ಕೊರೋನಾ ವಿಶ್ಲೇಷಣೆ 2

ಕೊರೋನಾ ವಿಶ್ವಾದ್ಯಂತ ಕಾಲಿಟ್ಟಾಗಿನಿಂದ ವಿವಿಧ ದೇಶಗಳು ಕೈಗೊಂಡ ಕಾರ್ಯಕ್ರಮಗಳನ್ನು ಅವಲೋಕಿಸಿದಾಗ ಭಾರತ ವಿಶೇಷವಾಗಿ ಪ್ರತ್ಯೇಕವಾಗಿಯೇ ನಿಲ್ಲುತ್ತದೆ. ಅದು ಹೇಗೆಂದು ತಿಳಿಯಲು ಕಳೆದ ಒಂದು ತಿಂಗಳಿನಿಂದಾದ ಘಟನಾವಳಿಗಳನ್ನು ವಿಶ್ಲೇಷಿಸುವುದು ಬೇಡ, ಕೇವಲ ಗಮನಿಸೋಣ.

ಅಮೇರಿಕೆಗೆ ಕರೋನಾ ಕಾಲಿಟ್ಟಾಗಿನಿಂದ ಅಲ್ಲಿನ ಅಧ್ಯಕ್ಷರಾದ ಟ್ರಂಪ್ ನಿತ್ಯ ತನ್ನ ದೇಶವಾಸಿಗಳಿಗೆ ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದು ವೈರಸ್ ಸೋಂಕಿತರ ಸಂಖ್ಯಾಂಶ, ಸೋಂಕನ್ನು ಧೃಢೀಕರಿಸುವ ಪ್ರಗತಿ, ಉಪಲಬ್ಧ ಸಾಧನಗಳು, ಸೋಂಕನ್ನು ನಿಯಂತ್ರಿಸಲು ಸರ್ಕಾರ ಕೈಗೊಂಡ ಕಾರ್ಯಕ್ರಮಗಳ ಕಾರ್ಯಸೂಚಿ ಮುಂತಾದ ಸೋಂಕಿಗೆ ಸಂಬಂಧಿಸಿದ ನೇರ ವಿಷಯಗಳಲ್ಲದೆ, ಇದರಿಂದುಂಟಾದ ಆರ್ಥಿಕ ಹಿಂಜರಿತವನ್ನು ತಡೆಯಲು ಒಂದು ಟ್ರಿಲಿಯನ್ ಡಾಲರ್ರುಗಳ ಯೋಜನೆ, ಮನೆಯಿಂದ ಕೆಲಸ ಮಾಡುವ ಅನುಕೂಲವಿಲ್ಲದವರಿಗೆ ಆರ್ಥಿಕ ಸಹಾಯ ಇತ್ಯಾದಿ ಇತ್ಯಾದಿ ಯೋಜನೆಗಳ ಘೋಷಣೆ ಮತ್ತವುಗಳ ಕುರಿತಾದ ಪ್ರಗತಿಯನ್ನೂ ಹೊಂದಿವೆ. 

ಟ್ರಂಪ್ ನ ಉತ್ಸಾಹ ಎಷ್ಟರಮಟ್ಟಿಗಿದೆಯೆಂದರೆ ಭಾರತದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಕೆಲವು ಆಸ್ಪತ್ರೆಗಳಲ್ಲಿ ಕೊರೋನಾ ಗುಣಪಡಿಸಲು ಮಲೇರಿಯಾ ಗುಣಪಡಿಸುವ ಕ್ಲೋರೋಕ್ವಿನ್ ಔಷಧಿಯನ್ನು ಬಳಸಿ ಯಶಸ್ವಿಯಾದ ಸುದ್ದಿಯನ್ನಿಟ್ಟುಕೊಂಡು ಕ್ಲೋರೋಕ್ವಿನ್ ಅನ್ನು ತಾನೇ ಖುದ್ದು ಪುರಸ್ಕರಿಸುವಷ್ಟು ಇದೆ. ಅಂದರೆ ಈ ಸೋಂಕಿನಿಂದಾಗುವ ವ್ಯತ್ಯಯಗಳನ್ನು ತಡೆಯಲು ಕೇವಲ ಯೋಜನೆಗಳನ್ನು ಹಾಕುವುದಷ್ಟೇ ಅಲ್ಲದೆ ಸೋಂಕನ್ನು ಗುಣಪಡಿಸುವ ಔಷಧಿಯೆಡೆಗೂ ತನ್ನ ಅತ್ಯಾಸಕ್ತಿಯನ್ನು ವ್ಯಕ್ತಪಡಿಸುವಷ್ಟು ಒಬ್ಬ ನಾಯಕನಾಗಿ ಕಾರ್ಯೋನ್ಮುಖನಾಗಿರುವುದು ಶ್ಲಾಘನೀಯ. ಇಲ್ಲಿ ಗಮನಿಸಬೇಕಾದ ಅಂಶ ಚುನಾಯಿತ ನಾಯಕನೊಬ್ಬ ತನ್ನ ಚುನಾಯಿತ ಸ್ಥಾನಕ್ಕೆ ಕೊಟ್ಟಿರುವ ಒಂದು ಬದ್ಧತೆ.

ಇನ್ನು ಒಬ್ಬ ಶಂಕಿತ ಸೋಂಕುದಾರನನ್ನು ಪರೀಕ್ಷಿಸಿ ಧೃಢೀಕರಿಸಲು ನಾಲ್ಕರಿಂದ ಆರು ದಿನಗಳ ಸಮಯ ಬೇಕು. ಅತಿ ಶೀಘ್ರವಾಗಿ ಸೋಂಕನ್ನು ಧೃಢೀಕರಿಸುವ ಸಾಧನಗಳನ್ನು ಕಂಡುಹಿಡಿದು ಉತ್ಪಾದಿಸಲು ಸಾಕಷ್ಟು ಖಾಸಗಿ ಸಂಸ್ಥೆಗಳಿಗೆ ಫ಼ೆಬ್ರುವರಿ ೨೯ರಂದು ಅಮೇರಿಕಾದ ಸಿಡಿಸಿ ಅನುಮತಿ ನೀಡಿತು. ಅವುಗಳಲ್ಲಿ ಇಂಟೆಗ್ರೇಟೆಡ್ ಡಿ.ಎನ್.ಎ ಎಂಬ ಸಂಸ್ಥೆಯೇ ಮಾರ್ಚ್ ಒಂಬತ್ತರಂದು ಏಳು ಲಕ್ಷ ಪರೀಕ್ಷಾ ಸಾಧನಗಳನ್ನು ಉತ್ಪಾದಿಸಿತು. ನಂತರ ಮಾರ್ಚ್ ಹತ್ತರಂದು ಅಮೇರಿಕಾದ ಆರೋಗ್ಯ ಮತ್ತು ಮಾನವ ಸೇವೆಯ ಕಾರ್ಯದರ್ಶಿ ಅಲೆಕ್ಸ್ ಅಜಾರ್ ಇಂದಿಗೆ ಇಪ್ಪತ್ತೊಂದು ಲಕ್ಷ ಪರೀಕ್ಷಾ ಸಾಧನಗಳು ಲಭ್ಯವಾಗಿವೆ ಎಂಬ ಸುದ್ದಿಯನ್ನು ಪ್ರಕಟಿಸಿದರು. ಅಂದರೆ ಅಲ್ಲಿನ ಸರ್ಕಾರ ಮತ್ತು ಸಂಸ್ಥೆಗಳ ಬದ್ಧತೆ, ಕಾರ್ಯತತ್ಪರತೆಯನ್ನು ಗಮನಿಸಿ.

ಇದು ಅಮೇರಿಕಾ ಕೊರೋನಾ ಕುರಿತು ಕೈಗೊಂಡ ಒಂದು ಯೋಜನೆಯ ಫ಼ಲಶೃತಿಯ ಝಲಕ್.

ಅಂದ ಹಾಗೆ ಅಮೇರಿಕಾದಲ್ಲಿ ಅಡುಗೂಲಜ್ಜಿ ವೈದ್ಯಪಾಕವಾಗಲೀ, ಈರುಳ್ಳಿ, ಬೆಳ್ಳುಳ್ಳಿ ಭಜ್ಜಿಗಳಾಗಲಿ, ಬಿಸಿಲಿನ ಜಳದ ಕುರಿತಾಗಲಿ ಯಾವುದೇ ಗಾಸಿಪ್ಪುಗಳು ಹರಡಲಿಲ್ಲ.

ಈಗ ಭಾರತದತ್ತ ನೋಡೋಣ...

ಭಾರತ ಸರ್ಕಾರ ಮಾರ್ಚ್ ಹತ್ತರಂದು ತನ್ನಲ್ಲಿಗೆ ಬರುವ ವಿದೇಶಿ ಪ್ರವಾಸಿಗರ ಮೇಲೆ ನಿರ್ಬಂಧ ಹೇರಿತು. ಆದರೆ ಅದರ ಅನುಷ್ಟಾನದಲ್ಲಿ ಸೋತಿತು. ಹಾಗೆ ಬಂದ ಪ್ರಯಾಣಿಕರಲ್ಲಿ ಭಾರತೀಯರೇ ಸಾಕಷ್ಟು ಜನರಿದ್ದರು. ಅವರೆಲ್ಲರನ್ನೂ ನಿಮ್ಮ ನಿಮ್ಮ ಮನೆಗಳಲ್ಲಿ ಕ್ವಾರಂಟೈನ್ ಆಗಿರಿ ಎಂದಿತೇ ಹೊರತು ಅವರ ಮೇಲೆ ನಿಗಾ ಇರಿಸಲಿಲ್ಲ. ಅವರನ್ನು ಸರ್ಕಾರಿ ಸ್ವಾಮಿತ್ವದ ಐಟಿಡಿಸಿ (ಟೂರಿಸಂ ಇಲಾಖೆ) ಮುಂತಾದ ವಾಹನಗಳಲ್ಲಿ ಮನೆ ಸೇರಿಸಿ ಮನೆಯಲ್ಲಿಯೇ ಇರುವಂತೆ ತಾಕೀತು ಮಾಡಬಹುದಿತ್ತು, ಮಾಡಲಿಲ್ಲ.

ಹಾಗೆ ಹೋಗಲು ಬಿಟ್ಟ ಸೋಂಕಿತರು ಎಲ್ಲಿ ಹೋಗಿದ್ದರು, ಯಾರ್ಯಾರ ಸಂಪರ್ಕಕ್ಕೆ ಬಂದಿದ್ದರು ಇತ್ಯಾದಿ ಇತ್ಯಾದಿ ತಿಳಿಯಲು ಒಬ್ಬೊಬ್ಬ ಪ್ರಯಾಣಿಕನ ಹಿಂದೆ ಒಬ್ಬೊಬ್ಬ ಸಾಂಗ್ಲಿಯಾನ, ವ್ಯೂಮಕೇಶ ಮುಖರ್ಜಿಯಂತಹ ಪತ್ತೇದಾರರನ್ನೇ ಬಿಡಬೇಕಾಗುತ್ತದೆ. ಶಂಕಿತ ಸೋಂಕಿತರ ವಿಷಯ ಹೀಗಿದ್ದು ಮತ್ತು ಸೋಂಕನ್ನು ಧೃಢೀಕರಿಸುವ ಸಾಧನಗಳ ಅಂಕಿ ಅಂಶ ಲಭ್ಯವಿಲ್ಲದಿದ್ದಾಗ ಸರ್ಕಾರ ಪ್ರಕಟಿಸಿರುವ ಶಂಕಿತರ/ಸೋಂಕುದಾರರ ಅಂಕಿ ಅಂಶಗಳು ಪ್ರಶ್ನಾರ್ಹವೆನಿಸಿಬಿಡುತ್ತವೆ.

ಅಲ್ಲಿ ಅಮೇರಿಕಾ ತನ್ನ ಬಳಿಯಿರುವ ಸೋಂಕು ಪರೀಕ್ಷಾ ಸಾಧನಗಳ ಅಂಕಿ ಅಂಶವನ್ನು ಪ್ರಕಟಿಸಿದಂತೆ, ಭಾರತ ತನ್ನಲ್ಲಿರುವ ಕೊರೋನಾ ಪರೀಕ್ಷಾ ಸಾಧನಗಳ ಅಂಕಿ ಅಂಶ, ತನ್ನಲ್ಲಿರುವ ಸಾಧನ, ಒಬ್ಬ ಶಂಕಿತ ಸೋಂಕಿತನನ್ನು ಸೋಂಕಿತನೆಂದು ಧೃಡೀಕರಿಸಲು ತೆಗೆದುಕೊಳ್ಳುವ ಸಮಯ ಇತ್ಯಾದಿ ಕುರಿತಾದ ಪ್ರಕಟಿತ ಮಾಹಿತಿಯನ್ನಾಗಲಿ ಸುದ್ದಿಯನ್ನಾಗಲಿ ನಾನೆಲ್ಲೂ ಗಮನಿಸಿಲ್ಲ.

ಇನ್ನು ಟ್ರಂಪನಂತೆ ಯಾವುದೇ ಯೋಜನೆಗಳನ್ನು ಭಾರತದ ಪ್ರಧಾನಿಗಳು ಇದುವರೆಗೂ ಪ್ರಕಟಿಸಿಲ್ಲ. ಒಂದು ದಿನದ "ಜಂತಾ ಕರ್ಫ಼್ಯೂ" ಘೋಷಿಸಿದ್ದನ್ನು ಬಿಟ್ಟರೆ ಈವರೆಗೆ ಯಾವುದೇ ಮಹತ್ತರ ಯೋಜನೆಗಳು ಘೋಷಿತಗೊಂಡಿಲ್ಲ. ಜನತಾ ಕರ್ಫ಼್ಯೂನ ಅಭೂತಪೂರ್ವ ಯಶಸ್ವಿಯ ನಂತರ ಜನತೆ ಮನೆಯಲ್ಲಿದ್ದು ಭೌತಿಕ ಸಾಮಾಜಿಕ ಬಂಧವನ್ನು ಹೇಗೆ ಅನುಷ್ಟಾನಗೊಳಿಸಬೇಕು, ಅದಕ್ಕೆ ಸರ್ಕಾರದ ಪ್ರೋತ್ಸಾಹಕರ ಯೋಜನೆಗಳು ಏನಿವೆ, ಇತ್ಯಾದಿ ಇತ್ಯಾದಿ ಯಾವ ಯೋಜನೆಯನ್ನೂ ಪ್ರಕಟಿಸಿಲ್ಲ. ಕನಿಷ್ಟ ನಿತ್ಯ ಕೂಲಿ ಮಾಡಿಯೇ ಜೀವಿಸಬೇಕಾದ ಜನರುಗಳಿಗೆ ಅದರಲ್ಲೂ ಜನ್-ಧನ್, ಕಿಸಾನ್ ಕಾರ್ಡ್ ಇತ್ಯಾದಿ ಖಾತಾದಾರರಿಗೆ ಇಂತಿಷ್ಟು ಹಣ ಹಾಕುತ್ತೇವೆ ಮನೆಯಲ್ಲಿರಿ ಎಂಬ ಒಂದು ಕನಿಷ್ಟ ಯೋಜನೆಯನ್ನಾದರೂ ಪ್ರಕಟಿಸಬೇಕಿತ್ತಲ್ಲವೇ?!

ಒಂದೆಡೆ ಇದು ಮಹಾಯುದ್ಧ ಎಂದು ಉದ್ಘೋಷಿಸಿದ ಪ್ರಧಾನಿಗಳು, ಈ ಯುದ್ಧವನ್ನು ಎದುರಿಸಲು ಸರ್ಕಾರದ ಯೋಜನೆ, ಉಪಲಬ್ಧ ಸಾಧನ, ಆಕರ ಪರಿಕರಗಳ ಅಂಕಿಸಂಖ್ಯೆ, ಮೊದಲ ಸಾಲಿನಲ್ಲಿರುವ ಡಾಕ್ಟರರುಗಳೆಂಬ ಬ್ರಿಗೇಡಿಯರ್/ಮೇಜರರುಗಳ ಸಂಖ್ಯೆ, ನರ್ಸುಗಳೆಂಬ ಕ್ಯಾಪ್ಟನ್ನುಗಳ ಸಂಖ್ಯೆಗಳ ಮಾಹಿತಿ ಇದೆಲ್ಲವನ್ನೂ ಕೊಡದಿದ್ದರೆ ಹೇಗೆ? ಸಾಂಪ್ರದಾಯಿಕ ಯುದ್ಧವಾದರೆ ಈ ಸಂಖ್ಯಾಂಶವನ್ನು ಮುಚ್ಚಿಡಬೇಕು. ಆದರೆ ಇದು ಸಾಂಪ್ರದಾಯಿಕ ಯುದ್ಧವಲ್ಲ. ಇಲ್ಲಿ ಸಾಕಷ್ಟು ಮಾಹಿತಿಯನ್ನು ಕೊಟ್ಟರಷ್ಟೇ ಗೆಲುವು ಸಾಧ್ಯ! ಈ ಮಾಹಿತಿ ಸ್ಪಷ್ಟವಾಗಿದ್ದಷ್ಟೂ "ಚಪ್ಪಾಳೆ" ತಟ್ಟಲು ಹಿತವೆನ್ನಿಸುತ್ತದೆ.  ನೋಟ್ ಬ್ಯಾನ್, ಟ್ರಿಪಲ್ ತಲಾಖ್, ಸಿ.ಎ.ಎ. ಮುಂತಾದ ದಿಟ್ಟ ಯೋಜನೆಗಳನ್ನು ಅನುಷ್ಟಾನಗೊಳಿಸಿದ ಮೋದಿಯವರಿಗೆ ಇಂದಿನ ತುರ್ತಿನ ಸಂಗತಿ ಏಕೆ ಮೂಕವಾಗಿಸಿದೆ? ಮಹಾ ಮೂರ್ಖನ್ನೆನಿಸಿದ ಟ್ರಂಪನೇ ಇಷ್ಟೆಲ್ಲಾ ಮಾಡುತ್ತಿರುವಾಗ ವಿಶ್ವನಾಯಕನೆನಿಸಿದ ನಮ್ಮ ಹೆಮ್ಮೆಯ ಪ್ರಧಾನಿಗಳು ಶಂಖ ಊದಿ ಜಾಗಟೆ ಬಾರಿಸುವ ಕಾಲ ಜಾರಿದೆ ಎಂದೇಕೆ ಅರಿಯುತ್ತಿಲ್ಲ. ಕನಿಷ್ಟ ರಣಕಹಳೆ ಊದಿದ ನಂತರ "ಆಕ್ರಮಣ್" ಎನ್ನುವ ಉದ್ಘೋಷವನ್ನೇಕೆ ಹೊರಡಿಸುತ್ತಿಲ್ಲ!

ಇದು ಕೇವಲ "ಟಿಪ್ ಆಫ಼್ ದಿ ಐಸ್ ಬರ್ಗ್"! ಇಂದು ದೇಶಾದ್ಯಂತ ಹಬ್ಬಿದ "ಜೈವಿಕ ಯುದ್ಧ"ವೆಂಬ ಗಾಳಿಸುದ್ದಿ ಮುಂದೆಂದಾದರೂ ನಿಜವಾಗಿ ಜೈವಿಕ ಯುದ್ಧಗಳ ಕಾಲ ಬಂದರೆ ಅವುಗಳನ್ನು ಎದುರಿಸಲು ಭಾರತ ಸಿದ್ಧವಿದೆಯೇ ಎಂಬುದಕ್ಕೆ ಒಂದು ಅಳತೆಗೋಲು ಕೂಡ!

ಕೊರೋನಾ ಹಿನ್ನೆಲೆಯಲ್ಲಿ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಭಾರತವೇಕೆ ವಿಶಿಷ್ಟವಾಗಿ ಬೇರೆಯದೇ ಆಗಿ ನಿಲ್ಲುತ್ತದೆ ಎಂದು ಹೀಗೆ ಕಾಣಸಿಗುವುದು. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ, ಹಾಕಿಕೊಂಡಿರುವ ದಟ್ಟ ಕಡುಕಪ್ಪಿನ ಕನ್ನಡಕ ತೆಗೆದು ನೋಡಿಕೊಂಡರೆ ಸಾಕು.

Cut the chain

ಇತ್ತೀಚೆಗೆ ಫೇಸ್ಬುಕ್ನಲ್ಲಿ ನಾನು ಇಂತವನು, ನಿಮಗೆ ಇಷ್ಟವೆ, ಅನಿಷ್ಟವೆ, ಎಲ್ಲಿ ಹೇಗೆ ಸಂಧಿಸಿದ್ದೆವು ಎಂದು ಒಂದು ಕಾಮೆಂಟ್ ಹಾಕಿ ಎಂಬ ಸರಣಿ ಪೋಸ್ಟುಗಳನ್ನು ಗಮನಿಸಿದ್ದೀರಷ್ಟೇ.

ಇಲ್ಲಿ ತಮ್ಮ ಸ್ನೇಹಿತರ ಲಿಸ್ಟ್ ನೋಡಿ ಖುದ್ದು ತಾವೇ ಯಾರನ್ನು ಎಲ್ಲಿ, ಹೇಗೆ, ಇತ್ಯಾದಿಯಾಗಿ ಭೇಟಿ ಮಾಡಿದ್ದೆವು, ಮಾತನಾಡಿದ್ದೆವು ಎಂದು ತಮ್ಮನ್ನು ತಾವು ಅರಿಯದೆ ಇತರರನ್ನು ಕೇಳುವುದಿದೆಯಲ್ಲ ಅದು ಆತ್ಮರತಿಯ ಒಂದು ಬಗೆ.

ವಿಷಾದದ ಸಂಗತಿಯೆಂದರೆ ಈ ಆತ್ಮರತಿಗೆ ನಿರ್ವಾಣವನ್ನೇ ಹೊಂದಿದ್ದೇವೆಂದುಕೊಂಡವರು ಕೂಡ ಬಲಿಯಾಗಿರುವುದು!

ಈ ನಾನು ಎಂಬ ಆತ್ಮರತಿಯ ಹಸ್ತಮೈಥುನಕ್ಕೆ ದಯವಿಟ್ಟು ಬೇರೆಯವರ ಸಹಾಯಹಸ್ತವನ್ನು ಕೇಳಬೇಡಿ. ನಿಮ್ಮ ಹಸ್ತ, ನಿಮ್ಮದೇ ಲಿಸ್ಟು, ನಿಮ್ಮದೇ ನೆನಪು ಯಾ ಕಲ್ಪನೆಯಲ್ಲಿ ನಿಮ್ಮನ್ನು ನೀವು ಅರಿತು ನಾನಾರೆಂಬುದು ನಾನಲ್ಲವೆಂಬ ನಿಜ ನಿರ್ವಾಣವನ್ನು ಅರಿಯಿರಿ.

ತುಂಡರಿಸಬೇಕಿರುವುದು ಕೇವಲ ಕೊರೋನಾ ಸರಪಳಿಯನ್ನಲ್ಲ, ಈ ರೀತಿಯ ಉನ್ಮಾದದ ಏ(ಹೇ)ರಿಕೆಯನ್ನು ಕೂಡ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕೊರೋನಾ ವಿಶ್ಲೇಷಣೆ

ಇಂದಿನ ಉದಯಕಾಲದಲ್ಲಿ,

ನೀವು ಒಂದು ಬಸ್ಸಿಗೆ ಕಾಯುತ್ತಿರುವಿರಿ ಎಂದಿಟ್ಟುಕೊಳ್ಳಿ. ನಿಮ್ಮೊಟ್ಟಿಗೆ ಒಬ್ಬ ಮಹಿಳೆ, ವೃದ್ಧ, ಇಬ್ಬರು ವಿದ್ಯಾರ್ಥಿಗಳೂ ಬಸ್ಸಿಗೆ ಕಾಯುತ್ತಿರುತ್ತಾರೆ. ನೀವು ಹೋಗುತ್ತಿರುವ ಸ್ಥಳಕ್ಕೆ ಸಾಕಷ್ಟು ಬಸ್ಸುಗಳಿದ್ದು, ಆಗಷ್ಟೇ ಬಂದ ಬಸ್ಸು ತುಂಬಿದ್ದರೆ ಹೋಗುವವರು ಹೋಗಲಿ ಎಂದು ಇನ್ನೊಂದು ಬಸ್ಸಿಗೆ ಕಾಯುತ್ತೀರಿ. ಒಂದು ವೇಳೆ ಬಂದ ಬಸ್ಸು ಖಾಲಿಯಿದ್ದರೆ ನಿಮ್ಮೊಟ್ಟಿಗೆ ಕಾಯುವವರನ್ನು ಸೌಜನ್ಯದಿಂದ ಮೊದಲು ಹತ್ತಲು ಬಿಟ್ಟು ನಂತರ ನೀವು ಹತ್ತುತ್ತೀರಿ.  ಒಂದು ವೇಳೆ ಬಸ್ಸುಗಳು ವಿರಳವಾಗಿದ್ದು, ಬಂದ ಬಸ್ಸು ಖಾಲಿ ಇಲ್ಲದಿದ್ದರೆ ಯಾ ನಿಮ್ಮೊಟ್ಟಿಗೆ ಐವತ್ತು ಜನ ಕಾಯುತ್ತಿದ್ದು ಬಸ್ಸು ಖಾಲಿಯಿದ್ದರೂ ನೀವು ಲಗುಬಗೆಯಿಂದ ನುಗ್ಗಿ ಬಸ್ ಹತ್ತುತ್ತೀರಿ. ಇದು ಜನ ಸಾಂದ್ರತೆ, ಪ್ರಯಾಣಿಕ-ಸೌಲಭ್ಯಗಳ ಅನುಪಾತದ ಕೊರತೆಯಿಂದ ನಿಮ್ಮಲ್ಲುಂಟಾಗುವ ಸೌಜನ್ಯ ಯಾ (ಅ)ನಾಗರಿಕತೆಯ ಪಲ್ಲಟ.

ಹಾಗೆಯೇ ಯಾವ ದೇಶದಲ್ಲಿ ಆಧಿಕ ಸೌಲಭ್ಯಗಳು ತುಂಬಿದ್ದು ಸುಲಭಕ್ಕೆ ನಿಯಂತ್ರಿಸಬಲ್ಲ ಜನಸಾಂದ್ರತೆ ಮತ್ತು ಜನಸಂಖ್ಯೆ-ಸೌಲಭ್ಯಗಳ ಸಮತೋಲಿತ ಅನುಪಾತ ಇರುತ್ತದೋ ಅಲ್ಲಿ ಸೌಜನ್ಯ, ವ್ಯಕ್ತಿಗತ ಗೌರವ, ಸಹಾನುಭೂತಿ ಇತ್ಯಾದಿ ಇತ್ಯಾದಿ ನಾಗರಿಕ ವರ್ತನೆ ಕಾಣಸಿಕ್ಕು ಆಹಾ ಎಂತಹ ವಿಶಾಲ ನಾಗರಿಕ ಸಮಾಜ ಎನಿಸುತ್ತದೆ!

ಈ ಜನ ಸಾಂದ್ರತೆ vs ಸೌಲಭ್ಯಗಳ ಅನಾನುಪಾತದ ಕಾರಣದಿಂದಾಗುವ ಸೌಜನ್ಯ ಪಲ್ಲಟ ಯಾ (ಅ)ನಾಗರಿಕ ವರ್ತನೆಗಳು ಯಾವುದೇ ದೇಶ, ಕಾಲ, ಜನಾಂಗಕ್ಕೆ ಸೀಮಿತವಲ್ಲ. ಯುರೋಪಿರಲಿ ಅಮೆರಿಕ, ಚೈನಾವಿರಲಿ ಯಾವುದೋ ಕಾರಣಕ್ಕೆ ಬಸ್ಸುಗಳಿಲ್ಲದಿದ್ದರೆ ಎಲ್ಲರೂ ಬಂದ ಬಸ್ಸಿಗೆ ನುಗ್ಗುವವರೆ!

ಹಾಗಾಗಿಯೇ ಜನಸಾಂದ್ರ ಪ್ರದೇಶದಿಂದ ವಲಸೆ (ಪ್ರವಾಸಿಯಲ್ಲ) ಬಂದ ಭಾರತೀಯ ಯುರೋಪ್ ಅಮೆರಿಕದಲ್ಲಿ ಸೌಜನ್ಯತೆಯ ಸಾಕಾರ ಮೂರ್ತಿಯೆನಿಸುತ್ತಾನೆ. ಆದರೆ ಅದೇ ಸಾಕಾರಮೂರ್ತಿ ಭಾರತಕ್ಕೆ ಪ್ರವಾಸಕ್ಕೆ ಬಂದರೂ ಸ್ಥಳೀಯರಂತೆಯೇ (ಸೌಜನ್ಯವಲ್ಲವೆನಿಸುವಂತೆ) ವರ್ತಿಸುತ್ತಾನೆ. ಅದಕ್ಕೆ ಕಾರಣ ಸೌಲಭ್ಯಗಳ ಅಸಮತೋಲಿತ ಅನುಪಾತ. ಈ ವರ್ತನೆಗೆ ಯಾವೊಬ್ಬ ಮಾನವನೂ ಅತೀತನಲ್ಲ.

ಅಮೆರಿಕದ ಅಗಾಧತೆ, ಕಡಿಮೆ ಜನಸಂಖ್ಯೆ, ಸಮತೋಲಿತ ಸೌಲಭ್ಯಗಳು ಸಹಜವಾಗಿಯೇ ಅಲ್ಲಿಯ ಜನ ಪರಸ್ಪರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರುವಂತೆ ಮಾಡಿದೆ. ಹಾಗಾಗಿ ಅಮೆರಿಕನ್ನರು ಹುಟ್ಟು ಸಾಮಾಜಿಕ ಅಂತರಗಾರರು. ಇಂತಹ ಸಾಮಾಜಿಕ ಅರಿವುಳ್ಳ, ಸಾಮಾಜಿಕ ಅಂತರದ ಜನತೆ ಮತ್ತು ಸೌಲಭ್ಯಗಳ  ಆಗರಗಳ ನಡುವೆ ಕೊರೋನಾ ಹೇಗೆ ಕ್ಷಿಪ್ರವಾಗಿ ಹಬ್ಬಿತು?

ಅದಕ್ಕೆ ಅಮೆರಿಕನ್ನರ ಅತ್ಯಧಿಕ ವಿಮಾನಯಾನ, ac ಎಂದೆಲ್ಲಾ ಕಾರಣವೆಂದರೂ ಅಷ್ಟೆಲ್ಲಾ ಸಾಮಾಜಿಕ ಅಂತರ, ಲಾಕ್ ಡೌನ್, ಕ್ವಾರಾಂಟೈನ್ ಇತ್ಯಾದಿಗಳ ನಡುವೆ ಕೂಡ ಕೊರೋನಾ ಹಬ್ಬಲು ವೈರಸ್ಸಿನ ಪ್ರಬಲ ಶಕ್ತಿಯೇ ಕಾರಣ. ಹಾಗಾಗಿಯೇ ಅಮೆರಿಕಾ ಇಷ್ಟರೊಳಗೆ ತನ್ನಲ್ಲಿ ಇಪ್ಪತ್ತೆರಡು ಲಕ್ಷ ಕೊರೋನಾ ಸೋಂಕಿತರು ಮತ್ತು ಅಪಾರ ಸಾವುಗಳು ಸಂಭವಿಸಬಹುದೆಂದು ಅಂದಾಜಿಸಿತ್ತು. ಆದರೆ ಹಾಗಾಗದೆ ಕೇವಲ ಎರಡು ಸಾವಿರದ ಆಜುಬಾಜು ಸಾವುಗಳಾಗಿವೆ ಮತ್ತು ಒಂದು ಲಕ್ಷ ಸೋಂಕಿತರಿದ್ದಾರೆ.  ಅಮೆರಿಕ ಈವರೆಗೆ ಅಳವಡಿಸಿಕೊಂಡ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳದಿದ್ದರೆ ಇಷ್ಟರೊಳಗೆ ಇಪ್ಪತ್ತೆರಡು ಲಕ್ಷ ಅಮೆರಿಕನ್ನರು ಕೊರೊನದಿಂದ ನರಳುತ್ತಿದ್ದರು ಎಂದು ಅಮೆರಿಕೆಯ ಸರ್ಜನ್ ಜನರಲ್ ಮೊನ್ನೆ ಅಧಿಕೃತವಾಗಿ ಹೇಳಿದ್ದಾರೆ.

ಒಟ್ಟಿನಲ್ಲಿ ಈವರೆಗೆ ಅಮೆರಿಕ 8,94,000 ಕೊರೋನಾ ಟೆಸ್ಟುಗಳನ್ನು ಮಾಡಿದೆ. ನಾವು ಹೆಚ್ಚು ಟೆಸ್ಟುಗಳನ್ನು ಮಾಡಿರುವುದರಿಂದ ನಮ್ಮಲ್ಲಿ ಹೆಚ್ಚಿನ ಸೋಂಕಿತರನ್ನು ಗುರುತಿಸಿದ್ದೇವೆ. ನಮ್ಮ ಅಂಕಿಗಳು, ಈ ಸೋಂಕನ್ನು ಎದುರಿಸಲು ಸಿದ್ಧಗೊಂಡ ನಮ್ಮ ತಯ್ಯಾರಿಯ ಪರಿಣಾಮ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

ಇದು ಒಂದು ಸಂತುಲಿತ, ವೈಜ್ಞಾನಿಕ ಅನುಪಾತಗಳನ್ವಯವಿರುವ ಒಂದು ಅಭಿವೃದ್ಧಿ ಹೊಂದಿರುವ ದೇಶದ ಕೊರೋನಾ ಕಥೆ.

ಇನ್ನು ಭಾರತದಲ್ಲಿ.....

ವಿದೇಶಗಳಿಂದ ವಾಪಸ್ಸಾದ ಪ್ರಜೆಗಳನ್ನು ನೇರ ಕ್ವಾರಾಂಟೈನ್ ಕ್ಯಾಂಪುಗಳಲ್ಲಿಡದೆ ಈಗವರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ.

ಇಟಲಿ ಪ್ರಧಾನಿ ಕರೆ ನೀಡಿದರೆಂದು ನಮ್ಮ ಪ್ರಧಾನಿಗಳು ನಮ್ಮ ಡಾಕ್ಟರರು, ಪೊಲೀಸರು ಇನ್ನೂ ಕಾರ್ಯಪ್ರವೃತ್ತರಾಗುವ ಮುನ್ನವೇ ಅವರಿಗೆ ಚಪ್ಪಾಳೆ ತಟ್ಟಿ ಎಂದದ್ದು ಮತ್ತು ಜನ ತಟ್ಟೆ ಬಡಿದು ಭಜನೆ ಮಾಡಿ ಸಾಮಾಜಿಕ ಅಂತರವನ್ನು ಧೂಳಿಪಟ ಮಾಡಿದ್ದಾರೆ.

ಕೊರೋನಾ ಒಂದು ಅತಿ ದೊಡ್ಡ ಜೋಕ್ ಎಂಬಂತೆ ಟ್ರೋಲು ಮಾಡಿ ಡೋಲು ಬಡಿದಿದ್ದಾರೆ, ಬಡಿಯುತ್ತಿದ್ದಾರೆ.

ಕರ್ಫ್ಯೂ ಇರುವುದೇ ಉಲ್ಲಂಘಿಸಲು ಎಂದು ಜನರೂ, ಉಲ್ಲಂಘಿಸಿದವರನ್ನು ಬಡಿಯುವುದೇ ನಮ್ಮ ಕೆಲಸ ಎಂದು ಪೊಲೀಸರು ಪೈಪೋಟಿಗೆ ಬಿದ್ದಿದ್ದಾರೆ.

ಗಂಜಿ ಕುಡಿದು ಎಪ್ಪತ್ತು ದಿನ ಬದುಕುವ ಶಕ್ತಿಯಿರುವವರು ಕೂಡ ಅಯ್ಯೋ ನಿತ್ಯ ಕೂಲಿ ಪಡೆದು ಬದುಕುವವರು ಏನು ಮಾಡಬೇಕು ಎಂದು ಕಕ್ಕುಲಾತಿ ಮೆರೆದು ನಮ್ಮದೆಲ್ಲಿಡೋಣ ಎಂದು ಸಮಾಜವಾದದ ಪಟ್ಟುಗಳನ್ನು ಹಾಕುತ್ತಾರೆ.

ದಿಲ್ಲಿ ವಲಸಿಗರ ತವರು ಪಯಣವನ್ನು ಬೆಂಬಲಿಸಿ ಮೋದಿ ಶಾ ತೆಗಳುತ್ತ ದಿಲ್ಲಿ ದೊರೆ ಕೇಜ್ರಿವಾಲರ ವಿಫಲತೆಯನ್ನು ಬುದ್ದಿವಂತ ಚಿಂತಕರು ಮರೆಮಾಚುತ್ತಿದ್ದಾರೆ.

ಥೇನಿಯಲ್ಲಿ ಓರ್ವ ವ್ಯಕ್ತಿ ಒಂದು ವಾರದ ಗೃಹ ಬಂಧನದ ಅವಧಿಯಲ್ಲೇ ಮಾನಸಿಕ ಸ್ಥಿಮಿತ ಕಳೆದುಕೊಂಡು ಓರ್ವ ವೃದ್ಧೆಯನ್ನು ಕಚ್ಚಿ ಕೊಂದಿದ್ದಾನೆ.

ಆಲ್ಕೋಹಾಲ್ ಸಿಕ್ಕದೆ ಜನ ಖಿನ್ನತೆಗೊಳಗಾಗಿ ಆತ್ಮಹತ್ಯೆಗೊಳಗಾಗುತ್ತಿದ್ದಾರೆ.

ಎಮ್ಮೆಲ್ಲೆಗಳು ಮೊಮ್ಮಕ್ಕಳನ್ನು ಹೈವೇಯಲ್ಲಿ ಆಟವಾಡಿಸಿದರೆ, ಕೆಲವರು ಊರು ತುಂಬಾ ಪಟಾಲಂ ಕಟ್ಟಿಕೊಂಡು ತಿರುಗುತ್ತಿದ್ದಾರೆ.

ಜನಾಂಗೀಯ ಅವಹೇಳನವೆನ್ನಿಸಬಲ್ಲ ಸಾಬಿ, ತುರುಕ ಪದಗಳು ಎಡ, ಬಲ ಎರಡೂ ಪಾಳೆಯಗಳು ಮುನ್ನೆಲೆಗೆ ತಂದು ಪೈಪೋಟಿಗಿಳಿದಿದ್ದಾರೆ.

ಆರ್ಥಿಕ ಪರಿಸ್ಥಿತಿ ಈಗಾಗಲೇ ಬಿದ್ದುಹೋಗಿದೆ. ಇದು ನಿಯಂತ್ರಿಸಲಾಗದ ಪರಿಸ್ಥಿತಿಯಾಗಿರುವುದರಿಂದ ಲಾಕ್ ಡೌನ್ ಇನ್ನಷ್ಟು ಆರ್ಥಿಕತೆಯನ್ನು ಕುಸಿಯುಸುತ್ತದೆ. ಹಾಗಾಗಿ ಆರ್ಥಿಕತೆಯನ್ನು ಎತ್ತಿ ಹಿಡಿಯಲು ಲಾಕ್ ಡೌನ್ ಬೇಡವಾಗಿತ್ತು ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಸೋಪಿನೊಂದಿಗೆ ಬಿಸಿನೀರಿನಲ್ಲಿ ಸ್ನಾನ ಮಾಡಿಸಿ ಬಟ್ಟೆ ಒಗೆಸಿಕೊಟ್ಟಿದ್ದರೆ ಬಾಹ್ಯವಾಗಿ ಸೋಂಕು ಮುಕ್ತರಾಗುತ್ತಿದ್ದವರನ್ನು ಆಳಾಗಿ ನಿಲ್ಲಿಸಿ ಅಮಾನವೀಯವಾಗಿ ಏನನ್ನೋ ಸಿಂಪಡಿಸಿದ್ದಾರೆ.

ಇದೆಲ್ಲವೂ ಜನಸಾಂದ್ರತೆಯ mob mentality ಯ ಲಕ್ಷಣ. ಕಾಲಾಪಾನಿ, ನೇಣುಗಂಭ, ಜೀವಾವಧಿ ಶಿಕ್ಷೆಗಳನ್ನು ಅನುಭವಿಸಿ ಸ್ವಾತಂತ್ರ್ಯ ಗಳಿಸಿದ ರಾಷ್ಟ್ರದಲ್ಲಿ ಕೆಲವೇ ಕೆಲವು ದಿನಗಳ ಲಾಕ್ ಡೌನ್ (ಇದಿನ್ನೂ ಪ್ರಶ್ನಾರ್ಥಕ ರೀತಿಯಲ್ಲೇ ಜಾರಿಯಿದೆ) ಈ ರೀತಿಯ ಪರಿಣಾಮವನ್ನು ಸೃಷ್ಟಿಸಿದೆಯೆಂದರೆ ಭಾರತದ ಪ್ರಜಾಪ್ರಭುತ್ವ, ಮುಂಬರಬಹುದಾದ ಜೈವಿಕ ಯುದ್ಧಗಳಿಗೆ ರಾಷ್ಟ್ರವನ್ನು ಸಿದ್ಧಗೊಳಿಸಿದೆಯೇ? ಅತೀವ ಜನಸಂಖ್ಯೆಯ ರಾಷ್ಟ್ರಗಳಿಗೆ ಪ್ರಜಾಪ್ರಭುತ್ವ ಸಿಂಧುವೇ ಎಂಬ ತೀವ್ರ ಅನುಮಾನಗಳನ್ನು ಈ ದುರಿತ ಕಾಲ ಸೃಷ್ಟಿಸಿದೆ.  ಏಕೆಂದರೆ ಅಂತಹುದೇ ತೀವ್ರ ಜನಸಂಖ್ಯೆಯ ಚೀನಾ ಕೊರೋನವನ್ನು  ವುಹಾನ್ ಪ್ರದೇಶದಿಂದಾಚೆಯ ತನ್ನ ಪ್ರದೇಶಗಳಿಗೆ  ಗಮನಾರ್ಹವಾಗಿ ದಾಟಿಸಿಲ್ಲ.  ಈ ಪರಿಸ್ಥಿಯಲ್ಲಿ ಮೋದಿಯಲ್ಲ ಸಾಕ್ಷಾತ್ ಪರಶಿವನೇ ಪ್ರಧಾನಿಯಾಗಿದ್ದರೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರುತ್ತಿರಲಿಲ್ಲ. ಏಕೆಂದರೆ ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿಗಿಂತ ಶ್ರೀಸಾಮಾನ್ಯನ ನಡೆ ಮುಖ್ಯ. ನಮ್ಮ ಶ್ರೀಸಾಮಾನ್ಯನ ನಡೆ ಸದ್ಯಕ್ಕೆ ಅತ್ಯಂತ ನಿರಾಶಾದಾಯಕ.

ಒಟ್ಟಿನಲ್ಲಿ ಸಾಂದ್ರತೆ, ಒತ್ತಡ, ತಾಳುವಿಕೆ ಒಂದಕ್ಕೊಂದು ಸಂಬಂಧಿತವೆಂಬ ಭೌತಶಾಸ್ತ್ರದ ಸಾಪೇಕ್ಷ ಸಿದ್ಧಾಂತ ರಾಜಕೀಯ ವ್ಯವಸ್ಥೆಗಳಿಗೂ ಅನ್ವಯವೆಂದು ಕೊರೋನಾ ಸಾಬೀತುಗೊಳಿಸುತ್ತಿದೆ. ಹಾಂ, ಸಾಪೇಕ್ಷ ಸಿದ್ದಾಂತ ರೇಣುಕರ ಸಿದ್ಧಾಂತ ಶಿಖಾಮಣಿಯಲ್ಲಿತ್ತು ಎಂದು ಒಂದು ವರ್ಗ, ಶಂಕರಾಚಾರ್ಯರು ಅದನ್ನು ಎಲ್ಲರಿಗಿಂತ ಮೊದಲು ಮಂಡಿಸಿದ್ದರು ಎಂದು ಇನ್ನೊಂದು ವರ್ಗ, ಇಲ್ಲ ಇವೆರೆಲ್ಲರಿಗಿಂತ ಬೌದ್ಧ ಧರ್ಮ ಈ ಸಿದ್ಧಾಂತದ ಮೂಲ, ಇದು ಪಶ್ಚಿಮದ ಪಿತೂರಿಯಿಂದ ಐನ್ಸ್ಟೀನ್ ಸಿದ್ದಾಂತವಾಗಿದೆ ಎನ್ನುವ ಪಿತೂರಿ (controversy) ಸಿದ್ಧಾಂತದಂತೆಯೇ ಕೊರೋನಾ ಇಂದು ವಿನೂತನ ಜೈವಿಕ ಯುದ್ಧದ ಪಿತೂರಿ ಸಿದ್ಧಾಂತವಾಗಿ ಸಾಗಿಬರುತ್ತಿದೆ.