಾಪಿತಗೊಂಡಿದ್ದ ಈ ಪಂಚಪೀಠಗಳು ಇಂದು ಅವಶ್ಯಕವಾಗಿರುವ ರಾಜಕೀಯ ’ಪವರ್ ಹೌಸ್’ ಆಗದೇ ಇರುವುದೇ ಈ ಆರನೇ ಪೀಠವನ್ನು ಅಸ್ತಿತ್ವಕ್ಕೆ ತರುತ್ತಿದೆ. ಪ್ರಸ್ತುತ ವಿದ್ಯಾಮಾನದಲ್ಲಿ ಈ ಪೀಠಗಳ ಗುರುಗಳು ಕೇವಲ ಧರ್ಮ, ಧರ್ಮಾಚರಣೆಗಳನ್ನು ಭೋಧಿಸುವುದನ್ನು ಒಪ್ಪದ ಶಿಷ್ಯರು, ತಮ್ಮ ಗುರುಗಳು ಲಾಬಿಯಿಸ್ಟ್ ಗಳಾಗಬೇಕೆಂದು ಆದೇಶಿಸುತ್ತಿದ್ದಾರೆ! ಒಪ್ಪದಿದ್ದರೆ ಅವರನ್ನೇ ಧಿಕ್ಕರಿಸಿ ಮತ್ತೊಂದು ಪೀಠವನ್ನು ಸ್ಥಾಪಿಸಿ ತಮ್ಮ ತಾಳಕ್ಕೆ ಕುಣಿಯುವ ಗುರುವನ್ನು ಪ್ರತಿಷ್ಟಾಪಿಸುತ್ತಿದ್ದಾರೆ.

ಇತ್ತೀಚಿನವರೆಗೆ ಸಕ್ರಿಯ ರಾಜಕಾರಣದಲ್ಲಿ ಯಾವತ್ತೂ ಪಾಲ್ಗೊಳ್ಳದೆ ತಮ್ಮ ತಮ್ಮ ಧಾರ್ಮಿಕ ವಿಧಿ, ಆಚರಣೆಗಳೊಂದಿಗೆ ಸಾರ್ವಜನಿಕ ಶಿಕ್ಷಣ ಸೇವೆಯನ್ನು ಮಾಡುತ್ತ ತಟಸ್ಥವಾಗಿದ್ದ ವೀರಶೈವ ಮತ್ತು ಬ್ರಾಹ್ಮಣ ಮಠಗಳು ಅಸ್ಥಿತ್ವಕ್ಕೆ ಬಂದಿದ್ದುದೇ ತಮ್ಮ ತಮ್ಮ ಧರ್ಮಗಳ ವಿಧಿವಿಧಾನಗಳನ್ನು ತಮ್ಮ ಜನಾಂಗಕ್ಕೆ ಭೋಧಿಸಲು. ಆದರೆ ಅದ್ಯಾವ ಮಹಾನುಭಾವೀ ಪವಾಡಪುರುಷ ಸಾಮಾಜಿಕ, ರಾಜಕೀಯ, ಜನಾಂದೋಲನಕ್ಕೆ ಜಾತಿ ಪೀಠಗಳು ಅವಶ್ಯಕವೆಂದು ಕಂಡುಕೊಂಡನೋ ಗೊತ್ತಿಲ್ಲ! ಪ್ರತಿಯೊಂದು ಜಾತಿಗಳಿಗೂ ಪೀಠಗಳಾಗಿ ಇಂದು ಉಪಜಾತಿಗಳೂ ಪೀಠಗಳನ್ನು ಸ್ಥಾಪಿಸುತ್ತಿವೆ. ಹಿಂದೆಂದೂ ಕೇಳರಿಯದಿದ್ದ ಜಾತಿಗಳು ಇಂದು ಜನರ ನಾಲಿಗೆ ಮೇಲೆ ನಲಿದಾಡುತ್ತಿವೆ. ಹಿಂದೆಲ್ಲ ಕೇವಲ ಲಿಂಗಾಯಿತ, ಒಕ್ಕಲಿಗ, ದಲಿತ, ಮುಸ್ಲಿಂ ಎಂದು ಕೇಳುತ್ತಿದ್ದ ನಾವುಗಳು ಇಂದು ಅವುಗಳ ಉಪಜಾತಿಗಳ ಪೂರ್ಣ ಪರಿಚಯವಿದ್ದಂತೆ ಮಾತನಾಡುತ್ತಿದ್ದೇವೆ. ಒಕ್ಕಲಿಗರಲ್ಲಿ ಮುಳ್ಳು ಒಕ್ಕಲಿಗ, ಗಂಗಡಿಕಾರ ಒಕ್ಕಲಿಗ ಎಂದು, ವೀರಶೈವರಲ್ಲಿ ಜಂಗಮ, ಪಂಚಮ, ಸಾಧು, ಬಣಜಿಗ, ನೊಣಬ (ಇದರಲ್ಲಿ ಮೂರು ದಿನದವರು ಮತ್ತು ಏಳು ದಿನದವರು ಎಂದು ಪುನರ್ವಿಂಗಡನೆಯಿದೆ)...ಎಂದೂ, ದಲಿತರಲ್ಲಿ ಎಡಗೈ, ಬಲಗೈ ಎಂದೂ, ಮುಸ್ಲಿಮರಲ್ಲಿ ಷಿಯಾ, ಸುನ್ನಿಯೊಂದಿಗೆ ಕರ್ನಾಟಕದ ನವಾಯಿತ, ಪಿಂಜಾರ,ಖಾಂದಾನಿ...ಇನ್ನು ಏನೇನೋ ಜಾತಿಗಳು ಮುಖ್ಯವಾಹಿನಿಯಲ್ಲಿ ಕೇಳಿಬರುತ್ತಿವೆ.

ಚಿತ್ರದುರ್ಗದ ಸ್ವಾಮಿಯೋರ್ವರು ತಮ್ಮನ್ನು ಬಸವಣ್ಣನ ಅಪರಾವತಾರವೆಂದೇ ಬಗೆದು ಇಂದು ಈ ಜಾತಿಗಳಿಗೆಲ್ಲ ಒಂದೊಂದು ಪೀಠಗಳನ್ನು ಸ್ಥಾಪಿಸಿಕೊಡುತ್ತಿದ್ದಾರೆ. ಈ ಪೀಠಗಳ ಕೆಲ ಸ್ಯಾಂಪಲ್ ಗಳು ಹೀಗಿವೆ.. ಛಲವಾದಿ ಪೀಠ, ಮಾದಾರ ಚೆನ್ನಯ್ಯ ಪೀಠ, ಭೋವಿ ಪೀಠ, ಬಂಜಾರ ಪೀಠ, ಉಪ್ಪಾರ ಪೀಠ, ಪಿಂಜಾರ ಪೀಠ, ಸವಿತಾ ಪೀಠ, ಬೇಡರ ಪೀಠ, ಬೇಕಾದವರ ಪೀಠ!

ಈ ಪೀಠಗಳ ಘನ ಉದ್ದೇಶವೇನು ಬಲ್ಲಿರಾ? ತಮ್ಮ ತಮ್ಮ ಜನಾಂಗದವರಿಗೆ ಆಗುತ್ತಿರುವ ಸಾಮಾಜಿಕ, ರಾಜಕೀಯ ಅನ್ಯಾಯವನ್ನು ಸರಿಪಡಿಸುವುದು. ಸರಿಪಡಿಸುವುದೆಂದರೆ ಹೇಗೆ ಗೊತ್ತೆ? ಪೀಠಸ್ಥಾಪನೆಗೆ ಮುನ್ನ ಸರ್ಕಾರದಿಂದ ಪೀಠಕ್ಕೆ ಬೇಕಾದ ಸ್ಥಳಕ್ಕಾಗಿ ನೂರಾರು ಎಕರೆ ಜಮೀನು ಪಡೆದುಕೊಳ್ಳುವುದು; ಪೀಠಸ್ಥಾಪನೆಯಾದ ಕೂಡಲೇ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಪೀಠಕ್ಕೊಂದು ಆದಾಯದ ಮೂಲವನ್ನು ಮಾಡಿಕೊಳ್ಳುವುದು; ನಂತರ ಪಟ್ಟಕ್ಕೇರಿದ ಪೀಠಿಗಳು ತಮ್ಮ ಸ್ವಜಾತೀ ಖದೀಮರಿಗೆ ಅವಶ್ಯಕವಾದ ರಾಜಕೀಯ ಪಕ್ಷಗಳ ಟಿಕೆಟ್ ಲಾಬಿ, ಟ್ರಾನ್ಸಫರ್ ಲಾಬಿ, ಅವಾರ್ಡ್ ಲಾಬಿ ಇನ್ನು ಮುಂತಾದ ಲಾಬಿಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವುದು; ತಮ್ಮ ಜನಾಂಗದಲ್ಲಿರುವ ರಾಜಕೀಯ ನಾಯಕರುಗಳ, ಅಧಿಕಾರಿಗಳ ಭ್ರಷ್ಟಚಾರದ ಹಣಕ್ಕೆ ’ಸೇಫ್ ಡಿಪಾಸಿಟ್ ಲಾಕರ್’ ಆಗಿ ಮಠವನ್ನು ತೆರೆದಿಡುವುದು; ಮತ್ತವರ ಮಂತ್ರಿಗಿರಿ, ಪ್ರಮೋಷನ್ ಗಳಿಗೆ ’ಪವರ್ ಬ್ರೋಕರ್’ ಗಳಾಗಿ ಈ ಪೀಠಾಧೀಶ್ವರರು ಸಂಪೂರ್ಣ ಒನ್-ಸ್ಟಾಪ್ ಶಾಪ್ ಆಗಿ ಸೇವಾ ಕೈಂಕರ್ಯದಲ್ಲಿ ತೊಡಗಿಕೊಳ್ಳುವರು! ಒಂದು ವಿಧದಲ್ಲಿ ಮೆಜೆಸ್ಟಿಕ್ ಬಸ್ ಸ್ಟಾಂಡಿನಲ್ಲಿ ಅಥವಾ ವಿಧಾನಸೌಧದ ಆಜುಬಾಜಿನಲ್ಲಿ ತಲೆಹಿಡಿಯುತ್ತಾರಲ್ಲ ಅವರಂತೆಯೇ, ಆದರೆ ಸ್ವಲ್ಪ ಹೈಟೆಕ್ ಮಾದರಿಯಲ್ಲಿ, ಜಾತಿ ಕವಚದ ಶ್ರೀರಕ್ಷೆಯಲ್ಲಿ!

ಬರೀ ಇದನ್ನೇ ಮಾಡಿದರೆ ಹೇಗೆ? ಸಾರ್ವಜನಿಕವಾಗಿಯೂ ಸ್ವಲ್ಪ ಹೆಸರು ಮಾಡಬೇಡವೇ? ಅದಕ್ಕಾಗಿಯೇ ಕೆಲವು ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಅವ್ಯಾವುವೆಂದರೆ ಗೋಶಾಲೆಗಳ ನಿರ್ಮಾಣ, ಔಷಧೀಯ ಸಸ್ಯಗಳ ವನ ನಿರ್ಮಾಣ, ಕನ್ನಡ ಹೋರ್‍ಆಟ, ವಿಧವಾ ವಿವಾಹ, ಸಾಮೂಹಿಕ ವಿವಾಹ, ಪ್ರೇಮಿಗಳನ್ನು ಒಗ್ಗೂಡಿಸುವುದು...ಇನ್ನು ಮುಂತಾದ ಕಾರ್ಯಗಳಿಂದ ಆಗಾಗ್ಗೆ ಪತ್ರಿಕೆಗಳಲ್ಲಿ ಅನಾವರಣಗೊಂಡು ಭಕ್ತ ಮಂಡಳಿಯನ್ನು ಸಂತೃಪ್ತಿಗೊಳಿಸುವುದು.

ಸುಮ್ಮನೇ ಗಮನಿಸಿ ನೋಡಿ! ಯಾವ ರಾಜಕೀಯ ಧುರೀಣನಿಗೂ ಕಡಿಮೆ ಇಲ್ಲದಂತೆ ಈ ಜಾತಿ ಪೀಠಿಗಳ ಹೋರ್ಡಿಂಗ್ ಗಳು, ಪೋಸ್ಟರ್ ಗಳು ಆಗಾಗ್ಗೆ ನಿಮ್ಮ ಕಣ್ಣಿಗೆ ರಾಚುವಂತೆ ಕರ್ನಾಟಕದ ಉದ್ದಗಲಕ್ಕೆ ರಾರಾಜಿಸುತ್ತವೆ! ಅಷ್ಟೇ ಅಲ್ಲ, ಇತ್ತೀಚೆಗೆ ನಡೆಯುವ ಯಾವುದೇ ಸಾಮಾಜಿಕ, ರಾಜಕೀಯ, ಸಿನಿಮಾ, ಸಾಹಿತ್ಯ, ಜನಾಂದೋಲನ ಸಾರ್ವಜನಿಕ ಸಭೆಗಳಿರಲಿ, ಈ ಪೀಠಾಧಿಪತಿಗಳು/ಮಠಪತಿಗಳು ವಿಶೇಷ ಅತಿಥಿಗಳಾಗಿ ಆಹ್ವಾನಿತರಾಗಿರುತ್ತಾರೆ! ಯಾವುದೇ ಸಾರ್ವಜನಿಕ ಸಭೆಗೆ ಯಾವುದಾದರೂ ಪೀಠಾಧಿಪತಿಗಳೋ / ಮಠಾಧೀಶರೋ ಅನಿವಾರ್ಯವೆಂದೇ ಜನತೆ ತಿಳಿಯುವಷ್ಟು ಈ ಪದ್ದತಿ ಬೆಳೆದು ಬಿಟ್ಟಿದೆ!

ಒಟ್ಟಾರೆ ಜಾತಿ/ಉಪಜಾತಿಗೊಂದು ಪೀಠಗಳಾಗಿ, ಅವು ಭ್ರ್‍ಅಷ್ಟಾಚಾರವನ್ನು ಪೋಷಿಸುವ ಕೇಂದ್ರಗಳಾಗಿ ಜನಸಾಮಾನ್ಯನಿಗೆ, ಸಮಾಜಕ್ಕೆ ಶಾಪಗಳಾಗಿ ಉದ್ಭವಿಸುತ್ತಿವೆ.

ಹರಿದು ಹಂಚಿಹೋಗಿದ್ದ ಭಾರತವನ್ನು ವಿದೇಶೀ ಬ್ರಿಟಿಷರು ಒಂದುಗೂಡಿಸಿ ಭಾರತಕ್ಕೆ ಒಂದು ಸುಸ್ವರೂಪವನ್ನು ಕೊಟ್ಟರೆ, ಅವರನ್ನು ಓಡಿಸಿದ ಜಿನ್ನಾ / ನೆಹರೂ ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಿದರು. ಈಗ ನಾವುಗಳು ಅವರನ್ನು ಹಿಂದಿಕ್ಕಿ ಜಾತಿ ಉಪಜಾತಿಗಳ ಹೆಸರಿನಲ್ಲಿ ಅಖಂಡ ಭಾರತವನ್ನು ವಿಕಲಾಂಗಗೊಳಿಸುತ್ತಿದ್ದೇವೆ. ’ಮನುಜ ಮತ ವಿಶ್ವಪಥ’ವೆಂದು ಓದಿದ ನಾವುಗಳೂ ಅರಿತೋ ಅರಿಯದೆಲೆಯೋ ಯಾವುದಾದರೊಂದು ಪೀಠದ ಪರಿಮಿತಿಗೆ ಒಳಪಟ್ಟಿರುತ್ತೇವೆ!

ಜಾತ್ಯಾತೀತತೆ, ಸೆಕ್ಯುಲರ್ ಎಂದೆಲ್ಲಾ ಬೊಗಳೆ ಬಿಡುವ ಜನನಾಯಕರುಗಳು ಈ ಪೀಠಗಳ ಪೀಠಿಗಳು ಕರೆದಾಗಲೆಲ್ಲ ಅವರುಗಳ ಸಭೆಗೆ ದೌಡಾಯಿಸಿ ಸನ್ಮಾನ ಪಡೆದು ಆಯಾ ಪೀಠಗಳಿಗೆ ಬೇಕಾದ ಮಾನ್ಯತೆ ಕೊಡುತ್ತಾರೆ. ಹಾಗೆಯೇ ನಮ್ಮ ಬುದ್ಧಿಜೀವೀ ಲೇಖಕರುಗಳು ಕೂಡ ಈ ಪೀಠಿಗಳು ಕೊಡಮಾಡುವ ಬಿರುದು ಬಿನ್ನಾಣಗಳನ್ನು ಪಡೆಯಲು ತಮ್ಮೆಲ್ಲ ತತ್ವಗಳನ್ನು ಗಂಟುಕಟ್ಟಿ ಮೂಲೆಯಲ್ಲಿಟ್ಟು ಪೀಠಿಗಳನ್ನು ಕ್ರಾಂತಿಕಾರಿಗಳೆನ್ನುತ್ತ ಅವರಿಗೆ ಮುಗಿಬೀಳುತ್ತಾರೆ. ಈ ಎಲ್ಲ ಭೀಕರ ಬೆಳವಣಿಗೆಯನ್ನು ಗಮನಿಸಿದರೆ ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೆಂಬುದೇ ತಿಳಿಯುವುದಿಲ್ಲ. ಈ ಎಲ್ಲ ವಿಲಕ್ಷಣಗಳನ್ನು ಭಾರತೀಯ ಶ್ರೀಸಾಮಾನ್ಯರಾದ ನಾವು ಅದು ಹೇಗೆ ಸರಿಪಡಿಸಿ ಸರಿದಾರಿಯಲ್ಲಿ ನಡೆಯುವೆವೋ?

ಅಣಕ:

ಆಧುನಿಕ ಬಸವಣ್ಣನೆಂದೆನಿಸಿದ, ಶತಪೀಠಸ್ಥಾಪೀ ಶ್ರೀಗಳು ತಮ್ಮ ಶಿಷ್ಯಮಂಡಳಿಯೊಂದಿಗೆ ಆಪ್ತಸಮಾಲೋಚನೆಯಲ್ಲಿ ಮುಳುಗಿದ್ದರು. ಶ್ರೀಗಳು ಮ್ಲಾನವದನರಾಗಿ "ಎಲ್ಲಾ ಜಾತಿಗಳಿಗೂ ಒಂದೊಂದು ಪೀಠವನ್ನು ಮಾಡಿಕೊಟ್ಟಾಯಿತು. ಮುಂದೆ ಇನ್ಯಾವ ಪೀಠಸ್ಥಾಪನೆ ಮಾಡಬೇಕೋ ತಿಳಿಯುತ್ತಿಲ್ಲ" ಎಂದು ಸೊರಗಿದ ದನಿಯಲ್ಲಿ ತಮ್ಮ ಕಳವಳವನ್ನು ಅರುಹಿದರು.

ಆಗ ಕೂಡಲೇ ಶ್ರೀಗಳ ಮೆಚ್ಚಿನ ಶಿಷ್ಯ ಜೈಮೃತ್ಯುಂಜಯ್ "ಗುರುಗಳೇ, ಅದೇಕೆ ಅಷ್ಟೊಂದು ಚಿಂತಾಕ್ರಾಂತರಾಗಿದ್ದೀರಿ? ಅದೊಂದು ತಲೆ ಕೆಡಿಸಿಕೊಳ್ಳಬೇಕಾದ ವಿಷಯವೇ ಅಲ್ಲ! ನಮ್ಮ ದೇಶದಲ್ಲಿ ಜಾತಿಗಳಿಗೆ ಕೊರತೆಯಿಲ್ಲ. ಒಂದು ವೇಳೆ ಅದು ಕೊರತೆಯೆನಿಸಿದರೂ ಇನ್ನೂ ಅನೇಕ ವಿಧದ ಜನಶಕ್ತಿಯಿದೆ. ಶೋಷಿತ ಮಹಿಳೆಯರಾದ ವೇಶ್ಯೆಯರಿಗಾಗಿ ’ವೇಶ್ಯಮಾತೇಶ್ವರೀ ಶಕ್ತಿಪೀಠ’ವನ್ನು ಸ್ಥಾಪಿಸಿ, ಒಬ್ಬ ಅತೀ ಅನುಭವಸ್ಥ ದೇವಿಯೋರ್ವರನ್ನು ಮಹಾಮಾತೆಯಾಗಿ ಪೀಠಕ್ಕೆ ಪಟ್ಟ ಕಟ್ಟೋಣ. ಆ ಪೀಠಕ್ಕೆ ವಿಶೇಷವಾಗಿ ಡರ್ಮಟಾಲಜಿ, ಸೆಕ್ಸಾಲಜಿ, ವುಮೆನ್ ಸೈನ್ಸ್ ಇನ್ನು ಮುಂತಾದ ವಿಲಕ್ಷಣ ಕಾಲೇಜುಗಳನ್ನು ತೆರೆದು ವಿಶ್ವದಲ್ಲೇ ಪ್ರಥಮವೆನ್ನಿಸುವಂತಹ ಪ್ರಮಥರಾಗೋಣ. ಅದಾದ ನಂತರ ಹಿಜಿಡಾ ಜನಾಂಗಕ್ಕಾಗಿ ಹಿಜಿಡಾ ಪೀಠ, ಪ್ರೇಮಿಗಳಿಗಾಗಿ ಪ್ರೇಮಪೀಠ, ವಿಧವೆಯರಿಗೆ ವಿಧವಾ ಪೀಠ, ವಿದುರ ಪೀಠ, ಖೈದಿ ಪೀಠ, ಪೊಲೀಸ್ ಪೀಠ, ಕಾರ್ಮಿಕ ಪೀಠ, ವರ್ತಕ ಪೀಠ...ಮನಸ್ಸಿದ್ದರೆ ಮಾರ್ಗವುಂಟು ಮಹಾಸ್ವಾಮಿ!" ಎಂದನು.

ಇದರಿಂದ ಸಂತ್ರಪ್ತಗೊಂಡು ಪ್ರಸನ್ನವದನರಾಗಿ ಶ್ರೀಗಳು "ಅಹುದಹುದು, ಮನಸ್ಸಿದ್ದರೆ ಮಾರ್ಗವುಂಟು. ಸರ್ವೇಜನೌ ಸುಖಿನೋ ಭವಂತು!" ಎಂದು ನೆರೆದ ಶಿಷ್ಯ ಮಂಡಳಿಗೆ ಆಶೀರ್ವಚನ ನೀಡುತ್ತ ತಾವು ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆಯೆಂದು ಎಚ್ಚರಿಕೆಯನ್ನೂ ಕೊಟ್ಟರು.