ಆಕ್ಟ್ 1978 ನಿರ್ದೇಶಕರೂ ಮತ್ತವರ ಬಾಲಂಗೋಚಿಗಳು!

 ಫೇಸ್ಬುಕ್ ಸ್ನೇಹಿತರಲ್ಲದವರು ನನ್ನನ್ನು ಟ್ಯಾಗ್ ಮಾಡಿದರೆ ಅದು ನನಗೆ ಬಾರದೆ ಬೇರೆಯವರ ಮುಖಾಂತರ ಆ ಕುರಿತು ತಿಳಿದುಕೊಳ್ಳಬೇಕು. ಹಾಗೆ ನೆನ್ನೆ ನನಗೆ ಸಿಕ್ಕಿದ ಅಭೂತಪೂರ್ವ ಖ್ಯಾತಿ ತಡವಾಗಿ ತಿಳಿಯಿತು. ಆದರೂ ಆ ಖ್ಯಾತಿಯನ್ನು ಗಳಿಸಿಕೊಟ್ಟ ಬುದ್ಧಿಜೀವಿಗಳಿಗೆ ಮತ್ತು ಆಕ್ಟ್ 1978 ಚಲನಚಿತ್ರ ನಿರ್ದೇಶಕರಿಗೆ ವಂದನೆಗಳು! 💐


ಅವರಿಗೆ ನನ್ನ ಉತ್ತರ ಹೀಗಿದೆ:


ನಾನು ಪಿಯುಸಿ ಇದ್ದಾಗ ಕೆಂಪು ಪಟ್ಟಿ ಆಡಳಿತದ ಬಗ್ಗೆ "ತಬರನ ಕತೆ" ಎಂಬ ಅದ್ಭುತ ಸಿನೆಮಾವನ್ನು ನೋಡಿದ್ದೆ.  ನಂತರದ ಮೂವತ್ತೈದು ವರ್ಷಗಳಲ್ಲಿ ಸಿನೆಮಾ ರಂಗವಲ್ಲದೆ ಸಮಾಜ ಸಾಕಷ್ಟು ಶೈಕ್ಷಣಿಕವಾಗಿ ಆರ್ಥಿಕವಾಗಿ ತಂತ್ರಜ್ಞಾನ, ಹೊಸತನ, ಕ್ರಿಯಾಶೀಲತೆಯನ್ನು ಕಂಡುಕೊಂಡಿದೆ. 


ಹಾಗೆಯೇ ರಾಜಾ ಕಾಲುವೆಗಳಲ್ಲಿಯೂ ಸಾಕಷ್ಟು ಕೊಚ್ಚೆ ಹರಿದುಹೋಗಿದೆ!


ಇತ್ತೀಚೆಗೆ ಅದೇ ಕೆಂಪು ಪಟ್ಟಿ ಆಡಳಿತಶಾಹಿ ಕತೆಯನ್ನು ಹೊಂದಿದ ಆಕ್ಟ್ 1978 ಎಂಬ ಸಿನೆಮಾವನ್ನು, ತಬರನ ಕತೆ ಚಿತ್ರವನ್ನು ಒಂದು ಬೆಂಚ್ಮಾರ್ಕ್ ಆಗಿಸಿಕೊಂಡು ನೋಡಿದೆ.  ಕಳೆದ ಮೂವತ್ತೈದು ವರ್ಷಗಳ ಈ ಎಲ್ಲಾ ತಂತ್ರಜ್ಞಾನ, ಶೈಕ್ಷಣಿಕ ಉನ್ನತಿ, ಪ್ರಗತಿಯ ನಡುವೆ ಸಹ ಈ ಹೊಸ ಸಿನೆಮಾ ಆ ಬೆಂಚ್ಮಾರ್ಕಿನ ಸನಿಹಕ್ಕೂ ಇರಲಿಲ್ಲ! ಇದು ನನ್ನ ವೈಯಕ್ತಿಕ ಅನಿಸಿಕೆ.


ಆದರೆ ನನ್ನಂತಹ ಶ್ರೀಸಾಮಾನ್ಯ ಅತ್ಯಂತ ಗೌರವದಿಂದ "ಆದರ್ಶ ವ್ಯಕ್ತಿ"ಗಳಾಗಿ ನೋಡುವ ಕ್ರಿಯಾಶೀಲ ಎಡಪಂಥೀಯ ಚಿಂತಕರು ಈ ಸಿನೆಮಾವನ್ನು ಅಭೂತಪೂರ್ವವಾಗಿ ಹೊಗಳಿ ಸಿನೆಮಾ ಮಂದಿರಗಳಲ್ಲಿ ಹೋಗಿ ನೋಡಿ ಎಂದು ಕೊರೋನಾ ದುರಿತ ಕಾಲದಲ್ಲಿಯೂ ಜನರನ್ನು ಪ್ರಚೋದಿಸಿ ಕೊರೋನಾ ಹೆಚ್ಚಳಕ್ಕೆ ಬೀಜ ಬಿತ್ತಿ, ನಂತರ ದಿಲ್ಲಿ ರೈತ ಚಳುವಳಿಗೆ ಬೆಂಬಲ ತೋರಿ ದೇಶಾದ್ಯಂತ ರ್ಯಾಲಿ ಆಯೋಜಿಸಿ ರಾಜ್ಯ ಸಾರಿಗೆ ಮುಷ್ಕರ ಬೆಂಬಲಿಸಿ ಕೊರೋನಾಕ್ಕೆ ನೀರೆರೆದರು. 


ಆಕ್ಟ್ 1978 ಸಿನೆಮಾವನ್ನು ಹೆಚ್ಚು ಜನ ನೋಡದಿದ್ದರೂ, ಈ ಸಿನೆಮಾ ಜನರು ಥಿಯೇಟರುಗಳಿಗೆ ಹೋಗಿ ಸಿನೆಮಾ ನೋಡಲು ಮುನ್ನುಡಿ ಬರೆದಿತ್ತು. ಮನೆಯಲ್ಲಿಯೇ ಇದ್ದು ಜೋಂಪು ಹತ್ತಿದ್ದ ಜನ ನಿರಾಳವಾಗಿ ಸಂಚರಿಸಲಾರಂಭಿಸಿದರು.


ಅದಲ್ಲದೆ ಮಾನ್ಯ ಪ್ರಧಾನಿಗಳು ಸಹ ಭಾರತ ಕೊರೋನಾವನ್ನು ಜಯಿಸಿತು ಎಂದು ಘೋಷಿಸಿದರು.


ನಂತರ ಬಲ ಪಂಥೀಯರು ಕುಂಭಮೇಳದಿಂದ ಇನ್ನಷ್ಟು ಕೊರೋನಾ ಪೊರೆದು, ಚುನಾವಣೆಗಳನ್ನು ನಡೆಸಿ ಎಡದೊಂದಿಗೆ  ಜಂಟಿಯಾಗಿ ಮತ್ತಷ್ಟು ನಿರಾಳವಾಗಿ ಎರಡನೇ ಅಲೆಗೆ ಕಾರಣರಾದರು.


ಎಡಪಂಥದ ಬುದ್ಧಿಜೀವಿ ಚಿಂತಕರು ಮತ್ತು ಬಲದ ಬಲಾಢ್ಯರು ಹೀಗೆ ಕೊರೋನಾ ದೇಶದಲ್ಲಿಯೇ ಇಲ್ಲ ಎಂದು ಸಾಬೀತು ಪಡಿಸುತ್ತಿರುವಾಗ ಶ್ರೀಸಾಮಾನ್ಯ ತಾನೇ ಏನು ಮಾಡಿಯಾನು? 


ನಾನೂ ಒಬ್ಬ ಶ್ರೀಸಾಮಾನ್ಯ! ನನ್ನೆಲ್ಲಾ ಸಾಮಾಜಿಕ ಫೇಸ್ಬುಕ್ ಬರಹಗಳು ಶ್ರೀಸಾಮಾನ್ಯನ ಸಮಸ್ಯೆಯ ಕುರಿತಾಗಿವೆಯೇ ಹೊರತು ಯಾವುದೇ ಅಂತರರಾಷ್ಟ್ರೀಯ ವೈಜ್ಞಾನಿಕ, ಸಂಕೀರ್ಣ ಮನೋಶಾಸ್ತ್ರ ಯಾ ಗಣಕದ ಕಬ್ಬಿಣದ ಕಡಲೆಯದಲ್ಲ. ಅಥವಾ ಅಮೆರಿಕಾ ದಿ ಗ್ರೇಟ್ ಎಂದು ವಿದೇಶಗಳ ಮೇಲರಿಮೆಯ ಕುರಿತು ಬರೆದವಲ್ಲ. ಅಲ್ಲಿರುವುದು ಭಾರತೀಯ ಶ್ರೀಸಾಮಾನ್ಯನ ಕಳಕಳಿ ಮಾತ್ರ.


ಪ್ರಧಾನಿಗಳ ಘೋಷಣೆ, ಬುದ್ಧಿಜೀವಿಗಳ ಬುದ್ದಿ, ಬಲಾಢ್ಯರ ಅಗೋಚರ ಶಕ್ತಿ ಮತ್ತು ಶ್ರೀಸಾಮಾನ್ಯನ ನಿರಾಳತೆ, ಆಗಷ್ಟೇ ವಿದೇಶದಿಂದ ಇಳಿದು ಎರಡೆರಡು ಮಾಸ್ಕ್ ಹಾಕುವ ನನ್ನಂಥವನನ್ನೂ ಮಾಸ್ಕ್ ರಹಿತನನ್ನಾಗಿಸಿತು. 


ಈ ಕುರಿತು ನನ್ನ ಪೋಸ್ಟ್  ಹೀಗಿತ್ತು:


https://m.facebook.com/story.php?story_fbid=4414048255276592&id=100000143845586


ಮದುವೆಗಳು ಸಾಂಗವಾಗಿ, ಚುನಾವಣೆಗಳು ವೈಭವವಾಗಿ, ರ್ಯಾಲಿಗಳು, ಮುಷ್ಕರಗಳು ಸಾಂಗೋಪಾಂಗವಾಗಿ ಎಲ್ಲೆಲ್ಲೂ ನೆರವೇರುತ್ತಿದ್ದವು. ಇಡೀ ದೇಶವೇ ಕೊರೋನಾ ಗೆದ್ದಾಗಿದೆ ಎಂದು ಸಂಭ್ರಮಿಸುತ್ತಿರುವಾಗ ಅದರ ನಡುವೆ ನನ್ನ ಪುಸ್ತಕ ಸಮಾರಂಭ ಸಹ ಎಲ್ಲರೊಳಗೊಂದಾಗಿ ಇತರೆಲ್ಲಾ ಸಮಾರಂಭಗಳಲ್ಲಿ ಒಂದಾಗಿ ಏಪ್ರಿಲ್ 4 ರಂದು ಜರುಗಿತು. 


ಇದರ ವಿಡಿಯೋವನ್ನು ಸಾಕಷ್ಟು ಬುದ್ಧಿಜೀವಿ ಹಿತೈಷಿಗಳು ಹಂಚಿಕೊಂಡು ಹೆಚ್ಚಿನ ಪ್ರಚಾರ ಕೊಟ್ಟು ಸಹಕರಿಸಿದ್ದಾರೆ. ಅವರಿಗೆಲ್ಲಾ ಒಂದೊಂದು ಟಕೀಲ ಶಾಟ್ ಕುಡಿಸಬೇಕು. ಅದರಲ್ಲೂ ಏಪ್ರಿಲ್ 30ರ ಕೊರೋನಾ ಅಂಕಿಅಂಶ ಮತ್ತು ಲಾಕ್ಡೌನ್ ನಿಯಮಗಳು ಏಪ್ರಿಲ್ 4ರಲ್ಲೇ ಇದ್ದವೆಂಬಂತೆ ಕ್ರಿಯಾಶೀಲ ಅಂಕಿಸಂಖ್ಯೆಗಳನ್ನು ಸೃಜಿಸಿರುವ ದಾದಾ ಕಲಂದರಿ ಮತ್ತು ಕೆಲವರಿಗೆ ಭೂರಿ ಭೋಜನವನ್ನೇ ಹಾಕಿಸಬೇಕು.


ಇರಲಿ, ನನ್ನ ಕಾರ್ಯಕ್ರಮ ಮುಗಿದು ಹತ್ತು ದಿನಗಳ ನಂತರ ಇದೇ ಚಿಂತಕರು ಎರಡನೇ ಸಾರಿಗೆ ಮುಷ್ಕರಕ್ಕೆ ಬೆಂಬಲಿಸಿ ಜನ ಟೆಂಪೋ ಟ್ರ್ಯಾಕ್ಸ್ ಗಳಲ್ಲಿ ಕುರಿಗಳಂತೆ ತುಂಬಿಕೊಂಡು ಹೋಗುವಂತೆ ಮಾಡಿದರು. ಆಗ ಕೊರೋನಾ ಬೆಂಗಳೂರನ್ನು ಆಕ್ರಮಿಸಿಕೊಳ್ಳಲಾರಂಭಿಸಿತ್ತು. ಅಲ್ಲಿಂದ ಕೊರೋನಾ ಏರತೊಡಗಿದ್ದು ಈಗ ಇಲ್ಲಿಗೆ ಬಂದಿದೆ.  


ಅಕ್ಷರಶಃ ನಾನು ಸಹ ಭಾರತ ಕೊರೋನಾ ಗೆದ್ದಾಗಿದೆ ಎಂದು ನಂಬಿಬಿಟ್ಟಿದ್ದೆ. ಹಾಗೆ ನಂಬಲು ಕಾರಣಗಳೇನು ಎಂದು ವಿಶ್ಲೇಷಿಸಿದಾಗ ಗುಂಪಾಗಿ ಜನ ಸೇರಿ ಸಿನೆಮಾ ನೋಡಲು ಪ್ರಚೋದಿಸಿದಲ್ಲಿಂದ ಹಿಡಿದು ಚುನಾವಣೆಗಳವರೆಗಿನ ಎಲ್ಲರನ್ನೂ, ಎಲ್ಲವನ್ನೂ ಕಾರಣವಾಗಿಸಿ ಸಂಕ್ಷಿಪ್ತವಾಗಿ ಒಂದು ಪೋಸ್ಟ್ ಹಾಕಿದ್ದೆ.


ಅದರ ಲಿಂಕ್ ಇಲ್ಲಿದೆ:


https://m.facebook.com/story.php?story_fbid=4606492259365523&id=100000143845586


ಆದರೆ ಈ ಪೋಸ್ಟಿನ ಆಳವನ್ನು ಅರಿಯದೆ ಮೇಲೆ ಮೇಲೆ ಕೆದರಿ ಕೆಲ ಕ್ರಿಯಾಶೀಲ, ಬುದ್ಧಿಜೀವಿ ಉದಾರವಾದಿ ಚಿಂತಕರು ನನ್ನ ಪುಸ್ತಕ ಬಿಡುಗಡೆಗೆ ನಾನೇ ಮಾಡಿ ಹಾಕಿದ್ದ ಫೋಟೋ ಸಂಗ್ರಹದ ವಿಡಿಯೋ ನೋಡಿ ನನ್ನ ಜೀವನಶೈಲಿ, ರಸಮಯ ಕ್ಷಣಗಳನ್ನು ಹಾಡಿ ಆಡಿ ಖುದ್ದು ಊಹಿಸಿಕೊಂಡು ಸೃಜನಶೀಲ ಲೋಕದಲ್ಲಿ ನನ್ನನ್ನು ತೂರಿ ತಮ್ಮ ಮಹಾ ಮಡಿಯ ಪಾವಿತ್ರ್ಯತೆಯನ್ನು ತೋರಿದ್ದಾರೆ. ಅಲ್ಲಿರುವುದು ತಮ್ಮ ತಪ್ಪನ್ನು ಮರೆಮಾಚಿಕೊಳ್ಳುವ ಟ್ರೋಲ್ ಯತ್ನವೇ ಹೊರತು ಯಾವುದೇ ವಿಶೇಷ ವಿಶ್ಲೇಷಣೆಯಲ್ಲ!


ಎರಡನೇ ಅಲೆಗೂ ಮುನ್ನ ಶ್ರೀಸಾಮಾನ್ಯ ಕೊರೋನಾ ಜಾಗರೂಕತೆಗಳನ್ನು ಗಾಳಿಗೆ ತೂರಲು ಇವರೆಲ್ಲರ, ಇದೆಲ್ಲದುದರ ಕೊಡುಗೆ ಸಾಕಷ್ಟಿದೆ. ನಮ್ಮ ಸಿನೆಮಾ ನವೆಂಬರಿನಲ್ಲಿ ಬಂದಿತ್ತು, ದಿಲ್ಲಿ ರೈತ ಚಳುವಳಿ ಆಗಿ ಎಷ್ಟೋ ತಿಂಗಳಾಗಿದ್ದವು ಎಂದೆಲ್ಲಾ ಹೇಳುವ ಇವರು ಹಾಗಿದ್ದರೆ ಎರಡನೇ ಅಲೆಯು ದಿಢೀರನೆ ಇಂಥಲ್ಲಿಂದಲೇ ಉದ್ಭವವಾಯಿತು ಎಂದು ಹೇಳಬಲ್ಲರೆ?! ಒಂದನೇ ಅಲೆಯಲ್ಲಿದ್ದ ಟ್ರ್ಯಾಕಿಂಗ್ ಎರಡರಲ್ಲಿ ಏಕಿರಲಿಲ್ಲ?


ಏಕೆಂದರೆ  ಕೊರೋನಾವನ್ನು ಗೆದ್ದಾಗಿದೆ ಎಂದು ಇಡೀ ದೇಶವೇ ನಂಬಿತ್ತು. ಅಷ್ಟರ ಮಟ್ಟಿಗೆ ಸಾಮಾಜಿಕ ಅಂತರ ಕೆಡಲು ಇವರೆಲ್ಲರ ಪ್ರಚೋದನೆ ಕಾರಣವಾಗಿತ್ತು.


ನಮ್ಮ ಚಿತ್ರ ಏನು ಮಾಡಿತ್ತು ಎಂದು ನನ್ನನ್ನು ಟ್ಯಾಗ್ ಮಾಡಿ ಕೇಳಿದ ಆಕ್ಟ್ 1978 ಸಿನೆಮಾ ನಿರ್ದೇಶಕರಿಗೆ ಉತ್ತರ ಇಲ್ಲಿ ಸಿಕ್ಕಿರಬೇಕು. ಇಲ್ಲಿ ನಿಮ್ಮ ಚಿತ್ರದ ಮೂಲಕ ಕೊರೋನಾ ಹಂಚಿದಿರಿ ಎಂದಲ್ಲ. ಜನ ಮೈಮರೆತು ಗುಂಪುಗೂಡಲು ನಿಮ್ಮ ಚಿತ್ರ ಪ್ರದರ್ಶನ ಬುನಾದಿ ಹಾಕಿತು. ಅದಕ್ಕೆ ಚಿಂತಕರು, ಬುದ್ಧಿಜೀವಿಗಳು ಜಾಥಾ ರೀತಿಯಲ್ಲಿ ಇದೇ ಫೇಸ್ಬುಕ್ನಲ್ಲಿ ಪ್ರಚಾರ ಕೊಟ್ಟು ಸಹಕರಿಸಿದರು. ಇನ್ನು ನನ್ನ ಈ ಲೇಖನದಲ್ಲಿ ನನ್ನನ್ನು ಟ್ಯಾಗ್ ಮಾಡಿ ಹಾಡಿ ಪ್ರಚಾರ ಕೊಟ್ಟ ಚಿಂತಕರಿಗೂ ಉತ್ತರವಿರುವುದರಿಂದ ಈ ಇಡೀ ಲೇಖನ ನಿಮಗೆ ಅನ್ವಯವಾಗವುದಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವೆಂದುಕೊಂಡಿದ್ದೇನೆ.


ಇನ್ನು ನನ್ನ ಕಾರ್ಯಕ್ರಮಕ್ಕೆ ಬಂದಿದ್ದ ಒಬ್ಬರಿಗೂ ಕೊರೋನಾ ಬಂದಿಲ್ಲ. ಇಬ್ಬರಿಗೆ ನನ್ನ ಕಾರ್ಯಕ್ರಮ ಮುಗಿದ ಮೂರು ವಾರಗಳ ನಂತರ ಬಂದಿದೆ. ಅದು ಎಲ್ಲಿಂದ ಬಂದಿತೆಂಬ ಮೂಲವೂ ಅವರಿಗೆ ಗೊತ್ತಿದೆ. ಅಂತಹ ಡೇಟಾಬೇಸ್ ನನ್ನಲ್ಲಿದೆ. ಟ್ರೋಲ್ ಮಾಡಿದ ಚಿಂತಕರಿಗೆ ಎರಡನೇ ಅಲೆ ಎಲ್ಲಿಂದ ಆರಂಭವಾಯಿತು ಎಂಬ ಮಾಹಿತಿ ಇದೆಯೇ?


ಸ್ತ್ರೀ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಇತ್ಯಾದಿ ಬಡಬಡಾಯಿಸುವ ಈ ಪ್ರಗತಿಪರರು, ನನ್ನ ರ ಠ ಈ ಕ ಪುಸ್ತಕ ಓದಿ ಅಭಿಪ್ರಾಯ ಹಾಕಿದ ಮಹಿಳೆಯನ್ನು ಅವಹೇಳನಕ್ಕೀಡುಮಾಡಿದ್ದಾರೆ.  ಏಕೆ ಆ ಮಹಿಳೆ ತನಗೆ ಬೇಕೆನಿಸಿದ ಪುಸ್ತಕ ಓದಬಾರದೆ? ಇದೇ ರೀತಿ ಹಿಂದೊಮ್ಮೆ ಇನ್ನೋರ್ವ ಮಹಿಳೆಗೆ ಸಹ ಆತನನ್ನು ಓದಬಾರದು ಎಂದು ಫರ್ಮಾನು ಹೊರಡಿಸಿ ಬಹಿಷ್ಕಾರ ಹಾಕಿದ್ದರು. ನನ್ನನ್ನು ಬಲಪಂಥೀಯನೆಂದು ಬ್ರ್ಯಾಂಡಿಸಿ ದಿವಂಗತ ಖ್ಯಾತ ಸಾಹಿತಿಯೋರ್ವರನ್ನು ಎಡಪಂಥವೆಂದು ಬ್ರ್ಯಾಂಡಿಸಿ, ನಾನು ಮಾಡಿದ ಅವರ ಕೃತಿಯ ಇಂಗ್ಲಿಷ್ ಅನುವಾದ ಪ್ರಕಟವಾಗಬಾರದೆಂದು ಫರ್ಮಾನು ಹೊರಡಿಸಿದ್ದರು.


ಆದರೂ ಇವರು ಪ್ರಗತಿಪರರು, ಚಿಂತಕರು!!!


ನನ್ನ ಮದಿರಾ ರಸಸ್ವಾದದ ಬಗ್ಗೆ ಈರ್ಷೆ ತೋರುವ ಈ ಎಡ ಉದಾರವಾದಿ ಚಿಂತಕರು ಯಾವಾಗಿನಿಂದಲೋ ತಮ್ಮ ವಿರೋಧಿ ಬಲದ ಗರ್ಭಗುಡಿಯ ತೀರ್ಥದ ಪಾವಿತ್ರ್ಯಕ್ಕೆ, ಜಾತೀಯತೆಗೆ, ಪಂಥನಿಷ್ಠೆಗೆ ಶರಣಾಗಿದ್ದಾರೆ. ಅವೆಲ್ಲವೂ ಅವರದೇ ಆದ ವಿಧದಲ್ಲಿ ಜಾರಿಯಿವೆ. ತಮ್ಮ ಪಂಥದೊಳಗಿನ ಮಂದಿ ಕೊಂಚ ಬೇಲಿ ದಾಟಿದರೋ ಅವರನ್ನು ಈ ಮಹಿಳಾ ಓದುಗರನ್ನು ಟ್ರೋಲ್ ಮಾಡಿದಂತೆ ಟ್ರೋಲ್ ಮಾಡಿ ಹಾಕುತ್ತಾರೆ. 


ಇಂತಹ ಚಿಂತಕ ಚಿಂತಾಮಣಿಗಳನ್ನು ಸೃಷ್ಟಿಸಿದ ಬ್ರಹ್ಮ, ನಿಂಗೆ ಜೋಡಿಸ್ತೀನಿ ಎಂಡಾ ಮುಟ್ಟುದ್ ಕೈನ!


ಇರಲಿ, ಮೂವತ್ತೈದು ವರ್ಷಗಳ ಹಿಂದಿನ ತಬರನ ಕತೆ ಏಕೆ ಇನ್ನೂ ಕನ್ನಡ ಸಿನೆಮಾ ಮಾಡುವಿಕೆಯಲ್ಲಿ ಮೈಲುಗಲ್ಲಾಗಿದೆ ಎಂಬುದಕ್ಕೂ ಮತ್ತು ಆಕ್ಟ್ 1978ನ್ನು ಹಾಡಿ ಹೊಗಳಿದ ಆದರ್ಶವಾದಿ, ಬುದ್ಧಿಜೀವಿ, ಕ್ರಿಯಾಶೀಲ ಚಿಂತಕರು ಇಂದಿನ ಸಮಾಜದ ಶೈಕ್ಷಣಿಕ, ತಾಂತ್ರಿಕ, ಆರ್ಥಿಕ, ಕ್ರಿಯಾತ್ಮಕ ಪ್ರಗತಿ(?)ಯ ಸಂಕೇತವೂ ಆಗಿ ಭಾರತವನ್ನು ಹೇಗೆ ಪ್ರಕಾಶಿಸುತ್ತಿದ್ದಾರೆಯೋ ಗೊತ್ತಿಲ್ಲ. ನನ್ನ ಹ್ಯಾಷ್ಟ್ಯಾಗನ್ನಂತೂ ಹೆಚ್ಚು ಪ್ರಕಾಶಿಸುತ್ತಿದ್ದಾರೆ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: