ಓದು, ಬರಹ ಮತ್ತು ಪ್ರಕಾಶನ

 ನಾನೊಬ್ಬ ಕೇವಲ ಓದುಗನಾಗಿದ್ದೆ. ಆದರೆ ಮಾಧ್ಯಮಗಳಲ್ಲಿನ ಅಂಕಣಗಳು ಕ್ರಿ. ಶ. 2000ದಿಂದೀಚೆಗೆ ಯಾವಾಗ ಹಾದಿ ತಪ್ಪಲಾರಂಭಿಸಿದವೋ ಆಗ ಆಗುಹೋಗುಗಳ ಕುರಿತು ನನ್ನ ಅನಿಸಿಕೆಗಳನ್ನು ಬರೆದು ಕನ್ನಡದ ಪ್ರಪ್ರಥಮ ಪೋರ್ಟಲ್ಲಿಗೆ ಕಳಿಸುತ್ತಿದ್ದೆ. ಅವರು ಅವುಗಳನ್ನು ಪ್ರಕಟಿಸುತ್ತಿದ್ದರು. ಕನ್ನಡದ ಯಾವುದೇ ಮುದ್ರಿತ ಪತ್ರಿಕೆಗಳಿಗೆ ಆಗೆಲ್ಲಾ ಈಮೇಲ್ ವಿಳಾಸವಿರದಿದ್ದ ಕಾರಣ ಪೋರ್ಟಲ್ ನನ್ನ ಸಹಜ ಆಯ್ಕೆಯಾಗಿತ್ತು. 

2004-05 ರಲ್ಲಿ ಕರ್ನಾಟಕದ ಪ್ರಚಲಿತ ವಿದ್ಯಮಾನಗಳಲ್ಲದೆ ನನ್ನ ಚೀನಾ ಪ್ರವಾಸ, ಹುಯೆನ್ ತ್ಸಾಂಗ್, ಅಗಣಿತ ಅಲೆಮಾರಿಯ ಕಥಾನಾಯಕ ಲೀ ಬಾಲ್ಯದ ಕತೆ, ಫ್ರ್ಯಾಂಕ್, ಲೀ, ಮತ್ತು ನಾನು ಸೇರಿ ಮಾಡಿದ ಭಾರತ ಪ್ರವಾಸ,  ಎಲ್ಲವೂ ಬಿಡಿ ಬಿಡಿ ಲೇಖನಗಳಾಗಿ ಪೋರ್ಟಲ್ಲಿನಲ್ಲಿ ಪ್ರಕಟಗೊಂಡಿದ್ದವು. ಅವುಗಳನ್ನು ಮುದ್ರಿಸಿ ಪ್ರಕಟಿಸಿ ಎಂದು ಕೆಲವರು ಸಲಹೆ ನೀಡಿದ್ದರೂ ನನಗೆ ಪುಸ್ತಕ, ಪ್ರಕಾಶನಗಳ ಎಳ್ಳಷ್ಟೂ ಪರಿಚಯವಿರದ ಕಾರಣ ಮತ್ತು ನನ್ನ ಬರಹಗಳು ಮುದ್ರಿಸಿ ಓದಿಸಬೇಕಾದಂತಹವು ಎಂದು ನನಗೆ ಅನ್ನಿಸದ ಕಾರಣ ಸುಮ್ಮನಿದ್ದೆ. 

ಮೇಲಾಗಿ ಮಾವೋ ಕಾಲದ ಎಲ್ಲಾ ಚೀನಿಯರ ಕತೆಗಳೂ ಲೀ ಕತೆಯ ತದ್ರೂಪುಗಳಾಗಿದ್ದವು. ಅವರೆಲ್ಲರ ಅಪ್ಪ, ಅಮ್ಮ, ಅಜ್ಜ, ಅಜ್ಜಿಯರನ್ನೆಲ್ಲ ಮಾವೋ ಆಡಳಿತ ಅಚ್ಚಿನಲ್ಲಿ ಹಾಕಿ ತದ್ರೂಪಿಗಳಾಗಿಸಿಬಿಟ್ಟಿತ್ತು. ಹಾಗಾಗಿ ನನ್ನೆಲ್ಲಾ ಓರಗೆಯ ಚೀನೀ ಮಿತ್ರರ ಬಾಲ್ಯ ಹದಿಹರೆಯದ ಜೀವನ ರಾಷ್ಟೀಕರಣಗೊಂಡು ಏಕರೂಪ ಪಡೆದಿದ್ದುದರಿಂದ ಅದು ಪ್ರಕಟಿಸಿ ಹೇಳುವಷ್ಟು ಪ್ರಮುಖವೆನಿಸಿರಲಿಲ್ಲ.

ಅದಲ್ಲದ ನನ್ನ ವೈಯಕ್ತಿಕ ಮಾನದಂಡದ ಪ್ರಕಾರ ನಾನೊಬ್ಬ ಬರಹಗಾರ ಎಂದು ನನಗೆ ಅಂದೂ ಅನ್ನಿಸಿರಲಿಲ್ಲ, ಈಗಲೂ ಎನಿಸಿಲ್ಲ.

ಹೀಗಿದ್ದಾಗ ನನ್ನ ಬರಹಗಳನ್ನು ಪ್ರಕಟಿಸುತ್ತಿದ್ದ ಪೋರ್ಟಲ್ ನಿಂತು ಹೋದ ಕಾರಣ ಅಳಿದುಳಿದ ನನ್ನ ಬರಹಗಳನ್ನು ನನ್ನದೇ ಒಂದು ಬ್ಲಾಗ್ ಮಾಡಿ ಅಲ್ಲಿ ಬಿದ್ದಿರಲಿ ಎಂದು ಹಾಕಿ ನಾನು ಕೂಡ ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ.

ಹಲವಾರು ವರ್ಷಗಳ ಕಾಲ ಏನೂ ಬರೆಯದಿದ್ದ ನನಗೆ ಮುಂದೆ ಸಮಾಜಮುಖಿ ಮಾಸಿಕ ಆರಂಭಗೊಂಡು ಬರೆಯಲೊಂದು ಅವಕಾಶ ಸಿಕ್ಕು, ನನ್ನ ಆರ್ಕೈವಿನಲ್ಲಿದ್ದ ಹುಯೆನ್ ತ್ಸಾಂಗ್ ಮಹಾಪಯಣ ಪ್ರಕಟಗೊಂಡು ನನ್ನ ಬರವಣಿಗೆಗೆ ಮತ್ತೆ ಚಾಲನೆ ಸಿಕ್ಕಿತು. 

ಆ ಪ್ರಕಟಣೆ ಖುಷಿ ಕೊಟ್ಟು ನನ್ನ ಬರಹಗಳೂ ಪ್ರಕಟಯೋಗ್ಯವೇನೋ ಎನಿಸಿ ಮಹಾಪಯಣ ಬರೆಯುವ ಸಂದರ್ಭದಲ್ಲಿ ಭಾರತದ ಇತಿಹಾಸದ ಕುರಿತು ಸಂಶೋಧಿಸಿ ವಿಶ್ಲೇಷಿಸಿದ್ದ ನನ್ನ ನೋಟ್ಸುಗಳು ಪರಿಷ್ಕರಣೆಗೊಂಡು "ಭಾರತ ಒಂದು ಮರುಶೋಧನೆ"ಯಾಯಿತು.

ಹಾಗೆಯೇ ಬಿಡಿ ಬಿಡಿ ಲೇಖನಗಳಲ್ಲಿದ್ದ ಲೀ ಕತೆ ಮತ್ತು ನಾವು ಮೂರು ಜನ ಸ್ನೇಹಿತರು ಮಾಡಿದ್ದ ಚೀನಾ-ಭಾರತ ಪ್ರವಾಸದ ಕತೆಗಳು ಹದಿನೈದು ವರ್ಷಗಳ ನಂತರ ಕೊರೋನಾ ಕಾಲದಲ್ಲಿ ಪರಿಷ್ಕರಣೆಗೊಂಡು ಅಗಣಿತ ಅಲೆಮಾರಿಯಾಯಿತು.

ಇದೆಲ್ಲವೂ ನನಗೆ ವೈಯಕ್ತಿಕವಾಗಿ ಸಾಧ್ಯವಾದದ್ದು ಕುತೂಹಲ ಮತ್ತು ಕಂಪ್ಯೂಟರ್, ಬರಹ ಫಾಂಟ್, ಬ್ಲಾಗ್, ಈಮೇಲ್, ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್ ಮುಂತಾದ ತಂತ್ರಜ್ಞಾನದ ಸಹಾಯದಿಂದ ಮಾತ್ರ! ಈ ಕುತೂಹಲ ಮತ್ತು ತಂತ್ರಜ್ಞಾನದ ಸಹಾಯವಿರದಿದ್ದರೆ ಖಂಡಿತ ನಾನು ಅರಿತುಕೊಂಡ ವಿಷಯಗಳನ್ನು ಕೈಬರಹದಲ್ಲಿ ಬರೆಯುತ್ತಿರಲಿಲ್ಲ.

ಅದೇ ರೀತಿ ಕೊರೋನಾ ಕಾಲದಲ್ಲಿ ಗೂಗಲ್ ನೋಟ್ಸಿನಲ್ಲಿ ಬರೆದ ನನ್ನ ಗತ ನೆನಪುಗಳು ಸಹ ಪರಿಷ್ಕೃತಗೊಂಡು "ರ ಠ ಈ ಕ" ಆಗುತ್ತಿದೆ, ಮತ್ತದೇ ಸಂವಹನ ಪ್ರಕಾಶನದಿಂದ ಬರಲಿದೆ. 

ಒಟ್ಟಿನಲ್ಲಿ ತಂತ್ರಜ್ಞಾನ ನಾನು ಬರೆಯಲು ಹೀಗೆ ಸಹಕಾರಿಯಾಗಿದೆ. ನಿಮಗೆ?

ಪುಸ್ತಕ ಪ್ರಕಾಶನ ಲೈಬ್ರರಿ ಪ್ರಹಸನ

 ಸರ್ಕಾರಿ ಗ್ರಂಥಾಲಯಕ್ಕೆ ರದ್ದಿ ತುಂಬುವ ಪ್ರಕಾಶನಗಳ ಬಗ್ಗೆ ಈಗ ಸುದ್ದಿಗಳಾಗುತ್ತಿವೆ. ಆ ಹಿನ್ನೆಲೆಯಲ್ಲಿ ನನಗನಿಸಿದ್ದು ಇಷ್ಟು. 

ಕರ್ನಾಟಕದ 226 ತಾಲ್ಲೂಕುಗಳಲ್ಲಿರುವ ಸಾಹಿತ್ಯ ಪರಿಷತ್ತುಗಳ ಕನಿಷ್ಠ ಇಪ್ಪತ್ತು ಜನ ಒಂದೊಂದು ಪ್ರತಿ ಖರೀದಿಸಿದರೂ ಒಟ್ಟು 4520 ಪ್ರತಿಗಳು ಮಾರಾಟವಾಗುತ್ತವೆ. ಮತ್ತು ಆಯಾಯ ತಾಲ್ಲೂಕು ಪಟ್ಟಣಗಳಲ್ಲಿರುವ ಪುಸ್ತಕ ಮಾರುವ ಒಂದೊಂದು ಅಂಗಡಿಗಳಲ್ಲಿ ಐದು ಪ್ರತಿ ಮಾರಾಟ ಮಾಡಿಸಿದರೂ ಮಾರಾಟದ ಸಂಖ್ಯೆಯನ್ನು ಹತ್ತು ಸಾವಿರಕ್ಕೆ ತರಬಹುದು. 

ಆದರೆ ಪುಸ್ತಕವೆಂದರೆ ಅದು ಪ್ರಕಟಯೋಗ್ಯವಾಗಿರಬೇಕು. ಅದನ್ನು ನಿರ್ಧರಿಸಲು ಸಾಕಷ್ಟು ಚಿಂತಕರ ಚಾವಡಿಯಿದ್ದು ಆ ಚಾವಡಿ ಓದಿ ಪುರಸ್ಕರಿಸಿದ ಪುಸ್ತಕಗಳನ್ನು ಮಾತ್ರ ಪ್ರಕಟಿಸುವ ಯೋಗ್ಯ ಪ್ರಕಾಶನ ಸಂಸ್ಥೆಗಳಿರಬೇಕು. ಹಾಗೆಯೇ ಮೇಲ್ಕಾಣಿಸಿದಂತೆ ಮಾರಾಟ ಮಾಡುವ ವ್ಯಾಪಾರೀ ದೃಷ್ಟಿಯನ್ನು ಕೃತಿ ಪುರಸ್ಕರಿಸುವಷ್ಟು ಮಾರುಕಟ್ಟೆ ಯೋಗ್ಯವೂ ಆಗಿರಬೇಕು. 

ಆದರೆ ಅಂತಹ ಪ್ರಕಟಣೆ ಮತ್ತು ವ್ಯಾಪಾರೀ ದೃಷ್ಟಿಯ ಛಲವಂತ ಯೋಗ್ಯ ಪ್ರಕಾಶನ ಸಂಸ್ಥೆಗಳೆಷ್ಟಿವೆ?!?

ಲೈಬ್ರರಿ ಖರೀದಿಸುವುದೆಂದು ಬೇಕಾಬಿಟ್ಟಿ ಪುಸ್ತಕಗಳನ್ನು ಪ್ರಕಟಿಸಲಾಗುವುದೇ? ಇನ್ನೂರು, ಮುನ್ನೂರು ಪ್ರತಿಗಳನ್ನು ಹಾಕಿಸುವ ಲೇಖಕರುಗಳು ಬ್ಲಾಗಿನಲ್ಲಿ ಕೆತ್ತಿಕೊಂಡಿರುವುದನ್ನು ಬಿಟ್ಟು ಈ ಲೈಬ್ರರಿಗಳನ್ನು ನೆಚ್ಚಿಕೊಂಡು, ಹಣ ಹೂಡಿ "ಸಾಹಿತಿ" ಎನ್ನಿಸಿಕೊಳ್ಳುವ ತೆವಲಿಗಾದರೂ ಏಕೆ ಮರುಳಾಗಿದ್ದಾರೋ!

ಭ್ರಷ್ಟರು ಕೇವಲ ಇಲಾಖೆಯಲ್ಲಿಲ್ಲ, ಸಾಹಿತಿ ಎನ್ನಿಸಿಕೊಳ್ಳುವ ಭರದಲ್ಲಿ ಬಂಡವಾಳ ಹೂಡಿ ಭ್ರಷ್ಟರನ್ನು ಮಾಡುವ "ಸಾಹಿತಿ"ಗಳೂ ಅವರಿಗಿಂತ ಹೆಚ್ಛೇ ಇದ್ದಾರಂತೆ!

ಹಾಗಾಗಿಯೇ ಇಂದು ಕನ್ನಡದಲ್ಲಿ ಕೇವಲ ಒಂದು ಸಾವಿರ ಪ್ರತಿ ಪುಸ್ತಕ ಮಾರಾಟವಾದರೆ ಅದೇ ದಾಖಲೆಯಂತೆ! 

ನರಕಕ್ಕಿಳಿಸಿ, ನಾಲಿಗೆ ಸೀಳಿಸಿ, ಬಾಯಿ ಹೊಲೆಸಿ ಹಾಕಿದರೂ ಮೂಗಿನಲ್ ಕನ್ನಡ ಪದವಾಡ್ತೀನಿ ನನ್ನ ಮನಸಾ ನೀ ಕಾಣೆ.....ಠೇರೋ ಠೇರೋ ಭಾಯ್, ಕ್ಯಾ ಹಜಾರ್ ಕಿತಾಬ್ ಬೇಚ್ ನಹೀ ಸಕ್ತೆ ಗೀತ್ ಲಿಕ್ ಲಿಕ್ಕೆ! ಕ್ಯಾ ನಾಲಿಗೆ, ಮೂಗು ಬೋಲ್ತಾ! ಮುಡ್ ಕೆ ಅಪನಿ ಪೀಚಾ ತೋ ಝರಾ ದೇಖ್ ಲೋ!

ಪ್ರೊ. ಕ್ರಾಗ್

 ಮಿತ್ರರಾದ ಮಲ್ಲಿಕಾರ್ಜುನ ತಂಕದ್  ಪರಿಚಯಿಸಿದ್ದ ಪೋಲೆಂಡ್ ದೇಶದ ಖ್ಯಾತ ಸಂಶೋಧಕ, ಯುರೋಪಿಯನ್ ರಿಸರ್ಚ್ ಕೌನ್ಸಿಲ್, ಕೋರ್ ಕಾನ್ಸೆಪ್ಟ್ಸ್ ಆಫ್ ಹಿಸ್ಟಾರಿಕಲ್ ಥಿಂಕಿಂಗ್ ನ ಪ್ರಿನ್ಸಿಪಾಲ್ ಇನ್ವೆಸ್ಟಿಗೇಟರ್ ಆಗಿರುವ ಪ್ರೊ. ಕ್ರಾಗ್ ನನ್ನ ಭಾರತ ಒಂದು ಮರುಶೋಧನೆಯ ಇಂಗ್ಲಿಷ್ ಕರಡನ್ನು ಓದಿ ಬರೆದದ್ದು.


"ನಾನು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೆಮಿನಾರ್ ಕೊಟ್ಟಾಗ ನನ್ನೊಟ್ಟಿಗೆ ಮೆಥಾಡಿಕಲ್ ಮತ್ತು ಸೈದ್ಧಾಂತಿಕ ಚೌಕಟ್ಟಿನಲ್ಲಿ ಕೆಲಸ ಮಾಡಬಲ್ಲ ಸ್ಕಾಲರ್ಸ್ ಸಿಗುವರೇ ಎಂದು ನೋಡುತ್ತಿದ್ದೆ. ಮೂಲತಃ ನಾನು ಸ್ಕಾಲರ್ಗಳೊಂದಿಗೆ ಸುದೀರ್ಘವೂ, ಕಠಿಣವೂ ಆದ ಚರ್ಚೆ/ಸಂವಾದ, ಆಕರ/ಪರಿಕರಗಳ ಪರೀಕ್ಷೆ,  ಮತ್ತವುಗಳ ದಾಖಲಾತಿ, ಚರಿತ್ರೆ ಮತ್ತು ವಾಸ್ತವಗಳ ನಡುವಿನ ಕೊಂಡಿಗಳ ಸುದೀರ್ಘ ವಿಶ್ಲೇಷಣೆ, ಟಿಪ್ಪಣಿ ಬರೆದಿಡುವುದು ಮುಂತಾದ ಒಂದು ಕಠಿಣತಮ ಆದರೆ ಕುತೂಹಲಕರವಾದ ಸಂಶೋಧನೆಗಳಿಗೆ ತಮ್ಮನ್ನು ಒಗ್ಗಿಸಿಕೊಂಡು ಜಾಗತಿಕ ಮಟ್ಟದಲ್ಲಿ ಮಂಡಿಸಬಹುದಾದ ಗುಣಮಟ್ಟದ ಸಂಶೋಧನೆಗೆ ಸಹಕಾರಿಯಾಗಬಲ್ಲ ಭಾರತೀಯ ಮೂಲದ ಪಂಡಿತರಿಗಾಗಿ ಹುಡುಕುತ್ತಿರುವೆ. 


ನಿಮ್ಮ ಭಾರತ ಒಂದು ಮರುಶೋಧನೆಯ ಇಂಗ್ಲಿಷ್ ಕರಡು ಓದಿದ ನಂತರ ನೀವು ನನ್ನೊಟ್ಟಿಗೆ ಕೆಲವು ಸಂಶೋಧನೆಗಳ ಮೇಲೆ ಕೆಲಸ ಮಾಡಲು ಅರ್ಹ ವ್ಯಕ್ತಿಯೆನಿಸಿದ್ದೀರಿ. ನಿಮ್ಮ ಭಾಷಾ ಪರಿಣಿತಿ, ಸಂಶೋಧನಾ ಆಸಕ್ತಿ, ಮತ್ತು ತಮ್ಮ ನಿತ್ಯದ ಕೆಲಸದ ನಡುವೆಯೂ ಬರೆಯಲು ತೋರುವ ಬದ್ಧತೆ ನನ್ನ ಗಮನ ಸೆಳೆದಿವೆ. ಆದರೆ ನೀವು ನಾನು ಕೊಡುವ ಪ್ರಾಜೆಕ್ಟ್ ಕುರಿತಾದ ವಿಷಯಗಳ ಪಾಂಡಿತ್ಯದ ಮಜಲುಗಳನ್ನು ಮೊದಲು ನನ್ನಿಂದ ಕಲಿಯಬೇಕೆಂದು ನಿಷ್ಠುರವಾಗಿ ಹೇಳಬಯಸುವೆ.


ಮೇಲೆ ತಿಳಿಸಿದ ವಿಷಯಗಳು, ನಾನು ಕೊಡುವ ವಿಷಯದ ಬಗ್ಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಬದ್ಧತೆ ಮತ್ತು ನನ್ನೊಟ್ಟಿಗೆ ಸಂಶೋಧನೆಯ ಹೊಸ ಹೊಳಹುಗಳನ್ನು ಕಲಿಯಬೇಕೆಂದು ತಮಗೆ ಆಸಕ್ತಿಯಿದ್ದರೆ ತಿಳಿಸಿ."


ಇದು ನನ್ನ ಕನಸಿನ ಇಷ್ಟದ ಕೆಲಸ! ಆದರೆ  ಈಗಿರುವ ನನ್ನ ಸಾಂಸಾರಿಕ ಒತ್ತಡಗಳ ನಡುವೆ ಇದು ಒಪ್ಪಿಕೊಳ್ಳಲಾಗದ ಕೆಲಸವಾದರೂ ನನ್ನಂತಹ ಶೈಕ್ಷಣಿಕೇತರ ಕುತೂಹಲಿಗೆ ಇದು ಬಹು ದೊಡ್ಡ ಗೌರವ!

ಉದಯಕಾಲ - ದೀಪಾವಳಿ ವಿಶೇಷಾಂಕ ಬರಹ, ಒಕ್ಕಲಿಂಗ

 ಒಕ್ಕಲಿಂಗ

ಜಾತಿ ರಾಜಕೀಯ ಇತ್ತೀಚೆಗೆ ದೇಶವ್ಯಾಪಿಯಾಗಿದೆ. ಇದು ಕೇವಲ ರಾಜಕೀಯ ಜಿದ್ದಾಜಿದ್ದಿಗೆ ಸೀಮಿತವಾಗಿದ್ದುದು ಇತ್ತೀಚೆಗೆ ದಿನನಿತ್ಯದ ಅಗತ್ಯ ಸಾಮಾನು ಸರಂಜಾಮುಗಳನ್ನು ಯಾ(ರ)ವ ಅಂಗಡಿಯಿಂದ ಕೊಳ್ಳಬೇಕು ಎಂಬ ನಿರ್ಧಾರಕ್ಕೂ ವ್ಯಾಪಿಸಿದೆ. ಹಾಗಾಗಿಯೇ ಅಂಗಡಿಗಳ ಹೆಸರು ಎಷ್ಟೇ ಮಾಡರ್ನ್ ಇದ್ದರೂ ಮೇಲೆ ಸಣ್ಣದಾಗಿ ಬರೆದಿರುವ "ಕಾಲಭೈರವೇಶ್ವರ ಪ್ರಸನ್ನ", "ಶಿವ", "೭೮೬", "ಚನ್ನಕೇಶವ ಪ್ರಸನ್ನ" ಮುಂತಾದವುಗಳು ಸಾಧ್ಯವಾದಷ್ಟೂ ಜಾತಿಸೂಚ್ಯವಾಗಿರುತ್ತವೆ. ಈಗ ಎಲ್ಲಾ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಸಾಮಾಜಿಕ ಪಿಡುಗುಗಳೂ ಸಹ ಅಷ್ಟೇ ತ್ವರಿತವಾಗಿ ವಾಟ್ಸಾಪ್, ಫೇಸ್ಬುಕ್, ಟ್ವಿಟ್ಟರುಗಳ ಮೂಲಕ ಹಬ್ಬುತ್ತಿವೆ. ಇಂತಹ ಒಂದು ಪ್ರಮುಖ ಶಾಶ್ವತ ಜಾತೀಯತೆಯ  ಪ್ಯಾನ್‍ಡೆಮಿಕ್ ಮುಂದೆ ಕೋವಿಡ್ ಖಂಡಿತ ಏನೇನೂ ಅಲ್ಲ!

ದೇಶವ್ಯಾಪಿಯಾಗಿರುವ ಈ ಜಾತೀಯತೆ ಅಮೇರಿಕಾ ಭಾರತೀಯರನ್ನು ಆವರಿಸಿಕೊಂಡಿದೆಯೇ?

ಉತ್ತರ: ಹೌದು ಮತ್ತು ಇಲ್ಲ!

ಭಾರತದಲ್ಲೇ ಹುಟ್ಟಿ ಬೆಳೆದು ಎಲ್ಲಾ ಪೂರ್ವಾಗ್ರಹಗಳೊಡನೆ ಅಮೆರಿಕೆಗೆ ವಲಸೆ ಬಂದಿರುವ ಮೊದಲನೇ ತಲೆಮಾರಿನ ಬಹುಪಾಲು ಅನಿವಾಸಿಗಳಲ್ಲಿ ಈ ಭಾವನೆಗಳಿರುವುದು ನಿಜ. ಹಾಗಾಗಿ ಉತ್ತರ ಹೌದು.

ಆದರೆ ಅದೇ ಎರಡನೇ ತಲೆಮಾರಿನ ಭಾರತೀಯ ಮೂಲದವರಲ್ಲಿ ಈ ಭಾವನೆಗಳು ಇಲ್ಲವೇ ಇಲ್ಲ. ಹಾಗಾಗಿ ಉತ್ತರ ಇಲ್ಲ ಕೂಡ!  ಆದರೂ ಆಗಾಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಮಾಡುವ ಅನಿವಾಸಿ ಜಾತಿ ಸಮಾವೇಶಗಳು ಒಳನಾಡಿನ ಜನರಿಗೆ ಆಸಕ್ತಿಯನ್ನು ಉಂಟು ಮಾಡುತ್ತವೆ. ಹಾಗಾಗಿ ಅನಿವಾಸಿ ಭಾರತೀಯರ ಈ ಜಾತಿ ಚಟುವಟಿಕೆಗಳು ಹೇಗಿರುತ್ತವೆ ಎಂಬುದನ್ನು ಕರ್ನಾಟಕದ ಎರಡು ಪ್ರಮುಖ ಜಾತಿಗಳ ಮತ್ತು ಅವುಗಳ ಸಂಘ ಸಮಾವೇಶಗಳ ಹಿನ್ನೆಲೆಯಲ್ಲಿ ಒಂದು ಗಮನ ಹರಿಸೋಣ.

ಕರ್ನಾಟಕದಲ್ಲಿ ನಿತ್ಯ ರಂಗೇರುವ ಈ ಎರಡು ಜಾತಿ ಜಟಾಪಟಿಗಳು, ಅಮೇರಿಕಾದಲ್ಲಿ ಕೇವಲ ಸ್ವಾತಂತ್ರ್ಯ ದಿನಾಚರಣೆಯ ರಜಾ ದಿನಗಳಲ್ಲಿ ಅಥವಾ ಬೇಸಿಗೆಯ ಒಂದು ಲಾಂಗ್ ವೀಕೆಂಡಿನಲ್ಲಿ ಜರುಗುವ ಜಾತಿಯ ಸಮಾವೇಶಗಳಲ್ಲಿ ಮಾತ್ರ ರಂಗೇರುತ್ತವೆ. ಆ ಸಮಾವೇಶಗಳು ರಜೆಯ ಮಜೆಗೆ ಹೊರಹೋಗುವ ಭಾವನೆ ತರಲೆಂಬಂತೆ ಯಾವುದಾದರೂ ಒಂದು ಪ್ರಮುಖ ನಗರಗಳಲ್ಲಿ ನಡೆಯುತ್ತವೆ. ಹಾಗಾಗಿ ಇದು ಬಹುಪಾಲು ಸಕುಟುಂಬ ಪರಿವಾರ ಸಮೇತ ಹಾಜರಾಗುವ ಒಂದು ರಜೆಯ ಮಜಾ ಗೋಷ್ಠಿ ಸಹ.

ಹಾಗೆಂದು ಕರ್ನಾಟಕದಂತೆಯೇ ಅಮೇರಿಕಾದಲ್ಲಿ ಕೂಡ ಕಡು ಬೇಸಿಗೆಯಲ್ಲಿ ಕೆಂಪು-ಬಿಳಿ ಪಟ್ಟಾಪಟ್ಟಿ ಮತ್ತು ನಕ್ಷತ್ರಗಳ ಲಂಗೋಟಿ ಹಾಕಿಸಿ ಅಖಾಡ ಸಿದ್ದ ಪಡಿಸಿ ಸವಾಲು ಸ್ಪರ್ಧೆಗಳಿರುತ್ತವೆ ಎಂದೆಲ್ಲಾ ನೀವು ಅಂದುಕೊಂಡಿದ್ದರೆ ತಪ್ಪು. ಅಂತಹ ಜಾತಿಯಾಧರಿತ ಪಕ್ಷದ ಟಿಕೆಟ್ಟು, ಮಂತ್ರಿಗಿರಿ ಚೌಕಾಶಿ ಜಾತಿ ಜಟಾಪಟಿಯೇನಿದ್ದರೂ ಮಾತೃಭೂಮಿಯಲ್ಲಿ ಮಾತ್ರ!

ಅಮೇರಿಕಾದ ನ್ಯೂಯಾರ್ಕ್, ಶಿಕಾಗೋ, ಲಾಸ್ ಏಂಜಲೀಸ್, ಹ್ಯೂಸ್ಟನ್, ಡಲ್ಲಾಸ್, ಮತ್ತಿತರೆ ಪ್ರಮುಖ ನಗರಗಳಲ್ಲಿ ಒಕ್ಕಲಿಗ ಪರಿಷತ್ ಮತ್ತು ವೀರಶೈವ ಸಮಾಜಗಳು ತಮ್ಮ ತಮ್ಮ ಸಮ್ಮೇಳನಗಳನ್ನು ಒಂದೊಂದು ವರ್ಷ ಒಂದೊಂದು ಊರಿನಲ್ಲಿ ಎಂಬಂತೆ ಏರ್ಪಡಿಸಿಕೊಳ್ಳುತ್ತವೆ. ಪ್ರತಿ ಬಾರಿ ರಜೆಗೆ ಒಂದೇ ಊರಿಗೆ ಹೋಗಲಾದೀತೆ?  ಆದರೆ ಇಂತಹ ಸಮಾವೇಶಗಳನ್ನು ಎರಡು ಜಾತಿಗಳ ಶಕ್ತಿ ಪ್ರದರ್ಶನವೆಂಬಂತೆ ಕರ್ನಾಟಕದ ಜಾತಿ ಬೆಂಬಲಿಗರು ಬಣ್ಣಿಸಿಕೊಳ್ಳುತ್ತಿದ್ದರೆ, ಅದು ತಪ್ಪಷ್ಟೇ ಅಲ್ಲದೆ ಅದೆಲ್ಲವೂ ಸುಳ್ಳು ಸಂಗತಿಗಳು!  

ಏಕೆಂದರೆ ಇಲ್ಲಿ ಒಕ್ಕಲಿಗರೂ ಮತ್ತು ವೀರಶೈವರು ಸೇರಿ ಒಕ್ಕಲಿಂಗರಾಗಿದ್ದಾರೆ.  ಈ ಎರಡೂ ಸಂಘಗಳನ್ನು ಪ್ರಮುಖವಾಗಿ ತಮ್ಮ ಮುಂದಿನ ಪೀಳಿಗೆಗೆ ತಮ್ಮ ಮೂಲ ಸಂಸ್ಕೃತಿಯ ಪರಿಚಯವಿರಲಿ ಎಂಬುದೊಂದೇ ಈ ಸಂಘಗಳ ಘನ ಉದ್ದೇಶವಲ್ಲದೇ ಮತ್ತಿನ್ಯಾವ ರಾಜಕೀಯ ಕಾರಣಗಳಲ್ಲ.

ಒಕ್ಕಲಿಗ ಪರಿಷತ್ ಕೃಷ್ಣೇಗೌಡರ ಹಾಸ್ಯ, ನವೀನ್ ಸಜ್ಜು ಅಥವಾ ಶಮಿತಾ ಮಲ್ನಾಡ್ ಅಂತಹ ಕಲಾವಿದರ ಸಂಗೀತವೇರ್ಪಡಿಸಿದರೆ, ವೀರಶೈವ ಸಮಾಜ ಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಸ್ವಾಮಿಗಳು, ಸಿರಿಗೆರೆ ಸ್ವಾಮಿಗಳ ಆಶೀರ್ವಚನಗಳೊಂದಿಗೆ ವಚನ ಗಾಯನ ಸಂಗೀತ, ವಚನಾನಂದರಿಂದ ಯೋಗ ಶಿಕ್ಷಣ,

ಅನುಭವ ಗೋಷ್ಠಿಗಳನ್ನು ಏರ್ಪಡಿಸಿರುತ್ತದೆ.

ಒಕ್ಕಲಿಗ ಸಮಾಜದ ಕಾರ್ಯಕ್ರಮಕ್ಕೆ ಕರ್ನಾಟಕದ ಹಲವಾರು ಒಕ್ಕಲಿಗ ಪ್ರಮುಖ ರಾಜಕಾರಣಿಗಳು ಬಂದರೆ, ವೀರಶೈವ ಪರಿಷತ್ತಿನ ಸಮ್ಮೇಳನಕ್ಕೆ ಕೂಡ ವೀರಶೈವ ರಾಜಕಾರಣಿಗಳು ಹಾಜರಿರುತ್ತಾರೆ. ಆದರೆ ಈ ಎರಡೂ ಸಮಾವೇಶಗಳು ರಾಜಕೀಯ ಬಣ್ಣ ಪಡೆಯದಂತೆ ಒಕ್ಕಲಿಗ ಪರಿಷತ್ತು ಮತ್ತು ವೀರಶೈವ ಸಮಾಜಗಳು ಯಾವುದೇ ಪ್ರಚಾರ ಕೊಡುವುದಿಲ್ಲ. ಅಂತಹ ಪ್ರಚಾರಗಳೇನಿದ್ದರೂ ಕರ್ನಾಟಕದಲ್ಲೇ ಆಗುವವೇ ವಿನಃ ಅಮೇರಿಕಾದಲ್ಲಿಯಲ್ಲ. ಸಾಮಾನ್ಯವಾಗಿ ಒಕ್ಕಲಿಗ ಪರಿಷತ್ ಅಮೆರಿಕ, ಸಭ್ಯ ರಾಜಕಾರಣಿ ಎನ್ನುವ ಎಸ್.ಎಮ್. ಕೃಷ್ಣ ಅವರನ್ನು ಇಷ್ಟಪಟ್ಟರೆ, ರಾಣಿ ಸತೀಶ್ ವೀರಶೈವ ಸಮಾವೇಶದ ಖಾಯಂ ಅತಿಥಿಯಾಗಿರುತ್ತಾರೆ. ಅಷ್ಟರ ಮಟ್ಟಿಗೆ ಈ ಸಮಾವೇಶಗಳು ರಾಜಕೀಯ ನೀರಸವಾಗಿ ಆದರೆ ಸಂಸ್ಕೃತಿ ಶ್ರೀಮಂತವಾಗಿರುತ್ತವೆ.

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಈ ಸ್ನೇಹಕ್ಕೆ ಯಾವುದೇ ಜಾತಿ ಅರ್ಹತೆ ಅಡ್ಡಿ ಬರುವುದಿಲ್ಲ.  ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು.  ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಅಲ್ಲಿ ರಾಜಕೀಯವೆನಿದ್ದರೂ ಈ ಸಂಘಗಳ ಪದಾಧಿಕಾರಕ್ಕೆ ಮಾತ್ರ ಸೀಮಿತ.

ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಮಾಜವನ್ನು ೧೯೭೮ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ, ಇತ್ಯಾದಿ, ಇತ್ಯಾದಿಗಳೂ ಇವೆ. ಈ ಎಲ್ಲಾ ಸಂಘಗಳ ಮೂಲ ಉದ್ದೇಶ ತಮ್ಮ ಮಕ್ಕಳಿಗೆ ಆದಷ್ಟೂ ತಮ್ಮ ಜಾತಿ ಬಳಗದಲ್ಲೇ ಪ್ರೇಮವುಂಟಾಗಿ ಮದುವೆಯಾಗುವಂತಾಗಲಿ ಎಂಬುದು. ಅದು ತಕ್ಕ ಮಟ್ಟಿಗೆ ಸಾಧ್ಯವಾಗಿದೆ ಕೂಡ. ಅಂತಹ ವೈವಾಹಿಕ ಸಂಬಂಧಗಳನ್ನು ಕುದುರಿಸಲು ವೇದಿಕೆಯನ್ನೊದಗಿಸುವುದು ಈ ಸಂಘಗಳ ಪ್ರಮುಖ ಉದ್ದೇಶ ಎಂಬುದು ನನ್ನ ವೈಯಕ್ತಿಕ ಅನಿಸಿಕೆ.

ಭಾರತೀಯಮೇರಿಕನ್ನರಲ್ಲಿ ಆದಿ ವಲಸೆಗಾರ ವರ್ಗದ ಕೆಲವರು ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ, ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ, ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ, ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುವ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ವರ್ಗವೊಂದಿದೆ. "ವೆನ್ ಯು ಆರ್ ಇನ್ ರೋಮ್, ಬಿ ಲೈಕ್ ರೋಮನ್" ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಸೃಷ್ಟಿಸಿದರು ಎನಿಸುತ್ತದೆ! ಇಂತಹ ವರ್ಗವೇ ಈ ಸಂಘಗಳ ಪ್ರಮುಖ ಪೋಷಕರು ಮತ್ತು ಸದಸ್ಯರು. ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ಧಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ.  ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ. ಅಂತಹ ಜಾತಿ ಅಸ್ಮಿತೆಯ ಮೋಹಕ್ಕೆ ಈ ಅನಿವಾಸಿ ವರ್ಗ ಹೊರತಲ್ಲ.


ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರಡು ಕೊನರಿ ಫ಼ಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ? 


ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?


ಆದರೆ ಈ ಮೊದಲನೇ ಹೊಚ್ಚ ಹೊಸ ಭಾರತೀಯ ವಲಸೆಗಾರರ ವರ್ಗ,ಏನೇ ಸಂಘ, ದತ್ತಿ, ಸಮ್ಮೇಳನಗಳೆಂದು ತಿಪ್ಪರಲಾಗ ಹಾಕಿದರೂ ಇವರ ಮಕ್ಕಳುಗಳ ಎರಡನೇ ಪೀಳಿಗೆ, ಇದನ್ನು ಗಂಭೀರವಾಗಿ ಪರಿಗಣಿಸದೇ "ಸಮ್ ಕಲ್ಚರಲ್ ಫ಼ೆಸ್ಟಿವಲ್ ಅಥವಾ ಫ಼್ಯಾನ್ಸಿ ಡ್ರೆಸ್ಸಿಂಗ್ ಎಂದು ಈ ಸಮಾವೇಶಗಳಲ್ಲಿ ಸಂತೋಷಿಸುತ್ತಾರೆಯೇ ಹೊರತು ಅದಕ್ಕಿಂತ ಹೆಚ್ಚಾಗಿ ಏನನ್ನೂ ಈ ಸಂಘಗಳಿಂದ ಅರ್ಥೈಸಿಕೊಳ್ಳಲಾರರು. ಈ ಮಕ್ಕಳು ಯಾವುದೇ ಜಾತಿಗಳ ಪರಿಚಯವಿಲ್ಲದೆ ಎಲ್ಲಾ ಭಾರತೀಯರನ್ನು ಒಂದೇ ಎಂದು ಪರಿಗಣಿಸುತ್ತಾರೆ. ಅಬ್ಬಬ್ಬಾ ಎಂದರೆ ಹಿಂದೂ/ಮುಸ್ಲಿಂ ಎಂದೋ, ಸಸ್ಯಹಾರೀ/ಮಾಂಸಹಾರೀ ಎಂದೋ, ಹೆಚ್ಚೆಂದರೆ ಉತ್ತರ ಭಾರತೀಯ/ದಕ್ಷಿಣ ಭಾರತೀಯ ಎಂಬಲ್ಲಿಗೆ ತಮ್ಮನ್ನು ಸೀಮಿತಗೊಳಿಸುತ್ತಾರೆಯೇ ವಿನಹಾ ಯಾವುದೇ ಜಾತಿಗಳಿಂದ ಗುರುತಿಸಲಾಗದಷ್ಟರ ಮಟ್ಟಿಗೆ ಮುಗ್ಧರಾಗಿದ್ದಾರೆ.


ಇನ್ನು ಭಾಷೆಯ ವಿಷಯ! ಮೊದಲನೇ ಪೀಳಿಗೆ ತಮ್ಮ ನವ್ಯ ಪೀಳಿಗೆಗೆ ತಮ್ಮ ಭಾಷೆಗಳನ್ನು ಕಲಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಅದು ಅಳಿಸಿಹೋಗುತ್ತಿದೆಯೆಂದೇ ಹೇಳಬೇಕು.  ಇದೇಕೆ ಹೀಗೆ ಎಂದು ನನಗೂ ಅರ್ಥವಾಗಿಲ್ಲ. ಆದರೂ ಭಾರತದಲ್ಲಿ ಅನೇಕರು ಬಹುಭಾಷಾ ಪಂಡಿತರಾಗಿರುತ್ತಾರೆ. ಮನೆಮಾತು ಬೇರೆಯದೇ ಭಾಷೆಯಿದ್ದರೂ ತಾವು ವಾಸಿಸುವ ಆಯಾ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಮಾತನಾಡಬಲ್ಲವರಾಗಿರುತ್ತಾರೆ. ಬೆಂಗಳೂರು ಸೇರುವವರೆಗೆ ಕೇವಲ ಕನ್ನಡದಲ್ಲಷ್ಟೇ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದ ನನಗೆ, ಮೂರೇ ವರ್ಷಗಳ ಬೆಂಗಳೂರು ಕೃಪೆಯಿಂದ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕನ್ನಡದಷ್ಟೇ ನಿರರ್ಗಳವಾಗಿ ಮಾತನಾಡುವುದು ಸಾಧ್ಯವಾಯಿತು.  ಇಲ್ಲಂತೂ ಕನ್ನಡದವರು, ತೆಲುಗರು, ತಮಿಳರು ನನ್ನ ಸ್ವಲ್ಪ ವಿಚಿತ್ರ ಎನ್ನುವಂತಹ ರವಿ ಹಂಜ್ ಹೆಸರಿನ ದೆಸೆಯಿಂದಾಗಿ ನನ್ನ ಹಿನ್ನೆಲೆಯನ್ನು ಗುರುತಿಸಲಾಗದೆ, ನನ್ನನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಸೆಟ್ಲ್ ಆಗಿರುವ "ಬಡ್ಡಿ ಲೇವಾದೇವಿಯ ಮಾರ್ವಾಡಿಯವನಿರಬಹುದು" ಎಂದುಕೊಳ್ಳುತ್ತಾರೆ.  ಇನ್ನು ಉತ್ತರ ಭಾರತೀಯರೋ ನನ್ನನ್ನು ತಮ್ಮವನೆಂದೇ ಪರಿಗಣಿಸುತ್ತಾರೆ.  ಒಟ್ಟಾರೆ ನನ್ನ ಹೆಸರಿನ ದೆಸೆಯಿಂದಂತೂ ನಾನು ಎಲ್ಲರಿಗೂ ಸಲ್ಲುವ ಭಾರತೀಯನಾಗಿದ್ದೇನೆ! ನನ್ನಂತೆಯೇ ಹೆಸರುಗಳನ್ನು ತುಂಡರಿಸಿಕೊಂಡಿರುವ ಎಲ್ಲೆಲ್ಲಿಯೂ ಸಲ್ಲುವ ಅನೇಕ ಭಾರತೀಯರಿದ್ದಾರೆ.  ಕೆಲವರಂತೂ ತಮ್ಮ ಹೆಸರನ್ನು ಆಂಗ್ಲಮಯ ಕೂಡ ಮಾಡಿಕೊಂಡು ಒಂದು ಹೆಜ್ಜೆ ಮುಂದಿದ್ದಾರೆ.


ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ.  ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ.  ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೆ, ಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೆ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೋಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.


ಎರಡನೇ ಪೀಳಿಗೆಯ ವಿಷಯ ಹೀಗಿರುವಾಗ, ಮೊದಲ ಪೀಳಿಗೆಯ ಹಲವರು ಕನ್ನಡ ಪೀಠ, ತಮಿಳು ಪೀಠ, ತೆಲುಗು ಪೀಠ....ಇನ್ನಿತರೆ ಭಾಷೆಗಳ ಪೀಠಗಳನ್ನು ಇಲ್ಲಿನ ಯಾವುದಾದರೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲು ಪ್ರಯತ್ನಪಡುತ್ತಿರುತ್ತಾರೆ.  ಮನೆಯಲ್ಲೇ ತಮ್ಮ ಮಕ್ಕಳಿಗೆ ತಮ್ಮ ಮನೆಮಾತು ಕಲಿಸಲಾಗದ ಇವರು ಪೀಠಗಳನ್ನು ಸ್ಥಾಪಿಸಿ ಅದ್ಯಾರಿಗೆ ಭಾರತೀಯ ಭಾಷೆಗಳನ್ನು ಕಲಿಸುವರೋ ನಾನರಿಯೆ!  ಬಹುಶಃ ಇದು ತಾಯ್ನಾಡಿನ ಪ್ರಶಸ್ತಿಗಳ ಹಪಹಪಿಯೋ ಅಥವಾ ಪ್ರಚಾರಪ್ರಿಯತೆಯ ತೀಟೆಯೋ ಇರಬಹುದು. ಈ ಭಾಷಾ ಪೀಠ ಸ್ಥಾಪನೆಯ ಹುಚ್ಚು ಈಗ ಜಾತಿ ದೇವಸ್ಥಾನಗಳನ್ನು ಸ್ಥಾಪಿಸುವತ್ತ ಚಿತ್ತ ನೆಟ್ಟಿಸಿದೆ. ಇದಕ್ಕೆ ಇಲ್ಲಿನವರಿಗಿಂತ ಮಾತೃಭೂಮಿ ರಾಜಕಾರಣದ ಕೈವಾಡ ಹೆಚ್ಚಿದೆ. ಇದಕ್ಕೆ ಮಾತೃಭೂಮಿಯಲ್ಲಿ ಏರಿದ ರಿಯಲ್ ಎಸ್ಟೇಟ್ ಸುಗ್ಗಿಯೇ ಪ್ರಮುಖ ಕಾರಣ. "ಬರಬಾರದವನಿಗೆ ಬಂದರೆ ರಾತ್ರಿ ಹೊತ್ತು ಕೊಡೆ ಹಿಡಿದಿದ್ದ" ಎಂಬಂತೆ ಇಲ್ಲಿ ಒಂದು ಸ್ಥಾಪನೆಯನ್ನು ಹಿಡಿದಿದ್ದಾರೆ.


ಇರಲಿ, ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರೆಲ್ಲರೂ ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ಧಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ.  ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ,ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ.


ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ದೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಗದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.


ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ?  ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ. ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ದೈಹಿಕ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದು ಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.


ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಠೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿಲ್ಲ. 


ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ಭಾರತೀಯ ಅಮೇರಿಕನ್ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿಯೂ ಕೂಡ ಇಂದು ಅಮೇರಿಕನ್ ಭಾರತೀಯರಿರುತ್ತಿದ್ದರೋ ಏನೋ!


ಹಾಗಾಗಿಯೇ ಮೊದಲನೇ ಪೀಳಿಗೆಯ ಪೋಷಕರು ಏನೇ ತಿಪ್ಪರಲಾಗ ಹಾಕಿದರೂ, ಅವರ ಮುಂದಿನ ಪೀಳಿಗೆ ಒಕ್ಕಲಿಂಗವಾಗಿ ಒಂದಾಗಿದೆ. ಈ ಪೀಳಿಗೆಯೇ ನಿಜಾರ್ಥದ ವಿಶ್ವಮಾನವ ಪ್ರಭೆಯನ್ನು ಹೊಂದಿದೆ. ಕರ್ನಾಟಕದಲ್ಲಿ ಈ ರೀತಿಯ ಜಾತಿ-ಲಿಂಗೈಕ್ಯ ಸಾಧ್ಯವೇ?


ಸಮಾಜಮುಖಿ ಲೇಖನ - ಅಮೇರಿಕನ್ನರ ನಿರೀಕ್ಷೆ, ಅಧ್ಯಕ್ಷೀಯ ಗಾಂಭೀರ್ಯ

 ೨೦೨೦ ಎನ್ನುವ ಶೂನ್ಯ ಸಂವತ್ಸರ ಕಳೆದು ೨೦೨೧ ಬರುತ್ತಲಿದೆ. ಅಗಾಧ ಅನಿಶ್ಚತತೆ, ಭೀತಿಯನ್ನು ಸೃಷ್ಟಿಸುವುದರೊಂದಿಗೆ ಅಷ್ಟೇ ರೋಚಕತೆಯನ್ನು ತಂದಿಟ್ಟು ೨೦೨೦ನ್ನು ಶೂನ್ಯ ಸಂವತ್ಸರವಾಗಿಸಿದ ಕೋವಿಡ್ ಅನ್ನು ತಹಬದಿಗೆ ತರಬಲ್ಲ(?) ಲಸಿಕೆಯನ್ನು ಫೈಝರ್ ಬಿಡುಗಡೆ ಮಾಡಿದೆ. ಕತ್ತಲಿನ ಸುರಂಗದಾಚೆ ಕಾಣುವ ಕ್ಷಿತಿಜದ ಕಿರಣದಂತಹ ಈ ಲಸಿಕೆ ಸಹಜವಾಗಿ ಬರಲಿರುವ ಹೊಸ ವರ್ಷದಲ್ಲಿ ಅಗಾಧ ನಿರೀಕ್ಷೆಗಳನ್ನು ಹುಟ್ಟಿ ಹಾಕಿದೆ. ಆ ನಿರೀಕ್ಷೆಗಳಿಗೆ ಇಂಬಾಗುವಂತೆ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ರೋಚಕ ಗೆಲುವನ್ನು ಸಾಧಿಸುವುದರೊಂದಿಗೆ ಟ್ರಂಪ್ ಹುಚ್ಚಾಡಳಿತವನ್ನು ಕೊನೆಗೊಳಿಸಿದ್ದಾರೆ.

ಆದರೆ ಜೋ ಬೈಡನ್, ಅಮೇರಿಕನ್ನರಲ್ಲಿ ಮತ್ತು ದೊಡ್ಡಣ್ಣನೆಂದು ಅಮೇರಿಕಾದೆಡೆ ಮುಖ ಮಾಡುವ ವಿಶ್ವದ ಇತರೆಡೆಯಲ್ಲಿ ನಿಜಕ್ಕೂ ಅಂತಹ ಅಗಾಧ ಪ್ರಮಾಣದ ಭರವಸೆಯನ್ನು ಹುಟ್ಟು ಹಾಕಿ ಜಯಶೀಲರಾಗಿದ್ದಾರೆಯೇ? ಏಕೆಂದರೆ ಟ್ರಂಪ್ ಹುಚ್ಚಾಡಳಿತದ ಕೊನೆಯನ್ನು ಬಯಸಿ ಜನ ಬೈಡನ್ನರಿಗೆ ಮತ ಹಾಕಿದರೆ ಹೊರತು ಅವರನ್ನು ಭರವಸೆಯ ನಾಯಕನೆಂದಲ್ಲ ಎಂದು ಸಾಕಷ್ಟು ವಿಶ್ಲೇಷಕರು ಅಭಿಪ್ರಾಯ ಮಂಡಿಸಿದ್ದಾರೆ. ಇದು ತಕ್ಕ ಮಟ್ಟಿಗೆ ಸತ್ಯ ಕೂಡ. ಟ್ರಂಪ್ ಆಡಳಿತವು ಎಂದೂ ಓಟು ಹಾಕದವರನ್ನೂ ಸಹ ಈ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಪ್ರಚೋದಿಸಿದ್ದು ಮಾತ್ರ ಸತ್ಯ.

ಈ ಗೆಲುವನ್ನು ಬೈಡನ್-ಹ್ಯಾರಿಸ್ ಸೇರಿದಂತೆ ಡೆಮಾಕ್ರೆಟಿಕ್ ಪಕ್ಷದ ಗೆಲುವು ಪುರೋಗಾಮಿ ಹೋರಾಟಗಳಿಗೆ ಸಂದ ಜಯವಾಗಿದೆ ಎನ್ನಲಾಗದು. ಏಕೆಂದರೆ ಈ ಜೋಡಿ ಅಂತಹ ನಿಶ್ಚಿತ ಗೆಲುವಿನ ಭಾರೀ ಪ್ರತಿಸ್ಪರ್ಧಿಗಳೆನಿಸಿರಲಿಲ್ಲ. ಅಮೇರಿಕಾದಲ್ಲಿನ ಎಡ-ಬಲ ಪಂಥವನ್ನು ನಾವು ನೇರವಾಗಿ  ಭಾರತದ ಎಡ-ಬಲ ಪಂಥಕ್ಕೆ ಹೋಲಿಸಲಾಗದು. ಭಾರತದ ಬಲಪಂಥದ ಮಾದರಿಯ ಒಂದು ಸೀಮಿತ ಅತ್ಯಲ್ಪ ವರ್ಗ ಅಮೇರಿಕಾದ ಬಲಪಂಥೀಯರಲ್ಲಿದ್ದರೂ ಅವರನ್ನು ಜನಾಂಗೀಯ ದ್ವೇಷಿಗಳು ಎಂದು ವರ್ಗೀಕರಿಸಲಾಗುತ್ತದೆ. ಅಂತಹ ಒಂದು ಗುಂಪಿಗೆ ಟ್ರಂಪ್ ಬಲ ತುಂಬಿ ಅವರ ಆರಾಧ್ಯ ದೈವವಾಗಿದ್ದರೇ ಹೊರತು ಇಡೀ ರಿಪಬ್ಲಿಕನ್ ಬೆಂಬಲಿಗರಿಗೆ ಟ್ರಂಪ್ ಕುರಿತು ಅಸಹನೆಯೇ ಇದ್ದಿತು. ಈ ಅಸಹನೆಗೆ ಕಾರಣ ಟ್ರಂಪ್ ಸಹ ಒಂದೂವರೆ ದಶಕದ ಹಿಂದೆ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗನೇ ಆಗಿದ್ದರಲ್ಲದೆ ರಿಪಬ್ಲಿಕನ್ನರ ವಿಶ್ವಾಸಾರ್ಹ ವ್ಯಕ್ತಿ ಎನಿಸಿರಲಿಲ್ಲ. ಆದರೆ ರಿಪಬ್ಲಿಕನ್ನರೆಲ್ಲರೂ ಪಕ್ಷ ನಿಷ್ಠರಾಗಿರುವುದರಿಂದ ಇವರ ಓಟುಗಳು ವ್ಯಕ್ತಿಗಿಂತ ಪಕ್ಷ ನಿಷ್ಠವಾಗಿ ರಿಪಬ್ಲಿಕನ್ ಪಕ್ಷಕ್ಕೆ ಬೀಳುತ್ತವೆ. ಟ್ರಂಪ್ ಮೊದಲ ಗೆಲುವು ಸಹ ಹಿಲರಿ ಓರ್ವ ಮಹಿಳೆ ಎಂದಾಗಿತ್ತೇ ಹೊರತು, ಟ್ರಂಪ್ ಸಮರ್ಥ ನಾಯಕರೆಂದಲ್ಲ. ಏನೇ ಸಮಾನತೆ ಅಮೇರಿಕಾದಲ್ಲಿದ್ದರೂ ಅದು ಇನ್ನೂ ಮಹಿಳಾ ಅಧ್ಯಕ್ಷೆಯನ್ನು ಹೊಂದುವಷ್ಟು ಬದ್ಧವೂ, ಸಿದ್ಧವೂ ಆಗಿಲ್ಲ!

ಈ ನಿಟ್ಟಿನಲ್ಲಿ ಕೊರೋನ ಕುರಿತ ಟ್ರಂಪ್ ರ ಹುಚ್ಚಾಟ ಬೈಡನ್-ಹ್ಯಾರಿಸ್ ಅವರಿಗೆ ಕೈ ಹಿಡಿದಿದೆ. ಓರ್ವ ಮಹಿಳಾ ಉಪಾಧ್ಯಕ್ಷೆಯನ್ನು ಹೊಂದುವ ಅಮೇರಿಕಾದ ನಿಲುವಿನಲ್ಲಿ ಕೊರೋನಾ ಪಾತ್ರವನ್ನು ಮರೆಯುವಂತಿಲ್ಲ. ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷೆಯಾಗಿ ಅಮೇರಿಕೆಯಲ್ಲಿ ಮಹಿಳಾ ಸಮಾನತೆಯನ್ನು ಸೃಷ್ಟಿಸುವಲ್ಲಿ ಹೊಸ ಮುನ್ನುಡಿಯನ್ನು ಈ ಚುನಾವಣೆ ಬರೆದಿದೆ.  

ಹಾಗೆಂದು ಬೈಡನ್ ಸರ್ಕಾರದಿಂದ ಅಸುರನೋರ್ವನ ಸಂಹಾರದ ನಂತರ ಆಕಾಶದಿಂದ ಹೂಮಳೆ ಸುರಿಸುವ, ಎಲ್ಲೆಲ್ಲೂ ಸುಖ-ಸಮೃದ್ಧಿಗಳನ್ನು ಮೆರೆಸುವಂತಹ ತೀವ್ರ ನಿರೀಕ್ಷೆಗಳನ್ನೇನೂ ಅಮೇರಿಕನ್ನರು ಇರಿಸಿಕೊಂಡಿಲ್ಲ. ಅಂತಹ ಆಶ್ವಾಸನೆಗಳು ಮತ್ತು ನಿರೀಕ್ಷೆಗಳೇನಿದ್ದರೂ ಭವ್ಯ ಭಾರತದಲ್ಲಿ ಮಾತ್ರ! ಕೇವಲ ಅತಿರೇಕಿ ನಕಲಿಶ್ಯಾಮನೋರ್ವನ ಬದಲು ಅಧ್ಯಕ್ಷೀಯ ಗಾಂಭೀರ್ಯದ ವ್ಯಕ್ತಿ ಆಯ್ಕೆಯಾದರೆ ಸಾಕು ಎಂಬುದು ಅಮೆರಿಕನ್ನರ ತುರ್ತಿನ ಆಶಯವಾಗಿತ್ತು. ಆದರೂ ಹೊಸ ವರ್ಷದಲ್ಲಿ ಅಧಿಕಾರ ವಹಿಸಿಕೊಳ್ಳುವ ಬೈಡನ್-ಹ್ಯಾರಿಸ್ ನಾಯಕತ್ವದಿಂದ ಅಮೇರಿಕನ್ನರು ಮತ್ತು ವಿಶ್ವದೆಲ್ಲೆಡೆಯ ಇತರೆ ಕನಿಷ್ಠ ನಿರೀಕ್ಷೆಗಳು ಏನು ಎಂಬುದನ್ನು ನೋಡೋಣ:

೧. ಅಮೇರಿಕಾದ ಅಧ್ಯಕ್ಷೀಯ ಗಾಂಭೀರ್ಯ - ಜಾಗತಿಕವಾಗಿ ಮತ್ತು ಅಂತರಿಕವಾಗಿ ಜನಾಂಗೀಯ ಹೋರಾಟ, ಜಾಗತಿಕ ತಾಪಮಾನ, ಅಂತರರಾಷ್ಟ್ರೀಯ ಸಂಬಂಧಗಳಲ್ಲೆಲ್ಲಾ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಕಟ್ಟೆ ಪುರಾಣದಂತೆ ಮಂಡಿಸಿ ನಗೆಪಾಟಲಿಗೀಡಾಗಿದ್ದ ಅಧ್ಯಕ್ಷೀಯ ಗೌರವವನ್ನು ಮರುಸ್ಥಾಪನೆಗೊಳಿಸುವುದು. ಈ ನಿಟ್ಟಿನಲ್ಲಿ ಬೈಡನ್-ಹ್ಯಾರಿಸ್ ಜೋಡಿ ಸಮರ್ಥವಾಗಿ ಅದನ್ನು ಪುನರ್ ಪ್ರತಿಷ್ಠಾಪಿಸುತ್ತಾರೆಂಬ ಸಾಮಾನ್ಯ ನಿರೀಕ್ಷೆಯಿದೆ.

೨. ಜನಾರೋಗ್ಯ ವ್ಯವಸ್ಥೆ - ಒಬಾಮಾ ಕೇರ್ ಯೋಜನೆಯಲ್ಲಿದ್ದ ಕಡ್ಡಾಯ ಆರೋಗ್ಯವಿಮೆಯನ್ನು  ರದ್ದುಗೊಳಿಸಿ ಟ್ರಂಪ್ ತರಬೇಕೆಂದುಕೊಂಡಿದ್ದ ಆರೋಗ್ಯ ವ್ಯವಸ್ಥೆ ಕಾನೂನಾಗದ ಕಾರಣ, ತ್ರಿಶಂಕು ಸ್ಥಿತಿಯಲ್ಲಿರುವ ಒಬಾಮಾ ಕೇರ್ ಅನ್ನು ಮತ್ತಷ್ಟು ಸದೃಢಗೊಳಿಸಿ ಬೈಡನ್ ಕೇರ್ ಆಗಿ ತರುವುದಾಗಿ ಬೈಡನ್ ಚುನಾವಣಾ ಆಶ್ವಾಸನೆ ನೀಡಿದ್ದರು.  ಆ ಭರವಸೆಯಂತೆ ಒಬಾಮಾ ಕೇರ್ ಯೋಜನೆಯಡಿಯಲ್ಲಿದ್ದ ಕಡ್ಡಾಯ ವಿಮೆಯನ್ನು ಮರುಜಾರಿಗೊಳಿಸುವುದು, ಪ್ರಿಸ್ಕ್ರಿಪ್ಷನ್ ಡ್ರಗ್ ಯೋಜನೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳನ್ನು ೨೦೨೧ರ ಆರಂಭದಲ್ಲಿ ಆದ್ಯತೆಯ ಮೇಲೆ ಜಾರಿಗೆ ತರುವುದು, ಮತ್ತು ಅಕ್ರಮ ವಲಸೆಗಾರರಿಗೂ ಒಬಾಮಾ ಕೇರಿನಲ್ಲಿ ಅವಕಾಶ ಮಾಡಿಕೊಡುವುದಾಗಿ ಹೇಳಿರುವ ಬೈಡನ್ ಭರವಸೆ ಈಡೇರಿಸುವುದನ್ನು ಜನ ನಿರೀಕ್ಷಿಸುತ್ತಿದ್ದಾರೆ.

೩. ಆರ್ಥಿಕ ಸುಧಾರಣೆ - ಕೊರೋನಾ ಪರ್ವದಲ್ಲುಂಟಾದ ಉದ್ಯೋಗ ನಷ್ಟ, ಮತ್ತು ಆರ್ಥಿಕ ಮುಗ್ಗಟ್ಟುಗಳನ್ನು ಸರಿಪಡಿಸುವಲ್ಲಿ ಅರ್ಥಿಕ ಪ್ಯಾಕೇಜುಗಳನ್ನು ಟ್ರಂಪ್ ಸರ್ಕಾರ ಘೋಷಿಸಿದ್ದರೂ ಅದು ಮಧ್ಯಮ ವರ್ಗದ ಸಣ್ಣ ವ್ಯಾಪಾರಿಗಳನ್ನು ತಲುಪಿಲ್ಲ. ಆ ನಿಟ್ಟಿನಲ್ಲಿ ಬೈಡನ್ ಮಧ್ಯಮ ವರ್ಗವನ್ನು ಗಮನದಲ್ಲಿರಿಸಿಕೊಂಡು ವಿಶೇಷ ಅರ್ಥಿಕ ಪ್ಯಾಕೇಜುಗಳ ಭರವಸೆ ನೀಡಿದ್ದಾರೆ. ಅವುಗಳ ಅನುಷ್ಟಾನಕ್ಕೆ ಈಗಾಗಲೇ ತಜ್ಞ ಸಮಿತಿಯನ್ನು ಬೈಡನ್ ರಚಿಸಿರುವುದರಿಂದ ಅವರು ಅಧಿಕಾರವನ್ನು ವಹಿಸಿಕೊಂಡ ತಕ್ಷಣಕ್ಕೆ ಆ ಪ್ಯಾಕೇಜುಗಳ ಘೋಷಣೆಯಾಗಬಹುದು ಎಂದು ಅಮೇರಿಕಾದ ಮಧ್ಯಮ ವರ್ಗ ನಿರೀಕ್ಷಿಸುತ್ತಿದೆ. ಇದರಿಂದ ಕೋರೋನದಿಂದ ಉಂಟಾಗಿರುವ ತಾತ್ಕಾಲಿಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಿ ಆರ್ಥಿಕತೆಯನ್ನು ಪುನಃಶ್ಚೇತನಗೊಳಿಸುವಂತಹ ಮತ್ತು ದೀರ್ಘಕಾಲಿಕ ಯೋಜನೆಗಳನ್ನು ತರಬಹುದೆಂಬ ನಿರೀಕ್ಷೆಯಿದ್ದರೂ, ತೆರಿಗೆಯನ್ನು ಹೆಚ್ಚಿಸಬಹುದೆಂಬ ಭೀತಿಯೂ ಹಲವರ ನಿರೀಕ್ಷೆಯಲ್ಲಿದೆ.

೪. ವಲಸೆ ನೀತಿ - ವಲಸೆ ನೀತಿಯಲ್ಲಿ ಕೆಲವು ಉಡಾಫ಼ೆಯ ಉಡಾಳತನವನ್ನು ಟ್ರಂಪ್ ಸರ್ಕಾರ ಮಾಡಿದ್ದರೂ ಅದು ಅಕ್ರಮ ವಲಸೆಗಾರರ ಕುರಿತಾಗಿತ್ತು. ಆದರೆ ಕ್ರಮಬದ್ಧ ವಲಸೆಯಲ್ಲಿ ಟ್ರಂಪ್ ಮಾಡಿದ ಸುಧಾರಣೆಗಳು ಮೆಚ್ಚತಕ್ಕಂತಹವು. ಅಕ್ರಮ ವಲಸೆಗಾರರ ಮೇಲಿನ ಕಟು ಮಾತುಗಳಿಂದ ಅವರ ಸಕಾರಾತ್ಮಕ ಹೆಚ್೧ಬಿ ಮುಂತಾದ ವೀಸಾ ನೀತಿಗಳೂ ತಪ್ಪೆನಿಸಿಬಿಟ್ಟಿದ್ದವು.  ಹೆಚ್೧ಬಿ ವೀಸಾ ನೀತಿಗಳಲ್ಲಿನ ಕೆಲವು ಅಂಶಗಳ ದುರುಪಯೋಗ ಪಡಿಸಿಕೊಂಡು ರಂಗೋಲಿ ಕೆಳಗೆ ನುಸುಳುತ್ತಿದ್ದ ಕಂಪೆನಿಗಳು ಅಂತಹ ಅಕ್ರಮಗಳಿಗೆ ಮುಂದಾಗದಂತೆ ಟ್ರಂಪ್ ಸರ್ಕಾರ ಮೂಗುದಾರವನ್ನು ಹಾಕಿತ್ತು. ಟ್ರಂಪ್ ಸರ್ಕಾರದ ಏಕೈಕ ಮೆಚ್ಚುವ ಅಂಶವೆಂದರೆ ಅವರ ವಲಸೆ ನೀತಿಯ ಸುಧಾರಣೆಗಳು! ಹಾಗೆಂದು ಅವರು ಭಾರೀ ಸುಧಾರಣೆಯನ್ನೇನೂ ಮಾಡದೆ ಕೇವಲ ಇದ್ದ ನೀತಿಯ ಲೋಪದೋಷಗಳನ್ನು ತಿದ್ದಿಸಿದ್ದರಷ್ಟೇ. ಆದರೆ ಈ ರೀತಿ ರಂಗೋಲಿ ಕೆಳಗೆ ನುಸುಳುವಲ್ಲಿ ಭಾರತೀಯ ಕಂಪೆನಿಗಳು ಹೆಚ್ಚು ಪರಿಣಿತರಿದ್ದುದರಿಂದ ಅವುಗಳಿಗೆ ತೀವ್ರ ಹೊಡೆತವುಂಟಾಯಿತು. ವಲಸೆ ನೀತಿಯ ಬಗ್ಗೆ ಭಾರೀ ಉದಾರತೆಯನ್ನು ಹೊಂದಿರುವ ಬೈಡನ್ ಟ್ರಂಪ್ ನೀತಿಗಳನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತವೆಂದು ಡೆಮಾಕ್ರಟಿಕ್ ಬೆಂಬಲಿಗರಲ್ಲದೇ ನನ್ನಂತಹ ಭಾರತೀಯ ಅಮೇರಿಕನ್ನರೂ ಸುಪ್ತವಾಗಿ ಬಯಸುತ್ತಾರೆ.

ಹೆಚ್೧ಬಿ ವೃತ್ತಿಪರರ ಹೆಚ್೪ ವೀಸಾ ಮೇಲಿರುವ ಪತಿ/ಪತ್ನಿಯರು ಸಹ ಕೆಲಸ ಮಾಡಬಹುದೆಂದು ಒಬಾಮಾ ತಂದಿದ್ದ  "ಉದಾರ" ನೀತಿಯ ಅನುಗ್ರಹದಿಂದ ಭಾರತದಲ್ಲಿ ಗೃಹಿಣಿಯರಾಗಿದ್ದ ಹೆಚ್೧ನ್ನಿಗರ ಪತ್ನಿಯರೂ ಸಹ ಅಮೆರಿಕೆಗೆ ಕಾಲಿಡುತ್ತಿದ್ದಂತೆಯೇ ಉದ್ಯೋಗಸ್ಥರಾಗುತ್ತಿದ್ದರು. ಇವರನ್ನು ಕಡಿಮೆ ಸಂಬಳಕ್ಕೆ ಭಾರತೀಯ ಕಂಪೆನಿಗಳು ನೇಮಿಸಿಕೊಂಡು ವಲಸೆ ವ್ಯವಸ್ಥೆಯನ್ನು ಪರಮಾವಧಿಗೆ ಶೋಷಿಸಿದ್ದರು. ಈ ಸದ್ಗೃಹಿಣಿಯರು ಮಾಡಬೇಕಾದ ಕೆಲಸವನ್ನು ಮಾಡಿಕೊಡಲು ಹೈದರಾಬಾದ್, ಬೆಂಗಳೂರು, ನೋಯ್ಡಾಗಳಲ್ಲಿ ಹಡಬೆ ಕಂಪೆನಿಗಳು ಸೃಷ್ಟಿಯಾಗಿದ್ದವು. ಸದ್ಗೃಹಿಣಿಯರು ತಮಗೆ ವಹಿಸಿದ ಕೆಲಸವನ್ನು ವಾಟ್ಸಾಪ್ ಮೂಲಕ ಈ ಹಡಬೆ ಕಂಪೆನಿಗಳಿಗೆ ಮೆಸೇಜ್, ಆಡಿಯೋ, ವಿಡಿಯೋ ಮೂಲಕ ವಿವರಿಸಿ ಪ್ರೋಗ್ರಾಂ ಬರೆಸಿಕೊಂಡು ತಮ್ಮ ಸಂಬಳದ ಒಂದಷ್ಟು ಚಿಲ್ಲರೆಯನ್ನು ಈ ಕಂಪೆನಿಗಳಿಗೆ ಕೊಡುತ್ತಿದ್ದರು. ಹಾಗಾಗಿಯೇ ಇತ್ತೀಚೆಗೆ ಭಾರತೀಯರೆಂದರೆ ಅಮೆರಿಕನ್ನರಲ್ಲಿ ಒಂದು ಬಗೆಯ ತಿರಸ್ಕಾರವುಂಟಾಗಿ ಜನಾಂಗೀಯ ದ್ವೇಷಕ್ಕೆ ಎಡೆ ಮಾಡಿಕೊಡುತ್ತಿದೆ.  

ಒಬಾಮಾರ ಒಂದು ಉದಾತ್ತ, ಉದಾರ ತಿದ್ದುಪಡಿ ಹೀಗೆ ಶೋಷಣೆಗೊಂಡಿದ್ದುದನ್ನು ಟ್ರಂಪ್ ಸರಿಪಡಿಸಿದ್ದರು. ಹಾಗಾಗಿ ಬೈಡನ್ ಯಾವುದೇ ವಲಸೆ ನೀತಿಯನ್ನು ಪರಿಗಣಿಸುವ ಮುನ್ನ ವಲಸಿಗರ ರಾಷ್ಟ್ರೀಯ ಹಿನ್ನೆಲೆ, ಅಲ್ಲಿನ ವ್ಯವಸ್ಥೆ, ಭ್ರಷ್ಟಾಚಾರಗಳನ್ನೆಲ್ಲಾ ಸಮಗ್ರವಾಗಿ ಪರಿಗಣಿಸಬೇಕು ಅಥವಾ ಟ್ರಂಪ್ ವಲಸೆ ನೀತಿಯನ್ನೇ ಮುಂದುವರಿಸಿಕೊಂಡು ಹೋಗಬೇಕು ಎಂಬುದು ಬಹುಪಾಲು ಡೆಮಾಕ್ರಟಿಕ್ ಬೆಂಬಲಿಗರೂ ಸೇರಿದಂತೆ ಅಮೆರಿಕನ್ನರ ಸುಪ್ತ ನಿರೀಕ್ಷೆಯಾಗಿದೆ.

೫. ವಿದೇಶಾಂಗ ನೀತಿ - ರಾಷ್ಟ್ರೀಯ ಸಮಸ್ಯೆಗಳಿಗೆ ಪ್ರಥಮ ಆದ್ಯತೆ ಕೊಡುವುದಾಗಿ ಬೈಡೆನ್ ಹೇಳಿದ್ದರೂ, ಟ್ರಂಪ್ ಅಧಿಕಾರದಲ್ಲಿ ಹಳಸಿದ್ದ NATO ಸಂಬಂಧವನ್ನು ಪುನರುಜ್ಜೀವನಗೊಳಿಸುವುದಾಗಿ ಹೇಳಿದ್ದಾರೆ. NATO  ಮತ್ತು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳೊಡನೆ ಅಮೆರಿಕದ ಸಂಬಂಧವನ್ನು ಬೈಡನ್ ತುರ್ತಾಗಿ ಮತ್ತೆ ಸರಿದಾರಿಗೆ ತರುತ್ತಾರೆಂದು ಈ ಒಕ್ಕೂಟಗಳು ಸಹ ಎದುರು ನೋಡುತ್ತಿವೆ. ಟ್ರಂಪ್ ಅಧಿಕಾರಾವಧಿಯಲ್ಲಿ ಇರುಸುಮುರುಸಾಗಿದ್ದ ವಾಣಿಜ್ಯ, ಡಿಜಿಟಲ್ ಪ್ರೈವಸಿ, ಚೈನಾ, ಇರಾನ್, ಟರ್ಕಿ, ಮತ್ತು NATO  ಫಂಡಿಂಗ್ ಮುಂತಾದ ತುರ್ತುಗಳನ್ನು ಬೈಡೆನ್ ೨೦೨೧ರಲ್ಲಿಯೇ ಸರಿಪಡಿಸುತ್ತಾರೆಂದು ವಿಶ್ವವೇ ಎದುರು ನೋಡುತ್ತಿದೆ.

ಟ್ರಂಪ್ ಅಧಿಕಾರಾವಧಿಯಲ್ಲಿ ವೀಸಾ ನೀತಿಯಿಂದ ಭಾರತದೊಂದಿಗಿನ ವಾಣಿಜ್ಯ ಸಂಬಂಧಕ್ಕೆ ಹಿನ್ನೆಡೆಯುಂಟಾಗಿತ್ತು. ಹಾಗಿದ್ದಾಗ್ಯೂ ಭಾರತದ ಪ್ರಧಾನಿಗಳು ’ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’ ಎಂದು ಏಕೆ ಹೇಳಿದ್ದರೋ ಬಲ್ಲವರ್ಯಾರು? 

ಕ್ಲಿಂಟನ್ ಮತ್ತು ಒಬಾಮಾ ಸರ್ಕಾರದಲ್ಲಿ ಭಾರತ-ಅಮೇರಿಕಾ ಸಂಬಂಧ ಹೇಗಿತ್ತೋ ಹಾಗೆಯೇ ಬಲಿಷ್ಠ ಇಂಡೋ-ಅಮೇರಿಕನ್ ಸಂಬಂಧ ಬೈಡನ್ ಕಾಲದಲ್ಲಿಯೂ ಮುಂದುವರಿಯಲಿದೆ ಎಂಬುದು ಸಾಮಾನ್ಯ ನಿರೀಕ್ಷೆ!

೬. ಪರಿಸರ ಸಂರಕ್ಷಣೆ - ಟ್ರಂಪ್ ಆಡಳಿತವು ಮೇ ೨೦೨೦ರೊಳಗೆ ೬೪ ಪರಿಸರ ಸಂಬಂಧೀ ನಿಯಮಗಳನ್ನು ರದ್ದು ಮಾಡಿ, ಇನ್ನೂ ೩೪ ನಿಯಮಗಳನ್ನು ರದ್ದುಗೊಳಿಸಲು ದಾಪುಗಾಲು ಹಾಕಿತ್ತು. ಅದಲ್ಲದೆ ಜಾಗತಿಕ ತಾಪಮಾನದ ಕುರಿತಾದ  ವಿಜ್ಞಾನಿಗಳ ಎಲ್ಲಾ ಎಚ್ಚರಿಕೆಗಳನ್ನು ತಿರಸ್ಕರಿಸಿ ಟ್ರಂಪ್ ಸರ್ಕಾರ "ಜಾಗತಿಕ ತಾಪಮಾನ" ಎಂಬುದು ಒಂದು ಬಹು ದೊಡ್ಡ ಹೋಕ್ಸ್ ಎಂದಿತ್ತು. ಈಗ ರದ್ದಾದ ಆ ಎಲ್ಲಾ ನಿಯಮಗಳನ್ನು ಪುನರ್ ಸ್ಥಾಪಿಸುವುದರೊಂದಿಗೆ ಜಾಗತಿಕ ತಾಪಮಾನ, ಪರಿಸರ ಸಂರಕ್ಷಣೆಯ ತುರ್ತಿಗೆ ನಿಯಮಗಳನ್ನೂ ರೂಪಿಸುವ ಜವಾಬ್ದಾರಿ ಬೈಡನ್ ಮೇಲಿದೆ.

ಕ್ಲೀನ್ ಎನರ್ಜಿ ಮತ್ತು ಪರಿಸರ ಸಂರಕ್ಷಣೆಗಾಗಿ ಮತ್ತು ೨೦೫೦ರೊಳಗೆ ಅಮೇರಿಕಾ ಸಂಪೂರ್ಣವಾಗಿ ನೆಟ್ ಝೀರೋ ಎಮಿಷನ್ ಸಾಧಿಸಲು ನಿಯಮಗಳನ್ನು ರೂಪಿಸಿ ಅದರ ಅನುಷ್ಠಾನಕ್ಕೆ ೧.೭ ಟ್ರಿಲಿಯನ್ ಡಾಲರ್ ನಿಧಿಯನ್ನು ತೆಗೆದಿಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಅದಲ್ಲದೆ ಅಧಿಕಾರ ವಹಿಸಿಕೊಂಡ ತಕ್ಷಣ ಪ್ಯಾರಿಸ್ ಒಪ್ಪಂದವನ್ನು ಎತ್ತಿಹಿಡಿಯುವುದಾಗಿಯೂ ಹೇಳಿದ್ದಾರೆ.

ಒಟ್ಟಿನಲ್ಲಿ ಟ್ರಂಪ್ ಮಾಡಿದ ಅವಘಡಗಳನ್ನು ಸರಿಪಡಿಸಿ ಟ್ರಂಪ್ ಅಧಿಕಾರಕ್ಕೂ ಮುಂಚಿನ ಯಥಾಸ್ಥಿತಿಗೆ ಪರಿಸ್ಥಿತಿಯನ್ನು ತಂದರೆ ಸಾಕೆಂಬ ಕನಿಷ್ಠ ನಿರೀಕ್ಷೆ ಬೈಡನ್-ಹ್ಯಾರಿಸ್ ಮೇಲಿದೆ.