ಹಾಸನದ ಮುಂಗಾರು ಮಳೆಯ ಒಂದು ಸಂಜೆ....

 ಹಾಸನದ ಮುಂಗಾರು ಮಳೆಯ ಒಂದು ಸಂಜೆ....ನೀವು ನೋಡಿರಬಹುದಾದ ಕಿರಿಕ್ ಪಾರ್ಟಿ ಸಿನೆಮಾ ಕತೆಯ ಮುತ್ತಜ್ಜನ ಕತೆಯನ್ನೂ ಮೀರಿಸಿದ ಮೂಲ ಸಾಲಗಾಮೇಶ್ವರ ಪಥದ ಕತೆಯನ್ನು ನಾನು ಬಲ್ಲೆ. ಏಕೆಂದರೆ ಈ ಸಿನೆಮಾ ಕತೆಯ ಉತ್ತರ ಪತ್ರಿಕೆಯ ತಿದ್ದುವ ಪ್ರಹಸನದ ಪಿತಾಮಹ ನಾನೇ ಎಂದು ಅಂದು ಗುಸುಗುಸು ಗಾಸಿಪ್ಪಿನ ಹೀರೋ ನಾನೆನಿಸಿದ್ದೆ.


ಅಂತಹ ಕಥಾಗುಚ್ಛದ ಒಂದು ಸೀನ್:

ಸಿಂ-ಹಾಸನದ ಹತ್ತಿರದ ಸಾರೋಟಿನ ಕುಣಿಗಲ್ ಕುದುರೆಗಳಿಗೆ ರಮ್ ಕುಡಿಸಿ ಮಲ್ಯ, ಒಡೆಯರ್, ರೆಬೆಲ್ ಸ್ಟಾರ್ ಮತ್ತು ಖುರ್ಬಾನಿ ಸೋದರರು ಪೂನಾ ಬೆಂಗಳೂರು ರೇಸುಗಳಲ್ಲಿ ಓಡಿಸುತ್ತಿದ್ದರಂತೆ! ಹಾಗಾಗಿ ನಮ್ಮ ಹಾಸ್ಟೆಲ್ಲಿನ ಎಲ್ಲಾ ಹುಚ್ಚು ಹರೆಯದ ಕುದುರೆಗಳ ಆಯ್ಕೆ ಸಹಜವಾಗಿ ಅಂದೆಲ್ಲಾ ಸದಾ ರಮ್ಮೇ ಆಗಿರುತ್ತಿತ್ತು. ತಿಂಗಳ ಶುಭಾರಂಭ ಓಲ್ಡ್ ಮಾಂಕ್ ರಮ್ ಅಥವಾ ಒಮ್ಮೊಮ್ಮೆ ವೆಲ್ಲಿಂಗ್ಟನ್ ವಿಸ್ಕಿಯೊಂದಿಗೆ ಆರಂಭವಾಗಿ ನಂತರ ಹರ್ಕ್ಯೂಲಿಸ್, ತಿಂಗಳ ಮಧ್ಯೆ ಖೋಡೆಸ್ ರಮ್, ನಂತರ ಮಾಸಾಂತ್ಯಕ್ಕೆ ಮಾಸ್ ಮಹನೀಯರ ಅಪ್ಪಟ ಸ್ಫಟಿಕ ಶುಭ್ರ ಪಾರದರ್ಶಕ ಜಲಸದೃಶ್ಯ ಸ್ಯಾಚೆಟ್ ಜಲದೊಂದಿಗೆ ಕೊನೆಗೊಳ್ಳುತ್ತಿತ್ತು. ಇಪ್ಪತ್ತೈದು ಸ್ಯಾಚೆಟ್ ಜಲವನ್ನು ಸ್ನಾನದ ಬಕೆಟ್ಟಿಗೆ ಸುರಿದು ಮೇಲೆ ಇಪ್ಪತ್ತು ನಿಂಬೆ ಹಣ್ಣುಗಳನ್ನು ಹಿಂಡಿ ನಾಲ್ಕು ಪ್ರಮಾಣ ನೀರು ಸೇರಿಸಿದರೆ..ಆಹಾ!!!

ಅದು ಯಾವ ಶಾಂಪೇನಿಗಿಂತಲೂ ಕಡಿಮೆ ಇರುತ್ತಿರಲಿಲ್ಲ ಎಂಬುದು ನಮ್ಮ ಸಂಶೋಧನೆಯಾಗಿತ್ತು. ಈ ಸಂಶೋಧನೆಯನ್ನು ಪರಾಮರ್ಶಿಸಲು ಆಗಿನ ಕಾಲದಲ್ಲಿ ಇಡೀ ಹಾಸನದಲ್ಲಿ ಎಲ್ಲಿಯೂ ಶಾಂಪೇನ್ ಸಿಗುತ್ತಿರಲಿಲ್ಲ. ಯಾರಾದರೂ ಕೇಳಿದರೆ ಪಾಂಪೆ ಡಿ ಶಾಂಪೇನ್ ಹೀಗೆಯೇ ಇರುತ್ತದೆ ಎಂದು ಬಾಯಿ ಮುಚ್ಚಿಸುತ್ತಿದ್ದೆವು. ಆ ಮಾಸು ಡ್ರಿಂಕಿಗೆ ಎಂಥಾ ಬಿಗುಮಾನದವನೂ ಬಾಗಿ ನರ್ತಿಸದೆ ಇರುತ್ತಿರಲಿಲ್ಲ. ಅಂದ ಹಾಗೆ ಈ ನಮ್ಮ ಶಾಂಪೇನಿಗೆ ಸಮಾಜವು ನಿಕೃಷ್ಟವಾಗಿ ಸಾರಾಯಿ ಎನ್ನುತ್ತಿತ್ತು.

ಮಾಸದ ಪಾನಾವತಾವರಣಕ್ಕೆ ತಕ್ಕಂತೆ ತಿನಿಸು ಮತ್ತು ಟೇಬಲ್ಲುಗಳು ಸಹ ಕ್ವಾಲಿಟಿ ಕೆಸಿನೋ ಬಾರುಗಳ ಚಿಲ್ಲಿ ಚಿಕನ್, ಬಟರ್ ಚಿಕನ್ನಿನಿಂದ ಮಮತಾ ಮಿಲಿಟರಿ ಹೋಟೆಲ್ಲಿನ ಫಿಶ್ ಫ್ರೈ, ಕೈಮ ಮುದ್ದೆಯಿಂದ ಸಾಗಿ ಸಹ್ಯಾದ್ರಿ ಟಾಕೀಸಿನ ಎದುರಿನ ಗಾಡಿಗಳ ಪ್ಲಾಸ್ಟಿಕ್ ಅಡಿ ಮುದುರಿ ನಿಂತುಕೊಂಡು ಇಡ್ಲಿ, ಚಿತ್ರಾನ್ನದ ಬಡವರ ಊಟದೊಂದಿಗೆ "ಬಡವರ ಊಟಿ"ಯಲ್ಲಿ ಪ್ರತಿ ತಿಂಗಳ ಕೊನೆ ಬಡತನದಲ್ಲಿ ಪರಿಸಮಾಪ್ತಿಯಾಗುತ್ತಿತ್ತು.

ಇಂತಹ ಒಂದು ಮಾಸಾಂತ್ಯದ ಮಂಜಿನ ಮುಸುಕು ಸಂಜೆ ಶಾಂಪೇನ್ ಪಾರ್ಟಿಗೆ ಸ್ನಾನದ ಬಕೆಟ್ಟು ಬಾಯ್ತೆರೆದು ಕಾದಿತ್ತು. ಶಾಸ್ತ್ರೋಕ್ತವಾಗಿ ಅದಕ್ಕೆ ಸ್ಯಾಚೆಟ್ ಮೇಲೆ ಸ್ಯಾಚೆಟ್ಟುಗಳು, "ನಾನು ಮಾಲಿನಿ, ಬಕೆಟ್ಟಿಗೆ ಬೀಳ್ತೀನಿ" ಎಂದು ಹೇಮಾಮಾಲಿನಿ ಥರ ಬಳುಕಿ ಬಳುಕಿ ರಸಧಾರೆ ಹರಿಸಿದ ನಂತರ, "ಈ ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡು" ಎಂದು ಹಲವಾರು ನಿಂಬೆಗಳು, ನಂತರ ಹೇಮಾವತಿಯ, "ಜಲಲ ಜಲಲ ಜಲ ಧಾರೆ..." ಬಕೆಟ್ ಸೇರಿ ಶಾಂಪೇನ್ ಸಿದ್ಧವಾಯಿತು. ಖಾಲಿ ಬಿಯರ್ ಬಾಟಲಿಗಳಲ್ಲಿ ಇದನ್ನು ತುಂಬಿಕೊಂಡು, "ಯಾರಿವಳು ಯಾರಿವಳು ಸೂಜಿ ಮಲ್ಲಿ ಕಣ್ಣವಳು ಓ ಓ ಓ.... ಎಂಸಿಯಿ ತೋಪಿನಲ್ಲಿ ಲಂಗ ಎತ್ತಿ ನಿಂತವಳು ಓ ಓ ಓ" ಎಂದು ಹಂಸಲೇಖರಿಗಿಂತ ಸೃಜನಶೀಲರಾಗಿ ಹೀರೋ ರವಿಚಂದ್ರನ್ನಿಗಿಂತ ತೇಲುಗಣ್ಣಾಗಿ ಹುಚ್ಚೆದ್ದು ಒಂದು ಗುಂಪು ಹಾಡಿದರೆ ಇನ್ನೊಂದು ಗುಂಪು, "ಜುಮ್ಮಾ ಚುಮ್ಮಾ ದೇದೇ" ಎನ್ನುತ್ತ ಎಲ್ಲರೂ ಹಾಡುತ್ತಾ ಕುಡಿಯುತ್ತಾ ಕುಣಿಯುತ್ತಾ ಇದ್ದೆವು.

ನಮ್ಮ ಗಲಾಟೆಯ ನಡುವೆ ಅಂದು ನಮ್ಮ ಮಂಗಳೂರಿನ ಸ್ಟ್ಯಾನ್ಲಿ ತನ್ನ ಕಶ್ಮೀರಿ ಕುಳ್ಳಿಯನ್ನು ನೆನೆದು ಸ್ಟೈಲಾಗಿ "ಯೂ ಬಗ್ಗರ್ಸ್, ಲೆಟ್ಸ್ ಪ್ಲೇ ರಿಚರ್ಡ್ ಮಾರ್ಕ್ಸ್" ಎಂದು, "ಓಶನ್ಸ್ ಅಪಾರ್ಟ್ ಡೇ ಆಫ್ಟರ್ ಡೇ..... ಎವ್ರಿಥಿಂಗ್ ಐ ಡು, ಐ ಡೂ ಇಟ್ ಫಾರ್ ಯು....ಐ ವಿಲ್ ಬಿ ರೈಟ್ ಹಿಯರ್ ವೇಟಿಂಗ್ ಫಾರ್ ಯು!" ಎಂದು ಕೋರ್ಸು ಮುಗಿಸಿ ಆರ್ಕಿಟೆಕ್ಚರ್ರಿನ ಎವರೆಸ್ಟ್ ಶಿಖರವನ್ನು ಏರಿದ್ದ ಕಶ್ಮೀರಿ ಬೆಡಗಿಯ ನೆನೆನೆನೆದು ಕಣ್ಣೀರ ಕಡಲ ಹರಿಸುತ್ತ ಎಮ್ಸಿಯಿನಲ್ಲಿ ಪರ್ಮನೆಂಟ್ ಠಿಕಾಣಿ ಹೂಡಿದ್ದ. ಹಾಗಿದ್ದೂ ತನ್ನ ಆಂಗ್ಲ ಮೂಲದ ಇಂಗ್ಲಿಷಿನಲ್ಲಿ ನಾವು ಕೇಳಿರದ ಪದಗಳಿಂದ ಬೈಯುತ್ತಿದ್ದ. ಅವೆಲ್ಲವೂ ನಮಗೆ ಬಿರುದುಗಳಂತೆ ಕೇಳಿಸಿ ಮುದ ನೀಡುತ್ತಿದ್ದವು.

ಅದೇಕೋ ಅಂದು ನನ್ನ ಮುಕುಳಿಯಲ್ಲಿದ್ದ ಮೂರು ಮಂಗಗಳು ಜಾಗೃತವಾಗಿ ಸ್ಟ್ಯಾನ್ಲಿಯನ್ನು ಕಡಲತಡಿಯಿಂದ ಕಡಲಾಚೆಗೆ ಕಳಿಸುವ ಘನ ಉದ್ದೇಶಕ್ಕೆ ನನ್ನರಿವಿಗೆ ಬಾರದಂತೆ ಸಂಕಲ್ಪ ಮಾಡಿದವು. ಈ ಸಂಕಲ್ಪದಂತೆ, ಬಿಯರ್ ಬಾಟಲಿಯ ಕಾಲು ಭಾಗವಿದ್ದ ಶಾಂಪೇನಿಗೆ ಒಂದರವತ್ತು ಎಮ್ ಎಲ್ ನನ್ನ ಕಡಲಜಲದ ರುಚಿಯ ಲಿಂಗಜಲ ಸೇರ್ಪಡೆಗೊಳಿಸಿದೆ. ಬಾಟಲಿಯನ್ನು ಕೈಯಲ್ಲಿ ಹಿಡಿದು ಜೂಮ್ ಜೂಮುತ್ತ, "ಸ್ಟೈಲಿಶ್ ಸ್ಟ್ಯಾನ್ಲಿ, ಯು ವಿಲ್ ಬಿ ವೇಟಿಂಗ್ ಫಾರ್ ಎವ....ರ್ ಫಾರ್ ದಟ್ ಕುಲ್ಲಿ" ಎಂದೆ. ಅದಕ್ಕೆ ಆಂಗ್ಲೋ ಇಂಡೋ ಸ್ಟ್ಯಾನ್ಲಿಯು ಪಕ್ಕಾ ಉರಿಗೌಡನಾಗಿ, "ಲೇಯ್, ಓಗ್ಲಾ, ಬಿದ್ಕ ಓಗ್ಲ...ಬಂದ ಇವನೊಬ್ಬ ಇಂಗ್ಲಿಷ್ ಮಾತಾಡೋಕೆ!" ಎಂದು ನನ್ನ ಕೈಯಲ್ಲಿದ್ದ ಬಾಟಲಿ ಕಿತ್ತುಕೊಂಡು ಗಟಗಟನೆ ಕುಡಿದು ಬಾಟಲಿ ಕುಕ್ಕಿದ.

ನಾನು, "ಓಹ್!!!! ಎಂಗಿತ್ತಮ್ಮ?" ಎಂದೆ.

"ಟಕೀಲ ಇದ್ಹಂಗೆ ಇತ್ತು, ಓಗ್ಲಾ ಬಿದ್ಕಾ ಯು ಬ್ಲಡಿ ಬಗ್ಗರ್" ಎಂದ. ಅವತ್ತೇ ಮೊದಲು ನಾನು ಟಕೀಲ ಪದ ಕೇಳಿದ್ದು! ಆ ಪದ ಕೇಳಿದ್ದೇ ತಡ ನಾನು ಸ್ಟ್ಯಾನ್ಲಿಯನ್ನು ಯಾಮಾರಿಸಿ ಲಿಂಗಾಜಲ ಕುಡಿಸಿದ್ದನ್ನೂ ಮರೆತು ಬಾಯಿ ಬಿಟ್ಟುಕೊಂಡು "ಟಕೀಲ, ಟಕೀಲ" ಎಂದು ಉದ್ಗರಿಸಿದೆ. ಸ್ಟ್ಯಾನ್ಲಿ, "ಹೂಂ, ಟಕೀಲ" ಎಂದು ತನ್ನ ಲಿಂಗಾಜಲ ಖಾಲಿ ಮಾಡಲು ಹೋದ. ಅವನು ಅತ್ತ ಹೋದ ಮೇಲೆ ನಾನು ನನ್ನ ಸ್ನೇಹಿತರೂ ಕಣ್ಣು ಮಿಟುಕಿಸಿ ಲಿಂಗಾಜಲದ ಬಗ್ಗೆ ಈಗಲೇ ಸ್ಟ್ಯಾನ್ಲಿಗೆ ಹೇಳುವುದು ಬೇಡ ಎಂದು ಸುಮ್ಮನಾದೆವು.

ಆ ನಂತರ ಅದು ಹೇಗೋ ಸ್ಟ್ಯಾನ್ಲಿ ಆ ಸೆಮಿಸ್ಟರ್ ಪಾಸಾಗಿಬಿಟ್ಟ! ಅಷ್ಟೇ ಅಲ್ಲದೆ ಮುಂದಿನ ಎಲ್ಲಾ ಸೆಮಿಸ್ಟರ್ ಮುಗಿಸಿ ನನಗಿಂತ ಮೊದಲೇ ಸಪ್ತ ಸಾಗರದಾಚೆಯ ಅಮೆರಿಕಕ್ಕೂ ಹಾರಿಬಿಟ್ಟ.

ಹಾರುವ ಒಂದು ವಾರ ಮೊದಲು ನಮಗೆಲ್ಲಾ ಬ್ರಿಗೇಡ್ ರೋಡ್ ಸಂದಿಯ ಗಜ್ಲರ್ಸ್ ಇನ್ನಿನಲ್ಲಿ ಭರಪೂರ ಬಿಯರ್ ಕುಡಿಸಿದ ಸ್ಟ್ಯಾನ್ಲಿಗೆ ಟಕೀಲಾ ರಹಸ್ಯ ತಿಳಿಸಿ, "ಅದನ್ನು ಕುಡಿದ ಮೇಲೆಯೇ ನೀನು ಉದ್ಧಾರ ಆದೆ ಮಗನೆ" ಎಂದೆ. ಅದಕ್ಕೆ ಸ್ಟ್ಯಾನ್ಲಿ, "ಲೋ ಮುಂಚೆನೇ ಕುಡಿಸಿದ್ರೆ ಎಲ್ಲೋ ಇರ್ತಿದ್ದೆನಲ್ಲೋ ಬ್ಲಡಿ ಬಗ್ಗರ್" ಎಂದು ನಸು ನಕ್ಕ.

"ಬಗ್ಗರ್ ಅಲ್ಲ ಕಣ್ಲಾ, ಬೆಗ್ಗರ್ ನಾನು. ಬಿಲ್ ಕಕ್ಕಿ ನಡಿ" ಎಂದೆ.

ಸ್ಟ್ಯಾನ್ಲಿ, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮೂಗುತಿ" ಎಂದು ತನ್ನ ವರಾತ ಹಾಡುತ್ತ ಬಿಲ್ ನೋಡಿ, "ದಿಸ್ ಈಸ್ ನಥಿಂಗ್" ಎಂದು ಬಿಲ್ ಕಕ್ಕಿದ.

ಈಗ ಸ್ಟ್ಯಾನ್ಲಿ ಎಲ್ಲಿದ್ದಾನೋ ಗೊತ್ತಿಲ್ಲ. ಸ್ಯಾಚೆಟ್ ಪಾನೀಯ ಇಲ್ಲ ಆದರೆ ಮಮತಾ ಮಿಲ್ಟ್ರಿ ಹೋಟೆಲ್ ಮಾತ್ರ ಹಾಗೆಯೇ ಇದೆ.

ವಿ. ಸೂ: ಸಿನೆಮಾ ಗೀತೆ, ದಾಸ ಸಾಹಿತ್ಯ ತಿರುಚಿದ ಎಂಬ ಶಿಶುಸೃಜನ ಕ್ಲೇಮುಗಳನ್ನು ಟಿಶ್ಯೂ ಪೇಪರ್ರಿನಂತೆ ಬಳಸಲಾಗುವುದು.

ಮೇಲ್ವರ್ಗದ ಜನರೇಕೆ ವಲಸೆ ಹೋಗುತ್ತಿದ್ದಾರೆ?

 ಮೇಲ್ವರ್ಗದ ಜನರೇಕೆ ವಲಸೆ ಹೋಗುತ್ತಿದ್ದಾರೆ? ಎಂಬ ಪ್ರಶ್ನೆ ತುಂಬಾ ಗಹನವಾದದ್ದು. 


ಈ ವರ್ಗ ಭೇದವನ್ನು ಬದಿಗಿಟ್ಟು ನೋಡಿದಾಗಲೂ ಮಾನವ ಸಹಜವಾಗಿ ಅಲೆಮಾರಿ. ಮಾನವ ವಿಕಾಸ ಪಥದಲ್ಲಿ ಆಹಾರ ಹುಡುಕುತ್ತಾ ವಲಸೆ ಆರಂಭಿಸಿದ ಆದಿಮಾನವ ಇಂದು ಹೊಸ ಹೊಸ ಅವಕಾಶಗಳನ್ನು, ಉತ್ತಮ ಭವಿಷ್ಯ, ಭದ್ರತೆ, ತನ್ನ ಆಲೋಚನಾ ಕ್ರಮಕ್ಕೆ ಪೂರಕ ವಾತಾವರಣಗಳನ್ನು ಹುಡುಕುತ್ತಾ ವಲಸೆ ಹೋಗುತ್ತಿದ್ದಾನೆ. ಒಂದೊಮ್ಮೆಯ ವಲಸಿಗರ ತಾಣವಾಗಿದ್ದ ಭಾರತ ಪೂರ್ವ ಆಫ್ರಿಕಾದ ಆದಿ ವಲಸೆಗಾರರನ್ನು, ನಂತರ ಆರ್ಯರನ್ನು ಆಕರ್ಷಿಸಿ ಅಂದಿನ ವಲಸಿಗರ ಸ್ವರ್ಗ ಎನಿಸಿತ್ತು. ಇಂತಹ ಸ್ವರ್ಗಸದೃಶ ಭಾರತವು ಕಾಲಾಂತರದಲ್ಲಿ ಅಯೋಮಯಗೊಂಡು ಕಳೆದ ಅರ್ಧ ಶತಮಾನದಿಂದ ಇತ್ತೀಚೆಗೆ ತನ್ನ ನಾಗರಿಕರು ವಿದೇಶಗಳೆಡೆ ಹೆಚ್ಚು ಹೆಚ್ಚು 

ಮುಖ ಮಾಡುವಂತೆ ಮಾಡಿದೆ.


ಇದರ ಆರಂಭ ಬ್ರಿಟಿಷ್ ಭಾರತದ ಮೇಲ್ವರ್ಗದ ಜನ ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ಹೋಗಲು ಆರಂಭಗೊಂಡ ದಿನಗಳಿಂದ ಎಂದರೂ  ಅದು ವಲಸೆಯ ರೂಪ ಪಡೆದಿರಲಿಲ್ಲ. ಆದರೆ ಸ್ವತಂತ್ರ ಭಾರತದ ಎಪ್ಪತ್ತರ ದಶಕದಲ್ಲಿ ಭಾರತೀಯ ಡಾಕ್ಟರರುಗಳಲ್ಲದೆ ಸಾಕಷ್ಟು ಕುಶಲಕರ್ಮಿಗಳು ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲದೆ ಇರಾನ್, ಇರಾಕ್, ಸೌದಿ, ಮುಕ್ತ ಮಾರುಕಟ್ಟೆಯ ಸಿಂಗಪೂರ್, ದುಬೈಗಳಲ್ಲದೆ ಆಫ್ರಿಕಾ ರಾಷ್ಟ್ರಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋದರು. ಅಂದು ಅವರೆಲ್ಲರ ಉದ್ದೇಶ, ಕೇವಲ ಹಣವಾಗಿತ್ತು. ಕಡಿಮೆ ಸಮಯದಲ್ಲಿ ಸಾಕಷ್ಟು ಹಣ ಸಂಪಾದನೆ ಮಾಡಿ ಭಾರತಕ್ಕೆ ವಾಪಸ್ಸಾಗಿ ಸುಭದ್ರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಏಕೈಕ ಮಹದಾಸೆ ಅವರುಗಳದಾಗಿತ್ತು. ಇಂತಹ ಉದ್ದೇಶದಿಂದ ವಲಸೆ ಹೋದ ಸಾಕಷ್ಟು ವಲಸಿಗರು ತಮ್ಮ ಆಕಾಂಕ್ಷೆಯ ಗುರಿ ಮುಟ್ಟಿದ ನಂತರ ಭಾರತಕ್ಕೆ ವಾಪಸ್ಸಾದರು ಸಹ. ಹಾಗೆ ವಾಪಸ್ಸಾದವರಲ್ಲಿ ಹೆಚ್ಚಿನವರು ಇರಾನ್, ಇರಾಕ್, ಸೌದಿ ಮತ್ತು ಆಫ್ರಿಕಾ ದೇಶಗಳಿಗೆ ವಲಸೆ ಹೋದವರು. ಇನ್ನು ಅಮೇರಿಕಾ ಮತ್ತು ಯೂರೋಪ್ ರಾಷ್ಟ್ರಗಳಿಗೆ ವಲಸೆ ಹೋದ ಸಾಕಷ್ಟು ಜನ ಅಲ್ಲಿಯೇ ನೆಲೆ ನಿಂತರು ಮತ್ತು ಕೆಲವರು ಭಾರತಕ್ಕೆ ಮರಳಿದರು.


ಅವರು ದೇಶ ತೊರೆದದ್ದು ಕೇವಲ ಮತ್ತು ಕೇವಲ ಹಣ ಸಂಪಾದನೆಗಾಗಿಯಾದರೂ ಅವರಲ್ಲಿ ವಾಪಸ್ಸಾದದ್ದು ಮತ್ತು ಅಲ್ಲಿಯೇ ನೆಲೆ ನಿಂತದ್ದು ಸುಭದ್ರ ನಾಗರಿಕ ಸ್ವಾತಂತ್ರ್ಯ, ಸಾಮಾಜಿಕ ವ್ಯವಸ್ಥೆ, ಮಾನವ ಹಕ್ಕುಗಳ ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತು ಸಾಮಾಜಿಕ ನೆಮ್ಮದಿಯ ಆಕರ್ಷಣೆ ಹಿನ್ನೆಲೆಯಾಗಿತ್ತು. ಈ ಆಯ್ಕೆಗಳು ಎಲ್ಲಿದ್ದವೋ ಅಂತಹ ರಾಷ್ಟ್ರಗಳಲ್ಲಿ ನೆಲೆ ನಿಂತರು ಅಥವಾ ಭಾರತಕ್ಕೆ ವಾಪಸ್ಸಾದರು. ಕೆಲವರು ಭಾವುಕರಾಗಿ ಸಹ ಭಾರತಕ್ಕೆ ವಾಪಸ್ಸಾದದ್ದು ಇದೆ.


ಮೇಲಿನ ನಿಯಮದಂತೆ ಈ ಹಣ ಸಂಪಾದನೆಯೇ ಪ್ರಮುಖವಾಗಿ ತೊಂಭತ್ತರ ದಶಕದ ಕೊನೆಯವರೆಗೆ ಭಾರತೀಯರು ವಲಸೆ ಹೋಗುತ್ತಲೇ ಇದ್ದರು, ಕೆಲವರು ಹೋದ ಕಡೆ ನೆಲೆ ನಿಲ್ಲುತ್ತಿದ್ದರು, ಕೆಲವರು ವಾಪಸ್ಸಾಗುತ್ತಿದ್ದರು. ಆದರೆ ಇಪ್ಪತ್ತೊಂದನೇ ಶತಮಾನದ ಹೊರಳಿನೊಂದಿಗೆ ಹಣಕ್ಕಾಗಿ ಬರುತ್ತಿದ್ದ ಭಾರತೀಯ ವಲಸೆಗಾರರು ಉತ್ತಮ ಜೀವನ, ಉದಾರತೆ, ನಾಗರಿಕ ಸಂಹಿತೆ, ಮಾನವ ಹಕ್ಕು, ಸ್ವಾತಂತ್ರ್ಯ, ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಾ ಪುರಸ್ಕಾರ ಮುಂತಾದ ಜನಪರ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಬಯಸಿ ಬರಲಾರಂಭಿಸಿದರು. ಈ ಹೊರಳಿಗೆ ಕಾರಣಗಳೇನು?


ನಾನೂ ಸಹ ತೊಂಬತ್ತರ ದಶಕದ ಮಧ್ಯದಲ್ಲಿ ಹಣ ಸಂಪಾದನೆಯ ಗುರಿಯಾಗಿ ಅಮೇರಿಕಾಕ್ಕೆ ವಲಸೆ ಬಂದೆ. ನನ್ನಂತೆಯೇ ಸಾಕಷ್ಟು ಜನ ರಷ್ಯಾ, ಚೈನಾ, ಕ್ಯೂಬಾ, ಇರಾನ್, ಇಥಿಯೋಪಿಯಾ ಮುಂತಾದ ಹಲವಾರು ರಾಷ್ಟ್ರಗಳಿಂದ ಅಮೇರಿಕೆಗೆ ವಲಸೆ ಬಂದಿದ್ದರು. ಅವರೆಲ್ಲರನ್ನೂ ನಾನು ನನ್ನಂತೆಯೇ ಹಣಕ್ಕಾಗಿ ಬಂದವರೆಂದುಕೊಂಡಿದ್ದೆ.  ಕ್ರಮೇಣ ತಿಳಿದದ್ದು ಅವರು ಹಣಕ್ಕಲ್ಲದೆ ಉತ್ತಮ ಸಾಮಾಜಿಕ ವ್ಯವಸ್ಥೆ, ಸ್ವಾತಂತ್ರ್ಯ, ಮಾನವ ಹಕ್ಕುಗಳ ರಕ್ಷಣೆ ಬಯಸಿ ಅಂದರೆ ಜೀವನಕ್ಕಾಗಿ ಬಂದಿದ್ದವರು ಎಂದು! ಆಗ ನನಗೆ ಹಣ-ಜೀವನಗಳ ನಡುವಿನ ವ್ಯತ್ಯಾಸವನ್ನು ಬಹುಪಾಲು ಕಮ್ಯುನಿಸ್ಟ್ ರಾಷ್ಟ್ರಗಳಾದ ಚೈನಾ, ರಷ್ಯಾ ಮತ್ತು ಕ್ಯೂಬಾಗಳಿಂದಲೂ ಮತ್ತು ಇರಾನಿನಂತಹ ಫತ್ವಾ ರಾಷ್ಟವಲ್ಲದೇ ಇರಾಕ್ ಮತ್ತಿತರೆ ಸರ್ವಾಧಿಕಾರಿಗಳ ರಾಷ್ಟ್ರಗಳಿಂದ ಬಂದ ಜನರಿಂದ ತಿಳಿಯಲಾರಂಭಿಸಿ ವಿವಿಧ ಆಡಳಿತ ವ್ಯವಸ್ಥೆಗಳಿಂದುಂಟಾಗುವ ಸಾಮಾಜಿಕ ಪಲ್ಲಟ "ಹೀಗೂ ಉಂಟೆ" ಎಂದು ಸೋಜಿಗವನ್ನುಂಟುಮಾಡಿತು. ಆ ದೇಶಗಳಿಂದ ಬಂದಿದ್ದ ನನ್ನ ಅನೇಕ ಮಿತ್ರರು ನಿನಗೆ ಕ್ರಮೇಣ ಜೀವನದ ಈ ಅರಿವು ಮೂಡಿ ಕೇವಲ ಆರ್ಥಿಕತೆಯಲ್ಲದೆ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ತುರ್ತಿನ ಅರಿವಾಗುತ್ತದೆ, ಆಗ ಮಾತನಾಡೋಣ ಎನ್ನುತ್ತಿದ್ದರು. ಹುಟ್ಟಿದ ರಾಷ್ಟ್ರಕ್ಕೆ ಮತ್ತೆಂದೂ ಕಾಲಿಡುವುದಿಲ್ಲ ಎಂಬ ದೃಢ ನಿರ್ಧಾರವನ್ನು ಕೈಗೊಂಡಿದ್ದ ಇವರ ನಡೆ ನನಗೆ ಸಹಜವಾಗಿ ವಿಸ್ಮಯ ಮೂಡಿಸಿತ್ತು.


ಅಂತಹ ಪರಿಸ್ಥಿತಿ ನನ್ನ ಭಾರತಕ್ಕೆ ಎಂದೂ ಬಾರದು ಎಂದೇ ಬೀಗುತ್ತಿದ್ದೆ. ಆದರೆ ಅಂತಹ ವರ್ಷಗಳು ಭಾರತಕ್ಕೆ ಬಂದೇ ಬಿಟ್ಟಿವೆ.


ಇದರ ಪ್ರಪ್ರಥಮ ಹೊಳಹು ಕೊಟ್ಟವರು ಸಾಹಿತಿ ದಿವಂಗತ ಯು. ಆರ್. ಅನಂತಮೂರ್ತಿಯವರು! ಹೀಗೆಂದಾಗ ಸಹಜವಾಗಿ ಅವರ ಇತ್ತೀಚಿನ "ಮೋದಿ ಗೆದ್ದರೆ ರಾಷ್ಟ್ರ ಬಿಡುತ್ತೇನೆ" ಎಂಬ ಮಾತುಗಳು ನೆನಪಿಗೆ ಬರಬಹುದು. ಆದರೆ ಅವರು ಈ ಹೊಳಹನ್ನು ಕೊಟ್ಟದ್ದು  "ವಿಪಿ ಸಿಂಗ್ ಅವರು ತಂದಿದ್ದ ಮೀಸಲಾತಿ ನೀತಿಯಿಂದ ಯುವಜನಾಂಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ನಾನು ದೇಶ ತೊರೆದೆ" ಎಂದದ್ದು ಎಂದು ಜ್ಞಾಪಿಸಬೇಕಾಗುತ್ತದೆ. 


ಅನಂತಮೂರ್ತಿಯವರು ದೇಶ ಬಿಟ್ಟಿದ್ದ ಅಂದಿನ ಪ್ರಧಾನಿ ವಿ.ಪಿ. ಸಿಂಗ್ ಅವರ "ಓಲೈಕೆ"ಯ ಕಾಲದಿಂದ ಇತ್ತೀಚೆಗೆ ಅವರು ದೇಶ ಬಿಡುತ್ತೇನೆ ಎಂದಿದ್ದ ಪ್ರಧಾನಿ ಮೋದಿಯವರ "ಉತ್ಪ್ರೇಕ್ಷೆ"ಯ ಕಾಲಮಾನದ ನಡುವೆ ಉಂಟಾದ ಭಾರತೀಯ ಸಾಮಾಜಿಕ ಪಲ್ಲಟವು ಮೇಲ್ವರ್ಗವಲ್ಲದೆ ಅವಕಾಶ ಸಿಕ್ಕರೆ ಪ್ರತಿಯೊಬ್ಬ ಪ್ರಾಮಾಣಿಕ ಶ್ರೀಸಾಮಾನ್ಯ ನಾಗರಿಕನೂ ವಲಸೆಯತ್ತ ಒಂದು ನೋಟ ಹರಿಸುವಂತೆ ಮಾಡಿದೆ.


ಅತಿಯಾದ ಓಲೈಕೆ ಮತ್ತು ಉತ್ಪ್ರೇಕ್ಷೆಗಳ ಅಮಲಿನ ನಡುವೆ ಮಿತಿ ಮೀರುತ್ತಿರುವ ಭ್ರಷ್ಟಾಚಾರ, ಜಾತಿ ಪ್ರೌಢಿಮೆ/ರಾಜಕಾರಣ, ಧಾರ್ಮಿಕ ಅಸಹಿಷ್ಣುತೆ, ಜನಾಂಗೀಯ ತಾರತಮ್ಯ, ಮಾನವ ಹಕ್ಕುಗಳ ಉಲ್ಲಂಘನೆ, ನೈತಿಕ ಪೊಲೀಸ್ ಗಿರಿ, "ಮೀಸಲಾತಿ" ಮುಂತಾದ ಸಾಮಾಜಿಕ ಪಿಡುಗುಗಳು ನವ್ಯ ತಂತ್ರಜ್ಞಾನವನ್ನೂ ಬಳಸಿಕೊಂಡು ಹರಡುತ್ತಿರುವ ವೇಗ ಅತ್ಯಂತ ಕಳವಳಕಾರಿ. 


ಹಾಗಾಗಿಯೇ ಒಂದೊಮ್ಮೆ ಹಣ ಅಥವಾ ಪ್ರತಿಷ್ಟೆಗಾಗಿ ಮಾತ್ರ ಹೊರದೇಶಗಳಿಗೆ ವಲಸೆ ಹೋಗುತ್ತಿದ್ದ ಭಾರತೀಯರು ಇಂದು ಸರ್ವಾಧಿಕಾರಿ, ಕಮ್ಯುನಿಸ್ಟ್, ಧಾರ್ಮಿಕ ದೇಶಗಳಲ್ಲಿ ನಲುಗಿದ್ದ ಉದಾರವಾದಿ ಜೀವಪರ ಜನರಂತೆಯೇ ಮುಕ್ತ ಜೀವನವನ್ನು ಬಯಸಿ ಅಮೇರಿಕ ಅಲ್ಲದೆ ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಯುರೋಪ್ ರಾಷ್ಟ್ರಗಳಿಗೆ ವಲಸೆ ಬರುತ್ತಿದ್ದಾರೆ. ಪ್ರತಿಷ್ಠೆ ಮತ್ತು ಹಣ ಈಗ ಗೌಣ! ಏಕೆಂದರೆ ಹಣ ಭಾರತದಲ್ಲಿ ಸಾಕಷ್ಟಿದೆ. ನಾನು ಭಾರತ ಬಿಟ್ಟಾಗ ಒಬ್ಬ ಸರ್ಕಾರಿ ಇಂಜಿನಿಯರನಿಗೆ ಮೂರೂವರೆ ಸಾವಿರ ಸಂಬಳವಿರುತ್ತಿತ್ತು. ಅದು ಈಗ ಮೂರೂವರೆ ಲಕ್ಷವಾಗಿದೆ. ಸಾಮಾಜಿಕ ನ್ಯಾಯಕ್ಕೆ ಮೀಸಲಾತಿ ಎಷ್ಟೇ ಅವಶ್ಯಕವೆಂದರೂ ಅದು ಸಹ ಈ ವಲಸೆಗೆ ಸಾಕಷ್ಟು ಕಾರಣೀಭೂತವಾಗಿದೆ ಎಂಬ ನಿಷ್ಠುರ ಸತ್ಯವನ್ನು ಹೇಳಲೇಬೇಕಾಗಿದೆ.


ಇರಲಿ, ಈ ಭಾರತೀಯ ವಲಸೆಯ ಪಲ್ಲಟವನ್ನು ನನ್ನ ಸಹಪಾಠಿಯೋರ್ವನ ಒಂದು ತಲೆಮಾರಿನಲ್ಲಿ ನಾನು ಸ್ಪಷ್ಟವಾಗಿ ಕಂಡುಕೊಂಡಿದ್ದೇನೆ, ಅದನ್ನೇ ಇಲ್ಲಿ ಕಟ್ಟಿಕೊಡುತ್ತೇನೆ:


ಆಂಧ್ರಪ್ರದೇಶದ ನನ್ನ ಸಹಪಾಠಿಯೊಬ್ಬ ನನ್ನಂತೆಯೇ ನನ್ನೊಟ್ಟಿಗೆ ಅಮೇರಿಕೆಗೆ ವಲಸೆ ಬಂದಿದ್ದ. ಹಣಕಾಸಿನಲ್ಲಿ ಸಬಲನಾಗಿದ್ದ ಅವನ ವಲಸೆಗೆ ಹಣಕ್ಕಿಂತ ವಿದೇಶಿ ಅನುಭವ ಮತ್ತು ಪ್ರತಿಷ್ಠೆ ಕಾರಣವಾಗಿತ್ತು. ಇಲ್ಲಿ ಎರಡು ವರ್ಷವಿದ್ದು ನಂತರ ಹೈದರಾಬಾದಿಗೆ ತೆರಳಿ ತನ್ನದೇ ಆದ ಸಾಫ಼್ಟ್ವೇರ್ ಕಂಪೆನಿ ತೆರೆದ. ಅವನು ಇಲ್ಲಿದ್ದ ಆ ಎರಡು ವರ್ಷಗಳಲ್ಲಿ ಅವನ ಮದುವೆಯಾಗಿ ಒಬ್ಬ ಮಗಳೂ ಹುಟ್ಟಿದ್ದಳು. 


ನನ್ನ ಆರ್ಥಿಕ ಪರಿಸ್ಥಿತಿಯ ಕಾರಣ ನಾನು ಅಮೆರಿಕೆಯಲ್ಲಿಯೇ ಉಳಿದಿದ್ದೆ. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಭಾರತದಲ್ಲುಂಟಾದ ರಿಯಲ್ ಎಸ್ಟೇಟ್ ಆಸ್ಫೋಟದಲ್ಲಿ ಸಾಕಷ್ಟು ಹಣ ಅವನಿಗೆ ಸಲೀಸಾಗಿ ಹರಿದು ಬಂದಿತು. ತನ್ನ ವ್ಯಾಪಾರಕ್ಕಿಂತಲೂ ತನ್ನ ಪೂರ್ವಜರ ಆಸ್ತಿಯಿಂದಲೇ ಸಾಕಷ್ಟು ಹಣ ಅವನನ್ನು ಸೇರಿತ್ತು. ಆ ಆಸ್ಫೋಟದಿಂದಾಗಿ ಭಾರತದಲ್ಲಿ ಮನೆಯನ್ನು ಕೊಳ್ಳುವುದು ಅತ್ಯಂತ ದುಬಾರಿ ಎನ್ನಿಸಿ ನಾನು ಶಾಶ್ವತವಾಗಿ ಅಮೇರಿಕೆಯಲ್ಲೇ ಉಳಿದುಬಿಟ್ಟೆ.


ಆದರೆ ನನ್ನ ಅದೇ ಸ್ನೇಹಿತನ ಮಗಳು ಇಂಜಿನಿಯರಿಂಗ್ ಮುಗಿಸಿ ಹುಟ್ಟಿನ ಕಾರಣ ಅಮೇರಿಕನ್ ಆಗಿದ್ದುದರಿಂದ ಸಲೀಸಾಗಿ ಅಮೇರಿಕೆಗೆ ಬಂದು ಕೆಲಸ ಹಿಡಿದು ಇಂದು ತನ್ನ ಇಪ್ಪತ್ನಾಲ್ಕನೆ ವಯಸ್ಸಿಗೆ ಸ್ಯಾನ್ ಆಂಟೋನಿಯೊದಲ್ಲಿ ಮನೆ ಕೊಂಡಳು. ಆ ಯುವತಿಯ ಅಭಿಪ್ರಾಯದಂತೆ ಭಾರತದಲ್ಲಿ ಈಗ ಎಲ್ಲವೂ ದುಬಾರಿಯಲ್ಲದೆ ಅಷ್ಟು ಬೆಲೆ ತೆತ್ತರೂ ಅದಕ್ಕೆ ಬೆಲೆಯಿಲ್ಲ, ತಕ್ಕ ವ್ಯವಸ್ಥೆಯಿಲ್ಲ. ಎಲ್ಲಾ ರೀತಿಯ

ಭ್ರಷ್ಟಾಚಾರಗಳ ನಡುವೆ ಹೊಂದಿಕೊಂಡು ಬಾಳುವುದು ಸಹ  ಭ್ರಷ್ಟಾಚಾರದ ಬಾಳು ಎಂದೇ ಅಭಿಪ್ರಾಯ ವ್ಯಕ್ತಪಡಿಸಿದಳು. ಈಗ ಅವಳ ಮದುವೆ ನಡೆಯಲಿದೆ. ಅವಳ ಭಾವೀಪತಿ ಸಹ ನನ್ನ ಇನ್ನೋರ್ವ ಶ್ರೀಮಂತ ಸ್ನೇಹಿತನ ಏಕ ಮಾತ್ರ ಪುತ್ರ. ಆಂಧ್ರಪ್ರದೇಶದಲ್ಲಿ ಆರು ಕಾರ್ ಶೋರೂಂ ಹೊಂದಿದ್ದರೂ ಅದೆಲ್ಲವನ್ನೂ ತೊರೆದು ಅಮೆರಿಕೆಗೆ ವಲಸೆ ಬರುತ್ತಿದ್ದಾನೆ. ಕಾರಣ, ಆಂಧ್ರಪ್ರದೇಶದ ಮಿತಿ ಮೀರಿದ ಜಾತಿ ರಾಜಕಾರಣ! ಕಮ್ಮಾ ಜನಾಂಗದ ಉದ್ಯಮಿಗಳಿಗೆ ರೆಡ್ಡಿ ಜಾತಿ ಮುಖ್ಯಮಂತ್ರಿಯ ಅತೀವ ಕಿರುಕುಳವನ್ನು ಭರಿಸಲಾಗದೆ ನನ್ನ ಉದ್ಯಮಿ ಮಿತ್ರ ತನ್ನ ಏಕಮಾತ್ರ ಪುತ್ರನನ್ನು ಅಮೆರಿಕಾ ಮಡಿಲಿಗೆ ಹಾಕುತ್ತಿದ್ದಾನೆ. ಭ್ರಷ್ಟಾಚಾರದ ಜೊತೆ ಜಂಜಾಡಿ ವೈಭವೋಪೇತ ಭ್ರಷ್ಟ ಜೀವನ ನಡೆಸುವುದಕ್ಕಿಂತ ಮುಕ್ತ ವಾತಾವರಣದಲ್ಲಿ ಸರಳ ಸ್ವಚ್ಛ ಬಾಳು ಕಂಡುಕೊಳ್ಳಲಿ ಎಂಬುದು ಅವನ ಆಕಾಂಕ್ಷೆ. 

ಇಂತಹ ತಲೆಮಾರು ಹೊರಳ ಮದುವೆಗೆ ನನ್ನ ಮನೆ ಈಗ ವೇದಿಕೆಯಾಗಿದೆ.


ಹೀಗೆ ಆಂಧ್ರ ಅಲ್ಲದೇ ಗುಜರಾತ್, ಪಂಜಾಬ್, ಬಿಹಾರಗಳಿಂದ ಎಲ್ಲಾ ಧರ್ಮದ ಜನರೂ ಸಮಾನತೆ (ಮೀಸಲಾತಿಯಲ್ಲದ), ಭ್ರಷ್ಟಾಚಾರರಹಿತ, ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಾ ಪುರಸ್ಕಾರಗಳನ್ನರಸಿ ವಲಸೆ ಬರುತ್ತಿದ್ದಾರೆ.  ಸಮಾಜದಲ್ಲಿ ಸುಖವಾಗಿರುವ, ಉದ್ಯೋಗ ಸೃಷ್ಟಿಸಬಲ್ಲ, ವಿದ್ಯಾವಂತ, ಚಿಂತಕ, ಸೃಜನಶೀಲ, ಕುಶಲಕರ್ಮಿ ಮೇಲ್ವರ್ಗವೇ ಹೀಗೆ ವಲಸೆ ಹೋದರೆ.....!?!


ಇನ್ನು ಕೆಲವರು ಇಂದು ಭಾರತ ವಿಶ್ವಗುರುವಾಗಿದೆ, ಸಾಕಷ್ಟು ಎನ್ನಾರೈಗಳು ವಾಪಸ್ ಬರುತ್ತಿದ್ದಾರೆ, ಇತ್ಯಾದಿಯಾಗಿ ಹುಸಿ ದೇಶಾಭಿಮಾನದ ಮಾತುಗಳನ್ನು ಆಡಬಹುದು. ಆದರೆ  ಅವರೆಲ್ಲರೂ ಇಂದು ವಾಪಸ್ ಬರುತ್ತಿರುವುದು ತಮ್ಮ ಎಂದೋ ಕೊಂಡಿದ್ದ ಚಿಲ್ಲರೆ ಹಣದ ರಿಯಲ್ ಎಸ್ಟೇಟ್ ಆಸ್ತಿಯ ಉಬ್ಬರವನ್ನು ನಗದೀಕರಿಸಿ ಹಣವನ್ನು ವಾಪಸ್ ತೆಗೆದುಕೊಂಡುಹೋಗಲೋ, ತಮ್ಮ ಹೆಣ್ಣುಮಗು ಭಾರತೀಯ ಸಂಸ್ಕೃತಿಯಲ್ಲಿ ಬೆಳೆಯಲೆಂದೋ, ಅಥವಾ ಉಬ್ಬರಿಸಿದ ರಿಯಲ್ ಎಸ್ಟೇಟ್ ಹಣದಲ್ಲಿ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳಲೋ ಹೊರತು ಇನ್ಯಾವ ದೇಶಾಭಿಮಾನದಿಂದಲ್ಲ. ಓಟಿನ ಹಕ್ಕು ಇಲ್ಲದಿದ್ದರೂ ಅವರಲ್ಲಿ ಅನೇಕರು ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂತಹ ಪ್ರಕ್ಷೇಪ ಉದಾಹರಣೆಗಳಾಚೆ ನೋಡಿದಾಗ ಸಾಕಷ್ಟು ಮೇಲ್ವರ್ಗದ ಜನ ವಲಸೆಯತ್ತ ಮುಖ ಮಾಡಿ ನಿಂತಿದೆ.


ಆದರೆ ಇಪ್ಪತ್ತೈದು ವರ್ಷಗಳ ಹಿಂದೆ ಯಾವುದೋ ಸರ್ವಾಧಿಕಾರಿ, ಕಮ್ಯುನಿಸ್ಟ್, ಧಾರ್ಮಿಕ, ಅರಾಜಕತೆಯ ರಾಷ್ಟ್ರಗಳ ಜನರು ಉತ್ತಮ ಸಾಮಾಜಿಕ ವ್ಯವಸ್ಥೆಯಲ್ಲಿ ತಮ್ಮ ಮಕ್ಕಳು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲೆಂದು ಅಮೇರಿಕಾದಂತಹ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ವಲಸೆ ಬರುತ್ತಿದ್ದದ್ದು ಇಂದು ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎನಿಸಿಕೊಂಡ ಭಾರತದಂತಹ ರಾಷ್ಟ್ರದಿಂದ ಅಲ್ಲಿನ ನಾಗರಿಕರು ಸಾಮಾಜಿಕ ನ್ಯಾಯವನ್ನು ಬಯಸಿ, ಪ್ರಜಾಪ್ರಭುತ್ವವನ್ನು ಬಯಸಿ  ವಲಸೆ ಬರುತ್ತಿರುವುದು ಪ್ರಜಾಪ್ರಭುತ್ವದ ಅದರಲ್ಲೂ ಈ ಶತಮಾನದ ಬಹುದೊಡ್ಡ ದುರಂತ! 

ಜಂಗಮ ಪ್ರೌಢಿಮೆ

 ಭಾರತದಲ್ಲಿ ಹುಟ್ಟಿದ ಕಾರಣ, ಮತ್ತಲ್ಲಿ ಹುಟ್ಟಿನಿಂದ ಜಾತಿ ಜಾರಿ ಇರುವ ಕಾರಣ ನನಗೂ ಜನರು ಜಾತಿಯನ್ನು ಅಂಟಿಸಿದ್ದರು. ಅಲ್ಲದೆ ಇಂದು ಯಾರಿಗೆ ಜಾತಿನಿಂದನೆ ಕೇಸು ದಾಖಲಿಸುವ ಹಕ್ಕಿದೆಯೋ ಅವರಿಂದಾದಿಯಾಗಿ ಎಲ್ಲಾ ಜಾತಿಯವರಿಂದಲೂ ಜಾತಿನಿಂದನೆಯನ್ನು ನಾನು ಅನುಭವಿಸಿದ್ದೇನೆ. ಇಂತಹ ಜಾತಿನಿಂದನೆ ಕಾರಣವಾಗಿ ಜಾತಿಯನ್ನು ನಾಶ ಮಾಡಬೇಕೆಂಬ ಚಿಂತಕರ ಚಿಂತನೆಯನ್ನು ನಾನು ಪ್ರೌಢಶಾಲೆಯಲ್ಲಿದ್ದಾಗಲೇ ಗಾಢವಾಗಿ ಅಪ್ಪಿಕೊಂಡು ಕೊರಳಲ್ಲಿದ್ದ ಜಾತಿಸೂಚಕ ಚಿಹ್ನೆಯನ್ನು ಕಿತ್ತು ಗಿರಗಿರನೆ ತಿರುಗಿಸಿ ಎಸೆದಿದ್ದೇನೆ. ಅದಕ್ಕಾಗಿ ನಮ್ಮಪ್ಪನಿಂದ ಸಾಕಷ್ಟು ಚಿತ್ರಹಿಂಸೆ ಅನುಭವಿಸಿದರೂ ಅಂದು ಎಸೆದ ಆ ಚಿಹ್ನೆಯನ್ನು ಈವರೆಗೆ ಧರಿಸಿಲ್ಲ.

"ಓ ನನ್ನ ಚೇತನ ಆಗು ನೀ ಅನಿಕೇತನ" ಎಂಬ ವಿಶ್ವಮಾನವ ಪ್ರಜ್ಞೆಗೆ ಅನುಗುಣವಾಗಿ ಅಮೇರಿಕಾದಲ್ಲಿರುವ ಯಾವುದೇ ಭಾಷೆ, ಜಾತಿ, ಧಾರ್ಮಿಕ ಸಂಘಗಳ ಸದಸ್ಯತ್ವವನ್ನು ತೆಗೆದುಕೊಂಡಿಲ್ಲ. ಸಾಹಿತ್ಯಿಕ ಆಸಕ್ತಿ ಇದ್ದರೂ ಇಲ್ಲಿನ ಕನ್ನಡ ಸಾಹಿತ್ಯ ರಂಗ ಎನ್ನುವ ಸಾಹಿತ್ಯಿಕ(?) ಗುಂಪನ್ನೂ ಸೇರಿಲ್ಲ. ಒಂದೆರಡು ಸಂಘಗಳ ಕಾರ್ಯಕ್ರಮಗಳಿಗೆ ಮನರಂಜನೆಗಾಗಿ ಹೋಗಿದ್ದೇನಷ್ಟೇ.

ಇನ್ನು ಯಾವುದೇ ಮಾಧ್ಯಮದಲ್ಲಿ ಈವರೆಗೆ ನಾನು ಹುಟ್ಟಿದ ಜಾತಿಯ ಕುರಿತಾಗಿ ಯಾವುದೇ ಸಕಾರಾತ್ಮಕ ಭಾವನೆಯ ಬರಹ, ಪೋಸ್ಟ್ ಹಾಕಿಲ್ಲ. ಹಿಂದೆ ಒಬ್ಬರು ನನ್ನ ಹುಟ್ಟಿನ ಜಾತಿಯನ್ನು ಹೆಕ್ಕಿ ನನ್ನ ಪುಸ್ತಕಕ್ಕೆ ಖ್ಯಾತನಾಮರು ಬರೆದ ಮುನ್ನುಡಿ ಅವರು ಬರೆದದ್ದಲ್ಲ ಎಂದು ಹಬ್ಬಿಸಿದಾಗ, ಹೌದು ನಾನೊಬ್ಬ ಕಾಳಾಮುಖ ಜಂಗಮ. ನನ್ನ ಪುಸ್ತಕದ ಮುನ್ನುಡಿಯನ್ನು ಆ ಖ್ಯಾತನಾಮರು ಬರೆದಿಲ್ಲ ಎಂದು ಪುರಾವೆ ಸಮೇತ ಸಾಬೀತು ಮಾಡಿದರೆ ನಾನು ನನ್ನ ಲಿಂಗರೂಪಿ ಅಂಗವನ್ನು ಕತ್ತರಿಸಿಕೊಳ್ಳುವೆ. ತಪ್ಪಿದರೆ ನೀವು ಕತ್ತರಿಸಿಕೊಳ್ಳುವಿರಾ? ಎಂದು ಕಾಳಾಮುಖರಂತೆ ಸವಾಲು ಹಾಕಿದ್ದು ಬಿಟ್ಟರೆ ಮತ್ತೆಂದೂ ಆ ಕುರಿತು ಬರೆದಿಲ್ಲ.

ನಾನು ಬರೆಯಲು ಆರಂಭಿಸಿದ ನಂತರ ಪರಿಚಿತರಾದ

ಭಾರತದ ಅನೇಕ ಉದಾರವಾದಿ, ಪ್ರಗತಿಪರ ಸ್ನೇಹಿತೆ/ತರು ನನ್ನ ಹುಟ್ಟಿನ ಜಾತಿಯ ಹುಡುಕಿ ತೆಗೆದು ನನ್ನನ್ನು ಜಾತಿ ಹಿಡಿದು ನಾಜೂಕಾಗಿ ಆಗಾಗ್ಗೆ ನಿಂದಿಸುತ್ತಲೇ ಇದ್ದಾರೆ. ಮೊನ್ನೆ ಸಹ ಇಂತಹದೇ ಉದಾರಜೀವಿ ಆಲಿಬಾಬಾ ಸ್ನೇಹಿತ ತನ್ನ ೪೦ ಚೋರರನ್ನು ಒಗ್ಗೂಡಿಸಿ ಜಾತಿನಿಂದನೆ ಮಾಡಿದ್ದ.

ಇತ್ತೀಚೆಗೆ ಏನನ್ನಾದರೂ ತಾರ್ಕಿಕವಾಗಿ ಪ್ರಶ್ನಿಸಿದರೆ ಸಾಕು ಪಂಥೋಗ್ರರಂತೆ ಜಾತಿ ಮೂಲದ ವಂಶಾವಾಹಿಯನ್ನು ಜಾಲಾಡುವ ಉಗ್ರವಾದ ಎಲ್ಲೆಡೆ ಸಾಂಕ್ರಾಮಿಕವಾಗಿ ಹರಡುತ್ತಿದೆ.

ಭಾರತದಲ್ಲಿ ನನ್ನ ಹಿತಾಸಕ್ತಿ ವಿಷಯಗಳು (ಸ್ವಯಾರ್ಜಿತ ಮನೆ, ತೋಟ, ಇತ್ಯಾದಿ ಆಸ್ತಿಗಳು) ಇರುವ ಕಾರಣ, ಅಲ್ಲಿನ ಈ ನವವಾತಾವರಣಕ್ಕೆ ತಕ್ಕಂತೆ ನನ್ನ ಹುಟ್ಟಿನ ಜಾತಿಯ ಕುರಿತಾಗಿ ಭಾವನೆಗಳನ್ನು ಬೆಳೆಸಿಕೊಳ್ಳುವುದನ್ನು ಗತ್ಯಂತರವಾಗಿ ಭಾರತೀಯ ಸಾಂವಿಧಾನಿಕ ಸಮಾಜಕ್ಕಾಗಿ ನಾನು ಪಿತ್ರಾರ್ಜಿತವಾಗಿ ಹೇರಿಕೊಳ್ಳಬೇಕಿದೆ.

ಆ ಹೇರಿಕೆಯ ಕಾರಣವಾಗಿ ನನ್ನ ಹುಟ್ಟಿನ ಜಾತಿಯ ಬಗ್ಗೆ ನಾನು ಕಂಡುಕೊಂಡದ್ದು:

೧. ಕರ್ನಾಟಕ ಸಾಮ್ರಾಜ್ಯ ಸ್ಥಾಪನೆಗೆ ಪ್ರಮುಖ ಕೊಡುಗೆ ನೀಡಿದವರು ಕಾಳಾಮುಖ ಜಂಗಮರು ಯಾನೆ ವೀರಶೈವ ಜಂಗಮರು. ಜಂಗಮ ಕ್ರಿಯಾಶಕ್ತಿ ಕರ್ನಾಟಕ ಸಾಮ್ರಾಜ್ಯದ ರಾಜಗುರುವೂ ಆಗಿದ್ದ.

(Ref: Founders of Vijayanagara, S. Srikantaya)

೨. ಶೈವ ಪಂಥ ಪ್ರಸಾರಕ್ಕೆ ದೇಶಾದ್ಯಂತ ಕೇದಾರದಿಂದ ಶ್ರೀಶೈಲದವರೆಗೆ ಮಠಗಳನ್ನು ಕಟ್ಟಿದವರು ಜಂಗಮರು.

೩. ಪಂಥಕ್ಕೊಡ್ಡಿದ ಸವಾಲುಗಳಲ್ಲಿ ಕೈ, ಕಾಲು, ರುಂಡಗಳನ್ನು ಕಡಿದುಕೊಂಡು ಶೈವಪಂಥವನ್ನು ಬೆಳೆಸಿದವರು ಜಂಗಮರು.

೪. ದಕ್ಷಿಣಾಚಾರ ಎಂಬ ಕಲಾಪ್ರಕಾರವನ್ನು ಹುಟ್ಟುಹಾಕಿ ಕರ್ನಾಟಕದ ಶಿಲ್ಪಕಲೆಗೆ ಮಾನ್ಯತೆ ತಂದುಕೊಟ್ಟವರು ಇದೇ ಕಾಳಾಮುಖ ಜಂಗಮರು.

(ದಕ್ಷಿಣಾಚಾರವೇ ಅಪಭ್ರಂಶಗೊಂಡು ಜಕಣಾಚಾರವಾಗಿ ಮುಂದೆ ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿಯಾಗಿ ಈಗ ಆತನ ಹೆಸರಿನ ಜಯಂತಿ ಸಹ ಆಗಿದೆ).

೫. ಕಾಳಾಮುಖ ಜಂಗಮರ ಪ್ರಭಾವದಿಂದ ಸಾಮ್ರಾಜ್ಯ ವಿಸ್ತರಿಸಿದ ಚೋಳರು ತಮ್ಮ ಪ್ರಮುಖ ಯುದ್ಧದ ಹಡಗಿಗೆ ಕಾಳಾಮುಖ ಎಂದು ಹೆಸರಿಸಿ ಇವರನ್ನು ಆದರಿಸಿದ್ದರು.

೬. ಪಾಲ್ಕುರಿಕೆ ಸೋಮನಾಥ, ಹರಿಹರನ ಕಟ್ಟುಕಥೆಯ ಪುರಾಣ/ರಗಳೆಗಳಾಚೆ ಶಿಲಾಶಾಸನಗಳ ಪ್ರಕಾರ ಬಸವಣ್ಣ, ವೀರ ಮಾಹೇಶ್ವರ ಜಂಗಮ ಪುರುಷ.

(ಅರ್ಜುನವಾಡ ಶಿಲಾಶಾಸನ - ಮಧುರಚೆನ್ನ, ಮುನವಳ್ಳಿ ಶಿಲಾಶಾಸನ - David Lorenzen)

೭. ಅಲ್ಲಮಪ್ರಭು ತನ್ನನ್ನು ತಾನೇ "ನೀವೆನ್ನ ವಂಶೀಭೂತರಾದ ಕಾರಣ_ನಿಮ್ಮ ಹೆಚ್ಚು ಕುಂದು ಎನ್ನದಾಗಿ..." ಎಂದು ಜಂಗಮರ ಕುರಿತಾದ ವಚನದಲ್ಲಿ ತಾನು ಜಂಗಮ ಎಂದು ಹೇಳಿಕೊಂಡಿದ್ದಾನೆ.

೮. ಮುಗಿದೇಹೋಯಿತು ಎನ್ನುವ ಕಾಲಘಟ್ಟದಲ್ಲಿ ಪಂಥವನ್ನು ಪ್ರವರ್ಧಮಾನಕ್ಕೆ ತಂದ ಎಡೆಯೂರು ಸಿದ್ದಲಿಂಗೇಶ್ವರರು ಜಂಗಮರು. ಬರಡು ಪ್ರದೇಶಕ್ಕೆ ತೆಂಗು ಪರಿಚಯಿಸಿ ತೋಂಟದಾರ್ಯ ಎಂದಾದವರು ನನ್ನ ವಂಶೀಭೂತರು.

.

.

.

.

ಪಟ್ಟಿ ಬಹುದೊಡ್ಡದಿದೆ!

ಆದರೆ ನನಗಾಗಲಿ ನನ್ನ ವಂಶೀವರ್ತಮಾನ, ವಂಶೀಭವಿಷ್ಯಕ್ಕಾಗಲಿ ಇದು ನಮ್ಮ ಪರಂಪರೆ ಎಂಬುದನ್ನು ಬಿಟ್ಟರೆ ಇನ್ಯಾವುದೇ "ವಿಶೇಷಣ"ಗಳ ಲಾಭವಿಲ್ಲ.

ಹಾಗಾಗಿ ಇದರಿಂದ ನನ್ನ ಕಾಲರ್ ಮೇಲಕ್ಕೇರುವುದೂ ಇಲ್ಲ, ಪ್ಯಾಂಟು ಉದುರುವುದೂ ಇಲ್ಲ!

ಆದರೆ ಇಂತಿಪ್ಪ ವೀರಮಾಹೇಶ್ವರ ಜಂಗಮರು ಬಲಿದಾನ ನೀಡಿ ಉಳಿಸಿ ಬೆಳೆಸಿದ ಪಂಥದ ಕೆಲವು ಅರಿವುಗೇಡಿ ಫಲಾನುಭವಿಗಳು ಈಗ ವೀರಶೈವ ಬೇರೆ, ಲಿಂಗಾಯತ ಬೇರೆ ಎನ್ನುವ ನಿರಾಧಾರಿ ಪಂಥೋಗ್ರರಾಗಿ, "ಜಂಗಮರು ಪಂಪೀಗಳು. ಅವರನ್ನು ಹೊರಹಾಕಿ. ಅವರಿಗೆ ಉದ್ಯೋಗ ಕೊಡಬೇಡಿ, ಅವರ ಬಳಿ ವ್ಯವಹಾರ ಮಾಡಬೇಡಿ, ಊರಲ್ಲಿ ಯಾವುದಕ್ಕೂ ಸೇರಿಸಬೇಡಿ. ಅವರನ್ನು ಬೆಳಿಗ್ಗೆ ಎದ್ದು ನೋಡಿದರೆ ದರಿದ್ರ ಅಂಟುತ್ತದೆ" ಎಂದೆಲ್ಲಾ ಜನಾಂಗೀಯ ನಿಂದನೆಯ ಪಿಂಪ್ ಪೀಪಿಯನ್ನು ಊದುತ್ತಿದ್ದಾರೆ. 

ಊಳಿಗಮಾನ ಪ್ರಜಾಪ್ರಭುತ್ವದ ಭಾರತೀಯ ಸಾಂವಿಧಾನಿಕ ಜಾತಿಸಂಕುಲೆಯಲ್ಲಿ ಸಿಲುಕಿ ಅಲ್ಲಿಯೇ ಒದ್ದಾಡಬೇಕಾದ ಸಾಮಾಜಿಕ, ಆರ್ಥಿಕ, ಸಾಂಖ್ಯಿಕ, ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ ಈ ಜನಕ್ಕೆ ಅವರ ಪರಂಪರೆಯನ್ನು ಪರಿಚಯಿಸಿದ್ದೇನೆ. ಹೋಗಿ ನೀವೂ ಕಾಲರ್ ಎತ್ತಿ, ಪ್ಯಾಂಟು ಉದುರಿಸಿ.

ಎತ್ತಿ ಉದುರಿಸುವ ಮುನ್ನ ನನ್ನ ವಂಶೀಭೂತ ಅಲ್ಲಮನ ವಯಾಗ್ರ ವಚನ ಪಂಥೋಗ್ರರಲ್ಲದೆ ಪಂಪೀಗಳೂ ಮರೆಯದೇ ನೆನಪಿಟ್ಟುಕೊಳ್ಳಿ.

ಆರುಹ ಪೂಜಿಸಲೆಂದು ಕುರುಹ ಕೊಟ್ಟೆಡೆ 

ಅರುಹ ಮರೆತು ಕುರುಹ ಪೂಜಿಸುವ 

ಹೆಡ್ಡರಾ ನೋಡಾ ಗುಹೇಶ್ವರ.

ಜಾತಿನಾಶ ಆಗುವುದಿಲ್ಲ, ಜನನಾಶ ಖಂಡಿತ! 

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಬಸವ ಜಯಂತಿ ೨೦೨೪

 ಅನ್ಯಾಯದ ವಿರುದ್ಧ ಜಗತ್ತಿನಾದ್ಯಂತ ಜನಸಾಮಾನ್ಯರು ಒಂದು ಕಾಲಘಟ್ಟದಲ್ಲಿ ಸಂಘಟಿತರಾಗಿ ಎದ್ದು ನಿಂತದ್ದು ಧರ್ಮದ ಛಾಯೆಯಲ್ಲಿ! ಭಾರತ ಜನನಿಯ ಭಕ್ತಿಪಂಥವೂ, ತನುಜಾತೆ ಕರ್ನಾಟಕದ ವಚನ ಚಳುವಳಿಯೂ ಇದಕ್ಕೆ ಹೊರತಾಗಿರಲಿಲ್ಲ.

ಹಾಗಾಗಿಯೇ ಕಾರ್ಲ್ ಮಾರ್ಕ್ಸ್ ಹೇಳಿದ್ದು: "ಧರ್ಮ ಎಂಬುದು ಸಾಮಾನ್ಯರ ಅಫೀಮು. ಅದು ಭರವಸೆಯೇ ಇಲ್ಲದವರ ಭರವಸೆಯಾಗಿ, ಬೇಗುದಿಗರ ಬೇಗುದಿಯಾಗಿ, ಆತ್ಮಚೈತನ್ಯವಿಲ್ಲದವರ ಆತ್ಮವಾಗಿದೆ;

ಅದನ್ನು ನೀವು ಬದಲಿಸಬೇಕೆಂದು ಆಲೋಚಿಸುವುದಾದರೆ ಅದರ ಪರ್ಯಾಯವು ಸಹ ಜನರಿಗೆ ಧರ್ಮ ನೀಡಿರುವ ಭರವಸೆಯನ್ನೇ ನೀಡಬೇಕಾಗುತ್ತದೆ."

ಇಲ್ಲಿ ಇಲ್ಲದ ಆದರೆ ಇರಲೇಬೇಕಾದ ಎಚ್ಚರಿಕೆಯನ್ನು ನಾವು ಇತಿಹಾಸದಿಂದ ಕಲಿಯಬಹುದು! ಅದು, ಜನರ ಅಂತಹ ಭರವಸೆಗೆ ಕಿಂಚಿತ್ ಮುಕ್ಕಾದರೂ....ದಾರುಣ ಸೋಲು ಕಟ್ಟಿಟ್ಟ ಬುತ್ತಿ, ಎಂಬುದು.

ಇಂತಹ ಯಾವ ವಚನ ಚಳುವಳಿಯ ಪೂರ್ವಾರ್ಧದಲ್ಲಿ ಹಿರಿಯರನ್ನು, ಪುರಾತನರನ್ನು ವಚನಕಾರರು ಹಾಡಿ ಹೊಗಳಿದ್ದರೋ ಅದೇ ಹಿರಿಯರನ್ನು, ಪುರಾತನರನ್ನು ವಚನ ಚಳುವಳಿಯ ಉತ್ತರಾರ್ಧದಲ್ಲಿ ಭ್ರಮನಿರಸನಗೊಂಡು ಹೀನಾಯವಾಗಿ ಹೀಯಾಳಿಸಿದ್ದಾರೆ. ಅದೇ ರೀತಿ ಕಲ್ಯಾಣ ಕ್ರಾಂತಿಯ ನಂತರ ಕೂಡ ಬಸವಭ್ರಮನಿರಸನಗೊಂಡು ಮಾಚಿದೇವನಲ್ಲದೆ ಇನ್ನೂ ಹಲವು ವಚನಕಾರರು ಇಂತಹ ಕೆಲವು ವಚನಗಳನ್ನು ರಚಿಸಿದ್ದಾರೆ.

ಬಸವಾಧಿಪತ್ಯದಿಂದ ಬಸವಧಃಪತನದ ಸೋಪಾನುಪಾತವನ್ನು ಮಾಚಿದೇವನ ಈ ಎರಡು ವಚನಗಳು ಕಟ್ಟಿಕೊಡುತ್ತವೆ.

೧. 

ಅರಿದಲ್ಲದೆ ಗುರುವ ಕಾಣಬಾರದು.

ಅರಿದಲ್ಲದೆ ಲಿಂಗವ ಕಾಣಬಾರದು.

ಅರಿದಲ್ಲದೆ ಜಂಗಮವ ಕಾಣಬಾರದು.

ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ

ಎನಗೆ ಸ್ವಾಯತವಾಯಿತ್ತಾಗಿ,

ಭಿನ್ನವಿಲ್ಲ ಕಾಣಾ ಕಲಿದೇವರದೇವ.

೨.

ಹಣದಾಸೆಗೆ ಹದಿನೆಂಟುಜಾತಿಯ ಭಕ್ತರ ಮಾಡಿ,

ಲಿಂಗವ ಕೊಟ್ಟು ಲಿಂಗದ್ರೋಹಿಯಾದ.

ಪ್ರಸಾದವ ನೀಡಿ ಪ್ರಸಾದದ್ರೋಹಿಯಾದ.

ಪಂಚಾಕ್ಷರಿಯ ಹೇಳಿ ಪಂಚಮಹಾಪಾತಕಕ್ಕೊಳಗಾದ.

ಇಂತೀ ಹೊನ್ನ ಹಂದಿಯ ಕೊಂದು,

ಬಿನ್ನಾಣದಲ್ಲಿ ಕಡಿದುತಿಂಬ ಕುನ್ನಿಗಳನೇನೆಂಬೆನಯ್ಯಾ,

ಕಲಿದೇವರದೇವ.

"ದ್ರೋಹಿಯಾದ", "ಮಹಾಪಾತಕಕ್ಕೊಳಗಾದ" ಎಂಬ ಏಕವಚನದ ಪದಗಳು ಇಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯ ಕುರಿತಾಗಿವೆ. 

ಕಾರ್ಲ್ ಮಾರ್ಕ್ಸ್ ಮಾತಿನ ಒಂದು ವಾಕ್ಯವನ್ನು ಮಾತ್ರ ಹೆಕ್ಕಿದ ಬುದ್ಧಿವಂತರಂತೆಯೇ ವಚನಗಳು ಸಹ ಅವರವರ ಅನುಕೂಲಕ್ಕೆ ಹೆಕ್ಕಲ್ಪಟ್ಟಿವೆ. 

ಇತಿ ಬಸವರಾಜಕಾರಣ ಸಂಪ್ರತಿ!

ರಜೆಯ ಮಜೆಯ ಶುಭಾಶಯಗಳು!

- ರವಿ ಹಂಜ್ 

ಕಮ್ಯೂನಿಸ್ಟ್ ನರಮೇಧ

 ಕಾರ್ಮಿಕ ಶಕ್ತಿಯನ್ನು ಬಳಸಿಕೊಂಡು ಅಧಿಕಾರ ಪಡೆದು ಸ್ಟಾಲಿನ್ ಸೃಷ್ಟಿಸಿದ ಹಾಲೋಡಮಾರ್ ಅಂತಹ ನರಮೇಧದಲ್ಲಿ ಸತ್ತವರು ಮೂರೂವರೆ ಕೋಟಿಯಿಂದ ಐದು ಕೋಟಿ. ಹಸಿವಿನಿಂದ ಜನ ಒಬ್ಬರನೊಬ್ಬರು ಕೊಂದು ತಿಂದ ನರಭಕ್ಷಕ ಘಟನೆಗಳ ಉದಾಹರಣೆಗಳು ಸಾಕಷ್ಟಿವೆ.


ಕಮ್ಯೂನಿಸ್ಟ್ ಮಾವೋ ನಡೆಸಿದ ಸಂಸ್ಕೃತಿ ಕ್ರಾಂತಿಯಲ್ಲಿ ನಾಲ್ಕೂವರೆ ಕೋಟಿಯಿಂದ ಏಳುವರೆ ಕೋಟಿ ಅಸಹಜ ಸಾವುಗಳಾಗಿವೆ.


ಅದೇ ಹಿಟ್ಲರ್ ನಡೆಸಿದ ನರಮೇಧದಲ್ಲಿ ಸತ್ತವರು ಅರವತ್ತು ಲಕ್ಷ. ಜರ್ಮನ್ನರು ಈಗಲೂ ತಾವು ಜರ್ಮನ್ ಆಗಿ ಹಿಟ್ಲರ್ ನರಮೇಧವನ್ನು ತಮ್ಮ ಪಾಪವೆಂದು ತಲೆ ಮೇಲೆ ಹೊತ್ತು ಪಾಪಪ್ರಜ್ಞೆ ತೋರುತ್ತಾರೆ.


ಆದರೆ ಫ್ಯಾಸಿಸ್ಟ್ ಗೋಬೆಲ್ಸ್ ನರಮೇಧಿ ಸ್ಟಾಲಿನ್, ಲೆನಿನ್ ಹೆಸರನ್ನು ತಮ್ಮ ಮಕ್ಕಳಿಗೆ ಹೆಸರಿಟ್ಟ ಭಾರತೀಯ ಕಮ್ಯೂನಿಸ್ಟರು ಇಂದು ಇಟ್ಟಿಗೆ ಹೊರುವ, ಗುದ್ದಲಿ ಹಿಡಿದ, ಸುತ್ತಿಗೆ ಎತ್ತಿದ ಕಾರ್ಮಿಕರ ಫೋಟೋ ಹಾಕಿ ಕಾಲರ್ ಎತ್ತಿ ಸಂಭ್ರಮಿಸುತ್ತಾರೆಯೇ ಹೊರತು ಎಂದಾದರೂ ಪಾಪಪ್ರಜ್ಞೆ ತೋರಿದ್ದಾರೆಯೇ?!?!


ಆಷಾಢಭೂತಿ ಕಮ್ಯೂನಿಸ್ಟರನ್ನು ಎಲ್ಲಿಡಬೇಕೋ ಅಲ್ಲಿಟ್ಟು ಕಾಯಕದಿನವನ್ನು ಆಚರಿಸೋಣ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ