ಪಂಥಕೂಪದಲ್ಲಿ ಮುಳುಗಿ ಹೋಗಿರುವ ಇಂದಿನ ಕನ್ನಡ ಬೌದ್ಧಿಕ(?)ರ ಪಟಾಲಂ

ಪಂಥಕೂಪದಲ್ಲಿ ಮುಳುಗಿ ಹೋಗಿರುವ ಇಂದಿನ ಕನ್ನಡ ಬೌದ್ಧಿಕ(?)ರ ಪಟಾಲಂ ನನ್ನ ಕೃತಿ "ಭಾರತ ಒಂದು ಮರುಶೋಧನೆ" ಬಗೆಗಿನ ಅಪಪ್ರಚಾರವು ನಾನು ನನ್ನ ಕೃತಿಯ ಅವಲೋಕನದಲ್ಲಿ ವ್ಯಕ್ತಪಡಿಸಿದ್ದ ಕಳವಳ ವಾಸ್ತವಕ್ಕೆ ಇಳಿದುಬಂದುದರ ಸಾಕ್ಷಿಯನ್ನೊದಗಿಸಿದೆ.
ಆದರೆ, ಹಾಗೆಯೇ ಭಾರತದ ಸತ್ಯದ ಅರಿವು ನಾನು ವ್ಯಕ್ತಪಡಿಸಿದ ಆಶಾವಾದದ ಆಶಾಕಿರಣವಾಗಿ ದಾಕ್ಷಾಯಿಣಿ ಹುಡೇದ್ ಅವರ ವಿಮರ್ಶೆಯಲ್ಲಿ ಮತ್ತು ಅಪಪ್ರಚಾರದ ವಿಮರ್ಶೆಯ ವಿಮರ್ಶೆಯನ್ನು ಮಾಡಿದ Mallikarjuna Tankada ಅವರ ಅಭಿಪ್ರಾಯದಲ್ಲಿ ಮೂಡಿಬಂದಿದೆ. ಸತ್ಯವನ್ನು ಯಾರೂ ಮುಚ್ಚಿಡಲಾಗದು ಎಂಬುದಕ್ಕೆ ಇದೇ ಸಾಕ್ಷಿ! ಬನ್ನಿ, ಸತ್ಯಪಂಥವನ್ನು ಬೆಳೆಸೋಣ.
Mallikarjuna Tankada ಬರೆಯುತ್ತಾರೆ:
ಒಬ್ಬ ಇತಿಹಾಸ ವಿದ್ಯಾರ್ಥಿಗೆ ಆಧಾರ ತಿಳಿಯದೆ ಮಾತಾಡಬಾರದು ಅನ್ನೊದು ಕನಿಷ್ಟ ತಿಳುವಳಿಕೆ. ಶ್ರೀಯುತ ರೇಣುಕಾರಾದ್ಯರ ಎಲ್ಲ ಪೋಸ್ಟುಗಳನ್ನ ಬೆದಕಿನ ಆಧಾರದ ಮೇಲಷ್ಟೆ ಹೇಳುವುದಾದರೆ, ಅವರಿಗೆ history and historiography ಗಳ ಅರ್ಥ ಮತ್ತು ವ್ಯತ್ಯಾಸದ ಅರಿವೇ ಇಲ್ಲ. ಒಂದು ಇತಿಹಾಸದ ಕುರಿತಾದ ಪುಸ್ತಕದ ವ್ಯಾಖ್ಯಾನ ಮತ್ತು ಹರವುಗಳ ವಿಶ್ಲೇಷಣೆಯ ಪರಿಭಾಷೆ ಅವರಿಗೆ ದಕ್ಕಿದ ಶಿಸ್ತು ಅಲ್ಲವೆಂದು ನಿಖರವಾಗಿ ಹೇಳಬಲ್ಲೆ.
ಉದಾ- ೧. ರವಿಯವರು ಪ್ರತಿಯೊಂದು ಸಾಧ್ಯತೆಗೂ ಪರಮರ್ಸಿತ ಅಕಾರಾದಿಗಳನ್ನ ನೀಡಿದ್ದಾರೆ. ಇದು ಒಬ್ಬ ಶುದ್ದ ಇತಿಹಾಸ ಕೆದರುವವನ ಪಕ್ಕಾ ಲಕ್ಷಣ.
೨. ರೇಣುಕಾರಾಧ್ಯರು ಇತಿಹಾಸ ಪ್ರಜ್ಞೆಯಲ್ಲಿ ಸೊನ್ನೆ. ಕಾರಣ, ಬಲವಾದ ಆಧಾರಗಳ ಮೇಲೆ ನಿಂತಿರುವ ಕೃತಿಯ ವಿಮರ್ಶೆಗೂ ಪ್ರಬಲ ಅಧ್ಯಯನದ ಆಧಾರ ಮತ್ತು ಕೃತಿಗಳ ಆಧಾರ ಬೇಕು. ಆದರೆ ರಾಧ್ಯರು ಇಲ್ಲಿ ಸಂಪೂರ್ಣ ಸೋತಿದ್ದಾರೆ. ಏಕೆಂದರೆ ಹಂಜರ ಕೃತಿಯು ಯಾಕೆ ನಿರಾಸೆ ಮೂಡಿಸಿದೆ ಅನ್ನುವುದಕ್ಕೆ ಒಂದು ಆಧಾರ ಕೂಡ ನೀಡದೆ ಇರೋದು ಅವರ ಖಾಲಿತನ ತೋರಿಸುತ್ತದೆ.
೩. " ಆ ಕೃತಿ ಬಗ್ಗೆ ಇನ್ನೊಮ್ಮೆ ಬರೆಯಬಾರದು ಅಂದುಕೊಂಡಿದ್ದೆ" ಎಂದು ಬರೆದು ಕೊಂಡಿದ್ದಾರೆ. ಇದು ಅವರ ಚೌಟಳೆತೆಯ ಅಧ್ಯಯನದ ದೂರ ತಿಳಿಸುತ್ತೆ.. ಹಾ.ಹಾ.. ಪಾಪಾ ಅವರಿಗೆ ರವಿಯವರು ಕೊಟ್ಟಿರುವ ಆಕರಗಳ ಒಂದು ಕೃತಿಯು ತಿಳಿದಿಲ್ಲ ..ತಿಳಿದಿದ್ದರೆ ಹೀಗಾಡುತ್ತಿರಲಿಲ್ಲ!
೪. ಪ್ರತಿಕ್ರಿಯಿಸಿರುವ ಆನೇಕರು ರಾಧ್ಯರ ಸಿಗರೇಟ್ ತುದಿಯ ಬೆಂಕಿಯನ್ನೆ ಬ್ರಹ್ಮಾಂಡ ಜ್ಯೋತಿ ಅದ್ಕೊಂಡಿದ್ದಾರೆ. ಏಕಂದ್ರೆ ಅವರುಗಳೇ ಹೇಳಿಕೊಂಡಂತೆ, ಅವರ್ಯಾರೂ ಈ ಕೃತಿಯನ್ನು ಓದಿದವರಲ್ಲ.
೫. ಒಬ್ಬ ಮಹಿಳಾ ಶಕ್ತಿ ತಮ್ಮ ಸಿಟ್ಟಿನ ಧಾಟಿಯಲ್ಲಿ, ಕಟ್ಟಾದ ಹಾವಿನ ಬಾಲದಂತೆ ನಾಲಿಗೆಯನ್ನ ಚಟಪಟಿಸಿದ್ದಾರೆ. ಅದರೆ ಅದಕ್ಕೂ ಮೊದಲು ಅವರೇ ನಾನ್ಸೆಸ್, ಚಿಂಗಿ.‌ ಹೀಗೆ ಸ್ಖಲಿಸಿಕೊಂಡಿದ್ದಾರೆ. ಇದನ್ನು ಬುಲ್ ಶಿಟ್ ಅನ್ನಬಹುದು ನಾವು.
೬. ಕೃತಿಯನ್ನ ಓದದೇನೆ ಒಬ್ಬ ಮಹಾಶಯರು ಪರ್ವ ಅಂಥ ಅಧ್ಯಾಯಗಳನ್ನು ಕರೆದಿದ್ದಕ್ಕೆ ಓದಿಲ್ಲವಂತೆ ಇದನ್ನ ಹೇಗೆ ವಿಶ್ಲೇಷಿಸಲಿ ಹೇಳಿ!
೭. ಈ ಥರದ ಚರ್ಚೆಯಿಂದ ಕೃತಿಗೆ ಪ್ರಚಾರ ಸಿಗುತ್ತಿದೆ ಎಂದು ಮತ್ತೊಬ್ಬರು ವಕ್ರ ವಿಚಾರ ನುಡಿದಿದ್ದಾರೆ. ಆದರೆ ನಿಜವೆಂದರೆ ಒಬ್ಬ ಅಧ್ಯಯನಶೀಲನ ಕೃತಿಯನ್ನ ಆರಂಭದಲ್ಲೇ ಹೊಸಕಲು ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ದಾರೆ.
೮. ಕೊನೆಗೆ ರಾಧ್ಯರವರು "ವ್ಯಕ್ತಿ ಒಳ್ಳೆಯವರು" ಎಂದಿರುವುದು ಅವರ ಹೊರ-ಒಳಗಿನ ತಾಕಲಾಟವನ್ನ ತಿಳಿಸುತ್ತೆ. ಓದುಗರಿಗೆ ಅವರ ಬಗ್ಗೆ ಮ್ಲಾನತೆ ಉಂಟಾಗುತ್ತದೆ.
೯. ಪೇಚಿಗೆ ಸಿಲುಕಿರೋದು ರವಿಯವರಲ್ಲ .. ನೀಗದ ವಿಷಯಕ್ಕೆ ಕೈಹಾಕಿ, ಸ್ವಂತಿಕೆ ಇಲ್ಲದ ಗುಂಪಿನ ಸಮರ್ಥಿಗಳೇ ತಾವುಗಳು. ತಮಗೆ ಅದು ಇದ್ದರೆ ರವಿಯವರ ಆಧಾರಗಳನ್ನ ಆಧಾರಸಹಿತ ಹೀಗಳೆಯಿರಿ ..... ಗೊತ್ತು, ಆಡಿಕೊಳ್ಳುವ ದಬ್ಬಾಕಿದ ಕೊಡವೆಂದು.
ಓದುಗರೇ ಸ್ವಂತಿಕೆ ಬೆಳೆಸಿಕೊಳ್ಳಿ... ಸ್ವಂತ ಇಚ್ಚೆಯಿಂದ ಓದಿ.
ರೇಣುಕಾರಾಧ್ಯರದು ಈರ್ಶೆ, ವಿಮರ್ಶೆಯಲ್ಲ. ಅವರಾರು ಸ್ವಂತಿಕೆಯಿಂದ ಓದಿದವರಲ್ಲ. ಸ್ವಲ್ಪ ಓದಿದ್ದರೂ ಅದು ರೇಣುಕಾರಾಧ್ಯರು ನೋಟಿಸಿದ ಕೆಲವು ಉಪ್ಪಡಿ ಪುಸ್ತಕಗಳಷ್ಟೆ.
ರವಿಯವರು ಆರಂಭದಲ್ಲಿ ರಾಧ್ಯರು ಉತ್ತಮ ವಿಮರ್ಶಕರಾಗುವ ಲಕ್ಷಣಗಳಿವೆ ಎಂದಿದ್ದಕ್ಕೆ ಗೌರವವಿತ್ತು. ಆದರೆ ಅವರಲ್ಲಿ ಆ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಉತ್ತಮ ವಿಮರ್ಶಕ ಯಾವಗುಂಪಿಗೂ ಸೇರಬಾರದು. ಇವರಲ್ಲಿ ಪಂಥವಿಷ ತುಂಬಿದೆ. ಸಾಧ್ಯವಾದರೆ ತೇಜಸ್ವಿಯವರ ವಿಮರ್ಶೆಯ ವಿಮರ್ಶೆ ಓದಿದರೆ ಸಾಕು.

ಬುದ್ದಿ ಬಂಡವಾಳಶಾಹಿಗಳ ಸಂಶೋಧ(ಷ)ಣೆ!

ಬುದ್ದಿ ಬಂಡವಾಳಶಾಹಿಗಳ ಸಂಶೋಧ(ಷ)ಣೆ!
ಈ ಬರಹ ಯಾರನ್ನೂ ಅವಹೇಳನ ಮಾಡಲಲ್ಲ. ಈ ಲೇಖನದ ಲೇಖಕ ಮಿತ್ರರು ಇದೇ ರೀತಿ ಹಲವರನ್ನು ಹೆಸರಿಸಿ ಸಾಕಷ್ಟು ಆಕ್ಷೇಪಗಳನ್ನು ಸಾಮಾಜಿಕ ಜವಾಬ್ದಾರಿಯಿಂದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನು ಕೂಡ ಇದು ವೈಯಕ್ತಿಕ ಅವಹೇಳನ ಮಾಡಲಲ್ಲದೇ ಸತ್ಯವನ್ನು ಎತ್ತಿಹಿಡಿಯುವ ಅವರದೇ ರೀತಿಯ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಬರೆಯುತ್ತಿದ್ದೇನೆ.
"ವಿಶ್ವಾಸಾರ್ಹ ಪ್ರಜಾವಾಣಿ"ಯಲ್ಲಿ ಬಂದ ಈ ಬರಹ ಕೆಲವು ವರ್ಷಗಳ ನಂತರ ನನ್ನ ಗಮನ ಸೆಳೆಯಿತು. ಕಾಲ ಹಳೆಯದಾದರೂ ಸತ್ಯವನ್ನು ಎತ್ತಿಹಿಡಿಯಬೇಕಾದುದು ಇಂದಿನ ಜರೂರಿ ಎಂದುಕೊಂಡಿದ್ದೇನೆ. ಏಕೆಂದರೆ ಇದು "ದುರಿತ ಕಾಲ!"
ಇಲ್ಲಿ ಲೇಖಕರು, ನೊಬೆಲ್ ವಿಜೇತ ಸಂಗೀತಗಾರ ಬಾಬ್ ಡಿಲಾನ್ ಜೂಯಿಷ್ ಎಂಬ ಸಣ್ಣ ಬುಡಕಟ್ಟು ಹಿನ್ನೆಲೆಯವನು ಎನ್ನುತ್ತಾರೆ. ನಂತರ ಆತನ ಪೂರ್ವಜರು ಟರ್ಕಿಯಿಂದ ಅಮೇರಿಕೆಗೆ ವಲಸೆ ಬಂದವರು ಎನ್ನುತ್ತಾರೆ. ವಾಸ್ತವದಲ್ಲಿ ಬಾಬ್ ಒಬ್ಬ ಜೂ/ಯಹೂದಿ. ಆತನ ಕುಟುಂಬ ಟರ್ಕಿಯಿಂದ ಬಂದದ್ದಲ್ಲ. ಲೇಖಕರು ಪ್ರತಿಪಾದಿಸುವ ಕಮ್ಯುನಿಸ್ಟ್ ಸರ್ಕಾರದ ದೇಶದಿಂದ ಬಾಬ್ ನ ಹಿರಿಯರು ಬಂಡವಾಳಶಾಹಿ ಅಮೇರಿಕೆಗೆ ಬೇಡಿಕೊಂಡು ಅರ್ಜಿ ಹಾಕಿ ವಲಸೆ ಬಂದವರು!
ಕಮ್ಯುನಿಸ್ಟ್ ಸರ್ಕಾರದ ಜನಾಂಗೀಯ ದಬ್ಬಾಳಿಕೆಯಲ್ಲಿ ನೊಂದು ನಿರಾಶ್ರಿತರಾಗಿ ಅಂದಿನ USSR ರಷ್ಯದಿಂದ ಅಂದರೆ ಇಂದಿನ ಉಕ್ರೇನಿನಿಂದ ಅಮೇರಿಕೆಗೆ ಆತನ ಹಿರಿಯರು ವಲಸೆ ಬಂದವರು.
ಇದು ಸ್ಮಾರ್ಟ್ ಫೋನ್ ಇರುವ ಯಾರಾದರೂ ಕಂಡುಕೊಳ್ಳಬಹುದಾದ ಸಾಮಾನ್ಯ ಸಂಗತಿ. ಆದರೆ ಹೆಸರಾಂತ ವಿಶ್ವವಿದ್ಯಾಲಯದ ಸಂಶೋಧಕರಾದ ಲೇಖಕರು ಬಾಬ್ ನ ಹಿನ್ನೆಲೆಯನ್ನು ಬೇರೊಂದು "ಸಂಶೋಧನಾ ನೆಲೆ"ಯಲ್ಲಿ ಕಂಡುಕೊಂಡಿರಬಹುದೆನಿಸುತ್ತದೆ.
ಏನದು ಆ "ಸಂಶೋಧನಾ ನೆಲೆ?"
ಇಂದಿನ "ಸಂಶೋಧನಾ ನೆಲೆ"ಯ ಪ್ರಮುಖ ಪದಗಳು "ಬುಡಕಟ್ಟು", "ಪರಿಶಿಷ್ಟ", "ಅಲ್ಪಸಂಖ್ಯಾತ", "ಅವೈದಿಕ", "ಬುದ್ಧ", "ದ್ರಾವಿಡ" ಇತ್ಯಾದಿ ಇತ್ಯಾದಿ. ಈ ಪದಗಳು ನಿಮ್ಮ ಸಂಶೋಧನೆಯಲ್ಲಿದ್ದರೆ ಮಾತ್ರ ಅದು ಸಂಶೋಧನೆ, ಇಲ್ಲದಿದ್ದರೆ ಅದು ಪೂರ್ವಾಗ್ರಹ, ಮತೀಯ, ಬ್ರಾಹ್ಮಣ್ಯ, ಹಿಂದೂ, ಜೀವಪರವಲ್ಲದ ಇತ್ಯಾದಿ ಇತ್ಯಾದಿ!
ಹಾಗಾಗಿ ನಮ್ಮ ಸಂಶೋಧಕರು ಬಾಬ್ ಅನ್ನು ಬುಡಕಟ್ಟು ಎಂದು, ಆತನ ಹಿರಿಯರು ಟರ್ಕಿಯಿಂದ ಬಂದವರೆಂದೂ ಸಂಶೋಧನಾತ್ಮಕವಾಗಿ ಹೇಳಿದ್ದಾರೆ. ಇದು ಏಕೆಂದರೆ ತಮ್ಮ ಲೇಖನ ಜೀವಪರವಾಗಿ ನಮ್ಮಲ್ಲಿನ ಬುಡಕಟ್ಟು ಮತ್ತು ಅಲ್ಪಸಂಖ್ಯಾತ ಜನಾಂಗ ತಮ್ಮನ್ನು ಬಾಬ್ ಡಿಲಾನ್ ಒಟ್ಟಿಗೆ ಸಮೀಕರಿಸಿಕೊಂಡು ತಮ್ಮಂತೆಯೇ ಬಾಬ್ ಒಬ್ಬ ಬ್ರಾಹ್ಮಣ್ಯ/ಬಂಡವಾಳಶಾಹಿತನದ ವಿರುದ್ಧ ಸಿಡಿದೆದ್ದ ನಮ್ಮವನೇ ಆದ ಹೋರಾಟಗಾರ ಎಂದುಕೊಳ್ಳಲಿ ಎಂದು ಜೀವಪರ, ಸಿದ್ದಾಂತಪರ ಸ್ಪೂರ್ತಿಯನ್ನು ತುಂಬಿದ್ದಾರೆ, ಅಸಲಿಗೆ ಅದು ಹುಸಿಯಾದರೂ ಕೂಡ. ಸಾವಿರ ಸುಳ್ಳು ಹೇಳಿ ಒಂದು ಕಲ್ಯಾಣ ಮಾಡಿಸು ಎಂದು ನಾಣ್ನುಡಿಯೇ ಇದೆಯಲ್ಲವೇ!
ಆದರೆ ಹಕೀಕತ್ತಿನಲ್ಲಿ ಈ ಪ್ರಗತಿಪರರೆಲ್ಲಾ ವಿರೋಧಿಸುವ ಇಸ್ರೇಲ್ ದೇಶದ ಹೋರಾಟವನ್ನು ಬಾಬ್ ಎತ್ತಿ ಹಿಡಿದಿದ್ದಾನೆ. ಹಿಟ್ಲರನ ಅಟ್ಟಹಾಸ, ರಷ್ಯಾ ಕಮ್ಯುನಿಸ್ಟರ ಜನಾಂಗೀಯ ದ್ವೇಷವನ್ನು ಕಂಡಿರುವ ಯಹೂದಿಗಳು, ಈಗ ಇಸ್ರೇಲ್ ಮುಖಾಂತರ ಜಿಹಾದ್ ವಿರುದ್ಧ ಜಿಹಾದ್ ಘೋಷಿಸಿದ್ದಾರೆ. ಆ ಇಸ್ರೇಲಿ ಜಿಹಾದ್ ಅನ್ನು ಬಾಬ್ ಬೆಂಬಲಿಸಿದ್ದಾನೆ ಎಂಬುದು "ವಿಶ್ವಾಸಾರ್ಹ"ವಷ್ಟೇ ಅಲ್ಲದೆ ಸತ್ಯ ಕೂಡ!
ಇದು ಇಂದಿನ ಸಂಶೋಧನೆ, ಜೀವಪರ, ಪ್ರಗತಿಪರ, ಉದಾರವಾದ, ಸೈದ್ಧಾಂತಿಕ, ಇತ್ಯಾದಿ ಇತ್ಯಾದಿ ಎನ್ನುವವರ some/sum ಶೋಧನೆ! ಇಂತಹ ಸಂಶೋಧಕರ ತಂಡ ಬುದ್ಧತತ್ವದ "ತೇರಾ"ವಾದವನ್ನು "ಮೇರಾ"ವಾದವಾಗಿಸಿ, ವೀರಶೈವ ಲಿಂಗಾಯತ ಪಂಥವನ್ನು ಧರ್ಮವೆನಿಸಿ ಮತ್ತವುಗಳು ಬೇರೆ ಬೇರೆ ಎಂದು someಶೋಧಿಸಿದ್ದಾರೆ. ಇಂತಹ "ಬುದ್ದಿ ಬಂಡವಾಳಶಾಹಿ"ಗಳು ಭಾರತದ ಇತಿಹಾಸದಾದ್ಯಂತ ಹೇಗೆ ತಿರುಚಿ, ಮರೆಮಾಚಿ, ವೈಭವೀಕರಿಸಿ, ತುಚ್ಹೀಕರಿಸಿದ್ದಾರೆಂದು ಅರಿಯಲು ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದಬೇಕಾಗುತ್ತದೆ.
ಇರಲಿ, ಇಂತಹ ಅಸತ್ಯದ, ಅವಾಸ್ತವದ ಆದರೆ ಕರುಣಾಜನಕವಾದ ಭಾವನಾತ್ಮಕ ಸೃಜನಶೀಲತೆಯಿಂದ ಕೂಡಿದ ಕಥೆಗಳಿಗೆ ಕಣ್ಣೀರು ಹಾಕದೆ ನಿಮ್ಮ ಬೆರಳುಗಳಿಗೆ ಕೆಲಸ ಕೊಟ್ಟು ಅನಿಯಮಿತ ಅಂತರ್ಜಾಲವನ್ನು ಸತ್ಯಶೋಧನೆಗೆ ಬಳಸಿಕೊಳ್ಳಿ.
RCEPಯಿಂದ ಹಾಲು ಆಸ್ಟ್ರೇಲಿಯಾ/ನ್ಯೂಜಿಲ್ಯಾಂಡಿನಿಂದೆಲ್ಲಾ ಭಾರತಕ್ಕೆ ಬಂದು ಇಲ್ಲಿನ ಹಸು ಕಟ್ಟಿ ಜೀವನ ಮಾಡುವ ರೈತರು ಹಾಳಾಗುತ್ತಾರೆ ಎನ್ನುವ ಹಾಸ್ಯಾಸ್ಪದ ಕರುಣಾಜನಕವಾದ ಕತೆ ಈ ತಂಡದ ಹೊಸ ಶೋಧನೆ!
ಆಸ್ಟ್ರೇಲಿಯಾ/ನ್ಯೂಜಿಲ್ಯಾಂಡ್ ದೇಶಗಳಲ್ಲಿ ಒಂದು ಲೀಟರ್ ಹಾಲಿನ ಬೆಲೆ, ಭಾರತಕ್ಕೆ ಸಾಗಾಣಿಕೆ ವೆಚ್ಚ/ಸಮಯ (ಏರೋಪ್ಲೇನಿನಲ್ಲಿ ತಂದರೆ ಲಕ್ಷಾಂತರ ಏರೋಪ್ಲೇನುಗಳು ನಿತ್ಯ ಹಾಲು ಹೇರಿಕೊಂಡು ಬರಬೇಕಾಗುತ್ತದೆ. ಹಡಗಾದರೆ ತಿಂಗಳ ಮೇಲೆ ಸಮಯ ಬೇಕಾಗುತ್ತದೆ. ಹಾಲು ಪೆರಿಶಬಲ್ ವಸ್ತು)
ಇವುಗಳ ಒಂದು ವಾಸ್ತವದ ನೆಲೆಯಲ್ಲಿ ಆ ಹಳಸಲು ಹಾಲು ಐನೂರು ರೂಪಾಯಿಗೆ ಒಂದು ಲೀಟರ್ ಆಗುತ್ತದೆ. ಅದನ್ನು ಆ ಬೆಲೆಗೆ ಯಾರು ಕೊಳ್ಳುವರು? ಇನ್ನು ಹಾಲಿನ ಉತ್ಪನ್ನ ಚೀಸ್ (ಪನೀರ್ ಅಲ್ಲ), ಇದು ಭಾರತೀಯ ಅಡುಗೆಗಳಲ್ಲಿ ಬಳಸುವಂತಹದಲ್ಲ. RCEP ಒಳ್ಳೆಯದೋ ಕೆಟ್ಟುದೋ ಎನ್ನುವುದಕ್ಕಿಂತ, RCEP ವಿರೋಧಿಸುವವರು ಕೊಡುವ ಉತ್ಪನ್ನಗಳ ವಾಸ್ತವ ಹೀಗಿದ್ದು ಅವರೆಲ್ಲರ ವಾದ ಹಾಸ್ಯಾಸ್ಪದವಾಗಿದೆ. ಇನ್ನು ಚೀನಾದಲ್ಲಿರುವ ಡೈರಿಗಳು ಹಾಲಿಗೆ ಇರುವುದಲ್ಲ, ದನದ ಮಾಂಸಕ್ಕಾಗಿ ಇರುವವು.
ಇಂತಹ ಕರುಣಾಜನಕವಾದ ಕಣ್ಣೀರಿನ ಕಥೆ ಹೆಣೆಯುವವರ ದೊಡ್ಡ ತಂಡವೇ ಸಾಮಾಜಿಕ ತಾಣಗಳಲ್ಲಿ ದಂಡಿಯಾಗಿ ನಿಮ್ಮನ್ನು ನಿಮ್ಮ ಅರಿವಿಗೆ ಬಾರದಂತೆ ಕಣ್ಣೀರಿಡಿಸುತ್ತಿದೆ ಮತ್ತು ದಂಡಿಸುತ್ತಿದೆ. ಅದರಲ್ಲೂ ನೀವು ಪರಿಶಿಷ್ಟ, ಬುಡಕಟ್ಟು, ಬಡ ಆರ್ಥಿಕ ಹಿನ್ನೆಲೆ, ಕನ್ನಡ ಮಾಧ್ಯಮದ ಹಿನ್ನೆಲೆ, ಮತ್ತು ಭಾವಜೀವಿಗಳಾಗಿದ್ದರೆ ನೀವೇ ಇವರ ಪ್ರಮುಖ ಗುರಿ. ನಿಮ್ಮನ್ನು ಕಾವ್ಯ ಕಮ್ಮಟ, ಸಂವಾದ, ಸಾಹಿತ್ಯ ಚರ್ಚೆ ಎಂಬ ಕ್ಯಾಂಪುಗಳ ಮುಖಾಂತರ ಆಕರ್ಷಿಸಿ ವ್ಯವಸ್ಥಿತವಾಗಿ ನಿಮ್ಮ ಅಂತರಂಗದಲ್ಲಿ ಕೀಳರಿಮೆಯನ್ನು ತುಂಬಿ ಬಹಿರಂಗವಾಗಿ ಹೇಗೆ ಹೋರಾಟಗಳ ಮೂಲಕ ಮೇಲರಿಮೆಯನ್ನು ಪ್ರದರ್ಶಿಸಬೇಕು ಎಂದು ತಲೆ ತಿದ್ದುತ್ತಾರೆ.
ಹಾಗಾಗಿ ನಿಮ್ಮ ಹೃದಯ, ಭಾವುಕತೆಯನ್ನು ತೊಡಗಿಸುವಲ್ಲಿ ತೊಡಗಿಸಿ, ಇಲ್ಲದಿದ್ದರೆ ಕಿಂಡರ್ ಗಾರಟನ್ನಿನಿಂದಲೇ ಲಕ್ಷ, ಲಕ್ಷ ಸುರಿದು ಕಲಿತು ಕೂಡಾ ಗುಯ್ಗುಟ್ಟುವ ಗುಂಗಾಡಿಗಳು ನೀವಾಗುವುದು ಶತಸಿದ್ದ!

ಕೌದಿಯ ಮುಸುಕಿನಾಚೆಯ ಸೌದಿ!

ಕೌದಿಯ ಮುಸುಕಿನಾಚೆಯ ಸೌದಿ!
ನನ್ನ ಆತ್ಮೀಯ ಮಿತ್ರರಾದ ಸೌದಿ ಅರೇಬಿಯಾದ ಮಾನವ ಹಕ್ಕುಗಳ ಆಯೋಗದ ನಿರ್ದೇಶಕರಾದ ಹೀಶಮ್ ಅಲಾಮಾರ್ ಅಚಾನಕ್ ಆಗಿ ನಾನು ಉಳಿದುಕೊಂಡಿದ್ದ ಬೆಂಗಳೂರಿನ ಹೋಟೆಲಿನಲ್ಲಿ ಕಾಣಿಸಿಕೊಂಡರು. ನಾನವರನ್ನು ಹಲವಾರು ವರ್ಷಗಳ ಹಿಂದೆ ಅಮೆರಿಕಾದ ಏರ್ಪೋರ್ಟ್ ಒಂದರಲ್ಲಿ ಭೇಟಿಯಾದಾಗ ಸೌದಿ ರಾಯಭಾರ ಕಚೇರಿಯಲ್ಲಿ ಹುದ್ದೆಯನ್ನು ಹೊಂದಿದ್ದರು. ಅಂದು ಹೆಚ್ಚು ಮಾತನಾಡಲಾಗಿರದ ನಮಗೆ ಕಳೆದ ವಾರ ಭರಪೂರ ಮೂರು ದಿನಗಳ ಸಮಯ ಸಿಕಿತ್ತು. ನನ್ನನ್ನು ನಂದಿಬೆಟ್ಟ, ಬನ್ನೇರುಘಟ್ಟ ಸುತ್ತಿಸಿದ ಹೀಶಮ್ ರನ್ನು ನಾನು ನನ್ನ ಶಾಸಕ ಮಿತ್ರರುಗಳ ಸಹಾಯದಿಂದ ವಿಧಾನಸೌಧ, ಶಾಸಕರ ಭವನ ಸುತ್ತಿಸಿದೆ.
ಮಾನವ ಹಕ್ಕುಗಳ ಪ್ರಚಲಿತ ಸಮಸ್ಯೆಯಾದ ಮಾನವ ಕಳ್ಳಸಾಗಣೆಯೂ ಸೇರಿದಂತೆ ಇ-ಗವರ್ನೆನ್ಸ್, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ, ಧರ್ಮ, ವಿದೇಶದಲ್ಲಿರುವ ಭಾರತೀಯರ ಕಟ್ಟುನಿಟ್ಟಿನ ನಿಯಮ ಪಾಲನೆ ಆದರೆ ಭಾರತದಲ್ಲಿರುವ ಭಾರತೀಯರ ಎಲ್ಲಾ ನಿಯಮಗಳ ಉಲ್ಲಂಘನೆಯ ಕುರಿತು ಸೋಜಿಗ,
ಬೆಂಗಳೂರು ಟ್ರಾಫಿಕ್ ಹೀಗೆ ಎಲ್ಲದನ್ನೂ ಚರ್ಚಿಸುವ ಮುನ್ನ ಸೌದಿ ಕುರಿತಾದ ಕೌತುಕದ ಬಾಸುಂಡೆ ಮೂಡಿಸುವ ಛಡಿಯೇಟು ಶಿಕ್ಷೆ, ತಲೆದಂಡ, ಕೈ ಕತ್ತರಿಸುವುದು, ಅನ್ಯಧರ್ಮದ ಮಹಿಳೆಯರೂ ಸೇರಿದಂತೆ ಎಲ್ಲಾ ಮಹಿಳೆಯರ ಮೇಲೆ ಬುರ್ಖಾ ಹೇರಿಕೆ, ಸ್ತ್ರೀ ಅಸಮಾನತೆ, ಶುಕ್ರವಾರದ ನಮಾಜು ವೇಳೆ ರಸ್ತೆಗಳಲ್ಲಿ ಯಾರೂ ಸಂಚರಿಸದಂತೆ ನಿಯಮ ಹೇರಿಕೆ, ಧಾರ್ಮಿಕ ಗುರುಗಳ ಕಾನೂನು ಚಲಾಯಿಸುವಿಕೆ, ಇತ್ಯಾದಿ ಇತ್ಯಾದಿಯಾಗಿ ನನ್ನ ಪತ್ರಕರ್ತ ಮಿತ್ರರು ಮತ್ತು ರಾಜಕಾರಣಿ ಮಿತ್ರರು ಪ್ರಶ್ನೆಗಳನ್ನು ಕೇಳಿದರು.
ಅದಕ್ಕೆ ನಸುನಗುತ್ತ ಹೀಶಮ್ "ನೋಡಿ, ನೀವು ಹೇಳಿದ ವಿಚಾರಗಳಲ್ಲಿ ಬಹುತೇಕ ಸುಳ್ಳು. ನೂರಕ್ಕೆ ನೂರು ಪ್ರತಿಶತ ಈ ವಿಚಾರಗಳನ್ನು ಉದ್ಯೋಗಕ್ಕೆ ಸೌದಿಗೆ ಹೋಗಿಬಂದ ಭಾರತೀಯರ ಮುಖಾಂತರ ನೀವು ತಿಳಿದುಕೊಂಡಿರುತ್ತೀರಿ. ಆ ಉದ್ಯೋಗಿಗಳು ಕೂಡ ಸೌದಿ ನಿಯಮಗಳನ್ನು ಓದಿ ತಿಳಿಯದೇ ತಮ್ಮಂತೆಯೇ ಉದ್ಯೋಗಕ್ಕೆ ಬಂದ ಇತರೆ ಭಾರತೀಯ ಮೂಲದವರನ್ನೋ, ಇತರೆ ವಿದೇಶಿ ನೌಕರರನ್ನೋ ಕೇಳಿ ತಿಳಿದುಕೊಂಡಿರುತ್ತಾರೆ. ನಾನು ಇದೆಲ್ಲವೂ ಊಹಾಪೋಹ ಎಂದರೆ ನಂಬುವಿರಾ! ಇರಲಿ, ನೀವು ಕೇಳಿದ ಪ್ರತಿಯೊಂದು ವಿಚಾರದ ಸತ್ಯವನ್ನು ಹೇಳುತ್ತಾ ಸಾಗುವೆ ಕೇಳಿ" ಎಂದರು.
ತಲೆದಂಡ - ಈ ಶಿಕ್ಷೆಯನ್ನು ಕೊಲೆ ಮಾಡಿದವರಿಗೆ ಕೊಡಲಾಗುತ್ತದೆ. ಅಪರಾಧ ಕೋರ್ಟಿನಲ್ಲಿ ಸಾಬೀತಾಗಬೇಕು. ಆದರೆ ಕೊಲೆಯಾದ ವ್ಯಕ್ತಿಯ ಪೋಷಕರು ಯಾ ಆತನ ಹೆಂಡತಿ/ಗಂಡ/ಮಕ್ಕಳು ಕೊಲೆ ಮಾಡಿದವನನ್ನು ಕ್ಷಮಿಸಿದ್ದೇವೆ ಎಂದರೆ ಸೌದಿ ಕೋರ್ಟ್ ಕೂಡ ಕ್ಷಮಿಸಿ ಬಿಟ್ಟುಬಿಡುತ್ತದೆ. ಅದೇ ಅಪರಾಧಿಯೇನಾದರೂ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರೆ, ಆತನಿಗೆ ಯಾವ ಕ್ಷಮೆಯೂ ಇಲ್ಲ. ತಲೆದಂಡ ಶತಸಿದ್ದ. ಇದು ಸೌದಿ ಸರ್ಕಾರ ಮಹಿಳೆಯರ ಬಗ್ಗೆ ತೋರುವ ಕಳಕಳಿ.
ಕಳ್ಳತನಕ್ಕೆ ಕೈಕಡಿಯುವುದು - ಇದು ಸತ್ಯ. ಆದರೆ ಎಲ್ಲಾ ಕಳ್ಳತನಗಳಿಗೂ ಕೈಕಡಿಯುವುದಿಲ್ಲ. ಉದಾಹರಣೆಗೆ ನೀವು ನಿಮ್ಮ ಮನೆಯ ಟೇಬಲ್ಲಿನ ಮೇಲೆ ಬೆಲೆಬಾಳುವ ವಸ್ತುವನ್ನು ಬಿಟ್ಟಿದ್ದು ಅದನ್ನು ಕಂಡ ನಿಮ್ಮ ಮನೆ ಕೆಲಸದವರು ಅಥವಾ ದಾರಿಹೋಕರು ಕದ್ದರೆ ಅದಕ್ಕೆ ಅವರ ಕೈಕತ್ತರಿಸುವುದಿಲ್ಲ. ಯಾವ ರಕ್ಷಣೆಯೂ ಇಲ್ಲದೆ ಸುಲಭವಾಗಿ ಸಿಕ್ಕುವ ವಸ್ತುವಿನ ಆಸೆಯಿಂದಾದ ಕಳ್ಳತನದ ಅಪರಾಧಕ್ಕೆ ಕೈಕಡಿಯುವ ಶಿಕ್ಷೆಯಿಲ್ಲ. ಅದಕ್ಕೆ ಸೂಕ್ತವಾದ ಜೈಲುವಾಸ ಅಥವಾ/ಮತ್ತು ಛಡಿಯೇಟಿನ ಶಿಕ್ಷೆಯಿರುತ್ತದೆ. ಅದೇ ಕಳ್ಳತನ ಮಾಡಲೆಂದೇ ಬಾಗಿಲು ಮುರಿದು, ಲಾಕರ್ ಒಡೆದು ಮಾಡಿದ ಕಳ್ಳತನಕ್ಕೆ ಕೈ ಕಡಿಯಲಾಗುತ್ತದೆ. ಏಕೆಂದರೆ ಅದು ಉದ್ದೇಶಿತ ಮತ್ತು ಯಾವ ಪ್ರಚೋದನೆಯೂ ಇಲ್ಲದೆ, ಅಪರಾಧಿ ಕಳ್ಳತನವನ್ನು ಮಾಡುವ ಪೂರ್ವಭಾವಿ ಮನಸ್ಸಿನಿಂದ ಮಾಡಿರುತ್ತಾನೆ. ಹಾಗಾಗಿ ಇದಕ್ಕೆ ಕೈಕಡಿಯುವುದು ತಪ್ಪದು.
ಛಡಿಯೇಟು - ಛಡಿಯೇಟು ಎಂದರೆ ಶಕ್ತಿಯನ್ನು ಕ್ರೋಢೀಕರಿಸಿ ಚಾಟಿಯಿಂದ ಬಾಸುಂಡೆ ಬರುವಂತೆ ಅಥವಾ ಪಕ್ಕೆಲುಬುಗಳು ಮುರಿದು ಅಂಗವಿಕಲರಾಗುವಂತೆ ಹೊಡೆಯುವುದೆಂದಲ್ಲ. ಹಾಗೆ ಹೊಡೆದರೆ ನಮ್ಮಲ್ಲಿಗೆ ಯಾವ ದೇಶದವರೂ ಕೆಲಸಕ್ಕೆ ಬರುವುದಿಲ್ಲ. ಮೇಲಾಗಿ ನಮ್ಮ ಮಾನವ ಸಂಪನ್ಮೂಲವನ್ನು ಹೀಗೆ ಹೊಡೆದು ಬಡಿದು ಯಾರು ತಾನೆ ಕಳೆದುಕೊಳ್ಳಲು ಸಿದ್ಧವಿರುತ್ತಾರೆ ಹೇಳಿ. ನೀವೆಂದುಕೊಂಡ ಛಡಿಯೇಟು ಹಿಂಸೆ! ಹಿಂಸೆ ಇಸ್ಲಾಮಿನಲ್ಲಿ ನಿಷಿದ್ಧ. ನೀವು ಡೋಲು ಬಡಿಯುವಂತೆಯೇ ಕೈಯನ್ನು L ಆಕಾರದಲ್ಲಿ ಹಿಡಿದು ಕೋಲಿನಿಂದ ಡೋಲು ಬಡಿದಂತೆಯೇ ನಾವು ಛಡಿಯೇಟು ಕೊಡುವುದು. ನೀವು ನಲವತ್ತು ಛಡಿಯೇಟು ಅನುಭವಿಸಿದರೂ ಅದರಿಂದ ನೋವೇನೂ ಉಂಟಾಗದು. ಬದಲಿಗೆ ಒಂದು ಮಸಾಜ್ ಪ್ರಕ್ರಿಯೆಯಂತಿರುತ್ತದೆ! ಏಕೆಂದರೆ ಇದು ಒಂದು ಸಿಂಬಾಲಿಕ್ ಪ್ರಕ್ರಿಯೆ ಮಾತ್ರ. ನಿಜವಾದ ಶಿಕ್ಷೆಗಳೆಂದರೆ ದಂಡ, ಜೈಲುವಾಸ, ಕೈಕಡಿಯುವುದು, ಮತ್ತು ಡೆತ್ ಪೆನಾಲ್ಟಿಗಳು ಮಾತ್ರ. ಹಾಂ, ಎಲ್ಲಾ ದೇಶಗಳಲ್ಲಿರುವಂತೆಯೇ ನಮ್ಮಲ್ಲೂ ಟ್ರಾಫಿಕ್ ನಿಯಮಗಳ ಉಲ್ಲಂಘನೆಗಳಿಗೆ ದಂಡವಿದೆಯೇ ಹೊರತು ಛಡಿಯೇಟಿಲ್ಲ.
ಕಾನೂನು ಪ್ರಕ್ರಿಯೆ - ನಿಮ್ಮಲ್ಲಿ ಹೇಗೆ ಭಾರತೀಯ ಕಾನೂನು ಶಾಸನವಿದೆಯೋ ಅದೇ ರೀತಿ ನಮ್ಮಲ್ಲಿ ಷರಿಯಾ ಕಾನೂನು ಶಾಸನವಿದೆ. ಅದನ್ನು ಜಾರಿಗೊಳಿಸಲು ನ್ಯಾಯಾಂಗ ವ್ಯವಸ್ಥೆ, ನಮ್ಮ ಕಾನೂನಿನಲ್ಲಿ ಪದವೀಧರರಾದ ವಕೀಲರು ಇದ್ದಾರೆ. ಇದಾವುದೂ ಯಾವುದೋ ಮಸೀದಿಯ ಮುಲ್ಲಾ ಕೊಡುವ ನ್ಯಾಯದ ವ್ಯವಸ್ಥೆಯಲ್ಲ. ಇದೊಂದು ವ್ಯವಸ್ಥಿತ ರಾಷ್ಟ್ರೀಯ ಕಾನೂನು ವ್ಯವಸ್ಥೆ, ಅಮೆರಿಕ, ಯುಕೆ, ಚೈನಾ, ಭಾರತ ಅಥವಾ ಯಾವುದೇ ವ್ಯವಸ್ಥಿತ
ರಾಷ್ಟ್ರಗಳಲ್ಲಿರುವಂತೆಯೇ ಇರುವ ನ್ಯಾಯಾಂಗ ಸುವ್ಯವಸ್ಥೆ. ಇದು ಯಾವುದೇ ಸೌದಿ ಶ್ರೀಸಾಮಾನ್ಯ ಕಾಣುವ ಆಡಳಿತದ ವ್ಯವಸ್ಥೆ.
ವಿಚಾರಣಾ ಹಿಂಸೆ - ಮತ್ತೊಮ್ಮೆ ಹೇಳುತ್ತೇನೆ ಕೇಳಿ, ನಮ್ಮಲ್ಲಿ ಎಂತಹ ಅಪರಾಧಿಗಳೇ ಆದರೂ ಅವರನ್ನು ಹಿಂಸಿಸುವುದಿಲ್ಲ. ಹಿಂಸೆ ಇಸ್ಲಾಮಿನಲ್ಲಿ ಪರಮ ನಿಷಿದ್ಧ. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ಶಿಕ್ಷೆಯನ್ನು ಜಾರಿಗೊಳಿಸುವವರೆಗೆ ಯಾವುದೇ ಹಿಂಸೆಯನ್ನು ಆರೋಪಿಗಳಿಗೆ ಕೊಡುವುದಿಲ್ಲ. ಸರಣಿ ಕೊಲೆ ಅಥವಾ ಸರಣಿ ಅತ್ಯಚಾರಗಳಂತಹ ಅಪರಾಧಗಳಿಂದ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದ ಸಮಾಜ ವಿದ್ರೋಹಿ ಅಪರಾಧಿಗಳ ತಲೆದಂಡದ ನಂತರ ಆತನ/ಆಕೆಯ ದೇಹವನ್ನು ತುಂಡುತುಂಡಾಗಿ ಸಾರ್ವಜನಿಕವಾಗಿ ಕತ್ತರಿಸಲಾಗುತ್ತದೆಯೇ ಹೊರತು ಜೀವಂತವಿದ್ದಾಗ ಯಾವುದೇ ಹಿಂಸೆಯನ್ನು ನೀಡಲಾಗುವುದಿಲ್ಲ. ಇಂತಹ ಘೋರ ಅಪರಾಧವನ್ನು ಮಾಡಿದವರಿಗೆ ಯಾವ ರೀತಿಯ ಅಂತಿಮ ಮರ್ಯಾದೆ ಸಿಗುತ್ತದೆ ಎಂಬ ಸಂದೇಶವನ್ನು ಕೊಡುವುದು ಇದರ ಉದ್ದೇಶ ಮಾತ್ರ, ಮತ್ತಿದು ನಾವು ಪಾಲಿಸುವ ಇಸ್ಲಾಂ ಷರಿಯಾ ಕಾನೂನಿನಲ್ಲಿದೆ.
ಇನ್ನು ಒಂದು ವೇಳೆ ಯಾರಾದರೂ ಅಧಿಕಾರಿಗಳು ಆರೋಪಿಗಳನ್ನು ವಿಚಾರಣೆಯ ವೇಳೆ ಹಿಂಸಿಸಿದ್ದರೆ ಅದು ಅವರಿಗೂ ಮತ್ತು ಆರೋಪಿಯ ನಡುವೆಯೂ ಇರಬಹುದಾದ ವೈಯಕ್ತಿಕ ದ್ವೇಷದಿಂದ. ಆ ಅಧಿಕಾರಿ ಅದಕ್ಕಾಗಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ. ಪೊಲೀಸ್ ಅಧಿಕಾರಿಗಳ ಅಧಿಕಾರ ದುರುಪಯೋಗ ಎಲ್ಲಾ ರಾಷ್ಟ್ರಗಳಲ್ಲಿಯೂ ನಡೆಯುತ್ತದೆ. ಆದರೆ ಅದರ ಪ್ರಮಾಣ ಸೌದಿಯಲ್ಲಿ ಮಾತ್ರ ಅತ್ಯಂತ ಕಡಿಮೆ.
ಮಟ್ಟಾ ಮದುವೆಗಳು - ಇದು ವ್ಯಭಿಚಾರ ಮತ್ತು ವೇಶ್ಯಾವಾಟಿಕೆ ಎಂದೇ ಸೌದಿ ಸರ್ಕಾರದ ನಿಲುವು. ಈ ಮಟ್ಟಾ ಮದುವೆಗಳು ಎಲ್ಲಿ ನಡೆಯುತ್ತವೆಯೋ ಆಯಾಯ ದೇಶಗಳು ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ನಿಮ್ಮ ಹೈದರಾಬಾದಿಗೆ ಅರಬರು ಬಂದು pleasure ಮದುವೆಯಾದರೆ ಅದಕ್ಕೆ ಇಲ್ಲಿನ ಸರ್ಕಾರ ಕ್ರಮ ಕೈಗೊಳ್ಳಬೇಕೆ ಹೊರತು ಸೌದಿ ಸರ್ಕಾರವಲ್ಲ. ಮೇಲಾಗಿ ಈ ರೀತಿ ಮದುವೆಯಾಗುವವರು ಸೌದಿ ಪ್ರಜೆಗಳಾಗಿರದೆ ಇತರೆ ಮಧ್ಯಪ್ರಾಚ್ಯದ ದೇಶಗಳ ಪ್ರಜೆಗಳಿರಬಹುದು. ಒಟ್ಟಾರೆ ಸೌದಿ ಅರೇಬಿಯಾದ ಪ್ರಕಾರ ಇದು ವೇಶ್ಯಾವಾಟಿಕೆ ಮತ್ತದು ತಲೆದಂಡದ ಅಪರಾಧ.
ಬುರ್ಖಾ ಹೇರಿಕೆ - ಇದು ಸುಳ್ಳು. ನಮ್ಮಲ್ಲಿ ಬುರ್ಖಾ ಹೇರಿಕೆಯಿಲ್ಲ. ನನ್ನ ಹೆಂಡತಿ ಮತ್ತು ನಾಲ್ಕು ಹೆಣ್ಣುಮಕ್ಕಳು ಇದುವರೆಗೂ ಬುರ್ಖಾ ಧರಿಸಿಲ್ಲ. ನನ್ನ ಮಗಳು ಅಲ್ಲಿ ಕುಳಿತಿದ್ದಾಳೆ ನೋಡಿ ಎಂದು ಜೀನ್ಸ್ ಮತ್ತು ಟೀಷರ್ಟ್ ತೊಟ್ಟಿದ್ದ ಅವರ ಮಗಳ ಕಡೆ ಬೆರಳು ತೋರಿದರು.
ಅಸಮಾನತೆ - ಮೇಲಿನ ಎಲ್ಲಾ ಶಿಕ್ಷೆಗಳೂ ಮತ್ತು ನಿಯಮಗಳೆಲ್ಲವೂ ಸ್ತ್ರೀ-ಪುರುಷರಿಗೆ ಸಮಾನವಾಗಿ ಅನ್ವಯಿಸುತ್ತವೆ. ಯಾವುದೇ adultry ಅಪರಾಧಕ್ಕೆ ಸಮಾನ ಶಿಕ್ಷೆಯಿರುತ್ತದೆ. ಹಾಗೆಂದು ಅವರುಗಳು ಹೊಂದಾಣಿಕೆಯಾಗದಿದ್ದರೆ ವಿಚ್ಛೇದನವನ್ನು ಪಡೆದು ಇಷ್ಟವಾದವರೊಂದಿಗೆ ಮದುವೆಯಾಗಬಹುದು. ಆಸ್ತಿಯಲ್ಲಿ ಸ್ತ್ರೀಯರಿಗೆ ಅರ್ಧ ಭಾಗವಿದ್ದರೆ ಪುರುಷರಿಗೆ ಒಂದು ಭಾಗ ಸಿಗುತ್ತದೆ. ಏಕೆಂದರೆ ಪ್ರತಿಯೊಬ್ಬ ಸ್ತ್ರೀಯ ಪುರುಷನಿಗೆ ಒಂದು ಭಾಗ ಆಸ್ತಿ ಬಂದಿರುತ್ತದೆ ಮತ್ತು ಆ ಅಸ್ತಿಯನ್ನು ಆತ ಕುಟುಂಬಕ್ಕೆ ವ್ಯಯಿಸುತ್ತಾನೆಯೇ ಹೊರತು ಆತನ ಸ್ವಂತಕ್ಕಲ್ಲ. ಹಾಗಾಗಿ ಇಲ್ಲಿ ಕೌಟುಂಬಿಕ ಸಮಾನತೆಯಿದೆ.
ಇನ್ನು ಟ್ರಿಪಲ್ ತಲಾಖ್ ಅನ್ನು ಮೂರು ಬಾರಿ ಒಟ್ಟಿಗೆ ಹೇಳುವಂತಿಲ್ಲ. ಸೌದಿಯಲ್ಲಿ ಅದನ್ನು ಅಷ್ಟು ಸುಲಭವಾಗಿ ಹೇಳಲಾಗದು. ನೀವು ಕೇಳಿರಿರುವ ಟ್ರಿಪಲ್ ತಲಾಖ್ ಸೌದಿಯನ್ನು ಬಿಟ್ಟು ಇತರೆ ಮೂಲಭೂತವಾದಿ ಇಸ್ಲಾಂ ರಾಷ್ಟ್ರಗಳಲ್ಲಿರಬಹುದು. ಸೌದಿಯಲ್ಲಿಲ್ಲ.
ಶುಕ್ರವಾರದ ನಮಾಜು ವೇಳೆ ರಸ್ತೆಗಳಲ್ಲಿ ಯಾರೂ ಸಂಚರಿಸದಂತೆ ನಿಯಮ ಹೇರಿಕೆ - ಸುಳ್ಳು. ಆ ದಿನ ರಜೆಯಿರುವುದರಿಂದ ಅಂಗಡಿ ಮುಂಗಟ್ಟುಗಳು ಮುಚ್ಚಿರುತ್ತವೆ. ಹಾಗಾಗಿ ಬಿಸಿಲಿನಲ್ಲಿ ಖಾಲಿ ತಿರುಗಲು ಯಾರು ಹೋಗದ ಕಾರಣ ವಿದೇಶಿ ನೌಕರರು ಏನೇನೋ ಕಲ್ಪಿಸಿಕೊಂಡಿರಬಹುದು!
ಧಾರ್ಮಿಕ ಗುರುಗಳ ಕಾನೂನು ಚಲಾಯಿಸುವಿಕೆ - ಸುಳ್ಳು! ನಮ್ಮಲ್ಲಿನ ಕೆಲವು ಕಟ್ಟರ್ ವಾದಿಗಳು ನಿಮ್ಮ ಖಾಪ್ ಪಂಚಾಯತಿಯ ರೀತಿಯಲ್ಲಿ ತಮ್ಮದೇ ಆದ ವ್ಯವಸ್ಥೆಯನ್ನು ಅಲ್ಲಲ್ಲಿ ಹೊಂದಿ ತಮ್ಮದೇ moral policing ನಡೆಸುತ್ತಿದ್ದರು. ಈಗ ಅದಕ್ಕೆಲ್ಲ ಸೌದಿ ಸರ್ಕಾರ ಕಡಿವಾಣ ಹಾಕಿದೆ. ಬಹುಶಃ ನೀವು ಹೇಳಿದ/ಕೇಳಿದ ವಿಚಾರಗಳೆಲ್ಲ ಈ ಕಟ್ಟರ್ ವಾದಿಗಳಿಗೆ ಸಂಬಂಧಿಸಿದ್ದಿರಬಹುದು. ಭಾರತದ ಖಾಪ್ ಪಂಚಾಯಿತಿ, ಅಮೆರಿಕಾದ ಕೆಲವು ಕಲ್ಟ್ ಪಂಥದೊಳಗಿನ ನ್ಯಾಯ ವ್ಯವಸ್ಥೆಗಳು ಹೇಗೆ ರಾಷ್ಟ್ರೀಯ ವ್ಯವಸ್ಥೆಗಳು ಎಂದೆನಿಸುವುದಿಲ್ಲವೋ ಹಾಗೆಯೇ ನಮ್ಮಲ್ಲಿನ ಕೆಲವು ಮೂಲಭೂತವಾದಿಗಳ ವ್ಯವಸ್ಥೆ, ರಾಷ್ಟ್ರೀಯ ವ್ಯವಸ್ಥೆ ಎನಿಸುವುದಿಲ್ಲವಲ್ಲವೇ?
ಈ ಕಟ್ಟರ್ ಮೂಲಭೂತವಾದಿಗಳು ನಿಗ್ರಹಿಸುವಲ್ಲಿ ಸೌದಿ ಸರ್ಕಾರ ಸಮಯ ತೆಗೆದುಕೊಂಡಿತು ನಿಜ. ಇವರಿಂದ ನಮ್ಮ ಮಹಿಳೆಯರ ಗೌರವವನ್ನು ಕಾಪಾಡಲೆಂದೇ ಕೆಲವು ನಿಯಮಗಳನ್ನು ಮಹಿಳೆಯರ ಮೇಲೆ ಹೇರಿದ್ದೆವು. ನಮ್ಮಲ್ಲಿ ಆರ್ಥಿಕ ಸ್ಥಿತಿಗಿಂತ ಕೌಟುಂಬಿಕ ಹಿನ್ನೆಲೆಯನ್ನು ಹೆಚ್ಚಾಗಿ ಗೌರವಿಸುತ್ತೇವೆ. ವೈವಾಹಿಕ ಸಂಬಂಧಗಳನ್ನು ನೋಡುವಾಗ ಸೌದಿ ಅರಬರಿಗೆ ಕೌಟುಂಬಿಕ ಹಿನ್ನೆಲೆ ಶೇಕಡಾ 80ರಷ್ಟು ಮತ್ತು ಆರ್ಥಿಕ ಸ್ಥಿತಿ 20ರಷ್ಟು ಮುಖ್ಯ. ಹಾಗಾಗಿ ಕುಟುಂಬದ ಗೌರವಕ್ಕೆ ನಮ್ಮಲ್ಲಿ ಅತ್ಯಂತ ಮಹತ್ವ.
ಈ ಮೂಲಭೂತವಾದಿಗಳು ಅವರನ್ನು ಓಲೈಸದವರ ಕೌಟುಂಬಿಕ ಗೌರವಕ್ಕೆ ಚ್ಯುತಿ ತರುವಂತಹ ಕೆಲಸಗಳನ್ನು ಮಾಡುತ್ತಿದ್ದರು. ಅವರ ಅಂತಹ ನೀಚ ಕಾರ್ಯಕ್ಕೆ ಮಹಿಳೆಯರು ಸುಲಭವಾಗಿ ತುತ್ತಾಗುತ್ತಿದ್ದರು. ಹಾಗಾಗಿಯೇ ಕೆಲವು ನಿರ್ಬಂಧಗಳನ್ನು ಹೇರಿದ್ದುದು. ಅವುಗಳಲ್ಲಿ ಕಾರು ಚಲಾಯಿಸುವ ನಿರ್ಬಂಧ ಕೂಡ ಒಂದು. ಈಗ ಎಲ್ಲ ತಹಬದಿಗೆ ಬಂದಿದ್ದು ಆ ನಿರ್ಬಂಧಗಳನ್ನು ತೆಗೆದಿದ್ದೇವೆ. ಹಾಗಾಗಿಯೇ ಈಗ ನಮ್ಮ ಮಹಿಳೆಯರು ಕಾರ್ ಚಲಾಯಿಸುತ್ತಿರುವುದು.
ಒಟ್ಟಾರೆ, ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು. ಆದರೆ ವಿಚಾರಿಸಿ ಪರಾಮರ್ಶಿಸಿ ನೋಡಿದಾಗ ಸತ್ಯವು ತಿಳಿಯುವುದು.
ರಾಜಪ್ರಭುತ್ವ vs ಪ್ರಜಾಪ್ರಭುತ್ವ - ರಾಜಪ್ರಭುತ್ವವೆಂದೊಡನೆ ಅದು ಹೇರಿಕೆ ಯಾ ಗುಲಾಮಿಕೆ ಎಂಬ ಅಭಿಪ್ರಾಯವಿದೆ. ಇದು ಸುಳ್ಳು. ನಮ್ಮ ರಾಜರಿಗೆ ಸಾಕಷ್ಟು ವಿದ್ಯಾವಂತ, ಬುದ್ಧಿಜೀವಿ ತಂತ್ರಜ್ಞರಿಂದೊಡಗೂಡಿದ ಸಲಹಾ ಸಮಿತಿಯಿದೆ. ಈ ಎಲ್ಲಾ ಸಲಹಾ ಸಮಿತಿಯ ಸಲಹೆಗಳನ್ನು ವಿಶ್ಲೇಷಿಸಿ ಪರಾಮರ್ಶಿಸಿ ಅನ್ವಯಿಸಲಾಗುತ್ತದೆ. ಇದು ಒಂದು ಅತ್ಯುತ್ತಮ ಗೌವರ್ನೆನ್ಸ್ ವ್ಯವಸ್ಥೆ ಎಂದುಕೊಳ್ಳಿ. ನಿಮ್ಮ ಪ್ರಜಾಪ್ರಭುತ್ವದಲ್ಲಿ ಸಾಕಷ್ಟು ನಿರ್ಧಾರಗಳು ಮಂದಗತಿಯಲ್ಲಿ ಸಾಗಿದರೆ, ನಮ್ಮ ರಾಜಪ್ರಭುತ್ವದಲ್ಲಿ ತ್ವರಿತವಾಗಿ ನಿರ್ಧರಿಸಲ್ಪಡುತ್ತವೆ. ಹಾಗೆಂದು ಅವಸರದ ನಿರ್ಧಾರಗಳು ಇಂದಿಗೂ ಆಗುವುದಿಲ್ಲ. ಸೌದಿಯ ಆರ್ಥಿಕ ಸ್ಥಿತಿ, ಜಾಗತೀಕರಣದ ಇಂದಿನ ಪ್ರಪಂಚದಲ್ಲಿ ಅತ್ಯುನ್ನತವಾಗಿಯೇ ಇದೆ. ಜಗತ್ತಿನ ಎಲ್ಲಾ ರಾಷ್ಟ್ರಗಳೊಂದಿಗೆ ಸೌಹಾರ್ದಯುತ ವ್ಯಾಪಾರ ಸಂಬಂಧಗಳನ್ನು, ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದ್ದೇವೆ. ಜನಸಾಮಾನ್ಯರಿಗೆ ಮಿನಿಮಮ್ ಗೌವರ್ನೆನ್ಸ್, ಮ್ಯಾಕ್ಸಿಮಮ್ ಸರ್ವಿಸ್ ಮುಖ್ಯವೇ ಹೊರತು ರಾಜಪ್ರಭುತ್ವ ಯಾ ಪ್ರಜಾಪ್ರಭುತ್ವವಲ್ಲ. ಹಾಗೆಂದು ಜನಸಾಮಾನ್ಯರು ಓದಿ ವಿದ್ಯಾವಂತರಾಗಿ ತಕ್ಕ ಅರ್ಹತೆಯನ್ನು ಗಳಿಸಿದರೆ ಪ್ರಮುಖ ಹುದ್ದೆಗಳಿಗೆ ನಮ್ಮ ಸುಲ್ತಾನರೇ ನೇಮಕಾತಿ ಮಾಡುವರು. ಕೆಲವರು ಇದನ್ನು ಎಲೆಕ್ಷನ್ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ, ಇದು ಸೆಲೆಕ್ಷನ್. ಹಾಗಾಗಿ ನೀವೇ ನಿರ್ಧರಿಸಿ ಯಾವುದು ಜನಸಾಮಾನ್ಯರಿಗೆ ಒಳಿತೆಂದು.
ಹೀಗೆ ನನ್ನ ಸ್ನೇಹಿತರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಅತ್ಯಂತ ಸಮಾಧಾನಚಿತ್ತದಿಂದ ಉದಾಹರಣೆಗಳೊಂದಿಗೆ ಉತ್ತರಿಸಿ ಸೌದಿ ಕುರಿತಾದ ಸಾಕಷ್ಟು ತಪ್ಪು ತಿಳುವಳಿಕೆಯನ್ನು ಕಳೆದದ್ದಲ್ಲದೆ ಯಾವುದೇ ರಾಯಭಾರ ಕಚೇರಿಗೆ ಹೋಗದೆ ಮನೆಯಲ್ಲೇ ಕುಳಿತು ಈ-ವೀಸಾ ಪಡೆದು ಸೌದಿಗೆ ಬನ್ನಿ ಎಂದು ಆಹ್ವಾನ ಕೂಡಾ ನೀಡಿದರು.
ಸೌದಿ ಎಂದರೆ ಒಂದು ಮೌಢ್ಯದ ಕೌದಿ ಕವುಚಿಕೊಂಡದ್ದು ಹೀಗೆ ಮಗುಚಿಬಿದ್ದಿತು.

ಬಯಲಾದ ಹಂಪಿ

ಡಾ. ಕುಮಾರ್ ಅಂಕನಹಳ್ಳಿಯವರ "ಬಯಲಾದ ಹಂಪಿ" ಕೃತಿ ಬಿಡುಗಡೆ ಮಾಡಿ ಮಾತನಾಡಿದ ಮಾತುಗಳು:
ನಮಸ್ತೆ,
ಹಂಪಿ ಎನ್ನುವುದು ಒಂದು ಬೆರಗು, ಕೌತುಕ, ನಿಗೂಢ! ಹಾಗಾಗಿಯೇ ಸಾವಿರಾರು ವಿದೇಶಿಯರು ಹಂಪಿಗೆ ಪ್ರತಿ ವರ್ಷ ಮತ್ತೆ ಮತ್ತೆ ಬರುತ್ತಾರೆ. ಹಲವರು ಹಂಪಿಯನ್ನೇ ಮನೆಯಾಗಿಸಿಕೊಂಡಿದ್ದಾರೆ. ಕೇವಲ ಕೌತುಕವಲ್ಲದೆ ದ್ವಂದ್ವ, ಭಿನ್ನಾಭಿಪ್ರಾಯ, ಅನುಮಾನ, ಪಂಥಬೇಧಗಳ ತವರು ಕೂಡಾ ಈ ಹಂಪಿ! ರಾಮಾಯಣದ ಆಂಜನೇಯನಿಂದ, ಇಂದಿನ ಹಂಪಿ ವಿಶ್ವವಿದ್ಯಾಲಯದವರೆಗೂ ಇತಿಹಾಸದ ಎಲ್ಲಾ ಕಾಲಘಟ್ಟದಲ್ಲಿಯೂ ಆ ಎಲ್ಲಾ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬೆಳೆಸಿಕೊಳ್ಳುತ್ತಾ ಸಾಗಿಬಂದಿದೆ, ಬರುತ್ತಿದೆ.
"ಶೈವ ಪರಂಪರೆಯ ಹಾಲುಮತದ ಹಕ್ಕ ಬುಕ್ಕರಿಂದ ಸ್ಥಾಪಿತಗೊಂಡ ವಿಜಯನಗರ ಸಾಮ್ರಾಜ್ಯದ ನಿಜವಾದ ಸಾಮ್ರಾಟ ಅಲ್ಲಿನ ಅಧಿದೇವತೆಯಾದ ಶ್ರೀ ವಿರೂಪಾಕ್ಷ. ತುಳುನಾಡಿನ ಸಾಳ್ವರು ಆಡಳಿತಕ್ಕೆ ಬರುವವರೆಗೆ ಬುಕ್ಕದೇವರಾಯ, ಪ್ರೌಢದೇವರಾಯರೆಲ್ಲಾ ವಿರುಪಾಕ್ಷನ ಹೆಸರಿನಲ್ಲಿ ರಾಜ್ಯಭಾರ ಮಾಡಿದ್ದಲ್ಲದೆ, ಸಹಿಯನ್ನು ವಿರುಪಾಕ್ಷನ ಹೆಸರಿನಲ್ಲಿಯೇ ಹಾಕುತ್ತಿದ್ದರು. ತುಳುನಾಡಿನ ವೈಷ್ಣವ ಪಂಥದ ಹಿನ್ನೆಲೆಯ ಸಾಳ್ವರು ವಿರುಪಾಕ್ಷನ ಹೆಸರನ್ನು ತೆಗೆದು ಶ್ರೀರಾಮ ಎಂಬ ಅಂಕಿತವನ್ನು ಬಳಸಲಾರಂಭಿಸಿದರು. ತುಳುವ ನರಸನಾಯಕನ ಉಪಪತ್ನಿಯಾದ ತೆಲುಗು ಭಾಷೆಯ ನಾಗಲಾದೇವಿಯ ಮಗನಾದ ಕೃಷ್ಣದೇವರಾಯನನ್ನು ನರಸನಾಯಕನ ಮಂತ್ರಿಯಾಗಿದ್ದ ತೆಲುಗರ ತಿಮ್ಮರಸನು ಪಟ್ಟಕ್ಕೆ ತಂದನು. ನರಸನಾಯಕನ ಪಟ್ಟದರಸಿಯರ ಗಂಡುಸಂತಾನವನ್ನು ಉಪೇಕ್ಷಿಸಿ ತೆಲುಗು ಪ್ರಿಯ ರಾಯನನ್ನು ಪಟ್ಟಕ್ಕೆ ವ್ಯವಸ್ಥಿತವಾಗಿ ತರಲಾಯಿತು. ಮುಂದೆ ಕೃಷ್ಣದೇವರಾಯನು ತನ್ನ ಆಸ್ಥಾನದಲ್ಲಿ ತೆಲುಗು ಪಂಡಿತರಿಗೆ ಸಾಕಷ್ಟು ಸ್ಥಾನಮಾನಗಳನ್ನು ನೀಡಿದ್ದಲ್ಲದೆ ವೈಷ್ಣವ ಗುಡಿಗಳನ್ನು ಕಟ್ಟಿಸಿದನು.
ಈ ಎಲ್ಲಾ ಬೆಳವಣಿಗೆಯು ಮೂಲತಃ ಶೈವ ಸಾಮ್ರಾಜ್ಯವಾಗಿದ್ದನ್ನು ವೈಷ್ಣವವಾಗಿಸಿದ್ದು ಸಹಜವಾಗಿ ಶೈವ-ವೈಷ್ಣವವಲ್ಲದೆ ಕನ್ನಡ-ತೆಲುಗು ವೈರತ್ವಕ್ಕೆ ಕೂಡ ನಾಂದಿಯಾಯಿತು. ಯಾವಾಗ ಕೃಷ್ಣದೇವರಾಯನು ತನ್ನ ದಾಯಾದಿ ಪುತ್ರರನ್ನು ಕಡೆಗಣಿಸಿ ತನ್ನ ತೆಲುಗು ಅಳಿಯಂದಿರನ್ನು ಪಟ್ಟಕ್ಕೆ ತಂದನೋ ಆಗಲೇ ವಿಜಯನಗರದ ಅವನತಿ ಪ್ರಾರಂಭವಾಯಿತು.
ಈ ಮೊದಲು ತೆಲುಗರು ಮುಸ್ಲಿಂ ಅರಸರೊಡಗೂಡಿ ಕನ್ನಡದ ಕುಮಾರರಾಮನ ರುಂಡವನ್ನು ಹಾರಿಸಿದ್ದುದು ಮುಂದೆ ಕನ್ನಡಿಗರು ಆದಿಲ್ ಶಾಹಿ ಸುಲ್ತಾನರೊಟ್ಟಿಗೊಡಗೂಡಿ ತೆಲುಗು ಅಳಿಯ ರಾಮರಾಯನ ರುಂಡವನ್ನು ಹಾರಿಸುವಲ್ಲಿಗೆ ಈ ವೈರತ್ವ ಪರಿಸಮಾಪ್ತಿಯಾಯಿತು. ಇಲ್ಲಿ ಮುಸ್ಲಿಂ ಅರಸೊತ್ತುಗೆಗಳು ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡರೆ ಹೊರತು ಕಾಲು ಕೆದರಿ ಯುದ್ಧ ಮಾಡಲಿಲ್ಲ." ಇದು ಡಾ. ಎಂ.ಎಂ. ಕಲ್ಬುರ್ಗಿಯವರ ಸಂಶೋಧನೆಯ ಸಂಕ್ಷಿಪ್ತ ರೂಪ.
ಇನ್ನು ವಿಜಯನಗರದ ಸಾಮಂತರಾದ ಬೆಂಗಳೂರಿನ ಕೆಂಪೇಗೌಡರ ಮನೆಮಾತು ಕೂಡ ತೆಲುಗು ಆಗಿದ್ದಿತು. ಹಾಗಾಗಿಯೇ ಅವರ ಮನೆಮಾತು ಸಹಜವಾಗಿ ಈ ಸಾಮಂತಿಕೆ ದೊರೆಯುವಲ್ಲಿ ಸಹಾಯ ಮಾಡಿರಬಹುದು. ಏಕೆಂದರೆ ಸಾಕಷ್ಟು ತೆಲುಗು ಭಾಷಿಗರಿಗೆ ಕೃಷ್ಣದೇವರಾಯನು ಮಣೆ ಹಾಕಿದ್ದನು. ಆತನ "ದೇಸಭಾಶಲೋ ತೆಲುಗು ಲೇಸ" ಎಂಬ ಮಾತು ಆತನ ತೆಲುಗು ಪ್ರೀತಿಯನ್ನು, ಪಕ್ಷಪಾತವನ್ನು ಧೃಢೀಕರಿಸುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ. ಆ ಹಿನ್ನೆಲೆಯಲ್ಲಿ ಇಂದಿನ ಹುಸಿ ಕನ್ನಡ ಅಭಿಮಾನಿಗಳು "ದೇಶಭಾಷೆಯೊಳಗೆ ನಮ್ಮ ಕನ್ನಡ ಚೆನ್ನ" ಎಂದು ರಿಮೇಕ್ ಮಾಡಿಕೊಂಡು ಹಾಡಿ ಕುಣಿಯುತ್ತಿರುವುದು ಎಷ್ಟು ಉಚಿತ?
ಇನ್ನು ಪೋರ್ಚುಗೀಸ್ ಪ್ರವಾಸಿಗರಾದ ನೂನೇಜ್ ಪಾಯಿಸರಿಗೆ ಹಂಪಿ ಬೇರೆಯಾಗಿಯೇ ಕಂಡಿದೆ. ಅವರ ವರ್ಣನೆಯ ಜನಜೀವನದ ಚಿತ್ರಣ ಬೇರೆಯಾಗಿಯೇ ಇದೆ. ಅದು ಇಂದು ಬೆಂಗಳೂರು ಪಟ್ಟಣವನ್ನೇ ಇಡೀ ಕರ್ನಾಟಕದ ಅಭಿವೃದ್ಧಿ ಎಂದು ಬಿಂಬಿಸುವಂತೆಯೇ ಇದ್ದಿತೆಂಬುದನ್ನು ತೆರೆದಿಡುತ್ತದೆ.
ಇದು ಹಂಪಿ ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಬಿಚ್ಚಿಕೊಳ್ಳುವ ಪರಿ.
ಇಂದು ಬಿಡುಗಡೆಯಾಗುತ್ತಿರುವ "ಬಯಲಾದ ಹಂಪಿ" ಕೃತಿಯು ತನ್ನದೇ ವಿಧದಲ್ಲಿ ಹಂಪಿಯನ್ನು ತೆರೆದಿಡುತ್ತಿದೆ. ಪ್ರವಾಸ ಕಥನ ಶೈಲಿಯ ಈ ಕೃತಿ ಹಂಪಿಯ ಮೇಲೆ ಹೊಸದೊಂದು ಕೋನವನ್ನು ಪ್ರವಾಸ ಕರೆದುಕೊಂಡ ಪ್ರೊಫೆಸರರುಗಳ ಮೂಲಕ ತೆರೆದಿಡುತ್ತಿದೆ. ತಾವೆಲ್ಲ ಓದಿ ಆ ಹೊಸ ಕೋನವನ್ನು ಕಂಡು ಹಂಪಿಯ ಕುರಿತಾದ ಕೌತುಕವನ್ನು ಹೆಚ್ಚಿಸಿಕೊಳ್ಳಿ ಎಂದು ಆಶಿಸುತ್ತ ನನ್ನ ಮಾತನ್ನು ಮುಗಿಸುತ್ತೇನೆ. ಧನ್ಯವಾದಗಳು!

Abdul Razak of Gadag

ತಿಳಿರುಗನ್ನಡದ , ಸಾಮರಸ್ಯದ ಸ್ವರ್ಗವಾದ ಗದುಗಿನ ನಡೆದಾಡುವ ಇತಿಹಾಸ ಕೋಶ ಅಬ್ದುಲ್ ರಜಾಕ್ ಅವರೊಟ್ಟಿಗೆ ಕಳೆದ ಎರಡು ದಿನಗಳು ಅದ್ಭುತ ಅನುಭವವನ್ನು ಕೊಟ್ಟವು.
ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದಿ ಸಹಮತ ತೋರಿ ಕಾಳಮುಖರ ಕಲಾಮುಖ ಶಿಲ್ಪಶಾಸ್ತ್ರ ಹೇಗೆ ದಕ್ಷಿಣಾಚಾರ, ದಖನಾಚಾರ, ಜಕಣಾಚಾರವೆನಿಸಿಕೊಳ್ಳುತ್ತ ಮುಂದೆ ಹೇಗೆ ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿ ಸ್ವರೂಪ ತಾಳಿತು ಎಂಬ ಸಾಕಷ್ಟು ಸಂಶೋಧಕರ ಸಂಶೋಧನೆಯನ್ನು ಅಬ್ದುಲ್ ರಜಾಕ್ ಎತ್ತಿ ಹಿಡಿದರು.
ತಮ್ಮ ಯೌವನವನ್ನು ಉತ್ಖನನ ಸಹಾಯಕರಾಗಿ ಅನೇಕ ಸಂಶೋಧಕರೊಂದಿಗೆ ಕೆಲಸ ಮಾಡಿ, ಇತಿಹಾಸ, ಸ್ಮಾರಕ, ಸಂಶೋಧನೆಗಳನ್ನೇ ಉಸಿರಾಗಿಸಿಕೊಂಡು ಅವುಗಳ ಸಂರಕ್ಷಣೆಗೆ ಮ್ಯೂಸಿಯಂ ತೆರೆದು ಸರ್ಕಾರಕ್ಕೆ ದಾನವಾಗಿ ಕೊಟ್ಟ ಸತ್ಯ ಸಂಶೋಧಕರಾದ ಅಬ್ದುಲ್ ರಜಾಕರ
ಸತ್ಯನಿಷ್ಠೆ, ಉದಾರವಾದ, ಇತಿಹಾಸದ ಆಳ ಅರಿವು, ಓದು, ಸ್ಮಾರಕಗಳ ಕುರಿತಾದ ಕಳಕಳಿ ಯಾವುದೇ ಪೋಸ್ಟ್ ಡಾಕ್ಟೋರಲ್ ಸಂಶೋಧಕರಿಗಿಂತ ಕಡಿಮೆ ಇಲ್ಲ. ಹಾಂ, ಗದುಗಿನ ವಾಸಿಯಾದ ಇವರು ನಿವೃತ್ತಿಯ ನಂತರ ಲಕ್ಕುಂಡಿಯಲ್ಲಿ ಗೈಡ್ ಆಗಿ ಸ್ಮಾರಕಗಳ ರಕ್ಷಣೆಯನ್ನು ಪರೋಕ್ಷವಾಗಿ ಮಾಡುತ್ತಿದ್ದಾರೆ.
ರಾಜೀವ್ ದೀಕ್ಷಿತರ ಜಯಂತುತ್ಸವದಲ್ಲಿ ಇತಿಹಾಸದ ಕುರಿತು ಮಾತನಾಡಲು ಸ್ವದೇಶಿ ಆಂದೋಲನದ ಸಂಚಾಲಕರು ನನ್ನನ್ನು ಗದಗಿಗೆ ಆಹ್ವಾನಿಸಿ ಅಬ್ದುಲ್ ರಜಾಕರ ಭೇಟಿಗೆ ಕಾರಣವಾದರು. ಅದಲ್ಲದೇ ನಾನು ರಜಾಕರ ಕುರಿತು ತಿಳಿಸಿದಾಗ ತಕ್ಷಣಕ್ಕೆ ಅವರನ್ನು ಸನ್ಮಾನಿಸಿ ಗೌರವಿಸಿದರು ಕೂಡ. ಇದು ನಿಜವಾದ ಉದಾರವಾದ!
ಇಂತಹ ಉದಾರವಾದವನ್ನು ಮಾತಿನಲ್ಲಿ ಉದ್ಘೋಷಿಸುತ್ತ ಉದರವಾದವನ್ನು ಪಾಲಿಸುವವರು ಇನ್ನಾದರೂ ತಮ್ಮ ಅಸಹನೆ, ಸಂಕುಚಿತತೆ, ಅಸ್ಪೃಶ್ಯತೆ, ದ್ವೇಷ, ಪೂರ್ವಾಗ್ರಹಗಳನ್ನು ಮೀರಿ ಸಮಾಜದಲ್ಲಿ ಸಂಭಾಷಿಸಬಲ್ಲರೆ?!? ಗೊತ್ತಿಲ್ಲ. ಒಟ್ಟಿನಲ್ಲಿ ಆ ವೈರುಧ್ಯದ ಉದರವಾದಿ ಪಂಥದವರು ನನ್ನನ್ನಷ್ಟೇ ಅಲ್ಲದೇ ಅವರದೇ ಪಂಥಬಳಗದವರಿಗೆ "ನೀವು ಅಲ್ಲಿಗೆ ಹೋಗಬಾರದು, ಇವರೊಟ್ಟಿಗೆ ಕೂರಬಾರದು, ಇವರೊಂದಿಗೆ ಮಾತನಾಡಬಾರದು, ಕೈಕುಲುಕಬಾರದು, ಬಾರಿಗೆ ಕುಡಿಯಲು ಹೋದರೆ ಅಲ್ಲಿ ಯಾವುದಾದರೂ ಬಲಪಂಥೀಯ/ದೇಶಭಕ್ತನಿದ್ದಾನೆಯೇ ಎಂದು ಪರಿಶೀಲಿಸಿ ಕುಳಿತುಕೊಳ್ಳಬೇಕು" ಎಂದು
ಸೆಕ್ಷನ್ 144, ಕರ್ಫ್ಯೂಗಳನ್ನು ಹಾಕಿ ದಾದಾಗಿರಿ ನಡೆಸುತ್ತಾರೆ.
ವಿಶ್ವದೆಲ್ಲೆಡೆ ಇರುವ ಲಿಬರಲ್ (ಉದಾರವಾದ) ಮತ್ತು ಕನ್ಸರ್ವೇಟಿವ್ (ಸಂಪ್ರದಾಯವಾದ) ಪಂಥಗಳು ಭಾರತದ ಎಡ ಮತ್ತು ಬಲ ಎಂದಾಗುವುದಿಲ್ಲ. ಹಾಗೆಂದುಕೊಂಡಿದ್ದರೆ ಅದು ತಪ್ಪು ಗ್ರಹಿಕೆ. ಭಾರತದ ಎಡ/ಬಲಗಳೆರಡೂ ಪೂರ್ವಾಗ್ರಹದ ಪಂಥಗಳು.

CAA, NRC

ಕಮ್ಯುನಿಸ್ಟ್ ರಷ್ಯಾದಲ್ಲಿರುವ ಯಹೂದಿ (ಜ್ಯುಯಿಷ್) "ಧರ್ಮೀಯ"ರಿಗೆ, ಧರ್ಮವೇ ಜಯವೆಂಬ ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾಗುತ್ತಿರುವ ಅಹ್ಮದಿ "ಧಾರ್ಮಿಕ" ಪಂಥದವರಿಗೆ, ಮತ್ತು ಪ್ರಪಂಚದಾದ್ಯಂಥ ಧಾರ್ಮಿಕ ತುಳಿತಕ್ಕೊಳಗಾಗುತ್ತಿರುವ ಕ್ರಿಶ್ಚಿಯನ್, ಯಹೂದಿ ಮತ್ತಿತರೆ ಧರ್ಮದವರು ಅಮೆರಿಕದೊಂದಿಗೆ ಯಾವುದೇ ಸಂಬಂಧವಿಲ್ಲದಿದ್ದರೂ ಅವರಿಗೆ ಅಮೆರಿಕ ಧರ್ಮದ ಆಧಾರದ ಮೇಲೆ ವಲಸೆಯ ಅವಕಾಶವನ್ನು ಕೊಟ್ಟಿದೆ. ಇದೇ ನೀತಿಯನ್ನು ಸಾಕಷ್ಟು ಮುಂದುವರಿದ ರಾಷ್ಟ್ರಗಳು ಅನುಸರಿಸುತ್ತಿವೆ.

ಇಂದು ಇದೇ ನೀತಿಯನ್ನು ಭಾರತ ತನ್ನ ನೆಲದೊಂದಿಗೆ "ಧರ್ಮ"ದ ಕಾರಣದಿಂದ ಬೇರ್ಪಟ್ಟ ನೆಲದಲ್ಲಿನ ಧಾರ್ಮಿಕ ಕಿರುಕುಳಕ್ಕೊಳಗಾಗಿರುವವರಿಗೆ ವಲಸೆ ಹಕ್ಕನ್ನು ಕೊಟ್ಟರೆ ತಪ್ಪೇನು?!

ಇನ್ನು ರಾಷ್ಟ್ರೀಯ ಪೌರತ್ವ ದಾಖಲಾತಿ...ಇದು ಯಾವುದೇ ಒಂದು ರಾಷ್ಟ್ರದ ಪರಿಕಲ್ಪನೆಯ ಪ್ರಮುಖ ಭಾಗ. ಇದನ್ನು ಭಾರತ ಒಂದು ರಾಷ್ಟ್ರವಾಗಿ ರೂಪುಗೊಂಡ ಕೂಡಲೇ ಆಗಬೇಕಿದ್ದ ಪ್ರಕ್ರಿಯೆ, ಆದರೆ ಹಾಗಾಗಿಲ್ಲ! ಆದ್ದರಿಂದ ಸುಧೀರ್ಘ ಕಾಲದವರೆಗೆ ಬಾಕಿಯಿರುವ  ಈ ಪ್ರಕ್ರಿಯೆಯ ಅನುಷ್ಠಾನಕ್ಕೆ ಸುಧೀರ್ಘ ಮತ್ತು ವ್ಯವಸ್ಥಿತ ರೂಪುರೇಷೆ ಅಗತ್ಯ.

ಈಗಾಗಲೇ ಇಂತಹ ಸುಧೀರ್ಘ ಮತ್ತು ವ್ಯವಸ್ಥಿತ ರೂಪುರೇಷೆಗಳಿಲ್ಲದೆ ಜಾರಿಗೊಳಿಸಿದ ಒಂದು ಸದುದ್ದೇಶದ ನೋಟ್ ಬ್ಯಾನ್ ಅನ್ನು ಭ್ರಷ್ಟಾಚಾರಿ ಭಾರತ ಹೇಗೆ ತಿಪ್ಪರಲಾಗ ಹಾಕಿಸಿದೆ ಎಂಬ ನಿದರ್ಶನ ನಮ್ಮ ಮುಂದಿದೆ. ಹಾಗಿದ್ದಾಗ ಅಂತಹ ತಪ್ಪುಗಳಿಂದ ಕಲಿತ ಪಾಠಗಳನ್ನು ಸದುದ್ದೇಶದ ಪೌರತ್ವ ದಾಖಲಾತಿ ಜಾರಿಯಲ್ಲಿ ಸರ್ಕಾರ ಅನುಷ್ಠಾನಗೊಳಿಸುತ್ತದೆ ಎಂದುಕೊಳ್ಳೋಣ. ಏಕೆಂದರೆ ಪೌರತ್ವ ದಾಖಲಾತಿ ಎಂಬುದು ಒಂದು ರಾಷ್ಟ್ರದ ಅತ್ಯಂತ ಪ್ರಮುಖ ಅಂಗ. ಇದರ ಅನುಷ್ಠಾನ ಎಂದಿಗಿಂತಲೂ ಇಂದು ಅಗತ್ಯ!

ಏಕೆ ಗೊತ್ತೆ?

ಬಾಂಗ್ಲಾದೇಶ ಇನ್ನು ಕೆಲವೇ ದಶಕಗಳಲ್ಲಿ ಕಣ್ಮರೆಯಾಗಲಿದೆ. ಏರುತ್ತಿರುವ ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಉಕ್ಕೇರುತ್ತಿರುವ ಸಮುದ್ರದಲ್ಲಿ ಬಾಂಗ್ಲಾದೇಶ ಸಂಪೂರ್ಣ ಮುಳುಗಿ ಹೋಗಲಿದೆ ಎಂದು ಸಾಕಷ್ಟು ವಿಜ್ಞಾನಿಗಳು, ಅಂತರರಾಷ್ಟ್ರೀಯ ಸಂಸ್ಥೆಗಳು ಸಾಕಷ್ಟು ವರದಿಯನ್ನು ಮಂಡಿಸಿವೆ. ಈ ಕುರಿತು ಬಿಬಿಸಿ, ಸೈನ್ಸ್ ಚಾನೆಲ್, ನ್ಯಾಷನಲ್ ಜಿಯಾಗ್ರಫಿ ಚಾನೆಲ್ಗಳು ಸಾಕಷ್ಟು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿವೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶಿಯರು ನೆರೆಹಾವಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನೆರೆಯ ಭಾರತಕ್ಕೆ ಬರದೆ ಇನ್ನೆಲ್ಲಿಗೆ ಹೋಗಿಯಾರು?!? ಭಾರತ ಎಲ್ಲಾ ಬಾಂಗ್ಲಾದೇಶಿಯರನ್ನು ಒಳಗೊಳ್ಳಲು ಸಿದ್ಧವಿದೆಯೇ? ಹಾಗೊಂದು ವೇಳೆ ಒಳಗೊಂಡರೆ ಏನಾಗಬಹುದು? ಅಂತರರಾಷ್ಟ್ರೀಯವಾಗಿ ಭಾರತಕ್ಕೆ ಏನಾದರೂ ಕಿರೀಟ ತೊಡಿಸುವರೆ?

ಈ ಬಾಂಗ್ಲಾದೇಶದ ಕಣ್ಮರೆಯ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಗಮನವನ್ನು ಸೆಳೆದು ಬಾಂಗ್ಲಾ ವಲಸೆಯನ್ನು ಒಂದು ಅಂತರರಾಷ್ಟ್ರೀಯ ಸಮಸ್ಯೆಯಾಗಿಸಿ ಎಲ್ಲಾ ರಾಷ್ಟ್ರಗಳೂ ಆ ವಲಸಿಗರನ್ನು ಒಳಗೊಳ್ಳುವಂತೆ ಮಾಡಬೇಕು. ಹಾಗೆ ಮಾಡಲು ಪೌರತ್ವ ದಾಖಲಾತಿ ಅತ್ಯಗತ್ಯ. ಪೌರತ್ವ ದಾಖಲಾತಿಯ ಇತರೆ ಅಗತ್ಯತೆ ಮತ್ತು ಅನುಕೂಲಗಳ ಕುರಿತು ಹೇಳಬೇಕಿಲ್ಲ. ಆ ಕುರಿತು ಸಾಮಾನ್ಯ ಸಮಾಜಶಾಸ್ತ್ರವನ್ನು ಓದಿದವರೆಲ್ಲ ಬಲ್ಲರು.

ಆದರೆ ಈ ಪ್ರಕ್ರಿಯೆಯನ್ನು ಒಂದು ಭಾವನಾತ್ಮಕ ಕಥನವಾಗಿಸಿ, ಭಾವನೆಗಳನ್ನು ಬಡಿದೆಬ್ಬಿಸಿ, ಊಹಾಪೋಹಗಳ ಸೃಷ್ಟಿಸಿ ವಾಸ್ತವವನ್ನು ಮರೆಸುವ ಭಾವಜೀವಿಗಳ ಪ್ರಕ್ರಿಯೆ ಬಾಲಿಶ. ಭಾವಾತ್ಮಕ ಕಲ್ಪನೆ ಕಥೆ, ಕವನ ಬರೆಸಬಲ್ಲುದೇ ಹೊರತು ಸಧೃಢ ಸಮಾಜವನ್ನಲ್ಲ. ಪೌರತ್ವ ದಾಖಲಾತಿಗೆ ಕಥೆ ಕಟ್ಟುವಷ್ಟು ದಾಖಲೆಗಳ ಕೊರತೆಯಿರುವ ಬಹುದೊಡ್ಡ ಜನಸಂಖ್ಯೆಯಿದೆ ಎಂಬುದನ್ನು ನಂಬಬಹುದೇ? ಗೊತ್ತಿಲ್ಲ. ಭಾರತ ರೋಚಕತೆಯ ತವರೂರು ಎಂಬುದಂತೂ ಇತಿಹಾಸದುದ್ದಕ್ಕೂ ಸಾಬೀತಾಗಿದೆ. ಹಾಗಾಗಿ ಈ ಕುರಿತು ಹೆಚ್ಚು ಹೇಳಬೇಕಿಲ್ಲ.

ಪ್ರಪಂಚದ ಕಟ್ಟಕಡೆಯ ರಾಷ್ಟ್ರಗಳು ಕೂಡ ಇಂದು ಪೌರತ್ವ ದಾಖಲಾತಿಯನ್ನು ಹೊಂದಿವೆ, ಇದಕ್ಕೆ ಪ್ರಪಂಚದ ಬಹುದೊಡ್ಡ ಪ್ರಜಾಪ್ರಭುತ್ವ ಹೊರತಾಗಬೇಕಿಲ್ಲ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಭಾರತ ಒಂದು ಮರುಶೋಧನೆ ಕುರಿತ ಜಟಾಪಟಿ!

ದಾಕ್ಷಾಯಿಣಿ ಹುಡೇದ್ ಅವರು ವೃತ್ತಿಯಲ್ಲಿ ಶಾಲಾ ಶಿಕ್ಷಕಿ. ಎಡಪಂಥ ಚಿಂತನಧಾರೆಗಳ ಬಗ್ಗೆ ಒಲವಿರುವ ಇವರು ಹಲವಾರು ಜೀವಪರ, ಬಹುತ್ವದ ಕುರಿತಾದ ಚಿಂತನೆಯನ್ನು ಯಾವುದೇ ದ್ವಂದ್ವವಿಲ್ಲದೆ ಪ್ರತಿಪಾದಿಸುವವರು. ಅಂತಹ ಒಂದು ಮುಕ್ತ ಚಿಂತನೆ ಮತ್ತು ಜ್ಞಾನಾರ್ಜನೆಯ ಹಸಿವಿರುವ ಕಾರಣ ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದುವುದೂ ಅಲ್ಲದೆ ಅಷ್ಟೇ ಮುಕ್ತವಾಗಿ ತಮ್ಮ ಸದಭಿಪ್ರಾಯವನ್ನು ತಮ್ಮ ಫೇಸ್ಬುಕ್ ವಾಲಿನಲ್ಲಿ ಹಂಚಿಕೊಂಡಿದ್ದಾರೆ.

ಯಾವುದೇ ವಿಚಾರ ಮತ್ತು ವಿಷಯಕ್ಕೂ ಮಿತಿಗಳಿರಬಹುದು. ಅವುಗಳನ್ನು ಪರಸ್ಪರ ಚರ್ಚಿಸಿ ಪರಿಹರಿಸಿಕೊಂಡು ಸತ್ಯವನ್ನು ಕಂಡುಕೊಳ್ಳಬೇಕೆಂಬ ಉದಾರತೆಯನ್ನ ಪ್ರತಿಪಾದಿಸುವ ನಾವೆಲ್ಲರೂ ದಾಕ್ಷಾಯಿಣಿಯವರ ಅಭಿಪ್ರಾಯವನ್ನು ಓದಲೇಬೇಕು. ಇವರ ವಿಮರ್ಶೆಯ ಕೊಂಡಿ ಇಲ್ಲಿದೆ.

https://m.facebook.com/story.php?story_fbid=790210234769298&id=100013409864949

ನಂತರ ಇವರ ಪೋಸ್ಟಿಗೆ ಪ್ರತಿಯಾಗಿ ತಮ್ಮ ಎಡಪಂಥೀಯ ಗುಂಪಿನಿಂದ ಒಬ್ಬರು ಗಡಿ ದಾಟುತ್ತಿದ್ದಾರೆಂದು ಮತ್ತೊಬ್ಬರು ಪೋಸ್ಟ್ ಹಾಕಿ ಬೌದ್ಧಿಕ ಬೆದರಿಕೆಯ ತಂತ್ರವನ್ನು ಬಳಸಿರುವುದನ್ನು ಗಮನಿಸಿ. ಅದರ ಕೊಂಡಿ ಇಲ್ಲಿದೆ.

https://m.facebook.com/story.php?story_fbid=2522244181217116&id=100002946772746

ಈ ಪೋಸ್ಟಿಗೆ ಬಂದಿರುವ ಪ್ರತಿಕ್ರಿಯೆಗಳನ್ನೂ ಗಮನಿಸಿ.

ಒಂದು ಕೃತಿಯನ್ನು ಓದದೆಲೆ, ಅಥವಾ ಪೂರ್ವಾಗ್ರಹಪೀಡಿತವಾಗಿ ಓದಿ, ಇಂತಿಂತಹ ವಿಷಯಕ್ಕೆ ಪೂರಕ ಸಾಕ್ಷಿಯ ಆಕರವನ್ನು ಕೊಟ್ಟಿಲ್ಲವೆಂದು ವಸ್ತುನಿಷ್ಠವಾಗಿ ವಿಮರ್ಶಿಸದೆ ಬೇಕಾಬಿಟ್ಟಿ ಕಾಮೆಂಟಿಸುವ ತಂತ್ರವೇ ಕೂಪಮಂಡೂಕ ತಂತ್ರ! ತಮ್ಮ ಸಿದ್ದಾಂತ ಪಂಥದ ಬಾವಿಯೊಳಗಿಂದ ಒಂದು ಕಪ್ಪೆ ಹಾರಿ ಹೊರಜಗತ್ತನ್ನು ಕಂಡು ಜಗತ್ತು ಸುಂದರ ಎಂದೊಡನೇ ಬಾವಿಯೊಳಗಿನ ಇತರೆ ಕಪ್ಪೆಗಳು ಆ ಮುಗ್ದ/ಮುಕ್ತ ಮನಸ್ಸಿನ ಕಪ್ಪೆಯನ್ನು ನೀನು ಇದನ್ನು ಓದಿದ್ದೀಯೆ/ಅದನ್ನು ಓದಿದ್ದೀಯೆ? ನಿನ್ನ ಓದು ತುಂಬಾ ಮಿತಿಯೊಳಗಿನದು ಅಥವಾ ಅಪ್ರಾಮಾನಿಕವಾದದ್ದು, ಇದು ಬ್ರಾಹ್ಮಣ್ಯ ಮನಸ್ಥಿತಿ, ಅದು ಹಿಡನ್ ಅಜೆಂಡಾದ ಕೃತಿ, ವ್ಯಕ್ತಿ ಸರಿಯಿಲ್ಲ ಮುಂತಾದ ವಟರ್ಗುಟ್ಟುವಿಕೆ ಏನನ್ನು ಹೇಳುತ್ತದೆ?

ಉರುಳುತ್ತಿರುವವನೇ ಸಿಕ್ಕುವ ಹುಲ್ಲುಕಡ್ಡಿಗಳನ್ನೆಲ್ಲಾ ಬಾಚಿ ಹಿಡಿಯಲೆತ್ನಿಸುವುದು.  ಅದು ಒಂದು ದುರ್ಬಲ ಮನಸ್ಥಿತಿಯ ಪರಿಸ್ಥಿತಿ. ಮನಶಾಸ್ತ್ರವನ್ನು ಕಿಂಚಿತ್ ಓದಿಕೊಂಡವರಿಗೂ ಇದು ಅರ್ಥವಾಗಿಬಿಡುತ್ತದೆ. ವಸ್ತುವನ್ನು ಹಿಡಿದು ವ್ಯಕ್ತಿಯನ್ನು ನಿಂದಿಸುವ ಇವರ ವರಸೆ ಸಾಕಷ್ಟು ಸಾರಿ ಫೇಸ್ಬುಕ್ನಲ್ಲಿ ಕಂಡಿದೆ. ಇದಕ್ಕೆ ಸಾಕ್ಷಿಯಾಗಿ ಮೊನ್ನೆ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಗೊಂಡವರ ಮೇಲಿನ ದ್ವೇಷಕಾರಕ ಪೋಸ್ಟ್ ಕೂಡ ಇಂತಹ ಪ್ರವೃತ್ತಿಗೆ ಸಾಕ್ಷಿಯಾಗಿದೆ.

ಸತ್ಯವಿದ್ದರೂ ತಮ್ಮ ಸಿದ್ದಾಂತಕ್ಕೊಪ್ಪದ ಒಂದು ಭಾಗವನ್ನು ಹಿಡಿದುಕೊಂಡು ಹಿಂಜುತ್ತಿರುವ ಇವರ ಪರಿ ನೋಡಿ. ಹಾಗೆ ಒಂದು ಭಾಗದ ಸ್ಕ್ರೀನ್ ಶಾಟ್ ಹಾಕಿ ರಂಜಿಸಿ ಕಾಮೆಂಟಿಗರನ್ನು ಖುಷಿ ಪಡಿಸುವ ಈ ವಿದ್ವಾಂಸರು ಪುಸ್ತಕವನ್ನೇ ತಮ್ಮ ಬಳಗಕ್ಕೆ ಕೊಟ್ಟು ಓದಿಸಿದ್ದೇ ಆದರೆ ಬರುವ ಅಭಿಪ್ರಾಯಗಳು ವಸ್ತುನಿಷ್ಠವಾಗಿ ದಾಕ್ಷಾಯಣಿ ಹುಡೇದ್ ಅವರ ಅಭಿಪ್ರಾಯದಂತೆಯೇ ಆಗಿರುತ್ತವೆ ಎಂದು ಖಚಿತವಾಗಿ ಹೇಳಬಲ್ಲೆ. ಏಕೆಂದರೆ ಸತ್ಯದ ಬುನಾದಿಯ ಮೇಲೆ ನನ್ನ ಪುಸ್ತಕವಿದೆಯೇ ಹೊರತು ಸತ್ತ ಪಂಥಸಿದ್ದಾಂತಗಳ ಮೇಲಲ್ಲ.

ವಿಮರ್ಶೆಗೊಂದು ಪರಿಭಾಷೆಯಿದೆಯೆನ್ನುವುದನ್ನು ಮರೆತ ಇವರಿಗೆ ದಾಕ್ಷಾಯಿಣಿಯವರ ಬರಹದಲ್ಲಿ ಅಪ್ರಾಮಾಣಿಕತೆ ಕಾಣಿಸಿರುವುದೊಂದು ವಿಪರ್ಯಾಸವಷ್ಟೇ ಅಲ್ಲದೇ ದಬ್ಬಾಳಿಕೆ ಕೂಡ. ಈ ಗುಂಪುಗಾರಿಕೆಯ ಅಸಹಿಷ್ಣು ಗುಣ, ಮತ್ತು ದಾಕ್ಷಾಯಿಣಿಯವರ ಮುಕ್ತ ಮುಗ್ಧ ಬರಹ ಇವೆರಡೂ ಇಲ್ಲಿ ಗಮನಾರ್ಹ.

ಒಟ್ಟಿನಲ್ಲಿ ಜನಪರವಲ್ಲದ ಸೈದ್ದಾಂತಿಕ ಮುಖವಾಡಗಳಿಲ್ಲದೆ ಪುಸ್ತಕಗಳನ್ನು ಬರೆಯುವಂತಾಗಬೇಕು ಎನ್ನುವ ಈ ಗುಂಪು ಅಂತಹದೇ ನಿಲುವಿನಿಂದ ಬರೆದ ನನ್ನ "ಭಾರತ ಒಂದು ಮರುಶೋಧನೆ" ಪುಸ್ತಕವನ್ನು ಗ್ರಹಿಸಬಲ್ಲುದೇ!?!

ಸತ್ಯಮೇವಜಯತೇ!

ಪುಸ್ತಕಕ್ಕಾಗಿ ಸಂಪರ್ಕಿಸಿ:

http://www.navakarnatakaonline.com/bookslist.php

RCEP, ಆರ್ಸಿಇಪಿ ಏನಪ್ಪಿ ಇದು?!


ರದ್ದಿ ಅಂಗಡಿ ಫೇಸ್ಬುಕ್ ಕಟ್ಟೆ ಮ್ಯಾಕೆ ಚಿಂತಕರ ಪಟಾಲಂ ಸೇರಿತ್ತು. ಏನ್ ಅಂಗೇ RCEP, ಆರ್ಸಿಇಪಿ ಅಂಥ ಅವರವರ ಫಾರಿನ್ ಫೋನಲ್ಲಿ ಎಲ್ಲಾ ಕುಟ್ಟತಾ ಇದ್ದೋ. ಆಗ ಸಡನ್ನಾಗಿ ಆಕಾಸವಾಣಿಯಿಂದ "ಇರಮ್ಮಿ, ಸುಮ್ಕೆ ಚಂದ್ರೇಗೌಡನ್ ಜುಮ್ಮಿ ತರಕೆ ಡವ್ ಬುಡಬೇಡ. ಇದೇನ್ ನಿಮ್ ಕುಂದಾಪುರದ್ ಘಿ ರೋಸ್ಟ್ ಅಂಕಂಡೇ... ನಮಗೂ ಗೊತ್ತದೆ ಆರ್ಸಿಇಪಿ, ವಸಿ ಅದಿಮಿಕೊಂಡು ಕುತ್ಕಾ ಯೋಳ್ತೀನಿ. ಕುಂದಾಪುರದ್ ಮೀನ್ ಕಂಡ್ ಜೊಲ್ ಸುರ್ಸ ಮಂಡೇವುದ್ ವಾಟಿಸ್ಸೆ ಭಾಸೆಲಿ ಯೋಳ್ಳಾ?...ಬ್ಯಾಡ ಬುಡು ನಿಂಗ್ ತಲೇಲಿ ನೆಟ್ಟಗೆ ಓಗಂಗೆ ಸುದ್ಧ ಪಂಪ ಪಂಪ ಅಂಥ ಬೊಮ್ಮಡಿ ವಡ್ಕತನಲ್ಲ ಮೈಸೂರು ಮೇಸ್ಟ್ರು ಉಗ್ರಿ...ಅವ್ನ ಭಾಸೇಲೆ ಬುಡ್ತೀನಿ ಕೇಳ್ಕ" ದನಿಯೊಂದು ಕೇಳಿತು.

ಹುಂ ಹುಂ...ರೆಡಿ ಒನ್, ಟೂ, ತ್ರೀ..ಬಾಲಣ್ಣ ಸವಂಡು ಜಾಸ್ತಿ ಮಾಡು...ಆ ತಕತಿಕದೋನಿಗೂ ಕೇಳ್ಳಿ ವಸಿ, ಕೆಪ್ಪಲೌಡಿದಿಕ್ಕೆ... ಗೋ!

RCEP ಎಂದರೆ ದಿ Regional Comprehensive Economic Partnership ಎಂದು. ಈ ಪಾಲುದಾರಿಕೆ ಒಪ್ಪಂದದ ಪ್ರಕಾರ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿ ಏಷ್ಯಾದ ರಾಷ್ಟ್ರಗಳು ತಮ್ಮತಮ್ಮಲ್ಲಿ ಆಮದು/ರಫ್ತು ಸುಂಕಮುಕ್ತ ವ್ಯಾಪಾರ ಸಂಬಂಧವನ್ನು ಹೊಂದುವುದು ಎಂದು ಸಡಿಲಾಗಿ ಹೇಳಬಹುದು.

ಅಂದರೆ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಅಳವಡಿಸುವಲ್ಲಿ ಒಂದು ಮಹತ್ವದ ಹೆಜ್ಜೆ. ವಸುದೈವ ಕುಟುಂಬಕಂ ಯಾ ಜಾನ್ ಲೆನನ್ ಕನಸು ಕಂಡಂತೆ ಬೇಲಿಯಿಲ್ಲದ, ಗಡಿಗಳಿಲ್ಲದ ವಿಶ್ವದ ಕನಸನ್ನು ನನಸಾಗಿಸುವಲ್ಲಿನ ಒಂದು ದಿಟ್ಟ ಹೆಜ್ಜೆ ಎಂದು ಕೂಡ ಹೇಳಬಹುದು. ಈ ಕನಸನ್ನು ನನಸಾಗಿಸುವುದು ತಪ್ಪೇ? ಈ ಕನಸು ಕೇವಲ ಕನಸಾಗಿ, ಕವನವಾಗಿ, ಹಾಡಾಗಿಸಲು ಮಾತ್ರ ಯೋಗ್ಯ, ಇದು ಹಕೀಕತ್ತಾಗಕೂಡದು ಎನ್ನುತ್ತಿದ್ದಾರೆ ಈ RCEP ವಿರೋಧಿ ಮಸಲತ್ತುಗಾರರು! ಇದಕ್ಕೆ ಭಾರತ ಒಪ್ಪುತ್ತಿದೆಯೋ ಇಲ್ಲವೋ ಅದು ಭಾರತ ಸರ್ಕಾರಕ್ಕೆ ಬಿಟ್ಟದ್ದು. ಆದರೆ ಇದು ವಿಶ್ವವನ್ನು ಬೆಸೆಯುವಲ್ಲಿ ಒಂದು ಮುಕ್ತ ಹೆಜ್ಜೆ. ಆದರೆ ಮುಕ್ತತೆಯ ಠೇಕೆದಾರರೆಂದು ಸ್ವಘೋಷಿಸಿಕೊಂಡಿರುವವರು ಈ ಮುಕ್ತ ಮಾರುಕಟ್ಟೆಯ ಬಗ್ಗೆ ಸಂಕುಚಿತತೆ ಮತ್ತು ಅಸಹಿಷ್ಣುತೆಯನ್ನು ಏಕೆ ಪ್ರದರ್ಶಿಸುತ್ತಿದ್ದಾರೆ? ಆಲೋಚಿಸಿ.

ಇನ್ನು ನಾವು ನೀವೆಲ್ಲರೂ ಬಾಲ್ಯದಿಂದ ಈ ಮುಕ್ತ ಚಿಂತಕರ ರೈತ/ಉತ್ಪಾದಕ-ಗ್ರಾಹಕರ ನಡುವೆ ನೇರ ಸಂಪರ್ಕವೇರ್ಪಟ್ಟು ಈ ಮಧ್ಯವರ್ತಿಗಳನ್ನು/ವ್ಯಾಪಾರಿಗಳನ್ನು ತೆಗೆದುಹಾಕಬೇಕೆಂಬ ಚಿಂತನೆಯನ್ನು ಕೇಳುತ್ತಲೇ ಬೆಳೆದಿದ್ದೇವೆ. ಆ ತತ್ವವನ್ನು ಅಪ್ಪಿ ಆರಾಧಿಸಿ ಬಯಸುತ್ತಲೇ ಇದ್ದೇವೆ. ಇಂತಹ ಮಧ್ಯವರ್ತಿ ನಿವಾರಣೆಯ ಕನಸು ಇಂದಿನ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಅಮೇಜಾನ್, ಫ್ಲಿಪ್ಕಾರ್ಟ್ ಅಂತಹ ಸಂಸ್ಥೆಗಳಿಂದ ಸಾಧ್ಯವಾಗಿದೆ. ಈ ಕಂಪೆನಿಗಳು ಉತ್ಪಾದಕ-ಗ್ರಾಹಕರ ಸಂಪರ್ಕ ಸೇತುವಾಗಿ ಅದರ ಲಾಭವನ್ನು ಕಡಿಮೆ ಬೆಲೆಯ ರೂಪದಲ್ಲಿ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ ಮತ್ತು ಉತ್ತಮ ಗ್ರಾಹಕ ಸೇವೆಯನ್ನು ಕೊಡುತ್ತಿದ್ದಾರೆ. ಆದರೆ ಅದೇ ಚಿಂತಕರ ಚಾವಡಿ ಇಂದು ಮಧ್ಯವರ್ತಿಗಳ ಪರವಾಗಿ ನಿಂತಿದೆ. ಏಕೆಂದರೆ ಅವರಿಗಾಗದ ಓರ್ವ ಖುರ್ಚಿ ಹಿಡಿದಿದ್ದಾನೆ ಎಂಬ ಏಕೈಕ ಕಾರಣಕ್ಕಾಗಿ! ಉಳಿದದ್ದು ತಮ್ಮ ವಿವೇಚನೆಗೆ ಬಿಟ್ಟದ್ದು.

ಈಗ ಇದೇ ಚಾವಡಿ ನಮ್ಮ ರೈತರನ್ನು ಕತ್ತಿ ಗುರಾಣಿಯಾಗಿ ಬಳಸಲು ರೈತರನ್ನು ಪ್ರಚೋದಿಸುತ್ತಿದೆ. ಈ ಆರ್ಸಿಇಪಿ ಒಪ್ಪಂದದಿಂದ ಆಸ್ಟ್ರೇಲಿಯಾ/ನ್ಯೂಜಿಲೆಂಡ್ ನ ಬೃಹತ್ ಡೈರಿಗಳಿಂದ ಹಾಲು ದೂದ್ ಸಾಗರವಾಗಿ ಭಾರತಕ್ಕೆ ಹರಿದು ಬಂದು ನಮ್ಮ ದೇಸೀ ಹಾಲು ಉತ್ಪಾದಕರೆಲ್ಲಾ ಬರಡು ರಾಸುಗಳಾಗುತ್ತಾರೆ ಎಂದು ತುತ್ತೂರಿ ಊದುತ್ತಿದ್ದಾರೆ.

ಹಾಗಾಗಿ ಸ್ವಲ್ಪ ಸತ್ಯಾಸತ್ಯತೆಯನ್ನು ನೋಡೋಣ. ಆಸ್ಟ್ರೇಲಿಯಾ/ನ್ಯೂಜಿಲೆಂಡಿನಲ್ಲಿ ಒಂದು ಲೀಟರ್ ಹಾಲಿಗೆ ಆಸ್ಟ್ರೇಲಿಯನ್ $0.48. ಅಂದರೆ ರೂ.45 ರ ಆಜುಬಾಜು. ಆ ಹಾಲನ್ನು ಭಾರತಕ್ಕೆ ಹರಿಸಲು ಆಗುವ ಸಾಗಣೆಯ ವೆಚ್ಚ ಎಲ್ಲ ಸೇರಿ ಆ ಹಾಲಿನ ಬೆಲೆ ರೂ.90 ಆಗುತ್ತದೆ. ತೊಂಬತ್ತು ರೂಪಾಯಿ ಕೊಟ್ಟು ಆ ಹಳಸಲು ಹಾಲನ್ನು ಯಾರು ಕೊಳ್ಳುತ್ತಾರೆ?!? ಈ ದೇಶಗಳಿಂದ ಬರಬಹುದಾದ ಡೈರಿ ಉತ್ಪನ್ನ ಚೀಸ್! ಪನೀರ್ ಅಲ್ಲ. ಅಲ್ಲಿನ ಚೀಸ್ ಏನಿದ್ದರೂ ವಿದೇಶಿ ಅಡಿಗೆಗಳಲ್ಲಿ ಬಳಸುವಂತಹದು. ಇದರಿಂದ ವಿದೇಶಿ ಅಡಿಗೆ ಮಾಡುವ ಹೋಟೆಲುಗಳು ಲಾಭ ಮಾಡಬಹುದು ಮತ್ತು ಆ ಲಾಭವನ್ನು ಗ್ರಾಹಕರಿಗೆ ಕಡಿಮೆ ದರದ ಮುಖಾಂತರ ತಲುಪಿಸಬಹುದು. ಉಳಿದದ್ದು ನಿಮ್ಮ ವಿವೇಚನೆಗೆ ಬಿಟ್ಟದ್ದು.

ಇಲ್ಲಿ ಭಾರತ ಸರ್ಕಾರ ಅಂದರೆ ಪ್ರಧಾನಿ ಮೋದಿ ಈ ಒಪ್ಪಂದಕ್ಕೆ ಸಹಿ ಹಾಕುತ್ತಾರೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಅವರ ವಿರೋಧಿಗಳ ಗುಂಪು ಈ ರೀತಿ ಒಂದು ಬೆದರುಬೊಂಬೆಯನ್ನು ಸೃಷ್ಟಿಸಿ ಸಮಾಜದಲ್ಲಿ ದುಗುಡ ದುಮ್ಮಾನ, ದುರಿತ, ಸನ್ನಿವೇಶವನ್ನು ಈ ರೀತಿಯಾಗಿ ಕೃತಕವಾಗಿ ಸೃಷ್ಟಿಸುತ್ತಿದೆ. ಹಾಗಾಗಿ ಕೊಂಚ ನಿಮ್ಮ ಬೆರಳುಗಳಿಗೆ ಕೆಲಸ ಕೊಟ್ಟು, ನಿಮ್ಮ ಡೇಟಾ ಪ್ಲ್ಯಾನ್ ಅನ್ನು ಸಮರ್ಥವಾಗಿ ಬಳಸಿಕೊಳ್ಳಿ. ನಿಮ್ಮ ಬುದ್ದಿ ನಿಮ್ಮಲ್ಲೇ ಇರಲಿ ಎಂದು ಹಾರೈಸುವೆ.

"ಹಾಂ, ಇಂಥವರು ಬರುತ್ತಲೇ ಇರುತ್ತಾರೆ, ನೀವು ಓಡಿಸುತ್ತಲೇ ಇರಬೇಕು. ಇಂಥವರು ಬರುತ್ತಲೇ ಇರುತ್ತಾರೆ, ನೀವು ಓಡಿಸುತ್ತಲೇ ಇರಬೇಕು." ಇದು ಪಡುವಾರಹಳ್ಳಿ ಪಾಂಡವರು ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ! ಇಂದಿಗೂ ಅನ್ವಯ.

ಏಯ್ ಚೇಂಜ್ ಮಾಡ್ರುಲಾ ಟೇಶನ್ನ ಅಂಥಾ ವಾಟಿಸ್ಸೆ ಕೂಗಿದ್ ಕಿಟ ಬಾಲಣ್ಣ ಟೇಶನ್ ಚೇಂಜ್ ಮಾಡಿದ. ಆಗ "ಓ ನನ್ನ ಚೇತನಾ ಆಗು ನೀ ಅನಿಕೇತನ..." ಎಂಬ ಹಾಡು ತೇಲಿ ಬಂತು.

ಇಲ್ಲಿಗೆ ರದ್ದಿ ಅಂಗಡಿಯ ಫೇಸ್ಬುಕ್ ಕಟ್ಟೆ ಪುರಾಣ ಪರಿಸಮಾಪ್ತಿ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ರಿಸೆಷನ್ ರಿಸೆಷನ್ ರಿಸೆಷನ್!

ಇಂದಿನ ಉದಯಕಾಲದಲ್ಲಿ,

ರಿಸೆಷನ್, ರಿಸೆಷನ್, ರಿಸೆಷನ್!

PTI ವರದಿಯ ಪ್ರಕಾರ ಇಡೀ ದಕ್ಷಿಣ ಏಷ್ಯಾ, "ಜಾಗತಿಕ ಆರ್ಥಿಕ ಹಿಂಜರಿತ"ದ ಎಫೆಕ್ಟಿಗೆ ಒಳಗಾಗಿದೆ. ಅದರಲ್ಲಿ ಹೆಚ್ಚು ಜಾಗತೀಕರಣಕ್ಕೆ ತೆರೆದುಕೊಂಡಿರುವ ಭಾರತಕ್ಕೆ ಇದರ ಪರಿಣಾಮ ಬೇರೆಲ್ಲಾ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗಿಂತ ಅತಿ ಹೆಚ್ಚು ಪರಿಣಾಮ ಬೀರಲಿದೆ. ಏಕೆಂದರೆ ಭಾರತದಲ್ಲಿ ಜಾಗತಿಕ ಮಟ್ಟದ ಸಂಸ್ಥೆಗಳು ಕೇವಲ ಬಂಡವಾಳ ಹೂಡಿಕೆ ಮಾತ್ರವಲ್ಲದೆ ಇನ್ನಿತರೆ ವ್ಯವಹಾರ, ಉದ್ದಿಮೆಗಳ ಆಯಾಮಗಳಲ್ಲೂ ತೊಡಗಿಸಿಕೊಂಡಿವೆ. ಬಂಡವಾಳ ಹೂಡಿರುವ ಕಂಪೆನಿಗಳು ಬಂಡವಾಳವನ್ನು ಮುಂಜಾಗ್ರತಾ ಕ್ರಮವಾಗಿ ಹಿಂಪಡೆಯುವುದು ಮತ್ತು ಹೆಚ್ಚಿನ ಲಾಭವಿರುವ ಕಡೆ ಮರುತೊಡಗಿಸುವುದು ಅಥವಾ ನಗದನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆ ನಾವು-ನೀವು ನಮ್ಮ ಹಣ ಯಾ ಬಂಡವಾಳವನ್ನು ಹೇಗೆ ಸುಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆಯೋ ಹಾಗೆಯೇ ಇರುತ್ತದೆ. ನೀವು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ ಬಂಡವಾಳವನ್ನು ಹೇಗೆ ಕಾಲಕಾಲಕ್ಕೆ ತೆಗೆಯುವುದು ಅಥವಾ ಬದಲಾಯಿಸುವುದು ಮಾಡುತ್ತೀರೋ ಹಾಗೆ. ಎಲ್ಲಾ ಷೇರು ಮಾರುಕಟ್ಟೆಗಳು ಸದಾ ಏರುಗತಿಯಲ್ಲಿಯೇ ಹೇಗೆ ಇರುವುದಿಲ್ಲವೋ ಹಾಗೆಯೇ ಒಂದು ದೇಶದ ಆರ್ಥಿಕ ಸ್ಥಿತಿಗತಿಗಳು ಕೂಡ.

ಈ ಬಂಡವಾಳ ಹಿಂತೆಗೆತವನ್ನು ತಡೆಯಲು ಸರ್ಕಾರಗಳು ಕೆಲವೊಂದು ಆರ್ಥಿಕ ನೀತಿಗಳನ್ನು ಪ್ರಕಟಿಸಬಹುದು. ಆದರೆ ಹಿಂತೆಗೆತವನ್ನು ಸಂಪೂರ್ಣವಾಗಿ ನಿಲ್ಲಸಲಾಗುವುದಿಲ್ಲ. ಉದಾಹರಣೆಗೆ ನೀವು ಒಂದು ಬ್ಯಾಂಕಿನಲ್ಲಿಟ್ಟಿರುವ FD ಅನ್ನು ಹಿಂತೆಗೆದುಕೊಳ್ಳುವಾಗ ಬ್ಯಾಂಕಿನವರು ಹೆಚ್ಚಿನ ಬಡ್ಡಿಯ ಆಸೆಯನ್ನು ತೋರಿಸಬಹುದು. ಆದರೆ ನಿಮ್ಮ ಅನಿವಾರ್ಯ ಬಡ್ಡಿ ದರವೊಂದೇ ಆಗಿರದಿದ್ದರೆ ನೀವು ನಿಮ್ಮ FDಯನ್ನು ಹಿಂತೆಗದುಕೊಂಡೇತೀರುತ್ತೀರಿ. ಅದೇ ರೀತಿ ಆರ್ಥಿಕ ಹಿಂಜರಿತವನ್ನು ತಡೆಯಲು ಸರ್ಕಾರ ಬಡ್ಡಿ ಏರಿಸುವ/ಇಳಿಸುವ, ಯಾ ತೆರಿಗೆ ಸಡಿಲಿಸುವ, ಸಬ್ಸಿಡಿ ಘೋಷಿಸುವ ಇನ್ನೂ ಹಲವಾರು ಯೋಜನೆಗಳನ್ನು ಪ್ರಕಟಿಸಬಹುದು. ಆದರೆ ಈ ಯೋಜನೆಗಳು ತಕ್ಷಣಕ್ಕೆ ಫಲ ಕೊಡುವುದಿಲ್ಲ.
ಏಕೆಂದರೆ ಇನ್ಫಲೇಶನ್, ಡಿಫ್ಲೇಶನ್, ರಿಸೆಷನ್ನುಗಳು ಗಳು ಆರ್ಥಿಕ ವ್ಯವಸ್ಥೆಯ ಋತುಗಳಿದ್ದಂತೆ. ಆಯಾಯ ಋತುವಿಗೆ ತಕ್ಕಂತೆ ಕೋಟು ಹಾಕಿಕೊಳ್ಳುವುದೋ, AC ಹಾಕಿಕೊಳ್ಳುವುದೋ ಮಾಡಬಹುದೇ ಹೊರತು, ಋತುಗಳನ್ನೇ ಬದಲಾಯಿಸಲಾಗುವುದಿಲ್ಲ. ಹಾಗಾಗಿ ಸರ್ಕಾರಗಳು ಈ ನಿಟ್ಟಿನಲ್ಲಿ ತೆಗೆದುಕೊಳ್ಳುವ ನಿಯಮಗಳು ಕೇವಲ ಕೋಟು/AC ಆಗುವವೇ ಹೊರತು ಬದಲಾಗುವ ಋತುಗಳನ್ನು ನಿಲ್ಲಿಸಲಾರವು.

ಅಮೆರಿಕದಲ್ಲಿ ರಿಸೆಷನ್ ಎಂಬುದು ಆಗಾಗ್ಗೆ ಕ್ಲಿಂಟನ್, ಬುಷ್, ಒಬಾಮರ ಅಧಿಕಾರಾವಧಿಗಳಲ್ಲೂ ಬಂದಿದೆ, ಟ್ರಂಪನ ಕಾಲದಲ್ಲಿಯೂ ಬರಲಿದೆ. ಆದರೆ ಈ ರಿಸೆಷನ್ ಕುರಿತು ಭಾರತದಲ್ಲಿ ಇತ್ತೀಚೆಗೆ ಜನ ಸಾಮಾನ್ಯರು ಮಾತನಾಡಿಕೊಳ್ಳುವಂತಾಗಿರುವುದಕ್ಕೆ ಕಾರಣ, ಭಾರತ ಜಾಗತಿಕವಾಗಿ ಗುರುತಿಸಿಕೊಳ್ಳುವಂತಹ ಆರ್ಥಿಕತೆಯನ್ನು ಪಡೆದುಕೊಂಡಿರುವುದು.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಆಗಿಹೋದ ಸರ್ಕಾರಗಳು ಈ ರೀತಿಯ ಆರ್ಥಿಕ ಋತುಗಳನ್ನು ಗುರುತಿಸಿ ನಿಯಂತ್ರಿಸದೇ ಇನ್ಫಲೇಶನ್ ಎಂಬ ಭೂತವನ್ನು ಬೆಳೆಯಬಿಟ್ಟದ್ದೇ ಈಗ ರಿಸೆಷನ್ ಎಂಬ ಸಾಮಾನ್ಯ ಆರ್ಥಿಕ ಚಕ್ರ ಪೆಡಂಭೂತವಾಗಿ ಬಹುದೊಡ್ಡ ಮಟ್ಟದಲ್ಲಿ ಬಂದೆರಗಬಹುದಾದ ಸನ್ನಿವೇಶವನ್ನು ಸೃಷ್ಟಿಸಲು ಕಾರಣವೆನ್ನಬಹುದು.

ಇದೆಲ್ಲವೂ ಸೃಷ್ಟಿಯಾದದ್ದು ಸಾಫ್ಟವೇರ್ ಎಂಬ ಮೇಕೆಯ ಮೂತಿಗೆ ಬೆಣ್ಣೆ ಕದ್ದ ಕೋತಿಗಳು ಕೈಯೊರೆಸುವ ಅನೌಪಚಾರಿಕ, ಅವ್ಯವಸ್ಥಿತ ಆರ್ಥಿಕ ನಡೆ ಮತ್ತು ನೀತಿಗಳಿಂದಾದ ಅವಘಡ!

ಇಪ್ಪತ್ತೈದು ವರ್ಷಗಳ ಕೆಳಗೆ ಒಬ್ಬ ಸಾಮಾನ್ಯ ಸಾಫ್ಟವೇರ್ ಎಂಜಿನಿಯರನ ಸಂಬಳ ತಿಂಗಳಿಗೆ ಹದಿನೈದು ಸಾವಿರವಿದ್ದರೆ, ಒಬ್ಬ ಸಿವಿಲ್ ಎಂಜಿನಿಯರ್ ಯಾ ಉಪನ್ಯಾಸಕ ಯಾ ತಹಸೀಲ್ದಾರನ ಸಂಬಳ ನಾಲ್ಕು ಸಾವಿರವಿದ್ದಿತು. ಹಾಗೆಯೇ ಬೆಂಗಳೂರಿನ ಯಲಹಂಕಾದಲ್ಲಿ ಚದರಡಿ ಸೈಟಿಗೆ ಐವತ್ತು ರೂಪಾಯಿ!

ಯಾವತ್ತು ಕೇವಲ ಶೇಕಡಾ ಮೂರು ಪ್ರತಿಶತಕ್ಕಿಂತಲೂ ಕಡಿಮೆ ಜನಸಂಖ್ಯೆಯ ಸಾಫ್ಟವೇರ್ ಉದ್ಯೋಗಿಗಳ ಆದಾಯಕ್ಕನುಗುಣವಾಗಿ ದೇಶದ ಇನ್ನಿತರೆ ತೊಂಬತ್ತೇಳು ಪ್ರತಿಶತ ಜನಸಂಖ್ಯೆಗೆ ಆರ್ಥಿಕ ನೀತಿಗಳು, ವಸ್ತುವಿನ ಬೆಲೆಗಳು ರೂಪುಗೊಳ್ಳುತ್ತಾ ಸಾಗಿದವೋ, ಅದರ ದುಷ್ಪರಿಣಾಮವೇ ಇದೆಲ್ಲದುದರ ಮೂಲ.

ಇಪ್ಪತ್ತೈದು ವರ್ಷಗಳಲ್ಲಿ ಐವತ್ತು ರೂಪಾಯಿ ಚದರಡಿ ಇದ್ದ ಯಲಹಂಕಾದ ಸೈಟಿನ ಬೆಲೆ ಹತ್ತು ಸಾವಿರ ರೂಪಾಯಿಗಳನ್ನು ದಾಟಿದೆ. ನಾಲ್ಕು ಸಾವಿರವಿದ್ದ ಒಬ್ಬ ಸರ್ಕಾರಿ ಉಪನ್ಯಾಸಕ, ತಹಶೀಲ್ದಾರ, ಸಿವಿಲ್ ಎಂಜಿನಿಯರನ ಸಂಬಳ ಲಕ್ಷ ರೂಪಾಯಿಯಾಗಿದೆ. ಹಾಗೆಯೇ ಅದನ್ನು ಸರಿತೂಗಲು ಹೋಟೆಲ್, ವಸತಿ, ಜನಜೀವನ ದುಬಾರಿಯಾಗಿ ಬೆಳೆದಿದೆ. ಈ ಎಲ್ಲಾ ಬೆಲೆ ಏರಿಕೆಗಳನ್ನು ಭರಿಸಲು ಭ್ರಷ್ಟಾಚಾರ ಸರ್ಕಾರಿ ವಲಯವಷ್ಟೇ ಅಲ್ಲದೇ ಖಾಸಗಿ ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು, ನರ್ಸಿಂಗ್ ಹೋಮುಗಳಿಂದ ಹಿಡಿದು ಸುಲಭ್ ಶೌಚಾಲಯದವರೆಗೆ ಪಸರಿಸಿದೆ. ಏಕೆಂದರೆ ಲಕ್ಷ ರೂಪಾಯಿ ಸಂಬಳವಿರದ ಖಾಸಗಿ ಕಾಲೇಜಿನ ಉಪನ್ಯಾಸಕ, ನೌಕರರು ಕೂಡ ವಸತಿ, ಊಟದಂತಹ ಮೂಲಭೂತ ವೆಚ್ಚವನ್ನು ದುಬಾರಿಯಾದರೂ ಭರಿಸಲೇಬೇಕಲ್ಲವೇ?

ಇಂದು ಕೊಡಗಿನ ಕಾಫ಼ಿ ತೋಟ ಎಕರೆಗೆ ಮೂವತ್ತು ಲಕ್ಷವಾಗಿರುವುದಿರಲಿ, ಬಿಜಾಪುರದ ಕೃಷ್ಣಾ ತೀರದ ಹೊಲಗಳೂ ಎಕರೆಗೆ ಮೂವತ್ತು ಲಕ್ಷವಾಗಿವೆ. ಈ ಬೆಲೆಗೆ ಕೊಂಡು ಅಲ್ಲಿ ಗಾಂಜಾ/ಅಫ಼ೀಮು ಬೆಳೆದರಷ್ಟೇ ಲಾಭಕರವಾಗಬಹುದಲ್ಲದೇ ಕಾಫ಼ಿ, ಕಬ್ಬು, ಹತ್ತಿ, ಭತ್ತ ಬೆಳೆದರೆ ಬಡ್ಡಿಯೂ ಗಿಟ್ಟದು.

ಇಂತಹ "ಆಮ್ಲೀಯ ಹಣದುಬ್ಬರ"ವನ್ನು ಆಗಿ ಹೋದ ಯಾವುದೇ ಸರ್ಕಾರಗಳು ನಿಯಂತ್ರಣವನ್ನು ಹೇರುವುದಿರಲಿ ಖುದ್ದು ಲಾಭ ಮಾಡಿಕೊಳ್ಳಲು ಆಸ್ತಿ ನೋಂದಣಿಯ ಮಾರ್ಗದರ್ಶಿ ಬೆಲೆಯನ್ನು ಹಿಂದುಮುಂದು ನೋಡದೆ ತಟಕ್ಕನೆ ಏರಿಸುತ್ತಲೇ ಸಾಗಿದವು! ಹೋಟೆಲ್, ವಸತಿ, ಖಾಸಗಿ ಶಿಕ್ಷಣ, ಆರೋಗ್ಯ ವ್ಯವಸ್ಥೆಗಳ ಬೆಲೆ ಇದಕ್ಕನುಗುಣವಾಗಿ ಗಗನಕ್ಕೇರಿದವು. ಬ್ಯಾಂಕ್ ಸಾಲ ಸೌಲಭ್ಯಗಳು ಸುಲಭವಷ್ಟೇ ಅಲ್ಲದೇ ಬೇಕಾಬಿಟ್ಟಿ ಸಿಗಲಾರಂಭಿಸಿದವು. ಹಾಗೆಯೇ ಹಲವಾರು ದೊಡ್ಡ ಮೊತ್ತದ ಸಾಲಗಳು ವಸೂಲಾಗದೆ ಪೇರಿಸಿಕೊಳ್ಳುತ್ತಾ ಸಾಗಿದವು. ಇನ್ನು ಜನಜೀವನದಲ್ಲಿ  KG ಕ್ಲಾಸಿಗೆ ಲಕ್ಷ ರೂಪಾಯಿಯ ಡೋನೇಷನ್ ಸಾಮಾನ್ಯವೆನಿಸಿಬಿಟ್ಟಿದೆ. ಟೈಫಾಯಿಡ್ ಬಂದಾಗಲೂ ಜನ ಹತ್ತಿರದ ಕ್ಲಿನಿಕ್ಕಿನಲ್ಲಿ ಚಿಕಿತ್ಸೆ ಪಡೆದು ಗುಣವಾಗುತ್ತಿದ್ದವರು ಈಗ ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಲೇಬೇಕಾಗಿದೆ. ಅಸಿಡಿಟಿ ಎಂದು ಆಸ್ಪತ್ರೆಗೆ ಹೋದವನಿಗೆ ಹಾರ್ಟ್ ಬೈಪಾಸ್ ಮಾಡಿ ಕಳಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಪ್ರೊಫೆಸರರುಗಳು ತಮಗೆ ತೋಚಿದಂತೆ ಇಂಗ್ಲಿಷ್ ಲೇಖನ/ಸಂಶೋಧನಾ ಪ್ರಬಂಧ, ಪುಸ್ತಕಗಳನ್ನು ಅನುವಾದಿಸಿ ಬೋಧಿಸುತ್ತಿದ್ದಾರೆ. ಕೆಜಿಯಿಂದಲೇ ಲಕ್ಷ ಕಕ್ಕಿ ಕಲಿತ ವಿದ್ಯಾರ್ಥಿಗಳು, ಬೆರಳ ತುದಿಯಲ್ಲೇ ಮಾಹಿತಿಯಿದ್ದರೂ ಇದನ್ನೆಲ್ಲ ಪರಿಶೀಲಿಸುವ ತರ್ಕವನ್ನೇ ಮಾಡುವುದಿಲ್ಲ. ಅಂದರೆ ಎಲ್ಲಾ ವ್ಯವಸ್ಥೆಗಳ ಬೆಲೆ ಏರಿದೆಯೇ ಹೊರತು, ಗುಣಮಟ್ಟ ಪಾತಾಳಕ್ಕೆ ಕುಸಿದುಹೋಗಿದೆ. ಕೇವಲ ಬೆಲೆಯಲ್ಲಿ ಎಲ್ಲಾ ದೇಶಗಳನ್ನು ಮೀರಿಸಿ ನಾನು ವಿಶ್ವಗುರು ಎಂದು ಉದ್ಘೋಷಿಸಲಾಗದು. ಬೆಲೆಗೆ ತಕ್ಕ ತೂಕವಿದ್ದರೇನೇ ಕಳೆ, ಇಲ್ಲದಿದ್ದರೂ ಕಳೆಯೇ! ಒಂದು ಕಳೆ ಮೆರುಗನ್ನು ಕೊಟ್ಟರೆ ಇನ್ನೊಂದನ್ನು ಕಿತ್ತೆಸೆಯಬೇಕು.

ಒಟ್ಟಿನಲ್ಲಿ ವಿಶ್ವವೇ ಗೌರವಿಸುವ ಆರ್ಥಿಕ ತಜ್ಞರೆನಿಸಿಕೊಂಡ ಮನಮೋಹನ್ ಸಿಂಗ್, ಚಿದಂಬರಂ ಅವರ ಮಾರ್ಗದರ್ಶನದಲ್ಲೇ ಈ ಎಲ್ಲಾ ಆಮ್ಲೀಯ ಹಣದುಬ್ಬರ ಉಬ್ಬರಿಸುತ್ತಲೇ ಸಾಗಿತು. ನಂತರ ಸರ್ಕಾರ ಬದಲಾಯಿತು!  ಬ್ಯಾಂಕುಗಳಲ್ಲಿ ಪೇರಿಸಲ್ಪಟ್ಟಿದ್ದ ದೊಡ್ಡ ಮೊತ್ತದ ಸಾಲಗಾರರು ದೇಶ ಬಿಟ್ಟರು, ಬ್ಯಾಂಕಿನ ಅವ್ಯವಹಾರಗಳು ಬಯಲಾದವು. ಹಾಗೆಯೇ ನೋಟು ಅಮಾನ್ಯೀಕರಣವಾಯಿತು.

ನೊಬೆಲ್ ವಿಜೇತೆ ಎಸ್ತರ್ ಡಫ್ಲೋ ಪ್ರಕಾರ ಭಾರತದಲ್ಲಿ ಜಾರಿಯಲ್ಲಿರುವ ಸಂಖ್ಯಾಶಾಸ್ತ್ರ ನಿಯಮಾವಳಿಗಳು ಮತ್ತು ಚಾಲ್ತಿಯಲ್ಲಿರುವ ಕ್ರಮಗಳು ಅನೌಪಚಾರಿಕ ಮಾಮೂಲಿ ಆರ್ಥಿಕ ಬದಲಾವಣೆಯ ಕುರಿತಾಗಿ ಮಾಹಿತಿಯನ್ನು ಹೊಂದಿರದ ಮತ್ತು ಕ್ರಮಬದ್ಧವಾಗಿ ಸಂಗ್ರಹಿಸದ ಕಾರಣ ಅಮಾನ್ಯೀಕರಣದ ಪ್ರಗತಿಯನ್ನಾಗಲೀ, ಹಿನ್ನೆಡೆಯನ್ನಾಗಲಿ ಅಳೆಯಲು ಯಾವತ್ತೂ ಸಾಧ್ಯವಾಗದು ಎಂದಿದ್ದಾರೆ. ಅಂದರೆ ಮಾಹಿತಿಯ ಕೊರತೆಯಿಂದ ಅಮಾನ್ಯೀಕರಣದ ಪರಿಣಾಮವನ್ನು ಅಳೆಯಲಾಗುವುದಿಲ್ಲವೇ ಹೊರತು ಅದು ಒಳ್ಳೆಯದೋ ಕೆಟ್ಟುದೋ ಎಂದು ಹೇಳಲಾಗುವುದಿಲ್ಲ ಎಂಬುದು ಸ್ಪಷ್ಟ. ಹಾಗೆಂದು ಅಳೆಯಲಾಗುವುದಿಲ್ಲವೆಂದು ಅಮಾನ್ಯೀಕರಣವನ್ನು ಮಾಡಲೇಬಾರದೆಂಬುದು ಕೂಡಾ ಪ್ರಶ್ನಾರ್ಹವಾಗುತ್ತದೆ.

ಇರಲಿ, ಇಲ್ಲಿ ಎಸ್ತರ್ ಅವರ ಅಭಿಪ್ರಾಯದಲ್ಲಿ ಗಮನಿಸಬೇಕಾದ ಅಂಶವೆಂದರೆ ಭಾರತದಲ್ಲಿ ಅನೌಪಚಾರಿಕ ಆರ್ಥಿಕತೆಯನ್ನು ಅಳೆಯುವ ಯಾವುದೇ ರೀತಿಯ ನೀತಿ ನಿಯಮಗಳು, ವ್ಯವಸ್ಥೆಗಳು ಜಗದ್ವಿಖ್ಯಾತ ಆರ್ಥಿಕ ತಜ್ಞರಾದ ಮನಮೋಹನ್ ಸಿಂಗ್ ಮತ್ತು ಚಿದಂಬರಂ ನಾಯಕತ್ವದಲ್ಲಿಯೂ ರೂಪುಗೊಳ್ಳದಿದ್ದುದು!

ಇನ್ನು ಅದೇ ಹದಿನೈದು ಸಾವಿರವಿದ್ದ ಒಬ್ಬ ಸಾಮಾನ್ಯ ಸಾಫ್ಟವೇರ್ ಎಂಜಿನಿಯರನ ಸಂಬಳ ಇಂದು ಮೂವತ್ತು ಸಾವಿರದ ಆಜುಬಾಜು ಇದೆ, ಏಕೆಂದರೆ ಇದು ನಿಜದ ಆರ್ಥಿಕ ಪ್ರಗತಿ ಮತ್ತು ಜಾಗತಿಕ ಮಟ್ಟಕ್ಕೆ ಸರಿಸಮವಾಗಿ ಬೆಳೆದಿದೆ. ಅದೇ ಜಾಗತಿಕ ಮಟ್ಟದ ಆರ್ಥಿಕತೆಗೆ ಸರಿಸಮವಾಗಿ ಬೆಳೆಯದೆ, ಆಮ್ಲೀಯ ಹಣದುಬ್ಬರಕ್ಕೆ ತೆರೆದುಕೊಂಡು ಬೆಳೆದ ದೇಶೀಯ ಆರ್ಥಿಕತೆ ತತ್ತರಿಸಿದೆ. ಈ ಆಮ್ಲೀಯ ಹಣದುಬ್ಬರಕ್ಕೆ ಅನುಗುಣವಾಗಿ ಎಲ್ಲಾ ಉದ್ಯೋಗ/ಉದ್ದಿಮೆಗಳಲ್ಲಿಯೂ ಸಮೃದ್ಧವಾಗಿ ಬೆಳೆದದ್ದು ಭ್ರಷ್ಟಾಚಾರ.  ಇದು ಲಂಗುಲಗಾಮಿಲ್ಲದೆ ಭ್ರಷ್ಟಾಚಾರವನ್ನು ಬೆಳೆಸಿದ ಆರ್ಥಿಕ ನೀತಿಗಳ ನೇರ ಮತ್ತು ಪ್ರತ್ಯಕ್ಷ ಪರಿಣಾಮ. ಉದಾಹರಣೆಗೆ ಆಸ್ತಿ ನೋಂದಣಿಯಲ್ಲಿ ಕಡಿಮೆ ಬೆಲೆ ತೋರಿಸುತ್ತಾರೆಂದು ಸರ್ಕಾರಗಳೇ ಯಾವುದೇ ಆರ್ಥಿಕ ಸೂತ್ರಕ್ಕೂ ಅನ್ವಯವಾಗದಂತಹ ಮಾರ್ಗದರ್ಶಿ ನೋಂದಣಿ ಬೆಲೆಯನ್ನು ಜಾರಿಗೆ ತಂದದ್ದು.  ಹೀಗೆ ಸುನಾಮಿಯನ್ನೇ ಆರ್ಥಿಕ ಬಲೂನಿನಲ್ಲಿ ತುಂಬಿ ಈಗ ಬಲೂನು ಸ್ಪೋಟಿಸುತ್ತದೆ ಎಂದರೆ...!?! ಕೇವಲ ಮತ್ತು ಕೇವಲ ಜನಸಂಖ್ಯೆಯ ಏಕೈಕ ಕಾರಣಕ್ಕೆ ಭಾರತದಲ್ಲಿ ಈ ರಿಸೆಷನ್ ಕಳೆದ ಎರಡು ದಶಕಗಳಿಂದ ಮುಂದೂಡಿಕೊಂಡು ಬಂದಿದೆ. ಆದರೆ ಈಗ ಕುತ್ತಿಗೆಗೆ ಬಂದಿದೆ. ಬ್ಯಾಂಕುಗಳಲ್ಲಿ ಈಗ ಮೊದಲಿನಂತೆ ಬೇಕಾಬಿಟ್ಟಿ ಸಾಲ ಸಿಗುತ್ತಿಲ್ಲ, ಆಮ್ಲೀಯ ಉಬ್ಬರದ ತಾಯಿಯಾಗಿದ್ದ ಅಬ್ಬರದ ರಿಯಲ್ ಎಸ್ಟೇಟ್ ತಣ್ಣಗಾಗಿದೆ, ಇವುಗಳಿಗೆ ತಕ್ಕಂತೆ ಉಬ್ಬರ ನಿಂತಿದೆ.  ಇಂತಹ ಆರ್ಥಿಕತೆಯ ನೈಜ ಚಿತ್ರಣ ರೂಪುಗೊಳ್ಳುವ ಸಮಯದಲ್ಲಿ ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಒಂದು ಸಮಗ್ರ ದೂರದೃಷ್ಟಿಯಿಲ್ಲದೆ ಕೇವಲ ಭಾವನಾತ್ಮಕವಾಗಿ "ಪವಿತ್ರ ಆರ್ಥಿಕತೆ" ಎಂಬಂತಹ ಸಿಲ್ಲಿ ಹೋರಾಟಗಳು ಭಜನೆ ಎನಿಸಿಬಿಡುತ್ತದೆ.

ರಿಸೆಷನ್ನಿನಂತಹ ಆರ್ಥಿಕ ಸೈಕ್ಲಿಕಲ್ ಬದಲಾವಣೆಗಳನ್ನು ಸಮರ್ಥವಾಗಿ ನಿಯಂತ್ರಿಸದೆ "ತಲೆಗಿಂತ ತರಡು ದಪ್ಪ" ಮಾಡಿಕೊಂಡಿದ್ದರೂ ಅದು ನನ್ನ ಶಕ್ತಿ ಎಂದುಕೊಂಡು ದುರ್ಮಾಂಸ ಬೆಳೆಸಿಕೊಂಡವರಿಗೆ ಈ ಶಸ್ತ್ರಚಿಕಿತ್ಸೆ ಅವಶ್ಯಕ. ಈಗಲೂ ಇದು ಶಕ್ತಿಯಲ್ಲ ದುರ್ಮಾಂಸವೆಂದರೆ  ಯಾರೂ ನಂಬುವುದಿಲ್ಲ ಕೂಡ. ಹಾಗೊಮ್ಮೆ ನಂಬಿಸಿದರೂ ಮೋದಿಯಂತಹ ನಾಯಕರು ಏನಾದರೂ ಶಸ್ತ್ರಚಿಕಿತ್ಸೆರಹಿತ ದುರ್ಮಾಂಸ ತೆಗೆಯುವ ಮ್ಯಾಜಿಕ್ ಕಂಡುಹಿಡಿದಿರಬಹುದೆಂಬ ಆಶೆ! ಇಲ್ಲಾ ಇದನ್ನು ಪರಿಹರಿಸುವ ಗೋಮೂತ್ರ, ಕತ್ತೆಹಾಲು, ಸಾವಯವ ಔಷಧೀಯ ಗಿಡಮೂಲಿಕೆಗಳಿರಬಹುದೆಂಬ ಭ್ರಮೆ! ಅಥವಾ ಮುಂಬರಬಹುದಾದ ರಾಹುಲರ ನ್ಯಾಯ್ ನ್ಯಾಯವೊದಗಿಸುತ್ತಾರೆಂಬ ಇನ್ನೊಂದು ಗುಂಪಿನ ಉಬ್ಬರದ ಅಬ್ಬರ.

ಇರಲಿ, ಈಗ ಯಾವ ಅಂತರರಾಷ್ಟ್ರೀಯ ಆರ್ಥಿಕ ತಜ್ಞರು ಈ ಹಿಂಜರಿತದ ಕುರಿತು ಮಾತನಾಡುತ್ತಿರುವರೋ ಅವರುಗಳೇ ಜಾಗತಿಕ ಮಟ್ಟದ ಅಂಕಿಅಂಶಗಳ ಪ್ರಕಾರ
ಈ ಪರಿಸ್ಥಿತಿ 2021ರಷ್ಟೊತ್ತಿಗೆ ಸರಿಪಡಿಸಿಕೊಂಡು ಭಾರತ ಆರ್ಥಿಕವಾಗಿ ಮುಂದುವರಿಯಲಿದೆ ಎಂದಿದ್ದಾರೆ.

ಆದರೆ ದೇಶೀಯ ಅಂಕಿ-ಅಂಶಗಳು ಏನೆನ್ನುತ್ತವೆ? ಗೊತ್ತಿಲ್ಲ.

ಈ ಆರ್ಥಿಕ ಹಿಂಜರಿತ ಯಾ ರಿಸೆಷನ್ ಎಂಬುದು ಕೇವಲ ಒಂದು tip of the iceberg!  ಇಂತಹ ಅನಾಹುತಗಳೇ ನಡೆದು ಒಂದೊಮ್ಮೆ ಅಮೆರಿಕಾದಂತಹ ಅಮೆರಿಕವೇ ದಿ ಗ್ರೇಟ್ ಡಿಪ್ರೆಷನ್ ಎಂಬ ಆರ್ಥಿಕ ಪ್ಲೇಗಿಗೆ ಒಳಗಾಗಿತ್ತು. ಅಲ್ಲಿನ ಜನಸಾಮಾನ್ಯರಿಗೆ ಮುಂದಿನ ಊಟ ಮತ್ಯಾವಾಗ ಸಿಗುವುದೋ ಎಂಬುದು ಕೂಡ ಗೊತ್ತಿರುತ್ತಿರಲಿಲ್ಲ, ಊಟ ಸಿಕ್ಕಾಗ ಗಡದ್ದಾಗಿ ತಿನ್ನುತ್ತಿದ್ದರು. ಹಾಗಾಗಿಯೇ ಇಂದಿಗೂ ಅಮೆರಿಕಾದ ಹೋಟೆಲುಗಳಲ್ಲಿ ಕೊಡುವ ಊಟದ ಪ್ರಮಾಣ ಅಧಿಕ. ಅಂತಹ ಪರಿಸ್ಥಿತಿಯನ್ನು ಡಿಪ್ರೆಷನ್ ಸೃಷ್ಟಿಸಿತ್ತು. ಭಾರತ  ಇದನ್ನು ಒಂದು ಜಾಗತಿಕ ಗುಣಮಟ್ಟದ ಆರ್ಥಿಕ ನೀತಿ ಮತ್ತು ಭ್ರಷ್ಟಾಚಾರ ನಿರ್ಮೂಲನೆಯೊಟ್ಟಿಗೆ ತಹಬದಿಗೆ ತಂದು, ಒಂದು ಸತ್ಯದ ಆರ್ಥಿಕ ಅಭಿವೃದ್ಧಿ ಮಾಪನದ ಅಡಿಪಾಯದೊಂದಿಗೆ ಹೊಸ ಆರಂಭವನ್ನು ಆರಂಭಿಸದಿದ್ದರೆ ಆರ್ಥಿಕ ಡಿಪ್ರೆಷನ್ನಿಗೊಳಗಾಗಿ ದೇಶದ ತುಂಬೆಲ್ಲಾ ಇಂದಿರಾ ಕ್ಯಾಂಟೀನುಗಳನ್ನು ತೆರೆದು ಉಚಿತವಾಗಿ ಊಟ ಹಂಚಬೇಕಾಗುತ್ತದೆ. 
http://epaper.udayakala.news/

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಅಮೇರಿಕ, ಜಗತ್ತು, ಮೋದಿ, ನೋಟ್ ಬ್ಯಾನು, ಮತ್ತು ಬಲಪಂಥ!

ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ಬಯಲು ಬೆಡಗು ಸಂವಾದದಲ್ಲಿ ನನಗೆ ಬಂದ ಮೂರು ಪ್ರಶ್ನೆಗಳು.

ಪ್ರಶ್ನೆ 1: ಜಗತ್ತೇ ಬಲಪಂಥದೆಡೆ ಸಾಗುತ್ತಿದೆ ಏಕೆ?

ಉತ್ತರ: ಭಾರತ ಬಲಪಂಥದೆಡೆ ಸಾಗಿದೆ ಎಂದು ಇಲ್ಲಿನ ವಿಚಾರಪರರು ಹೇಳುತ್ತೀರಿ ಸರಿ. ಅದನ್ನು ಅನಿವಾಸಿಯಾದ ನಾನು ಅಲ್ಲಗಳೆಯಲಾರೆ. ಆದರೆ ಹಾಗೆಂದು ಇಡೀ ಜಗತ್ತು ಬಲಪಂಥದೆಡೆ ಸಾಗುತ್ತಿದೆಯೇ ಎಂಬುದನ್ನು ಎರಡು ದೇಶಗಳ ಉದಾಹರಣೆಗಳನ್ನು ತೆಗೆದುಕೊಂಡು ನೋಡೋಣ.

ಮೊದಲನೆಯದಾಗಿ ಅಮೇರಿಕ. ಇಲ್ಲಿ ಟ್ರಂಪ್ ಉದ್ಯೋಗ ಸೃಷ್ಟಿಸುತ್ತೇನೆ ಮತ್ತು ಉದ್ಯಮಗಳನ್ನು ಮರಳಿ ಅಮೆರಿಕೆಗೆ ತರುತ್ತೇನೆ ಎಂಬ ಭರವಸೆಯನ್ನು ಕೊಟ್ಟು ಚುನಾವಣೆಯನ್ನು ಗೆದ್ದಿರುವುದು. ಆ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ವಲಸೆಯ ನಿಯಮಗಳನ್ನು ಬಿಗಿಗೊಳಿಸಿದ್ದಾನೆ. ಮತ್ತು ಅದಕ್ಕೆ ಪೂರಕವಾದ ಕೆಲವು ನಿಯಂತ್ರಣಗಳನ್ನು ಹಾಕಿದ್ದಾನೆ. ಹಾಗಿದ್ದಾಗ ಆತನ ಕ್ರಮ ಬಲಪಂಥೀಯವೇ? ಕೆಲವೊಂದು ಜನಾಂಗೀಯ ಕೊಲೆಗಳ ಘಟನೆಗಳು ನಡೆದವು. ಹಾಗೆಂದು ಆ ರೀತಿಯ ಘಟನೆಗಳು ಒಬಾಮಾರ ಸರ್ಕಾರವಿದ್ದಾಗ ಆಗಿರಲಿಲ್ಲವೇ, ಆಗಿದ್ದವು. ಒಬ್ಬ ಅಧ್ಯಕ್ಷ ತನ್ನ ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಏನನ್ನು ಮಾಡಿದನೋ ಅದನ್ನು ಬಲಪಂಥವೆನ್ನಲಾಗದು. ಮೇಲಾಗಿ ಧರ್ಮ, ಧರ್ಮ, ಧರ್ಮ ಎಂದು ಅಮೆರಿಕಾದಲ್ಲಿ ಆಧ್ಯಕ್ಷೀಯ ಚುನಾವಣೆಯಲ್ಲಿ ಉದ್ಗರಿಸಿ ಚುನಾವಣೆ ಗೆಲ್ಲಬಹುದೆಂಬ ಅಲೋಚನೆಯೇ ನಗೆ ತರಿಸುತ್ತದೆ. ಅಮೆರಿಕಾದಲ್ಲಿ ಉದ್ಯೋಗ, ಉದ್ಯೋಗ ಭದ್ರತೆ, ಆರೋಗ್ಯ ಯೋಜನೆ, ಅಮೆರಿಕೆಯ ಪ್ರೌಢಿಮೆ/ಹಿರಿಮೆ/ಗರಿಮೆ ಮತ್ತು ಸಂಪತ್ತು ಸೃಷ್ಟಿಯ ಯೋಜನೆಯುಕ್ತ ಭರವಸೆಯನ್ನು ಟಾಮ್, ಡಿಕ್ ಮತ್ತು ಹ್ಯಾರಿ ತೋರಿದರೂ ಗೆಲ್ಲುತ್ತಾರೆ. ಅಮೆರಿಕೆಯ ಚುನಾವಣೆಯ ಪ್ರಣಾಳಿಕೆ ಯಾವತ್ತೂ ಇದೇ ಆಗಿದೆ, ಅಲ್ಲಿನ ಚುನಾವಣೆಯ ಇತಿಹಾಸವನ್ನು ಕೂಲಂಕುಷವಾಗಿ ಒಮ್ಮೆ ಪರಿಶೀಲಿಸಿ.

ಅದೇ ರೀತಿ ಜರ್ಮನಿಯ ಏಂಜೆಲಾ ಮರ್ಕೆಲ್ ಸಿರಿಯಾದ ರೆಫ್ಯುಜಿಗಳನ್ನು ತನ್ನ ದೇಶಕ್ಕೆ ಕರೆತಂದಳು. ಹಿಟ್ಲರ್ ಪಾತಕತನದಿಂದ ಇಂದು ಇಡೀ ಜರ್ಮನಿ ಪಾಪಪ್ರಜ್ಞೆಯಿಂದ ನರಳುತ್ತಿದೆ. ಆ ಪಾಪಪ್ರಜ್ಞೆಯ ಕಾರಣದಿಂದಲೇ ಜರ್ಮನಿಯ ನಾಯಕಿ ಆ ನಿರಾಶ್ರಿತರನ್ನು ಹಿಂದುಮುಂದು ನೋಡದೆ ಜರ್ಮನಿಗೆ ಕರೆತಂದದ್ದು. ಒಂದು "ಅನಾಗರಿಕ" ಹಿನ್ನೆಲೆಯ ಜನರನ್ನು ಮತ್ತೊಂದು ಸುಸಂಸ್ಕೃತ ನಾಗರೀಕತೆಗೆ ನೇರವಾಗಿ ತಂದು ಬಿಡುವ ಮುನ್ನ ಆ ನಿರಾಶ್ರಿತರನ್ನು ಒಂದು ಕ್ಯಾಂಪಿನಲ್ಲಿಟ್ಟು, ಶಿಕ್ಷಣ ಕೊಟ್ಟು ಅವರನ್ನು ಸಮಾಜದಲ್ಲಿ ಬೆರೆಯುವಂತೆ ಮಾಡಬೇಕಾಗಿದ್ದಿತು. ಆದರೆ ಅದು ಮಾನವ ವಿರೋಧಿ ಧೋರಣೆ ಎಂದು ಆಕೆ ನೇರವಾಗಿ ಆ ಜನರನ್ನು ಜರ್ಮನಿಯ ಮುಖ್ಯವಾಹಿನಿಗೆ ತಂದಳು. ಅದರ ಫಲಶ್ರುತಿಯಾಗಿ ಆ ನಿರಾಶ್ರಿತ "ಅನಾಗರಿಕ"ರು ಸುಲಿಗೆ, ಕಳ್ಳತನ ಅತ್ಯಾಚಾರವಲ್ಲದೆ ಸ್ಪುರದ್ರೂಪಿ ಜರ್ಮನ್ ಬಾಲಕರನ್ನು ಕೂಡಾ ಬಲಾತ್ಕಾರಿಸಲಾರಂಭಿಸಿದರು. ಈ ಅನಾಗರಿಕ ವರ್ತನೆಗಳ ವಿರುದ್ಧ ಜರ್ಮನರು ದಂಗೆದ್ದು ನಿರಾಶ್ರಿತರ ಮೇಲೆ ದಾಳಿ ಮಾಡಲಾರಂಭಿಸಿದರು. ಇದು ಬಲಪಂಥವೇ?

ಹೀಗೆ ಆಯಾಯ ದೇಶಕ್ಕೆ ಅದರದೇ ಕಾರಣದ ಆಯಾಮಗಳಿರುತ್ತವೆ. ಹಾಗಾಗಿ ಅವೆಲ್ಲವನ್ನೂ ನಮ್ಮ ಮೂಗಿನ ನೀರಕ್ಕೆ ಹೋಲಿಸಿ ಜಗತ್ತೇ ಬಲಪಂಥದೆಡೆ ಸಾಗುತ್ತಿದೆ ಎನ್ನುವುದು ನಮ್ಮಲ್ಲಿನ ಪೂರ್ವಾಗ್ರಹವೆನಿಸಿಬಿಡುತ್ತದೆ.

ಪ್ರಶ್ನೆ 2: ಅಮೆರಿಕಾ ವಲಸೆಗಾರರನ್ನು ಎರಡನೇ ದರ್ಜೆಯವರಂತೆ ಕಾಣುತ್ತದೆ ಮತ್ತು ಯಾರೂ ಮಾಡಲಿಚ್ಛಿಸದ ಉದ್ಯೋಗಗಳನ್ನು ಮಾತ್ರ ಅವರಿಗೆ ಕೊಡುತ್ತದೆ. ಇದು ಅಮೇರಿಕಾದವರ "ಬಂಡವಾಳಶಾಹಿ ಮನಸ್ಥಿತಿ".  ನಾನು ಸಾಕಷ್ಟು ಸಾರಿ ಅಮೆರಿಕೆಗೆ ಹೋಗಿದ್ದೇನೆ ಮತ್ತು ಇದನ್ನು ಕಂಡಿದ್ದೇನೆ. ಅಲ್ಲಿನ ಹೋಟೆಲ್ ಮತ್ತು ದಿನಸಿ ಅಂಗಡಿಗಳಲ್ಲಿ ಕೆಲಸ ಮಾಡುವವರೆಲ್ಲಾ ಭಾರತೀಯರು ಅಥವಾ ಪಾಕಿಸ್ತಾನಿಯರು. ಅಲ್ಲಿನ ಕಕ್ಕಸ್ಸು ತೊಳೆಯುವವರು ಮೆಕ್ಸಿಕನ್ನರು.

ಉತ್ತರ: ನೋಡಿ ತಾವು ಅಮೇರಿಕಾದಲ್ಲಿ ಇಳಿದ ತಕ್ಷಣ ಕಂಡ ಕಸ್ಟಮ್ಸ್ ಯಾ ಇಮಿಗ್ರೇಷನ್ ಅಧಿಕಾರಿ ನಿಮ್ಮನ್ನು ಯಾವುದೇ ಭಾರತದ ಅಧಿಕಾರಿಯ ಅಧಿಕಾರಶಾಹಿ ಗತ್ತಿನಲ್ಲಿ ಮಾತನಾಡಿಸಿದನೆ? ಅಥವ ತಮಗೆ ವಾಕಿಂಗ್ ಹೋಗುವಾಗಲೋ, ಮಾಲುಗಳಲ್ಲೋ ಸಿಕ್ಕ ಅಮೇರಿಕನ್ನರು ನಿಮ್ಮನ್ನು ಎರಡನೇ ದರ್ಜೆಯ ನಾಗರಿಕರನ್ನು ಕಂಡಂತೆ ವ್ಯವಹರಿಸಿದರೆ? ಇಲ್ಲ ತಾನೇ! ನಿಮಗೆ ಹಾಗೆನ್ನಿಸಲು ಒಂದು ಕಾರಣವಿದೆ. ಅದು ನೀವು ಅಮೇರಿಕೆಗೆ ಹೋದದ್ದು ತಮ್ಮ ಆಪ್ತೇಷ್ಟರನ್ನು ಕಾಣಲು.

ಹಾಗಾಗಿ ತಮ್ಮ ಹೇಳಿಕೆಯಿಂದಲೇ ನಾನು ಹೇಳಬಲ್ಲೆ ನೀವು ಅಮೆರಿಕದಲ್ಲಿ ಕೇವಲ ಭಾರತೀಯ ಮೂಲದ ಹೋಟೆಲ್ ಮತ್ತು ದಿನಸಿ ಅಂಗಡಿಗಳಿಗೆ ಮಾತ್ರ ಭೇಟಿ ಕೊಟ್ಟಿದ್ದೀರಿ. ಹಾಗಾಗಿಯೇ ಸಹಜವಾಗಿ ಅಲ್ಲಿ ಕೆಲಸ ಮಾಡುವ ಕೇವಲ ಭಾರತೀಯ ಮೂಲದವರನ್ನು ಮಾತ್ರ ಕಂಡಿದ್ದೀರಿ ಮತ್ತು ಕಕ್ಕಸ್ಸು ತೊಳೆಯುವ ಮೆಕ್ಸಿಕನ್ನನನ್ನು ಕಂಡಿದ್ದೀರಿ. ಇಲ್ಲಿ ಶೋಷಣೆ ಇದ್ದರೆ ಅದು ಒಬ್ಬ ಲೀಗಲ್ ವಲಸಿಗ (ಭಾರತೀಯ) ಮತ್ತೊಬ್ಬ ಇಲ್ಲೀಗಲ್ ವಲಸಿಗನ (ಮೆಕ್ಸಿಕನ್) ಪರಿಸ್ಥಿತಿಯ ಶೋಷಣೆ ಇರುತ್ತದೆಯೇ ಹೊರತು ಮತ್ಯಾವ ಅಮೇರಿಕನ್ ಶೋಷಣೆ ಇರುವುದಿಲ್ಲ.

ನೀವು ಯಾವುದೇ ಅಮೇರಿಕನ್ ಮೂಲದ ಹೋಟೆಲ್, ದಿನಸಿ ಅಂಗಡಿ ಯಾ ಯಾವುದೇ ರಿಟೇಲ್ ಅಂಗಡಿ ಮುಂಗಟ್ಟುಗಳಿಗೆ ಹೋದರೆ ನಿಮಗೆ ಅಲ್ಲಿ ವೇಟರ್, ಹೆಲ್ಪರ್, ಗುಮಾಸ್ತ, ಕೂಲಿಯಷ್ಟೇ ಅಲ್ಲದೆ ಕಕ್ಕಸ್ಸು ತೊಳೆಯುವ ಬಿಳಿಯ ಅಮೇರಿಕನ್ ಕೂಡ ಕಾಣುತ್ತಾನೆ.

ಹಾಗಾಗಿ ದಯವಿಟ್ಟು ಮತ್ತೊಮ್ಮೆ ಅಮೇರಿಕೆಗೆ ಅಮೇರಿಕಾವನ್ನು ಕಾಣುವ ಸಲುವಾಗಿ ಭೇಟಿ ಕೊಡಿ. ಕೇವಲ ನಿಮ್ಮ ಮಕ್ಕಳನ್ನು ಕಂಡು ಅಮೆರಿಕಾದಲ್ಲಿಯೂ ಇಡ್ಲಿ ದೋಸೆ ತಿನ್ನದೇ ಅಮೆರಿಕಾದ ಆಹಾರವನ್ನೂ ತಿಂದು ನಿಜದ ಅಮೇರಿಕನ್ ಸಂಸ್ಕೃತಿಯನ್ನು ನೋಡಿಕೊಂಡು ಬನ್ನಿ.

ಪ್ರಶ್ನೆ 3: ಮೋದಿಯನ್ನು ವಿನಾ ಕಾರಣ ಏಕೆ ಬೆಂಬಲಿಸುತ್ತೀರಿ.

ಉತ್ತರ: ಮೋದಿಯನ್ನು ನಾನು ವ್ಯಕ್ತಿಗತವಾಗಿ ಬೆಂಬಲಿಸದೆ ಕೇವಲ ಆತನ ಕೆಲವು ಪಾಲಿಸಿಗಳಿಗೆ ತರ್ಕಬದ್ಧವಾಗಿ ಬೆಂಬಲಿಸಿದ್ದೇನೆ. ಹಾಗಾಗಿ ಆತನ ಒಂದು ಪಾಲಿಸಿಯನ್ನು ಹೇಳಿ, ಆ ಕುರಿತು ಮಾತನಾಡೋಣ ಎಂದಾಗ ನನಗೆ ಕೊಟ್ಟ ವಿಷಯ ನೋಟ್ ಬ್ಯಾನ್.

ನೋಟ್ ಬ್ಯಾನ್ ಒಂದು ಉತ್ತಮ ನಿರ್ಣಯ. ಅದರಿಂದ ಚಾಲನೆಯಲ್ಲಿದ್ದ ಎಲ್ಲಾ ನೋಟುಗಳು ಎಲ್ಲಿಂದ ಬಂದವೆಂಬ ಆಡಿಟ್ ಟ್ರೇಲ್ ಸಿಕ್ಕಿದೆ. ಆ ಆಡಿಟ್ ಟ್ರೇಲ್ ಹಿಡಿದು ಯಾವ ಖಾತೆಗೆ ಇಪ್ಪತ್ತೈದು ಲಕ್ಷಕ್ಕಿಂತ ಅಥವಾ ಐವತ್ತು ಲಕ್ಷಕ್ಕಿಂತ ಅಧಿಕ ಜಮಾವಣೆಯಾಗಿದೆ ಅವರೆಲ್ಲಾ ಲೆಕ್ಕ ಕೊಡಿ ಎಂದರೆ ಅದರ ಪೂರ್ಣ ಫಲ ಸಿಗಲಿದೆ. ಹಾಗೆ ಮಾಡಿರೆಂದು ನಿಮ್ಮನ್ನೂ ಸೇರಿ ಯಾರಾದರೂ ಪ್ರಗತಿಪರರು ಪ್ರಶ್ನಿಸಿದ್ದೀರೇ? ಇಲ್ಲ, ಇನ್ನು ನೋಟು ಬದಲಾಯಿಸಿಕೊಳ್ಳಲು ಜನ ಕ್ಯೂನಲ್ಲಿ ಸತ್ತರೆಂದು ಬೊಬ್ಬಿರಿದದ್ದೇ ಹಾಸ್ಯಾಸ್ಪದ. ಜನ ನೀರಿಲ್ಲದೇ ಸತ್ತಾರೆಯೇ ವಿನಹ ನೋಟಿಲ್ಲದೇ ಸಾಯುವುದಿಲ್ಲ. ಒಬ್ಬ ಕೃಷಿ ಕಾರ್ಮಿಕ ಕೂಡಾ ಉದ್ರಿ ಮೇಲೆಯೇ ದಿನಸಿ ಸಾಮಾನು ತರುವುದು. ಇಡೀ ಭಾರತದ ಅರ್ಥವ್ಯವಸ್ಥೆ ನಿಂತಿರುವುದೇ ಉದ್ರಿ ವ್ಯವಹಾರದ ಮೇಲೆ! ನನ್ನ ಅಜ್ಜನ ಕಾಲದಿಂದಲೂ ಉದ್ರಿ ಹುಂಡಿ ವ್ಯವಸ್ಥೆ ಇದ್ದಿತು.  ನಾನೊಬ್ಬ ಮಾಜಿ ದಿನಸಿ ಅಂಗಡಿ, ದಲಾಲಿ ಮಂಡಿ ನೌಕರ. ಈ ಉದ್ರಿ ವ್ಯವಹಾರದ ಅನುಭವ ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿದೆ. ಇನ್ನೂ ಉದ್ರಿ ವ್ಯವಹಾರದ ವಿವರಗಳು ಬೇಕಿದ್ದರೆ ಕೇಳಿ, ರೈತ-ಬೀಜ/ಗೊಬ್ಬರದ ಅಂಗಡಿ-ದಲಾಲಿ ಮಂಡಿ-ಖರೀದಿ ಮಂಡಿಗಳ ಉದ್ರಿ ಕುರಿತು ಗಂಟೆಗಟ್ಟಲೆ ಆ ವ್ಯವಹಾರ ಸೂತ್ರಗಳನ್ನು ಬಿಚ್ಚಿಡುವೆ. ಹಾಗಾಗಿ ನೋಟಿಲ್ಲದೇ ಜನ ಸತ್ತರೆಂಬುದು ಅವಾಸ್ತವ. ಈ ರೀತಿಯಾಗಿ ತಾರ್ಕಿಕ ಮೋದಿ ವಿರೋಧ ಸೃಷ್ಟಿಯಾಗದ ಕಾರಣ ಮೋದಿ ಎರಡನೇ ಬಾರಿ ಇನ್ನೂ ಹೆಚ್ಚಿನ ಗೆಲುವು ಸಾಧಿಸಿದ್ದುದು. ಈ ರೀತಿಯ ಆತಾರ್ಕಿಕ ವಿರೋಧ ಮುಂದುವರಿದದ್ದೇ ಆದರೆ ನಿಮ್ಮ ವಿಷಾದದ ಶೋಕ ಕೂಡಾ ಹೆಚ್ಚಲಿದೆ. ಹಾಗಾಗಿ ಒಂದು ಪ್ರಮುಖ ವಿರೋಧಪಕ್ಷ ಸೃಷ್ಟಿಗಾದರೂ ನಾವೆಲ್ಲರೂ ತಾರ್ಕಿಕ ಮೌಲ್ಯಯುತ ಹೋರಾಟವನ್ನು ಸೃಷ್ಟಿಸಬೇಕು.

Spanish Proverbs

Cómo están tus amigos ಅಂದರೆ ಸ್ನೇಹಿತರೇ ನೀವು ಹೇಗಿದ್ದೀರಿ? ಎಂದು ಸ್ಪ್ಯಾನಿಷ್ ಭಾಷೆಯಲ್ಲಿ.

ರಂಗಸ್ವಾಮಿಗಳು ನನ್ನ ಹಳೆಯ ದೋಸ್ತಿ. ಆಗಿನ್ನೂ ಅವರು ಕವನಗಳನ್ನು ಬರೆಯುತ್ತಿದ್ದರು. ಹೊಸದಾಗಿ ಮದುವೆಯಾಗಿದ್ದರು ನೋಡಿ, ಹಾಗಾಗಿ ಭಾರೀ ಚುಟುಕು ಕವನಗಳನ್ನು ಬರೆಯುತ್ತಿದ್ದರು. ಆಮೇಲೆ ಸಣ್ಣದಾಗಿ ಲೇಖನಗಳನ್ನು ಬರೆಯುತ್ತ ಹೆಂಡತಿಯರನ್ನು ಗೃಹಲಕ್ಷ್ಮೀ ಎಂದು ಏಕೆ ಕರೆಯುತ್ತಾರೆ ಎಂದು ಅರ್ಥವಾದ ನಂತರ ಹಣಕ್ಲಾಸಿಗೆ ಬಂದು ಈಗ ಆ ವಿಷಯದಲ್ಲಿ ತಜ್ಞರೆನಿಸಿಕೊಂಡಿದ್ದಾರೆ ಮತ್ತು ಖ್ಯಾತವಾಗಿದ್ದಾರೆ ಕೂಡ.
ಹಾಗಾಗಿಯೇ ಈ ಗಾದೆ, there is a woman behind every successful man.

ಇನ್ನು ನಮ್ಮಂತಹ ಎನ್ನಾರೈಗಳು ಹೇಗಪ್ಪಾ ಎಂದರೆ , ಎಲ್ ಕೆ ನೋ ಮೀರಾ, ನೋ ಸಸ್ಪಿರಾ
ಅಂದ್ರೆ Out of sight, out of mind!  ಹಾಗಾಗಿಯೇ ನಮ್ಮನ್ನು ಕ್ಯಾರೆ ಎನ್ನುವವರಿಲ್ಲ. ಅದಕ್ಕಾಗಿ ನಾವಿಬ್ಬರೂ ಎನ್ನಾರೈಗಳು ದಿಸ್ ಗ್ರೇಸಿಯ ಕೋಂಪಾರ್ಟಿದಾ ಮೆನೋಸ್ ಸೆಂತಿದಾ ಅಂದರೆ Two in distress makes sorrow less! ಎಂದು ನಮ್ಮ ಸಂಕಷ್ಟ ಪರಸ್ಪರ ಹಂಚಿಕೊಂಡು ಹಗುರಾಗುತ್ತೇವೆ.

ಸದ್ಯದಲ್ಲಿ ಈಗ ಎಲ್ಲರೂ ಆರ್ಥಿಕ ಹಿಂಜರಿತದ ಕುರಿತು ಮಾತನಾಡುವವರೆ ಎಲ್ಲೆಲ್ಲೂ. ಅರೆ, 200 ರೂಪಾಯಿ ಚದರಡಿ ಇದ್ದದ್ದು ಇಪ್ಪತ್ತು ವರ್ಷಗಳಲ್ಲಿ 20000 ರೂಪಾಯಿ ಆದಾಗ ಅದು ಏಕೆ ಆರ್ಥಿಕ ಮುಂದ್ಸರಿತ ಎಂದು ಎಲ್ಲಾ ಆರ್ಥಿಕ ತಜ್ಞರ ಅರಿವಿಗೆ ಬರಲಿಲ್ಲ? ಅದಕ್ಕೂ ಗಾದೆಗಳೇ ಉತ್ತರಿಸುತ್ತವೆ ಹೀಗೆ, ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು, What goes up must come down, ಮಾಡಿದ್ದುಣ್ಣೋ ಮಹರಾಯ, ಅಥವಾ ಸ್ಪ್ಯಾನಿಷ್ ನ ಎಲ್ ಕೆ ಹಾಸೆ ಲಾ ಪಾಗಾ!

ಆಗ ಮೋದಿ ಸರ್ಕಾರವಿರದಿದ್ದ ಕಾರಣ ಅಥವಾ ಫೇಸ್ಬುಕ್ ಇರದ ಕಾರಣ ಜನ ಸರ್ವಶಾಸ್ತ್ರ ತಜ್ಞರಾಗಿರಲಿಲ್ಲವೆನಿಸುತ್ತದೆ. ಈಗ ಎಲ್ಲರೂ ಎಲ್ಲಾ ವಿಷಯದಲ್ಲಿ ತಜ್ಞರು!  ಹಾಗಾಗಿಯೇ ಅದಕ್ಕೂ ಸಮರ್ಪಕವಾದ ಗಾದೆಗಳಿವೆ, In the land of the blind, the one-eyed man is the king. ಅಥವಾ ಸ್ಪ್ಯಾನಿಷ್ ಭಾಷೆಯ ಉನ್ ಸಿಯೇಗೊ ಗೈಯಂದೋ ಆ ಓತ್ರೋ ಸಿಯೇಗೊ!

ಹೀಗೆ ಶತಶತಮಾನಗಳ ಹಿಂದೆ ಸೃಷ್ಟಿಯಾದ ಗಾದೆಗಳು ಈಗಲೂ ಪ್ರಸ್ತುತ. ಪ್ರತಿಯೊಂದು ಭಾಷೆಯಲ್ಲಿನ ಗಾದೆಗೆ ಇನ್ನೊಂದು ಭಾಷೆಯಲ್ಲಿ ಸಮಾನಾರ್ಥದ ಗಾದೆಯೊಂದು ಇದ್ದೇ ಇರುತ್ತದೆ. ಇದು ಕನ್ನಡ, ತೆಲುಗು, ಹಿಂದಿ, ಸ್ಪ್ಯಾನಿಷ್, ಇಂಗ್ಲಿಷ್, ಫ್ರೆಂಚ್, ಸ್ವಾಹಿಲಿ ಅಥವಾ ಇನ್ಯಾವುದೇ ಭಾಷೆಯಿರಲಿ ಅವುಗಳಲ್ಲಿ ಪರಸ್ಪರ ಸಮಾನಾರ್ಥದ ಗಾದೆಗಳು ಸರ್ವೇಸಾಮಾನ್ಯ.

ಯಾರು ಹೇಳಿದ್ದು ಜಗತ್ತು ಈಗ ಜಾಗತಿಕವಾಗಿದೆ ಎಂದು? ಜಗತ್ತು ವಿಕಾಸಗೊಂಡದ್ದೇ ಜಾಗತಿಕವಾಗಿ! ಇಂತಹ ಕೌತುಕ ಮತ್ತು ಭಾಷಾ ಬೆರಗನ್ನು ಕಾಣಲು "Spanish Proverbs" ಎಂಬ ಈ ಪುಸ್ತಕ ಮತ್ತದರ ಕನ್ನಡದ ಮೂಲ "ಸ್ಪ್ಯಾನಿಷ್ ಗಾದೆಗಳು" ಎರಡನ್ನೂ ಓದಿ.

ಆಸಕ್ತರು ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಆಗರ -Aagara ಗೆ ಇನ್‌ಬಾಕ್ಸ್ ಸಂದೇಶ ಕಳುಹಿಸಿ ಪುಸ್ತಕ ಪಡೆಯಬಹುದು.

ಕನ್ನಡ-ಇಂಗ್ಲಿಷ್ ಎರಡೂ ಆವೃತ್ತಿಗಳು ಸೇರಿ ಬೆಲೆ ₹ 190/- ಅಂಚೆ ಮತ್ತು ರವಾನೆ ವೆಚ್ಚ ಉಚಿತ.

ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಭೀಮ್ ಅಪ್ಲಿಕೇಶನ್ ಮೂಲಕ 9844192952ಗೆ ಪಾವತಿಸಿ.

ಭಾರತ ಒಂದು ಮರುಶೋಧನೆ ಕೃತಿಯ ಹಿನ್ನೆಲೆ



ಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಬುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹೀಗೆ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.
ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ, ಹುಯೆನ್ ತ್ಸಾಂಗನ ಮಹಾಪಯಣ ಎಂಬ ಪುಸ್ತಕವಾಯಿತು.
ಆ ಪುಸ್ತಕ, ಡಲ್ಲಾಸ್ ನಗರದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಕಳೆದ ವರ್ಷ ಬಿಡುಗಡೆಗೊಂಡಿತು.  ಅಕ್ಕದ ಆ ಸಮ್ಮೇಳನದ ಒಂದು ಸಂಜೆ ಶಿಕಾಗೋದಿಂದ ಬಂದಿದ್ದ ನಾನು, ಮೋಹನ್ ಗೌಡರು, ಶ್ರೀಶೈಲ ವಿರುಪಣ್ಣಾವರ್, ಪ್ರಭು ನಂಜಣ್ಣಾವರ್, ಬೆಂಗಳೂರಿನಿಂದ ಬಂದಿದ್ದ ಸಮಾಜಮುಖಿ ಬಳಗದ ಜಯರಾಮ್, ಮತ್ತು ಡಲ್ಲಾಸಿನವರೇ ಆದ ಸುಷ್ಮಾ ಮತ್ತು ನನ್ನ ಹೆಂಡತಿ ಸುನೀತಾ ಕುಳಿತು ಹುಯೆನ್ ತ್ಸಾಂಗನ ಕುರಿತಾದ ನನ್ನ ಸಂಶೋಧನೆಯ ಕುರಿತು ಮಾತನಾಡುವಾಗ, ಜಯರಾಮ್ ಅವರು ರಾಖೀಗಢಿಯಲ್ಲಿ ದೊರೆತ ಪಳೆಯುಳಿಕೆಗಳ ಇತ್ತೀಚಿನ ಉತ್ಖನನದ ಸಂಶೋಧನೆಯ ಬಗ್ಗೆ ಉಲ್ಲೇಖಿಸಿದರು. ಆಗ ಚರ್ಚೆ ಗಂಭೀರವಾಗುತ್ತಾ ರಾಮಾಯಣ, ಮಹಾಭಾರತ, ಆರ್ಯ, ದ್ರಾವಿಡ, ಸಂಸ್ಕೃತ, ಪ್ರಾಕೃತ, ಹಿಂದುತ್ವ, ಕೊಲಂಬಸ್, ಐಟಿ ಎಲ್ಲಾ ವಿಷಯಗಳೂ ಚರ್ಚಾ ವಿಷಯಗಳಾಗಿ ಎಲ್ಲರೂ ಇತಿಹಾಸದ ಕುತೂಹಲಿಗಳಾದರು.
ಇತ್ತ ಸುನೀತಾ ಮತ್ತು ಸುಷ್ಮಾ ಯಾವುದೋ ನೃತ್ಯ ನೋಡಲು ಹೋಗುತ್ತಿದ್ದಂತೆಯೇ ಶ್ರೀಶೈಲರು ಸ್ಕಾಚ್ ತೆಗೆದು ಚರ್ಚೆಗೆ ತುಪ್ಪ ಸುರಿದರು. ಮೋಹನ್ ಗೌಡರು ಈ ಎಲ್ಲಾ ವಿಷಯಗಳ ಬಗ್ಗೆ ಯಾರಾದರೂ ಸ್ವಲ್ಪ ಹೆಚ್ಚಿನ ಸಂಶೋಧನೆ ಮಾಡಿ ಒಂದು ಕೈಪಿಡಿ ಮಾಡಬೇಕು ಕಣ್ರೀ ಎಂದರು. ನಂಜಣ್ಣಾವರರು ನೀವೆಲ್ಲಾ ಇಸ್ಪೀಟು ಆಡಲು ಬರುತ್ತೀರಿ ಎಂದುಕೊಂಡರೆ ಇತಿಹಾಸ ಕೆದಕುತ್ತಿರುವಿರಿ ಎಂದು ಹುಸಿ ಬೇಸರ ತೋರಿದರೂ, ಜೂಜು ಭಾರತೀಯರ ಮೂಲಗುಣ ಎಂದಾಗ ತಮ್ಮ ಜೂಜಿನ ಚಟ ವಂಶವಾಹಿ ಗುಣವೆಂದು ಬೀಗುತ್ತ ಚರ್ಚೆಗೆ ಕಿವಿಯಾದರು. ಹೀಗೆ ಜಯರಾಮರು ಎತ್ತಿದ ರಾಖೀಗಢಿ ಒಂದು ಕಿಡಿಯನ್ನು ಹಚ್ಚಿತು. ಆ ಕಿಡಿ, ಇಂದು ಕೃತಿಯಾಗಿ ನಿಮ್ಮ ಕೈ ಸೇರಿದೆ. 
ಬಿಸಿನೆಸ್ ಪ್ರಾಸೆಸ್, ರೋಡ್ ಮ್ಯಾಪ್, ಬ್ಲೂ ಪ್ರಿಂಟ್, ಬಿಗ್ ಡೇಟಾ, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ. ಅಂತಹ ಮಹಾನ್ ಪುರುಷನ ಕುರಿತು ಬರೆದ ನಾನು, ಅದೇ ರೀತಿಯಲ್ಲಿ ಮಾಹಿತಿಯನ್ನು ಮಥಿಸಿ ಈ ನನ್ನ ಕೃತಿ 'ಭಾರತ ಒಂದು ಮರುಶೋಧನೆ'ಯನ್ನು ರಚಿಸಿದ್ದೇನೆ ಎಂದುಕೊಂಡಿದ್ದೇನೆ.
ಹಮ್ಮ್, ಯಾರು ಹೇಳಿದ್ದು ಇತ್ತಲಿಂದ ಆಲೂಗಡ್ಡೆ ಹಾಕಿ ಅತ್ತಲಿಂದ ಬಂಗಾರ ತೆಗೆಯಲು ಸಾಧ್ಯವಿಲ್ಲ ಎಂದು? ಇನ್ನೊಮ್ಮೆ ಯೋಚಿಸಿ.😊
ಇರಲಿ, ಈ ಕೃತಿ ಕೇವಲ tip of an iceberg.
ಹಾಗಾಗಿಯೇ ಇದು ಒಂದು ಕೈಪಿಡಿಯಂತಿರುವುದು. ಇದನ್ನು ಅರಗಿಸಿಕೊಳ್ಳಲಿಕ್ಕೆ ತುಂಬಾ ಮುಕ್ತ ಮನಸ್ಸು ಬೇಕು. ಇನ್ನು ಆಳಕ್ಕೆ ಇಳಿದು ವಸ್ತುನಿಷ್ಠವಾಗಿ, ನಿರ್ಭಿಡೆಯಿಂದ ಬರೆದರೆ ಏನಾಗಬಹುದು ಎಂಬುದನ್ನು ಊಹಿಸಿಕೊಂಡು ಸತ್ಯವನ್ನು ಅಪ್ಪಿಕೊಳ್ಳಲು ತಯಾರಾಗಿ. ಏಕೆಂದರೆ ನಮ್ಮ ಪರಂಪರೆ ಉನ್ನತ, R1 DNA ಭಾರತ ಮೂಲದ್ದೆಂದು ಕೂಡ ಇತ್ತೀಚೆಗೆ ಸಾಬೀತಾಗುತ್ತಿದೆ.  ಆದರೂ ಒಂದು ಪರಂಪರೆಯಲ್ಲಿ ಒಳಿತು, ಕೆಡಕುಗಳು ಇದ್ದೇ ಇರುತ್ತವೆ ಎಂಬ ಸತ್ಯದ ಆಧಾರದ ಮೇಲೆ ನಮ್ಮ ಪರಂಪರೆಯನ್ನು ನಮ್ಮ ಚರಿತ್ರೆಯಾಗಿ ಒ/ಅಪ್ಪಿಕೊಂಡು ಮುಂದುವರಿಯಬೇಕಾಗಿದೆ.
ಒಟ್ಟಿನಲ್ಲಿ ಭಾರತ ಸದಾ ಮುಕ್ತ ಚಿಂತನೆಗೆ ತನ್ನನ್ನು ಸದಾ ತೆರೆದುಕೊಂಡಿದ್ದಿತು. ಹಾಗಾಗಿಯೇ ಹೊಸ ಹೊಸ ಚಿಂತನೆ, ಶಾಸ್ತ್ರ, ಪಂಥ, ಭಾಷೆ, ಪ್ರಭುತ್ವ, ಸಂಸ್ಕೃತಿಗಳು ಇಲ್ಲಿ ಹುಟ್ಟಿದ್ದು ಮತ್ತು ಪಸರಿಸಿದ್ದುದು. ಈ ಮುಕ್ತ ಚಿಂತನೆಯನ್ನು ಕೆಲವರು ತಮ್ಮ ಪಂಥ, ಭಾಷೆ, ಪ್ರಭುತ್ವಗಳನ್ನು ಹೇರಲು ಬಳಸಿಕೊಂಡರು, ಬಳಸಿಕೊಳ್ಳುತ್ತಿದ್ದಾರೆ. ಹಾಗೆಯೇ ಆ ಹೇರಿಕೆಯ ವಿರುದ್ಧದ ಹೋರಾಟ ಕೂಡ. ಈ ಘರ್ಷಣೆ ಸಾರ್ವಕಾಲಿಕ. ಇದೆಲ್ಲದರ ನಡುವೆಯೂ ಎದ್ದು ಕಾಣುವುದು ಭಾರತದ ಮುಕ್ತತೆ! ವಿಪರ್ಯಾಸವೆಂದರೆ, ಇಂದಿನ ಭಾರತೀಯ ತನ್ನ ಅಗಾಧ ಮುಕ್ತತೆಯ ಪಂಪರೆಯನ್ನು ಮರೆತು ಇತರೆ ದೇಶಗಳ ಮುಕ್ತತೆಯನ್ನು ಕೊಂಡಾಡುತ್ತಿದ್ದಾನೆ.
ಇಂತಹ ಇತಿಹಾಸದ ವಿಶ್ಲೇಷಣೆಗಳು, ಮತ್ತು ಶಾಸ್ತ್ರೋಕ್ತ ಸಂಶೋಧನೆಗಳು ಹೆಚ್ಚು ಹೆಚ್ಚಾಗಿ ಬಂದು ಭಾರತದ ಪರಂಪರೆಯನ್ನು ಕಟ್ಟಿಕೊಡಲು ಓದುಗರ ಪ್ರೋತ್ಸಾಹ ಅತ್ಯಾವಶ್ಯಕ.
ಬನ್ನಿ, ನಮ್ಮ ಪರಂಪರೆಯ ಒಂದು ಪಕ್ಷಿನೋಟವನ್ನು ನೋಡೋಣ. ಭಾರತ ಒಂದು ಮರುಶೋಧನೆಯನ್ನು ಇಲ್ಲಿ ಕೊಳ್ಳಬಹುದು.

ಪಿಹೆಚ್ಡಿ ಸಂಶೋಧನೆಗಳ ಶೋಷಣೆ!

ಜಾತಿ ಪದ್ದತಿ ತೊಲಗಬೇಕೆನ್ನುವ ವೈಚಾರಿಕತೆಯನ್ನು ಮೆಚ್ಚಿಕೊಳ್ಳುವ ಹಳ್ಳಿಗಾಡು, ಬಡತನದ ಹಿನ್ನೆಲೆಯ ಮೂವರು ಯುವಕರು ಮತ್ತು ಮೂವರು ಯುವತಿಯರು ಖ್ಯಾತ ಭಾಷಾ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಮಾಡಲು ಆಯ್ಕೆಯಾಗಿದ್ದರು. ನವ ಸಮಾಜದ ಕನಸು ಕಾಣುತ್ತ ಅದಕ್ಕೆ ಪೂರಕವಾದ ವಿಚಾರಗಳ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವಂತಹ ವಿಷಯ ತಮ್ಮ ಪಿಹೆಚ್ಡಿ ವಿಷಯವಾಗುತ್ತದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದರು.

ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಕನ್ನಡದೇವ. ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ತಮ್ಮ ಜಾತಿವಿನಾಶದ ಕತೆ ಕಾದಂಬರಿಗಳಿಂದ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದರು.  ಇವರ ಸಾಹಿತ್ಯದಿಂದ ಪ್ರಭಾವಿತರಾಗಿದ್ದ ಆ ಆರು ಜನ ವಿದ್ಯಾರ್ಥಿಗಳ ನಿರೀಕ್ಷೆ ಜಾತಿಮುಕ್ತ ಸಮಾಜದ ಕುರಿತಾದ ಸಂಶೋಧನೆಗಳೇ ಆಗಿದ್ದವು. ಇಂತಹ ಧೀಮಂತರು ತಮಗೆ ಅತ್ಯುತ್ತಮ ಸಂಶೋಧನಾ ವಿಷಯವನ್ನೇ ಕೊಡುತ್ತಾರೆಂದು ಪ್ರೊಫೆಸರರಿಗಾಗಿ ಈ ಪಿಹೆಚ್ಡಿ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತ ಕುಳಿತಿದ್ದರು. ಕನ್ನಡದೇವರ ತಂದೆ ತಮ್ಮ ಮಗನಿಗೆ ಜಾತಿಯ ಸೋಂಕು ಭಾದಿಸದ ಕನ್ನಡವೇ ಧರ್ಮ ಜಾತಿಯಾಗಲೆಂಬ ಸದುದ್ದೇಶದಿಂದ "ಕನ್ನಡದೇವ" ಎಂಬ ತಟಸ್ಥ ಹೆಸರನ್ನಿರಿಸಿದ್ದರು.

ಚಕಚಕನೆ ಮೆಟ್ಟಿಲೇರಿ ತಮ್ಮ ಚೇಂಬರಿಗೆ ಬಂದ ಪ್ರೊ.ಕನ್ನಡದೇವರು ಈ ವಿದ್ಯಾರ್ಥಿಗಳನ್ನು ಕರೆಸಿಕೊಂಡು ಪಿಹೆಚ್ಡಿ ವಿಷಯ ಹಂಚಲು ತೊಡಗಿದರು. ಮೊದಲ ವಿದ್ಯಾರ್ಥಿ ಪ್ರವೀಣ್ ನಾಯಕನಿಗೆ "ನೋಡು ಪ್ರವೀಣ, ನಿನ್ನ ವಿಷಯ 'ಕಾಡು ನಾಯಕ ಮತ್ತು ಊರು ನಾಯಕರ ಸೂಕ್ಷ್ಮ ಸಂಸ್ಕೃತಿ ಬೇಧ'" ಎನ್ನುತ್ತಾ ಪ್ರಭಾವತಿ ಸಾಲಿಮಠಳಿಗೆ 'ವಚನಕಾರರ ಕಾಮ ಮುಕ್ತತೆ ಮತ್ತು ಸಂಪ್ರದಾಯ ನಿಗ್ರಹ', ರಾಜಾಸಾಬ್ ಹುಕ್ಕೇರಿಗೆ 'ಪಿಂಜಾರರ ಆಲಿ ದೇವ ಮತ್ತು ಸಕ್ಕರೆ ಶಾಸ್ತ್ರ ಸಂಸ್ಕೃತಿ', ದೀಪಾ ಪೂಜಾರಳಿಗೆ 'ಹಾಲುಮತದ ಜನಪದದಲ್ಲಿ ಮಹಿಳೆಯರ ಪಾತ್ರ',    ಶಂಕರಶಾಸ್ತ್ರಿಗೆ ' ವೈದಿಕ ಪೌರೋಹಿತ್ಯಶಾಹಿಯಲ್ಲಿ ತಾಂತ್ರಿಕ ಪಂಥದ ಏಕೀಕರಣ' ಮತ್ತು ಯೂಸುಫಾ ಜಾನ್ ಳಿಗೆ 'ಉತ್ತರ ಕರ್ನಾಟಕದ ಉರ್ದು ಗಜಲ್ಗಳ ಮೇಲೆ ಗುರುರಾಜ ಹೊಸಕೋಟಿಯ ಪೋಲಿ ಪ್ರಭಾವ' ಎಂದು ವಿಷಯಗಳನ್ನು ಕೊಟ್ಟರು.

ಈ ವಿಷಯಗಳಿಂದ ವಿಚಲಿತರಾದ ವಿದ್ಯಾರ್ಥಿಗಳು ಪೆಚ್ಚಾಗಿ " ಸರ್, ನಾವು ನಿಮ್ಮ ಜಾತಿಮುಕ್ತ ಚಳುವಳಿಯಿಂದ ತುಂಬಾ ಪ್ರಭಾವಿತರಾಗಿದ್ದೇವೆ. ಹಾಗಿದ್ದಾಗ ಈ ವಿಷಯಗಳು..." ಎನ್ನುತ್ತಿದ್ದಂತೆಯೇ ಅವರನ್ನು ಅರ್ಧದಲ್ಲಿ ತುಂಡರಿಸಿ "ನೋಡಿ, ನಾವು ಪಿಹೆಚ್ಡಿಯನ್ನು ಜಾತಿ ವಿಷಯಗಳಲ್ಲೇ ಮಾಡ್ಬೇಕು. ಏಕೆಂದರೆ ಜಾತಿ ನಮ್ಮ ಅಸ್ಮಿತೆ. ನಿಮ್ಮ ಜಾತಿಯ ಮೂಲಬೇರು ನಿಮಗೆ ತಿಳಿದಿರುವುದರಿಂದ ಈ ವಿಷಯವನ್ನು ನೀವು ಸಮರ್ಥವಾಗಿ ನಿಭಾಯಿಸಬಲ್ಲಿರಿ ಮತ್ತು ಅದು ನಿಮ್ಮ ಕರ್ತವ್ಯ ಕೂಡ. ಇನ್ನು ಜಾತಿಮುಕ್ತತೆ ಕೇವಲ ಅಂತರ್ಜಾತಿ ವಿವಾಹವಾದರೆ ಸಾಕು, ನಿಮಗೆ ಮುಕ್ತಿ ಸಿಗುತ್ತದೆ. ಅಂತಹ ಅಸ್ಮಿತೆಯ ಕುರಿತಾಗಿಯೇ ನೆರೂಡ, ಕಾಫ್ಕಾ, ಟಾಲ್ಸ್ಟಾಯ್ ಅವರೆಲ್ಲಾ ಹೇಳಿರುವುದು.  ಆದರೆ ಜಾತಿ ಎಂಬ ಅಸ್ಮಿತೆ ನಿಮ್ಮಲ್ಲಿ ಸದಾ ಜಾಗೃತವಾಗಿರಲಿ. ಹಾಂ, ಮುಂದಿನ ತಿಂಗಳೊಷ್ಟತ್ತಿಗೆ ಒಂದು ರೂಪು ರೇಷೆ ಹಾಕಿಕೊಂಡು ಬನ್ನಿ, ಈಗ ಹೊರಡಿ" ಎಂದರು.

ಯೂಸುಫಾ ಜಾನ್ ಮಾತ್ರ ಅಲ್ಲೇ ನಿಂತಿದ್ದಳು.  ಏನೆಂದು ಪ್ರೊಫೆಸರರು ಹುಬ್ಬೇರಿಸಿದರು. "ಸರ್, ನನ್ನ ಹೆಸರು ಜೋಸೆಫಾ ಜಾನ್. ಅದನ್ನು ನಮ್ಮ ಪಾದ್ರಿಗಳು ಯೂಸುಫಾ ಎನ್ನಬೇಕು ಎಂದು ಹಾಗೆ ಹೆಸರಿಟ್ಟಿದ್ದಾರೆ" ಎಂದಳು.

"ಅರೆ, ಅದಕ್ಕೇನಂತೆ...ಇನ್ನೂ ಉತ್ತಮ ವಿಷಯ ಕೊಡುತ್ತೇನೆ ತಗೋ. 'ಪ್ರೊಟೆಸ್ಟಂಟರ ಚಳುವಳಿ ಮತ್ತು ಕಲ್ಯಾಣ ಕ್ರಾಂತಿ ಸಮೀಕರಣ.' ಗಾಡ್ ಬ್ಲೆಸ್ ಯೂ, ನೌ ಗೋ"  ಎಂದರು.

ಇದು ಯಾವುದೇ ಉತ್ಪ್ರೇಕ್ಷೆಯಲ್ಲ, ಇಂದು ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪಿಹೆಚ್ಡಿಗಳೇ ಹೀಗೆ. ಕಳೆದ ಹತ್ತು ವರ್ಷಗಳಲ್ಲಿ ಕನ್ನಡ ನಾಡು ನುಡಿ ಕುರಿತಾದ ಸಂಶೋಧನಾ ವಿಭಾಗಗಳಲ್ಲಿ ಆದ ಪಿಹೆಚ್ಡಿಗಳನ್ನು ಗುಡ್ಡೆ ಹಾಕಿ ನೋಡಿ! ಹಾಗೆಯೇ ಕಾಫ್ಕಾ, ನೆರೂಡಾ, ಮುಂತಾದ ವಿದೇಶಿ ಲೇಖಕರುಗಳನ್ನು ಬಿಡಿ, ನಮ್ಮ ಅಂಬೇಡ್ಕರರ ಪುಸ್ತಕಗಳ ಕನ್ನಡ ಅನುವಾದಗಳನ್ನು ಗಮನಿಸಿ. ABCD ಬಿಟ್ಟರೆ ಇನ್ನೇನೂ ಬಾರದ ಕನ್ನಡ ಭಾಷಾ ಪ್ರೊಫೆಸರರುಗಳು ಮೂಲ ಕೃತಿಗಳನ್ನು ಕೈಯಲ್ಲಿ ಹಿಡಿದು ಹಿಂದೆ ಮುಂದೆ ತಿರುವಿ ನೋಡಿ ಅನುವಾದಿಸಿರುವಂತಿವೆ. ನನ್ನ ಈ ಮೊದಲ "ಮಹಿಷ ಮತ್ತು ವಿದೂಷ" ಲೇಖನ ಇಂತಹ ತಿರುಚುವಿಕೆಯ ಸವಿವರಗಳನ್ನು ಹೊಂದಿದೆ.

ಹಾರ್ವರ್ಡ್ ವಿಶ್ವವಿದ್ಯಾಲಯದ ಡೇವಿಡ್ ರೀಚ್ ಅವರ R1A DNA ಸಂಶೋಧನೆಯನ್ನು ಎತ್ತಿಹಿಡಿದು ವೈದಿಕ, ಪುರೋಹಿತಶಾಹಿ, ದಲಿತ, ದಮನಿತ ಎಂಬ ರಂಗುಗಳ ಸೃಜನಶೀಲ ಮೆರುಗನ್ನು ಹಚ್ಚಿ ಮಿರಿಮಿರಿ ಮಿಂಚಿಸುತ್ತಾರೆ. ಆದರೆ ಇದೇ ಹಾರ್ವರ್ಡ್ ವಿಶ್ವವಿದ್ಯಾಲಯದ ಮೈಕಲ್ ವಿಟ್ಜೆಲ್ ಋಗ್ವೇದವನ್ನು ಆರ್ಯರ ಆಗಮನಕ್ಕೂ ಮುಂಚಿತವಾಗಿಯೇ ಮೂಲನಿವಾಸಿಗಳು ರಚಿಸಿದ್ದರು ಎಂಬ ಸಂಶೋಧನೆಯನ್ನು ಮರೆಮಾಚಿಸಿ ತಮ್ಮ ವೈದಿಕ ಬ್ರಾಹ್ಮಣ್ಯ ಹೇರಿಕೆ/ದಲಿತ ಶೋಷಣೆ ಎಂಬ ಸಿದ್ದ ಸಿದ್ಧಾಂತವನ್ನು ಸಂಶೋಧನೆಗಳಿಗೆ ಸಂಯೋಜಿಸುತ್ತಾರೆ.

ಕಪ್ಪು ಬಿಳುಪಿನ ಸಂಶೋಧನೆಗಳಿಗೆ ರಂಗು ಬಳಿಯುವ ಜಾಣತನ/ಸಣ್ಣತನಗಳ ಕನ್ನಡದೇವರಿಂದ ಸಂಶೋಧನೆಗಳನ್ನು ಬೇರ್ಪಡಿಸುವ ತುರ್ತುಪರಿಸ್ಥಿತಿಯನ್ನು ಹೇರಬೇಕಾಗಿದೆ.

ಮಹಿಷ ಮತ್ತು ವಿದೂಷ!

ಇತ್ತೀಚೆಗೆ ದಸರಾ ಬಂದೊಡನೆಯೇ ಚಾಮುಂಡಿಗಿಂತ ಮಹಿಷ ಹೆಚ್ಚು ಹೂಂಕರಿಸುತ್ತಿದ್ದಾನೆ. ಈತ ಸ್ಥಳೀಯ ಬೌದ್ಧ ಬಿಕ್ಷು
ಜನಾನುರಾಗಿ ರಾಜನಾಗಿ ಆಡಳಿತ ನಡೆಸಿದ್ದನು. ಆದರೆ ವೈದಿಕ ಪುರೋಹಿತಶಾಹಿಗಳು ಹುನ್ನಾರದಿಂದ ಈತನನ್ನು ಕೊಂದು ರಾಕ್ಷಸನಾಗಿ ಬಿಂಬಿಸಿದ್ದಾರೆ ಎನ್ನುವ ಬಲವಾದ ವಾದಗಳು ಎಡದಿಂದ ಕೇಳಿಬರುತ್ತಿವೆ. ಈ ಕುರಿತಾಗಿ ಪ್ರಗತಿಪರರು ಹೋರಾಟವನ್ನೇ ರೂಪಿಸಿಕೊಂಡಿದ್ದಾರೆ. ಇನ್ನು ಕೆಲ ಬಲಪಂಥೀಯರು ಮಹಿಷನೆಂಬ ಸನ್ಯಾಸಿ ಬೌದ್ಧ ಭಿಕ್ಷು ರಾಜನಾಗಿದ್ದನೆಂಬುದೇ ಜೋಕು ಎಂದು ಅಪಹಾಸ್ಯ ಮಾಡುತ್ತಿದ್ದಾರೆ.

ಹಲವಾರು ಓದುಗ ಮಿತ್ರರು ನನ್ನ ಕೃತಿ "ಭಾರತ ಒಂದು ಮರುಶೋಧನೆ"ಯನ್ನು ಓದಿ ಕೌತುಕಗೊಂಡು ಮಹಿಷನ ಇತಿಹಾಸವನ್ನು ಬಲ್ಲಿರಾ ಮತ್ತು ಆ ಕುರಿತು ತಿಳಿಸಿಕೊಡುವಿರಾ ಎಂದು ಕೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಮಹಿಷ ಪುರಾಣ ಇತಿಹಾಸದ ಪುರಾವೆಯೊಟ್ಟಿಗೆ ಇಲ್ಲಿದೆ.

ಮೊದಲಿಗೆ, ಮಹಿಷ ದಸರಾ ಪರವಾಗಿ ನಿಂತಿರುವವರ ವಾದವನ್ನು ಗಮನಿಸೋಣ. ಈ ಗುಂಪಿನ ನಾಯಕರಾಗಿರುವ ಪ್ರೊ. ಬಿ.ಪಿ. ಮಹೇಶ್ ಚಂದ್ರ ಗುರು ಅವರು ಮಹಿಷನ ಬಗ್ಗೆ ಒಂದು ಲೇಖನವನ್ನೇ ಬರಿದಿದ್ದಾರೆ. ಹಾಗಾಗಿ ಅವರ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಇತಿಹಾಸ ಏನೆನ್ನುತ್ತದೆ ಎಂದು ವಿಶ್ಲೇಷಿಸೋಣ.

ಇಲ್ಲಿ ಐತಿಹಾಸಿಕವಾಗಿ ಮಹಿಷ ಒಬ್ಬ ಬೌದ್ಧ ಭಿಕ್ಷುವಲ್ಲ. ಆತ ಸಾಮ್ರಾಟ್ ಅಶೋಕನು ನೇಮಿಸಿದ ತೇರ ಮಹದೇವ ಎಂಬ ಆಡಳಿತಗಾರ. ಆತನು ಮಹಿಷ್ಮತಿ ಎಂಬ ವಂಶದವ. ಈ ವಂಶದ ಬಗ್ಗೆ ಮುಂದೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ. ಆತನ ಧರ್ಮ ಬೌದ್ಧಧರ್ಮ.

ಇನ್ನು ಪ್ರೊ. ಮಹೇಶ್ ಚಂದ್ರ ಗುರುಗಳು 'ನಾನುಗೌರಿ' ಪತ್ರಿಕೆಯಲ್ಲಿ ಬರೆದಿರುವ "ಮೂಲನಿವಾಸಿಗಳ ಮಹಿಷ ದಸರಾದ ಇತಿಹಾಸ" ಲೇಖನದಲ್ಲಿ ಪ್ರಸ್ತಾಪಿಸಿದ ಕೆಲ ವಿಚಾರಗಳು ಹೀಗಿವೆ.
1. 'ಒಂದು ಕಾಲದಲ್ಲಿ ಮೂಲನಿವಾಸಿಗಳ ದೊರೆಯಾದ ಮಹಿಷ ಯುದ್ಧದಲ್ಲಿ ದೇವತೆಗಳನ್ನು ಗೆದ್ದು ಅವರನ್ನು ಯಾವ ಅಧೋಗತಿಗೆ ಇಟ್ಟಿದ್ದನೆಂದರೆ ಅವರು ಭೂಮಿಯ ಮೇಲೆ ಭಿಕ್ಷುಕರಾಗಿ ಅಲೆದಾಡುತ್ತಿದ್ದರು’ (ಡಾ.ಬಿ.ಆರ್.ಅಂಬೇಡ್ಕರ್, ಸಂ.3, ಪು.395) ಎನ್ನುತ್ತಾ ಅಂಬೇಡ್ಕರರ ಸಂಪುಟವನ್ನು ಸಾಕ್ಷಿಯಾಗಿಸುತ್ತಾರೆ.

ಅಂದರೆ ಅಂಬೇಡ್ಕರ್ ಇಂದ್ರ ಮುಂತಾದ ದೇವತೆಗಳು ಭೂಮಿ ಮೇಲೆ ಇದ್ದರೆಂದು ನಂಬಿದ್ದರೆ?!?!

ಅಂಬೇಡ್ಕರರು ತಮ್ಮ ಸಂಪುಟ 3ರ ಪುಟ 395ರಲ್ಲಿ ಹಿಂದು ಪೌರಾಣಿಕ ಕಥೆಗಳಲ್ಲಿ ಬರುವ ನಹುಷ ಎಂಬ ಕ್ಷತ್ರಿಯನ ಮತ್ತು ಬ್ರಾಹ್ಮಣರ ನಡುವಿನ ಸಂಘರ್ಷದ ಬಗ್ಗೆ ಹೇಳಿದ್ದಾರೆಯೇ ವಿನಃ ಯಾವುದೇ ಇತಿಹಾಸದ ಕುರಿತಲ್ಲ. ಈ ನಹುಷನಿಗೂ ಮತ್ತು ಮಹಿಷೂರಿಗೂ (ಮೈಸೂರು) ಯಾವುದೇ ಸಂಬಂಧವಿಲ್ಲ. ಮಹಾಭಾರತದಲ್ಲಿ ಬರುವ ಕಾರ್ತವೀರ್ಯನೆಂಬುವವನು  ಮಹಿಷ್ಮತಿ ಎನ್ನುವ ನಗರದಲ್ಲಿ ವಾಸವಾಗಿದ್ದಾನೆನ್ನಲಾಗುವ ಕಥೆಯನ್ನು  ಉಲ್ಲೇಖಿಸಿದ್ದಾರೆ. ಈ ಮಹಿಷ್ಮತಿ ನಗರಕ್ಕೂ ಮೈಸೂರಿಗೂ ಯಾವುದೇ ಸಂಬಂಧವನ್ನು ಅವರು ಜೋಡಿಸಿಲ್ಲ.

2. "ಸಾಮ್ರಾಟ್ ಅಶೋಕನು ಮಹಾದೇವತೇರ ಎಂಬ ಬುದ್ಧನ ಅನುಯಾಯಿಯನ್ನು ದಕ್ಷಿಣ ಭಾರತಕ್ಕೆ ಬೌದ್ಧ ಧರ್ಮ ಪ್ರಚಾರ ಮತ್ತು ಮೌಲ್ಯಾಧಾರಿತ ಆಡಳಿತ ನೀಡುವ ಸಲುವಾಗಿ ಕಳುಹಿಸಿದನು. ಬೌದ್ಧ ಭಿಕ್ಕು ಮಹಾದೇವತೇರ ಅಂದು ಆಳಿದ ಮಹಿಷ ಮಂಡಲವೇ ಇಂದಿನ ಮೈಸೂರು ಎಂಬುದನ್ನು ಪ್ರಸಿದ್ಧ ಇತಿಹಾಸಕಾರ ಸೂರ್ಯನಾಥ ಕಾಮತ್ ಮೈಸೂರು ಗೆಜೆಟಿಯರ್‌ನಲ್ಲಿ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಮಂಡಿಸಿದ್ದಾರೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು ಮೊದಲಾದ ಹೆಸರಿನಿಂದ ಮಹಿಷನ ಸಾಮ್ರಾಜ್ಯವು ಕರೆಯಲ್ಪಟ್ಟಿದೆ.

ಭಾರತದ ವೈದಿಕಶಾಹಿ ಮೂಲನಿವಾಸಿಗಳ ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರ ನಡೆಸಿದ್ದಾರೆ" ಎಂದು ಪ್ರೊಫೆಸರರು ಆರೋಪಿಸುತ್ತಾರೆ.

ಆದರೆ ಅವರ ಲೇಖನವೇ ಹೇಳುವಂತೆ ಉತ್ತರ ಭಾರತದಿಂದ ಬಂದ ತೇರ ಮಹದೇವನೆಂಬ ಮಹಿಷ ಅದು ಹೇಗೆ ಸ್ಥಳೀಯ ಮೂಲನಿವಾಸಿಯಾಗುವನು?!  ಅಶೋಕನ ಅಜ್ಜಿ ಅಂದರೆ ಚಂದ್ರಗುಪ್ತ ಮೌರ್ಯನ ಹೆಂಡತಿಯಾದ ಹೆಲೀನ ಗ್ರೀಕ್ ರಾಜಕುಮಾರಿ ಎಂಬುದು ನಿಮ್ಮ ಗಮನದಲ್ಲಿರಲಿ. ಏಕೆಂದರೆ ಇಂದಿನ ಪ್ರಗತಿಪರರು ಹೇಳುವಂತೆ ಮಹಿಷ ಮೈಸೂರು ಸೀಮೆಯ ಮೂಲನಿವಾಸಿ ಅಲ್ಲ. ಆತ ಶಕ ಅಥವಾ ಸೈಥಿಯನ್ ಮೂಲದವನು. ಅಂದರೆ ಗ್ರೀಕ್ ಹಿನ್ನೆಲೆಯವನು.

ಇನ್ನು ಈ ಪ್ರಗತಿಪರರು ಉಲ್ಲೇಖಿಸಿದ ಸೂರ್ಯನಾಥ ಕಾಮತರು ಬರೆದ ಎಂಟನೂರು ಚಿಲ್ಲರೆ ಪುಟಗಳಿರುವ ಮೈಸೂರು ಗೆಜೆಟಿಯರ್ ನಲ್ಲಿ ತೇರ ಮಹದೇವ ಎಂಬ ಹೆಸರಿರುವ ಏಕೈಕ ಪುಟದ ಚಿತ್ರ ಕೆಳಗಿರುವ ಮೊದಲನೆಯದು. ನೀವೇ ಓದಿ ನೋಡಿ, ತೂಲಿಸಿ. ಮಹಿಷ ಸೈಥಿಯನ್/ಶಕ ಎಂಬ ಬಗ್ಗೆ ಪುರಾವೆ ಕೂಡ ಅಲ್ಲಿದೆ.



3. "ಮಹಿಷನು ಇಂದ್ರಾದಿ ದೇವತೆಗಳ ವಿರುದ್ಧ ವೀರೋಚಿತವಾಗಿ ಹೋರಾಟ ನಡೆಸಿ ಜಯಗಳಿಸಿದ ಸಂತಸದ ಸುದ್ದಿ ದಶ ದಿಕ್ಕುಗಳಲ್ಲಿಯೂ ಹರಡಿದ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ಮಹಿಷನ ವಿಜಯವನ್ನು ‘ದಸರಾ’ ಎಂಬ ಹೆಸರಿನಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ" ಎಂದು ಮಹೇಶ್ ಚಂದ್ರ ಗುರುಗಳು ಪ್ರತಿಪಾದಿಸುತ್ತಾರೆ.

ಅಂದರೆ ದೇವಾನುದೇವತೆಗಳು ಐತಿಹಾಸಿಕವಾಗಿ ಇದ್ದರು ಎಂದು ನಾಸ್ತಿಕ ಪ್ರಗತಿಪರರು ಸಾಬೀತು ಮಾಡುತ್ತಿದ್ದಾರೆಯೇ? ಅವರೇ ಹೇಳಬೇಕು!

ಇರಲಿ, ಈ ಕುರಿತು ಮತ್ತದೇ ಸೂರ್ಯನಾಥ ಕಾಮತರ ಮೈಸೂರು ಗೆಜೆಟಿಯರ್ ನಲ್ಲಿ ಮಹಿಷ್ಮತಿಯರು ಸೈಥಿಯನ್ ಅಥವಾ ಶಕರು ಎಂಬ ಗ್ರೀಕ್ ಮೂಲದ ವಲಸೆಗಾರರು ಎಂಬ ವಿವರಗಳು ಸಿಗುತ್ತವೆ.  ಮಹಿಷ್ಮತಿಯರಿಗೆ ಹೆದರಿ ಇಲ್ಲಿನ ಆದಿವಾಸಿಗಳು ಕಾಡು ಬೆಟ್ಟಗಳಲ್ಲಿ ವಾಸಿಸುತ್ತಿದ್ದರು ಎಂದು ಕಾಮತರ ಗೆಜೆಟಿಯರ್ ಹೇಳುತ್ತದೆ. ಅದಲ್ಲದೇ ಈ ಬೆಟ್ಟದ ಜೀವಿಗಳು ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟದಲ್ಲಿರುವವರನ್ನು ಬೆಟ್ಟದ ತುದಿಯಿಂದ ಕೂಗಿ ವಿವಿಧ ಧ್ವನಿಗಳನ್ನು ಹೊರಡಿಸಿ ಪರಸ್ಪರ ಸಂವಹಿಸುತ್ತಿದ್ದರೆಂದೂ ಗೆಜೆಟಿಯರ್ ಹೇಳುತ್ತದೆ. ಆ ಸಂವಹನ ಪ್ರಕ್ರಿಯೆ ಸಾಕಷ್ಟು ಆದಿವಾಸಿಗಳಲ್ಲಿ ಇತ್ತೀಚಿನವರೆಗೆ ಚಾಲನೆಯಲ್ಲಿದ್ದಿತು. ಹಾಗಾಗಿಯೇ ಚಾಮುಂಡಿಯು ಬೆಟ್ಟದ ವಾಸಿ! ಈ ಸ್ಥಳೀಯ ಬುಡಕಟ್ಟು ಬೆಟ್ಟದ ವಾಸಿಗಳ ಚಾಮುಂಡಿಯೇ ವಲಸೆಗಾರ ಮಹಿಷನನ್ನು ಕೊಂದಳೆನ್ನಲಾಗುತ್ತದೆ ಎಂದು ಕಾಮತರು ದಾಖಲಿಸಿದ್ದಾರೆ. ಅವರೆಲ್ಲೂ ಇದು ವೈದಿಕ ಹೇರಿಕೆಯೆಂದಾಗಲಿ, ಅಥವಾ ಇದು ಪೌರಾಣಿಕ ಸಂಗತಿಯೆಂದಾಗಲಿ ಉಲ್ಲೇಖಿಸದೇ ಇದು ಇತಿಹಾಸದ ಸಂಗತಿ ಎನ್ನುತ್ತಾರೆ. ಈ ವಲಸಿಗ ಮಹಿಷನಿಂದ ಮಹಿಷೂರು ಎಂಬ ಹೆಸರು ಬಂದದ್ದು ನಿಜ. ಆದರೆ ಆತ ಇಲ್ಲಿನ ಮೂಲವಾಸಿ ಪಶುಪಾಲಕರವನಲ್ಲ.

ಕೆಳಗಿರುವ ಎರಡನೆಯ ಚಿತ್ರ ಈ ವಿವರಗಳನ್ನೊಳಗೊಂಡ ಮೈಸೂರು ಗೆಜೆಟಿಯರ್ ನ ಪುಟದ್ದು.

ಹಾಗೆಂದು ಬೌದ್ಧ/ಜೈನ/ವೈದಿಕ/ತಾಂತ್ರಿಕ ಪಂಥಗಳ ನಡುವೆ ಈರ್ಷ್ಯೆ ಇರಲಿಲ್ಲವೆಂದಲ್ಲ. ಅದೆಲ್ಲವೂ ಇದ್ದಿತು. ಆದರೆ ಅದು ಇಲ್ಲಿ ಅಪ್ರಸ್ತುತ.   ಪ್ರಸ್ತುತ ಎನ್ನುವುದಾದರೆ ಅದು ಮುಂದುವರಿದ ಜ್ವಲಂತ ಪಂಥವಾದ ಮಾತ್ರ. ಒಟ್ಟಿನಲ್ಲಿ ಮಹಿಷ ಹೊರಗಿನವ. ಇಲ್ಲಿನ ಪಶುಪಾಲಕ, ಅರಣ್ಯವಾಸಿ, ಆದಿವಾಸಿಗಳ ಅಧಿನಾಯಕಿ ಚಾಮುಂಡಿಯೇ ಹೊರತು ಮಹಿಷನಲ್ಲ.

ಹೀಗೆ ಪ್ರಗತಿಪರರು ಕೊಟ್ಟ ಸಾಕ್ಷಿಯಲ್ಲೇ ಇಂತಹ ವ್ಯತಿರಿಕ್ತ ವಿಚಾರವಿದ್ದಾಗ ಅದು ಹೇಗೆ ಈ ಪ್ರಗತಿಪರ ವಿಚಾರವಾದಿಗಳು ಘಂಟಾಘೋಷವಾಗಿ ಸುಳ್ಳನ್ನು ನುಡಿಯುತ್ತಿದ್ದಾರೆ?!? ಕೇವಲ ಮಹಿಷ ಬೌದ್ಧ ಧರ್ಮೀಯನಾಗಿದ್ದನೆಂಬ ಏಕೈಕ ಕಾರಣಕ್ಕೆ ಆತ ನಮ್ಮವನೆಂದು ನವಬೌದ್ಧಮತಿಗಳು ಪಕ್ಷಪಾತಗೈಯುತ್ತಿರುವರೇ? ಚಾಮುಂಡಿ ದಸರೆಗೆ ಪರ್ಯಾಯವಾಗಿ ಏಕೆ ನಾವೊಂದು ತೊಡೆ ತಟ್ಟಬಾರದೆಂಬ ಕದನೋತ್ಸಾಹವೆ? ದಸರಾ ಕುಸ್ತಿ ಪಂದ್ಯದಲ್ಲಿ ಅನ್ಯಪಂಥೀಯರಿಗೆ ತೊಡರುಗಾಲು ಹಾಕಿ ಮಣ್ಣು ಮುಕ್ಕಿಸಬೇಕೆಂಬ ಕುಸ್ತಿ ಪಟ್ಟೇ? ಇದು ನಮ್ಮ ನವ ಸಮಾಜದ ದುರಂತ.

ಒಟ್ಟಾರೆ ಸಮಾಜದಲ್ಲಿನ ಸ್ವಾಸ್ಥ್ಯವನ್ನು ಹೇಗೆ ಇಂದಿನ ವಿದ್ಯುನ್ಮಾನ ಯುಗದಲ್ಲೂ ಹಾಳುಗೆಡವಲಾಗುತ್ತಿದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿಗೇ ಅತ್ಯುತ್ತಮವೆಂದು, ವಿಶ್ವಗುರುವೆಂದು ಸ್ವಘೋಷಿಸಿಕೊಂಡಿರುವ, ಮತ್ತು ಕಿಂಡರ್ ಗಾರ್ಟನ್ನಿಗೆ ಲಕ್ಷ ಲಕ್ಷ ರೂಪಾಯಿಗಳ ಶುಲ್ಕ ವಿಧಿಸುವ ನಮ್ಮ ಶಿಕ್ಷಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಪ್ರಾತ್ಯಕ್ಷಿಕ ನಿದರ್ಶನವಿದು. ನಮ್ಮ ಸಮಾಜ ಸಮಗ್ರವಾಗಿ ವಿಮರ್ಶಿಸಿಕೊಳ್ಳಲೇಬೇಕಾದ "ದುರಿತ ಕಾಲ" ಕೂಡ.

ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡುವ ಈ "ಮಹಿಷ ಕಾಲ"ದಲ್ಲಿ ನಿಜ ಇತಿಹಾಸವನ್ನು ಎತ್ತಿ ಹಿಡಿಯೋಣ.  ಎಡ ಬಲ ಪಂಥಗಳು ಪರಸ್ಪರ ಸೈದ್ಧಾಂತಿಕ ವಾಗ್ವಾದಗಳಲ್ಲಿ ಜಯ ಸ್ಥಾಪಿಸಲು ಹೆಣಗುವ ಮತ್ತು ಹಣಿಯುವ ಈ ಕಾಲಘಟ್ಟದಲ್ಲಿ ಸತ್ಯದ ಇತಿಹಾಸ ಕೊಚ್ಚಿ ಹೋಗದಂತೆ, ವಿರೂಪಗೊಳ್ಳದಂತೆ ಕಾಪಾಡುವ ನಾಗರೀಕ ಜವಾಬ್ದಾರಿಯನ್ನು ನಾವೆಲ್ಲರೂ ಹೊರಲೇಬೇಕು. ಇಲ್ಲದಿದ್ದರೆ ಸುಳ್ಳಿನ ಪರಂಪರೆಯನ್ನೇ ನಾವು ನಮ್ಮ ಮುಂದಿನ ಸಂತತಿಗೆ ಬಿಟ್ಟು ಹೋಗಬೇಕಾಗುತ್ತದೆ, ಅದೂ ಲಕ್ಷ ಲಕ್ಷ ಶುಲ್ಕ ಪಡೆದು! ಇದು ಅಕ್ಷಮ್ಯ ಅಕ್ಷರ ವ್ಯಭಿಚಾರ. ಈ ಅಕ್ಷರ ವ್ಯಭಿಚಾರ, ಪಂಥ ಹೇರಿಕೆ, ಸಿದ್ದಾಂತ ಸಾಬೀತಿಗೆ ನಮ್ಮ ಇತಿಹಾಸ ಬಲಿಯಾಗುವುದನ್ನು ತಡೆಯಲು ಮತ್ತೊಂದು ಸತ್ಯಪಂಥದ ಚಳುವಳಿಯನ್ನೇ ಆರಂಭಿಸಬೇಕೇನೋ!?!

ಇನ್ನು ವಿಪರ್ಯಾಸವೆಂದರೆ ಯಾರಲ್ಲಿ ಅಸಹಿಷ್ಣುತೆ, ಅಸೂಯೆ, ಕುಚೋದ್ಯ, ಕುತಂತ್ರ, ಭಯೋತ್ಪಾದನೆ (ಪರಪಂಥದೆಡೆ), ಸಂಕುಚಿತತೆ, ಉದಾರತೆಯ ಸೋಗಿನಲ್ಲಿ ಸ್ತ್ರೀಶೋಷಣೆ, ಜಾತೀಯತೆಗಳೆಂಬ ದಶ ಗುಣಗಳು ತುಂಬಿ ತುಳುಕುತ್ತಿವೆಯೋ ಅದೇ ಪಟ್ಟಭದ್ರಹಿತಾಸಕ್ತಿಗಳು, ಈ ಎಲ್ಲಾ ಗುಣಗಳು ದೇಶದ ತುಂಬೆಲ್ಲಾ ತುಂಬಿ ತುಳುಕುತ್ತಿವೆಯೆಂದು ಕಳವಳ ವ್ಯಕ್ತಪಡಿಸುತ್ತಿರುವುದು!
ಆ ಎಲ್ಲಾ ಮಹಿಷ, ಚಾಮುಂಡಿ, ದುರ್ಗೆ, ಎಮ್ಮೆ ಮೈಯವರು, ಹುಲಿಸವಾರಿಯವರು, ಮತ್ತು ಮನುಷ್ಯರಾದಿಯಾಗಿ ಎಲ್ಲರಲ್ಲೂ ತುಂಬಿರುವ ದಶ ಅವಗುಣಗಳು ದಶಹರವಾಗಲಿ.

ಹೇ ರಾಮ್ ಮತ್ತು ಶ್ರೀರಾಮ್ ನಡುವಿನ ಹರಾಮಿತನವನ್ನು ಭಸ್ಮವಾಗಿ ಸತ್ಯಮೇವಜಯತೆ ಪ್ರಜ್ವಲಿಸಲಿ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

World Translation Day!

ಒಂದು ಕೃತಿಯ ಅನುವಾದವನ್ನು ಮಾಡುವಾಗ ಅನುವಾದಕ ಮೂಲ ಕೃತಿಯ ಲೇಖಕನೇ ಆಗಿ ಪರಕಾಯ ಪ್ರವೇಶ ಮಾಡಬೇಕು. ತನ್ನ ಕೃತಿಯನ್ನು ಒಂದು ಪ್ರಾದೇಶಿಕ ಭಾಷೆಯಿಂದ ಇಂಗ್ಲಿಷ್ ಎಂಬ ಜಾಗತಿಕ ಭಾಷೆಗಾಗಲಿ ಅಥವಾ ಮತ್ತೊಂದು ಪ್ರಾದೇಶಿಕ ಭಾಷೆಗಾಗಲಿ ಹೇಗೆ ಅಳವಡಿಸಬೇಕೆಂಬ ಚಿಂತನೆಗೊಳಪಡಿಸಿ ಅನುವಾದಿಸಬೇಕಾಗುತ್ತದೆ. ಅನುವಾದಿಸಬೇಕಾದ ಭಾಷೆಗೆ ಸರಿಹೊಂದಬಹುದಾದ ನುಡಿಗಟ್ಟುಗಳು, ಗಾದೆಗಳು, ಸೂಕ್ತ ಸಂಭಾಷಣಾ ವೈವಿಧ್ಯತೆ, ಮತ್ತದೇ ಪರಿಸರಕ್ಕೆ ಮತ್ತು ಓದುಗನಿಗೆ ರಿಲೇಟ್ ಯಾ ಹೊಂದುವಂತಹ ಪರಿಭಾಷೆಯಲ್ಲಿ ಮೂಲ ಕೃತಿಯನ್ನು ಪುನರ್ರಚಿಸಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಕೃತಿಯನ್ನು ಸಂಪೂರ್ಣವಾಗಿ ಹೊಸದಾಗಿ ರಚಿಸುವುದೆಂದಲ್ಲವೆಂಬ ಎಚ್ಚರಿಕೆಯನ್ನೂ ಇಟ್ಟುಕೊಂಡು ಹೊಸ ಭಾಷೆಗೆ ಮೂಲ ಸೊಗಡನ್ನು ಅಳವಡಿಸುತ್ತ ಸಾಗಬೇಕಾಗುತ್ತದೆ.

ಆದರೆ "ಮೂಲ ಕೃತಿಗೆ ಚ್ಯುತಿ ಬರದಂತೆ" ಎಂಬ ತತ್ವವನ್ನು ಯಥಾವತ್ತಾಗಿ ಹೇರಿಕೊಂಡು ಪದದಿಂದ ಪದವನ್ನೂ ಯಥಾವತ್ತಾಗಿ ಅನುವಾದಿಸುತ್ತಾ ಹೋದರೆ ಆದು ಅಭಾಸವೆನ್ನಿಸಿಬಿಡುತ್ತದೆ. ಅಂತಹ ಸಾಕಷ್ಟು ಅನುವಾದಗಳ ಉದಾಹರಣೆಗಳಿವೆ. ಹಾಗಾಗಿ ಅನುವಾದವೆಂಬುದು ಅತ್ಯಂತ ಶ್ರಮದ ಕೆಲಸ. ಇಲ್ಲಿ ಎರಡು ಭಾಷೆಗಳ ಪಾಂಡಿತ್ಯಕ್ಕಿಂತ ಆ ಭಾಷೆಗಳ ನಿತ್ಯ ಬಳಸುವಿಕೆಯ ಅನುಭವ ಮತ್ತು ಕಥಾವಸ್ತುವಿನ ಗಾಢ ಹಿನ್ನೆಲೆ ಕೂಡಾ ಅತ್ಯಂತ ಪ್ರಮುಖ.

ಈ ಎಲ್ಲಾ ಸೂತ್ರಗಳನ್ನಾಧಾರವಾಗಿಟ್ಟುಕೊಂಡು ಜುಗಾರಿ ಕ್ರಾಸ್ ಅನ್ನು ಅನುವಾದಿಸಿದ್ದೇನೆ. ಅದರ ಒಂದು ಅಧ್ಯಾಯ ತಮ್ಮ ಓದಿಗಾಗಿ ಇಲ್ಲಿದೆ. ಕನ್ನಡ ಸಾಹಿತ್ಯ ಪ್ರೇಮಿಗಳಾದ ತಾವು ಓದಿ ಸೂಕ್ತ ಸಲಹೆಗಳನ್ನು ಕೊಟ್ಟರೆ ಮುಂದೆ ಮಾಡಬಹುದಾದ ಅನುವಾದ ಕಾರ್ಯಗಳಿಗೆ ಅನುಕೂಲ. ಬನ್ನಿ ಕನ್ನಡ ಸಾಹಿತ್ಯವನ್ನು ವಿಶ್ವವ್ಯಾಪಿಯಾಗಿಸಲು ಸಹಕರಿಸಿ.
#World_Translation_Day

ಮೋದಿಯ ಭೇದಿಯ ಸಾಂದ್ರತೆ

ತುಂಗೆಯಿಂದ ಭದ್ರೆಗೆ ನೀರೆತ್ತಿ ಹರಿಸಿ, ಅಲ್ಲಿಂದ ವೇದಾವತಿಯ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ಈಗಾಗಲೇ ಅನುಷ್ಠಾನಗೊಂಡು ಸಿದ್ಧವಿರುವ ಭದ್ರಾ ಮೇಲ್ದಂಡೆ ಯೋಜನೆಯ ಸಂಪನ್ಮೂಲಗಳನ್ನೇ ಉಪಯೋಗಿಸಿಕೊಂಡು ನೀರು ಹರಿಸಲು ತುಂಗಾ ಪ್ರವಾಹ ಅವಕಾಶವನ್ನು ಕೊಟ್ಟಿದ್ದಿತು.
ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರಯೋಗಿಸಿದ್ದರೆ ಶಿವಮೊಗ್ಗೆಯ ಕುಂಬಾರಗುಂಡಿಯಲ್ಲಿ ಪ್ರವಾಹವೇ ಆಗುತ್ತಿರಲಿಲ್ಲ ಮತ್ತು ಎಷ್ಟೋ ವರ್ಷಗಳಿಂದ ಡೆಡ್ ಸ್ಟೋರೇಜಿನಲ್ಲಿರುವ ವಾಣಿವಿಲಾಸ ಸಾಗರ ತುಂಬುತ್ತಿತ್ತು.
ಅದಲ್ಲದೆ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ವರ್ಷ ಅನುಷ್ಠಾನಗೊಂಡ ಎಪ್ಪತ್ತೆರಡು ಕೆರೆ ಯೋಜನೆಯನ್ನು ಈ ವೇಳೆಯಲ್ಲಿ ಉಪಯೋಗಿಸಿಕೊಂಡಿದ್ದರೆ ತುಂಗಾಭದ್ರ ಆರ್ಭಟ ಕೂಡಾ ಶಾಂತವಾಗಿರುತ್ತಿತ್ತು. ಬರಡು ಕೆರೆಗಳು ಕೂಡ ತುಂಬಿಕೊಳ್ಳುತ್ತಿದ್ದವು. ಎಲ್ಲಕ್ಕೂ ಮಿಗಿಲಾಗಿ ಜಲನಿರ್ವಹಣೆಯ ಒಂದು ಅತ್ಯುತ್ತಮ ಪ್ರಯೋಗಶೀಲ ಸಿದ್ದ ಮಾಡೆಲ್ ಪ್ರಾಮಾಣಿತವಾಗುತ್ತಿತ್ತು.
ಏಕೆ ಹೀಗೆ ಪ್ರವಾಹ ನಿರ್ವಹಣೆ ಸಾಧ್ಯವಾಗಲಿಲ್ಲ?!?
ನಾನೊಬ್ಬ ಎನ್ನಾರೈ ಪೆದ್ದ, ನಾನೇನು ಬಲ್ಲೆ? ಬಲ್ಲವರ ಕೇಳೋಣವೆಂದರೆ ಬುದ್ಧಿವಂತರೆಲ್ಲಾ ಮೋದಿಯ ಭೇದಿಯ ಸಾಂದ್ರತೆ, ಬಣ್ಣ, ವಾಸನೆ, ರುಚಿಗಳ ವಿಶ್ಲೇಷಣೆಯಲ್ಲಿ ಮಗ್ನ!

ಹಿಂದೂ ಒಂದು ಧರ್ಮವೇ?

ಹಿಂದೂ ಒಂದು ಧರ್ಮವೇ?
ಆರ್ಯ, ದ್ರಾವಿಡ ಜನಾಂಗದ ವಿಭಜನೆ ಸತ್ಯವೇ?
ಜಾತಿ, ಪಂಥಗಳು ಹುಟ್ಟಿನಿಂದ ಯಾವಾಗ ಜಾರಿಗೊಂಡವು?
ಅಸ್ಪೃಶ್ಯತೆ ಹೇಗೆ, ಯಾವಾಗ ಆಚರಣೆಗೆ ಬಂದಿತು?
ಚರಕ, ಆರ್ಯಭಟರಂತಹ ತಜ್ಞರ ಶಾಸ್ತ್ರ, ಸೂತ್ರಗಳ ಭಾರತ ಹೇಗೆ ಅಂಧಕಾರದಲ್ಲಿ ಮುಳುಗಿತು?
ಭಾರತದ ಬೀದಿಗಳಲ್ಲಿ ಮುತ್ತುರತ್ನಗಳನ್ನು ಮಾರುತ್ತಿದ್ದಷ್ಟು ದೇಶ ಶ್ರೀಮಂತವಾಗಿದ್ದಿತೇ?
ಹಾಗಿದ್ದ ಶ್ರೀಮಂತ ದೇಶ ಹೀಗೇಕೆ ಬಡವಾಯಿತು? ಇತ್ಯಾದಿ ಇತ್ಯಾದಿಯಾಗಿ ಇತಿಹಾಸದ ಕುರಿತಾಗಿ ನನ್ನಲ್ಲಿ ಮೂಡಿದ್ದ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿಕೊಂಡು ಸಾಗಿದಾಗ ಕಂಡುಕೊಂಡದ್ದು ಹೀಗೆ ಪುಸ್ತಕವಾಗಿದೆ.
ಆದರೆ ನಾನೊಬ್ಬ ವೃತ್ತಿನಿರತ ಸಂಶೋಧಕನಲ್ಲ, ಅದರಲ್ಲಿ ಶೈಕ್ಷಣಿಕ ಪರಿಣಿತಿಯೂ ಇಲ್ಲ. ಹಾಗೆಯೇ ನಾನೊಬ್ಬ ಸಾಹಿತಿ, ಚಿಂತಕ, ಇನ್ಯಾವುದೇ ವೃತ್ತಿ ಯಾ ಪ್ರವೃತ್ತಿ ವಿಶೇಷಣಗಳನ್ನು ಹೊಂದಿದವನೂ ಅಲ್ಲ. ನಾನೊಬ್ಬ ಕೇವಲ ಮಾಹಿತಿ ವಿಶ್ಲೇಷಕ ಮತ್ತು ಸತ್ಯದ ಅನ್ವೇಷಕ ಮಾತ್ರ. ಕೇವಲ ಒಬ್ಬ ಕುತೂಹಲಿಯಾಗಿ ನಾನು ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದೇನೆ! ನನಗಿದ್ದ ವೃತ್ತಿಪರ ವಿಶ್ಲೇಷಣಾ ಅನುಭವ, ಮತ್ತು ಸತ್ಯ ಪ್ರತಿಪಾದನೆಯ ನಿಷ್ಠೆ ನನಗೆ ಈ ಸಂಶೋಧನೆಯಲ್ಲಿ ನೆರವಾಗಿದ್ದುದು ಮಾತ್ರ ಸತ್ಯ. ಹೀಗೆ ನನ್ನಂತೆಯೇ ಇದೇ ಪ್ರಶ್ನೆಗಳಿರಬಹುದಾದ ಹಲವರಿಗೆ ನಾನು ಕಂಡುಕೊಂಡದ್ದು ಕಿಂಚಿತ್ತಾದರೂ ತೋರುಗಂಬವಾಗಬಹುದೆಂಬ ಅನಿಸಿಕೆಯಿಂದ ಇದನ್ನು ಒಂದು ಪುಸ್ತಕವಾಗಿಸಿದ್ದೇನೆ. ಹಾಗಾಗಿ ಇದು ನನ್ನ ಪುಸ್ತಕವಲ್ಲ. ಇದು ನಮ್ಮಂತಹ ಎಲ್ಲಾ ಇತಿಹಾಸ ಕುತೂಹಲಿಗಳ ಪುಸ್ತಕ, ನಿಮ್ಮ ಪುಸ್ತಕ.
ಒಬ್ಬ ಅನಿವಾಸಿ ಕನ್ನಡ ಬರಹಗಾರನಿಗೆ ಬರೆಯುವ ಆಸಕ್ತಿ ಛಲವಿದ್ದರೂ, ಅದನ್ನು ಓದಿ ಸಲಹೆ ಕೊಡಬಲ್ಲ ಆಸಕ್ತ ವಲಯದ ಕೊರತೆ ಅಪಾರ. ಬರೆಯುವ ಓಘದಲ್ಲಿ ಆಗುವ ಕಾಗುಣಿತದ ತಪ್ಪುಗಳು, ತಲೆಯಿಂದ ಬರುವ ಸಿಗ್ನಲ್ಲುಗಳನ್ನು ಬೆರಳುಗಳು ಒಮ್ಮೊಮ್ಮೆ ಸರಿಯಾಗಿ ನಿರ್ವಹಿಸದೇ ಆಗುವ ಅಭಾಸಗಳನ್ನು ಸರಿಪಡಿಸಲು ಬರಹಗಾರ ಎಷ್ಟೇ ಗಮನ ಕೊಟ್ಟಿದ್ದರೂ ಆತನಿಗೆ ಎರಡನೇ ದೃಷ್ಟಿ ಅತ್ಯಗತ್ಯ. ಆ ಎರಡನೇ ದೃಷ್ಟಿಯ ಅಭಾವ ಅನಿವಾಸಿ ಬರಹಗಾರನಿಗೆ ಸದಾ ಅಲಭ್ಯ. ಅದರಲ್ಲೂ ಬರಹದ ವಸ್ತು ಕಾಲ್ಪನಿಕವಲ್ಲದೆ ಸಂಶೋಧನಾ ವಿಷಯವಾಗಿದ್ದರೆ ಆತ ಗೋಬಿ ಮರಳುಗಾಡಿನಲ್ಲಿ ಕಳೆದುಹೋದ ಹುಯೆನ್ ತ್ಸಾಂಗನೇ ಸರಿ.
ಆ ಎಲ್ಲಾ ಸಂಕಷ್ಟಗಳನ್ನು ಎದುರಿಸಿ, ವಿಚಲಿತಗೊಂಡು, ಹತ್ತು ಹಲವಾರು ಬಾರಿ ತಿದ್ದಿ ಸರಿಪಡಿಸಿ ಈ ಕೃತಿಯನ್ನು ರಚಿಸಿದ್ದೇನೆ. ಆದರೂ ಒಂದು ತಪ್ಪು ಇದರಲ್ಲಿ ಉಳಿದುಬಿಟ್ಟಿದೆ. ಇದು ಕನ್ನಂಬಾಡಿ ಕಟ್ಟೆಯ ಕುರಿತಾದ ಎರಡು ವಾಕ್ಯಗಳಲ್ಲಿ ಒಂದು ವಾಕ್ಯ ಬಿಟ್ಟುಹೋಗಿ ಅರ್ಥ ಅಭಾಸವನ್ನು ಕೊಟ್ಟಿದೆ. ಅದಕ್ಕಾಗಿ ಕ್ಷಮೆಯಿರಲಿ.
ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹತ್ತು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಎರಡೂವರೆ ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ರಾಯಲ್ಟಿಯ ದ್ವಿಗುಣ/ತ್ರಿಗುಣದಷ್ಟು.
ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ. ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. ಇದೇ ಮನೋಭಾವನೆಯ ಪ್ರಕಾಶಕರಾದ ಲೋಕಪ್ಪನವರು ಸಿಕ್ಕಿದ್ದು ನನ್ನ ಸುಯೋಗ!
ಈ ಸಂಶೋಧನಾತ್ಮಕ ವಿಶ್ಲೇಷಣಾ ಕೃತಿಗಳು ಒಂದೆಡೆ ಅಧಿಕ ಖರ್ಚು ಎನಿಸಿದರೆ ಮತ್ತೊಂದೆಡೆ ಓದುಗರ ಅವಗಣನೆಗೆ ಒಳಗಾಗಿ ಲೈಬ್ರರಿಗಳಲ್ಲಿ ಧೂಳು ಹಿಡಿದು ಕೂರುತ್ತಿವೆ. ಮೂಲತಃ ಈ ರೀತಿಯ ಸಂಶೋಧನೆಗಳಿಗೆ ಗ್ರ್ಯಾಂಟ್ ಇರುವುದರಿಂದ ಸಂಶೋಧಕರೂ ಅಷ್ಟಾಗಿ ಮಾರುಕಟ್ಟೆ ಬಗ್ಗೆ ಚಿಂತಿಸುವುದಿಲ್ಲ. ಅದಲ್ಲದೆ, ಫಿಕ್ಷನ್ ಸಾಹಿತ್ಯಕ್ಕೆ ಸಾಕಷ್ಟು ಒತ್ತು ಕೊಟ್ಟು ಚರ್ಚೆ, ವಿಮರ್ಶೆಗೊಳಪಡಿಸುವ ನಾವು ನಾನ್-ಫಿಕ್ಷನ್ ಸಂಶೋಧನೆ, ವಿಶ್ಲೇಷಣೆಗಳಿಗೆ ಅಷ್ಟೊಂದು ಒತ್ತು ಕೂಡಾ ಕೊಡುವುದಿಲ್ಲ.
ಹಾಗಾಗಿ ಗ್ರ್ಯಾಂಟ್ ಇಲ್ಲದೆ ಈ ರೀತಿಯ ಸಾಹಸಗಳಿಗೆ ಕೈಹಾಕುವವರಿಗೆ ಎಂದಿಗಿಂತಲೂ ಹೆಚ್ಚಿನ ಮಹತ್ವ ಕೊಟ್ಟು ಓದುಗರು ಪ್ರೋತ್ಸಾಹಿಸಬೇಕಾಗಿದೆ. ಹಾಗೆಯೇ ಸಂಶೋಧಕರು ಕೂಡ ತಮ್ಮ ಸಂಶೋಧನಾತ್ಮಕ ಕೃತಿಗಳನ್ನು ಸಿದ್ಧ ಮಾದರಿಯ ಬೋರು ಹೊಡೆಸುವ ಶೈಕ್ಷಣಿಕ ಪಿಹೆಚ್ಡಿ ಶೈಲಿಯಲ್ಲಿ ರಚಿಸುವುದು ಕೂಡಾ ಓದುಗರ ಅವಗಣನೆಗೆ ಒಂದು ಪ್ರಮುಖ ಕಾರಣವೆನಿಸುತ್ತದೆ. ತಮ್ಮ ಪಿಹೆಚ್ಡಿ ಮುಗಿದ ನಂತರ ಸಂಶೋಧಕರು ಆ ಥೀಸಿಸ್ ಅನ್ನು ಕಥನ ಶೈಲಿಯಲ್ಲಿ ಸಾಮಾನ್ಯ ಓದುಗರಿಗಾಗಿ ಬರೆದರೆ ಸಂಶೋಧನೆಗಳು ಹೆಚ್ಚು ಜನರನ್ನು ತಲುಪಬಹುದು.
ಹಾಗಾಗಿ ಫಿಕ್ಷನ್ ಓದುಗರ ಪ್ರೋತ್ಸಾಹವನ್ನು ಬಯಸಿಯೇ ನಾನು ಈ ಕೃತಿಯನ್ನು ಕಥನ ಶೈಲಿಯಲ್ಲಿ ಬರೆದಿದ್ದೇನೆ.
ಶಿಕಾಗೋದ ನನ್ನಂಥಹ ಒಬ್ಬ ಶೈಕ್ಷಣಿಕೇತರ ಗಮಾರ, ಹವ್ಯಾಸಿ ಕುತೂಹಲಿಯ ಹುಡುಕಾಟದ ತಡವರಿಸುವಿಕೆಯನ್ನು, ಉತ್ಖನನ ಮತ್ತು ಪ್ರಾಚೀನ ಚರಿತ್ರೆಯ ಶೈಕ್ಷಣಿಕ ರಂಗದ, ವೃತ್ತಿಪರ ಸಂಶೋಧನೆಯ ಮೇರುಶಿಖರವೆನಿಸಿದ ಡಾ. A.V. ನರಸಿಂಹಮೂರ್ತಿಯವರು ಮೈದಡವಿ ಅಪ್ಪಿ ಮುನ್ನುಡಿ ಬರೆದುಕೊಟ್ಟು ಪ್ರೋತ್ಸಾಹಿಸಿದ್ದಾರೆ. ಅದೇ ರೀತಿ ಖ್ಯಾತ ಸಾಹಿತ್ಯ ವಿಮರ್ಶಕರಾದ ಡಾ. ನಂದೀಶ್ ಹಂಚೆಯವರು ಕೃತಿಯನ್ನು ಮೆಚ್ಚಿ, ಬೆನ್ನು ತಟ್ಟಿ ಬೆನ್ನುಡಿಯನ್ನು ಬರೆದಿದ್ದಾರೆ. ವಸ್ತುನಿಷ್ಠ ಸತ್ಯತೆಯನ್ನು ಸದಾ ಪ್ರೋತ್ಸಾಹಿಸುವ ಗುರುಗಳಾದ ಶ್ರೀ ಸುತ್ತೂರು ಸ್ವಾಮೀಜಿಯವರು ಆಶೀರ್ವದಿಸಿದ್ದಾರೆ.
ಬರೆಯುವುದನ್ನು ಮರೆತೇಬಿಟ್ಟಿದ್ದ ನನ್ನನ್ನು ಮತ್ತೆ ಬರೆಯಲು ಪ್ರೇರೇಪಿಸಿ, ನನ್ನ ಲೇಖನಗಳನ್ನು ಪ್ರಕಟಿಸಿ, ಪುಸ್ತಕಗಳನ್ನೂ ಬರೆಸಿದ ಸಮಾಜಮುಖಿ ಸಂಪಾದಕರಾದ ಚಂದ್ರಕಾಂತ ವಡ್ಡು, ಮತ್ತು ಉದಯಕಾಲ ದಿನಪತ್ರಿಕೆಯ ಬಳಗದ ಪುಟ್ಟಲಿಂಗಯ್ಯ ಮತ್ತು ದೇವರಾಜ್ ಹಿರೇಹಳ್ಳಿ ಅವರಿಗೆ ನಾನು ಚಿರಋಣಿ.
ರೂ.180/- ಮುಖಬೆಲೆಯ ''ಭಾರತ ಒಂದು ಮರುಶೋಧನೆ'' ಕೃತಿಯನ್ನು ರಿಯಾಯಿತಿ ದರದಲ್ಲಿ ಮುಂಗಡ ಕಾಯ್ದಿರಿಸುವ ಅವಕಾಶವಿದೆ. ಕೆಳಗಿನ ಬ್ಯಾಂಕ್ ಖಾತೆಗೆ ರೂ.150/- ಪಾವತಿಸಿ ನಿಮ್ಮ ಅಂಚೆ ವಿಳಾಸವನ್ನು ಮೊಬೈಲಿಗೆ ಕಳುಹಿಸಿದರೆ ಸಾಕು. ಪುಸ್ತಕವನ್ನು ಬಿಡುಗಡೆಗೊಂಡ ಮರುದಿನ ಅಂದರೆ ಆಗಸ್ಟ್ 26ಕ್ಕೆ ನಿಮ್ಮ ಮನೆಬಾಗಿಲಿಗೆ ತಲುಪಿಸುವ ಹೊಣೆ ನಮ್ಮದು.
ಡಿ.ಎನ್. ಲೋಕಪ್ಪ,
ಶ್ರೀ ರಾಜೇಂದ್ರ ಮುದ್ರಕರು ಮತ್ತು ಪ್ರಕಾಶಕರು,
ಯುಕೋ ಬ್ಯಾಂಕ್,
ದೇವರಾಜ ಅರಸ್ ರಸ್ತೆ ಶಾಖೆ, ಮೈಸೂರು.
ಚಾಲ್ತಿ ಖಾತೆ ಸಂಖ್ಯೆ:00540500004256
Ifsc: UCBA 0000054
ಮೊಬೈಲ್: 9902639593

ತೇಜಸ್ವಿ ಸೂರ್ಯಾ, ಪಂಪ ರನ್ನ!

ಆಷಾಡದಾಗ ಅಧಿಕ ಮಾಸ ಕೇಳಿದ್ದೆ. ಆದ್ರ, ಆಗಸ್ಟ್ರಿನ್ಯಾಗ ರಾಜ್ಯೋತ್ಸವ ಕೇಳಿರಲಿಲ್ಲ. ವಿಮಾನ ಹತ್ತಿ ಹುಚ್ಚಾಸ್ಪತ್ರ್ಯಾಗ ಇಳಿಯುದ್ರೊಳಗಾ ಹಿಂಗ ಆಗೇದ್ರಲ್ಲಪಾ, ಅವನೌನ!
ಏನ್ ಇದು ಅಂಥಾ ನೋಡಿದ್ರ...
ಪಾಪ, ಮರೋಡ್ಯಾರು ಯಾರ ಅವ್ರ ಧರ್ಮದ ಬ್ಯಾನರ್ರು ರಾಜಸ್ತಾನಿ, ಹಿಂದಿ ಭಾಷಾದಾಗ ಹಾಕ್ಕೊಂಡಿದ್ರ, ತುಡುಗು ಮಂದಿ ಗಲಾಟಿ ಮಾಡಿದ್ನ ಸೂರ್ಯ ಟ್ವೀಟ್ ಮಾಡಿದ್ನಂತ. ಅದಕ್ಕಾ ಎಲ್ಲಾರೂ ಕನಡಾನ ಕತ್ತಿ ಗುರಾಣಿ ಮಾಡ್ಕೊಂಡು ನಿಂತಾರಂತ, ಇದು ಹಕೀಕತ್ತು.
ಸರಿ, ನನ ದೋಸ್ತು ಡಾವನಗೇರಿ ವಿಜಯ ಮೆಟಲ್ಸ್ ವಿಜಿನ ಏನಲೇ ಏನಂತಿ ಇದ್ಕ ಅಂದೆ.
ಅದ್ಕ ವಿಜಿ "ಮಿಂಡ್ರಿಗುಟ್ಟಿದರಿಗೆ ಕೆಲಸ ಇಲ್ಲ ಬಗಿಸಿ ಇಲ್ಲ. ಪಂಪ ರನ್ನ ಎಲ್ಲಾ ಜೈನರು ಅದಾರ, ಮಾರೋಡೇರು ಆಟ ಜೈನರ ಅಲ್ಲ ಅಂತಾರಲ್ಲ... ಅವುಕ್ಕ ನಮ್ ಧರ್ಮ ಇತಿಹಾಸ ಏನ್ ಗೊತ್ತದ! ಕನ್ನಡ ಜೈನರು ದಿಗಂಬರರು ಅದಾರ, ನಾವು ಮಾರೋಡೆರು ಶ್ವೇತಾಂಬರರು. ಜನ ಆಪೀಸು, ಅಂಗಡಿ, ಕೆಲಸಕ್ಕ ಹ್ಯಾಂಗ ಬಟ್ಟಿ ಹಾಕ್ಕೊಂಡು ಇರ್ತಾರ ಮತ್ತ ಮೈ ತೊಕ್ಕೊಣಬೇಕಾರ ಹ್ಯಾಂಗ ಬರೇ ಬತ್ತಲ ಇರ್ತಾರಲ್ಲ ಅಂಥ ವ್ಯತ್ಯಾಸ ಐತಿ ನಮ್ಮದ್ರಾಗ. ಈ ದಡ್ಡ ಸೂ..ಮಕ್ಕಳು ಚಡ್ಡಿ ಹಾಕ್ಕೊಂಡು ಮೈ ತೊಕ್ಕೊಳ್ಳೋರಿಗೆ ಏನ್ ಅರ್ಥ್ ಆದೀತು ಬಿಡಲೇ. ಅವುಕ್ಕ ಅವ್ರ ಸಾಮಾನೇ ಹ್ಯಾಂಗ ಐತಿ ಗೊತ್ತುಲ್ಲ. ಇನ್ನ ಬ್ಯಾರೇರ್ದು ಏನ್ ನೋಡಿರ್ತಾವು? ಬೆಂಗ್ಳುರಾಗ ಕನ್ನಡ ಇವ್ರ ಹಾಳು ಮಾಡ್ಕೊಂಡು ನಮ್ಮ ಮುಕಳಿಗೆ ಒರಸಾಕ ಹತ್ಯಾರ. ಯಾಕಂದ್ರ ಪುಗಶೆಟಿ ಸಿಗರು ನಾವೇ ಅಲ್ಲೆನ್ ಮತ್ತಾ! ನಾಲಿಗಿ ಸೀಳಿದ್ರ ಮೂಗಾಗ ಕನ್ನಡ ಮಾತಾಡ್ತೇವಿ ಅಂಥ ಅವ್ರಿಗೆ ಅವ್ರ ನಾಲಿಗಿ ಸೀಳಿಕೆಂಡು, ಮುಗು ಕೊಯ್ಕೆಂಡು ಮುಕುಳಾಗ ಕನ್ನಡ ಮಾತಾಡದು ನೋಡಲೇ ಯಾವಾರ ಕನ್ನಡ ಚಾನಲ್ ಹಚ್ಚಿ" ಅಂದ.
ಅಲ್ಲಿಗೇ ಪಂಪ ರನ್ನ ಸೂರ್ಯ ರವಿ ಕತಿ ಮುಗೀತು.
ಏನ್ ಇವ ಹಿಂಗ್ ಮಾತಾಡಕ ಹತ್ಯಾನ ಅಂತೀರಿ! ಎಲ್ಲೋ ನನ್ DNAದಾಗ ಇದ್ದ ಸೊಲ್ಲಾಪುರಿ ಕನ್ನಡನಾ ಬಿಜಾಪುರದ ತೋತಾಪುರಿ ಕವಿಯಿತ್ರಿ ಒಬ್ಬರು ಮನ್ನೆ ಬಡುದು ಎಬ್ಬಿಸ್ಯಾರ (ಕಾಂಪ್ಲಿಮೆಂಟ್ ಇದು, ಮತ್ತ ಇನ್ನೇನಾರ ಅನ್ಕೋ ಬ್ಯಾಡ್ರಿ), ಹಂಗಾಗಿ ಹೀಂಗ. ಇದ್ರ ಮ್ಯಾಲೆ ಜನರಲ್ ವಾರ್ಡಿನ್ಯಾಗ ಅಡ್ಮಿಟ್ ಬ್ಯಾರೆ ಆಗೀನಲ್ಲ!

ಪ್ಲಾಸ್ಟಿಕ್ ಬ್ಯಾನು, ಶುಚಿತ್ವ ಮತ್ತು ಶೌಚ!


ದಾವಣಗೆರೆಯ ಕೆಫೆ ಕಾಫಿ ಡೇ ಗೆ ಬಂದೆ, ಒಂದು ಅಮೇರಿಕಾನೊ ಕಾಫಿ ಕುಡಿಯೋಣ ಎಂದು. ನನ್ನ ಬೆನ್ನಿಗೇ ಆರು ಜನ ಪುರುಷರು ಮತ್ತು ಮಹಿಳೆಯೋರ್ವರು ನುಗ್ಗಿಕೊಂಡು ಸೀದಾ ಕಿಚನ್ನಿಗೆ ನುಗ್ಗಿದರು. ಸ್ವಲ್ಪ ಗಮನಿಸಿದ ನಂತರ ಅವರೆಲ್ಲಾ ದಾವಣಗೆರೆ ಕಾರ್ಪೊರೇಷನ್ನಿನ ನೌಕರಶಾಹಿಗಳು ಬ್ಯಾನ್ ಆಗಿರುವ ಪ್ಲಾಸ್ಟಿಕ್ ಬಳಕೆಯನ್ನು ಹಿಡಿಯುವ ದಾಳಿಗೆ ಬಂದದ್ದೆಂದು ತಿಳಿಯಿತು.
ಎಲ್ಲಾ ಹುಡುಕಿದ ನಂತರ ಅಲ್ಲಿ ಅವರಿಗೆ ಆಹಾರ ಸಿದ್ದಪಡಿಸುವಾಗ ಹಾಕಿಕೊಳ್ಳುವ ಪ್ಲಾಸ್ಟಿಕ್ ಗ್ಲವುಸುಗಳ ಒಂದು ಬಂಡಲ್ ಸಿಕ್ಕಿತು. ಅದನ್ನು ವಶಪಡಿಸಿಕೊಂಡ ಅಧಿಕಾರಿಗಳು "ಗ್ಲವುಸು ಹಾಕಿಕೊಳ್ಳದೇ ಬರಿಗೈಯಿಂದ ಆಹಾರ ಸಿದ್ಧಪಡಿಸಿ" ಎಂದು ಫರ್ಮಾನು ಇತ್ತು, ಕಾಫಿ ಡೇ ನೌಕರರನ್ನು ತಮ್ಮ ಪಕ್ಕದಲ್ಲಿ ನಿಲ್ಲಿಸಿಕೊಂಡು ವಶಪಡಿಸಿಕೊಂಡ ಬಂಡಲ್ ಮುಂದೆ, ಹುಲಿ ಶಿಕಾರಿ ಮಾಡಿದ ಗತ್ತಿನಲ್ಲಿ ಫೋಟೋ ತೆಗೆಸಿಕೊಂಡರು. ಎರಡು ಸಾವಿರ ಫೈನ್ ಕೂಡ ಜಡಿದರು.
ಶುಚಿತ್ವದ ಆದ್ಯತೆಯಾಗಿ ಗ್ಲವುಸು ಇಲ್ಲದೆ ಆಹಾರ ಸಿದ್ಧತೆ ಹೇಗೆ ಮಾಡಬೇಕೆಂದು ಪೆಚ್ಚಾಗಿದ್ದ CCD ಉದ್ಯೋಗಸ್ಥ ಮಹಿಳೆಗೆ ಬಟ್ಟೆ ಗ್ಲವುಸು ಉಪಯೋಗಿಸಬಹುದು ಎಂದು ಸಮಾಧಾನ ಕೂಡ ಹೇಳಿತು ದಾವಣಗೆರೆ ಮಹಾಪಾಲಿಕೆ ನೌಕರಶಾಹಿ!
ಬಯಲು ಶೌಚವನ್ನು ನಿಯಂತ್ರಿಸಲಾಗದೆ, ಶೌಚವನ್ನೇ ನಿಷೇಧಿಸುವಂತಹ ಒಂದು ತಾಜಾ ಕಮಂಗಿತನಕ್ಕೆ ಹೀಗೆ ಸಾಕ್ಷಿಯಾದೆನು. ನವಿಲು ಕುಣಿಯುತ್ತದೆ ಎಂದು ಕೆಂಭೂತ ಕುಣಿಯುವ ಪ್ರಗತಿಯ ಸಂಕೇತವೆನ್ನುವ ಇಂತಹ ವಿರೋಧಾಭಾಸಗಳು ಸಾವಿರಾರು! ಮೊಗೆದಷ್ಟೂ ಉಕ್ಕುವ ಅಗಣಿತ ಅಭಾಸಗಳ ಅಕ್ಷಯ ಗಣಿ.
ಸಿದ್ಧಾರ್ಥರು ಈ ದೃಶ್ಯವನ್ನು ತಮ್ಮ ಕೆಫೆ ಡೇಯಲ್ಲಿ ಕಂಡಿದ್ದರೆ ಬುದ್ಧರಾಗುತ್ತಿದ್ದರೇನೋ!?!
ಈಗ ಪ್ರಧಾನಿ ಮೋದಿಯವರು ಜನಸಂಖ್ಯೆ ನಿಯಂತ್ರಣ ಮತ್ತು ಪ್ಲಾಸ್ಟಿಕ್ ಹಾವಳಿ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಜನಸಂಖ್ಯೆ ನಿಯಂತ್ರಣದ ಬಹುಮುಖ್ಯ ಅಂಗವೆನಿಸುವ ಕಾಂಡೋಮ್ ಕೂಡಾ ಲೇಟೆಕ್ಸ್ ಅಲ್ಲದೆ ಪ್ಲಾಸ್ಟಿಕ್ನಿಂದ ಕೂಡಾ ಮಾಡಲಾಗುತ್ತದೆ. ಇಲ್ಲಿ ಪ್ಲಾಸ್ಟಿಕ್ ಬ್ಯಾನ್ ಹೇಗೆ ಅಳವಡಿಸುತ್ತಾರೋ ಈ ಅಧಿಕಾರಿಗಳು! ಲೇಟೆಕ್ಸ್ ಅಲರ್ಜಿ ಇರುವ ಕಾಂಗ್ರೆಸ್ಸಿಗರು "ಹಸ್ತ"ವನ್ನು, ಬಿಜೆಪಿಗರಿಗೆ ಕರಸೇವೆಯ ಸ್ವಯಂಸೇವಕರಾಗಿ ಎಂದು ಸಮನ್ವಯ ಸೂತ್ರವನ್ನು ಬೋಧಿಸುತ್ತಾರೆನೋ!

ವಲಸೆಗಾರರ ಆದಿ ಸಂಯುಕ್ತ ಸಂಸ್ಥಾನ

"ಭಾರತದ ಇತಿಹಾಸದ ಮೂಲ ತುಂಬಾ ಕುತೂಹಲಕರವಾದದ್ದು...ಸಾಮಾನ್ಶರಿಗೆ ಇದನ್ನು ಅರಗಿಸಿಕೂಳ್ಳುವುದು ಕಷ್ಚ! ಇಲ್ಲಿನ ಸಂಸ್ಕೃತಿಗೆ 'ವಲಸೆ' ಬಹುಮುಖ್ಶ ಪಾತ್ರ ವಹಿಸಿದೆ. ವಿಶ್ವದ ಎಲ್ಲಾ ನಾಗರೀಕತೆಗಳ ಸಾರದ ಕಂಪು ಇಲ್ಲಿ ಹರಿದು ಬಂದಿದೆ...ಮೂರುವರೆ ಸಾವಿರ ವರ್ಷಕ್ಕಿಂತಲೂ ಹಿಂದಿನಿಂದ!"
ಹೀಗೆ ಹೇಳಿದವರು ಐತಿಹಾಸಿಕ ಶಿಲ್ಪಕಲೆಯ ಸೊಬಗನ್ನು ಪುನರ್ ಸೃಷ್ಟಿಸುವಲ್ಲಿ ನಿಷ್ಣಾತರಾದ ಗೋವಾ ವಾಸಿಗಳಾದ ಶ್ರೀ ಪುಟ್ಟಸ್ವಾಮಿ ಗುಡಿಕಾರರು, ಕೇವಲ ನನ್ನ ಫೇಸ್ಬುಕ್ ಪೋಸ್ಟಿನಿಂದಲೇ ನನ್ನ ಕೃತಿಯ ಸಮಗ್ರವನ್ನು ಗ್ರಹಿಸಿ ನಿಖರವಾದ ಹೊಳಹಿನಿಂದಲೇ ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಭಾರತವನ್ನು "ವಲಸೆಗಾರರ ಆದಿ ಸಂಯುಕ್ತ ಸಂಸ್ಥಾನ" ಎನ್ನಬಹುದು. ಅಂತಹ ಆದಿ ವಲಸೆಗಾರರ ಭಾರತದಿಂದ "ವಲಸೆಗಾರರ ನವ್ಯ ಸಂಯುಕ್ತ ಸಂಸ್ಥಾನ"ವಾದ ಅಮೆರಿಕಕ್ಕೆ ವಲಸೆ ಹೋದ ನಾನು ಈ ಪುಸ್ತಕವನ್ನು ಬರೆಯುವಂತಾದ್ದು ನನ್ನ ವಲಸೆಯ ಗಮ್ಯ ಗುರಿಯಾಗಿತ್ತೇನೋ!
ನಂಬಿದ ಆದರ್ಶಗಳಿಗೆ, ಮತ್ತು ಚಾರಿತ್ರಿಕ ಆದರ್ಶ ವ್ಯಕ್ತಿಗಳ ಕಟ್ಟಾಭಿಮಾನಕ್ಕೆ ಬದ್ಧರಾಗಿರುವ ಜನತೆ, ಆ ಆದರ್ಶ ಮತ್ತು ಆದರ್ಶವ್ಯಕ್ತಿಗಳನ್ನು ಯಾವುದೇ ಕೃತಿಗಳು ಪ್ರಶ್ನಿಸಿದರೆ ಒಪ್ಪಿಕೊಳ್ಳುವುದಿರಲಿ ದಂಡೆತ್ತಿ ಹೋಗುವ ಇತಿಹಾಸವಿರುವುದರಿಂದ ಚರಿತ್ರೆಯ ನಿರ್ಭಿಡೆಯ ಸತ್ಯಾತ್ಮಕ ವಿಶ್ಲೇಷಣೆಗಳು ಭಾರತದಲ್ಲಿ ಅಷ್ಟಾಗಿ ಇಲ್ಲ. ಅದನ್ನು ತುಂಬುವ ನಿಟ್ಟಿನಲ್ಲಿ ಇದು ಒಂದು ಪ್ರಯತ್ನ. ನನ್ನ 'ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ", ಮತ್ತು "ಕರ್ನಾಟಕವೆಂಬೋ ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಅನ್ನು ಸಾಕಷ್ಟು ಓದುಗರು ಮೆಚ್ಚಿಕೊಂಡು ಮುಕ್ತ ಹೃದಯದಿಂದ ಶ್ಲಾಘಿಸಿರುವ ಹಿನ್ನೆಲೆಯಲ್ಲಿ ನನಗೀ ನಿರ್ಭಿಡ ಪ್ರಾಮಾಣಿಕತೆ ಮೂಡಿಬಂದಿದೆ ಎಂದುಕೊಂಡಿದ್ದೇನೆ.
ಒಟ್ಟಿನಲ್ಲಿ ಪುಟ್ಟಸ್ವಾಮಿ ಗುಡಿಕಾರರು ಹೇಳಿದಂತೆ ಇದನ್ನು ಅರಗಿಸಿಕೊಳ್ಳಲು 'ಮುಕ್ತ' ಮನಸ್ಸು ಅತ್ಯವಶ್ಯಕ. ಯಾರು ಏನೇ ಅಸಹಿಷ್ಣುತೆ ದೇಶದ ತುಂಬೆಲ್ಲಾ ತುಂಬಿದೆ ಎಂದರೂ ಅದು ಕೇವಲ ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣುವ ಘಟನೆಗಳಿಗೆ ಸೀಮಿತವಾಗಿದೆ ಎಂಬುದು ಸತ್ಯ.
ಒಟ್ಟಿನಲ್ಲಿ ಓದುಗರು ಈ ಕೃತಿಯನ್ನು ಓದಿದ ನಂತರ ನನ್ನನ್ನು ಒದೆಯಲಾರರು ಎಂದು ನಾನು ಬಲವಾಗಿ ನಂಬುವಷ್ಟು ಸಹಿಷ್ಣುತೆ ಇದೆ. ಆ ನಂಬಿಕೆಗೆ ಕಾರಣ ಬರ್ಟೆಂಡ್ ರಸೆಲ್ ನ ಈ ಕೆಳಗಿನ ಮಾತುಗಳು ನನ್ನ ಮಾರ್ಗದರ್ಶಿ ತತ್ವಗಳು.
"ಯಾವುದೇ ಒಂದು ವಿಷಯವನ್ನು ಓದುವಾಗ ಅಥವಾ ಒಂದು ತತ್ವವನ್ನು ಪರಿಗಣಿಸುವಾಗ, ನಾವು ಯಾವುದನ್ನು ನಂಬಲು ಇಚ್ಛಿಸುತ್ತೇವೋ ಅದರೆಡೆ ವಾಲುವುದಾಗಲಿ ಅಥವಾ ಈ ಸತ್ಯಾಂಶಗಳನ್ನು ನಾವು ನಂಬುವುದರಿಂದ ಸಾಮಾಜಿಕವಾಗಿ ಏನು ಒಳಿತಾಗಬಲ್ಲದು ಎಂದೆಲ್ಲ ಆಲೋಚಿಸದೇ ಕೇವಲ ಆ ವಿಷಯದೊಳಗಿನ ವಸ್ತುಸ್ಥಿತಿ ಮತ್ತು ಆ ವಸ್ತುಸ್ಥಿತಿಯಲ್ಲಿನ ಸತ್ಯಾಂಶವನ್ನು ಮಾತ್ರ ಅಂತಿಮವಾಗಿ ಪರಿಗಣಿಸಬೇಕು."
- ಬರ್ಟೆಂಡ್ ರಸೆಲ್
ಇನ್ನು ಕೆಲವೊಮ್ಮೆ ಭಾರತದ ಚರಿತ್ರೆ ಮತ್ತು ಉತ್ಖನನ ಸಂಶೋಧನೆಗಳು ಏಕೆ ಹಳ್ಳ ಹಿಡಿದವು? ಏಕೆಂದರೆ, ಚರಿತ್ರೆಯ ಉತ್ಖನನ ಮತ್ತು ಮಾಹಿತಿ ಮಥನವು ಗಣಿತಜ್ಞ, ಸಂಖ್ಯಾಶಾಸ್ತ್ರಜ್ಞ, ಜೀವಶಾಸ್ತ್ರಜ್ಞ, ಅಭಿಯಂತರಜ್ಞ, ಮುಂತಾದ ತಜ್ಞರ ಕೆಲಸವನ್ನು ಬಯಸುತ್ತದೆ ಅಥವಾ ಆ ಜ್ಞಾನಗಳ ಅನುಭವವಿರುವವರ ಪರಿಣಿತಿಯನ್ನು ಬಯಸುತ್ತದೆ. ಆ ಗ್ಯಾಪ್ ಅನ್ನು ಸಂಶೋಧಕರು ಭಾವನಾತ್ಮಕ ಯಾ ಊಹಾತ್ಮಕವಾಗಿ ತುಂಬಿದ್ದರಿಂದ ಇತಿಹಾಸ ಬೇರೆಯದೇ ಒಂದು ತಿರುವನ್ನು ಪಡೆದುಕೊಂಡಿತು ಎಂಬುದು ತಜ್ಞರ ಅಭಿಪ್ರಾಯ.
ಆ ಒಂದು ವಿವಿಧ ಶಾಸ್ತ್ರಗಳ ವೃತ್ತಿಪರ ಅನುಭವ ನನಗಿರುವುದರಿಂದ ಈ ರೀತಿಯ ಕೃತಿ ನನ್ನಿಂದ ಸಾಧ್ಯವಾಯಿತೇನೋ ಎಂದು ಒಮ್ಮೊಮ್ಮೆ ಅನಿಸಿದ್ದುಂಟು. ಒಟ್ಟಾರೆ ನನ್ನ ವಿಶ್ಲೇಷಣಾ ಅನುಭವವಿಲ್ಲಿ ಅಗಾಧವಾಗಿ ಉಪಯೋಗಕ್ಕೆ ಬಂದುದು ಸತ್ಯ.
ಇನ್ನು ಒಬ್ಬ ಅನಿವಾಸಿ ಕನ್ನಡ ಬರಹಗಾರನಿಗೆ ಬರೆಯುವ ಆಸಕ್ತಿ ಛಲವಿದ್ದರೂ, ಅದನ್ನು ಓದಿ ಸಲಹೆ ಕೊಡಬಲ್ಲ ಆಸಕ್ತ ವಲಯದ ಕೊರತೆ ಅಪಾರ. ಬರೆಯುವ ಓಘದಲ್ಲಿ ಆಗುವ ಕಾಗುಣಿತದ ತಪ್ಪುಗಳು, ತಲೆಯಿಂದ ಬರುವ ಸಿಗ್ನಲ್ಲುಗಳನ್ನು ಬೆರಳುಗಳು ಒಮ್ಮೊಮ್ಮೆ ಸರಿಯಾಗಿ ನಿರ್ವಹಿಸದೇ ಆಗುವ ಅಭಾಸಗಳನ್ನು ಸರಿಪಡಿಸಲು ಬರಹಗಾರ ಎಷ್ಟೇ ಗಮನ ಕೊಟ್ಟಿದ್ದರೂ ಆತನಿಗೆ ಎರಡನೇ ದೃಷ್ಟಿ ಅತ್ಯಗತ್ಯ. ಆ ಎರಡನೇ ದೃಷ್ಟಿಯ ಅಭಾವ ಅನಿವಾಸಿ ಬರಹಗಾರನಿಗೆ ಸದಾ ಅಲಭ್ಯ. ಅದರಲ್ಲೂ ಬರಹದ ವಸ್ತು ಕಾಲ್ಪನಿಕವಲ್ಲದೆ ಸಂಶೋಧನಾ ವಿಷಯವಾಗಿದ್ದರೆ ಆತ ಗೋಬಿ ಮರಳುಗಾಡಿನಲ್ಲಿ ಕಳೆದುಹೋದ ಹುಯೆನ್ ತ್ಸಾಂಗನೇ ಸರಿ.
ಹೀಗಿದ್ದಾಗ ನನ್ನಲ್ಲಿ ವಿಶ್ವಾಸ ತುಂಬಿ, ಕರಡನ್ನು ಓದಿ, ತಪ್ಪುಗಳನ್ನು ಒಬ್ಬ ವೃತ್ತಿನಿರತ ಪ್ರಕಾಶಕರಂತೆ ತಿದ್ದಿ ಕೊಟ್ಟವರು ನನ್ನಂತೆಯೇ ಅನಿವಾಸಿಗಳಾದ ಇಂಗ್ಲೆಂಡಿನ ಡಾ. ಮಠದ ವಿಜಯಕುಮಾರ್. ಸಾಹಿತ್ಯ, ಮುದ್ರಣ ಮತ್ತು ಪ್ರಕಾಶನದ ಕೌಟುಂಬಿಕ ಹಿನ್ನೆಲೆ ಹೊಂದಿದ ವಿಜಯಕುಮಾರರ ಬೆಂಬಲ ಅನನ್ಯ. ಇವರು ಕನ್ನಡ ಕಾವಲುಗಾರರೆಂದು ಖ್ಯಾತರಾದ ಮೈಸೂರು ಪಂಡಿತಾರಾಧ್ಯರ ಸೋದರರು ಕೂಡ.
ಒಟ್ಟಿನಲ್ಲಿ ಓದುಗರು ಈ ಕೃತಿಯನ್ನು ಓದಿದ ನಂತರ ನನ್ನನ್ನು ಒದೆಯಲಾರರು ಎಂದು ನಾನು ಬಲವಾಗಿ ನಂಬುವಷ್ಟು ಸಹಿಷ್ಣುತೆ ದೇಶದಲ್ಲಿ ಇದೆ ಎಂಬುದನ್ನು ಮತ್ತೊಮ್ಮೆ ಹೇಳಲು ಇಚ್ಛಿಸುತ್ತೇನೆ.

ಲಕ್ಸು ಸೋಪು ಹಚಿಗೊಂಡ್

ಲಕ್ಸು ಸೋಪು ಹಚಿಗೊಂಡ್ ಜಳಕ ಮಾಡಿ, ಜಸ್ಟು ಬಂದೀನಿ...ಎನ್ನುವ ಒಬ್ಬಳ ಜವಾರಿ ಮುಲುಗು.
ರಾsಮs ನಾsಮs ಪಾಯsಸಕ್ಕೆ ಕೃಷ್ಣನಾಮ ಸಕ್ಕರೆ... ಎನ್ನುವ ಶಾಸ್ತ್ರೀಯ ಹಿನ್ನೆಲೆಯಲ್ಲಿ ಒಬ್ಬಳ ಲವ್ವು ಬವ್ವು ಅನ್ನೋ ಪ್ರಾಸಬದ್ಧ ಮುಲುಗು.
ನಂತರ,
ಮುಂದೆ ಮುಂದೆ ನಾನು ಇಡುವೆ. ನೀವೂ ಮುಂದೆ ಮುಂದೆ ಇಡಿ. ಮುಂದೆ ಮುಂದೆ ಇಡುವವರಿಗೆ ಐಡಿಎಫ್ಸಿ ಫಸ್ಟ್ ಬ್ಯಾಂಕ್! ಜಾಹೀರಾತು.
ಯು ಆರ್ ಮೈ ಪೊಲೀಸ್ ಬೇಬಿ, ಯು ಆರ್ ಮೈ ಹೋಮ್ ಮಿನಿಸ್ಟರ್ ಅನ್ನೋ ಇನ್ನೊಂದು ಮೂಗು ಮುಕುಳಿಯಿಂದ ಹೊಮ್ಮಿಸುವ ತ್ರಾಸಬದ್ಧ ಮುಲುಗು.
ನಂತರ,
ರೇಡಿಯೋ ಮಿರ್ಚಿ ಸಖತ್ ಹಾಟ್ ಮಗಾ ಎಂಬ ಸ್ಖಲಿತಬದ್ದ ಮುಲುಗು.
ಇದು ಕನ್ನಡ ಪಂಡಿತರೆಲ್ಲಾ ಭಾಷೆ, ವ್ಯಾಕರಣ, ಉಚ್ಚಾರಣೆ, ನೈತಿಕತೆಯ ಪಾಠ ಮಾಡುವುದು ಬಿಟ್ಟು ಬೇರೆಲ್ಲಾ ಮಾಡುತ್ತಿರುವುದರ ಪರಿಣಾಮವೋ ಅಥವಾ ರಿಯಲ್ ಎಸ್ಟೇಟಿನ ಹಣದುಬ್ಬರದಲ್ಲಿ ಹೂಸುತ್ತಿರುವ ಕನ್ನಡ ಸಿನೆಮಾ ಸಂಸ್ಕೃತಿಯೋ!
ಒಟ್ಟಾರೆ ಗ್ರೌಂಡ್ ರಿಯಾಲಿಟಿ ಪುರಾವೆಗಳು ಅದ್ಭುತವಾಗಿ ಸಿಗುತ್ತಿವೆ.