ಯೇ ಕಚ್ಚರಾ ಲೋಗ್ ಹೈ!

ಅಂತೂ ಇಂತೂ ’ಇಂದಿನ ಭಾರತದ ವ್ಯಕ್ತಿರೂಪ’ದಂತಿರುವ ಲಾಲೂ ಪ್ರಸಾದ್ ಯಾದವ್, ಕನ್ನಡ ಓರಾಟಗಾರರನ್ನು ’ಡರ್ಟಿಃ ಪೀಪಲ್’ ಎಂದು ಅಭಿಪ್ರಾಯಿಸಿದ್ದಾರೆ. ಇದನ್ನು ವಿರೋಧಿಸುವ ಮೊದಲು ನಾವೇಕೆ ’ಕಚಡಾ ಲೋಗ್’ ಎಂಬುದನ್ನು ಒಮ್ಮೆ ಅವಲೋಕಿಸೋಣ.

ಹುಟ್ಟುತ್ತಿದ್ದಂತೆಯೇ ಎರಡು ಬಣವಾದ ’ಕನ್ನಡ ರಕ್ಷಣಾ ವೇದಿಕೆ’ಯ ಹಿಂದೆ ವಿವಿಧ ರಾಜಕಾರಣಿಗಳಿರುವುದು ಯಾರಿಗೂ ತಿಳಿಯದ್ದೇನಲ್ಲ. ಗೋಕಾಕ್ ವರದಿ ಜಾರಿಗೆ ಹೋರಾಡಿದ ಅಂದಿನ ಕನ್ನಡ ಕಾಳಜಿಗೂ ಇಂದಿನ ಸುದ್ದಿಪ್ರಿಯ ಸಂಘಗಳ ಕನ್ನಡ ಕಾಳಜಿಗೂ ಬೆಟ್ಟದಷ್ಟು ವ್ಯತ್ಯಾಸವಿದೆ. ರೈಲ್ವೇಯಲ್ಲಿ ಸಾಕಷ್ಟು ಕನ್ನಡಿಗರಿಲ್ಲದಿರುವುದು ಅತ್ಯಂತ ಕಠೋರ ಸತ್ಯವಾದರೂ ಇದಕ್ಕೆ ಕಾರಣ ನಾವುಗಳು, ನಮ್ಮ ಸಂಸದರು ಮತ್ತು ಮಂತ್ರಿಗಳು. ಸದಾ ಹೈಕಮ್ಯಾಂಡಿನ ಅಡಿಯಾಳಾಗಿರುವ ಈ ರಾಜಕಾರಣಿಗಳು ಪಕ್ಷಭೇದವನ್ನು ಮರೆತು ಯಾವತ್ತಾದರೂ ಒಂದು ಜನಪರ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆಯೇ? ನಮ್ಮವರೇ ಆದ ಜಾಫರ್ ಶರೀಫ್ ಅದೆಷ್ಟು ಕಾಲ ರೈಲ್ವೆ ಸಚಿವರಾಗಿರಲಿಲ್ಲ! ’ಜೀ ಹುಜೂರ್ ಮ್ಹಾ’ ಎಂದು ಕಾಲ ಹಾಕಿದ ಇವರು ಒಂದೆರಡು ರೈಲು ಬಿಟ್ಟಿದ್ದು, ಕಾಲಕ್ಕೆ ತಕ್ಕಂತೆ ಬ್ರಾಡ್ಗೇಜ್ ಮಾಡಿಸಿದ್ದು ಬಿಟ್ಟರೆ ಇನ್ನೇನು ಮಾಡಿದ್ದಾರೆ?

ಇದೇ ಕರವೇ ಕರ ಮುಗಿದು ಸರ್ವ ಸಂಸದರ ಸಭೆಯನ್ನು ಕರೆದರೆ ಬಂದದ್ದು ಬೆರಳೆಣಿಕೆಯಷ್ಟು. ಅದಕ್ಕೇ ನಾವುಗಳು ಕಚಡಾಫೆಲೋಸ್! ಬಾರದ ಈ ಸಂಸದರ ವಿರುದ್ಧ ತೀವ್ರ ಚಳುವಳಿ ಮಾಡಿ ಅವರಿಗೆ ಬುದ್ದಿ ಕಲಿಸದೆ, ಬಡ ಬಿಹಾರೀ ನಿರುದ್ಯೋಗಿಗಳಿಗೆ ತಡೆಯೊಡ್ಡಿ ಸಂದರ್ಶನವನ್ನು ತಪ್ಪಿಸಿದ್ದಕ್ಕೇ ನಾವುಗಳು ಗೂಂಡಾ ಲೋಗ್! ಸಾಮಾನ್ಯವಾಗಿ ವಿಶ್ವದೆಲ್ಲೆಡೆಯ ಜನರು ಸೇರುವ ಒಲಿಂಪಿಕ್ಸ್ ತರಹದ ಅಂತರ್ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಾದ್ಯಸಂಗೀತದಲ್ಲಿಯೇ ರಾಷ್ಟ್ರಗೀತೆಗಳನ್ನು ಹಾಡಿಸುವ ಪರಿಪಾಠವಿರುವಂತೆಯೇ ತಮ್ಮ ಒಂದು ಅಂತರ್ರಾಷ್ಟ್ರೀಯ ಕಾರ್ಯಕ್ರಮದಲ್ಲಿ ವಾದ್ಯಸಂಗೀತದಲ್ಲಿ ರಾಷ್ಟ್ರಗೀತೆಯನ್ನು ನುಡಿಸುವಂತೆ ಮಾಡಿದ್ದಕ್ಕೆ ಒಬ್ಬ ಹೆಮ್ಮೆಯ ಕನ್ನಡಿಗನನ್ನು ರಾಷ್ಟ್ರದ್ರೋಹಿಯೆಂದ ನಾವುಗಳು ಅಲ್ಪಜರಲ್ಲವೇ? ಕನ್ನಡ ಹೋರಾಟಗಾರರೆಂದು ಹೇಳಿಕೊಳ್ಳುತ್ತಾ ಸಿನಿಮಾ ಲಾಬಿ, ರಿಯಲ್ ಎಸ್ಟೇಟ್ ಲಾಬಿ, ಟ್ರಾನ್ಸಫರ್ ಲಾಬಿ, ಮಾಫಿಯಾ ಮುಂತಾದ ಡರ್ಟಿ ವ್ಯವಹಾರಗಳನ್ನು ಮಾಡುತ್ತಿರುವ ಇಂದಿನ ಕನ್ನಡ ಓರಾಟಗಾರರು ಅದ್ಯಾವ ರೀತಿಯಿಂದ ಡರ್ಟಿಯಾಗಿರದೇ ಸರ್ವಾಂಗಶುದ್ಧರಾಗಿರುವರೋ?

ಇದೆಲ್ಲವನ್ನೂ ಮೀರಿದ ಸಂಗತಿಯೆಂದರೆ, ರೈಲ್ವೆಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗಿದೆಯೆಂದು ನಮ್ಮ ಆತ್ಮೀಯ ಚಿತ್ರದುರ್ಗದ ಶ್ರೀಗಳು ತಮ್ಮ ಬೆಂಬಲಿಗರೊಂದಿಗೆ ರೈಲು ನಿಲ್ಲಿಸಿ, ಎಲ್ಲಾ ದಿನಪತ್ರಿಕೆಗಳಲ್ಲಿ ಫೋಟೋ ಹಾಕಿಸಿಕೊಂಡವರು, ತಾವೇ ಸ್ಪಾನ್ಸರ್ ಮಾಡಿದ ’ಯಾದವ ಪೀಠ’ದ ಉದ್ಘಾಟನೆಗೆ ಬಂದ ಲಾಲೂ ಬಳಿ ಈ ವಿಷಯದ ಬಗ್ಗೆ ತುಟಿಪಿಟಿಕ್ ಎನ್ನದೆ ಜಾಣ ಮರೆವು ತೋರಿದರು. ಆ ಸಮಾರಂಭಕ್ಕೆ ಬಂದದ್ದರಿಂದಲೇ ತಾನೇ ಲಾಲೂ ಈ ಮಾತುಗಳನ್ನಾಡಿದ್ದು. ಆದರೂ ಕೂಡಾ ಈ ವಿಷಯದ ಬಗ್ಗೆ ಚಕಾರವೆತ್ತದೆ ಈ ಶ್ರೀಗಳು ಸುಮ್ಮನಿದ್ದದ್ದೇಕೋ? ಬಹುಶಃ ರೈಲ್ವೇ ಪೀಠವನ್ನು ಕಟ್ಟುವ ಕನಸು ಕಾಣುತ್ತಿದ್ದರೆನಿಸುತ್ತದೆ. ಆ ಸಮಾರಂಭದಲ್ಲಿ ಈ ಬ್ರಹ್ಮಚಾರಿಗಳು ವೈದಿಕತೆಯನ್ನು ಧಿಕ್ಕರಿಸಿ ವೈಚಾರಿಕತೆಯನ್ನು ಮೆರೆಸಿ ಎಂದು ಪ್ರಲೋಭಿಸಿದ್ದನ್ನು ಪೋಲೀ ಲಾಲೂ, ’ಬ್ರಹ್ಮಚರ್ಯೆ ಕೂಡ ವೈದಿಕತೆಯ ಪ್ರತೀಕ. ಅದನ್ನು ಧಿಕ್ಕರಿಸಿ ಕಾಮಿಸಿ ನೋಡು’ ಎಂದು ಅರ್ಥೈಸಿಕೊಂಡೇ ಇರಬೇಕು ’ಕ್ಯಾ ಕಚ್ಚರಾ ಲೋಗ್ ಹೈ!’ ಎಂದು ಉದ್ಗರಿಸಿದ್ದುದು.

ಇಂದು ’ಕನ್ನಡ ಪರ ಹೋರಾಟ’ವೆಂಬುದು ಒಂದು ಹುಲುಸಾದ ಉದ್ಯಮ. ಅದಕ್ಕೇ ಕಂಡ ಕಂಡಲ್ಲಿ ಕನ್ನಡ ಸೇನೆ, ಕನ್ನಡ ಪಕ್ಷ, ಕನ್ನಡ ಸಮಿತಿ ಇನ್ನೂ ಏನೇನೋ ಕನ್ನಡ ಹೆಸರಿನ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು, ಮತ್ತು ಆ ಸಂಸ್ಥೆಗಳು ಹಲವು ಬಣಗಳಾಗುತ್ತಿರುವುದು! ಒಂದು ಸಮಗ್ರ ದೂರದರ್ಶಿತ್ವವಿಲ್ಲದೆ ಈ ಎಲ್ಲಾ ಸಂಘಗಳೂ ಹಿರಿಯ ಪುಡಾರಿಗಳಿಗೆ ಮರಿ ಪುಡಾರಿಗಳು ತಯಾರು ಮಾಡಿಕೊಡುವ ಓಟ್ ಬ್ಯಾಂಕ್ ಗಳಾಗಿರುವುದು ಕನ್ನಡದ ದುರಂತವೇ ಸರಿ.

ಇದಕ್ಕೆ ಉದಾಹರಣೆಯೇನೋ ಎಂಬಂತೆ ಇತ್ತೀಚೆಗೆ ಕನ್ನಡ ಪಕ್ಷವೊಂದನ್ನು ಹುಟ್ಟು ಹಾಕಿರುವ ನಮ್ಮ ಕನ್ನಡ ಲೇಖಕ ಕಂ ಹೋರಾಟಗಾರ ಕಂ ಉದಯೋನ್ಮುಖ ರಾಜಕಾರಣಿ ಚಂಪಾ "ಕನ್ನಡಿಗರಿಗೆ ರಾಜ್ ಠಾಕ್ರೆ ಆದರ್ಶವಾಗಬೇಕು" ಎಂದಿರುವುದು. ಸದ್ಯ ನಮ್ಮ ಪುಣ್ಯ, "ಹಿಟ್ಲರ್ ನಮ್ಮ ಆದರ್ಶವಾಗಬೇಕು" ಎಂದಿಲ್ಲವಲ್ಲ!

ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಅಭಿವೃದ್ಧಿ ಕರ್ನಾಟಕದೆಲ್ಲೆಡೆ ವಿಭಜಿತಗೊಂಡಿದ್ದರೆ, ಈ ಸಂಸ್ಥೆಗಳಲ್ಲಿ ಕೆಲಸಕ್ಕೆ ಬರುವ ವಲಸಿಗರಿಗೆ ತಮ್ಮ ಭಾಷಿಗರು ಸಿಕ್ಕದೇ ನಿತ್ಯ ವ್ಯವಹರಿಸಲು ಬೇರೆ ದಾರಿಯಿಲ್ಲದೆ ಕನ್ನಡ ಕಲಿಯುತ್ತಿದ್ದರು. ಆಗ ಆ ಅನಿವಾರ್ಯತೆಯ ಕಾರಣ ಅವರುಗಳ ಭಾಷೆ ಬರೀ ಅವರ ಮನೆಮಾತಾಗಿರುತ್ತಿತ್ತು. ಹೀಗೊಂದು ಅನಿವಾರ್ಯ ಪರಿಸ್ಥಿತಿ ಹಿಂದೆ ಇದ್ದುದರಿಂದಲೇ ಕನ್ನಡ ಮನೆಮಾತಲ್ಲದ ಮೂವರು ಕನ್ನಡಿಗರು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡಿರುವುದು! ಇಂದು ಯಥೇಚ್ಚವಾಗಿ ಸುಲಭವಾಗಿ ಬೆಂಗಳೂರಿನಲ್ಲಿ ತಮ್ಮ ತಮ್ಮ ಭಾಷಿಗರು ಈ ವಲಸಿಗರಿಗೆ ಸಿಕ್ಕುವುದರಿಂದ ಕನ್ನಡದ ಅನಿವಾರ್ಯತೆಯೇ ಅವರಿಗಾಗುವುದಿಲ್ಲ!

ಇನ್ನು ಕನ್ನಡಕ್ಕಾಗಿ ಹೋರಾಡಲು ನಮ್ಮ ಕನ್ನಡ ಹೋರಾಟಗಾರರಿಗೆ ಬೆಂಗಳೂರಿನ ಗಾಂಧಿನಗರದಲ್ಲಿಯೇ ಕಛೇರಿ ಬೇಕೆ? ಅದನ್ನು ಹಂಪಿಗೋ ಬನವಾಸಿಗೋ ಬದಲಾಯಿಸಿಕೊಂಡು ಕನ್ನಡ ಪರ್‍ಅ ಹೋರಾಟವನ್ನು ಮಾಡಬಹುದಲ್ಲವೇ? ಸರಿ, ಗಾಂಧಿನಗರದಲ್ಲಿದ್ದರೂ ಅಲ್ಲಿ ತಯಾರಾಗುವ ಕನ್ನಡ ಸಿನೆಮಾಗಳಲ್ಲಿನ ಕನ್ನಡ ಭಾಷೆಯನ್ನು ಸುಧಾರಿಸಲು ಯಾವುದಾದರೂ ಪ್ರಯತ್ನವನ್ನು ಮಾಡಿದ್ದಾರೆಯೇ?

ಸುಮ್ಮನೇ ಇಂದಿನ ಕನ್ನಡ ಸುದ್ದಿಪತ್ರಿಕೆಗಳು, ಪಠ್ಯಪುಸ್ತಕಗಳು, ಚಿತ್ರರಂಗ ಇವುಗಳನ್ನು ಗಮನಿಸಿದರೇ ಸಾಕು ನಮ್ಮ ಕನ್ನಡ ಮಟ್ಟ ಹೇಗಿದೆಯೆಂದು ತಿಳಿಯುತ್ತದೆ. ಇನ್ನು ಕನ್ನಡಿಗರೋ ಕೊಟ್ಟ ಕೆಲಸವನ್ನು ಮಾಡದ ಸೋಮಾರಿಗಳಾದ್ದರಿಂದಲೇ ವಲಸಿಗರು ಬರುತ್ತಿರುವುದು. ವಲಸಿಗರು ಮಾಡುವ ಕೆಲಸ ಅವರೊಪ್ಪುವ ಸಂಬಳಕ್ಕೆ ಕನ್ನಡಿಗರ್‍ಯಾರೂ ದೊರಕದ ಕಾರಣವೇ ಅಲ್ಲವೇ ವಲಸಿಗರು ಬಂದಿದ್ದುದು, ಬರುತ್ತಿರುವುದು. ಕೂಪ ಮಂಡೂಕಗಳಂತೆ ಏನೋ ಬಿಂಕ, ಕೊಂಕು ಈರ್ಶೆ ಎಲ್ಲ ಗುಣಗಳನ್ನು ತುಂಬಿಕೊಂಡು ಇರುವ ಕೆಲಸದಲ್ಲಿಯೂ ಇರಲಾಗದ ಅದೆಷ್ಟು ಕನ್ನಡಿಗರಿಲ್ಲ. ಇಂದು ಬೆಂಗಳೂರಿನಲ್ಲಿ ಕಟ್ಟಡ ಕಟ್ಟುವ, ಗಾರೆ ಕೆಲಸಕ್ಕೆ ತಮಿಳರಾದರೆ, ನೆಲಹಾಸು, ಮಾರ್ಬಲ್ ಕೆಲಸಕ್ಕೆ ಬಿಹಾರಿಗಳು, ಬಡಿಗೆ ಕೆಲಸಕ್ಕೆ ರಾಜಸ್ಥಾನಿಗಳು ಬಂದಿರುವುದು ನಮ್ಮಲ್ಲಿಯ ಜನಶಕ್ತಿಯ ಕೊರತೆಯಿಂದಲೇ ತಾನೆ? ಇಂದು ಕನ್ನಡಿಗ ರೈತ ಸೋಮಾರಿಯಾಗಿ ಆಂಧ್ರದ ಕುಶಲಮತಿಗಳಿಗೆ ತಮ್ಮ ಹೊಲಗಳನ್ನು ಗುತ್ತಿಗೆ ಕೊಟ್ಟು ’ಕಟ್ಟೆ ಪುರಾಣ’ದಲ್ಲಿ ತೊಡಗಿರುವುದಕ್ಕೆ ಹೊರರಾಜ್ಯದವರು ಕಾರಣವೇ? ನಮ್ಮ ನಮ್ಮ ನೀತಿ ನಿಯಮಗಳನ್ನು ಸರಿಪಡಿಸಿ ಕನ್ನಡಿಗರಿಂದ ಸೋಮಾರಿತನದ ಭೂತವನ್ನು ಬಿಡಿಸುವಂತಹ ಹೋರಾಟವನ್ನು ಕನ್ನಡ ಸೇನೆಗಳು ಹಾಕಿಕೊಳ್ಳಬೇಕೇ ವಿನಹ ಕನ್ನಡಿಗರನ್ನು ಇನ್ನಷ್ಟು ಸೋಮಾರಿಗಳನ್ನಾಗಿ ಮಾಡುವಂತಹ ಯೋಜನೆಗಳನ್ನಲ್ಲ.

ಒಟ್ಟಾರೆ ಇವರ ಹೋರಾಟದ ಏಕಾಂಶವೆಂದರೆ ಅನ್ಯಭಾಷಿಗರನ್ನು ಸದೆಬಡಿಯುವುದು. ಇದು ದ್ವೇಷವನ್ನು ಬೆಳೆಸುತ್ತದೇ ವಿನಹ ಭಾಷೆಯನ್ನಂತೂ ಅಲ್ಲ!

ಇನ್ನು ರೈಲ್ವೇ ಒಂದು ಕೇಂದ್ರ ಸರ್ಕಾರದ ಸಂಸ್ಥೆಯಾದರೂ ಆ ಸಂಸ್ಥೆಯನ್ನು ಯಾವ ರೀತಿ ಸ್ಥಳೀಯರಿಗೆ ಅದನ್ನು ’ನಮ್ಮ ರೈಲ್ವೇ’ ಎಂಬ ಭಾವನೆ ಮೂಡಿಸಬೇಕೆಂಬ ದೂರದೃಷ್ಟಿಯಿಲ್ಲದೆ, ಯಾವ ಯಾವ ಉದ್ಯೋಗಗಳಲ್ಲಿ ಸ್ಥಳೀಯ ಭಾಷಿಕರು ಅವಶ್ಯಕವೆಂಬ ತಿಳುವಳಿಕೆಯಿದ್ದರೂ ಅದನ್ನು ಅಳವಡಿಸಬೇಕೆಂಬ ಛಲವಿಲ್ಲದೆ ಆ ಸಂಸ್ಥೆಯೊಂದು ಸೇವಾ ಸಂಸ್ಥೆಯಾಗಿರದೆ ಆಡಳಿತಶಾಹೀ ಕೇಂದ್ರವಾಗಿದೆ. ಜಾತಿಬಲ, ಹಣಬಲ, ಕುತಂತ್ರಿತನ, ತಲೆಹಿಡುಕುತನಗಳಿಂದ ಮಂತ್ರಿಗಳಾದವರಿಗೂ, ಅಮಿತಾಭ್ ಬಚ್ಚನ್ ಹೈಟ್ ಎಷ್ಟು; ಮಾಧುರಿ ದೀಕ್ಷಿತ್ ಸೊಂಟದ ಅಗಲವೆಷ್ಟು; ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಉರು ಹೊಡೆದು ಐ.ಎ.ಎಸ್. / ಐ.ಪಿ.ಎಸ್. ಪಾಸು ಮಾಡಿ ಅಧಿಕಾರಿಗಳಾದ ಬಚ್ಚಾಗಳಿಗೆ ಒಂದು ಸಂಸ್ಥೆಯನ್ನು ನಡೆಸುವ ಶಕ್ತಿ ಇರುತ್ತದೆಯೇ?

ಇಲ್ಲಿ ನಿಮಗೊಂದು ವಿಷಯವನ್ನು ಹೇಳಬಯಸುತ್ತೇನೆ. ಇಂದು ಬ್ರಿಟಿಷ್, ಲುಫ್ತಾನ್ಸಾ, ಏರ್ ಫ್ರಾನ್ಸ್ ಏರ್ ಲೈನ್ ಗಳು ಬೆಂಗಳೂರಿಗೂ, ಹೈದರಾಬಾದಿಗೂ ಸೇವೆಯನ್ನೊದಗಿಸುತ್ತಿರುದು ತಿಳಿದಿದೆ ತಾನೆ. ಈ ಸಂಸ್ಥೆಗಳು ಮೊದಲಿನಿಂದಲೂ ಮದ್ರಾಸ್, ಬಾಂಬೆಗಳಿಗೆ ಹಾರುತ್ತಿದ್ದರೂ ಅದರಲ್ಲಿ ಭಾರತೀಯ ಊಟ, ಸಿನಿಮಾಗಳು ಇರುತ್ತಿರಲಿಲ್ಲ. ಯಾವಾಗ ಭಾರತೀಯ ಮೂಲದ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಯಿತೋ ಈ ಸಂಸ್ಥೆಗಳು ಭಾರತೀಯ ’ಹೋಸ್ಟ್’ಗಳನ್ನು ನೇಮಿಸಿಕೊಂಡು ಹಿಂದಿ, ತೆಲುಗು, ತಮಿಳಿನಲ್ಲಿ ಸ್ವಾಗತ, ಧನ್ಯವಾದಗಳೊಂದಿಗೆ ಸೀಟ್ ಬೆಲ್ಟ್ ಹಾಕಿಕೊಳ್ಳುವ ಮತ್ತಿತರೆ ರಕ್ಷಣಾಸೂಚಿಗಳನ್ನೂ ಹೇಳುತ್ತಾರೆ. ಏಕೆಂದರೆ ತಮ್ಮ ಆದಾಯದ ಮೂಲವಾದ ಈ ಪ್ರಯಾಣಿಕರಿಗೆ ಇದು ’ನಮ್ಮ ಏರ್ ಲೈನ್’ ಎಂಬ ಭಾವನೆಯನ್ನು ಮೂಡಿಸಲು. ಹಲವಾರು ಬಾರಿ ಕೆಲಸದ ನಿಮಿತ್ತ ಚೆನ್ನೈ, ಹೈದರಾಬಾದಿಗೆ ಶಿಕಾಗೋನಿಂದ ಪ್ರಯಾಣಿಸಿರುವ ನನಗೆ ಈ ಏರ್ ಲೈನುಗಳಲ್ಲಾದ ’ಪರ್ಸನಲೈಜೇಷನ್’ ಬದಲಾವಣೆ ಗಮನಕ್ಕೆ ಬಂತು. ಹೈದರಾಬಾದ್ ಫ್ಲೈಟ್ ಗಳಲ್ಲಿ ತೆಲುಗು ಸಂದೇಶ, ಸಿನಿಮಾಗಳನ್ನು ಭಿತ್ತರಿಸಿ, ಚೆನ್ನೈ ಫ್ಲೈಟ್ ಗಳಲ್ಲಿ ತಮಿಳು ಬಳಸುತ್ತಾರೆ.

ಅದೇ ವೈಯುಕ್ತಿಕವಾಗಿ ಬೆಂಗಳೂರಿಗೆ ಬರುವ ನನಗೆ ಈ ಏರ್ ಲೈನುಗಳು ಕನ್ನಡ ಬಳಸದಿರುವುದೂ ಗಮನಕ್ಕೆ ಬಂತು. ಇವರ ಪ್ರಕಾರ ಮುಂಬೈನಲ್ಲಿ ಮರಾಠಿ ಮಾತನಾಡುವವರು ಕಡಿಮೆ ಇದ್ದು ಹಿಂದಿಯೇ ಅಲ್ಲಿನ ಅಧಿಕೃತ ಭಾಷೆಯಾದುದರಿಂದ ಮುಂಬೈಗೆ ಹೋಗುವ ವಿಮಾನಗಳಲ್ಲಿ ಹಿಂದಿಯನ್ನು ಬಳಸಿದಂತೆಯೇ, ಬೆಂಗಳೂರಿನಲ್ಲಿಯೂ ಕೂಡ ಹಿಂದಿಯೇ ಪ್ರಮುಖ ಭಾಷೆಯಾದುದರಿಂದ ಈ ವಿಮಾನಕ್ಕೂ ಹಿಂದಿ ಬಳಸುತ್ತೇವೆಂದು ನನ್ನ ಹೋಸ್ಟ್ ತಿಳಿಸಿದಳು. ಸದ್ಯ, ಬೆಂಗಳೂರಿನ ಏರ್ ಪೋರ್ಟಿನ ತುಂಬೆಲ್ಲಾ ಕೂಲಿಯಿಂದ ಗ್ರೌಂಡ್ ಆಫೀಸರ್ ವರೆಗೂ ತುಂಬಿರುವ ತಮಿಳು / ಮಲಯಾಳೀ ಭಾಷಿಗರನ್ನು ನೋಡಿ, ಬೆಂಗಳೂರಿನ ಅಧಿಕೃತ ಭಾಷೆ ತಮಿಳು, ಮಲಯಾಳಂ, ಎನ್ನದೇ ನಮ್ಮ ರಾಷ್ಟ್ರಭಾಷೆಯನ್ನು ಹೆಸರಿಸಿದಳಲ್ಲಾ ಅದೇ ಸಮಾಧಾನ!

ಇರಲಿ ಅದು ಬೇರೆ ವಿಷಯ. ಆದರೆ ಅಂತಹ ಒಂದು ಸಣ್ಣ ಆದರೆ ಅತಿಮುಖ್ಯವಾದ ’ಪರ್ಸನಲೈಜೇಷನ್’ ವ್ಯಾಪಾರೀ ತಂತ್ರವನ್ನು ನಮ್ಮ ಪೂರ್ವಜರು ’ಅತಿಥಿ ದೇವೋಭವ’ ಎಂದು ಎಂದೋ ಘೋಷಿಸಿದ್ದರೂ ಅದರ ವಿಶಾಲಾರ್ಥ ಇನ್ನೂ ನಮ್ಮ ರೈಲ್ವೇಗೆ ತಿಳಿದಿಲ್ಲವೇನೋ?

ಅಣಕ:

ಸದಾ ಹುಂಬನಂತೆ, ಮೂರ್ಖಶಿಖಾಮಣಿಯಂತಿದ್ದ ಲಾಲೂ ಬಗೆಗಿನ ಜೋಕುಗಳನ್ನು ಓದಿದ್ದೀರಷ್ಟೆ. ಹಾಗಿದ್ದ ಲಾಲೂ, ಇಂದು ಒಬ್ಬ ಸಮರ್ಥ ನಾಯಕನಂತೆ ರೈಲ್ವೇಯನ್ನು ನಿಭಾಯಿಸುತ್ತಿರುವುದು; ಐ.ಐ.ಎಮ್. ನಂತಹ ಪ್ರತಿಷ್ಟಿತ(?) ವಿದ್ಯಾಸಂಸ್ಥೆಗಳಲ್ಲಿ ಮ್ಯಾನೇಜಮೆಂಟ್ ಬಗ್ಗೆ ಲೆಕ್ಚರ್ ಕೊರೆಯುವುದು; ಕಾರ್ಪೋರೇಟ್ ಅಧಿಕಾರಿಯ ಮಾದರಿ ರೈಲ್ವೇ ಬಡ್ಜೆಟ್ ಮಂಡಿಸುವುದು ಮುಂತಾದ ಅಸಾಮಾನ್ಯ ಬುದ್ದಿಮತ್ತೆಯ ಪ್ರತಿಭೆಯನ್ನು ಗಳಿಸಿದ್ದು ಹೇಗೆ ಬಲ್ಲಿರಾ?

ಅದಕ್ಕೆ ನೀವು ಹುಲ್ಲು ಮೇಯಬೇಕು, ಮೇದ ಮೇವನ್ನು ಆಗಾಗ್ಗೆ ಬಾಯಿಗೆ ತಂದುಕೊಂಡು ಚಪ್ಪರಿಸಬೇಕು,

ಸುಮ್ಮನೇ ’ಡರ್ಟಿ ಪೀಪಲ್’ ತರಹ ರಾಜಾ ವ್ಹಿಸ್ಕಿ ಕುಡಿದು ತಲೆ(ಮಾಂಸ) ತಿನ್ನದ್ರಿಂದಲ್ಲ!

ಪರಿಸರ ಪ್ರಜ್ಞೆ ಮತ್ತು ನಮ್ಮ ಮೌಢ್ಯ

ಕಸದಿಂದ ರಸವೆಂಬುದನ್ನು ಅಕ್ಷರಶಃ ಜೀವಿಸಿ ತಮ್ಮ ಸೃಷ್ಟಿಯ ಹಿಂದಿನ ಆ ಸೃಷ್ಟಿಕರ್ತನ ಉದ್ದೇಶವನ್ನು ಪ್ರತ್ಯಕ್ಷಿಕವಾಗಿ ತೋರುತ್ತಿರುವ ದಾವಣಗೆರೆಯ ಹಂದಿಗಳ ಬಗ್ಗೆ ಓದಿದ್ದಿರಷ್ಟೆ. ಹಾಗೆಯೇ ಒಮ್ಮೆ ಪ್ರಾಂತ್ಯಗಳು, ರಾಜ್ಯಗಳು, ದೇಶಗಳಿಗನುಗುಣವಾಗಿ ಆ ಭಗವಂತನು ಸೃಷ್ಟಿಸಿರುವ ಜೀವರಾಶಿಗಳನ್ನು ಒಮ್ಮೆ ಗಂಭೀರವಾಗಿ ಅವಲೋಕಿಸಿ ನೋಡಿ. ಈ ಪ್ರತಿಯೊಂದು ಸೃಷ್ಟಿಗಳೂ ಒಂದೊಂದು ಭೌಗೋಳಿಕ ಲಕ್ಷಣಗಳಲ್ಲಿ ಯಾವುದೋ ಒಂದು ಘನ ಉದ್ದೇಶದಿಂದ ಅಲ್ಲಲ್ಲಿ ನಿಯೋಜಿತಗೊಂಡು ಇತರೆಡೆ ನಿಯಮಿತಗೊಂಡಿವೆ. ಇದನ್ನು ಮನಗಂಡೇ ಮುಂದುವರಿದ ರಾಷ್ಟ್ರಗಳು ತಮ್ಮ ನೈಸರ್ಗಿಕ ಜೀವಸಂಕುಲವಲ್ಲದೇ ಇತರೆ ಯಾವುದೇ ಜೀವಸಂಕುಲವೂ ಯಾವ ವಿಧದಿಂದಲೂ ತಮ್ಮ ನಿಸರ್ಗದಲ್ಲಿ ಕಲಬೆರಕೆಯಾಗದಂತೆ ತಡೆಗಟ್ಟುತ್ತಿವೆ. ಇತ್ತೀಚೆಗೆ ನಾನಿರುವ ಶಿಕಾಗೋ ಏರಿಯಾದಲ್ಲಿ ಕಂಡುಬಂದ ವಲಸೆಗಾರ ಏಷಿಯನ್ ಕಾರ್ಪ್ (ಗೆಂಡೆಮೀನು) ಅನ್ನು ಇಲ್ಲಿನ ಪರಿಸರ ಸಂರಕ್ಷಣಾ ಇಲಾಖೆಯು ಯುದ್ಧದ ಮಾದರಿಯಲ್ಲಿ ತಂತ್ರಗಳನ್ನು ಅಳವಡಿಸಿಕೊಂಡು ಈ ಮೀನುಗಳನ್ನು ಬಲಿಹಾಕಿ ನಾಮಾವಶೇಷ ಮಾಡಿತು! ಇದು ಅತ್ಯಂತ ಸಾಮಾನ್ಯ ಸಂಗತಿಯಾಗಿ ನಮಗೆಲ್ಲ ಅನ್ನಿಸಬಹುದು. ಆದರೆ ಆ ಮೀನು ಏಷ್ಯಾದಿಂದ ಅದು ಹೇಗೋ ಬಂದು ಇಲ್ಲಿ ಸೇರಿ ಅತಿ ಶೀಘ್ರವಾಗಿ ವಂಶಾಭಿವೃದ್ಧಿ ಮಾಡುತ್ತ, ಇಲ್ಲಿನ ನೈಸರ್ಗಿಕ ಕಾರ್ಪ್ ಮೀನುಗಳನ್ನು ಕ್ರಮೇಣವಾಗಿ ಇಲ್ಲವಾಗಿಸಿ ಈ ಪರಿಸರದ ಒಂದು ಜೀವ ಸಂಕುಲವನ್ನು ಇಲ್ಲವಾಗಿಸಿಬಿಡುತ್ತಿತ್ತು. ಪರಿಸರ ಸಂರಕ್ಷಣೆಯೆಂದರೆ, ಕೇವಲ ಪ್ರಾಣಿಗಳನ್ನು ಸಂರಕ್ಷಿಸುವುದಷ್ಟೇ ಅಲ್ಲದೆ ಆಯಾ ಪ್ರಾಂತೀಯ ಪ್ರಭೇಧ ವರ್ಗಕ್ಕೆ ಹಾನಿ ಬರುವ ಕೊಂಚ ಸುಳಿವು ದೊರಕಿದರೂ ಅದನ್ನು ಕೂಡಲೇ ನಿಯಂತ್ರಿಸಬೇಕೆಂಬುದು ಗಮನೀಯ ಅಂಶ.

ವಿಶ್ವದೆಲ್ಲೆಡೆಯ ಜನರಿಲ್ಲಿಗೆ ವಲಸೆ ಬಂದು ಕಲೆತು, ಬೆರೆತು ವಿಶಿಷ್ಟ ಮನುಕುಲದ ಕಲಬೆರಕೆ ತಳಿಯೆಂಬಂತಿರುವ ಅಮೇರಿಕನ್ನರು ತಮ್ಮ ಪ್ರಾಣಿ, ವನ, ಗಿಡ, ಮರವಲ್ಲದೇ ನಿಸರ್ಗದ ಯಾವುದೇ ಜೀವಸಂಕುಲವಿರಲಿ ಅದನ್ನು ಅತ್ಯಂತ ನಿಷ್ಟವಾಗಿ ಕಲಬೆರಕೆಯಾಗದಂತೆ ಕಾಯ್ದು ಕಾಪಾಡುತ್ತಾರೆ. ಆದ್ದರಿಂದಲೇ ಇಲ್ಲಿನ ನಾಯಿ, ಬೆಕ್ಕು, ಹಸುಗಳೆಲ್ಲ ಇನ್ನೂ ಕಲಬೆರಕೆಯಾಗದೇ ಆದಷ್ಟೂ ತಮ್ಮ ಮೂಲ ವಂಶವಾಹಿನಿಯನ್ನು ಕಾಪಾಡಿಕೊಂಡಿವೆ. ಕೆಲವು ಕಲಬೆರಕೆ ನಾಯಿ, ಬೆಕ್ಕುಗಳಿದ್ದರೂ ಅವುಗಳನ್ನು ವಿವಿಧ ವಿಂಗಡನೆಗೊಳಪಡಿಸಿ ಪ್ರತ್ಯೇಕವಾಗಿಯೇ ನೋಡುತ್ತಾರೆ.

ನಿಮಗೆ ಇನ್ನೊಂದು ಘಟನೆಯನ್ನು ಹೇಳಬೇಕೆಂದರೆ, ಇಲ್ಲಿನ ಓರೆಗಾನ್ ರಾಜ್ಯದ ರೈತರಿಗೆ ಬೇಸಿಗೆಯಲ್ಲಿ ಕೊಲಂಬಿಯಾ ನದಿಯಿಂದ ಹೆಚ್ಚುವರಿಯಾಗಿ ನೀರನ್ನಿತ್ತು ೫ ಲಕ್ಷ ಎಕರೆ ಭೂಮಿಯನ್ನು ಅಧಿಕೃತವಾಗಿ ನೀರಾವರಿಗೆ ಒಳಪಡಿಸವ ಯೋಜನೆಯನ್ನು ಅಲ್ಲಿನ ಸರ್ಕಾರ ಹಾಕಿಕೊಂಡಿತು. ಅದರ ಅನುಷ್ಟಾನಕ್ಕೆ ಮುನ್ನ ಪರಿಸರದ ಮೇಲೆ ಪರಿಣಾಮವೇನಾಗಬಹುದೆಂದು ಸಂಶೋಧಿಸಿ, ಈ ಯೋಜನೆಯಿಂದ ಆ ನದಿಯಲ್ಲಿರುವ ಮೂಲ ಕಾರ್ಪ್ ಮೀನುಗಳ ಸಂತತಿಗೆ ಈ ಯೋಜನೆ ಮಾರಕವಾಗುತ್ತದೆಂದು ಯೋಜನೆಯನ್ನು ಕೈಬಿಟ್ಟಿತು.

ಇದೆಲ್ಲವನ್ನು ಏಕೆ ಹೇಳಿದೆನೆಂದರೆ, ಇಂದು ಭಾರತದ ಜೀವಸಂಕುಲದ ಹಲವಾರು ಪ್ರಭೇಧಗಳು ನಾಮಾವಶೇಷವಾಗಿವೆ ಮತ್ತು ಆಗುತ್ತಲಿವೆ ಅಥವಾ ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಕಲಬೆರಕೆಗೊಳ್ಳುತ್ತಿವೆ.

ಗಿಡ, ಮರ, ಕಲ್ಲು, ಬೆಟ್ಟ, ಎಲೆ, ಹೂ, ಕಾಯಿಗಳೆಲ್ಲವೂ ಪೂಜ್ಯ, ಪವಿತ್ರವೆಂದು ನಿಸರ್ಗವನ್ನೇ ಪೂಜಿಸುತ್ತಿದ್ದ ಭಾರತೀಯ, ನವನಾಗರೀಕತೆಯ ಶಿಕ್ಷಣವನ್ನು ಪಡೆಯುತ್ತ ಉನ್ನತಿ ಹೊಂದಿ ತನ್ನ ಸಂಸ್ಕೃತಿಯ ಸಂಸ್ಕಾರವನ್ನರಿಯದೆ ಇಂದು ಹೀಗೆ ಪೂಜಿಸುವುದೆಲ್ಲ ಮೌಢ್ಯವೆಂದು ತನ್ನ ಬೇರುಗಳನ್ನು ಕಡಿದುಕೊಳ್ಳುತ್ತ ಮರೀಚಿಕೆಯ ಬೆನ್ನು ಬಿದ್ದಿದ್ದಾನೆ. ಮಲ್ಲಿಗೆ, ಸಂಪಿಗೆ, ಹೂವಮ್ಮ, ಪೂವಮ್ಮ, ಕನಕಾಂಬರಿ, ಪಾರಿಜಾತ, ಎಂಬೆಲ್ಲ ಪರಿಸರ ಸಂಬಂಧಿ ಹೆಸರುಗಳಿಗೆ ತಿಲಾಂಜಲಿಯಿತ್ತು, ನತಾಷಾ, ಬಿಪಾಸಾ, ಕರಿಷ್ಮಾ, ರೀಟಾ, ಎಂದೆಲ್ಲ ಮಿಂಚುಳ್ಳಿಗಳಾಗುತ್ತಿದ್ದಾವೆ ನಮ್ಮ ಹೆಣ್ಣುಗಳು. ಇನ್ನು ಗಂಡಸರು ಕಾಡಪ್ಪ, ಅಡವಿಯೆಪ್ಪ, ಕಲ್ಲಪ್ಪ, ಬಸವಣ್ಣ, ಹುಲಿಯಪ್ಪ, ಕರಡೆಪ್ಪ ಎಂಬ ಪರಿಸರಸ್ನೇಹೀ ಹೆಸರುಗಳಿಂದ ಬಹುದೂರ ಸಾಗಿದ್ದಾರೆ. ಪ್ರಕೃತಿಯೊಂದಿಗೆ ಪ್ರಕೃತಿಯಾಗಿ ಹಾಸುಹೊಕ್ಕಾಗಿ ಬಾಳುವುದು ನಾಗರೀಕತೆಯೋ, ಪರಿಸರಕ್ಕೆ ವಿರುದ್ಧವಾಗಿ ನಡೆದು ವಿಕೋಪಗಳನ್ನು ಸೃಷ್ಟಿಸುವುದು ನಾಗರೀಕತೆಯೋ ಅರಿಯದಾಗಿದೆ.

ನಮ್ಮ ಪೂರ್ಣಚಂದ್ರ ತೇಜಸ್ವಿಯವರು ಹೇಳಿದಂತೆ ನಮ್ಮ ನದಿಗಳೆಲ್ಲ ಚರಂಡಿಗಳಾಗಿ ಅಲ್ಲಿ ಯಾವ್ಯಾವ ಜಾತಿಯ ಮೀನುಗಳಿದ್ದವೋ ಬಲ್ಲವರ್ಯಾರು? ಸುಮ್ಮನೆ ಅಲ್ಲಲ್ಲಿ ಕೇಳರಿತ ಕತೆಗಳ ಆಧಾರದ ಮೇಲೆ ನಮ್ಮ ನದಿಯಲ್ಲಿರಬಹುದಾಗಿದ್ದ ಮೀನುಗಳ ತಳಿಗಳನ್ನು ದಾಖಲಿಸಿ ಅವುಗಳಲ್ಲಿ ಯಾವ್ಯಾವು ಅಳಿಸಿಹೋಗಿದ್ದಾವೆಂದು ಕಂಡುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಹೊಣೆಗೇಡಿ ನಾಯಕರುಗಳ ಸ್ವಾತಂತ್ರ್ಯದ ಪರಿಕಲ್ಪನೆಯ ದೆಸೆಯಿಂದ ಬಂದೊದಗಿದೆ.

ಈ ನಿಟ್ಟಿನಲ್ಲಿ ರಾಮಚಂದ್ರಾಪುರದ ಸ್ವಾಮೀಜಿಯೋರ್ವರು ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲ್ಲದಿದ್ದರೂ ಧಾರ್ಮಿಕ ದೃಷ್ಟಿಯಿಂದಲಾದರೂ ಸ್ಥಳೀಯ ಗೋ ತಳಿಯನ್ನು ರಕ್ಷಿಸುತ್ತಿರುವುದು ಸ್ತುತ್ಯಾರ್ಹ. ಆದರೆ ಪೂಜ್ಯನೀಯವಲ್ಲದ, ಯಾವುದೇ ಧಾರ್ಮಿಕ ಕವಚವಿಲ್ಲದ ಅಸಂಖ್ಯಾತ ಭಾರತೀಯ ಜೀವ, ಸಸ್ಯ ಸಂಕುಲಗಳನ್ನು ರಕ್ಷಿಸುವವರ್‍ಯಾರು?

ಹಿಂದೆಲ್ಲ ಬೇಲಿ ಸಾಲಿನಲ್ಲಿ, ಕುರುಚಲು ಕಾಡುಗಳಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಬಾರೆ, ಕಾರೆಯಂತಹ ಕಾಡುಹಣ್ಣಿನ ಗಿಡಗಳು; ಮುಳ್ಳುಬೆಂಡೆ, ಮುಳ್ಳುಬದನೆ, ತೊಂಡೆಯಂತಹ ತರಕಾರಿ ಸಸ್ಯಗಳು; ಮುತ್ತುಗ, ಜಾಲಿ, ಮುರುಗಲದಂತಹ ಚಿಕ್ಕ ಮರಗಳು ಇಲ್ಲವಾಗಿ ಇವುಗಳ ಸ್ಥಾನವನ್ನು ಲಂಟಾನ, ಪಾರ್ಥೇನಿಯಮ್ ಮತ್ತು ನೀಲಗಿರಿಯಂತಹ ವಿದೇಶೀ ತಳಿಗಳು ಬದಲಾಯಿಸುತ್ತಿವೆ. ಪರಿಸರ ಸಂರಕ್ಷಣೆಯೆಂದರೆ ಹಸಿರು ಬೆಳೆಸುವುದೆಂದುಕೊಂಡಿರುವ ನಮ್ಮ ಅರಣ್ಯ ಇಲಾಖೆ ಪರಿಸರದ ಆಳ ಪರಿಜ್ಞಾನವಿಲ್ಲದೆ ಸಾಗುವಾನಿ, ಬೀಟೆ, ಮಾವು, ಹಲಸು, ಮತ್ತಿತರೆ ಅತ್ಯಂತ ಮಲೆನಾಡ ತಳಿಗಳೆನ್ನಬಹುದಾದ ಮರಗಳನ್ನು ಅಲ್ಲಲ್ಲಿ ಅಕೇಶಿಯಾ, ನೀಲಗಿರಿ, ಸಿಲ್ವರ್, ಆಸ್ಟ್ರೇಲಿಯನ್ ಯೂಕಲಿಪ್ಟಸ್ ಮುಂತಾದ ವಿದೇಶೀ ತಳಿಗಳಿಂದ ಕಾಡು ಅಳಿದ ಮಲೆನಾಡ ಕೆಲ ಪ್ರದೇಶಗಳಲ್ಲಿ ಬದಲಾಯಿಸುತ್ತಿದೆ. ಖಾಲಿ ಪ್ರದೇಶಗಳಲ್ಲಿ ಶೀಘ್ರವಾಗಿ ಹಸಿರು ತುಂಬಿ ಜನಮನ್ನಣೆ ಗಳಿಸಲೋ, ಸರ್ಕಾರೀ ಯಂತ್ರವನ್ನು ಸಂತೃಪ್ತಗೊಳಿಸಲೋ ಒಟ್ಟಾರೆ ಈ ರೀತಿಯ ದೇಶೀ ತಳಿಗಳನ್ನು ಬದಲಾಯಿಸುತ್ತ ಮುಂದೆ ಮಲೆನಾಡನ್ನೆಲ್ಲ ಬೆರಕೆನಾಡನ್ನಾಗಿ ಪರಿವರ್ತಿಸುವರೇನೋ!

ನಮ್ಮ ಭೌಗೋಳಿಕ ಪರಿಸರದ ಒಂದು ಸ್ಪಷ್ಟ ರೂಪುರೇಷೆಯಿಲ್ಲದೆ, ಆಳ ಅಭ್ಯಾಸವಿಲ್ಲದೆ ಎಡಬಿಡಂಗಿಯಂತೆ ಯೋಜನೆಗಳನ್ನು ಹಾಕಿಕೊಳ್ಳುತ್ತಿರುವ ನಮ್ಮ ಅರಣ್ಯ ಇಲಾಖೆಗಳ ಮತ್ತು ನಮ್ಮ ದಿಕ್ಕೆಟ್ಟ ರೈತರ ದೆಸೆಯಿಂದಲೇ ಇಂದು ಬಯಲು ಸೀಮೆಯ ಬೆಳೆಗಳಾದ ತೊಗರಿ, ಮೆಕ್ಕೆಜೋಳ, ಮತ್ತಿತರೆ ಬೆಳೆಗಳನ್ನು ಮಲೆನಾಡಿನಲ್ಲಿ ಬೆಳೆಯುವ ಪರಿಸ್ಥಿತಿ ಬಂದಿರುವುದು ಮತ್ತು ಬರುತ್ತಿರುವುದು.

ಮೊದಲೆಲ್ಲಾ ಆಯುರ್ವೇದ ಔಷಧಿಗಳಿಗೆ ಕಾಡು ಹೊಕ್ಕು ಈ ಸಸ್ಯಮೂಲಿಕೆಗಳನ್ನು ತರುತ್ತಿದ್ದರೆ, ಈಗ ಅವುಗಳೆಲ್ಲ ನಮ್ಮ ನಿಸರ್ಗದಿಂದ ಕಣ್ಮರೆಯಾಗಿ ನಮ್ಮ ಮಾದರೀ ರೈತರು ಅಶ್ವಗಂಧಿ, ತುಂಬೆ, ಆನೆಗಡ್ಡೆ, ಅಮೃತಬಳ್ಳಿ, ಇನ್ನು ಮುಂತಾದ ಕಾಡುಗಿಡಗಳನ್ನು ಬೇಸಾಯಬೆಳೆಗಳಾಗಿ ಬೆಳೆಯುವಂತಹ ಪರಿಸ್ಥಿತಿ ಸೃಷ್ಟಿಯಾಗಿರುವುದು ಪರಿಸರ ನಾಶದ ಕರೆಗಂಟೆಯೆಂಬ ಪರಿಜ್ಞಾನವೂ ನಮ್ಮವರಿಗಿಲ್ಲ.

ಪರಿಸರ ಸಂರಕ್ಷಣೆಯ ಸಮಗ್ರತೆ, ಆಳ, ಮುನ್ನೋಟಗಳ ಕಿಂಚಿತ್ತೂ ಪರಿಜ್ಞಾನವಿಲ್ಲದ ಇಲಾಖೆಗಳು, ಸರ್ಕಾರಗಳು ಬೆಂಗಳೂರನ್ನು ಸಿಂಗಾಪುರವನ್ನು ಮಾಡಿದಂತೆ ನಮ್ಮ ಪರಿಸರವನ್ನು ಮಂಗಳನನ್ನಾಗಿ ಮಾಡುವತ್ತ ದಾಪುಗಾಲಿಡುತ್ತಿದ್ದಾರೆ.

ಹುಚ್ಚು ಅಮೇರಿಕನ್ನರು ಮಂಗಳನಲ್ಲಿಗೆ ಹೋಗುವತ್ತ ಯೋಚಿಸುತ್ತಿದ್ದರೆ, ಜಾಣ ಭಾರತೀಯರು ಮಂಗಳನನ್ನೇ ಭಾರತದಲ್ಲಿ ಸೃಷ್ಟಿಸುತ್ತಿದ್ದಾರೆ!

ಒಮ್ಮೊಮ್ಮೆ ಗಹನವಾಗಿ ಯೋಚಿಸಿದಾಗ, ಸ್ವತಂತ್ರ ಭಾರತದ ಧೀರ್ಘ ರೂಪುರೇಷೆಗಳಿಲ್ಲದೆ, ಸಮಗ್ರ ಅಭಿವೃದ್ಧಿಯ ಸ್ಪಷ್ಟ ಚಿತ್ರಣವೂ ಇಲ್ಲದೆ, ಕಠೋರ ಸತ್ಯಗಳನ್ನು ಹುಂಬ ಭಾವನೆಗಳಿಂದ ಮರೆಮಾಚಿ, ನಮ್ಮ ಹಿರಿಯರು ಭಾವುಕರಾಗಿ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರ್ಯ ಗಳಿಸಿದ್ದು, ಮಿಲನ ಮುನ್ನವೇ ಶೀಘ್ರಸ್ಖಲನವಾದಂತಾಗಿ ನಮ್ಮ ಸ್ವಾತಂತ್ರ್ಯ ನಿರೀಕ್ಷಿತ ಫಲ ನೀಡಲಿಲ್ಲವೇನೋ ಅನ್ನಿಸುತ್ತದೆ.

ಹಾಂ! ನಮ್ಮ ಮಠಾಧೀಶ್ವರರೂ, ಪೀಠಾಧಿಪತಿಗಳೂ ಮೂಲಿಕೆ ವನ, ಬೀಜ ರಕ್ಷಣೆ, ವನ್ಯಧಾಮ, ಪರಿಸರ ರಕ್ಷಣೆಗೆ ಹಠಾತ್ತಾಗಿ ಮುಂದಾಗಿ ಈ ವಿಷಯಗಳಲ್ಲಿ ಕೈಂಕರ್ಯರಾಗಿರುವುದನ್ನು ಕಂಡು, ಇದು ಅವರುಗಳ ಇನ್ನೊಂದು ’ಪ್ರಚಾರಪ್ರಿಯತೆ’ ತೀಟೆಯೆಂಬುದು ಮನವರಿಕೆಯಾಗಿದ್ದರೂ ಅಷ್ಟಾದರೂ ಒಂದು ಒಳ್ಳೆಯ ಕಾರ್ಯವನ್ನು ಈ ಪುಣ್ಯಾತ್ಮರು ಮಾಡುತ್ತಿದ್ದಾರಲ್ಲ ಎಂದು ಸಮಾಧಾನಗೊಂಡಿದ್ದೆ. ಆದರೆ ಇವರ ಈ ಕೈಂಕರ್ಯ ಕೇಂದ್ರ ಸರ್ಕಾರದ ’ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್’ ನ ಸಂಶೋಧನಾ ನಿಧಿಯನ್ನು ’ಸ್ವಾಹಾ’ ಮಾಡಲು ಎಂದು ನನ್ನ ಕೃಷಿ ವಿಜ್ಞಾನಿ ಮಿತ್ರರು ಇತ್ತೀಚೆಗೆ ತಿಳಿಸಿದಾಗಲೇ ಇವರ ಮರ್ಮ ತಿಳಿದಿದ್ದು!

ಅಣಕ:

ಹೀಗೆಯೇ ಒಮ್ಮೆ ನನ್ನ ಚೀನೀ ಗೆಳತಿಯೊಂದಿಗೆ ಮಾತನಾಡುತ್ತ ಭಾರತೀಯರ ಜಾತಿಪದ್ದತಿ, ಒಳಪಂಗಡಗಳನ್ನು ಕುರಿತು ಮಾತನಾಡುತ್ತ, ಬಹುಶಃ ಈ ಪದ್ದತಿಗಳನ್ನು ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಉಳಿಸಿಕೊಳ್ಳಲು ಜಾರಿಗೊಳಿಸಿಕೊಂಡು ಅದನ್ನು ಇಂದಿಗೂ ಪಾಲಿಸುತ್ತಿರುವುದರಿಂದ, ಭಾರತೀಯರೇ ಅಧಿಕವಾಗಿ ತಮ್ಮ ’ಜನಾಂಗೀಯ ನೇಟಿವಿಟಿ’ಯನ್ನು ಕಾಪಾಡಿಕೊಂಡಿದ್ದಾರೆಂದು ನಾವು ಹೇಳಬಹುದೆಂದೆನು. ಅದನ್ನವಳು ಸಾರಾಸಗಟಾಗಿ ತಿರಸ್ಕರಿಸುತ್ತ "ನಾನು ಕಂಡುಕೊಂಡಂತೆ ಭಾರತೀಯರೇ ಅತಿ ಹೆಚ್ಚಾಗಿ ಮಿಶ್ರತಳಿಗಳಾಗಿರುವುದೆಂದೂ ನಮಗೆ ತಿಳಿದ ಕೆಲವು ಭಾರತೀಯ ಮಿತ್ರರನ್ನೇ ಹೆಸರಿಸಿ ಇವರೆಲ್ಲ ವಿವಿಧ ಆಕಾರ, ಚರ್ಮದ ಬಣ್ಣ, ಕೂದಲು ಪ್ರತಿಯೊಂದು ಚರ್ಯೆಗಳೂ ವಿಧವಿಧವಾಗಿದ್ದು, ಅವರೆಲ್ಲ ಬಿಳಿಯ, ಕರಿಯ, ಕೊಲ್ಲಿ, ಇನ್ನು ಯಾವ್ಯಾವುದೋ ತಳಿಗಳೆಲ್ಲದರ ಸಮ್ಮಿಳಿತವಾಗಿ ಕಾಣುತ್ತಾರೆಂದು ವರ್ಣಿಸಿ, ಅತ್ಯಂತ ಶುಭ್ರ ಮಾನವ ತಳಿಯೆಂದರೆ ಓರಿಯೆಂಟಲ್ ತಳಿಯೆಂದು ಹೇಳುತ್ತ "ಯಾರೊಬ್ಬರಾದರೂ ಗುಂಗುರು ಕೂದಲಿನ ಚೀನೀಯರನ್ನು ತೋರು"ಎಂದು ಸವಾಲೆಸೆದಳು. ಅಲ್ಲಿಯವರೆಗೂ ಭಾರತೀಯ ಪರಿಸರವಷ್ಟೇ ಕೆಟ್ಟುಹೋಗಿದೆಯೆಂದುಕೊಂಡು ಯೋಚಿಸುತ್ತದ್ದ ನನಗೆ ಭಾರತೀಯ ಮನುಜ ತಳಿಯ ಈ ಸಹಜ ಸತ್ಯವನ್ನು ತೋರಿ, ತುಂಟನಗೆಯ ಆ ಚೀನೀ ಪೋರಿ ನನ್ನ ಮರ್ಮಕ್ಕೇ ಕೈ ಹಾಕಿದ್ದಳು.

ಅದಕ್ಕೆ ನಾವುಗಳು ’ಭಾರೀ ಬೆರಿಕಿ ಅದೀವಿ!’ (ಉತ್ತರ ಕರ್ನಾಟಕದ ಶೈಲಿ)!

ಬುದ್ದಿಜೀವಿಗಳು, ನ್ಯಾಯಾಂಗವೂ ಮತ್ತು ಜನಸಾಮಾನ್ಯರೂ!

ಕಳೆದ ವಾರ, ಏಕಪತ್ನೀವೃತಸ್ಥ ಮಾಜಿ ಮುಖ್ಯಮಂತ್ರಿ, ವಿಗ್ಗಿನ ಸುಂದರಾಂಗರು ತಮ್ಮ ನೆತ್ತಿಯನ್ನು ವಿಗ್ ನಲ್ಲಿ ಮುಚ್ಚಿಟ್ಟುಕೊಂಡಂತೆ ತಮ್ಮ ಪ್ರೇಮಲೀಲೆಯನ್ನು ಮುಚ್ಚಿಟ್ಟುಕೊಂಡದ್ದು, ಮತ್ತು ವಿಗ್ಗಿಲ್ಲದ ಕಿಲಾಡಿರಂಗ ವಿಶ್ವನಾಥ್ ತಮ್ಮ ಬಕ್ಕತಲೆಯಂತೆ ಯಾವ ಎಗ್ಗಿಲ್ಲದೆ ತಮ್ಮ ಪ್ರ್‍ಏಮಲೀಲೆಯನ್ನು ಸಾದರಪಡಿಸಿಕೊಂಡದ್ದುದು, ಅವರುಗಳ ವ್ಯಕ್ತಿತ್ವ ಮತ್ತು ನೆತ್ತಿಗೆ ಹಿಡಿದ ಸಾಮ್ಯತೆಯಂತೆ ಶೀರ್ಷಿಕೆಯನ್ನು ಕೊಟ್ಟಿದ್ದೆ. ಬಹುಶಃ ಅದು ನಿಮಗೆ ಅರ್ಥವಾಗಿರಬಹುದು. ಆದರೆ ಈ ದ್ವಿಪತ್ನಿತ್ವದ ಪುಸ್ತಕ ಸಮಾರಂಭಕ್ಕೆ ಆಗಮಿಸಿದ್ದ ನಮ್ಮ ಮಾನ್ಯ ಬುದ್ದಿಜೀವಿಗಳು ಈ ಪುಸ್ತಕವನ್ನು ಓದಿ, ಅದರ ಲೇಖಕರ ರಾಜಕೀಯ ಹಿನ್ನೆಲೆ, ಅಲ್ಲವರು ಬರೆದುಕೊಂಡಿರುವ ಬಹುಪತ್ನಿತ್ವದ ವಿಷಯದಿಂದಾಗಬಹುದಾದ ಸಾಮಾಜಿಕ ದುಷ್ಪರಿಣಾಮ, ಇದ್ಯಾವುದನ್ನು ವಿಶ್ಲೇಷಿಸದೆ ಈ ಪುಸ್ತಕವನ್ನು ಬಿಡುಗಡೆಗೊಳಿಸಿ ತಮ್ಮ ಬುದ್ದಿಮತ್ತೆಯನ್ನು ಮೆರೆಸುತ್ತ ಕೊನೆಯಲ್ಲಿ ಇಲ್ಲಿ ಮಾಜಿ ಮುಖ್ಯಮಂತ್ರಿಗಳ ಸರಸದ ವಿಷಯವನ್ನು ಪ್ರಸ್ತಾಪಿಸಿದ್ದು ತಪ್ಪೆಂದು ಹೇಳುವ ಮೂಲಕ ಈ ಕೃತಿಯನ್ನು ಓದದೇ ಪ್ರತಿಭಟಿಸಿದ ಸಾಮಾನ್ಯಜೀವಿಗಳಿಗೂ ಮತ್ತು ಅದನ್ನೋದಿ ಬಿಡುಗಡೆಗೊಳಿಸಿದ ತಮ್ಮಂಥ ಬುದ್ದಿಜೀವಿಗಳಿಗೂ ಯಾವುದೇ ವ್ಯತ್ಯಾಸವಿಲ್ಲವೆಂಬುದನ್ನು ಸಾಬೀತು ಪಡಿಸಿದ್ದಾರೆ. ಅದು ಜನಸಾಮಾನ್ಯನಿಗೆ ಅರ್ಥವಾಗಬೇಕು, ಅಷ್ಟೇ.

ಬಹುಶಃ ಸುರಪಾನ, ಪಲ್ಲಂಗ ಪುರಾಣ, ಪೋಲಿತನ, ಪರಸ್ತ್ರೀ ವ್ಯಾಮೋಹ....ಇತ್ಯಾದಿ ಲಂಪಟತನದ ಕಿಲಾಡಿತನಗಳು ಬುದ್ದಿಜೀವಿಗಳಿಗಿರಲೇಬೇಕಾದ ಅಘೋಷಿತ ಅರ್ಹತೆಗಳೇನೋ! ಇರಲಿ, ನಾನು ಕೂಡ ಈ ವಿಷಯಗಳಲ್ಲಿ ಪರಿಣಿತಿ ಹೊಂದಿರುವೆನಾದರೂ ಕಾನೂನು ಉಲ್ಲಂಘಿಸಿ ಬಹುಪತ್ನಿತ್ವವನ್ನು ಹೊಂದುವಷ್ಟು ನಾಯಕತ್ವದ ಗುಣವಾಗಲೀ, ಅದನ್ನು ಒಪ್ಪಿಕೊಳ್ಳುವಷ್ಟು ಬುದ್ದಿಜೀವಿಗಳ ಬುದ್ದಿಮತ್ತೆಯನ್ನಾಗಲೀ ನಾನು ಹೊಂದಿಲ್ಲ! ಕಾನೂನೇ ದೊಡ್ಡದೆಂದು ತಿಳಿದ ನಿಮ್ಮೊಳಗೊಬ್ಬ ನಾನು.

ಬಹುಶಃ ಮುಸ್ಲಿಂ / ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಂಬಂಧೀ ಸೂಕ್ಷ್ಮಗಳಿಗೆ ಧಕ್ಕೆ ಬರುವಂತಹ ವಿಷಯವಿದ್ದರೆ ಮಾತ್ರ ದನಿಯೆತ್ತಬೇಕೆಂದು ಭಾರತೀಯ ಬುದ್ಧಿಜೀವಿಗಳು ತಮಗೆ ತಾವೇ ವಿಧಿಸಿಕೊಂಡಿರುವ ಏಕೈಕ ಅನುಸೂಚಿಯೇನೋ? ಇವರ ಅನುಸೂಚಿಯ ಪರಿಣಾಮದಿಂದಲೇ ಇಂದು ಕಾಶ್ಮೀರದ ಕಣಿವೆಯಲ್ಲಿದ್ದ ಉಗ್ರ್‍ಅವಾದವು ಹೊನ್ನಾಳಿ, ಕಲಘಟಗಿಗೆ ಬಂದಿರುವುದು. ಇರಲಿ, ಅದಕ್ಕೆಲ್ಲಾ ಇವರಿಗೆ ’ಬುದ್ಧಿ’ ಹೇಳಲು ಭಜರಂಗ್ ದಳವೂ ಮತ್ತು ’ಹಿಮ್ಮತ್’ ಕೊಡಲು ಬುದ್ದಿಜೀವಿಗಳ ಸಂಘಗಳೂ ಇವೆ. ಅದಕ್ಕೇ ನಮ್ಮ ಇತಿಹಾಸಕಾರ ಸಂಶೋಧಕ ಪ್ರೊ: ಚಿದಾನಂದ ಮೂರ್ತಿಯವರು ಎಷ್ಟೇ ಕೊರಳೆತ್ತಿ ಪ್ರತಿಭಟಿಸಿದರೂ, ನಮ್ಮ ಬುದ್ದಿಜೀವಿಗಳು ಅಲ್ಪಸಂಖ್ಯಾತರನ್ನು ಓಲೈಸಲು ಮೂರ್ತಿಯವರ ಕೂಗನ್ನು ಕೃಷ್ಣದೇವರಾಯನ ’ಸುವ್ವರ್ ಕಾ ಬೊಮ್ಡೀ’ ಎಂದು ಹೀಗಳೆಯುತ್ತಾರೆ. ಹಾಗಾಗಿ ಈ ಕೃತಿಯಲ್ಲಿ ದ್ವಿಪತ್ನಿತ್ವದ ಅಪರಾಧವಿದ್ದರೂ ಅದು ಅಲ್ಪಸಂಖ್ಯಾತ ಸಂಬಂಧೀ ವಿಷಯವಲ್ಲವಾದ್ದರಿಂದ ಅದೊಂದು ಆಕ್ಷೇಪಾರ್ಹ ಸಂಗತಿಯಲ್ಲವೆಂದು "ಹಳ್ಳಿ ಹಕ್ಕಿಯ ಹಾಡು" ಬಿಡುಗಡೆಗೊಳಿಸಿದ ನಮ್ಮ ಬುದ್ದಿಜೀವಿಗಳು ತರ್ಕಿಸಿದರೆನಿಸುತ್ತದೆ. ಒಂದು ವೇಳೆ ವಿಶ್ವನಾಥರ ಎರಡನೇ ಪತ್ನಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಅಲ್ಪಸಂಖ್ಯಾತ ಮಹಿಳೆಯಾಗಿದ್ದರೆ, ನಮ್ಮ ಬುದ್ದಿಜೀವಿಗಳು ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ನಾ ಕಾಣೆ.

ಇರಲಿ, ಹೀಗೆ ಕಾನೂನೇ ದೊಡ್ಡದೆಂದು ತಿಳಿದು ನಮ್ಮ ನ್ಯಾಯಾಂಗದಲ್ಲಿ ಅಪಾರ ವಿಶ್ವಾಸವನ್ನು ಹೊಂದಿದ್ದ ನನಗೆ ಮೊನ್ನೆ ನಿರಾಸೆಯಾಗುವಂತಹ ಬಹುಶಃ ನೀವು ಓದಿರದ ಸುದ್ದಿಯೊಂದನ್ನು ಓದಿದೆ. ನಮ್ಮ ಸುಪ್ರ್‍ಈಂ ಕೋರ್ಟ್ "ಇತ್ತೀಚೆಗೆ ಲಂಗು ಲಗಾಮಿಲ್ಲದೆ ಪ್ರಚಾರಕ್ಕಾಗಿ ಅನೇಕರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡುತ್ತಿದ್ದಾರೆ. ಹಾಗಾಗಿ ಅಂಥಹವರಿಗೆ ಒಂದು ಲಕ್ಷ ಜುಲ್ಮಾನೆ ಹಾಕಬೇಕು" ಎಂಬ ಪ್ರಸ್ತಾಪವನ್ನೊಡ್ಡಿದೆ.

ನನ್ನೆಲ್ಲ ಲೇಖನಗಳಲ್ಲಿ ಭಾರತಕ್ಕೆ ದೊರೆತ ಸ್ವಾತಂತ್ರ್ಯ ಹೇಗೆ ದೂರದರ್ಶಿತ್ವವಿಲ್ಲದ ರಾಜಕಾರಣಿಗಳ ದೆಸೆಯಿಂದ ಸ್ವೇಚ್ಚಾಚಾರವಾಗಿ ಮಾರ್ಪಾಟ್ಟಿದೆಯೆಂದು ಬರೆದಿದ್ದೇನೆ. ಇವೆಲ್ಲವುಗಳ ವಿರುದ್ಧ ನಮ್ಮ ನೆಲದ ಕಾನೂನಿನ ಪರಿಧಿಯೊಳಗೇ ಹೋರಾಡಲು ಈ "ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ" ಯೊಂದೇ ದಾರಿಯೆಂದು ನನಗನಿಸುತ್ತದೆ. ಉದಾಹರಣೆಗೆ ಮೇಲ್ಕಾಣಿಸಿದ ಮಾಜಿ ಮಂತ್ರಿಗಳ ದ್ವಿಪತ್ನಿತ್ವದ ಸಂಗತಿಯಲ್ಲೂ "ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ"ಯೊಂದೇ ದಾರಿ.

ಹಾಂ! ಹಾಗಂತ ನೀವುಗಳು ಪ್ರತಿಯೊಂದು ಕೋರ್ಟಿನಲ್ಲೂ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವಂತಿಲ್ಲ! ಅವುಗಳನ್ನು ಹೈಕೋರ್ಟಿನಲ್ಲಿ ಮಾತ್ರ ಹೂಡಬೇಕು. ಬೀದರ್ ನ ಕೊನೆಯಲ್ಲಿರುವ ಒಬ್ಬ ಜವಾಬ್ದಾರಿಯುತ ಬಡ ನಾಗರೀಕ ತನ್ನ ನಲ್ಲಿಯಲ್ಲಿ ನಿತ್ಯವೂ ಚರಂಡಿ ನೀರು ಬರುತ್ತಿರುವುದನ್ನು ಮತ್ತದನ್ನು ಸರಿಪಡಿಸದ ತನ್ನ ನಗರಸಭೆ / ನೀರು ಮಂಡಲಿಗಳ ಅನ್ಯಾಯವನ್ನು ಸರಿಪಡಿಸಲು ಈ ಮೊಕದ್ದಮೆಯನ್ನು ಹೂಡಲು ಬೆಂಗಳೂರಿಗೆ ಬರಬೇಕು. ಬೆಂಗಳೂರಿನಲ್ಲಿ ತನ್ನ ಊಟ, ವಸತಿಯ ಖರ್ಚನ್ನು ಭರಿಸಬೇಕು. ಮತ್ತು ಇದೆಲ್ಲದರೊಂದಿಗೆ ವಕೀಲರು, ಕೋರ್ಟ್ ವೆಚ್ಚಗಳು....ಇತ್ಯಾದಿ ತುಂಬಿ ತನ್ನ ಹೋರಾಟವನ್ನು ನಡೆಸಬೇಕು. ಬಡ ಭಾರತದ ಅದೆಷ್ಟು ಜನ ಈ ರೀತಿ ಹೋರಾಡಲು ಸಿದ್ಧರಿರುತ್ತಾರೆ? ಆ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರಲೇಬೇಕಾದ ಅನಿವಾರ್ಯತೆ ಇಂದು ಶೇಕಡ ೯೬ ರಷ್ಟು ಭಾರತೀಯರಿಗಿದೆ. ಇನ್ನು ಆ ಆರ್ಥಿಕ ಶಕ್ತಿ ಇರುವವರಲ್ಲಿ ಹೋರಾಡಬೇಕೆಂಬ ಛಲ ಇರುವವರೆಷ್ಟು ಮಂದಿ?

ಯೋಚಿಸಿ ನೋಡಿ, ಜನ ಪ್ರತಿನಿಧಿ, ಅಧಿಕಾರಿ ವರ್ಗ, ಆಡಳಿತಶಾಹಿ, ಇವೆಲ್ಲವುಗಳ ವಿರುದ್ಧ ಲಂಚ, ಭ್ರಷ್ಟಾಚಾರ, ಕುಟಿಲತೆ, ಅಸಮರ್ಪಕ ಸೇವೆ...ಇಂದು ನಮ್ಮ ಕಣ್ಣಿಗೆ ಕಾಣುವ ಪ್ರತಿಯೊಂದು ಅನ್ಯಾಯಗಳ ವಿರುದ್ಧ ಕಾನೂನಿನ ಪರಧಿಯೊಳಗೆ ಹೋರಾಡಲು ಇರುವ ಏಕೈಕ ಅಸ್ತ್ರ ಈ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ. ಈ ಮೊಕದ್ದಮೆಯನ್ನು ಹೂಡಲು ಮತ್ತು ಸಮರ್ಪಕವಾಗಿ ಆಳವಡಿಸಲು ನಮ್ಮ ನ್ಯಾಯಾಂಗವು ತ್ವರಿತವಾಗಿ ಯೋಜನೆಗಳನ್ನು ಹಾಕಿಕೊಳ್ಳಬೇಕು.

ಆದರೆ ಅದಾಗಲೇ ಸಾರ್ವಜನಿಕ ಮೊಕದ್ದಮೆಗಳನ್ನು ಹೈಕೋರ್ಟಿನಲ್ಲಿ ಮಾತ್ರವೇ ಹೂಡಬೇಕೆಂಬ ನಿಯಮವೇ ಜನಸಾಮಾನ್ಯನ ಸ್ವಾತಂತ್ರ್ಯಹರಣದ ಚರಮಗೀತೆಯಾಗಿರುವಾಗ, ಇಂತದುದರಲ್ಲಿ ನಮ್ಮ ನ್ಯಾಯಾಂಗವು ಈ ರೀತಿಯ ಸಾರ್ವಜನಿಕ ಮೊಕದ್ದಮೆಗಳನ್ನು ಹೂಡುವ ಧೈರ್ಯವನ್ನು ತೋರುವವರಿಗೆ ಪ್ರೋತ್ಸಾಹಿಸದೆ ಅವರುಗಳಿಗೆ ದಂಡದ ಮರ್ಮಾಘಾತವನ್ನು ವಿಧಿಸಬೇಕೆಂಬ ಪ್ರಸ್ತಾಪದ ಮೂಲಕ ಸ್ವಾತಂತ್ರ್ಯದ ಗೋರಿಗೆ ಅಡಿಪಾಯವನ್ನು ಹಾಕುತ್ತಿದೆ. ಇದಕ್ಕೆ ಸುಪ್ರೀಂ ಕೋರ್ಟ್ ಕೊಡುವ ಕಾರಣವೇನು ಗೊತ್ತೆ? ಈ ಸಿಲ್ಲಿ ಮೊಕದ್ದಮೆಗಳು ಅಮೂಲ್ಯವಾದ ಕೋರ್ಟ್ ಸಮಯವನ್ನು ಹಾಳು ಮಾಡುತ್ತಿವೆಯಂತೆ. ರಿಚರ್ಡ್ ಗಿಯರ್ ಕಿಸ್ಸಿನ ವಿಚಾರ, ಖುಶ್ಬೂ ಕನ್ಯಾತನದ ಬಗ್ಗೆ ಮಾತನಾಡಿದ್ದು, ಮತ್ತಿನ್ನ್ಯಾವಳೋ ನಟಿ ಹಾಕಿದ್ದ ಸ್ಕರ್ಟಿನ ಅಳತೆಯ ವಿಷಯ ಇವುಗಳೆಲ್ಲಾ ಯಾರಾದರೂ ಒಪ್ಪುವಂತಹ ಸಿಲ್ಲಿ ವಿಷಯಗಳೇ. ಆದರೆ ಈ ಕೇಸುಗಳೆಲ್ಲ ಕೋರ್ಟಿನ ಫೀ ಕಟ್ಟಿಯೇ ತಾನೆ ಕಟಕಟೆಗೆ ಬಂದಿದ್ದುದು. ಹಾಗಿದ್ದಾಗ ಸಿಬ್ಬಂದಿಗಳನ್ನು ಹೆಚ್ಚಿಸಿ ತ್ವರಿತವಾಗಿ ಮೊಕದ್ದಮೆಗಳನ್ನು ವಿಲೇವಾರೀ ಮಾಡಬೇಕೇ ಹೊರತು, ಮೊಕದ್ದಮೆಗಳನ್ನೇ ತರಬೇಡಿರೆಂದರೆ ಹೇಗೆ? ಸರಿ, ಹಾಗಿದ್ದಾಗ ಕೋರ್ಟ್ ಯಾಕೆ ಖುದ್ದಾಗಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬಾರದು? ನಿತ್ಯ ದಿನಪತ್ರಿಕೆಗಳನ್ನು ಓದಿದರೇ ಸಾಕು ನಿತ್ಯವೂ ಇಪ್ಪತ್ತು ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಬಹುದು. ಹಾಗೆ ದಾಖಲಿಸಿಕೊಂಡು ಸಂಬಂಧಪಟ್ಟವರಿಂದ ಸಮಜಾಯಿಷಿ ಕೇಳಿ ವ್ಯವಸ್ಥೆಯನ್ನು ಸ್ಥಿರಗೊಳಿಸುತ್ತ ಅರ್ಥಬದ್ಧ ಸ್ವಾತಂತ್ರ್ಯವನ್ನು ನಿರೂಪಿಸುತ್ತ ನ್ಯಾಯಾಲಯಗಳೇಕೆ ಬಲಿಷ್ಟ ಭಾರತವನ್ನು ಕಟ್ಟಬಾರದು. ಅಥವಾ ಈ ವ್ಯವಸ್ಥೆ ಕೂಡಾ ಭಾರತದ ಇತರೆ ವ್ಯವಸ್ಥೆಗಳಂತೆಯೇ ಆಗುತ್ತಿದೆಯೇ!

ಹಿಂದೊಮ್ಮೆ ಯಾವುದೋ ಕಾಲದಲ್ಲಿ ಯಾವನೋ ರಾಜನೊಬ್ಬ ತನ್ನ ಪ್ರಜೆಗಳಿಗೆ ಸುಲಭದಲ್ಲಿ ನ್ಯಾಯವು ದೊರಕಬೇಕೆಂಬ ಸದುದ್ದೇಶದಿಂದ ಒಂದು ದೊಡ್ಡ ಘಂಟೆಯನ್ನು ತನ್ನ ಅರಮನೆಯ ಮುಂದೆ ನೇತು ಹಾಕಿಸಿದ್ದನಂತೆ. ಯಾರಿಗೇ ನ್ಯಾಯ ಬೇಕಾದರೂ ಯಾವುದೇ ಹೊತ್ತಿನಲ್ಲಾದರೂ ಬಂದು ಆ ಘಂಟೆಯನ್ನು ಬಾರಿಸಿದರೇ ಕೂಡಲೇ ಅವರ ಅಹವಾಲನ್ನು ಕೇಳಿ ನ್ಯಾಯ ದೊರಕಿಸುವ ಪರಿಪಾಠವನ್ನು ಬೆಳೆಸಿದ್ದನಂತೆ. ಆ ರೀತಿ ಇಂದು ಭಾರತಕ್ಕೆ ನಮ್ಮ ನ್ಯಾಯಾಂಗವು ಘಂಟೆಯನ್ನು ಜೋಡಿಸಬೇಕಾದ ತುರ್ತು ಅನಿವಾರ್ಯತೆ ಇದೆ.

ಹೀಗೆಲ್ಲ ನನ್ನ ಸ್ವಗತ ಯೋಚನಾ ಲಹರಿ ಸಾಗುತ್ತಿರುವಾಗ " ಪಲ್ ಬರ್ ಕೆ ಲಿಯೇ ಕೋಯಿ ಹಮೇ ಪ್ಯಾರ್ ಕರಲೇ ಜೂಟಾ ಹಿ ಸಹೀ" ಎಂಬ ಹಿಂದಿ ಹಾಡು ಕೇಳಿಸಿತು. "ಇದ್ಯಾವುದಪ್ಪ ನನ್ನ ಹಳ್ಳಿ ಹಾಡು ಹಾಡುತ್ತಿರುವುದು ಅದೂ ನಾನಿಳಿದುಕೊಂಡಿದ್ದ ಶಾರ್ಲೆಟ್ ಡೌನ್ ಟೌನ್ ನ ವೆಸ್ಟಿನ್ ಹೋಟೆಲ್ಲಿನಲ್ಲಿ!" ಎಂದು ಆಶ್ಚರ್ಯದಿಂದ ನೋಡಿದಾಗ ಬಾರ್ ನ ಟೀವಿಯಲ್ಲಿ ಸಿಂಪ್ಸನ್ ಧಾರಾವಾಹಿಯ (ಭಾರತಕ್ಕೆ ಸಿಂಪ್ಸನ್ ನ ಕೆಲಸ ಔಟ್ ಸೋರ್ಸ್ ಆದ ಕಂತು) ಕೊನೆಯಲ್ಲಿ ಬಂದಂತಹ ಸಂಗೀತ ಅದಾಗಿತ್ತು. ಬಹುಶಃ ನಮ್ಮ ವ್ಯವಸ್ಥೆಗಳನ್ನು ಸರಿಪಡಿಸುವ ಶಕ್ತಿ ಇರುವ ನ್ಯಾಯಾಂಗವು ಮತ್ತು ವ್ಯವಸ್ಥೆಯ ವಿರುದ್ಧ ಜಡವಾಗಿರುವ ನಾವುಗಳೂ ದೇಶವನ್ನು ಗಾಢವಾಗಿ "ಪಲ್ ಬರ್ ಕೆ ಲಿಯೆ" ಪ್ರೀತಿಸಬೇಕೆನೋ?

ಅಣಕ:

ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

ವಿಗ್ಗಿನ ಸುಂದರಾಂಗ, ವಿಗ್ಗಿಲ್ಲದ ಕಿಲಾಡಿರಂಗ!

ಇತ್ತೀಚಿನ ಸೆನ್ಸೇಷನ್ ಸುದ್ದಿಯಾದ ಮಾಜಿ ಮಂತ್ರಿ ವಿಶ್ವನಾಥರ ಆತ್ಮಕಥನದ ಪ್ರಸಂಗವನ್ನು ತಿಳಿದಿದ್ದೀರಷ್ಟೇ. ನಾನೊಬ್ಬ ವೃತ್ತಿಪರ ಅಂಕಣಕಾರನಲ್ಲದ್ದರಿಂದ ಈ ವಿಷಯದ ಬಗ್ಗೆ ಬರೆಯುವ ಮುನ್ನ ನನ್ನ ಹೋಂವರ್ಕ್ ಮಾಡಿಯೇ ಬರೆಯುತ್ತಿದ್ದೇನೆ. ಕೆಲ ವೃತ್ತಿಪರ ಅಂಕಣಕಾರರಿಗೆ ಹೂಸಿನ ವಾಸನೆ ಸಿಕ್ಕರೂ ಸಾಕು, ಅದು ಹೆಂಗಸಿನದೇ ಗಂಡಸಿನದೇ, ಆ ವ್ಯಕ್ತಿ ಏನನ್ನು ತಿಂದಿರಬಹುದು, ಎಲ್ಲಿ ತಿಂದಿರಬಹುದು, ಆಗ ಅವರೊಂದಿಗೆ ಯಾರ್‍ಯಾರಿದ್ದರು ಎಂಬುದನ್ನೆಲ್ಲ ಗ್ರಹಿಸುವ ಚಾಣಾಕ್ಷತೆ ಇರುತ್ತದೆ! ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರನ್ನೂ ಮೀರಿಸುವಷ್ಟು ಪತ್ತೇದಾರಿಕೆ ಚಮತ್ಕಾರವನ್ನು ಮೆರೆಯುವ ಇವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ವ್ಯಕ್ತಿಗಳು ತಮಗೆ ಬಹುಕಾಲದಿಂದ ಚಿರಪರಿಚಿತರೆನ್ನುವಷ್ಟು ತಮ್ಮ ಲೇಖನದಲ್ಲಿ ಬರೆದುಕೊಳ್ಳುತ್ತಾರೆ! ನನ್ನಲ್ಲಿ ಆ ಶಕ್ತಿ ಇಲ್ಲ. ಬರೆಯುವ ಮುನ್ನ ಸಾಕಷ್ಟು ಹೋಂವರ್ಕ್ ಮಾಡಲೇ ಬೇಕಾದ ಅನಿವಾರ್ಯತೆ ನನಗಿದೆ! ಹಾಗೆ ನೋಡಿದರೆ ಹೆಚ್. ವಿಶ್ವನಾಥರ ’ಹಳ್ಳಿ ಹಕ್ಕಿಯ ಹಾಡು’ ಇಷ್ಟೊಂದು ಸಂಚಲನವನ್ನುಂಟು ಮಾಡುವ ’ಬರ್ಡ್ ಆಫ್ ಪ್ಯಾರಡೈಸ್’ ಆಗಿರದೆ, ನಮ್ಮ ನಿಮ್ಮಲ್ಲಿ ಕಾಣುವ ಬಾನಾಡಿ ಹಕ್ಕಿಯ ಹಾಡಾಗಿದೆ. ಇದೊಂದು ಸುದ್ದಿಯಾಗಲೇ ಬಾರದಂತಹ ಸಂಗತಿ. ಸಾರ್ವಜನಿಕ ರಂಗಗಳನ್ನು ತಮ್ಮ ಕಾರ್ಯಕ್ಷೇತ್ರವಾಗಿ ಆರಿಸಿಕೊಳ್ಳುವ ಜನ, ತಮ್ಮ ಕೆಲ ವೈಯುಕ್ತಿಕ ಜೀವನದ ಭಾಗವು ಕೂಡ ಸಾರ್ವತ್ರಿಕವಾಗುತ್ತದೆಂಬುದನ್ನು ಅರಿತೇ ಆ ರಂಗಗಳಿಗೆ ಬರಬೇಕು.

ಇಲ್ಲಿ ವಿರೋಧ ವ್ಯಕ್ತವಾಗಿರುವ ಅಂಶವೆಂದರೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿಯೋರ್ವರು ಮತ್ತು ಮಾಜಿ ಕನ್ನಡ ನಾಯಕಿ ನಟಿಯೋರ್ವರ ಪರಸ್ಪರ ಪ್ರೇಮಜಾಲದಲ್ಲಿ ಬಿದ್ದಿದ್ದರೆಂದೂ, ಕರ್ನಾಟಕದಲ್ಲಿ ಜನಜನಿತವಾಗಿರುವ ಸಂಗತಿಯನ್ನು ವಿಶ್ವನಾಥರು ಆ ಮಾಜಿ ಮುಖ್ಯಮಂತ್ರಿಯವರೊಂದಿಗಿದ್ದ ತಮ್ಮ ಸಲುಗೆಯಿಂದ ಅವರೊಡನೆ ಈ ವಿಷಯವನ್ನು ಪ್ರಾಸ್ತಾಪಿಸಿದ್ದಾಗಿ ಹೇಳಿಕೊಂಡಿದ್ದಾರೆ. ವಿಶ್ವನಾಥರು ಈ ಸಂಬಂಧವನ್ನು ಧೃಢೀಕರಿಸುವ ಯತ್ನವನ್ನಾಗಲೀ, ಈ ಈರ್ವರ ತೇಜೋವಧೆಯನ್ನು ಮಾಡುವ ಪ್ರಯತ್ನವನ್ನಾಗಲೀ ಮಾಡಿಲ್ಲ. ಇದು ತಮ್ಮ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವಿನ ಸಲುಗೆಯನ್ನು ಹೇಳುವ ಪ್ರಯತ್ನವಾಗಿದೆಯೇ ಹೊರತು ಮತ್ಯಾವ ಮಹತ್ವವನ್ನೂ ಪಡೆದಿಲ್ಲ.

ಈ ಹಿಂದೆ ನಾವು ನೀವೆಲ್ಲ ಲಂಕೇಶ್ ಪತ್ರಿಕೆ ಮತ್ತಿತರ ಪತ್ರಿಕೆಗಳಲ್ಲಿ ಗುಂಡೂರಾವ್ ಮತ್ತು ಭರತನಾಟ್ಯ ಕಲಾವಿದೆಯೋರ್ವರ ಸಂಬಂಧ, ಜೆ.ಹೆಚ್.ಪಟೇಲರ ಸಿನಿಮಾನಟಿಯೋರ್ವರ ಸಂಬಂಧ ಮತ್ತು ಡಾ: ರಾಜ್ ಮತ್ತು ಲೀಲಾವತಿಯವರ ಕುರಿತು ಸಾಕಷ್ಟು ಓದಿದ್ದೇವೆ. ಸಾರ್ವಜನಿಕ ರಂಗದಲ್ಲಿದ್ದು ಇದನ್ನೆಲ್ಲ ಅರಿತಿದ್ದ ಅವರುಗಳೂ ಯಾವ ಪ್ರತಿಭಟನೆಯನ್ನು ತೋರಿರಲಿಲ್ಲ. ಹಾಗೆಯೇ ಈ ಈರ್ವರು ಕೂಡ ಯಾವುದೇ ಪ್ರತಿಭಟನೆಯನ್ನು ತೋರಿಲ್ಲವೆಂಬುದು ಗಮನಿಸಬಹುದಾದ ಅಂಶ!

ಆದರೆ ಇದನ್ನು ಕೆಲ ಕುಹಕಿಗಳು ಯಾರನ್ನೋ ಮೆಚ್ಚಿಸಲೆಂಬಂತೆ ಈ ಕೃತಿಯ ಬಿಡುಗಡೆಯನ್ನು ಪ್ರತಿರೋಧಿಸುತ್ತ ಪ್ರಚಾರ ಕೊಡುತ್ತಿದ್ದಾರೆ ಮತ್ತು ತೆಗೆದುಕೊಳ್ಳುತ್ತಿದ್ದಾರೆ.

ಇನ್ನು ಈ ವಿಷಯದ ಸತ್ಯಾನ್ವೇಷಣೆಯಲ್ಲಿ ಈ ಅಪವಾದವನ್ನು ಹೊತ್ತ ಮುಖ್ಯಮಂತ್ರಿಗಳನ್ನು, ಒಬ್ಬ ವಿಗ್ ಧರಿಸುವ ವ್ಯಕ್ತಿಯಾಗಿ ಮನೋಶಾಸ್ತ್ರದ ಪರಿಧಿಯಲ್ಲಿ ವಿಶ್ಲೇಷಿಸಿದರೆ, ಇದು ಅವರಲ್ಲಿನ ಕೀಳರಿಮೆಯನ್ನು ಮುಚ್ಚಿ ಹಿರಿಮೆಯನ್ನು ಬೆಳೆಸುತ್ತದೆಂದೋ, ಅವರು ಸಂಗತಿಗಳನ್ನು ಮುಚ್ಚಿಡುವ ವ್ಯಕ್ತಿತ್ವದರೆಂದೋ ಅಭಿಪ್ರ್‍ಆಯಿಸಬಹುದು. ಆದರೆ ಕರ್ನಾಟಕದ ಬಡ ಬೋರೇಗೌಡನ ಸೇವೆಯನ್ನು ಮಾಡಲು ರಾಜಕೀಯ ರಂಗದಲ್ಲಿರುವ ವ್ಯಕ್ತಿಯೋರ್ವರು, ’ಪಾಪ್’ ಜಗತ್ತಿನ ತಾರೆಯಂತೆ ವಿಗ್ ಧರಿಸುವುದು, ತಮ್ಮ ವಿಚಾರಗಳನ್ನು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳುವುದು, ಪ್ರತಿಭಟನೆ, ಗಲಾಟೆಗಳಿಗೆಲ್ಲ ತಮ್ಮ ಬಲಗೈ ಬಂಟನೆಂದೇ ಇರುವ ಯುವ ನಾಯಕರೋರ್ವರನ್ನು ಮುಂದಿಟ್ಟು ನಡೆಸುವುದು...ಇತ್ಯಾದಿ ಅವರ ವ್ಯಕ್ತಿತ್ವದ ಮೇಲೆ ತೀವ್ರ ಗುಮಾನಿಯನ್ನಂತೂ ಹುಟ್ಟಿಸುತ್ತವೆ!

ಇನ್ನು ವಿಶ್ವನಾಥರು ತಮ್ಮ ಪುಸ್ತಕದಲ್ಲಿ ತಮ್ಮ ಕಿಲಾಡಿತನ, ದೌರ್ಬಲ್ಯ, ಅದರಿಂದೊದಗಿದ ಅನಿವಾರ್ಯತೆಗಳು, ತಮ್ಮ ಎರಡು ವಿವಾಹಗಳು ಇನ್ನೆಲ್ಲವನ್ನೂ ತೆರೆದಿಡುತ್ತ ಒಬ್ಬ ಸಂವೇದನಾಶೀಲ ವ್ಯಕ್ತಿಯಾಗಿ ಗೋಚರಿಸುತ್ತ ಪ್ರಭಾವೀ ರಾಜಕಾರಣಿಯೆನಿಸದೆ ನಮ್ಮ ನಿಮ್ಮೊಳಗಿನ ವಿಶಿಷ್ಟ ವ್ಯಕ್ತಿಯಾಗಿ ಕಾಣಿಸುತ್ತಾರೆ. ಇವರ ವಿಚಾರಧಾರೆ, ಭಾಷಣಗಳನ್ನು ಕೇಳಿದಾಗ ಇವರೋರ್ವ ಸಾಹಿತಿಯಾಗಿರಬೇಕಿತ್ತೆಂದೇ ಅನಿಸುತ್ತದೆ.

ಹಾಗಂತ ಇಲ್ಲಿ ಪ್ರತಿಭಟಿಸಬೇಕಾದ ಸಂಗತಿಯೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಇಲ್ಲಿ ಪ್ರತಿಭಟಿಸಲೇಬೇಕಾದ ಸಂಗತಿಯೊಂದಿದೆ! ಅದೇನು ಗೊತ್ತೆ?

ಸಾರ್ವಜನಿಕ ಸೇವೆಯಲ್ಲಿರುವ ಈ ರಾಜಕಾರಣೀ ವಿಶ್ವನಾಥರು ಭಾರತದ ನ್ಯಾಯಾಂಗ / ಸಂವಿಧಾನಗಳನ್ನು ಎತ್ತಿಹಿಡಿಯಬೇಕಾದ್ದು ಅವರ ಆದ್ಯ ಕರ್ತವ್ಯ. ಆದರೆ ಈ ಸಾರ್ವಜನಿಕ ಸೇವಕ ನ್ಯಾಯಬಾಹಿರವಾದ ’ಬಹು ವಿವಾಹ’ದ ಅಪರಾಧವೆಸಗಿದ್ದಾರೆ. ತಾವು ಎರಡು ವಿವಾಹವಾಗಿದ್ದೇವೆಂದು ಅವರೇ ಹೇಳಿಕೊಂಡಿರುವ ಸಾಕ್ಷಿಯಾಗಿ ಅವರ ಪುಸ್ತಕವೇ ಕೈಯಲ್ಲಿದೆ. ಇದು ನಮ್ಮ ಕಾನೂನಿನ ಪ್ರಕಾರ ಅಪರಾಧ ಕೂಡ. ಅದರಲ್ಲೂ ಈ ಅಪರಾಧವನ್ನೆಸಗಿದ ವ್ಯಕ್ತಿ ಒಬ್ಬ ಪ್ರತಿಷ್ಟಿತ ಜನ ಪ್ರತಿನಿಧಿ. ಈ ರೀತಿಯ ಜನನಾಯಕರೊಬ್ಬರು ಹೀಗೆ ಹೇಳಿಕೊಂಡರೆ ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುವುದಷ್ಟೇ ಅಲ್ಲದೆ, ಇವರನ್ನು ಹಿಂಬಾಲಿಸುವ ಮುಗ್ಧ ಜನತೆ ’ಬಹು ವಿವಾಹ’ವನ್ನು ಒಪ್ಪಿಕೊಳ್ಳಲು ಪ್ರಚೋದಿಸಿದಂತಾಗುತ್ತದೆ. ಈ ಕಾರಣಕ್ಕಾಗಿ ಇವರನ್ನು ಅಪರಾಧಿಯಾಗಿಸಿ ನ್ಯಾಯಾಲಯಕ್ಕೆ ಹೋಗಿ ತಕ್ಕ ಶಾಸ್ತಿಯನ್ನು ಮಾಡಿಸಲೇಬೇಕು. ಆದರೆ ಕುರಿಮಂದೆಯಂತೆ ಈ ಪುಸ್ತಕವನ್ನೂ ಓದದೆ, ಅದರಲ್ಲೂ ಸಲ್ಲದ ಕ್ಷುಲ್ಲಕ ಕಾರಣಗಳಿಗೆ ಪ್ರತಿಭಟಿಸುವುದಂತೂ ನಮ್ಮಗಳ ಅಧಃಪತನವನ್ನು ಮೆರೆಸುವ ಸಂಕೇತವೇ ಆಗಿದೆ. ಒಟ್ಟಾರೆ ಈ ಪುಸ್ತಕಕ್ಕಂತೂ ಭಾರೀ ಉಚಿತ ಪಬ್ಲಿಸಿಟಿ!

ಅಣಕ:

ಕಳೆದೆರಡು ವಾರಗಳ ಹಿಂದೆ ಪೀಠಗಳ ಬಗ್ಗೆ ಬರೆದ ಲೇಖನದ ಅಣಕ ನೆನಪಿದೆಯಷ್ಟೇ? ಅಲ್ಲಿ ಅಣಕವಾಗಿ ಬರೆದದ್ದನ್ನು ಶ್ರೀಗಳು, ತಮ್ಮ ಅಗ್ರ ಶಿಷ್ಯೋತ್ತಮರೋರ್ವರನ್ನು ಪೀಠಾಧಿಪತಿಗಳಾಗಿ ಒಪ್ಪಿಕೊಳ್ಳದ ಪಂಚಮಸಾಲೀ ಭಕ್ತಮಂಡಲಿಯನ್ನು ಥೇಟ್ ಬ್ರಿಟಿಷರ ಮಾದರಿಯಲ್ಲಿ ಹೋಳುಮಾಡಿ ಒಂದು ಪಂಥಕ್ಕೆ ತಮ್ಮ ಅಗ್ರ ಶಿಷ್ಯನನ್ನು ಪೀಠಾಧಿಪತಿಯಾಗಿ ಪ್ರತಿಷ್ಟಾಪಿಸಿ, ನಮ್ಮ ಅಣಕಕ್ಕೆ ಶೇಕಡಾ ನೂರು ಗುಣಕಗಳನ್ನು ಕೊಟ್ಟಿದ್ದಾರೆ! ಅಪ್ಪಟ ಬ್ರಹ್ಮಚಾರಿಗಳಾದ ಇವರು ದೇವೇಗೌಡರ ಮಾದರಿಯಲ್ಲಿ ’ಎಫ್’ ಮಾಡಿದ್ದನ್ನು ಪಂಚಮಸಾಲಿಯ ಇನ್ನರ್ಧ ಮಂಡಲಿ, ಈ ಅನಿರೀಕ್ಷಿತ ಗುರುಪ್ರಸಾದದಿಂದ ಸ್ತಂಭೀಭೂತರಾಗಿದ್ದಾರೆ! ಇದರಿಂದ ಪ್ರಭಾವಿತಗೊಂಡಿರುವ ನನ್ನ ಸ್ನೇಹಿತರೋರ್ವರು ನಮಗೂ ಕೂಡ ಪೀಠವೊಂದರ ಅನಿವಾರ್ಯತೆಯಿದ್ದು, ಎನ್.ಆರ್.ಐ. ಪೀಠದ ಬೇಡಿಕೆಯನ್ನು ಈ ಶ್ರೀಗಳ ಮುಂದಿಡುವ ಪ್ರಸ್ತಾಪವನ್ನು ಹೊಂದಿದ್ದಾರೆ. ಮೊಟ್ಟ ಮೊದಲ ಎನ್.ಆರ್.ಐ. ಪೀಠಾಧಿಪತಿಗಳಾಗ ಬಯಸುವ ಅರ್ಹ (?) ಅಭ್ಯರ್ಥಿಗಳು ಶ್ರೀಗಳನ್ನು ಸಂಪರ್ಕಿಸಬೇಕಾಗಿ ವಿನಂತಿ.