ಅಗಣಿತ ಅಲೆಮಾರಿ - ಆನಂದ್ ಋಗ್ವೇದಿ ಅವರ ವಿಮರ್ಶೆ

 #ಸಮಾಜವಾದಿ_ಕಂಡ_ಪ್ರಜಾಪ್ರಭುತ್ವದ_ಕನಸು!!


#ರವಿ_ಹಂಜ್ ಅವರ ಪ್ರವಾಸ ಕಥನ #ಅಗಣಿತ_ಅಲೆಮಾರಿ


ಕನ್ನಡ ಸಾಹಿತ್ಯದಲ್ಲಿ ಪ್ರವಾಸ ಸಾಹಿತ್ಯ ಪ್ರಕಾರಕ್ಕೆ ದೊಡ್ಡ ಇತಿಹಾಸವೇ ಇದೆ. ನಮ್ಮದಲ್ಲದ ನೆಲ, ಜಲ, ಸಂಸ್ಕೃತಿ ಮತ್ತು ಜನಪದಗಳ ನಿಕಟ ದರ್ಶನ ಮಾಡಿಸುವ ಪ್ರವಾಸ ಕೃತಿಗಳು ಹೇರಳವಲ್ಲದಿದ್ದರೂ ಅಲ್ಪ ಸಂಖ್ಯೆಯಲ್ಲೇ ಗಮನಾರ್ಹ. ಧಾರ್ಮಿಕ ಮನೋಭಾವದ ಭಾರತೀಯರಿಗೆ ತೀರ್ಥಯಾತ್ರೆಯೇ ಪ್ರವಾಸ ಎನ್ನಿಸುವುದರಿಂದ ಹಲವು ಅಂತರ್ ರಾಜ್ಯ, ಅಂತರ್ ದೇಶೀಯ ಪ್ರವಾಸಗಳಲ್ಲಿ ಬಹುತೇಕ ಗುಡಿ ಗುಂಡಾರಗಳ ವಿವರಗಳೇ ಹೆಚ್ಚು. ಅವನ್ನು ಹೊರತುಪಡಿಸಿದರೆ ಕನ್ನಡಕ್ಕೆ ದಕ್ಕಿದ ಹೊರ ದೇಶದ ಪ್ರವಾಸ ಕಥನವೆಂದರೆ ಅದು 'ಅಮೇರಿಕೆ'ಯ ಕುರಿತದ್ದು. ಅಮೇರಿಕೆಯ ಬಗ್ಗೆ ಮೂರು ತಲೆಮಾರುಗಳ ಪ್ರವಾಸಾನುಭವ ಮತ್ತು ಗ್ರಹಿಕೆ ಲಭ್ಯವಿವೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪ್ರಭುಶಂಕರ, ಮೂರ್ತಿ ರಾಯರು, ಕೃಷ್ಣಾನಂದ ಕಾಮತರಿಂದ ಮೊದಲ್ಗೊಂಡು ಈಚಿನ ವರೆಗಿನ ಪ್ರವಾಸ ಕಥನಗಳು ಅಮೇರಿಕದ ವಾಸ್ತು ಬೆರಗು, ವಾಹನ ದಟ್ಟಣೆ, ನಯಾಗರ ಜಲಪಾತದಂತಹ ಬೆರಗುಗಳನ್ನು ಪರಿಚಯಿಸಿವೆ. ಈ ಸಾಫ್ಟ್‌ವೇರ್ ಕಾಲದಲ್ಲಿ ಭಾರತದ ಕಿರಿಯ ತಲೆಮಾರು ಅಮೇರಿಕೆಯನ್ನು ತಮ್ಮ ಔದ್ಯೋಗಿಕ ಆಡುಂಬೊಲ ಮಾಡಿಕೊಂಡಿರುವಾಗ ಅವರ ಬಸಿರು ಬಾಣಂತನಗಳ ಭಾರತೀಯತೆಗಾಗಿ ಅಮೇರಿಕೆಯನ್ನು ಎಡತಾಕುವ ಅವರ ಅಪ್ಪಮ್ಮಂದಿರು ತಮ್ಮ ಪ್ರವಾಸಾನುಭವಗಳನ್ನು ದಾಖಲಿಸಿರುವುದು ಅತ್ಯಲ್ಪ!


ಧಾರ್ಮಿಕ ಕಾರಣಗಳಿಲ್ಲದ ಒಳ ನಾಡಿನ ಪ್ರವಾಸ ಕಥನಗಳನ್ನು ಅಕಾಡೆಮಿಗಳು ಸಾಂಸ್ಕೃತಿಕ ಅನುಸಂಧಾನದ ನೆಲೆಯಲ್ಲಿ ಪ್ರೋತ್ಸಾಹಿಸಿದ್ದರೂ ಅವು ದಿನಚರಿಗಳ ದಾಖಲೀಕರಣವಾಗಿರುವುದೇ ಹೆಚ್ಚು! ಶೈಕ್ಷಣಿಕ ಮತ್ತು ಸಮಾಜಶಾಸ್ತ್ರೀಯ ಅಧ್ಯಯನದಂತೆ ಭಾಸವಾಗುವ ರಹಮತ್ ತರೀಕೆಯವರ 'ನಾಡ ಸುತ್ತಾಟ'ದಂತಹ ಗ್ರಹಿಕೆಗಳು ಅತ್ಯಪರೂಪ. ಇಂತಹ ಕೃತಿಗಳಲ್ಲಿಯೂ ಧಾರ್ಮಿಕ ಪ್ರತ್ಯೇಕತೆಯ ಕಾರಣದಿಂದ  ಒಳ ಹೋಗಲಾಗದ, ಮುಕ್ತವಾಗಿ ಗ್ರಹಿಸಿಯೂ ಢಾಳಾಗಿ ವ್ಯಕ್ತಪಡಿಸಲಾಗದ ಸಹಜ ಹಿಂಜರಿಕೆಗಳಿಂದ ವಾಸ್ತವದ ದಾಖಲೀಕರಣ ತೀರಾ ವಿರಳ.


ಇಂತಹ ದುರ್ಲಭಗಳ ಕಾಲದಲ್ಲಿ ಥಟ್ಟನೇ ಗಮನ ಸೆಳೆದು ಗಬಕ್ಕನೇ ಓದಿಸಿಕೊಂಡದ್ದು #ರವಿ_ಹಂಜ್ ಅವರ #ಅಗಣಿತ_ಅಲೆಮಾರಿ ಕೃತಿ. ಈಗಾಗಲೇ ಚೀನಿ ಪ್ರವಾಸಿ ಹುಯೆನತ್ಸಾಂಗನ ಮಹಾ ಪ್ರವಾಸದ ಬಗ್ಗೆ ಬರೆದು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗುರುತಿಸಲ್ಪಟ್ಟ ರವಿ ಹಂಜ್ ಮೂಲತಃ ಕನ್ನಡದವರು, ನಮ್ಮವರು ಅಷ್ಟೇ ಅಲ್ಲ ನನ್ನ ಊರು ದಾವಣಗೆರೆಯವರು. ಭಾರತದಿಂದ ಮಾನಸಿಕವಾಗಿಯೂ ಸುದೂರದಲ್ಲಿ ನಿಂತು ದೇಶದ ವರ್ತಮಾನವನ್ನು ನಿರಂತರ ಗಮನಿಸಿ ಪ್ರತಿಕ್ರಿಯಿಸುವ ಅವರು ಉಪಯೋಗಿಸುವ 'ಹುಚ್ಚಾಸ್ಪತ್ರೆ' ಮತ್ತು 'ಕಮಂಗೀಪುರ' ಎಂಬ ಹ್ಯಾಷ್ ಟ್ಯಾಗ್ ಗಳ ಬಗ್ಗೆ ತಕರಾರು ತೆಗೆದೇ ಜಗಳವಾಡುತ್ತಾ ಸ್ನೇಹಿತನಾದವನು ನಾನು.‌ ಅವರು ಬಳಸುವ ಹ್ಯಾಷ್ ಟ್ಯಾಗಿನ ಸಕಾರಣ ಈ ಕೃತಿಯಲ್ಲಿ ಲಭ್ಯವಿದೆ!


ತನ್ನನ್ನೇ ತಾನು ದೂರ ನಿಂತು ನೋಡುವ ತಂತ್ರವಾಗಿ ಎ ಕೆ ರಾಮಾನುಜನ್ನರ ಆತ್ಮ ಕತೆ "ಮತ್ತೊಬ್ಬನ ಆತ್ಮ ಕತೆ" ಪರಿಚಯವಿರುವ ಕನ್ನಡಕ್ಕೆ ಅಂತಹುದೇ ತಂತ್ರದ ಪ್ರವಾಸ ಕಥನವನ್ನು ರವಿ ಕೊಟ್ಟಿದ್ದಾರೆ.‌ ಇದು ರವಿಯವರೇ ಬರೆದ ಕಥನವಾದರೂ ಇದರ ನಿರೂಪಕ "ವೂಶಿಯಾನ್ ಡಿ ಲ್ಯುಲಾಂಗ್ಟ" ಎಂಬ ಚೀನಿ! ಹಾಗಾಗಿ ಈ ಕಥನದಲ್ಲಿ ಸಹ ಪ್ರವಾಸಿಯಾಗಿರುವ ರವಿಯವರಿಗೆ ಮುಕ್ತವಾಗಿ ಗ್ರಹಿಸುವ, ಯಾವುದೇ ಹಿಂಜರಿಕೆಯಿಲ್ಲದೇ ಮಾತುಗಳನ್ನು ದಾಖಲಿಸುವ ಅವಕಾಶವೊಂದು ತಾನೇ ತಾನಾಗಿ ಲಭ್ಯವಾಗಿದೆ!


ಕಮ್ಯುನಿಸ್ಟ್ ಆಡಳಿತದ ಮತ್ತು ಮಾವೋ ಅವರ ಸಾಂಸ್ಕೃತಿಕ ಕ್ರಾಂತಿಯ ದಿನಗಳ ಚೀನಾದಲ್ಲಿ ಬೆಳೆದ ಈ ಕೃತಿಯ ನಿರೂಪಕ ವೂಶಿಯಾನ್…… ಯಾನೆ ಲೀ, ಅನಿವಾಸಿ ಭಾರತೀಯ ರವಿ ಮತ್ತಿವರ ಅಮೇರಿಕನ್ ಗೆಳೆಯ ಫ್ರ್ಯಾಂಕ್ ಮೂವರೂ ಭಿನ್ನ ಪ್ರದೇಶ ಮತ್ತು ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರಾದರೂ ಮೂವರು ಸಮಾಜವಾದಿಗಳು. ಮದ್ಯ, ಮಾಂಸ, ಮತ್ಸ್ಯ, ಮಾನಿನಿ ಮತ್ತು ಮೈಥುನಗಳಂತಹ ಪಂಚ'ಮ'ಗಳ ಬಗ್ಗೆ ಸಮಾನಾಸಕ್ತಿ ಹೊಂದಿರುವ ಇವರೆಲ್ಲಾ ಎಕ್ಸಾಟಿಕ್ ಮತ್ತು ಎರೋಟಿಕ್ ಗಳಲ್ಲೇ ಕಳೆದು ಹೋಗದೇ ರವಿಯ ಆಸಕ್ತಿ ಮತ್ತು ಕುತೂಹಲವಾದ ಹುಯೆನತ್ಸಾಂಗನ ಮಹಾ ಪ್ರವಾಸದ ನೆಲೆಗಳನ್ನು ಸಂದರ್ಶಿಸಲು ಬಯಸುವುದೇ ಈ ಪ್ರವಾಸಕ್ಕೆ ಕಾರಣ.‌


ವರ್ಗ ಹಿತಾಸಕ್ತಿಯ ಅಪ್ಲೈಡ್ ರಾಜಕೀಯ ಅರ್ಥಶಾಸ್ತ್ರವಾದ ಮಾರ್ಕ್ಸ್ ವಾದವನ್ನು ಸಾಮಾಜಿಕವಾಗಿ ಅನುಷ್ಠಾನಗೊಳಿಸುವಲ್ಲಿ ಆದ ತೊಡಕುಗಳು, ಅದರಿಂದಾದ ನಷ್ಟಗಳು, ಸಾಮಾಜಿಕ ಬದುಕಿನ ನಂಬುಗೆ, ರೀತಿ ರಿವಾಜುಗಳ ನೆಲೆ ಹಿನ್ನೆಲೆ, ತನ್ನ ಕರ್ಮಠತೆಯನ್ನು ಕಳಚಿಕೊಂಡು ಬೃಹತ್ ಉತ್ಪಾದಕ ದೇಶವಾಗಿ ಬದಲಾದ ಚೀನಾದ ಈಗಿನ ಪರಿ,.... ರಾಜಕೀಯ ಸ್ವಾತಂತ್ರ್ಯ ಸಿಕ್ಕರೂ ಮೂಲ ಗಣತಂತ್ರದಿಂದ ದೂರವಾದ ಫ್ಯೂಡಲ್ ಪ್ರಜಾಪ್ರಭುತ್ವದ ಪರಿ, ಎರಡೂ ಸಿದ್ಧಾಂತಗಳ ನೆರವಿನಿಂದ ನಡೆಯುತ್ತಿರುವ ಸರ್ವಾಧಿಕಾರದ ರಾಜಕೀಯ…. ಧಾರ್ಮಿಕ ನಂಬುಗೆ ಮತ್ತು ಭಾವುಕತೆಗಳನ್ನೇ ಉಪಯೋಗಿಸಿಕೊಂಡು ದೋಚುವ ಸಾಮಾಜಿಕ ಹುನ್ನಾರಗಳು, ಭಾರತದಲ್ಲಿ ಸರ್ವಮಾನ್ಯವಾಗಿರುವ ಭ್ರಷ್ಟಾಚಾರ, ಲೈಂಗಿಕ ಶಿಕ್ಷಣದ ಕೊರತೆ ಮತ್ತು ಜನಸಂಖ್ಯಾ ಸ್ಪೋಟ….. ಎಷ್ಟೆಲ್ಲಾ ನೆಲೆಗಳನ್ನು ದರ್ಶಿಸಿ ಪರಿಚಯಿಸಿದೆ ಈ ಪ್ರವಾಸ ಕಥನ!!!


ನವಿರು ಹಾಸ್ಯದ ಪ್ರಬಂಧದಂತಿರುವ ನಿರೂಪಣೆ, ಮುಚ್ಚು ಮರೆ ಇಲ್ಲದ ಮುಕ್ತತೆಯ ಅಭಿವ್ಯಕ್ತಿ, ಹಿಂಜರಿಕೆಯಿಲ್ಲದೆ ಮುಖವಾಡ ಧರಿಸದೇ ವ್ಯಕ್ತವಾಗುವ ಖಾಸಗಿ ಅನುಭವಗಳು ಈ ಪ್ರವಾಸ ಕಥನವನ್ನು ಮತ್ತೆ ಮತ್ತೆ ಓದುವಂತೆ, ಚಿಂತಿಸುವಂತೆ ಮಾಡಿದೆ. ಸನಾತನತೆಯ ಯಥಾ ಸ್ಥಿತಿವಾದಿಗಳಿಗೆ ಮಾತ್ರ'ಮಜಾವಾದ'ದಂತೆ ಕಾಣಿಸುವ, ಈ ಸಮಾಜವಾದಿಯ ಪ್ರಜಾಪ್ರಭುತ್ವದ ಕನಸು ನಮ್ಮೊಳಗೂ ಮೊಳಕೆಯೊಡೆಯುವುದೇ ವಿಸ್ಮಯ!


ಡಾ. ಆನಂದ್ ಋಗ್ವೇದಿ

ದಾವಣಗೆರೆ

ಓ'ಹೇರ್!

 ಓ'ಹೇರ್ ಎಂಬುದು ನನ್ನ ಇನ್ನೊಂದು ಮನೆಯೇ ಆಗಿದ್ದ ಶಿಕಾಗೋದ ವಿಮಾನ ನಿಲ್ದಾಣ. ಕನ್ನಡದ ಬಹುಪಾಲು ಅಗ್ರ ಸಾಹಿತಿಗಳು ತಮ್ಮ ಮಕ್ಕಳ ಬಾಣಂತನ ಮಾಡಲು, ಮೊಮ್ಮಕ್ಕಳ ಆಡಿಸಲು ಬಂದವರು ತಮ್ಮ ಬ(ಕೆ)ರೆಯುವ instinct ಅನ್ನು ತಡೆದುಕೊಳ್ಳಲಾಗದೆ ಇದನ್ನು "ಒಹಾರೆ" ಎಂದು ಬಣ್ಣಿಸಿ ನಾನಿದನ್ನು ಓ'ಹೇರ್ ಎಂದರೆ "ಏಯ್, ಇವನ್ಯಾವನ್ಲಾ 'ಶಾ' ನನ್ಮಗ ಇದನ್ನ 'ಶಾ' ಅಂತವ್ನೆ!" ಎಂದು ಸಮಸ್ತ ಕನ್ನಡಿಗರೂ ಕೆಕ್ಕರಿಸಿ ತಮ್ಮ ಒಂದೊಂದು ಹೇರ್ ಕಿತ್ತು ಅಕ್ಷರಶಃ ನನ್ನನ್ನು ನಿವಾಳಿಸಿ ಒಗೆಯುವಂತೆ ಮಾಡಿಬಿಟ್ಟಿದ್ದಾರೆ.


ಇರಲಿ, ಏರ್ ಫೋರ್ಸಿನ ಧೀರನ ಹೆಸರು ಹೊತ್ತ ಇದು ಒಂದೊಮ್ಮೆ ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ವಿಮಾನ-ನಿಭಿಡ ವಿಮಾನ ನಿಲ್ದಾಣವಾಗಿತ್ತು. ಈಗ ಆ ದಾಖಲಾತಿಗೆ ಪೈಪೋಟಿಗಳು ಇವೆ. ಎಲ್ಲರೂ ಅವರವರ ದೇಶದ್ದೇ ಅಥವಾ ಪಟ್ಟಣದ್ದೇ ಘನವಾದದ್ದು ಎನ್ನುತ್ತಾರೆ. ನಾನು ಆಕಾಶ-ಭೂಮಿಗಳ ಒಂದು ಮಾಡುವಂತೆ ವಿಮಾನಗಳಲ್ಲಿ ಕುಳಿತು ಮತ್ತು ನನ್ನ ಮನೆಯ ಹಿಂಭಾಗ ಕುಳಿತು ಆಕಾಶದಲ್ಲಿ ಒಂದರ ಹಿಂದೆ ಒಂದರಂತೆ ನಿಮಿಷಕ್ಕೊಂದು ವಿಮಾನಗಳು ಓ'ಹೇರ್ ಅತ್ತ ಸಾಗುವುದನ್ನು ನೋಡಿ ಇದು ನನ್ನ ಅತ್ಯಂತ ನಿಭಿಡ ಏರ್ ಪೋರ್ಟ್ ಎಂದು ಹೆಮ್ಮೆಯಲ್ಲದೆ ಸಾಕಷ್ಟು ಗರ್ವ ಪಡುತ್ತಿದ್ದೆ. 


ಪ್ರತಿ ಸೋಮವಾರ ಬೆಳಗಿನ ಜಾವ ಇಲ್ಲಿಂದ ಎಲ್ಲೆಲ್ಲಿಗೋ ಹಾರಿ ಮತ್ತು ಪ್ರತಿ ಗುರುವಾರ ದಶಕಗಳ ಕಾಲ ಶಂಭೂಲಿಂಗನ ವೃತದಂತೆ ಬಂದಿಳಿಯುತ್ತಿದ್ದೆ. ಪ್ರತಿ ಸೋಮವಾರ ನನ್ನ ಫ್ಲೈಟಿನ ಕೇವಲ ಒಂದು ಗಂಟೆ ಮುಂಚೆ ಮನೆ ಬಿಟ್ಟು ವಿಮಾನ ಬಾಗಿಲು ಮುಚ್ಚುವ ಮುನ್ನ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಒಳ ಸೇರುತ್ತಿದ್ದೆ. ಅಷ್ಟೊಂದು ದಕ್ಷ ಏರ್ ಪೋರ್ಟ್ ಇದಾಗಿತ್ತು, ಈವರೆಗೆ ಒಮ್ಮೆಯೂ ಫ್ಲೈಟ್ ಮಿಸ್ ಮಾಡಿಲ್ಲ ಎಂಬುದು ನನ್ನ ವೈಯಕ್ತಿಕ ದಾಖಲೆ! ಹಾಗೆಯೇ ಗುರುವಾರಗಳಂದು ಇಳಿದ ಐದೇ ನಿಮಿಷದಲ್ಲಿ ಏರ್ ಪೋರ್ಟಿನಿಂದ ಹೊರಬಿದ್ದು ಲಿಮೋ ಹತ್ತಿ ಇಪ್ಪತ್ತೈದು ನಿಮಿಷಗಳಲ್ಲಿ ಮನೆ ಸೇರುತ್ತಿದ್ದೆ. ಅಷ್ಟೊಂದು ದಕ್ಷ ಈ ವ್ಯವಸ್ಥೆ. ಬಹುಶಃ ಜ್ಯಾಕ್ ವೆಲ್ಚ್ ನ ದಕ್ಷತೆಯ ಬ್ಲ್ಯಾಕ್ ಬೆಲ್ಟ್ ದಾಟಿ ಇನ್ಯಾವುದೋ ಬೆಲ್ಟ್ ಪಡೆದಿದೆ ಏನೋ ಈ ಓ'ಹೇರ್!!


 ಆದರೆ ಇಲ್ಲಿ ಸಾಕಷ್ಟು ವಿಮಾನಗಳು ವಿಳಂಬವಾಗುವುದಕ್ಕೆ ಇದು ಸಂಬಂಧವಿಲ್ಲ. ಅದೇನಿದ್ದರೂ ಹವಾಮಾನ, ಏರ್ ಲೈನುಗಳ ಸಿಬ್ಬಂದಿ ಮತ್ತಿತರೆ ತಾಂತ್ರಿಕ ತೊಡಕುಗಳಿಂದ ಮಾತ್ರ ಎಂದೇ ನಾನು ವಾದಿಸಿ ಓ'ಹೇರ್ ಅನ್ನು ತೆಗಳುವ ನನ್ನ ಇತರೆ ಸಹಪಯಣಿಗರ ಬಾಯಿ ಮುಚ್ಚಿಸುತ್ತಿದ್ದೆ. ಇಂತಪ್ಪ ಓ'ಹೇರ್ ಮತ್ತು ನನ್ನ ಸಂಬಂಧಕ್ಕೆ ಕೊರೋನಾ ಕೊಳ್ಳಿ ಇಟ್ಟುಬಿಟ್ಟಿತು! 


ಕೊರೋನಾದ ಈ ದುರಿತ ಕಾಲದಲ್ಲಿ ಕೇವಲ ಎರಡು ಭಾರಿ ಭಾರತಕ್ಕೆ ಅಂತರರಾಷ್ಟ್ರೀಯ ಪ್ರವಾಸ ಬಿಟ್ಟರೆ ಒಂದೇ ಒಂದು ದೇಶೀಯ ಪ್ರವಾಸ ಕೈಗೊಂಡಿರಲಿಲ್ಲ. ಈ ದೇಶೀಯ ಟರ್ಮಿನಲ್ಲೇ ನನ್ನ ಆಪ್ತ, ಅಂತರರಾಷ್ಟ್ರೀಯ ನೆಂಟರಿದ್ದಂತೆ. ಹಾಗಾಗಿ ಆ ಟರ್ಮಿನಲ್ಲಿನ ನನ್ನ ಭೇಟಿ ಅಂತಹ ಆಪ್ತತೆ ಮೂಡಿಸುವುದಿಲ್ಲ. ಅಂತಹ ಆಪ್ತ ದೇಶೀ ಟರ್ಮಿನಲ್ಲಿಗೆ ನೆನ್ನೆ ಭೇಟಿ ಕೊಟ್ಟೇ ಬಿಟ್ಟೆ. ಇದರಿಂದ ಸಂಭ್ರಮಗೊಂಡ ಓ'ಹೇರ್ 'ಬಂದೆಯ ಪ್ರೇಮದ ಸಿರಿಯಾಗಿ' ಎಂದು ನನ್ನ ಫ್ಲೈಟನ್ನು ಒಂದೂವರೆಯಿಂದ ನಾಲ್ಕೂವರೆಗೆ ದಬ್ಬಿಸಿ ಅಲ್ಲಿಯೇ ಪ್ರೀತಿಯಿಂದ ಕೂರಿಸಿಕೊಂಡಿತು. ಹತ್ತು ಹಲವಾರು ಏರ್ ಲೈನುಗಳ ನಾಲ್ಕು ದೇಶೀ ಟರ್ಮಿನಲ್ಲುಗಳಲ್ಲಿಯೂ ಊರುಗಳಲ್ಲಿನ ಹಲವಾರು ಗಲ್ಲಿ, ವೃತ್ತಗಳಿದ್ದಂತೆ ಗಲ್ಲಿ, ವೃತ್ತ, ಫುಡ್ ಕೋರ್ಟುಗಳಿವೆ. ನಾನಿದ್ದ ಯುನೈಟೆಡ್ ಟರ್ಮಿನಲ್ಲಿನ ಬಿ ಗಲ್ಲಿಗಳ ಕಾಫಿ, ಬಿಯರ್ ದುಖಾನುಗಳ ಮೈದಡವಿ ಬೈ ಬೈ ಓ'ಹೇರ್ ಎಂದರೆ ಓ'ಹೇರ್ ನಸುನಕ್ಕು "ಬಿಟ್ಟು ಹೊರಟೆಯಾ, ಇರು ಮಾಡುತ್ತೇನೆ" ಎಂದಿತು. ನನ್ನ ವಿಮಾನ ಹಾರಲು ಸಿದ್ಧವಾಗಿ ಸದಾ ರಾಜಕುಮಾರ್ ಸಿನೆಮಾ ಕ್ಯೂನಂತಿರುವ ಅಲ್ಲಿನ ಹಾರುವ ಸಾಲಿನಲ್ಲಿ ನಿಂತಿತು. 


ಇತ್ತ ಮೊದಲೇ ಮೂರು ತಾಸು ವಿಳಂಬದಲ್ಲಿ ಸಾಕಷ್ಟು ತಮ್ಮ ಕೆಲಸದ ಅವಧಿ ಕಳೆದಿದ್ದ ಸಿಬ್ಬಂದಿಗೆ ಮತ್ತೊಂದು ತಾಸಿನ ಈ ಕ್ಯೂ ಅವರ ಶಿಫ್ಟ್ ಅನ್ನೇ ಮುಗಿಸಿ ಅವರು ವಿಮಾನವನ್ನು ವಾಪಸ್ ಗೇಟಿಗೆ ತಂದು ತರುಬಿ ಹೊಸ ಶಿಫ್ಟಿನ ತುರುಬಿಣಿಯರು ಬರುತ್ತಾರೆ ಎನ್ನುತ್ತ ಮರೆಯದೆ 'ಹ್ಯಾಪಿ ಜರ್ನಿ' ಹೇಳಿ ನಡೆದರು. ಅಂತೂ ಇಂತೂ ಹೊಸ ತುರುಬಿಣಿಯರು ಬಂದು ನಾನು ಆಕಾಶಕ್ಕೆ ಚಿಮ್ಮಿದಾಗ ಸರಿಯಾಗಿ ರಾತ್ರಿ ಎಂಟು ಗಂಟೆ ಎರಡು ನಿಮಿಷ! ಓ'ಹೇರ್ ಅಂತೂ ನನ್ನ ಎರಡು ವರ್ಷದ  ಗೈರಿಗೆ ಸರಿಯಾಗಿ ಗೇರು ಹಾಕಿ ಸೇಡು ತೀರಿಸಿಕೊಂಡಿತು.


ಇತಿಹಿ ಓ'ಹೇರ್ ಪ್ರಕರಣಹ!


ಇನ್ನು ನಾನು ಬಂದಿಳಿದ ಊರಿನಲ್ಲಿ ನಾನಿರಬೇಕಾದ ಗೆಸ್ಟ್ ಹೌಸ್ ಸೇರಿದಾಗ ಮೂರು ಗಂಟೆಯ ಬೆಳಗು. ಮಲಗಿ ಅರ್ಧ ಗಂಟೆಯೂ ಆಗಿರಲಿಲ್ಲ, "ಕ್ಕೊಕ್ಕೊಕ್ಕೋ ಕೊಕ್ಕರೂ ಕ್ಕೊ" ಎಂದು ಕೋಳಿ ಕೂಗಿದಂತೆ ಕೇಳಿತು. 'ಛೇ ಕನಸಿರಬೇಕು' ಎಂದುಕೊಂಡು ಮಗ್ಗಲು ಬದಲಿಸಿದರೆ ಮತ್ತದೇ "ಕ್ಕೊಕ್ಕೊಕ್ಕೋ ಕೊಕ್ಕರೂ ಕ್ಕೊ!" ಯಾವುದೋ ಅಲಾರಂ ಇರಬೇಕು ಎಂದುಕೊಂಡು ಅದು ಹಲವಾರು ಬಾರಿ ಕೇಳಿದರೂ ನಿರ್ಲಕ್ಷಿಸಿ ಮಲಗಿದೆ. ಬೆಳಿಗ್ಗೆ ಎದ್ದು ಬಾಗಿಲು ತೆಗೆದಾಗ ಈ ದೃಶ್ಯ!


ನಾನೆಲ್ಲಿರಬಹುದು?! ಹೇಳಿ, ಈಗ ನಿಮ್ಮ ಸರದಿ.