ಅಮೇರಿಕ, ಜಗತ್ತು, ಮೋದಿ, ನೋಟ್ ಬ್ಯಾನು, ಮತ್ತು ಬಲಪಂಥ!

ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ಬಯಲು ಬೆಡಗು ಸಂವಾದದಲ್ಲಿ ನನಗೆ ಬಂದ ಮೂರು ಪ್ರಶ್ನೆಗಳು.

ಪ್ರಶ್ನೆ 1: ಜಗತ್ತೇ ಬಲಪಂಥದೆಡೆ ಸಾಗುತ್ತಿದೆ ಏಕೆ?

ಉತ್ತರ: ಭಾರತ ಬಲಪಂಥದೆಡೆ ಸಾಗಿದೆ ಎಂದು ಇಲ್ಲಿನ ವಿಚಾರಪರರು ಹೇಳುತ್ತೀರಿ ಸರಿ. ಅದನ್ನು ಅನಿವಾಸಿಯಾದ ನಾನು ಅಲ್ಲಗಳೆಯಲಾರೆ. ಆದರೆ ಹಾಗೆಂದು ಇಡೀ ಜಗತ್ತು ಬಲಪಂಥದೆಡೆ ಸಾಗುತ್ತಿದೆಯೇ ಎಂಬುದನ್ನು ಎರಡು ದೇಶಗಳ ಉದಾಹರಣೆಗಳನ್ನು ತೆಗೆದುಕೊಂಡು ನೋಡೋಣ.

ಮೊದಲನೆಯದಾಗಿ ಅಮೇರಿಕ. ಇಲ್ಲಿ ಟ್ರಂಪ್ ಉದ್ಯೋಗ ಸೃಷ್ಟಿಸುತ್ತೇನೆ ಮತ್ತು ಉದ್ಯಮಗಳನ್ನು ಮರಳಿ ಅಮೆರಿಕೆಗೆ ತರುತ್ತೇನೆ ಎಂಬ ಭರವಸೆಯನ್ನು ಕೊಟ್ಟು ಚುನಾವಣೆಯನ್ನು ಗೆದ್ದಿರುವುದು. ಆ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ವಲಸೆಯ ನಿಯಮಗಳನ್ನು ಬಿಗಿಗೊಳಿಸಿದ್ದಾನೆ. ಮತ್ತು ಅದಕ್ಕೆ ಪೂರಕವಾದ ಕೆಲವು ನಿಯಂತ್ರಣಗಳನ್ನು ಹಾಕಿದ್ದಾನೆ. ಹಾಗಿದ್ದಾಗ ಆತನ ಕ್ರಮ ಬಲಪಂಥೀಯವೇ? ಕೆಲವೊಂದು ಜನಾಂಗೀಯ ಕೊಲೆಗಳ ಘಟನೆಗಳು ನಡೆದವು. ಹಾಗೆಂದು ಆ ರೀತಿಯ ಘಟನೆಗಳು ಒಬಾಮಾರ ಸರ್ಕಾರವಿದ್ದಾಗ ಆಗಿರಲಿಲ್ಲವೇ, ಆಗಿದ್ದವು. ಒಬ್ಬ ಅಧ್ಯಕ್ಷ ತನ್ನ ದೇಶದಲ್ಲಿ ಉದ್ಯೋಗ ಸೃಷ್ಟಿಸಲು ಏನನ್ನು ಮಾಡಿದನೋ ಅದನ್ನು ಬಲಪಂಥವೆನ್ನಲಾಗದು. ಮೇಲಾಗಿ ಧರ್ಮ, ಧರ್ಮ, ಧರ್ಮ ಎಂದು ಅಮೆರಿಕಾದಲ್ಲಿ ಆಧ್ಯಕ್ಷೀಯ ಚುನಾವಣೆಯಲ್ಲಿ ಉದ್ಗರಿಸಿ ಚುನಾವಣೆ ಗೆಲ್ಲಬಹುದೆಂಬ ಅಲೋಚನೆಯೇ ನಗೆ ತರಿಸುತ್ತದೆ. ಅಮೆರಿಕಾದಲ್ಲಿ ಉದ್ಯೋಗ, ಉದ್ಯೋಗ ಭದ್ರತೆ, ಆರೋಗ್ಯ ಯೋಜನೆ, ಅಮೆರಿಕೆಯ ಪ್ರೌಢಿಮೆ/ಹಿರಿಮೆ/ಗರಿಮೆ ಮತ್ತು ಸಂಪತ್ತು ಸೃಷ್ಟಿಯ ಯೋಜನೆಯುಕ್ತ ಭರವಸೆಯನ್ನು ಟಾಮ್, ಡಿಕ್ ಮತ್ತು ಹ್ಯಾರಿ ತೋರಿದರೂ ಗೆಲ್ಲುತ್ತಾರೆ. ಅಮೆರಿಕೆಯ ಚುನಾವಣೆಯ ಪ್ರಣಾಳಿಕೆ ಯಾವತ್ತೂ ಇದೇ ಆಗಿದೆ, ಅಲ್ಲಿನ ಚುನಾವಣೆಯ ಇತಿಹಾಸವನ್ನು ಕೂಲಂಕುಷವಾಗಿ ಒಮ್ಮೆ ಪರಿಶೀಲಿಸಿ.

ಅದೇ ರೀತಿ ಜರ್ಮನಿಯ ಏಂಜೆಲಾ ಮರ್ಕೆಲ್ ಸಿರಿಯಾದ ರೆಫ್ಯುಜಿಗಳನ್ನು ತನ್ನ ದೇಶಕ್ಕೆ ಕರೆತಂದಳು. ಹಿಟ್ಲರ್ ಪಾತಕತನದಿಂದ ಇಂದು ಇಡೀ ಜರ್ಮನಿ ಪಾಪಪ್ರಜ್ಞೆಯಿಂದ ನರಳುತ್ತಿದೆ. ಆ ಪಾಪಪ್ರಜ್ಞೆಯ ಕಾರಣದಿಂದಲೇ ಜರ್ಮನಿಯ ನಾಯಕಿ ಆ ನಿರಾಶ್ರಿತರನ್ನು ಹಿಂದುಮುಂದು ನೋಡದೆ ಜರ್ಮನಿಗೆ ಕರೆತಂದದ್ದು. ಒಂದು "ಅನಾಗರಿಕ" ಹಿನ್ನೆಲೆಯ ಜನರನ್ನು ಮತ್ತೊಂದು ಸುಸಂಸ್ಕೃತ ನಾಗರೀಕತೆಗೆ ನೇರವಾಗಿ ತಂದು ಬಿಡುವ ಮುನ್ನ ಆ ನಿರಾಶ್ರಿತರನ್ನು ಒಂದು ಕ್ಯಾಂಪಿನಲ್ಲಿಟ್ಟು, ಶಿಕ್ಷಣ ಕೊಟ್ಟು ಅವರನ್ನು ಸಮಾಜದಲ್ಲಿ ಬೆರೆಯುವಂತೆ ಮಾಡಬೇಕಾಗಿದ್ದಿತು. ಆದರೆ ಅದು ಮಾನವ ವಿರೋಧಿ ಧೋರಣೆ ಎಂದು ಆಕೆ ನೇರವಾಗಿ ಆ ಜನರನ್ನು ಜರ್ಮನಿಯ ಮುಖ್ಯವಾಹಿನಿಗೆ ತಂದಳು. ಅದರ ಫಲಶ್ರುತಿಯಾಗಿ ಆ ನಿರಾಶ್ರಿತ "ಅನಾಗರಿಕ"ರು ಸುಲಿಗೆ, ಕಳ್ಳತನ ಅತ್ಯಾಚಾರವಲ್ಲದೆ ಸ್ಪುರದ್ರೂಪಿ ಜರ್ಮನ್ ಬಾಲಕರನ್ನು ಕೂಡಾ ಬಲಾತ್ಕಾರಿಸಲಾರಂಭಿಸಿದರು. ಈ ಅನಾಗರಿಕ ವರ್ತನೆಗಳ ವಿರುದ್ಧ ಜರ್ಮನರು ದಂಗೆದ್ದು ನಿರಾಶ್ರಿತರ ಮೇಲೆ ದಾಳಿ ಮಾಡಲಾರಂಭಿಸಿದರು. ಇದು ಬಲಪಂಥವೇ?

ಹೀಗೆ ಆಯಾಯ ದೇಶಕ್ಕೆ ಅದರದೇ ಕಾರಣದ ಆಯಾಮಗಳಿರುತ್ತವೆ. ಹಾಗಾಗಿ ಅವೆಲ್ಲವನ್ನೂ ನಮ್ಮ ಮೂಗಿನ ನೀರಕ್ಕೆ ಹೋಲಿಸಿ ಜಗತ್ತೇ ಬಲಪಂಥದೆಡೆ ಸಾಗುತ್ತಿದೆ ಎನ್ನುವುದು ನಮ್ಮಲ್ಲಿನ ಪೂರ್ವಾಗ್ರಹವೆನಿಸಿಬಿಡುತ್ತದೆ.

ಪ್ರಶ್ನೆ 2: ಅಮೆರಿಕಾ ವಲಸೆಗಾರರನ್ನು ಎರಡನೇ ದರ್ಜೆಯವರಂತೆ ಕಾಣುತ್ತದೆ ಮತ್ತು ಯಾರೂ ಮಾಡಲಿಚ್ಛಿಸದ ಉದ್ಯೋಗಗಳನ್ನು ಮಾತ್ರ ಅವರಿಗೆ ಕೊಡುತ್ತದೆ. ಇದು ಅಮೇರಿಕಾದವರ "ಬಂಡವಾಳಶಾಹಿ ಮನಸ್ಥಿತಿ".  ನಾನು ಸಾಕಷ್ಟು ಸಾರಿ ಅಮೆರಿಕೆಗೆ ಹೋಗಿದ್ದೇನೆ ಮತ್ತು ಇದನ್ನು ಕಂಡಿದ್ದೇನೆ. ಅಲ್ಲಿನ ಹೋಟೆಲ್ ಮತ್ತು ದಿನಸಿ ಅಂಗಡಿಗಳಲ್ಲಿ ಕೆಲಸ ಮಾಡುವವರೆಲ್ಲಾ ಭಾರತೀಯರು ಅಥವಾ ಪಾಕಿಸ್ತಾನಿಯರು. ಅಲ್ಲಿನ ಕಕ್ಕಸ್ಸು ತೊಳೆಯುವವರು ಮೆಕ್ಸಿಕನ್ನರು.

ಉತ್ತರ: ನೋಡಿ ತಾವು ಅಮೇರಿಕಾದಲ್ಲಿ ಇಳಿದ ತಕ್ಷಣ ಕಂಡ ಕಸ್ಟಮ್ಸ್ ಯಾ ಇಮಿಗ್ರೇಷನ್ ಅಧಿಕಾರಿ ನಿಮ್ಮನ್ನು ಯಾವುದೇ ಭಾರತದ ಅಧಿಕಾರಿಯ ಅಧಿಕಾರಶಾಹಿ ಗತ್ತಿನಲ್ಲಿ ಮಾತನಾಡಿಸಿದನೆ? ಅಥವ ತಮಗೆ ವಾಕಿಂಗ್ ಹೋಗುವಾಗಲೋ, ಮಾಲುಗಳಲ್ಲೋ ಸಿಕ್ಕ ಅಮೇರಿಕನ್ನರು ನಿಮ್ಮನ್ನು ಎರಡನೇ ದರ್ಜೆಯ ನಾಗರಿಕರನ್ನು ಕಂಡಂತೆ ವ್ಯವಹರಿಸಿದರೆ? ಇಲ್ಲ ತಾನೇ! ನಿಮಗೆ ಹಾಗೆನ್ನಿಸಲು ಒಂದು ಕಾರಣವಿದೆ. ಅದು ನೀವು ಅಮೇರಿಕೆಗೆ ಹೋದದ್ದು ತಮ್ಮ ಆಪ್ತೇಷ್ಟರನ್ನು ಕಾಣಲು.

ಹಾಗಾಗಿ ತಮ್ಮ ಹೇಳಿಕೆಯಿಂದಲೇ ನಾನು ಹೇಳಬಲ್ಲೆ ನೀವು ಅಮೆರಿಕದಲ್ಲಿ ಕೇವಲ ಭಾರತೀಯ ಮೂಲದ ಹೋಟೆಲ್ ಮತ್ತು ದಿನಸಿ ಅಂಗಡಿಗಳಿಗೆ ಮಾತ್ರ ಭೇಟಿ ಕೊಟ್ಟಿದ್ದೀರಿ. ಹಾಗಾಗಿಯೇ ಸಹಜವಾಗಿ ಅಲ್ಲಿ ಕೆಲಸ ಮಾಡುವ ಕೇವಲ ಭಾರತೀಯ ಮೂಲದವರನ್ನು ಮಾತ್ರ ಕಂಡಿದ್ದೀರಿ ಮತ್ತು ಕಕ್ಕಸ್ಸು ತೊಳೆಯುವ ಮೆಕ್ಸಿಕನ್ನನನ್ನು ಕಂಡಿದ್ದೀರಿ. ಇಲ್ಲಿ ಶೋಷಣೆ ಇದ್ದರೆ ಅದು ಒಬ್ಬ ಲೀಗಲ್ ವಲಸಿಗ (ಭಾರತೀಯ) ಮತ್ತೊಬ್ಬ ಇಲ್ಲೀಗಲ್ ವಲಸಿಗನ (ಮೆಕ್ಸಿಕನ್) ಪರಿಸ್ಥಿತಿಯ ಶೋಷಣೆ ಇರುತ್ತದೆಯೇ ಹೊರತು ಮತ್ಯಾವ ಅಮೇರಿಕನ್ ಶೋಷಣೆ ಇರುವುದಿಲ್ಲ.

ನೀವು ಯಾವುದೇ ಅಮೇರಿಕನ್ ಮೂಲದ ಹೋಟೆಲ್, ದಿನಸಿ ಅಂಗಡಿ ಯಾ ಯಾವುದೇ ರಿಟೇಲ್ ಅಂಗಡಿ ಮುಂಗಟ್ಟುಗಳಿಗೆ ಹೋದರೆ ನಿಮಗೆ ಅಲ್ಲಿ ವೇಟರ್, ಹೆಲ್ಪರ್, ಗುಮಾಸ್ತ, ಕೂಲಿಯಷ್ಟೇ ಅಲ್ಲದೆ ಕಕ್ಕಸ್ಸು ತೊಳೆಯುವ ಬಿಳಿಯ ಅಮೇರಿಕನ್ ಕೂಡ ಕಾಣುತ್ತಾನೆ.

ಹಾಗಾಗಿ ದಯವಿಟ್ಟು ಮತ್ತೊಮ್ಮೆ ಅಮೇರಿಕೆಗೆ ಅಮೇರಿಕಾವನ್ನು ಕಾಣುವ ಸಲುವಾಗಿ ಭೇಟಿ ಕೊಡಿ. ಕೇವಲ ನಿಮ್ಮ ಮಕ್ಕಳನ್ನು ಕಂಡು ಅಮೆರಿಕಾದಲ್ಲಿಯೂ ಇಡ್ಲಿ ದೋಸೆ ತಿನ್ನದೇ ಅಮೆರಿಕಾದ ಆಹಾರವನ್ನೂ ತಿಂದು ನಿಜದ ಅಮೇರಿಕನ್ ಸಂಸ್ಕೃತಿಯನ್ನು ನೋಡಿಕೊಂಡು ಬನ್ನಿ.

ಪ್ರಶ್ನೆ 3: ಮೋದಿಯನ್ನು ವಿನಾ ಕಾರಣ ಏಕೆ ಬೆಂಬಲಿಸುತ್ತೀರಿ.

ಉತ್ತರ: ಮೋದಿಯನ್ನು ನಾನು ವ್ಯಕ್ತಿಗತವಾಗಿ ಬೆಂಬಲಿಸದೆ ಕೇವಲ ಆತನ ಕೆಲವು ಪಾಲಿಸಿಗಳಿಗೆ ತರ್ಕಬದ್ಧವಾಗಿ ಬೆಂಬಲಿಸಿದ್ದೇನೆ. ಹಾಗಾಗಿ ಆತನ ಒಂದು ಪಾಲಿಸಿಯನ್ನು ಹೇಳಿ, ಆ ಕುರಿತು ಮಾತನಾಡೋಣ ಎಂದಾಗ ನನಗೆ ಕೊಟ್ಟ ವಿಷಯ ನೋಟ್ ಬ್ಯಾನ್.

ನೋಟ್ ಬ್ಯಾನ್ ಒಂದು ಉತ್ತಮ ನಿರ್ಣಯ. ಅದರಿಂದ ಚಾಲನೆಯಲ್ಲಿದ್ದ ಎಲ್ಲಾ ನೋಟುಗಳು ಎಲ್ಲಿಂದ ಬಂದವೆಂಬ ಆಡಿಟ್ ಟ್ರೇಲ್ ಸಿಕ್ಕಿದೆ. ಆ ಆಡಿಟ್ ಟ್ರೇಲ್ ಹಿಡಿದು ಯಾವ ಖಾತೆಗೆ ಇಪ್ಪತ್ತೈದು ಲಕ್ಷಕ್ಕಿಂತ ಅಥವಾ ಐವತ್ತು ಲಕ್ಷಕ್ಕಿಂತ ಅಧಿಕ ಜಮಾವಣೆಯಾಗಿದೆ ಅವರೆಲ್ಲಾ ಲೆಕ್ಕ ಕೊಡಿ ಎಂದರೆ ಅದರ ಪೂರ್ಣ ಫಲ ಸಿಗಲಿದೆ. ಹಾಗೆ ಮಾಡಿರೆಂದು ನಿಮ್ಮನ್ನೂ ಸೇರಿ ಯಾರಾದರೂ ಪ್ರಗತಿಪರರು ಪ್ರಶ್ನಿಸಿದ್ದೀರೇ? ಇಲ್ಲ, ಇನ್ನು ನೋಟು ಬದಲಾಯಿಸಿಕೊಳ್ಳಲು ಜನ ಕ್ಯೂನಲ್ಲಿ ಸತ್ತರೆಂದು ಬೊಬ್ಬಿರಿದದ್ದೇ ಹಾಸ್ಯಾಸ್ಪದ. ಜನ ನೀರಿಲ್ಲದೇ ಸತ್ತಾರೆಯೇ ವಿನಹ ನೋಟಿಲ್ಲದೇ ಸಾಯುವುದಿಲ್ಲ. ಒಬ್ಬ ಕೃಷಿ ಕಾರ್ಮಿಕ ಕೂಡಾ ಉದ್ರಿ ಮೇಲೆಯೇ ದಿನಸಿ ಸಾಮಾನು ತರುವುದು. ಇಡೀ ಭಾರತದ ಅರ್ಥವ್ಯವಸ್ಥೆ ನಿಂತಿರುವುದೇ ಉದ್ರಿ ವ್ಯವಹಾರದ ಮೇಲೆ! ನನ್ನ ಅಜ್ಜನ ಕಾಲದಿಂದಲೂ ಉದ್ರಿ ಹುಂಡಿ ವ್ಯವಸ್ಥೆ ಇದ್ದಿತು.  ನಾನೊಬ್ಬ ಮಾಜಿ ದಿನಸಿ ಅಂಗಡಿ, ದಲಾಲಿ ಮಂಡಿ ನೌಕರ. ಈ ಉದ್ರಿ ವ್ಯವಹಾರದ ಅನುಭವ ನಿಮ್ಮೆಲ್ಲರಿಗಿಂತ ನನಗೆ ಚೆನ್ನಾಗಿದೆ. ಇನ್ನೂ ಉದ್ರಿ ವ್ಯವಹಾರದ ವಿವರಗಳು ಬೇಕಿದ್ದರೆ ಕೇಳಿ, ರೈತ-ಬೀಜ/ಗೊಬ್ಬರದ ಅಂಗಡಿ-ದಲಾಲಿ ಮಂಡಿ-ಖರೀದಿ ಮಂಡಿಗಳ ಉದ್ರಿ ಕುರಿತು ಗಂಟೆಗಟ್ಟಲೆ ಆ ವ್ಯವಹಾರ ಸೂತ್ರಗಳನ್ನು ಬಿಚ್ಚಿಡುವೆ. ಹಾಗಾಗಿ ನೋಟಿಲ್ಲದೇ ಜನ ಸತ್ತರೆಂಬುದು ಅವಾಸ್ತವ. ಈ ರೀತಿಯಾಗಿ ತಾರ್ಕಿಕ ಮೋದಿ ವಿರೋಧ ಸೃಷ್ಟಿಯಾಗದ ಕಾರಣ ಮೋದಿ ಎರಡನೇ ಬಾರಿ ಇನ್ನೂ ಹೆಚ್ಚಿನ ಗೆಲುವು ಸಾಧಿಸಿದ್ದುದು. ಈ ರೀತಿಯ ಆತಾರ್ಕಿಕ ವಿರೋಧ ಮುಂದುವರಿದದ್ದೇ ಆದರೆ ನಿಮ್ಮ ವಿಷಾದದ ಶೋಕ ಕೂಡಾ ಹೆಚ್ಚಲಿದೆ. ಹಾಗಾಗಿ ಒಂದು ಪ್ರಮುಖ ವಿರೋಧಪಕ್ಷ ಸೃಷ್ಟಿಗಾದರೂ ನಾವೆಲ್ಲರೂ ತಾರ್ಕಿಕ ಮೌಲ್ಯಯುತ ಹೋರಾಟವನ್ನು ಸೃಷ್ಟಿಸಬೇಕು.

No comments: