ಲಂಕೇಶ್ ಪತ್ರಿಕೆಯ "ಸಾಫ್ಟ್ ವೇರ್ ಮರ್ಡರ್!" ಒಂದು ಅವಲೋಕನ.

ಹೀಗೊಂದು ಶೀರ್ಷಿಕೆಯ ವರದಿಯನ್ನು "ಲಂಕೇಶ್ ಪತ್ರಿಕೆ"ಯಲ್ಲಿ ಓದಿದೆ. ಇಲ್ಲಿದೆ ಅದರ ಕೊಂಡಿ, http://www.ourkarnataka.com/lankesh/smurder1.htm. ಈ ವರದಿಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಒಂದು ಸಾಫ್ಟ್ ವೇರ್ ಎಂಜಿನಿಯರ್ ಜೋಡಿಯ ಕೊಲೆ ಮತ್ತು ಆತ್ಮಹತ್ಯೆಯನ್ನು ವಿಶ್ಲೇಷಿಸಲಾಗಿದೆ. ಚುಟುಕಾಗಿ ಹೇಳುವುದಾದರೆ ಇದೊಂದು ಯುವಜೋಡಿ ಪ್ರೇಮಪಾಶದಲ್ಲಿ ಬಿದ್ದು, ನಂತರ ಪರಸ್ಪರ ಆಸಕ್ತಿ ಕಳೆದುಕೊಂಡೋ ಇನ್ನೇನೋ ಕಾರಣಾಂತರವಾಗಿ, ಗಂಡ ಹೆಂಡತಿಯ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡುದುದನ್ನು ಹಿಡಿದು ಐ.ಟಿ. ರಂಗವನ್ನು ವಿಶ್ಲೇಷಿಸುದುದೇ ಆಗಿದೆ.

ಈ ವರದಿಗಾರರು ಐ.ಟಿ. ರಂಗವನ್ನು ಒಂದು ಸಾಮಾಜಿಕ ಪಿಡುಗೆನ್ನುವಂತೆ ಚಿತ್ರಿಸುತ್ತ ಇದು ಇಂದಿನ ಯುವಜನಾಂಗಕ್ಕೆ ತಟ್ಟಿದ ಶಾಪವೆಂದೇ ಪ್ರತಿಪಾದಿಸುತ್ತಾರೆ. ಇವರ ಪ್ರಕಾರ ಐ.ಟಿ. ರಂಗದ ಪಾಳಿಯ ಕೆಲಸ, ಕೆಲಸದ ಅವಧಿ, ಈ ಕೆಲಸಗಾರರ ಮೇಲೆ ತೀವ್ರ ಒತ್ತಡವನ್ನು ತಂದು ಅವರ ಆರೋಗ್ಯ, ಅದರಲ್ಲೂ "ಹೆಲ್ತ್ ಆಫ್ ಸೆಕ್ಸ್" ಕೆಟ್ಟುಹೋಗುತ್ತದಂತೆ. ಅಲ್ಲಾ ನಮ್ಮಲ್ಲಿ ಅನಾದಿಕಾಲದಿಂದಲೂ ರಾತ್ರಿ ಪಾಳಿಯ ಕೆಲಸಗಳಿರಲಿಲ್ಲವೇ? ನನಗೆ ತಿಳಿದ ಮಟ್ಟಿಗೆ ಭಾರತದಲ್ಲಿನ ಪ್ರತಿಯೊಂದು ತಯಾರಿಕಾ ಘಟಕದ ಫ್ಯಾಕ್ಟರಿಗಳು, ದಿನಪತ್ರಿಕೆ ಸಿಬ್ಬಂದಿ, ಪೊಲೀಸ್ ಇನ್ನೂ ಅನೇಕ ರಂಗಗಳಲ್ಲಿ ರಾತ್ರಿ ಪಾಳಿಯಿದೆ. ಇದೇನು ಐ.ಟಿ. ರಂಗ ಹೊಸದಾಗಿ ಭಾರತಕ್ಕೆ ತಂದಿದ್ದಲ್ಲ ಅಲ್ಲವೇ?

ಈ ವರದಿಯ ಪ್ರಕಾರ ಸತತವಾಗಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದ ನಪುಂಸಕತ್ವ ಬರುತ್ತದೆಂಬುದು ಸಾಬೀತಾಗಿದೆಯೆಂದಿದ್ದಾರೆ. ಸಾಬೀತಾಗಿರುವುದು ಲ್ಯಾಪ್ ಟಾಪ್ ಅನ್ನು ತೊಡೆಯ ಮೇಲಿಟ್ಟುಕೊಂಡು ಬಹುಕಾಲ ಕೆಲಸ ಮಾಡುವುದು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂಬುದು. ನನಗೆ ತಿಳಿದ ಮಟ್ಟಿಗೆ ಈ ಆಫೀಸುಗಳಲ್ಲಿ ಡೆಸ್ಕ್ ಟಾಪ್ ಗಳಿರುತ್ತವೆ. ಒಂದು ವೇಳೆ ಲ್ಯಾಪ್ ಟಾಪ್ ಗಳನ್ನೇ ಕೊಟ್ಟಿದ್ದರೂ ಅವುಗಳನ್ನು ಕ್ಯೂಬಿಕಲ್ಲುಗಳ ಡೆಸ್ಕ್ ಮೇಲಿಟ್ಟುಕೊಳ್ಳದೇ ಅದ್ಯಾವ ಮೂರ್ಖ ತೊಡೆಯ ಮೇಲೆ ಇಟ್ಟುಕೊಳ್ಳುತ್ತಾನೋ ಅದರಲ್ಲೂ ಈ ವರದಿಗಾರರು ತಿಳಿಸಿರುವಂತೆ ಪಕ್ಕದ ಸಹೋದ್ಯೋಗೀ ಲಲನೆ ತೊಡೆಯ ಮೇಲಿರುವಾಗ!

ಇನ್ನು ಈ ವರದಿಯ ಪ್ರಕಾರ ಸಾಫ್ಟ್ ವೇರ್ ಕಂಪೆನಿಗಳಲ್ಲಿನ ಸಿಬ್ಬಂದಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ತಮ್ಮತಮ್ಮ ಕ್ಯೂಬಿಕಲ್ಲುಗಳಲ್ಲೇ ಕಾಮಿಸುತ್ತಾರಂತೆ! ಅದಕ್ಕೆ ಪೂರಕವಾಗಿ ಈ ಕಂಪೆನಿಗಳು ಟಾಯ್ಲೆಟ್ಟುಗಳಲ್ಲಿ ಕಾಂಡೋಂ ಇಟ್ಟು ಸಹಕರಿಸುತ್ತಾರಂತೆ. ಅಲ್ಲಾ, ನಾನು ಕೂಡ ಕಳೆದ ಹದಿನಾರು ವರ್ಷಗಳಿಂದ ಈ ರಂಗದಲ್ಲಿದ್ದೇನೆ, ತಕ್ಕಷ್ಟು ಮಟ್ಟಿಗೆ ಸ್ಪುರದ್ರೂಪಿಯೂ, ಹುಡುಗಿಯರನ್ನು ಸೆಳೆಯಬಲ್ಲ ಚತುರನೂ, ತುಂಟನೂ ಆಗಿ ಕನ್ನಡ ಸಿನೆಮಾಗಳ ನಾಯಕರುಗಳಿಗಿಂತ ಒಂದು ಕೈ ಮೇಲಾಗಿಯೇ ಇದ್ದೇನೆ. ಆದರೂ ನನಗಾವ ಸಹೋದ್ಯೋಗಿ ಈ ರೀತಿಯಾಗಿ ಆಟವಾಡಲು ಸಿಕ್ಕಿಲ್ಲ! ಅದನ್ನು ಬಿಡಿ, ನಾನು ಕೂಡ ಸಾಕಷ್ಟು ಕಂಪೆನಿಗಳನ್ನು ಬದಲಾಯಿಸಿದ್ದೇನೆ. ಆದರೆ ಇದುವರೆಗೂ ಒಂದೂ ಕಂಪೆನಿಯ ಟಾಯ್ಲೆಟ್ಟಿನಲ್ಲೂ ಕಾಂಡೋಂ ನೋಡಿಲ್ಲ.

ಐ.ಟಿ. ಕಂಪೆನಿಗಳು ಏರ್ಪಡಿಸುವ ಕಂಪೆನಿ ಪಾರ್ಟಿಗಳನ್ನು ಕಾಮಕೂಟಗಳಾಗಿಯೂ, ವೃತ್ತಿಪರ ವ್ಯಕ್ತಿತ್ವ ವಿಕಾಸನಾ ಶಿಬಿರದಂತಹ ಟ್ರೈನಿಂಗ್ ಗಳನ್ನು (ವರ್ಕ್ / ಲೈಫ್ ಬ್ಯಾಲೆನ್ಸ್), ಈ ನೌಕರಿಯು ತರುವ ಮಾನಸಿಕ ಒತ್ತಡ/ಪ್ರತಿಕೂಲಗಳಿಗೆ ಅಡ್ಜೆಸ್ಟ್ ಆಗುವ ಮಾನಸಿಕ ಕೌನ್ಸೆಲಿಂಗ್ ಎಂದೂ ಅಭಿಪ್ರಾಯಿಸಿ ವರದಿಸಿದ್ದಾರೆ. ಆಲ್ಲಾ ಈ ರೀತಿಯ ಫ್ಯಾಮಿಲಿ ಕೌನ್ಸೆಲಿಂಗ್, ಸೈಕಿಯಾಟ್ರಿ ಕೌನ್ಸೆಲಿಂಗ್ ಗಳಂತಹ ಸೌಲಭ್ಯಗಳೂ ಈ ಹಿಂದೆಯೇ ಅನೇಕ ಫ್ಯಾಕ್ಟರಿಗಳಲ್ಲಿ ಇದ್ದವು. ಈ ಸೌಲಭ್ಯಗಳಲ್ಲಿ ಕೆಲವನ್ನು ಕಾರ್ಮಿಕ ಕಲ್ಯಾಣ ಇಲಾಖೆ ನಿರ್ದೇಶಿಸಿದರೆ, ಕೆಲವನ್ನು ಆಯಾಯ ಕಂಪೆನಿಗಳೇ ಮುಂದಾಗಿ ಒದಗಿಸುತ್ತವೆ. ಇನ್ನು ಈ ವರದಿಗಾರರು ಹೇಳುವಂತಹ ಆಧುನಿಕ ವಾತ್ಸಾಯನ ಸೂತ್ರಗಳನ್ನು ಕೇವಲ ಟೆಕ್ಕಿಗಳೇ ಅಲ್ಲದೆ ಬೆಂಗಳೂರಿನ ಎಲ್ಲಾ ರಂಗದ ಯುವಪೀಳಿಗೆ ಪ್ರಯೋಗಿಸುತ್ತಿದೆ. ಈ ರೀತಿಯ ಪ್ರಯೋಗಗಳಲ್ಲಿ ಹದಿಹರೆಯದ ಯುವಜನಾಂಗವನ್ನು ಬಿಡಿ, ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯರು ಕನ್ನಡ ಸೀರಿಯಲ್ ಮಾದರಿ ಮಾಡಿ ತೋರಿಸಿದ್ದಾರೆ!

ಇನ್ನೂ ಐ.ಟಿ ರಂಗದವರು ವಾಸ್ತವಿಕವಾಗಿ ಈ ರೀತಿ ಇರುವರೇ ಎಂಬುದನ್ನು ನಾವುಗಳು ಅವಲೋಕಿಸೋಣ. ನಾನು ನೋಡಿದ ಹಾಗೆ ಬಹುಪಾಲು ಸಾಫ್ಟ್ ವೇರ್ ಇಂಜಿನಯರರುಗಳು ಗಾಂಧಿಯಂಥವರು! ಕೆಲ ಸಾಫ್ಪ್ ವೇರ್ ಇಂಜಿನಿಯರರುಗಳು ತಂಡಗಳನ್ನು ಕಟ್ಟಿಕೊಂಡು ಪರಿಸರ ಸಂರಕ್ಷಣೆ, ಜನ ಜಾಗೃತಿಯಂಥಹ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಗಾಗಿಯೇ ನೀವು ಒಮ್ಮೊಮ್ಮೆ ಈ ಐ.ಟಿ. ಜನ ಮುತ್ತೆತ್ತಿಯ ಪರಿಸರವನ್ನು ಗುಡಿಸಿದ್ದು, ಅಲಸೂರು ಕೆರೆಯನ್ನು ಶುದ್ಧಿಗೊಳಿಸಿದ್ದು, ಮಡಿವಾಳ ಕೆರೆಯ ಪರಿಸರವನ್ನು ಗುಡಿಸಿದ್ದು ಮುಂತಾದ ಸುದ್ದಿಗಳನ್ನು ಓದುತ್ತಿರುತ್ತೀರಿ. ಅದರಲ್ಲೂ ಕನ್ನಡಿಗ ಐ.ಟಿ. ಮಂದಿಯಂತೂ ಕನ್ನಡ ಹೋರಾಟಗಳಿಗೆ ಪರೋಕ್ಷವಾಗಿ ಬ್ಲಾಗುಗಳು, ಕನ್ನಡ ಇಂಟರ್ ನೆಟ್ ಸೈಟುಗಳು, ಉಚಿತ ತಾಂತ್ರಿಕ ನೆರವು............ಇನ್ನೂ ಬೆಳೆಯುತ್ತದೆ ಲಿಸ್ಟು. ಅದರಲ್ಲೂ "ಬರಹ" ಕನ್ನಡ ತಂತ್ರಾಂಶವನ್ನು ರಚಿಸಿ, ಉಚಿತವಾಗಿ ಹಂಚುತ್ತಿರುವ ಶೇಷಾದ್ರಿ ವಾಸು ಅವರನ್ನು ಗುರುತಿಸಿ ಎಂದಾದರೂ ಪತ್ರಕರ್ತರಾಗಲೀ, ರಾಜಕಾರಣಿಗಳಾಗಲೀ ಸನ್ಮಾನಿಸಿದ್ದಾರೆಯೇ? ಕನ್ನಡದಲ್ಲಿರುವ ಸುಮಾರು ಆರುನೂರರಷ್ಟು ಬ್ಲಾಗುಗಳಲ್ಲಿ ಪ್ರಬುದ್ಧ ಕನ್ನಡ ಅರಳುತ್ತಿದೆ. ನನ್ನ ಅನಿಸಿಕೆಯ ಪ್ರಕಾರ ಇದರಲ್ಲಿ ೫೦% ಐ.ಟಿ.ಗಳೇ ಎಂದುಕೊಳ್ಳುತ್ತೇನೆ. ಮುಂದೆ ಬಂದರೆ ಹಾಯದ, ಹಿಂದೆ ಬಂದರೆ ಒದೆಯದ ಈ ಸುಸಂಸ್ಕೃತ ಐ.ಟಿ. ಗಳ ನೆಪವೊಡ್ಡಿ, ಅದರಲ್ಲೂ ಬೆಂಗಳೂರಿನ ಜನಸಂಖ್ಯೆಯ ಕೇವಲ ೪% ಇರುವ ಈ ಐ.ಟಿ. ಯವರ ನೆಪಮಾಡಿ ಬೆಂಗಳೂರನ್ನು ತುಟ್ಟಿಯಾಗಿಸಿದ್ದು....ಇದಕ್ಕೆಲ್ಲಾ ಕಾರಣರಾರು?

ಒಟ್ಟಾರೆ, ಪ್ರಾಮಾಣಿಕ ಸಂಪಾದನೆಯ ಈ ಐ.ಟಿ.ಯವರನ್ನು ಈ ವರದಿ ಸಂಪೂರ್ಣವಾಗಿ ನೀತಿಗೆಟ್ಟು ಅಧೋಗತಿಯಲ್ಲಿರುವ ಯಾವುದೋ ಇನ್ನೊಂದು ಪ್ರಾಣಿ ಪ್ರಭೇಧದಂತೆ ಅರ್ಥೈಸಲಾಗಿದೆ.

ಎಲ್ಲಾ ರಂಗಗಳಲ್ಲಿರುವಂತೆಯೇ ಇಲ್ಲೂ ಕೆಲವು ಹೊರತುಗಳಿರಬಹುದು. ಬೆಂಗಳೂರಿನ ಅಧೋಗತಿಗೆ ಅವುಗಳೇ ಕಾರಣವಲ್ಲ. ಸಾಮಾನ್ಯ ಜನತೆಗೆ ಇತರೆ ಉದ್ಯೋಗಗಳಷ್ಟು ಸರಳವಾಗಿ ಈ ಸಾಫ್ಟ್ ವೇರ್ ಪ್ರೋಗ್ರ್ಯಾಮ್ ಉದ್ಯೋಗ ಎಂಬುದು ಅರ್ಥವಾಗದುದೋ, ಅಥವಾ ಅದನ್ನು ಅರ್ಥೈಸಲು ಕ್ಲಿಷ್ಟವೆನಿಸುವುದೋ ಒಟ್ಟಾರೆ ಅದೊಂದು ಕುತೂಹಲಕರ ಉದ್ಯೋಗವೆನಿಸಿದೆ. ಆ ಒಂದು ರೀತಿಯ ಕುತೂಹಲವನ್ನು, ಈ ರೀತಿಯ ಶೋಷಕ ಲೇಖನಗಳು ರೋಚಕಗೊಳಿಸುತ್ತಿವೆ.

ಹಾಗಂತ ಈ ಐ.ಟಿ.ಮಂದಿಯಿಂದ ಏನೂ ಅನರ್ಥವೇ ಆಗಿಲ್ಲವೇ? ಆಗಿದೆ. ಕಾಫಿಗೆ ರೂ.೨೫, ದೋಸೆಗೆ ರೂ.೧೦೦, ಕೊಡಗಿನ ಮನೆಗಳಲ್ಲಿ ಉಳಿಯಲು ಪಂಚತಾರಾ ಹೋಟೇಲುಗಳ ದರ ಕೊಡುವುದು........ಒಟ್ಟಾರೆ ಬೆಲೆಯೇರಿಕೆಗೆ ಇವರ ಕೊಡುಗೆ ಅಲ್ಪಮಟ್ಟಿಗೆ ಇದ್ದರೂ ಅದು ಕೂಡಾ ಹೋರಾಟ ಗುಣವಿಲ್ಲದ ಇವರುಗಳ ಶೋಷಣೆಯೇ ಆಗಿದೆ. ಬೆಲೆಯೇರಿಸಿ ಜೇಬು ತುಂಬಿಸಿಕೊಳ್ಳುವ ಹೋಟೆಲ್ ಮಾಲೀಕರು, ಎಸ್ಸೆಸ್ಸೆಲ್ಸಿ ಫೇಲಾಗಿ ಮನೆ ಬ್ರ್‍ಓಕರುಗಳಾಗಿ ಝಣ ಝಣ ರೂಪಾಯಿ ಎಣಿಸುವ ರಿಯಲ್ ಎಸ್ಟೇಟ್ ಧಂಧೆಯವರು, ತಮ್ಮ ತಮ್ಮ ಮನೆಯನ್ನೇ ಹೋಂಸ್ಟೇಗಳಾಗಿಸಿಕೊಂಡಿರುವ ಕಾಫೀ ಬೆಳೆಗಾರರೂ ಪ್ರತಿಯೊಬ್ಬರೂ ಈ ಐ.ಟಿ ಮಂದಿಯನ್ನು ಶೋಷಿಸುವವರೇ.

ಇನ್ನೂ ನೇರ ವಿಚಾರಕ್ಕೆ ಬಂದರೆ ಈ ವರದಿಗಾರರ ಪ್ರಕಾರ ಐ.ಟಿ. ಹಾದರಕ್ಕೆ ಹಾಸುಗಲ್ಲಾಗಿದೆ ಎಂಬುದು. ಅಲ್ಲಾ ಈ ರೀತಿಯ ಕೊಲೆ/ಆತ್ಮಹತ್ಯೆಯ ತ್ರಿಕೋನ ಪ್ರೇಮಗಳ ಕಥೆ ಯಾವ ರಂಗದಲ್ಲಿಲ್ಲ. ಹಾದರ ಶಿಲಾಯುಗದ ಕಾಲದಿಂದ ಇಂದಿನ ಐ.ಟಿ ಯುಗದವರೆಗೆ ಹಾಸುಹೊಕ್ಕಾಗಿದೆ. ನಮ್ಮ ಜನಪದದ ಜೋಕುಮಾರಸ್ವಾಮಿ ಕತೆಯಿಂದ ಇಂದಿನ ಪತಿ, ಪತ್ನಿ ಔರ್ ವೋ ರೀತಿಯ ಸಿನಿಮಾ ಕತೆಗಳವರೆಗೆ, ಆಫ್ರಿಕಾದಿಂದ ಅಮೇರಿಕಾವರೆಗೆ, ಯೇಸು-ಮೇರಿ ಮ್ಯಾಡಲೈನ್ ರಿಂದ, ಗಾಂಧಿ-ಸಾವಿತ್ರಿದೇವಿ (ಫ್ರೆಂಚ್ ಮಹಿಳೆ), ನೆಹರೂ-ಎಡ್ವಿನಾರವರೆಗೆ, ಇಂದಿನ ಎಷ್ಟೋ ಮಠಮಾನ್ಯ / ಚರ್ಚುಗಳವರೆಗೆ ಇದು ಗುಪ್ತಗಾಮಿನಿಯಾಗಿ ಹರಿದಿದೆ. ಎಲ್ಲೆಲ್ಲಿ ಮನುಜರಿರುವರೋ ಅಲ್ಲೆಲ್ಲಾ ಹಾದರ ಹಾಸುಹೊಕ್ಕಾಗಿದೆ.

ಅಷ್ಟೆಲ್ಲಾ ಏಕೆ ಈ ವರದಿಗಾರರ ಪತ್ರಿಕೆಯ ಸಂಸ್ಥಾಪಕರಾದ ಲಂಕೇಶ್ ಕೂಡ ತಮ್ಮ ಪಲ್ಲಂಗ ಪುರಾಣಗಳನ್ನು ಜಿಮ್ ಕಾರ್ಬೆಟ್ ನ ಸಾಹಸಗಳಂತೆ ಹೇಳಿಕೊಂಡಿಲ್ಲವೇ? ಐ.ಟಿ. ಯವರು ಮಾಡಿದರೆ ಅದು ಹಾದರ, ಪತ್ರಕರ್ತರೂ/ಸಾಹಿತಿಗಳೂ ಮಾಡಿದರೆ ಅದು ಅಡ್ವೆಂಚರ್ರೇ? ಇನ್ನು ಲಿವಿಂಗ್ ಟುಗೆದರ್ ವಿಚಾರಕ್ಕೆ ಬರುವುದಾದರೆ ಹಿಂದೆ ಸ್ವಯಂವರಗಳಿರುತ್ತಿದ್ದವು. ಕಾಲ ಬದಲಾದಂತೆ ಜೀವನ ಶೈಲಿ ಬದಲಾಗುತ್ತಾ ನಡೆಯುತ್ತದೆ. ಆದರೆ ಈ ರೀತಿಯ ಲಿವಿಂಗ್ ಟುಗೆದರ್ ಗೆ ಒಗ್ಗುವ ಜೋಡಿಯ ಪ್ರಬುದ್ಧತೆಯ ಕುರಿತು ಚರ್ಚಿಸಿದರೆ ಒಪ್ಪಬಹುದು. ಐ.ಟಿ. ಭಾರತಕ್ಕೆ ಬರುವ ಬಹು ಮುಂಚೆಯೇ "ಪತ್ರಕರ್ತೆ" ಶೋಭಾ ಡೇ ಈ "ಲಿವಿಂಗ್ ಟುಗೆದರ್" ಅಳವಡಿಸಿಕೊಂಡಿದ್ದರು! ಆ ರೀತಿಯ ಪ್ರಬುದ್ಧತೆ ಇರುವುದರಿಂದಲೇ "ಲಂಕೇಶರ ಪುತ್ರಿಯ ಲಿವಿಂಗ್ ಟುಗೆದರ್" ಕುರಿತು ಯಾರೂ ಕೆದಕಿಲ್ಲ. ಅದು ಅವರ ವೈಯುಕ್ತಿಕ ಆಯ್ಕೆ. ಅದನ್ನು ಗೌರವಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಹಾಗೆ ಸಮಾಜಮುಖಿಯಾಗಿ ಚರ್ಚಿಸುವುದಾದರೆ ಅದನ್ನು ತಂದವರು ಐ.ಟಿ.ಯವರಲ್ಲ ಎಂಬ ಒಂದೇ ಕಾರಣಕ್ಕಾಗಿ ಈ ವಿಷಯವನ್ನು ಎತ್ತಿದ್ದೇನೆಯೇ ಹೊರತು ಯಾವುದೇ ಅಗೌರವದಿಂದಲ್ಲ.

ಸ್ವೇಚ್ಚಾಚಾರೀ ಕುಟುಂಬ ಹಿನ್ನೆಲೆಯ, ಚಾಕೋಲೇಟ್ ಸಂಸ್ಕೃತಿಯ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತದ್ದಕ್ಕೇ ತಾವುಗಳು ವಿದೇಶೀ ತಳಿಗಳೆಂದುಕೊಳ್ಳುವ, ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕುಗೊಳಿಸಿ ಹಾಯ್ಡಾ/ಬಾಯ್ಡಾ ಎಂಬ ಸಂಸ್ಕೃತಿಯ ಕೆಲ ಕಾಲ್ ಸೆಂಟರ್ ಉದ್ಯೋಗಿಗಳು ಈ ವರದಿಯಲ್ಲಿ ವರ್ಣಿಸಿದ ಮಾದರಿ (ಕಛೇರಿಯ ಹೊರಗೆ) ಇದ್ದರೂ ಇರಬಹುದು. ಈ ರೀತಿ ಹಿನ್ನೆಲೆಯ ಯುವ ಪೀಳಿಗೆ ಯಾವ ರಂಗದಲ್ಲಿದ್ದರೂ ಈ ರೀತಿಯ ಸಂಗತಿಗಳು ನಡೆಯುತ್ತವೆ ಮತ್ತು ನಡೆಯುವ ಸಾಧ್ಯತೆಗಳಿರುತ್ತವೆ. ಇದು ಇಂದಿನ ಪ್ರತಿಷ್ಟಿತ ಹೈಸ್ಕೂಲ್ / ಕಾಲೇಜುಗಳಿಂದ ಹಿಡಿದು ಹಳ್ಳಿಯ ಶಾಲೆ ಕಾಲೇಜುಗಳಲ್ಲೂ ಆಗುತ್ತಿದೆ. ಪ್ರತಿಷ್ಟಿತರು ಕೆಫೆ ಡೇ / ಸಿನಿಮಾ ಹಾಲ್ ಗಳನ್ನು ಬಳಸಿದರೆ ಗ್ರಾಮೀಣ ಪ್ರದೇಶದವರು ಗುಡ್ಡ ತೋಪುಗಳನ್ನೋ, ಹುಲ್ಲಿನ ಬಣವೆಗಳನ್ನೋ ಆಯ್ದುಕೊಳ್ಳುತ್ತಾರೆ. ಎಲ್ಲೆಲ್ಲಿ ಹದಿಹರೆಯದ ಬೆಂಕಿ / ಬೆಣ್ಣೆಗಳಿರುವವೋ ಅಲ್ಲೆಲ್ಲಾ ತುಪ್ಪ ತಯಾರಾಗುತ್ತಿರುತ್ತದೆ. ಇದು ಐ.ಟಿಯಲ್ಲೇ ಆಗಬೇಕೆಂದೇನೂ ಇಲ್ಲ. ಹಾಗೊಂದು ವೇಳೆ ಇದು ಐ.ಟಿ.ಯಿಂದಲೇ ಎನಿಸಿದರೆ, ನಾವೊಂದು ಸಮೀಕ್ಷೆಯನ್ನು ನಡೆಸಿ, ಅದರಲ್ಲಿ ಐ.ಟಿ. ದಿಗ್ಗಜರಾದ ನಾರಾಯಣಮೂರ್ತಿಯವರಲ್ಲಿ ಮತ್ತು ಬರಹಗಾರರ ದಿಗ್ಗಜರಾದ ಲಂಕೇಶರಲ್ಲಿ ಯಾರು ಈ ರೀತಿಯ ತುಂಟಾಟಗಳನ್ನು ಮಾಡುವಂಥಹ ವ್ಯಕ್ತಿತ್ವದವರೆಂದು ಕೇಳಿದರೆ, ಲಂಕೇಶರಿಗೇ ೧೦೦% ಮತಗಳು ಬೀಳುತ್ತವೆ.

ಕನ್ನಡ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಒಂದು ವಿಶಿಷ್ಟ ಛಾಯೆಯನ್ನು ಮೂಡಿಸಿ, ಧೀಮಂತ ಪತ್ರಕರ್ತರೆನಿಸಿಕೊಂಡ ಲಂಕೇಶರ ಪತ್ರಿಕೆಯಲ್ಲಿ ಈ ಮಟ್ಟದ ವರದಿಗಳು ಬರುತ್ತಿರುವುದು ದುರಂತವೇ ಸರಿ.

ಅಣಕ:

ಒಬ್ಬ ತನ್ನ ಮನೆಯಲ್ಲಿ ಮನೆಗೆಲಸಕ್ಕೆ ಬರುವ ಹೆಂಗಸೊಬ್ಬಳು ಎರ್‍ಅಡು ಸಾವಿರ ಸಾಲವನ್ನು ಕೇಳಿದಾಗ "ತಾನು ಅವಳು ಮಾಡುವ ಕೆಲಸಕ್ಕೆ ತಿಂಗಳು ತಿಂಗಳು ಸಮಯಕ್ಕೆ ಸರಿಯಾಗಿ ಸಂಬಳವನ್ನು ಮಾತ್ರ ಕೊಡುವುದಾಗಿಯೂ ಸಾಲವನ್ನು ಕೊಡುವುದಿಲ್ಲ" ಎಂದು ಹೇಳಿದನು. ಇದರಿಂದ ಕುಪಿತಗೊಂಡ ಆ ಹೆಂಗಸು ತನ್ನ ಕೆಲಸ ಮುಗಿಸಿ ನೇರ ಪೊಲೀಸ್ ಠಾಣೆಗೆ ಹೋಗಿ ತನ್ನ ಮನೆಗೆಲಸದ ಮಾಲೀಕ ತನ್ನನ್ನು ಬಲಾತ್ಕರಿಸಲು ಯತ್ನಿಸಿದನೆಂದು ದೂರು ಕೊಟ್ಟಳು. ಸರಿ, ಆ ಠಾಣಾ ಇನ್ಸ್ಪೆಕ್ಟರ್ ಕೂಡಲೇ ಟಿ.ವಿ. ೯ ಕ್ಕೆ ಫೊನಾಯಿಸಿ, ತನ್ನೊಡನೆ ವಿಚಾರಣೆಗೆ ಕರೆದೊಯ್ದ.

ಡೋರ್ ಬೆಲ್ ಸದ್ದು ಕೇಳಿ ಮನೆಬಾಗಿಲು ತೆಗೆದ ಆ ಮನೆ ಮಾಲೀಕ, ಪೊಲೀಸ್, ವಿಡಿಯೋ ಕ್ಯಾಮೆರಾಗಳನ್ನು ನೋಡಿ ಹೌಹಾರಿದ. ಆ ಟಿ.ವಿ. ಛಾನೆಲ್ಲಿನವರು ಆ ಮಹಿಳೆಯನ್ನು ನಾಯಕಿಯಂತೆ ಚಿತ್ರಿಸಿ, ಆ ಬಡಪಾಯಿಯನ್ನು ಸ್ತ್ರೀ ಪೀಡಕ, ಕಾಮಪಿಪಾಸು ಎಂದೆಲ್ಲಾ ಅಭಿಪ್ರಾಯಿಸುತ್ತ, ತಮಗೆ ಆ ವ್ಯಕ್ತಿಯ ಹಿನ್ನೆಲೆ ಬಹುಕಾಲದಿಂದ ಚಿರಪರಿಚಿತವೇನೋ ಎಂಬಂತೆ ಚಿತ್ರಿಸಿದರು. ಕಡೆಗೆ ಎರಡು ಸಾವಿರ ಸಾಲಕ್ಕೆ ಕಳೆದುಕೊಳ್ಳುವುದು ಎರಡು ಲಕ್ಷಕ್ಕೆ ಸೆಟ್ಲ್ ಆಯಿತು! ಆದರೂ ಈ ಟಿ.ವಿ. ಪತ್ರಕರ್ತರ ದೆಸೆಯಿಂದಾಗಿ ದೊರೆತ ಕುಖ್ಯಾತಿ ಅವನನ್ನು ಮಾನಸಿಕ ಅಸ್ವಸ್ಥನನ್ನಾಗಿಸಿತು!

ಸರಿಯಾದ ಪ್ರೈವಸಿ ಕಾನೂನುಗಳ ಲಂಗುಲಗಾಮಿಲ್ಲದ ಭಾರತದಲ್ಲಿ ಈ ರೀತಿಯ ವಿಡಿಯೋ, ಮೊಬೈಲ್ ತಂತ್ರಜ್ಞಾನ "ಮಂಗನ ಕೈಯಲ್ಲಿ ಮಾಣಿಕ್ಯ" ಎಂಬಂತಿದೆ. ಸ್ವೇಚ್ಚಾಚಾರೀ ಲಂಪಟರೇ ಇಂದು ಪತ್ರಕರ್ತರಾಗುತ್ತಿರುವುದು!!!

1 comment:

krishna said...

nimma baravanige tubaa gattiyaagide. naanu lankeshra mattu patrikeya abhimaani. aadare satyada pakshapaati. thanks... T.M.Krishna.