ಮಲೆಯೂರು ಗುರುಸ್ವಾಮಿ ಅವರ ನೆನಪು

 ಮಲೆಯೂರು ಗುರುಸ್ವಾಮಿಯವರು ನನಗೆ ಪರಿಚಯವಾದದ್ದು ಅವರ ಕೃತಿಗಳ ಮೂಲಕ. ಕಾಲಘಟ್ಟದಲ್ಲಿ ಹುದುಗಿ ಹೋದ ಇತಿಹಾಸದ ಕಲಾಕೃತಿಗಳನ್ನು ಉತ್ಖನನಕಾರರು ಬಗೆದು ತೋರುವಂತೆ ಲೋಕ ಮರೆತ ಅಪಾರ ಸಾಧನೆಯ ಸಾಧಕರನ್ನು ಹುಡುಕಿ ಅವರ ಜೀವನಗಾಥೆಯನ್ನು ಪರಿಚಯಿಸುವಂತಹ ಕೃತಿಗಳ ಮೂಲಕ!


ಅವರ ಕೃತಿಗಳು ಒಂದೆಡೆ ಆಯಾಯ ಸಾಧಕರ ಸಾಧನೆಯನ್ನು ಸಮಗ್ರವಾಗಿ ಕಥಾರೂಪದಲ್ಲಿ ಕಟ್ಟಿಕೊಡುವುದರ ಜೊತೆಗೆ ಸೂಕ್ಷ್ಮವಾಗಿ ಗುರುಸ್ವಾಮಿಯವರ ವ್ಯಕ್ತಿತ್ವ, ಕ್ರಿಯಾಶೀಲತೆ, ಧನಾತ್ಮಕ ಚಿಂತನೆಯ ಹೊಳಹನ್ನೂ ನೀಡುತ್ತವೆ. ಈ ಸೂಕ್ಷ್ಮತೆಯ ಛಾಯೆಯನ್ನು ಅವರ "ಕಪಿಲೆ ಹರಿದಳು ಕಡಲಿಗೆ”, ಮತ್ತು "ಬಂಗಾರದೊಡ್ಡಿ” ಕೃತಿಗಳಲ್ಲಿ ಹೆಚ್ಚಾಗಿ ಕಾಣಬಹುದು. ದೇವದಾಸಿಯರ ಕಥನವನ್ನು ಕಟ್ಟಿಕೊಡುವಾಗ ಸಹ ಎಲ್ಲಿಯೂ ಶಿಷ್ಟ ಸಭ್ಯತೆಯ ಮಿತಿಯನ್ನು ಮೀರದೆ ಒಂದು ನಿರ್ದಿಷ್ಟ ಗೆರೆಯ ಪರಿಧಿಯಲ್ಲಿಯೇ ಪ್ರೇಮ, ಕಾಮ, ಶೃಂಗಾರಗಳನ್ನು ಚಿತ್ರಿಸುತ್ತಾರೆ. 


ಸಹಜವಾಗಿಯೇ ಒಂದು ಮಠದ ಸ್ವಾಮಿಗಳಾಗಬೇಕಿದ್ದ ಇಂತಹ ಅತ್ಯಂತ ಸಭ್ಯ ಸುಸಂಸ್ಕೃತ ಮಲೆಯೂರರು ಸಂಸಾರಿಗಳಾದದ್ದು ಮತ್ತು ಕತೆಗಾರರಾದದ್ದು ಓದುಗರ ಪುಣ್ಯ! ಆದರೂ ವಿರಕ್ತಿಯ ಶರಣ ಸಂಸ್ಕೃತಿಯನ್ನು ಯಾವುದೇ ವಿರಕ್ತರಿಗಿಂತ ಕಡಿಮೆ ಇಲ್ಲದಂತೆ ಸಂಸಾರಿ ಮಲೆಯೂರರು ಆವಾಹಿಸಿಕೊಂಡಿದ್ದರು. ಶರಣ ಸಂಸ್ಕೃತಿ ಕೇವಲ ಕಾವಿ, ಬ್ರಹ್ಮಚರ್ಯದಿಂದಲ್ಲ ಪ್ರಮುಖವಾಗಿ ಸಂಸಾರಸಾರದಲ್ಲಿಯೇ ಹೆಚ್ಚು ಅಡಕವಾಗಿದೆ ಎಂಬಂತೆ ಜೀವಿಸಿದ್ದರು.


ಇನ್ನು ಸಾಹಿತ್ಯಿಕವಾಗಿ ಇವರ ಸಮಕಾಲೀನ ಲೇಖಕರು ಅಂತರರಾಷ್ಟ್ರೀಯ ಖ್ಯಾತಿಯ ಸಾಧಕರ ಜೀವನಗಾಥೆ ರಚಿಸಲು ಹವಣಿಸುತ್ತಿದ್ದಾಗ ಮಲೆಯೂರು ಗುರುಸ್ವಾಮಿಗಳು ವಿಶೇಷವಾಗಿ ತಮ್ಮ ಸುತ್ತಮುತ್ತಲಿನ ಮೈಸೂರಿನ ಮಣ್ಣಿನಲ್ಲಿ ಕಳೆದುಹೋಗಿರುವ ಅನರ್ಘ್ಯ ರತ್ನಗಳನ್ನು ಹೆಕ್ಕಿ ಅವರುಗಳ ಜೀವನಗಾಥೆಯನ್ನು ಕಟ್ಟಿಕೊಡುವಲ್ಲಿ ತೊಡಗಿದ್ದರು. ನಿರ್ಲಕ್ಷಿತ ಸಮುದಾಯದ ದೇವದಾಸಿ ಮಹಿಳೆಯರ ಬಗ್ಗೆ ಅಭ್ಯಸಿಸಿ ಅವರ ತ್ಯಾಗದ ಬದುಕು ಮತ್ತು ಸಾಮಾಜಿಕ ಕೊಡುಗೆಗಳ ದಾಖಲೆಯನ್ನು ಸಂಕಥನವಾಗಿಸಿ ಓದುಗರನ್ನು ಭಾವಾವೇಶಕ್ಕೆ ಒಳಗಾಗಿಸಿ ಆ ಅನರ್ಘ್ಯ ರತ್ನಗಳ ಕುರಿತು ಒಂದು ದೈವೀ ಅನುಭೂತಿಯನ್ನು ಮೂಡಿಸಿರುವರು. ಈ ನಿಟ್ಟಿನಿಂದ ಶರಣ ಮಲೆಯೂರು ಗುರುಸ್ವಾಮಿಗಳು ಶರಣ ಸಂಸ್ಕೃತಿಯ ಉನ್ನತ ಪದವಿಯಾದ ಗಣ ಪದವಿಯನ್ನೇ ಪಡೆದರು ಎಂದು ನಿಸ್ಸಂಶಯವಾಗಿ ಹೇಳಬಹುದು. ಅದು ಹೇಗೆಂದರೆ, ಪಂದ್ಯವೊಂದರಲ್ಲಿ ಜಯಿಸಲು ಷಣ್ಮುಖನು ಭೂಮಂಡಲದ ಸುತ್ತ ಸುತ್ತು ಹಾಕಲು ಹೋದಾಗ ಗಣಪತಿಯು ಹೇಗೆ ತನ್ನ ಎದುರೇ ಇದ್ದ ತನ್ನ ಮಾತಾಪಿತರ ಸುತ್ತ ಪ್ರದಕ್ಷಿಣೆ ಹಾಕಿ ಭೂಮಂಡಲದ ಸುತ್ತ ಪ್ರದಕ್ಷಿಣೆ ಬಂದೆನೆಂದನೋ ಹಾಗೆ ತಮ್ಮ ಸುತ್ತಮುತ್ತಲ ಸಾಧಕರ ಕುರಿತು ಬರೆದು ಮಲೆಯೂರರು ಆ ಗಣಪತಿಯಂತೆಯೇ ಗಣಂಗಳಾದರು. ಅವರ ಸಮಕಾಲೀನರು ಇನ್ನೂ ಭೂಮಂಡಲದ ಸುತ್ತ ಗಿರಕಿ ಹೊಡೆಯುತ್ತಲೇ ಇದ್ದಾರೆ! ಈ ಹಿನ್ನೆಲೆಯಿಂದ ಮಲೆಯೂರರು ಅಪ್ಪಟ "ಮಣ್ಣಿನ ಮಗ" ಸಹ ಹೌದು.


ಈ ಸಂಕಥನಗಳ ನಿಟ್ಟಿನಲ್ಲಿ ದೇವದಾಸಿ ಮಹಿಳೆ ಬೆಂಗಳೂರು ನಾಗರತ್ನಮ್ಮನವರ ಜೀವನಗಾಥೆಯ "ಕಪಿಲೆ ಹರಿದಳು ಕಡಲಿಗೆ", ಅಪ್ರತಿಮ ನಾಟಕಕಾರ ಸಂಸರ ಕುರಿತಾದ "ಸಂಸ" ಮತ್ತು ಅವರ ಇತ್ತೀಚಿನ "ಬಂಗಾರದೊಡ್ಡಿ!" ಕೃತಿಗಳು ಉಲ್ಲೇಖಾರ್ಹ.


ಇನ್ನು ಓರ್ವ ಕಥೆಗಾರರಾಗಿ ಮಲೆಯೂರು ಗುರುಸ್ವಾಮಿಗಳು ಆಯಾಯ ಕೃತಿಗಳ ಕಥಾಹಂದರದಲ್ಲಿ ಓದುಗರನ್ನು ಕಥನಗಳ ಕಾಲಘಟ್ಟಕ್ಕೆ ಮಂತ್ರಸದೃಶರಾಗಿ ಕರೆದೊಯ್ದುಬಿಡುತ್ತಾರೆ. ಅಂದಿನ ಜನಜೀವನ, ಜೀವನಶೈಲಿಗೆ ಓದುಗರನ್ನೊಳಗಾಗಿಸುತ್ತ ಕಥಾನಕವನ್ನು ಓದುಗರೂ ಒಂದು ಪಾತ್ರವಾಗಿ ನೋಡುತ್ತಿರುವಂತೆ ಭಾಸವಾಗುವಂತಹ ಕಥಾಚಿತ್ರವನ್ನು ಬಿಡಿಸುವಲ್ಲಿ ಗುರುಸ್ವಾಮಿಯವರ ಕೌಶಲ್ಯ ಎದ್ದು ಕಾಣುತ್ತದೆ. ತಮ್ಮ ಕೃತಿಗಳಾದ್ಯಂತ ಅಂದಿನ ಕಾಲಘಟ್ಟದ ಸಮಾಜ, ಜಾತಿ ಪದ್ಧತಿ, ನ್ಯೂನತೆ, ವ್ಯವಸ್ಥೆಗಳನ್ನು ಕಟ್ಟಿಕೊಡುವುದಲ್ಲದೆ ಆಯಾಯ ಊರುಗಳ ಬಡಾವಣೆಗಳನ್ನು, ಬೀದಿಗಳನ್ನು, ದೇವಸ್ಥಾನಗಳನ್ನು, ಮಠಗಳನ್ನು, ಉತ್ಸವಗಳನ್ನು, ಕಟ್ಟಡಗಳನ್ನು, ಅಡುಗೆಗಳನ್ನು, ನಡಾವಳಿಗಳನ್ನು ಸಾಂದರ್ಭಿಕವಾಗಿ ವರ್ಣಿಸುತ್ತ ಓದುಗನನ್ನು ಅಕ್ಷರಶಃ ಕಥೆಯೊಳಗೆ ಲೀನವಾಗಿಸಿ ಭಾವಾವೇಶಕ್ಕೊಳಪಡಿಸುತ್ತಾರೆ. ಇಂತಹ ಅನುಭೂತಿಯ ಸೃಷ್ಟಿ ಮಲೆಯೂರರ ವಿಶೇಷ. ಓರ್ವ ಕಥೆಗಾರರಾಗಿ, ಅದರಲ್ಲೂ ಜೀವನಗಾಥೆಗಳ ಕಥೆಗಾರರಾಗಿ ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಅವರು ಮೂಡಿಸಿದ್ದಾರೆ.


ಇದಿಷ್ಟು ನಾನು ಓದುಗನಾಗಿ ಕಂಡುಕೊಂಡ ಸಾಹಿತಿ ಮಲೆಯೂರು ಗುರುಸ್ವಾಮಿಯವರ ಸಾಹಿತ್ಯಿಕ ವ್ಯಕ್ತಿತ್ವ.


ಇನ್ನು ನಾನು ಇವರ ಸಂಪರ್ಕಕ್ಕೆ ಬಂದ ನಂತರ ವೈಯಕ್ತಿಕವಾಗಿ ಕಂಡುಕೊಂಡ ಮಲೆಯೂರು ಗುರುಸ್ವಾಮಿಯವರದು ಮೇರು ವ್ಯಕ್ತಿತ್ವ. ಅತ್ಯಂತ ಸ್ನೇಹಶೀಲ, ತಮಾಷೆ, ವಿಡಂಬನೆ, ಸರ್ವ ಸಮಾನತೆಯ ಹೃದಯ ವೈಶಾಲ್ಯದ ಮೂರ್ತರೂಪ. ತಮ್ಮ ಕಾದಂಬರಿಗಳ ಕಾಲಘಟ್ಟಕ್ಕೆ ಓದುಗರನ್ನು ಕೊಂಡೊಯ್ಯುವಂತೆ ಗುರುಸ್ವಾಮಿಯವರು ಎಲ್ಲಾ ವಯೋಮಾನದವರ ಜೊತೆ ಆಯಾಯ ವಯೋಮಾನದವರ ವಯಸ್ಸಿಗೆ ಪ್ರವೇಶಿಸಿ ಆಪ್ತಮಿತ್ರರಂತೆ ಸ್ನೇಹ ತೋರುತ್ತಿದ್ದರು. ಹಾಗಾಗಿ ಅವರು ಮಕ್ಕಳಿಂದ ಹಿಡಿದು ಪ್ರೌಢ ಹಿರಿಯರತನಕ ಸ್ನೇಹ ವಲಯವನ್ನು ಸಂಪಾದಿಸಿದ್ದರು.


ನನ್ನ ಕೃತಿಗಳನ್ನು ಓದಿ ಸಾಕಷ್ಟು ಪ್ರೋತ್ಸಾಹ ತುಂಬಿ ನಿರ್ಭಿಡೆಯಿಂದ ಬರೆಯಲು ನನ್ನನ್ನು ಹುರಿದುಂಬಿಸುತ್ತಿದ್ದರು. ಆದರೂ ನಾನು, "ಸರ್, ನಾನೊಬ್ಬ ತರಲೆ, ಕೀಟಲೆ, ತಮಾಷೆಯ ಪ್ರವೃತ್ತಿಯ ವ್ಯಕ್ತಿ. ಬರಹದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿದ್ದೇನೆ" ಎಂದು ಉಡಾಫೆ ತೋರುತ್ತಿದ್ದೆ. "ಹಹ, ಇದು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಮಾತು. ನಿಮ್ಮ ಬರಹ ವಸ್ತುನಿಷ್ಠವೂ ಸತ್ಯನಿಷ್ಠವೂ ಆಗಿದೆ" ಎಂದು ಹುರಿದುಂಬಿಸುತ್ತಿದ್ದರು. ಇದು ನನ್ನನ್ನಷ್ಟೇ ಅಲ್ಲದೆ ಅವರ ಸಂಪರ್ಕಕ್ಕೆ ಬಂದ ಎಲ್ಲಾ ಬರಹಗಾರರ ಕುರಿತಾಗಿ ಅವರು ಪ್ರೋತ್ಸಾಹಿಸುವ ಪರಿಯಾಗಿತ್ತು. ಅವರ ಈ ಸದ್ಗುಣವನ್ನು ಅವರ ಶಿಷ್ಯರ ಮಾತುಗಳಲ್ಲಿ ಕೇಳಿದಾಗಲೆಲ್ಲ ನನಗೆ ಸದಾ ನೆನಪಾಗುತ್ತಿದ್ದದ್ದು ಸಿದ್ಧರಾಮೇಶ್ವರನ ಈ ವಚನ:


ಆ ಅಕ್ಷರವನು ಆರೈದು ತೋರಿರಿ

ಓರಂತೆ ಎನ್ನ ಸದುಹೃದಯನೆನಿಸಿ

ನಾದ ಕಳೆಗಳನೆನ್ನ ಆಕರದೊಳಗಿಟ್ಟು

ಅಭೇದ್ಯ ಪರಮಾನಂದ ಸತ್ಯರೂಪ ನಿತ್ಯಾನಂದ

ಶ್ರೀ ಗುರು ಚೆನ್ನಬಸವಣ್ಣನುನ್ನತವನಾರು ಬಲ್ಲರು ಹೇಳಾ,

ಕಪಿಲಸಿದ್ಧಮಲ್ಲಿಕಾರ್ಜುನ.


ಹೀಗಿರುವಾಗ ಒಮ್ಮೆ ನನ್ನಂತಹ ಪೋಲಿಪುಂಡ, ಕೀಟಲೆ, ಅತೀ ವಿಡಂಬನೆಯ ಕಾಲೆಳೆಯುವವನಿಗೆ ಫೋನ್ ಮಾಡಿ, "ಬಂಗಾರದೊಡ್ಡಿ ಕಾದಂಬರಿಯ ಕರಡು ಕಳಿಸುತ್ತಿದ್ದೇನೆ. ಮುನ್ನುಡಿ ಬರೆದು ಕೊಡಬೇಕು" ಎಂದರು.


ಆಗ ನಾನು, "ಸರ್, ಕಾಲೆಳೆಯುವುದು ನನ್ನ ಕೆಲಸ. ಇದೇನು ನೀವೇ ನನ್ನ ಕೆಡುವುತ್ತಿದ್ದೀರಿ! ತಮಾಷೆ ತಾನೇ!" ಎನ್ನುತ್ತ ಹಲವಾರು ಶೈಕ್ಷಣಿಕ ವಲಯದ ಖ್ಯಾತನಾಮರನ್ನು ಹೆಸರಿಸಿ "ಅವರನ್ನು ಕೇಳೋಣ ಸರ್. ನಾನೇ ಕೇಳಿ ಬರೆಯಲು ಒಪ್ಪಿಸುವೆ" ಎಂದೆ.


ಅದಕ್ಕೆ ಅವರು, "ರವಿ, ನಿಮ್ಮ ಕೈಯಲ್ಲಿ ಆಗುತ್ತದೆ. ಬರೀರಿ" ಎಂದು ಫೋನಿಟ್ಟರು. 


ನಮ್ಮ ಪ್ರಕಾಶಕರಾದ ಸಂವಹನ ಲೋಕಪ್ಪನವರು ಸಹ ತಕ್ಷಣಕ್ಕೆ ಕರಡನ್ನು ಇಮೇಲ್ ಕಳಿಸಿ ಮುನ್ನುಡಿಗೆ ಮುನ್ನುಡಿ ಹಾಡಿಯೇಬಿಟ್ಟರು.


ಹೀಗೆ ಗುರುಗಳ ನಿಷ್ಕಲ್ಮಶ ಪ್ರೀತಿ, ಪ್ರೋತ್ಸಾಹ ಮತ್ತು ಜವಾಬ್ದಾರಿಯ ಹಿನ್ನೆಲೆಯಲ್ಲಿ "ಬಂಗಾರದೊಡ್ಡಿ" ಕೃತಿಗೆ ಮುನ್ನುಡಿ ಬರೆದು ಹೂವಿನೊಂದಿಗೆ ನಾರೂ ದೇವರ ಮುಡಿ ಏರಿದಂತೆ ನಾನೂ ಗುರುಗಳ ಕೃತಿಯೊಂದರಲ್ಲಿ ದಾಖಲಾದೆ. ನನ್ನ ಮುನ್ನುಡಿಯನ್ನು ಮೆಚ್ಚಿ ಹಲವರು ಮೆಚ್ಚುಗೆ ಸೂಚಿಸಿದಾಗ ಅತ್ಯಂತ ಸಂಪ್ರೀತರಾಗಿ ಫೋನ್ ಮಾಡಿ, "ನಿಮ್ಮ ಕೈಯಲ್ಲಿ ಆಗುತ್ತದೆ ಎಂದಿದ್ದೆನಲ್ಲವೇ! ನೋಡಿ, ಮುನ್ನುಡಿಯನ್ನು ಬಹಳ ಜನರು ಮೆಚ್ಚಿಕೊಂಡಿದ್ದಾರೆ" ಎಂದು ಖುಷಿಯನ್ನು ಹಂಚಿಕೊಂಡಿದ್ದರು. ಇದು ಮಲೆಯೂರರು ಕಿರಿಯರಿಗೆ ಅವಕಾಶ ಕೊಟ್ಟು ಪ್ರೋತ್ಸಾಹಿಸುವ ಒಂದು ಉದಾಹರಣೆಯಷ್ಟೆ. 


ನಂತರ ನಿರಂತರ ಸಂಪರ್ಕದಲ್ಲಿದ್ದರೂ ಅವರು ಎಂದೂ ತಮ್ಮ ದೇಹಸ್ಥಿತಿಯ ಕುರಿತಾಗಿ ನನ್ನೊಂದಿಗೆ ಹೇಳಿರಲಿಲ್ಲ. ನನ್ನ "ಅರಿದಡೆ ಆರದು ಮರೆದೊಡೆ ಮೂರದು" ಕೃತಿಯ ಕುರಿತು ಆಗಾಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ. ಆಗಲೂ ಅವರು ವಿಷಯದ ಕುರಿತು ಮಾತನಾಡುತಿದ್ದರೇ ಹೊರತು ತಮ್ಮ ವೈಯಕ್ತಿಕ ದೈಹಿಕ ಸಮಸ್ಯೆಯ ಬಗ್ಗೆಯಲ್ಲ. ನನ್ನ ಕೃತಿ "ಅರಿದಡೆ ಆರದು ಮರೆದೊಡೆ ಮೂರದು" ಬಿಡುಗಡೆಯ ಕೆಲವೇ ದಿನಗಳು ಮುಂಚೆ ಎಲ್ಲವನ್ನೂ ತೊರೆದು ಗಣಪದವಿಗೇರಿದರು. ತಮ್ಮ ದೇಹಸ್ಥಿತಿಯ ಬಗ್ಗೆ ಏನೊಂದೂ ಹೇಳದೆ ಗುರುವಾಗಿ ಗುರಿಯಲ್ಲಿ ನನ್ನನ್ನು ನೆಲೆಗೊಳಿಸಿ ನಿಜದ ಗಣಪದವಿಗೇರಿದರು. ಸಾಂದರ್ಭಿಕವಾಗಿ ಸಿದ್ಧರಾಮೇಶ್ವರನ ಮತ್ತೊಂದು ವಚನ ಉಲ್ಲೇಖಾರ್ಹ:


ತನುವೆಂಬ ಹೇಳಿಗೆಗೆ ಮನಸರ್ಪನಾವರಿಸಿ,

ಇನಿದು ಬಂದಡೆ ಅದಕ್ಕಿಂಬುಗೊಡದೆ,

ಇರುತಿರ್ಪ ಸರ್ಪವನು ತೆಗೆದು

ಶಿವಲಿಂಗವನು ನೆಲೆಗೊಳಿಸಿದ ಶ್ರೀ ಗುರುವೆ ಶರಣು ಶರಣೆಂಬ,

ವಾಕ್ಯಂಗಳ ಆಕಾರ ಚತುಷ್ಟಯಮಾನಂದದದಲ್ಲಿರಿಸಿದ

ಏಕೋ ರುದ್ರ ಶಿಷ್ಟ ಕಪಿಲಸಿದ್ಧಮಲ್ಲಿಕಾರ್ಜುನ.


ನನ್ನ ಕೃತಿಗಳಲ್ಲಿ ಅವರ ಪ್ರೀತಿಯ ಪ್ರೋತ್ಸಾಹ ಪ್ರಭಾವ ಗಾಢವಾಗಿದೆ. ಅವರ ನೆನಪು ನಿರಂತರ.