ಆಕ್ಟ್ 1978 ನಿರ್ದೇಶಕರೂ ಮತ್ತವರ ಬಾಲಂಗೋಚಿಗಳು!

 ಫೇಸ್ಬುಕ್ ಸ್ನೇಹಿತರಲ್ಲದವರು ನನ್ನನ್ನು ಟ್ಯಾಗ್ ಮಾಡಿದರೆ ಅದು ನನಗೆ ಬಾರದೆ ಬೇರೆಯವರ ಮುಖಾಂತರ ಆ ಕುರಿತು ತಿಳಿದುಕೊಳ್ಳಬೇಕು. ಹಾಗೆ ನೆನ್ನೆ ನನಗೆ ಸಿಕ್ಕಿದ ಅಭೂತಪೂರ್ವ ಖ್ಯಾತಿ ತಡವಾಗಿ ತಿಳಿಯಿತು. ಆದರೂ ಆ ಖ್ಯಾತಿಯನ್ನು ಗಳಿಸಿಕೊಟ್ಟ ಬುದ್ಧಿಜೀವಿಗಳಿಗೆ ಮತ್ತು ಆಕ್ಟ್ 1978 ಚಲನಚಿತ್ರ ನಿರ್ದೇಶಕರಿಗೆ ವಂದನೆಗಳು! 💐


ಅವರಿಗೆ ನನ್ನ ಉತ್ತರ ಹೀಗಿದೆ:


ನಾನು ಪಿಯುಸಿ ಇದ್ದಾಗ ಕೆಂಪು ಪಟ್ಟಿ ಆಡಳಿತದ ಬಗ್ಗೆ "ತಬರನ ಕತೆ" ಎಂಬ ಅದ್ಭುತ ಸಿನೆಮಾವನ್ನು ನೋಡಿದ್ದೆ.  ನಂತರದ ಮೂವತ್ತೈದು ವರ್ಷಗಳಲ್ಲಿ ಸಿನೆಮಾ ರಂಗವಲ್ಲದೆ ಸಮಾಜ ಸಾಕಷ್ಟು ಶೈಕ್ಷಣಿಕವಾಗಿ ಆರ್ಥಿಕವಾಗಿ ತಂತ್ರಜ್ಞಾನ, ಹೊಸತನ, ಕ್ರಿಯಾಶೀಲತೆಯನ್ನು ಕಂಡುಕೊಂಡಿದೆ. 


ಹಾಗೆಯೇ ರಾಜಾ ಕಾಲುವೆಗಳಲ್ಲಿಯೂ ಸಾಕಷ್ಟು ಕೊಚ್ಚೆ ಹರಿದುಹೋಗಿದೆ!


ಇತ್ತೀಚೆಗೆ ಅದೇ ಕೆಂಪು ಪಟ್ಟಿ ಆಡಳಿತಶಾಹಿ ಕತೆಯನ್ನು ಹೊಂದಿದ ಆಕ್ಟ್ 1978 ಎಂಬ ಸಿನೆಮಾವನ್ನು, ತಬರನ ಕತೆ ಚಿತ್ರವನ್ನು ಒಂದು ಬೆಂಚ್ಮಾರ್ಕ್ ಆಗಿಸಿಕೊಂಡು ನೋಡಿದೆ.  ಕಳೆದ ಮೂವತ್ತೈದು ವರ್ಷಗಳ ಈ ಎಲ್ಲಾ ತಂತ್ರಜ್ಞಾನ, ಶೈಕ್ಷಣಿಕ ಉನ್ನತಿ, ಪ್ರಗತಿಯ ನಡುವೆ ಸಹ ಈ ಹೊಸ ಸಿನೆಮಾ ಆ ಬೆಂಚ್ಮಾರ್ಕಿನ ಸನಿಹಕ್ಕೂ ಇರಲಿಲ್ಲ! ಇದು ನನ್ನ ವೈಯಕ್ತಿಕ ಅನಿಸಿಕೆ.


ಆದರೆ ನನ್ನಂತಹ ಶ್ರೀಸಾಮಾನ್ಯ ಅತ್ಯಂತ ಗೌರವದಿಂದ "ಆದರ್ಶ ವ್ಯಕ್ತಿ"ಗಳಾಗಿ ನೋಡುವ ಕ್ರಿಯಾಶೀಲ ಎಡಪಂಥೀಯ ಚಿಂತಕರು ಈ ಸಿನೆಮಾವನ್ನು ಅಭೂತಪೂರ್ವವಾಗಿ ಹೊಗಳಿ ಸಿನೆಮಾ ಮಂದಿರಗಳಲ್ಲಿ ಹೋಗಿ ನೋಡಿ ಎಂದು ಕೊರೋನಾ ದುರಿತ ಕಾಲದಲ್ಲಿಯೂ ಜನರನ್ನು ಪ್ರಚೋದಿಸಿ ಕೊರೋನಾ ಹೆಚ್ಚಳಕ್ಕೆ ಬೀಜ ಬಿತ್ತಿ, ನಂತರ ದಿಲ್ಲಿ ರೈತ ಚಳುವಳಿಗೆ ಬೆಂಬಲ ತೋರಿ ದೇಶಾದ್ಯಂತ ರ್ಯಾಲಿ ಆಯೋಜಿಸಿ ರಾಜ್ಯ ಸಾರಿಗೆ ಮುಷ್ಕರ ಬೆಂಬಲಿಸಿ ಕೊರೋನಾಕ್ಕೆ ನೀರೆರೆದರು. 


ಆಕ್ಟ್ 1978 ಸಿನೆಮಾವನ್ನು ಹೆಚ್ಚು ಜನ ನೋಡದಿದ್ದರೂ, ಈ ಸಿನೆಮಾ ಜನರು ಥಿಯೇಟರುಗಳಿಗೆ ಹೋಗಿ ಸಿನೆಮಾ ನೋಡಲು ಮುನ್ನುಡಿ ಬರೆದಿತ್ತು. ಮನೆಯಲ್ಲಿಯೇ ಇದ್ದು ಜೋಂಪು ಹತ್ತಿದ್ದ ಜನ ನಿರಾಳವಾಗಿ ಸಂಚರಿಸಲಾರಂಭಿಸಿದರು.


ಅದಲ್ಲದೆ ಮಾನ್ಯ ಪ್ರಧಾನಿಗಳು ಸಹ ಭಾರತ ಕೊರೋನಾವನ್ನು ಜಯಿಸಿತು ಎಂದು ಘೋಷಿಸಿದರು.


ನಂತರ ಬಲ ಪಂಥೀಯರು ಕುಂಭಮೇಳದಿಂದ ಇನ್ನಷ್ಟು ಕೊರೋನಾ ಪೊರೆದು, ಚುನಾವಣೆಗಳನ್ನು ನಡೆಸಿ ಎಡದೊಂದಿಗೆ  ಜಂಟಿಯಾಗಿ ಮತ್ತಷ್ಟು ನಿರಾಳವಾಗಿ ಎರಡನೇ ಅಲೆಗೆ ಕಾರಣರಾದರು.


ಎಡಪಂಥದ ಬುದ್ಧಿಜೀವಿ ಚಿಂತಕರು ಮತ್ತು ಬಲದ ಬಲಾಢ್ಯರು ಹೀಗೆ ಕೊರೋನಾ ದೇಶದಲ್ಲಿಯೇ ಇಲ್ಲ ಎಂದು ಸಾಬೀತು ಪಡಿಸುತ್ತಿರುವಾಗ ಶ್ರೀಸಾಮಾನ್ಯ ತಾನೇ ಏನು ಮಾಡಿಯಾನು? 


ನಾನೂ ಒಬ್ಬ ಶ್ರೀಸಾಮಾನ್ಯ! ನನ್ನೆಲ್ಲಾ ಸಾಮಾಜಿಕ ಫೇಸ್ಬುಕ್ ಬರಹಗಳು ಶ್ರೀಸಾಮಾನ್ಯನ ಸಮಸ್ಯೆಯ ಕುರಿತಾಗಿವೆಯೇ ಹೊರತು ಯಾವುದೇ ಅಂತರರಾಷ್ಟ್ರೀಯ ವೈಜ್ಞಾನಿಕ, ಸಂಕೀರ್ಣ ಮನೋಶಾಸ್ತ್ರ ಯಾ ಗಣಕದ ಕಬ್ಬಿಣದ ಕಡಲೆಯದಲ್ಲ. ಅಥವಾ ಅಮೆರಿಕಾ ದಿ ಗ್ರೇಟ್ ಎಂದು ವಿದೇಶಗಳ ಮೇಲರಿಮೆಯ ಕುರಿತು ಬರೆದವಲ್ಲ. ಅಲ್ಲಿರುವುದು ಭಾರತೀಯ ಶ್ರೀಸಾಮಾನ್ಯನ ಕಳಕಳಿ ಮಾತ್ರ.


ಪ್ರಧಾನಿಗಳ ಘೋಷಣೆ, ಬುದ್ಧಿಜೀವಿಗಳ ಬುದ್ದಿ, ಬಲಾಢ್ಯರ ಅಗೋಚರ ಶಕ್ತಿ ಮತ್ತು ಶ್ರೀಸಾಮಾನ್ಯನ ನಿರಾಳತೆ, ಆಗಷ್ಟೇ ವಿದೇಶದಿಂದ ಇಳಿದು ಎರಡೆರಡು ಮಾಸ್ಕ್ ಹಾಕುವ ನನ್ನಂಥವನನ್ನೂ ಮಾಸ್ಕ್ ರಹಿತನನ್ನಾಗಿಸಿತು. 


ಈ ಕುರಿತು ನನ್ನ ಪೋಸ್ಟ್  ಹೀಗಿತ್ತು:


https://m.facebook.com/story.php?story_fbid=4414048255276592&id=100000143845586


ಮದುವೆಗಳು ಸಾಂಗವಾಗಿ, ಚುನಾವಣೆಗಳು ವೈಭವವಾಗಿ, ರ್ಯಾಲಿಗಳು, ಮುಷ್ಕರಗಳು ಸಾಂಗೋಪಾಂಗವಾಗಿ ಎಲ್ಲೆಲ್ಲೂ ನೆರವೇರುತ್ತಿದ್ದವು. ಇಡೀ ದೇಶವೇ ಕೊರೋನಾ ಗೆದ್ದಾಗಿದೆ ಎಂದು ಸಂಭ್ರಮಿಸುತ್ತಿರುವಾಗ ಅದರ ನಡುವೆ ನನ್ನ ಪುಸ್ತಕ ಸಮಾರಂಭ ಸಹ ಎಲ್ಲರೊಳಗೊಂದಾಗಿ ಇತರೆಲ್ಲಾ ಸಮಾರಂಭಗಳಲ್ಲಿ ಒಂದಾಗಿ ಏಪ್ರಿಲ್ 4 ರಂದು ಜರುಗಿತು. 


ಇದರ ವಿಡಿಯೋವನ್ನು ಸಾಕಷ್ಟು ಬುದ್ಧಿಜೀವಿ ಹಿತೈಷಿಗಳು ಹಂಚಿಕೊಂಡು ಹೆಚ್ಚಿನ ಪ್ರಚಾರ ಕೊಟ್ಟು ಸಹಕರಿಸಿದ್ದಾರೆ. ಅವರಿಗೆಲ್ಲಾ ಒಂದೊಂದು ಟಕೀಲ ಶಾಟ್ ಕುಡಿಸಬೇಕು. ಅದರಲ್ಲೂ ಏಪ್ರಿಲ್ 30ರ ಕೊರೋನಾ ಅಂಕಿಅಂಶ ಮತ್ತು ಲಾಕ್ಡೌನ್ ನಿಯಮಗಳು ಏಪ್ರಿಲ್ 4ರಲ್ಲೇ ಇದ್ದವೆಂಬಂತೆ ಕ್ರಿಯಾಶೀಲ ಅಂಕಿಸಂಖ್ಯೆಗಳನ್ನು ಸೃಜಿಸಿರುವ ದಾದಾ ಕಲಂದರಿ ಮತ್ತು ಕೆಲವರಿಗೆ ಭೂರಿ ಭೋಜನವನ್ನೇ ಹಾಕಿಸಬೇಕು.


ಇರಲಿ, ನನ್ನ ಕಾರ್ಯಕ್ರಮ ಮುಗಿದು ಹತ್ತು ದಿನಗಳ ನಂತರ ಇದೇ ಚಿಂತಕರು ಎರಡನೇ ಸಾರಿಗೆ ಮುಷ್ಕರಕ್ಕೆ ಬೆಂಬಲಿಸಿ ಜನ ಟೆಂಪೋ ಟ್ರ್ಯಾಕ್ಸ್ ಗಳಲ್ಲಿ ಕುರಿಗಳಂತೆ ತುಂಬಿಕೊಂಡು ಹೋಗುವಂತೆ ಮಾಡಿದರು. ಆಗ ಕೊರೋನಾ ಬೆಂಗಳೂರನ್ನು ಆಕ್ರಮಿಸಿಕೊಳ್ಳಲಾರಂಭಿಸಿತ್ತು. ಅಲ್ಲಿಂದ ಕೊರೋನಾ ಏರತೊಡಗಿದ್ದು ಈಗ ಇಲ್ಲಿಗೆ ಬಂದಿದೆ.  


ಅಕ್ಷರಶಃ ನಾನು ಸಹ ಭಾರತ ಕೊರೋನಾ ಗೆದ್ದಾಗಿದೆ ಎಂದು ನಂಬಿಬಿಟ್ಟಿದ್ದೆ. ಹಾಗೆ ನಂಬಲು ಕಾರಣಗಳೇನು ಎಂದು ವಿಶ್ಲೇಷಿಸಿದಾಗ ಗುಂಪಾಗಿ ಜನ ಸೇರಿ ಸಿನೆಮಾ ನೋಡಲು ಪ್ರಚೋದಿಸಿದಲ್ಲಿಂದ ಹಿಡಿದು ಚುನಾವಣೆಗಳವರೆಗಿನ ಎಲ್ಲರನ್ನೂ, ಎಲ್ಲವನ್ನೂ ಕಾರಣವಾಗಿಸಿ ಸಂಕ್ಷಿಪ್ತವಾಗಿ ಒಂದು ಪೋಸ್ಟ್ ಹಾಕಿದ್ದೆ.


ಅದರ ಲಿಂಕ್ ಇಲ್ಲಿದೆ:


https://m.facebook.com/story.php?story_fbid=4606492259365523&id=100000143845586


ಆದರೆ ಈ ಪೋಸ್ಟಿನ ಆಳವನ್ನು ಅರಿಯದೆ ಮೇಲೆ ಮೇಲೆ ಕೆದರಿ ಕೆಲ ಕ್ರಿಯಾಶೀಲ, ಬುದ್ಧಿಜೀವಿ ಉದಾರವಾದಿ ಚಿಂತಕರು ನನ್ನ ಪುಸ್ತಕ ಬಿಡುಗಡೆಗೆ ನಾನೇ ಮಾಡಿ ಹಾಕಿದ್ದ ಫೋಟೋ ಸಂಗ್ರಹದ ವಿಡಿಯೋ ನೋಡಿ ನನ್ನ ಜೀವನಶೈಲಿ, ರಸಮಯ ಕ್ಷಣಗಳನ್ನು ಹಾಡಿ ಆಡಿ ಖುದ್ದು ಊಹಿಸಿಕೊಂಡು ಸೃಜನಶೀಲ ಲೋಕದಲ್ಲಿ ನನ್ನನ್ನು ತೂರಿ ತಮ್ಮ ಮಹಾ ಮಡಿಯ ಪಾವಿತ್ರ್ಯತೆಯನ್ನು ತೋರಿದ್ದಾರೆ. ಅಲ್ಲಿರುವುದು ತಮ್ಮ ತಪ್ಪನ್ನು ಮರೆಮಾಚಿಕೊಳ್ಳುವ ಟ್ರೋಲ್ ಯತ್ನವೇ ಹೊರತು ಯಾವುದೇ ವಿಶೇಷ ವಿಶ್ಲೇಷಣೆಯಲ್ಲ!


ಎರಡನೇ ಅಲೆಗೂ ಮುನ್ನ ಶ್ರೀಸಾಮಾನ್ಯ ಕೊರೋನಾ ಜಾಗರೂಕತೆಗಳನ್ನು ಗಾಳಿಗೆ ತೂರಲು ಇವರೆಲ್ಲರ, ಇದೆಲ್ಲದುದರ ಕೊಡುಗೆ ಸಾಕಷ್ಟಿದೆ. ನಮ್ಮ ಸಿನೆಮಾ ನವೆಂಬರಿನಲ್ಲಿ ಬಂದಿತ್ತು, ದಿಲ್ಲಿ ರೈತ ಚಳುವಳಿ ಆಗಿ ಎಷ್ಟೋ ತಿಂಗಳಾಗಿದ್ದವು ಎಂದೆಲ್ಲಾ ಹೇಳುವ ಇವರು ಹಾಗಿದ್ದರೆ ಎರಡನೇ ಅಲೆಯು ದಿಢೀರನೆ ಇಂಥಲ್ಲಿಂದಲೇ ಉದ್ಭವವಾಯಿತು ಎಂದು ಹೇಳಬಲ್ಲರೆ?! ಒಂದನೇ ಅಲೆಯಲ್ಲಿದ್ದ ಟ್ರ್ಯಾಕಿಂಗ್ ಎರಡರಲ್ಲಿ ಏಕಿರಲಿಲ್ಲ?


ಏಕೆಂದರೆ  ಕೊರೋನಾವನ್ನು ಗೆದ್ದಾಗಿದೆ ಎಂದು ಇಡೀ ದೇಶವೇ ನಂಬಿತ್ತು. ಅಷ್ಟರ ಮಟ್ಟಿಗೆ ಸಾಮಾಜಿಕ ಅಂತರ ಕೆಡಲು ಇವರೆಲ್ಲರ ಪ್ರಚೋದನೆ ಕಾರಣವಾಗಿತ್ತು.


ನಮ್ಮ ಚಿತ್ರ ಏನು ಮಾಡಿತ್ತು ಎಂದು ನನ್ನನ್ನು ಟ್ಯಾಗ್ ಮಾಡಿ ಕೇಳಿದ ಆಕ್ಟ್ 1978 ಸಿನೆಮಾ ನಿರ್ದೇಶಕರಿಗೆ ಉತ್ತರ ಇಲ್ಲಿ ಸಿಕ್ಕಿರಬೇಕು. ಇಲ್ಲಿ ನಿಮ್ಮ ಚಿತ್ರದ ಮೂಲಕ ಕೊರೋನಾ ಹಂಚಿದಿರಿ ಎಂದಲ್ಲ. ಜನ ಮೈಮರೆತು ಗುಂಪುಗೂಡಲು ನಿಮ್ಮ ಚಿತ್ರ ಪ್ರದರ್ಶನ ಬುನಾದಿ ಹಾಕಿತು. ಅದಕ್ಕೆ ಚಿಂತಕರು, ಬುದ್ಧಿಜೀವಿಗಳು ಜಾಥಾ ರೀತಿಯಲ್ಲಿ ಇದೇ ಫೇಸ್ಬುಕ್ನಲ್ಲಿ ಪ್ರಚಾರ ಕೊಟ್ಟು ಸಹಕರಿಸಿದರು. ಇನ್ನು ನನ್ನ ಈ ಲೇಖನದಲ್ಲಿ ನನ್ನನ್ನು ಟ್ಯಾಗ್ ಮಾಡಿ ಹಾಡಿ ಪ್ರಚಾರ ಕೊಟ್ಟ ಚಿಂತಕರಿಗೂ ಉತ್ತರವಿರುವುದರಿಂದ ಈ ಇಡೀ ಲೇಖನ ನಿಮಗೆ ಅನ್ವಯವಾಗವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವೆಂದುಕೊಂಡಿದ್ದೇನೆ.


ಇನ್ನು ನನ್ನ ಕಾರ್ಯಕ್ರಮಕ್ಕೆ ಬಂದಿದ್ದ ಒಬ್ಬರಿಗೂ ಕೊರೋನಾ ಬಂದಿಲ್ಲ. ಇಬ್ಬರಿಗೆ ನನ್ನ ಕಾರ್ಯಕ್ರಮ ಮುಗಿದ ಮೂರು ವಾರಗಳ ನಂತರ ಬಂದಿದೆ. ಅದು ಎಲ್ಲಿಂದ ಬಂದಿತೆಂಬ ಮೂಲವೂ ಅವರಿಗೆ ಗೊತ್ತಿದೆ. ಅಂತಹ ಡೇಟಾಬೇಸ್ ನನ್ನಲ್ಲಿದೆ. ಟ್ರೋಲ್ ಮಾಡಿದ ಚಿಂತಕರಿಗೆ ಎರಡನೇ ಅಲೆ ಎಲ್ಲಿಂದ ಆರಂಭವಾಯಿತು ಎಂಬ ಮಾಹಿತಿ ಇದೆಯೇ?


ಸ್ತ್ರೀ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಇತ್ಯಾದಿ ಬಡಬಡಾಯಿಸುವ ಈ ಪ್ರಗತಿಪರರು, ನನ್ನ ರ ಠ ಈ ಕ ಪುಸ್ತಕ ಓದಿ ಅಭಿಪ್ರಾಯ ಹಾಕಿದ ಮಹಿಳೆಯನ್ನು ಅವಹೇಳನಕ್ಕೀಡುಮಾಡಿದ್ದಾರೆ.  ಏಕೆ ಆ ಮಹಿಳೆ ತನಗೆ ಬೇಕೆನಿಸಿದ ಪುಸ್ತಕ ಓದಬಾರದೆ? ಇದೇ ರೀತಿ ಹಿಂದೊಮ್ಮೆ ಇನ್ನೋರ್ವ ಮಹಿಳೆಗೆ ಸಹ ಆತನನ್ನು ಓದಬಾರದು ಎಂದು ಫರ್ಮಾನು ಹೊರಡಿಸಿ ಬಹಿಷ್ಕಾರ ಹಾಕಿದ್ದರು. ನನ್ನನ್ನು ಬಲಪಂಥೀಯನೆಂದು ಬ್ರ್ಯಾಂಡಿಸಿ ದಿವಂಗತ ಖ್ಯಾತ ಸಾಹಿತಿಯೋರ್ವರನ್ನು ಎಡಪಂಥವೆಂದು ಬ್ರ್ಯಾಂಡಿಸಿ, ನಾನು ಮಾಡಿದ ಅವರ ಕೃತಿಯ ಇಂಗ್ಲಿಷ್ ಅನುವಾದ ಪ್ರಕಟವಾಗಬಾರದೆಂದು ಫರ್ಮಾನು ಹೊರಡಿಸಿದ್ದರು.


ಆದರೂ ಇವರು ಪ್ರಗತಿಪರರು, ಚಿಂತಕರು!!!


ನನ್ನ ಮದಿರಾ ರಸಸ್ವಾದದ ಬಗ್ಗೆ ಈರ್ಷೆ ತೋರುವ ಈ ಎಡ ಉದಾರವಾದಿ ಚಿಂತಕರು ಯಾವಾಗಿನಿಂದಲೋ ತಮ್ಮ ವಿರೋಧಿ ಬಲದ ಗರ್ಭಗುಡಿಯ ತೀರ್ಥದ ಪಾವಿತ್ರ್ಯಕ್ಕೆ, ಜಾತೀಯತೆಗೆ, ಪಂಥನಿಷ್ಠೆಗೆ ಶರಣಾಗಿದ್ದಾರೆ. ಅವೆಲ್ಲವೂ ಅವರದೇ ಆದ ವಿಧದಲ್ಲಿ ಜಾರಿಯಿವೆ. ತಮ್ಮ ಪಂಥದೊಳಗಿನ ಮಂದಿ ಕೊಂಚ ಬೇಲಿ ದಾಟಿದರೋ ಅವರನ್ನು ಈ ಮಹಿಳಾ ಓದುಗರನ್ನು ಟ್ರೋಲ್ ಮಾಡಿದಂತೆ ಟ್ರೋಲ್ ಮಾಡಿ ಹಾಕುತ್ತಾರೆ. 


ಇಂತಹ ಚಿಂತಕ ಚಿಂತಾಮಣಿಗಳನ್ನು ಸೃಷ್ಟಿಸಿದ ಬ್ರಹ್ಮ, ನಿಂಗೆ ಜೋಡಿಸ್ತೀನಿ ಎಂಡಾ ಮುಟ್ಟುದ್ ಕೈನ!


ಇರಲಿ, ಮೂವತ್ತೈದು ವರ್ಷಗಳ ಹಿಂದಿನ ತಬರನ ಕತೆ ಏಕೆ ಇನ್ನೂ ಕನ್ನಡ ಸಿನೆಮಾ ಮಾಡುವಿಕೆಯಲ್ಲಿ ಮೈಲುಗಲ್ಲಾಗಿದೆ ಎಂಬುದಕ್ಕೂ ಮತ್ತು ಆಕ್ಟ್ 1978ನ್ನು ಹಾಡಿ ಹೊಗಳಿದ ಆದರ್ಶವಾದಿ, ಬುದ್ಧಿಜೀವಿ, ಕ್ರಿಯಾಶೀಲ ಚಿಂತಕರು ಇಂದಿನ ಸಮಾಜದ ಶೈಕ್ಷಣಿಕ, ತಾಂತ್ರಿಕ, ಆರ್ಥಿಕ, ಕ್ರಿಯಾತ್ಮಕ ಪ್ರಗತಿ(?)ಯ ಸಂಕೇತವೂ ಆಗಿ ಭಾರತವನ್ನು ಹೇಗೆ ಪ್ರಕಾಶಿಸುತ್ತಿದ್ದಾರೆಯೋ ಗೊತ್ತಿಲ್ಲ. ನನ್ನ ಹ್ಯಾಷ್ಟ್ಯಾಗನ್ನಂತೂ ಹೆಚ್ಚು ಪ್ರಕಾಶಿಸುತ್ತಿದ್ದಾರೆ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮೋದಿ ಮತ್ತು ಭ್ರಷ್ಟಾಚಾರ

 ನನ್ನ ತೋಟದ ತೆಂಗು ಮತ್ತು ಗೋಡಂಬಿ ಗಿಡಗಳ ನಡುವೆ ಕೃಷಿ ಕೆಲಸಕ್ಕೆ ಮಿನಿ ಟ್ರಾಕ್ಟರ್ ಬೇಕಿತ್ತು. ಹಾಗಾಗಿ ಒಂದು ಹೊಸ ಟ್ರಾಕ್ಟರ್ ಖರೀದಿಸಿದೆ. ಡೀಲರ್ ಅದನ್ನು ರಿಜಿಸ್ಟರ್ ಮಾಡಿಸಲು ನಾನು ಕೃಷಿ ಜಮೀನಿನ ಮಾಲೀಕ ಎಂಬ ಬೊನಫೈಡ್ ಸರ್ಟಿಫಿಕೇಟ್ ಬೇಕು. ಇಲ್ಲದಿದ್ದರೆ ಕಮರ್ಷಿಯಲ್ ವಾಹನವಾಗಿ ರಿಜಿಸ್ಟರ್ ಆಗುತ್ತದೆ ಎಂದ. ಟ್ರಾಕ್ಟರ್ ಕೊಳ್ಳುವ ಕೃಷಿಕ ತನ್ನ ಒಡೆತನದ ಜಮೀನಿನ ಪಹಣಿಯನ್ನು ಗ್ರಾಮಲೆಕ್ಕಿಗನಿಗೆ ತೋರಿಸಿ ಈ ಸರ್ಟಿಫಿಕೇಟ್ ಪಡೆಯಬೇಕಿತ್ತು. ಇಲ್ಲಿ ಪ್ರಶ್ನೆ ಏನೆಂದರೆ ಪಹಣಿ ಎಂಬ ದಾಖಲೆಯೇ ಕೃಷಿ ಜಮೀನಿನ ಮಾಲೀಕ ಎಂದು ಸಾಬೀತು ಪಡಿಸುವ ದಾಖಲೆಯಾಗಿದ್ದು ಮತ್ತದನ್ನು ಇದೇ ಗ್ರಾಮಲೆಕ್ಕಿಗನ ಕಛೇರಿಯೇ ಕೊಟ್ಟಿರುತ್ತದೆ. ಹಾಗಿದ್ದಾಗ ಈ ಬೊನಫೈಡ್ ಎಂಬ ಮತ್ತೊಂದು ಪದರ ಏಕೆ? 

ಅಧಿಕಾರಶಾಹಿಯ ಒಂದು ಸ್ಯಾಂಪಲ್ ಹೀಗೆ ನನ್ನ ಅನುಭವವಾಯಿತು. ಐನೂರು ಕಕ್ಕದೆ, ಗ್ರಾಮಲೆಕ್ಕಿಗನೆಂಬೋ ಅಧಿಕಾರಶಾಹಿಯ ಮುಂದೆ ಸೊಂಟ ಬಗ್ಗಿಸದೆ ಇದು ಲಭ್ಯವಾಗದು.

ನಮ್ಮ ಮನೆಯಲ್ಲಿ ಎರಡು ಕಾರುಗಳಿವೆ. ಅದರಲ್ಲಿ ಒಂದು ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್. ಅದನ್ನು ನಾನು ಭಾರತಕ್ಕೆ ಬಂದಾಗ ಮಾತ್ರ ಓಡಿಸುವುದು ಬಿಟ್ಟರೆ ಮತ್ಯಾರೂ ಉಪಯೋಗಿಸುವುದಿಲ್ಲ. ಕಳೆದ ವರ್ಷ ಸರ್ವಿಸ್ ಮಾಡಿಸಿ ಎಮಿಷನ್ ಟೆಸ್ಟ್ ಮಾಡಿಸಿ ಇಟ್ಟು ಬಂದಿದ್ದನ್ನು ಆಗಾಗ್ಗೆ ಸ್ಟಾರ್ಟ್ ಮಾಡಿ ಒಂದೈವತ್ತು ಮೈಲಿ ಓಡಿಸಿದ್ದು ಬಿಟ್ಟರೆ ಮತ್ತೆ ಅದನ್ನು ಮನೆಯಲ್ಲಿ ಬಳಸಿರಲಿಲ್ಲ.

ಮೊನ್ನೆ ಬಂದಾಗ ಅದನ್ನು ತೆಗೆದುಕೊಂಡು ದಾವಣಗೆರೆ ನಗರ ಪ್ರದಕ್ಷಿಣೆಗೆ ಹೊರಟೆ. ನನ್ನ ಬೆಂಗಳೂರು ನಂಬರ್ ಪ್ಲೇಟ್ ನೋಡಿ ಪೊಲೀಸ್ ಕೈ ಹಾಕಿಯೇ ಬಿಟ್ಟ. 

ಲೈಸೆನ್ಸ್, ರಿಜಿಸ್ಟ್ರೇಷನ್, ಇನ್ಸುರೆನ್ಸ್, ಎಮಿಷನ್ ಎಲ್ಲಾ ಆತನ ಕೈಗಿಟ್ಟೆ. 


"ಎಮಿಷನ್ ಎಕ್ಸ್ಪೈರಿ ಆಗೇತಲ್ಲ ಸಾ" ಎಂದ. 

"ಹೌದ! ಸಾರಿ, ಈಗಷ್ಟೇ ಗಾಡಿ ಹೊರಗ ತಗದಿನಿ, ಒಂದು ವರ್ಷದ ಮ್ಯಾಲ. ಬೇಕಾರ ಎಮಿಷನ್ ರಿಪೋರ್ಟ್ ಮೇಲಿರೋ ಮೈಲೇಜು ಮತ್ತ ಗಾಡಿ ಮೈಲೇಜ್ ನೋಡ್ರಿ. ಓಡಿಯೇ ಇಲ್ಲ ಗಾಡಿ! ಈಗ ಎಮಿಷನ್ ಮಾಡಿಸ್ತೀನಿ ತಗಳ್ರಿ ಹಂಗಾರ" ಎಂದೆ.

"ಅಯ್ಯೋ ಹೌದಲ್ಲ ಸಾ. ಇದು ಭಾಳ ಫೈನ್ ಅಕ್ಕತಿ. ಒಂದು ಕೆಲ್ಸ ಮಾಡ್ರಿ. ಐನೂರು ರೂಪಾಯಿ ಕೊಡ್ರಿ. ಇದ್ದುದ್ದರಾಗ ಒಂದು ಕಡಿಮಿ ಫೈನಿಂದು ರಸೀದಿ ಹರಿತನಿ" ಎಂದು ಐನೂರು ತೆಗೆದುಕೊಂಡು ಎಕ್ಸ್ಟ್ರಾ ಪ್ಯಾಸೆಂಜರ್ ಎಂದು ಇನ್ನೂರಕ್ಕೆ ರಸೀದಿ ಹರಿದುಕೊಟ್ಟ.

ಅಷ್ಟರ ಮಟ್ಟಿಗೆ ಪೊಲೀಸರು ಸ್ನೇಹಮಯಿಯಾಗಿದ್ದಾರೆ. 

ನಾ ಖಾವುಂಗ, ನಾ ಖಾನೇ ದುಂಗಾ ಮತ್ತು 

ಸಬ್ ಕಾ ಸಾಥ್, ಸಬ್ ಕೆ ವಿಕಾಸ್ ಎಂಬ

ಎಂಬ ಬಿಜೆಪಿ ಧುರೀಣನ ಮಂತ್ರ, 

ಕಾಂಗ್ರೆಸ್ಸಿನ ಸರ್ವರಿಗೂ ಸಮಪಾಲು ಎಂಬ ಬೀಜಮಂತ್ರ, live and let live ಎಂಬ ಸಮಾಜವಾದದ ತಂತ್ರಗಳು ಜಂಟೀ ಮಂತ್ರವಾಗಿ ಜನರು ಅಳವಡಿಸಿಕೊಂಡಿದ್ದರು. ಇದರಿಂದ ನಾನೇಕೆ ಹೊರಗಿರಲಿ ಎಂದು ಸುಮ್ಮನಾದೆ.

ನಂತರ ಹತ್ತಿರದ ಎಮಿಷನ್ ಪರೀಕ್ಷಾ ಕೇಂದ್ರಕ್ಕೆ ತೆರಳಿ ಮ್ಯಾಕ್ಸಿಮಮ್ ಎಷ್ಟು ಸಾಧ್ಯವೋ ಅಷ್ಟಕ್ಕೇ ನವೀಕರಿಸಿ ಕೊಡಿ ಎಂದೆ. ಅದಕ್ಕೆ ಆತ ಆರು ತಿಂಗಳು ಇಲ್ಲ ಒಂದು ವರ್ಷ ಅಷ್ಟೇ ಇರುವುದು ಎಂದ. ಸರಿ ಎಂದು ಒಂದು ವರ್ಷಕ್ಕೆ ನವೀಕರಿಸಿಕೊಂಡೆ.

ಈ ಎಮಿಷನ್ ನಿಯಮ ಮಾಡುವವರು ನಿಯಮ ರೂಪಿಸುವ ಮುನ್ನ ಸಮಯ, ಮೈಲೇಜು, ಮಾಡೆಲ್(ವರ್ಷ), ಎಂಜಿನ್ (ಪೆಟ್ರೋಲೇ, ಡೀಸೆಲ್ಲೇ) ಮತ್ತಿತರೆ ಆಯಾಮಗಳನ್ನೇಕೆ ಪರಿಗಣಿಸುವುದಿಲ್ಲ!? ಆ ಆಯಾಮಗಳು ಮತ್ತು ಎಮಿಷನ್ ಫಲಿತಾಂಶದ ಶ್ರೇಣಿಯ ಮೇಲೆ ಆರು ತಿಂಗಳು, ಒಂದು ವರ್ಷ, ಎರಡು ವರ್ಷ ಹೀಗೆ ನವೀಕರಿಸುವ ಶ್ರೇಣಿಯನ್ನು ಆಯೋಜಿಸಬಹುದಲ್ಲವೇ!

ಇಲ್ಲ. ಹಾಗಾಗಿಬಿಟ್ಟರೆ ಜನ ಸೊಂಟ ಬಗ್ಗಿಸಿ, ಡೊಗ್ಗು ಸಲಾಮು ಹೊಡೆದು ಮೇಲೆ ಲಂಚ ಕೊಡದೆ, ದಂಡ ಕಟ್ಟದೆ ಸರ್ವತಂತ್ರ ಸ್ವತಂತ್ರರಾಗಿರಲು ಭಾರತವೇನು ಸರ್ವತಂತ್ರ ಸ್ವತಂತ್ರ ರಾಷ್ಟ್ರವೇ? ಕಮ್ಯುನಿಸ್ಟ್ ಅಲ್ಲದಿದ್ದರೂ ಕೆಂಪುಪಟ್ಟಿ ಆಡಳಿತವೇ ಭಾರತೀಯ ಪ್ರಜಾಪ್ರಭುತ್ವವಾಗಿದೆಯಲ್ಲವೇ!

ಮೋದಿ ಬಂದ ಮೇಲೆ ನಿಯಮಗಳೆಲ್ಲವೂ ಸರಳವಾಗಿ, ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂಬಂತಾಗಿದೆ ಎಂಬುದನ್ನು ನಾನೂ ನಂಬಿ ತೇಲುತ್ತಿದ್ದೆ. ಮೇಲಿನ ನನ್ನ ಶ್ರೀಸಾಮಾನ್ಯನ ಎರಡು ಅನುಭವಗಳು ಮೋದಿ ಸರಳೀಕರಿಸಿದ್ದು ಏನನ್ನು, ಯಾರಿಗೆ ಎಂಬ ಪ್ರಶ್ನೆಯೊಂದಿಗೆ "ಯಾರಿಗೆ ಬಂತು, ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ?" ಎಂಬ ಹಳೆಯ ಪ್ರಶ್ನೆಯನ್ನು ನವನವೀಕರಿಸಿತು. 

ಉಳಿದಂತೆ ಮೋದಿ ಕಂ ಕೊರೋನಾ ಕಾಲದ ಆಸ್ಪತ್ರೆಗಳ ಶೋಷಣೆ, ಭ್ರಷ್ಟಾಚಾರ ಜಗಜ್ಜಾಹೀರೇ ಆಗಿದೆ.

ಒಟ್ಟಿನಲ್ಲಿ ಹರ ಹರ ಮೋದಿ, ಭರ ಭರ ಭೇ...!

ಹಾಂ, ಉಚ್ಚೆ ಹುಯ್ದು ಹುಲುಸಾಗಿ ತೋಟ ಬೆಳೆಸಿದ್ದ ಮಾನ್ಯ ಗಧಕರಿಯವರು ಈಗ ಉಚ್ಚೆ ಹುಯ್ದು ಎಮಿಷನ್ ಇಲ್ಲದಂತೆ ಓಡುವ ಗಾಡಿಯ ಆವಿಷ್ಕಾರದಲ್ಲಿದ್ದಾರಂತೆ. (ಪರ್ಯಾಯ ಸರ್ವಿಸ್ ರಸ್ತೆಯಿಲ್ಲದೆ ದಶಕಗಳಿಂದ ಟೋಲ್ ವಸೂಲಿ ಮಾಡುತ್ತಿರುವ ಹೆದ್ದಾರಿ ದರೋಡೆಕೋರರಿಗೆ ಇವರೇ ಸ್ಪೀಡ್ ಪಾಸ್ ಕಡ್ಡಾಯಗೊಳಿಸುವ ಮೂಲಕ ದರೋಡೆಗೆ ಹೆಚ್ಚಿನ ಬಲ ತಂದುಕೊಟ್ಟಿದ್ದಾರೆ).

ಇದಕ್ಕೆ ಪ್ರತಿಸ್ಪರ್ಧಿಯಾಗಿ ಬಾಬಾರವರು ಗೋಮೂತ್ರದಿಂದ ಪದೋನ್ನತಿ ಪಡೆದು ಪೆಟ್ರೋಲ್ ಬದಲು ಮನುಜಮೂತ್ರದಿಂದ ಓಡುವ ಗಾಡಿಗಳ ಆವಿಷ್ಕಾರದಲ್ಲಿ ತೊಡಗಿರಬಹುದೇನೋ!

ಒಟ್ಟಿನಲ್ಲಿ ಮೂತ್ರ, ಭೇ... ಹುಲಿಗ್ಯೋ, ಹುಲಿಗ್ಯೋ!

ಕೋಡಗನ್ನ ಕೋಳಿ ನುಂಗಿತ್ತಾ ನೋಡವ್ವ ತಂಗಿ... ಎಂಬ ಈ ಕಾಲವನ್ನು ಶರೀಫ ಅಂದೇ ಕಾಲಜ್ಞಾನಿಯಾಗಿ ಹಾಡಿದ್ದ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಲೋಲುಪ್ತ ಮೋದಿ

 ಎಸ್.ಎಂ. ಕೃಷ್ಣ ಬೆಂಗಳೂರನ್ನು ಸಿಂಗಾಪುರ ಮಾಡ್ತೀನಿ ಎಂದು ರಿಯಲ್ ಎಸ್ಟೇಟ್ ಬಬಲ್ ಸೃಷ್ಟಿಗೆ ಕಾರಣರಾದರು. ಈ ಬಬಲ್ಲಿನಲ್ಲಿ ಸೋನಿಯಾ ಅಳಿಯನಷ್ಟೇ ಅಲ್ಲ, ಅರ್ಧ ಎಕರೆ ಬೋರೇಗೌಡ ಸಹ ಹೊಲ ಮಾರಿಕೊಂಡು ಲೋಲುಪ್ತನಾಗಿ ತೇಲಿದ.

ಮೋದಿ, ದೇಶದೊಳಗಿನ ಕಪ್ಪುಹಣ ಗುಡಿಸಿ ಹಾಕಬಹುದಾಗಿದ್ದ ನೋಟ್ ಬ್ಯಾನ್ ನಂತರ ಹೆಚ್ಚಿನ ಹಣ ಹಾಕಿದ ಖಾತೆಗಳ ಆಡಿಟ್ ಮಾಡಿಸದೆ ತಿಪ್ಪೆ ಸಾರಿಸಿದರು. ದೇಶವಾಗಲೇ ವಿಶ್ವಗುರು ಆಗಿದೆ ಎಂದು ಬಡ್ಡಿ ದರವನ್ನು ಈಗ ಕ್ರಮವಾಗಿ ಶೂನ್ಯಕ್ಕೆ ತರುತ್ತಿದ್ದಾರೆ.  ಇದರಿಂದ ಬಂಡವಾಳ ಸೃಷ್ಟಿಯಾಗುವುದು ನಿಂತು ಮತ್ತದೇ ರಿಯಲ್ ಎಸ್ಟೇಟ್ ಬಬಲ್ ಜೊತೆಗೆ ಹಣದುಬ್ಬರ, ಬೆಲೆಯೇರಿಕೆಗಳು ಮತ್ತಷ್ಟು ಹಿಗ್ಗುತ್ತಿವೆ. ಒಟ್ಟಾರೆ ನವಕೋಟಿ ನಾರಾಯಣನೂ ಈಗ ದರಿದ್ರ ನಾರಾಯಣನಾಗುತ್ತಿದ್ದಾನೆ.  

ಕೆಲವು ಆಫ್ರಿಕಾ ದೇಶಗಳಲ್ಲಿ ರದ್ದಿ ಪೇಪರ್ ಬಂಡಲ್ಲುಗಳಂತೆ ಹಣವನ್ನು ಹೊತ್ತುಕೊಂಡು ತರಕಾರಿ ತರಲು ಹೋಗುತ್ತಾರೆ.  ದೂರಗಾಮಿಗಳಾದ ಪ್ರಧಾನಿಗಳು ಬಹುಶಃ

ಅದನ್ನು ಮನಗಂಡೇ ಭವಿಷ್ಯದಲ್ಲಿ ತನ್ನ ನಾಗರಿಕರು ಆ ರೀತಿ ರೂಪಾಯಿಯ ಬಂಡಲ್ಲುಗಳನ್ನು ಹೊರದಿರಲಿ ಎಂದು "ಕ್ಯಾಷ್ ಲೆಸ್" ಇಕಾನಮಿಗೆ ಒತ್ತು ಕೊಟ್ಟಿರಬಹುದು.

ಇನ್ನು ಮಾಹಿತಿ ತಂತ್ರಜ್ಞಾನದ ಗುರುವೆಂದು ಬೀಗುವ ದೇಶದ ಆಡಳಿತ, ತನ್ನ ನಾಗರೀಕರ ಆಧಾರ್ ಕಾರ್ಡನ್ನು ಫೇಸ್ಬುಕ್ಕಿನಂತಹ ಸಾಮಾಜಿಕ ಮಾಧ್ಯಮ ತಾಣದ ಖಾತೆಗೂ ಜೋಡಿಸುತ್ತಿದೆ, ಫೇಸ್ಬುಕ್ ಬೇಡವೆಂದಿದ್ದರೂ ಸಹ! ಆಧಾರ್ ಅಂತಹ ಕಾರ್ಡಿನ ಗೋಪ್ಯತೆ, ಭದ್ರತೆಯನ್ನು ಹೀಗೆ ಸಾರಾಸಗಟಾಗಿ ಬೇಡವಾದ ಕಡೆಯಲ್ಲೆಲ್ಲಾ ಜೋಡಿಸುವ ಘನ ಉದ್ದೇಶವೇನು?! ಚೈನಾ ಮಾಡುತ್ತಿರುವುದು ಸಹ ಇದೇ.

ಬಹುಪರಾಕು (ಬಲ), ಬರೀ ಪುಕಾರು (ಎಡ) ಬಿಟ್ಟು ವಾಸ್ತವಿಕವಾಗಿ ಚಿಂತಿಸಿ. Dig deep, my friends. Dig deep!

ನೀರ ಮೇಲಣ ಗುಳ್ಳೆ ಒಡೆಯುವ ಸಮಯ ಹತ್ತಿರವಿದೆಯೋ ಅಥವಾ ಬಂಡಲ್ಲುಗಳನ್ನು ಹೊರಲು ಬೆನ್ನು ಮೂಳೆಯನ್ನು ಹುರಿಗಟ್ಟಿಸಬೇಕೋ ಆ 56 ಇಂಚಿನ ಗುರುವಿನ ಗುರು ವಿಶ್ವಗುರುವೇ ಬಲ್ಲ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ