ಪುಲ್ವಾಮಾ ಭಯೋತ್ಪಾದಕ ಕೃತ್ಯ


ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿಂದಿನ ಆತ್ಮಹತ್ಯಾ ಬಾಂಬರನಿಗೆ ಭಾರತೀಯ ಸೇನೆ ಒಂದೊಮ್ಮೆ ಅನವಶ್ಯಕವಾಗಿ ತೊಂದರೆ ಉಂಟುಮಾಡಿದ್ದರಿಂದ ಆತ ಭಯೋತ್ಪಾದಕನಾಗಿ ಇಂತಹ ಕುಕೃತ್ಯಕ್ಕೆ ಕೈ ಹಾಕಿದನೆಂಬ ಕಕ್ಕುಲಾತಿಯ ಕಳಕಳಿಯ ವಿಚಾರ ಈಗ ಅಲ್ಲಲ್ಲಿ ತೇಲಿಬರುತ್ತಿದೆ. 

ಇದು ಬೆಳೆಯುತ್ತಿರುವ ಯುವ ಮನಸ್ಸುಗಳ ಸಂಕೀರ್ಣತೆ ಎನ್ನಬಹುದು. ಇದಕ್ಕೆ ಮಾನಸಿಕ ತಜ್ಞರ ಚಿಕಿತ್ಸೆ ದೊರಕದೇ ಮೂಲಭೂತವಾದಿ  ಧಾರ್ಮಿಕ ಮುಖಂಡರು  ಗಳ ಚಿಕಿತ್ಸೆ ಸಿಕ್ಕಿದ್ದು ಈ ದುರಂತಕ್ಕೆ ಕಾರಣ ಎನ್ನುವ ಚಿಂತಕರು ಆ ಯುವಕನ ಮನೆ, ಪರಿಸರದಲ್ಲಿ ಮಾನಸಿಕ ತಜ್ಞರಿಗಿಂತ ಮೂಲಭೂತವಾದಿ ಧಾರ್ಮಿಕ ಮುಖಂಡರುಗಳೇ ಹೆಚ್ಚು ಅಪ್ಯಾಯಮಾನವಾಗಲು ಕಾರಣಗಳೇನು ಎಂಬ ವಿಚಾರವನ್ನು ಅಪ್ಪಿತಪ್ಪಿಯೂ ಮಂಡಿಸುವುದಿಲ್ಲ. ಕೇವಲ ಭಾವನಾತ್ಮಕವಾಗಿ ಆತನಿಗೆ ಸೈನ್ಯ ಹಿಂದೊಮ್ಮೆ ಕೊಟ್ಟಿದ್ದ ತೊಂದರೆಯೇ ಈ ಕೃತ್ಯಕ್ಕೆ ಕಾರಣ ಎಂಬ ಉದಾರ ಚಿಂತನೆಯನ್ನು ಪ್ರಮುಖವಾಗಿಸುತ್ತಾರೆಯೇ ಹೊರತು ಅಲ್ಲಿನ ಮೂಲಭೂತವಾದಿ ಪರಿಸರವನ್ನು ನಗಣ್ಯ ಎನಿಸಿಬಿಡುತ್ತಾರೆ. ಅರಾಜಕತೆಯ ಸಮಾಜದಲ್ಲಿ ಕೇವಲ ಶೋಷಣೆಯಷ್ಟೇ ಇರುವುದಿಲ್ಲ, ಅಲ್ಲಿ ಮಾನವೀಯತೆಯ ಮುಖವೂ ಇರುತ್ತದೆ. ಆದರೆ ಇವೆಲ್ಲವೂ ಅರಾಜಕತೆಯ ಸಮಾಜದ ಉತ್ಪನ್ನಗಳು. ಇಲ್ಲಿ ಒಂದನ್ನು ಎತ್ತಿ ಇನ್ನೊಂದನ್ನು ಮುಚ್ಚಿಡುವುದಕ್ಕಿಂತ ಆ ಎಲ್ಲಾ ಆಯಾಮಗಳನ್ನು ಸಮಗ್ರವಾಗಿ ನೋಡಬೇಕು. 

ಈ ಯುವ ಮನಸ್ಸಿನ ಸಂಕೀರ್ಣತೆಯ ವಿಚಾರ ಅಂತಹ ಗಹನವಾದ ಸಂಕೀರ್ಣ ವಿಚಾರವೆನಿಸುವುದು ಅಲ್ಲಿನ ಸಮಾಜ ಕೂಡ ಇಂತಹ ಸಂಕೀರ್ಣ ವ್ಯವಸ್ಥೆಯನ್ನು ಹೊಂದಿದ್ದರೆ ಮಾತ್ರ. ಹಾಗೊಮ್ಮೆ ಈ ಸಂಕೀರ್ಣತೆಯನ್ನು ಒಪ್ಪುವುದಾದರೆ ಕಾಶ್ಮೀರದ ಪಂಡಿತರೂ ಸೇರಿದಂತೆ  ಬಹುಪಾಲು ಎಲ್ಲಾ ಕಾಶ್ಮೀರಿಗಳೂ ಭಯೋತ್ಪಾದಕರಾಗಿರಬೇಕಿತ್ತು.  

ಇಲ್ಲಿ ಸೈನ್ಯವು ಒಂದೊಮ್ಮೆ ಆ ಆತ್ಮಹತ್ಯಾ ಬಾಂಬರನಿಗೆ ತೊಂದರೆ ಕೊಟ್ಟಿತ್ತೆನ್ನಲಾದ ಸಂಗತಿಯನ್ನೂ ಸೇರಿಸಿಕೊಂಡು ಮುಂದುವರಿದ ಸಂಕೀರ್ಣ ಸಮಾಜಗಳು ಬುಲ್ಲಿಯಿಂಗ್ ಎನ್ನುತ್ತವೆ. ಈ ರೀತಿಯ ಬುಲ್ಲಿಯಿಂಗ್ ಕೇವಲ ಸೈನ್ಯವಷ್ಟೇ ಅಲ್ಲದೆ ಇಂದಿನ ಸಾಮಾಜಿಕ ಜೀವನದಲ್ಲಿ ಸಾಕಷ್ಟಿದೆ. ಅದಲ್ಲದೆ ಈ ಬುಲ್ಲಿಯಿಂಗ್ ಸಾಕಷ್ಟು ಮುಂದುವರಿದ ಸಂಕೀರ್ಣ ಸಮಾಜಗಳನ್ನು ಬಾಧಿಸುತ್ತಿರುವ ಜ್ವಲಂತ ಸಮಸ್ಯೆ ಕೂಡ. ಅಂತಹ ಬುಲ್ಲಿಯಿಂಗ್ ಕಾಶ್ಮೀರವೂ ಸೇರಿದಂತೆ ಭಾರತದಲ್ಲಿ ಇದೆಯೇ?

ನನ್ನದೇ ಸ್ಕೂಲಿನಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಂಗತಿಗಳಾಗಿದ್ದ, ಸ್ವಲ್ಪ ದಪ್ಪಗಿದ್ದ ನನ್ನ ಸಹಪಾಠಿ ರಾಜನಿಗೆ "ಆನೆ", "ಗೌರ್ನಮೆಂಟ್ ಹೈಸ್ಕೂಲ್ ಗೂಳಿ" ಎಂಬ  ಛೇಡನೆ, "ಅರ್ಧ ಕಟ್" ಎನ್ನಿಸಿಕೊಳ್ಳುತ್ತಿದ್ದ ರಶೀದ್, "ಅಯ್ಯ ಮಠದಯ್ಯ, ಕುಂಡೆ ಕಟದಯ್ಯ ...." ಎಂದು ಗೋಳು ಹುಯ್ಯಿಸಿಕೊಳ್ಳುತ್ತಿದ್ದ ಯೋಗಿ, "ಹರಕು ಚಡ್ಡಿ, ಮೂಲಂಗಿ ಪ್ಯಾಂಟ್, ಕನ್ನಡಕದ ಪರಮೇಶಿಗೆ ನಾಲ್ಕು ಕಣ್ಣು, ಮೆಳ್ಳೆಗಣ್ಣಿನ ಮಂಜನಿಗೆ ಡಿಮ್ ಅಂಡ್ ಡಿಪ್, ದಪ್ಪಕುಂಡಿಯ ರಾಬರ್ಟನಿಗೆ ಹಂಡೆಕುಂಡಿ ರಾಬರ್ಟ್", ಇತ್ಯಾದಿ, ಇತ್ಯಾದಿಗಳ ಮೂದಲಿಕೆಗಳೆಲ್ಲವೂ ಭಾರತದ ಶಾಲಾ ಚಟುವಟಿಕೆಗಳ ಭಾಗವಾಗಿತ್ತು ಮತ್ತು ಈಗಲೂ ಇರುವುದು. ಈ ಕಾರಣವಾಗಿ ಯಾರೂ ನೇಣು ಹಾಕಿಕೊಂಡಿಲ್ಲ, ಠಾಣೆ ಮೆಟ್ಟಿಲೇರಿಲ್ಲ, ಕೊಲೆಗಳು ನಡೆದಿಲ್ಲ, ಮತ್ತು ಭಯೋತ್ಪಾದಕರಾಗಿಲ್ಲ! ಪರಸ್ಪರ ಬಡಿದಾಡಿಕೊಂಡಿರಬಹುದು, ಆದರೆ ಅದೆಲ್ಲವೂ ಶಾಲಾ ಚಟುವಟಿಕೆಯ ಭಾಗವಾಗಿತ್ತೇ ಹೊರತು ಚಿಂತಕರು ಬಿಂಬಿಸುವ ಸಂಕೀರ್ಣ ಸಮಸ್ಯೆಯಾಗಿ ಅಲ್ಲ.  ಈ ರೀತಿಯ ಬುಲ್ಲಿಯಿಂಗ್ ಸೈನ್ಯದ ಉಪಸ್ಥಿತಿ ಇರುವ ಪ್ರದೇಶಗಳಲ್ಲಿ ಸರ್ವೇ ಸಾಮಾನ್ಯ. ಆ ಬುಲ್ಲಿಯಿಂಗ್ ಪರಿಧಿಯನ್ನು ದಾಟಿ ನಡೆವುದು ರ್ಯಾಗಿಂಗ್, ನಂತರ ಹಿಂಸೆ. 

ಆದರೆ ಈ ಎಲ್ಲಾ ಮೂದಲಿಕೆಗಳೂ ಅಮೆರಿಕಾದಲ್ಲಿ ಬುಲ್ಲಿಯಿಂಗ್ ಅನಿಸಿಕೊಳ್ಳುತ್ತವೆ. ಶಾಲೆಯಿಂದ ಮನೆಗೆ ಬಂದು ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪಿನಲ್ಲೋ ಮುಂದುವರಿಸಿದರೆ ಅದೇ ಸೈಬರ್ ಬುಲ್ಲಿಯಿಂಗ್! ಇದರ ಕಾರಣವಾಗಿ ಸಾಕಷ್ಟು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಾನಸಿಕ ರೋಗಕ್ಕೆ ಗುರಿಯಾಗಿದ್ದಾರೆ, ಭಯೋತ್ಪಾದಕರೂ ಆಗಿದ್ದಾರೆ. ಇದಕ್ಕೆ ಕಾರಣ ಅಮೆರಿಕಾದ ಸಾಮಾಜಿಕ ಪರಿಸರ, ಹಿನ್ನೆಲೆ, ಸೂಕ್ಷ್ಮಮತಿ ಮನಸ್ಸು ಇತ್ಯಾದಿ, ಇತ್ಯಾದಿ. ಭಾರತದ ಪರಿಸರಕ್ಕೂ ಅಮೆರಿಕಾದ ಪರಿಸರಕ್ಕೂ ಇರುವ ವ್ಯತ್ಯಾಸ ಅಜಗಜಾಂತರ. ಭಾರತ ಎಡಭಾಗಕ್ಕೆ ಚಲಿಸಿದರೆ, ಅಮೇರಿಕ ಬಲಭಾಗಕ್ಕೆ ಚಲಿಸುವಷ್ಟು ವ್ಯತ್ಯಾಸ.  ಇಂತಹ ಸೂಕ್ಷ್ಮ ವಾತಾವರಣ ಕಾಶ್ಮೀರದಲ್ಲಿಯೂ ಇರಲಾರದು. ಸೈನ್ಯದ ಇರುವಿಕೆ, ಸೈನ್ಯದ ಕಾರ್ಯಾಚರಣೆ ಇವೆಲ್ಲ ಕಾಶ್ಮೀರಕ್ಕೆ ಹೊಸತಲ್ಲ. ಹಾಗೆಯೇ ಸೈನ್ಯದ ಬುಲ್ಲಿಯಿಂಗ್ ಮತ್ತು ರ್ಯಾಗಿಂಗ್ ಅಥವಾ ಹಿಂಸೆ ಕೂಡ. ಅದು ಅಲ್ಲಿನ ಜನಜೀವನದ ರೀತಿಯೇ ಆಗಿಹೋಗಿದೆ. ಹಾಗಾಗಿ ಅದೊಂದು ಹೊಸತನದ ಸಂಕೀರ್ಣತೆಯನ್ನು ಹುಟ್ಟುಹಾಕಿದೆ ಎಂಬುದು ಅಷ್ಟೊಂದು ಸಮಂಜಸವಲ್ಲವೆನಿಸುತ್ತದೆ. ಪ್ರಕ್ಷುಬ್ಧ ವಾತಾವರಣದಲ್ಲಿ ಪ್ರಕ್ಷುಬ್ಧತೆ ಇರಬಾರದೆಂಬುದು ಕರ್ಫ್ಯೂನಲ್ಲಿ ಸಿನೆಮಾ ನೋಡಬಯಸಿದಂತೆ.

ಹಾಗಾಗಿ ಇದನ್ನು ಬೇರೆ ಬೇರೆಯಾಗಿ ನೋಡಬೇಕೇ ಹೊರತು ಸಾಮಾನ್ಯ ತುಲನೆ ಸಮಂಜಸವೆನಿಸುವುದಿಲ್ಲ! ಸದ್ಯಕ್ಕೆ ತತ್ ಕ್ಷಣದ ಪ್ರತಿಕ್ರಿಯೆಯಾಗಿ ಜನ ತಮ್ಮ ತಮ್ಮ ಸಿದ್ದ ಸಿದ್ಧಾಂತಕ್ಕೆ ತಕ್ಕನಾಗಿ ಯುದ್ಧಕುಶಲಿಗಳಾಗಿ, ರಾಜತಂತ್ರಜ್ಞರಾಗಿ, ಮಾನಸಿಕ ತಜ್ಞರಾಗಿ, ಬಲಿಯಾದ ಸೈನಿಕರಲ್ಲಿ "ದಲಿತರೆಷ್ಟು", "ಮುಸ್ಲಿಮರೆಷ್ಟು", "ಬ್ರಾಹ್ಮಣರೆಷ್ಟು" ಎಂಬ ಸಂಖ್ಯಾಶಾಸ್ತ್ರಜ್ಞರಾಗಿಯೂ ಮತ್ತು "ಮಾನವಶಾಸ್ತ್ರಜ್ಞ"ರಾಗಿಯೂ ಅಭಿಪ್ರಾಯಗಳನ್ನು ಹರಿಯಬಿಡುತ್ತಿದ್ದಾರೆ. ಇದೆಲ್ಲವೂ ಉರಿಯುತ್ತಿರುವ ಮನೆಯಲ್ಲಿ ಗಳ ಹಿರಿಯುವ ಪ್ರಕ್ರಿಯೆಯೇ ಹೊರತು ಕಕ್ಕುಲಾತಿ, ರಾಷ್ಟ್ರಭಕ್ತಿಯಲ್ಲ!

ಭಾರತದ ಸಮಸ್ಯೆ ಹೊರಗಿನ ಶತ್ರುಗಿಂತ, ಆ ಶತ್ರುವಿಗೆ ನೆಲೆಯಿತ್ತು ಸಹಕರಿಸುತ್ತ ಸಹಾಯಹಸ್ತ ಚಾಚುವ ಒಳ ಶತ್ರುಗಳು. ಈ ಒಳಶತ್ರುಗಳನ್ನು ನಿಗ್ರಹಿಸುವುದಕ್ಕೆ ಭಾರತದಲ್ಲಿ ಟಾಡಾ ಪೋಟಾ ಕಾನೂನುಗಳಿದ್ದರೂ ಅವು ಅಷ್ಟೊಂದು ಪರಿಣಾಮಕಾರಿಯಾಗಿಲ್ಲವೆಂದು ಪದೇ ಪದೇ ನಡೆಯುತ್ತಿರುವ ಭಯೋತ್ಪಾದಕ ಕೃತ್ಯಗಳೇ ಹೇಳುತ್ತವೆ. ಅದಲ್ಲದೇ ಆ ಕಾನೂನಿಗೆ ಒಳಪಡಿಸಿದ ಆರೋಪಿಗಳನ್ನು  ಕಾನೂನಾತ್ಮಕವಾಗಿ ಬೆಂಬಲಿಸುವುದಕ್ಕಿಂತ ಹೆಚ್ಚಾಗಿ ಮುಷ್ಕರಗಳಿಂದ ಅವರನ್ನು ಬಿಟ್ಟುಬಿಡಿ ಎಂಬ  ಸ್ವೇಚ್ಚಾಚಾರಿ  ನಿಲುವಿನ ಹೋರಾಟಗಳನ್ನು ವೈಚಾರಿಕ ಹಿನ್ನೆಲೆಯಲ್ಲಿ ರೂಪುಗೊಳಿಸಲಾಗುತ್ತದೆ. ಮುಂದುವರಿದ ಯಾವುದೇ ದೇಶದಲ್ಲಿ ಹೀಗೆ ಅವರನ್ನು ಬಿಟ್ಟುಬಿಡಿ ಎಂದು ಮುಷ್ಕರಗಳಾಗುವುದಿಲ್ಲ. ಅಲ್ಲಿನ ವಿಚಾರವಾದಿಗಳು ಆ ಆರೋಪಿಗಳಿಗೆ ಕಾನೂನು ನೆರವು ನೀಡಿ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡುತ್ತಾರೆಯೇ ಹೊರತು ಈ ರೀತಿಯ ಸ್ವೇಚ್ಚಾಚಾರದ ಮುಷ್ಕರಗಳಿಂದಲ್ಲ. ಈ ರೀತಿಯ ಮುಷ್ಕರ, ಹೋರಾಟಗಳು ನೆಲದ ಕಾನೂನನ್ನು, ಸಂವಿಧಾನವನ್ನು ಧಿಕ್ಕರಿಸುವ ಪ್ರಕ್ರಿಯೆಗಳೇ ಹೊರತು ಉಳಿಸುವವಲ್ಲ! ಈ ಹೋರಾಟ ಸೂಕ್ಷ್ಮತೆಯನ್ನು ಸಂವಿಧಾನ ಅಸ್ಮಿತೆಯ ಸಂವಿಧಾನದ ಸೆರಗು ಹಿಡಿದೇ ಹೋರಾಡುವ ಹೋರಾಟಗಾರರು ಅರಿತುಕೊಳ್ಳಬೇಕು.

ಮುಂದುವರಿದ ರಾಷ್ಟ್ರಗಳಲ್ಲಿ ಇದನ್ನು ನಿಗ್ರಹಿಸಲು ರಾಷ್ಟ್ರದ್ರೋಹ ನಿಗ್ರಹ ಕಾನೂನಿದೆ.   ಅಮೆರಿಕಾ ಸಂವಿಧಾನದ ಆರ್ಟಿಕಲ್ ಮೂರು ಮತ್ತು ಸೆಕ್ಷನ್ ಮೂರರ ಪ್ರಕಾರ "ಯಾರು ದೇಶದ ವಿರುದ್ಧ ಯುದ್ಧ ಸಾರುವ, ಯುದ್ಧಕ್ಕೆ ಸಹಾಯ ಮಾಡುವ, ವೈರಿಗಳಿಗೆ ಸಹಾಯ ಹಸ್ತ, ನೆಲೆ ನೀಡುವರೋ, ಮತ್ತು ಅವರ ಆ ಕೃತ್ಯಕ್ಕೆ ಎರಡು ಸಾಕ್ಷಿಗಳಿದ್ದು ಅಥವಾ ಅಂತಹ ವ್ಯಕ್ತಿಗಳು ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಳ್ಳುವರೊ ಆಗ ಅದನ್ನು ರಾಷ್ಟ್ರದ್ರೋಹವೆಂದು ಪರಿಗಣಿಸಬೇಕು" ಎನ್ನಲಾಗಿದೆ.  ಯುಕೆ, ಆಸ್ಟ್ರೇಲಿಯಾ ಮುಂತಾದ ಮುಂದುವರಿದ ರಾಷ್ಟ್ರಗಳು ಕೂಡ ಇದೇ ರೀತಿಯ "ಟ್ರೆಚರಿ ಆಕ್ಟ್" ಹೊಂದಿದೆ. ಹಾಗಾಗಿ ಅಲ್ಲಿ ಭಯೋತ್ಪಾದಕರಿಗೆ ನೆಲೆ ನೀಡುವ, ಯಾವುದೇ ಸಹಾಯಹಸ್ತ ಚಾಚುವ ಕರುಣಾಮಯಿಗಳಿಲ್ಲದೆ ಇಂತಹ ಕೃತ್ಯಗಳು ಅಷ್ಟಾಗಿ ನಡೆಯುವುದಿಲ್ಲ. 

ಆದರೆ ಭಾರತದಲ್ಲಿ ಈ ರೀತಿಯ ರಾಷ್ಟ್ರದ್ರೋಹ ನಿಗ್ರಹ ಕಾನೂನು ಇಲ್ಲ. ಭಾರತದಲ್ಲಿನ ಸೆಡೆಶನ್ ಕಾನೂನು ಕೆಲವು ರಾಷ್ಟ್ರದ್ರೋಹದ ಅಂಶಗಳನ್ನು ಹೊಂದಿದ್ದರೂ ಅದಕ್ಕೆ ಸಾಕಷ್ಟು ಶಕ್ತಿಯಿಲ್ಲ. ಹಾಗಾಗಿಯೇ ಅದು ಕೇವಲ ಬೆದರುಬೊಂಬೆಯ ಕಾನೂನಾಗಿ ಇತ್ತೀಚೆಗೆ ಸುದ್ದಿ ಮಾಡುತ್ತಿದೆ. ಬ್ರಿಟಿಷ್ ಸರ್ಕಾರದ ವಿರುದ್ದ ದಂಗೆದ್ದು ಸ್ವಾತಂತ್ರ್ಯ ಗಳಿಸಿದ್ದ ಅಂದಿನ ರಾಷ್ಟ್ರ ನಾಯಕರುಗಳಿಗೆ ತಾವು ಕೂಡಾ ಬ್ರಿಟಿಷ್ ರಾಷ್ಟ್ರದ ವಿರುದ್ಧ ರಾಷ್ಟ್ರದ್ರೋಹ ಮಾಡಿಯೇ ಸ್ವಾತಂತ್ರ್ಯ ಗಳಿಸಿಕೊಂಡಿದ್ದೇವೆ ಎಂಬ ಅಪರಾಧಿ ಭಾವನೆ ಇದ್ದಿತೋ ಏನೋ ಒಟ್ಟಿನಲ್ಲಿ ಅವರ್ಯಾರೂ ರಾಷ್ಟ್ರ ದ್ರೋಹ ನಿಗ್ರಹದ ಕಾನೂನು ರೂಪಿಸಲಿಲ್ಲ.  

ತತ್ ಕ್ಷಣದ ರಣೋತ್ಸಾಹ, ಪರಸ್ಪರ ಕೆಸರೆರಚುವಿಕೆ, ಭಯೋತ್ಪಾದಕನ ಕುಟುಂಬದ ಮೇಲಿನ ಕಕ್ಕುಲಾತಿ, ಒಂದೆರಡು ಪಾಲಿಸಿಗಳ ಬದಲಾವಣೆ ಇವುಗಳೆಲ್ಲವೂ ತಾತ್ಕಾಲಿಕ ಶಮನಗಳೇ ಹೊರತು ಕಾಯಂ ಪರಿಹಾರವಲ್ಲ. ಏಕೆಂದರೆ ಇದನ್ನೇ ಇಂದಿನ ಸರ್ಕಾರದಿಂದ ಹಿಂದಿನ ಸರ್ಕಾರಗಳೆಲ್ಲಾ ಪಾಲಿಸಿಕೊಂಡು ಬಂದಿರುವುದು. ಅದನ್ನೇ  ಮುಂಬರುವ  ಸರ್ಕಾರಗಳು ಮತ್ತೊಮ್ಮೆ ಕವಿಹೃದಯವನ್ನು ಮೆರೆಯುತ್ತ ಸಂಜೋತಾ ಬಸ್ಸು ರೈಲುಗಳನ್ನು ಬಿಡುವುದೋ, ಅಥವಾ ಮತ್ತೊಮ್ಮೆ ಇಂತಹ ಕೃತ್ಯಗಳು ನಡೆದರೆ ಕ್ರಿಕೆಟ್ ಪಂದ್ಯಗಳನ್ನು ಬಹಿಷ್ಕರಿಸುವುದೋ ಮಾಡುತ್ತವೆಯೇ ಹೊರತು ಶಾಶ್ವತ ಪರಿಹಾರೋಪಾಯವನ್ನಲ್ಲ.

ಭಾರತ ಈಗಲಾದರೂ ರಾಷ್ಟ್ರದ್ರೋಹ ನಿಗ್ರಹದಂತಹ ಕಾನೂನು ರಚಿಸಲು ಮನಸ್ಸು ಮಾಡಬೇಕು. 

ವಿಪರ್ಯಾಸವೆಂದರೆ ಬಹುಪಾಲು ಭಾರತೀಯರಿಗೆ ಅಪರಿಚಿತನಾಗಿರುವ ಆದರೆ ಭಾರತದ ಅಪ್ರತಿಮ ಸಾಹಸೀ ಸಾಮ್ರಾಟನಾಗಿದ್ದ, ಒಂದೊಮ್ಮೆಯೂ ಯಾವುದೇ ಯುದ್ಧಗಳಲ್ಲಿ ಸೋಲದ, ಇಡೀ ಭಾರತದೆಲ್ಲಾ ಸಾಮ್ರಾಜ್ಯಗಳನ್ನೂ ಗೆದ್ದಿದ್ದ ಕಾಶ್ಮೀರದ ಲಲಿತಾದಿತ್ಯನ ಸಾಹಸ, ಮತ್ತು ಕಾಶ್ಮೀರವನ್ನು ಗೆಲ್ಲಲೇಬೇಕೆಂಬ ಮಹಮ್ಮದ್ ಘಜನಿಯ ಮಹದಾಸೆಯನ್ನು ಆಸೆಯಾಗಿಯೇ ಉಳಿಸಿದ್ದ ಕಾಶ್ಮೀರಿ  ಜನತೆಯ ಕೆಚ್ಚು ಇಂದು ಲಲಿತಾದಿತ್ಯನಂತೆಯೇ ಅಜ್ಞಾತವಾಗಿ ಅಲ್ಲಿನ ಜನರ ಕೆಚ್ಚು ತಣ್ಣಗಾಗಿ ಕಾಶ್ಮೀರ ಘಜನಿಯ ಸಾಮ್ರಾಜ್ಯವಾಗಿಬಿಟ್ಟಿದೆ.

ಹಾಳೂರಿಗೆ ಉಳಿದವನೇ ಗೌಡ!



ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಾವು ಕಾಂಗ್ರೆಸ್ ಪಕ್ಷದ ಅಧೀನ. ಹಾಗಾಗಿ ನಿರೀಕ್ಷೆಯಂತೆ ಕೆಲಸ ಮಾಡಲಾಗುತ್ತಿಲ್ಲ ಎಂದು ಗೋಳಾಡುತ್ತಿದ್ದಾರೆ. ಅದನ್ನು ಜನತೆ ಕೂಡ ಒಪ್ಪಿಬಿಟ್ಟಿದೆ. ಇಂತಹ ಹೇಳಿಕೆಗಳು ಬೇರೆ ದೇಶದಲ್ಲಾಗಿದ್ದರೆ ಬಹು ದೊಡ್ಡ ಸುದ್ದಿಯಾಗಿಬಿಡುತ್ತಿದ್ದಿತು. ಆದರೆ ಮುಖ್ಯಮಂತ್ರಿಯವರನ್ನು ಕೆಲಸ ಮಾಡಲು ಬಿಡದ ಅದ್ಯಾವ ಒತ್ತಾಯಗಳನ್ನು ಕಾಂಗ್ರೆಸ್ ಪಕ್ಷ ಅವರ ಮೇಲೆ ಹೇರಿದೆ ಎಂದು ಬಹು ದೊಡ್ಡ ಸುದ್ದಿಯಾಗಬೇಕಾದುದು ಇಂದು ಸುದ್ದಿಯೇ ಎನಿಸದಷ್ಟು ಮತದಾರ ನಿರ್ಲಿಪ್ತನಾಗಿಬಿಟ್ಟಿದ್ದಾನೆ. ಆದರೆ ಅದೇ ಮತದಾರ ಸುಮಲತಾ "ಗೌಡತಿ"ಯೋ ಅಲ್ಲವೋ ಎಂಬುದನ್ನು ಬಹು ಮುಖ್ಯವಾಗಿ ಚರ್ಚಿಸುವುದರಲ್ಲಿ ಬಿಜಿ ಆಗಿದ್ದಾನೆ. ಎಲ್ಲ ಯಕಶ್ಚಿತ್ ವಿಷಯಗಳು ಬಹುಮುಖ್ಯವಾಗಿ, ಬಹುಮುಖ್ಯ ವಿಷಯಗಳು ಯಃಕಶ್ಚಿತವಾಗಿಬಿಟ್ಟಿವೆ. ಈ ಆಂತರಿಕ ಮಿತ್ರಪಕ್ಷಗಳ ನಡುವೆ ವಿರೋಧ ಪಕ್ಷದ ಶಾಸಕರ ಕುದುರೆ ವ್ಯಾಪಾರ ಸಹ ಒಮ್ಮೊಮ್ಮೆ ಸುದ್ದಿಯಾಗುತ್ತಿದೆ. ಅಂದಹಾಗೆ ಈ ಕುದುರೆ ವ್ಯಾಪಾರದ ರೂವಾರಿಗಳೇ ಈ ಕುಮಾರಸ್ವಾಮಿಗಳು! ಇಂದು ಶಾಸಕರ ವ್ಯಾಪಾರ ಆಗಾಗ್ಗೆ ಜಾತ್ರೆಗಳಲ್ಲಿ ಏರ್ಪಡುವ ದನಗಳ ಸಂತೆಯಂತಾಗಿದೆ, ಗೋವಾ, ನೋಯ್ಡಾ, ಬೆಂಗಳೂರು ಇತ್ಯಾದಿ ಜಾತ್ರೆಗಳ ಸಂತೆಮಾಳಗಳಲ್ಲಿ!

ಒಂದೆಡೆ ಇದೇ ರೀತಿ ಪಂಜರದ ಗಿಣಿಯಾಗಿದ್ದ ಮಾಜಿ ಪ್ರಧಾನಿಗಳು ಮಾಜಿಯಾದದ್ದಷ್ಟೇ ಅಲ್ಲದೇ ಅಪಹಾಸ್ಯಕ್ಕೊಳಗಾಗಿ ಚಲನಚಿತ್ರದ ಕಥಾವಸ್ತುವಾಗಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ತನ್ನ ಪ್ರಧಾನಮಂತ್ರಿಗೆ ಎಲ್ಲಾ ಸ್ವಾತಂತ್ರ್ಯವನ್ನು ಕೊಟ್ಟಿದೆ. ಪ್ರಜಾಪ್ರಭುತ್ವದ ನಾಯಕನಿರಲಿ ಯಾ ಒಂದು ಕಚೇರಿಯ ಕಾರಕೂನನಿರಲಿ ಆತ ಸ್ವತಂತ್ರವಾಗಿ ಕೆಲಸ ಮಾಡುವಂತಹ ವಾತಾವರಣವಿದ್ದರೆ ಅಲ್ಲಿ ಕ್ರಿಯಾಶೀಲತೆ ಇರುತ್ತದೆ. ರಾಜಕಾರಣದ ನಾಯಕನೆನೆಸಿಕೊಂಡವರು ತಮ್ಮ ನಿರ್ಧಾರಗಳಿಗೆ ಹೊಣೆಯಾಗುವುದು ಈ ತೆರನಾದ ವಾತಾವರಣವಿದ್ದಾಗ ಮಾತ್ರ. ಇಲ್ಲದಿದ್ದರೆ ಪರಸ್ಪರರತ್ತ ತೋರುಬೆರಳು ತೋರಿ ಮತದಾರರಿಗೆ ಮಧ್ಯದ ಬೆರಳು ತೋರುತ್ತಾರೆ.

ಆ ರೀತಿಯ ಕೈಗೊಂಬೆ ರಾಜಕಾರಣ ವ್ಯವಸ್ಥೆಯಿಂದಲೇ ಹಿಂದಿನ ಸರ್ಕಾರಗಳ ಸಾಕಷ್ಟು ರಾಜ್ಯ, ಕೇಂದ್ರದ ಯೋಜನೆಗಳು ಅಡಿಗಲ್ಲು ಹಾಕಿಸಿಕೊಂಡು ಸಮಾಧಿಗಲ್ಲುಗಳಾಗಿವೆ. ಕೈಗೊಂಬೆಯಾಗಿರದ ಕಾರಣ ಮೋದಿಯವರು ಸಾಕಷ್ಟು ಯೋಜನೆಗಳನ್ನು ಸಂಪೂರ್ಣಗೊಳಿಸಿದ್ದಾರೆ. ಆ ಯೋಜನೆಗಳಿಂದ ಸಮಾಜಕ್ಕೆ ಎಷ್ಟು ಒಳಿತಾಗಿದೆ ಎಂಬುದು ಬೇರೆ. ಆದರೆ ಮೋದಿ ಸಾಕಷ್ಟು ಯೋಜನೆಗಳನ್ನು ಹಿಂದಿನ ಸರ್ಕಾರಗಳಿಗಿಂತ ತ್ವರಿತವಾಗಿ ಮುಗಿಸಿರುವುದು ಸತ್ಯ.

ಇನ್ನು ಈ ರೀತಿಯ ಕೈಗೊಂಬೆಯನ್ನಾಗಿಸಿದ್ದಕ್ಕೆ ರಾಜ್ಯದಲ್ಲಿ ಧರಂ ಸಿಂಗ್, ಕೇಂದ್ರದಲ್ಲಿ ಮನಮೋಹನ ಸಿಂಗರು ಸೋತಿದ್ದುದು. ಅದಲ್ಲದೆ ಯಾರ ಕೈಗೊಂಬೆಯೂ ಆಗಿರದಿದ್ದುದಕ್ಕೆ ಇಂದಿರಾಗಾಂಧಿ, ರಾಜೀವ್ ಗಾಂಧಿಯರು ಕೆಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದುದು. ಭಾರತ ತನ್ನ ಇತಿಹಾಸದಲ್ಲಿ ಪ್ರಗತಿಯನ್ನು ಸಾಧಿಸಿದೆಯೆಂದರೆ ಅದು ಈ ರೀತಿ ಕೈಗೊಂಬೆಯಾಗಿರದ, ನಿಶ್ಚಿತ ನಿಲುವಿನ ಆಡಳಿತವಿದ್ದಾಗ ಮಾತ್ರ.

ಬರಲಿರುವ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ದೇಶದ ಮುಂದೆ ಮೂರು ಆಯ್ಕೆಗಳಿವೆ.

ಆಯ್ಕೆ ಒಂದು, ಒಂದು ಕುಟುಂಬದ ಕೈಗೊಂಬೆಯಾಗಲಿರುವ ಪ್ರಧಾನಿ. ಈ ಕುರಿತಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕರ್ನಾಟಕದ ಹಾಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮೇಲಿನ ಉದಾಹರಣೆಗಳ ಇತಿಹಾಸ ಮತ್ತು ವರ್ತಮಾನಗಳು ಭವಿಷ್ಯದ ಬಗ್ಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಆದರೆ ಕಾಂಗ್ರೆಸ್ಸಿನಲ್ಲಿ ಕೌಟುಂಬಿಕ ವ್ಯಕ್ತಿಗಳನ್ನು ಬಿಟ್ಟರೆ ಪರ್ಯಾಯವಾಗಿ ಪ್ರಧಾನಿಯಾಗಬಲ್ಲ ನಾಯಕರಿಲ್ಲವೇ?

ಸ್ಯಾಮ್ ಪಿತ್ರೋಡಾ, ಇಲ್ಲಿಯವರೆಗೆ ಭಾರತ ಕಂಡ ಅಪ್ರತಿಮ ದೂರದರ್ಶಿತ್ವದ ವ್ಯಕ್ತಿ. ಭಾರತದ ದೂರಸಂಪರ್ಕ ತಂತ್ರಜ್ಞಾನಕ್ಕೆ ಇವರು ಹಾಕಿದ ಬುನಾದಿಯ ಫಲವನ್ನು ಭಾರತ ಈಗಲೂ ಉಣ್ಣುತ್ತಿದೆ. ಇವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಇವರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ರಾಜೀವ್ ಗಾಂಧಿಯವರು ಕೊಟ್ಟಿದ್ದರಿಂದ ಅವರು ಅಂತಹ ಸಾಧನೆಯನ್ನು ಮಾಡಿದ್ದರು. ಆದರೆ ಇದೇ ಪಿತ್ರೋಡಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕೂಡ ರಾಜೀವ್ ಗಾಂಧಿಯವರಿಗೆ ತಾಂತ್ರಿಕ ಸಲಹೆಗಾರರಾಗಿದ್ದ ರೀತಿಯಲ್ಲಿಯೇ ತಾಂತ್ರಿಕ ಸಲಹೆಗಾರರಾಗಿದ್ದರು. ಆದರೆ ಮನಮೋಹನರಂತೆಯೇ ಇವರನ್ನು ಅಲಂಕಾರೀ ಕೈಗೊಂಬೆಯಾಗಿಸಿದ್ದರಿಂದ ಅವರ ಕ್ರಿಯಾಶೀಲತೆ ನಿಂತ ನೀರಾಯಿತು.

ಶಶಿ ತರೂರ್, ಇವರು ಕೂಡಾ ಅಪ್ರತಿಮ ಕ್ರಿಯಾಶೀಲ ವ್ಯಕ್ತಿ. ವಿಶ್ವಸಂಸ್ಥೆಯಲ್ಲಿದ್ದಾಗ ಸಾಕಷ್ಟು ಕ್ರಿಯಾಶೀಲರಾಗಿದ್ದ ಇವರು ಕಾಂಗ್ರೆಸ್ಸಿನಲ್ಲಿ ಮಾತನಾಡುವ ವಕ್ತಾರಿಕೆಯ ಗೊಂಬೆಯಾಗಿದ್ದಾರೆ. ಇದೇ ರೀತಿ ಜೈರಾಮ್ ರಮೇಶ್ ಬೆದರು ಗೊಂಬೆಯಾಗಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳನ್ನು ಹುಡುಗಾಟದ ಚೆಲ್ಲಾಟದಲ್ಲಿ ಕಾಲ ಕಳೆದದ್ದು ಬಿಟ್ಟು ಕಾಂಗ್ರೆಸ್ ಪಕ್ಷ ಒಂದು ರಾಷ್ಟ್ರೀಯಪಕ್ಷವಾಗಿ ಹೊಣೆಗಾರಿಕೆಯಿಂದ ಮೋದಿಯವರನ್ನೆದುರಿಸುವ ಗೋಲ್ ಇಟ್ಟುಕೊಳ್ಳದೆ ಇಲ್ಲಿಯವರೆಗೆ ಟ್ರೋಲ್ ಮೆರೆಸಿದೆ. ಅದಲ್ಲದೆ ಅಂತಿಮ ಸಮಯದಲ್ಲಿ ಕೂಡ ಮತ್ತೊಂದು ಕುಟುಂಬ ಸದಸ್ಯೆಯನ್ನು ತಂದಿತೇ ಹೊರತು ಪರ್ಯಾಯ ನಾಯಕತ್ವವನ್ನಲ್ಲ. ಹಾಗಾಗಿ ಸ್ಯಾಮ್, ಶಶಿ, ರಮೇಶರನ್ನು ಮುಂದೆ ತುರ್ತಾಗಿ ಪರ್ಯಾಯವೆಂದು ಬಿಂಬಿಸಿದರೂ ಅವರೆಲ್ಲ ಕೈಗೊಂಬೆಗಳೆನಿಸಿಬಿಡುತ್ತಾರೆ. ಹಾಗೆ ಕೈಗೊಂಬೆಗಳಾಗಿಸಿಕೊಳ್ಳುವುದಿಲ್ಲವೆಂಬ ಭರವಸೆ ಕೊಟ್ಟು ಈಗಲೂ ಪ್ರಯತ್ನಿಸಿದರೆ ಪ್ರಯಾಯ ಸರ್ಕಾರವನ್ನು ಕೊಡಬಹುದು. ತ್ಯಾಗ, ದೇಶಪ್ರೇಮದ ಕುಟುಂಬವೆನ್ನುವ ಕುಟುಂಬ ಈ ಚುನಾವಣೆಯಲ್ಲಿ ಅಂತಹ ತ್ಯಾಗವನ್ನು ಮೆರೆವುದೆ?

ಆಯ್ಕೆ ಎರಡು, ಬಹು ಕುಟುಂಬಗಳ ಕೈಗೊಂಬೆಯಾಗಲಿರುವ ಪ್ರಧಾನಿ. ಈಗ ಮೋದಿ ವಿರೋಧದ ಮಂಚೂಣಿಯಲ್ಲಿರುವ ಘಟಬಂಧನದ ಘಟಾನುಘಟಿಗಳು ಏನೆಂದು ಇಡೀ ದೇಶವೇ ಅರಿತಿದೆ. ಕೇವಲ ಎರಡು ವರ್ಷಗಳ ಹಿಂದೆ ಇವರೆಲ್ಲರೂ ಪರಸ್ಪರ ಕೆಸರೆರಚುವುದರಲ್ಲಿ ತಲ್ಲೀನರಾಗಿದ್ದರು. ಬಂಗಾಳದ ಶಾರದಾ ಚಿಟ್ ಫಂಡಿನ ಕುರಿತಾಗಿ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಕುರಿತು ಎರಡು ವರ್ಷದ ಹಿಂದೆ ಏನು ಹೇಳಿದ್ದರು ಮತ್ತು ಈಗ ಏನು ಹೇಳಿರುವರು ಎಂಬುದು ಟ್ರೋಲಾಗಿದೆ. ಅಖಿಲೇಶ್ ಯಾದವ್ ಸರ್ಕಾರೀ ಬಂಗಲೆಯನ್ನು ಖಾಲಿ ಮಾಡುವಾಗ ರಾಡಿ ಮಾಡಿಕೊಂಡದ್ದು, ಮಾಯಾವತಿಯ ಆನೆಗಳ ಪ್ರತಿಮೆಗಳು, ದೇವೇಗೌಡರ ಪುತ್ರಪ್ರೇಮ, ಲಲ್ಲೂಪ್ರಸಾದರ ದರ್ಭೆಯ ಗರ್ಭ, ನಾಯ್ಡುರ ಹೊಯ್ದಾಟ, ಎಲ್ಲವೂ ನಗೆಪಾಟಲಾಗಿವೆ. ತಮ್ಮ ಮಾತಿಗೆ ಹೊಣೆಯಾಗದ ಇಂತಹ ವ್ಯಕ್ತಿಗಳು ಸಮಾಜಕ್ಕೆ ಹೊರೆಯಾಗುತ್ತಾರೆಯೇ ಹೊರತು ನಾಯಕರಲ್ಲ. ತಮ್ಮ ಹೇಳಿಕೆಗೇ ಜವಾಬ್ದಾರರಾಗದ ಈ ಎಲ್ಲ ಘಟಬಂಧಕರು ಸಮಾಜಕ್ಕೆ ಹೊರೆ. ಏಕೆಂದರೆ ಬದ್ಧತೆ ನಾಯಕನಾಗುವವನ ಪ್ರಪ್ರಥಮ ಗುಣ.

ಆಯ್ಕೆ ಮೂರು ಸರ್ವಾಧಿಕಾರಿ ಮೋದಿ!  ಈಗಿರುವ ಬಿಜೆಪಿ ಪ್ರಧಾನಿ ಮೋದಿಯವರನ್ನು ಸರ್ವಾಧಿಕಾರಿ ಎಂದು ಅವರ "ವಿರೋಧಿಗಳು" ಬಿಂಬಿಸಿದ್ದಾರೆ. ಈ ವಾದವನ್ನು ಬಿಜೆಪಿಗರು ಬಿಂಬಿಸಿದ್ದರೆ ಅದಕ್ಕೆ ಬೆಲೆ ಮತ್ತು ಬಲವಿದೆಯೇ ಹೊರತು ವಿರೋಧಿಗಳ ವಾದಕ್ಕೆ ಬಲವಿಲ್ಲ.  ಮೋದಿ ಸರ್ವಾಧಿಕಾರಿಯಾಗಿದ್ದರೆ ಅವರ ಸಂಪುಟದ ಕೆಲ ಸಚಿವರು ಹುಚ್ಚಾಟದ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಇಂದಿರಾಗಾಂಧಿಯವರಂತಹ ಸರ್ವಾಧಿಕಾರದ ಉದಾಹರಣೆಗಳು ಮೋದಿ ಬಣದಿಂದ ಕೇಳಿಬಂದಿಲ್ಲ. ಅದಲ್ಲದೆ ಭಾರತದಂತಹ ದೇಶಕ್ಕೆ ಗಟ್ಟಿ ನಿಲುವು ತೋರುವ ನಾಯಕತ್ವವಿದ್ದಾಗ ಮಾತ್ರ ಪ್ರಗತಿಯಾಗಿರುವುದನ್ನು ಇತಿಹಾಸ ತೋರುತ್ತದೆ. ಇದು ಇತಿಹಾಸದ ಚಂದ್ರಗುಪ್ತ ಮೌರ್ಯ, ಅಶೋಕ, ಕನಿಷ್ಕ, ಹರ್ಷ, ಪುಲಕೇಶಿಯರಿಂದ ಇಂದಿರಾ, ರಾಜೀವ್ ಗಾಂಧಿ, ಮೋದಿಯವರಿಗೆ ಸಾಬೀತಾಗಿದೆ. 

ಹಾಗಿದ್ದರೆ ಯಾವುದು ಉತ್ತಮ ಆಯ್ಕೆ ಈ ಮೂರರೊಳಗೆ ಎನ್ನುವ ಪ್ರಶ್ನೆಗಿಂತ ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆ ಇಂದು ಮುಖ್ಯವಾಗಿಬಿಡುತ್ತದೆ. ಏಕೆಂದರೆ ಭಾರತೀಯ ಇಂದು  ರೋಚಕ, ಗಾಳಿಸುದ್ದಿಯ ಅಮಲಿನಲ್ಲಿ ತೇಲುತ್ತಿದ್ದಾನೆ. ಹಾಗಾಗಿ ಯಾರು ಎಷ್ಟು ರೋಚಕತೆಯನ್ನು ಕಟ್ಟಿಕೊಡುವರೋ ಅವರು ಗೆಲ್ಲುತ್ತಾರೆ. ಏಕೆಂದರೆ ಒಂದೊಮ್ಮೆ ಅಪ್ರತಿಮ ಚಿಂತಕರ, ಪ್ರಗತಿಪರರ ನಾಡೆನಿಸಿದ್ದ ಕರ್ನಾಟಕದ ಪ್ರಗತಿಪರರನ್ನೂ ಒಳಗೊಂಡು ಜನತೆ, ಭಾರತದ ಮಾಧ್ಯಮದ ಹುಚ್ಚು ಹೊಳೆಯಲ್ಲಿ ಕೊಚ್ಚಿ ಹೋಗುತ್ತಿದ್ದರೂ ವಿಲಾಸಿ ಕೊಳದಲ್ಲಿ ತೇಲುತ್ತಿರುವಂತೆ ಹೆಮ್ಮೆ ಪಡುತ್ತಿದೆ.

ಇಲ್ಲಿ ಜನತೆ  ಯಾವುದೇ ಪಕ್ಷಕ್ಕೆ ಬಹುಮತ ಕೊಡದಿದ್ದರೆ ಈ ಎಲ್ಲಾ ಆಯ್ಕೆಗಳೂ ಸಂತೆಮಾಳಗಳಲ್ಲಿ ತಲೆದೂಗುವ ಕತ್ತೆಗಳ ಕಾಲು ಹಿಡಿಯುವುದು ಶತಸಿದ್ಧ. ನಿಮ್ಮ ಆಯ್ಕೆ ಈ ಸಂತೆಮಾಳದ ಕತ್ತೆಗಳಾಗದಿರಲಿ  ಅಷ್ಟೇ.

ಇನ್ನು ಅತ್ಯಂತ ವಿಪರ್ಯಾಸಕರ ಸಂಗತಿಯೆಂದರೆ ಈ ಟ್ರೋಲ್ ಮತ್ತು ಗೋಲ್ ನಡುವಿನ ಅಂತರವನ್ನು ಪ್ರಗತಿಪರರು ಕೂಡಾ ಅರಿಯದಿರುವುದು. ಎಂತಹ ಅಪ್ರತಿಮ ಬುದ್ಧಿಜೀವಿಗಳೆನಿಸಿಕೊಂಡವರೆಲ್ಲಾ ಈ ಟ್ರೋಲೆಂಬ ಗೋಲದಲ್ಲಿ ಗಿರಿಗಿರಿ ಗಿರಿಗಿಟ್ಲೆಯಾಗಿರುವುದು. ಇವರೆಲ್ಲ ಇದುವರೆಗೂ ಮೋದಿ ಅವಹೇಳನದಲ್ಲಿ ಕಾಲ ಕಳೆದರೆ ಹೊರತು ಇತರೆ ಪಕ್ಷಗಳು ಒಬ್ಬ ಸಮರ್ಥ ನಾಯಕನನ್ನು ಪರ್ಯಾಯವಾಗಿ ರೂಪಿಸುವಂತೆ ಒತ್ತಡ ಹೇರಲು ಸೋತಿದ್ದಾರೆ. ಏಕೆಂದರೆ ಇವರಿಗೆ ಅವಹೇಳನದ ರೋಚಕತೆಯ "ಕಚಗುಳಿ" ಮುಖ್ಯವಾಗಿತ್ತೇ ಹೊರತು "ಕಳಕಳಿ"ಯಲ್ಲ. ಇವರು ಕಳಕಳಿಯ ಪರಾಕಾಷ್ಠೆ ಕೇವಲ ಹಗಲಿನಲ್ಲದೆ ಇರುಳಿನಲ್ಲಿ ನಡೆದುದನ್ನು ಈ ವಾರ ದೆಹಲಿಯ ಕನ್ನಡ ಭವನ ಕಂಡಿದೆ.

ಯಾವುದೇ ಸಮರ್ಥ ಪರ್ಯಾಯ ಯೋಜನೆಯಿರದೆ ಕೇವಲ ಭಾವುಕತೆ, ರೋಷಾವೇಶಗಳು ಕತೆ, ಕವನಗಳನ್ನು ಬರೆಸಬಲ್ಲುದೆ ಹೊರತು ದೇಶವನ್ನು ಮುನ್ನಡೆಸುವ ಅಂತಃಶಕ್ತಿಯನ್ನಲ್ಲ. ಆ ಒಂದು ಮೂಲಗುಣವನ್ನು ಯಾವುದೇ ಪಕ್ಷ, ನಾಯಕ, ಬುದ್ದಿಜೀವಿ, ಸಾಮಾನ್ಯಜೀವಿಗಳು ಇದುವರೆಗೂ ತೋರಿಲ್ಲ. ಟ್ರೋಲುಗಳಲ್ಲಿ ಸಮಯ ವ್ಯಯಿಸುತ್ತ ತಮ್ಮ ಕ್ರಿಯಾಶೀಲತೆಯನ್ನೇ ಕಳೆದುಕೊಂಡುಬಿಟ್ಟಿದ್ದಾರೆ. ಅದು ಎಷ್ಟರಮಟ್ಟಿಗೆಂದರೆ ನನ್ನ "ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ" ಎಂಬ ಟ್ಯಾಗ್ ಲೈನ್ ಬರಹವನ್ನು ಸಾಬಿತುಪಡಿಸಲು ಹಠ ತೊಟ್ಟವರಂತೆ! ಬಹುಶಃ ಇಡೀ ದೇಶವೇ ಮ್ಯಾಡ್ ಕೌ ಡಿಸೀಸ್ ಅಥವಾ ಹೋಲಿ ಕೌ ಡಿಸೀಸಿಗೊಳಗಾಗಿರಬೇಕು.

ಕನಿಷ್ಠ ಪ್ರಗತಿಪರರೆನಿಸಿಕೊಂಡವರು ಇಲ್ಲಿಯವರೆಗೆ ಗಂಭೀರ ಚಿಂತನೆಯನ್ನು ತೋರಿ ವಿರೋಧಪಕ್ಷಗಳ ಮೇಲೆ ಜವಾಬ್ದಾರಿ ಹೇರಿದ್ದರೆ ಘಟಬಂಧನವೆಂಬ ಸೋಲಿಗರ ಗುಂಪಿರದೆ ಒಬ್ಬ ಪ್ರಬಲ ವಿರೋಧಪಕ್ಷದ ನಾಯಕನಿರುತ್ತಿದ್ದನು(ಳು). ಸದ್ಯಕ್ಕೆ ಮೋದಿಯವರನ್ನು ಎದುರಿಸಬಲ್ಲ ಯಾವೊಬ್ಬನೂ ಕಾಣುತ್ತಿಲ್ಲ.