ಅಗಣಿತ ಅಲೆಮಾರಿ ಕುರಿತು ಶಶಿಕಲಾ ಹೆಚ್.

 ರವಿ ಹಂಜ್ ಅವರ "ಅಗಣಿತ ಅಲೆಮಾರಿ" ಕೃತಿಯ ಕುರಿತು ಶಶಿಕಲಾರ ಒಂದು ಚಂದದ ವಿಮರ್ಶೆ..


ಕಾಡುವ  ಅಗಣಿತ ಅಲೆಮಾರಿಯ ಹೆಜ್ಜೆಗಳು



        ಚಲನಶೀಲತೆಯೇ ಜೀವಿಯ ಮೂಲಭೂತ ಲಕ್ಷಣ. ಬಹಳ ತಿರುಗಾಡುವ ಮನುಷ್ಯನಿಗೆ “ಕಾಲಾಗೇನ ನಾಯಿಗೆರಿ ಅದಾವೇನೊ!” ಎನ್ನುತ್ತಾರೆ ನಮ್ಮ ಕಡೆ. ಒಂದು ರೀತಿಯಲ್ಲಿ ಅಲೆಮಾರಿತನ ಎನ್ನುವುದು ಡಿ.ಎನ್.ಲೋಕಪ್ಪ ಅವರು ಹೇಳಿದಂತೆ ಸಹಜ, ಅನಂತ . ಈ ಅಲೆಮಾರಿತನವೇ ಬರ್ಬರ, ಅನಾಗರಿಕ ಮನುಷ್ಯನನ್ನು ಸುಸಂಸ್ಕೃತ ನಾಗರಿಕನನ್ನಾಗಿಸಿದೆ. ಜಗತ್ತಿನ ಎಲ್ಲ ನಾಗರಿಕತೆಗಳು ಕೂಡ ಬಹುಶಃ ಈ ಅಲೆಮಾರಿತನದ ಸುಂದರ ಫಲಶ್ರುತಿಗಳಾಗಿವೆ. .ಬೇಟೆಯಿಂದ ಪ್ರಾರಂಭವಾದ ಆದಿಮಾನವನ ಪಯಣ ಪಶುಪಾಲನೆಯತ್ತ ಸಾಗಿ ಮುಂದೆ ಒಕ್ಕಲುತನ , ಗುಡಿಕೈಗಾರಿಕೆಗೆ ಬಂದು ಸ್ಥಾವರಗೊಂಡಿದೆ. ಹಾಗಿದ್ದರೂ ಹೊಟ್ಟೆಪಾಡಿಗಾಗಿ ಅವನ ಅಲೆಮಾರಿತನ ನಿರಂತರವಾಗಿದೆ. ರವಿ ಹಂಜ್ ಅವರ ‘ ಅಗಣಿತ ಅಲೆಮಾರಿ ’ಯನ್ನು ಓದುವಾಗ ಮನುಷ್ಯನ ಪಯಣದ ಈ ಹಾದಿ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಪ್ರವಾಸ , ವಿಡಂಬನೆ , ಸೃಜನಶೀಲತೆ , ಇವೆಲ್ಲವುಗಳನ್ನು ಒಳಗೊಂಡ ಅಪರೂಪದ ಕೃತಿಯಿದು. ಇದನ್ನು ಲೋಕಪ್ಪ ಅವರು ಒಳ್ಳೆಯ ಅರ್ಥದಲ್ಲಿ ಶುದ್ದಭ್ರಷ್ಟ ಕೃತಿ ಎಂದು ಗುರುತಿಸಿದ್ದು ಸರಿಯಾಗಿಯೇ ಇದೆ. 

    ಮನುಷ್ಯ ಜೀವನದ  ಬಗ್ಗೆ ಸಹಜ ಕುತೂಹಲ, ಜೀವನ ಪ್ರೀತಿಯ ತುಡಿತ , ಸಮಾಜದ ಬಗ್ಗೆ ಮಿಡಿತ ಹೊಂದಿರುವ ಸಮಾನಮನಸ್ಕ  ಮೂವರು  ಅಲೆಮಾರಿ ಗೆಳೆಯರ ಪ್ರವಾಸಕಥನದಂತಿದೆ ಈ ಪುಸ್ತಕ. ಪ್ರವಾಸಕಥನವಾದರೊ ಒಬ್ಬ ವ್ಯಕ್ತಿಯ ಅನುಭವದಂತೆ ಉತ್ತಮ ಪುರುಷದಲ್ಲಿ  ಇಡಿಯಾಗಿ ನಿರೂಪಣೆಗೊಂಡಿರುತ್ತದೆ. ಆದರೆ ಇದರಲ್ಲೂ ‘ ಅಲೆಮಾರಿ ’ ವೈಶಿಷ್ಟ್ಯ ಮೆರೆಯುತ್ತದೆ. ಇದು ಒಬ್ಬ ಅಲೆಮಾರಿಯ ಕಥನವಾಗಿರದೆ ಮೂವರು ಗೆಳೆಯರ ಅನುಭವಕಥನ. ಪಡ್ಡೆಹುಡಗರ ಭಾಷೆಯಲ್ಲಿ ಹೇಳಬೇಕೆಂದರೆ ಮೂರು ಜನ ಚಡ್ಡಿ ದೋಸ್ತರ ಜಂಟಿ ಪ್ರವಾಸ ಕಥನವಾಗಿದೆ. ಗೆಳೆತನ ಯಾವಾಗಲೂ ಗಂಡಿನಲ್ಲಿ ಹೆಚ್ಚು ಆಪ್ತವಾಗಿರುತ್ತದೆ. ಹೆಣ್ಣಿನ ಕಾರಣಕ್ಕಾಗಿ ಅದು ಇನ್ನೂ ಹೆಚ್ಚು ಆಪ್ತವಾಗಿರಲೂಬಹುದು.ಆದರೆ ಸೋಜಿಗವೆಂದರೆ ಹೆಣ್ಣುಗಳ ನಡುವೆ ಇಂಥ ಗಾಢ ಸಂಬಂಧ ಸಿಗುವುದು ಅಪರೂಪ. ಇನ್ನೂ ವಿಚಿತ್ರ ಸತ್ಯವೆಂದರೆ ಗಂಡಿನ ಕಾರಣಕ್ಕಾಗಿಯೇ, ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಮನುಷ್ಯ ನಿರ್ಮಿತ ಸಾಮಾಜಿಕ ವ್ಯವಸ್ಥೆ ಹೆಣ್ಣನ್ನು ಅನಿವಾರ್ಯವಾಗಿ ಹೆಚ್ಚು ಒಂಟಿಯಾಗಿಡಲು ಪ್ರಯತ್ನಿಸಿದೆ. ಹೀಗಾಗಿ ಸೂಕ್ಷ್ಮವಾಗಿ ವಿಚಾರಿಸಿದರೆ ಹೆಣ್ಣು ಮೂಲಭೂತವಾಗಿ ಒಂಟಿಯಾದರೂ,ಅಬಲೆಯೆನಿಸಿದರೂ ಆಳದಲ್ಲಿ  ಮಾನಸಿಕವಾಗಿ ಬಹಳಷ್ಟು ಶಕ್ತಿಶಾಲಿ .ಅದೇನೇ ಇರಲಿ ಈ ಚಡ್ಡಿ ದೋಸ್ತರ ಸಮಾನ ಅಭಿರುಚಿ ,ತುಡಿತಗಳು ಒಂದು ಒಳ್ಳೆಯ ಚಿಂತನಶೀಲ ಕೃತಿಯನ್ನು ನೀಡಿವೆ. 



         ಲೀ ಚೀನಾದ ಕಮ್ಯುನಿಸ್ಟ್ ಧಾರೆಯ ಕಹಿಯುಂಡು ಬೆಳೆದ, ಪ್ರಜಾಪ್ರಭುತ್ವದತ್ತ ತುಡಿಯುವ ಸತ್ಯದ ಸಂಕೇತವಾದರೆ, ರವಿ ಊಳಿಗಮಾನ ಪ್ರಜಾಪ್ರಭುತ್ವದ ಸ್ಥಿತಪ್ರಜ್ಞ ಶಿವನಂತಿದ್ದರೆ, ಫ್ರ್ಯಾಂಕ್ ಹೆಸರಿಗೆ ತಕ್ಕಂತೆ ಇದ್ದು ಸತ್ಯ ಶಿವಗಳು ಲೀನವಾಗುವ ಸುಂದರ ಬಿಂದುವಿನಂತಿದ್ದಾರೆ. ರವಿಯವರು ಪೀಠಿಕೆಯಲ್ಲಿ ಇದನ್ನು ಹೇಳಿದ್ದು ನನಗೆ ಈ ಅರ್ಥದಲ್ಲಿ ಕಾಣಿಸುತ್ತದೆ. Of Course ಯಾರು ಸತ್ಯ ಯಾರು ಶಿವ ಯಾರು ಸುಂದರ ಎಂದು ಮೂವರು ಗೆಳೆಯರು ಮತ್ತೊಮ್ಮೆ ಅವಲೋಕಿಸಿಕೊಳ್ಳಬಹುದು.

        ಡಾ. ಮಹೇಂದ್ರಮೂರ್ತಿ ಅವರು ಕೃತಿಯ ಬಗ್ಗೆ ಆಡಿದ ಮಾತುಗಳು ಮಹತ್ವಪೂರ್ಣವಾಗಿವೆ. ಮೂರುಜನ ಗೆಳೆಯರು ಅವರವರ ದೇಶಗಳ ಪರಿಸರ , ಮಾನಸಿಕತೆಯ ಮಿನಿಯೇಚರ್ನಂತೆ ಕಾಣಿಸಿಕೊಳ್ಳುತ್ತಾರೆ. ಮುಖ್ಯವಾಗಿ ಚೀನಾ ಭಾರತಗಳ ನೇತ್ಯಾತ್ಮಕ –ಇತ್ಯಾತ್ಮಕ ನೋಟಗಳು ಇಲ್ಲಿ ಆದ್ಯತೆ ಪಡೆದಿವೆ. ಜಗ್ಗತ್ತಿನ ದೊಡ್ಡಣ್ಣ ಎಂದು ಭಾವಿಸಲ್ಪಟ್ಟ (ಅಥವಾ ತಾನೇ ಭಾವಿಸಿಕೊಂಡ) ದೇಶದ ಪ್ರತಿನಿಧಿಯಾಗಿ ಫ್ರ್ಯಾಂಕ್ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ತೀರಾ ಸರಳ ಭಾಷೆಯಲ್ಲಿ ಹೇಳಬೇಕೆಂದರೆ, ಮೂವರು ಗೆಳೆಯರಿದ್ದಾರೆ. ಕೂಡಿ ಆಡುತ್ತ ಪರಸ್ಪರ ಒಬ್ಬರ ಮನೆಗೆ ಒಬ್ಬರು ಹೋಗಿ ಅಲ್ಲಿಯ ವಾತಾವರಣವನ್ನು ಗ್ರಹಿಸಿ ಅದನ್ನು ತಮ್ಮ ಮನೆಯ ಪರಿಸರಕ್ಕೆ ಹೋಲಿಸಿಕೊಳ್ಳುತ್ತಾರೆ. ಮನುಷ್ಯ ಜೀವನಶೈಲಿ ಸಾಮಾಜಿಕ (ಅ) ವ್ಯವಸ್ಥೆ, ಅದರೊಳಗೆ ಅರಳುವ, ಮುರುಟುವ ಮಾನವೀಯ ಸಂಬಂಧಗಳು , ಧರ್ಮ , ರಾಜಕೀಯ ವ್ಯವಸ್ಥೆ ಮತ್ತೊಂದು ಮಗದೊಂದನ್ನು ಕೆದಕಿ–ಬೆದಕಿ ನೋಡುತ್ತಾರೆ, 

      ವಿಭಿನ್ನ ಸಂಸ್ಕೃತಿಗಳನ್ನು ಹೋಲಿಸಿದಾಗ ಸಾಮಾನ್ಯವಾಗಿ ಅವು ವ್ಯತಿರಿಕ್ತವಾಗಿ ಕಂಡರೂ ಅವುಗಳ ಅನನ್ಯತೆಯಲ್ಲಿ ಒಂದು ರೀತಿಯ ಹೋಲಿಕೆ ಇದ್ದೇ ಇರುತ್ತದೆ. ಚೆಂಡು ಹೂ ಅರಳಿದಂತೆ, ತಾವರೆ ಅರಳದು. ಹಾಗಂದ ಮಾತ್ರಕ್ಕೆ ಒಂದು ಹೆಚ್ಚು ಚಂದ ಇನ್ನೋಂದು ಅಲ್ಲ ಎನ್ನಲಾಗದು. ಹೀಗೆ ಸಂಸ್ಕೃತಿಗೊಂದು ಜಾಯಮಾನ, ಮಣ್ಣಿನವಾಸನೆಯಿದೆ . ಭೂಪ್ರದೇಶ ಬದಲಾದಂತೆ ಮಣ್ಣಿನ ಗುಣ,ಹವಾಗುಣ ಎಲ್ಲ ಬದಲಾಗುತ್ತವೆ. ಆದರೂ ವಿಭಿನ್ನ ಸಂಸ್ಕೃತಿಗಳ ಚಲನೆಯಲ್ಲೊಂದು ಅಪರೂಪದ ಏಕರೂಪತೆಯಿದೆ. ಹೂಗಳ ಅರಳುವಿಕೆಯಂತೆ ಸಂಸ್ಕೃತಿ ವಿಕಸನ ಕೂಡ ಪ್ರಕೃತಿಯೊಂದಿಗೆ ನೇರವಾದ ಸಂಬಂಧ ಹೊಂದಿದೆ. ಹೀಗಾಗಿ ನಮ್ಮದು-ಅನ್ಯರದು ಎಂಬ ಪೂರ್ವಾಗ್ರಹದ ಕಣ್ಣು ಪಟ್ಟಿಯನ್ನು ಕಳಚಿದಾಗ ಮಾತ್ರ ಅವುಗಳ ಸೌಂದರ್ಯ, ಕುರೂಪಗಳೆರಡೂ ಗೋಚರವಾಗುತ್ತವೆ. ಆಳದಲ್ಲಿ ಅವುಗಳಲ್ಲಿ ಸೌಂದರ್ಯವೂ ಇಲ್ಲ, ಕುರೂಪವೂ ಇಲ್ಲ, ಅವುಗಳನ್ನು ನೋಡುವ ನಮ್ಮ ದೃಷ್ಠಿಕೋನದ ಮಿತಿಯದು . ನಾಯಿ , ಬೆಕ್ಕು , ಹುಲಿ ಮೊದಲಾದ ಪ್ರಾಣಿಗಳು ಉಚ್ಚೆಹೊಯ್ದು ತಮ್ಮ ಗಡಿಗಳನ್ನು ಗುರುತಿಸಿಕೊಂಡಂತೆ.ಮನುಷ್ಯನ ಮನಸ್ಸಿನ ದೂರದ ಮೂಲೆಯಲ್ಲಿಯೂ ಇಂತಹ ನಾವೇ ಹಾಕಿಕೊಂಡ ಗಡಿರೇಖೆಗಳು ಉಳಿದುಕೊಂಡುಬಿಟ್ಟಿವೆಯೇನೊ ಅನ್ನಿಸುತ್ತದೆ. 


     

       ಅಖಂಡ ಭೂಮಿಯನ್ನು ಮನುಷ್ಯ ನನ್ನದು–ನಿನ್ನದು ಎಂದು ಕೃತಕ ಗೆರೆಗಳಿಂದ ವಾಟ್ನಿ ಮಾಡಿಕೊಂಡಿದ್ದಾನೆ. ಈ ಕೃತಕ ಗೆರೆಗಳನ್ನು ಕ್ಷಣಿಕವಾಗಿಯಾದರೂ ಅಳಿಸಿ ನಾವು ಈ ಜಗತ್ತನ್ನು ನೋಡುವ ಕಾಲಬಂದಿದೆ. ಅಂತಹದೊಂದು ಪ್ರಯತ್ನವನ್ನು ಈ ಗೆಳೆಯರು ಈ ಕೃತಿಯಲ್ಲಿ ಮಾಡಿದ್ದಾರೆ. ಎಲ್ಲಿಯ ದಾವಣಗೆರೆ, ಎಲ್ಲಿಯ ಚೀನಾದ ಹಳ್ಳಿ ,ಎಲ್ಲಿಯ ಅಮೇರಿಕಾ ? ಮನುಷ್ಯನ ಮಹಾತ್ವಾಕಾಂಕ್ಷೆಯ ಕ್ರಾಂತಿಯುಗದ ನೆಗೆತವನ್ನು ನೋಡಿ ಆಶ್ಚರ್ಯವಾಗುತ್ತದೆ.

    ‘ ಹ್ಯೂಯೆನ್ ತ್ಸಾಂಗ್ ‘ ಎನ್ನುವ ಹೆಸರು ನಾನೂ ಪ್ರಾಥಮಿಕ ಶಾಲೆಯಲ್ಲಿ ಕಷ್ಟಪಟ್ಟು ಉಚ್ಚರಿಸಲು ಕಲಿತಿದ್ದೇನೆ. (ತ್ಯಾಂಗ್ಸ್ ಎಂದೇ ಹೆಚ್ಚಾಗಿ ಹೇಳುತ್ತಿದ್ದುದು) ಅದು ಇನ್ನೂ ತನಕ ಸರಿಯಾಗಿ ಉಚ್ಚಾರವಾಗುತ್ತಿದೆ ಎಂದು ಹೇಳಬರುವುದಿಲ್ಲ, ಈ  ಮನುಷ್ಯನ ಚಿತ್ರ ಎಷ್ಟರಮಟ್ಟಿಗೆ ನೈಜವೊ ಕಾಲ್ಪನಿಕವೊ ನನಗೆ ತಿಳಿಯದು , ಒಟ್ಟಿನಲ್ಲಿ ಸಮಾಜದ ಪುಸ್ತಕದಲ್ಲಿ ಬರುತ್ತಿದ್ದ ಈ ಚಿತ್ರ ನನ್ನನ್ನೂ ಕಾಡಿತ್ತು. ಈ ಪುರಾತನ ಅಲೆಮಾರಿಯ ಜಾಡಿನಲ್ಲಿ ಈ ಮೂವರು ಆಧುನಿಕ ಅಲೆಮಾರಿಗಳು ಹೆಜ್ಜೆಯಿಡುತ್ತ ನಮ್ಮನ್ನು ಅವರು ಅಡ್ಡಾಡಿದಲ್ಲೆಲ್ಲ ಕರೆದುಕೊಂಡು ಹೋಗಿದ್ದಾರೆ , ಭವ್ಯ-ರೋಮಾಂಚನ ತುಂಬಿದ ಹೊಸಲೋಕವೊಂದಕ್ಕೆ ಪಾದಾರ್ಪಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ .ಧರ್ಮ, ದೇಶಗಳ ಸೋಗಿನ ಮರೆಯಲ್ಲಿರುವ ಕಮ್ಯುನಿಸಂ, ಪ್ರಜಾಪ್ರಭುತ್ವ ಬಂಡವಾಳಶಾಹಿ ವ್ಯವಸ್ಥೆಗಳ ಒಳಿತು–ಕೆಡಕುಗಳನ್ನು ಇಲ್ಲಿ ನಿಷ್ಪಕ್ಷಪಾತವಾಗಿ ಪರಾಮರ್ಶಿಸಲಾಗಿದೆ.

    ಲೀಯ ಬಾಲ್ಯದ ಅನುಭವದಲ್ಲಿ ಕೆಂಪು ಕ್ರಾಂತಿಯ ಚೀನಾದ ಚಿತ್ರಣವಿದೆ. ಚೇರ್ಮನ್ ಅವರ ಕೆಂಪು ಪುಸ್ತಕ, ಕೆಂಪು ಯೋಧರು ಹೀಗೆ  ಎಲ್ಲವೂ ಇಲ್ಲಿ ಕೆಂಪುಮಯವಾಗಿದೆ. ಇದನ್ನು ‘ ಸಂಸ್ಕೃತಿ ಕ್ರಾಂತಿ’ ಎಂದು ಅದರ ಯಾವ ಮುಖವನ್ನು ನೋಡಿ ಕರೆಯುತ್ತಾರೆಂಬುದೇ ನನಗೆ ಅರ್ಥವಾಗಲಿಲ್ಲ.ಲೀ ತಮ್ಮ ಬಾಲ್ಯದ ನೆನಪುಗಳನ್ನು ಅತ್ಯಂತ ಖಚಿತವಾಗಿ ನೆನಪಿಟ್ಟು ದಾಖಲಿಸಿದ್ದು, ಸಾಮಾನ್ಯನೊಬ್ಬನ ದೃಷ್ಟಿಯಲ್ಲಿ ಚೀನಾದ ಚಿತ್ರಣವೆನಿಸಿದರೂ ಅದು ಐತಿಹಾಸಿಕವಾಗಿ ತುಂಬಾ ಪ್ರಮುಖವಾಗಿದೆ. ಕೋತಿತಾಜನ ಪುಸ್ತಕವನ್ನು ಲೀಗೆ ಕೊಟ್ಟ ಅವರ ಅಜ್ಜಿಯ ಚಿತ್ರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ . ಕೊನೆಗಾಲದಲ್ಲಿ ಅವರು ಹುರುಳಿ ಬೀಜವನ್ನೆಣಿಸುತ್ತ ಮೊಮ್ಮಕ್ಕಳ ಏಳಿಗೆಗಾಗಿ ತಪಿಸುವುದು ಹೃದಯವನ್ನು ತೇವಗೊಳಿಸುತ್ತದೆ. ನನಗೇಕೊ ಈ ಅಜ್ಜಿಯನ್ನು ನೋಡಿದರೆ ನಮ್ಮ ದೇಶದ ಫಣಿಯಮ್ಮನಂತಹ ಅಜ್ಜಿಯರು ನೆನಪಿಗೆ ಬರುತ್ತಾರೆ. ಒಂದು ಕಾಲದಲ್ಲಿ ಭಾರತದಲ್ಲೂ ಹೆಣ್ಣುಗಳ ಪರಿಸ್ಥಿತಿ ಹೀಗೇ ಇತ್ತಲ್ಲವೇ? ಅವರನ್ನು ಹತ್ತಿಕ್ಕಿ, ಹತ್ತಿಕ್ಕಿ, ಪುರುಷಪ್ರಧಾನ ಸಮಾಜಕ್ಕೆ ಬೇಕಾದಂತಹ, ಒಗ್ಗುವಂತಹ ಹೆಣ್ಣುಗಳನ್ನು ಬಲವಂತದಿಂದ ರೂಪಿಸಲಾಗುತ್ತಿತ್ತು. ಚಿಕ್ಕವಳಿದ್ದಾಗಲೇ ನಡುವಿಗೆ ಡಾಬು , ಕಾಲಿಗೆ ಗೆಜ್ಜೆ , ಪೈಜಣ , ಕಾಲುಂಗರ ಮುಂತಾದವುಗಳಿಂದ ಅವಳನ್ನು ಹೆಚ್ಚು ಹೆಚ್ಚು ಸಂಪ್ರದಾಯದ ಮೌಢ್ಯದಲ್ಲಿ ಹೂಳಲಾಗುತ್ತಿತ್ತು. ಹೆಣ್ಣಿನ ಶೋಷಣೆಗೆ ಕಾಲದೇಶಗಳ ಬೇಧವಿಲ್ಲವೇನೋ! ಚೀನಾದಲ್ಲಿ 

ಹೆಣ್ಣುಮಗುವಿನ ಪಾದಗಳನ್ನು ತಾವರೆಯ ಮೊಗ್ಗಿನ ಆಕಾರದಲ್ಲಿಡಲು ಶೂ ಹಾಕುವುದು , ವಯಸ್ಸಿನಲ್ಲಿ ತನಗಿಂತಲೂ ದೊಡ್ಡವನಾದ ಗಂಡನನ್ನು ಪೋಷಿಸಿ ಲೈಂಗಿಕ ಶಿಕ್ಷಣವನ್ನು ಅವಳೇ ನೀಡುವಂತೆ ವಯಸ್ಸಿನ ಅಂತರವಿಟ್ಟು ಮದುವೆ ಮಾಡುವುದು, ಕೊನೆಗೆ ಮಧ್ಯವಯಸ್ಸಿನಲ್ಲಿ ಅವನು ಇತರೇ ಹೆಣ್ಣುಗಳಿಗೆ ಆಕರ್ಷಿತನಾಗುವಂತಹ ಪರಿಸ್ಥಿತಿ ನಿರ್ಮಿಸುವುದು, ಆಮೇಲೆ ಗಂಡ ಬಿಟ್ಟ ಹೆಣ್ಣುಗಳಾಗಿ ಕೊನೆಗಾಲದಲ್ಲಿ ಲೀಯ ಅಜ್ಜಿಯಂತೆ ಹುರಳಿಬೀಜಗಳನ್ನು ಎಣಿಸುತ್ತ ಕೂರುವುದು ಇವೆಲ್ಲ ನಮ್ಮ ಫಣಿಯಮ್ಮರಂತಹ ಹೆಣ್ಣುಗಳ ಚೀನೀ ವರ್ಷನ್ ಕಥೆಗಳಂತೆ ಭಾಸವಾಗುತ್ತದೆ. ಹೀಗೆ ಎಷ್ಟೇ ಕೂಡಿ ಕಳೆದು ನೋಡಿದರೂ ಎಲ್ಲ ಧರ್ಮಗಳು ತಮ್ಮ ನೈಜ ಅಂತಃಸತ್ವ ಕಳೆದುಕೊಂಡು ಗೊಡ್ಡು ಆಚರಣೆಗಳಾದಾಗ ಅದಕ್ಕೆ ಮೊದಲ ಬಲಿಪಶು ಆಗುವುದು  ಹೆಣ್ಣೇ . ಯಾವ ಖಂಡವಾದರೇನು ಯಾವ ದೇಶವಾದರೇನು ಇದೊಂದು ವಿಷಯದಲ್ಲಿ 100%ರಷ್ಟು ಸಾಮ್ಯತೆ ಇದೆ.

        ಕನ್ ಫ್ಯೂಶಿಯನ್, ಲಾವೊತ್ಸೆಯರ ಬೆಳಕಿನಲ್ಲಿ ನಡೆದ ಚೀನಾ ಲೀ ಅವರು ಹೇಳಿದಂತೆ ಕ್ರಿಶ 1 ನೆಯ ಶತಮಾನದಿಂದ ಬೌದ್ದಧರ್ಮದತ್ತ ವಾಲಿದೆ. ತಾವೊ ಸಹಜ ಜೀವನ ಧರ್ಮ ಪ್ರಬುದ್ಧತೆಯು ಸಾಮಾನ್ಯನಿಗೆ ನಿಲುಕದಾದಾಗ ಭಾರತದ ಬುದ್ಧ ಚೀನಾದತ್ತ ಮುಖಮಾಡಿದ್ದಾನೆ. ಇದೇ ಕಾಲದಲ್ಲಿ ಭಾರತದಲ್ಲಿ ತನ್ನ ಸುವರ್ಣ ಯುಗವನ್ನು ಕಂಡ ಬೌದ್ಧಧರ್ಮ ಪ್ರಚ್ಛನ್ನ ಬೌದ್ಧರೆನಿಸಿಕೊಂಡವರಿಂದ ದಾಳಿಗೊಳಗಾಗಿ ಜಗತ್ತಿನ ಬೇರೆ ಬೇರೆ ಕಡೆ ಪಸರಿಸಿ ಆಸರೆ ಪಡೆದುಕೊಂಡಿದೆ. ಇಂದೊಂದು ರೀತಿ ಇತಿಹಾಸದ ಮರುಕಳಿಕೆ. ಕರ್ನಾಟಕದಲ್ಲಿ 12ನೆಯ ಶತಮಾನದಲ್ಲೂ ಹೀಗೇ ಆಗಿರಲಿಲ್ಲವೆ?. ಮೌಢ್ಯವನ್ನು ವಿರೋಧಿಸಿ, ಸಮಾನತೆ ಸಾರಿದ ವಚನಕಾರರನ್ನು ಪಟ್ಟಭದ್ರ ಸಂಪ್ರದಾಯಸ್ಥ ಅಧಿಕಾರ ಪ್ರಭುತ್ವ  ಬೆನ್ನಟ್ಟಿ ಕೊಲೆಗೈಯಲಿಲ್ಲವೆ! ಇತಿಹಾಸದ ಚಕ್ರದಲ್ಲಿ ಎಡ-ಬಲದ ಶಕ್ತಿಗಳು ಚಕ್ರಾಕಾರವಾಗಿ ತಿರುಗುತ್ತಿರುತ್ತವೆ.  ಈ ಭ್ರಮಣದಲ್ಲಿ ಒಮ್ಮೆ ಎಡ ಮೇಲಾದರೆ ಇನ್ನೊಮ್ಮೆ ಬಲ ಮೇಲಾಗುತ್ತದೆ. ಚೀನಾದ Yin-Yang ಪರಿಕಲ್ಪನೆ ಕೂಡ ಇದನ್ನೇ ಹೇಳುವುದಿಲ್ಲವೆ?.

    ಒಂದುಕಾಲದಲ್ಲಿ ಭಾರತದಿಂದ ಹೊರದೂಡಲ್ಪಟ್ಟ ಬೌಧ್ಧಧರ್ಮಿಯರು ಚೀನಾಕ್ಕೆ ಹೋಗಲಿಲ್ಲವೆ? ಹ್ಯೂಯೆನ್ ತ್ಯಾಂಗ್ ನಂತಹ ಅಲೆಮಾರಿ ಪ್ರವಾಸಿಗರು ಬುದ್ದನನ್ನು (ವಿಚಾರಧಾರೆಯನ್ನು) ಚೀನಾಕ್ಕೆ ಕೊಂಡೊಯ್ಯಲಿಲ್ಲವೇ? ಚೀನಾದಿಂದ ನೆಲೆಗೆಟ್ಟು ಟಿಬೆಟಿನ ದಲೈಲಾಮಾ ಭಾರತದಲ್ಲಿ ಆಶ್ರಯ ಪಡೆಯಲಿಲ್ಲವೇ?. ಮುಂದೊಂದು ದಿನ ಇದು ಮರುಕಳಿಸಬಹುದು . ಹಿಂಸೆಯ ತಾರಕ ಸ್ಥಿತಿ ಮುಟ್ಟಿರುವ ಚೀನ ‘ಕೋವಿಡ್-19’ ರ ಅಡುಗೆ ಮನೆ ಎಂಬ ಅಪಖ್ಯಾತಿ ಗಳಿಸಿದ್ದು ನಿಜವೊ-ಸುಳ್ಳೊ ಎಂಬುದು ಎರಡನೆಯ ಸಂಗತಿ. ಆದರೆ ಮತ್ತೊಮ್ಮೆ ಕನ್ ಫ್ಯೂಶಿಯಸ್, ಲಾವೊತ್ಸೆ, ಬುದ್ದರ ವಿಚಾರಧಾರೆಗಳು ಚೀನದಲ್ಲಿ ಪ್ರವರ್ಧಮಾನಕ್ಕೆ ಬಂದು ಅಲ್ಲಿ ಮತ್ತೊಮ್ಮೆ ಮಾವೊಪೂರ್ವ ಸಂಸ್ಕೃತಿ ಮುನ್ನಲೆಗೆ ಬರಬಹುದು ,



 ಬೌದ್ದ ಭಿಕ್ಷು-ಭಿಕ್ಷುಣಿಯರನ್ನು ಒತ್ತಾಯ ಪೂರ್ವಕವಾಗಿ ಸಂಸಾರ ಬಂಧನಕ್ಕೆ ತೊಡಗಿಸಬಹುದು. ಲೀ ಅವರ ಅಜ್ಜಿಯಂತೆ ಚೀನಾದ ಮುಂದಿನ ಅಜ್ಜಿಯರಿಗೆ ಹುರಳಿಕಾಳುಗಳನ್ನು ಎಣಿಸುತ್ತ ರಾತ್ರಿ ಕಳೆಯುವುದರ ಬದಲಾಗಿ ಬುದ್ದನನ್ನು ಸಾಲಂಕೃತವಾಗಿ ಆರಾಧಿಸುವ, ಧ್ಯಾನಿಸುವ ಭಾಗ್ಯ ಯಾಕೆ 

ಬರಬಾರದು ?, ಬೆಳ್ಳಿಕೂದಲಿನ ಅಜ್ಜಿ ತನ್ನ ಮೊಮ್ಮಗನಿಗೆ ರಾತ್ರಿ ತಥಾಗತನ ಕಥೆಗಳನ್ನು ಹೇಳುತ್ತ ಮಲಗಿಸುವ ಕಾಲ ಕೂಡ ಬರಬಹುದು .

     ಲೀ ಅವರು ಭಾರತದ ಪ್ರಜಾಪ್ರಭುತ್ವವನ್ನು ವಿಡಂಬನಾ ದೃಷ್ಟಿಯಿಂದ ನೋಡುವಲ್ಲಿ  ಅವರ ಪೂರ್ವಾಗ್ರಹವಿದೆ. ಅದೇ ಫ್ರ್ಯಾಂಕ್ ಅವರ ದೃಷ್ಟಿಕೋನ ದೊಡ್ಡಣ್ಣನಂತೆ ಪ್ರಬುದ್ಧವಾಗಿದೆ. ನಾವು ,  ನಮ್ಮ ದೇಶದ ಭೂತ, ವರ್ತಮಾನ ಭವಿಷ್ಯಗಳೆಲ್ಲ ನಮ್ಮ ಹಿಡಿತಕ್ಕೆ ಸಿಗದ ಯಾವುದೋ ಒಂದು ಸೂತ್ರಧಾರ ಶಕ್ತಿ (ಪ್ರಕೃತಿ ಎನ್ನಬಹುದೇ?) ಯಿಂದ ನಿಯಂತ್ರಿಸಲ್ಪಡುತ್ತವೆ , ಅದನ್ನು  ನಾವು ಕಂಡುಕೊಳ್ಳಬೇಕಿದೆ. ಅಲ್ಲಿಯವರೆಗೂ ಬುದ್ಧ ಭಾರತ-ಚೀನಾ ಗಡಿಯಲ್ಲಿ ಮಗ್ಗಲು ಬದಲಿಸುತ್ತ ಮಲಗಿ ಮಂದಹಾಸ ಬೀರುತ್ತಿರಬೇಕಾಗುವುದೇನೊ!. ಚೀನಾದಲ್ಲಿ ಪಗೋಡದ ಪಿತಾಮಹ ಜುಯೆನ್ಜಾಂಗ್ ಬೇರೆ ರೂಪದಲ್ಲಿ ಮತ್ತೆ ಬರಬಹುದೇನೊ ಯಾರು ಬಲ್ಲರು? ರವಿ ಅವರು ಕರೆದಿರುವ ‘ ಅ ಡಿವೈನ್ ಸೋಲ್ ‘ ಫುನೆಂಗ್ ಹೇಳುವಂತೆ ಮನುಕುಲದ ಈ ಹಿಂಸೆ , ಬರ್ಬರತೆ ಅಜ್ಞಾನ ಎಲ್ಲವೂ ವಿಸ್ಮೃತಿ ಭ್ರಾಂತಿಗಳಲ್ಲ.  ಭಗವಾನ ಬುದ್ಧನು ಹೇಳಿರುವಂತೆ ‘ಕರ್ಮಫಲ’ ಗಳೇ ಯಾಕಾಗಿರಬಾರದು? ಕಾಲ-ದೇಶ-ಧರ್ಮಗಳೆಂಬ ಹುಸಿ ಭ್ರಮೆಗಳ ಪೊರೆ ಮನುಷ್ಯನ ಕಣ್ಣಿನಿಂದ ಯಾವಾಗ ಕಳಚಿ ಬೀಳುತ್ತದೆಯೋ ಅವಾಗಲೇ ಎಲ್ಲೆಡೆ ಶಾಂತಿ ಸ್ಥಾಪಿತವಾದೀತು. ಈ ಆವಾಂತರಗಳನ್ನೆಲ್ಲ ಮತ್ತೆ ತೊಡೆದು ಹಾಕಲು ಬುದ್ದನ ಜನ್ಮಸ್ಥಳದಲ್ಲಿ ಈಗಿರುವ ರೋಗವನ್ನು ಗುಣಪಡಿಸಲು ಮತ್ತೆ ಬುದ್ಧ ಹುಟ್ಟಿ ಬರಲು ಬುದ್ಧನಿಗೇನು ಬ್ಯಾರೆ ಕ್ಯಾಮೆ ಇಲ್ಲವೆ? ಮತ್ತೆ ಮತ್ತೆ ಈ ಅರ್ಥಹೀನ ಚಕ್ರದಲ್ಲಿ ಬುದ್ಧ ಸಿಲುಕಿಯಾನೆ?ಅದರ ಬದಲಾಗಿ ಬುದ್ಧನ ಬೆಳಕಿನಲ್ಲಿ ಜಗತ್ತು ನಡೆಯಬೇಕಾದುದೇ ಸರಿಯಾದ ಕ್ರಮ.

    ಫುನೆಂಗ್  ಹೇಳುವಂತೆ ಬುದ್ಧನ ಸಂದೇಶಗಳನ್ನು ಅವನ ಪ್ರತಿಮೆ ಪಗೋಡಗಳಿಲ್ಲದೆಯೂ ಸಾರಬಹುದು. ಈಗಿರುವ ಪಗೋಡಾಕ್ಕಿಂತ  ಉನ್ನತವಾದ ಪಗೋಡವನ್ನು ಕಟ್ಟಲಿ ಎಂಬುದು ಬುದ್ದನ ಅನುಗ್ರಹವಾಗಿರಬಹುದು ಎನ್ನುವ ಅರಿವನ್ನು ಮೂಡಿಸಿದ್ದೇ ಚೇರ್ಮನ್ ಮಾವೊ ಅವರ ಸಂಸ್ಕೃತಿ ಕ್ರಾಂತಿ ಎಂಬ ಪಾರಮಾರ್ಥಿಕ ಸತ್ಯ ! ಎಂದು ಹೇಳುವಲ್ಲಿ ಫುನೆಂಗ್ ಅವರ ದೃಷ್ಟಿ ಎಷ್ಟು ಡಿವೈನ್ , ಪ್ರಬುದ್ದ, ಪರಿಪಕ್ವ  ಎನಿಸುತ್ತದೆ.

   ಮಹಿಳಾ ಶೋಷಣೆಯೆಂಬುದನ್ನು ಒಂದು ಪ್ರತ್ಯೇಕ ಅಧ್ಯಾಯದಲ್ಲಿ ಅಲೆಮಾರಿ ಚರ್ಚಿಸಿದೆ. ಅದು ರವಿ ಅವರು ಅವರ ಗೆಳೆಯರು ಕೂಡಿ ನೋಡಿದ ಸದ್ಯದ ಭಾರತದ ಪರಿಸ್ಥಿತಿಯನ್ನು ಮಾತ್ರ ಚರ್ಚಿಸುತ್ತದೆ. ನಾನು ಇಡೀ ಅಲೆಮಾರಿಯಲ್ಲಿಯ ಹೆಜ್ಜೆಗಳಲ್ಲಿ ಮೂಡಿರುವ ಹೆಣ್ಣಿನ ಶೋಷಣೆಯ ಚಿತ್ರವನ್ನು ಕಾಣಲು ಪ್ರಯತ್ನಿಸುತ್ತೇನೆ. ಏಕೆಂದರೆ ಚೀನಾ ಇರಲಿ, ಭಾರತ ಇರಲಿ ಅಮೆರಿಕಾ ಇರಲಿ 

ಹೆಣ್ಣು ಹೆಣ್ಣೇ. ಹೆಣ್ಣಿನ ಶೋಷಣೆಯ ಸ್ವರೂಪ ಬದಲಾಗಬಹುದೇ ಹೊರತು ಶೋಷಣೆಯಂತೂ ಇದ್ದೇ ಇರುತ್ತದೆ. ಒಂದು ಕಾಲದ ಈ ಶೋಷಣೆಗೆ ಸೇಡಿನ ರೂಪವಾಗಿಯೇ ಇಂದಿನ ಮಹಿಳಾಪರ ಕಾನೂನುಗಳು ಏಕೆ ರೂಪಿತವಾಗಿರಬಾರದು? ಹೀಗೂ ನಾವು ಯೋಚಿಸಬಹುದಲ್ಲವೆ? ಚೀನಾದ ಸಂಸ್ಕೃತಿಕ್ರಾಂತಿಯಲ್ಲಿ ಬೌದ್ದ ಭಿಕ್ಷುಣಿಯರು ಆತ್ಮಹತ್ಯೆ ಮಾಡಿಕೊಂಡರೆಂದು ಫುನೆಂಗ್ ಹೇಳಿರುವುದು ಸತ್ಯವಾದರೆ, ಚೀನಾದ ಮಾಯಾಂಗನೆಯೊಬ್ಬಳು ಫ್ರ್ಯಾಂಕ್ ಗೆ ತನ್ನ ಖೊಟ್ಟಿ ಕನ್ಯತ್ವವನ್ನು ಧಾರೆಯೆರೆದೆನೆಂದು ಹೇಳಿ ಫೂಲ್ ಮಾಡಿ ಹೋಗುವುದು ಇನ್ನೊಂದು ಕುಹಕ ಸತ್ಯವೇಕೆ ಆಗಿರಬಾರದು? ಕನ್ಯತ್ವವನ್ನು ಮೊದಲು ಛೇದಿಸಿದೆನೆಂಬ ಗಂಡಿನ ಅಹಂಕಾರವೇ ನಗೆ ಪಾಟಲಿನದು. ಕೆಲವರಂತೂ ಸಂಶೋಧನಾ ಕ್ಷೇತ್ರದ ಬರವಣಿಗೆಯಲ್ಲೂ ‘ಕನ್ಯೆ ನೆಲ’’ ಎಂಬ ಪದವನ್ನು ಬಳಸಿದ್ದನ್ನು ನೋಡಿ ನಗು ಬರುತ್ತದೆ. ಗಂಡಸಿನ ಕೌಮಾರ್ಯವನ್ನು ಕಳಚುವ ಹೆಣ್ಣಿಗೇಕೆ ಈ ಅಹಂ ಬರುವುದಿಲ್ಲ ಎಂಬುದು ಕುಚೋದ್ಯ . ಚೀನಾದಲ್ಲಿ ಹಿಂದೆ ಹೆಣ್ಣೇ ತನಗಿಂತ ಚಿಕ್ಕವಯಸ್ಸಿನ ಗಂಡನಿಗೆ ಲೈಂಗಿಕ ತರಬೇತಿ ನೀಡಬೇಕಿತ್ತಲ್ಲವೇ? ಆವಾಗ ಅವಳು ಹೆಮ್ಮ ಪಡಬೇಕಿತ್ತಲ್ಲ, ಆದರೆ ಹೆಮ್ಮೆ ಪಡುವುದಿರಲಿ ಅವಳ ಪಾಡೇ ಬೇರೆ. ಯಾಕೆ ಈ ಅಸಮಾನತೆ? ಗಂಡು –ಹೆಣ್ಣುಗಳೆರಡೂ ಸಮಾನ ಆತ್ಮಗಳು ಎಂದು ಬೋಧಿಸುವ ಪರಿಪೂರ್ಣ ಧರ್ಮ ಯಾವಾಗ ಅವತರಿಸೀತು? ಅಥವಾ ಮಾನವನ ವಿವೇಚನೆ ಯಾವಾಗ ಪ್ರಬುದ್ಧವಾದೀತು?


      ಕೊನೆಯ ಕನಸೊ-ನನಸೊ ಎಂಬ ಅಧ್ಯಾಯ ನಿಜವಾಗಲೂ ಉಪಸಂಹಾರವಾಗಿದೆ, ಲೀ ಗೆ ಅವರ ಅಜ್ಜಿಯ ಹುರುಳಿಕಾಳಿನ ಧ್ಯಾನ ಒಂದು ದಿವ್ಯ ಬೆಳಕನ್ನು ನೀಡಿದೆ. ಲೀ ಗೆ ಕೇಸರಿ ಕ್ರಾಂತಿಯ ಕನಸು ಬೀಳಬಹುದಾದರೆ ರವಿಗೆ ಕೆಂಪುಕ್ರಾಂತಿಯ ಕನಸು ಬೀಳಬಾರದೇಕೆ? ಫ್ರೈಡ್ ಹೇಳವಂತೆ ಮನುಷ್ಯನ ಮೆದುಳಿನಲ್ಲಿ ಇದ್, ಇಗೊ, ಸೂಪರ್ ಇಗೊ ಇವೆ. ಭೌತಿಕ ಜಗತ್ತಿನಲ್ಲಿ ಭೂತ, ವರ್ತಮಾನ, ಭವಿಷ್ಯಗಳಿವೆ. ಈ ಮೂರನ್ನೂ ಎಚ್ಚರದಿಂದ ಗಮನಿಸಿದರೆ ನಮ್ಮ ಭೂತವನ್ನು ನಾವು ಕಂಡು, ನಮ್ಮ ಭವಷ್ಯವನ್ನು ನಮಗೆ ಬೇಕಾದಂತೆ ರೂಪಿಸಿಕೊಳ್ಳಲು ವರ್ತಮಾನದಲ್ಲಿ ಜೀವಿಸಬಹುದು. ಇದು ಕನಸೊ-ನನಸೊ ಮುಖ್ಯವಲ್ಲ ಮಾವೊ,-ಮಾಮೊ ಇಲ್ಲಿ ಮುಖ್ಯರಲ್ಲ. ಬುದ್ದನು ಹೇಳಿರುವಂತೆ ಪ್ರಜ್ಞೆಯನ್ನು ಎಚ್ಚರಗೊಳಿಸಬೇಕಿದೆ. ಬುದ್ಧನ ತತ್ವಗಳನ್ನು ಬದುಕಿದ ಅಶೋಕನ ‘ನೀಲಿ ಚಕ್ರ’ ಭಾರತದ ಧ್ವಜದಲ್ಲಿ ಚಿತ್ರಿತವಾಗಿದೆ. ಅದು ಅಲ್ಲಿ ಸುತ್ತುವುದಿಲ್ಲ. ಆದರೆ ನಿಜವಾದ ಅರ್ಥದಲ್ಲಿ ಇಡೀ ಬ್ರಹ್ಮಾಂಡದಲ್ಲಿ ಸುತ್ತುತ್ತ ಏನನ್ನೋ  ಸೂಚ್ಯವಾಗಿ ಹೇಳುತ್ತಿದೆಯೆನಿಸುತ್ತದೆ. 

    ಹಿಂದಿಯ ‘ಚಕ್ರ’ ಸಿನಿಮಾದಲ್ಲಿ ಲೂಕಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ನಸೀರುದ್ದೀನ್ ಶಹಾನ ಬಾಯಲ್ಲಿ ಒಂದು ಅತ್ಯಮೂಲ್ಯ ಮಾತು ಬರುತ್ತದೆ. ಕೊಳಗೇರಿಯ ಪೋಕರಿ ಗಂಡಾಗಿ ಎಲ್ಲ ಹಲಕಾ ಕೆಲಸಗಳನ್ನು ಮಾಡಿಯೂ ಅವನೊಬ್ಬ ‘ನಿಷ್ಕಲ್ಮಶ ಆತ್ಮ’ನಾಗಿ ಚಿತ್ರಿಸಲ್ಪಟ್ಟಿದ್ದಾನೆ. ಅವನು ಒಬ್ಬ ಸಣ್ಣ ಪೋಕರಿ ಹುಡುಗನಿಗೆ ಹೇಳುತ್ತಾನೆ. 

‘‘ಸಾರಾ ಚಕ್ಕರ್ ದೋ ಚೀಜೊ ಕಾ ಹೈ , ಏಕ ಪೇಟ ಕಾ ಔರ ದೂಸರಾ ಪೇಟಕೆ ನೀಚೆ ಕಾ “  .  ಅವನು ಒಬ್ಬ ಜ್ಞಾನಿಯಾಗಿಯೇ ನನಗೆ ಕಾಣುತ್ತಾನೆ. ಭಾರತ-ಚೀನಾ-ಅಮೇರಿಕಾ ಮತ್ತಾವುದೇ ದೇಶವಿರಲಿ ಸೂರ್ಯ-ಚಂದ್ರರು ಒಬ್ಬರೇ ಇರುವಂತೆ ಸತ್ಯ ಕೂಡ ಒಂದೇ ಇರುತ್ತದೆ. ಈ ಸತ್ಯ ಕೂಡ ಮಾಧ್ಯಮಿಕಾ ಪಂಥ ಹೇಳುವಂತೆ 'ಇದೆ ಎಂದುಕೊಂಡರೆ ಇದೆ. ಇಲ್ಲ ಎಂದುಕೊಂಡರೆ ಇಲ್ಲ' .  

      ಮನುಷ್ಯ ಬುದ್ಧಿಯಿಂದ ಎಷ್ಟೆಲ್ಲ ಸಿದ್ಧಾಂತಗಳನ್ನು ಹೆಣೆದಿದ್ದಾನೆ ಆದರೆ ಮನುಷ್ಯ ಮೊದಲು ಆಮೇಲೆ ಸಿದ್ದಾಂತ ಎಂಬುದನ್ನು ಮರೆತು ಹೆಣೆದ  ಸಿದ್ದಾಂತಗಳಲ್ಲಿ “ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನಗೆ ಸುತ್ತಿ ಸಾವಂತೆ’ ಎಂದು ಅಕ್ಕ ಹೇಳುವಂತೆ ಸಾವನ್ನಪ್ಪುತ್ತಾನೆ . ಇದು ಅಗಬಾರದು.

     ದೇಶ,ಭಾಷೆಯ ಗಡಿಗಳನ್ನು ಮೀರಿ ಗೆಳೆತನ ಮಾಡಿ ಇಂತಹ ಮೌಲಿಕ ಗ್ರಂಥವನ್ನು ನೀಡಿದ ಅಲೆಮಾರಿ ಗೆಳೆಯರಿಗೆ ಕೃತಜ್ಞತೆಗಳು ಈ ಪುಸ್ತಕ ನನಗೆ ಸಿಗುವಂತಾಗಿ ನಾನು ನನ್ನ ಬುದ್ಧಿಗಂಟಿದ ಧೂಳನ್ನು ಕೊಡಹಲು ಅವಕಾಶ ಸಿಗುವಲ್ಲಿ ಆ ಬುದ್ಧನ ಕರುಣೆಯ ಬೆಳಕಿದೆ ಎಂದು ನಾನೂ ಫುನೆಂಗರ ಹಾಗೆ ಅಂದುಕೊಳ್ಳುತ್ತೇನೆ.ಈ ಪುಸ್ತಕವನ್ನು ವಿವಿಧ ದೇಶಗಳ ಎಲ್ಲ ಪ್ರಜ್ಞಾವಂತರೂ ಓದಬೇಕು .ಬರೀ ಓದದೇ ಸುಂದರ ಮಾನವೀಯತೆಯ ಅಂತಃಕರಣ ಜಾಗೃತಗೊಳಿಸಿಕೊಳ್ಳಲು ಮೊದಲಾಗಬೇಕು. ಅಲೆಮಾರಿ ಗೆಳೆಯರಿಗೆ ಶುಭವಾಗಲಿ.

                                                                       H .ಶಶಿಕಲಾ        

ಪೂರ್ವಾಗ್ರಗಳ ಪೂರ್ವಾಪರ

 ಪೂರ್ವಾಗ್ರಹಗಳ ಪೂರ್ವಾಪರ


ಮಾನ್ಯ ರೇಣುಕಾ ರೂಪಾ ಎಂಬ ದ್ವಿ ಸ್ತ್ರೀಲಿಂಗ ನಾಮಧಾರಿ ಪುಲ್ಲಿಂಗದ(?) ಉಪನ್ಯಾಸಕರೋರ್ವರು ರವಿ ಹಂಜ್ ಅಂತಹ ಬಂಡವಾಳಶಾಹಿ ಭಕ್ತರ ಕೃತಿಗಳಿಂದ ಕನ್ನಡಿಗರಿಗೆ ಏನು ಲಾಭ ಎಂದು ತಮ್ಮ ಪಂಥಭಕ್ತಿಯ ಉನ್ಮಾದದಲ್ಲಿ ಪ್ರಶ್ನಿಸಿದ್ದಾರೆ. ನನ್ನ ಮಹಾಪಯಣ ಕೃತಿಯ ಮುನ್ನುಡಿ ಫೇಕ್ ಎಂದು ಇತ್ತೀಚೆಗೆ ಅಂಗಭಂಗಕ್ಕೊಳಗಾದ ಇವರು ಈಗ ಅವರ ಅಲ್ಲದ ಗುರುಗಳನ್ನು ಆವಾಹಿಸಿಕೊಂಡು ಅಲವತ್ತುಕೊಳ್ಳುತ್ತಿದ್ದಾರೆ.


ಇರಲಿ ಇದು ಕೇವಲ ರೇಣುಕಾ ರೂಪಾರ ಸಮಸ್ಯೆಯಲ್ಲ. ಇದು ಇಂದಿನ ದುರಿತ ಕಾಲದ ಅನೇಕ ಸಾಹಿತಿ ಗುರುಗಳ ಬಹುಪರಾಕು ಶಿಷ್ಯರ ಪರಿಸ್ಥಿತಿ. ಹಾಗೆಂದು ಇವರನ್ನು ಸಾಮಾನ್ಯರು ಎಂದು ಪರಿಗಣಿಸದಿರಿ. ಇವರು ಕನ್ನಡ ಎಂ.ಎ ಮಾಡಿದರೆ ಇಂಜಿನಿಯರಿಂಗಿನ ಎಲ್ಲಾ ವಿಭಾಗಗಳಲ್ಲದೆ, ವೈದ್ಯಕೀಯ, ಜಾಗತಿಕ ಇತಿಹಾಸ/ವಿದ್ಯಾಮಾನ/ಭಾಷಾಜ್ಞಾನ/ರಾಜಕೀಯ, ಸಮಾಜಶಾಸ್ತ್ರ, ಖಗೋಳ, ಭೂಗೋಳ, ಸಾಗರಾಳವಲ್ಲದೆ ಎಲ್ಲಾ ಜ್ಞಾನಗಳಲ್ಲಿ ಪರಿಣಿತಿ ಹೊಂದಿ ಯಾರು ಹೂಸಿದರೆ ಏನನ್ನು ಎಲ್ಲೆಲ್ಲಿ ತಿಂದಿದ್ದರು ಎಂದು ತಿಳಿಸುವಷ್ಟು ಅಪರಿಮಿತ ಬುದ್ಧಿವಂತಿಕೆಯನ್ನು ಪಡೆಯುವರು. 


ಇಂತಹ ಎಂ.ಎ ಪಡೆಯದೆ ಕೇವಲ ಕನ್ನಡದಲ್ಲಿ ಮಾತ್ರ ಎಂ.ಎ ಪಡೆದವರು ಇದಕ್ಕೆ ವರ್ಜ್ಯ! ಏಕೆಂದರೆ ಅವರು ವಿಶೇಷ ಚೇತನರಾಗಿರುವುದಿಲ್ಲ. ಹಾಗಾಗಿ ಇಂತಹ ಜ್ಞಾನಾರ್ಜನೆಯನ್ನು ವಿಶೇಷ ಚೇತನರಿಗೆ ವಿಶೇಷವಾಗಿ ಕರುಣಿಸಿದವರೇ ಇವರ ಆರಾಧ್ಯ ದೈವಗಳಾದ ಸಾಹಿತಿ ಸಂಶೋಧಕ ವಿಶ್ವವಿದ್ಯಾಲಯಗಳ ಪ್ರೊಫೆಸರರುಗಳು!


ಈ ಗುರುಶಿಷ್ಯಂದಿರ ಅಪರಿಮಿತ ಅಣಿಮು(ಮ)ತ್ತಿನ ಮಾತುಗಳು ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನವರೆಗೆ ಸಾಕಷ್ಟು ಸಿಗುತ್ತಿದ್ದವು. ಆದರೆ ಇತ್ತೀಚೆಗೆ ತುರ್ತುಪರಿಸ್ಥಿತಿ ಹೇರಿರುವ ಸರ್ಕಾರದ ದೆಸೆಯಿಂದ ಈ ಸರ್ಕಾರಿ ನೌಕರರು ತಕ್ಕಮಟ್ಟಿಗೆ ಭೂಗತರಾಗಿದ್ದಾರೆ. ತೇಜಸ್ವಿಯವರ ಕೃತಿಗಳ ಪ್ಯಾರಾಗಳನ್ನು ಮೊನ್ನೆಯಿಂದ ಓದುತ್ತಿರುವ ನಿಮ್ಮ ಮನದಲ್ಲಿ "ಪ್ರೊಫೆಸರ್ ಗಂಗೂಲಿ" ಹಾದು ಹೋದರೆ ಅದಕ್ಕೆ ನೀವೇ ಜವಾಬ್ದಾರರು!


ಮಾತೆತ್ತಿದರೆ ಸಮಾಜವಾದ, ಕಮ್ಯುನಿಸ್ಟ್, ಬದ್ಧತೆ ಮಾತನಾಡುವ ಶಿಷ್ಯ ಕೋಟಿಯ ಮಹಾನ್ ಗುರುಗಳೆಲ್ಲರೂ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಪ್ರೊಫೆಸರರುಗಳಾಗಿದ್ದರು/ದ್ದಾರೆ. ಸರ್ಕಾರ ಆ ಉದ್ಯೋಗದಲ್ಲಿರುವವರಿಗೆ ಲಕ್ಷಗಟ್ಟಲೆ ಸಂಬಳ, ಸಂಶೋಧನೆ ಮಾಡಲು ಅನುದಾನ ಮತ್ತು ಸಹಾಯ ಮಾಡಲು ಸ್ನಾತಕೋತ್ತರ, ಪಿಹೆಚ್.ಡಿ, ಪೋಸ್ಟ್ ಡಾಕ್ಟೊರಲ್ ವಿದ್ಯಾರ್ಥಿಗಳ ಯೋಧರನ್ನೇ ಒದಗಿಸುತ್ತದೆ. ಇಂತಹ ಎಲ್ಲಾ ಸವಲತ್ತು ಪಡೆದು ನಡೆಸಿದ ಸಂಶೋಧನೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಈ "ಸಮಾಜವಾದಿ"ಗಳು ಅವೇ ಸಂಶೋಧನೆಗಳನ್ನೇ ಬಂಡವಾಳವಾಗಿಸಿಕೊಂಡು ಖಾಸಗಿಯಾಗಿ ರಾಯಧನ ಪಡೆದು ಪ್ರಕಟಿಸಿ ಪ್ರಕಾಶಿಸುವುದು ಎಷ್ಟು ಸರಿ?


ಹಾಗೆ ಪ್ರಕಾಶಿಸುವುದು ಬಂಡವಾಳಶಾಹಿತ್ವವೇ ಸಮಾಜವಾದವೇ? ಅಥವಾ ಕಮ್ಯುನಿಸ್ಟ್ ಸಿದ್ಧಾಂತವೇ? ಬಂಡವಾಳಶಾಹಿ ಅಂಬಾನಿ ಅದಾನಿಯರ ಪ್ರಶ್ನಿಸುವ ನೈತಿಕತೆ ಇವರಿಗಿದೆಯೇ?


ಗುಂಡು ತುಂಡಿಗೆ ಗುರುಗಳು ಶಿಷ್ಯರನ್ನು ಜೊತೆಗೆ ಕೂರಿಸಿಕೊಂಡು ಅದಕ್ಕೆ "ಸಮಾನತೆ"ಯ ಮೆರುಗು ಕೊಟ್ಟು ತಮ್ಮ ಪಲ್ಲಂಗ ಪುರಾಣ ಊದಿದರೆ ಅದು ಮಹಿಳಾ ಸ್ವಾತಂತ್ರ್ಯದ ಹೊಸ ವ್ಯಾಖ್ಯಾನ! ಪಿಹೆಚ್.ಡಿ ಮಾಡಲು ಬಂದು ಅರ್ಧಕ್ಕೆ ಬಿಟ್ಟು ಹೋದ ಮಹಿಳೆಯರ ಸಂಖ್ಯೆ, ಇವರು ವಿಮೋಚನೆಗೊಳಿಸಿದ ಮಹಿಳಾ ವಿಮೋಚನೆಯ ಅಭಿಯಾನ!


ಇರಲಿ, ನಾನೊಬ್ಬ ಬಂಡವಾಳಶಾಹಿ! ನನ್ನ ಕೃತಿಗಳನ್ನು ಕನ್ನಡಿಗರು ಏಕೆ ಓದಬೇಕು? ಅದರಿಂದ ಏನು ಲಾಭ ಎಂದು ನನ್ನನ್ನು "ಆರಾಧಿ"ಸುವ ಈ ಗುಂಪಿಗೆ ನಾನು ಸ್ವಲ್ಪವೇ ಸ್ವಲ್ಪ ಬಂಡವಾಳದ ಲೆಕ್ಕಾಚಾರ ಹೇಳಿಕೊಡುತ್ತೇನೆ.


ಪ್ರಕಟಗೊಳ್ಳುತ್ತಿರುವ ಇತ್ತೀಚಿನ ಕನ್ನಡ ಪುಸ್ತಕಗಳು ಮಾರಾಟವಾಗುವ ಸಂಖ್ಯೆ ಶೋಚನೀಯ. ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! 


ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಸುಮಾರು ಐದು ಲಕ್ಷಕ್ಕೂ ಹೆಚ್ಚು.  ಸಂಶೋಧನಾ ತಂಡಗಳ ಸ್ವರೂಪದ  ಸಂಶೋಧನೆಗಳಾದರೆ ಇನ್ನೂ ಅಧಿಕ. ಅದರಲ್ಲಿಯೂ ಆ ಸಂಶೋಧನೆಗಳು ನನ್ನ  ಹುಯೆನ್ ತ್ಸಾಂಗನ ಮಹಾಪಯಣ, ಅಗಣಿತ ಅಲೆಮಾರಿ, ಭಾರತ ಒಂದು ಮರುಶೋಧನೆ ಯಂತಹ ಅಂತರರಾಷ್ಟ್ರೀಯ ವಿಷಯ ವಸ್ತುಗಳಿದ್ದರೆ ಇನ್ನೂ ಹೆಚ್ಚು!


ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕಗಳು ಕಷ್ಟ!


ಆದರೆ  ನನ್ನೆಲ್ಲಾ ಸಂಶೋಧನೆಗಳು ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. 


ಹೌದು, ನಾನೊಬ್ಬ ಹಣ ಗೌಣವೆನ್ನುವ ಬಂಡವಾಳಶಾಹಿ!  


ಹೀಗೆ ನಾನು ವೈಯಕ್ತಿಕವಾಗಿ ಬಂಡವಾಳ ವ್ಯಯಿಸಿ ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅಂತಹುದೇ ಲಾಭಾಂಶವನ್ನು ಬಯಸದೇ ಬಂಡವಾಳ ವ್ಯಯಿಸಿದ ಪ್ರಕಾಶನ ಸಂಸ್ಥೆಗಳು ನನ್ನ ಕೃತಿಗಳನ್ನು ಪ್ರಕಟಿಸಿದವು. ಇದರಲ್ಲಿ ಯಾವುದೇ ರಾಯಧನವಿಲ್ಲ. ಪದಕ್ಕೆರಡು ರೂಪಾಯಿ ಬಿಡಿ, ಇಡೀ ಪುಸ್ತಕಕ್ಕೆ ಒಂದು ರೂಪಾಯಿಯಿಲ್ಲ. 


ಈಗ ಹೇಳಿ ಕನ್ನಡಿಗರು ಏಕೆ ನನ್ನಂತಹ ಬಂಡವಾಳಶಾಹಿಯ ಕೃತಿಗಳನ್ನು ಓದಿ ಏನು ಲಾಭ? "ಅರಿವೇ ಗುರು" ಎಂಬುದು ಒಂದು ವಿಶ್ವವಿದ್ಯಾಲಯದ ಲಾಂಛನ. 


ಲಾಂಛನ ಮರೆತ ಈ ಸ್ನಾತಕಿ, ಸ್ನಾತಕೋತ್ತರಿಗಳು ಹಾಡುವುದು ಅದೇ ವಿಶ್ವವಿದ್ಯಾಲಯದ ಊರಿನ ಕವಿಗಳ ಪದ್ಯ "ಕುರುಡು ಕಾಂಚಾಣ!"


ಕನ್ನಡ ಎಂ.ಎ ಮಾಡಿ (ಕನ್ನಡ ಎಂ.ಎ. ಮಾಡಿ ಕೇವಲ ಕನ್ನಡ ಕಲಿತು ಕನ್ನಡ ಸೇವೆ ಮಾಡುತ್ತಿರುವವರು ದಯವಿಟ್ಟು ಕ್ಷಮಿಸಿ. ನೀವು ಇದಕ್ಕೆ ಹೊರತು!) ಸಕಲಕಲಾಪಾರಂಗತರಾಗಿರುವ ಸಮಾಜವಾದಿ, ಸಾಕ್ಷಿಪ್ರಜ್ಞೆ, ಆತ್ಮಸಾಕ್ಷಿ, ಬದ್ಧತೆ, ಸಿದ್ಧಾಂತ, ಚಿಂತನಶೀಲ, ವೈಚಾರಿಕ, ಬಹುತ್ವಗಳ ಪೂರ್ವಾಗ್ರಹಗಳ ಪೂರ್ವ ಗ್ರಹದ ಈ ಮಂದಿ ಪಶ್ಚಿಮ ಗ್ರಹದ ಆದರೆ ಪೂರ್ವಾಪರದ ನನಗೆ ಕೊಡುತ್ತಿರುವ ಪ್ರಚಾರಕ್ಕೆ ಚಿರಋಣಿ!


ಈ ಬಂಡವಾಳಶಾಹಿಯ ಎಲ್ಲಾ ಕೃತಿಗಳೂ ಮುದ್ರಿತ ಮತ್ತು ಇ-ಪುಸ್ತಕ ರೂಪದಲ್ಲಿ ಋತುಮಾನದಲ್ಲಿ ಲಭ್ಯ. ಹಾಂ ನೆನಪಿಡಿ, ನನ್ನ ಕೃತಿ 100% satisfaction guaranteed ಒಟ್ಟಿಗೆ ಬರುತ್ತದೆ. ಮೇಲಿನವರ ಸಾಕ್ಷಿಪ್ರಜ್ಞೆ, ಆತ್ಮಸಾಕ್ಷಿಗಳಿರದೆ ಸಹಜ ಮಾನವ ಕುತೂಹಲವಿದ್ದೂ ನಿಮಗೆ ತೃಪ್ತಿಯಾಗಲಿಲ್ಲವೆಂದರೆ ನನ್ನ ಮುಂದಿನ ಕೃತಿ ಉಚಿತ.


https://play.google.com/store/apps/details?id=ruthumana.app


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮೇಕಿಂಗ್ ಆಫ್ ಹುಯೆನ್ ತ್ಸಾಂಗ್

 ನಮಸ್ಕಾರ,


ಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹಾಗಾಗಿ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.

ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ ಪುಸ್ತಕವಾಗಿದೆ.


ನಂತರ ಭಾರತದ ಹುಯೆನ್ ತ್ಸಾಂಗ್ ನೇ ಚೀನಾದ ಝುಎನ್ ಜಿಯಂಗ್ ಎಂದು ಅರಿಯಲು ಒಂದು ತಿಂಗಳು ಬೇಕಾಯಿತು. ನಂತರ ಚೀನೀ ದೃಷ್ಟಾಂತ, ಕಾರ್ಟೂನಗಳು, ಮ್ಯೂಸಿಯಂ ದಾಖಲೆ, ಸಂಗ್ರಹ, ಫೋಟೋಗಳನ್ನೆಲ್ಲ ವಿಂಗಡಿಸಿ ವಿಶ್ಲೇಷಿಸುತ್ತ ನಡೆಯಬೇಕಿತ್ತು. ಕಾರ್ಟೂನ್ ಪ್ರಕಾರ ಈತನಿಗೆ ಮಂಗವೊಂದು ಸಹಾಯ ಮಾಡಿದಂತೆ ಚಿತ್ರಿಸಿ ರಾಮನ ಮಾಡಿದ್ದರು! ಹನುಮಂತ ರಾಮನಿಗೆ ಸಮುದ್ರ ದಾಟಲು ಸಹಾಯಿಸಿದ ರಾಮಾಯಣದಂತೆ, ಕೋತಿಯೊಂದು ಇವನಿಗೆ ಮರುಭೂಮಿ ದಾಟಲು ಸಹಾಯಿಸಿದಂತೆ. 


ಆದರೆ ಯಾವಾಗ ಈ ಚೀನೀ ಯಾತ್ರಿಕ ಭಾರತದ ಇತಿಹಾಸಕ್ಕೆ ಅನಿವಾರ್ಯವೆನ್ನುವಷ್ಟು ಪ್ರಮುಖನೆನಿಸಿದನೋ ಆಗ ಈತನ ಬಗ್ಗೆ, ಈತ ದಾಖಲಿಸಿದ ಭಾರತದ ಇತಿಹಾಸದ ಬಗ್ಗೆ ಕುತೂಹಲಕ್ಕಿಂತ ಸಂಶಯ ಮೂಡಿತು.  ಈ ಸಂಶಯಕ್ಕೆ ಕಾರಣ, ಚೀನಿಯರೊಂದಿಗಿನ ನನ್ನ ವೃತ್ತಿನಿರತ ಅನುಭವ, ಅವರ ಅನ್ಯಭಾಷಾ ಜ್ಞಾನದ ಅರಿವು, ಮತ್ತು  ಚೀನೀಯರ "ತಳ್ಳು" ಪ್ರವೃತ್ತಿಯ ನಿಕಟ ಪರಿಚಯ . ಈ ತಳ್ಳುವ ಪ್ರವೃತ್ತಿ ಭಾರತೀಯರನ್ನೊಳಗೊಂಡಂತೆ ಎಲ್ಲಾ ಏಷಿಯನ್ನರಲ್ಲಿಯೂ ಇದೆ. ಚೀನೀ ರೆಸ್ಟೋರೆಂಟುಗಳಲ್ಲಿ ನಿಮಗೆ ತಂದಿಟ್ಟ ಊಟತಿಂಡಿಯ ಬಗ್ಗೆ ಅನುಮಾನ ಮೂಡಿ ಇದು ಸಸ್ಯಾಹಾರವೇ ಎಂದು ಕೇಳಿದರೆ ಹಿಂದುಮುಂದು ನೋಡದೆ "ಹೌ"ದೆನ್ನುತ್ತಾರೆ. ಒಟ್ಟಾರೆ ಕೊಟ್ಟ, ಮಾರಿದ ವಸ್ತು ಹಿಂದಕ್ಕೆ ಬರಬಾರದು ಎಂಬ ತಳ್ಳುವ ಉದ್ದೇಶದಿಂದ ಕೇಳಿದ್ದಕ್ಕೆಲ್ಲ "ಹೌ"ದೆನ್ನುತ್ತಾರೆ!


ನನ್ನ ಕ್ಲೀಷಾ ಪ್ರವೃತ್ತಿ ಇವನ ಇತಿಹಾಸವನ್ನು ಕೆದಕುವಂತೆ ಮಾಡಿತು. ಮೇಲ್ನೋಟಕ್ಕೆ ಈತ ಇತರೆ ಚೀನಿಯರಂತೆ ತಳ್ಳು ಪ್ರವೃತ್ತಿಯವನಾಗಿರಲಿಲ್ಲವೆಂದು ತಿಳಿಯಿತು. ನಂತರ ಕೆದಕಿದಷ್ಟೂ ಈತನ ನಿಖರತೆ, ಪ್ರಖರತೆ, ಸ್ಪಷ್ಟತೆ ಕಾಣುತ್ತಾ ಸಾಗಿ ಪುಸ್ತಕವಾಯಿತು. 


ಬಿಗ್ ಡೇಟಾ, ಬಿಸಿನೆಸ್ ಇಂಟೆಲಿಜೆನ್ಸ್, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ.


ಹಾಗಾಗಿ ಈತ ಕೇವಲ ಒಬ್ಬ ಬೌದ್ಧಭಿಕ್ಷು, ಸಾಹಸಿ, ವಿದ್ವಾಂಸ, ರಾಜತಾಂತ್ರಿಕ, ಸಂಚಾರಿಯಲ್ಲದೆ ಮಾಹಿತಿ ವಿಶ್ಲೇಷಣೆಯ ಪಿತಾಮಹನೂ ಎನಿಸುತ್ತಾನೆ. ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಪಿತಾಮಹನೆನ್ನಿಸಿದರೆ, ಹುಯೆನ್ ತ್ಸಾಂಗ್ ಮಾಹಿತಿ ವಿಶ್ಲೇಷಣೆಯ ಪಿತಾಮಹ!!!


ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಶ್ರಮ ಸುಮಾರು ಐದು ಲಕ್ಷಕ್ಕೂ ಹೆಚ್ಚು. ಅದರಲ್ಲಿಯೂ ಸಂಶೋಧನೆ, ಹುಯೆನ್ ತ್ಸಾಂಗನಂತಹ ಅಂತರರಾಷ್ಟ್ರೀಯ ವ್ಯಕ್ತಿ ವಿಷಯವಾಗಿದ್ದರೆ ಇನ್ನೂ ಹೆಚ್ಚು!  

ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ.


ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ  ಕಾರಣ ಇಲ್ಲಿ ಹಣ ಗೌಣ.  ನಾನು ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅದೇ ಸಾಮಾಜಿಕ ಕಳಕಳಿಯ, ಚಿಂತನೆಗಳನ್ನು ಮೀರಿದ ವೈಚಾರಿಕತೆಯ ಸಮಾಜಮುಖಿ ಬಳಗ ಪ್ರಕಟಿಸಲು ಉತ್ಸಾಹ ತೋರಿತು. 


ಇಂದು ಸಿದ್ಧಾಂತ ಬದ್ಧ ಕರ್ನಾಟಕದ ಕನ್ನಡದಲ್ಲಿ ಸಿದ್ಧಾಂತಕ್ಕೆ ಜೋಡಣೆಯಾದ, ಲಿಯೋ ಟಾಲ್ಸ್ಟಾಯ್, ಲೆನಿನ್, ಚೆ ಗುವೆರಾ ಮುಂತಾದವರ ಬಗ್ಗೆ ಅನೇಕ ಪುಸ್ತಕಗಳಿವೆ. ಆದರೆ ಭಾರತದ ಇತಿಹಾಸದ ಅನಿವಾರ್ಯನಾದ, ಸಿದ್ಧಾಂತಕ್ಕೆ ಅನ್ವಯಿಸದ ಹುಯೆನ್ ತ್ಸಾಂಗ್ ಬಗ್ಗೆ ಎಷ್ಟು ಪುಸ್ತಕಗಳಿವೆ? 


ಇನ್ನು ಏಳನೇ ಶತಮಾನದ ಅಂದಿನ ಚೀನಾ/ಭಾರತಕ್ಕೂ ಇಂದಿನ ಇಪ್ಪತ್ತೊಂದನೇ ಶತಮಾನದ ಆ ದೇಶಗಳಿಗೂ ವ್ಯತ್ಯಾಸವಿದೆಯೇ?  


ಆಗಿನಿಂದಲೂ ಚೈನಾದಲ್ಲಿ ಚಕ್ರಾಧಿಪತ್ಯ. ಈಗಲೂ ಚುನಾಯಿತ ಚಕ್ರಾಧಿಪತ್ಯ!

ಅಂದು ಭಾರತದಲ್ಲಿ ರಾಜರು, ಸರದಾರರು, ಸಾಮಂತರು, ಪಾಳೆಗಾರರು. ಈಗಲೂ ಚುನಾಯಿತ ರಾಜರ, ಸಾಮಂತರ, ಪಾಳೆಗಾರರ ಊಳಿಗಮಾನ್ಯ, ಚುನಾಯಿತ ಊಳಿಗಮಾನ್ಯ Elected feudalism! 


ಇನ್ನು ಸಿದ್ದಾಂತಗಳ ಮೀರಿದ ವೈಚಾರಿಕ ಚಿಂತನೆಯ ಕಾಡುಸಿದ್ದರಾದ ನನ್ನ ಮತ್ತು ಸಮಾಜಮುಖಿ ಬಳಗದ ಒಂದು axis of civil ಏರ್ಪಟ್ಟು ಹುಯೆನ್ ತ್ಸಾಂಗ್ ಪುಸ್ತಕ ಇಂದು ಬಿಡುಗಡೆಗೊಂಡಿದೆ.


ನಿಮ್ಮ ಪ್ರೋತ್ಸಾಹ ನಮಗಿರಲಿ. 


ಧನ್ಯವಾದಗಳು.

ಮಲೆಕುಯ್ಲು

 ಮೂವತ್ತೈದು ವರ್ಷಗಳ ಹಿಂದೆ ಬೇಸಿಗೆ ರಜೆಗೆ ಬಸ್ಸು ಹತ್ತಿ ದಾವಣಗೆರೆಯಿಂದ ಶಿವಮೊಗ್ಗ ಕಡೆ ಹೊರಟರೆ ದಾರಿಯಲ್ಲಿ ಸಿಗುವ ಕೆರೆಗಳಲ್ಲಿ ನೀರಿರುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿನ ಕಾಲುವೆಗಳಲ್ಲಿ ಮತ್ತು ಗುಂಡಿಗಳಲ್ಲಿ ನೀರು ಕಾಣುತ್ತಿದ್ದಿತು.  ಪ್ರಾಯಶಃ ಗದ್ದೆಗಳ ನೀರು ಬಸಿದು ಈ ಕಾಲುವೆಗಳಲ್ಲಿ ನೀರಿರುತ್ತಿತ್ತೇನೋ! ತುಂಗೆಯಲ್ಲಿ ನೀರು ಹರಿಯುತ್ತಿದ್ದಿತು. ಅದರಲ್ಲಿ ಮೀನು ಹಿಡಿಯುವವರೂ ಬಲೆ ಹಾಕುತ್ತಿದ್ದರು.

 

ಈಗ ಮಳೆಗಾಲ ಮುಗಿದ ನಂತರದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ರೂಟಿನಲ್ಲಿ ಹೊರಟರೆ ಸಿಕ್ಕುವ ಯಾವ ಕೆರೆಗಳಲ್ಲಿಯೂ ನೀರು ಕಾಣದು. ರಸ್ತೆಯ ಇಕ್ಕೆಲಗಳಲ್ಲಿ ಕಾಲುವೆಗಳೇ ಕಣ್ಮರೆಯಾಗಿವೆ. ಅಂದು ಬೇಸಿಗೆಯಲ್ಲಿ ಕೆರೆಯ ತುಂಬ ತೆಳ್ಳಗೆ ನೀರಿರುತ್ತಿದ್ದ ಕೊಮಾರನಹಳ್ಳಿ ಕೆರೆಯಲ್ಲಿ ಇಂದು ಸೆಪ್ಟೆಂಬರಿನಲ್ಲಿ ಅದರ  ಒಂದೆರಡು ಗುಂಡಿಗಳಲ್ಲಿ ಮಾತ್ರ ನೀರು ಕಂಡೀತು.

 

ಇನ್ನು ಶಿವಮೊಗ್ಗದಿಂದ ಬೆಂಗಳೂರು ಕಡೆ ಹೊರಟರೆ ಕಡೂರುಬೀರೂರುಅರಸೀಕೆರೆತಿಪಟೂರುತುಮಕೂರಿನ ತನಕ ಎಲ್ಲೆಲ್ಲೂ ತೆಂಗಿನ ತೋಟಗಳು ಕಾಣುತ್ತಿದ್ದವು. ಈ ಎಲ್ಲಾ ತೆಂಗಿನ ತೋಟಗಳು ಮಳೆಯಾಶ್ರಿತ ತೆಂಗಿನ ತೋಟಗಳಾಗಿದ್ದವು.  ಆ ತೋಟಗಳಲ್ಲಿ ತೆರೆದಬಾವಿಗಳಿದ್ದರೂ ಅವುಗಳಿಂದ ಯಾರೂ ತೆಂಗಿನಮರಗಳಿಗೆ ನೀರು ಹಾಯಿಸುತ್ತಿರಲಿಲ್ಲ. ಆ ಬಾವಿಯ ನೀರನ್ನು ಕುಡಿಯಲು ಹೆಚ್ಚೆಂದರೆ ತರಕಾರಿ ಬೆಳೆಯಲು ಮತ್ತು ತೆಂಗಿನ ಸಸಿಗಳನ್ನು ಮಾಡಿ ಆರೈಸಲು ಉಪಯೋಗಿಸುತ್ತಿದ್ದರು. ಬೋರ‍್ವೆಲ್ ಎಂಬುದು ಎಲ್ಲಿಯೂ ಇರಲಿಲ್ಲ.  ಇದೇ ಪರಿಸ್ಥಿತಿ ಹೊಳಲ್ಕೆರೆಹೊಸದುರ್ಗಚಿಕ್ಕಜಾಜೂರುರಾಮಗಿರಿಚನ್ನಗಿರಿಹಿರಿಯೂರು ಸುತ್ತಮುತ್ತ ಕೂಡ.  ಮಳೆಯಾಶ್ರಿತ ಈ ತೆಂಗಿನ ಮರಗಳಿಂದ ಎರಡು ತಿಂಗಳಿಗೊಮ್ಮೆ ಕಾಯಿ ಕೆಡವುತ್ತಿದ್ದರು. ಒಂದೊಂದು ವರ್ಷ ಮಳೆ ಕೈಕೊಟ್ಟರೂ ಈ ಮರಗಳು ಒಣಗದೇ ಮುಂದಿನ ಮಳೆಗಾಲದವರೆಗೆ ಸುಧಾರಿಸಿಕೊಳ್ಳುತ್ತಿದ್ದವು. ಹೆಚ್ಚೆಂದರೆ ಇಳುವರಿ ಕಡಿಮೆಯಾಗುತ್ತಿತ್ತೇ ವಿನಹಃ ಮರಗಳು ಒಣಗುತ್ತಿರಲಿಲ್ಲ.  ಅದಲ್ಲದೇ ಈ ರೈತರು ಆ ತೆಂಗಿನ ತೋಟಗಳಲ್ಲಿ ಬೇರೆ ಯಾವುದೇ ಬೆಳೆ ಬೆಳೆದರೂ ಅದು ವಾಣಿಜ್ಯ ಬೆಳೆಯಾಗಿರದೆ ಕೇವಲ ಸ್ವಂತವಾಗಿ ಬಳಸುವ ರಾಗಿಎಳ್ಳುಸಾಮೆಕೊತ್ತಂಬರಿಒಮ್ಮೊಮ್ಮೆ ತೊಗರಿಯಂತಹ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದರು.

 

ಇಂದು ಈ ಎಲ್ಲಾ ತೆಂಗಿನತೋಟಗಳಿಗೆ ಒಂದೆರಡು ತಿಂಗಳು ಡ್ರಿಪ್ಪಿನಲ್ಲಿ ನೀರು ಕೊಡುವುದು ವ್ಯತ್ಯಾಸವಾದರೂ ಗರಿಗಳು ಬಾಡಿ ಒಣಗಲಾರಂಭಿಸುತ್ತವೆ. ಅದೇ ಹಿಂದಿನ ಹಳೆಯ ಮರಗಳೂ ವರ್ಷಗಟ್ಟಲೇ ಮಳೆಯಿಲ್ಲದಿದ್ದರೂ ಒಣಗದಿದ್ದವು ಇಂದು ಡ್ರಿಪ್ ಇಲ್ಲದಿದ್ದರೆ ಎರಡು ತಿಂಗಳಲ್ಲೇ ಬಾಡುತ್ತಿವೆ.

 

ಮೇಲ್ಕಾಣಿಸಿದ ಹೊಳಲ್ಕೆರೆಹೊಸದುರ್ಗಕಡೂರುಅರಸೀಕೆರೆತಿಪಟೂರುಚಿಕ್ಕನಾಯಕನಹಳ್ಳಿಜಾವಗಲ್ಹಳೇಬೀಡುಕಳಸ ಮುಂತಾದ ತೆಂಗಿನ ಬೆಲ್ಟ್ ಎನ್ನಬಹುದಾದ ಈ ಪ್ರದೇಶದ ಕಳೆದ ಐವತ್ತು ವರ್ಷಗಳ ವಾರ್ಷಿಕ ಸರಾಸರಿ ಮಳೆ ೬೦೦ ಮಿಲಿ ಮೀಟರ್. ಇಂದಿಗೂ ಕೂಡಾ ಈ ಪ್ರದೇಶದ ವಾರ್ಷಿಕ ಮಳೆ ಇದೇ ೬೦೦ ಮಿಲಿ ಮೀಟರಿನ ಆಜುಬಾಜು ಇದೆ.  ಮಳೆ ಬರುವ ಕಾಲ ಹೆಚ್ಚು ಕಮ್ಮಿಯಾಗಿದೆಯೇ ಹೊರತು ಮಳೆಯ ಪ್ರಮಾಣ ಅಷ್ಟೇ ಇದೆ. ಇಲ್ಲಿನ ಎಲ್ಲಾ ತೋಟಗಳಲ್ಲೂ ಅಂದಿನಿಂದ ಇಂದಿನವರೆಗೂ ತಟಾಕು/ಪಟ್ಟೆಗಳಿದ್ದು ಅವುಗಳು ಬದುಗಳಿಂದಾವೃತಗೊಂಡಿವೆ. ಅಂದರೆ ಮಳೆ ನೀರು ಬಿದ್ದದ್ದು ಆಯಾಯಾ ಪಟ್ಟೆ/ತಟಾಕಿನಲ್ಲಿ ಸಾಕಷ್ಟು ಇಂಗುತ್ತಿತ್ತು. ಹೆಚ್ಚಾದದ್ದು ಹತ್ತಿರದ ಹಳ್ಳಕ್ಕೆ ಹರಿದು ಹೋಗಿ ಕೆರೆ ಕೊಳ್ಳಗಳನ್ನು ಸೇರುತ್ತಿದ್ದಿತು.  ಈ ಪ್ರಕ್ರಿಯೆಗೆ ಮಳೆಗಾಲದಲ್ಲೇ ಮಳೆ ಬರಬೇಕೆಂಬ ನಿಯಮವೇನೂ ಇಲ್ಲ. ಒಟ್ಟಾರೆ ಮಳೆಯಾದರೆ ಈ ನೀರು ಹಳ್ಳಕೊಳ್ಳಗಳ ಮೂಲಕ ಕೆರೆಗಳನ್ನು ಸೇರುತ್ತಿದ್ದಿತು.

 

ಈಗ ನೀರಿನ ಕುರಿತು ಜನ ಹೆಚ್ಚು ಜಾಗೃತರಾಗಿದ್ದಾರೆ. ಈಗ ಇನ್ನೂ ಹೆಚ್ಚಿನ ಬದುಇಂಗುಗುಂಡಿಗಳನ್ನು ನಿರ್ಮಿಸಿ ತಮ್ಮ ತೋಟದಲ್ಲಿ ಬೀಳುವ ಮಳೆಯ ನೀರು ಎಲ್ಲಿಯೂ ಹರಿಯದಂತೆ ಇಂಗಿಸುತ್ತಿದ್ದಾರೆ. ಅಂದು ತೆಂಗಿನಮರಗಳೇ ಅಂತರ್ಜಲದಿಂದ ನೀರನ್ನು ಎಳೆದುಕೊಳ್ಳುತ್ತಿದ್ದರೆಇಂದು ಬೋರ್ವೆಲ್ಲಿನಿಂದ ಎಳೆದು ತೆಂಗಿಗೆ ನೀರು ಕೊಡುತ್ತಿದ್ದಾರೆಅಷ್ಟೇ ವ್ಯತ್ಯಾಸ. ಹಾಗಿದ್ದರೂ ಈ ತೋಟಗಳಲ್ಲಿ ಜಲಕ್ಷಾಮದಂತಹ ವ್ಯತ್ಯಯವುಂಟಾಗಲು ಏನು ಕಾರಣ?

 

ಅಮೇರಿಕಾದಲ್ಲಿನ ಹತ್ತೊಂಬತ್ತನೇ ಶತಮಾನದ ಆಣೆಕಟ್ಟುಗಳನ್ನು ಕಟ್ಟುವ ಕ್ರಾಂತಿ ಬಹುಪಾಲು ಇಂದು ಕರ್ನಾಟಕದಲ್ಲಿ ಚೆಕ್ ಡ್ಯಾಂಗಳನ್ನು ಕಟ್ಟುವ ಉಮೇದಿನಲ್ಲಿಯೇ ಕಟ್ಟಲ್ಪಟ್ಟಿದ್ದವು. ಉಪಯೋಗವಿರಲಿ ಬಿಡಲಿ ಆಣೆಕಟ್ಟುಗಳು ಪ್ರಗತಿಯ ಸಂಕೇತವೆಂಬಂತೆ ವಿಪರೀತವಾಗಿ ಕಟ್ಟಲ್ಪಟ್ಟಿದ್ದವು.  ಹಾಗಾಗಿ ಅಂದು ಕಟ್ಟಿದ ಅನೇಕ ಆಣೆಕಟ್ಟುಗಳು ಲಾಭದಾಯಕವಲ್ಲವೆಂದು ನಿರ್ವಹಣಾ ವೆಚ್ಚವನ್ನು ಉಳಿಸಲು ಇಂದು ಕೆಡವಲಾಗುತ್ತಿದೆ. ಹಾಗೆ ಕೆಡವುದರಿಂದ ಕೆಲ ಪರಿಸರಸ್ನೇಹೀ ಉಪಯೋಗಗಳೂ ಇವೆಯೆಂದು ಹೇಳಲಾಗುತ್ತದೆ. ಆದರೆ ಈ ಆಣೆಕಟ್ಟುಗಳಿಂದಾದ ಪರಿಸರನಾಶ, ಗುರುತಿಸಿಕೊಳ್ಳುವಷ್ಟು ನಾಶವಾಗಿರಲಿಲ್ಲ. ಹಾಗಾಗಿ ಇವುಗಳನ್ನು ಕೆಡುವುದರಿಂದ ನಿರ್ವಹಣಾ ವೆಚ್ಚದ ಉಳಿತಾಯ ಮುಖ್ಯವಾಗಿ ಕಾಣುವುದೇ ಹೊರತು ಪರಿಸರಸ್ನೇಹೀ ಉಪಯೋಗಗಳು ಅಷ್ಟಾಗಿ ಕಾಣುವುದಿಲ್ಲ.

 

ಆದರೆಅಮೇರಿಕಾದ ಆಣೆಕಟ್ಟುಗಳನ್ನು ಕೆಡುವುದನ್ನು ಎತ್ತಿ ಹಿಡಿದು ಭಾರತದ ಪರಿಸರವಾದಿಗಳು ಆಣೆಕಟ್ಟುಗಳು ಪರಿಸರಕ್ಕೆ ಮಾರಕವೆಂದು ಪ್ರತಿಪಾದಿಸುತ್ತಿರುವುದು ತಪ್ಪು.  ಆದರೆ ಈ ಪರಿಸರವಾದಿಗಳು ಯಾವುದು ಪರಿಸರಪೂರಕ ಎಂಬುವರೋ ಅದೇ ಪರಿಸರಕ್ಕೆ ಮಾರಕವಾಗಿರುವ ಉದಾಹರಣೆಯನ್ನು ಗಮನಿಸೋಣ.

 

ಓಡುವ ನೀರನ್ನು ನಡೆಸುನಡೆಯುವ ನೀರನ್ನು ನಿಲ್ಲಿಸುನಿಂತ ನೀರನ್ನು ಇಂಗಿಸು ಎಂಬುದು ಸರಿ. ಆದರೆ ಎಷ್ಟರ ಮಟ್ಟಿಗೆ ಇದನ್ನು ಅಳವಡಿಸಿಕೊಳ್ಳಬೇಕುಅತಿಯಾದರೆ ಅಮೃತವೂ ವಿಷವೆಂಬಂತೆ ಒಂದೆಡೆ ಎಂತಹ ಮಳೆ ಬಂದರೂ ಹಳ್ಳಗಳಲ್ಲಿ ನೀರು ಹರಿದು ಕೆರೆಗಳನ್ನು ಸೇರುವುದೇ ಇಲ್ಲ. ಅದೇ ಇನ್ನೊಂದೆಡೆ ಸಾಧಾರಣ ಮಳೆಯಾದರೂ ಪ್ರವಾಹ ಉಂಟಾಗಿಬಿಡುತ್ತದೆ ಹೀಗೇಕೆ?

 

ಅದೇ ರೀತಿಇಂದು ಸರ್ಕಾರ ಯಾವುದೇ ಧೀರ್ಘಾಲೋಚನೆಯಿಲ್ಲದೇಗುತ್ತಿಗೆದಾರರ ಮುಖಾಂತರ ಚರಂಡಿಯಂತಹ ಸಣ್ಣ ಹಳ್ಳಗಳಿಗೂ ಚೆಕ್ ಡ್ಯಾಂಗಳನ್ನು ಕಟ್ಟುತ್ತಿದೆ.  ಮಳೆಯ ನೀರು ಈಗ ಈ ಎಲ್ಲಾ ಚೆಕ್ ಡ್ಯಾಂಗಳಲ್ಲಿ ನಿಂತು ಇಂಗಿಮಿಕ್ಕಿ ಹರಿದು ನದಿಗಳನ್ನುಕೆರೆಗಳನ್ನು ಸೇರಬೇಕಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಜಲಸಾಕ್ಷರತೆಯಿಂದಾಗಿ ಮಳೆಯನೀರು ಇಂಗಿ ಇಡೀ ಕರ್ನಾಟಕದ ಭೂಪ್ರದೇಶ ಪಸೆಯ ಸ್ಪುರಿಸುವ ಜೌಗುತಾಣವಾಗಬೇಕಿದ್ದಿತು. ಆದರೆ ಇಂಗಿಸಿದಷ್ಟೂ ಇಂಗದ ದಾಹ ಉಂಟಾಗಿದೆ. ಹೀಗೇಕೆ?

 

ಈ ವಿಪರೀತ ನೀರಿನ ಕಾಳಜಿಯಿಂದ ಉಂಟಾದ ಒಂದು ದುಷ್ಪರಿಣಾಮವೆಂದರೆ ಒಂದು ಸಮತೋಲಿತ ಮಟ್ಟಿನ ಚೆಕ್ ಡ್ಯಾಂಗಳಿಲ್ಲದೆ ಹೆಜ್ಜೆ ಹೆಜ್ಜೆಗೂ ಚೆಕ್ ಡ್ಯಾಂಗಳಿದ್ದು ನೀರು ಹರಿಯುವುದೇ ನಿಂತಿದೆ. ಆ ಹರಿಯುವ ನೀರಿನ ಮೇಲಾಧರಿತವಾದ ಪರಿಸರ ಇಂಗಿಕೆರೆಗಳು ಮಾಯವಾಗಿನದಿಗಳು ಮಾಯವಾಗುತ್ತಿವೆ.  ಈಗೇನಿದ್ದರೂ ನದಿಗಳು ಅತಿವೃಷ್ಟಿಯಲ್ಲಿ ನೀರನ್ನು ಹರಿಸುವ ಕಾಲುವೆಗಳಾಗಿಮಳೆ ನಿಂತ ಬಳಿಕ ಒಣಗಿದ ಚರಂಡಿಗಳಾಗಿ ಮಾರ್ಪಾಟಾಗಿವೆ.

 

ಇದೆಲ್ಲದಕ್ಕೂ ಕಾರಣ ಮತ್ತದೇ ಉತ್ಕಟ ಆಸೆ ಮೂಡಿಸುವ ಬೋರ್ವೆಲ್ಲುಗಳು. ತಮ್ಮ ತೆಂಗಿನತೋಟಗಳಲ್ಲಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅತ್ಯುತ್ಸಾಹದಿಂದ ರೈತರು ಬೋರ್ವೆಲ್ಲುಗಳ ಮೊರೆಹೋದರು. ಮೊದಲೆಲ್ಲಾ ನೂರು ಅಡಿಗಳಲ್ಲಿ ಸಿಗುತ್ತಿದ್ದ ಅಂತರ್ಜಲ ಇನ್ನೂರು ಮುನ್ನೂರು ಅಡಿಗಳಿಗೆ ಕುಸಿಯುತ್ತಾ ಇಂದು ಸಾವಿರ ಅಡಿಗಳನ್ನು ತಲುಪಿದೆ. ಈಗ ರೈತರು ಇತರೆ ವಾಣಿಜ್ಯ ಬೆಳೆಯಿರಲಿ ತಮ್ಮ ಸಾಂಪ್ರದಾಯಿಕ ತೆಂಗಿನಬೆಳೆಯನ್ನು ಉಳಿಸಿಕೊಳ್ಳಲು ಹೆಣಗಿ ಸೋತುಹೋಗಿದ್ದಾರೆ.  ಮೊದಲೆಲ್ಲಾ ನೂರು ಅಡಿಗಳಲ್ಲಿರುತ್ತಿದ್ದ ಅಂತರ್ಜಲ ಕ್ಯಾಪಿಲರಿ ಸಿದ್ದಾಂತಕ್ಕನುಗುಣವಾಗಿ ನೀರಿನ ಪಸೆ ಮೇಲೇರುತ್ತಾ ತೆಂಗಿನ ಬೇರುಗಳಿಗೆ ಸಿಗುವ ಮಟ್ಟಕ್ಕೆ ಏರಿ ಬರುತ್ತಿದ್ದಿತು.  ಬೋರ್ವೆಲ್ಲುಗಳು ಹೆಚ್ಚಾದಂತೆ ಅದಕ್ಕೆ ತಕ್ಕನಾಗಿ ಅಂತರ್ಜಲ ಇಳಿಯುತ್ತಾ ಸಾಗಿ ಸಾವಿರ ಆಡಿಗಳ ಆಸುಪಾಸಿನಲ್ಲಿದೆ. ಈಗ ಸಾವಿರ ಅಡಿಗಳಿಂದ ಪಸೆ ಬೇರುಗಳನ್ನು ತಲುಪುವ ಮಟ್ಟಕ್ಕೆ ಏರಿ ಬರಲಾರದು. ಮತ್ತು ಬೇರುಗಳು ಕೂಡಾ ಅಷ್ಟು ಆಳಕ್ಕೆ ಇಳಿದು ಹೋಗಲಾರವು. ಹಾಗಾಗಿ ಇಂದು ಡ್ರಿಪ್ ಮಧ್ಯಂತರ ಪ್ರಕ್ರಿಯೆಯಾಗಿ ಅವಶ್ಯಕವಾಗಿ ಬೇಕಾಗಿರುವುದು.  ಆದರೆ ಈ ವ್ಯವಸ್ಥೆಯೇನಿದ್ದರೂ ತತ್ಕಾಲಿಕ ವ್ಯವಸ್ಥೆ. ಬೋರ್ವೆಲ್ಲುಗಳ ಪರ್ವ ಆರಂಭವಾದಾಗಲೇ ಅಂದಿನ ಸರ್ಕಾರಗಳು ಎಚ್ಚೆತ್ತು ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ಮಿಸಬೇಕಿದ್ದಿತು. ಆದರೆ ಸರ್ಕಾರಗಳು ಕೂಡ ಈ ತಾತ್ಕಾಲಿಕ ವ್ಯವಸ್ಥೆಯನ್ನೇ ಖಾಯಂ ವ್ಯವಸ್ಥೆ ಎಂದುಕೊಂಡುಬಿಟ್ಟವು. ಈಗ ರೈತನಿಗೆ ಬೋರುಗಳು ಇಲ್ಲಇತ್ತ ನೀರಿನ ಪರ್ಯಾಯವೂ ಇಲ್ಲ.

 

ಈಗಲೂ ಕೂಡಾ ಈ ಕೃಷಿಯ ಭೂಭಾಗಗಳನ್ನು ಅಲ್ಲಿನ ಸಾಂಪ್ರದಾಯಿಕ ಬೆಳೆಗಳಿಗನುಗುಣವಾಗಿ ವಿಂಗಡಿಸಿ ಬೋರ್ವೆಲ್ಲುಗಳನ್ನು ನಿಷೇಧಿಸಿದರೆ ಇಲ್ಲೆಲ್ಲಾ ಮತ್ತೆ ತೆಂಗು ಮಳೆಯಾಧಾರಿತವಾಗಿ ಬೆಳೆಯಬಲ್ಲದು. ಆದರೆ ಸರ್ಕಾರಗಳು ಈಗಲೂ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.  ಮತ್ತದೇ ಚೆಕ್ ಡ್ಯಾಂಇಂಗುಗುಂಡಿಯಂತಹ ಗುತ್ತಿಗೆ ಕಾಮಗಾರಿಗಳಲ್ಲಿ ಆಸಕ್ತವಾಗಿದೆಯೇ ಹೊರತು ಪ್ರವಾಹ ನಿರ್ವಹಣೆ ಕಂ ನೀರಾವರಿ ಯೋಜನೆಯಂತಹ ಸಮರ್ಪಕ ಯೋಜನೆಗಳನ್ನು ಹಾಕಿಕೊಳ್ಳುತ್ತಿಲ್ಲ.   ಅಂದು ಸರ್ಕಾರ ಸಮರ್ಪಕವಾಗಿ ನೀರಾವರಿಯನ್ನು ನಿರ್ವಹಿಸದಿದ್ದರಿಂದ ರೈತ ಬೋರ್ವೆಲ್ ಪರ್ಯಾಯವನ್ನು ಕಂಡುಕೊಂಡನು.  ಇಂದು ಚೆಕ್ ಡ್ಯಾಂ ಎಂಬ ಮಾಯಾಂಗನೆಯ ಬೆನ್ನು ಬಿದ್ದು ಹಳ್ಳಕೆರೆನದಿಗಳನ್ನು ಮಾಯವಾಗಿಸುತ್ತಿದ್ದಾನೆ. ಭಾರತದಲ್ಲಿನ ನೀರಾವರಿ ವ್ಯವಸ್ಥೆ ಇನ್ನೂ ಒಂದು ಸಮತೋಲಿತ ಮಟ್ಟವನ್ನು ಮುಟ್ಟಿಯೇ ಇಲ್ಲ. ಆ ಮಟ್ಟವನ್ನು ಮುಟ್ಟಿ ನಂತರ ಹಂತ ಹಂತವಾಗಿ ಬೋರ್ವೆಲ್ಲುಗಳನ್ನು ನಿಷೇಧಿಸಿದರೆ ಮತ್ತೊಮ್ಮೆ ಹಸಿರು ಚಿಗುರೊಡೆದೀತು. ಆದರೆ ಅಂತಹ ಇಚ್ಚಾಶಕ್ತಿಯನ್ನು ತೋರುವವರ‍್ಯಾರು?

 

ಒಂದೆಡೆ ಭೋರ್ಗರೆವ ವಿವೇಚನಾರಹಿತ ಪರಿಸರವಾದಮತ್ತೊಂದೆಡೆ ತತ್ಕಾಲದ ಪರಿಹಾರವಾಗಿ ವಿವೇಚನಾರಹಿತ ಬೋರ್ವೆಲ್ ಕೊರೆಸುವಿಕೆಈ ವಿವೇಚನಾರಹಿತ ವಿರೋಧಾಭಾಸಗಳ ಜಟಾಪಟಿಗಳ ಮಧ್ಯೆ ಸಮತೋಲಿತ ಚಿಂತನೆಯ ಸಮಾಧಾನವನ್ನು ಹೇಳುವವರ‍್ಯಾರುಕೇಳುವವರ‍್ಯಾರು?

 

ಅಮೆರಿಕಾ ಬರ್ನಿಂಗ್


ಅಮೆರಿಕಾ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಒಂದೆಡೆ ಕೊರೋನಾ ಮತ್ತದರಿಂದಾದ ಆರ್ಥಿಕ ಹಿಂಜರಿತ, ಈಗ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಜಾರ್ಜ್ ಫ್ಲಾಯ್ಡ್  ಘಟನೆಯಿಂದ ಭುಗಿಲೆದ್ದ ಪ್ರತಿಭಟನೆ ಲೂಟಿಯ ರೂಪ ಪಡೆದುಕೊಂಡಿದೆ.

ಕಪ್ಪು ವರ್ಣದ ಆಫ್ರಿಕನ್ ಅಮೇರಿಕನ್ನನೊಬ್ಬ ಕಾರಿನಲ್ಲಿ ಕುಳಿತುಕೊಂಡು ಚೆಕ್ ಫೋರ್ಜರಿ ಮಾಡುವ ಪ್ರಯತ್ನದಲ್ಲಿದ್ದಾನೆ ಎಂಬ ಫೋನಿನಲ್ಲಿ ಬಂದ ದೂರಿನನ್ವಯ ವಿಚಾಸರಿಸಲು ತೆರಳಿದ ಮಿನಿಯಾಪೊಲೀಸ್ ಪೊಲೀಸರು ಒಬ್ಬನನ್ನು ಕಸ್ಟಡಿಗೆ ತೆಗೆದುಕೊಂಡು ಅನವಶ್ಯಕ ಶಕ್ತಿ ಬಳಸಿ ಆತನ ಸಾವಿಗೆ ಕಾರಣರಾಗಿದ್ದಾರೆ. ಇದು ಬಿಳಿಯ ಪೊಲೀಸ್ ಅಧಿಕಾರಿಗಳು, ಜಾರ್ಜ್ ಫ್ಲಾಯ್ಡ್ 
ಕಪ್ಪು ವರ್ಣದವನೆಂಬ ಹಿನ್ನೆಲೆಯಲ್ಲಿ ಹೆಚ್ಚಿನ ಶಕ್ತಿ ಬಳಸಿ ಕ್ರೌರ್ಯವನ್ನು ಮೆರೆದ ಜನಾಂಗೀಯ ದ್ವೇಷ ಎಂದು ಸುದ್ದಿಯಾಗಿದೆ.

ಇಲ್ಲಿ ಶಂಕಿತನನ್ನು ಬಂಧಿಸುವ ಪ್ರಕ್ರಿಯೆಯಲ್ಲಿ ಕೋಳ ಹಾಕಿದ್ದ ಮತ್ತು ಯಾವುದೇ ಅಸ್ತ್ರಗಳನ್ನು ಹೊಂದಿಲ್ಲದ ಫ್ಲಾಯ್ಡ್ ನ ಕುತ್ತಿಗೆಯ ಮೇಲೆ ಪೊಲೀಸ್ ಆಫೀಸರ್ ಡೆರಿಕ್ ಶೌವಿನ್ ಮಂಡಿಯೂರಿ ಎಂಟು ನಿಮಿಷ ನಲವತ್ತಾರು ಸೆಕೆಂಡುಗಳ ಕಾಲ ಅದುಮಿ ಹಿಡಿದದ್ದರಿಂದ ಉಸಿರು ಕಟ್ಟಿ ಜಾರ್ಜ್ ಫ್ಲಾಯ್ಡ್ ಸಾವಿಗೀಡಾಗಿದ್ದಾನೆ ಎಂದು ದೂರಲಾಗಿದೆ.

ಈ ರೀತಿಯ ಪೊಲೀಸ್ ಕ್ರೌರ್ಯ ಅದರಲ್ಲೂ ಕಪ್ಪು ಜನಾಂಗದವರ ವಿಚಾರಣೆಯಲ್ಲಿ ಆಗೊಮ್ಮೆ ಈಗೊಮ್ಮೆ ಘಟಿಸುತ್ತಲೇ ಇದೆ. ಅಂತಹ ಘಟನೆಗಳು ನಡೆದಾಗ ಅಮೆರಿಕಾದ ನ್ಯಾಯಾಂಗ ವ್ಯವಸ್ಥೆ ಕ್ಷಿಪ್ರವಾಗಿ ಸ್ವಯಂ ದೂರು ದಾಖಲಿಸಿಕೊಂಡು ಅಂತಹ ಅಧಿಕಾರಿಗಳ ಮತ್ತು ಸಂಬಂಧಿಸಿದ ಪೊಲೀಸ್ ಇಲಾಖೆಯ ವಿರುದ್ಧ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತದೆ. ಹಾಗಿದ್ದೂ ಇಂತಹ ಘಟನೆಗಳು ಒಮ್ಮೊಮ್ಮೆ ನಡೆಯುತ್ತಲೇ ಇರುತ್ತವೆ.

ದೇಶಾದ್ಯಂತ ಈ ರೀತಿಯ ಪ್ರತಿಭಟನೆ ಮತ್ತು ದೊಂಬಿ ನಾ ಕಂಡ ಕಳೆದ ಇಪ್ಪತೈದು ವರ್ಷಗಳಲ್ಲಿ ಇದೇ ಮೊದಲು! ಈ ಮೊದಲೆಲ್ಲಾ ಇಂತಹ ದೊಂಬಿಗಳು ಘಟನೆ ನಡೆದ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದವೇ ಹೊರತು ದೇಶವ್ಯಾಪಿಯಾಗಿರಲಿಲ್ಲ. ಆದರೆ ಈ ಆಸ್ಫೋಟಕ್ಕೆ ಕೊರೋನಾ ಪಿಡುಗಿನಿಂದುಂಟಾಗಿದ್ದ ನಿರುದ್ಯೋಗ, ಮುಚ್ಚಿದ್ದ ಅಂಗಡಿಗಳು, ಲಾಕ್ಡೌನ್,  ಕುಸಿಯುತ್ತಿರುವ ಆರ್ಥಿಕತೆಗಳ ಜೊತೆಗೆ ಒಳಗೇ ಹೊಗೆಯಾಡುತ್ತಿದ್ದ ಆಕ್ರೋಶಕ್ಕೆ ಊದುಗೊಳವೆಯಾಗಿ ಬೆಂಕಿಯಾಗಿಸಿದ್ದು ಈ ಪೊಲೀಸ್ ಆಫೀಸರನ ವಿರುದ್ಧ ದೂರು ದಾಖಲಿಸಿಕೊಳ್ಳುವಲ್ಲಿ ಆದ ವಿಳಂಬ!

ಮಿನಿಯಾಪೊಲೀಸ್ನಲ್ಲಿ ಶಾಂತಿಯುತವಾಗಿ ಆರಂಭವಾದ ಈ ಪ್ರತಿಭಟನೆ ಲೂಟಿಗೆ ತಿರುಗಿದ್ದುದಕ್ಕೆ ಕಾರಣ ಪ್ರತಿಭಟನಾಕಾರರಲ್ಲ! ಸಾಕಷ್ಟು ಜನಾಂಗೀಯ ದ್ವೇಷದ ಹಿನ್ನೆಲೆಯವರು ಮಿನಿಯಾಪೊಲೀಸ್ ಹೊರಗಿನಿಂದ ಬಂದು ಪ್ರತಿಭಟನೆಯಲ್ಲಿ ನುಸುಳಿಕೊಂಡು ಪ್ರತಿಭಟನೆಗೆ ಕೆಟ್ಟ ಹೆಸರನ್ನು ತರಲೆಂದೇ ದೊಂಬಿ ಲೂಟಿಯನ್ನು ಆರಂಭಿಸಿದರು. ಆ ರೇಸಿಸ್ಟ್ ನುಸುಳುಕೋರರು ಹಚ್ಚಿದ ಕಿಡಿ, ಮಾಬ್ ಮೆಂಟಾಲಿಟಿಯಲ್ಲಿ ಭಗಭಗನೆ ಉರಿದು ದೇಶಾದ್ಯಂತ ಹಬ್ಬಿತು.

ಈ ಪೊಲೀಸ್ ಆಫೀಸರ್ ಡೆರಿಕ್ ಶೌವಿನ್ ಹಿಂದೆ ಕೂಡ ಅನವಶ್ಯಕವಾಗಿ ಶಂಕಿತ ಅಪರಾಧಿಗಳ ಮೇಲೆ ಗುಂಡು ಹಾರಿಸಿದ್ದು, ವಿಚಾರಣೆಯ ಸಮಯದಲ್ಲಿ ಬೇರೆ ಜನಾಂಗದ ಶಂಕಿತ ಅಪರಾಧಿಗಳ ಮೇಲೆ ಅವಶ್ಯಕ್ಕಿಂತ ಹೆಚ್ಚು ಬಲ ಪ್ರಯೋಗ ಮಾಡಿದ ಬಗ್ಗೆ ಗುರುತರ ದೂರುಗಳಿದ್ದವು. ಅಂತಹ ಅಧಿಕಾರಿಯನ್ನು ಉಳಿಸಿಕೊಂಡಿದ್ದರಿಂದ ಇಂದು ಇಡೀ ಮಿನಿಯಾಪೊಲೀಸ್ ಪೊಲೀಸ್ ಇಲಾಖೆ ಜನಾಂಗೀಯ ಭೇಧಕ್ಕೆ ಗುರಿಯಾಗಿದೆ. ಹಾಗಾಗಿ ಇವರ ವಿರುದ್ಧದ ಪ್ರತಿಭಟನೆಗೆ ಕೆಟ್ಟ ಹೆಸರು ತರಲೆಂದೇ ರೇಸಿಸ್ಟುಗಳೆಲ್ಲಾ ಹೊರಗಿನಿಂದ ಬಂದು ಪ್ರತಿಭಟನೆಯನ್ನು ದೊಂಬಿ ಮತ್ತು ಲೂಟಿಯಾಗಿಸಿದ್ದಾರೆ ಎನ್ನುವುದು ಸುದ್ದಿಯಾಗಿದೆ.

ಬಹುಪಾಲು ಅಮೆರಿಕಾದ ಪೊಲೀಸರು ಸ್ನೇಹಶೀಲ ವರ್ತನೆ ಮತ್ತು ವೃತ್ತಿಪರರಾಗಿರುತ್ತಾರೆ. ಆದರೆ ಅವರಲ್ಲಿಯೂ ಅಲ್ಲಲ್ಲಿ ಇಂತಹ ಜನಾಂಗೀಯ ದ್ವೇಷಿ ಅಧಿಕಾರಿಗಳು ಇದ್ದೇ ಇದ್ದಾರೆ.  ಏನೇ ಹಿರಿಯಣ್ಣನೆನಿಸಿದರೂ ಏನೂ ಇಲ್ಲದ ಸ್ವರ್ಗ ಸಮಾನ ದೇಶ ಅಮೆರಿಕಾ ಅಲ್ಲ. ಆ ರೀತಿಯ ದೇಶ ಈ ಭೂಮಿಯ ಮೇಲೆ ಎಲ್ಲೂ ಇಲ್ಲ.  ಆದರೆ  ಒಳಿತು ಕೆಡುಕಿನ ಅಂತರದಲ್ಲಿ ಸಾಕಷ್ಟು ವ್ಯತ್ಯಾಸ ಖಂಡಿತವಾಗಿ ಅಮೆರಿಕಾದಲ್ಲಿ ಇದೆ. ಹಾಗಾಗಿಯೇ ಇದನ್ನು ವಲಸಿಗರ ದೇಶ ಎನ್ನುವುದು.

ಈ ಮಿನಿಯಾಪೊಲೀಸ್ ಪೊಲೀಸರ ದೌರ್ಜನ್ಯವನ್ನು ನಾನೂ ಒಮ್ಮೆ ಕಂಡಿದ್ದೇನೆ. ಕಳೆದ ವರ್ಷ ಒಮ್ಮೆ ರೆಸ್ಟೋರೆಂಟ್ ಒಂದರಿಂದ ಊಟ ಮುಗಿಸಿ ನನ್ನ ಹೋಟೆಲ್ ರೂಮಿಗೆ ನಡೆದು ಹೋಗುತ್ತಿದ್ದೆ. ಹತ್ತಿರದಲ್ಲೇ ಇದ್ದುದರಿಂದ ಕಾರ್ ತೆಗೆದುಕೊಂಡು ಹೋಗಿರಲಿಲ್ಲ. ಚಳಿಗಾಲದ ಹಿಮವನ್ನು ಗುಡಿಸಿ ರಸ್ತೆಯ ಬದಿಯಲ್ಲಿ ಗುಡ್ಡೆ ಹಾಕಿದ್ದರು.  ಆಗಲೇ ಬ್ಯಾಟರಿ ಡೆಡ್ ಆದ ನನ್ನ ಫೋನನ್ನು ಜೇಬಿನಲ್ಲಿಟ್ಟುಕೊಳ್ಳುವಾಗ ಅದು ಕೈತಪ್ಪಿ ಹಿಮದ ಗುಡ್ಡೆಯಲ್ಲಿ ಬಿದ್ದುಹೋಯಿತು.

ಅದನ್ನು ಹುಡುಕುತ್ತಿದ್ದಾಗ ಪೊಲೀಸ್ ಕಾರೊಂದು ಬಂದು ಅಧಿಕಾರಿ ನನ್ನನ್ನು ಏನಾಯ್ತು, ಎಲ್ಲಿಂದ ಬರುತ್ತಿರುವುದು, ಎಲ್ಲಿಗೆ ಹೋಗುತ್ತಿರುವುದು ಇತ್ಯಾದಿ ವಿಚಾರಿಸಿದ. ಆಗ ನಾನು ವಿಷಯ ತಿಳಿಸಿದೆ.  ನನಗೆ ಅಬ್ಬಾ ಈ ಪೊಲೀಸ್ ನನ್ನ ಫೋನ್ ಹುಡುಕಿಕೊಡುತ್ತಾನೆಂಬ ಖುಷಿ. ಆದರೆ ಅವನಿಗೆ ಬೇರೆಯದೇ ಇರಾದೆಯಿತ್ತು.

ಡಿನ್ನರ್ ಸಮಯದಲ್ಲಿ ಏನಾದರೂ ಆಲ್ಕೋಹಾಲ್ ಕುಡಿದಿರೇ ಎಂದಾಗ ಹೌದು ಮಾಮೂಲಿಯಾಗಿ ಒಂದು ಗ್ಲಾಸ್ ವೈನಿನೊಂದಿಗೆ  ಊಟ ಮಾಡಿದ್ದು ಎಂದೆ. ಒಂದು ಗ್ಲಾಸ್ ವೈನ್ ಲೀಗಲ್ ಲಿಮಿಟ್ಟಿನೊಳಗಿರುತ್ತದೆ ಮೇಲಾಗಿ ನಾನೇನೂ ಕಾರ್ ಓಡಿಸುತ್ತಿಲ್ಲವಲ್ಲ!

ಆಗ ಆತ "ಸರ್, ನೀವು ಸ್ವಲ್ಪ ಡಿಸೋರಿಯೆಂಟೆಡ್ ಆಗಿದ್ದೀರಿ. ನಿಮ್ಮನ್ನು ಹೀಗೆಯೇ ನಡೆದುಕೊಂಡು ಹೋಗಲು ಬಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಆಗದು. ನಿಮ್ಮನ್ನು ಈ ರಾತ್ರಿ ಆಸ್ಪತ್ರೆಯಲ್ಲಿಸಿ ನಾಳೆ ನಿಮ್ಮ ಹೋಟೆಲ್ಲಿಗೆ ಹೋಗಲು ಬಿಡುತ್ತೇವೆ" ಎಂದನು!

ವ್ಹಾರೆವ್ಹಾ, ಏನೂ ಕಾರಣ ಸಿಗದಿದ್ದರೆ ಹೀಗೂ ಒಂದು ಕಾರಣ ಕೊಟ್ಟು ಇಲಾಖೆಗಲ್ಲದಿದ್ದರೆ ಆಸ್ಪತ್ರೆಗಾದರೂ ದಂಡ ಕಕ್ಕಿಸಬಹುದೆಂಬ ಬ್ರಹ್ಮಾಂಡ ಐಡಿಯಾ ಆತನದಾಗಿತ್ತು.

ಯಾವ ಅಪರಾಧದ ಹಿನ್ನೆಲೆಯಿಲ್ಲದ ಕಂದು ಬಣ್ಣದ ನನ್ನನ್ನು ಆತ ಏನೂ ಮಾಡದಾಗಿದ್ದರೂ ಈ ರೀತಿ ಕೂಡ ಮಸಲತ್ತು ಮಾಡಬಹುದೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ.  ಆಸ್ಪತ್ರೆಯಲ್ಲಿ ಡಾಕ್ಟರನೂ ನಸುನಗುತ್ತ ಕೆಲವು ಟೆಸ್ಟುಗಳನ್ನು ಮಾಡುವೆ. ಪೊಲೀಸರು ಹೇಳಿದಂತೆ ಈ ರಾತ್ರಿ ಇಲ್ಲಿದ್ದು ಬೆಳಿಗ್ಗೆ ಹೋಗಿರೆಂದನು. ಒಟ್ಟಿನಲ್ಲಿ ಪೊಲೀಸ್ ಇಲಾಖೆಗೆ ದಂಡ ಹಾಕಲಾಗದಿದ್ದರೂ ನನ್ನ ಆರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಂಡ ಕಟ್ಟಿಸಿದ್ದರು ಮಿನಿಯಾಪೊಲೀಸ್ ಪೊಲೀಸರು!

ಅಂತಹ ಒಂದು ಸಾಮಾನ್ಯ ಘಟನೆಯನ್ನು ಉಪಕಾರದ ರೂಪದಲ್ಲಿ ಸುಖಾಸುಮ್ಮನೆ ಆಸ್ಪತ್ರೆಯ ಬಿಲ್ (ದಂಡ) ಕಟ್ಟಿಸುವಷ್ಟು ಪರಿಣಿತ ಪೊಲೀಸರನ್ನು ನಾನೆಂದೂ ಕಂಡಿರಲಿಲ್ಲ. ಅದು ಮಿನಿಯಾಪೊಲೀಸ್ ಪೊಲೀಸರು! ನಾಜೂಕಿನ ನಾಗರೀಕ ಸಮಾಜದಲ್ಲಿ ಜನಾಂಗೀಯ ಶೋಷಣೆ ಹೀಗೂ ನಡೆಯುತ್ತದೆ. ಇದು ಮುಂದುವರಿದ ದೇಶಗಳ ಜನಾಂಗೀಯ ಭೇಧದ ಒಂದು ಸೂಕ್ಷ್ಮ ರೂಪ ಕೂಡ.

ಇರಲಿ, ಕೊರೋನಾ, ಟ್ರಂಪ್ ಟ್ವೀಟ್, ಚೈನಾ, ಹೈಡ್ರಾಕ್ಸಿಕ್ಲೋರೋಕ್ವಿನಿನಲ್ಲಿ ಮುಳುಗಿಹೋಗಿದ್ದ ವಿಶ್ವಕ್ಕೆ ಈ ರೀತಿಯ ಜನಾಂಗೀಯ ದ್ವೇಷ, ಅಮೆರಿಕಾದಲ್ಲಿ ಲೂಟಿ ಎಂದು ಮೂ(ಹೀ)ಗಳೆಯಲು ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರೇ ಕಾರಣ. ಎಲ್ಲವೂ ನನ್ನಿಂದಲೇ ಎನ್ನುವ ಟ್ರಂಪ್ ಅವರೇ ಈ ಜನಾಂಗೀಯ ಶೋಷಣೆಗೆ ಕೂಡ ಹೊಣೆಗಾರರು. ಏಕೆಂದರೆ ಅವರು ಅಧಿಕಾರಕ್ಕೆ ಬಂದ ನಂತರ ಈ ಜನಾಂಗಿಯ ಅವಹೇಳನ, ಶೋಷಣೆ ಹೆಚ್ಚಾಗಿದೆ. ಆ ಭಾವನೆಗಳನ್ನವರು ತಮ್ಮ ಟ್ವೀಟುಗಳ ಮೂಲಕ ಮೀಟುತ್ತಲೇ ಬಂದಿದ್ದಾರೆ. ಮೇಲಾಗಿ ಇಂತಹ ಘಟನೆಯನ್ನು ಸರಿಯಾಗಿ ನಿಭಾಯಿಸಲೂ ಆಗದಷ್ಟು ಅಶಕ್ತ ಟ್ರಂಪ್ ಎಂಬುದೇ ಜನರ ಆಕ್ರೋಶದ ಪ್ರತಿಭಟನೆಗೆ ಕಾರಣ. ಇಂತಹ ಅಶಕ್ತ, ಕ್ಷುಲ್ಲಕ, ಯಕಶ್ಚಿತನನ್ನು "ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಎಂದು ಮೆರೆಸಿದ್ದು ಸಮರ್ಥ, ದೂರದರ್ಶಿ ಎಂದೆನಿಸಿದ ಮೋದಿಯವರು ತಾವೇ ತಾವಾಗಿ ಹಚ್ಚಿಕೊಂಡ ಬಹುದೊಡ್ಡ ಕಪ್ಪುಚುಕ್ಕೆ.

ಇನ್ನು ಭಾರತದ ಮಾಧ್ಯಮಗಳಿಂದ ಪ್ರಭಾವಿತರಾಗಿ ಬಲದ ಭಕ್ತರು ಅಮೆರಿಕಾದ ಪೊಲೀಸರ ಸ್ಟನ್ ಗನ್ ಅನ್ನು ಆರಿಂಚಿನ ಲಾಠಿ ಎಂದುಕೊಂಡು ನಮ್ಮ ಫೈಬರ್ ಲಾಠಿ ಮತ್ತು ಯೋಗಿ ಆದಿತ್ಯನಾಥರನ್ನು ಕಳಿಸಿದರೆ ಅಮೆರಿಕಾದ ಗಲಭೆಕೋರರ ಹುಟ್ಟಡಗಿಸುತ್ತಾರೆ ಎಂತಲೂ, ಇತ್ತ ಎಡ ವಿಭಕ್ತರು ವರ್ಣಭೇದ ಮತ್ತು ಸವರ್ಣೀಯ ಒಂದೇ ಮನಸ್ಥಿತಿಯ ಚಿಂತನೆ. ಹಾಗಾಗಿ ಟ್ರಂಪ್-ಮೋದಿ ಒಂದೇ ಎಂತಲೂ ವಿಷಯದ ಆಳಕ್ಕಿಳಿಯದೆ ಸಂತೆಗೆ ಮೂರು ಮೊಳ ಎಂಬಂತೆ
ತಮ್ಮ ತಮ್ಮ ಅನುಭೂತಿಗೆ ಸುದ್ದಿಯನ್ನು ದಕ್ಕಿಸಿಕೊಂಡು ನಮ್ಮಂತಹ ಸತ್ಯಪಂಥಿಗಳ ಎಳೆದೆಳೆದು ನಮ್ಮನ್ನು ಕೆಡವಿ ನಮ್ಮ ಮೇಲೆ ಅವರ ಬಾವುಟ ಹಾರಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆ ಪ್ರಯತ್ನದಲ್ಲಿ ಕೆಳಗಿರುವ ನಮಗೆ ಅನತಿ ಎತ್ತರದಲ್ಲಿರುವ ಅವರ ಒಳಉಡುಪಿಲ್ಲದ ಬೆತ್ತಲೆತನ ಕಾಣುತ್ತಿದೆಯೆಂದು ಹೇಳುವುದಾದರೂ ಹೇಗೆ! ಹೇಳಿದರೂ ಬೆತ್ತಲೆರಾಜನ ದಿರಿಸು ತೊಟ್ಟವರು ಒಪ್ಪಬೇಕಲ್ಲವೇ? ಮುಂದುವರಿದ ದೇಶಗಳ ಜನಾಂಗೀಯ ಭೇಧದ ಸೂಕ್ಷ್ಮಗಳನ್ನು ಅವರಷ್ಟು ಯಕಶ್ಚಿತವಾಗಿ ಸಮೀಕರಿಸಿ ಹೇಳಲಾಗದು.

ಇನ್ನು ಮೊಮ್ಮಕ್ಕಳ ಹೆರಿಗೆ ಮಾಡಿಸಲೊ, ಪ್ರವಾಸಕ್ಕೆ ಬಂದವರೊ ತಕ್ಷಣಕ್ಕೆ ಷರಾ ಬರೆದಂತೆ ಅಮೆರಿಕಾದಲ್ಲೂ ಜಾತೀಯತೆ ಇದೆ, ಅಲ್ಲಿಯೂ ಕರಿ, ಬಿಳಿ, ಕಂದು ಎಂಬ ಭೇಧ ನಮ್ಮಲ್ಲಿನ ಜಾತೀಯತೆ, ಬಡತನ, ಇತ್ಯಾದಿ ದಾರಿದ್ರ್ಯತೆಯನ್ನು ಮೀರಿಸುವಂತಿದೆ ಎಂದು ಬರೆದೆಸೆಯುತ್ತಾರೆ. ಅವರುಗಳು ಫ್ಲಾಯ್ಡ್ ದುರ್ಘಟನೆಯ ಪ್ರತಿಭಟನೆಯಲ್ಲಿ ಬಿಳಿ, ಕರಿ, ಕಂದಲ್ಲದೆ ಇಡೀ ಅಮೆರಿಕಾ ತೊಡಗಿರುವುದನ್ನು ಕಾಣಲು ಸಾಧ್ಯವೇ ಇಲ್ಲ.  USA ಎಂಬುದರ ಮೊದಲ ಪದವೇ ಯುನೈಟೆಡ್! ಅಮೆರಿಕಾದ ಯಾವುದೇ ದುರ್ಘಟನೆಯ ನಂತರ ಆ ದೇಶ ಹೇಗೆ ಒಗ್ಗೂಡಿ ಕೆಲಸ ಮಾಡುತ್ತದೆ ಎಂಬ ನಿದರ್ಶನಕ್ಕೆ ಆ ದೇಶದ ಇತ್ತೀಚಿನ ಇತಿಹಾಸವನ್ನು ಕೊಂಚ ಅಗೆದು ನೋಡುವ ತಾಳ್ಮೆಯನ್ನು ಈ ಬರಹಗಾರರು ತೋರಬೇಕು.

ಜನಾಂಗೀಯ ಭೇಧದ ಇಂತಹ ದುರ್ಘಟನೆಗಳಲ್ಲಿ ಪಾಲ್ಗೊಂಡವರಿಗೆ ಆದ ಕಾನೂನು ಕ್ರಮ, ಶಿಕ್ಷೆಗಳ ಅರಿವೇ ಅವರಿಗಿರುವುದಿಲ್ಲ. ಚಳಿಗಾಲದ ಹಿಮ, ಅದನ್ನು ಕರಗಿಸಲು ಹಾಕುವ ಉಪ್ಪು ಎಂತಹ ರಸ್ತೆಯಲ್ಲೂ ಗುಂಡಿಗಳನ್ನು ಮಾಡುತ್ತದೆ. ಆ ಗುಂಡಿಗಳನ್ನು ಚಳಿಗಾಲ ಮುಗಿದೊಡನೆಯೇ ಮುಚ್ಚಲಾಗುತ್ತದೆ. ಹಾಗೆಯೇ ಆನ್ಇನ್ಕಾರ್ಪೊರೇಟೆಡ್ ಏರಿಯಾದಲ್ಲಿರುವ ರಸ್ತೆಗಳನ್ನು ತೆರಿಗೆ ಕಟ್ಟದ ಅಲ್ಲಿನ ನಿವಾಸಿಗಳೇ ಸರಿಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಆಳ ಅರಿಯದ ಚಳಿಗಾಲದಲ್ಲಿ ಬಂದ ಪ್ರವಾಸಿ ಅಂಕಣಕಾರರು ಅಮೆರಿಕಾದಲ್ಲೂ ನಮ್ಮಲ್ಲಿಯಂತೆಯೇ ರಸ್ತೆ ಗುಂಡಿಗಳಿವೆ ಎಂದು  ಷರಾ ಬರೆದುಹಾಕುತ್ತಾರೆ. ಒಂದು ಕಾಫಿಗೆ ಮೂರು ಡಾಲರ್ ಅಂದರೆ ಇನ್ನೂರು ರೂಪಾಯಿಗಳು ಎನ್ನುವ ಅವರು ಕೊಂಚ ಆಳಕ್ಕಿಳಿದು ಐದು ಸಾವಿರ ಡಾಲರ್ ಸಂಬಳ ಬರುವವನಿಗೆ ಮೂರು ಡಾಲರ್ ಕಾಫಿ ಕೊಳ್ಳುವುದು ಕಷ್ಟವೇ ಅಥವಾ ಐದು ಸಾವಿರ ರೂಪಾಯಿ ಸಂಬಳ ಬರುವವನಿಗೆ ಮೂರು ರೂಪಾಯಿಗೆ ಕಾಫಿ ಸಿಗುತ್ತದೆಯೇ ಎಂದು ವಾಸ್ತವದ ಹಿನ್ನೆಲೆಯಲ್ಲಿ ಎಂದೂ ಯೋಚಿಸುವುದಿಲ್ಲ. ಇಂತಹವರೊಂದಿಗೂ ಸತ್ಯಪಂಥಿಗಳು ಜಂಜಾಡಬೇಕಿದೆ.

ಮುಂದುವರಿದ ರಾಷ್ಟ್ರಗಳ ನಾಗರಿಕತೆ ಒಂದು ಸಂಕೀರ್ಣ ವ್ಯವಸ್ಥೆ. ಅದು ಹೀಗೆ ಎಂದು ಒಂದೆರಡು ಪ್ರವಾಸಗಳಲ್ಲಿ ಷರಾ ಬರೆಯಲಾಗದು.

ಇರಲಿ, ವಿದೇಶಿ ಆಕ್ರಮಣಕ್ಕೆ ಸದ್ದಾಂ ಹುಸೇನ್ ಬಿಲದಲ್ಲಿ ಅಡಗಿದ್ದರ ಅಣಕು ಪ್ರದರ್ಶನದಂತೆ ಟ್ರಂಪ್, ಶ್ವೇತ ಭವನಕ್ಕೆ ತಮ್ಮದೇ ಜನ ಲಗ್ಗೆಯಿಟ್ಟಾಗ ಬಂಕರ್ ಎಂಬೋ ಬಿಲದಲ್ಲಿ ಸುಭದ್ರವಾಗಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶ್ವೇತ ಭವನದ ಮೇಲೆ ಲಗ್ಗೆಯಿಟ್ಟ ಪ್ರತಿಭಟನಾಕಾರರ ಮೇಲೆ ಯಾವುದೇ ಶೂಟ್ ಔಟ್ ಯಾ ಗೋಲಿಬಾರ್ ಆಗಿಲ್ಲ. ಹಾಗೆಯೇ ಈ ಪ್ರತಿಭಟನೆಯಲ್ಲಾಗಲಿ ದೊಂಬಿಯಲ್ಲಾಗಲಿ ಯಾವುದೇ ಸಾವು ಸಂಭವಿಸಿಲ್ಲ. ಅಷ್ಟರಮಟ್ಟಿಗೆ ಅಮೆರಿಕಾ ಪ್ರಬುದ್ಧ ಪ್ರಜ್ಞೆಯನ್ನು ಹೊಂದಿದೆ.

ಒಟ್ಟಿನಲ್ಲಿ ಆಗಿದ್ದೇನೆಂದರೆ ಒಂದೆಡೆ ಶಾಂತಿಯಿಂದ ಪ್ರತಿಭಟನೆಯಲ್ಲಿ ತೊಡಗಿರುವ ಪ್ರತಿಭಟನೆಕಾರರು, ಅವರ ಹೆಸರಿನಲ್ಲಿ ಗಲಭೆಕೋರರ ಗುಂಪೊಂದು ಹಿಂಸಾತ್ಮಕ ಪ್ರತಿಭಟನೆಯ ಬತ್ತಿ ಇಟ್ಟು ಕಿಡಿ ಹಚ್ಚಿ Mob mentality ಅನ್ನು ಪ್ರಚೋದಿಸಿದರೆ ಮುಗಿಯಿತು! ಮುಂದಾಗುವುದೇ ಗಲಭೆ, ದೊಂಬಿ, ಲೂಟಿ.

ಅದರಲ್ಲೂ ಜನಾಂಗ, ಧರ್ಮದ ಲೇಪವಿದ್ದರೆ ಅದು ವಿಶ್ವವ್ಯಾಪಿ.

ಗುಂಪಿನಲ್ಲಿ ಗೋವಿಂದಕ್ಕೆ ಯಾವ ದೇಶಗಳೂ ಹೊರತಲ್ಲ.

ಹಾಂ, ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಇರುವುದಿಲ್ಲ! ಏಕೆಂದರೆ ಅವರ ಖ್ಯಾತ ಟಿವಿ ರಿಯಾಲಿಟಿ ಶೋ ಆಗಿದ್ದ "ಅಪ್ರೆಂಟಿಸ್" ಶೋದಲ್ಲಿ ಅವರು ಹೇಳುವ "ಯೂ ಆರ್ ಫೈಯರ್ಡ್" ಎಂಬ ಮಾತನ್ನು ಅವರಿಗೆ ಓಟು ಹಾಕುವವರು ಹೇಳಲಿದ್ದಾರೆ.

ಪ್ರಶಸ್ತಿಯ ಪ್ರಹಸನ

ನಾಲ್ಕು ತಿಂಗಳ ಹಿಂದೆ ಮೈಸೂರಿನಲ್ಲಿ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಷಣ ಬಿಗಿದು ಕೂತಿದ್ದೆ. ಸಮಾರಂಭ ಮುಗಿದ ಮೇಲೆ ಹಸಿರು ಶಾಲು ಹೊದ್ದ ನಾಲ್ಕು ಜನ ತಮ್ಮನ್ನು ಅಂಬೇಡ್ಕರ್ ಹೆಸರಿನ ಸಂಘಟನೆಯವರೆಂದು ಪರಿಚಯಿಸಿಕೊಂಡು ನನ್ನ ಭಾಷಣವನ್ನು ಮತ್ತು ಅಂಬೇಡ್ಕರರ ಬಗ್ಗೆ ಮಾತನಾಡಿದುದನ್ನು ಪ್ರಶಂಸಿಸಿದರು. ನಂತರ ತಮ್ಮ ಸಂಘಟನೆಯಿಂದ ಅಂಬೇಡ್ಕರ್ ಪ್ರಶಸ್ತಿ ಗಳಿಸಿದ ಎಂಟು ಜನ ಸಾಧಕರನ್ನು ಪ್ರಶಸ್ತಿ ಪಡೆಯಲು ದೆಹಲಿಗೆ ಬೀಳ್ಕೊಡುವ ಸಮಾರಂಭವನ್ನು ಏರ್ಪಡಿಸಿದ್ದು ಅದರಲ್ಲಿ ನಿಮಗೆ "ಗಡಿಯಾಚೆಯ ಕನ್ನಡಿಗ" ಪ್ರಶಸ್ತಿ ಕೊಡುತ್ತೇವೆ, ಬರಬೇಕು ಎಂದರು. ಖುಷಿಯಿಂದ ಉಬ್ಬಿಹೋಗಿ, ಖಂಡಿತ ಬರುತ್ತೇನೆ ಎಂದೆ!

ಎರಡು ದಿನದ ನಂತರ ಫೋನ್ ಮಾಡಿದ ಅವರ ಮುಖಂಡರು ಆ ಎಂಟು ಜನ ಸಾಧಕರಿಗೆ ದೆಹಲಿಗೆ ಹೋಗಿಬರುವ ಫ್ಲೈಟ್ ಟಿಕೆಟ್ಟುಗಳನ್ನು ಕೊಡಿಸಿಬಿಡಿ ಎಂದರು. ಈ ರೀತಿಯ ಪ್ರಶಸ್ತಿಗಳ ಬಗ್ಗೆ ಕೇಳಿದ್ದೆನೇ ಹೊರತು ಅನುಭವವಿರಲಿಲ್ಲ. ಅಂತೂ ಅವರಿಗೆ ಅದಾಗದು ಎಂದು ಏನೇನೋ ಸಮಜಾಯಿಷಿ ಹೇಳಿ ತಪ್ಪಿಸಿಕೊಂಡದ್ದಾಯಿತು. ಅಂದಿನಿಂದ "ಪ್ರಶಸ್ತಿ" ಎಂದರೆ "ಶಾಸ್ತಿ" ಎಂದೇ ತಿಳಿದುಕೊಂಡಿದ್ದೇನೆ.

ಹಾಗಿದ್ದಾಗ ಇಂದು ನನ್ನ ಬೆಳೆಗಿನ ಆರೂವರೆಗೆ ಸಂವಹನ ಪ್ರಕಾಶನದ ಲೋಕಪ್ಪನವರು ಫೋನ್ ಮಾಡಿ ಒಬ್ಬರು ನಿಮ್ಮನ್ನು ಸಂಪರ್ಕಿಸಲು ಪ್ರಯತ್ನ ಮಾಡುತ್ತಿರುವರು. ನಿಮ್ಮ ಫೋನ್ ಸಿಗುತ್ತಿಲ್ಲವಂತೆ. ಹಾಗಾಗಿ ಈ ನಂಬರ್ರಿಗೆ ಫೋನ್ ಮಾಡಿ ಎಂದು ಒಂದು ನಂಬರ್ ಕೊಟ್ಟರು.

ಆ ನಂಬರ್ರಿಗೆ ಫೋನ್ ಮಾಡಿದಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ವಸಂತ್ ಕುಮಾರರು ಅತ್ಯಂತ ಸಭ್ಯತೆಯಿಂದ ತಮ್ಮನ್ನು ಪರಿಚಯಿಸಿಕೊಂಡು ಹುಯೆನ್ ತ್ಸಾಂಗನ ಮಹಾಪಯಣಕ್ಕೆ ಮಾನವಿಕ ಪ್ರಕಾರದಡಿಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುತ್ತಿರುವ ವಿಷಯ ತಿಳಿಸಿದರು. ಪ್ರಶಸ್ತಿ ಎಂದೊಡನೆ "ಶಾಸ್ತಿ" ಎಂದುಕೊಂಡಿದ್ದ ನಾನು ಒಂದು ಕ್ಷಣ ವಿಚಲಿತಗೊಂಡರೂ "ಮಾನವಿಕ" ಎಂಬುದನ್ನು "ಮಾಳವಿಕ" ಎಂದುಕೊಂಡು ತಕ್ಷಣಕ್ಕೆ ಚಂಚಲ ಖುಷಿಗೊಂಡೆನು. ನಂತರ ಈ ಬಿಜೆಪಿಯವರದು ಏನು ಕ್ರಿಯಾಶೀಲತೆ, ತಮ್ಮ ವಕ್ತಾರೆಯ ಹೆಸರಿನಲ್ಲಿ ಆಕೆಯ ಕಲೆಯನ್ನು ಸಾಹಿತ್ಯಕ್ಕೆ ಜೋಡಿಸಿ ಆಕೆಯ ಹೆಸರು ಸ್ಥಿರವಾಗುವಂತೆ ಮಾಡಿಬಿಟ್ಟಿದ್ದಾರೆ ಎಂದು ಆಶ್ಚರ್ಯಚಕಿತನಾದೆನು!

ನಂತರ ಅದು ಮಾಳವಿಕ ಅಲ್ಲ ಮಾನವಿಕ ಎಂದು ತಿಳಿದು ಕೊಂಚ ನಿರಾಸೆಯಾದರೂ ಸಮಾಧಾನಗೊಂಡೆನು.

ಇದು ಪ್ರಶಸ್ತಿಯ ಪ್ರಹಸನ.

ಅಕಾಡೆಮಿಯ ಪ್ರಶಸ್ತಿಗಳಿಗೆ ಅರ್ಜಿ ಹಾಕಬೇಕೆಂದುಕೊಂಡಿರುವವರಿಗೆ ನಾನು ಸ್ಪಷ್ಟಪಡಿಸಲೇಬೇಕಾದ ವಿಷಯವೇನೆಂದರೆ ಇದು ಅರ್ಜಿ ಹಾಕದೆ ಸಮಿತಿ ಕೃತಿಯನ್ನು ಗುರುತಿಸಿ ನೀಡಿದ ಪ್ರಶಸ್ತಿ. ಹಾಗಾಗಿ ಇದು ಖುಷಿ ನೀಡಿದ ಸಂಗತಿ.

ನಂತರ ನನಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಕಾರಣ ಶುಭಾಶಯ ಸಲ್ಲಿಸುತ್ತಾ ಅನೇಕ ಮಿತ್ರ/ಮಿತ್ರೆಯರು, ಅಕಾಡೆಮಿಯ ಆಯ್ಕೆ ಸಮಿತಿಯ ದಕ್ಷತೆ ಮತ್ತು ಅಧ್ಯಕ್ಷರ ನಡೆಯನ್ನು ಹೊಗಳುತ್ತ ಯಾವುದೇ ಗೊಂದಲ, ಓಲೈಕೆಗಳಿಲ್ಲದ ಪ್ರಶಸ್ತಿ ಪಟ್ಟಿ ಇದು ಎಂದು ಪ್ರಶಂಸಿಸಿದರು.

ಆದರೂ ಅನೇಕರು  ಪ್ರಗತಿಪರ ಟೀ(ಟೇ)ಕಾದಾರಿಗಳಿಗೆ ಯಾವುದೇ ಟೀಕೆಗೆ ಆಸ್ಪದವಿಲ್ಲದ ಕಾರಣ ಅವರಲ್ಲೇ ಪ್ರಶಸ್ತಿ ಗಳಿಸಿರುವ ಅನೇಕರನ್ನು ಈ ದುರಿತ ಸರ್ಕಾರ ಕೊಡಮಾಡಿರುವ ಪ್ರಶಸ್ತಿಗಳನ್ನು ತಿರಸ್ಕರಿಸುವಂತೆ ಓಲೈಕೆ, ಗೊಂದಲವನ್ನು ಸೃಷ್ಟಿಸದೇ ಇರಲಾರರು. ನೋಡುತ್ತಿರಿ, ಇವರಲ್ಲೇ ಕೆಲವರಾದರೂ ಅವಾರ್ಡ್ ವಾಪ್ಸಿ ವರಾತ ಶುರು ಹಚ್ಚಿಕೊಳ್ಳುತ್ತಾರೆ ಎಂದರು. 

ಈ ಕುರಿತು ಆಗಲೇ ಸದ್ದು ಶುರುವಾಗುತ್ತಿದೆ!

ಜ್ಯಾಕ್ ವೆಲ್ಚ್ ವಿದಾಯ

ಸಮಾಜಮುಖಿ ಮಾಸಿಕದಲ್ಲಿ ನನ್ನ ಲೇಖನ:

’ಶತಮಾನದ ಆಡಳಿತದ ಗುರು’, ’ಶೇರುದಾರರ ರಕ್ಷಕ’ ಎಂದೆಲ್ಲಾ ಖ್ಯಾತರಾಗಿದ್ದ ಜಿಇ ಸಂಸ್ಥೆಯ ಮಾಜಿ ಮುಖ್ಯಸ್ಥ ಜ್ಯಾಕ್ ವೆಲ್ಚ್ ಇಂದು ಕುಸಿಯುತ್ತಿರುವ ಶೇರು ಮಾರುಕಟ್ಟೆ ಮತ್ತು ದಿಕ್ಕು ತಪ್ಪಿದ ಜಾಗತಿಕ ಆಡಳಿತ ಯಂತ್ರಗಳ ದುರಿತ ಕಾಲದಲ್ಲಿ ಕಾಲವಾಗಿ ಹೋಗಿದ್ದಾರೆ!

ಮಾರ್ಚ್ ೧ ರಂದು ಕಿಡ್ನಿ ವೈಫ಼ಲ್ಯದಿಂದ ನ್ಯೂಯಾರ್ಕಿನ ತಮ್ಮ ಮನೆಯಲ್ಲಿ ಜ್ಯಾಕ್ ತೀರಿಕೊಂಡರು.

೧೯೮೧ರಲ್ಲಿ ಜನರಲ್ ಎಲೆಕ್ಟ್ರಿಕಲ್ (ಜಿಇ) ಕಂಪೆನಿಯ ಮುಖ್ಯಸ್ಥರಾಗಿ ತಮ್ಮ ನಲವತ್ತೈದನೇ ವಯಸ್ಸಿಗೆ ಅಧಿಕಾರ ವಹಿಸಿಕೊಂಡ ಜ್ಯಾಕ್ ಅತ್ಯಂತ ಕಿರಿಯ ವಯಸ್ಸಿನ ಸಿಇಓ ಎಂಬ ಖ್ಯಾತಿಗೆ ಅಂದು ಒಳಗಾಗಿದ್ದರು. ಆ ಕಾಲದಲ್ಲಿ ಇಪ್ಪತ್ತೇಳು ಬಿಲಿಯನ್ ಡಾಲರ್ರುಗಳ ಆದಾಯದ ಜಿಇ ೨೦೦೦ದ ಇಸವಿಯ ಹೊತ್ತಿಗೆ ೧೩೦ ಬಿಲಿಯನ್ ಡಾಲರ್ ವ್ಯವಹರಿಸುವಂತೆ ಕಂಪೆನಿಯನ್ನು ಹಿಗ್ಗಿಸಿದ ಹಿರಿಮೆ ಜ್ಯಾಕ್ ವೆಲ್ಚ್ ಅವರದು. ಹೀಗೆ ಕಂಪೆನಿಯನ್ನು ಹಿಗ್ಗಿಸಲು ಅವರು ಬಳಸಿದ ಮಾರ್ಗ "ಕುಗ್ಗಿಸುವುದು" ಎಂದರೆ ನಿಮಗೆ ಆಶ್ಚರ್ಯವಾಗಬಹುದು.

ಭಾರತದ ಟಾಟಾ ಕಂಪೆನಿಯಂತೆಯೇ ಅಮೇರಿಕಾದ ಜಿಇ ಕಂಪೆನಿ ಮೊಳೆಯಿಂದ ಏರೋಪ್ಲೇನಿನ ತನಕ ಉತ್ಪಾದನೆಯಲ್ಲಿ ತೊಡಗಿರುವ ಬಹುದೊಡ್ಡ ಕಂಪೆನಿ. ಈ ಕಂಪೆನಿಯ ಪ್ಲಾಸ್ಟಿಕ್ ಉತ್ಪಾದನಾ ವಿಭಾಗದ ನೌಕರಿಯಿಂದ ಮೇಲೇರಿ ಬಂದ ಜ್ಯಾಕ್, ಆ ಪ್ಲ್ಯಾಸ್ಟಿಕ್ಕಿನಂತೆಯೇ ಬಳುಕುವ, ಬಗ್ಗುವ, ಹಿಗ್ಗುವ, ಕುಗ್ಗುವ ಫ಼್ಲೆಕ್ಸಿಬಿಲಿಟಿ, ಜಾಗತಿಕ ಕಂಪೆನಿಯಾಗಲಿ ಅಥವಾ ಏಕವ್ಯಕ್ತಿ ಒಡೆತನದ ಅಂಗಡಿ ಮುಂಗಟ್ಟು ವ್ಯವಹಾರಗಳಾಗಲಿ ಉಳಿದು ಬೆಳೆಯಲು ಅನಿವಾರ್ಯ ಎಂಬುದನ್ನು ಕಂಡುಕೊಂಡಿದ್ದರೇನೋ! ಹಾಗಾಗಿಯೇ ಬಗ್ಗದ/ಕುಗ್ಗದ/ಬಳುಕದ ಸಾಕಷ್ಟು ಕೊಬ್ಬಿನ ಜಿಇ ಉದ್ದಿಮೆಗಳನ್ನು "ರಿಪೇರಿ ಯಾ ಮಾರು ಯಾ ಮುಚ್ಚು" ತತ್ವಕ್ಕೆ ಅನ್ವಯಿಸುತ್ತ ’ಲೀನ್ ಅಂಡ್ ಮೀನ್ ಬಟ್ ಸ್ಟಿಲ್ ಎ ಮರೀನ್’ ಎಂದು ಉದ್ಘೋಷಿಸುವ ಅಮೇರಿಕನ್ ಮರೀನ್ ಸೈನಿಕರಂತೆ ಮುನ್ನುಗ್ಗಿ ತಮ್ಮ ಗುರಿಯತ್ತ ಸಾಗುತ್ತಾ ಬಂದರು. ಜಾಗತಿಕ ಮಾರುಕಟ್ಟೆಯನ್ನಷ್ಟೇ ಗಮನದಲ್ಲಿಟ್ಟುಕೊಳ್ಳದೇ ಅದಕ್ಕೆ ತಕ್ಕಂತೆ ಜಾಗತಿಕ ಉತ್ಪಾದನೆ ಕೂಡಾ ಅಮೇರಿಕನ್ ಕಂಪೆನಿಗಳ ಉತ್ಪಾದನೆಯ ಮೇಲೆ ಹೇಗೆ ದುಷ್ಪರಿಣಾಮವನ್ನುಂಟು ಮಾಡುತ್ತವೆ ಎಂಬ ಜ್ಯಾಕ್ ರ ದೂರಾಲೋಚನೆ ಜಿಇ ಬೆಳೆಯಲು ಸಹಕಾರಿಯಾಯಿತು. ಆ ದೂರಾಲೋಚನೆಯ ಫ಼ಲವಾಗಿಯೇ ಆತ ’ರಿಪೇರಿ ಯಾ ಮಾರು, ಯಾ ಮುಚ್ಚು’ ತತ್ವದಡಿ ಸಾಕಷ್ಟು ಜಿಇ ಉದ್ದಿಮೆಗಳನ್ನು ಪುನರುಜ್ಜೀವಗೊಳಿಸಿ ಅಥವಾ ಮಾರಿ ಅಲ್ಪಕಾಲದಲ್ಲೇ ಹೆಚ್ಚಿನ ಲಾಭಾಂಶದೆಡೆಗೆ ತಂದರು. ಈ ತತ್ವವನ್ನು ಕೇವಲ ಉದ್ದಿಮೆಗಳಿಗಷ್ಟೇ ಅನ್ವಯಿಸದೆ ತಮ್ಮ ಸಂಸ್ಠೆಯ ಉದ್ಯೋಗಿಗಳಿಗೂ ಅನ್ವಯಿಸಿದರು. ಅನವಶ್ಯಕ ಅನುತ್ಪಾದಕ ಮಾನವ ಸಂಪನ್ಮೂಲವನ್ನು ಕಂಡುಕೊಂಡು ಮುಲಾಜಿಲ್ಲದೇ ಕೆಲಸದಿಂದ ತೆಗೆದು ಹಾಕಿದರು. ಜ್ಯಾಕ್ ರ ನಿಷ್ಠೆಯೇನಿದ್ದರೂ ಬಂಡವಾಳ ಹಾಕಿದ ಶೇರುದಾರರ ಹಿತ ಕಾಯುವುದಾಗಿತ್ತೇ ಹೊರತು ಅನುತ್ಪಾದಕ ಉದ್ಯೋಗಿಗಳನ್ನು ರಕ್ಷಿಸುವುದಲ್ಲ. ಇದಕ್ಕಾಗಿ ಅವರನ್ನು ಸಾಕಷ್ಟು ಜನ ದ್ವೇಷಿಸುವುದೂ ಉಂಟು. ಷೇರುದಾರರ ಹಿತ ಕಾಯಲು ಕಟಿಬದ್ಧವಾಗಿದ್ದ ಇವರನ್ನು ಬಂಡವಾಳಶಾಹಿತ್ವದ ರಾಯಭಾರಿ ಎಂದು ಸಮಾಜವಾದಿಗಳು ಹೀಗಳೆದರೆ, ಕೆಲವರು ಕಮ್ಯುನಿಸ್ಟ್ ಸರ್ವಾಧಿಕಾರಿಯಂತೆ ವರ್ತಿಸುತ್ತಾನೆ ಎಂದೂ ಮೂದಲಿಸಿದ್ದರು.  ಒಟ್ಟಾರೆ ತನ್ನ ವೃತ್ತಿಗೆ ಬದ್ಧನಾಗಿ ಅನ್ನ ಕೊಟ್ಟವರ ಹಿತ ಕಾಯುವುದು ತನ್ನ ಪರಮೋಚ್ಚ ಗುರಿ ಎಂದುಕೊಂಡಿದ್ದ ಈ ಸಂಪ್ರದಾಯಿ ಕ್ಯಾಥೋಲಿಕ್ ರೈಲ್ವೆ ಕಂಡಕ್ಟರನ ಮಗ!

ಮೆಸಚುಸೆಟ್ಸ್ ರಾಜ್ಯದ ಪೀಬಡಿ ಎಂಬಲ್ಲಿ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿದ ಈತನ ತಂದೆ ಬಾಸ್ಟನ್-ಮೇನ್ ರೈಲಿನ ಕಂಡಕ್ಟರ್ ಆಗಿದ್ದರೆ ಈತನ ತಾಯಿ ಗೃಹಿಣಿ. ಸದಾ ಏನಾದರೂ ಹೊಸತನದ ಸಾಹಸಕ್ಕೆ ಕೈ ಹಾಕುವ ಐರಿಷ್ ಹಿನ್ನೆಲೆಯ ಈತ ಬೇಸ್ಬಾಲ್, ಫ಼ುಟ್ಬಾಲ್ ಆಡುತ್ತ ಹಾಕಿ (ಐಸ್ ಹಾಕಿ)ಯತ್ತ ಗಮನ ಹರಿಸುತ್ತ ತನ್ನ ಶಾಲೆಯ ಹಾಕಿ ಟೀಮಿಗೆ ಕ್ಯಾಪ್ಟನ್ ಕೂಡ ಆಗಿದ್ದ.  ಇತರೆಲ್ಲಾ ಅಮೇರಿಕನ್ನರಂತೆಯೇ ತನ್ನ ಬೇಸಿಗೆಯ ಶಾಲಾ ಬಿಡುವಿನಲ್ಲಿ ಪೇಪರ್ ಹಾಕುವ, ಗಾಲ್ಫ಼್ ಆಟಗಾರರ ಸಹಾಯಕ (ಕ್ಯಾಡಿ)ನಾಗಿ, ಶೂ ಅಂಗಡಿಗಳಲ್ಲಿ ಸೇಲ್ಸ್ಮನ್ ಆಗಿ ಕೆಲಸ ಮಾಡುತ್ತ ಪುಡಿಗಾಸು ಸಂಪಾದಿಸಿಕೊಳ್ಳುವುದಲ್ಲದೆ ಜೀವನಾನುಭವವನ್ನೂ ಗಳಿಸುತ್ತಿದ್ದನು. ಹೈಸ್ಕೂಲ್ ಶಿಕ್ಷಣದ ನಂತರ ಕೆಮಿಕಲ್ ಇಂಜಿನಿಯರಿಂಗಿನಲ್ಲಿ ಡಿಗ್ರಿ ಪಡದ ಜ್ಯಾಕ್ ಮುಂದೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಪಿಹೆಚ್ಡಿ ಪಡೆದು ಜಿಇ ಸಂಸ್ಥೆಯ ಪ್ಲಾಸ್ಟಿಕ್ ವಿಭಾಗದಲ್ಲಿ ಜ್ಯೂನಿಯರ್ ಕೆಮಿಕಲ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡು ಮುಂದೆ ಅದೇ ಸಂಸ್ಥೆಯ ಮುಖ್ಯಸ್ಥರಾದದ್ದು ಒಂದು ಯಶೋಗಾಥೆ.

ಬಾಲ್ಯದಲ್ಲಿ ಉಗ್ಗುತ್ತಿದ್ದ ಇವನಿಗೆ ಇವನ ತಾಯಿ ಯಾವ ಕೀಳರಿಮೆಯುಂಟಾಗದಂತೆ ಪ್ರೊತ್ಸಾಹಿಸುತ್ತ "ನಿನ್ನಯ ಬುದ್ದಿವಂತ ಆಲೋಚನೆಗಳಿಗೆ ಜಗತ್ತಿನ ಯಾವುದೇ ನಾಲಿಗೆ ಸಾಟಿಯಾಗಲಾರದು. ಹಾಗಾಗಿಯೇ ನಿನ್ನ ನಾಲಿಗೆ ನಿನ್ನ ಆಲೋಚನೆಗಳಿಗೆ ಸಾಥ್ ನೀಡಲಾಗುತ್ತಿಲ್ಲ. ಹಾಗಾಗಿ ನೀನು ಉಗ್ಗುತ್ತಿರುವೆ. ಮುಂದೆ ನಿನ್ನ ನಾಲಿಗೆಗೆ ಇದು ಅಭ್ಯಾಸವಾಗಿ ನಿನ್ನ ಆಲೋಚನೆಗಳಿಗೆ ಅದು ಹೊಂದಿಕೊಂಡು ಈ ತೊಂದರೆ ಸರಿಹೋಗುತ್ತದೆ.  ಅಲ್ಲಿಯವರೆಗೆ ಅದಕ್ಕೆ ಅಭ್ಯಾಸ ನೀಡುತ್ತಿರು" ಎನ್ನುತ್ತಿದ್ದಳು.  ಆಕೆ ನೀಡಿದ ಪ್ರೋತ್ಸಾಹದಿಂದ ಆತನ ಉಗ್ಗುವಿಕೆ ಮುಂದೆ ನಿಂತೇ ಹೋಯಿತು. ಪ್ರಾಯಶಃ ಹಾಗಾಗಿಯೇ ಆತನ ಅನೇಕ ಉದ್ಘೋಷಗಳು ಆತನ ಆಲೋಚನೆಯಂತೆಯೇ ತೀಕ್ಷ್ಣವೂ, ಚೊಕ್ಕವೂ, ಮತ್ತು ಶುಭ್ರವೂ ಆಗಿ ಬಸವಣ್ಣನವರ ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸ್ಪಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕೆಂಬ ವಚನದಂತೆ, ಮ್ಯಾನೇಜ್ಮೆಂಟಿನವರು ಬಯಸುವಂತೆ ಕ್ರಿಸ್ಟಲ್ ಕ್ಲಿಯರ್ ಆಗಿರುತ್ತಿದ್ದವು. ಜ್ಯಾಕ್ ವೆಲ್ಚ್ ರ ಆಡಳಿತ ಸೂತ್ರಗಳೆನ್ನುವ ಅವರ ಖ್ಯಾತ ಉದ್ಘೋಷಗಳನ್ನು ಲೇಖನದ ಕೊನೆಯಲ್ಲಿ ಕೊಡಲಾಗಿದೆ, ಗಮನಿಸಿ.

ಇನ್ನು ಇವರ ಬಾಲ್ಯದ ಹಾಕಿ ಮತ್ತು ಫ಼ುಲ್ಬಾಲ್ ಆಟಗಳು ಜ್ಯಾಕ್ ರ ಆಕ್ರಮಣಕಾರಿ ಮತ್ತು ನೇರ ಕಟು ಮಾತುಗಳಾಡುವ ಸ್ವಭಾವಗಳನ್ನು ಪ್ರಭಾವಿಸಿರಬಹುದು. ಸಕ್ಕರೆ ಲೇಪನವಿಲ್ಲದ, ಕೊಬ್ಬಿನ ಗ್ರೀಸ್ ಇಲ್ಲದ, ನೇರ, ವಿಷಯಕ್ಕೆ ಸಂಬಂಧಿಸಿದ ಮಾತು, ಕ್ರಿಯೆ, ಮತ್ತು ಕೃತಿಗಷ್ಟೇ ಜ್ಯಾಕ್ ಬೆಲೆ ಕೊಡುತ್ತಿದ್ದುದು. ಇಂದು ಅಮೇರಿಕಾದಾದ್ಯಂತ ಹಲವಾರು ಮ್ಯಾನೇಜರುರುಗಳು "ಕಟ್ ದಿ ಫ಼್ಯಾಟ್, ಗಿವ್ ಇಟ್ ಸ್ಟ್ರೇಟ್" ಎಂದು ನಾಣ್ಣುಡಿಯೆನಿಸಿರುವ ಜ್ಯಾಕ್ ನ ತತ್ವವನ್ನೇ ಪಾಲಿಸುತ್ತಿರುವರು.

ಈತನ ಯಶಸ್ವಿಗೆ ಕಾರಣೀಭೂತವಾಗಿದ್ದುದು ಸಿಕ್ಸ್ ಸಿಗ್ಮಾ ಎಂಬ ಒಂದು ತಾತ್ವಿಕ ಆಡಳಿತ ವ್ಯವಸ್ಥೆ. ೧೯೮೬ರಲ್ಲಿ ಮೋಟರೋಲಾ ಕಂಪೆನಿಯ ಬಿಲ್ ಸ್ಮಿತ್ ಎಂಬ ಇಂಜಿನಿಯರ್ ಅಭಿವೃದ್ಧಿ ಪಡಿಸಿದ್ದ ಈ ವ್ಯವಸ್ಥೆಯು ಉತ್ಪಾದನಾ ಪ್ರಕ್ರಿಯೆಯನ್ನು ಅಳೆಯುವ, ಅಭಿವೃದ್ದಿಗೊಳಿಸುವ, ಅನುತ್ಪಾದಕ ಕ್ರಿಯೆಗಳನ್ನು ಗುರುತಿಸುವ ಒಂದು ದಕ್ಷ ವ್ಯವಸ್ಥೆ. ಇದನ್ನು ಜಿಇ ಕಂಪೆನಿಯಾದ್ಯಾಂತ ಅಳವಡಿಸಿಕೊಂಡದ್ದು ಜ್ಯಾಕ್ ರ ಯಶಸ್ಸಿಗೆ ಒಂದು ಪ್ರಮುಖ ಕಾರಣ.  ಹೀಗೆ ಒಂದು ವ್ಯವಸ್ಥೆಯಿರಲಿ, ತಂತ್ರಾಂಶವಿರಲಿ, ಯಾ ಹೊರಗುತ್ತಿಗೆಯ ವ್ಯವಹಾರವಿರಲಿ ಯಾವುದು ತನ್ನ ಗುರಿಸಾಧನೆಗೆ ಸಹಕಾರಿಯೋ ಅದನ್ನು ಅಭ್ಯಸಿಸಿ ಅಳವಡಿಸಿಕೊಳ್ಳುವ ತಾಳ್ಮೆ, ಜಾಣ್ಮೆ ಆತನಲ್ಲಿದ್ದಿತು.

ಇಂದು ಸಿಕ್ಸ್ ಸಿಗ್ಮಾ ತತ್ವಗಳನ್ನು ಬಹುತೇಕ ಎಲ್ಲಾ ಕಂಪೆನಿಗಳೂ ಅಳವಡಿಸಿಕೊಂಡಿವೆ. ಸಿಕ್ಸ್ ಸಿಗ್ಮಾದ ಪ್ರಮುಖ ಉದ್ದೇಶವೇ "ಕಟ್ ದಿ ಫ಼್ಯಾಟ್, ಗಿವ್ ಇಟ್ ಸ್ಟ್ರೇಟ್" ಎಂಬುದಾಗಿದೆ. ಇದು ಒಂದು ಮೀಟಿಂಗ್ ಅನ್ನು ನಡೆಸುವ ಪ್ರಕ್ರಿಯೆಯಿಂದ ಹಿಡಿದು ಒಂದು ಪ್ರಾಜೆಕ್ಟ್ ಯಾ ಪ್ರಾಡಕ್ಟ್ ಉತ್ಪಾದನೆಯ ಎಲ್ಲಾ ಹಂತಗಳಿಗೂ ಅನ್ವಯಿಸುತ್ತ ಕೊಬ್ಬಿಲ್ಲದ, ಕಸವಿಲ್ಲದ, ಶುದ್ಧ ಉತ್ಪಾದಕತನವನ್ನು ಹೊಮ್ಮಿಸುವಲ್ಲಿ ಯಾ ಕಂಡುಕೊಳ್ಳುವಲ್ಲಿ ಅತ್ಯಂತ ಪರಿಣಾಮಕಾರಿ. ಇಂದು ಸಿಕ್ಸ್ ಸಿಗ್ಮಾ ಎಂದರೆ ಅದರ ಕತೃ ಬಿಲ್ ಸ್ಮಿತ್ ಗಿಂತಲೂ ಜ್ಯಾಕ್ ವೆಲ್ಚ್ ರನ್ನೇ ಎಲ್ಲರೂ ನೆನೆಯುವುದು. ಅಷ್ಟರ ಮಟ್ಟಿಗೆ ಸಿಕ್ಸ್ ಸಿಗ್ಮಾ, ಜ್ಯಾಕರಿಂದ ಖ್ಯಾತವಾಗಿದೆ.

ಜ್ಯಾಕ್ ರನ್ನು ’ಶತಮಾನದ ಆಡಳಿತಗಾರ’ ಎಂದು ಬಹುಪಾಲು ಜನತೆ ಒಪ್ಪಿಕೊಂಡಿದ್ದರೂ ಅಲ್ಲಲ್ಲಿ ಅಪಸ್ವರಗಳೂ ಇವೆ. ಒಂದು ಲಾಭದಾಯಕ, ಅಭಿವೃದ್ದಿಶೀಲ ಕಂಪೆನಿಯ ಮುಖ್ಯಸ್ಥನಾಗಿ ಅದನ್ನು ಯಥಾವತ್ತಾಗಿ ಅಭಿವೃದ್ಧಿ ಪಥದಲ್ಲಿ ಸಾಗಿಸುವುದು ಅಂತಹ ಕಷ್ಟದ ಕೆಲಸವಾಗಿರದೇ ಓಡುತ್ತಿರುವ ರೈಲಿಗೆ ರೈಟ್ ರೈಟ್ ಎನ್ನುವ ಕ್ಯಾಪ್ಟನ್ ಈತನಾಗಿದ್ದನು ಎಂದು ಮೂಗು ಮುರಿಯುವವರೂ ಇದ್ದಾರೆ. ಈತನ ಷೇರುದಾರರ ನಿಷ್ಟೆ, ಕಟು ಮಾತುಗಳು, ಕಠಿಣ ಕ್ರಮಗಳು ಒಬ್ಬ ದುರಹಂಕಾರಿ ಡಿಕ್ಟೇಟರ್ ಎಂಬಂತೆ ಹಲವರು ಬಿಂಬಿಸಿದ್ದಾರೆ. ಅದೇನೇ ಇದ್ದರೂ ಈತ ಮೆರೆದದ್ದು ಸ್ವಾಮಿನಿಷ್ಟೆ, ವೈಜ್ಞಾನಿಕ ಉತ್ಪಾದನಾ ತಂತ್ರ, ತಂತ್ರಜ್ಞಾನದ ಅಳವಡಿಕೆ, ಅನುತ್ಪಾದಕ ಸಂಪನ್ಮೂಲಗಳನ್ನು ಉತ್ಪಾದಕಗೊಳಿಸುವುದು ಮುಂತಾದ ಕ್ರಮಗಳೆಲ್ಲಾ ಮಾನವ ಸಹಜ ನೈತಿಕತೆಯ ವಿಚಾರಗಳು.  ಇದು ಆತನ ಕ್ಯಾಥೋಲಿಕ್ ಧರ್ಮದ ಹಿನ್ನೆಲೆಯಲ್ಲಿ ಬಂದ ಮೌಲ್ಯಗಳೋ ಅಥವಾ ಮಾನವ ಸಹಜ ನೈತಿಕ ಮೌಲ್ಯಗಳು ಕಾರಣವೋ ಗೊತ್ತಿಲ್ಲ.  ಆದರೆ ಈ ವಿಚಾರವಾಗಿ ನಾವು ನೀವೆಲ್ಲರೂ ನಮ್ಮದೇ ಒಂದು ವ್ಯವಹಾರ ಉದ್ಯೋಗಗಳಲ್ಲಿ ನೈತಿಕವಾಗಿ ಏನು ಕ್ರಮಗಳನ್ನು ಕೈಗೊಳ್ಳುತ್ತೇವೆಯೋ ಅದೇ ಕ್ರಮಗಳನ್ನು ಜ್ಯಾಕ್ ಕೈಗೊಂಡಿದ್ದ. ಈ ತತ್ವಕ್ಕೆ ಅನುತ್ಪಾದಕ ನೌಕರರನ್ನು ಕೆಲಸದಿಂದ ತೆಗೆದದ್ದೂ ಹೊರತಲ್ಲವೆಂದೇ ನನ್ನ ಭಾವನೆ.

ರಾಜಕೀಯವಾಗಿ ಶ್ರೀಮಂತರ ಪರವೆಂದೇ ಗುರುತಿಸುವ ರಿಪಬ್ಲಿಕನ್ ಪಕ್ಷದ ಪರವಿದ್ದ ಜ್ಯಾಕ್, ಜಾಗತಿಕ ತಾಪಮಾನದ ಬಗ್ಗೆ "ಬಂಡವಾಳಶಾಹಿತ್ವದ ಮೇಲೆ ಸಮಾಜವಾದ ಮಾಡಲಾಗದ ಆರೋಪಕಾರಿ ಆಕ್ರಮಣವನ್ನು, ಜಾಗತಿಕ ತಾಪಮಾನವೆಂಬುದು ಸಮೂಹ ಸನ್ನಿಯನ್ನು ಸೃಷ್ಟಿಸಿ ಪರಿಣಾಮಕಾರಿಯಾಗಿ ಮಾಡುತ್ತಿದೆ" ಎಂದು ಹೇಳಿದ್ದುದು ಗಮನಾರ್ಹ! ಹಾಗಿದ್ದರೂ ಈತ ಹಸಿರು ಉತ್ಪಾದನೆಗೆ ಪ್ರಾಮುಖ್ಯತೆಯನ್ನು ಕೊಟ್ಟದ್ದೂ ಇದೆ.

ಎಲ್ಲಾ ಸೆಲೆಬ್ರಿಟಿಗಳಂತೆಯೇ ವಿವಾದಗಳು ಇವರನ್ನೂ ಸುತ್ತಿಕೊಂಡಿವೆ. ಜ್ಯಾಕ್ ನಿವೃತ್ತಿಯ ನಂತರ ಜಿಇ ಅಧೋಗತಿಯತ್ತ ಮುಖ ಮಾಡಲು ಜ್ಯಾಕ್ ತಂದ ಕೆಲವು ನೀತಿಗಳೇ ಕಾರಣ ಎನ್ನಲಾಗುತ್ತದೆ. ಆತನ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿದ್ದ ಜಿಇ ಇಂದು ಸಂಕಷ್ಟದಲ್ಲಿದೆ. ನಿವೃತ್ತಿಯ ನಂತರ ಲೇಖನ, ಪುಸ್ತಕ ಬರಹ, ಭಾಷಣ, ಬೋಧನೆಯಲ್ಲಿ ತೊಡಗಿಸಿಕೊಂಡ ಜ್ಯಾಕ್ ತನ್ನ ಪತ್ನಿ ಸೂಜಿ ವೆಲ್ಚ್ ಜೊತೆಗೂಡಿ ಸಾಕಷ್ಟು ಮ್ಯಾನೇಜ್ಮೆಂಟ್ ಕುರಿತಾದ ಪುಸ್ತಕಗಳನ್ನು  ಬರೆದಿದ್ದಾರೆ. ತಮ್ಮದೇ ಹೆಸರಿನ ಜ್ಯಾಕ್ ವೆಲ್ಚ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಮೂಲಕ ಎಮ್.ಬಿ.ಎ. ತರಗತಿಗಳನ್ನು ಕೂಡ ನಡೆಸಿದ್ದರು.

ಒಟ್ಟಿನಲ್ಲಿ ಜ್ಯಾಕ್ ವೆಲ್ಚ್ ಇತಿಹಾಸ ಕಂಡ ಒಬ್ಬ ಅಪ್ರತಿಮ ಕಾರ್ಪೋರೇಟ್ ಆಡಳಿತಗಾರ ಎಂಬುದರಲ್ಲಿ ಅನುಮಾನವಿಲ್ಲ ಎಂದು ನನ್ನ ವೈಯಕ್ತಿಕ ಅನುಭವದ ಹಿನ್ನೆಲೆಯಲ್ಲಿ ಹೇಳಬಲ್ಲೆ. ಆತನ ಸಾಕಷ್ಟು ತತ್ವಗಳು, ನನ್ನದೇ ದಾವಣಗೆರೆಯ ಯಾ ನಿಮ್ಮ ಊರಿನ ಸಣ್ಣ ಗೂಡಂಗಡಿಯವನು ಕಾಮನ್ ಸೆನ್ಸಿನಿಂದ ಅಳವಡಿಸಿಕೊಳ್ಳುವ ಸೂತ್ರಗಳೇ ಆಗಿದ್ದವು. ಇದು ಕೇವಲ ಅಂಗಡಿ ವ್ಯವಹಾರವಲ್ಲದೆ ನಮ್ಮದೇ ಮನೆ ನಡೆಸುವ ಬಾಬತ್ತಿನಿಂದಲೂ ಸತ್ಯ. ಕಾಮನ್ ಸೆನ್ಸ್ ಎಂಬ ಸಾಮಾನ್ಯ ಜ್ಞಾನವನ್ನು ಸಾಮಾನ್ಯೀಕರಿಸುತ್ತ ಸಾಗಿದಷ್ಟೂ ನೀವು ನಾವೆಲ್ಲರೂ ಜ್ಯಾಕ್ ವೆಲ್ಚ್ ಆಗುತ್ತೇವೆ. ಪ್ರಾಯಶಃ ಆತನನ್ನು ಟೀಕಿಸುವವರ ನಿಲುವು ಕೂಡ ಅವನ ಸಾಧನೆಯಲ್ಲಿ ಗಹನವಾದುದೇನೂ ಇಲ್ಲದೆ ಅದು ಕೇವಲ ಕಾಮನ್ ಸೆನ್ಸ್ ಆಗಿತ್ತು ಎಂಬುದೇ ಆಗಿದೆಯೇನೋ! ಆದರೆ ಸಾಮಾನ್ಯ ಜ್ಞಾನವನ್ನು ಅಸಾಮಾನ್ಯವಾಗಿ ಬಳಸುವ ಛಾತಿ ಕೆಲವೇ ಕೆಲವು ಸಾಮಾನ್ಯರಲ್ಲಿರುವುದರಿಂದಲೇ ಹೈಸ್ಕೂಲಿಗೆ ಶರಣು ಹೊಡೆದ/ಹೊಡೆದಿದ್ದ ರಿಲೈಯನ್ಸ್ ನ ಧೀರೂಬಾಯಿ ಅಂಬಾನಿ, ಒರಾಕಲ್ ನ ಲ್ಯಾರಿ ಎಲ್ಲಿಸನ್, ಮೈಕ್ರೊಸಾಫ಼್ಟಿನ ಬಿಲ್ ಗೇಟ್ಸ್ ಅಲ್ಲದೇ ನಮ್ಮ ನಿಮ್ಮೂರಿನ ಶೈಕ್ಷಣಿಕ ಸಾಧನೆಯಿರದ ಅನೇಕ ಉದ್ದಿಮೆದಾರರು ಯಶಸ್ವಿಯಾಗಿದ್ದಾರೆ ಎಂದೇ ನನ್ನ ಅನಿಸಿಕೆ. ನಮ್ಮ ಮೆದುಳಿನ ಕಲ್ಪನೆಯ ಆಲೋಚನೆಗಳಿಗೆ ವಾಸ್ತವಿಕ ಹಿನ್ನೆಲೆಯಲ್ಲಿ ನಮ್ಮ ನಾಲಿಗೆ ಸ್ಪಂದಿಸುತ್ತಾ ಸಾಗಿದರೆ ಅದು ಸಂಯೋಜಿತ ಸಂಗೀತ (ಸಿಂಕ್ರೊನೈಸ್ಡ್ ಸಿಂಫ಼ೋನಿ) ಇಲ್ಲದಿದ್ದರೆ ಅದು ಉಗ್ಗುವಿಕೆ ಎಂಬುದು ಜ್ಯಾಕ್ ನ ತಾಯಿಯ ಪ್ರೊತ್ಸಾಹದ ಮಾತಿನ ಅಂತರಾಳದ ಅಂತಃಸ್ಸತ್ವವೇನೋ!

ಜ್ಯಾಕ್ ವೆಲ್ಚ್ ಉದ್ಘೋಷಗಳು:
- ಇಂದಿನ ವಾಸ್ತವವನ್ನು ಇಂದಿನಂತೆಯೇ ನೋಡು, ಅದನ್ನು ನೆನ್ನೆಯಂತಾಗಲೀ ಅಥವಾ ಅದು ಹೀಗಿರುತ್ತದೆ ಎಂಬ ನಿನ್ನ ಕಲ್ಪನೆಯಂತಲ್ಲ!
- ’ಉದ್ಯೋಗ-ಜೀವನ ಸಮತೋಲನ’ ಎಂಬುದಿಲ್ಲ. ಇರುವುದು ಉದ್ಯೋಗ ಮತ್ತು ಜೀವನವೆಂಬ ಆಯ್ಕೆ. ಆಯಾಯ ಆಯ್ಕೆಗಳು ತಮ್ಮದೇ ಆದ ಪರಿಣಾಮಗಳೊಂದಿಗೆ ಬರುತ್ತವೆ. ಆಯ್ಕೆ ನಿಮ್ಮದು.
- ನಿನ್ನ ಗುರಿಯನ್ನು ನೀನು ನಿಯಂತ್ರಿಸು, ಇಲ್ಲದಿದ್ದರೆ ಬೇರೆಯವರು ಅದನ್ನು ನಿಯಂತ್ರಿಸುತ್ತಾರೆ!
- ಯಾರೊಬ್ಬ ಒಂದು ದೂರದೃಷ್ಟಿ (ವಿಷನ್)ಯನ್ನು ಸೃಷ್ಟಿಸಿ, ಪೊರೆದು, ಎಲ್ಲರಿಗೂ ಅರ್ಥೈಸಿ ಅದನ್ನು ಸಾಕಾರಗೊಳಿಸಲು ಶ್ರಮ ಪಡುತ್ತಾನೆಯೋ ಅವನೇ ಉತ್ತಮ ನಾಯಕ!
- ಜಗತ್ತು ನಮಗಿಂತ ಹೆಚ್ಚು ಬದಲಾಗುತ್ತಿದ್ದರೆ ನಮ್ಮ ಅಂತ್ಯ ಸನಿಹವಿದೆ ಎಂದರ್ಥ!
- ಬದಲಾಗಲೇ ಬೇಕಾಗುವ ಮೊದಲೇ ಬದಲಾಗು!
- ಸುಧೀರ್ಘ ಕಾಯುವಿಕೆಗಿಂತ ಕ್ಷಿಪ್ರ ಕಾರ್ಯ ಸೂಕ್ತ !
- ಇತರರಲ್ಲಿ ಆತ್ಮವಿಶ್ವಾಸವನ್ನು ತುಂಬುವವನೇ ನಾಯಕ!
- ನಿನ್ನ ಆಯ್ಕೆಗಳಿಗೆ ಮತ್ತವುಗಳ ಪರಿಣಾಮಗಳಿಗೆ ನೀನೇ ಜವಾಬ್ದಾರ!

ಚೋಲಿ ಕೆ ಪೀಚೆ ಕ್ಯಾ ಹೈ, ಚೋಲಿ ಕೆ ಪೀಚೆ? ಚುನರಿ ಕೆ ನೀಚೆ ಕ್ಯಾ ಹೈ, ಚುನರಿ ಕೆ ನೀಚೆ?

ಚೋಲಿ ಕೆ ಪೀಚೆ ಕ್ಯಾ ಹೈ, ಚೋಲಿ ಕೆ ಪೀಚೆ? ಚುನರಿ ಕೆ ನೀಚೆ ಕ್ಯಾ ಹೈ, ಚುನರಿ ಕೆ ನೀಚೆ?

ದಿಢೀರನೆ ಈಗ ಗತಕಾಲದ ಸುಂದರಿ ಮಾಧುರಿ ನೆನಪಾಗಲು ಕಾರಣವೆಂದರೆ ನನ್ನ ಟ್ಯಾಗ್ಲೈನ್ ಕುರಿತು ಇತ್ತೀಚೆಗೆ ಹೆಚ್ಚು ಯುವ ಮನಸ್ಸುಗಳು ಮೇಲಿನ ಹಾಡಿನಂತೆಯೇ ಕೇಳುತ್ತಿವೆ. ನಾನು ಹದಿಹರೆಯದಲ್ಲಿದ್ದಾಗ ಪಡ್ಡೆಯಾಗಿದ್ದಾಗ ಇಂದಿನ ದೈವಿಕ ಯುವಪಡೆಯಂತಿರಲಿಲ್ಲದಿದ್ದರೂ ಅವರಂತೆಯೇ ಆತುರಗಾರನಾಗಿದ್ದೆ. ಹಾಗೆಂದು ಅಂದಿನ ನನ್ನ ಖಾಸಾ ಸ್ನೇಹಿತೆ ಸಮಾಧಾನದಿಂದ ಕುಚೋದ್ಯವಾಗಿ ಹೇಳುತ್ತಿದ್ದಳು. ಹಾಗಾಗಿ ನನ್ನ ಟ್ಯಾಗ್ಲೈನ್ ಕುರಿತಾದ ಕಳವಳವನ್ನು ಅರ್ಥ ಮಾಡಿಕೊಳ್ಳಬಲ್ಲೆ.

ಚೋಲಿ ಕೆ ಪೀಚೆ ಚುನರಿ ಕೆ ನೀಚೆ ಏನಿದೆಯೆಂದು ಮಾಧುರಿ ಎದೆ ಹಾರಿಸುತ್ತಾ, ಸೊಂಟ ತಿರುವುತ್ತ ದಿಲ್ ದಿಲ್ ದಿಲ್ ಎಂದು ಏರುದನಿಯಲ್ಲಿ ಉನ್ಮತ್ತಳಾಗಿ ಹೇಳಿದರೂ ಅಲ್ಲಿ ಕೇವಲ ದಿಲ್ ಮತ್ತು ದಿಲ್ ಮಾತ್ರ ಇದೆ. ಪ್ರೇಮಕ್ಕೆ ಮಿಡಿಯುವ ವಿಶಾಲ, ನಿಷ್ಠ, ಪ್ರಮಾಣಿಕ ದಿಲ್!

ಕಳೆದ ಹತ್ತು ವರ್ಷಗಳಿಂದ ಬಳಸುತ್ತಿರುವ ನನ್ನ ಟ್ಯಾಗ್ಲೈನ್ ಇತ್ತೀಚಿನದಲ್ಲ. ಆದರೆ ಇದನ್ನು ಪ್ರಶ್ನಿಸುತ್ತಿರುವವರು ನನ್ನ ನವನವೀನ ಯುವಮಿತ್ರರು. ನಾನು ಈ ಹಿಂದೆಯೇ ಅನೇಕ ಸಾರಿ ಈ ಪ್ರಶ್ನೆ ಬಂದಾಗ ಏಕೆ ಈ ಟ್ಯಾಗ್ಲೈನ್ ಎಂದು ಹೇಳಿದ್ದೇನೆ. ನೀವು ಹೇಳುವ ಐತಿಹಾಸಿಕ ಅಭಿಮಾನದ ಭಾರತ ಬೇರೆ. ನಾನು ಹೇಳುತ್ತಿರುವುದು ಪ್ರಜಾಪ್ರಭುತ್ವದ ಇಂದಿನ ವಾಸ್ತವದ ಭಾರತ. ಅದು ಹೇಗೆ ಹುಚ್ಚಾಸ್ಪತ್ರೆ ಮತ್ತು ಕಮಂಗಿಪುರ ಎಂದು ನನ್ನ ಆಯಾಯ ಲೇಖನದ ಪರಿಧಿಯಲ್ಲಿ ಮಾತ್ರ ಗಮನಿಸಿ ಸಮಾಧಾನಿಯಾಗಿ ಯೋಚಿಸಿದರೆ ಮಾಧುರಿಯ...ಅಲ್ಲಲ್ಲ ನನ್ನ ದಿಲ್ ಮಾತ್ರವಲ್ಲ ಅದರಲ್ಲಿನ ನಿಷ್ಠೆ, ಪ್ರಾಮಾಣಿಕತೆ, ಕಳಕಳಿ, ಪ್ರೀತಿ ಮತ್ತೆಲ್ಲವೂ ಕಾಣಿಸುತ್ತದೆ. ಅದು ಕಾಣದಿದ್ದರೆ ಚಿಂತಿಸಬೇಡಿ, ನಿಮ್ಮ ತಲೆಯಲ್ಲಿ ಚೋಲಿ, ಚುನರಿಗಳ ಮತ್ತು  ದಿಲ್ ನಡುವಿನ ಬೇರೇನೋ ಕಂಡರೆ ಅದು ನಿಮ್ಮ ತಪ್ಪಲ್ಲ. ಯುವಮಾನಸ್ಸುಗಳೇ ಹಾಗೆ. ಕಾಲ ದಿಲ್ ಅನ್ನು ಅಲ್ಲಿನ ಕಳಕಳಿಯನ್ನು ಸ್ಮೃತಿ ಪಟಲದ ಪರದೆಯ ಮೇಲೆ ತೋರಿಸುತ್ತದೆ. ಅಲ್ಲಿಯವರೆಗೆ ತಾಳ್ಮೆಯಿರಲಿ. ಏಕೆಂದರೆ ತಾಳಿದವನು ಬಾಳಿಯಾನು!

ಅದಲ್ಲದೆ ನನ್ನ ಕೆಲವು ಲೇಖನಗಳು ಟ್ಯಾಗ್ಲೈನ್ ಇಲ್ಲದೆಯೂ ಇವೆ. ಕೇವಲ ನನ್ನ ವಾಸದ ದೇಶವನ್ನು ಪರಿಗಣಿಸಿ ನಾನು ಪರದೇಶಗಳನ್ನು ಹೊಗಳುತ್ತಿದ್ದೇನೆ ಎಂದು ನಾನು ಬರೆಯದ ವಿಷಯಗಳನ್ನು ಏಕೆ ಊಹಿಸಿಕೊಳ್ಳುತ್ತೀರಿ? ಈ ಪೋಸ್ಟಿನ ಲೇಖನದ ಪರಿಧಿಯಲ್ಲಿ ಭಾರತ ಏಕೆ ಹುಚ್ಚಾಸ್ಪತ್ರೆಯಲ್ಲ ಎಂದು ತಿಳಿಸಿ, ವಿಡಂಬನೆ ಸಾಹಿತ್ಯದ ಒಂದು ಭಾಗ ಎಂದುಕೊಂಡು ಲೇಖನದ ಆಶಯವನ್ನು ಮಾತ್ರ ಗ್ರಹಿಸಿ, ನಮ್ಮ ವಾಸ್ತವದ ಹಿನ್ನೆಲೆಯಲ್ಲಿ ಲೇಖನವನ್ನು ಕಾಣಬೇಕೆ ಹೊರತು ಲೇಖಕನ ವಾಸದ ನೆಲೆಯ ಹಿನ್ನೆಲೆಯಲ್ಲಿ ಕಾಣಬಾರದು, ಸತ್ಯದ ಬುನಾದಿಯ ಮೇಲೆ ನನ್ನ ದೇಶವನ್ನು ಕಟ್ಟೋಣ/ನೋಡೋಣ ಎಂಬ ಆಶಯವೇ ನನ್ನ ಟ್ಯಾಗ್ಲೈನ್ ಹಿಂದಿನ ಕಳಕಳಿ, ಇತ್ಯಾದಿ ಇತ್ಯಾದಿಯಾಗಿ ನಾನು ಏನೇ ಬೊಮ್ಮಡಿ ಹೊಡೆದರೂ ಅದು ಚೋಲಿ, ಚುನರಿ ಮತ್ತು ದಿಲ್ ನಡುವಿನ ಕಲ್ಪನಾ ಭಾಗವಾಗಿಯೇ ಕಾಣುತ್ತದೆ.

ಇನ್ನು ಕೊರೋನಾ ಹಿನ್ನೆಲೆಯಲ್ಲಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ, ನಮ್ಮಲ್ಲಿ ಕೊರೋನಾ ಹೆಚ್ಚಿದ್ದರೆ ಇಷ್ಟರೊಳಗೆ ದೇಶದಾದ್ಯಂತ ಎಲ್ಲೆಲ್ಲೂ ಸಾವು ನೋವು ತುಂಬಿರಬೇಕಿತ್ತು, ಇತ್ಯಾದಿ ಇತ್ಯಾದಿ ಹುಸಿ ಧುರಭಿಮಾನದ ಭಾವನಾತ್ಮಕತೆಯನ್ನು ಬದಿಗಿಟ್ಟು ನೋಡಿದಾಗ ವಾಸ್ತವಿಕವಾಗಿ ಪ್ರಪಂಚದ ಇತರೆ ಭಾಗಗಳಲ್ಲಿ ದಶಕದ ಹಿಂದೆ ಬಂದು ಹೋದ ಚಿಕೂನ್ ಗುನ್ಯಾ, ಡೆಂಗ್ಯೂ, ಹಕ್ಕಿಜ್ವರ, ಹಂದಿಜ್ವರಗಳು ಭಾರತದಲ್ಲಿ ಭದ್ರವಾಗಿ ಇಂದಿಗೂ ತಳವೂರಿವೆ. ಭಾರತ ಮಧುಮೇಹಿಗಳ, ಹೃದ್ರೋಗಿಗಳ, ಅಜೀರ್ಣತೆಯ, ಅಪೌಷ್ಟಿಕತೆಯ ರಾಜಧಾನಿ ಎಂದು ಹೆಸರಾಗಿದೆ.

ಹಾಗಾಗಿ ವಾಸ್ತವದ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಹತ್ವವನ್ನು ಅರಿತುಕೊಳ್ಳಿ. ಸರ್ಕಾರ ಫೋನುಗಳು ರಿಂಗ್ ಆಗುವ ಮುನ್ನ ಕೊಡುತ್ತಿದ್ದ ಎಚ್ಚರಿಕೆಯನ್ನು ಟ್ರೋಲ್ ಮಾಡಿದಂತೆ, ಚಪ್ಪಾಳೆ ಕರೆಯನ್ನು ವೈಪರೀತ್ಯಕ್ಕೆ ಕೊಂಡೊಯ್ದ ರೀತಿ ಮಾಡದೆ ಇಂದು ವಿಸ್ತರಿಸಿದ ಲಾಕ್ ಡೌನ್ ಅನ್ನು ಜವಾಬ್ದಾರಿಯಿಂದ ನಿರ್ವಹಿಸಿ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ.

ಚೋಲಿ ಕೆ ಪೀಚೆ, ಚುನರಿ ಕೆ ನೀಚೆ ಎಂದು ಈಗಲೂ ಕೇಳುವಿರಾದರೆ ನನ್ನ ಉತ್ತರ ಸದಾ "ನಾಯಕ್ ನಹೀ ಖಳ್ ನಾಯಕ್ ಹೂ ಮೇ!"

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಟ್ರಂಪ್ ನ ವೀಸಾ ನೀತಿಯೂ , ಭಾರತೀಯರ ಬೂಸಾ ಕಂಪೆನಿಗಳೂ!

ಭಾಗ ೧:
ಟ್ರಂಪ್ ವಲಸೆ ನೀತಿ ಕುರಿತು ಅಮೇರಿಕಾಕ್ಕಿಂತ ಭಾರತ ಹೆಚ್ಚು ಚಿಂತಿತವಾಗಿದೆ. ಅದರಲ್ಲೂ ಟ್ರಂಪ್ ಭಾರತೀಯರ ವಿರೋಧಿ ಎಂಬಂತೆ ಭಾರತೀಯ ಮಾಧ್ಯಮಗಳು ಚಿತ್ರಿಸುತ್ತಿವೆ. 

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಟ್ರಂಪ್ ಸರ್ಕಾರ ವಲಸೆ ನೀತಿಯ ಕುರಿತು ಏನನ್ನೂ ಬದಲಾಯಿಸಿಲ್ಲ, ಇದ್ದ ನೀತಿಯನ್ನೇ ಬಲಪಡಿಸಿದೆ ಎಂಬುದು ಸತ್ಯದ ಸಂಗತಿ. ಅದೇಕೆ ಭಾರತೀಯ ಮಾಧ್ಯಮಗಳು ಈ ರೀತಿ ಸತ್ಯ ಸಂಗತಿಯನ್ನು ಮರೆಮಾಚಿ ರೋಚಕತೆಯನ್ನು ಭಿತ್ತಿಸುವವೋ!

ಯಾವ ದೇಶದ ನೀತಿಯೂ ತನ್ನ ನಾಗರೀಕರಿಗೆ ಉದ್ಯೋಗ ಕಲ್ಪಿಸದೇ ವಲಸೆಗಾರರನ್ನು ಕರೆತನ್ನಿ ಎಂದು ಹೇಳುವುದಿಲ್ಲ.  ಅಮೆರಿಕಾ ಕೂಡಾ ತನ್ನ ಈಗಿನ ಸದ್ಯದ ಹೆಚ್೧ಬಿ, ಹೆಚ್೪ ವೀಸಾಗಳ ಕುರಿತಾದ ನಿಯಮ ಬಲಪಡಿಸುವಿಕೆಯನ್ನು ಎಂದೋ ಮಾಡಬೇಕಿತ್ತು. ಭಾರತದ ಸಾಕಷ್ಟು ಪ್ರಮುಖ ಕಂಪೆನಿಗಳಿಂದ ಹಿಡಿದು ಸಣ್ಣಪುಟ್ಟ ಕಂಪೆನಿಗಳು ಸೇರಿ ಈ ವೀಸಾಗಳ ದುರುಪಯೋಗದ ಪರಮಾವಧಿಯನ್ನು ಮೀರಿದ್ದವು. ಈ ಕುರಿತಾಗಿ ವಿಖ್ಯಾತ ಇನ್ಫಸಿಸ್ ಅದಾಗಲೇ ದಂಡ ಕಟ್ಟಿದೆ.

ಹೆಚ್೧ಬಿ ವೀಸಾವನ್ನು ಆಯಾಯಾ ಉದ್ಯೋಗಕ್ಕೆ ಬೇಕಿರುವ ಉನ್ನತ ಶಿಕ್ಷಣ, ಅನುಭವವಿರುವವರಿಗೆ ಮತ್ತು ಆ ಕೆಲಸವನ್ನು ಮಾಡಲು ಅಮೇರಿಕನ್ನರು ಯಾರೂ ಲಭ್ಯವಿರದಿದ್ದರೆ ಕೊಡಬೇಕು ಎನ್ನುತ್ತದೆ ಅಮೆರಿಕಾ ವಲಸೆ ನೀತಿ. ಇದನ್ನು ನಿಯಮಬದ್ಧವಾಗಿ ೨೦೦೦ದವರೆಗೆ ಎಲ್ಲಾ ಕಂಪೆನಿಗಳೂ ಪಾಲಿಸುತ್ತಿದ್ದವು. ಆದರೆ ನಂತರ ಈ ವೀಸಾ ವ್ಯವಹಾರದಲ್ಲಿ ಪಳಗಿದ ಭಾರತೀಯ ಕಂಪೆನಿಗಳು ಈ ವೀಸಾವನ್ನು ದುರುಪಯೋಗಪಡಿಸಿಕೊಳ್ಳಲಾರಂಭಿಸಿದವು. ಇದು ಎಲ್ಲಿಗೆ ಹೋಗಿ ತಲುಪಿತೆಂದರೆ, ಹೆಚ್೧ಬಿ ನೋಂದಣಿ ಆರಂಭವಾಗಿ ಕೆಲವು ಗಂಟೆಗಳಲ್ಲೇ ಗರಿಷ್ಟ ಮಿತಿಯನ್ನು ತಲುಪಿ ಆಯಾಯಾ ವರ್ಷದ ಕೋಟಾ ಭರ್ತಿಯಾಗುವಷ್ಟು! ನಂತರ ಶುರುವಾದದ್ದೇ ಒಬಾಮಾ ಸಡಿಲಿಸಿದ ಡಿಪೆಂಡೆಂಟ್ ವೀಸಾದ ದುರುಪಯೋಗ! ಅಪ್ಪಟ ಗೃಹಿಣಿರೆಲ್ಲಾ ಹೆಚ್೧ಬಿ ತರದ ಯಾವುದೇ ಲಂಗುಲಗಾಮಿಲ್ಲದೇ ಕೆಲಸಕ್ಕೆ ಇದೇ ಭಾರತೀಯ ಕಂಪೆನಿಗಳ ಮೂಲಕ ಕಡಿಮೆ ಸಂಬಳಕ್ಕೆ ಬರತೊಡಗಿದರು. ತಮ್ಮದೇ ಆದ ವಲಯ, ಲಾಬಿಗಳನ್ನು ಕಛೇರಿಗಳಲ್ಲಿ ಕಟ್ಟಿಕೊಂಡ ಈ ವೀಸಾ ಭಾರತೀಯರು ಬೇರೆ ಯಾವುದೇ ವ್ಯಕ್ತಿ, ಅಮೇರಿಕನ್ ಪೌರತ್ವ ಹೊಂದಿದ ಭಾರತೀಯನನ್ನೂ ಸಹ ದೂರವಿಟ್ಟು ಅಮೆರಿಕನ್ ಐಟಿ ಜಾಬ್ ಮಾರ್ಕೆಟ್ಟಿನಲ್ಲಿ ಪಾಳೆಗಾರಿಕೆಯನ್ನು ಶುರುವಿಟ್ಟುಕೊಂಡರು. ಈ ಕುರಿತಾಗಿ ಭಾರತೀಯ ಮೂಲದ ಅಮೆರಿಕನ್ನರು ಕೂಡಾ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಇದೆಲ್ಲದರ ಪರಿಣಾಮವಾಗಿಯೇ ಟ್ರಂಪ್ ಸರ್ಕಾರ ವೀಸಾ ನೀತಿಯನ್ನು ಬಲಪಡಿಸಲು ಆಸಕ್ತಿ ತೋರಿದ್ದುದು. ಇದು ಅತ್ಯಂತ ಬೇಕಾಗಿದ್ದ ನೀತಿ ಬಲಪಡಿಸುವಿಕೆ. ಟ್ರಂಪ್ ಸರ್ಕಾರದ ಬೇರೆಲ್ಲಾ ನೀತಿಗಳನ್ನು ಜನ ಒಪ್ಪದಿದ್ದರೂ ಈ ವೀಸಾ ನೀತಿಯನ್ನು ತುಂಬು ಹೃದಯದಿಂದ ನನ್ನಂತಹ ಭಾರತೀಯ ಅಮೇರಿಕನ್ನರು ಒಳಗೊಂಡಂತೆ ಎಲ್ಲಾ ಅಮೇರಿಕನ್ನರೂ ಸ್ವಾಗತಿಸುತ್ತಿದ್ದಾರೆ. ಬಹುಶಃ ಈ ಕುರಿತಾಗಿ ಭಾರತೀಯ ಮೂಲದವರೇ ಯಾರೋ ಟ್ರಂಪ್ ಸಲಹೆಗಾರರಾಗಿರಬಹುದು! ಏಕೆಂದರೆ ಭಾರತೀಯ ಕಂಪೆನಿಗಳು ವಲಸೆ ಇಲಾಖೆಯ ನಿಯಮಗಳನ್ನು ಹೇಗೆ ಯಾಮಾರಿಸುತ್ತಿವೆ ಎಂಬುದನ್ನು ವಲಸೆ ಇಲಾಖೆ ಈಗ ಅರಿತಿದೆ. 

ಭಾರತೀಯ ಮೂಲದ ಎಲ್ಲಾ ಕಂಪೆನಿಗಳು ತಮಗೆ ಬೇಕುಬೇಕಾದ ಇಂಜಿನಿಯರಿಂಗಿನ ಎಲ್ಲಾ ವಿಭಾಗದಲ್ಲಿರುವವರಿಂದ ಹಿಡಿದು ಬಿಎಸ್ಸಿ, ಬಿಕಾಮ್ ಹಿನ್ನೆಲೆಯವರನ್ನೆಲ್ಲಾ ಕಂಪ್ಯೂಟರ್ ತಜ್ಞರೆಂದು ಬಿಂಬಿಸಿ ಕರೆತಂದು ಹೆಚ್೧ಬಿ ವೀಸಾವನ್ನು ಹಿಗ್ಗಾಮುಗ್ಗಾ ಶೋಷಣೆಗೊಳಪಡಿಸಿದ್ದರು. ಒಬ್ಬನೇ ವ್ಯಕ್ತಿ ಜಾವಾ ಕೆಲಸಕ್ಕೆ ಜಾವಾ, ಡಾಟ್ ನೆಟ್ ಕೆಲಸಕ್ಕೆ ಡಾಟ್ ನೆಟ್, ಯಾವುದು ಬೇಕೋ ಆಯಾಯ ಬೈಯೊಡೇಟಾ ಸಿದ್ಧಪಡಿಸಿಕೊಂಡಿರುತ್ತಾನೆ. ಅಥವಾ ಅವನ ಹೆಚ್1ಬಿ ಕಂಪೆನಿಯೇ ಸಿದ್ಧಪಡಿಸಿರುತ್ತದೆ.  ಹೀಗೆ ಹಿಗ್ಗಾಮುಗ್ಗಾ ಅನುಭವವನ್ನು ತೋರಿಸಿ, ಅನನುಭವಿಗಳನ್ನು ತಂದು ಕೂರಿಸಿ ಭಾರತೀಯರೆಂದರೆ ಮಹಾನ್ ಸುಳ್ಳುಗಾರರೆಂದು/ಮೋಸಗಾರರೆಂಬ ಅಭಿಪ್ರಾಯ ಬರುವಂತೆ ಮಾಡಿಟ್ಟಿದ್ದಾರೆ.  ಇದು ಇತರೆ ಪ್ರತಿಭಾವಂತ ಭಾರತೀಯರಿಗೆ ಸಾಕಷ್ಟು ಸಂಕಷ್ಟವನ್ನು ತಂದೊಡ್ಡಿದೆ. 

ಅದಲ್ಲದೇ ತಮ್ಮ ಅಂತರಿಕ ಕಂಪೆನಿ ವ್ಯವಹಾರಗಳಿಗೆ ಮಾತ್ರ ಒದಗುವ ಎಲ್ ವೀಸಾ, ಬಿಸಿನೆಸ್ ವೀಸಾಗಳನ್ನು ಹೆಚ್೧ಬಿಯ ಬದಲಿಯಾಗಿ ಉಪಯೋಗಿಸುವುದಲ್ಲದೇ ಈ ವೀಸಾದಾರರಿಗೆ ಗ್ರೀನ್‍ಕಾರ್ಡುಗಳನ್ನೊದಗಿಸಿ ಇಲ್ಲಿಯೇ ಭದ್ರವಾಗಿ ಠಿಕಾಣಿ ಹೂಡಿಸುವವರೆಗೆ ವೀಸಾ ದುರ್ಬಳಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಟ್ರಂಪ್ ಸರ್ಕಾರದ ವೀಸಾ ನಿಯಮ ಬಿಗಿಗೊಳ್ಳುವಿಕೆಯಿಂದಾಗಿ ಈ ರೀತಿಯ  ಗ್ರೀನ್ ಕಾರ್ಡ್ ಪ್ರಾಯೋಜನೆ ನಿಂತಿದೆ.  ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ರೀತಿ ಗ್ರೀನ್ಕಾರ್ಡ್ ಪಡೆದ ಬಹುತೇಕರು ಕೇವಲ ಭಾರತೀಯ ಮೂಲದ ಕಂಪೆನಿಗಳಲ್ಲಿ ಕೆಲಸ ಮಾಡಬಲ್ಲರೇ ಹೊರತು ಅಮೇರಿಕನ್ ಕಂಪೆನಿಗಳಲ್ಲಿ ಅಲ್ಲ. ಏಕೆಂದರೆ ಅವರ ದಗಲಬಾಜಿ ವೃತ್ತಿ ಅನುಭವ ಆ ಕಂಪೆನಿಗಳಲ್ಲಿ ಉಪಯೋಗಕ್ಕೆ ಬರುವುದೇ ಹೊರತು ಬೇರೆಡೆಯಲ್ಲ. 

ಸದ್ಯಕ್ಕೆ ಟ್ರಂಪ್ ಸರ್ಕಾರ ಈಗಿರುವ ವೀಸಾ ನಿಯಮಗಳನ್ನೇ ಕಟ್ಟುನಿಟ್ಟಾಗಿ ಪಾಲಿಸುವಂತೆ ವಲಸೆ ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದುದರ ಪರಿಣಾಮವಾಗಿ ಈ ಎಲ್ಲಾ ದುರುಪಯೋಗ ತಾನೇ ತಾನಾಗಿ ನಿಂತಿದೆ. ಅಂದರೆ ಯಾವ ನೀತಿಯ ಬದಲಾವಣೆಯಿಲ್ಲದೆ ಕೇವಲ ಕಟ್ಟೆಚ್ಚರದಿಂದ ವೀಸಾ ಅರ್ಜಿಗಳನ್ನು ಪರಿಶೀಲನೆ ಮಾಡಿದರೆ ನೀತಿ ನಿಯತ್ತು ಪಾಲಿಸುವ ಕಂಪೆನಿಗಳಿಗೆ ಭಯವೇಕಿರಬೇಕು. ಅಂದರೆ ವೀಸಾ ಕುರಿತು ಗಾಬರಿ ಭಯ ವ್ಯಕ್ತಪಡಿಸುವ ಕಂಪೆನಿಗಳ ನಿಯತ್ತು ಪ್ರಶ್ನಾರ್ಹವೆಂದಲ್ಲವೇ?

ವ್ಯವಸ್ಥೆ ಚಾಪೆ ಕೆಳಗೆ ತೂರಿದರೆ, ರಂಗೋಲಿ ಕೆಳಗೆ ತೂರಬಲ್ಲ ಭಾರತೀಯತೆ ಅಮೇರಿಕಾದಂತಹ ರಾಷ್ಟ್ರದ ವೀಸಾ ನೀತಿಯನ್ನು ತಿಪ್ಪರಲಾಗ ಹಾಕಿಸಿ ದುರ್ಬಳಕೆ ಮಾಡಿಕೊಂಡದ್ದು ಮಾತ್ರ ಸತ್ಯ. ಅಂತಹ ಭಾರತೀಯತೆಗೆ ಸಾಕ್ಷಿಯಾಗಿ ಮೋದಿಯ ನೋಟ್‍ಬ್ಯಾನ್ ಚಾಪೆಗೆ, ಬ್ಯಾಂಕ್ ಮ್ಯಾನೇಜರರುಗಳ ರಂಗೋಲಿಯನ್ನು ದೇಶವೇ ಕಂಡಿದೆಯಲ್ಲವೇ!?

ಭಾಗ ೨:

ಈ ವೀಸಾ ಬಳಕೆ 2000 ರದವರೆಗೆ ಎಲ್ಲಾ ಸರಿಯಾಗಿತ್ತು. ಏಕೆಂದರೆ ಅಲ್ಲಿಯವರೆಗೆ ಗ್ರಾಹಕನ ಪ್ಲಾನು, ಡಿಸೈನು. ಅದನ್ನು ಅಳವಡಿಸಲು ಈ ಭಾರತೀಯ ಕಂಪೆನಿಗಳ ಪ್ರೋಗ್ರಾಮರುಗಳು. ಆದರೆ ಯಾವಾಗ ಐಟಿ ಔಟ್ ಸೋರ್ಸ್ ಆಯಿತೋ ಆಗಿನಿಂದ ಈ ಸಮಸ್ಯೆಗಳು ಶುರುವಾದವು. ಭಾರತೀಯ ವಿದೇಶದಲ್ಲಿ ನೆಲೆಸಿ ವಿದೇಶೀ ಕಂಪೆನಿಗಳಿಗೆ ಕೆಲಸ ಮಾಡುತ್ತಿದ್ದರೆ ಸರಿ. ಯಾವಾಗ ಆತ ಭಾರತೀಯ ಕಂಪೆನಿಗೆ ಸೇರುತ್ತಾನೋ ಆಗ ಆತನ ಎಲ್ಲಾ ಭಾರತೀಯ ಅವಗುಣಗಳು ಜಾಗೃತವಾಗಿಬಿಡುತ್ತವೆ! ಈ ಔಟ್ ಸೋರ್ಸಿನಿಂದಾಗಿ ಸಾಕಷ್ಟು ಅವಗಡಗಳಾಗಿವೆ. ಕೇವಲ ಕಾಲ್ ಸೆಂಟರ್,  ಸಪೋರ್ಟ್ ಸೆಂಟರ್ ಅಂತ ಕೆಲಸಗಳನ್ನು ಮಾಡಲು ಮಾತ್ರ ಈ ಕಂಪೆನಿಗಳು ಸರಿಯೇ ಹೊರತು ತಂತಾಂಶ ಅಭಿವೃದ್ಧಿಗಲ್ಲ. ಹಾಗಾಗಿ ನಾನು ಆಫ್ ಶೋರಿಗಿಂತ ಆನ್ ಶೋರ್ ಪರ. ಮಾನವ ಸಂಪನ್ಮೂಲಗಳ ಕೊರತೆಯೇ, ಇನ್ನು ಹೆಚ್ಚಿನ ಹೆಚ್ಬೊನ್ನಿಗರನ್ನು ಕರೆತರೋಣವೇ ಹೊರತು ಔಟ್ ಸೋರ್ಸ್ ಬೇಡ ಎಂಬ ನಿಲುವು ತೋರಿದ್ದೇನೆ.  ಏಕೆಂದರೆ ಅಮೆರಿಕಾದ ಕೆಲಸವನ್ನು ಬೇರೆ ದೇಶದಲ್ಲಿ ಮಾಡಿ, ಆ ದೇಶಕ್ಕೆ ತೆರಿಗೆ ಕಟ್ಟಿ, ತಮ್ಮ ಸಂಬಳವನ್ನು ಆ ದೇಶದಲ್ಲಿ ವ್ಯಯಿಸಿ್ದಾಗ ಆ ದೇಶದ ಆರ್ಥಿಕಸ್ಥಿತಿ ಸುಧಾರಿಸುತ್ತದೆಯೇ ಹೊರತು ಅಮೆರಿಕಾದಲ್ಲ! ವಸ್ತು ಉತ್ಪಾದನೆ, ಗಾರ್ಮೆಂಟ್ಸ್, ಮುಂತಾದ ಔಟ್ ಸೋರ್ಸಿನಿಂದ ಅಮೆರಿಕಾಕ್ಕೆ ಒಳಿತಾಗಿದೆಯೇ ಹೊರತು ಈ ತಂತ್ರಾಂಶ ಅಭಿವೃದ್ಧಿಯ ಔಟ್ ಸೋರ್ಸ್ ನಿಂದಲ್ಲ.  ಏಕೆಂದು ಅರಿಯಲು ಈ ಕಂಪೆನಿಗಳ ಕಾರ್ಯವೈಖರಿ ಹೇಗಿರುತ್ತದೆ ಎಂದೊಮ್ಮೆ ಪರಿಚಯ ಮಾಡಿಕೊಳ್ಳೋಣ.

ಒಂದು ಪ್ರಾಜೆಕ್ಟಿಗೆ ಇಂತಿಷ್ಟು ಜನ ಎಂಬ ನಿಯಮ ಸಪೋರ್ಟ್ ಯಾ ಕಾಲ್ ಸೆಂಟರ್ ಕೆಲಸಗಳಿಗಿರುತ್ತದೆ. ಆದರೆ ಅದೇ ನಿಯಮವನ್ನು ಒಂದು ತಂತ್ರಾಂಶ ಅಭಿವೃದ್ಧಿಯ ಪ್ರಾಜೆಕ್ಟಿಗೆ ಕೂಡಾ ಗ್ರಾಹಕ ಕೇಳದಿದ್ದರೂ ಕುರುಡಾಗಿ ಪಾಲಿಸುತ್ತಿವೆ ಈ ಎಲ್ಲಾ ದೊಡ್ಡ ಕಂಪೆನಿಗಳು!  ತಂತ್ರಾಂಶ ಅಭಿವೃದ್ಧಿ ಒಂದು ಬೌದ್ಧಿಕ ಕಾರ್ಯ ಅದಕ್ಕೂ ಗಂಟೆಗೆ ಇಷ್ಟು ಕರೆಗಳನ್ನು ಸ್ವೀಕರಿಸಬೇಕೆಂಬ ಗುಮಾಸ್ತ ಕಾರ್ಯಕ್ಕೂ ವ್ಯತ್ಯಾಸವಿರುತ್ತದೆ. ಮೂಲಭೂತವಾಗಿ ಒಂದು ಉನ್ನತ ಬೌದ್ಧಿಕ ಕಾರ್ಯವನ್ನುಗುಮಾಸ್ತ ಕಾರ್ಯವಾಗಿ ಮಾಡುವುದಾದರೆ ಅದಕ್ಕೆ ಉನ್ನತ ಶಿಕ್ಷಣ ಮತ್ತು ಅನುಭವವಿರುವ ಹೆಚ್೧ಬಿ ತಂತ್ರಜ್ಞ ಏಕೆ ಬೇಕೆಂಬುದು ಬೇರೆ ಪ್ರಶ್ನೆ. ಒಟ್ಟಾರೆ ಬುದ್ಧಿಮತ್ತೆಯನ್ನು ಸರಕು ಸಾಮಗ್ರಿಯಾಗಿಸಿದ್ದಾವೆ ಈ ಕಂಪೆನಿಗಳು. ಕಾಲ್ ಸೆಂಟರನ್ನು ನಿಭಾಯಿಸುವ ತತ್ವಗಳನ್ನೇ ತಂತ್ರಾಂಶ ಅಭಿವೃದ್ಧಿಗೂ ಯಥಾವತ್ತಾಗಿ ಪಾಲಿಸುತ್ತವೆ. ಏಕೆಂದರೆ ತಂತ್ರಾಂಶ ಅಭಿವೃದ್ಧಿಯಲ್ಲಿ ಈ ಕಂಪೆನಿಗಳಿಗೆ ಇರುವ ಅನುಭವ ಕತ್ತೆ ಕೆಲಸದ ಅನುಭವವೆನ್ನಬಹುದು. ಇಲ್ಲದಿದ್ದರೆ ಈಗಾಗಲೇ ಯಾಹೂ, ಗೂಗಲ್, ಮೈಕ್ರೋಸಾಫ್ಟ್, ಮುಂತಾದ ಪ್ರಾಡಕ್ಟ್ ಕಂಪೆನಿಗಳು ಭಾರತದಾದ್ಯಂತ ಕಾಣಬೇಕಿತ್ತು. 

ಈ ರೀತಿಯ ಒಂದು ಕೂಲಿ ಕಾರ್ಮಿಕರನ್ನು ಕರೆತರುವ ಮೇಸ್ತ್ರಿ ಯಾ ಶೇರೆಗಾರರ ಮಾರ್ಕೆಟ್ ಟ್ರೆಂಡ್ ಅನ್ನು ಈ ಕಂಪೆನಿಗಳು ಪ್ರಮೋಟ್ ಮಾಡಿಟ್ಟಿವೆ.  ಹಾಗಾಗಿಯೇ ಒಬ್ಬ ದಕ್ಷ ಇಂಜಿನಿಯರ್ಗೆ ಗಂಟೆಗೆ $೧೫೦ ಇದ್ದ ರೇಟು ಈಗ $೪೦ಕ್ಕೆ ಬಂದಿದೆ. 

ಗಂಟೆಗೆ ನೂರಾಐವತ್ತು ಡಾಲರ್ ಛಾರ್ಜ್ ಮಾಡುವ ಒಬ್ಬ ದಕ್ಷ ಇಂಜಿನಿಯರ್ ಮಾಡಬಹುದಾದ ಕೆಲಸವನ್ನು ನಲವತ್ತು ಡಾಲರ್ರಿಗೆ ತಮ್ಮ ಭಾರತದ ಆಫೀಸಿನಿಂದ ಮತ್ತು ತಮ್ಮ ಕಂಪೆನಿಯ ಆನ್ ಶೋರ್ ಕೆಲಸಗಾರನಿಂದ ಜಾಯಿಂಟ್ ಆಗಿ ಮಾಡಿಸಿಕೊಡುವುದಾಗಿ ಒಪ್ಪಿಕೊಳ್ಳುತ್ತಾರೆ. ನಂತರ ಇದು ಒಬ್ಬ ಒಂದು ಗಂಟೆಯಲ್ಲಿ ಮಾಡಬಹುದಾದ ಕಾರ್ಯವಲ್ಲವೆಂದು ನೆಪಗಳ ಸರಮಾಲೆಗಳನ್ನೊಡ್ಡುತ್ತಾ, ಹತ್ತು ಜನರು ಬೇಕೆಂದು ಕಡೆಗೆ ಆರು ಜನರಿಗೆ ಒಪ್ಪಿಸುತ್ತಾರೆ. ಅಲ್ಲಿಗೆ $೧೫೦ ಕಕ್ಕಬೇಕಾದ್ದು ಈಗ $೨೪೦ ಆಯಿತು. 

ಗ್ರಾಹಕ ತಾನು ಈ ಕಂಪೆನಿಗೆ ಆಗಲೇ ಕೆಲಸ ವಹಿಸಿದ ತಪ್ಪಿಗೆ ಮತ್ತು ತನ್ನ ಆಡಳಿತ ಮಂಡಳಿ ತನ್ನನ್ನು ಎಲ್ಲಿ ಬಲಿಪಶು ಮಾಡಿಬಿಡುವುದೋ ಎಂಬ ಭಯದಲ್ಲಿ ಇವರ ತಾಳಕ್ಕೆ ಕುಣಿಯುತ್ತಾ ಸಾಗಬೇಕಾಗುತ್ತದೆ. ಕಡೆಗೆ ಮಿಕ ಬಿದ್ದ ಮೇಲೆ  ಎಲ್ಲಾ ಸಾಫ್ಟ್ವೇರ್ ಅಭಿವೃದ್ಧಿಯ ತತ್ವಸಿದ್ಧಾಂತಗಳನ್ನು ತಲೆಕೆಳಗು ಮಾಡುತ್ತಾ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಿ, ದೀಪಾವಳಿ, ಯುಗಾದಿ, ಹೋಳಿ, ಹುಣ್ಣಿಮೆ, ಅಮವಾಸ್ಯೆ, ರಾಮ, ಕೃಷ್ಣ, ಶಿವ, ಪಾರ್ವತಿಯರನ್ನೆಲ್ಲಾ ಪರಿಚಯಸುತ್ತಾ ಭಾರತೀಯ ಸಂಸ್ಕೃತಿ, ಬಾಲಿವುಡ್ ತಿರುಗಿಸಿ, ಒಬ್ಬ ರೈತ ತನ್ನ ಬೆಳೆಯನ್ನು ಮಾರುಕಟ್ಟೆಗೆ ಕೊಂಡುಹೋದಾಗ ದಲ್ಲಾಳಿಗಳು ಆರೈವಲ್ಸು, ಡಿಮ್ಯಾಂಡು, ಬಾಂಬೆ ರೇಟು, ದುಬೈ ಮಾರ್ಕೆಟ್, ಅದು ಇದು ಎಂದು ತಲೆ ಗಿರ್ರೆನಿಸುವಂತೆ ಅಷ್ಟೇ ಗೋಜಲು ಗೋಜಲಾದ ತಂತ್ರಾಂಶವನ್ನು ಮಾಡಿಕೊಡುತ್ತಾರೆ.

ಗ್ರಾಹಕನಿಗೇನಾದರೂ ಸಂಶಯ ಬಂದು ಇಷ್ಟೊಂದು ಜನರು ನಿಜಕ್ಕೂ ಬೇಕೇ ಎಂದರೆ, ಆತನಿಗೆ ಭಾರತದ ತಮ್ಮ ಕಛೇರಿಗೆ ಕರೆದೊಯ್ದು ಬಹುಮತ ಸಾಬೀತು ಪಡಿಸಲು ರಾಜ್ಯಪಾಲರ ಮುಂದೆ ಪರೇಡ್ ಮಾಡಿಸುವ ರಾಜಕಾರಣಿಯಂತೆ ಒಂದಷ್ಟು ಜನರನ್ನು ಇವರೆಲ್ಲಾ ನಿಮ್ಮ ಪ್ರಾಜೆಕ್ಟ್ಗೆ ಕೆಲಸ ಮಾಡುವವರೆಂದು ತೋರಿಸುತ್ತಾರೆ. ಹಾಗೆಯೇ ಸ್ಥಳೀಯ ಆಕರ್ಷಣೆಗಳನ್ನು ತೋರಿ ಸೈ ಎನ್ನಿಸಿಕೊಂಡು ಆ ಬಕರಾನನ್ನು ಹಲಾಲ್ ಮಾಡಿಬಿಡುತ್ತಾರೆ.

ಕಾಮೋಡ್ ಮಾಡಲು ಹೇಳಿದರೆ ಇತ್ತ ಇಂಡಿಯನ್ನೂ ಅಲ್ಲದ ಅತ್ತ ಪಾಶ್ಚಿಮಾತ್ಯವೂ ಅಲ್ಲದ "ಆಂಗ್ಲೋ-ಇಂಡಿಯನ್" ಎಂಬ ವಿಶೇಷ ಸಂಡಾಸವನ್ನು ಕಟ್ಟಿಕೊಟ್ಟುಬಿಡುತ್ತಾರೆ. ಕಟ್ಟಿಸಿಕೊಂಡ ತಪ್ಪಿಗೆ ಇದರ ಮೇಲೆ ಪೀಠಾರೋಹಿಯಾಗಿ ಬಡ ಅಮೆರಿಕನ್ನನು ತಿಣುಕುತ್ತಾನೆ. ಇದು ಆಂಗ್ಲೋ ಇಂಡಿಯನ್ ಸಂಡಾಸವಾದ್ದರಿಂದ ಕೆಟ್ಟರೆ ಇದನ್ನು ಕಟ್ಟಿದ ಪುಣ್ಯಾತ್ಮನೇ ರಿಪೇರಿ ಮಾಡಿಕೊಡಬೇಕಾಗುತ್ತದೆ. ಆ ಮಟ್ಟಿಗೆ ಗ್ರಾಹಕನ ಜುಟ್ಟು ಇವರ ಕೈಯಲ್ಲಿರುತ್ತದೆ!  ಹಾಗಾಗಿ ಇವರು ಅಭಿವೃದ್ಧಿಪಡಿಸಿದ ಗೋಜಲು ತಂತ್ರಾಂಶವನ್ನು ತಿಪ್ಪರಲಾಗ ಹಾಕಿದರೂ ಬೇರೆ ಯಾರೂ ಸಪೋರ್ಟ್ ಮಾಡದ ಕಾರಣ ಆ ಗ್ರಾಹಕನಲ್ಲಿ ಖಾಯಂ ಆಗಿ ಇವರು ಬೇರು ಬಿಡುತ್ತಾರೆ, ಬಿಟ್ಟಿದ್ದಾರೆ.

ಎಲ್ಲಾ ಭಾರತೀಯ ಬಹು ದೊಡ್ಡ ಕಂಪೆನಿಗಳ ಸೇವೆಯನ್ನು ಗ್ರಾಹಕನಾಗಿ ಬಳಸಿಕೊಂಡಿರುವ ನಾನು ಅಥವಾ ನನ್ನಂತಹ ಅನುಭವಸ್ಥರೆಲ್ಲರೂ ಈ ರೀತಿ ಖಚಿತವಾಗಿ ಹೇಳಬಲ್ಲರು. ನಾನು ಕಂಡಂತೆ ಈ ಕಂಪೆನಿಗಳು ಉತ್ತಮ ಕುದುರೆಗಳನ್ನು ಅಂದರೆ ಒಳ್ಳೊಳ್ಳೆ ಅಂಕಗಳನ್ನು ಪಡೆದ ಪ್ರತಿಷ್ಠಿತ ವಿದ್ಯಾಲಯಗಳಲ್ಲಿ ಓದಿರುವ ಪ್ರತಿಭಾವಂತರನ್ನು ಯಶಸ್ವಿಯಾಗಿ ಕತ್ತೆಗಳಾಗಿಸಿದ್ದಾವೆ ಎಂದು ಹೇಳಬಲ್ಲೆ. ಈ ಕಂಪೆನಿಗಳಲ್ಲಿ ಒಂದೆರಡು ವರ್ಷ ಕೆಲಸ ಮಾಡಿದ ನಂತರ ಆ ಪ್ರತಿಭಾನ್ವಿತ ಕತ್ತೆಯಾಗಿರುತ್ತಾನೆ.  ನಂತರ ಮದುವೆ, ಸಂಸಾರ, ಗೃಹಸಾಲ, ವಾಹನಸಾಲಗಳ ಸುಳಿಗೆ ಸಿಕ್ಕು, ಹೇಗೋ ಅದೇ ಕಂಪೆನಿಯಲ್ಲಿ ಕೆಲಸ ಉಳಿಸಿಕೊಳ್ಳಲು ಆ ಕಾರ್ಪೊರೇಟ್ ಮಾಫಿಯಾದ ಗಾರ್ಧಭ ಸದಸ್ಯನಾಗಿ ಜೀವನ ಕಂಡುಕೊಳ್ಳುತ್ತಾನೆ. ಹೇಳುತ್ತಾ ಸಾಗಿದರೆ ಒಂದು ಅದ್ಭುತ ಕಾದಂಬರಿಯೇ ಆಗುವಷ್ಟು ಈ ಕತೆ ಸಾಗುತ್ತದೆ. ಒಟ್ಟಾರೆ ಓರ್ವ ಸಾಮಾನ್ಯ ಇಂಜಿನಿಯರನಿಗೆ ಇರಬೇಕಾದ ಒಂದು ವಿಶ್ಲೇಷಣಾ ಚಾತುರ್ಯವನ್ನು ಬಹುಪಾಲು ಈ "ಮಾನವ ಸಂಪನ್ಮೂಲ"ಗಳು ಹೊಂದೇ ಇಲ್ಲವೆಂದು ಖಚಿತವಾಗಿ ಹೇಳಬಲ್ಲೆ.  

ಇರಲಿ, ಈಗ ಹೇಳಿ ಇವರ ಕಾರ್ಯವೈಖರಿಗೂ ನಿಮ್ಮಲ್ಲೇ ಸಾಕಷ್ಟು ಕಾಣಸಿಗುವ ಅಡ್ಡಕಸುಬಿಗಳಿಗೂ ವ್ಯತ್ಯಾಸವಿದೆಯೇ!?! ನಿಮ್ಮ ಮಕ್ಕಳನ್ನು ಈ "ಪ್ರತಿಷ್ಠಿತ"ಕಂಪೆನಿಗಳಿಗೆ ಕಳಿಸಿ ಕತ್ತೆಯಾಗಿಸುವಿರಾ?

ಹೈಡ್ರಾಕ್ಸಿಕ್ಲೋರಿನ್ - ಯಾರದು ಹುಚ್ಚು, ಯಾರದು ಕೆಚ್ಚು?

ಕಳೆದೆರಡು ವಾರಗಳ ಹಿಂದೆ ತಣ್ಣಗಾಗಿದ್ದ ಕೋರೋನಾ ಗುಣಪಡಿಸಲು ಸಹಕಾರಿಯಾಗಬಹುದೆಂಬ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್ ಈಗ ಮತ್ತೆ ಸೆಟೆದೆದ್ದು ನಿಂತಿದೆ ಯಾ ನಿಲ್ಲಿಸಲ್ಪಟ್ಟಿದೆ.

ಈ ಔಷಧಿ ಕೊರೊನಾಕ್ಕೆ ಔಷಧಿಯೆಂದು ಯಾವುದೇ ಪ್ರಯೋಗಗಳು ಸಾಬೀತು ಮಾಡಿಲ್ಲದಿದ್ದರೂ ಕೆಲವು ವೈದ್ಯರು ಇದು ಕೆಲವೊಬ್ಬ ರೋಗಿಗಳಿಗೆ ಕೇಸ್ ಬೈ ಕೇಸ್ ಕೆಲಸ ಮಾಡಬಹುದೆಂದಿದ್ದಾರೆ. ಆದರೆ ಇದು ಪ್ರತಿಯೊಬ್ಬ ಕೊರೋನಾ ಸೋಂಕಿತರನ್ನು ಗುಣಪಡಿಸುತ್ತದೆಂದು ಎಲ್ಲಿಯೂ ಹೇಳಿಲ್ಲ. ಕೆಲವು ಕೊರೋನಾ ಸೋಂಕಿತರಿಗೆ ಇರಬಹುದಾದ ಇತರೆ ಸಮಸ್ಯೆಗಳನ್ನು ಇದು ತಗ್ಗಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದೇ ಹೊರತು ಕೊರೋನವನ್ನು ಗುಣಪಡಿಸುತ್ತದೆಂದು ಯಾವುದೇ ತಜ್ಞರು ಹೇಳಿಲ್ಲ.

ಆಫ್ರಿಕಾದ ರಾಷ್ಟ್ರವೊಂದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್
ಕೊಟ್ಟ ಕೊರೋನಾ ಸೋಂಕಿತರು ಸತ್ತಿದ್ದಾರೆ. ಹಾಗಾಗಿ ಇದು ಇನ್ನೂ ಪ್ರಯೋಗ ಶಿಶುವೇ ಹೊರತು ಸಿದ್ದೌಷಧಿಯಲ್ಲ.

ಹೀಗಿರುವಾಗ ಈಗ ಮತ್ತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸುದ್ದಿ ಮಾಡುತ್ತಿದೆ.

ಪ್ರಧಾನಿ ಮೋದಿಯವರು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತನ್ನು ತಡೆಹಿಡಿದು ಕೆಚ್ಚು ಪ್ರದರ್ಶಿಸಿದ್ದು, ಟ್ರಂಪ್ ಅದನ್ನು ತಡೆ ಹಿಡಿದರೆ ಅದಕ್ಕೆ ಪ್ರತಿಯಾಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹುಚ್ಚಾದದ್ದು ಎಂದು ಎಲ್ಲಾ ಮಾಧ್ಯಮಗಳು ಬಿಂಬಿಸುತ್ತಿವೆ. ಈ ಎಲ್ಲ ಹುಚ್ಚು ಕೆಚ್ಚುಗಳ ನಡುವೆ ಬಿಚ್ಚು ಸತ್ಯವೇನಿದೆ?

ಭಾರತಕ್ಕೆ ಐಟಿ ಹೊರಗುತ್ತಿಗೆ ಕಾಲಿಡುವ ಸಾಕಷ್ಟು ದಶಕಗಳ ಮುನ್ನ ಔಷಧಿ ಉತ್ಪಾದನೆಯ ಹೊರಗುತ್ತಿಗೆ ಸಬ್ಸಿಡಿಯರಿ ಕಂಪೆನಿಗಳ ಮೂಲಕ, ನಂತರ ನೇರವಾಗಿ ಮೂರನೇ ಕಂಪೆನಿಗಳಿಗೆ ಹೊರಗುತ್ತಿಗೆ ಕೊಡುವ ಮೂಲಕ ಜಾರಿಯಲ್ಲಿತ್ತು. ಈಗ ಇನ್ನೂ ವ್ಯಾಪಕವಾಗಿದೆ. ಅಮೆರಿಕಾ ತನ್ನ ವಸ್ತುಗಳ ಉತ್ಪಾದನೆಯನ್ನು ಚೈನಾಕ್ಕೆ ಹೊರಗುತ್ತಿಗೆ ನೀಡಿದ್ದರೆ, ಔಷಧಿಗಳ ಉತ್ಪಾದನೆಗೆ ಭಾರತದ ಕಂಪೆನಿಗಳನ್ನು ನೆಚ್ಚಿಕೊಂಡು ಆ ಕಂಪೆನಿಗಳಲ್ಲಿ ಬಂಡವಾಳವನ್ನು ತೊಡಗಿಸಿ ತನ್ನ ಒಡೆತನದ ಸಹಭಾಗಿತ್ವದಲ್ಲಿರಿಸಿಕೊಂಡಿದೆ. ಇದು Eli Lilly, Bayer,  Pfizer, Johnson & Johnson ಎಂಬ ದೈತ್ಯ ಕಂಪೆನಿಗಳಷ್ಟೇ ಅಲ್ಲದೆ ಹೈದರಾಬಾದ್, ಅಹಮದಾಬಾದ್, ಗ್ವಾಲಿಯರ್, ಮತ್ತು ಬೆಂಗಳೂರಿನ ಅನೇಕ ಚಿಕ್ಕ ಪುಟ್ಟ ಫಾರ್ಮ ಕಂಪೆನಿಗಳೂ(100% EOU) ಇವೆ.  ಇವುಗಳಲ್ಲಿ ಸಾಕಷ್ಟು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಉತ್ಪಾದಿಸುತ್ತವೆ. ಕೇವಲ ಅಮೆರಿಕಾ subsidiary ಅಲ್ಲದೆ ಜಪಾನ್, ಇಸ್ರೇಲ್, ಜರ್ಮನಿ ಮತ್ತು ಯುರೋಪಿನ ಹಲವು ಕಂಪೆನಿಗಳ subsidiaryಗಳು,100% EOU (Export Oriented Unit) ಭಾರತದಲ್ಲಿವೆ. ಇದರಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಹೆಚ್ಚಾಗಿ ಉತ್ಪಾದಿಸುವ Actavis ಇಸ್ರೇಲಿನ Teva ಕಂಪೆನಿಯ subsidiary. ಹಾಗೆಯೇ Novartis ಸ್ವಿಟ್ಜರ್ಲೆಂಡ್ ಕಂಪೆನಿ, Bayer ಜರ್ಮನ್ ಕಂಪೆನಿ, Mylan ಯುಕೆ ಕಂಪೆನಿ! ಅಂದ ಹಾಗೆ ಬಾಬಾ ರಾಮದೇವರು ಏನಾದರೂ ಔಷಧಿ ಕಂಡುಹಿಡಿದಿದ್ದರೂ ಅದರ ರಫ್ತನ್ನು ಅಮೆರಿಕಾಕ್ಕೆ ನಿಲ್ಲಿಸಲಾಗುತ್ತಿರಲಿಲ್ಲ. ಏಕೆಂದರೆ ಅವರ ಔಷಧಿಗಳಿಗೆ ಬೇರುನಾರಿನ ಗಿಡಮೂಲಿಕೆಗಳ ಸರಬರಾಜು ಮೂಲ ಕೂಡ ಅಮೆರಿಕ ಮತ್ತು ಕೆನಡಾ! ಅಮೆರಿಕಾದಿಂದ ಸಾಕಷ್ಟು ಗಿಡಮೂಲಿಕೆಗಳು ಬಾಬಾ ರಾಮದೇವ್ ಅವರ ಕಾರ್ಖಾನೆಗಳಿಗೆ ರಫ್ತಾಗುತ್ತಿವೆ. ಔಷಧಿ ಸ್ವದೇಶಿಯಾಗಿದ್ದರೂ, ಕಚ್ಚಾವಸ್ತುಗಳು ಪ್ರಪಂಚದ ಎಲ್ಲಾ ವಿದೇಶಿ ಮೂಲೆಗಳಿಂದ ಬಾಬಾ ರಾಮದೇವರ ಕಾರ್ಖಾನೆಗಳಿಗೆ ಹರಿದು ಬರುತ್ತಿವೆ.

ಇನ್ನು ಅಮೆರಿಕಾ ದಿಢೀರನೆ ಕೊರೋನಾ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಖರೀದಿಯ ಹೊಸ ಆರ್ಡರ್ ಅನ್ನು ಭಾರತದ ಕಂಪೆನಿಗಳಿಗೆ ಕೊಟ್ಟಿಲ್ಲ. ಇದರ ಪೂರೈಕೆ ಕೊರೋನಾ ಪೂರ್ವದಿಂದಲೂ ಅಭಾದಿತವಾಗಿ ಸಾಗಿ ಬರುತ್ತಿದೆ.  ಹಾಗಾಗಿ ಈ ಎಲ್ಲಾ ಮಾಹಿತಿಯನ್ನು ಸಮೀಕರಿಸಿಕೊಳ್ಳದೆ ಪ್ರಧಾನಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ದಿಢೀರನೆ ನಿಲ್ಲಿಸಲು ಆಜ್ಞೆ ಹೊರಡಿಸಿದ್ದು ಕೆಚ್ಚೆಂದು ಕರೆಯಲಾಗದು. ಹಾಗೆಯೇ ಟ್ರಂಪ್ ತನ್ನ ಮಾಲನ್ನು ತಡೆಹಿಡಿದಿದ್ದಕ್ಕೆ ಕ್ರಮ ಜರುಗಿಸುತ್ತೇವೆ ಎಂದದ್ದನ್ನು ಹುಚ್ಚೆನ್ನಲಾಗದು.

ಆದರೆ ಇಂತಹ ವ್ಯವಹಾರ ಸೂಕ್ಷ್ಮವನ್ನರಿಯದೆ ಮಾಧ್ಯಮಗಳು, ಜನರು, ಚಿಂತಕರು, ಸುಧಾರಕರು ಈ ಕುರಿತು ಹುಚ್ಚು ಹೊಳೆ ಹರಿಸಿದ್ದು ಮಾತ್ರ ನನ್ನ ಟ್ಯಾಗ್ಲೈನನ್ನು ಧೃಢೀಕರಿಸಿದಂತಾಯಿತು. ಕೊರೋನಾ ಎಂಬುದನ್ನು ಮಾರಮ್ಮನ ಜಾತ್ರೆ ಎಂಬಂತೆ ಸಂಭ್ರಮಿಸಿ, ಜಾತ್ರೆಯ ಜಂಗೀಕುಸ್ತಿಯಲ್ಲಿ ಮೋದಿ-ಟ್ರಂಪ್ ಪರಸ್ಪರ ಪಟ್ಟು ಹಾಕಿದಂತೆ, ಮೊದಲಿಗೆ ಮೋದಿ ಬೆಂಬಲಿಗರಿಗೆ ಖುಷಿಯಾಗುವಂತೆ ನಂತರ ಮೋದಿ ವಿರೋಧಿಗಳಿಗೆ ಭೂರಿ ಭೋಜನ ಒದಗಿಸಿದಂತೆ ರೋಚಕತೆಯನ್ನು ಒಗ್ಗಟ್ಟಾಗಿ ಮೆರೆದರು.

ಆದರೆ ಭಾರತದಲ್ಲಿನ ಔಷಧಿ ಕಂಪೆನಿಗಳ ಮೂಲ, ಬಂಡವಾಳ, ಹೊರಗುತ್ತಿಗೆ ಕಂಟ್ರಾಕ್ಟ್ಗಳು, ಪೇಟೆಂಟುಗಳ ಬಂಧ ಇತ್ಯಾದಿ ಒಳಸುಳಿಗಳ ಆಳ ರಫ್ತನ್ನು ನಿರಾಕರಿಸುವಷ್ಟು ಸುಲಭವಲ್ಲ. ಹಾಗಾಗಿಯೇ ಮೋದಿಯವರು ಈ ವ್ಯವಹಾರ ಸೂಕ್ಷ್ಮವನ್ನರಿತ ಕೂಡಲೇ ಅಮೆರಿಕಾಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್
ರಫ್ತನ್ನು ತಕ್ಷಣ ಮುಕ್ತಗೊಳಿಸಿದ್ದಾರೆ. ಇಲ್ಲಿಗೆ ಹುಚ್ಚು ಯಾರದ್ದು ಮತ್ತು ಕೆಚ್ಚು ಯಾರದ್ದು ಎಂದು ತಣ್ಣನೆಯ ಬುದ್ಧಿಯಿಂದ ರೊಚ್ಚಿಗೇಳದೇ ಯೋಚಿಸಿ. ನನ್ನ ವಾಸ ನಿಮ್ಮ ದಿಕ್ಕೆಡಿಸದೇ ವಿಶ್ವಮಾನವರಾಗಿ ಸತ್ಯವನ್ನು ಮಾತ್ರ ಪರಿಗಣಿಸಿ.

ಕೊರೋನಾ ಸೃಷ್ಟಿಸಿರುವ ಅಂಧಕಾರದಲ್ಲಿ ನಾಯಕತ್ವ ತಪ್ಪು ಹೆಜ್ಜೆಯಿಡುವುದು, ಎಡವುವುದು, ಮತ್ತದನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಸಹಜ. ತಾಳ್ಮೆ ಮುಖ್ಯ, ಏಕೆಂದರೆ ತಾಳಿದವನು ಬಾಳಿಯಾನು.

#ಬಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ತಬ್ಲೀಜ್ ಇಜತೆಮಾ ಜಮಾತೆ ಮರ್ಕೇಜ್

ಒಂದು ಅಂತರರಾಷ್ಟ್ರೀಯ ಕಂಪೆನಿ ತನ್ನ ವಾರ್ಷಿಕ ಅಧಿವೇಶನವನ್ನು ದಿಲ್ಲಿಯಲ್ಲಿ ಒಂದು ವಾರದ ಕಾಲ ಏರ್ಪಡಿಸಿತ್ತು. ಆ ಅಧಿವೇಶನಕ್ಕೆ ಪ್ರಪಂಚದ ಎಲ್ಲಾ ಮೂಲೆಯಿಂದ ಕಂಪೆನಿ ಸದಸ್ಯರು ಬಂದಿದ್ದರು. ಕೆಲವರು ಅದಕ್ಕೆ ಬಿಜಿನೆಸ್ ವೀಸಾ ಪಡೆದಿದ್ದರೆ ಕೆಲವರು ಟೂರಿಸ್ಟ್ ವೀಸಾ ಪಡೆದಿದ್ದರು. ಅಮೇರಿಕೆಯ H1B ವೀಸಾ ಸಿಗದಿದ್ದರೆ B1 ಯಾ L1 ವೀಸಾ ಪಡೆದು ಭಾರತದ ಪ್ರತಿಷ್ಠಿತ ಕಂಪೆನಿಗಳ ನೌಕರರು ಅಮೆರಿಕೆಗೆ ಬರುವಂತೆಯೇ ಈ ಅಧಿವೇಶನಕ್ಕೆ ವಿದೇಶಿಯರು ಸಿಕ್ಕ ಭಾರತೀಯ ವೀಸಾಗಳನ್ನು ಪಡೆದು ಬಂದಿದ್ದರು. ಯಾವುದೇ ಕೊರೋನಾ ಯಾ ಇನ್ನಿತರೆ ಮಹಾಮಾರಿಯ ಕುರಿತಾಗಿ ಯಾವುದೇ ದೇಶದ ಪ್ರವಾಸಿಗರಿಗೆ ಭಾರತ ಕೂಡ ಯಾವುದೇ ನಿರ್ಬಂಧಗಳನ್ನು ಹೇರಿರಲಿಲ್ಲ.  ಮೇಲಾಗಿ ಭಾರತದಲ್ಲಿ ಕೊರೊನವನ್ನು ಪರೀಕ್ಷಿಸುವ ಯಾವುದೇ ಸಾಧನ ಕೂಡ ಇರಲಿಲ್ಲ. ಹಾಗಾಗಿ ಎಲ್ಲಾ ವಿದೇಶಿ ಪ್ರವಾಸಿಗರ ಟೆಂಪರೇಚರ್ ನೋಡಿಯೇ ಸ್ವಾಗತಿಸುತ್ತಿದ್ದರು. ಇದು ಕೇವಲ ಭಾರತದ ಸಂಗತಿಯಷ್ಟೇ ಅಲ್ಲದೆ ಜಗತ್ತಿಗೆ ದೊಡ್ಡಣ್ಣನೆನಿಸಿದ ಅಮೇರಿಕ ಕೂಡ ಯಾವುದೇ ಕೊರೋನಾ ಪರೀಕ್ಷೆಯಿಲ್ಲದೆ ವಿದೇಶಿಯರನ್ನು ಒಳಗೊಳ್ಳುತ್ತಿತ್ತು. ನಾನು ಮಾರ್ಚ್ 3ರಂದು ಭಾರತದಿಂದ ಕತಾರ್ ಮೂಲಕ ಅಮೆರಿಕಕ್ಕೆ ಬಂದಾಗ ಯಾವ ಕೊರೋನಾ ಪರೀಕ್ಷೆಗಳಿರಲಿಲ್ಲ. ಇದು ಯಾವುದೇ ಸರ್ಕಾರಿ ವೈಫಲ್ಯವಲ್ಲ. ಏಕೆಂದರೆ ಕೊರೋನಾ ಪರೀಕ್ಷಾ ಸಾಧನಗಳು ಜಗತ್ತಿನಲ್ಲಿ ಅಷ್ಟಾಗಿ ಈಗಲೂ ಇಲ್ಲ.

ಹಾಗಾಗಿ ಎಲ್ಲಾ ವಿದೇಶೀ ಆಹ್ವಾನಿತ ಸದಸ್ಯರು ಯಾವುದೇ ತೊಂದರೆಯಿಲ್ಲದೆ ಅಧಿವೇಶನದಲ್ಲಿ ಭಾಗವಹಿಸಿದರು. ಕಂಪೆನಿ ಕೂಡ ತನ್ನ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಊಟ, ವಸತಿಯ ಏರ್ಪಾಡನ್ನು ಸದಸ್ಯರಿಗೆ ಮಾಡಿದ್ದಿತು.  ಅಧಿವೇಶನ ನಡೆದ ವಾರ ಕೂಡ ಕೊರೋನಾ ಕುರಿತು ಭಾರತ ಸರ್ಕಾರ ಯಾವುದೇ ನಿಬಂಧನೆ ಯಾ ನಿರ್ಬಂಧ ಹೇರಿರಲಿಲ್ಲ.

ಈ ಮಧ್ಯೆ ಭಾರತ ತನಗೊದಗಿದ ಸಾಂಕ್ರಾಮಿಕ ಮಹಾಮಾರಿಯ ಕೆಟ್ಟ ಪರಿಣಾಮವನ್ನು ಗ್ರಹಿಸಿ ಲಾಕ್ ಡೌನ್ ಘೋಷಿಸಿತು. ಆಗ ಈ ಕಂಪೆನಿಯ ಅಧಿವೇಶನಕ್ಕೆ ಬಂದಿದ್ದ ಸ್ಥಳೀಯ ಭಾರತೀಯರಲ್ಲಿ ಹಲವರು ಲಭ್ಯ ವ್ಯವಸ್ಥೆಗಳನ್ನು ಬಳಸಿಕೊಂಡು ತಮ್ಮ ತಮ್ಮ ಗೂಡನ್ನು ಸೇರಿಕೊಂಡರೆ, ಗೂಡನ್ನು ಸೇರಿಕೊಳ್ಳಲಾಗದ ಅನ್ಯರಾಜ್ಯ ಮತ್ತು ವಿದೇಶಿ ಸದಸ್ಯರು ತಮ್ಮ ಗೂಡಿಗೆ ಹೋಗಲಾಗದೆ ಕಂಪೆನಿ ಒದಗಿಸಿದ ವಸತಿಯಲ್ಲೇ ಉಳಿದುಕೊಂಡು ಆತಂಕದಿಂದ ಮುಂದೇನಾಗುವುದೋ ಎಂದು ಕಾಯುತ್ತಿದ್ದರು. ಈ ಲಾಕ್ ಡೌನ್ ಘೋಷಿಸಿದಾಗ ಈ ಸ್ಥಳೀಯ ಸದಸ್ಯರಂತೆಯೇ ಭಾರತದ ವಿವಿಧ ಮಹಾನಗರಗಳಲ್ಲಿದ್ದ ಕಾರ್ಮಿಕರು ನಗರಗಳನ್ನು ತೊರೆದು ತಮ್ಮ ತಮ್ಮ ಗೂಡನ್ನು ಸೇರಿಕೊಂಡರು.

ಆಗ ದಿಲ್ಲಿ ಸರ್ಕಾರ ಈ ಕಂಪೆನಿ ವಸತಿಯಲ್ಲಿದ್ದವರ ಸಂಖ್ಯೆಯನ್ನು ಪ್ರಶ್ನಿಸಿ ಸೆಕ್ಷನ್ 144 ಉಲ್ಲಂಘನೆಗಾಗಿ ದೂರು ದಾಖಲಿಸಿಕೊಂಡು ಕಾನೂನು ಚಲಾಯಿಸಲಾರಂಭಿಸಿದರು. ಈ ಮಧ್ಯೆ ಅಲ್ಲಿನ ಅತಿಥಿ ಸದಸ್ಯರಲ್ಲಿ ಹಲವಾರು ಮಂದಿ ಮಹಾಮಾರಿಗೆ ತುತ್ತಾದರು. ಇದನ್ನು ಅನುಕೂಲಸಿಂಧುವಾಗಿ ಮಹಾಮಾರಿಯಿದ್ದ ದೇಶದಿಂದ ಬಂದ ಸದಸ್ಯರ ಮೇಲೆ ದೂರು ಹೇರಿ ಸೋಂಕನ್ನು ಪ್ರಸರಿಸಿದರೆಂದು ದೂಷಿಸಲಾಯಿತು. ಬಿಜಿನೆಸ್ (ಮಿಷನರಿ) ವೀಸಾದಲ್ಲಿ ಬರದೆ ಪ್ರವಾಸಿ ವೀಸಾದಲ್ಲಿ ಬಂದು ತಮ್ಮ ಉದ್ದೇಶವನ್ನು ಉಲ್ಲಂಘಿಸಿದ್ದಾರೆ ಎನ್ನಲಾಯಿತು. ಭಾರತದ ಅನೇಕಾನೇಕ ಕಂಪೆನಿಗಳು ಅಮೆರಿಕಾದ H1B ವೀಸಾ ಸಿಗದೆ ಉದ್ದೇಶಪೂರ್ವಕವಾಗಿ L ಯಾ B ವೀಸಾ ಬಳಸಿದಂತೆ ಈ ಸದಸ್ಯರುಗಳು ಉದ್ದೇಶಪೂರ್ವಕವಾಗಿಯೋ ಯಾ ಅರಿಯದೆಯೋ ವೀಸಾ ತಪ್ಪನ್ನು ಎಸಗಿದ್ದುದು ಸತ್ಯ. ಆದರೆ ಅದು ಗುರುತರವಾದ ಅಪರಾಧವಲ್ಲ. ಅದಕ್ಕೆ ದಂಡ ವಿಧಿಸಬೇಕಾಗುತ್ತದೆ ಯಾ ಗಡೀಪಾರು ಮಾಡಬೇಕಾಗುತ್ತದೆ.

ಇಲ್ಲಿಯವರೆಗೆ ಆದುದೆಲ್ಲದೂ ಒಂದು ಸಾಂದರ್ಭಿಕ ಶಿಶು ಸಂಗತಿ! ಇಂತಹ ಒಂದು ದುರಿತ ಪಲ್ಲಟ ಕಾಲದಲ್ಲಿ ಧರ್ಮ, ಜನಾಂಗ, ಯಾ ಲಿಂಗ ಭೇಧವಿಲ್ಲದೆ ನೋಡಿದಾಗ ಹೀಗೆಯೇ ಆಗಬೇಕಿದ್ದುದು ಸಾಂದರ್ಭಿಕವಾಗಿದೆ.

 ಇಲ್ಲಿಂದ ಈಗ ಈ ಕಂಪೆನಿಯನ್ನು ತಬ್ಲೀಜಿ ಇಜ್ತೇಮ ಜಮಾತೆ ಮರ್ಕೇಜ್ ಎಂದುಕೊಳ್ಳಿ. ಏಕೆಂದರೆ ದಿಲ್ಲಿ ಜಮಾತೆ ಮರ್ಕೇಜ್ ನ ದುರಂತವು ಧರ್ಮಾತೀತವಾಗಿ ಒಂದು ವಾಣಿಜ್ಯ, ಕಲೆ, ರಾಜಕೀಯ ಯಾ ಯಾವುದೇ ರೀತಿಯ ಒಂದು ಅಧಿವೇಶನವಾಗಿದ್ದರೆ ಕೂಡ ಇಂದಿನ ದುರಂತದಂತೆಯೇ ಆಗುತ್ತಿತ್ತು. ಹಾಗಾಗಿ ಇದನ್ನೊಂದು ಧಾರ್ಮಿಕ ಘಟನೆಯಾಗಿ ನೋಡದೆ ಮೇಲಿನ ರೀತಿಯಾಗಿಯೇ ನೋಡೋಣ.

ಪ್ರಸ್ತುತ ಮಹಾಮಾರಿಯೆರಗಿದ ಇಂತಹ ಸಂದರ್ಭದಲ್ಲಿ ಜಮಾತೆ ಮರ್ಕೇಜ್ ಘಟನೆಯನ್ನು ಯಾವುದೇ ಧಾರ್ಮಿಕ ತಾರತಮ್ಯದ ಪೂರ್ವಾಗ್ರಹ ದೃಷ್ಟಿಯಿಂದ ನೋಡದೆ ಸಾಂದರ್ಭಿಕವಾಗಿ ಮಾತ್ರವೇ ನೋಡಬೇಕಾಗುತ್ತದೆ. ಅದನ್ನು ಧರ್ಮಕ್ಕೆ ತಳುಕು ಹಾಕಿ ನೋಡುವುದು ತಪ್ಪು. ಅದೇ ರೀತಿ ಆ ತಪ್ಪನ್ನು ಖಂಡಿಸುವ ಭರದಲ್ಲಿ ತಿರುಪತಿ, ಶಿರಡಿ ದೇವಸ್ಥಾನಗಳಲ್ಲಿ ಇಂತಹ ಘಟನೆ ಆಗಿದ್ದರೆ ಎಂದು ಇನ್ನೊಂದು ಗುಂಪನ್ನು ಉದ್ರೇಕಿಸುವುದು ಮಹಾ ತಪ್ಪು.

ಆದರೆ ಇಲ್ಲಿ ತದನಂತರ ಆಗುತ್ತಿರುವ ಅನುಮಾನಾಸ್ಪದ, ವಿವೇಚನಾರಹಿತ, ಮತ್ತು ದ್ವೇಷಕಾರಕ ಸಂಗತಿಯೆಂದರೆ ಭಾಗವಹಿಸಿದ ಸದಸ್ಯರು ಸಹಾಯ ಮಾಡಲು ಹೋದ ಸಿಬ್ಬಂದಿಯ ಮೇಲೆ ಉಗಿದಿರುವುದು. ಸಾಂಪ್ರದಾಯಿಕ ಯುದ್ದಗಳಲ್ಲಿ ಬಾಂಬ್ ಎಸೆದಂತೆಯೇ ಜೈವಿಕ ಯುದ್ಧಗಳಲ್ಲಿ ರೋಗಾಣು ಹರಡಲೆಂದು ಉಗಿಯುವುದು, ಕೆಮ್ಮುವುದು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇದು ಅಕ್ಷಮ್ಯ ಅಪರಾಧ! ಉಗಿಯುವುದು ಜೈವಿಕ ಆಕ್ರಮಣವೇ ಸರಿ.  ಅಮೆರಿಕಾದ ಪೆನಿಸಿಲ್ವೇನಿಯಾದ ದಿನಸಿ ಸ್ಟೋರಿನಲ್ಲಿ ಓರ್ವ ಮಹಿಳೆ ಕಳೆದೆರಡು ವಾರಗಳ ಹಿಂದೆ ದುರುದ್ದೇಶದಿಂದ ಕೆಮ್ಮಿ ಬಂಧನಕ್ಕೊಳಗಾಗಿ ಭಯೋತ್ಪಾದನೆಯಡಿ ಕೇಸು ಜಡಿಸಿಕೊಂಡಿದ್ದಾಳೆ. 

ಹಾಗಾಗಿ ಯಾವ ಕಾರಣಕ್ಕೆ ಅಲ್ಲಿದ್ದವರು ಉಗಿದು ಆಕ್ರಮಣಗೈದರೋ ಅದು ಅವರ ಮೇಲಿನ ಎಲ್ಲಾ ಅನುಮಾನಗಳನ್ನು ತೀವ್ರಗೊಳಿಸುತ್ತದೆ ಮಾತ್ರವಲ್ಲ ಅದು ಭಯೋತ್ಪಾದನೆಗೆ ಸಮವೆನ್ನಿಸುತ್ತದೆ.

ಇದು ಖಂಡಿತವಾಗಿ ಧರ್ಮ, ಜನಾಂಗ, ಲಿಂಗಾತೀತವಾಗಿ ಭಯೋತ್ಪಾದನೆ ಎನ್ನಿಸುವುದು. ತದನಂತರದ ಘಟನೆಯನ್ನು ಖಂಡಿತವಾಗಿ ಪ್ರತ್ಯೇಕವಾಗಿ ವಿಭಜಿಸಿ ನೋಡಬೇಕಾಗಿದ್ದರೂ ಈ ಉಗಿಯುವಿಕೆಯೇ ಪ್ರಮುಖವಾಗಿ ಸಮಗ್ರ ಜಮಾತೆ ಮರ್ಕೇಜ್ ಅಧಿವೇಶನವನ್ನು ಒಂದು ಪಿತೂರಿಯೇನೊ ಎನಿಸಿ ಶ್ರೀಸಾಮಾನ್ಯನಲ್ಲಿ ಅನುಮಾನದ ಹುತ್ತಗಳನ್ನೇರಿಸಿಬಿಟ್ಟಿದೆ. ಇಂತಹ ದುರಿತ ಕಾಲದಲ್ಲಿ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ವಿಶ್ಲೇಷಿಸುವ ತಾಳ್ಮೆ ಪ್ರಭುತ್ವ, ಆಡಳಿತ, ಮಾಧ್ಯಮ, ಮತ್ತು ಪ್ರಜೆಗಳಲ್ಲಿ ಖಂಡಿತ ಕಾಣುತ್ತಿಲ್ಲ. ಅದರಲ್ಲೂ ನಿರಾಶಾದಾಯಕ ಸಂಗತಿಯೆಂದರೆ ಪ್ರಜ್ಞಾವಂತರು ಕೂಡ ವಿವೇಚನೆಯನ್ನು ಮರೆತು ತಾವು ನಂಬಿದ ತತ್ವಗಳನ್ನೇ ಮೆರೆಸುತ್ತಿರುವುದು. ಇದು ಅವರೇ ಹೇಳುವಂತಹ ನಿಜದ ದುರಿತ ಕಾಲ, ಆದರೆ ಇದರ ಸೃಷ್ಟಿಗೆ ಇವರ ಕೊಡುಗೆ ಸಾಕಷ್ಟಿದೆ ಎಂಬುದನ್ನು ಅವರು ಇನ್ನೂ ಅರಿತಿಲ್ಲ. ಇದುವರೆಗೆ ತೋಳ ಬಂತು ತೋಳ ಎನ್ನುತ್ತಿದ್ದ ಪ್ರಜ್ಞಾವಂತರು ನಿಜದಿ ತೋಳ ಬಂದಾಗ ಕೂಡ ಅರಿಯದೇ ಮತ್ತದೇ ಟ್ರೋಲಿನಲ್ಲಿ ತೊಡಗಿರುವುದು ಅತ್ಯಂತ ವಿಷಾದಕರ.

ಜೈವಿಕ ಯುದ್ಧಗಳ ಗುರಿ ಕೇವಲ ಸಾಮೂಹಿಕ ಆರೋಗ್ಯದ ಮೇಲಿನ ಆಕ್ರಮಣವಲ್ಲ, ಪರಸ್ಪರರಲ್ಲಿ ಅನುಮಾನ, ದ್ವೇಷ, ಈರ್ಷ್ಯೆಗಳ ಕ್ರಿಮಿಗಳನ್ನು ಬಿತ್ತುವುದು ಕೂಡ.  ಕೊರೋನಾ ಜೈವಿಕ ಯುದ್ಧವಲ್ಲದಿದ್ದರೂ ಖಂಡಿತವಾಗಿ ಒಂದು ಜೈವಿಕ ಯುದ್ಧದ ಅಣಕು ಪ್ರಯೋಗ!

ಈ ಅಣಕು ಯುದ್ಧದಲ್ಲಿ ಭಾಗವಹಿಸಿರುವ ರಾಷ್ಟ್ರಗಳು ತಮ್ಮನ್ನು ತಾವೇ ಕನ್ನಡಿಯ ಮಾನದಂಡದಲ್ಲಿ ನೋಡಿಕೊಂಡು ಬೆನ್ನನ್ನೋ ಅಂಡನ್ನೋ ಅಥವಾ ಮತ್ತಿನ್ನೇನನ್ನೋ ತಟ್ಟಿಕೊಳ್ಳಬೇಕು.

ಸಂದರ್ಭಕ್ಕನುಗುಣವಾಗಿ ಅಣ್ಣನ ವಚನ ನೆನಪಾಗುತ್ತಿದೆ.

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು. ಏರಿ ನೀರುಂಬಡೆ
ಬೇಲಿ ಕೆಯ್ಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವ!

ಕೊರೋನಾ ವಿಶ್ಲೇಷಣೆ 2

ಕೊರೋನಾ ವಿಶ್ವಾದ್ಯಂತ ಕಾಲಿಟ್ಟಾಗಿನಿಂದ ವಿವಿಧ ದೇಶಗಳು ಕೈಗೊಂಡ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ಭಾರತ ವಿಶೇಷವಾಗಿ ಪ್ರತ್ಯೇಕವಾಗಿಯೇ ನಿಲ್ಲುತ್ತದೆ. ಅದು ಹೇಗೆಂದು ತಿಳಿಯಲು ಕಳೆದ ಒಂದು ತಿಂಗಳಿನಿಂದಾದ ಘಟನಾವಳಿಗಳನ್ನು ವಿಶ್ಲೇಷಿಸುವುದು ಬೇಡ, ಕೇವಲ ಗಮನಿಸೋಣ.

ಅಮೇರಿಕೆಗೆ ಕರೋನಾ ಕಾಲಿಟ್ಟಾಗಿನಿಂದ ಅಲ್ಲಿನ ಅಧ್ಯಕ್ಷರಾದ ಟ್ರಂಪ್ ನಿತ್ಯ ತನ್ನ ದೇಶವಾಸಿಗಳಿಗೆ ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದು ವೈರಸ್ ಸೋಂಕಿತರ ಸಂಖ್ಯಾಂಶ, ಸೋಂಕನ್ನು ಧೃಢೀಕರಿಸುವ ಪ್ರಗತಿ, ಉಪಲಬ್ಧ ಸಾಧನಗಳು, ಸೋಂಕನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಕಾರ್ಯಸೂಚಿ ಮುಂತಾದ ಸೋಂಕಿಗೆ ಸಂಬಂಧಿಸಿದ ನೇರ ವಿಷಯಗಳಲ್ಲದೆ, ಇದರಿಂದುಂಟಾದ ಆರ್ಥಿಕ ಹಿಂಜರಿತವನ್ನು ತಡೆಯಲು ಒಂದು ಟ್ರಿಲಿಯನ್ ಡಾಲರ್ರುಗಳ ಯೋಜನೆ, ಮನೆಯಿಂದ ಕೆಲಸ ಮಾಡುವ ಅನುಕೂಲವಿಲ್ಲದವರಿಗೆ ಆರ್ಥಿಕ ಸಹಾಯ ಇತ್ಯಾದಿ ಇತ್ಯಾದಿ ಯೋಜನೆಗಳ ಘೋಷಣೆ ಮತ್ತವುಗಳ ಕುರಿತಾದ ಪ್ರಗತಿಯನ್ನೂ ಹೊಂದಿವೆ. 

ಟ್ರಂಪ್ ನ ಉತ್ಸಾಹ ಎಷ್ಟರಮಟ್ಟಿಗಿದೆಯೆಂದರೆ ಭಾರತದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೆಲವು ಆಸ್ಪತ್ರೆಗಳಲ್ಲಿ ಕೊರೋನಾ ಗುಣಪಡಿಸಲು ಮಲೇರಿಯಾ ಗುಣಪಡಿಸುವ ಕ್ಲೋರೋಕ್ವಿನ್ ಔಷಧಿಯನ್ನು ಬಳಸಿ ಯಶಸ್ವಿಯಾದ ಸುದ್ದಿಯನ್ನಿಟ್ಟುಕೊಂಡು ಕ್ಲೋರೋಕ್ವಿನ್ ಅನ್ನು ತಾನೇ ಖುದ್ದು ಪುರಸ್ಕರಿಸುವಷ್ಟು ಇದೆ. ಅಂದರೆ ಈ ಸೋಂಕಿನಿಂದಾಗುವ ವ್ಯತ್ಯಯಗಳನ್ನು ತಡೆಯಲು ಕೇವಲ ಯೋಜನೆಗಳನ್ನು ಹಾಕುವುದಷ್ಟೇ ಅಲ್ಲದೆ ಸೋಂಕನ್ನು ಗುಣಪಡಿಸುವ ಔಷಧಿಯೆಡೆಗೂ ತನ್ನ ಅತ್ಯಾಸಕ್ತಿಯನ್ನು ವ್ಯಕ್ತಪಡಿಸುವಷ್ಟು ಒಬ್ಬ ನಾಯಕನಾಗಿ ಕಾರ್ಯೋನ್ಮುಖನಾಗಿರುವುದು ಶ್ಲಾಘನೀಯ. ಇಲ್ಲಿ ಗಮನಿಸಬೇಕಾದ ಅಂಶ ಚುನಾಯಿತ ನಾಯಕನೊಬ್ಬ ತನ್ನ ಚುನಾಯಿತ ಸ್ಥಾನಕ್ಕೆ ಕೊಟ್ಟಿರುವ ಒಂದು ಬದ್ಧತೆ.

ಇನ್ನು ಒಬ್ಬ ಶಂಕಿತ ಸೋಂಕುದಾರನನ್ನು ಪರೀಕ್ಷಿಸಿ ಧೃಢೀಕರಿಸಲು ನಾಲ್ಕರಿಂದ ಆರು ದಿನಗಳ ಸಮಯ ಬೇಕು. ಅತಿ ಶೀಘ್ರವಾಗಿ ಸೋಂಕನ್ನು ಧೃಢೀಕರಿಸುವ ಸಾಧನಗಳನ್ನು ಕಂಡುಹಿಡಿದು ಉತ್ಪಾದಿಸಲು ಸಾಕಷ್ಟು ಖಾಸಗಿ ಸಂಸ್ಥೆಗಳಿಗೆ ಫ಼ೆಬ್ರುವರಿ ೨೯ರಂದು ಅಮೇರಿಕಾದ ಸಿಡಿಸಿ ಅನುಮತಿ ನೀಡಿತು. ಅವುಗಳಲ್ಲಿ ಇಂಟೆಗ್ರೇಟೆಡ್ ಡಿ.ಎನ್.ಎ ಎಂಬ ಸಂಸ್ಥೆಯೇ ಮಾರ್ಚ್ ಒಂಬತ್ತರಂದು ಏಳು ಲಕ್ಷ ಪರೀಕ್ಷಾ ಸಾಧನಗಳನ್ನು ಉತ್ಪಾದಿಸಿತು. ನಂತರ ಮಾರ್ಚ್ ಹತ್ತರಂದು ಅಮೇರಿಕಾದ ಆರೋಗ್ಯ ಮತ್ತು ಮಾನವ ಸೇವೆಯ ಕಾರ್ಯದರ್ಶಿ ಅಲೆಕ್ಸ್ ಅಜಾರ್ ಇಂದಿಗೆ ಇಪ್ಪತ್ತೊಂದು ಲಕ್ಷ ಪರೀಕ್ಷಾ ಸಾಧನಗಳು ಲಭ್ಯವಾಗಿವೆ ಎಂಬ ಸುದ್ದಿಯನ್ನು ಪ್ರಕಟಿಸಿದರು. ಅಂದರೆ ಅಲ್ಲಿನ ಸರ್ಕಾರ ಮತ್ತು ಸಂಸ್ಥೆಗಳ ಬದ್ಧತೆ, ಕಾರ್ಯತತ್ಪರತೆಯನ್ನು ಗಮನಿಸಿ.

ಇದು ಅಮೇರಿಕಾ ಕೊರೋನಾ ಕುರಿತು ಕೈಗೊಂಡ ಒಂದು ಯೋಜನೆಯ ಫ಼ಲಶೃತಿಯ ಝಲಕ್.

ಅಂದ ಹಾಗೆ ಅಮೇರಿಕಾದಲ್ಲಿ ಅಡುಗೂಲಜ್ಜಿ ವೈದ್ಯಪಾಕವಾಗಲೀ, ಈರುಳ್ಳಿ, ಬೆಳ್ಳುಳ್ಳಿ ಭಜ್ಜಿಗಳಾಗಲಿ, ಬಿಸಿಲಿನ ಜಳದ ಕುರಿತಾಗಲಿ ಯಾವುದೇ ಗಾಸಿಪ್ಪುಗಳು ಹರಡಲಿಲ್ಲ.

ಈಗ ಭಾರತದತ್ತ ನೋಡೋಣ...

ಭಾರತ ಸರ್ಕಾರ ಮಾರ್ಚ್ ಹತ್ತರಂದು ತನ್ನಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿತು. ಆದರೆ ಅದರ ಅನುಷ್ಟಾನದಲ್ಲಿ ಸೋತಿತು. ಹಾಗೆ ಬಂದ ಪ್ರಯಾಣಿಕರಲ್ಲಿ ಭಾರತೀಯರೇ ಸಾಕಷ್ಟು ಜನರಿದ್ದರು. ಅವರೆಲ್ಲರನ್ನೂ ನಿಮ್ಮ ನಿಮ್ಮ ಮನೆಗಳಲ್ಲಿ ಕ್ವಾರಂಟೈನ್ ಆಗಿರಿ ಎಂದಿತೇ ಹೊರತು ಅವರ ಮೇಲೆ ನಿಗಾ ಇರಿಸಲಿಲ್ಲ. ಅವರನ್ನು ಸರ್ಕಾರಿ ಸ್ವಾಮಿತ್ವದ ಐಟಿಡಿಸಿ (ಟೂರಿಸಂ ಇಲಾಖೆ) ಮುಂತಾದ ವಾಹನಗಳಲ್ಲಿ ಮನೆ ಸೇರಿಸಿ ಮನೆಯಲ್ಲಿಯೇ ಇರುವಂತೆ ತಾಕೀತು ಮಾಡಬಹುದಿತ್ತು, ಮಾಡಲಿಲ್ಲ.

ಹಾಗೆ ಹೋಗಲು ಬಿಟ್ಟ ಸೋಂಕಿತರು ಎಲ್ಲಿ ಹೋಗಿದ್ದರು, ಯಾರ್ಯಾರ ಸಂಪರ್ಕಕ್ಕೆ ಬಂದಿದ್ದರು ಇತ್ಯಾದಿ ಇತ್ಯಾದಿ ತಿಳಿಯಲು ಒಬ್ಬೊಬ್ಬ ಪ್ರಯಾಣಿಕನ ಹಿಂದೆ ಒಬ್ಬೊಬ್ಬ ಸಾಂಗ್ಲಿಯಾನ, ವ್ಯೂಮಕೇಶ ಮುಖರ್ಜಿಯಂತಹ ಪತ್ತೇದಾರರನ್ನೇ ಬಿಡಬೇಕಾಗುತ್ತದೆ. ಶಂಕಿತ ಸೋಂಕಿತರ ವಿಷಯ ಹೀಗಿದ್ದು ಮತ್ತು ಸೋಂಕನ್ನು ಧೃಢೀಕರಿಸುವ ಸಾಧನಗಳ ಅಂಕಿ ಅಂಶ ಲಭ್ಯವಿಲ್ಲದಿದ್ದಾಗ ಸರ್ಕಾರ ಪ್ರಕಟಿಸಿರುವ ಶಂಕಿತರ/ಸೋಂಕುದಾರರ ಅಂಕಿ ಅಂಶಗಳು ಪ್ರಶ್ನಾರ್ಹವೆನಿಸಿಬಿಡುತ್ತವೆ.

ಅಲ್ಲಿ ಅಮೇರಿಕಾ ತನ್ನ ಬಳಿಯಿರುವ ಸೋಂಕು ಪರೀಕ್ಷಾ ಸಾಧನಗಳ ಅಂಕಿ ಅಂಶವನ್ನು ಪ್ರಕಟಿಸಿದಂತೆ, ಭಾರತ ತನ್ನಲ್ಲಿರುವ ಕೊರೋನಾ ಪರೀಕ್ಷಾ ಸಾಧನಗಳ ಅಂಕಿ ಅಂಶ, ತನ್ನಲ್ಲಿರುವ ಸಾಧನ, ಒಬ್ಬ ಶಂಕಿತ ಸೋಂಕಿತನನ್ನು ಸೋಂಕಿತನೆಂದು ಧೃಡೀಕರಿಸಲು ತೆಗೆದುಕೊಳ್ಳುವ ಸಮಯ ಇತ್ಯಾದಿ ಕುರಿತಾದ ಪ್ರಕಟಿತ ಮಾಹಿತಿಯನ್ನಾಗಲಿ ಸುದ್ದಿಯನ್ನಾಗಲಿ ನಾನೆಲ್ಲೂ ಗಮನಿಸಿಲ್ಲ.

ಇನ್ನು ಟ್ರಂಪನಂತೆ ಯಾವುದೇ ಯೋಜನೆಗಳನ್ನು ಭಾರತದ ಪ್ರಧಾನಿಗಳು ಇದುವರೆಗೂ ಪ್ರಕಟಿಸಿಲ್ಲ. ಒಂದು ದಿನದ "ಜಂತಾ ಕರ್ಫ಼್ಯೂ" ಘೋಷಿಸಿದ್ದನ್ನು ಬಿಟ್ಟರೆ ಈವರೆಗೆ ಯಾವುದೇ ಮಹತ್ತರ ಯೋಜನೆಗಳು ಘೋಷಿತಗೊಂಡಿಲ್ಲ. ಜನತಾ ಕರ್ಫ಼್ಯೂನ ಅಭೂತಪೂರ್ವ ಯಶಸ್ವಿಯ ನಂತರ ಜನತೆ ಮನೆಯಲ್ಲಿದ್ದು ಭೌತಿಕ ಸಾಮಾಜಿಕ ಬಂಧವನ್ನು ಹೇಗೆ ಅನುಷ್ಟಾನಗೊಳಿಸಬೇಕು, ಅದಕ್ಕೆ ಸರ್ಕಾರದ ಪ್ರೋತ್ಸಾಹಕರ ಯೋಜನೆಗಳು ಏನಿವೆ, ಇತ್ಯಾದಿ ಇತ್ಯಾದಿ ಯಾವ ಯೋಜನೆಯನ್ನೂ ಪ್ರಕಟಿಸಿಲ್ಲ. ಕನಿಷ್ಟ ನಿತ್ಯ ಕೂಲಿ ಮಾಡಿಯೇ ಜೀವಿಸಬೇಕಾದ ಜನರುಗಳಿಗೆ ಅದರಲ್ಲೂ ಜನ್-ಧನ್, ಕಿಸಾನ್ ಕಾರ್ಡ್ ಇತ್ಯಾದಿ ಖಾತಾದಾರರಿಗೆ ಇಂತಿಷ್ಟು ಹಣ ಹಾಕುತ್ತೇವೆ ಮನೆಯಲ್ಲಿರಿ ಎಂಬ ಒಂದು ಕನಿಷ್ಟ ಯೋಜನೆಯನ್ನಾದರೂ ಪ್ರಕಟಿಸಬೇಕಿತ್ತಲ್ಲವೇ?!

ಒಂದೆಡೆ ಇದು ಮಹಾಯುದ್ಧ ಎಂದು ಉದ್ಘೋಷಿಸಿದ ಪ್ರಧಾನಿಗಳು, ಈ ಯುದ್ಧವನ್ನು ಎದುರಿಸಲು ಸರ್ಕಾರದ ಯೋಜನೆ, ಉಪಲಬ್ಧ ಸಾಧನ, ಆಕರ ಪರಿಕರಗಳ ಅಂಕಿಸಂಖ್ಯೆ, ಮೊದಲ ಸಾಲಿನಲ್ಲಿರುವ ಡಾಕ್ಟರರುಗಳೆಂಬ ಬ್ರಿಗೇಡಿಯರ್/ಮೇಜರರುಗಳ ಸಂಖ್ಯೆ, ನರ್ಸುಗಳೆಂಬ ಕ್ಯಾಪ್ಟನ್ನುಗಳ ಸಂಖ್ಯೆಗಳ ಮಾಹಿತಿ ಇದೆಲ್ಲವನ್ನೂ ಕೊಡದಿದ್ದರೆ ಹೇಗೆ? ಸಾಂಪ್ರದಾಯಿಕ ಯುದ್ಧವಾದರೆ ಈ ಸಂಖ್ಯಾಂಶವನ್ನು ಮುಚ್ಚಿಡಬೇಕು. ಆದರೆ ಇದು ಸಾಂಪ್ರದಾಯಿಕ ಯುದ್ಧವಲ್ಲ. ಇಲ್ಲಿ ಸಾಕಷ್ಟು ಮಾಹಿತಿಯನ್ನು ಕೊಟ್ಟರಷ್ಟೇ ಗೆಲುವು ಸಾಧ್ಯ! ಈ ಮಾಹಿತಿ ಸ್ಪಷ್ಟವಾಗಿದ್ದಷ್ಟೂ "ಚಪ್ಪಾಳೆ" ತಟ್ಟಲು ಹಿತವೆನ್ನಿಸುತ್ತದೆ.  ನೋಟ್ ಬ್ಯಾನ್, ಟ್ರಿಪಲ್ ತಲಾಖ್, ಸಿ.ಎ.ಎ. ಮುಂತಾದ ದಿಟ್ಟ ಯೋಜನೆಗಳನ್ನು ಅನುಷ್ಟಾನಗೊಳಿಸಿದ ಮೋದಿಯವರಿಗೆ ಇಂದಿನ ತುರ್ತಿನ ಸಂಗತಿ ಏಕೆ ಮೂಕವಾಗಿಸಿದೆ? ಮಹಾ ಮೂರ್ಖನ್ನೆನಿಸಿದ ಟ್ರಂಪನೇ ಇಷ್ಟೆಲ್ಲಾ ಮಾಡುತ್ತಿರುವಾಗ ವಿಶ್ವನಾಯಕನೆನಿಸಿದ ನಮ್ಮ ಹೆಮ್ಮೆಯ ಪ್ರಧಾನಿಗಳು ಶಂಖ ಊದಿ ಜಾಗಟೆ ಬಾರಿಸುವ ಕಾಲ ಜಾರಿದೆ ಎಂದೇಕೆ ಅರಿಯುತ್ತಿಲ್ಲ. ಕನಿಷ್ಟ ರಣಕಹಳೆ ಊದಿದ ನಂತರ "ಆಕ್ರಮಣ್" ಎನ್ನುವ ಉದ್ಘೋಷವನ್ನೇಕೆ ಹೊರಡಿಸುತ್ತಿಲ್ಲ!

ಇದು ಕೇವಲ "ಟಿಪ್ ಆಫ಼್ ದಿ ಐಸ್ ಬರ್ಗ್"! ಇಂದು ದೇಶಾದ್ಯಂತ ಹಬ್ಬಿದ "ಜೈವಿಕ ಯುದ್ಧ"ವೆಂಬ ಗಾಳಿಸುದ್ದಿ ಮುಂದೆಂದಾದರೂ ನಿಜವಾಗಿ ಜೈವಿಕ ಯುದ್ಧಗಳ ಕಾಲ ಬಂದರೆ ಅವುಗಳನ್ನು ಎದುರಿಸಲು ಭಾರತ ಸಿದ್ಧವಿದೆಯೇ ಎಂಬುದಕ್ಕೆ ಒಂದು ಅಳತೆಗೋಲು ಕೂಡ!

ಕೊರೋನಾ ಹಿನ್ನೆಲೆಯಲ್ಲಿ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಭಾರತವೇಕೆ ವಿಶಿಷ್ಟವಾಗಿ ಬೇರೆಯದೇ ಆಗಿ ನಿಲ್ಲುತ್ತದೆ ಎಂದು ಹೀಗೆ ಕಾಣಸಿಗುವುದು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಹಾಕಿಕೊಂಡಿರುವ ದಟ್ಟ ಕಡುಕಪ್ಪಿನ ಕನ್ನಡಕ ತೆಗೆದು ನೋಡಿಕೊಂಡರೆ ಸಾಕು.

Cut the chain

ಇತ್ತೀಚೆಗೆ ಫೇಸ್ಬುಕ್ನಲ್ಲಿ ನಾನು ಇಂತವನು, ನಿಮಗೆ ಇಷ್ಟವೆ, ಅನಿಷ್ಟವೆ, ಎಲ್ಲಿ ಹೇಗೆ ಸಂಧಿಸಿದ್ದೆವು ಎಂದು ಒಂದು ಕಾಮೆಂಟ್ ಹಾಕಿ ಎಂಬ ಸರಣಿ ಪೋಸ್ಟುಗಳನ್ನು ಗಮನಿಸಿದ್ದೀರಷ್ಟೇ.

ಇಲ್ಲಿ ತಮ್ಮ ಸ್ನೇಹಿತರ ಲಿಸ್ಟ್ ನೋಡಿ ಖುದ್ದು ತಾವೇ ಯಾರನ್ನು ಎಲ್ಲಿ, ಹೇಗೆ, ಇತ್ಯಾದಿಯಾಗಿ ಭೇಟಿ ಮಾಡಿದ್ದೆವು, ಮಾತನಾಡಿದ್ದೆವು ಎಂದು ತಮ್ಮನ್ನು ತಾವು ಅರಿಯದೆ ಇತರರನ್ನು ಕೇಳುವುದಿದೆಯಲ್ಲ ಅದು ಆತ್ಮರತಿಯ ಒಂದು ಬಗೆ.

ವಿಷಾದದ ಸಂಗತಿಯೆಂದರೆ ಈ ಆತ್ಮರತಿಗೆ ನಿರ್ವಾಣವನ್ನೇ ಹೊಂದಿದ್ದೇವೆಂದುಕೊಂಡವರು ಕೂಡ ಬಲಿಯಾಗಿರುವುದು!

ಈ ನಾನು ಎಂಬ ಆತ್ಮರತಿಯ ಹಸ್ತಮೈಥುನಕ್ಕೆ ದಯವಿಟ್ಟು ಬೇರೆಯವರ ಸಹಾಯಹಸ್ತವನ್ನು ಕೇಳಬೇಡಿ. ನಿಮ್ಮ ಹಸ್ತ, ನಿಮ್ಮದೇ ಲಿಸ್ಟು, ನಿಮ್ಮದೇ ನೆನಪು ಯಾ ಕಲ್ಪನೆಯಲ್ಲಿ ನಿಮ್ಮನ್ನು ನೀವು ಅರಿತು ನಾನಾರೆಂಬುದು ನಾನಲ್ಲವೆಂಬ ನಿಜ ನಿರ್ವಾಣವನ್ನು ಅರಿಯಿರಿ.

ತುಂಡರಿಸಬೇಕಿರುವುದು ಕೇವಲ ಕೊರೋನಾ ಸರಪಳಿಯನ್ನಲ್ಲ, ಈ ರೀತಿಯ ಉನ್ಮಾದದ ಏ(ಹೇ)ರಿಕೆಯನ್ನು ಕೂಡ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕೊರೋನಾ ವಿಶ್ಲೇಷಣೆ

ಇಂದಿನ ಉದಯಕಾಲದಲ್ಲಿ,

ನೀವು ಒಂದು ಬಸ್ಸಿಗೆ ಕಾಯುತ್ತಿರುವಿರಿ ಎಂದಿಟ್ಟುಕೊಳ್ಳಿ. ನಿಮ್ಮೊಟ್ಟಿಗೆ ಒಬ್ಬ ಮಹಿಳೆ, ವೃದ್ಧ, ಇಬ್ಬರು ವಿದ್ಯಾರ್ಥಿಗಳೂ ಬಸ್ಸಿಗೆ ಕಾಯುತ್ತಿರುತ್ತಾರೆ. ನೀವು ಹೋಗುತ್ತಿರುವ ಸ್ಥಳಕ್ಕೆ ಸಾಕಷ್ಟು ಬಸ್ಸುಗಳಿದ್ದು, ಆಗಷ್ಟೇ ಬಂದ ಬಸ್ಸು ತುಂಬಿದ್ದರೆ ಹೋಗುವವರು ಹೋಗಲಿ ಎಂದು ಇನ್ನೊಂದು ಬಸ್ಸಿಗೆ ಕಾಯುತ್ತೀರಿ. ಒಂದು ವೇಳೆ ಬಂದ ಬಸ್ಸು ಖಾಲಿಯಿದ್ದರೆ ನಿಮ್ಮೊಟ್ಟಿಗೆ ಕಾಯುವವರನ್ನು ಸೌಜನ್ಯದಿಂದ ಮೊದಲು ಹತ್ತಲು ಬಿಟ್ಟು ನಂತರ ನೀವು ಹತ್ತುತ್ತೀರಿ.  ಒಂದು ವೇಳೆ ಬಸ್ಸುಗಳು ವಿರಳವಾಗಿದ್ದು, ಬಂದ ಬಸ್ಸು ಖಾಲಿ ಇಲ್ಲದಿದ್ದರೆ ಯಾ ನಿಮ್ಮೊಟ್ಟಿಗೆ ಐವತ್ತು ಜನ ಕಾಯುತ್ತಿದ್ದು ಬಸ್ಸು ಖಾಲಿಯಿದ್ದರೂ ನೀವು ಲಗುಬಗೆಯಿಂದ ನುಗ್ಗಿ ಬಸ್ ಹತ್ತುತ್ತೀರಿ. ಇದು ಜನ ಸಾಂದ್ರತೆ, ಪ್ರಯಾಣಿಕ-ಸೌಲಭ್ಯಗಳ ಅನುಪಾತದ ಕೊರತೆಯಿಂದ ನಿಮ್ಮಲ್ಲುಂಟಾಗುವ ಸೌಜನ್ಯ ಯಾ (ಅ)ನಾಗರಿಕತೆಯ ಪಲ್ಲಟ.

ಹಾಗೆಯೇ ಯಾವ ದೇಶದಲ್ಲಿ ಆಧಿಕ ಸೌಲಭ್ಯಗಳು ತುಂಬಿದ್ದು ಸುಲಭಕ್ಕೆ ನಿಯಂತ್ರಿಸಬಲ್ಲ ಜನಸಾಂದ್ರತೆ ಮತ್ತು ಜನಸಂಖ್ಯೆ-ಸೌಲಭ್ಯಗಳ ಸಮತೋಲಿತ ಅನುಪಾತ ಇರುತ್ತದೋ ಅಲ್ಲಿ ಸೌಜನ್ಯ, ವ್ಯಕ್ತಿಗತ ಗೌರವ, ಸಹಾನುಭೂತಿ ಇತ್ಯಾದಿ ಇತ್ಯಾದಿ ನಾಗರಿಕ ವರ್ತನೆ ಕಾಣಸಿಕ್ಕು ಆಹಾ ಎಂತಹ ವಿಶಾಲ ನಾಗರಿಕ ಸಮಾಜ ಎನಿಸುತ್ತದೆ!

ಈ ಜನ ಸಾಂದ್ರತೆ vs ಸೌಲಭ್ಯಗಳ ಅನಾನುಪಾತದ ಕಾರಣದಿಂದಾಗುವ ಸೌಜನ್ಯ ಪಲ್ಲಟ ಯಾ (ಅ)ನಾಗರಿಕ ವರ್ತನೆಗಳು ಯಾವುದೇ ದೇಶ, ಕಾಲ, ಜನಾಂಗಕ್ಕೆ ಸೀಮಿತವಲ್ಲ. ಯುರೋಪಿರಲಿ ಅಮೆರಿಕ, ಚೈನಾವಿರಲಿ ಯಾವುದೋ ಕಾರಣಕ್ಕೆ ಬಸ್ಸುಗಳಿಲ್ಲದಿದ್ದರೆ ಎಲ್ಲರೂ ಬಂದ ಬಸ್ಸಿಗೆ ನುಗ್ಗುವವರೆ!

ಹಾಗಾಗಿಯೇ ಜನಸಾಂದ್ರ ಪ್ರದೇಶದಿಂದ ವಲಸೆ (ಪ್ರವಾಸಿಯಲ್ಲ) ಬಂದ ಭಾರತೀಯ ಯುರೋಪ್ ಅಮೆರಿಕದಲ್ಲಿ ಸೌಜನ್ಯತೆಯ ಸಾಕಾರ ಮೂರ್ತಿಯೆನಿಸುತ್ತಾನೆ. ಆದರೆ ಅದೇ ಸಾಕಾರಮೂರ್ತಿ ಭಾರತಕ್ಕೆ ಪ್ರವಾಸಕ್ಕೆ ಬಂದರೂ ಸ್ಥಳೀಯರಂತೆಯೇ (ಸೌಜನ್ಯವಲ್ಲವೆನಿಸುವಂತೆ) ವರ್ತಿಸುತ್ತಾನೆ. ಅದಕ್ಕೆ ಕಾರಣ ಸೌಲಭ್ಯಗಳ ಅಸಮತೋಲಿತ ಅನುಪಾತ. ಈ ವರ್ತನೆಗೆ ಯಾವೊಬ್ಬ ಮಾನವನೂ ಅತೀತನಲ್ಲ.

ಅಮೆರಿಕದ ಅಗಾಧತೆ, ಕಡಿಮೆ ಜನಸಂಖ್ಯೆ, ಸಮತೋಲಿತ ಸೌಲಭ್ಯಗಳು ಸಹಜವಾಗಿಯೇ ಅಲ್ಲಿಯ ಜನ ಪರಸ್ಪರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವಂತೆ ಮಾಡಿದೆ. ಹಾಗಾಗಿ ಅಮೆರಿಕನ್ನರು ಹುಟ್ಟು ಸಾಮಾಜಿಕ ಅಂತರಗಾರರು. ಇಂತಹ ಸಾಮಾಜಿಕ ಅರಿವುಳ್ಳ, ಸಾಮಾಜಿಕ ಅಂತರದ ಜನತೆ ಮತ್ತು ಸೌಲಭ್ಯಗಳ  ಆಗರಗಳ ನಡುವೆ ಕೊರೋನಾ ಹೇಗೆ ಕ್ಷಿಪ್ರವಾಗಿ ಹಬ್ಬಿತು?

ಅದಕ್ಕೆ ಅಮೆರಿಕನ್ನರ ಅತ್ಯಧಿಕ ವಿಮಾನಯಾನ, ac ಎಂದೆಲ್ಲಾ ಕಾರಣವೆಂದರೂ ಅಷ್ಟೆಲ್ಲಾ ಸಾಮಾಜಿಕ ಅಂತರ, ಲಾಕ್ ಡೌನ್, ಕ್ವಾರಾಂಟೈನ್ ಇತ್ಯಾದಿಗಳ ನಡುವೆ ಕೂಡ ಕೊರೋನಾ ಹಬ್ಬಲು ವೈರಸ್ಸಿನ ಪ್ರಬಲ ಶಕ್ತಿಯೇ ಕಾರಣ. ಹಾಗಾಗಿಯೇ ಅಮೆರಿಕಾ ಇಷ್ಟರೊಳಗೆ ತನ್ನಲ್ಲಿ ಇಪ್ಪತ್ತೆರಡು ಲಕ್ಷ ಕೊರೋನಾ ಸೋಂಕಿತರು ಮತ್ತು ಅಪಾರ ಸಾವುಗಳು ಸಂಭವಿಸಬಹುದೆಂದು ಅಂದಾಜಿಸಿತ್ತು. ಆದರೆ ಹಾಗಾಗದೆ ಕೇವಲ ಎರಡು ಸಾವಿರದ ಆಜುಬಾಜು ಸಾವುಗಳಾಗಿವೆ ಮತ್ತು ಒಂದು ಲಕ್ಷ ಸೋಂಕಿತರಿದ್ದಾರೆ.  ಅಮೆರಿಕ ಈವರೆಗೆ ಅಳವಡಿಸಿಕೊಂಡ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳದಿದ್ದರೆ ಇಷ್ಟರೊಳಗೆ ಇಪ್ಪತ್ತೆರಡು ಲಕ್ಷ ಅಮೆರಿಕನ್ನರು ಕೊರೊನದಿಂದ ನರಳುತ್ತಿದ್ದರು ಎಂದು ಅಮೆರಿಕೆಯ ಸರ್ಜನ್ ಜನರಲ್ ಮೊನ್ನೆ ಅಧಿಕೃತವಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಈವರೆಗೆ ಅಮೆರಿಕ 8,94,000 ಕೊರೋನಾ ಟೆಸ್ಟುಗಳನ್ನು ಮಾಡಿದೆ. ನಾವು ಹೆಚ್ಚು ಟೆಸ್ಟುಗಳನ್ನು ಮಾಡಿರುವುದರಿಂದ ನಮ್ಮಲ್ಲಿ ಹೆಚ್ಚಿನ ಸೋಂಕಿತರನ್ನು ಗುರುತಿಸಿದ್ದೇವೆ. ನಮ್ಮ ಅಂಕಿಗಳು, ಈ ಸೋಂಕನ್ನು ಎದುರಿಸಲು ಸಿದ್ಧಗೊಂಡ ನಮ್ಮ ತಯ್ಯಾರಿಯ ಪರಿಣಾಮ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಇದು ಒಂದು ಸಂತುಲಿತ, ವೈಜ್ಞಾನಿಕ ಅನುಪಾತಗಳನ್ವಯವಿರುವ ಒಂದು ಅಭಿವೃದ್ಧಿ ಹೊಂದಿರುವ ದೇಶದ ಕೊರೋನಾ ಕಥೆ.

ಇನ್ನು ಭಾರತದಲ್ಲಿ.....

ವಿದೇಶಗಳಿಂದ ವಾಪಸ್ಸಾದ ಪ್ರಜೆಗಳನ್ನು ನೇರ ಕ್ವಾರಾಂಟೈನ್ ಕ್ಯಾಂಪುಗಳಲ್ಲಿಡದೆ ಈಗವರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ.

ಇಟಲಿ ಪ್ರಧಾನಿ ಕರೆ ನೀಡಿದರೆಂದು ನಮ್ಮ ಪ್ರಧಾನಿಗಳು ನಮ್ಮ ಡಾಕ್ಟರರು, ಪೊಲೀಸರು ಇನ್ನೂ ಕಾರ್ಯಪ್ರವೃತ್ತರಾಗುವ ಮುನ್ನವೇ ಅವರಿಗೆ ಚಪ್ಪಾಳೆ ತಟ್ಟಿ ಎಂದದ್ದು ಮತ್ತು ಜನ ತಟ್ಟೆ ಬಡಿದು ಭಜನೆ ಮಾಡಿ ಸಾಮಾಜಿಕ ಅಂತರವನ್ನು ಧೂಳಿಪಟ ಮಾಡಿದ್ದಾರೆ.

ಕೊರೋನಾ ಒಂದು ಅತಿ ದೊಡ್ಡ ಜೋಕ್ ಎಂಬಂತೆ ಟ್ರೋಲು ಮಾಡಿ ಡೋಲು ಬಡಿದಿದ್ದಾರೆ, ಬಡಿಯುತ್ತಿದ್ದಾರೆ.

ಕರ್ಫ್ಯೂ ಇರುವುದೇ ಉಲ್ಲಂಘಿಸಲು ಎಂದು ಜನರೂ, ಉಲ್ಲಂಘಿಸಿದವರನ್ನು ಬಡಿಯುವುದೇ ನಮ್ಮ ಕೆಲಸ ಎಂದು ಪೊಲೀಸರು ಪೈಪೋಟಿಗೆ ಬಿದ್ದಿದ್ದಾರೆ.

ಗಂಜಿ ಕುಡಿದು ಎಪ್ಪತ್ತು ದಿನ ಬದುಕುವ ಶಕ್ತಿಯಿರುವವರು ಕೂಡ ಅಯ್ಯೋ ನಿತ್ಯ ಕೂಲಿ ಪಡೆದು ಬದುಕುವವರು ಏನು ಮಾಡಬೇಕು ಎಂದು ಕಕ್ಕುಲಾತಿ ಮೆರೆದು ನಮ್ಮದೆಲ್ಲಿಡೋಣ ಎಂದು ಸಮಾಜವಾದದ ಪಟ್ಟುಗಳನ್ನು ಹಾಕುತ್ತಾರೆ.

ದಿಲ್ಲಿ ವಲಸಿಗರ ತವರು ಪಯಣವನ್ನು ಬೆಂಬಲಿಸಿ ಮೋದಿ ಶಾ ತೆಗಳುತ್ತ ದಿಲ್ಲಿ ದೊರೆ ಕೇಜ್ರಿವಾಲರ ವಿಫಲತೆಯನ್ನು ಬುದ್ದಿವಂತ ಚಿಂತಕರು ಮರೆಮಾಚುತ್ತಿದ್ದಾರೆ.

ಥೇನಿಯಲ್ಲಿ ಓರ್ವ ವ್ಯಕ್ತಿ ಒಂದು ವಾರದ ಗೃಹ ಬಂಧನದ ಅವಧಿಯಲ್ಲೇ ಮಾನಸಿಕ ಸ್ಥಿಮಿತ ಕಳೆದುಕೊಂಡು ಓರ್ವ ವೃದ್ಧೆಯನ್ನು ಕಚ್ಚಿ ಕೊಂದಿದ್ದಾನೆ.

ಆಲ್ಕೋಹಾಲ್ ಸಿಕ್ಕದೆ ಜನ ಖಿನ್ನತೆಗೊಳಗಾಗಿ ಆತ್ಮಹತ್ಯೆಗೊಳಗಾಗುತ್ತಿದ್ದಾರೆ.

ಎಮ್ಮೆಲ್ಲೆಗಳು ಮೊಮ್ಮಕ್ಕಳನ್ನು ಹೈವೇಯಲ್ಲಿ ಆಟವಾಡಿಸಿದರೆ, ಕೆಲವರು ಊರು ತುಂಬಾ ಪಟಾಲಂ ಕಟ್ಟಿಕೊಂಡು ತಿರುಗುತ್ತಿದ್ದಾರೆ.

ಜನಾಂಗೀಯ ಅವಹೇಳನವೆನ್ನಿಸಬಲ್ಲ ಸಾಬಿ, ತುರುಕ ಪದಗಳು ಎಡ, ಬಲ ಎರಡೂ ಪಾಳೆಯಗಳು ಮುನ್ನೆಲೆಗೆ ತಂದು ಪೈಪೋಟಿಗಿಳಿದಿದ್ದಾರೆ.

ಆರ್ಥಿಕ ಪರಿಸ್ಥಿತಿ ಈಗಾಗಲೇ ಬಿದ್ದುಹೋಗಿದೆ. ಇದು ನಿಯಂತ್ರಿಸಲಾಗದ ಪರಿಸ್ಥಿತಿಯಾಗಿರುವುದರಿಂದ ಲಾಕ್ ಡೌನ್ ಇನ್ನಷ್ಟು ಆರ್ಥಿಕತೆಯನ್ನು ಕುಸಿಯುಸುತ್ತದೆ. ಹಾಗಾಗಿ ಆರ್ಥಿಕತೆಯನ್ನು ಎತ್ತಿ ಹಿಡಿಯಲು ಲಾಕ್ ಡೌನ್ ಬೇಡವಾಗಿತ್ತು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಸೋಪಿನೊಂದಿಗೆ ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಬಟ್ಟೆ ಒಗೆಸಿಕೊಟ್ಟಿದ್ದರೆ ಬಾಹ್ಯವಾಗಿ ಸೋಂಕು ಮುಕ್ತರಾಗುತ್ತಿದ್ದವರನ್ನು ಆಳಾಗಿ ನಿಲ್ಲಿಸಿ ಅಮಾನವೀಯವಾಗಿ ಏನನ್ನೋ ಸಿಂಪಡಿಸಿದ್ದಾರೆ.

ಇದೆಲ್ಲವೂ ಜನಸಾಂದ್ರತೆಯ mob mentality ಯ ಲಕ್ಷಣ. ಕಾಲಾಪಾನಿ, ನೇಣುಗಂಭ, ಜೀವಾವಧಿ ಶಿಕ್ಷೆಗಳನ್ನು ಅನುಭವಿಸಿ ಸ್ವಾತಂತ್ರ್ಯ ಗಳಿಸಿದ ರಾಷ್ಟ್ರದಲ್ಲಿ ಕೆಲವೇ ಕೆಲವು ದಿನಗಳ ಲಾಕ್ ಡೌನ್ (ಇದಿನ್ನೂ ಪ್ರಶ್ನಾರ್ಥಕ ರೀತಿಯಲ್ಲೇ ಜಾರಿಯಿದೆ) ಈ ರೀತಿಯ ಪರಿಣಾಮವನ್ನು ಸೃಷ್ಟಿಸಿದೆಯೆಂದರೆ ಭಾರತದ ಪ್ರಜಾಪ್ರಭುತ್ವ, ಮುಂಬರಬಹುದಾದ ಜೈವಿಕ ಯುದ್ಧಗಳಿಗೆ ರಾಷ್ಟ್ರವನ್ನು ಸಿದ್ಧಗೊಳಿಸಿದೆಯೇ? ಅತೀವ ಜನಸಂಖ್ಯೆಯ ರಾಷ್ಟ್ರಗಳಿಗೆ ಪ್ರಜಾಪ್ರಭುತ್ವ ಸಿಂಧುವೇ ಎಂಬ ತೀವ್ರ ಅನುಮಾನಗಳನ್ನು ಈ ದುರಿತ ಕಾಲ ಸೃಷ್ಟಿಸಿದೆ.  ಏಕೆಂದರೆ ಅಂತಹುದೇ ತೀವ್ರ ಜನಸಂಖ್ಯೆಯ ಚೀನಾ ಕೊರೋನವನ್ನು  ವುಹಾನ್ ಪ್ರದೇಶದಿಂದಾಚೆಯ ತನ್ನ ಪ್ರದೇಶಗಳಿಗೆ  ಗಮನಾರ್ಹವಾಗಿ ದಾಟಿಸಿಲ್ಲ.  ಈ ಪರಿಸ್ಥಿಯಲ್ಲಿ ಮೋದಿಯಲ್ಲ ಸಾಕ್ಷಾತ್ ಪರಶಿವನೇ ಪ್ರಧಾನಿಯಾಗಿದ್ದರೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುತ್ತಿರಲಿಲ್ಲ. ಏಕೆಂದರೆ ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಗಿಂತ ಶ್ರೀಸಾಮಾನ್ಯನ ನಡೆ ಮುಖ್ಯ. ನಮ್ಮ ಶ್ರೀಸಾಮಾನ್ಯನ ನಡೆ ಸದ್ಯಕ್ಕೆ ಅತ್ಯಂತ ನಿರಾಶಾದಾಯಕ.

ಒಟ್ಟಿನಲ್ಲಿ ಸಾಂದ್ರತೆ, ಒತ್ತಡ, ತಾಳುವಿಕೆ ಒಂದಕ್ಕೊಂದು ಸಂಬಂಧಿತವೆಂಬ ಭೌತಶಾಸ್ತ್ರದ ಸಾಪೇಕ್ಷ ಸಿದ್ಧಾಂತ ರಾಜಕೀಯ ವ್ಯವಸ್ಥೆಗಳಿಗೂ ಅನ್ವಯವೆಂದು ಕೊರೋನಾ ಸಾಬೀತುಗೊಳಿಸುತ್ತಿದೆ. ಹಾಂ, ಸಾಪೇಕ್ಷ ಸಿದ್ದಾಂತ ರೇಣುಕರ ಸಿದ್ಧಾಂತ ಶಿಖಾಮಣಿಯಲ್ಲಿತ್ತು ಎಂದು ಒಂದು ವರ್ಗ, ಶಂಕರಾಚಾರ್ಯರು ಅದನ್ನು ಎಲ್ಲರಿಗಿಂತ ಮೊದಲು ಮಂಡಿಸಿದ್ದರು ಎಂದು ಇನ್ನೊಂದು ವರ್ಗ, ಇಲ್ಲ ಇವೆರೆಲ್ಲರಿಗಿಂತ ಬೌದ್ಧ ಧರ್ಮ ಈ ಸಿದ್ಧಾಂತದ ಮೂಲ, ಇದು ಪಶ್ಚಿಮದ ಪಿತೂರಿಯಿಂದ ಐನ್ಸ್ಟೀನ್ ಸಿದ್ದಾಂತವಾಗಿದೆ ಎನ್ನುವ ಪಿತೂರಿ (controversy) ಸಿದ್ಧಾಂತದಂತೆಯೇ ಕೊರೋನಾ ಇಂದು ವಿನೂತನ ಜೈವಿಕ ಯುದ್ಧದ ಪಿತೂರಿ ಸಿದ್ಧಾಂತವಾಗಿ ಸಾಗಿಬರುತ್ತಿದೆ.