ಜಾತಿ ಅಸ್ಮಿತೆ, ಧರ್ಮ ಮೌಢ್ಯ!

ಇಂದು ಅಂಬೇಡ್ಕರ್ ಕವಚ ಧರಿಸಿ ನಾನು ಹಿಂದೂ ಅಲ್ಲ, ದಲಿತ, ಒಕ್ಕಲಿಗ, ಲಿಂಗಾಯತ ಮುಂತಾಗಿ "ಜಾತಿಯನ್ನು ಒಪ್ಪುವ", ಆದರೆ "ಧರ್ಮವನ್ನು ಒಪ್ಪದ" ಪ್ರಜ್ಞಾವಂತರ ನಿಲುವೇ ಬಹುಪಾಲು ದೇಶದ ಜನರ ನಿಲುವು ಕೂಡಾ ಆಗಿದ್ದಿತು.

ಆದರೆ ಸ್ವತಃ ತಾವೇ ನಂಬದ ಮತ್ತು ಇದು ಒಂದು ಧರ್ಮವೇ ಎಂದು ಹೀಗಳೆದಿದ್ದುದನ್ನು ಧರ್ಮವಾಗಿಸಿ, ಜಾತಿ ಅಸ್ಮಿತೆಯನ್ನು ನಂಬಿಕೊಂಡವರನ್ನು ಕಾನೂನಾತ್ಮಕವಾಗಿ ಹಿಂದೂ ಧರ್ಮದಲ್ಲಿ ಸೇರಿಸಿ ಬಂಧಿಸಿಟ್ಟದ್ದು ಅಂಬೇಡ್ಕರರೇ.

ಸಂಸ್ಕೃತಿಯನ್ನು ಧರ್ಮದ ಚೌಕಟ್ಟಿಗೆ ಸೀಮಿತಗೊಳಿಸಿ, ಆದರೊಳಗೆ ಎಲ್ಲಾ ಜಾತಿಗಳನ್ನು ಸೇರಿಸಿ ಕೃತಕವಾಗಿ ಧಾರ್ಮಿಕ ಬಹುಸಂಖ್ಯಾತರನ್ನಾಗಿಸಿ ಹಿಂದೂ ಬಿಲ್ ಜಾರಿಗೊಳಿಸಿದ್ದುದು ತಾತ್ವಿಕ ದ್ವಂದ್ವಕ್ಕೆ ಸಿಲುಕಿಯೋ ಅಥವಾ ಒತ್ತಡಕ್ಕೆ ಸಿಲುಕಿಯೋ ಗೊತ್ತಿಲ್ಲ.

ಸ್ಪಷ್ಟತೆಯಿರದ ದ್ವಂದ್ವ ನಿಲುವುಗಳು ಒಮ್ಮೊಮ್ಮೆ ಮಹಾನ್ ದೂರದರ್ಶಿಗಳನ್ನೂ ದಾರಿ ತಪ್ಪಿಸಿಬಿಡುತ್ತವೆ.

ಇಂದು ಅಂಬೇಡ್ಕರರನ್ನು ಕವಚ ಮಾಡಿಕೊಂಡವರು, ನಾನು ಇಂತಹ ಜಾತಿ ಅಸ್ಮಿತೆಯವನು ಆದರೆ ಹಿಂದೂ ಅಲ್ಲ ಎನ್ನುವುದರ ಮೂಲಕ ಅಂಬೇಡ್ಕರ್ ಅವರ ಹಿಂದೂ ಬಿಲ್ ಅನ್ನು ತಿರಸ್ಕರಿಸುತ್ತಿದ್ದಾರೆ. ಅಂದರೆ ಪರೋಕ್ಷವಾಗಿ ಅವಮಾನಿಸುತ್ತಿದ್ದಾರೆಂದಲ್ಲವೇ!

ಈ ರೀತಿ ಅಂಬೇಡ್ಕರರನ್ನು ಪರೋಕ್ಷವಾಗಿ ತಿರಸ್ಕರಿಸುತ್ತ ಆದರೆ ಅವರನ್ನು ಕವಚವಾಗಿ ಬಳಸಿಕೊಳ್ಳುವ ಸೊಗಲಾಡಿಗಳಿಗಿಂತ, ಆ ಬಿಲ್ಲಿನ ಬಗ್ಗೆ ಉಸಿರೆತ್ತಿದ ಬಲಪಂಥೀಯ ಭೈರಪ್ಪನವರ ನಿಲುವು ಸ್ಪಷ್ಟತೆಯಿಂದ ಕೂಡಿದೆ ಎನಿಸುತ್ತದೆ. ಅಂದ ಹಾಗೆ ಭೈರಪ್ಪ ದನಿ ಎತ್ತಿರುವುದು ಈ ಹಿಂದೂ ಬಿಲ್ ಕುರಿತಾಗಿಯೇ ಹೊರತು ಒಟ್ಟಾರೆ ಸಂವಿಧಾನದ ಕುರಿತಲ್ಲ. ಏಕೆಂದರೆ ಅವರು ಆಕ್ಷೇಪಿಸಿರುವ ವಿಷಯಗಳೆಲ್ಲವೂ ಈ ಬಿಲ್ ಕುರಿತಾಗಿವೆ.

ಹಾಗೆಂದೊಡನೆಯೇ ನಾನು ಭೈರಪ್ಪನವರ ನಿಲುವನ್ನು ಸಮರ್ಥಿಸುತ್ತೇನೆಂದಲ್ಲ. ಅವರ ಸ್ಪಷ್ಟತೆಯನ್ನೂ ಮತ್ತವರ ವಿರೋಧಿಗಳಲ್ಲಿನ ದ್ವಂದ್ವವನ್ನೂ ಗುರುತಿಸುತ್ತಿದ್ದೇನೆ.

ಏಕೆಂದರೆ ಈ ರೀತಿಯ ದ್ವಂದ್ವಗಳ ಕುರಿತು ಪ್ರಶ್ನಿಸುವುದನ್ನು ಇಂದು ಜನಿವಾರಿಗಳೆಂದು ಬ್ರ್ಯಾಂಡಿಸಿ ಹೀಯಾಳಿಕೆಗೆ ಗುರಿಪಡಿಸಿ ದಮನಿಸಲಾಗುತ್ತದೆ. ಯಾವ ಸಂವಿಧಾನವನ್ನು ರಚಿಸಿ ಪ್ರಶ್ನಿಸುವುದನ್ನು ಅಂಬೇಡ್ಕರ್ ಪ್ರೋತ್ಸಾಹಿಸಿದ್ದರೋ ಈಗ ಅವರ ಕವಚದ ಅಡಿಯಲ್ಲೇ ಪ್ರಶ್ನಿಸುವವರನ್ನು ವ್ಯವಸ್ಥಿತವಾಗಿ ದಮನಿಸಲಾಗುತ್ತದೆ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಕರ್ನಾಟಕದಲ್ಲೇಕೆ ಪ್ರಾದೇಶಿಕ ಪಕ್ಷಗಳು ಪ್ರಮುಖವಾಗಿಲ್ಲ?

ಕರ್ನಾಟಕದಲ್ಲಿ ಈಗಷ್ಟೇ ಸಂಸತ್ತಿಗೆ ಚುನಾವಣೆಗಳು ಮುಗಿದಿವೆ. ಆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಕೂಡ ಪ್ರಾದೇಶಿಕ ಪಕ್ಷಗಳ ಬಲವಾಗಬೇಕು ಎಂಬ ಸದ್ದು ಅಲ್ಲಲ್ಲಿ ಕೇಳಿಬರುತ್ತಿದೆ.

ಆದರೆ ಆಧುನಿಕ ದ್ರಾವಿಡ ಚೌಕಟ್ಟಿನಲ್ಲಿ ಕರ್ನಾಟಕ ಸದಾ ಭಿನ್ನವಾಗಿ ನಿಲ್ಲುತ್ತದೆ. ಪ್ರಜಾಪ್ರಭುತ್ವ ಭಾರತದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಪ್ರಾದೇಶಿಕ ಪಕ್ಷಗಳು ನೆಲೆ ನಿಂತಂತೆ ಕರ್ನಾಟಕದಲ್ಲಿ ನಿಂತಿಲ್ಲ ಮತ್ತು ನಿಲ್ಲಲಾರವು.

ಏಕೆಂದರೆ ಕೇವಲ ಸ್ವತಂತ್ರ ಭಾರತದಲ್ಲಿ ಮಾತ್ರ ಕರ್ನಾಟಕ ಈ ರೀತಿ ಭಿನ್ನವಾಗಿರದೆ ಇತಿಹಾಸದುದ್ದಕ್ಕೂ ಇದೇ ರೀತಿ ಭಿನ್ನವಾಗಿದೆ. ಹರಪ್ಪಾ-ಮೊಹೆಂಜೋದಾರೋ ನಾಗರೀಕತೆಗಳೊಂದಿಗಿನ ಸಂಬಂಧ ಮತ್ತು ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದುದಲ್ಲದೆ, ಮುಂದಿನ ಏಳನೇ ಶತಮಾನದ ಪುಲಿಕೇಶಿ ಕೂಡ ಅದೇ ರಾಷ್ಟ್ರೀಯ ಮನೋಭಾವನೆಯಿಂದಲೇ ತನ್ನ ಸಾಮ್ರಾಜ್ಯವನ್ನು "ಮಹಾರಾಷ್ಟ್ರ"ವೆಂದು ಕರೆದುಕೊಂಡಿದ್ದನು. ಮುಂದೆ ಸ್ವತಂತ್ರ ಭಾರತದಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣಗೊಂಡದ್ದು ಕೂಡಾ ಆ ರಾಷ್ಟ್ರೀಯ ಮನೋಭಾವನೆಯಿಂದಲೇ ಹೊರತು ಸಂಕುಚಿತ ಪ್ರಾದೇಶಿಕತೆಯ ದೃಷ್ಟಿಯಿಂದಲ್ಲ. ಹಾಗಾಗಿಯೇ ಕನ್ನಡಿಗರು ತಮ್ಮ ನೆಲ, ಜಲ, ಭಾಷೆಗಳ ಮೇಲೆ ಅಪಾರ ಅಭಿಮಾನ ಹೊಂದಿದ್ದರೂ ದುರಭಿಮಾನಿಗಳಲ್ಲ. ಈ ರೀತಿಯ ದುರಭಿಮಾನ, ನೆರೆರಾಜ್ಯದಿಂದ ಪ್ರಭಾವಿತಗೊಂಡ ಬೆಂಗಳೂರು ಸುತ್ತಮುತ್ತ ಕಂಡರೂ ರಾಜ್ಯಾದ್ಯಂತ ಕಾಣಸಿಗುವುದಿಲ್ಲ. ಹಾಗಾಗಿಯೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಯಶಸ್ಸು ಕಂಡಿಲ್ಲವೆಂದು ಹೇಳಬಹುದು.

ಒಟ್ಟಿನಲ್ಲಿ ಕರ್ನಾಟಕ, ಕ್ರಿಸ್ತಪೂರ್ವ ಇತಿಹಾಸದ ಕಾಲದಿಂದಲೂ ತನ್ನನ್ನು ರಾಷ್ಟ್ರೀಯ ವಿಶಾಲ ಮನೋಭಾವನೆಗೆ ತೆರೆದುಕೊಂಡಿದೆ. ಇಂದು ಇದು ಕನ್ನಡ ಪ್ರಾದೇಶಿಕತೆಗಾಗಿ ಹೋರಾಡುವವರಿಗೆ ಅಪ್ರಿಯವೆನಿಸುವ ಐತಿಹಾಸಿಕ ಸತ್ಯ!

ಅದೇ ರೀತಿ ತಮಿಳುನಾಡು ಕೂಡಾ ಅಂದು ತನ್ನಲ್ಲಿಗೆ ವಲಸೆ ಬಂದ ಪಲ್ಲವರನ್ನು ಹೇಗೆ ದೀರ್ಘಕಾಲ ಅರಸರನ್ನಾಗಿ ಒಪ್ಪಿಕೊಂಡಿದ್ದಿತೋ ಅದೇ ರೀತಿ ಪ್ರಜಾಪ್ರಭುತ್ವದಲ್ಲಿಯೂ ಕೂಡಾ ಸಾಕಷ್ಟು ವಲಸೆಗಾರರನ್ನು ತನ್ನ ಅಧಿಪತಿಗಳಾಗಿ ಮೆರೆಸಿದೆ. ಅತ್ತ ಆಂಧ್ರಪ್ರದೇಶ ಕೂಡಾ ಐತಿಹಾಸಿಕವಾಗಿ ಹೆಚ್ಚು ಕಡಿಮೆ ಕರ್ನಾಟಕದಂತೆಯೇ ಇದ್ದಿತು. ಆಂಧ್ರದಲ್ಲಿ ಪ್ರಾದೇಶಿಕ ಪಕ್ಷ ಆಡಳಿತಕ್ಕೆ ಬಂದದ್ದು ಸಿನೆಮಾ ರೋಚಕತೆಯ ಅಲೆಯಲ್ಲಿಯೇ ಹೊರತು ಐತಿಹಾಸಿಕವಾಗಿಯಲ್ಲ. ಅಂದು ತಮ್ಮ ಪ್ರಖ್ಯಾತ ನಟನಿಗಾಗಿ ಆತನ ಪಕ್ಷವನ್ನು ಆಡಳಿತಕ್ಕೆ ತರಲಾಯಿತೇ ಹೊರತು ನಾಡು, ನುಡಿ, ಪ್ರಾದೇಶಿಕತೆಯ ಮೂಲಸ್ವರೂಪದ ಪರಿಕಲ್ಪನೆಯಿಂದಲ್ಲ. ಇಲ್ಲದಿದ್ದರೆ ಆಂಧ್ರಪ್ರದೇಶ ಕೂಡಾ ಕರ್ನಾಟಕದಂತೆಯೇ ರಾಷ್ಟ್ರೀಯ ಉದಾರತೆಯನ್ನು ಹೊಂದಿರುತ್ತಿತ್ತು.

ಒಟ್ಟಾರೆ ವರ್ತಮಾನ ಭಾರತದ ಪ್ರತಿಯೊಂದು ಸಂಚಲನೆಯೂ ತನ್ನ ಇತಿಹಾಸದ ಕೊಂಡಿಗೆ ಕೊಂಡಿಯಾಗಿ ಬೆಸೆದುಕೊಳ್ಳುತ್ತ ಹಬ್ಬುತ್ತಿದೆಯೇ ಹೊರತು ನಿಸ್ತಂತುವಾಗಿಯಲ್ಲ!

ಭಾರತ ಅನೇಕ ಪ್ರದೇಶಗಳ ಒಕ್ಕೂಟ. ಹಾಗಾಗಿ ಭಾರತ ಈ ಎಲ್ಲಾ ಪ್ರದೇಶಗಳ ಪ್ರಾದೇಶಿಕತೆ ಅಸ್ಮಿತೆಯನ್ನು ಸಮತೋಲಿತವಾಗಿ ಕಾಪಾಡಿಕೊಂಡು ಹೋಗಬೇಕೆಂದು ಬಯಸುವುದು ಪ್ರಾದೇಶಿಕತೆಗಾಗಿ ಹೋರಾಡುತ್ತಿರುವವರಲ್ಲದೆ ಸರ್ಕಾರಗಳ ಆಶಯ ಕೂಡ.

ಆದರೆ ಈ ಅನುಷ್ಠಾನದಲ್ಲಿ ಸಾಕಷ್ಟು ವ್ಯತ್ಯಯಗಳಾಗಿವೆ, ಆಗುತ್ತಿವೆ. ಇದಕ್ಕೆ ಕಾರಣಗಳು ಭಾಷೆ, ಜಾತಿಗಳ ಪ್ರಾಮುಖ್ಯತೆಗೆ ಮಾಡುವ ಸಂಚುಗಳು, ಪಾಲಿಸಿಗಳನ್ನು ಮಾಡುವವರ ಅಜ್ಞಾನ, ರಾಜಕೀಯ, ಭ್ರಷ್ಟಾಚಾರ ಇನ್ನು ಹತ್ತು ಹಲವಾರಿವೆ. ಈ ತಾರತಮ್ಯವನ್ನು ನಿವಾರಿಸಿಕೊಳ್ಳಲು ಆಯಾಯ ಪ್ರದೇಶದ ಸ್ಥಳೀಯ ಪಕ್ಷಗಳು ಹೆಚ್ಚಾಗಿ ರಾಜಕೀಯವಾಗಿ ಕೇಂದ್ರದ ಆಡಳಿತದಲ್ಲಿ ಭಾಗವಾಗಬೇಕು ಎಂಬುದು ಬಹುಪಾಲು ಪ್ರಾದೇಶಿಕತೆಗೆ ಹೋರಾಡುತ್ತಿರುವವರ ಅಭಿಪ್ರಾಯ. ಆದರೆ ಈ ಪ್ರಾದೇಶಿಕ ಪಕ್ಷಗಳು ಆ ತಾರತಮ್ಯಗಳನ್ನು ಹೇಗೆ ನಿವಾರಿಸಿಯಾವು? ಅದೂ ಅವುಗಳು ಕೂಡ ಅದೇ ಸಂಚು, ಜಾತಿ, ಭ್ರಷ್ಟಾಚಾರದ ಮೂಟೆಗಳೇ ಆಗಿರುವ ನಿದರ್ಶನಗಳಿರುವಾಗ!

ಇಲ್ಲಿ ಅಧಿಕಾರ ಬದಲಾದರೂ ವ್ಯವಸ್ಥೆ ಬದಲಾಗದು. ಎಲ್ಲಿಯವರೆಗೆ ನಿಯಂತ್ರಣ ಮತ್ತು ಸಮತೋಲಿತ ವ್ಯವಸ್ಥೆಗಳು ರೂಪುಗೊಳ್ಳವೋ ಅಲ್ಲಿಯವರೆಗೆ ಈ ಪರಿಸ್ಥಿತಿ ಬದಲಾಗದು. ಹಾಗಾಗಿ ಸಮಸ್ಯೆಯ ಮೂಲವಾದ ವ್ಯವಸ್ಥೆ ಸರಿಯಾಗಬೇಕೇ ಹೊರತು ಅಧಿಕಾರವಲ್ಲ.

ಇನ್ನು ಪ್ರಾದೇಶಿಕತೆಗಾಗಿ ಹೋರಾಡುತ್ತಿರುವವರಲ್ಲೇ ಅದರ ಬಗ್ಗೆ ಸ್ಪಷ್ಟ ಕಲ್ಪನೆಯಿಲ್ಲ. ಉದಾಹರಣೆಗೆ ಕನ್ನಡದ ಪ್ರಾದೇಶಿಕತೆಗಾಗಿ ಹೋರಾಡುತ್ತಿರುವವರು ರಾಷ್ಟ್ರೀಯತೆಯ ವಿರುದ್ಧವಾಗಿ ಉದ್ದುದ್ದ ಭಾಷಣಗಳನ್ನು ಮಾಡುತ್ತಾರೆ. ಕರ್ನಾಟಕದ ನೆಲ ಜಲ ಭಾಷೆಗೆ ರಾಷ್ಟ್ರೀಯತೆಯಿಂದ ಹೇಗೆ ಧಕ್ಕೆಯಾಗುತ್ತದೆ ಎಂದು ನಿದರ್ಶನಗಳನ್ನು ಕೊಡುತ್ತಾರೆ.

ಈಗ ಅದೇ ಪ್ರಾದೇಶಿಕತೆಯ ನಿಲುವು ಮತ್ತು ದೃಷ್ಟಿಕೋನದಿಂದ ಉತ್ತರ ಕರ್ನಾಟಕವನ್ನು ನೋಡಿದಾಗ ಉತ್ತರ ಕರ್ನಾಟಕ ಬೇರೆ ರಾಜ್ಯವಾಲೇಬೇಕು ಎನಿಸುತ್ತದೆ. ಹಾಗೆಂದೊಡನೆ ನಿಮ್ಮನ್ನು ತೀವ್ರಗಾಮಿಗಳೆಂದು ಬಿಂಬಿಸಿ ಅಖಂಡ ಕರ್ನಾಟಕದ ಬಗ್ಗೆ ಉದ್ದುದ್ದಲಾಗಿ ಅಡ್ಡಡ್ಡಲಾಗಿ ಭಾಷಣ, ಆಕ್ರಮಣಗಳನ್ನೇ ಮಾಡಿಬಿಡುತ್ತಾರೆ ಈ ಪ್ರಾದೇಶಿಕತೆಯ ಹೋರಾಟಗಾರರು. ಅಲ್ಲಿಗೆ ಅವರ ತತ್ವಗಳೇ ದ್ವಂದ್ವ ನಿಲುವುಗಳಿಂದ ಕೂಡಿದೆ ಎಂದರ್ಥ.

ಏಕೆಂದರೆ ಈ ಪ್ರಾದೇಶಿಕತೆಯ ಹೋರಾಟ ಹುಟ್ಟಿದ್ದು ಬೆಂಗಳೂರು ಮೂಲದ, ವಲಸಿಗರ ಕಿರಿಕಿರಿಯಿಂದ ದ್ವೇಷಾಸೂಯೆಗಳ ಹಿನ್ನೆಲೆಯಲ್ಲಿ. ಕರ್ನಾಟಕ ಏಕೀಕರಣದ ಹೋರಾಟದ ಹಿನ್ನೆಲೆಯೇ ಬೇರೆ. ಆ ಹೋರಾಟಕ್ಕೂ, ಈಗಿನ ಪ್ರಾದೇಶಿಕತೆಯ ಹೋರಾಟಕ್ಕೂ ಒಂದಿನಿತೂ ಸಂಬಂಧವಿಲ್ಲ. ಏಕೀಕರಣದ ಉದಾತ್ತ ನಿಲುವಿಗೂ ಈಗಿನ ಸಂಕುಚಿತ ನಿಲುವಿಗೂ ಅಜಗಜಾಂತರ ವ್ಯತ್ಯಾಸವಿದೆ. ಆ ವ್ಯತ್ಯಾಸವಿರುವುದರಿಂದಲೇ ಕರ್ನಾಟಕದ ಪ್ರಾದೇಶಿಕ ಪಕ್ಷವೊಂದು ಬೆಂಗಳೂರಿನ ಆಜುಬಾಜು ಭಾಗಗಳಲ್ಲಿ ಮಾತ್ರ ಬಲವಾಗಿರಲು ಒಂದು ಕಾರಣವಾಗಿದೆ.

ಆ ಸಂಕುಚಿತ ಹೋರಾಟಕ್ಕೆ ಬೆಂಬಲ ಬಯಸಿ ಇಂದಿನ ಪ್ರಾದೇಶಿಕ ಹೋರಾಟಕ್ಕೂ ಮತ್ತು ಏಕೀಕರಣಕ್ಕೂ ಸಮೀಕರಿಸಿ ಕತೆ ಕಟ್ಟುತ್ತಾರೆ. ಹಾಗಾಗಿಯೇ ಈ ಪ್ರಾದೇಶಿಕ ಹೋರಾಟ ಬೆಂಗಳೂರಿನ ಆಚೆಗೆ ವೃದ್ಧಿಗೊಂಡಿಲ್ಲವೆನಿಸುತ್ತದೆ. ಯಾವುದೇ ಕನ್ನಡ ಹೋರಾಟಗಳ ಹೇರಿಕೆಯಿಲ್ಲದೆ ದಾವಣಗೆರೆ, ಹುಬ್ಬಳ್ಳಿಗಳ ಮಾರ್ವಾಡಿಗಳು ಅಲ್ಲಿನ ಪ್ರಾದೇಶಿಕ ಸೊಗಡಿನ ಕನ್ನಡ ಮಾತನಾಡಿದರೆ, ಕನ್ನಡ ಹೋರಾಟದ ಹೇರಿಕೆಯ ಪ್ರಭಾವದ ಬೆಂಗಳೂರಿನಲ್ಲಿ ಅಪ್ಪಟ ಕನ್ನಡಿಗರ ಸಂತತಿ ಕನ್ನಡ ಚಾನೆಲ್ಲುಗಳ ಉದ್ಘೋಷಕರಂತೆ ಮಾತನಾಡುತ್ತದೆ.

ಈ ಅಸಮತೋಲನವನ್ನು ಅರಿಯುವ ಯಾವುದೇ ಪ್ರಯತ್ನ ಮಾಡದೇ ಅಂಧಾಭಿಮಾನದಲ್ಲಿ ಭಾಷೆಗಳನ್ನು, ಪ್ರಾದೇಶಿಕ ಸೊಗಡನ್ನು ಬೆಳೆಸಲಾದೀತೆ!?

ಹಾಗೊಂದು ವೇಳೆ ಬೆಳೆಸಲು ಪ್ರಯತ್ನಿಸಿದರೆ ಅದು ಇಂದಿನ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಮತ್ತು ಜೆಡಿಎಸ್ ಪಕ್ಷಗಳಂತಾಗುತ್ತದೆ!