ಹಾಸನದ ಮುಂಗಾರು ಮಳೆಯ ಒಂದು ಸಂಜೆ....

 ಹಾಸನದ ಮುಂಗಾರು ಮಳೆಯ ಒಂದು ಸಂಜೆ....ನೀವು ನೋಡಿರಬಹುದಾದ ಕಿರಿಕ್ ಪಾರ್ಟಿ ಸಿನೆಮಾ ಕತೆಯ ಮುತ್ತಜ್ಜನ ಕತೆಯನ್ನೂ ಮೀರಿಸಿದ ಮೂಲ ಸಾಲಗಾಮೇಶ್ವರ ಪಥದ ಕತೆಯನ್ನು ನಾನು ಬಲ್ಲೆ. ಏಕೆಂದರೆ ಈ ಸಿನೆಮಾ ಕತೆಯ ಉತ್ತರ ಪತ್ರಿಕೆಯ ತಿದ್ದುವ ಪ್ರಹಸನದ ಪಿತಾಮಹ ನಾನೇ ಎಂದು ಅಂದು ಗುಸುಗುಸು ಗಾಸಿಪ್ಪಿನ ಹೀರೋ ನಾನೆನಿಸಿದ್ದೆ.


ಅಂತಹ ಕಥಾಗುಚ್ಛದ ಒಂದು ಸೀನ್:

ಸಿಂ-ಹಾಸನದ ಹತ್ತಿರದ ಸಾರೋಟಿನ ಕುಣಿಗಲ್ ಕುದುರೆಗಳಿಗೆ ರಮ್ ಕುಡಿಸಿ ಮಲ್ಯ, ಒಡೆಯರ್, ರೆಬೆಲ್ ಸ್ಟಾರ್ ಮತ್ತು ಖುರ್ಬಾನಿ ಸೋದರರು ಪೂನಾ ಬೆಂಗಳೂರು ರೇಸುಗಳಲ್ಲಿ ಓಡಿಸುತ್ತಿದ್ದರಂತೆ! ಹಾಗಾಗಿ ನಮ್ಮ ಹಾಸ್ಟೆಲ್ಲಿನ ಎಲ್ಲಾ ಹುಚ್ಚು ಹರೆಯದ ಕುದುರೆಗಳ ಆಯ್ಕೆ ಸಹಜವಾಗಿ ಅಂದೆಲ್ಲಾ ಸದಾ ರಮ್ಮೇ ಆಗಿರುತ್ತಿತ್ತು. ತಿಂಗಳ ಶುಭಾರಂಭ ಓಲ್ಡ್ ಮಾಂಕ್ ರಮ್ ಅಥವಾ ಒಮ್ಮೊಮ್ಮೆ ವೆಲ್ಲಿಂಗ್ಟನ್ ವಿಸ್ಕಿಯೊಂದಿಗೆ ಆರಂಭವಾಗಿ ನಂತರ ಹರ್ಕ್ಯೂಲಿಸ್, ತಿಂಗಳ ಮಧ್ಯೆ ಖೋಡೆಸ್ ರಮ್, ನಂತರ ಮಾಸಾಂತ್ಯಕ್ಕೆ ಮಾಸ್ ಮಹನೀಯರ ಅಪ್ಪಟ ಸ್ಫಟಿಕ ಶುಭ್ರ ಪಾರದರ್ಶಕ ಜಲಸದೃಶ್ಯ ಸ್ಯಾಚೆಟ್ ಜಲದೊಂದಿಗೆ ಕೊನೆಗೊಳ್ಳುತ್ತಿತ್ತು. ಇಪ್ಪತ್ತೈದು ಸ್ಯಾಚೆಟ್ ಜಲವನ್ನು ಸ್ನಾನದ ಬಕೆಟ್ಟಿಗೆ ಸುರಿದು ಮೇಲೆ ಇಪ್ಪತ್ತು ನಿಂಬೆ ಹಣ್ಣುಗಳನ್ನು ಹಿಂಡಿ ನಾಲ್ಕು ಪ್ರಮಾಣ ನೀರು ಸೇರಿಸಿದರೆ..ಆಹಾ!!!

ಅದು ಯಾವ ಶಾಂಪೇನಿಗಿಂತಲೂ ಕಡಿಮೆ ಇರುತ್ತಿರಲಿಲ್ಲ ಎಂಬುದು ನಮ್ಮ ಸಂಶೋಧನೆಯಾಗಿತ್ತು. ಈ ಸಂಶೋಧನೆಯನ್ನು ಪರಾಮರ್ಶಿಸಲು ಆಗಿನ ಕಾಲದಲ್ಲಿ ಇಡೀ ಹಾಸನದಲ್ಲಿ ಎಲ್ಲಿಯೂ ಶಾಂಪೇನ್ ಸಿಗುತ್ತಿರಲಿಲ್ಲ. ಯಾರಾದರೂ ಕೇಳಿದರೆ ಪಾಂಪೆ ಡಿ ಶಾಂಪೇನ್ ಹೀಗೆಯೇ ಇರುತ್ತದೆ ಎಂದು ಬಾಯಿ ಮುಚ್ಚಿಸುತ್ತಿದ್ದೆವು. ಆ ಮಾಸು ಡ್ರಿಂಕಿಗೆ ಎಂಥಾ ಬಿಗುಮಾನದವನೂ ಬಾಗಿ ನರ್ತಿಸದೆ ಇರುತ್ತಿರಲಿಲ್ಲ. ಅಂದ ಹಾಗೆ ಈ ನಮ್ಮ ಶಾಂಪೇನಿಗೆ ಸಮಾಜವು ನಿಕೃಷ್ಟವಾಗಿ ಸಾರಾಯಿ ಎನ್ನುತ್ತಿತ್ತು.

ಮಾಸದ ಪಾನಾವತಾವರಣಕ್ಕೆ ತಕ್ಕಂತೆ ತಿನಿಸು ಮತ್ತು ಟೇಬಲ್ಲುಗಳು ಸಹ ಕ್ವಾಲಿಟಿ ಕೆಸಿನೋ ಬಾರುಗಳ ಚಿಲ್ಲಿ ಚಿಕನ್, ಬಟರ್ ಚಿಕನ್ನಿನಿಂದ ಮಮತಾ ಮಿಲಿಟರಿ ಹೋಟೆಲ್ಲಿನ ಫಿಶ್ ಫ್ರೈ, ಕೈಮ ಮುದ್ದೆಯಿಂದ ಸಾಗಿ ಸಹ್ಯಾದ್ರಿ ಟಾಕೀಸಿನ ಎದುರಿನ ಗಾಡಿಗಳ ಪ್ಲಾಸ್ಟಿಕ್ ಅಡಿ ಮುದುರಿ ನಿಂತುಕೊಂಡು ಇಡ್ಲಿ, ಚಿತ್ರಾನ್ನದ ಬಡವರ ಊಟದೊಂದಿಗೆ "ಬಡವರ ಊಟಿ"ಯಲ್ಲಿ ಪ್ರತಿ ತಿಂಗಳ ಕೊನೆ ಬಡತನದಲ್ಲಿ ಪರಿಸಮಾಪ್ತಿಯಾಗುತ್ತಿತ್ತು.

ಇಂತಹ ಒಂದು ಮಾಸಾಂತ್ಯದ ಮಂಜಿನ ಮುಸುಕು ಸಂಜೆ ಶಾಂಪೇನ್ ಪಾರ್ಟಿಗೆ ಸ್ನಾನದ ಬಕೆಟ್ಟು ಬಾಯ್ತೆರೆದು ಕಾದಿತ್ತು. ಶಾಸ್ತ್ರೋಕ್ತವಾಗಿ ಅದಕ್ಕೆ ಸ್ಯಾಚೆಟ್ ಮೇಲೆ ಸ್ಯಾಚೆಟ್ಟುಗಳು, "ನಾನು ಮಾಲಿನಿ, ಬಕೆಟ್ಟಿಗೆ ಬೀಳ್ತೀನಿ" ಎಂದು ಹೇಮಾಮಾಲಿನಿ ಥರ ಬಳುಕಿ ಬಳುಕಿ ರಸಧಾರೆ ಹರಿಸಿದ ನಂತರ, "ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡು" ಎಂದು ಹಲವಾರು ನಿಂಬೆಗಳು, ನಂತರ ಹೇಮಾವತಿಯ, "ಜಲಲ ಜಲಲ ಜಲ ಧಾರೆ..." ಬಕೆಟ್ ಸೇರಿ ಶಾಂಪೇನ್ ಸಿದ್ಧವಾಯಿತು. ಖಾಲಿ ಬಿಯರ್ ಬಾಟಲಿಗಳಲ್ಲಿ ಇದನ್ನು ತುಂಬಿಕೊಂಡು, "ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು ಓ ಓ ಓ.... ಎಂಸಿಯಿ ತೋಪಿನಲ್ಲಿ ಲಂಗ ಎತ್ತಿ ನಿಂತವಳು ಓ ಓ ಓ" ಎಂದು ಹಂಸಲೇಖರಿಗಿಂತ ಸೃಜನಶೀಲರಾಗಿ ಹೀರೋ ರವಿಚಂದ್ರನ್ನಿಗಿಂತ ತೇಲುಗಣ್ಣಾಗಿ ಹುಚ್ಚೆದ್ದು ಒಂದು ಗುಂಪು ಹಾಡಿದರೆ ಇನ್ನೊಂದು ಗುಂಪು, "ಜುಮ್ಮಾ ಚುಮ್ಮಾ ದೇದೇ" ಎನ್ನುತ್ತ ಎಲ್ಲರೂ ಹಾಡುತ್ತಾ ಕುಡಿಯುತ್ತಾ ಕುಣಿಯುತ್ತಾ ಇದ್ದೆವು.

ನಮ್ಮ ಗಲಾಟೆಯ ನಡುವೆ ಅಂದು ನಮ್ಮ ಮಂಗಳೂರಿನ ಸ್ಟ್ಯಾನ್ಲಿ ತನ್ನ ಕಶ್ಮೀರಿ ಕುಳ್ಳಿಯನ್ನು ನೆನೆದು ಸ್ಟೈಲಾಗಿ "ಯೂ ಬಗ್ಗರ್ಸ್, ಲೆಟ್ಸ್ ಪ್ಲೇ ರಿಚರ್ಡ್ ಮಾರ್ಕ್ಸ್" ಎಂದು, "ಓಶನ್ಸ್ ಅಪಾರ್ಟ್ ಡೇ ಆಫ್ಟರ್ ಡೇ..... ಎವ್ರಿಥಿಂಗ್ ಐ ಡು, ಐ ಡೂ ಇಟ್ ಫಾರ್ ಯು....ಐ ವಿಲ್ ಬಿ ರೈಟ್ ಹಿಯರ್ ವೇಟಿಂಗ್ ಫಾರ್ ಯು!" ಎಂದು ಕೋರ್ಸು ಮುಗಿಸಿ ಆರ್ಕಿಟೆಕ್ಚರ್ರಿನ ಎವರೆಸ್ಟ್ ಶಿಖರವನ್ನು ಏರಿದ್ದ ಕಶ್ಮೀರಿ ಬೆಡಗಿಯ ನೆನೆನೆನೆದು ಕಣ್ಣೀರ ಕಡಲ ಹರಿಸುತ್ತ ಎಮ್ಸಿಯಿನಲ್ಲಿ ಪರ್ಮನೆಂಟ್ ಠಿಕಾಣಿ ಹೂಡಿದ್ದ. ಹಾಗಿದ್ದೂ ತನ್ನ ಆಂಗ್ಲ ಮೂಲದ ಇಂಗ್ಲಿಷಿನಲ್ಲಿ ನಾವು ಕೇಳಿರದ ಪದಗಳಿಂದ ಬೈಯುತ್ತಿದ್ದ. ಅವೆಲ್ಲವೂ ನಮಗೆ ಬಿರುದುಗಳಂತೆ ಕೇಳಿಸಿ ಮುದ ನೀಡುತ್ತಿದ್ದವು.

ಅದೇಕೋ ಅಂದು ನನ್ನ ಮುಕುಳಿಯಲ್ಲಿದ್ದ ಮೂರು ಮಂಗಗಳು ಜಾಗೃತವಾಗಿ ಸ್ಟ್ಯಾನ್ಲಿಯನ್ನು ಕಡಲತಡಿಯಿಂದ ಕಡಲಾಚೆಗೆ ಕಳಿಸುವ ಘನ ಉದ್ದೇಶಕ್ಕೆ ನನ್ನರಿವಿಗೆ ಬಾರದಂತೆ ಸಂಕಲ್ಪ ಮಾಡಿದವು. ಈ ಸಂಕಲ್ಪದಂತೆ, ಬಿಯರ್ ಬಾಟಲಿಯ ಕಾಲು ಭಾಗವಿದ್ದ ಶಾಂಪೇನಿಗೆ ಒಂದರವತ್ತು ಎಮ್ ಎಲ್ ನನ್ನ ಕಡಲಜಲದ ರುಚಿಯ ಲಿಂಗಜಲ ಸೇರ್ಪಡೆಗೊಳಿಸಿದೆ. ಬಾಟಲಿಯನ್ನು ಕೈಯಲ್ಲಿ ಹಿಡಿದು ಜೂಮ್ ಜೂಮುತ್ತ, "ಸ್ಟೈಲಿಶ್ ಸ್ಟ್ಯಾನ್ಲಿ, ಯು ವಿಲ್ ಬಿ ವೇಟಿಂಗ್ ಫಾರ್ ಎವ....ರ್ ಫಾರ್ ದಟ್ ಕುಲ್ಲಿ" ಎಂದೆ. ಅದಕ್ಕೆ ಆಂಗ್ಲೋ ಇಂಡೋ ಸ್ಟ್ಯಾನ್ಲಿಯು ಪಕ್ಕಾ ಉರಿಗೌಡನಾಗಿ, "ಲೇಯ್, ಓಗ್ಲಾ, ಬಿದ್ಕ ಓಗ್ಲ...ಬಂದ ಇವನೊಬ್ಬ ಇಂಗ್ಲಿಷ್ ಮಾತಾಡೋಕೆ!" ಎಂದು ನನ್ನ ಕೈಯಲ್ಲಿದ್ದ ಬಾಟಲಿ ಕಿತ್ತುಕೊಂಡು ಗಟಗಟನೆ ಕುಡಿದು ಬಾಟಲಿ ಕುಕ್ಕಿದ.

ನಾನು, "ಓಹ್!!!! ಎಂಗಿತ್ತಮ್ಮ?" ಎಂದೆ.

"ಟಕೀಲ ಇದ್ಹಂಗೆ ಇತ್ತು, ಓಗ್ಲಾ ಬಿದ್ಕಾ ಯು ಬ್ಲಡಿ ಬಗ್ಗರ್" ಎಂದ. ಅವತ್ತೇ ಮೊದಲು ನಾನು ಟಕೀಲ ಪದ ಕೇಳಿದ್ದು! ಆ ಪದ ಕೇಳಿದ್ದೇ ತಡ ನಾನು ಸ್ಟ್ಯಾನ್ಲಿಯನ್ನು ಯಾಮಾರಿಸಿ ಲಿಂಗಾಜಲ ಕುಡಿಸಿದ್ದನ್ನೂ ಮರೆತು ಬಾಯಿ ಬಿಟ್ಟುಕೊಂಡು "ಟಕೀಲ, ಟಕೀಲ" ಎಂದು ಉದ್ಗರಿಸಿದೆ. ಸ್ಟ್ಯಾನ್ಲಿ, "ಹೂಂ, ಟಕೀಲ" ಎಂದು ತನ್ನ ಲಿಂಗಾಜಲ ಖಾಲಿ ಮಾಡಲು ಹೋದ. ಅವನು ಅತ್ತ ಹೋದ ಮೇಲೆ ನಾನು ನನ್ನ ಸ್ನೇಹಿತರೂ ಕಣ್ಣು ಮಿಟುಕಿಸಿ ಲಿಂಗಾಜಲದ ಬಗ್ಗೆ ಈಗಲೇ ಸ್ಟ್ಯಾನ್ಲಿಗೆ ಹೇಳುವುದು ಬೇಡ ಎಂದು ಸುಮ್ಮನಾದೆವು.

ಆ ನಂತರ ಅದು ಹೇಗೋ ಸ್ಟ್ಯಾನ್ಲಿ ಆ ಸೆಮಿಸ್ಟರ್ ಪಾಸಾಗಿಬಿಟ್ಟ! ಅಷ್ಟೇ ಅಲ್ಲದೆ ಮುಂದಿನ ಎಲ್ಲಾ ಸೆಮಿಸ್ಟರ್ ಮುಗಿಸಿ ನನಗಿಂತ ಮೊದಲೇ ಸಪ್ತ ಸಾಗರದಾಚೆಯ ಅಮೆರಿಕಕ್ಕೂ ಹಾರಿಬಿಟ್ಟ.

ಹಾರುವ ಒಂದು ವಾರ ಮೊದಲು ನಮಗೆಲ್ಲಾ ಬ್ರಿಗೇಡ್ ರೋಡ್ ಸಂದಿಯ ಗಜ್ಲರ್ಸ್ ಇನ್ನಿನಲ್ಲಿ ಭರಪೂರ ಬಿಯರ್ ಕುಡಿಸಿದ ಸ್ಟ್ಯಾನ್ಲಿಗೆ ಟಕೀಲಾ ರಹಸ್ಯ ತಿಳಿಸಿ, "ಅದನ್ನು ಕುಡಿದ ಮೇಲೆಯೇ ನೀನು ಉದ್ಧಾರ ಆದೆ ಮಗನೆ" ಎಂದೆ. ಅದಕ್ಕೆ ಸ್ಟ್ಯಾನ್ಲಿ, "ಲೋ ಮುಂಚೆನೇ ಕುಡಿಸಿದ್ರೆ ಎಲ್ಲೋ ಇರ್ತಿದ್ದೆನಲ್ಲೋ ಬ್ಲಡಿ ಬಗ್ಗರ್" ಎಂದು ನಸು ನಕ್ಕ.

"ಬಗ್ಗರ್ ಅಲ್ಲ ಕಣ್ಲಾ, ಬೆಗ್ಗರ್ ನಾನು. ಬಿಲ್ ಕಕ್ಕಿ ನಡಿ" ಎಂದೆ.

ಸ್ಟ್ಯಾನ್ಲಿ, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮೂಗುತಿ" ಎಂದು ತನ್ನ ವರಾತ ಹಾಡುತ್ತ ಬಿಲ್ ನೋಡಿ, "ದಿಸ್ ಈಸ್ ನಥಿಂಗ್" ಎಂದು ಬಿಲ್ ಕಕ್ಕಿದ.

ಈಗ ಸ್ಟ್ಯಾನ್ಲಿ ಎಲ್ಲಿದ್ದಾನೋ ಗೊತ್ತಿಲ್ಲ. ಸ್ಯಾಚೆಟ್ ಪಾನೀಯ ಇಲ್ಲ ಆದರೆ ಮಮತಾ ಮಿಲ್ಟ್ರಿ ಹೋಟೆಲ್ ಮಾತ್ರ ಹಾಗೆಯೇ ಇದೆ.

ವಿ. ಸೂ: ಸಿನೆಮಾ ಗೀತೆ, ದಾಸ ಸಾಹಿತ್ಯ ತಿರುಚಿದ ಎಂಬ ಶಿಶುಸೃಜನ ಕ್ಲೇಮುಗಳನ್ನು ಟಿಶ್ಯೂ ಪೇಪರ್ರಿನಂತೆ ಬಳಸಲಾಗುವುದು.

ಮೇಲ್ವರ್ಗದ ಜನರೇಕೆ ವಲಸೆ ಹೋಗುತ್ತಿದ್ದಾರೆ?

 ಮೇಲ್ವರ್ಗದ ಜನರೇಕೆ ವಲಸೆ ಹೋಗುತ್ತಿದ್ದಾರೆ? ಎಂಬ ಪ್ರಶ್ನೆ ತುಂಬಾ ಗಹನವಾದದ್ದು. 


ಈ ವರ್ಗ ಭೇದವನ್ನು ಬದಿಗಿಟ್ಟು ನೋಡಿದಾಗಲೂ ಮಾನವ ಸಹಜವಾಗಿ ಅಲೆಮಾರಿ. ಮಾನವ ವಿಕಾಸ ಪಥದಲ್ಲಿ ಆಹಾರ ಹುಡುಕುತ್ತಾ ವಲಸೆ ಆರಂಭಿಸಿದ ಆದಿಮಾನವ ಇಂದು ಹೊಸ ಹೊಸ ಅವಕಾಶಗಳನ್ನು, ಉತ್ತಮ ಭವಿಷ್ಯ, ಭದ್ರತೆ, ತನ್ನ ಆಲೋಚನಾ ಕ್ರಮಕ್ಕೆ ಪೂರಕ ವಾತಾವರಣಗಳನ್ನು ಹುಡುಕುತ್ತಾ ವಲಸೆ ಹೋಗುತ್ತಿದ್ದಾನೆ. ಒಂದೊಮ್ಮೆಯ ವಲಸಿಗರ ತಾಣವಾಗಿದ್ದ ಭಾರತ ಪೂರ್ವ ಆಫ್ರಿಕಾದ ಆದಿ ವಲಸೆಗಾರರನ್ನು, ನಂತರ ಆರ್ಯರನ್ನು ಆಕರ್ಷಿಸಿ ಅಂದಿನ ವಲಸಿಗರ ಸ್ವರ್ಗ ಎನಿಸಿತ್ತು. ಇಂತಹ ಸ್ವರ್ಗಸದೃಶ ಭಾರತವು ಕಾಲಾಂತರದಲ್ಲಿ ಅಯೋಮಯಗೊಂಡು ಕಳೆದ ಅರ್ಧ ಶತಮಾನದಿಂದ ಇತ್ತೀಚೆಗೆ ತನ್ನ ನಾಗರಿಕರು ವಿದೇಶಗಳೆಡೆ ಹೆಚ್ಚು ಹೆಚ್ಚು 

ಮುಖ ಮಾಡುವಂತೆ ಮಾಡಿದೆ.


ಇದರ ಆರಂಭ ಬ್ರಿಟಿಷ್ ಭಾರತದ ಮೇಲ್ವರ್ಗದ ಜನ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಲು ಆರಂಭಗೊಂಡ ದಿನಗಳಿಂದ ಎಂದರೂ  ಅದು ವಲಸೆಯ ರೂಪ ಪಡೆದಿರಲಿಲ್ಲ. ಆದರೆ ಸ್ವತಂತ್ರ ಭಾರತದ ಎಪ್ಪತ್ತರ ದಶಕದಲ್ಲಿ ಭಾರತೀಯ ಡಾಕ್ಟರರುಗಳಲ್ಲದೆ ಸಾಕಷ್ಟು ಕುಶಲಕರ್ಮಿಗಳು ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲದೆ ಇರಾನ್, ಇರಾಕ್, ಸೌದಿ, ಮುಕ್ತ ಮಾರುಕಟ್ಟೆಯ ಸಿಂಗಪೂರ್, ದುಬೈಗಳಲ್ಲದೆ ಆಫ್ರಿಕಾ ರಾಷ್ಟ್ರಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋದರು. ಅಂದು ಅವರೆಲ್ಲರ ಉದ್ದೇಶ, ಕೇವಲ ಹಣವಾಗಿತ್ತು. ಕಡಿಮೆ ಸಮಯದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿ ಭಾರತಕ್ಕೆ ವಾಪಸ್ಸಾಗಿ ಸುಭದ್ರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಏಕೈಕ ಮಹದಾಸೆ ಅವರುಗಳದಾಗಿತ್ತು. ಇಂತಹ ಉದ್ದೇಶದಿಂದ ವಲಸೆ ಹೋದ ಸಾಕಷ್ಟು ವಲಸಿಗರು ತಮ್ಮ ಆಕಾಂಕ್ಷೆಯ ಗುರಿ ಮುಟ್ಟಿದ ನಂತರ ಭಾರತಕ್ಕೆ ವಾಪಸ್ಸಾದರು ಸಹ. ಹಾಗೆ ವಾಪಸ್ಸಾದವರಲ್ಲಿ ಹೆಚ್ಚಿನವರು ಇರಾನ್, ಇರಾಕ್, ಸೌದಿ ಮತ್ತು ಆಫ್ರಿಕಾ ದೇಶಗಳಿಗೆ ವಲಸೆ ಹೋದವರು. ಇನ್ನು ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳಿಗೆ ವಲಸೆ ಹೋದ ಸಾಕಷ್ಟು ಜನ ಅಲ್ಲಿಯೇ ನೆಲೆ ನಿಂತರು ಮತ್ತು ಕೆಲವರು ಭಾರತಕ್ಕೆ ಮರಳಿದರು.


ಅವರು ದೇಶ ತೊರೆದದ್ದು ಕೇವಲ ಮತ್ತು ಕೇವಲ ಹಣ ಸಂಪಾದನೆಗಾಗಿಯಾದರೂ ಅವರಲ್ಲಿ ವಾಪಸ್ಸಾದದ್ದು ಮತ್ತು ಅಲ್ಲಿಯೇ ನೆಲೆ ನಿಂತದ್ದು ಸುಭದ್ರ ನಾಗರಿಕ ಸ್ವಾತಂತ್ರ್ಯ, ಸಾಮಾಜಿಕ ವ್ಯವಸ್ಥೆ, ಮಾನವ ಹಕ್ಕುಗಳ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು ಸಾಮಾಜಿಕ ನೆಮ್ಮದಿಯ ಆಕರ್ಷಣೆ ಹಿನ್ನೆಲೆಯಾಗಿತ್ತು. ಈ ಆಯ್ಕೆಗಳು ಎಲ್ಲಿದ್ದವೋ ಅಂತಹ ರಾಷ್ಟ್ರಗಳಲ್ಲಿ ನೆಲೆ ನಿಂತರು ಅಥವಾ ಭಾರತಕ್ಕೆ ವಾಪಸ್ಸಾದರು. ಕೆಲವರು ಭಾವುಕರಾಗಿ ಸಹ ಭಾರತಕ್ಕೆ ವಾಪಸ್ಸಾದದ್ದು ಇದೆ.


ಮೇಲಿನ ನಿಯಮದಂತೆ ಈ ಹಣ ಸಂಪಾದನೆಯೇ ಪ್ರಮುಖವಾಗಿ ತೊಂಭತ್ತರ ದಶಕದ ಕೊನೆಯವರೆಗೆ ಭಾರತೀಯರು ವಲಸೆ ಹೋಗುತ್ತಲೇ ಇದ್ದರು, ಕೆಲವರು ಹೋದ ಕಡೆ ನೆಲೆ ನಿಲ್ಲುತ್ತಿದ್ದರು, ಕೆಲವರು ವಾಪಸ್ಸಾಗುತ್ತಿದ್ದರು. ಆದರೆ ಇಪ್ಪತ್ತೊಂದನೇ ಶತಮಾನದ ಹೊರಳಿನೊಂದಿಗೆ ಹಣಕ್ಕಾಗಿ ಬರುತ್ತಿದ್ದ ಭಾರತೀಯ ವಲಸೆಗಾರರು ಉತ್ತಮ ಜೀವನ, ಉದಾರತೆ, ನಾಗರಿಕ ಸಂಹಿತೆ, ಮಾನವ ಹಕ್ಕು, ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಾ ಪುರಸ್ಕಾರ ಮುಂತಾದ ಜನಪರ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಬಯಸಿ ಬರಲಾರಂಭಿಸಿದರು. ಈ ಹೊರಳಿಗೆ ಕಾರಣಗಳೇನು?


ನಾನೂ ಸಹ ತೊಂಬತ್ತರ ದಶಕದ ಮಧ್ಯದಲ್ಲಿ ಹಣ ಸಂಪಾದನೆಯ ಗುರಿಯಾಗಿ ಅಮೇರಿಕಾಕ್ಕೆ ವಲಸೆ ಬಂದೆ. ನನ್ನಂತೆಯೇ ಸಾಕಷ್ಟು ಜನ ರಷ್ಯಾ, ಚೈನಾ, ಕ್ಯೂಬಾ, ಇರಾನ್, ಇಥಿಯೋಪಿಯಾ ಮುಂತಾದ ಹಲವಾರು ರಾಷ್ಟ್ರಗಳಿಂದ ಅಮೇರಿಕೆಗೆ ವಲಸೆ ಬಂದಿದ್ದರು. ಅವರೆಲ್ಲರನ್ನೂ ನಾನು ನನ್ನಂತೆಯೇ ಹಣಕ್ಕಾಗಿ ಬಂದವರೆಂದುಕೊಂಡಿದ್ದೆ.  ಕ್ರಮೇಣ ತಿಳಿದದ್ದು ಅವರು ಹಣಕ್ಕಲ್ಲದೆ ಉತ್ತಮ ಸಾಮಾಜಿಕ ವ್ಯವಸ್ಥೆ, ಸ್ವಾತಂತ್ರ್ಯ, ಮಾನವ ಹಕ್ಕುಗಳ ರಕ್ಷಣೆ ಬಯಸಿ ಅಂದರೆ ಜೀವನಕ್ಕಾಗಿ ಬಂದಿದ್ದವರು ಎಂದು! ಆಗ ನನಗೆ ಹಣ-ಜೀವನಗಳ ನಡುವಿನ ವ್ಯತ್ಯಾಸವನ್ನು ಬಹುಪಾಲು ಕಮ್ಯುನಿಸ್ಟ್ ರಾಷ್ಟ್ರಗಳಾದ ಚೈನಾ, ರಷ್ಯಾ ಮತ್ತು ಕ್ಯೂಬಾಗಳಿಂದಲೂ ಮತ್ತು ಇರಾನಿನಂತಹ ಫತ್ವಾ ರಾಷ್ಟವಲ್ಲದೇ ಇರಾಕ್ ಮತ್ತಿತರೆ ಸರ್ವಾಧಿಕಾರಿಗಳ ರಾಷ್ಟ್ರಗಳಿಂದ ಬಂದ ಜನರಿಂದ ತಿಳಿಯಲಾರಂಭಿಸಿ ವಿವಿಧ ಆಡಳಿತ ವ್ಯವಸ್ಥೆಗಳಿಂದುಂಟಾಗುವ ಸಾಮಾಜಿಕ ಪಲ್ಲಟ "ಹೀಗೂ ಉಂಟೆ" ಎಂದು ಸೋಜಿಗವನ್ನುಂಟುಮಾಡಿತು. ಆ ದೇಶಗಳಿಂದ ಬಂದಿದ್ದ ನನ್ನ ಅನೇಕ ಮಿತ್ರರು ನಿನಗೆ ಕ್ರಮೇಣ ಜೀವನದ ಈ ಅರಿವು ಮೂಡಿ ಕೇವಲ ಆರ್ಥಿಕತೆಯಲ್ಲದೆ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತುರ್ತಿನ ಅರಿವಾಗುತ್ತದೆ, ಆಗ ಮಾತನಾಡೋಣ ಎನ್ನುತ್ತಿದ್ದರು. ಹುಟ್ಟಿದ ರಾಷ್ಟ್ರಕ್ಕೆ ಮತ್ತೆಂದೂ ಕಾಲಿಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ಕೈಗೊಂಡಿದ್ದ ಇವರ ನಡೆ ನನಗೆ ಸಹಜವಾಗಿ ವಿಸ್ಮಯ ಮೂಡಿಸಿತ್ತು.


ಅಂತಹ ಪರಿಸ್ಥಿತಿ ನನ್ನ ಭಾರತಕ್ಕೆ ಎಂದೂ ಬಾರದು ಎಂದೇ ಬೀಗುತ್ತಿದ್ದೆ. ಆದರೆ ಅಂತಹ ವರ್ಷಗಳು ಭಾರತಕ್ಕೆ ಬಂದೇ ಬಿಟ್ಟಿವೆ.


ಇದರ ಪ್ರಪ್ರಥಮ ಹೊಳಹು ಕೊಟ್ಟವರು ಸಾಹಿತಿ ದಿವಂಗತ ಯು. ಆರ್. ಅನಂತಮೂರ್ತಿಯವರು! ಹೀಗೆಂದಾಗ ಸಹಜವಾಗಿ ಅವರ ಇತ್ತೀಚಿನ "ಮೋದಿ ಗೆದ್ದರೆ ರಾಷ್ಟ್ರ ಬಿಡುತ್ತೇನೆ" ಎಂಬ ಮಾತುಗಳು ನೆನಪಿಗೆ ಬರಬಹುದು. ಆದರೆ ಅವರು ಈ ಹೊಳಹನ್ನು ಕೊಟ್ಟದ್ದು  "ವಿಪಿ ಸಿಂಗ್ ಅವರು ತಂದಿದ್ದ ಮೀಸಲಾತಿ ನೀತಿಯಿಂದ ಯುವಜನಾಂಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ನಾನು ದೇಶ ತೊರೆದೆ" ಎಂದದ್ದು ಎಂದು ಜ್ಞಾಪಿಸಬೇಕಾಗುತ್ತದೆ. 


ಅನಂತಮೂರ್ತಿಯವರು ದೇಶ ಬಿಟ್ಟಿದ್ದ ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರ "ಓಲೈಕೆ"ಯ ಕಾಲದಿಂದ ಇತ್ತೀಚೆಗೆ ಅವರು ದೇಶ ಬಿಡುತ್ತೇನೆ ಎಂದಿದ್ದ ಪ್ರಧಾನಿ ಮೋದಿಯವರ "ಉತ್ಪ್ರೇಕ್ಷೆ"ಯ ಕಾಲಮಾನದ ನಡುವೆ ಉಂಟಾದ ಭಾರತೀಯ ಸಾಮಾಜಿಕ ಪಲ್ಲಟವು ಮೇಲ್ವರ್ಗವಲ್ಲದೆ ಅವಕಾಶ ಸಿಕ್ಕರೆ ಪ್ರತಿಯೊಬ್ಬ ಪ್ರಾಮಾಣಿಕ ಶ್ರೀಸಾಮಾನ್ಯ ನಾಗರಿಕನೂ ವಲಸೆಯತ್ತ ಒಂದು ನೋಟ ಹರಿಸುವಂತೆ ಮಾಡಿದೆ.


ಅತಿಯಾದ ಓಲೈಕೆ ಮತ್ತು ಉತ್ಪ್ರೇಕ್ಷೆಗಳ ಅಮಲಿನ ನಡುವೆ ಮಿತಿ ಮೀರುತ್ತಿರುವ ಭ್ರಷ್ಟಾಚಾರ, ಜಾತಿ ಪ್ರೌಢಿಮೆ/ರಾಜಕಾರಣ, ಧಾರ್ಮಿಕ ಅಸಹಿಷ್ಣುತೆ, ಜನಾಂಗೀಯ ತಾರತಮ್ಯ, ಮಾನವ ಹಕ್ಕುಗಳ ಉಲ್ಲಂಘನೆ, ನೈತಿಕ ಪೊಲೀಸ್ ಗಿರಿ, "ಮೀಸಲಾತಿ" ಮುಂತಾದ ಸಾಮಾಜಿಕ ಪಿಡುಗುಗಳು ನವ್ಯ ತಂತ್ರಜ್ಞಾನವನ್ನೂ ಬಳಸಿಕೊಂಡು ಹರಡುತ್ತಿರುವ ವೇಗ ಅತ್ಯಂತ ಕಳವಳಕಾರಿ. 


ಹಾಗಾಗಿಯೇ ಒಂದೊಮ್ಮೆ ಹಣ ಅಥವಾ ಪ್ರತಿಷ್ಟೆಗಾಗಿ ಮಾತ್ರ ಹೊರದೇಶಗಳಿಗೆ ವಲಸೆ ಹೋಗುತ್ತಿದ್ದ ಭಾರತೀಯರು ಇಂದು ಸರ್ವಾಧಿಕಾರಿ, ಕಮ್ಯುನಿಸ್ಟ್, ಧಾರ್ಮಿಕ ದೇಶಗಳಲ್ಲಿ ನಲುಗಿದ್ದ ಉದಾರವಾದಿ ಜೀವಪರ ಜನರಂತೆಯೇ ಮುಕ್ತ ಜೀವನವನ್ನು ಬಯಸಿ ಅಮೇರಿಕ ಅಲ್ಲದೆ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಯುರೋಪ್ ರಾಷ್ಟ್ರಗಳಿಗೆ ವಲಸೆ ಬರುತ್ತಿದ್ದಾರೆ. ಪ್ರತಿಷ್ಠೆ ಮತ್ತು ಹಣ ಈಗ ಗೌಣ! ಏಕೆಂದರೆ ಹಣ ಭಾರತದಲ್ಲಿ ಸಾಕಷ್ಟಿದೆ. ನಾನು ಭಾರತ ಬಿಟ್ಟಾಗ ಒಬ್ಬ ಸರ್ಕಾರಿ ಇಂಜಿನಿಯರನಿಗೆ ಮೂರೂವರೆ ಸಾವಿರ ಸಂಬಳವಿರುತ್ತಿತ್ತು. ಅದು ಈಗ ಮೂರೂವರೆ ಲಕ್ಷವಾಗಿದೆ. ಸಾಮಾಜಿಕ ನ್ಯಾಯಕ್ಕೆ ಮೀಸಲಾತಿ ಎಷ್ಟೇ ಅವಶ್ಯಕವೆಂದರೂ ಅದು ಸಹ ಈ ವಲಸೆಗೆ ಸಾಕಷ್ಟು ಕಾರಣೀಭೂತವಾಗಿದೆ ಎಂಬ ನಿಷ್ಠುರ ಸತ್ಯವನ್ನು ಹೇಳಲೇಬೇಕಾಗಿದೆ.


ಇರಲಿ, ಈ ಭಾರತೀಯ ವಲಸೆಯ ಪಲ್ಲಟವನ್ನು ನನ್ನ ಸಹಪಾಠಿಯೋರ್ವನ ಒಂದು ತಲೆಮಾರಿನಲ್ಲಿ ನಾನು ಸ್ಪಷ್ಟವಾಗಿ ಕಂಡುಕೊಂಡಿದ್ದೇನೆ, ಅದನ್ನೇ ಇಲ್ಲಿ ಕಟ್ಟಿಕೊಡುತ್ತೇನೆ:


ಆಂಧ್ರಪ್ರದೇಶದ ನನ್ನ ಸಹಪಾಠಿಯೊಬ್ಬ ನನ್ನಂತೆಯೇ ನನ್ನೊಟ್ಟಿಗೆ ಅಮೇರಿಕೆಗೆ ವಲಸೆ ಬಂದಿದ್ದ. ಹಣಕಾಸಿನಲ್ಲಿ ಸಬಲನಾಗಿದ್ದ ಅವನ ವಲಸೆಗೆ ಹಣಕ್ಕಿಂತ ವಿದೇಶಿ ಅನುಭವ ಮತ್ತು ಪ್ರತಿಷ್ಠೆ ಕಾರಣವಾಗಿತ್ತು. ಇಲ್ಲಿ ಎರಡು ವರ್ಷವಿದ್ದು ನಂತರ ಹೈದರಾಬಾದಿಗೆ ತೆರಳಿ ತನ್ನದೇ ಆದ ಸಾಫ಼್ಟ್ವೇರ್ ಕಂಪೆನಿ ತೆರೆದ. ಅವನು ಇಲ್ಲಿದ್ದ ಆ ಎರಡು ವರ್ಷಗಳಲ್ಲಿ ಅವನ ಮದುವೆಯಾಗಿ ಒಬ್ಬ ಮಗಳೂ ಹುಟ್ಟಿದ್ದಳು. 


ನನ್ನ ಆರ್ಥಿಕ ಪರಿಸ್ಥಿತಿಯ ಕಾರಣ ನಾನು ಅಮೆರಿಕೆಯಲ್ಲಿಯೇ ಉಳಿದಿದ್ದೆ. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲುಂಟಾದ ರಿಯಲ್ ಎಸ್ಟೇಟ್ ಆಸ್ಫೋಟದಲ್ಲಿ ಸಾಕಷ್ಟು ಹಣ ಅವನಿಗೆ ಸಲೀಸಾಗಿ ಹರಿದು ಬಂದಿತು. ತನ್ನ ವ್ಯಾಪಾರಕ್ಕಿಂತಲೂ ತನ್ನ ಪೂರ್ವಜರ ಆಸ್ತಿಯಿಂದಲೇ ಸಾಕಷ್ಟು ಹಣ ಅವನನ್ನು ಸೇರಿತ್ತು. ಆ ಆಸ್ಫೋಟದಿಂದಾಗಿ ಭಾರತದಲ್ಲಿ ಮನೆಯನ್ನು ಕೊಳ್ಳುವುದು ಅತ್ಯಂತ ದುಬಾರಿ ಎನ್ನಿಸಿ ನಾನು ಶಾಶ್ವತವಾಗಿ ಅಮೇರಿಕೆಯಲ್ಲೇ ಉಳಿದುಬಿಟ್ಟೆ.


ಆದರೆ ನನ್ನ ಅದೇ ಸ್ನೇಹಿತನ ಮಗಳು ಇಂಜಿನಿಯರಿಂಗ್ ಮುಗಿಸಿ ಹುಟ್ಟಿನ ಕಾರಣ ಅಮೇರಿಕನ್ ಆಗಿದ್ದುದರಿಂದ ಸಲೀಸಾಗಿ ಅಮೇರಿಕೆಗೆ ಬಂದು ಕೆಲಸ ಹಿಡಿದು ಇಂದು ತನ್ನ ಇಪ್ಪತ್ನಾಲ್ಕನೆ ವಯಸ್ಸಿಗೆ ಸ್ಯಾನ್ ಆಂಟೋನಿಯೊದಲ್ಲಿ ಮನೆ ಕೊಂಡಳು. ಆ ಯುವತಿಯ ಅಭಿಪ್ರಾಯದಂತೆ ಭಾರತದಲ್ಲಿ ಈಗ ಎಲ್ಲವೂ ದುಬಾರಿಯಲ್ಲದೆ ಅಷ್ಟು ಬೆಲೆ ತೆತ್ತರೂ ಅದಕ್ಕೆ ಬೆಲೆಯಿಲ್ಲ, ತಕ್ಕ ವ್ಯವಸ್ಥೆಯಿಲ್ಲ. ಎಲ್ಲಾ ರೀತಿಯ

ಭ್ರಷ್ಟಾಚಾರಗಳ ನಡುವೆ ಹೊಂದಿಕೊಂಡು ಬಾಳುವುದು ಸಹ  ಭ್ರಷ್ಟಾಚಾರದ ಬಾಳು ಎಂದೇ ಅಭಿಪ್ರಾಯ ವ್ಯಕ್ತಪಡಿಸಿದಳು. ಈಗ ಅವಳ ಮದುವೆ ನಡೆಯಲಿದೆ. ಅವಳ ಭಾವೀಪತಿ ಸಹ ನನ್ನ ಇನ್ನೋರ್ವ ಶ್ರೀಮಂತ ಸ್ನೇಹಿತನ ಏಕ ಮಾತ್ರ ಪುತ್ರ. ಆಂಧ್ರಪ್ರದೇಶದಲ್ಲಿ ಆರು ಕಾರ್ ಶೋರೂಂ ಹೊಂದಿದ್ದರೂ ಅದೆಲ್ಲವನ್ನೂ ತೊರೆದು ಅಮೆರಿಕೆಗೆ ವಲಸೆ ಬರುತ್ತಿದ್ದಾನೆ. ಕಾರಣ, ಆಂಧ್ರಪ್ರದೇಶದ ಮಿತಿ ಮೀರಿದ ಜಾತಿ ರಾಜಕಾರಣ! ಕಮ್ಮಾ ಜನಾಂಗದ ಉದ್ಯಮಿಗಳಿಗೆ ರೆಡ್ಡಿ ಜಾತಿ ಮುಖ್ಯಮಂತ್ರಿಯ ಅತೀವ ಕಿರುಕುಳವನ್ನು ಭರಿಸಲಾಗದೆ ನನ್ನ ಉದ್ಯಮಿ ಮಿತ್ರ ತನ್ನ ಏಕಮಾತ್ರ ಪುತ್ರನನ್ನು ಅಮೆರಿಕಾ ಮಡಿಲಿಗೆ ಹಾಕುತ್ತಿದ್ದಾನೆ. ಭ್ರಷ್ಟಾಚಾರದ ಜೊತೆ ಜಂಜಾಡಿ ವೈಭವೋಪೇತ ಭ್ರಷ್ಟ ಜೀವನ ನಡೆಸುವುದಕ್ಕಿಂತ ಮುಕ್ತ ವಾತಾವರಣದಲ್ಲಿ ಸರಳ ಸ್ವಚ್ಛ ಬಾಳು ಕಂಡುಕೊಳ್ಳಲಿ ಎಂಬುದು ಅವನ ಆಕಾಂಕ್ಷೆ. 

ಇಂತಹ ತಲೆಮಾರು ಹೊರಳ ಮದುವೆಗೆ ನನ್ನ ಮನೆ ಈಗ ವೇದಿಕೆಯಾಗಿದೆ.


ಹೀಗೆ ಆಂಧ್ರ ಅಲ್ಲದೇ ಗುಜರಾತ್, ಪಂಜಾಬ್, ಬಿಹಾರಗಳಿಂದ ಎಲ್ಲಾ ಧರ್ಮದ ಜನರೂ ಸಮಾನತೆ (ಮೀಸಲಾತಿಯಲ್ಲದ), ಭ್ರಷ್ಟಾಚಾರರಹಿತ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಾ ಪುರಸ್ಕಾರಗಳನ್ನರಸಿ ವಲಸೆ ಬರುತ್ತಿದ್ದಾರೆ.  ಸಮಾಜದಲ್ಲಿ ಸುಖವಾಗಿರುವ, ಉದ್ಯೋಗ ಸೃಷ್ಟಿಸಬಲ್ಲ, ವಿದ್ಯಾವಂತ, ಚಿಂತಕ, ಸೃಜನಶೀಲ, ಕುಶಲಕರ್ಮಿ ಮೇಲ್ವರ್ಗವೇ ಹೀಗೆ ವಲಸೆ ಹೋದರೆ.....!?!


ಇನ್ನು ಕೆಲವರು ಇಂದು ಭಾರತ ವಿಶ್ವಗುರುವಾಗಿದೆ, ಸಾಕಷ್ಟು ಎನ್ನಾರೈಗಳು ವಾಪಸ್ ಬರುತ್ತಿದ್ದಾರೆ, ಇತ್ಯಾದಿಯಾಗಿ ಹುಸಿ ದೇಶಾಭಿಮಾನದ ಮಾತುಗಳನ್ನು ಆಡಬಹುದು. ಆದರೆ  ಅವರೆಲ್ಲರೂ ಇಂದು ವಾಪಸ್ ಬರುತ್ತಿರುವುದು ತಮ್ಮ ಎಂದೋ ಕೊಂಡಿದ್ದ ಚಿಲ್ಲರೆ ಹಣದ ರಿಯಲ್ ಎಸ್ಟೇಟ್ ಆಸ್ತಿಯ ಉಬ್ಬರವನ್ನು ನಗದೀಕರಿಸಿ ಹಣವನ್ನು ವಾಪಸ್ ತೆಗೆದುಕೊಂಡುಹೋಗಲೋ, ತಮ್ಮ ಹೆಣ್ಣುಮಗು ಭಾರತೀಯ ಸಂಸ್ಕೃತಿಯಲ್ಲಿ ಬೆಳೆಯಲೆಂದೋ, ಅಥವಾ ಉಬ್ಬರಿಸಿದ ರಿಯಲ್ ಎಸ್ಟೇಟ್ ಹಣದಲ್ಲಿ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲೋ ಹೊರತು ಇನ್ಯಾವ ದೇಶಾಭಿಮಾನದಿಂದಲ್ಲ. ಓಟಿನ ಹಕ್ಕು ಇಲ್ಲದಿದ್ದರೂ ಅವರಲ್ಲಿ ಅನೇಕರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂತಹ ಪ್ರಕ್ಷೇಪ ಉದಾಹರಣೆಗಳಾಚೆ ನೋಡಿದಾಗ ಸಾಕಷ್ಟು ಮೇಲ್ವರ್ಗದ ಜನ ವಲಸೆಯತ್ತ ಮುಖ ಮಾಡಿ ನಿಂತಿದೆ.


ಆದರೆ ಇಪ್ಪತ್ತೈದು ವರ್ಷಗಳ ಹಿಂದೆ ಯಾವುದೋ ಸರ್ವಾಧಿಕಾರಿ, ಕಮ್ಯುನಿಸ್ಟ್, ಧಾರ್ಮಿಕ, ಅರಾಜಕತೆಯ ರಾಷ್ಟ್ರಗಳ ಜನರು ಉತ್ತಮ ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲೆಂದು ಅಮೇರಿಕಾದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ವಲಸೆ ಬರುತ್ತಿದ್ದದ್ದು ಇಂದು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎನಿಸಿಕೊಂಡ ಭಾರತದಂತಹ ರಾಷ್ಟ್ರದಿಂದ ಅಲ್ಲಿನ ನಾಗರಿಕರು ಸಾಮಾಜಿಕ ನ್ಯಾಯವನ್ನು ಬಯಸಿ, ಪ್ರಜಾಪ್ರಭುತ್ವವನ್ನು ಬಯಸಿ  ವಲಸೆ ಬರುತ್ತಿರುವುದು ಪ್ರಜಾಪ್ರಭುತ್ವದ ಅದರಲ್ಲೂ ಈ ಶತಮಾನದ ಬಹುದೊಡ್ಡ ದುರಂತ! 

ಜಂಗಮ ಪ್ರೌಢಿಮೆ

 ಭಾರತದಲ್ಲಿ ಹುಟ್ಟಿದ ಕಾರಣ, ಮತ್ತಲ್ಲಿ ಹುಟ್ಟಿನಿಂದ ಜಾತಿ ಜಾರಿ ಇರುವ ಕಾರಣ ನನಗೂ ಜನರು ಜಾತಿಯನ್ನು ಅಂಟಿಸಿದ್ದರು. ಅಲ್ಲದೆ ಇಂದು ಯಾರಿಗೆ ಜಾತಿನಿಂದನೆ ಕೇಸು ದಾಖಲಿಸುವ ಹಕ್ಕಿದೆಯೋ ಅವರಿಂದಾದಿಯಾಗಿ ಎಲ್ಲಾ ಜಾತಿಯವರಿಂದಲೂ ಜಾತಿನಿಂದನೆಯನ್ನು ನಾನು ಅನುಭವಿಸಿದ್ದೇನೆ. ಇಂತಹ ಜಾತಿನಿಂದನೆ ಕಾರಣವಾಗಿ ಜಾತಿಯನ್ನು ನಾಶ ಮಾಡಬೇಕೆಂಬ ಚಿಂತಕರ ಚಿಂತನೆಯನ್ನು ನಾನು ಪ್ರೌಢಶಾಲೆಯಲ್ಲಿದ್ದಾಗಲೇ ಗಾಢವಾಗಿ ಅಪ್ಪಿಕೊಂಡು ಕೊರಳಲ್ಲಿದ್ದ ಜಾತಿಸೂಚಕ ಚಿಹ್ನೆಯನ್ನು ಕಿತ್ತು ಗಿರಗಿರನೆ ತಿರುಗಿಸಿ ಎಸೆದಿದ್ದೇನೆ. ಅದಕ್ಕಾಗಿ ನಮ್ಮಪ್ಪನಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದರೂ ಅಂದು ಎಸೆದ ಆ ಚಿಹ್ನೆಯನ್ನು ಈವರೆಗೆ ಧರಿಸಿಲ್ಲ.

"ಓ ನನ್ನ ಚೇತನ ಆಗು ನೀ ಅನಿಕೇತನ" ಎಂಬ ವಿಶ್ವಮಾನವ ಪ್ರಜ್ಞೆಗೆ ಅನುಗುಣವಾಗಿ ಅಮೇರಿಕಾದಲ್ಲಿರುವ ಯಾವುದೇ ಭಾಷೆ, ಜಾತಿ, ಧಾರ್ಮಿಕ ಸಂಘಗಳ ಸದಸ್ಯತ್ವವನ್ನು ತೆಗೆದುಕೊಂಡಿಲ್ಲ. ಸಾಹಿತ್ಯಿಕ ಆಸಕ್ತಿ ಇದ್ದರೂ ಇಲ್ಲಿನ ಕನ್ನಡ ಸಾಹಿತ್ಯ ರಂಗ ಎನ್ನುವ ಸಾಹಿತ್ಯಿಕ(?) ಗುಂಪನ್ನೂ ಸೇರಿಲ್ಲ. ಒಂದೆರಡು ಸಂಘಗಳ ಕಾರ್ಯಕ್ರಮಗಳಿಗೆ ಮನರಂಜನೆಗಾಗಿ ಹೋಗಿದ್ದೇನಷ್ಟೇ.

ಇನ್ನು ಯಾವುದೇ ಮಾಧ್ಯಮದಲ್ಲಿ ಈವರೆಗೆ ನಾನು ಹುಟ್ಟಿದ ಜಾತಿಯ ಕುರಿತಾಗಿ ಯಾವುದೇ ಸಕಾರಾತ್ಮಕ ಭಾವನೆಯ ಬರಹ, ಪೋಸ್ಟ್ ಹಾಕಿಲ್ಲ. ಹಿಂದೆ ಒಬ್ಬರು ನನ್ನ ಹುಟ್ಟಿನ ಜಾತಿಯನ್ನು ಹೆಕ್ಕಿ ನನ್ನ ಪುಸ್ತಕಕ್ಕೆ ಖ್ಯಾತನಾಮರು ಬರೆದ ಮುನ್ನುಡಿ ಅವರು ಬರೆದದ್ದಲ್ಲ ಎಂದು ಹಬ್ಬಿಸಿದಾಗ, ಹೌದು ನಾನೊಬ್ಬ ಕಾಳಾಮುಖ ಜಂಗಮ. ನನ್ನ ಪುಸ್ತಕದ ಮುನ್ನುಡಿಯನ್ನು ಆ ಖ್ಯಾತನಾಮರು ಬರೆದಿಲ್ಲ ಎಂದು ಪುರಾವೆ ಸಮೇತ ಸಾಬೀತು ಮಾಡಿದರೆ ನಾನು ನನ್ನ ಲಿಂಗರೂಪಿ ಅಂಗವನ್ನು ಕತ್ತರಿಸಿಕೊಳ್ಳುವೆ. ತಪ್ಪಿದರೆ ನೀವು ಕತ್ತರಿಸಿಕೊಳ್ಳುವಿರಾ? ಎಂದು ಕಾಳಾಮುಖರಂತೆ ಸವಾಲು ಹಾಕಿದ್ದು ಬಿಟ್ಟರೆ ಮತ್ತೆಂದೂ ಆ ಕುರಿತು ಬರೆದಿಲ್ಲ.

ನಾನು ಬರೆಯಲು ಆರಂಭಿಸಿದ ನಂತರ ಪರಿಚಿತರಾದ

ಭಾರತದ ಅನೇಕ ಉದಾರವಾದಿ, ಪ್ರಗತಿಪರ ಸ್ನೇಹಿತೆ/ತರು ನನ್ನ ಹುಟ್ಟಿನ ಜಾತಿಯ ಹುಡುಕಿ ತೆಗೆದು ನನ್ನನ್ನು ಜಾತಿ ಹಿಡಿದು ನಾಜೂಕಾಗಿ ಆಗಾಗ್ಗೆ ನಿಂದಿಸುತ್ತಲೇ ಇದ್ದಾರೆ. ಮೊನ್ನೆ ಸಹ ಇಂತಹದೇ ಉದಾರಜೀವಿ ಆಲಿಬಾಬಾ ಸ್ನೇಹಿತ ತನ್ನ ೪೦ ಚೋರರನ್ನು ಒಗ್ಗೂಡಿಸಿ ಜಾತಿನಿಂದನೆ ಮಾಡಿದ್ದ.

ಇತ್ತೀಚೆಗೆ ಏನನ್ನಾದರೂ ತಾರ್ಕಿಕವಾಗಿ ಪ್ರಶ್ನಿಸಿದರೆ ಸಾಕು ಪಂಥೋಗ್ರರಂತೆ ಜಾತಿ ಮೂಲದ ವಂಶಾವಾಹಿಯನ್ನು ಜಾಲಾಡುವ ಉಗ್ರವಾದ ಎಲ್ಲೆಡೆ ಸಾಂಕ್ರಾಮಿಕವಾಗಿ ಹರಡುತ್ತಿದೆ.

ಭಾರತದಲ್ಲಿ ನನ್ನ ಹಿತಾಸಕ್ತಿ ವಿಷಯಗಳು (ಸ್ವಯಾರ್ಜಿತ ಮನೆ, ತೋಟ, ಇತ್ಯಾದಿ ಆಸ್ತಿಗಳು) ಇರುವ ಕಾರಣ, ಅಲ್ಲಿನ ಈ ನವವಾತಾವರಣಕ್ಕೆ ತಕ್ಕಂತೆ ನನ್ನ ಹುಟ್ಟಿನ ಜಾತಿಯ ಕುರಿತಾಗಿ ಭಾವನೆಗಳನ್ನು ಬೆಳೆಸಿಕೊಳ್ಳುವುದನ್ನು ಗತ್ಯಂತರವಾಗಿ ಭಾರತೀಯ ಸಾಂವಿಧಾನಿಕ ಸಮಾಜಕ್ಕಾಗಿ ನಾನು ಪಿತ್ರಾರ್ಜಿತವಾಗಿ ಹೇರಿಕೊಳ್ಳಬೇಕಿದೆ.

ಆ ಹೇರಿಕೆಯ ಕಾರಣವಾಗಿ ನನ್ನ ಹುಟ್ಟಿನ ಜಾತಿಯ ಬಗ್ಗೆ ನಾನು ಕಂಡುಕೊಂಡದ್ದು:

೧. ಕರ್ನಾಟಕ ಸಾಮ್ರಾಜ್ಯ ಸ್ಥಾಪನೆಗೆ ಪ್ರಮುಖ ಕೊಡುಗೆ ನೀಡಿದವರು ಕಾಳಾಮುಖ ಜಂಗಮರು ಯಾನೆ ವೀರಶೈವ ಜಂಗಮರು. ಜಂಗಮ ಕ್ರಿಯಾಶಕ್ತಿ ಕರ್ನಾಟಕ ಸಾಮ್ರಾಜ್ಯದ ರಾಜಗುರುವೂ ಆಗಿದ್ದ.

(Ref: Founders of Vijayanagara, S. Srikantaya)

೨. ಶೈವ ಪಂಥ ಪ್ರಸಾರಕ್ಕೆ ದೇಶಾದ್ಯಂತ ಕೇದಾರದಿಂದ ಶ್ರೀಶೈಲದವರೆಗೆ ಮಠಗಳನ್ನು ಕಟ್ಟಿದವರು ಜಂಗಮರು.

೩. ಪಂಥಕ್ಕೊಡ್ಡಿದ ಸವಾಲುಗಳಲ್ಲಿ ಕೈ, ಕಾಲು, ರುಂಡಗಳನ್ನು ಕಡಿದುಕೊಂಡು ಶೈವಪಂಥವನ್ನು ಬೆಳೆಸಿದವರು ಜಂಗಮರು.

೪. ದಕ್ಷಿಣಾಚಾರ ಎಂಬ ಕಲಾಪ್ರಕಾರವನ್ನು ಹುಟ್ಟುಹಾಕಿ ಕರ್ನಾಟಕದ ಶಿಲ್ಪಕಲೆಗೆ ಮಾನ್ಯತೆ ತಂದುಕೊಟ್ಟವರು ಇದೇ ಕಾಳಾಮುಖ ಜಂಗಮರು.

(ದಕ್ಷಿಣಾಚಾರವೇ ಅಪಭ್ರಂಶಗೊಂಡು ಜಕಣಾಚಾರವಾಗಿ ಮುಂದೆ ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿಯಾಗಿ ಈಗ ಆತನ ಹೆಸರಿನ ಜಯಂತಿ ಸಹ ಆಗಿದೆ).

೫. ಕಾಳಾಮುಖ ಜಂಗಮರ ಪ್ರಭಾವದಿಂದ ಸಾಮ್ರಾಜ್ಯ ವಿಸ್ತರಿಸಿದ ಚೋಳರು ತಮ್ಮ ಪ್ರಮುಖ ಯುದ್ಧದ ಹಡಗಿಗೆ ಕಾಳಾಮುಖ ಎಂದು ಹೆಸರಿಸಿ ಇವರನ್ನು ಆದರಿಸಿದ್ದರು.

೬. ಪಾಲ್ಕುರಿಕೆ ಸೋಮನಾಥ, ಹರಿಹರನ ಕಟ್ಟುಕಥೆಯ ಪುರಾಣ/ರಗಳೆಗಳಾಚೆ ಶಿಲಾಶಾಸನಗಳ ಪ್ರಕಾರ ಬಸವಣ್ಣ, ವೀರ ಮಾಹೇಶ್ವರ ಜಂಗಮ ಪುರುಷ.

(ಅರ್ಜುನವಾಡ ಶಿಲಾಶಾಸನ - ಮಧುರಚೆನ್ನ, ಮುನವಳ್ಳಿ ಶಿಲಾಶಾಸನ - David Lorenzen)

೭. ಅಲ್ಲಮಪ್ರಭು ತನ್ನನ್ನು ತಾನೇ "ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ..." ಎಂದು ಜಂಗಮರ ಕುರಿತಾದ ವಚನದಲ್ಲಿ ತಾನು ಜಂಗಮ ಎಂದು ಹೇಳಿಕೊಂಡಿದ್ದಾನೆ.

೮. ಮುಗಿದೇಹೋಯಿತು ಎನ್ನುವ ಕಾಲಘಟ್ಟದಲ್ಲಿ ಪಂಥವನ್ನು ಪ್ರವರ್ಧಮಾನಕ್ಕೆ ತಂದ ಎಡೆಯೂರು ಸಿದ್ದಲಿಂಗೇಶ್ವರರು ಜಂಗಮರು. ಬರಡು ಪ್ರದೇಶಕ್ಕೆ ತೆಂಗು ಪರಿಚಯಿಸಿ ತೋಂಟದಾರ್ಯ ಎಂದಾದವರು ನನ್ನ ವಂಶೀಭೂತರು.

.

.

.

.

ಪಟ್ಟಿ ಬಹುದೊಡ್ಡದಿದೆ!

ಆದರೆ ನನಗಾಗಲಿ ನನ್ನ ವಂಶೀವರ್ತಮಾನ, ವಂಶೀಭವಿಷ್ಯಕ್ಕಾಗಲಿ ಇದು ನಮ್ಮ ಪರಂಪರೆ ಎಂಬುದನ್ನು ಬಿಟ್ಟರೆ ಇನ್ಯಾವುದೇ "ವಿಶೇಷಣ"ಗಳ ಲಾಭವಿಲ್ಲ.

ಹಾಗಾಗಿ ಇದರಿಂದ ನನ್ನ ಕಾಲರ್ ಮೇಲಕ್ಕೇರುವುದೂ ಇಲ್ಲ, ಪ್ಯಾಂಟು ಉದುರುವುದೂ ಇಲ್ಲ!

ಆದರೆ ಇಂತಿಪ್ಪ ವೀರಮಾಹೇಶ್ವರ ಜಂಗಮರು ಬಲಿದಾನ ನೀಡಿ ಉಳಿಸಿ ಬೆಳೆಸಿದ ಪಂಥದ ಕೆಲವು ಅರಿವುಗೇಡಿ ಫಲಾನುಭವಿಗಳು ಈಗ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುವ ನಿರಾಧಾರಿ ಪಂಥೋಗ್ರರಾಗಿ, "ಜಂಗಮರು ಪಂಪೀಗಳು. ಅವರನ್ನು ಹೊರಹಾಕಿ. ಅವರಿಗೆ ಉದ್ಯೋಗ ಕೊಡಬೇಡಿ, ಅವರ ಬಳಿ ವ್ಯವಹಾರ ಮಾಡಬೇಡಿ, ಊರಲ್ಲಿ ಯಾವುದಕ್ಕೂ ಸೇರಿಸಬೇಡಿ. ಅವರನ್ನು ಬೆಳಿಗ್ಗೆ ಎದ್ದು ನೋಡಿದರೆ ದರಿದ್ರ ಅಂಟುತ್ತದೆ" ಎಂದೆಲ್ಲಾ ಜನಾಂಗೀಯ ನಿಂದನೆಯ ಪಿಂಪ್ ಪೀಪಿಯನ್ನು ಊದುತ್ತಿದ್ದಾರೆ. 

ಊಳಿಗಮಾನ ಪ್ರಜಾಪ್ರಭುತ್ವದ ಭಾರತೀಯ ಸಾಂವಿಧಾನಿಕ ಜಾತಿಸಂಕುಲೆಯಲ್ಲಿ ಸಿಲುಕಿ ಅಲ್ಲಿಯೇ ಒದ್ದಾಡಬೇಕಾದ ಸಾಮಾಜಿಕ, ಆರ್ಥಿಕ, ಸಾಂಖ್ಯಿಕ, ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಈ ಜನಕ್ಕೆ ಅವರ ಪರಂಪರೆಯನ್ನು ಪರಿಚಯಿಸಿದ್ದೇನೆ. ಹೋಗಿ ನೀವೂ ಕಾಲರ್ ಎತ್ತಿ, ಪ್ಯಾಂಟು ಉದುರಿಸಿ.

ಎತ್ತಿ ಉದುರಿಸುವ ಮುನ್ನ ನನ್ನ ವಂಶೀಭೂತ ಅಲ್ಲಮನ ವಯಾಗ್ರ ವಚನ ಪಂಥೋಗ್ರರಲ್ಲದೆ ಪಂಪೀಗಳೂ ಮರೆಯದೇ ನೆನಪಿಟ್ಟುಕೊಳ್ಳಿ.

ಆರುಹ ಪೂಜಿಸಲೆಂದು ಕುರುಹ ಕೊಟ್ಟೆಡೆ 

ಅರುಹ ಮರೆತು ಕುರುಹ ಪೂಜಿಸುವ 

ಹೆಡ್ಡರಾ ನೋಡಾ ಗುಹೇಶ್ವರ.

ಜಾತಿನಾಶ ಆಗುವುದಿಲ್ಲ, ಜನನಾಶ ಖಂಡಿತ! 

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಬಸವ ಜಯಂತಿ ೨೦೨೪

 ಅನ್ಯಾಯದ ವಿರುದ್ಧ ಜಗತ್ತಿನಾದ್ಯಂತ ಜನಸಾಮಾನ್ಯರು ಒಂದು ಕಾಲಘಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತದ್ದು ಧರ್ಮದ ಛಾಯೆಯಲ್ಲಿ! ಭಾರತ ಜನನಿಯ ಭಕ್ತಿಪಂಥವೂ, ತನುಜಾತೆ ಕರ್ನಾಟಕದ ವಚನ ಚಳುವಳಿಯೂ ಇದಕ್ಕೆ ಹೊರತಾಗಿರಲಿಲ್ಲ.

ಹಾಗಾಗಿಯೇ ಕಾರ್ಲ್ ಮಾರ್ಕ್ಸ್ ಹೇಳಿದ್ದು: "ಧರ್ಮ ಎಂಬುದು ಸಾಮಾನ್ಯರ ಅಫೀಮು. ಅದು ಭರವಸೆಯೇ ಇಲ್ಲದವರ ಭರವಸೆಯಾಗಿ, ಬೇಗುದಿಗರ ಬೇಗುದಿಯಾಗಿ, ಆತ್ಮಚೈತನ್ಯವಿಲ್ಲದವರ ಆತ್ಮವಾಗಿದೆ;

ಅದನ್ನು ನೀವು ಬದಲಿಸಬೇಕೆಂದು ಆಲೋಚಿಸುವುದಾದರೆ ಅದರ ಪರ್ಯಾಯವು ಸಹ ಜನರಿಗೆ ಧರ್ಮ ನೀಡಿರುವ ಭರವಸೆಯನ್ನೇ ನೀಡಬೇಕಾಗುತ್ತದೆ."

ಇಲ್ಲಿ ಇಲ್ಲದ ಆದರೆ ಇರಲೇಬೇಕಾದ ಎಚ್ಚರಿಕೆಯನ್ನು ನಾವು ಇತಿಹಾಸದಿಂದ ಕಲಿಯಬಹುದು! ಅದು, ಜನರ ಅಂತಹ ಭರವಸೆಗೆ ಕಿಂಚಿತ್ ಮುಕ್ಕಾದರೂ....ದಾರುಣ ಸೋಲು ಕಟ್ಟಿಟ್ಟ ಬುತ್ತಿ, ಎಂಬುದು.

ಇಂತಹ ಯಾವ ವಚನ ಚಳುವಳಿಯ ಪೂರ್ವಾರ್ಧದಲ್ಲಿ ಹಿರಿಯರನ್ನು, ಪುರಾತನರನ್ನು ವಚನಕಾರರು ಹಾಡಿ ಹೊಗಳಿದ್ದರೋ ಅದೇ ಹಿರಿಯರನ್ನು, ಪುರಾತನರನ್ನು ವಚನ ಚಳುವಳಿಯ ಉತ್ತರಾರ್ಧದಲ್ಲಿ ಭ್ರಮನಿರಸನಗೊಂಡು ಹೀನಾಯವಾಗಿ ಹೀಯಾಳಿಸಿದ್ದಾರೆ. ಅದೇ ರೀತಿ ಕಲ್ಯಾಣ ಕ್ರಾಂತಿಯ ನಂತರ ಕೂಡ ಬಸವಭ್ರಮನಿರಸನಗೊಂಡು ಮಾಚಿದೇವನಲ್ಲದೆ ಇನ್ನೂ ಹಲವು ವಚನಕಾರರು ಇಂತಹ ಕೆಲವು ವಚನಗಳನ್ನು ರಚಿಸಿದ್ದಾರೆ.

ಬಸವಾಧಿಪತ್ಯದಿಂದ ಬಸವಧಃಪತನದ ಸೋಪಾನುಪಾತವನ್ನು ಮಾಚಿದೇವನ ಈ ಎರಡು ವಚನಗಳು ಕಟ್ಟಿಕೊಡುತ್ತವೆ.

೧. 

ಅರಿದಲ್ಲದೆ ಗುರುವ ಕಾಣಬಾರದು.

ಅರಿದಲ್ಲದೆ ಲಿಂಗವ ಕಾಣಬಾರದು.

ಅರಿದಲ್ಲದೆ ಜಂಗಮವ ಕಾಣಬಾರದು.

ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ

ಎನಗೆ ಸ್ವಾಯತವಾಯಿತ್ತಾಗಿ,

ಭಿನ್ನವಿಲ್ಲ ಕಾಣಾ ಕಲಿದೇವರದೇವ.

೨.

ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ,

ಲಿಂಗವ ಕೊಟ್ಟು ಲಿಂಗದ್ರೋಹಿಯಾದ.

ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ.

ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ.

ಇಂತೀ ಹೊನ್ನ ಹಂದಿಯ ಕೊಂದು,

ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ,

ಕಲಿದೇವರದೇವ.

"ದ್ರೋಹಿಯಾದ", "ಮಹಾಪಾತಕಕ್ಕೊಳಗಾದ" ಎಂಬ ಏಕವಚನದ ಪದಗಳು ಇಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯ ಕುರಿತಾಗಿವೆ. 

ಕಾರ್ಲ್ ಮಾರ್ಕ್ಸ್ ಮಾತಿನ ಒಂದು ವಾಕ್ಯವನ್ನು ಮಾತ್ರ ಹೆಕ್ಕಿದ ಬುದ್ಧಿವಂತರಂತೆಯೇ ವಚನಗಳು ಸಹ ಅವರವರ ಅನುಕೂಲಕ್ಕೆ ಹೆಕ್ಕಲ್ಪಟ್ಟಿವೆ. 

ಇತಿ ಬಸವರಾಜಕಾರಣ ಸಂಪ್ರತಿ!

ರಜೆಯ ಮಜೆಯ ಶುಭಾಶಯಗಳು!

- ರವಿ ಹಂಜ್ 

ಕಮ್ಯೂನಿಸ್ಟ್ ನರಮೇಧ

 ಕಾರ್ಮಿಕ ಶಕ್ತಿಯನ್ನು ಬಳಸಿಕೊಂಡು ಅಧಿಕಾರ ಪಡೆದು ಸ್ಟಾಲಿನ್ ಸೃಷ್ಟಿಸಿದ ಹಾಲೋಡಮಾರ್ ಅಂತಹ ನರಮೇಧದಲ್ಲಿ ಸತ್ತವರು ಮೂರೂವರೆ ಕೋಟಿಯಿಂದ ಐದು ಕೋಟಿ. ಹಸಿವಿನಿಂದ ಜನ ಒಬ್ಬರನೊಬ್ಬರು ಕೊಂದು ತಿಂದ ನರಭಕ್ಷಕ ಘಟನೆಗಳ ಉದಾಹರಣೆಗಳು ಸಾಕಷ್ಟಿವೆ.


ಕಮ್ಯೂನಿಸ್ಟ್ ಮಾವೋ ನಡೆಸಿದ ಸಂಸ್ಕೃತಿ ಕ್ರಾಂತಿಯಲ್ಲಿ ನಾಲ್ಕೂವರೆ ಕೋಟಿಯಿಂದ ಏಳುವರೆ ಕೋಟಿ ಅಸಹಜ ಸಾವುಗಳಾಗಿವೆ.


ಅದೇ ಹಿಟ್ಲರ್ ನಡೆಸಿದ ನರಮೇಧದಲ್ಲಿ ಸತ್ತವರು ಅರವತ್ತು ಲಕ್ಷ. ಜರ್ಮನ್ನರು ಈಗಲೂ ತಾವು ಜರ್ಮನ್ ಆಗಿ ಹಿಟ್ಲರ್ ನರಮೇಧವನ್ನು ತಮ್ಮ ಪಾಪವೆಂದು ತಲೆ ಮೇಲೆ ಹೊತ್ತು ಪಾಪಪ್ರಜ್ಞೆ ತೋರುತ್ತಾರೆ.


ಆದರೆ ಫ್ಯಾಸಿಸ್ಟ್ ಗೋಬೆಲ್ಸ್ ನರಮೇಧಿ ಸ್ಟಾಲಿನ್, ಲೆನಿನ್ ಹೆಸರನ್ನು ತಮ್ಮ ಮಕ್ಕಳಿಗೆ ಹೆಸರಿಟ್ಟ ಭಾರತೀಯ ಕಮ್ಯೂನಿಸ್ಟರು ಇಂದು ಇಟ್ಟಿಗೆ ಹೊರುವ, ಗುದ್ದಲಿ ಹಿಡಿದ, ಸುತ್ತಿಗೆ ಎತ್ತಿದ ಕಾರ್ಮಿಕರ ಫೋಟೋ ಹಾಕಿ ಕಾಲರ್ ಎತ್ತಿ ಸಂಭ್ರಮಿಸುತ್ತಾರೆಯೇ ಹೊರತು ಎಂದಾದರೂ ಪಾಪಪ್ರಜ್ಞೆ ತೋರಿದ್ದಾರೆಯೇ?!?!


ಆಷಾಢಭೂತಿ ಕಮ್ಯೂನಿಸ್ಟರನ್ನು ಎಲ್ಲಿಡಬೇಕೋ ಅಲ್ಲಿಟ್ಟು ಕಾಯಕದಿನವನ್ನು ಆಚರಿಸೋಣ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಪ್ರಧಾನಿ ನಿವಾಸ, ಪರಪ್ಪನ ವಿಳಾಸ

 ಒಬ್ಬ ಸಾಮಾನ್ಯ ರೈತನ ಮಗನನ್ನು ಪ್ರಧಾನಿ ಮಾಡಿದ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಅಂಬೇಡ್ಕರ್ ವಿರಚಿತ ಸಾಂವಿಧಾನಿಕ ಗಣತಂತ್ರವು ಆತನ ಮೊಮ್ಮಗನ ಲೈಂಗಿಕ ದೌರ್ಜನ್ಯಗಳಿಗೆ ತನ್ನ ನ್ಯಾಯಾಂಗದಡಿ "ವಿಚಾರಿಸಿ" ಶಿಕ್ಷೆ ವಿಧಿಸಬಲ್ಲುದೆ?!? 

ಮೇಟಿ, ಜಾರಕಿಹೊಳಿ, ಬ್ಲೂಬಾಯ್ಸ್ ಇತ್ಯಾದಿ ಏನಾದರೆಂದು ಇಲ್ಲಿ ಪರಾಂಭರಿಸಬಹುದು.

ಭಾರತೀಯ ಸಾಂವಿಧಾನಿಕ ವ್ಯವಸ್ಥೆಯು ಯಾವ ಊಳಿಗಮಾನ ವ್ಯವಸ್ಥೆಯನ್ನು ವಿರೋಧಿಸಿ ಪ್ರಜಾಪ್ರಭುತ್ವವನ್ನು ಅಳವಡಿಸಿದ್ದೇನೆನ್ನುತ್ತದೋ ಅದೇ "ಊಳಿಗಮಾನ ವ್ಯವಸ್ಥೆ"ಯು ಪ್ರಜಾಪ್ರಭುತ್ವವನ್ನು ಕಾಸಿಗಾಗಿ ಓಟು, ವಂಶಪಾಪಂಪರಿಕ ಟಿಕೆಟ್ ಹಂಚಿಕೆ ಇತ್ಯಾದಿಯಿಂದ ತನ್ನ ಶೃಂಗಾರಾಭರಣವಾಗಿಸಿ ಈಗಾಗಲೇ ಸಾಂವಿಧಾನಿಕ ಆಶಯವನ್ನು ಅಣಕವಾಗಿಸಿದೆ. 

ಈ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯನ್ನು ವಿಧಿಸಿದರೂ / ವಿಧಿಸದಿದ್ದರೂ ಈ ಘಟನೆಯು ಊಳಿಗಮಾನ ಭಾರತೀಯ ಪ್ರಜಾಪ್ರಭುತ್ವದ ಮುಕುಟಕ್ಕೆ ಕೋಹಿನೂರ್ ವಜ್ರವಾಗಲಿದೆ. ಏಕೆಂದರೆ ಈಗಾಗಲೇ ಸಾಕಷ್ಟು ಅಸಂವಿಧಾನಿಕ ಬಹುಪತ್ನಿತ್ವ, ಲೈಂಗಿಕ ದೌರ್ಜನ್ಯ/ಕಿರುಕುಳ, ಕುರ್ಚಿಗಾಗಿ ಕಾಮ, ಉದ್ಯೋಗಕ್ಕಾಗಿ ಸಂಭೋಗ, ಪದೋನ್ನತಿಗಾಗಿ ರತಿದಾಸ್ಯದ ಪಕ್ಷಾತೀತ ಮಣಿಗಳು ಆಗಲೇ ಈ ಮುಕುಟಮಣಿಯನ್ನು ಅಲಂಕರಿಸಿವೆ.  ಈಗ ಒಂದೊಮ್ಮೆ ಪ್ರಜಾಪ್ರಭುತ್ವದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಹುದ್ದೆಯನ್ನು ಹೊಂದಿದ ವ್ಯಕ್ತಿಯ ಮೊಮ್ಮಗನ ಪ್ರಕರಣ "Icing on the Cake" ಎನ್ನುವಂತಾಗಲಿದೆ. 

ಈ ಪ್ರಕರಣದ ಆರೋಪಿಯ ಹೆಸರಲ್ಲೇ ಊಳಿಗಮಾನ ಪದವಾದ "ಗೌಡ" ಎಂದಿರುವುದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿನ ಗೋಮುಖವ್ಯಾಘ್ರ ಊಳಿಗಮಾನ ಪ್ರಜಾಪ್ರಭುತ್ವದ ಗಮ್ಯದ ಹೊಳಹಾಗಿದೆ. ಇದು ಹಾಸನದ ಹಾರನಹಳ್ಳಿ ಕೋಡಿಮಠದ ಹೊತ್ತುಗೆಯಲ್ಲಿಯೂ ಇದೆ. ಚೆನ್ನಬಸವಣ್ಣನ ಕಾಲಜ್ಞಾನ ವಚಗಳಲ್ಲೂ ಇದೆ.

ಓದಿ ಅರ್ಥೈಸುವ ಕಾಲಜ್ಞಾನಿ ಮಾತ್ರ ಅಲ್ಲಿಲ್ಲ, ಇಲ್ಲಿದ್ದಾನೆ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

Ra Ta Ee Ka Review by Kaliveera Kallimani

 Ra Ta Ee Ka ......


No reader shows a great enthusiasm in reading someone's AUTOBIOGRAPHY .....declaring it neither enhances our knowledge nor gives any thrill .it is the fate of each personal account contributed by the pen individuals .

  But...RAVISHANKAR HANJAGIMUTT....affectionately trimmed as RAVI HANJ ...hailed from DAVANGERE settled in CHICAGO...  brushed off my above opinion by mustering his spriteful memories inthe form of AUTO...titled RaTa Ee Ka . ..not just the basic letters of Kannada alphabet but it symbolises the writers prolific childhood memories and the way he passes through his further journey .

  Reading someone's autobiography naturally faces a question ..why should I go through the bundle of memories of a person whom I dont know ? But Ravi made us to avoid this question adroitly and Captivate The Reader to turn the huge amount of 384 pages  with a deep curiosity . He painted the picture of erstwhile Davangere with words and all necessary lines and minute shades . So ra ta ee ka blossomed as a master piece in the frame of a highly imaginative artist of letter world .

 Ravi emerged from a modest family of Davangere city the commercial hub of Central Karnataka ,looking attractive with moderate complexion ,fair tall round shape face with no beard or hair under is nose ,he is a person with a sense of humour , connoisseur  skill and sharp power of observation , he certainly has an opinion on everything he sees around him .

 Though it is a memoir of self remorse he successively turns it to belong everyone who go  through it . As the publisher attributes ..it is a familiar story of a curious child who give up observing the fundamental aspects of society and striving to find their place within the community , much like you, me, or any average individual .

       Here are some sample lines   ...

* Never hesitate to deliver harsh punches of truth .

* only a dalit can understand a dalit's pain .

* Limited consumption is relaxing over the limit is embalming .

* The glamour ,beauty and fame that seem to permanent were merely fleeting and transient .

* Romance is the privilege of the rich not the profession of the unemployed .The poor should be practical and prosaic (Oscar Wilde's practical principle )

* Hey ayyappa definitely you have three monkeys in your a** .

* I shifted my focus from rising my muscles to raising more monkeys in my a** .

* Come into my heart and be the reincarnation of everyday truth .


Wish to get more punchings...?? Please go through it .

Thank you Ravi Sir .

Kaliveera Kallimani .

Davanagere .

ಭಾವಿ ಪ್ರಧಾನಿಗಳ "ಸಂಪತ್ತು ಮರುಹಂಚಿಕೆ"

 ಈಗ ಕಾಂಗ್ರೆಸ್ಸಿನ ಭಾವಿ ಪ್ರಧಾನಿಗಳು "ಸಂಪತ್ತು ಮರುಹಂಚಿಕೆ" ಯಾನೆ Wealth Redistribution ಬಗ್ಗೆ ಫರ್ಮಾನು ಹೊರಡಿಸಿದ್ದಾರೆ. ಇದರ ಒಂದಂಶ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಭಾಗ ಸರ್ಕಾರಕ್ಕೆ ಸಲ್ಲಬೇಕು ಎನ್ನುವುದು ಅತ್ಯಂತ ಸಮಂಜಸ ಸಾಮಾಜಿಕ ನ್ಯಾಯ ಸಿದ್ಧಾಂತವಾಗಿದೆ. ಈ ಅಂಶವನ್ನು ನನ್ನದೇ ನೆರೆಹೊರೆಯ ಸ್ಯಾಮ್ ಪಿತ್ರೋಡ ಅವರ ಮೂಲಕ ಹೇಳಿಸಿದ್ದಾರೆ. ಅಮೇರಿಕಾದಲ್ಲಿ ಯಾವುದೇ ಫೆಡರಲ್ ತೆರಿಗೆ ಇಲ್ಲದೆ ಸುಮಾರು ನೂರಹತ್ತು ಕೋಟಿ ರೂಪಾಯಿಯಷ್ಟು ಪಿತ್ರಾರ್ಜಿತ ಆಸ್ತಿಯನ್ನು ಹೊಂದಬಹುದು. ಅದಕ್ಕಿಂತ ಹೆಚ್ಚಾದರೆ ತೆರಿಗೆ ಕಟ್ಟದೆ ಪಡೆದುಕೊಳ್ಳಲು ಟ್ರಸ್ಟ್ ರೂಪದ ಹಲವು ಮಾರ್ಗೋಪಾಯಗಳಿವೆ. ಇರಲಿ, ಒಟ್ಟಾರೆ ಸಾಮಾಜಿಕ ನ್ಯಾಯಕ್ಕಾಗಿ ಪಿತ್ರಾರ್ಜಿತ ಆಸ್ತಿ ತೆರಿಗೆ ಅವಶ್ಯ ಎಂದು ಕಾಂಗ್ರೆಸ್ ಪಕ್ಷ ನಿರ್ಧರಿಸಿರುವುದು ಅತ್ಯಂತ ಸ್ವಾಗತಾರ್ಹ. ಆದರ್ಶ ಉದಾರವಾದಿಯಾದ ನಾನು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.


ಇಂತಹ ಸಾಮಾಜಿಕ ನ್ಯಾಯವನ್ನು ಯಾವುದೇ ಅಧಿಕಾರವಿಲ್ಲದೆ ಕೇವಲ ಆದರ್ಶದ ಮೇಲೆ ಮಹಾತ್ಮ ಗಾಂಧಿ, ವಿನೋಬಾ ಭಾವೆ ಮುಂತಾದ ಸಾಮಾಜಿಕ ನಾಯಕರು ಜನರನ್ನು ಒಲಿಸಿ ಜನರ ಆಸ್ತಿಯನ್ನು ಸಮಾಜಕ್ಕೆ ಕೊಡಿಸಿದ ಇತಿಹಾಸವೇ ನಮ್ಮಲ್ಲಿದೆ. ಇವರ ಕರೆಗೆ ಓಗೊಟ್ಟು ಅನೇಕರು ತಮ್ಮ ಆಸ್ತಿಯನ್ನು ಸಮಾಜಕ್ಕೆ ಧಾರೆ ಎರೆದುದನ್ನು ನೀವೆಲ್ಲರೂ ಕೇಳಿದ್ದೀರಿ, ಓದಿದ್ದೀರಿ. ಭಾವೆಯವರ ಭೂದಾನ ಕರೆ ದೇಶವನ್ನೇ ಸಂಚಲಿಸಿದ್ದಿತು.


ಮಾನ್ಯ ರಾಹುಲ್ ಗಾಂಧಿಯವರು ಅಧಿಕಾರಕ್ಕೆ ಬರುತ್ತಾರೋ ಇಲ್ಲವೋ ಅದನ್ನು ಬದಿಗಿರಿಸಿ ಆ ಮಹನೀಯರುಗಳಂತೆ ಈ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯವನ್ನು ಸ್ವಯಂ ಆಗಿ ಮತ್ತು ತಮ್ಮ ಪಕ್ಷದ ಮುಖಂಡರಲ್ಲಿ ಅಳವಡಿಸಲು ಅವರಿಗೆ ಯಾವುದೇ ಅಭ್ಯಂತರ ಇಲ್ಲ. ಅದಕ್ಕೆ ಯಾವ ಅಧಿಕಾರವೂ ಬೇಕಿಲ್ಲ.


ಹಾಗಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ತಮ್ಮ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಪ್ರತಿಶತ ಭಾಗವನ್ನು ದೇಶಕ್ಕೆ ಸಮರ್ಪಿಸದಿದ್ದರೂ ಕನಿಷ್ಠ ಪಕ್ಷ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿಗಳು ತಾವು ಘೋಷಿಸಿಕೊಂಡಿರುವ ತಮ್ಮ ಆಸ್ತಿಯ ನಲವತ್ತು ಚಿಲ್ಲರೆ ಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಒಂದು ಮೇಲ್ಪಂಕ್ತಿ ಹಾಕಿದರೆ ಅವರ ಪಕ್ಷದ ಎಲ್ಲಾ ಅಭ್ಯರ್ಥಿಗಳೂ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ತಮ್ಮ ಹೆಸರಿನಲ್ಲಿರುವ ಗಾಂಧಿ ಮಹಾತ್ಮರಂತೆ ರಾಹುಲ್ ಮಹಾತ್ಮರೆನಿಸಿ ತಮ್ಮ ಪಕ್ಷದ ಅಭೂತಪೂರ್ವ ಗೆಲುವಿನ ರೂವಾರಿಯಾಗುತ್ತಾರಲ್ಲದೆ ಮೋದಿ ಎಂಬ ಮಾಯೆಯ ಅಣುರೇಣುತೃಣ ಛಾಯೆಯೂ ಇರದಂತೆ ಮೋಡಿಯನ್ನು ಮಾಯವಾಗಿಸಬಲ್ಲರು.


ಅವರ ಪಕ್ಷದವರು ಹೇಳುವ "ದೇಶಕ್ಕೆ ಅಂಟಿದ ಶನಿ"ಯನ್ನು ರಾಹುಲ್ ಬಾಬಾ ತಮ್ಮ ಸಿದ್ಧಾಂತ ಬದ್ಧತೆ ಮೆರೆದು, "ನುಡಿದಂತೆ ನಡೆದ ಸರ್ಕಾರ ನಮ್ಮದು" ಎನ್ನುವ ಉದ್ಘೋಷದ ಪಕ್ಷವನ್ನು ದೆಹಲಿಯಲ್ಲಿ ಪ್ರತಿಷ್ಠಾಪಿಸಿದರೆ.....ಆಹಾ!!! ನ ಭೂತೋ ನ ಭವಿಷ್ಯತೋ....ಭಾರತ ಭಾಗ್ಯ ವಿಧಾತ ಹ!!!!


ಬಾಬಾ ಸಂಚಲಿಸುವರೋ?! ಸ್ಖಲಿಸುವರೋ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission

 ರಾಜ್ಯದಲ್ಲಿ ಸಂಗ್ರಹಿಸುವ GST ಯ ೫೦% ರಾಜ್ಯದ್ದಾದರೆ, ೫೦% ಕೇಂದ್ರದ್ದು. ಕೇಂದ್ರದ ಭಾಗದ ೪೨% ಭಾಗ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಹಣಕಾಸು ಆಯೋಗದ ನಿರ್ದೇಶನದಂತೆ ಒಂದು ಸಾಮೂಹಿಕ ಖಾತೆಗೆ ಹೋಗುತ್ತದೆ. ಇದನ್ನು ಹೇಗೆ ವ್ಯಯಿಸಬೇಕು ಎಂಬುದನ್ನು ನಿರ್ಧರಿಸುವುದು ಸಹ ಅದೇ ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission. ಇದು ಒಂದು ಸಾಂವಿಧಾನಿಕ ಸಂಸ್ಥೆ.

 

ಅಂಬೇಡ್ಕರ್ ಹೇಗೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಟು ಸಮಾನತೆ ತಂದರೋ, ಸಿದ್ಧರಾಮಯ್ಯ ಹೇಗೆ ಅಹಿಂದದವರಿಗೆ ಸೌಭಾಗ್ಯಗಳನ್ನು ಕೊಟ್ಟರೋ ಅದೇ ರೀತಿ ಹಣಕಾಸು ಆಯೋಗ ರಾಜ್ಯಗಳಿಗೆ ತನ್ನ "ಹಿಂದುಳಿದ/ಮುಂದುವರಿದ" ಸೂತ್ರದ ಅನ್ವಯ ಹಣ ಕೊಡಿಸುತ್ತದೆ. ಇದನ್ನು ಸಿದ್ದರಾಮಯ್ಯ ಅಂಡ್ ಕಂಪೆನಿ ಮತ್ತು ಅವರ ಪಕ್ಷದ ಭಾವಿ ಪ್ರಧಾನಿ ಎನ್ನುವ ರಾಹುಲ್ ಹೇಗೆ ರಾಜ್ಯದ ನೂರು ರುಪಾಯಿ ತೆರಿಗೆಯಲ್ಲಿ ಕೇವಲ ೧೩ ರುಪಾಯಿ ಅಷ್ಟೇ ವಾಪಸ್ ಬರುತ್ತಿದೆ ಎನ್ನುತ್ತಿದ್ದಾರೆ?!?! 


ಅಂದರೆ "ಹಿಂದುಳಿದ/ಮುಂದುವರಿದ" ಎಂದು ನೋಡದೆ ಹಣಕಾಸು ಆಯೋಗ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಬೇಕು ಎನ್ನುವುದು ಇವರ ವಾದವಾದರೆ, ಅದು ಅಂಬೇಡ್ಕರ್ ಅವರ ಸಾಂವಿಧಾನಿಕ ಮೀಸಲಾತಿ ಮತ್ತು ಇವರದೇ ಪಕ್ಷದ ಸಿದ್ಧಾಂತಗಳಿಗೆ ತದ್ವಿರುದ್ಧ.


ಈ ವಾಸ್ತವಿಕ ಅಂಶದ ಮೂಲಕ ನೋಡಿದರೆ, ಯಾರು ಸಂವಿಧಾನ ವಿರೋಧಿಗಳು? ಯಾರು ಮೀಸಲಾತಿ ವಿರೋಧಿಗಳು? ಯಾರು ಅಹಿಂದ ವಿರೋಧಿಗಳು? 


ಹೀಗೆ ರಾಜಾರೋಷವಾಗಿ ಸುಳ್ಳನ್ನು ನೂರು ಬಾರಿ ಸತ್ಯವೆಂದು ಹೇಳುವ, ಬುದ್ಧಿಜೀವಿಗಳು ಹೀಯಾಳಿಸುವ "ಗೋಬೆಲ್ಸ್" ತಂತ್ರವನ್ನು ಅವರ ಆರಾಧ್ಯ ದೈವವೇ ಬಳಸಿ ಇತರರ ಮೇಲೆ ಗೂಬೆ ಕೂರಿಸುತ್ತಿರುವಾಗ,  ಇದನ್ನೆಲ್ಲಾ ವಿವರಿಸುವ ಜಾಣತನ ಬಿಜೆಪಿಗರಲ್ಲಿ ಇದೆಯೇ?!?!


ಖಂಡಿತವಾಗಿ ಇಲ್ಲ. ಏಕೆಂದರೆ ರಾಜ್ಯದ ಕಾಂಗ್ರೆಸ್ಸಿಗರು ಬಿಜೆಪಿಗರು ಎಲ್ಲರೂ ಕೇವಲ ಪಂಚಾಯಿತಿ ಸದಸ್ಯರಾಗಬಲ್ಲ ಅರ್ಹತೆ ಉಳ್ಳವರು. ಇಂಥವರು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಎಲ್ಲಾ ಆದರೆ ಏನಾಗುವುದೋ ಅದೇ ರಾಜ್ಯದಲ್ಲಿ ಕಳೆದ ಐವತ್ತು ವರ್ಷದಿಂದ ಆಗುತ್ತಿರುವುದು. ಇನ್ನು ಬುದ್ದಿಜೀವಿಗಳ ಗೋಬೆಲ್ಸ್, ನೆರೂಡ, ಕಾಫ್ಕಾ ಉಲ್ಲೇಖ..... ವಾಡ್ಕಾ (ವೋಡ್ಕಾ - ಅವಾರ್ಡು) ಅಂಡ್ ಸಿಲೋಡ್ಕಾ(ಮೀನು - ಪ್ರಾಧಿಕಾರ)!


ಏಕೆಂದರೆ,


ಶಿವನಿಗೈದು ಮುಖ, ಭಕ್ತನಿಗೈದು ಮುಖ.

ಆವುವಾವುವೆಂದರೆ:

ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ,

ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ.

ಇಂತೀ ಪಂಚಮುಖವನರಿಯದ

ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ

ಇಂತೀ ಐವರಿಗೆ ಲಿಂಗವ ಕಟ್ಟಿದಡೆ

ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ

ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು !

ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ

ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ

--- ಚನ್ನಬಸವಣ್ಣ


ಇಷ್ಟೇ, ಇಷ್ಟೇ, ಇಷ್ಟೇ, ಭಾರತೀಯ ಪ್ರಜಾಪ್ರಭುತ್ವ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

 ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

ಸಾಮಾಜಿಕ ನ್ಯಾಯವನ್ನು ಅನೇಕ ದೇಶಗಳು ಸಮಾನ ಸಾಮಾಜಿಕ ನ್ಯಾಯವಾಗಿ ೧೯೫೦ಕ್ಕೂ ಮುಂಚೆಯೇ ಸಾಂವಿಧಾನಿಕವಾಗಿ ಅನುಷ್ಠಾನಗೊಳಿಸಿದ್ದವು. ಆದರೆ ಭಾರತೀಯ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಉದ್ದೇಶದಲ್ಲಿ ವ್ಯಕ್ತಿಗತ ಉದ್ದೇಶವೇ ದೇಶದ ಸ್ವಾತಂತ್ರ್ಯದಷ್ಟೇ ವ್ಯಕ್ತಿಗತ ಉದ್ದೇಶವಾಗಿತ್ತು. ಅದ ಕಾರಣ, ದೇಶದ ಹಿತಾಸಕ್ತಿಗಿಂತ ವ್ಯಕ್ತಿಗತ ಪ್ರತಿಷ್ಠೆಯೇ ಘನವಾಗಿ ಇಂದಿನ ಎಲ್ಲಾ ಭಾರತೀಯ ಚುನಾವಣೆಗಳೂ, ಅಭ್ಯರ್ಥಿಗಳೂ, ಮತದಾರರೂ ಆಯಾ ಕಾರಣವನ್ನು ಪ್ರತಿಬಿಂಬಿಸುತ್ತಿ(ವೆ)ದ್ದಾರೆ, ವಿಜೃಂಭಿಸುತ್ತಿದ್ದಾರೆ.
ಹಾಗಾಗಿಯೇ ಇಂದು ಭಾರತದ ಪ್ರತಿಯೊಂದು ಸಾಮಾಜಿಕ ಹಂತದಲ್ಲಿ ವ್ಯಕ್ತಿಪೂಜೆಯೇ ಪ್ರಮುಖವಾಗಿರುವುದು. ಇದು ಮಹಾತ್ಮದಲ್ಲಿ, ಜೈಭೀಮದಲ್ಲಿ, ಬಡವರ ತಾಯಿಯಲ್ಲಿ, ರೈತನ ಮಗದಲ್ಲಿ, ಮೋಡಿಯಲ್ಲಿ, ರಾಜಾಹುಲಿಯಲ್ಲಿ, ಟಗರುವಿನಲ್ಲಿ, ಹೊನ್ನಾಳಿ ಹೋರಿಯಲ್ಲಿ, ಗಣಿಧಣಿಯಲ್ಲಿ, ದೀದಿಯಲ್ಲಿ, ಪುರುಚ್ಚಿ ತಲೈವಿ/ತಲೈವದಲ್ಲಿ...... ಬಿಟ್ಬಂದಹಳ್ಳಿ ಬಂಧುವಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕಣ್ಣು ಕೋರೈಸುವುದು.
ಏಳಿ ಎದ್ದೇಳಿ........!

ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs

 "ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs" ಎಂದು ಗೊರವಜ್ಜ ನಿಟ್ಟುಸಿರುಯ್ದು ಮಗ್ಗಲು ಬದಲಿಸಿದ.

ಪಕ್ಕದಲ್ಲೇ ಮಲಗಿದ್ದ ಮೊಮ್ಮಗ ಮೈಲಾರಿ, "ಯಜ್ಜಾ, ಹಾಂಗಂದ್ರ ಯಾಣ!?" ಎಂದು ಪ್ರಶ್ನಿಸಿದ.
ಉತ್ತರವಾಗಿ ಗೊರವಜ್ಜ ಒಂದು ಸುಧೀರ್ಘ ನಿಟ್ಟುಸಿರು ಹೊಮ್ಮಿಸಿ ಹದವಾಗಿ ಕೆಮ್ಮಿದನಷ್ಟೇ.
ಜಾಲಿ ಮರದ ತುದಿಯಲ್ಲಿನ ಹಸಿರು ಕಂಡ ಆಡಿನಂತೆ ಉತ್ತರ ಬಾರದ ಕಾರಣ ಮೈಲಾರಿಯ ಕುತೂಹಲದ ಮಾರಿ ಮುಗಿಲ ಕಡೆ ಏರಿತ್ತು.
"ಮುತ್ಯಾ ಏನಂದನಬೇs?" ಎಂದು ಆ ತುದಿಯಲ್ಲಿ ಮಲಗಿದ್ದ ತನ್ನ ಅಜ್ಜಿಯನ್ನು ಕೇಳಿದ.
ಯಾವುದೋ ಕನಸಿನ ಬೇಗುದಿಯಲ್ಲಿ ಕೈಯಾಡಿಸುತ್ತಾ ಮಲಗಿದ್ದ ಮುದುಕಿ "ಹಾಂ ಹೂಂ" ಎಂದು ನರಳಿದಳೇ ಹೊರತು ಉತ್ತರಿಸಲಿಲ್ಲ.
ಮರುದಿನ ಎದ್ದವನೇ ಮೈಲಾರಿ, "ಯಜ್ಜಾ, ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs ಅಂದ್ಯಲ್ಲs ರಾತ್ರೆ! ಹಂಗಂದ್ರ ಯಾಣ?"
ಮುತ್ಯಾ ಏನೂ ಹೇಳಲಿಲ್ಲ. ರೊಟ್ಟಿ ಬಡಿಯುತ್ತಿದ್ದ ಮುದುಕಿ, "ನಿಮ್ಮಜ್ಜನ ಮೈಮ್ಯಾಲ ದೇವ್ರು ಬಂದು ಹಿಂಗ ಕಾರಣಿಕ ನುಡಿಸಿರ್ತಾನ. ಅದೂ ಅವಗ ನೆಪ್ಪಿರುದಿಲ್ಲ. ಹಂಗ ಬಡಬಡಿಸಿರ್ತಾನ, ಆsಳs. ಅದ್ರಾಗರ ಏನೈತಿ ಒಗಟು? ಹಗಲು ರಾತ್ರಿ ಆಗೂದs, ರಾತ್ರಿ ಹಗಲು ಆಗೂದ ಅಲ್ಲೇನ್!" ಎಂದು ಸಮಾಧಾನ ಹೇಳಿದಳು.
"ಹಾಂಗ...! ಆದ್ರ, ತುಪ್ಪಳ ಮೈಮ್ಯಾಲಾಗ್ತದೋs" ಅಂದ್ರ?
"ಏಯ್ ಅವ್ನ ದುಪ್ಪಡಿ ಜಾರಿತ್ತೇನೋ ನೆನಸ್ಕೊಂಡು ಆಂದಾನ ಆಳs" ಎಂದಳು.
ಆದರೂ ಆ ಒಗಟಿನಂತಹ ಕಾರಣಿಕ ಮೈಲಾರಿ ತಲ್ಯಾಗ ಉಳಕಂತು.
ಕಾಲ ಉರುಳಿತು.
***
ಫೆಬ್ರುವರಿಯ ಸುಡು ಬಿಸಿಲಿನ ಭಾರತದಿಂದ ಗಡಗಡ ನಡುಗುವ ಚಳಿಯ ನ್ಯೂಜೆರ್ಸಿಯಲ್ಲಿ ಇಳಿದಿದ್ದ ಮೈಲ್ಸ್ ಅವನ ಹೆಂಡತಿ ಲಿಲ್ಲಿ ತಂದಿದ್ದ ಬೆಚ್ಚನೆಯ ಸ್ವಿಸ್ ಕುರಿ ತೊಗಲಿನ ಜ್ಯಾಕೆಟ್ ಹೊದ್ದು ಮನೆಗೆ ಬಂದಿದ್ದ. ಜೆಟ್ ಲ್ಯಾಗಿನ ಪರಿಣಾಮದಿಂದ ಮಲಗಿದ್ದ ಮೈಲ್ಸ್ ದಿಢೀರನೆ, "ಹೋಲಿ ಫಕ್!" ಎನ್ನುತ್ತಾ ಎದ್ದು ಕುಳಿತ.
ಅವನ ಕನಸಲ್ಲಿ ಗೊರವಜ್ಜನ ಒಡಪು, "ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs" ಒಡೆದಿತ್ತು!
ಮೈಲಾರಿ ಮೈಲ್ಸ್ ಆಗಿದ್ದ. ಹಗಲು ರಾತ್ರಿಯಾಗಿತ್ತು. ತುಪ್ಪಳ ಮೈಮೇಲಿತ್ತು.
ದೂರದಲ್ಲಿ ಎಲ್ಲಿಂದಲೋ ಯಾರೋ, "ಛಾಂಗು ಭಲೇ ಛಾಂಗು ಭಲೇ!" ಎನ್ನುವ ದನಿ ಗಾಳಿಯಲ್ಲಿ ತೇಲಿ ಬಂದಂತಾಯಿತು.

I AM The God - ಕಾರ್ಲ್ ಮಾರ್ಕ್ಸ್ ಹೇಳಿದ್ದೇನು?

 ಯಹೂದಿ ದೇವರು - Yahweh ಅಂದರೆ “I AM!"

ಯಹೂದಿಗಳ ನಾನೂರು ವರ್ಷಗಳ ಈಜಿಪ್ಟ್ ಗುಲಾಮಿಕೆ ವಿರುದ್ಧ ಕೆಲಸ ಮಾಡಿದ್ದು ಧರ್ಮ.

ಕ್ರಿಶ್ಚಿಯನ್ ದೇವರು - I AM The God. 

ಬಡವರ ಶೋಷಣೆ ವಿರುದ್ಧ ಕೆಲಸ ಮಾಡಿದ್ದು ಧರ್ಮ.

 ಇಸ್ಲಾಂ ದೇವರು - Al Ilah ಅಂದರೆ - The God. 

ಅರಬರ ಶೋಷಣೆ ನೀಗಿಸಿ ಸಮಾನತೆ ತರಲು ಕೆಲಸ ಮಾಡಿದ್ದು ಧರ್ಮ.

ಹಿಂದೂ ದೇವರು - ಆತ್ಮಲಿಂಗ...ಅರಿವೇ ಗುರು/ವಸುಧೈವ ಕುಟುಂಬಕಂ/ಯದಾಯದಾಹಿ ಧರ್ಮ್ಯಸ್ಯದಲ್ಲಿ ಕೆಲಸ ಮಾಡಿದ್ದು ಧರ್ಮ. 

ಹೀಗೆ ಅನ್ಯಾಯದ ವಿರುದ್ಧ ಜಗತ್ತಿನಾದ್ಯಂತ ಜನಸಾಮಾನ್ಯರು ಒಂದು ಕಾಲಘಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತದ್ದು ಧರ್ಮದ ಛಾಯೆಯಲ್ಲಿ!

ಹಾಗಾಗಿಯೇ ಕಾರ್ಲ್ ಮಾರ್ಕ್ಸ್ ಹೇಳಿದ್ದು: "Religion is the opium of the masses, its the hope of the hopeless world, its the distress of the distressed, its the spirit of the spiritless situation ; if you think of replacing it you will have to replace it with the same hope which religion offers them"

ನಂತರದ ಕಾಲಘಟ್ಟಗಳಲ್ಲಿ ಜನರು ಸಂಘಟಿತರಾಗಿದ್ದು ಕ್ರಾಂತಿ, ಚಿಂತನೆಯ ಪಂಥ....ನಂತರ ಅಫೀಮಿಗಿಂತ ಮಿಗಿಲಾಗಿ ಅಮಲಾದ ಪ್ರಜಾಪ್ರಭುತ್ವ. ಈಗ ಈ ಪ್ರಜಾಪ್ರಭುತ್ವದಲ್ಲಿ ಮತ್ತೆ ಧರ್ಮ ಬಂದಿದೆ, ಪುನರಪಿ ಜನನಂ ಪುನರಪಿ ಮರಣಂ ಎನ್ನುವ ಅದೇ ಧಾರ್ಮಿಕ ನಂಬುಗೆಯಂತೆ!

ಈಗ ನೀವೆಲ್ಲರೂ ಜೂಡಾಯಿಸಂನ I am ಆಗಿ ಇಸ್ಲಾಂನ The God ಆಗಿ, ಕ್ರಿಶ್ಚಿಯನ್ನರ I am The God ಆಗಿ ಹಿಂದುತ್ವದ ಅರಿವೇ ಗುರು ಯಾನೆ ಆತ್ಮಲಿಂಗ/ಸ್ವಯಂಭುಲಿಂಗವಾಗಿ ಮುಕ್ಕೋಟಿಗಳಾಗಿ ವಸುದೈವ ಕುಟುಂಬಕಂ ಅನ್ನು ಉಳಿಸಿ ಎಂಬುದೇ ಜನತಂತ್ರವಾಗಿದೆ! ಚಿಂತಿಸಿ ನಿಮ್ಮ ಮತ ಚಲಾಯಿಸಿ. ಏಕೆಂದರೆ ನಾನೇ ದೇವರು, ನಾನೇ ಮಾರ್ಗ! ಇಲ್ಲಿ ನಾನೇ ಎಂದರೆ ನಿಮ್ಮನ್ನು ನೀವೇ "ನಾನೇ" ಎಂದುಕೊಳ್ಳಿ, ಬರೆದ ರವಿ ಹಂಜ್ ಯಾ ಕೈಯೆತ್ತಿ ನಿಮ್ಮ ಕಡೆ ದೃಷ್ಟಿ ಬೀರುವ ಯಾವುದೇ ಮೂರ್ತಿ ಯಾ ಅಮೂರ್ತ ಕಲ್ಪನೆಯನ್ನಲ್ಲ.

ಅಂದ ಹಾಗೆ ಧರ್ಮಕಾರಣದ ಪಕ್ಷ ಗದ್ದುಗೆಗೆ ಏರಲು ಪ್ರಮುಖ ಕಾರಣ ಅಪಾರ ಕೈಕೆಲಸದ ಪಕ್ಷ. ಉಳಿದಂತೆ ಸಂಯುಕ್ತ ದಳ, ಜಾತ್ಯಾತೀತ ದಳ, ಆಕಾಲಿ ದಳ, ನಿಕಾಲಿ ದಳ, ಅಣ್ಣ, ಅಪ್ಪ, ಮಕ್ಕಳ್, ದೇಶಂ, ಆದಿ, ವಾದಿ, ಲೀಗು, ಲಾಗು, ಆಪು, ಹಮ್ಮು...ಇತ್ಯಾದಿ ಎಲ್ಲಾ ಚಪ್ಪನ್ನೈವತ್ತಾರು ಪಕ್ಷಗಳೂ ಈವರೆಗೆ ಇನ್ನೂ ತಮ್ಮನ್ನು ತಾವು ಸಮರ್ಥ ವಿರೋಧ ಪಕ್ಷವಾಗಿ ಸಾಬೀತು ಮಾಡಿಕೊಂಡಿಲ್ಲ. ಅವು ಸಾಬೀತು ಪಡಿಸಿಕೊಳ್ಳುವವರೆಗೆ ಧರ್ಮಕಾರಣದ ಮೋಡಿ ಅನವರತ! 

ಕ್ಯೂನ್ ಕೀ ಕಮಲೇ "ಕಮಾಲೋ"ತ್ಪತ್ತಿಹಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ರಾಜ್ಯದಲ್ಲಿ ಒಂದು ರವಂಡು!

 ನನ್ನ ಒಂದು ಕಾರು ಬೆಂಗಳೂರಿನಲ್ಲಿ ಇದ್ದುದರಿಂದ ಅದನ್ನು ತರಲು ಹೊಸದುರ್ಗದಿಂದ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗುವುದು ಎಂದು ನಿರ್ಧರಿಸಿದೆ. ಅದಕ್ಕೆ ದಾವಣಗೆರೆಯಲ್ಲಿರುವ ನನ್ನ ಸೋದರಳಿಯ, "ನಾನೂ ಬರುತ್ತೇನೆ. ನೀವು ಚಿತ್ರದುರ್ಗಕ್ಕೆ ಬನ್ನಿ. ಅಲ್ಲಿಂದ ಸುಸಜ್ಜಿತ ಎಲೆಕ್ಟ್ರಿಕ್ ಬಸ್ಸಿನಲ್ಲಿ ಹೋಗೋಣ" ಎಂದ. ಸರಿಯೆಂದು ಬೆಳಿಗ್ಗೆ ಆರೂವರೆಗೆ ಹೊಸದುರ್ಗದಿಂದ ಚಿತ್ರದುರ್ಗಕ್ಕೆ ಬಸ್ ಹತ್ತಿ ಕಂಡಕ್ಟರ್ ಕೈಗೆ ನೂರು ರೂಪಾಯಿ ಕೊಟ್ಟೆ. ಅದಕ್ಕೆ ಆತ, "ಒಂದು ರೂಪಾಯಿ ಚಿಲ್ಲರೆ ಕೊಡಿ" ಎಂದ. ಚಿಲ್ಲರೆ ಇರದ ಕಾರಣ ಇಲ್ಲವೆಂದೆ.


ಒಂದು ರೂಪಾಯಿ ಕೊಟ್ಟಿದ್ದರೆ ನಲ್ವತ್ತು ರೂಪಾಯಿ ವಾಪಸ್ ಕೊಟ್ಟು ಟಿಕೆಟ್ ಕೊಡುತ್ತಿದ್ದ ಕಂಡಕ್ಟರ್, "೩೯" ಎಂದು ಅರವತ್ತೊಂದರ ಟಿಕೆಟ್ ಹಿಂದೆ ಗೀಚಿ ಟಿಕೆಟ್ ಕೊಟ್ಟ. 


ಮೂವತ್ತು ಅಥವಾ ಮೂವತ್ತೈದು ವಾಪಸ್ ಕೊಟ್ಟು ಉಳಿದದ್ದು ಗೀಚಿ ಕೊಡಬಹುದಾಗಿದ್ದ ಆ ವಿಶ್ವಗುರು ಹಾಗೇಕೆ ಕೊಟ್ಟನೋ ಗೊತ್ತಿಲ್ಲ! 


ಆತನ ಉದ್ದೇಶ ಏನೇ ಆಗಿದ್ದರೂ ಚಿತ್ರದುರ್ಗದಲ್ಲಿ ಇಳಿದಾಗ ಮರೆಯದೆ ಚಿಲ್ಲರೆ ಪಡೆದುಕೊಳ್ಳಬೇಕೆಂಬ ವಿಷಗುರುತ್ವ ನನ್ನದಾಯಿತು. ಬಸ್ ಇಳಿದು ಚಿಲ್ಲರೆ ಕೇಳಿದಾಗ ಆತ ನೂರಾ ಇಪ್ಪತ್ತು ರೂಪಾಯಿ ನನ್ನ ಕೈಗೆ ತುರುಕಿ, "ನಿಮ್ಮ ಚಿಲ್ಲರೆ ಮುರಿದುಕೊಂಡು ಉಳಿದದ್ದು ಈ ಈರ್ವರಿಗೆ ಹಂಚಿ ಎಂದು ರೈಟ್ ಹೇಳಿದ!


ಎಲಾ ಇವನ...ಎಂದುಕೊಂಡು ಇಪ್ಪತ್ತು ನನಗೆ ಸಾಕೆಂದು ಹೇಳಿ ನೂರು ರೂಪಾಯಿ ಇನ್ನೊಬ್ಬ ಸಹಚಿಲ್ಲರಿಗನಿಗೆ ಕೊಟ್ಟು, ಬೈಟು ಕಾಫಿ ಕುಡಿದು ಹಂಚಿಕೊಳ್ಳಿ ಎಂದು ನಾನೂ ರೈಟ್ ಹೇಳಿ ಬೆಂಗಳೂರು ಪ್ಲಾಟ್ಫಾರ್ಮ್ ಕಡೆ ನಡೆದೆ.


ಇತ್ತ ನನ್ನ ಸೋದರಳಿಯ ಹೇಳಿದ್ದ ಬಸ್ ಬಂದಾಗ ಅದರಲ್ಲಿ ಅವನು ಕಾಣಲಿಲ್ಲ. ಫೋನ್ ಮಾಡಿದಾಗ ಹಾಯಾಗಿ ಮಲಗಿದ್ದ ಅವನು ಎದ್ದು, "ನೀವು ಅಲ್ಲಿ ತಿಂಡಿ ತಿನ್ನುತ್ತೀರಿ. ಈ ಕೂಡಲೇ ಹೊರಟು ಬರುತ್ತೇನೆ" ಎಂದ.


ಗತಿಯಿಲ್ಲದೆ ಮರೆತಿದ್ದ ಲಕ್ಷ್ಮಿ ಟಿಫಿನ್ ರೂಂ ನೆನೆಸಿಕೊಂಡು ಆ ಕಡೆ ಆಟೋ ಹತ್ತಲು ಅನುವಾಗುತ್ತಿದ್ದಂತೆಯೇ ನನ್ನ ಸಹಚಿಲ್ಲರಿಗ ಓಡೋಡಿ ಬಂದು ಹತ್ತೊಂಬತ್ತು ರೂಪಾಯಿ ಕೊಟ್ಟು ಬದ್ಧತೆ ಮೆರೆದ. ಆತನ ಬದ್ಧತೆ ಕಂಡಕ್ಟರನ ಮಲಬದ್ಧತೆಯ ಮುಖವನ್ನು ಮರೆಸಿತು. ಆದರೆ ಅದನ್ನು ಮರೆಯದಂತೆ ನಾನು ಹತ್ತಿದ ಆಟೋ ಚಾಲಕ ಲಕ್ಷ್ಮಿ ಟಿಫಿನ್ ರೂಂ ಮುಂದೆಯೇ ಹಲವಾರು ಬಾರಿ ಸುತ್ತಿಸತೊಡಗಿದ. ಚೆನ್ನೈನಲ್ಲಿ ಆಟೋದವರು ಸುತ್ತಿಸುವುದು ಕೇಳಿದ್ದೆ. ಆ ಚಾಳಿ ದುರ್ಗಕ್ಕೆ ಬಂದುದು ಪ್ರಗತಿಯ ಸಂಕೇತ ಎಂದುಕೊಂಡು, "ವಿಶ್ವಗುರುವೇ, ಏಕೆ ಮೂರು ಬಾರಿ ಲಕ್ಷ್ಮಿ ಟಿಫಿನ್ ರೂಂ ಬಂದರೂ ನಿಲ್ಲಿಸದೆ ಇಲ್ಲೇ ಸುತ್ತಿಸಿದೆ?" ಎಂದೆ. 


ಅದಕ್ಕೆ ಅವನು, "ಅದರ ಹತ್ತಿರ ಎಲ್ಲಾದರೂ ಅಡ್ರೆಸ್ ಹೇಳುವಿರೇನೋ ಎಂದು ಸುತ್ತಿಸಿದೆ" ಎಂದ.


"ಸರಿ, ಬಿಡಪ್ಪ" ಎಂದು ಬಸ್ ನಿಲ್ದಾಣದಿಂದ ನಡೆಯಬಹುದಾದ ಜಾಗಕ್ಕೆ ಆಟೋದಲ್ಲಿ ಬಂದ ತಪ್ಪಿಗೆ ಅರವತ್ತು ರೂಪಾಯಿ GST ಸಮೇತ ಕಕ್ಕಿದೆ.

***

ಟಿಫಿನ್ ರೂಮಿನಲ್ಲಿ ಕೆಲವು ನಿಯೋಜಿತ ಭೇಟಿಗಳನ್ನು ಮುಗಿಸಿ ಅನಿಯೋಜಿತ ಎಸ್ಕೆ ಶಾಮಸುಂದರ ಅವರನ್ನೂ ಭೇಟಿ ಮಾಡಿ ನಂತರ ನನ್ನ ಸೋದರಳಿಯ ಹತ್ತಿ ಬಂದ ವಿದ್ಯುತ್ ಚಾಲಿತ ಬಸ್ ಹತ್ತಿದೆ. ಅಷ್ಟರಲ್ಲೇ ನನ್ನ ಸೋದರಳಿಯನ ಬಾಸ್ ಕರೆ ಮಾಡಿ ಯಾವುದೋ ಅರ್ಜೆಂಟ್ ಕೆಲಸವನ್ನು ಅವನಿಗೆ ವಹಿಸಿದ ಕಾರಣ ನಾನೊಬ್ಬನೇ ಬೆಂಗಳೂರಿಗೆ ಪಯಣಿಸಿದೆ. 


ನವರಂಗ್ ಬಳಿ ಬಸ್ ಇಳಿದವಗೆ ಓರ್ವ ನವರಂಗಿ ವಿಶ್ವಗುರು ಆಟೋ ಚಾಲಕ ಸಿಕ್ಕಿದ. ಆಟೋ ಹತ್ತಿ ಮಲ್ಲೇಶ್ವರ ಹನ್ನೊಂದನೇ ಕ್ರಾಸ್ ಎಂದೆ. "ಜಾಸ್ತಿ ಕೇಳಲ್ಲ. ನೂರು ರೂಪಾಯಿ ಕೊಡಿ, ಸಾಕು" ಎನ್ನುತ್ತಾ "ಎಲ್ಲಿಂದ?" ಎಂದ. "ದಾವಣಗೆರೆ" ಎಂದೆ.  ಆಗಷ್ಟೇ ನಮ್ಮ ದಾವಣಗೆರೆ ಧಣಿಗಳ ಗುಣಗಾನ ಮಾಡಿ ಖ್ಯಾತನಾಗಿದ್ದ ರಿಜ್ವಾನನಿಗೆ ಅಜ್ವಾನ ಹಾಕಿ ಹಪ್ಪಳ ಮಾಡಿದ. ನಂತರ ನನ್ನ ಉದ್ಯೋಗದ ಬಗ್ಗೆ ಕೇಳಿದ. ನಾನು ನಿವೃತ್ತಿಯಾಗಿದ್ದೇನೆ ಎಂದೆ. ಥಟಕ್ಕನೆ ಆಟೋ ನಿಲ್ಲಿಸಿ ಮುಖ ನೋಡಿ, "ಇಷ್ಟು ಬೇಗ!?" ಎಂದ. 


"ಹೌದು, ಕೈಕಾಲು ಗಟ್ಟಿಯಿದ್ದಾಗ ರಿಟೈರ್ ಆಗಿ ದೇಶ ಸುತ್ತಿ, ವಯಸ್ಸಾದ ಮೇಲೆ ಖುರ್ಚಿ ಮೇಲೆ ಕುಳಿತು ಕೆಲಸ ಮಾಡಬೇಕೆಂಬುದು ನನ್ನ ಪ್ಲ್ಯಾನ್" ಎಂದೆ.


"ಸಂತೋಷ. ನಿಮ್ಮಿಂದ ಒಂದು ಸಹಾಯ ಎಕ್ಸ್ಪೆಕ್ಟ್ ಮಾಡಬಹುದಾ?" ಎಂದ.


"ಆಗುವುದಾದರೆ ಮಾಡೋಣ, ಹೇಳಿ" ಎಂದೆ.


"ಖಂಡಿತ ಮಾಡ್ತೀನಿ ಅಂದ್ರೆ ಕೇಳ್ತೀನಿ" ಎಂದು 'ವೃಥಾ ಸುಖಾಸುಮ್ಮನೆ ಎಲ್ಲಾ ನಾನು ಕೇಳುವ ಚಿಲ್ಲರೆ ಮನುಷ್ಯ ಅಲ್ಲ. ಸಹಾಯ ಮಾಡದೆ ಹೋದರೆ ನೀನೇ ಚಿಲ್ಲರೆ ಆಗುವುದು' ಎಂಬರ್ಥದಲ್ಲಿ ನಮ್ಮೀರ್ವರ ಘನತೆಯ ಬಗ್ಗೆ ಒಂದು ಸೂಕ್ಷ್ಮ ಎಚ್ಚರಿಕೆ ಕೊಟ್ಟ.


"ನನ್ನ ಕೈಲಾದರೆ ಮಾಡುತ್ತೇನೆ. ಆಗದ್ದನ್ನೆಲ್ಲ ಮಾಡಲು ಆಗುತ್ತದೆ ಎನ್ನಲು ನಾನು ರಾಜಕಾರಣಿ ಅಲ್ಲ" ಎಂದೆ.


"ಏನೂ ಇಲ್ಲ, ನನ್ನ ಮಗಳ ಕಾಲೇಜ್ ಫೀಸು ಹದಿನೈದು ಸಾವ್ರ ಕಟ್ಟಬೇಕಿತ್ತು. ನೀವು ಕೊಟ್ರೆ ನಾನು ಸ್ವಲ್ಪ ಸ್ವಲ್ಪ ವಾಪಸ್ ಕೊಟ್ಟು ತೀರುಸ್ತೀನಿ. ನಿಮಗೆ ಹದಿನೈದು ಸಾವ್ರ ಏನು ದೊಡ್ಡದಲ್ಲ. ಎಲ್ಲೋ ಕಳೆದುಬಿಡ್ತೀರಿ. ನೋಡಿ ಗೂಗಲ್ ಪೇ ಮಾಡಿ" ಎಂದ.


"ಡಬ್ಬಲ್ ಮೀಟ್ರು ಓಕೆ, ನುರೈವತ್ತರಷ್ಟು ಮೀಟ್ರು ಯಾಕೆ!?!" ಎಂದುಕೊಳ್ಳುತ್ತ, "ಅಷ್ಟೆಲ್ಲಾ ದೊಡ್ಡ ಮನುಷ್ಯ ನಾನಲ್ಲ, ವಿಶ್ವಗುರುವೇ" ಎಂದು ನೂರು ರೂಪಾಯಿ ಕೊಟ್ಟು ಇಳಿದೆ.

***

ದಾವಣಗೆರೆಯಲ್ಲಿ ನನಗೆ ಈಗ ಇರಲು ಜಾಗವಿಲ್ಲ. ಏಕೆಂದರೆ ನನ್ನ ಮನೆಯನ್ನು ಬಾಡಿಗೆ ಕೊಟ್ಟಿದ್ದೇನೆ. ಹಾಗಾಗಿ ದಾವಣಗೆರೆಗೆ ಹೋದಾಗ ಹೋಟೆಲ್ಲಿನಲ್ಲಿ ಇರುವುದು ಅನಿವಾರ್ಯ. ವಾರದಲ್ಲಿ ಸದಾ ನಾಲ್ಕು ದಿನ ಹೋಟೆಲ್ಲಿನಲ್ಲಿರುವುದು ನನಗೆ ಅಭ್ಯಾಸವಾಗಿಹೋಗಿರುವ ಕಾರಣ, ಹೋಟೆಲ್ಲಿನಲ್ಲಿರುವುದು ನನಗೆ ಅತ್ಯಂತ ಪ್ರೀತಿಯ ಸಂಗತಿ. ಆದರೆ ನನ್ನ ಊರಿನಲ್ಲಿಯೇ ಎಂದೂ ಹೋಟೆಲ್ಲಿನಲ್ಲಿ ಉಳಿಯದ ನನಗೆ ದಾವಣಗೆರೆಯಲ್ಲಿ ಹೋಟೆಲ್ಲಿನಲ್ಲಿರುವುದು ಒಂದು ರೀತಿಯ ನಿರ್ವಾತ ಅನಾಥ ಭಾವನೆಯನ್ನು ಉಂಟು ಮಾಡಿತು. ಅದರಲ್ಲೂ ದಾವಣಿಗರ ಹೋಟೆಲ್ಲುಗಳ ಸೊಕ್ಕಿನ ಸಿಬ್ಬಂದಿಗಳು ರೂಮು ಕೊಡುವುದೇ ತಾವು ಮಾಡುವ ಮಹದುಪಕಾರ ಎಂಬಂತೆ ವರ್ತಿಸಿ ಒಂದೇ ನೀರಿನ ಬಾಟಲ್ಲು, ಒಂದೇ ಒಂದು ಟವೆಲ್ಲು ಕೊಟ್ಟು ಶವರ್ ಕರ್ಟನ್ನು ಹಾಕದೆ, ಚೆಕಿನ್ ಮುಂಚಿತವಾಗಿ ಎಸಿ ರೂಮನ್ನು ತಂಪಾಗಿರಿಸದೆ ಆದರೆ ಡೆಂಟಲ್ ಕಿಟ್ ಇಟ್ಟು ದಿನಕ್ಕೆ ನಾಲ್ಕೂವರೆಯಿಂದ ಏಳು ಸಾವಿರ ಕೀಳುವ ಪಕ್ಕಾ ವ್ಯಾಪಾರಿ ಮಾಜಿ ದಲ್ಲಾಳಿ, ಹಾಲಿ ರಿಯಲ್ ಎಸ್ಟೇಟ್ ಟೈಕೂನುಗಳ ಹೋಟೆಲ್ ನನ್ನಲ್ಲಿ ಇನ್ನಷ್ಟು ಅನಾಥ ನಿರ್ವಾತವನ್ನು ತುಂಬಿದವು.


ಮರುದಿನ ನನ್ನ ಅತ್ತೆಯ ಮಗ ತನ್ನಲ್ಲಿರುವ ಪ್ರಾಣಿ ಪ್ರೀತಿಯನ್ನು ನನ್ನಲ್ಲೂ ಕಂಡಂತೆ ಅವರ ಮಿಲ್ಲಿನಲ್ಲಿ ಬೀಡು ಬಿಟ್ಟಿರುವ ಮಠದ ಆನೆಯನ್ನು ತೋರಿಸಲು ಕರೆದುಕೊಂಡು ಹೋದ. ಆನೆ ಆಗಲೇ ನಗರ ಸಂಚಾರಕ್ಕೆ ಹೋಗಿಯಾಗಿತ್ತು. 'ಸರಿ' ಎಂದು ಅಲ್ಲಿಂದ ಒಂದು ಮದುವೆ, ಎರಡು ಗೃಹ ಪ್ರವೇಶಗಳಲ್ಲಿ ಮೂರು ಊಟ ಮುಗಿಸಿಕೊಂಡು ರಾಮ್ ಅಂಡ್ ಕೊ ಸರ್ಕಲ್ ಕಡೆ ಹೊರಟೆ. ಎದುರಿಗೆ ಆನೆ ಬರುವುದು ಕಂಡಿತು. ಅದು ಹೇಗೋ ಏನೋ ಆನೆಯು ಎಲ್ಲಾ ಬಿಟ್ಟು ನನ್ನ ಕಾರನ್ನು ತಡೆದು ಕಿಟಕಿ ತೆರೆಯುವಂತೆ ಸೊಂಡಿಲಿನಿಂದ ನಾಕ್ ನಾಕ್ ಬಡಿಯಿತು. ಕಿಟಕಿ ಇಳಿಸಿದ ನನ್ನ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿ ವಿಶ್ವಗುರು ಆನೆ "ತಕ್ಕ" ದಕ್ಷಿಣೆ ಪಡೆದು ಮುನ್ನಡೆಯಿತು. 

***


ನನ್ನ ತೋಟದ ಹತ್ತಿರ ಒಂದು ದೊಡ್ಡ ಕೆರೆಯಿದೆ. ಈ ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆಯ ನಾಲೆಯಿಂದ ನೀರು ತುಂಬಿಸುವ ಏತ ನೀರಾವರಿಗೆ ಹಿಂದಿನ ಕಮಲ ಶಾಸಕರು ಐದು ಕೋಟಿ ತೆಗೆದಿರಿಸಿದ್ದನ್ನು ಇಂದಿನ ಕೈ ಶಾಸಕರು ಬೇರೆ ಕಾರ್ಯಕ್ಕೆ ಕೊಟ್ಟಿದ್ದಾರಂತೆ. ಮೊನ್ನೆ ಈ ಹಾಲಿ ಕೈ ಶಾಸಕರು ನನ್ನ ತೋಟದ ಪಕ್ಕದಲ್ಲಿರುವ ಹದಿನೈದು ಮನೆಗಳ ಹಳ್ಳಿಗೆ ಭೇಟಿ ಕೊಟ್ಟು ಅಲ್ಲಿನ ರಾಮನ ದೇವಾಲಯಕ್ಕೆ ಮುಜರಾಯಿ ಇಲಾಖೆಯಿಂದ ಹತ್ತು ಲಕ್ಷ ಮತ್ತು ತಮ್ಮ ಕೈಯಿಂದ ಇಪ್ಪತ್ತು ಲಕ್ಷ ಕೊಡಿಸುತ್ತೇನೆ, ದೇವಸ್ಥಾನವನ್ನು ಕೆಡವಿ ಕಟ್ಟಿ ಎಂದು ಹೇಳಿ ಹೋಗಿದ್ದಾರೆ. 


ಐನೂರಕ್ಕೂ ಹೆಚ್ಚಿನ ಓಟುಗಳ ಹಳ್ಳಿಯ ಜನೋಪಯೋಗಿ ನೀರಾವರಿ ಯೋಜನೆಯನ್ನು ತಡೆದು ಮೂವತ್ತು ಓಟುಗಳ ಅರ್ಧದ ಹದಿನೈದು ಓಟುಗಳಿಗೆ ಮೂವತ್ತು ಲಕ್ಷ ರೂಪಾಯಿಗಳ ಬಂಡವಾಳದ ದೇವಸ್ಥಾನವು ಯಾವ ರಾಜಕೀಯ ಸಮೀಕರಣ ಎಂದು ನನಗರ್ಥವಾಗಲಿಲ್ಲ?!? ಬಹುಶಃ ಕೆರೆಯಲ್ಲಿ ಕಮಲ ಬೆಳೆಯುತ್ತದೆಂದು ಕೆರೆಯನ್ನು ಒಣಗಿಸಿ ರಾಮಮಂದಿರವೊಂದನ್ನು ತಮ್ಮ "ಕೈ" ಕಟ್ಟಬಲ್ಲದು ಎಂದು ತೋರುವ ದೂರದೃಷ್ಟಿ ಅವರದಿರಬಹುದು.

 ***

ಹೀಗೆ ಬಸ್ ನಿರ್ವಾಹಕ, ಆಟೋ ಚಾಲಕ, ಹೋಟೆಲ್ ಮಾಲೀಕ, ರಾಜಕಾರಣಿ ಇತ್ಯಾದಿ ಅಷ್ಟೇ ಅಲ್ಲದೆ ಸಾಕುಪ್ರಾಣಿಗಳು ಸಹ ಬಕರಾಗಳನ್ನು ಗುರುತಿಸಿ ನುಣ್ಣಗೆ ಬೋಳಿಸುವ ಜಾಗತಿಕ ವ್ಯಾಪಾರಿತನದ ವಿಶ್ವಗುರುವೆಂಬೋ ವಿಶ್ವಗುರುಗಳನ್ನು ನನ್ನಂತಹ ಅಮಾಯಕ ಅನಿವಾಸಿ ಬೇವರ್ಸಿಗಳು ಮೀರಿಸಲು ಸಾಧ್ಯವೇ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮಲೆಯೂರು ಗುರುಸ್ವಾಮಿ ಅವರ ನೆನಪು

 ಮಲೆಯೂರು ಗುರುಸ್ವಾಮಿಯವರು ನನಗೆ ಪರಿಚಯವಾದದ್ದು ಅವರ ಕೃತಿಗಳ ಮೂಲಕ. ಕಾಲಘಟ್ಟದಲ್ಲಿ ಹುದುಗಿ ಹೋದ ಇತಿಹಾಸದ ಕಲಾಕೃತಿಗಳನ್ನು ಉತ್ಖನನಕಾರರು ಬಗೆದು ತೋರುವಂತೆ ಲೋಕ ಮರೆತ ಅಪಾರ ಸಾಧನೆಯ ಸಾಧಕರನ್ನು ಹುಡುಕಿ ಅವರ ಜೀವನಗಾಥೆಯನ್ನು ಪರಿಚಯಿಸುವಂತಹ ಕೃತಿಗಳ ಮೂಲಕ!


ಅವರ ಕೃತಿಗಳು ಒಂದೆಡೆ ಆಯಾಯ ಸಾಧಕರ ಸಾಧನೆಯನ್ನು ಸಮಗ್ರವಾಗಿ ಕಥಾರೂಪದಲ್ಲಿ ಕಟ್ಟಿಕೊಡುವುದರ ಜೊತೆಗೆ ಸೂಕ್ಷ್ಮವಾಗಿ ಗುರುಸ್ವಾಮಿಯವರ ವ್ಯಕ್ತಿತ್ವ, ಕ್ರಿಯಾಶೀಲತೆ, ಧನಾತ್ಮಕ ಚಿಂತನೆಯ ಹೊಳಹನ್ನೂ ನೀಡುತ್ತವೆ. ಈ ಸೂಕ್ಷ್ಮತೆಯ ಛಾಯೆಯನ್ನು ಅವರ "ಕಪಿಲೆ ಹರಿದಳು ಕಡಲಿಗೆ”, ಮತ್ತು "ಬಂಗಾರದೊಡ್ಡಿ” ಕೃತಿಗಳಲ್ಲಿ ಹೆಚ್ಚಾಗಿ ಕಾಣಬಹುದು. ದೇವದಾಸಿಯರ ಕಥನವನ್ನು ಕಟ್ಟಿಕೊಡುವಾಗ ಸಹ ಎಲ್ಲಿಯೂ ಶಿಷ್ಟ ಸಭ್ಯತೆಯ ಮಿತಿಯನ್ನು ಮೀರದೆ ಒಂದು ನಿರ್ದಿಷ್ಟ ಗೆರೆಯ ಪರಿಧಿಯಲ್ಲಿಯೇ ಪ್ರೇಮ, ಕಾಮ, ಶೃಂಗಾರಗಳನ್ನು ಚಿತ್ರಿಸುತ್ತಾರೆ. 


ಸಹಜವಾಗಿಯೇ ಒಂದು ಮಠದ ಸ್ವಾಮಿಗಳಾಗಬೇಕಿದ್ದ ಇಂತಹ ಅತ್ಯಂತ ಸಭ್ಯ ಸುಸಂಸ್ಕೃತ ಮಲೆಯೂರರು ಸಂಸಾರಿಗಳಾದದ್ದು ಮತ್ತು ಕತೆಗಾರರಾದದ್ದು ಓದುಗರ ಪುಣ್ಯ! ಆದರೂ ವಿರಕ್ತಿಯ ಶರಣ ಸಂಸ್ಕೃತಿಯನ್ನು ಯಾವುದೇ ವಿರಕ್ತರಿಗಿಂತ ಕಡಿಮೆ ಇಲ್ಲದಂತೆ ಸಂಸಾರಿ ಮಲೆಯೂರರು ಆವಾಹಿಸಿಕೊಂಡಿದ್ದರು. ಶರಣ ಸಂಸ್ಕೃತಿ ಕೇವಲ ಕಾವಿ, ಬ್ರಹ್ಮಚರ್ಯದಿಂದಲ್ಲ ಪ್ರಮುಖವಾಗಿ ಸಂಸಾರಸಾರದಲ್ಲಿಯೇ ಹೆಚ್ಚು ಅಡಕವಾಗಿದೆ ಎಂಬಂತೆ ಜೀವಿಸಿದ್ದರು.


ಇನ್ನು ಸಾಹಿತ್ಯಿಕವಾಗಿ ಇವರ ಸಮಕಾಲೀನ ಲೇಖಕರು ಅಂತರರಾಷ್ಟ್ರೀಯ ಖ್ಯಾತಿಯ ಸಾಧಕರ ಜೀವನಗಾಥೆ ರಚಿಸಲು ಹವಣಿಸುತ್ತಿದ್ದಾಗ ಮಲೆಯೂರು ಗುರುಸ್ವಾಮಿಗಳು ವಿಶೇಷವಾಗಿ ತಮ್ಮ ಸುತ್ತಮುತ್ತಲಿನ ಮೈಸೂರಿನ ಮಣ್ಣಿನಲ್ಲಿ ಕಳೆದುಹೋಗಿರುವ ಅನರ್ಘ್ಯ ರತ್ನಗಳನ್ನು ಹೆಕ್ಕಿ ಅವರುಗಳ ಜೀವನಗಾಥೆಯನ್ನು ಕಟ್ಟಿಕೊಡುವಲ್ಲಿ ತೊಡಗಿದ್ದರು. ನಿರ್ಲಕ್ಷಿತ ಸಮುದಾಯದ ದೇವದಾಸಿ ಮಹಿಳೆಯರ ಬಗ್ಗೆ ಅಭ್ಯಸಿಸಿ ಅವರ ತ್ಯಾಗದ ಬದುಕು ಮತ್ತು ಸಾಮಾಜಿಕ ಕೊಡುಗೆಗಳ ದಾಖಲೆಯನ್ನು ಸಂಕಥನವಾಗಿಸಿ ಓದುಗರನ್ನು ಭಾವಾವೇಶಕ್ಕೆ ಒಳಗಾಗಿಸಿ ಆ ಅನರ್ಘ್ಯ ರತ್ನಗಳ ಕುರಿತು ಒಂದು ದೈವೀ ಅನುಭೂತಿಯನ್ನು ಮೂಡಿಸಿರುವರು. ಈ ನಿಟ್ಟಿನಿಂದ ಶರಣ ಮಲೆಯೂರು ಗುರುಸ್ವಾಮಿಗಳು ಶರಣ ಸಂಸ್ಕೃತಿಯ ಉನ್ನತ ಪದವಿಯಾದ ಗಣ ಪದವಿಯನ್ನೇ ಪಡೆದರು ಎಂದು ನಿಸ್ಸಂಶಯವಾಗಿ ಹೇಳಬಹುದು. ಅದು ಹೇಗೆಂದರೆ, ಪಂದ್ಯವೊಂದರಲ್ಲಿ ಜಯಿಸಲು ಷಣ್ಮುಖನು ಭೂಮಂಡಲದ ಸುತ್ತ ಸುತ್ತು ಹಾಕಲು ಹೋದಾಗ ಗಣಪತಿಯು ಹೇಗೆ ತನ್ನ ಎದುರೇ ಇದ್ದ ತನ್ನ ಮಾತಾಪಿತರ ಸುತ್ತ ಪ್ರದಕ್ಷಿಣೆ ಹಾಕಿ ಭೂಮಂಡಲದ ಸುತ್ತ ಪ್ರದಕ್ಷಿಣೆ ಬಂದೆನೆಂದನೋ ಹಾಗೆ ತಮ್ಮ ಸುತ್ತಮುತ್ತಲ ಸಾಧಕರ ಕುರಿತು ಬರೆದು ಮಲೆಯೂರರು ಆ ಗಣಪತಿಯಂತೆಯೇ ಗಣಂಗಳಾದರು. ಅವರ ಸಮಕಾಲೀನರು ಇನ್ನೂ ಭೂಮಂಡಲದ ಸುತ್ತ ಗಿರಕಿ ಹೊಡೆಯುತ್ತಲೇ ಇದ್ದಾರೆ! ಈ ಹಿನ್ನೆಲೆಯಿಂದ ಮಲೆಯೂರರು ಅಪ್ಪಟ "ಮಣ್ಣಿನ ಮಗ" ಸಹ ಹೌದು.


ಈ ಸಂಕಥನಗಳ ನಿಟ್ಟಿನಲ್ಲಿ ದೇವದಾಸಿ ಮಹಿಳೆ ಬೆಂಗಳೂರು ನಾಗರತ್ನಮ್ಮನವರ ಜೀವನಗಾಥೆಯ "ಕಪಿಲೆ ಹರಿದಳು ಕಡಲಿಗೆ", ಅಪ್ರತಿಮ ನಾಟಕಕಾರ ಸಂಸರ ಕುರಿತಾದ "ಸಂಸ" ಮತ್ತು ಅವರ ಇತ್ತೀಚಿನ "ಬಂಗಾರದೊಡ್ಡಿ!" ಕೃತಿಗಳು ಉಲ್ಲೇಖಾರ್ಹ.


ಇನ್ನು ಓರ್ವ ಕಥೆಗಾರರಾಗಿ ಮಲೆಯೂರು ಗುರುಸ್ವಾಮಿಗಳು ಆಯಾಯ ಕೃತಿಗಳ ಕಥಾಹಂದರದಲ್ಲಿ ಓದುಗರನ್ನು ಕಥನಗಳ ಕಾಲಘಟ್ಟಕ್ಕೆ ಮಂತ್ರಸದೃಶರಾಗಿ ಕರೆದೊಯ್ದುಬಿಡುತ್ತಾರೆ. ಅಂದಿನ ಜನಜೀವನ, ಜೀವನಶೈಲಿಗೆ ಓದುಗರನ್ನೊಳಗಾಗಿಸುತ್ತ ಕಥಾನಕವನ್ನು ಓದುಗರೂ ಒಂದು ಪಾತ್ರವಾಗಿ ನೋಡುತ್ತಿರುವಂತೆ ಭಾಸವಾಗುವಂತಹ ಕಥಾಚಿತ್ರವನ್ನು ಬಿಡಿಸುವಲ್ಲಿ ಗುರುಸ್ವಾಮಿಯವರ ಕೌಶಲ್ಯ ಎದ್ದು ಕಾಣುತ್ತದೆ. ತಮ್ಮ ಕೃತಿಗಳಾದ್ಯಂತ ಅಂದಿನ ಕಾಲಘಟ್ಟದ ಸಮಾಜ, ಜಾತಿ ಪದ್ಧತಿ, ನ್ಯೂನತೆ, ವ್ಯವಸ್ಥೆಗಳನ್ನು ಕಟ್ಟಿಕೊಡುವುದಲ್ಲದೆ ಆಯಾಯ ಊರುಗಳ ಬಡಾವಣೆಗಳನ್ನು, ಬೀದಿಗಳನ್ನು, ದೇವಸ್ಥಾನಗಳನ್ನು, ಮಠಗಳನ್ನು, ಉತ್ಸವಗಳನ್ನು, ಕಟ್ಟಡಗಳನ್ನು, ಅಡುಗೆಗಳನ್ನು, ನಡಾವಳಿಗಳನ್ನು ಸಾಂದರ್ಭಿಕವಾಗಿ ವರ್ಣಿಸುತ್ತ ಓದುಗನನ್ನು ಅಕ್ಷರಶಃ ಕಥೆಯೊಳಗೆ ಲೀನವಾಗಿಸಿ ಭಾವಾವೇಶಕ್ಕೊಳಪಡಿಸುತ್ತಾರೆ. ಇಂತಹ ಅನುಭೂತಿಯ ಸೃಷ್ಟಿ ಮಲೆಯೂರರ ವಿಶೇಷ. ಓರ್ವ ಕಥೆಗಾರರಾಗಿ, ಅದರಲ್ಲೂ ಜೀವನಗಾಥೆಗಳ ಕಥೆಗಾರರಾಗಿ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಅವರು ಮೂಡಿಸಿದ್ದಾರೆ.


ಇದಿಷ್ಟು ನಾನು ಓದುಗನಾಗಿ ಕಂಡುಕೊಂಡ ಸಾಹಿತಿ ಮಲೆಯೂರು ಗುರುಸ್ವಾಮಿಯವರ ಸಾಹಿತ್ಯಿಕ ವ್ಯಕ್ತಿತ್ವ.


ಇನ್ನು ನಾನು ಇವರ ಸಂಪರ್ಕಕ್ಕೆ ಬಂದ ನಂತರ ವೈಯಕ್ತಿಕವಾಗಿ ಕಂಡುಕೊಂಡ ಮಲೆಯೂರು ಗುರುಸ್ವಾಮಿಯವರದು ಮೇರು ವ್ಯಕ್ತಿತ್ವ. ಅತ್ಯಂತ ಸ್ನೇಹಶೀಲ, ತಮಾಷೆ, ವಿಡಂಬನೆ, ಸರ್ವ ಸಮಾನತೆಯ ಹೃದಯ ವೈಶಾಲ್ಯದ ಮೂರ್ತರೂಪ. ತಮ್ಮ ಕಾದಂಬರಿಗಳ ಕಾಲಘಟ್ಟಕ್ಕೆ ಓದುಗರನ್ನು ಕೊಂಡೊಯ್ಯುವಂತೆ ಗುರುಸ್ವಾಮಿಯವರು ಎಲ್ಲಾ ವಯೋಮಾನದವರ ಜೊತೆ ಆಯಾಯ ವಯೋಮಾನದವರ ವಯಸ್ಸಿಗೆ ಪ್ರವೇಶಿಸಿ ಆಪ್ತಮಿತ್ರರಂತೆ ಸ್ನೇಹ ತೋರುತ್ತಿದ್ದರು. ಹಾಗಾಗಿ ಅವರು ಮಕ್ಕಳಿಂದ ಹಿಡಿದು ಪ್ರೌಢ ಹಿರಿಯರತನಕ ಸ್ನೇಹ ವಲಯವನ್ನು ಸಂಪಾದಿಸಿದ್ದರು.


ನನ್ನ ಕೃತಿಗಳನ್ನು ಓದಿ ಸಾಕಷ್ಟು ಪ್ರೋತ್ಸಾಹ ತುಂಬಿ ನಿರ್ಭಿಡೆಯಿಂದ ಬರೆಯಲು ನನ್ನನ್ನು ಹುರಿದುಂಬಿಸುತ್ತಿದ್ದರು. ಆದರೂ ನಾನು, "ಸರ್, ನಾನೊಬ್ಬ ತರಲೆ, ಕೀಟಲೆ, ತಮಾಷೆಯ ಪ್ರವೃತ್ತಿಯ ವ್ಯಕ್ತಿ. ಬರಹದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿದ್ದೇನೆ" ಎಂದು ಉಡಾಫೆ ತೋರುತ್ತಿದ್ದೆ. "ಹಹ, ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಾತು. ನಿಮ್ಮ ಬರಹ ವಸ್ತುನಿಷ್ಠವೂ ಸತ್ಯನಿಷ್ಠವೂ ಆಗಿದೆ" ಎಂದು ಹುರಿದುಂಬಿಸುತ್ತಿದ್ದರು. ಇದು ನನ್ನನ್ನಷ್ಟೇ ಅಲ್ಲದೆ ಅವರ ಸಂಪರ್ಕಕ್ಕೆ ಬಂದ ಎಲ್ಲಾ ಬರಹಗಾರರ ಕುರಿತಾಗಿ ಅವರು ಪ್ರೋತ್ಸಾಹಿಸುವ ಪರಿಯಾಗಿತ್ತು. ಅವರ ಈ ಸದ್ಗುಣವನ್ನು ಅವರ ಶಿಷ್ಯರ ಮಾತುಗಳಲ್ಲಿ ಕೇಳಿದಾಗಲೆಲ್ಲ ನನಗೆ ಸದಾ ನೆನಪಾಗುತ್ತಿದ್ದದ್ದು ಸಿದ್ಧರಾಮೇಶ್ವರನ ಈ ವಚನ:


ಆ ಅಕ್ಷರವನು ಆರೈದು ತೋರಿರಿ

ಓರಂತೆ ಎನ್ನ ಸದುಹೃದಯನೆನಿಸಿ

ನಾದ ಕಳೆಗಳನೆನ್ನ ಆಕರದೊಳಗಿಟ್ಟು

ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ

ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ,

ಕಪಿಲಸಿದ್ಧಮಲ್ಲಿಕಾರ್ಜುನ.


ಹೀಗಿರುವಾಗ ಒಮ್ಮೆ ನನ್ನಂತಹ ಪೋಲಿಪುಂಡ, ಕೀಟಲೆ, ಅತೀ ವಿಡಂಬನೆಯ ಕಾಲೆಳೆಯುವವನಿಗೆ ಫೋನ್ ಮಾಡಿ, "ಬಂಗಾರದೊಡ್ಡಿ ಕಾದಂಬರಿಯ ಕರಡು ಕಳಿಸುತ್ತಿದ್ದೇನೆ. ಮುನ್ನುಡಿ ಬರೆದು ಕೊಡಬೇಕು" ಎಂದರು.


ಆಗ ನಾನು, "ಸರ್, ಕಾಲೆಳೆಯುವುದು ನನ್ನ ಕೆಲಸ. ಇದೇನು ನೀವೇ ನನ್ನ ಕೆಡುವುತ್ತಿದ್ದೀರಿ! ತಮಾಷೆ ತಾನೇ!" ಎನ್ನುತ್ತ ಹಲವಾರು ಶೈಕ್ಷಣಿಕ ವಲಯದ ಖ್ಯಾತನಾಮರನ್ನು ಹೆಸರಿಸಿ "ಅವರನ್ನು ಕೇಳೋಣ ಸರ್. ನಾನೇ ಕೇಳಿ ಬರೆಯಲು ಒಪ್ಪಿಸುವೆ" ಎಂದೆ.


ಅದಕ್ಕೆ ಅವರು, "ರವಿ, ನಿಮ್ಮ ಕೈಯಲ್ಲಿ ಆಗುತ್ತದೆ. ಬರೀರಿ" ಎಂದು ಫೋನಿಟ್ಟರು. 


ನಮ್ಮ ಪ್ರಕಾಶಕರಾದ ಸಂವಹನ ಲೋಕಪ್ಪನವರು ಸಹ ತಕ್ಷಣಕ್ಕೆ ಕರಡನ್ನು ಇಮೇಲ್ ಕಳಿಸಿ ಮುನ್ನುಡಿಗೆ ಮುನ್ನುಡಿ ಹಾಡಿಯೇಬಿಟ್ಟರು.


ಹೀಗೆ ಗುರುಗಳ ನಿಷ್ಕಲ್ಮಶ ಪ್ರೀತಿ, ಪ್ರೋತ್ಸಾಹ ಮತ್ತು ಜವಾಬ್ದಾರಿಯ ಹಿನ್ನೆಲೆಯಲ್ಲಿ "ಬಂಗಾರದೊಡ್ಡಿ" ಕೃತಿಗೆ ಮುನ್ನುಡಿ ಬರೆದು ಹೂವಿನೊಂದಿಗೆ ನಾರೂ ದೇವರ ಮುಡಿ ಏರಿದಂತೆ ನಾನೂ ಗುರುಗಳ ಕೃತಿಯೊಂದರಲ್ಲಿ ದಾಖಲಾದೆ. ನನ್ನ ಮುನ್ನುಡಿಯನ್ನು ಮೆಚ್ಚಿ ಹಲವರು ಮೆಚ್ಚುಗೆ ಸೂಚಿಸಿದಾಗ ಅತ್ಯಂತ ಸಂಪ್ರೀತರಾಗಿ ಫೋನ್ ಮಾಡಿ, "ನಿಮ್ಮ ಕೈಯಲ್ಲಿ ಆಗುತ್ತದೆ ಎಂದಿದ್ದೆನಲ್ಲವೇ! ನೋಡಿ, ಮುನ್ನುಡಿಯನ್ನು ಬಹಳ ಜನರು ಮೆಚ್ಚಿಕೊಂಡಿದ್ದಾರೆ" ಎಂದು ಖುಷಿಯನ್ನು ಹಂಚಿಕೊಂಡಿದ್ದರು. ಇದು ಮಲೆಯೂರರು ಕಿರಿಯರಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸುವ ಒಂದು ಉದಾಹರಣೆಯಷ್ಟೆ. 


ನಂತರ ನಿರಂತರ ಸಂಪರ್ಕದಲ್ಲಿದ್ದರೂ ಅವರು ಎಂದೂ ತಮ್ಮ ದೇಹಸ್ಥಿತಿಯ ಕುರಿತಾಗಿ ನನ್ನೊಂದಿಗೆ ಹೇಳಿರಲಿಲ್ಲ. ನನ್ನ "ಅರಿದಡೆ ಆರದು ಮರೆದೊಡೆ ಮೂರದು" ಕೃತಿಯ ಕುರಿತು ಆಗಾಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ. ಆಗಲೂ ಅವರು ವಿಷಯದ ಕುರಿತು ಮಾತನಾಡುತಿದ್ದರೇ ಹೊರತು ತಮ್ಮ ವೈಯಕ್ತಿಕ ದೈಹಿಕ ಸಮಸ್ಯೆಯ ಬಗ್ಗೆಯಲ್ಲ. ನನ್ನ ಕೃತಿ "ಅರಿದಡೆ ಆರದು ಮರೆದೊಡೆ ಮೂರದು" ಬಿಡುಗಡೆಯ ಕೆಲವೇ ದಿನಗಳು ಮುಂಚೆ ಎಲ್ಲವನ್ನೂ ತೊರೆದು ಗಣಪದವಿಗೇರಿದರು. ತಮ್ಮ ದೇಹಸ್ಥಿತಿಯ ಬಗ್ಗೆ ಏನೊಂದೂ ಹೇಳದೆ ಗುರುವಾಗಿ ಗುರಿಯಲ್ಲಿ ನನ್ನನ್ನು ನೆಲೆಗೊಳಿಸಿ ನಿಜದ ಗಣಪದವಿಗೇರಿದರು. ಸಾಂದರ್ಭಿಕವಾಗಿ ಸಿದ್ಧರಾಮೇಶ್ವರನ ಮತ್ತೊಂದು ವಚನ ಉಲ್ಲೇಖಾರ್ಹ:


ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ,

ಇನಿದು ಬಂದಡೆ ಅದಕ್ಕಿಂಬುಗೊಡದೆ,

ಇರುತಿರ್ಪ ಸರ್ಪವನು ತೆಗೆದು

ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ,

ವಾಕ್ಯಂಗಳ ಆಕಾರ ಚತುಷ್ಟಯಮಾನಂದದದಲ್ಲಿರಿಸಿದ

ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನ.


ನನ್ನ ಕೃತಿಗಳಲ್ಲಿ ಅವರ ಪ್ರೀತಿಯ ಪ್ರೋತ್ಸಾಹ ಪ್ರಭಾವ ಗಾಢವಾಗಿದೆ. ಅವರ ನೆನಪು ನಿರಂತರ.