ಜಾತಿ ಅಸ್ಮಿತೆ, ಧರ್ಮ ಮೌಢ್ಯ!

ಇಂದು ಅಂಬೇಡ್ಕರ್ ಕವಚ ಧರಿಸಿ ನಾನು ಹಿಂದೂ ಅಲ್ಲ, ದಲಿತ, ಒಕ್ಕಲಿಗ, ಲಿಂಗಾಯತ ಮುಂತಾಗಿ "ಜಾತಿಯನ್ನು ಒಪ್ಪುವ", ಆದರೆ "ಧರ್ಮವನ್ನು ಒಪ್ಪದ" ಪ್ರಜ್ಞಾವಂತರ ನಿಲುವೇ ಬಹುಪಾಲು ದೇಶದ ಜನರ ನಿಲುವು ಕೂಡಾ ಆಗಿದ್ದಿತು.

ಆದರೆ ಸ್ವತಃ ತಾವೇ ನಂಬದ ಮತ್ತು ಇದು ಒಂದು ಧರ್ಮವೇ ಎಂದು ಹೀಗಳೆದಿದ್ದುದನ್ನು ಧರ್ಮವಾಗಿಸಿ, ಜಾತಿ ಅಸ್ಮಿತೆಯನ್ನು ನಂಬಿಕೊಂಡವರನ್ನು ಕಾನೂನಾತ್ಮಕವಾಗಿ ಹಿಂದೂ ಧರ್ಮದಲ್ಲಿ ಸೇರಿಸಿ ಬಂಧಿಸಿಟ್ಟದ್ದು ಅಂಬೇಡ್ಕರರೇ.

ಸಂಸ್ಕೃತಿಯನ್ನು ಧರ್ಮದ ಚೌಕಟ್ಟಿಗೆ ಸೀಮಿತಗೊಳಿಸಿ, ಆದರೊಳಗೆ ಎಲ್ಲಾ ಜಾತಿಗಳನ್ನು ಸೇರಿಸಿ ಕೃತಕವಾಗಿ ಧಾರ್ಮಿಕ ಬಹುಸಂಖ್ಯಾತರನ್ನಾಗಿಸಿ ಹಿಂದೂ ಬಿಲ್ ಜಾರಿಗೊಳಿಸಿದ್ದುದು ತಾತ್ವಿಕ ದ್ವಂದ್ವಕ್ಕೆ ಸಿಲುಕಿಯೋ ಅಥವಾ ಒತ್ತಡಕ್ಕೆ ಸಿಲುಕಿಯೋ ಗೊತ್ತಿಲ್ಲ.

ಸ್ಪಷ್ಟತೆಯಿರದ ದ್ವಂದ್ವ ನಿಲುವುಗಳು ಒಮ್ಮೊಮ್ಮೆ ಮಹಾನ್ ದೂರದರ್ಶಿಗಳನ್ನೂ ದಾರಿ ತಪ್ಪಿಸಿಬಿಡುತ್ತವೆ.

ಇಂದು ಅಂಬೇಡ್ಕರರನ್ನು ಕವಚ ಮಾಡಿಕೊಂಡವರು, ನಾನು ಇಂತಹ ಜಾತಿ ಅಸ್ಮಿತೆಯವನು ಆದರೆ ಹಿಂದೂ ಅಲ್ಲ ಎನ್ನುವುದರ ಮೂಲಕ ಅಂಬೇಡ್ಕರ್ ಅವರ ಹಿಂದೂ ಬಿಲ್ ಅನ್ನು ತಿರಸ್ಕರಿಸುತ್ತಿದ್ದಾರೆ. ಅಂದರೆ ಪರೋಕ್ಷವಾಗಿ ಅವಮಾನಿಸುತ್ತಿದ್ದಾರೆಂದಲ್ಲವೇ!

ಈ ರೀತಿ ಅಂಬೇಡ್ಕರರನ್ನು ಪರೋಕ್ಷವಾಗಿ ತಿರಸ್ಕರಿಸುತ್ತ ಆದರೆ ಅವರನ್ನು ಕವಚವಾಗಿ ಬಳಸಿಕೊಳ್ಳುವ ಸೊಗಲಾಡಿಗಳಿಗಿಂತ, ಆ ಬಿಲ್ಲಿನ ಬಗ್ಗೆ ಉಸಿರೆತ್ತಿದ ಬಲಪಂಥೀಯ ಭೈರಪ್ಪನವರ ನಿಲುವು ಸ್ಪಷ್ಟತೆಯಿಂದ ಕೂಡಿದೆ ಎನಿಸುತ್ತದೆ. ಅಂದ ಹಾಗೆ ಭೈರಪ್ಪ ದನಿ ಎತ್ತಿರುವುದು ಈ ಹಿಂದೂ ಬಿಲ್ ಕುರಿತಾಗಿಯೇ ಹೊರತು ಒಟ್ಟಾರೆ ಸಂವಿಧಾನದ ಕುರಿತಲ್ಲ. ಏಕೆಂದರೆ ಅವರು ಆಕ್ಷೇಪಿಸಿರುವ ವಿಷಯಗಳೆಲ್ಲವೂ ಈ ಬಿಲ್ ಕುರಿತಾಗಿವೆ.

ಹಾಗೆಂದೊಡನೆಯೇ ನಾನು ಭೈರಪ್ಪನವರ ನಿಲುವನ್ನು ಸಮರ್ಥಿಸುತ್ತೇನೆಂದಲ್ಲ. ಅವರ ಸ್ಪಷ್ಟತೆಯನ್ನೂ ಮತ್ತವರ ವಿರೋಧಿಗಳಲ್ಲಿನ ದ್ವಂದ್ವವನ್ನೂ ಗುರುತಿಸುತ್ತಿದ್ದೇನೆ.

ಏಕೆಂದರೆ ಈ ರೀತಿಯ ದ್ವಂದ್ವಗಳ ಕುರಿತು ಪ್ರಶ್ನಿಸುವುದನ್ನು ಇಂದು ಜನಿವಾರಿಗಳೆಂದು ಬ್ರ್ಯಾಂಡಿಸಿ ಹೀಯಾಳಿಕೆಗೆ ಗುರಿಪಡಿಸಿ ದಮನಿಸಲಾಗುತ್ತದೆ. ಯಾವ ಸಂವಿಧಾನವನ್ನು ರಚಿಸಿ ಪ್ರಶ್ನಿಸುವುದನ್ನು ಅಂಬೇಡ್ಕರ್ ಪ್ರೋತ್ಸಾಹಿಸಿದ್ದರೋ ಈಗ ಅವರ ಕವಚದ ಅಡಿಯಲ್ಲೇ ಪ್ರಶ್ನಿಸುವವರನ್ನು ವ್ಯವಸ್ಥಿತವಾಗಿ ದಮನಿಸಲಾಗುತ್ತದೆ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: