ಆರ್ಥಿಕತೆ, ಭೈರಪ್ಪ, ಮತ್ತು ಮಾಲೆಗಾಂವ್!

ಈಗ ಎಲ್ಲೆಡೆ ಆರ್ಥಿಕ ಸಂದಿಗ್ದತೆಯ ಬಿಸಿ. ಅಮೇರಿಕಾದಿಂದ ಬೀಸುತ್ತಿರುವ ಈ ಸಂದಿಗ್ಧತೆಯ ಚಂಡಮಾರುತ ಏನೆಲ್ಲಾ ಬದಲಾಯಿಸುವುದೋ! ಈ ಬದಲಾವಣೆಯ ಕಾಣ್ಕಿಯನ್ನು ತೋರುವಂತಹ ಕಳೆದೆರಡು ವಾರಗಳ ಮುಂಚೆಗೆ ನಡೆದ ಎರಡು ಘಟನೆಗಳನ್ನು ಗಮನಿಸಿದ್ದೀರಾ? ನೀವು ಗಮನಿಸಿಯೇ ಇರುತ್ತೀರಿ. ಅದರಲ್ಲಿ ಒಂದು ಇಲ್ಲಿನ ಲಾಸ್ ಏಂಜಲೀಸ್ ನಲ್ಲಿ ಓರ್ವ ಸದ್ಗೃಹಸ್ಥ ತನ್ನಿಡೀ ಸಂಸಾರವನ್ನು ಗುಂಡಿಟ್ಟು ಕೊಂದು ತಾನೂ ಗುಂಡಿಟ್ಟುಕೊಂಡುದು, ಮತ್ತು ಕನ್ನಡನಾಡಿನ "ಮಾದೇಸ" ನಿರ್ಮಾತೃ ಇನ್ನೋರ್ವನನ್ನು ಗುಂಡಿಟ್ಟು ಕೊಂದುದು.

ಭಾರತ ಮೂಲದ ರಾಜಾರಾಮ್ ಎಂಬ ನಲವತ್ತೈದು ವರ್ಷದ ಎಂ.ಬಿ.ಎ. ಸ್ನಾತಕೋತ್ತರ ಪದವಿ ಪಡೆದು ಹಣಕಾಸು ಚಾಣಾಕ್ಷನೆನಿಸಿದ್ದ ಈತ, ಈಗೆದ್ದಿರುವ ಆರ್ಥಿಕ ಸುನಾಮಿಯಲ್ಲಿ ಕೊಚ್ಚಿ ಹೋಗಿದ್ದಾನೆ. ತನ್ನೆಲ್ಲ ಕಷ್ಟಗಳಿಗೆ ಆತ್ಮಹತ್ಯೆಯೇ ದಾರಿಯೆಂದು ಬಗೆದು ತನ್ನ ಕುಟುಂಬದೊಂದಿಗೆ ಸಮಾಲೋಚಿಸಿದ್ದನಂತೆ. ಆದರೆ ಅನ್ಯೋನ್ಯತೆಯಿಂದಿದ್ದ ತನ್ನ ಹೆಂಡತಿ, ಅತ್ತೆ ಮತ್ತು ಮೂರು ಮಕ್ಕಳುಗಳು ಅವನಿಲ್ಲದೇ ತಾವೂ ಇರುವುದಿಲ್ಲವೆಂದು ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಅದರಂತೆ ರಾಜಾರಾಮ್ ತನ್ನ ಕುಟುಂಬವನ್ನು ಗುಂಡಿಟ್ಟು ಕೊಂದು ತಾನೂ ಸಾವಿಗೆ ಶರಣಾಗಿದ್ದಾನೆ. ಹೀಗಂತ ಇಲ್ಲಿನ ಪೊಲೀಸ್ ವರದಿ ಹೇಳುತ್ತದೆ.

ದೂರದ ಅಮೇರಿಕಾದ ಈ ಹಣಕಾಸು ಸ್ನಾತಕೋತ್ತರ ಪದವೀಧರ ಗೃಹಸ್ಥನ ಪರಿಸ್ಥಿತಿ ಹೀಗಾದರೆ, ಇದೇ ಅಮೇರಿಕಾದ ಆರ್ಥಿಕತೆಯ ಸುಧಾರಣೆಗೊಳಗಾದ ಬೆಂಗಳೂರಿನಲ್ಲಿ ಈ ಘಟನೆಯ ವ್ಯತಿರಿಕ್ತವಾಗಿ ಮಾದೇಸನ ರಿವಾಲ್ವರ್ ಢಂ ಎಂದಿದೆ. ಅದಕ್ಕೇ ಇರಬಹುದು, ಅಮೇರಿಕಾದಲ್ಲಿ ಬಲಕ್ಕೂ ಭಾರತದಲ್ಲಿ ಎಡಕ್ಕೂ ಚಲಿಸುವ ನಿಯಮಗಳು!

ಇರಲಿ, ಈ ಆರ್ಥಿಕ ಸಂದಿಗ್ಧತೆಯ ನಡುವೆ ನಮ್ಮ ಬುದ್ದಿಜೀವಿಗಳು ತಮ್ಮಷ್ಟಕ್ಕೆ ತಾವು ಯಥಾಸ್ಥಿತಿಯಾಗಿ ಸೆಕ್ಯುಲರಿಸಂ ಪರ ವಿರೋಧವಾಗಿ ವಾಗ್ಯುದ್ಧಗಳನ್ನು ನಡೆಸುತ್ತಿದ್ದಾರೆ. ಮೊನ್ನೆ ಜನಪ್ರಿಯ ಸಾಹಿತಿ ಭೈರಪ್ಪನವರು ಚರ್ಚುಗಳ ಮೇಲಿನ ದಾಳಿಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಸೆಕ್ಯುಲರ್ ಬುದ್ಧಿಜೀವಿಗಳ ಕಣ್ಣನ್ನು ಕೆಂಪಾಗಿಸಿದೆ. ಲೆಕ್ಕಾಚಾರ ಹಾಕಿ ಯಾವ ಯಾವ ಪಾತ್ರಗಳು ಏನನ್ನು ಹೇಳಬೇಕೆಂದು ಕರಾರುವಾಕ್ಕಾಗಿ ಬರೆಯುವ ಭೈರಪ್ಪ ಕಾದಂಬರಿಕಾರರೇ ಅಲ್ಲವೆಂದು ಈ ಸಂದರ್ಭ ಸಿಕ್ಕೊಡನೆ ಹಿರಿ ಕಿರಿ ಬುದ್ಧಿಜೀವಿಗಳೆಲ್ಲಾ ಅವರ ಮೇಲೆ ಹರಿಹಾಯ್ದಿದ್ದಾರೆ.

ಜಗತ್ತಿನ ಯಾವುದೇ ಕಾದಂಬರಿಕಾರನಾಗಲೀ ಒಂದು ಕಥಾವಸ್ತುವನ್ನಿಟ್ಟುಕೊಂಡು, ಮೂಲಪಾತ್ರಗಳನ್ನು ಸೃಷ್ಟಿಸಿಕೊಂಡೇ ಬರೆಯಲಾರಂಭಿಸುತ್ತಾನೆ. ಬರವಣಿಗೆ ಸಾಗಿದಂತೆ ಕಥೆ ವಿಸ್ತೃತಗೊಳ್ಳುವುದು, ಹೆಚ್ಚು ಪಾತ್ರಗಳು ಸೃಷ್ಟಿಯಾಗುವುದು ಮತ್ತು ಮೂಲ ಕಲ್ಪನೆ ಒಂದು ಸ್ಪಷ್ಟ ರೂಪ ಪಡೆಯುತ್ತಾ ಸಾಗುವುದು ಬರವಣಿಗೆಯ ಪ್ರಕ್ರಿಯೆ. ಆದರೆ ಲೆಕ್ಕಾಚಾರ ಹಾಕಿ ಬರೆಯದೆ ಅದು ಹೇಗೆ ಸಾಹಿತ್ಯವನ್ನು ಸೃಷ್ಟಿಸುವರೋ ಈ ಹರಿಹಾಯ್ದ ಲೇಖಕರು ಅರಿಯದಾಗಿದೆ.

ಜನರಿಗೆ ಹತ್ತಿರವಾದ ಕಥಾವಸ್ತುಗಳನ್ನೆತ್ತಿ ಸಾಮಾಜಿಕ ಚಿತ್ರಣ, ಪಾತ್ರಗಳನ್ನು ಸೃಷ್ಟಿಸಿ ಒಂದು ಯಶಸ್ವೀ ಕಾದಂಬರಿಯನ್ನು ಬರೆಯುವ ಭೈರಪ್ಪನವರು ವೈಯುಕ್ತಿಕವಾಗಿ ನನಗೆ ಅನಿಸುವುದು ಒಬ್ಬ ಪಕ್ಕಾ ಕಮರ್ಷಿಯಲ್ ಕಾದಂಬರಿಕಾರರೆಂದು. ಐತಿಹಾಸಿಕ ಚರಿತ್ರೆಯೂ ಅವರ ಕಥಾವಸ್ತುಗಳಿಗೆ ಸಾಕ್ಷಿಯಾಗಿ ದಾಖಲೆಯನ್ನೊದಗಿಸುವುದು ಅವರ ಅದೃಷ್ಟವೂ ಮತ್ತು ದುರದೃಷ್ಟವೂ ಆಗಿದೆ. ಐತಿಹಾಸಿಕ ಸಾಕ್ಷ್ಯ ಅವರ ಕಾದಂಬರಿಗೆ ಹೆಚ್ಚು ನೈಜತೆಯನ್ನು ತಂದುಕೊಟ್ಟು ಅದೃಷ್ಟವೆನಿಸಿದರೆ, ತಮ್ಮೆಲ್ಲಾ ಬುದ್ಧಿಜೀವಿ ಬಳಗದ ಸೆಕ್ಯುಲರೀಗಳ ತೀವ್ರ ವಿರೋಧ ದುರಾದೃಷ್ಟವೆನಿಸಿದೆ.

ಹಂಪಿ ಜಗತ್ತಿನ ಒಂದು ಐತಿಹಾಸಿಕ ಪರಂಪರೆಯ ಸ್ಥಾನವೆಂದು ಗುರುತಿಸಲ್ಪಟ್ಟಿದೆ. ಈ ಹಂಪಿ ಇತಿಹಾಸವನ್ನೂ ಮತ್ತು ಸಮಕಾಲೀನ ಸಾಮಾಜಿಕ ಕಥೆಯನ್ನೂ ಸಮ್ಮಿಳನಗೊಳಿಸಿ ಭೈರಪ್ಪನವರು ಸೃಷ್ಟಿಸಿದ ’ಆವರಣ’ ಕಮರ್ಷಿಯಲ್ ಆಗಿ ಭಾರೀ ಯಶಸ್ವಿಯಾಯಿತು. ಆಗ ನಮ್ಮ ಅನೇಕ ಬುದ್ಧಿಜೀವಿಗಳು ಹಂಪಿ ಹಾಳಾದದ್ದು ಶೈವರಿಂದಲೇ ಹೊರತು ಇಸ್ಲಾಂ ದಾಳಿಕೋರರಿಂದ ಅಲ್ಲವೆಂದು ತಮ್ಮ ಸಂಶೋಧನೆಗಳನ್ನು ಮಂಡಿಸಿ ಭಾರೀ ವಿರೋಧವನ್ನು ತೋರಿ ’ಆವರಣ’ಕ್ಕೆ ಪ್ರತಿಯಾಗಿ ’ಅನಾವರಣ’ ಎಂದು ಪ್ರತಿ ಪುಸ್ತಕವನ್ನೂ ಬಿಡುಗಡೆಗೊಳಿಸಿದರು.

ಇರಲಿ ಇತಿಹಾಸದ ಸತ್ಯಾಸತ್ಯತೆಗಳನ್ನು ಹೇಗೆ ಬೇಕಾದರೂ ಹಾಗೆ ತಮ್ಮ ತಮ್ಮ ವೈಯುಕ್ತಿಕ ಅಭಿಪ್ರಾಯಗಳಿಗನುಗುಣವಾಗಿ ಪೂರ್ವಾಗ್ರಹಪೀಡಿತ ಮನಸ್ಸುಗಳು ತಮ್ಮ ಸಂಶೋಧನೆಗಳನ್ನು ಬೈಯಾಸ್ಡ್ ಆಗಿ ಹೊರಹೊಮ್ಮಿಸಿಬಿಡುತ್ತವೆ. ಆ ರೀತಿಯ ಸಂಶೋಧನೆಯ ಫ಼ಲವೇ ಇಂದು ಬಸವ, ಅಲ್ಲಮರು ತೀವ್ರ ವ್ಯಭಿಚಾರಿಗಳಾಗಿದ್ದು ಅವರುಗಳ ಹೆಸರಿನಲ್ಲಿ ವಿಜಯನಗರದ ಕಾಲದಲ್ಲಿ ಪ್ರಭಾವಶಾಲಿಗಳಾಗಿದ್ದ ವೀರಶೈವರು ಬಸವ/ಅಲ್ಲಮರ ಹೆಸರಿನಲ್ಲಿ ವಚನಗಳನ್ನು ರಚಿಸಿ ವಿಜಯನಗರದ ಅರಸರುಗಳನ್ನು ಶೈವರನ್ನಾಗಿಸುವ ಪ್ರಯತ್ನವನ್ನು ಮಾಡಿದ್ದರೆಂದೂ ಪ್ರತಿಪಾದಿಸುವ ಸಂಶೋಧನೆಗಳಿವೆ. ಆದುದರಿಂದ ವರ್ತಮಾನವನ್ನು ಪರಿಗಣಿಸೋಣ. ಹಂಪಿಯಲ್ಲಿ ಇಂದು ವಿಜಯ ವಿಠಲನ ಮಂದಿರದ ಆವರಣದಲ್ಲಿ ನಮಾಜುಗಳು ನಡೆಯುತ್ತಿವೆ, ಹಸಿರು ಬಾವುಟಗಳು ಎದ್ದಿವೆ ಮತ್ತು ನಿತ್ಯವೂ ಅಲ್ಲಿನ ಐತಿಹಾಸಿಕ ಸ್ಮಾರಕಗಳು ಹಾಳುಗೆಡವಲ್ಪಡುತ್ತಿವೆ. ಈ ಕುರಿತಾಗಿ ನಾವುಗಳೆಲ್ಲಾ ಆಗಾಗ್ಗೆ ದಿನಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಈ ಕುರಿತಾಗಿ ಇದುವರೆಗೂ ಯಾವುದಾದರೂ ಸೋಕಾಲ್ಡ್ ಬುದ್ದಿಜೀವಿಗಳು ಸೊಲ್ಲೆತ್ತಿದ್ದಾರೆಯೆ? ಭೈರಪ್ಪನವರ ಕಾದಂಬರಿಯ ಐತಿಹಾಸಿಕ ಸಾಕ್ಷ್ಯಕ್ಕೆ ಪ್ರತಿಯಾಗಿ ಸಂಶೋಧನೆಯನ್ನು ಚಳುವಳಿಯ ಮಾದರಿ ಹಮ್ಮಿಕೊಂಡು, ಪ್ರತಿಪುಸ್ತಕವನ್ನು ಪ್ರಕಟಿಸುವ ನಮ್ಮ ಸೆಕ್ಯುಲರ್ ಬುದ್ಧಿಜೀವಿಗಳು, ಐತಿಹಾಸಿಕ ಸ್ಮಾರಕಗಳ ಮೇಲೆ ನಡೆಯುತ್ತಿರುವ ವರ್ತಮಾನದ ಅತ್ಯಾಚಾರಗಳನ್ನು ಯಾವತ್ತಾದರೂ ಖಂಡಿಸಿದ್ದಾರೆಯೇ?

ಇವರ ನಿಜ ಕಾಳಜಿಯಾದರೂ ಏನು?

ಕಂದಾಚಾರ, ಸಾಮಾಜಿಕ ಅಸಮಾನತೆ, ಊಳಿಗಮಾನ್ಯ ಪದ್ಧತಿಗಳ ವಿರುದ್ಧ ಸಿಡಿದೇಳುವ ಉನ್ನತ ವಿಚಾರಗಳೇ ಹಿಂದೊಮ್ಮೆ ಈ ಬುದ್ಧಿಜೀವಿಗಳನ್ನು ಸೃಷ್ಟಿಸಿದ್ದವು. ಕಂದಾಚಾರಗಳನ್ನು ಅನನ್ಯವಾಗಿ ನಂಬಿರುವ ಒಬ್ಬ ಕಥಾನಾಯಕ (ಬ್ರಾಹ್ಮಣ ಅರ್ಚಕನಾಗಿರಬಹುದು, ಮುಸ್ಲಿಂ ಮಹಿಳೆಯಾಗಿರಬಹುದು) ಜೀವನದ ಕಾರ್ಪಣ್ಯಗಳಿಗೆ ಧಾರ್ಮಿಕತೆ ಅಪ್ರಸ್ತುತವೆನ್ನುವುದನ್ನು ಕಥೆಯ ಒಂದು ತಿರುವಿನಲ್ಲಿ ಅನ್ನಿಸಿ, ಧಾರ್ಮಿಕ ವ್ಯವಸ್ಥೆಯ ವಿರುದ್ಧ ಕ್ರಾಂತಿಯೆನಿಸುವಂತಹ ಕಾರ್ಯವನ್ನು ಕೈಗೊಳ್ಳುತ್ತಾನೆ/ಳೆ. ಇಲ್ಲಿನ ಕಥಾವಸ್ತು ಒಬ್ಬ ವ್ಯಕ್ತಿ ವ್ಯವಸ್ಥೆಯ ವಿರುದ್ಧ ಅವನ ಪರಿಮಿತಿಯಲ್ಲೇ ಹೋರಾಡುವುದು ಓದುಗರಿಗೆ ಅಪ್ಯಾಯಮಾನವೆನಿಸಿಬಿಡುತ್ತದೆ. ಆದರೆ ಈ ಕೃತಿಗಳನೇಕವುಗಳಲ್ಲಿ ಕಾಮವೇ ಕ್ರಾಂತಿಯಾಗಿಬಿಟ್ಟುರುತ್ತದೆ! ಅದರಲ್ಲೂ ವಿವಾಹೇತರ/ವಿವಾಹಪೂರ್ವ ಸಂಬಂಧಗಳು, ಧಾರ್ಮಿಕ ವ್ಯವಸ್ಥೆಯಲ್ಲಿ ’ಹಾದರ’ವೆನಿಸುವಂತಹವು.

ವ್ಯವಸ್ಥೆಯ ವಿರುದ್ಧ ಹೋರಾಡುವ ಕಥಾವಸ್ತುಗಳು ಹೆಚ್ಚು ಹೆಚ್ಚು ಸಾಮಾಜಿಕ ಕ್ರಾಂತಿಗೆ ಅತ್ಯಂತ ಅವಶ್ಯಕ. ಆದರೆ ಕಾಮವೇ ಕ್ರಾಂತಿಯೆಂದು ಏಕೆ ಪ್ರತಿಪಾದಿಸಬೇಕೋ ನಾನರಿಯೆ. ನೀವು ವಂಶವೃಕ್ಷ, ಸಂಗ್ಯಾ ಬಾಳ್ಯಾ, ಜೋಕುಮಾರ ಸ್ವಾಮಿ, ಕಲ್ಲು ಕರಗುವ ಸಮಯ........ಇನ್ಯಾವ ಕಥೆಗಳನ್ನಾದರೂ ಓದಿ, ಕಾಮವೇ ಕ್ರಾಂತಿ ಅವುಗಳಲ್ಲಿ, ಅದರಲ್ಲೂ ಹಾದರ! ಕ್ರಾಂತಿ ರೋಮಾಂಚನವೆನಿಸುತ್ತದೆ.

ಇರಲಿ, ಈ ಲೇಖನವು ಭೈರಪ್ಪನವರ ಅಭಿಪ್ರಾಯಗಳನ್ನು ಹೊಗಳಿಯಾಗಲೀ, ಬುದ್ಧಿಜೀವಿಗಳ ವಿಚಾರಗಳನ್ನು ತೆಗಳಿಯಾಗಲೀ ಅಭಿಪ್ರಾಯಿಸುವುದು ಉದ್ದೇಶವಲ್ಲ. ಇಪ್ಪತೊಂದನೇ ಶತಮಾನದ ಭಾರತ ಬುದ್ಧಿಜೀವಿಗಳು ತಮ್ಮ ತಮ್ಮ ವಾದ/ತತ್ವಗಳಿಗೆ ಜೋತುಬಿದ್ದು ಅವುಗಳ ಪರಾಕಾಷ್ಠತೆಗಾಗಿ ಯಾವುದೇ ಮತಾಂಧ ನಿರಕ್ಷರಕುಕ್ಷಿ ಮೂಲಭೂತವಾದೀ ಆಷಾಢಭೂತಿಗಳಿಗಿಂತ ಭಿನ್ನವಿಲ್ಲದೇ ಅಕ್ಷರ ಹೋರಾಟ ನಡೆಸುತ್ತಿರುವುದು ನನ್ನಂಥ ಸಾಮಾನ್ಯಜೀವಿಗಳಲ್ಲಿ ಖೇದವನ್ನುಂಟು ಮಾಡುತ್ತದೆಂಬುದನ್ನು ದಾಖಲಿಸುವುದು ಮಾತ್ರ ಈ ಲೇಖನದ ಉದ್ದೇಶ. ಯಾವ ಕಥೆ/ಕಾದಂಬರಿಗಳು ತಮ್ಮ ಪಾತ್ರಗಳ ಮೂಲಕ ಮಾನವ ಸಹಜ ಕುತೂಹಲವನ್ನು ಕೆದಕುತ್ತ ಜೀವನ ಸಾಕ್ಷಾತ್ಕಾರ, ದರ್ಶನ, ಹುಟ್ಟು ಸಾವುಗಳಿಂದಾಚೆಗೇನಿದೆಯೆಂಬ ಅಲೌಕಿಕತೆಯನ್ನು ಕೆದಕುವಂತೆ ಮಾಡುವವೋ ಅವೇ ಸರ್ವಕಾಲಕ್ಕೂ ಸಲ್ಲುವಂತಹ ಅರ್ಥಪೂರ್ಣ ಸಾಹಿತ್ಯವೆನಿಸುತ್ತವೆ. ಇಲ್ಲದಿದ್ದರೆ ಒಂದಾನೊಂದು ಕಾಲದಲ್ಲಿ ಶ್ರೇಷ್ಟ/ಕ್ರಾಂತಿಕಾರಕವೆನಿಸಿದ್ದ ಕಮ್ಯುನಿಸ್ಟ್ ನಾಯಕರುಗಳ ಬರಹಗಳು ಇಂದಿನ ವರ್ತಮಾನದಲ್ಲಿ ಹೇಗೆ ಹಾಸ್ಯಾಸ್ಪದವೆನಿಸುತ್ತವೆಯೋ ಹಾಗೆಯೇ ಅನಿಸುತ್ತವೆ.

ಯಾವುದೇ ವ್ಯವಸ್ಥೆಯ ಅಸಮಾನತೆಯ ವಿರುದ್ಧ ಹೋರಾಡುವುದು ಸಮಾಜಮುಖಿ ಮಾನವನ ಸಾಮಾಜಿಕ ಧರ್ಮ. ಅಂದು ಬ್ರಿಟಿಷರ ವಿರುದ್ಧ ಹೋರಾಡಿದ ಗಾಂಧಿ, ಬೋಸ್, ಭಗತ್ ಸಿಂಗ್...........ಎಲ್ಲರೂ ಹೋರಾಡಿದ್ದು ವ್ಯವಸ್ಥೆ/ಸಾಮಾಜಿಕ ಅಸಮಾನ್ಯತೆಯ ವಿರುದ್ಧವೆ. ಕೆಲವರು ತೀವ್ರಗಾಮಿತ್ವವನ್ನು ಹೊಂದಿದ್ದರು, ಕೆಲವರು ಮಂದಗಾಮಿತ್ವದವರಾಗಿದ್ದರು. ಯಾವುದೇ ತತ್ವಕ್ಕೆ ಬದ್ಧರಾಗಿದ್ದರೂ ಹೋರಾಟಗಳು ತೀವ್ರವಾಗುತ್ತಾ ಹೋಗುತ್ತವೆ. ಎಲ್ಲಿಯವರೆಗೆ ಹಿಂದೂ ಮ್ಯಾರೇಜ್ ಆಕ್ಟ್/ಮುಸ್ಲಿಂ ಮ್ಯಾರೇಜ್ ಆಕ್ಟ್/ಕ್ರಿಶ್ಚಿಯನ್ ಮ್ಯಾರೇಜ್ ಆಕ್ಟ್ ಎಂಬ ಧಾರ್ಮಿಕ ಆಧಾರದ ಸೆಕ್ಯುಲರ್ ಕಾನೂನುಗಳಿರುತ್ತವೆಯೋ ಅಲ್ಲಿಯವರೆಗೆ ಸಮಾನತೆಯ ಹೋರಾಟಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ಇಂದು ಮಾಲೆಗಾಂವ್ ಸ್ಪೋಟಗಳ ಹಿಂದೆ ಹಿಂದೂ ಸಾಧ್ವಿಯ ಕೈವಾಡವಿದ್ದರೆ ಅದು ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ಹೋರಾಟಗಾರರ ಹತಾಶ ಭಾವನೆಗಳ ಆಸ್ಪೋಟನೆ ಎನಿಸಿ, ಭವಿಷ್ಯದ ಭಾರತದಲ್ಲಿ ಮುಂದೆ ನಡೆಯಬಹುದಾದ ಬೃಹದಾಕಾರದ ಆಸ್ಪೋಟನೆಯ ಮುನ್ಸೂಚನೆಯೇನೋ ಅನಿಸುತ್ತದೆ!

ಅಣಕ:

ಇದು ನನ್ನ ಹಳೆಯ ಅಣಕ, ಸಾಂದರ್ಭಿಕವಾಗಿ ಇಂದಿನ ಬುದ್ಧಿಜೀವಿಗಳ ಚಿಂತನೆ ಹೀಗೂ ಇರುತ್ತವೆಯೆಂದು ಮತ್ತೊಮ್ಮೆ ಉಲ್ಲೇಖಿಸಿದ್ದೇನೆ.

ಒಬ್ಬ ಬುದ್ದಿಜೀವಿ ತನ್ನ ಮಿತ್ರರೊಂದಿಗೆ ಸಂಜೆಯ ಚರ್ಚಾಕೂಟವನ್ನು ಮುಗಿಸಿಕೊಂಡು ಮನೆಗೆ ಬಂದಾಗ ಅಘಾತವೊಂದು ಕಾದಿತ್ತು. ಅವನ ಹೆಂಡತಿ ’ಆಯ್ಯೋ ಈ ದಿನ ಯಾವನೋ ಮನೆಗೆ ನುಗ್ಗಿ ನನ್ನನ್ನು ಹಾಳು ಮಾಡಿಬಿಟ್ಟ’ ಎಂದು ಗೋಳಾಡಿದಳು. ಅದನ್ನು ಕೇಳಿದ ಬುದ್ದಿಜೀವಿ ಕೋಪಗೊಂಡು "ಯಾರವನು? ಹೇಗಿದ್ದ?" ಎಂದು ತನ್ನ ಹೆಂಡತಿಯನ್ನು ಕೇಳಿದ. ಅದಕ್ಕವಳು "ಮುಲ್ಲಾ ತರಹದ ಟೋಪಿ ಮತ್ತು ಕುರ್ತಾ ಹಾಕಿದ್ದ. ಗಡ್ಡ ಬಿಟ್ಟಿದ್ದ. ಸುನ್ನತಿ ಅಂತಾರಲ್ಲ ಅದು ಕೂಡಾ ಆಗಿತ್ತೆನಿಸಿತು. ಬಹುಶಃ ಸಾಬರವನೇನೋ" ಎಂದಳು. ಅದಾಗಲೇ ಅಲ್ಲಿದ್ದ ಪೊಲೀಸರನ್ನು, ಸುದ್ದಿಗಾರರನ್ನು ಗಮನಿಸಿದ್ದ ಬುದ್ದಿಜೀವಿಯ ಬುದ್ದಿ ಜಾಗೃತಗೊಂಡಿತ್ತು! ಕೂಡಲೇ ಬುದ್ದಿಜೀವಿ "ಛೇ, ಛೇ, ನಿತ್ಯವೂ ಗೋಮಾಂಸವನ್ನು ತಿನ್ನುವ ಅವನು ಹಸುವಿನಂತೆಯೇ ಸಾಧುವಾಗಿರುತ್ತಾನೆ. ಬಹುಶಃ ಈ ದಿನ ಅವನು ಹೋರಿಯ ಮಾಂಸವನ್ನು ತಿಂದಿರಬೇಕು. ಆ ಹೋರಿಯ ಮಾಂಸವೇ ಅವನಿಂದ ಈ ಕೃತ್ಯವನ್ನು ಮಾಡಿಸಿದೆ. ನಿಜದಲ್ಲಿ ಅವನು ಮುಗ್ಧ! ಹಾಗಾಗಿ ಈ ಕೃತ್ಯವನ್ನೆಸಗಿದವನನ್ನು ಕ್ಷಮಿಸಿದ್ದೇನೆ. ಅದೇ ಒಬ್ಬ ಪುಳ್ಚಾರೀ ಬ್ರಾಹ್ಮಣ ಈ ಕೃತ್ಯಕ್ಕೆ ಕೈಹಾಕಿದ್ದರೆ ಅದು ಅವನು ಜಾಗೃತ ಮನಸ್ಸಿನಿಂದಲೇ ಮಾಡಿದ ಹೇಯ ಕೃತ್ಯವಾಗಿರುತ್ತದೆ. ಅಂತಹವರು ಘೋರ ಶಿಕ್ಷೆಗೆ ಅರ್ಹರು" ಎನ್ನುತ್ತ ಪೊಲೀಸರಿಗೆ ಕೇಸಿನ ಅಗತ್ಯವಿಲ್ಲವೆಂದೂ ಮತ್ತು ಸುದ್ದಿಗಾರರಿಗೆ ದಯವಿಟ್ಟು ಈ ಸುದ್ದಿಯನ್ನು ಆದಷ್ಟೂ ಮುಂದಿನ ಪುಟಗಳಲ್ಲಿ ಹಾಕಿರೆಂದೂ ಭಿನ್ನವಿಸುತ್ತ ವಿಶಾಲ ಹೃದಯವನ್ನು ಮೆರೆದರು!

3 comments:

sunaath said...

ಸಾಹಿತ್ಯ, ರಾಜಕಾರಣ ಹಾಗೂ ಆಷಾಢಭೂತಿತನಗಳ ಬಗೆಗೆ ಉತ್ತಮ ಲೇಖನ

Supreeth.K.S said...

ತುಂಬಾ ಸಕಾಲಿಕವಾದ ಚಿಂತನೆ ಸರ್. ಭೈರಪ್ಪನವರ ಬಗ್ಗೆ ಅತ್ಯಂತ ವಸ್ತುನಿಷ್ಠವಾಗಿ ಬರೆದಿರುವಿರಿ. ಎಡಪಂಥೀಯ ಬುದ್ಧಿಜೀವಿಗಳು ಅಲ್ಪಸಂಖ್ಯಾತರ ಬಗ್ಗೆ ತೋರುವ ಕಾಳಜಿ ಹಾಗೂ ಅವರ ಮಾನವೀಯ ಪ್ರತಿಸ್ಪಂದನದ ಬಗ್ಗೆ ಅಡು ಮಾತಿಲ್ಲ. ಆದರೆ ಅದು ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತವಾಗಿ ಉಳಿದರೆ ಅವರಿಗೂ ಅಂಧಾಭಿಮಾನಿಗಳಿಗೂ ವ್ಯತ್ಯಾಸವೇನು? ಅಲ್ಪಸಂಖ್ಯಾತರ ಮೇಲೆ ಒಂದು ಸಣ್ಣ ದಾಳಿಯಾದಾಗ ಗಾಂಧಿಯ ಪ್ರತಿಮೆಯ ಮುಂದೆ ಪ್ರತಿಷ್ಠಾಪಿತಗೊಂಡು ಟಿವಿ ಚಾನೆಲ್‌ಗಳಿಗೆ ಉಪದೇಶ ಕೊಡಮಾಡುವ ಇವರು ಸಂಘಟಿತರಾಗಿ ಮುಸ್ಲೀಂ ಭಯೋತ್ಪಾದನೆಯನ್ನು ಖಂಡಿಸಿದ್ದಾರೆಯೇ? ಹಿಂಸೆ ಯಾರು ಮಾಡಿದರೂ ಅದು ಖಂಡನೆಗೆ ಅರ್ಹವಾದದ್ದೇ ಎಂದು ಮಾತಾಡಿದ್ದಾರೆಯೇ? ನಕ್ಸಲೀಯರಿಗೆ ಗಾಂಧಿಯನ್ನು ಅನುಸರಿಸಿ ಎಂದು ಹೇಳುವ ಧೈರ್ಯ ಮಾಡಿದ್ದಾರೆಯೇ? ಇವರೆಲ್ಲಾ ಎಷ್ಟಾದರೂ ಅವರಿಗೆ ದಾರಿ ತಪ್ಪಿದ ತಮ್ಮ ಮುಗ್ಧ ಮಕ್ಕಳು ಅಷ್ಟೇ. ಉಳಿದ ಸಾಮಾನ್ಯರು ಎಲ್ಲಾ ತಪ್ಪು ಹೊತ್ತು ಸುಮ್ಮಗಿರಬೇಕಾದ ಮನೆಯ ದೊಡ್ಡ ಮಕ್ಕಳು. ಇಷ್ಟಕ್ಕೂ ಇವರನ್ನು ನಮ್ಮೆಲ್ಲರ ‘ತಂದೆ’ ಎಂದು ಒಪ್ಪಿಕೊಂಡವರು ಯಾರು?

ಭವೋದ್ರೇಕವಿಲ್ಲದ ವಸ್ತುನಿಷ್ಠ ಬರಹ ಇಷ್ಟವಾಯಿತು ಸರ್...

ಸುಪ್ರೀತ್

Unknown said...

olle baraha. anaka antu bahala chennagittu