OCI Et al

 "ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ", "ಕನ್ನಡ ಎನೆ ಕುಣಿದಾಡುವುದೆನ್ನೆದೆ", "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂಬ ಸಾಲುಗಳು ಹೇಗೆ ನಮ್ಮಲ್ಲಿ ಒಂದು ಮಿಂಚು ಮೂಡಿಸಿ ಪ್ರಾಣವನ್ನೇ ಕೊಟ್ಟೇವು ಎನ್ನುವಷ್ಟು ಭ್ರಾಮಕ ಭಾವನೆಯನ್ನು ಮೂಡಿಸುವವೋ ಅದಕ್ಕೆ ನೂರ್ಪಟ್ಟು ಭಾವನೆಯನ್ನು ಅನಿವಾಸಿಗಳಲ್ಲಿ "ಸಾಗರೋತ್ತರ ಭಾರತೀಯ ಪ್ರಜೆ" ಎಂಬ ಸಾಲು ಮತ್ತದನ್ನು ದೃಢೀಕರಿಸುವ ಸರ್ಕಾರಿ ಪತ್ರವು ಮೂಡಿಸುವುದು. ಅಂತೆಯೇ ಒಂದು ಆಂತರಿಕ ಅನಿವಾಸಿತನಕ್ಕೆ ಸಿಲುಕಿ ಅಂತರಿಕ್ಷಕ್ಕೆ ಹಾರಿದ್ದ ರವೀಶ್ ಮಲ್ಹೋತ್ರಾ ಸಹ ಅಂದು ಪ್ರಧಾನಿ ಇಂದಿರಗಾಂಧಿಯವರು "ಅಂತರಿಕ್ಷದಿಂದ ಭಾರತ ಹೇಗೆ ಕಾಣಿಸುತ್ತದೆ?" ಎಂದಾಗ "ಸಾರೇ ಜಹಾನ್ ಸೆ ಅಚ್ಚಾ" ಎಂದು ಹೇಳಿ ಕೋಟ್ಯಾಂತರ ಭಾರತೀಯರಲ್ಲಿ ಪುಳಕವನ್ನುಂಟುಮಾಡಿದ್ದರು. ಇದು ಭಾವನೆಗಳನ್ನು ಮೀಟುವ ಕಲೆ!

ಅಟಲ್ ಬಿಹಾರಿ ವಾಜಪೇಯಿಯವರು ಅನಿವಾಸಿ ಭಾರತೀಯರಿಗೆ ದ್ವಿಪೌರತ್ವ ಕೊಡುವ ಯೋಜನೆಯ ಆರಂಭಿಕ ಹಂತವಾಗಿ "Person of Indian Origin (PIO) ಯಾನೆ ಭಾರತೀಯ ಮೂಲದ ವ್ಯಕ್ತಿ" ಎಂಬ ಕಾರ್ಡನ್ನು ಜಾರಿಗೊಳಿಸಿ ಅನಿವಾಸಿಗಳಲ್ಲಿ ಪುಳಕವನ್ನುಂಟು ಮಾಡಿ ಭಾವನೆಗಳನ್ನು ಮೀಟಿದ್ದರು. ಇಲ್ಲಿ ದಯಮಾಡಿ ಪಂಕಜ್ ಉದಾಸನ "ಚಿಟ್ಟಿ ಆಯಿ ಹೈ ವತನ್ ಸೇ ಚಿಟ್ಟಿ..." ಹಾಡು ಮತ್ತದರ ಸಿನೆಮಾ ಚಿತ್ರಣದ ದೃಶ್ಯವನ್ನು ಜ್ಞಾಪಿಸಿಕೊಳ್ಳಬೇಕಾಗಿ ವಿನಂತಿ.  ೨೦೦೫ ರಲ್ಲಿ ಕಾಂಗ್ರೆಸ್ ಸರ್ಕಾರ ದ್ವಿಪೌರತ್ವದ ಮುಂದಿನ ಹಂತವಾಗಿ OCI ಎಂದು ಇನ್ನಷ್ಟು ಮೀಟಿ ಅನಿವಾಸಿಗಳಲ್ಲಿ ದೇಶಭಕ್ತಿಯ ಹುಚ್ಚು ಹೊಳೆ ಹರಿಯುವಂತೆ ಮಾಡಿತು.  ಮತ್ತದೇ ಪಂಕಜ್ ಉದಾಸನ "ಚಿಟ್ಟಿ ಆಯಿ ಹೈ ವತನ್ ಸೇ ಚಿಟ್ಟಿ..." ಹಾಡು ಮತ್ತದರ ಸಿನೆಮಾ ಚಿತ್ರಣದ ದೃಶ್ಯವನ್ನು ಜ್ಞಾಪಿಸಿಕೊಳ್ಳಬೇಕಾಗಿ ವಿನಂತಿ.

ಕೇವಲ ಓಟು, ಸರ್ಕಾರಿ ನೌಕರಿ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಬಿಟ್ಟರೆ ಇನ್ನೆಲ್ಲಾ ಸಮಾನ ನಾಗರಿಕ ಹಕ್ಕುಗಳು ನಿಮ್ಮವು ಎಂಬ ಭಾರತ ಸರ್ಕಾರದ ಕರೆಗೆ ಓಗೊಟ್ಟು, ೨೦೦೫ ರಿಂದ ಸಾಕಷ್ಟು ಅನಿವಾಸಿಗಳು ಹಿಂದೆ ಮುಂದೆ ನೋಡದೆ ಭಾವುಕರಾಗಿ ತಾವಿದ್ದ ದೇಶಕ್ಕಿಂತ ಭಾರತದಲ್ಲಿ ಮನೆ ಮಠ ಮಾಡುವುದರೊಂದಿಗೆ ಭಾಷೆ, ತಾಯ್ನಾಡಿನ ಪ್ರತಿರೂಪವೇ ಆದ ಪಿತ್ರಾರ್ಜಿತ ಕೃಷಿ ಭೂಮಿಗೆ ಹಣ ಸುರಿಸುರಿದು ಹಾಕಿದರು. OCI ಎಂಬ ಚಿಟ್ಟಿ ಹಿಡಿದು ಭಾರತ್ ಕಿ ಮಿಟ್ಟಿಯನ್ನು ಹಣೆಗೆ ಪೂಸಿಕೊಂಡರು. ಅಂತಹ ಮಿಂಚಿನ ಸಂಚಾರವನ್ನು "ಸಾಗರೋತ್ತರ ಭಾರತೀಯ ಪ್ರಜೆ" ಸೃಷ್ಟಿಸಿತು. ವೈಭವೀಕರಣದ ಉದ್ಘೋಷದ ಆಮಿಷಕ್ಕೆ ಬಿದ್ದ ಅನಿವಾಸಿಗಳು ಭಾರತೀಯ ದೂತಾವಾಸದ ವೀಸಾ ಜಂಜಾಟದಿಂದ ಮುಕ್ತಿ ಸಿಕ್ಕಿತೆಂದು ಈ "ಸಾಗರೋತ್ತರ ಭಾರತೀಯ ಪ್ರಜೆ"ಗಳಾಗಿ OCI ಯೋಜನೆಯನ್ನು ಅಭೂತಪೂರ್ವಗೊಳಿಸಿದರು.

ಭಾರತೀಯ ಪೌರತ್ವ ಕಾಯ್ದೆ ೧೯೫೫ ಸೆಕ್ಷನ್ ೮ ರ ಪ್ರಕಾರ ಇತರೆ ದೇಶದ ಪೌರತ್ವ ಪಡೆದ ವಯಸ್ಕ ಸ್ಥಿಮಿತ ಬುದ್ದಿಯ "ಹುಟ್ಟು" ಭಾರತೀಯ ಪ್ರಜೆಯು "ಸ್ವಇಚ್ಛೆ"ಯಿಂದ ತನ್ನ ಭಾರತೀಯ ಪೌರತ್ವವನ್ನು ಕೇಂದ್ರ ಸರ್ಕಾರಿ ನಿಯೋಜಿತ ಕ್ರಮದ ಪ್ರಕಾರ ತ್ಯಜಿಸಿದರೆ ಆಗ ಅವನ/ಳ ಭಾರತೀಯ ಪೌರತ್ವ ಅಂತ್ಯವಾಗುತ್ತದೆ. ಒಂದು ವೇಳೆ ಆತನ/ಆಕೆಯ ಭಾರತೀಯ ಪೌರತ್ವವು "ವಲಸೆ ಮೂಲಕ" ಪಡೆದಿದ್ದುದಾಗಿ ಮತ್ತು ಆತನು/ಆಕೆಯು ಇನ್ನೊಂದು ದೇಶದ ಪೌರತ್ವ ಪಡೆದರೆ ಆಗ ಆತನ/ಅವಳ ಭಾರತೀಯ ಪೌರತ್ವವು ತಕ್ಷಣಕ್ಕೆ ರದ್ದಾಗುತ್ತದೆ.

ಅಂದರೆ ಹುಟ್ಟಿನಿಂದ (ಜನವರಿ ೨೬, ೧೯೫೦ ರಂದು ಯಾ ನಂತರ ಭಾರತದಲ್ಲಿ ಜನಿಸಿದವರು ಹುಟ್ಟಿನಿಂದ ಭಾರತೀಯರು) ಅಥವಾ ಪಿತ್ರಾರ್ಜಿತವಾಗಿ ಭಾರತೀಯ ಪೌರತ್ವ ಪಡೆದ ವ್ಯಕ್ತಿಯು (ಜನವರಿ ೨೬, ೧೯೫೦ ರಂದು ಯಾ ನಂತರ ಭಾರತದಲ್ಲಿ ಜನಿಸಿದ ಭಾರತೀಯನ ಮಗ(ಳು)) ತನ್ನ ಪೌರತ್ವವನ್ನು ಕೇಂದ್ರ ಸರ್ಕಾರ ನಿಯೋಜಿಸಿದ ನಿಯಮದ ಪ್ರಕಾರ ಕಡ್ಡಾಯವಾಗಿ ಪರಿತ್ಯಾಗ ಮಾಡಿದಾಗ ಮಾತ್ರ ಆತನ/ಆಕೆಯ ಪೌರತ್ವ ರದ್ದಾಗುತ್ತದೆ. ಅದು ಆತನ ಭಾರತೀಯ ಸಂಜಾತ ಸಂವಿಧಾನಿಕ ಹಕ್ಕು.

"ಹುಟ್ಟಿದ ಮಗುವಿನ ಹೊಕ್ಕಳ ಬಳ್ಳಿಯನ್ನು ಕತ್ತರಿಸಿ ಯಾವ ಭೂಮಿಯಲ್ಲಿ ಹುಗಿಯುತ್ತಾರೋ ಅದೇ ಆ ಮಗುವಿನ ಮಾತೃಭೂಮಿ" ಎಂಬ ಅನ್ನು ಕಪೂರ್ ಉದ್ಘೋಷವನ್ನು ಇಲ್ಲಿ ನೆನಪಿಸಿಕೊಳ್ಳುವುದು ಕಡ್ಡಾಯ.

ಮೊದಲೆಲ್ಲ  ಈ "ಸಾಗರೋತ್ತರ ಭಾರತೀಯ ಪ್ರಜೆ"ಯಾಗಲು ಈ ಭಾರತೀಯ "ಪೌರತ್ವ ಪರಿತ್ಯಾಗ" (Renounciation of Indian Citizenship) ಅವಶ್ಯ ಇರಲಿಲ್ಲ.  ಕ್ರಮೇಣವಾಗಿ ಕೇಂದ್ರ ಸರ್ಕಾರ ಮೇಲಿನ ಪೌರತ್ವ ಕಾಯ್ದೆ ೧೯೫೫ ರ ಸೆಕ್ಷನ್ ೮ ರ ಪೌರತ್ವ ಪರಿತ್ಯಾಗವನ್ನು OCI ಪಡೆಯಲು ಅದ್ಯಾವ ಕಾರಣಕ್ಕೋ ಕಡ್ಡಾಯಗೊಳಿಸಿತು. ಅನಿವಾಸಿಗಳು ಸಾಗರೋತ್ತರ ಪೌರರಾಗಲು ಈ ಒಳನಾಡು ಪೌರತ್ವ ಪರಿತ್ಯಾಗ ಅವಶ್ಯಕ ಎಂದು ವಯಸ್ಕ/ಸ್ಥಿಮಿತ ಬುದ್ದಿಯ ಅನಿವಾಸಿಗಳಿಗೆ ನಿರ್ದೇಶಿಸಿತು. ಅಲ್ಲಿಗೆ ಯಾವ ಅನಿವಾಸಿಯೂ ಇದನ್ನು "ಸ್ವಇಚ್ಛೆಯಿಂದ ಪರಿತ್ಯಾಗ" ಮಾಡಿದ್ದಲ್ಲ, ಕಡ್ಡಾಯವಾಗಿ ಸರ್ಕಾರಿ ನಿರ್ದೇಶನದಿಂದ ಮಾಡಿದ್ದು ಎಂಬುದು ಗಮನಾರ್ಹ. ಇದು ಹುಟ್ಟಿನಿಂದ ಅಥವಾ ಪಿತ್ರಾರ್ಜಿತವಾಗಿ ಭಾರತೀಯ ಪೌರತ್ವ ಪಡೆದುಕೊಂಡವನ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ! 

ಇದರ ಅನುಷ್ಠಾನ ಆದದ್ದು ಕಾಂಗ್ರೆಸ್ ಸರ್ಕಾರದಲ್ಲಿ.

ಇಂತಹ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯ ಮೇಲೆ ಮಾರಣಾಂತಿಕ ಉಲ್ಲಂಘನೆಯನ್ನು ಮೋದಿ ಸರ್ಕಾರದ ಪೌರತ್ವ ಕಾಯ್ದೆ ತಿದ್ದುಪಡಿ ೨೦೧೯ ತಂದಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾ ದೇಶಗಳಲ್ಲಿನ ಹಿಂದೂ, ಬೌದ್ಧ, ಜೈನ, ಪಾರ್ಸಿ, ಕ್ರಿಶ್ಚಿಯನ್ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು. ಆದರೆ ಈ ಅಬ್ಬರದ ತಿದ್ದುಪಡಿಯ ನಡುವೆ ನಿಶ್ಶಬ್ದವಾಗಿ, "ಸಾಗರೋತ್ತರ ಭಾರತೀಯ ಪ್ರಜೆಯು ಕೊಲೆಯಂತಹ ಘೋರ ಅಪರಾಧದಿಂದ ಹಿಡಿದು ಯಾವುದೇ ಅತಿ ಸಣ್ಣ ಕಾನೂನು ಉಲ್ಲಂಘನೆ ಮಾಡಿದರೂ ಅವನ/ಅವಳ ಸಾಗರೋತ್ತರ ಪೌರತ್ವವನ್ನು ಸರ್ಕಾರ ರದ್ದು ಮಾಡಬಹುದು" ಎಂಬ ತಿದ್ದುಪಡಿಯನ್ನೂ ಸೇರಿಸಿಬಿಟ್ಟಿದೆ. ಅಂದರೆ ಯಾವುದೇ ಒಂದು ಸಣ್ಣ ಟ್ರಾಫಿಕ್ ತಪ್ಪು ಸಾಗರೋತ್ತರ ಪ್ರಜೆಯನ್ನು ಹದಿನೈದು ದಿನದಲ್ಲಿ ಸಾಗರೋತ್ತರಕ್ಕೆ ಗಡಿಪಾರು ಮಾಡಬಹುದು. ಅಂತಹ ಪ್ರಯೋಗವನ್ನು ಕೃಷಿ ಕಾಯ್ದೆ ವಿರೋಧಿಸಿ ಚಳುವಳಿ ಮಾಡಿದವರನ್ನು ಬೆಂಬಲಿಸಿದ OCIಗಳ ಮೇಲೆ ಮಾಡಲಾಗಿದೆ ಎಂಬ ಕೂಗಿದೆ. ಇತ್ತೀಚೆಗೆ ಅಹಿಂಸಾ ಚೇತನ್ ಮೇಲೆ ಸಹ ಈ ಪ್ರಯತ್ನ ನಡೆದಿದೆಯೆಂದರೆ, ಈ ತಿದ್ದುಪಡಿಯ ಹಿಂದಿನ ಉದ್ದೇಶ ಸ್ಪಷ್ಟ. ಅಲ್ಲಿಗೆ OCI ಚಿಟ್ಟಿ ಕೊಟ್ಟು ಅನಿವಾಸಿಗಳನ್ನು ಮಿಟ್ಟಿಯಲ್ಲಿ ಸರಿಯಾಗಿ ಮಿಲಾಯಿಸಲಾಯಿತು.

ಇರಲಿ, ಇದು ಸ್ಪಷ್ಟವಾಗಿ ಸಂವಿಧಾನದ ಸಮಾನ ನ್ಯಾಯ ಮತ್ತು ಸ್ವಾತಂತ್ಯದ ಹಕ್ಕುಗಳ ಉಲ್ಲಂಘನೆ.

ಯಾವ ದೇಶದಲ್ಲಿಯೂ ಇಂತಹ ಸರ್ವಾಧಿಕಾರಿ ಧೋರಣೆಯ ವೀಸಾ ರದ್ದತಿ ನಿಯಮಗಳು ಇಲ್ಲ! ಸೌದಿಯಲ್ಲಿ ಸಹ ಆಯಾಯ ತಪ್ಪಿಗೆ ಇಂತಿಷ್ಟು ಛಡಿಯೇಟಿನ ಶಿಕ್ಷೆ ಇದೆಯೇ ಹೊರತು ವೀಸಾ ರದ್ದತಿಯಂತಹ ಶಿಕ್ಷೆ ನನಗೆ ತಿಳಿದಂತೆ ಇಲ್ಲ. ಸೌದಿ ಬಿಡಿ, ಯಾವ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿಯೂ ಇಂತಹ ಅಸಂವಿಧಾನಿಕ ನಡೆ ಇಲ್ಲ.

ಯಾವ ಒಂದೊಮ್ಮೆಯ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ, ಜಿನ್ನಾ, ಅಂಬೇಡ್ಕರ್ ಭಾರತದ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಅನುಷ್ಠಾನಕ್ಕೆ ಸಂಘರ್ಷಿಸಿದ್ದರೋ ಅಂತಹ ಅನಿವಾಸಿಗಳನ್ನು ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳಲ್ಲಿ ಪರದೇಸಿಗಳನ್ನಾಗಿ ಮಾಡಲಾಗುತ್ತಿದೆ. ಯಾವ ಕಾರಣಕ್ಕೆ ಎಂದು ಗೊತ್ತಿಲ್ಲ!

"ಅಬ್ ಕಿ ಬಾರ್ ಟ್ರಂಪ್ ಸರ್ಕಾರ್" ಎಂದು ಟೆಕ್ಸಾಸಿನಲ್ಲಿ ಚಪ್ಪಾಳೆ ಹೊಡೆದು ಕೇಕೆ ಹಾಕಿದ್ದ ಅಸಂಖ್ಯಾತ ಅನಿವಾಸಿ ಸಾಗರೋತ್ತರ ಭಾರತೀಯ ಪ್ರಜೆಗಳಿಗೆ ಈ ವಿಷಯ ಗೊತ್ತಿದೆಯೋ ಅಥವಾ ಒಳನಾಡು ಭಾರತೀಯರಂತೆಯೇ ಅವರೂ ಭಕ್ತಿ ಪರವಶತೆಯ ಸ್ಟಾಕ್ಹೋಮ್ ಸಿಂಡ್ರೋಮಿಗೆ ಒಳಗಾಗಿ ಭಾವುಕತೆಯ ಮೀಟಿಸಿಕೊಂಡು "ಘರ್ ಘರ್, ಬಾರ್ ಬಾರ್" ಎನ್ನುತ್ತಿದ್ದಾರೋ ಗೊತ್ತಿಲ್ಲ. ಒಟ್ಟಾರೆ, "ಮೇರಾ ಭಾರತ್ ಮಹಾನ್", "ಮೇಕ್ ಇನ್ ಇಂಡಿಯಾ", "ನಾವೆಲ್ಲಾ ಒಂದು" ಮುಂತಾದ ಭಾವುಕ ಭ್ರಾಮಕ ಉದ್ಘೋಷಗಳಂತೆಯೇ ಈ "ಸಾಗರೋತ್ತರ ಭಾರತೀಯ ಪ್ರಜೆ" ಎಂಬ ಉದ್ಘೋಷಿತ ವೈಭವೀಕೃತ ಚಿಟ್ಟಿ ಮಿಟ್ಟಿಯಲ್ಲಿ ಹಾಕಿ ಮುಚ್ಚುವ ಒಂದು ವೀಸಾ ಮಾತ್ರ!

ಇಂತಹ ಉದ್ಘೋಷಿತ ವೀಸಾ ನಂಬಿ ನಮ್ಮ ಹಕ್ಕನ್ನು ನಾವೇ ಮೊಟಕಿಸಿಕೊಂಡು ಇರುವುದನ್ನೆಲ್ಲಾ ಭಾರತಕ್ಕೆ ಧಾರೆಯೆರೆದು ಲೆಂಕರಾಗಿರುವ ನಮ್ಮಂತಹ ಭಾವುಕ ಭ್ರಾಮಕ ಸಾಗರೋತ್ತರ ಭಾರತೀಯ ದೇಶಭಕ್ತರು ಎಲ್ಲಿಯಾದರೂ ಸಿಗುವುದುಂಟೆ?!? ಕೇವಲ ತಾಯ್ನಾಡು ಎಂಬ ಭಾವುಕತೆಯಲ್ಲಿ ದುಡಿದದ್ದೆಲ್ಲವನ್ನು ತಂದು ಸುರಿದವನನ್ನು ಒಂದು ಯಕಶ್ಚಿತ್ ಒಮ್ಮುಖ ರಸ್ತೆ ಪ್ರವೇಶಿಸಿದ್ದಕ್ಕೆ ಬಲಿಮಾಡಿ ಗಡಿಪಾರು ಮಾಡುವ ನಡೆ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ ನಡೆಯೆನಿಸುವುದೆ?! ಇನ್ನು ಈ ಅನಿವಾಸಿ ಯಾವ ಜಾತಿಯವನಾಗಿದ್ದರೂ ಮೀಸಲಾತಿ ಪಡೆಯಬಾರದು, ಪತ್ರಿಕೋದ್ಯಮದಲ್ಲಿ ಪರವಾನಗಿ ಇಲ್ಲದೇ ತೊಡಗಬಾರದು, ಪರ್ವತಾರೋಹಣ ಮಾಡಬಾರದು ಎನ್ನುವ freedom of speech, freedom of movement, freedom of availing social justice ಎನ್ನುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಬಗ್ಗೆ ಕೇಳುವವರು ಯಾರು?

ಹೋಬಳಿಯಂತಹ ಚಿಕ್ಕ ಚಿಕ್ಕ ಊರುಗಳಲ್ಲಿಯೂ "ಡಾಲರ್ ಕಾಲೋನಿ"ಗಳಿವೆಯೇ ಹೊರತು ಈ ಡಾಲರ್ ತರುವ ಸಹನಾಗರಿಕರನ್ನು ಪ್ರತಿನಿಧಿಸುವ ಯಾವ ಸಂಸದ, ಶಾಸಕನೂ ಇಲ್ಲ! ಏಕೆಂದರೆ ಈ ಅನಿವಾಸಿ ಬೇವರ್ಸಿಗಳಿಂದ ಒಂದು ಓಟು ಸಹ ಬೀಳುವುದಿಲ್ಲ.

ಹಾಗಾಗಿ ಈ ಅಸಂಖ್ಯಾತ ಸಾಗರೋತ್ತರ ಭಾರತೀಯ ಲೆಂಕ ದೇಶಭಕ್ತರಲ್ಲಿ ಕೆಲವರು ಈ OCI ಸಂಬಂಧಿತ ತಿದ್ದುಪಡಿಗಳು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಅವರಿಗೆ ಗೆಲುವಾಗಿ ಸಾಗರೋತ್ತರ ಭಾರತೀಯ ಪ್ರಜೆಗಳನ್ನು ಒಳಗೊಳ್ಳುವ ಪ್ರಕ್ರಿಯೆಗೆ ನ್ಯಾಯಾಂಗವು ಮುನ್ನುಡಿ ಬರೆದು, ಪ್ರಜಾಪ್ರಭುತ್ವವನ್ನೂ ಎತ್ತಿ ಹಿಡಿಯಲಿ ಎಂದು ಹಾರೈಸೋಣ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

'ಅರಿದಡೆ ಆರದು ಮರೆದಡೆ ಮೂರದು' ಕುರಿತು ನೀಲಾ ಅವರ ಅಭಿಪ್ರಾಯ

ಸಾಮಾಜಿಕ ಕಳಕಳಿಯ ಹೊತ್ತಗೆ 'ಅರಿದಡೆ ಆರದು ಮರೆದಡೆ ಮೂರದು' 


ನಾವೀನ್ಯಯುತ ಸಾಹಿತ್ಯಕ ಪ್ರಯೋಗವುಳ್ಳ ರವಿ ಹಂಜ್ ಅವರ 'ಅರಿದಡೆ ಆರದು ಮರೆದಡೆ ಮೂರದು' ಕಾದಂಬರಿಯು ಮಠೀಯ ವ್ಯವಸ್ಥೆಯನ್ನು ಅರಹುವ ಕೃತಿಯಾಗಿದೆ. ಸಂಶೋಧಕನಾತ್ಮಕ, ವಿಮರ್ಶಾತ್ಮಕ ಕೃತಿಗಳಿಗೆ ಹೆಸರಾಗಿರುವ ಲೇಖಕರ ಪ್ರಸ್ತುತ ಕೃತಿಯು ಇತಿಹಾಸ ಆಧಾರಿತ ಕಥನವು ಹೇಗೆ ಸಮಕಾಲೀನ ಜಗತ್ತಿನಲ್ಲೂ ಪುನರಾವರ್ತಿತವಾಗಿ ಮರುಕಳಿಸುತ್ತಲೇ ಇರುತ್ತದೆ ಎಂಬುದನ್ನು ಸಾಬೀತುಪಡಿಸುತ್ತದೆ. ಅಂತಹ ಸಾರ್ವತ್ರಿಕ ಶೀರ್ಷಿಕೆಯನ್ನು ಹೊಂದಿರುವ ಕಾದಂಬರಿಯು 'ವ್ಯಕ್ತಿಯೋರ್ವನು ತನ್ನ ಜೀವನದ ಪ್ರತಿಯೊಂದು ತಿರುವುಗಳಲ್ಲೂ ಅರಿತು ನಡೆದರೆ ಮಾತ್ರ ಸದ್ಗತಿಯನ್ನು ಹೊಂದಲು ಸಾಧ್ಯವೇ ವಿನಃ ತನ್ನ ಅಸ್ತಿತ್ವವನ್ನು, ಘನತೆಯನ್ನು ಮರೆತು ನಡೆದರೆ ದುಸ್ಥಿತಿಯು ಎದುರಾಗದೇ ಇರದು' ಎಂಬ ಸಾಮಾಜಿಕ ಕಳಕಳಿಯ ಸಂದೇಶವನ್ನು ಅರಹುತ್ತದೆ. ಲೇಖಕರ ಈವರೆಗಿನ ಕೃತಿಗಳನ್ನು ಗಮನಿಸಲಾಗಿ, ಸಂಶೋಧಕರು ಕಥೆಗಾರರಾದುದು ಯಾವಾಗ ಎಂದು ಬೆರಗು ಮೂಡಿಸುವ ಅವರ ಯಶಸ್ವಿ ಕಾದಂಬರಿ ಪ್ರಯೋಗವಾಗಿದೆ. ಕೃತಿಯ ಆರಂಭಿಕ ಅಧ್ಯಾಯ 'ಬಿಂಬಗಲ್ಲಿನ ಮೃಗವಧ ಸಂಸ್ಥಾನ'- ಕಥನದಿಂದ ಕೊನೆಯ ಅಧ್ಯಾಯ ಬಿಂಬಮಾಯೆಯ ವರೆಗೂ ಇದರ ಶೀರ್ಷಿಕೆಯ/ಮೌಲ್ಯದ ಸಮಂಜಸತೆಗೆ ಪಾತ್ರಗಳನ್ನು ಒರೆಗೆ ಹಚ್ಚುವ ಮೂಲಕ ನಿರಂತರವಾಗಿ ಅವರನ್ನು ಎಚ್ಚರಿಸುತ್ತಲೇ ಬರುತ್ತದೆ. ಆದಾಗ್ಯೂ 'ಮೇಲೇರಿದ್ದು ಕೆಳಗಿಳಿಯಲೇಬೇಕು' ಎಂಬ (ಲೇಖಕರ) ಸಾರ್ವತ್ರಿಕ ಉಕ್ತಿಯಂತೆ ಕಾಲನ ಕೈಯಲ್ಲಿ ಎಲ್ಲರೂ ಆಟಿಕೆಗಳೇ ಎನ್ನುವ ವಾಸ್ತವವನ್ನು ತೆರೆದಿಡುವ ಕಹಿ-ಸತ್ಯವನ್ನು ಇಲ್ಲಿ ತೋರ್ಪಡಿಸಲಾಗಿದೆ. 

 

*ಸಮಾಜದಲ್ಲಿ ಕಟ್ಟಳೆಗಳಿಲ್ಲದಿದ್ದರೆ ಮನುಷ್ಯನು ಅನ್ಯ ಮಾರ್ಗಗಳನ್ನು ತುಳಿಯುತ್ತಲೇ ಇರಲಿಲ್ಲ. ಸಮಾಜವು ಒಡ್ಡುವ ಅತಿರೇಕದ ಕಟ್ಟಳೆಗಳಿಂದಲೇ ಬಹುಶಃ ಮನುಷ್ಯನ ಮರ್ಕಟ ಮನಸ್ಸು ಅವುಗಳಿಗೆಲ್ಲ ಪ್ರತಿರೋಧವೊಡ್ಡಿ, ದಾರಿತಪ್ಪಿ ಅನಾಹುತಗಳಿಗೆ ಈಡಾಗುತ್ತದೆ..  


*ಲೇಖಕರ ಪ್ರಸ್ತುತ ಕಾದಂಬರಿಯನ್ನೂ ಒಳಗೊಂಡಂತೆ ಇತರೆ ಕೃತಿಗಳನ್ನು ಸಮೀಕ್ಷಿಸಲಾಗಿ, ಅವರು ಕೇವಲ ಪಾತ್ರಗಳನ್ನಷ್ಟೇ ಸೃಷ್ಟಿಸುವುದಿಲ್ಲ, ಆ ಪಾತ್ರಗಳ ವರ್ತನೆಗಳಿಗೆ ಸೂಕ್ತ ಮನೋವೈಜ್ಞಾನಿಕ ಕಾರಣಗಳನ್ನೂ ಕೊಡುತ್ತ ಕಥೆಯನ್ನು ಸಮರ್ಪಕವಾಗಿ/ವೈಜ್ಞಾನಿಕವಾಗಿ/ವಸ್ತುನಿಷ್ಠವಾಗಿ ಕಟ್ಟಿಕೊಡುತ್ತಾರೆ. ಪಾತ್ರವೊಂದರ ಪೂರ್ವಗ್ರಹಗಳು, ಅಸಹಾಯಕತೆ, ಉಪಶಮನಗಳಂತಹ ಭಾವನೆಗಳೇ ಅವುಗಳ ಸದಾಚಾರ ಮತ್ತು ದುರಾಚಾರದ ನಡೆಗೆ ಕಾರಣವೆಂಬುದನ್ನು ಸಹ ಸ್ಪಷ್ಟಪಡಿಸುತ್ತಾರೆ. 


*ವೀರಶೈವ, ಸನ್ಯಾಸತ್ವ, ಪಂಚಾಚಾರ ಮುಂತಾದ ಪರಿಕಲ್ಪನೆಗಳ ಬಗ್ಗೆ ಲೇಖಕರು ಪಾತ್ರವೊಂದರ ಮುಖೇನ ಸ್ಥೂಲವಾಗಿ ಅರ್ಥೈಸಿರುತ್ತಾರೆ. ಇಂತಹ ಮಾದರಿ ವ್ಯವಸ್ಥೆಗೆ ಒಗ್ಗಿಕೊಳ್ಳದ ಸಮಾಜದ ಮಹತ್ತರವಾದ ಸ್ಥಾನದಲ್ಲಿರುವ ಮಠದ ಪೀಠಾಧಿಪತಿ ಮತ್ತು ಅಂಥವರು ಎಸಗುವ ಅಪಚಾರವನ್ನು ಖಂಡಿಸುವ/ವಿಡಂಬನೆ ಮಾಡುವ ಮೂಲಕ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ಕೊಟ್ಟಿರುತ್ತಾರೆ. ಅಂತೆಯೇ ಇಂತಹ ಸತ್ಯವನ್ನು ಎತ್ತಿ ಹಿಡಿಯುವ ಸಾತ್ವಿಕ ಧೈರ್ಯವನ್ನು ತೋರುತ್ತಾರೆ.  


*ಮನುಷ್ಯನಿಗೆ ತನ್ನ ಅಗತ್ಯಗಳನ್ನು ಪೂರೈಸಿಕೊಳ್ಳುವಲ್ಲಿ ಕೊರತೆ ಅನುಭವಿಸಿದಾಗಲೇ ಅದನ್ನು ಬೆಂಬತ್ತುವ ಮೂಲಕ ಅನ್ಯ ಮಾರ್ಗವನ್ನು ಆಯ್ದುಕೊಳ್ಳುತ್ತಾನೆ. ಸರಿ ತಪ್ಪುಗಳ ಗೊಡವೆಗೆ ಹೋಗದೇ ತಕ್ಷಣದ ಸುಖ, ಸಂತೃಪ್ತಿ, ನೆಮ್ಮದಿಗೋಸ್ಕರ ಹಪಹಪಿಸುತ್ತಾನೆ. ಸಮಾಜವು ಓರ್ವ ವ್ಯಕ್ತಿಯನ್ನು ಅವನ ವೃತ್ತಿಗೆ ಪೂರಕವಿರುವ ಸಂಹಿತೆಗಳಿಗನುಗುಣವಾಗಿ ನಡೆಯುವಂತೆ ಕಟ್ಟಳೆಗಳನ್ನು ವಿಧಿಸಿದರೂ ಸಹ ಅವನ ಮನಸ್ಸು/ಪ್ರವೃತ್ತಿಯು ಯಾರಿಗೂ/ಯಾವುದಕ್ಕೂ/ಯಾವ ವ್ಯವಸ್ಥೆಗೂ ಬಂಧಿಯಲ್ಲವಲ್ಲ? ಅವನೊಬ್ಬ ಕಟ್ಟಳೆಗಳನ್ನು ಮೀರುವ, ಬಂಧ-ಮುಕ್ತನಾಗುವ, ಮುಕ್ತತೆಯನ್ನು ಬಯಸುವ, ಮನಸೋ ಇಚ್ಛೆ ಜೀವಿಸಲು ಬಯಸುವ ಜೀವಿ ಎಂದಷ್ಟೇ ತೀರ್ಮಾನಿಸಬಹುದೇ ವಿನಃ ಅವನಿಗೆ ಕಣ್ತಡೆಪಟ್ಟಿಗಳನ್ನು ಹಾಕಿ ನೇರವಾದ ಮಾರ್ಗದಲ್ಲಿ ನಡೆ ಎಂದು ಪ್ರತಿಬಂಧಿಸಲು ಸಾಧ್ಯವಾದೀತೇ? ಪ್ರತಿಯೊಬ್ಬ ವ್ಯಕ್ತಿ ವಿಭಿನ್ನವಾಗಿದ್ದರೂ ಸಹ ನಮ್ಮ ಸಂಹಿತೆ/ನೀತಿಗಳು ಮಾತ್ರ ಎಲ್ಲರಿಗೂ ಸಮಾನ! 

 

*ಹೇಳಬೇಕಾದ್ದನ್ನು ಮುಕ್ತವಾಗಿ ಹೇಳಿದಾಗಲೇ ಅದು ವಸ್ತುನಿಷ್ಠ ಸಾಹಿತ್ಯ ಎಂದು ಕರೆಸಿಕೊಳ್ಳುತ್ತದೆ.  ಸಿನೆಮಾದ ತರಹ ಸೆನ್ಸಾರ್ ಸಿಸರ್ ಪ್ರಯೋಗಿಸಿದರೆ ಅಂತಹ ಸಾಹಿತ್ಯ ರುಚಿಸದು. ಇಂತಹ ಸಮಕಾಲೀನ ರಸಿಕತೆಯ ಸಾಮರಸ್ಯವನ್ನು ಲೇಖಕರು ತಮ್ಮ ಕೃತಿಯಲ್ಲಿ ಯಶಸ್ವಿಯಾಗಿ ಸಾಧಿಸಿರುತ್ತಾರೆ. ಅನಿವಾಸಿಯಾಗಿದ್ದರೂ ಸಹ ನೆಲದ ಭಾಷಾ ಸೊಗಡು ಪ್ರಾದೇಶಿಕರಲ್ಲಿ ಆಶ್ಚರ್ಯವನ್ನು ಉಂಟುಮಾಡುವಂತದ್ದು! ಕೃತಿಯಲ್ಲಿನ ಕೆಲವು ನಾಟಿ ಪದಗಳ ಬಳಕೆಯು ಬಹುಶಃ ನಮ್ಮ ತಲೆಮಾರಿನವರಿಗೆ ಮಾತ್ರ ಅರ್ಥವಾಗಬಲ್ಲದು. ನಮ್ಮ ನಂತರದ ತಲೆಮಾರಿನವರಿಗಾಗಿ ಗ್ಲೋಸರಿಯ ಅಗತ್ಯ ಉಂಟಾಗಬಹುದೆಂದು ಖಾಸಗಿಯಾದ ಅಭಿಪ್ರಾಯ. ಇದರ ಹೊರತು ಕೃತಿಯು ಅತ್ಯಂತ ಆಪ್ತವೆನಿಸುವ ಗಟ್ಟಿ ಭಾಷೆಯನ್ನು ಒಳಗೊಂಡಿದೆ. 

ಒಟ್ಟಾರೆಯಾಗಿ, ಕಾದಂಬರಿಯಲ್ಲಿನ ಪಾತ್ರಗಳ ಸೃಷ್ಟಿಯಂತೂ ಅದ್ಭುತವಾದುದು! ಬಿಂಬಗಲ್ಲಿನಿಂದ ಡ್ಯಾಲಸ್ ವರೆಗಿನ ಪಾತ್ರವೊಂದರ ಪ್ರಯಾಣವು ರೋಚಕವಾಗಿದೆ. ಕೃತಿಯ ಸಂದೇಶವು ವ್ಯವಸ್ಥೆಯೊಂದರ ಬದಲಾವಣೆಗೆ ನಾಂದಿಯಾಗುವಂತಹುದು. ಹಾಗಾಗಿ ಕೃತಿಯು ಸಂಪೂರ್ಣವಾಗಿ ಲೇಖಕನೋರ್ವನಿಗೆ ಇರಲೇಬೇಕಾದ ಸಾಮಾಜಿಕ ಕರ್ತವ್ಯವನ್ನು, ಸಾಹಿತ್ಯಕ ಹೊಣೆಯನ್ನು ನಿಭಾಯಿಸುವ ಕ್ರಮ ಹೇಗೆಂಬುದಕ್ಕೆ ಮಾದರಿಯಾಗಿದೆ. 


-ನೀಲಾ. ಆರ್. ಎಮ್ 


ಪ್ರತಿಗಳಿಗೆ ಸಂಪರ್ಕಿಸಿ:

ಸಂವಹನ ಪ್ರಕಾಶನ, ಮೈಸೂರು

ದರ: ₹೨೫೦.

rajendraprinters@gmail.com

Ph: +919902639593

ರೂಪಾ ಮತ್ತಿಕೆರೆ

+919945010606

'ಅರಿದೆಡೆ ಆರದು, ಮರೆದೊಡೆ ಮೂರದು' ಕುರಿತು ಓದುಗರಾದ ಪ್ರಸ್ತು ಅವರ ಇಮೇಲ್ ಅಭಿಪ್ರಾಯ:

ಐತಿಹಾಸಿಕ ಸಂಶೋಧನಾತ್ಮಕ ಕೃತಿಗಳಿಗೆ ಹೆಸರಾಗಿರುವ ಲೇಖಕರಾದ ರವಿ ಹಂಜ್ ಅವರ ಪ್ರಸ್ತುತ ಕಾದಂಬರಿಯಾದ 'ಅರಿದೆಡೆ ಆರದು, ಮರೆದೊಡೆ ಮೂರದು' ಕೃತಿಯು ಅವರ ಹೊಸ ಬಗೆಯ ಸಾಹಿತ್ಯ ಶೈಲಿಯ ಪ್ರಯೋಗವಾಗಿದೆ. ಹಲವು ಅಧ್ಯಾಯಗಳಲ್ಲಿ ಬರೆಯಲಾದ ಕಾದಂಬರಿಯು ಗತಕಾಲದ ಇತಿಹಾಸವನ್ನಾಧರಿಸಿದ ಐತಿಹಾಸಿಕ ಕಾದಂಬರಿಯಾಗಿದ್ದು, ಮಠೀಯ ವ್ಯವಸ್ಥೆಯನ್ನು ಸೂಕ್ಷ್ಮ ಸಂವೇದನಾಶೀಲತೆಯೊಂದಿಗೆ ಅನಾವರಣಗೊಳಿಸುತ್ತದೆ. ಇದರ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಸನ್ನಿವೇಶಕ್ಕೆ ಸಮಂಜಸವೆನಿಸುವ ಪೂರಕವಾದ ವಚನವನ್ನು ಅವುಗಳ ಪೀಠಿಕೆಯಾಗಿ ಉಲ್ಲೇಖಿಸಲಾಗಿದೆ.

ಕೃತಿಯ ಶೀರ್ಷಿಕೆಯ ಮರ್ಮದಂತೆ ಮನುಷ್ಯನು ತನ್ನ ಮನುಜಧರ್ಮವನ್ನು ಅರಿತು ಬದುಕಿದಾಗಲೇ ಉತ್ತಮನೆನಿಸಿಕೊಳ್ಳಬಲ್ಲನೇ ವಿನಃ ತನ್ನ ಸದ್ಗುಣಶೀಲತೆಯನ್ನು ಮರೆತು ಬದುಕಿದಾಗ ಅಧಮನೆನಿಸಿಕೊಳ್ಳಲು ಕ್ಷಣಕಾಲವೂ ತಗಲುವುದಿಲ್ಲ ಎಂಬುದನ್ನು ಕಾದಂಬರಿಕಾರರು ಅರ್ಥಪೂರ್ಣವಾಗಿ ಅರುಹಿದ್ದಾರೆ. 12ನೇ ಶತಮಾನದಿಂದ ಪ್ರಸ್ತುತ ಕಾಲಮಾನದ ವರೆಗೂ ಕಥಾವಸ್ತುವಿನ ವಿಸ್ತಾರತೆ ಚಾಚಿಕೊಂಡಿದ್ದರಿಂದ ಗತಕಾಲದ ಸದ್ಗುಣಶೀಲತೆಯಿಂದ ವರ್ತಮಾನದ ದುರಾಚಾರವು ವ್ಯವಸ್ಥೆಯೊಂದನ್ನು ಹೇಗೆ ದುರವಸ್ಥೆಗೆ ಕೊಂಡೊಯ್ಯಬಲ್ಲದು? ಎಂಬುದನ್ನು ಲೇಖಕರು ದೃಷ್ಟಾಂತೀಕರಿಸುತ್ತಾರೆ. ಮಠದ ಪೀಠಾಧಿಪತಿಗಳ ಸರಣಿ-ಕಥನವು ಒಳಗೊಂಡಿರುವ ಪಾತ್ರಗಳು ತಮ್ಮ ಮುಗ್ಧತೆಯಿಂದ ಹೇಗೆ ಅನುಭವದ ಪ್ರಬುದ್ಧತೆಯತ್ತ ವಿಕಸನ ಹೊಂದುತ್ತವೆ ಎಂಬುದನ್ನು ಮನೋವೈಜ್ಞಾನಿಕ ತಳಹದಿಯ ಮೇಲೆ ಸಂರಚಿಸಿರುತ್ತಾರೆ. ಪ್ರಸ್ತುತ ಕಾದಂಬರಿಯಲ್ಲಿ ಬಹುತೇಕ ಪಾತ್ರಧಾರಿಗಳ ಮೂಲಕ ಅರಹುವ ಅಣಕ-ಸಾಹಿತ್ಯವನ್ನು ಅವರ ಇದೊಂದೇ ಕೃತಿಯಲ್ಲದೆ ಬಹುತೇಕ ಕೃತಿಗಳಲ್ಲಿಯೂ ಕಾಣಬಹುದಾಗಿದೆ. ಹೀಗೆ ಸಮಾಜವನ್ನು ತಿದ್ದುವ, ಮಾದರಿ ವ್ಯವಸ್ಥೆಯನ್ನು ರೂಪುಗೊಳಿಸುವ ಆಶಯವನ್ನು ಹೊಂದಿರುವ ಇವರ ಕೃತಿಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವೆನಿಸುತ್ತವೆ. 

ಕೃತಿಯಲ್ಲಿ, ಸಂಸಾರಿಗಳನ್ನು ಮೀರಿಸುವಂತಹ ಸುಖವನ್ನೆಲ್ಲಾ ಸಂತರು ಸುಖಿಸಿದ್ದು ಅವರ ಸ್ವಚ್ಛಂದ ಬದುಕಿನ ಸಹಜತೆಯನ್ನು ತೋರುತ್ತದೆ. ಆದಾಗ್ಯೂ ಅವರೆಲ್ಲರೂ ಸ್ವಯಂಶಿಸ್ತನ್ನು, ಆಚಾರಗಳು, ನಡಾವಳಿಗಳನ್ನು ಮರೆತು ಪ್ರಾಪಂಚಿಕ ಆಕರ್ಷಣೆಗಳಿಗೆ ದಾಸರಾಗುವುದರ ಅಡ್ಡಪರಿಣಾಮಗಳನ್ನು ಕಾದಂಬರಿಕಾರರು ಪರಿಶೀಲನೆಗೆ ಒಡ್ಡುತ್ತಾರೆ. ಯಾವುದೇ ಬಂಧನಗಳಿಗೆ ಒಳಪಡದೆ, ನಿಬಂಧನೆಗಳಿಲ್ಲದೆ ಹೀಗೆ ಸ್ವೇಚ್ಛೆಯಿಂದ ಬದುಕಲು ಸನ್ಯಾಸವನ್ನು ಲೌಕಿಕತೆಯೆಡೆಗೆ ಕರೆದೊಯ್ಯುವ ಬಳಸುದಾರಿಯಾಗಿ ಬಳಸಿಕೊಂಡಿರುವುದನ್ನು ಲೇಖಕರು ಪರೋಕ್ಷವಾಗಿ ಖಂಡಿಸುತ್ತಾರೆ! ಹೀಗೆಲ್ಲ ಅವಧೂತರಾಗಿ ಬದುಕುವ ಈ ಸಂತರ ಕುರಿತು ಓದುವಾಗಲೆಲ್ಲ ಕುಮಾರ ಜೀವ ತಟ್ಟನೆ ಭಾಸವಾಗುತ್ತಾನೆ. ಕುಮಾರ ಜೀವನಂತೆ ಇಲ್ಲಿಯೂ ಕೂಡ ಸಂತರಾದವರು ಅಗಣಿತ ಸಂತಾನ ಪ್ರಸರಣದಲ್ಲಿ ಕಾರ್ಯೋನ್ಮುಖರಾಗಿರುವುದು ವಿಡಂಬನೆಗಿಂತಲೂ ಹೆಚ್ಚಾಗಿ ಕಳವಳಕಾರಿ ಸಂಗತಿಯಾಗಿದೆ. 

ಇಡೀ ಜಗತ್ತನ್ನೇ ಮಠದ ನಾಲ್ಕು ಗೋಡೆಗಳಲ್ಲಿ ತರುವ, ಅತಿ ಸಾಮಾನ್ಯನನ್ನೂ ಎಲೈಟ್ ದರ್ಜೆಗೇರಿಸುವ ಕಾಲ್ಪನಿಕ ಕಥಾಹಂದರವು ತುಂಬಾ ಹಾಸ್ಯಮಯವಾಗಿಯೂ, ರಸವೊತ್ತಾಗಿಯೂ ಮೂಡಿಬಂದಿರುತ್ತದೆ. ಹಾಗಾಗಿ ಕಾದಂಬರಿಯ ಶೀರ್ಷಿಕೆಯು ಸಂಕಥನದ ಉದ್ದಕ್ಕೂ ತನ್ನ ಬಿಂಬದೊಂದಿಗೆ ಸಮರ್ಪಕತೆಯನ್ನು ತೋರುತ್ತದೆ. 

ಒಟ್ಟಾರೆ, ಹಾಸ್ಯ ಮತ್ತು ವಿಡಂಬನೆ ಎರಡೂ ಸಮಾನಾಂತರವಾಗಿ ಕ್ರಮಿಸಿ ಮನುಷ್ಯನ ನಿಜರೂಪವನ್ನು ಅನಾವರಣಗೊಳಿಸುವ ಅರಿವಿನ ಕಾದಂಬರಿ ಇದಾಗಿರುತ್ತದೆ.

- ಪ್ರಸ್ತು

ಅರಿದಡೆ ಆರದು, ಮರೆದೊಡೆ ಮೂರದು - ಬಿಡುಗಡೆ ಭಾಷಣ

 ಅರಿದಡೆ ಆರದು, ಮರೆದೊಡೆ ಮೂರದು.


ವೇದಿಕೆಯ ಮೇಲಿರುವ ಎಲ್ಲಾ ಗಣ್ಯರಿಗೆ ಮತ್ತು ಈ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಮಿತ್ರರಿಗೂ ನನ್ನ ಅನಿವಾಸಿ ಅಪ್ರಮೇಯ ಸಪ್ರೇಮ ವಂದನೆಗಳು. 


ಅನಿವಾಸಿ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ...


ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಒಂದೊಮ್ಮೆಯ ಅನಿವಾಸಿಗಳಾಗಿದ್ದ ಗಾಂಧಿ, ನೆಹರೂ ಅವರ ಮಹತ್ವದ ಕೃತಿಗಳು ಅವರನ್ನು ಸಮಾಜದಿಂದ ಬೇರ್ಪಡಿಸಿ ಜೈಲಿನಲ್ಲಿ ದೂರವಿರಿಸಿದಾಗಲೇ ರಚಿತಗೊಂಡಿವೆ. ಅವರ ಹೋರಾಟಗಳ ಮೇಲೆ ಅವರ ಅನಿವಾಸಿತನ ಗಾಢ ಪ್ರಭಾವ ಬೀರಿದೆ. ವಿದೇಶಗಳಲ್ಲಿ ಅವರು ಕಂಡ ರಾಜಕೀಯ, ಸಾಮಾಜಿಕ ವ್ಯವಸ್ಥೆಗಳು ಭಾರತದಲ್ಲಿಯೂ ಇರಬೇಕು ಎಂಬ ಅವರ ಬಯಕೆಯನ್ನು ಪೋಷಿಸಿದೆ. ಇದಕ್ಕೆ ಸಾವರ್ಕರ್, ಜಿನ್ನಾ ಸಹ ಹೊರತಲ್ಲ. ಒಟ್ಟಾರೆ ಭಾರತದ ಸ್ವಾತಂತ್ರ್ಯ ಚಳುವಳಿ ಮೇಲೇರಲು ಅನಿವಾಸಿಗಳೇ ಕಾರಣ.


ಹೀಗೆ ಸಮಾಜವನ್ನು, ರಾಷ್ಟ್ರವನ್ನು, ಆಗುಹೋಗುಗಳನ್ನು ಅನಿವಾಸಿತನದಿಂದ, ದೂರದಿಂದ ನೋಡಿದಾಗ ಅದು ಕೊಡುವ ಹೊಳಹು ವಿಭಿನ್ನ. ಹಾಗಾಗಿ ಭಾರತಕ್ಕೆ ಕೇವಲ ಸ್ವಾತಂತ್ರ್ಯವಲ್ಲದೆ ಗಮನಾರ್ಹ ಚಿಂತನೆ, ಕೃತಿ, ಕಾರ್ಯಗಳಿಗೆ ಅನಿವಾಸಿತನದ ಕೊಡುಗೆ ಅತ್ಯಂತ ಮಹತ್ವದ್ದು. ಕೇವಲ ಭಾರತವಲ್ಲದೆ ಜಾಗತಿಕವಾಗಿ ಸಹ ಪಾಬ್ಲೋ ನೆರೂಡಾ ಅನಿವಾಸಿಯಾಗಿ ಶ್ರೀಲಂಕಾದಲ್ಲೇ ತಮ್ಮ ಕಾವ್ಯದ ನೆಲೆಯನ್ನು, ಹೆಮಿಂಗ್ವೇ ಪ್ಯಾರಿಸ್, ಹವಾನಾದಲ್ಲಿ ಅನಿವಾಸಿಯಾಗಿದ್ದಾಗಲೇ ಮಹತ್ವದ ಕೃತಿಗಳನ್ನು ರಚಿಸಿದ್ದರು ಎಂಬುದು ಗಮನಾರ್ಹ.


ರಾಜೀವ್ ಗಾಂಧಿ, ಸ್ಯಾಮ್ ಪಿತ್ರೋಡ ಅಲ್ಲದೆ ಇಂದಿನ ವರ್ತಮಾನದಲ್ಲಿ ಸಹ ಖೇಣಿ, ನೀಲೇಕಣಿ, ಎಸ್ಸಾರ್ ಹಿರೇಮಠ, ರವಿಕೃಷ್ಣಾರೆಡ್ಡಿ ಮುಂತಾದವರ ಹೋರಾಟ ಮತ್ತು ಸಾಮಾಜಿಕ ಕಳಕಳಿಗೆ ಇದೇ ಅನಿವಾಸಿತನ ಕಾರಣವಾಗಿದೆ. ಆದರೆ ಅದನ್ನು ಸ್ವೀಕರಿಸುವ ಮನಃಸ್ಥಿತಿ ವರ್ತಮಾನದ ಭಾರತದಲ್ಲಿ ನಂದಿದೆ. ಅನಿವಾಸಿ ಸಾಹಿತ್ಯ ಸ್ವೀಕಾರವೂ ಸೇರಿ.


ಈಗ ಅನಿವಾಸಿ ಎಂದರೇನೇ ಬೇವರ್ಸಿ ಎಂಬ ಒಂದು ಸಿದ್ಧ ತಿರಸ್ಕಾರ ಜನರಲ್ಲಿ ಬೇರೂರಿದೆ. ಇಲ್ಲಿನ ಆಗುಹೋಗುಗಳಿಗೆ ಓರ್ವ ಅನಿವಾಸಿ ಸ್ಪಂದಿಸಿದರೆ, "ಅವನೇ(ಳೇ)ನು ಕಂಡಿದ್ದಾನೆ(ಳೆ), ಏಸಿ ರೂಮಿನಲ್ಲಿ ಕುಳಿತವನು(ಳು)" ಎಂಬ ಮೂದಲಿಕೆಯೇ ಮೆರೆದು ಉಳಿದದ್ದೆಲ್ಲಾ ಗೌಣವಾಗಿಬಿಡುತ್ತದೆ. ಏಕೆಂದರೆ ರೋಚಕತೆಯನ್ನು ಬಯಸುವ ಭಾರತೀಯನಿಗೆ ಇಂತಹ ಮೂದಲಿಕೆ ಒಂದು ಥ್ರಿಲ್ ಕೊಡುತ್ತದೆ. ಹಾಗಾಗಿಯೇ ಇಂದಿನ ಎಲ್ಲಾ ಆಯಾಮಗಳಲ್ಲೂ ರೋಚಕತೆ ಎಲ್ಲೆಲ್ಲೂ ಮೆರೆಯುತ್ತಿದೆ. ಅದು ತಪ್ಪಲ್ಲ.


ಆದರೆ ಇಂತಹ ಮೂದಲಿಕೆ, ತಿರಸ್ಕಾರಗಳ ಆಚೆ ಮೌಲಿಕ ಟೀಕೆಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಜಾಗರೂಕತೆಯಿಂದ ಗಂಭೀರವಾಗಿ ಆಳವಾದ ಅಭ್ಯಾಸ, ವಿಷಯ ಮಂಡನೆ, ದೂರಗಾಮಿ ಚಿಂತನೆ, ವಿಶ್ಲೇಷಣೆ ಕೆಲವು ಅನಿವಾಸಿಗಳ ಬರಹದಲ್ಲಿ ಇರುತ್ತದೆ. ಏಕೆಂದರೆ ಅನಿವಾಸಿ ಬರೆದಿದ್ದಾನೆ ಎಂದಾಕ್ಷಣ ಯಾವುದೇ ಮೀಸಲಾತಿ ಕಕ್ಕುಲಾತಿ ಇಲ್ಲದೆ ಅದರಲ್ಲಿ ಏನಾದರೂ ಹುಳುಕುಗಳಿವೆಯೇ ಎಂದು ಭೂತಗಾಜು, ಮೈಕ್ರೋಸ್ಕೋಪು, ಟೆಲಿಸ್ಕೋಪು, ಇಲ್ಲದ ಸ್ಕೋಪು ಹಿಡಿದು ನೋಡಿ ಏನಾದರೂ ಕಂಡರೆ ನಿಕೃಷ್ಟವಾಗಿ ಝಾಡಿಸಲಾಗುತ್ತದೆ. ಏನೂ ಕಾಣದಿದ್ದರೆ ಅದರಲ್ಲಿನ ಹೊಳಹುಗಳ ಬಗ್ಗೆ ದಿವ್ಯಮೌನ ವಹಿಸಲಾಗುತ್ತದೆ. 


ಒಟ್ಟಿನಲ್ಲಿ ಅನಿವಾಸಿಗಳು ತಾಯ್ನಾಡಿನ ತಿರಸ್ಕಾರಕ್ಕೆ ಗುರಿಯಾಗಿದ್ದಾರೆ. ಆದರೆ ಅದೇ ಅನಿವಾಸಿ ಅವನಿರುವ ದೇಶದ ಸಂಸ್ಕೃತಿ, ಸಮಾಜ, ವ್ಯವಸ್ಥೆಯನ್ನು ಸಾರಾಸಗಟಾಗಿ ತಿರಸ್ಕರಿಸಿ ಮೂದಲಿಸಿ ಬರೆದು ಭಾರತೀಯ ಸಂಸ್ಕೃತಿ, ಸಾಹಿತ್ಯ, ವ್ಯವಸ್ಥೆಯನ್ನು ಕುರುಡಾಗಿ ಹಾಡಿ ಹೊಗಳಿ ಬರೆದಾಗ "ಅಬ್ಬಬ್ಬಾ" ಅದರ ಆದರವೇ ಬೇರೆ! 


ಇದು ನನ್ನ ಅನಿವಾಸಿ ಪ್ರಲಾಪ! 


ಇನ್ನು ವರ್ತಮಾನದ ಇಂದಿನ ಸೈದ್ಧಾಂತಿಕ ಅಮಲಿನಲ್ಲಿ ಭಾರತದ ತುಂಬೆಲ್ಲಾ ಪಂಥೀಯ ಸಿದ್ಧಾಂತಿಗಳು ತಮ್ಮ ತಮ್ಮವೇ ದ್ವೀಪೀಯ ಸಮಾಜಗಳನ್ನು ಸೃಷ್ಟಿಸುತ್ತಾ ಬರುತ್ತಿದ್ದಾರೆ. ಇದು ದೇಶ ವಿಭಜಕ ಕೃತ್ಯವೆನಿಸಿ ಮುಂದೆ ಆತಂಕಕಾರಿ ಸನ್ನಿವೇಶವನ್ನಷ್ಟೇ ಅಲ್ಲದೆ ಆತಂಕವಾದಿಗಳ ಮಹಾಪೂರವನ್ನೇ ಸೃಷ್ಟಿಸಲಿದೆ. ಈ ಎಲ್ಲಾ ವೇದಿಕೆಗಳಲ್ಲಿಯೂ ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ಸಮಾನವಾಗಿ ಕಂಗೊಳಿಸುತ್ತಿದ್ದಾರೆ. ಮೌಲ್ವಿಗಳ, ಪಾದ್ರಿಗಳ, ಬ್ರಹ್ಮಚಾರಿಗಳ ಕರ್ಮಕಾಂಡಗಳು ಸುದ್ದಿ ಮಾಡಿದ್ದರೂ ಅವರ ಕಂಗೊಳಿಸುವಿಕೆ ಮಾತ್ರ ಅಭಾದಿತವಾಗಿ ಮುಂದುವರಿದಿದೆ. ಹಾಗಾಗಿಯೇ ನನ್ನ ಈ ಕೃತಿ, "ಅರಿದಡೆ ಆರದು, ಮರೆದೊಡೆ ಮೂರದು" ಇಂದು ಪೀಠಾರೋಹಣವಾಗುತ್ತಿದೆ. ಇದನ್ನು ನಾನು ಬ್ರಿಟಿಷ್ sattire ಸಾಹಿತ್ಯ ಯಾನೆ ವಿಡಂಬನಾತ್ಮಕ ಶೈಲಿಯನ್ನು ಮುಖ್ಯವಾಗಿರಿಸಿಕೊಂಡು ರೋಚಕತೆಯನ್ನು ಬಹುವಾಗಿ ಮೆಚ್ಚುವ ಭಾರತೀಯ ಓದುಗರ ರುಚಿಗೆ ತಕ್ಕಂತೆ ಮಠೀ(ತೀ)ಯ ವ್ಯವಸ್ಥೆಯ ಕಥೆಯನ್ನು ಸಾದರಪಡಿಸಿದ್ದೇನೆ.


ಇದನ್ನು ಪುಸ್ತಕವಾಗಿ ಪ್ರಕಟಿಸುವ ಮುನ್ನ ಒಂದು ದಿನಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸಿದರೆ ಹೆಚ್ಚು ಜನ ಓದಿ ಜಾಗರೂಕರಾಗಬಹುದು ಎಂದು ನಾನು ಆರಂಭದಲ್ಲಿ ಆಲೋಚಿಸಿದ್ದೆ. ಹಾಗಾಗಿ ನನ್ನಿಂದ ಸತತವಾಗಿ ಅಂಕಣ ಬರೆಸಿಕೊಂಡಿದ್ದ ದಿನಪತ್ರಿಕೆಯ ಸಂಪಾದಕರನ್ನು ಸಂಪರ್ಕಿಸಿದಾಗ ಅವರು, "ಜಾಹೀರಾತು ಲೆಕ್ಕದಲ್ಲಿ ಪ್ರಕಟಿಸುತ್ತೇನೆ" ಎಂದು ನನ್ನ "ಅನಿವಾಸಿತನ"ವನ್ನು ಗಣಿಗಾರಿಕೆ ನಡೆಸುವ ಆಲೋಚನೆ ಮುಂದಿಟ್ಟರು! ಅಲ್ಲಿಗೆ ಗಣಿಗಾರಿಕೆ ಕೇವಲ ಬಳ್ಳಾರಿಗೆ ಸೀಮಿತವಾಗಿಲ್ಲ ಎಂದು ನನಗರಿವಾಯಿತು. ಬಳ್ಳಾರಿ, ಮಾಧ್ಯಮವಲ್ಲದೆ ಇನ್ನೆಲ್ಲೆಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂಬುದನ್ನು ನಿಮ್ಮ ಊಹೆಗೆ ಬಿಡುತ್ತೇನೆ. ಎಷ್ಟೇ ಆಗಲಿ ನಾನು ಏಸಿ ರೂಮಿಗ, ನಾನೇನು ಬಲ್ಲೆ?!


ಇನ್ನುಳಿದಂತೆ ಓದುಗರು ಈ ಕೃತಿಯನ್ನು ಸ್ವೀಕರಿಸಿ ಕಿಂಚಿತ್ ನೈತಿಕತೆಯನ್ನು ರೂಢಿಸಿಕೊಂಡರೆ ನಾನು ಏಸಿ ರೂಮಿನಲ್ಲಿ ಬೆವರಿದ್ದು, ಮೆಮರಿ ಫೋಮ್ ಬೆಡ್ಡಿನಲ್ಲಿ ಬೆಚ್ಚಿದ್ದು, ಮತ್ತು ಭಾರತೀಯ ತತ್ವಜ್ಞಾನದ ಆರು ಮೂರು ಒಂಬತ್ತು, ಒಂಬತ್ತು ತೂತಿನ ಕೊಡನಾಗಿದ್ದು ಸಾರ್ಥಕ ಎನಿಸುತ್ತದೆ.


ಧನ್ಯವಾದಗಳು!

ರವಿ ಹಂಜ್ 

----