ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

 ಆಗಸ್ಟ್ ೧೫ ೧೯೪೭ ಭೌಗೋಳಿಕವಾಗಿ ದೇಶವನ್ನು ವಿಭಜಿಸಿದರೆ, ಜನವರಿ ೨೬ ೧೯೫೦ ಮಾನಸಿಕವಾಗಿ ದೇಶವನ್ನು ವಿಭಜಿಸಿದೆ.

ಸಾಮಾಜಿಕ ನ್ಯಾಯವನ್ನು ಅನೇಕ ದೇಶಗಳು ಸಮಾನ ಸಾಮಾಜಿಕ ನ್ಯಾಯವಾಗಿ ೧೯೫೦ಕ್ಕೂ ಮುಂಚೆಯೇ ಸಾಂವಿಧಾನಿಕವಾಗಿ ಅನುಷ್ಠಾನಗೊಳಿಸಿದ್ದವು. ಆದರೆ ಭಾರತೀಯ ಸಾಮಾಜಿಕ ನ್ಯಾಯದ ಸಾಂವಿಧಾನಿಕ ಉದ್ದೇಶದಲ್ಲಿ ವ್ಯಕ್ತಿಗತ ಉದ್ದೇಶವೇ ದೇಶದ ಸ್ವಾತಂತ್ರ್ಯದಷ್ಟೇ ವ್ಯಕ್ತಿಗತ ಉದ್ದೇಶವಾಗಿತ್ತು. ಅದ ಕಾರಣ, ದೇಶದ ಹಿತಾಸಕ್ತಿಗಿಂತ ವ್ಯಕ್ತಿಗತ ಪ್ರತಿಷ್ಠೆಯೇ ಘನವಾಗಿ ಇಂದಿನ ಎಲ್ಲಾ ಭಾರತೀಯ ಚುನಾವಣೆಗಳೂ, ಅಭ್ಯರ್ಥಿಗಳೂ, ಮತದಾರರೂ ಆಯಾ ಕಾರಣವನ್ನು ಪ್ರತಿಬಿಂಬಿಸುತ್ತಿ(ವೆ)ದ್ದಾರೆ, ವಿಜೃಂಭಿಸುತ್ತಿದ್ದಾರೆ.
ಹಾಗಾಗಿಯೇ ಇಂದು ಭಾರತದ ಪ್ರತಿಯೊಂದು ಸಾಮಾಜಿಕ ಹಂತದಲ್ಲಿ ವ್ಯಕ್ತಿಪೂಜೆಯೇ ಪ್ರಮುಖವಾಗಿರುವುದು. ಇದು ಮಹಾತ್ಮದಲ್ಲಿ, ಜೈಭೀಮದಲ್ಲಿ, ಬಡವರ ತಾಯಿಯಲ್ಲಿ, ರೈತನ ಮಗದಲ್ಲಿ, ಮೋಡಿಯಲ್ಲಿ, ರಾಜಾಹುಲಿಯಲ್ಲಿ, ಟಗರುವಿನಲ್ಲಿ, ಹೊನ್ನಾಳಿ ಹೋರಿಯಲ್ಲಿ, ಗಣಿಧಣಿಯಲ್ಲಿ, ದೀದಿಯಲ್ಲಿ, ಪುರುಚ್ಚಿ ತಲೈವಿ/ತಲೈವದಲ್ಲಿ...... ಬಿಟ್ಬಂದಹಳ್ಳಿ ಬಂಧುವಿನಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಕಣ್ಣು ಕೋರೈಸುವುದು.
ಏಳಿ ಎದ್ದೇಳಿ........!

ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs

 "ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs" ಎಂದು ಗೊರವಜ್ಜ ನಿಟ್ಟುಸಿರುಯ್ದು ಮಗ್ಗಲು ಬದಲಿಸಿದ.

ಪಕ್ಕದಲ್ಲೇ ಮಲಗಿದ್ದ ಮೊಮ್ಮಗ ಮೈಲಾರಿ, "ಯಜ್ಜಾ, ಹಾಂಗಂದ್ರ ಯಾಣ!?" ಎಂದು ಪ್ರಶ್ನಿಸಿದ.
ಉತ್ತರವಾಗಿ ಗೊರವಜ್ಜ ಒಂದು ಸುಧೀರ್ಘ ನಿಟ್ಟುಸಿರು ಹೊಮ್ಮಿಸಿ ಹದವಾಗಿ ಕೆಮ್ಮಿದನಷ್ಟೇ.
ಜಾಲಿ ಮರದ ತುದಿಯಲ್ಲಿನ ಹಸಿರು ಕಂಡ ಆಡಿನಂತೆ ಉತ್ತರ ಬಾರದ ಕಾರಣ ಮೈಲಾರಿಯ ಕುತೂಹಲದ ಮಾರಿ ಮುಗಿಲ ಕಡೆ ಏರಿತ್ತು.
"ಮುತ್ಯಾ ಏನಂದನಬೇs?" ಎಂದು ಆ ತುದಿಯಲ್ಲಿ ಮಲಗಿದ್ದ ತನ್ನ ಅಜ್ಜಿಯನ್ನು ಕೇಳಿದ.
ಯಾವುದೋ ಕನಸಿನ ಬೇಗುದಿಯಲ್ಲಿ ಕೈಯಾಡಿಸುತ್ತಾ ಮಲಗಿದ್ದ ಮುದುಕಿ "ಹಾಂ ಹೂಂ" ಎಂದು ನರಳಿದಳೇ ಹೊರತು ಉತ್ತರಿಸಲಿಲ್ಲ.
ಮರುದಿನ ಎದ್ದವನೇ ಮೈಲಾರಿ, "ಯಜ್ಜಾ, ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs ಅಂದ್ಯಲ್ಲs ರಾತ್ರೆ! ಹಂಗಂದ್ರ ಯಾಣ?"
ಮುತ್ಯಾ ಏನೂ ಹೇಳಲಿಲ್ಲ. ರೊಟ್ಟಿ ಬಡಿಯುತ್ತಿದ್ದ ಮುದುಕಿ, "ನಿಮ್ಮಜ್ಜನ ಮೈಮ್ಯಾಲ ದೇವ್ರು ಬಂದು ಹಿಂಗ ಕಾರಣಿಕ ನುಡಿಸಿರ್ತಾನ. ಅದೂ ಅವಗ ನೆಪ್ಪಿರುದಿಲ್ಲ. ಹಂಗ ಬಡಬಡಿಸಿರ್ತಾನ, ಆsಳs. ಅದ್ರಾಗರ ಏನೈತಿ ಒಗಟು? ಹಗಲು ರಾತ್ರಿ ಆಗೂದs, ರಾತ್ರಿ ಹಗಲು ಆಗೂದ ಅಲ್ಲೇನ್!" ಎಂದು ಸಮಾಧಾನ ಹೇಳಿದಳು.
"ಹಾಂಗ...! ಆದ್ರ, ತುಪ್ಪಳ ಮೈಮ್ಯಾಲಾಗ್ತದೋs" ಅಂದ್ರ?
"ಏಯ್ ಅವ್ನ ದುಪ್ಪಡಿ ಜಾರಿತ್ತೇನೋ ನೆನಸ್ಕೊಂಡು ಆಂದಾನ ಆಳs" ಎಂದಳು.
ಆದರೂ ಆ ಒಗಟಿನಂತಹ ಕಾರಣಿಕ ಮೈಲಾರಿ ತಲ್ಯಾಗ ಉಳಕಂತು.
ಕಾಲ ಉರುಳಿತು.
***
ಫೆಬ್ರುವರಿಯ ಸುಡು ಬಿಸಿಲಿನ ಭಾರತದಿಂದ ಗಡಗಡ ನಡುಗುವ ಚಳಿಯ ನ್ಯೂಜೆರ್ಸಿಯಲ್ಲಿ ಇಳಿದಿದ್ದ ಮೈಲ್ಸ್ ಅವನ ಹೆಂಡತಿ ಲಿಲ್ಲಿ ತಂದಿದ್ದ ಬೆಚ್ಚನೆಯ ಸ್ವಿಸ್ ಕುರಿ ತೊಗಲಿನ ಜ್ಯಾಕೆಟ್ ಹೊದ್ದು ಮನೆಗೆ ಬಂದಿದ್ದ. ಜೆಟ್ ಲ್ಯಾಗಿನ ಪರಿಣಾಮದಿಂದ ಮಲಗಿದ್ದ ಮೈಲ್ಸ್ ದಿಢೀರನೆ, "ಹೋಲಿ ಫಕ್!" ಎನ್ನುತ್ತಾ ಎದ್ದು ಕುಳಿತ.
ಅವನ ಕನಸಲ್ಲಿ ಗೊರವಜ್ಜನ ಒಡಪು, "ಹಗಲು ಇರುಳಾಗ್ತದs, ಇರುಳು ಹಗಲಾಗ್ತದs. ತುಪ್ಪಳ ಮೈಮ್ಯಾಲಾಗ್ತದೋs ಧೋs ಉಧೋs" ಒಡೆದಿತ್ತು!
ಮೈಲಾರಿ ಮೈಲ್ಸ್ ಆಗಿದ್ದ. ಹಗಲು ರಾತ್ರಿಯಾಗಿತ್ತು. ತುಪ್ಪಳ ಮೈಮೇಲಿತ್ತು.
ದೂರದಲ್ಲಿ ಎಲ್ಲಿಂದಲೋ ಯಾರೋ, "ಛಾಂಗು ಭಲೇ ಛಾಂಗು ಭಲೇ!" ಎನ್ನುವ ದನಿ ಗಾಳಿಯಲ್ಲಿ ತೇಲಿ ಬಂದಂತಾಯಿತು.