ಸಮಾಜಮುಖಿ ಫೆಬ್ರುವರಿ ೨೦೨೩ ಲೇಖನ - ಚಿಂತಕರ ಓಲಾಟ

ತಾರ್ಕಿಕ ಹಾಗೂ ವೈಚಾರಿಕ ಆಲೋಚನೆಗಳ ಮುಖಾಂತರ ಸರ್ಕಾರಗಳನ್ನು ಶೂಲಕ್ಕೆ ಏರಿಸುವ ಸಾಮರ್ಥ್ಯ ಹೊಂದಿದ್ದ ನಮ್ಮ ಬುದ್ಧಿಜೀವಿಗಳ ವಿಚಾರ ತೀಕ್ಷ್ಣತೆ ಇನ್ನೂ ಉಳಿದಿದೆಯೇ..?

ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬಹುಪಾಲು ಬುದ್ಧಿಜೀವಿಗಳು ತಟಸ್ಥರಾಗಿದ್ದರೂ ಬ್ಯಾರನ್ ಮಾಂಟೆಸ್ಕ್ಯೂ, ವಾಲ್ಟೇರ್, ಜೀನ್ ರೋಸ್ಯು ಅಂತಹ ತತ್ವಜ್ಞಾನಿ ಸಾಹಿತಿಗಳು ಫ್ರೆಂಚ್ ಜಾಗೃತಿಗೆ ಕಾರಣರಾಗಿದ್ದರು. ಹಿಟ್ಲರ್ ಕಾಲದ ಜರ್ಮನಿಯಲ್ಲಿ ಯಹೂದಿಗಳ ರಕ್ಷಣೆಗೆ ಮುಂದಾಗಿದ್ದ ಸಾಹಿತಿಗಳಾದ ಮಾರ್ಥಾ ವೇಟ್ಸ್ಟಿಲ್ ಶಾರ್ಪ್ ದಂಪತಿ, ವೇರಿಯನ್ ಫ್ರೈ, ಜೀನೋ ಬರ್ತಾಲಿ, ಜಾನ್ ಸ್ವಾರ್ಟರ್ನ್ಜಿಕ್, ಜಾನ್ ಕರಾಸ್ಕಿ ಮುಂತಾದವರ ಬರಹ ಮತ್ತು ವರದಿಗಳಲ್ಲದೆ ಅವರು ಖುದ್ದು ಅಪಾಯಕ್ಕೀಡಾಗುವ ಸನ್ನಿವೇಶವಿದ್ದರೂ ಯಹೂದಿಗಳನ್ನು ರಕ್ಷಿಸಿದ್ದರು. ಇನ್ನು ರಷ್ಯನ್ ಕ್ರಾಂತಿಯ ಉದಾರವಾದಿಗಳೆಂದು ಗುರುತಿಸಿಕೊಂಡಿದ್ದ ಪ್ರಗತಿಪರ ಸಾಹಿತಿಗಳಾದ  Intelligentsia ಗುಂಪಿನ ಆಂಟಾನ್ ಚೆಕೋವ್, ವಾಸಿಲಿ ಜುಕೊವ್ಸ್ಕಿ, ಅಲೆಕ್ಸಾಂಡರ್ ರಾಡಿಷ್ಚೆವ್, ಆಂಡ್ರೆ ಸಕರೋವರಂತಹ ಬುದ್ದಿಜೀವಿಗಳಲ್ಲದೆ ಲಿಯೋ ಟಾಲ್ಸ್ಟಾಯ್ ಅಂತಹ ಸಾಹಿತಿಗಳು ಸಹ ಕ್ರಾಂತಿಯ ಮೇಲೆ ಗಾಢ ಪ್ರಭಾವ ಬೀರಿದ್ದರು. ಅದೇ ರೀತಿ ಭಾರತೀಯ ವಿದ್ಯಾವಂತರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಕಷ್ಟು ಪ್ರಭಾವ ಬೀರಿದ್ದರು. ಇವರೆಲ್ಲರ ಪ್ರಭಾವ ಸ್ವಾತಂತ್ರೋತ್ತರ ಭಾರತೀಯ ಬುದ್ದಿಜೀವಿಗಳ ಮೇಲೆಯೂ ಸಾಕಷ್ಟು ಪ್ರಭಾವ ಬೀರಿದೆ.

ಹಾಗಾಗಿ ೧೯೭೪ ರಲ್ಲಿ ಬಿಹಾರಿನ ವಿದ್ಯಾರ್ಥಿ ಸಂಘಟನೆಯು ಜಯಪ್ರಕಾಶ್ ನಾರಾಯಣ್ ಅವರ ನಾಯಕತ್ವದಡಿಯಲ್ಲಿ "ಸಂಪೂರ್ಣ ಕ್ರಾಂತಿ" ಎಂಬ ಚಳುವಳಿಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಿತು. ಮುಂದೆ ಈ ಕ್ರಾಂತಿಯು ದೇಶದ ತುಂಬೆಲ್ಲಾ ಕಾಳ್ಗಿಚ್ಚಿನಂತೆ ವ್ಯಾಪಕವಾಗಿ ಹಬ್ಬಿತು. ಇದರ ಆರಂಭವು ೧೯೭೩ರಲ್ಲಿಯೇ ಗುಜರಾತಿನಲ್ಲಿ "ನವ ನಿರ್ಮಾಣ" ಎಂಬ ಹೆಸರಿನ ಚಳುವಳಿಯಾಗಿ ಅಲ್ಲಿನ ವಿದ್ಯಾರ್ಥಿ ಸಂಘಗಳಿಂದ ಆರಂಭವಾಗಿತ್ತು. ಅದೇ ರೀತಿ ಮಧ್ಯಪ್ರದೇಶದ ಭೂಪಾಲದಲ್ಲೂ ವಿದ್ಯಾರ್ಥಿ ಸಂಘಟನೆಗಳು ಸರ್ಕಾರದ ವಿರುದ್ಧ ದಂಗೆದ್ದು ಎಂಟು ವಿದ್ಯಾರ್ಥಿಗಳು ಪೊಲೀಸ್ ಗೋಲಿಬಾರಿನಲ್ಲಿ ಮೃತಪಟ್ಟಿದ್ದರು. ಇದರಿಂದ ಉದ್ರಿಕ್ತ  ಅಲ್ಲಿನ ವಿದ್ಯಾರ್ಥಿಗಳು ತಾವು ಜೆಪಿ ಚಳುವಳಿಯಲ್ಲಿ ಭಾಗವಹಿಸಿ ಚಳುವಳಿಯನ್ನು ವ್ಯಾಪಕವಾಗಿ ದೇಶಾದ್ಯಂತ ಹಬ್ಬಿಸಲು ಪಣ ತೊಟ್ಟರು. ಈ ಚಳುವಳಿಯ ಹಿಂದೆ ಸಾಮಾಜಿಕ ಚಿಂತನೆಯ ಅಧ್ಯಾಪಕ ವರ್ಗವೇ ವಿದ್ಯಾರ್ಥಿಗಳನ್ನು ಹೊಸ ಕ್ರಾಂತಿಗೆ ತಯಾರು ಮಾಡಿದ್ದರು.

ಹೀಗೆ ಗುಜರಾತಿನ ಒಂದು ಹಾಸ್ಟೆಲ್ಲಿನ ಊಟದ ವಿಷಯವಾಗಿ ಆರಂಭವಾದ ಒಂದು ಚಳುವಳಿಯು ಜೆಪಿ ಚಳುವಳಿಯಾಗಿ ಮುಂದೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿ ಬೆಳಿಯಿತು. ಇದಕ್ಕೆ ಭಾರತದ ಬಹುಪಾಲು ಚಿಂತಕರು, ಸಾಹಿತಿಗಳು, ಪ್ರಗತಿಪರರು ಬೆಂಬಲ ಸೂಚಿಸಿ ಭ್ರಷ್ಟ ಸರ್ಕಾರದ ವಿರುದ್ಧ ಜನರನ್ನು ವ್ಯಾಪಕವಾಗಿ ಸಂಘಟಿಸಿದ್ದರು.

ಮುಂದೆ ತುರ್ತುಪರಿಸ್ಥಿತಿಯಿಂದ ಮತ್ತಷ್ಟು ಸಂಘಟಿತರಾದ ಚಿಂತಕ ಪ್ರಗತಿಪರರು ಸರ್ಕಾರಕ್ಕೆ ಸರಿಯಾದ ಎಚ್ಚರಿಕೆಯನ್ನು ಕೊಟ್ಟದ್ದಲ್ಲದೇ ಸರ್ಕಾರವುರುಳಿ ಹೊಸ ಸರ್ಕಾರಕ್ಕೆ ನಾಂದಿ ಹಾಡಿದರು. ಇದರಿಂದ ಸರ್ಕಾರಕ್ಕೆ ಬುದ್ದಿಜೀವಿಗಳ ವಿಚಾರ ತೀಕ್ಷ್ಣತೆಯ ಶಕ್ತಿಯ ಅರಿವಾಯಿತು.

೧೯೮೦ ರಲ್ಲಿ ಕರ್ನಾಟಕದಲ್ಲಿ ಗುಂಡೂರಾವ್ ಸರ್ಕಾರ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಿನ ಲೆವಿಯಾಗಿ ಎಕರೆಗೆ ರೂ. ೧೫೦೦ ಹೇರಿತು. ಈ ಅಚ್ಚುಕಟ್ಟು ಪ್ರದೇಶದ ಎಲ್ಲಾ ಭೂಮಿಯ ಮೇಲೆ ರೈತರು ತಮ್ಮ ಭೂಮಿ ನೀರಾವರಿಗೆ ಒಳಗಾಗಿರಲಿ ಇಲ್ಲದಿರಲಿ ಲೆವಿ ಕಟ್ಟಲೇಬೇಕಿತ್ತು. ಇದನ್ನು ವಿರೋಧಿಸಿ ನಡೆದ ಚಳುವಳಿ ಗುಂಡೂರಾವ್ ಸರ್ಕಾರವನ್ನು ಉರುಳಿಸಿದ್ದಲ್ಲದೇ ಕರ್ನಾಟಕ ರಾಜ್ಯ ರೈತ ಸಂಘದ ಉದಯಕ್ಕೆ ಕಾರಣವಾಯಿತು. ಈ ಚಳುವಳಿಗೆ

ಅದಾಗಲೇ ರಾಷ್ಟ್ರೀಯ ಮಟ್ಟದ ಜೆಪಿ ಚಳುವಳಿಯಲ್ಲಿ ಭಾಗವಹಿಸಿದ್ದ ಕನ್ನಡ ನಾಡಿನ ಚಿಂತಕರು, ಸಾಹಿತಿಗಳು, ಪ್ರಗತಿಪರರು ವ್ಯಾಪಕ ಬೆಂಬಲ ಕೊಟ್ಟಿದ್ದರು. ಮುಂದೆ ಈ ರೈತ ಸಂಘದ ಚಳುವಳಿಯಲ್ಲಿ ಪ್ರಗತಿಪರ ಚಿಂತಕರಾದ ಸಾಹಿತಿಗಳು, ಪತ್ರಕರ್ತರು, ಸಮಾಜವಾದಿ ಚಿಂತನೆಯ ಪ್ರಮುಖರೆಲ್ಲರೂ ಪಾಲ್ಗೊಂಡರು. ಇವರಲ್ಲಿ ಪ್ರಮುಖರಾದ ಲಂಕೇಶ್, ನಂಜುಂಡಸ್ವಾಮಿ, ಸುಂದರೇಶ್, ಪೂರ್ಣಚಂದ್ರ ತೇಜಸ್ವಿ, ಕಡಿದಾಳ್ ಶಾಮಣ್ಣ ಮುಂತಾದವರು ಭಾಗವಹಿಸಿ ಕರ್ನಾಟಕದ ತುಂಬೆಲ್ಲಾ ಸಮಾಜವಾದದ ಕಂಪನ್ನು ಹರಡಿದ್ದಲ್ಲದೆ ಆಳುವ ಸರ್ಕಾರಕ್ಕೆ ಮಾರ್ಗದರ್ಶಕ ಎಚ್ಚರಿಕೆಗಳನ್ನು ಕೊಡುತ್ತಿದ್ದರು. ಆಳುವ ಸರ್ಕಾರಗಳೂ ಇವರೆಲ್ಲರನ್ನು ಗಂಭೀರವಾಗಿ ಪರಿಗಣಿಸಿದ್ದವು. ಅದೆಲ್ಲಕ್ಕಿಂತ ಹೆಚ್ಚಾಗಿ ಯುವಜನತೆ ಇವರನ್ನು ಅಷ್ಟೇ ಗಂಭೀರವಾಗಿ ಪರಿಗಣಿಸಿ ತಮ್ಮ ರೋಲ್ ಮಾಡೆಲ್ ಆಗಿ ಸ್ವೀಕರಿಸಿದ್ದರು. ಯುವಜನತೆಯಂತೂ ಇವರನ್ನೇ ಆದರ್ಶವ್ಯಕ್ತಿಗಳಾಗಿ ಆದರಿಸುತ್ತಿದ್ದರು. ಇದಕ್ಕೆ ಕಾರಣ, ಇವರ ಸಾಮಾಜಿಕ ಕಳಕಳಿ, ನಿಷ್ಠೆ, ಮತ್ತು ಅರಿವು ಅವರ ಲೇಖನಗಳಲ್ಲಿ ಪ್ರಶ್ನಾತೀತವಾಗಿ ಪ್ರಭಾವಶಾಲಿಯಾಗಿ ಮೂಡಿಬರುತ್ತಿದ್ದವು. ಸರ್ಕಾರಗಳು ದಾರಿ ತಪ್ಪಿದಾಗ ಬೆಚ್ಚಿ ಬೀಳುವಂತಹ ಪ್ರತಿಕ್ರಿಯೆ ಕೊಟ್ಟು ಸರ್ಕಾರಗಳ ಕಿವಿ ಹಿಂಡುತ್ತಿದ್ದರು. ಇವರಿವರಲ್ಲೇ ಕೆಲವು ಭಿನ್ನಾಭಿಪ್ರಾಯ, ಈರ್ಷ್ಯೆಗಳಿದ್ದರೂ ವೈಯಕ್ತಿಕವಾಗಿ ಇವರ ಚಿಂತನೆ ಸಮಾಜೋದ್ಧಾರದ ಏಕಮಾತ್ರ ಗುರಿಯನ್ನು ಹೊಂದಿದ್ದವು.

ಕಾಲಕ್ರಮೇಣವಾಗಿ ಇವರಲ್ಲಿ ಕೆಲವರ ಸಮಾಜೋದ್ದಾರದ ಆಸಕ್ತಿಯು ವಯೋಮಾನ, ಸಾಂಸಾರಿಕ ಜವಾಬ್ದಾರಿಯಲ್ಲಿ ಕುಂದಿದರೆ ಕೆಲವರಲ್ಲಿ ರಾಜಕೀಯ ಮಹತ್ವಾಕಾಂಕ್ಷೆ, ಉನ್ನತ ಅಧಿಕಾರದ ಲಾಲಸೆಗೆ ಸಿಕ್ಕು ಬೇರೆಯೇ ಆದ ರೂಪವನ್ನು ಪಡೆದುಕೊಂಡಿತು. ಕೆಲವರಂತೂ ಎಕ್ಸ್ಪೈರಿ ಆದ ಸಿದ್ಧಾಂತಗಳಿಗೆ ಜೋತು ಬಿದ್ದುದನ್ನು ಅಣಕಿಸುವಂತೆ ಪೂರ್ಣಚಂದ್ರ ತೇಜಸ್ವಿಯವರು ತಮ್ಮ 'ಜುಗಾರಿ ಕ್ರಾಸ್' ಕಾದಂಬರಿಯಲ್ಲಿ 'ಪ್ರೊ. ಗಂಗೂಲಿ' ಎಂಬ ಒಂದು ಪಾತ್ರವನ್ನೇ ಸೃಷ್ಟಿಸಿದ್ದರು.

ಜನರೂ ಸಹ ತಮ್ಮ ತಮ್ಮ ಸಾಂಸಾರಿಕ ಜವಾಬ್ದಾರಿ, ವೈಯಕ್ತಿಕ ಆಸಕ್ತಿಗಳ ಕಡೆ ಗಮನ ಹರಿಸಿದರು. ಹೊಸ ಶತಮಾನದ ಹೊರಳಿನ ತಲೆಮಾರಿನ ಯುವಜನತೆ ಮಾರ್ಗದರ್ಶನಕ್ಕಾಗಿ ಅತ್ತಿತ್ತ ನೋಡಿದಾಗ ಕಂಡದ್ದು, ಎಲ್ಲಾ ಧರ್ಮಗಳ "ಧರ್ಮೋ ರಕ್ಷತಿ ರಕ್ಷಿತಃ!"  

ಇದಕ್ಕೆ ಆಯಾಯ ಸಿದ್ಧಾಂತದ ರಾಜಕಾರಣಿಗಳು ತಮ್ಮ ಪ್ರಚಂಡ ಮಾತುಗಾರಿಕೆಯಿಂದ ಓಲೈಸಿ ಸ್ಪಂದಿಸಿ ಚಿಂತಕರ ಸ್ಥಾನವನ್ನು ತುಂಬಿ ಮಾರ್ಗದರ್ಶನ ನೀಡಿದರು. ಆದರೆ ಇದೆಲ್ಲವೂ ಒಂದೇ ಸಾರಿಯೇ ಆದ ಬದಲಾವಣೆಯಲ್ಲ!

ದೇಶದ ಈ ಸ್ಥಿತ್ಯಂತರ ಘಟ್ಟವನ್ನು ಕರಾರುವಾಕ್ಕಾಗಿ ಗುರುತಿಸಬಹುದು. ಅಂದು ಸಲ್ಮಾನ್ ರಶ್ದಿ ಅವರು ತಮ್ಮ ಕೃತಿ "ಸಟಾನಿಕ್ ವರ್ಸಸ್"ನಿಂದಾಗಿ ಫತ್ವಾಕ್ಕೊಳಗಾದಾಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಒಕ್ಕೊರಲಿನಿಂದ ಬೆಂಬಲಿಸಿದ್ದ ಭಾರತೀಯ ಪ್ರಗತಿಪರ ಸಾಹಿತ್ಯ ವಲಯವು ಮುಂದೆ ಚಾರ್ಲಿ ಹೆಬ್ಡೋ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾಲಕ್ಕಾಗಲೇ ಓಲೈಕೆಯ ಜಾಣ ಪ್ರಭಾವಕ್ಕೊಳಗಾಗಿ ಮೌನವಾಗಿತ್ತು. ರಶ್ದಿ ಫತ್ವಾ ವಿರೋಧಿಸಿದ್ದ ಸಾಹಿತಿಗಳೇ ಹೆಬ್ಡೋ ಫತ್ವಾಕ್ಕೆ ಮೌನ ವಹಿಸಿದ್ದರು ಎಂಬುದು ಗಮನಾರ್ಹ. ಏಕೆಂದರೆ ಅದಾಗಲೇ ಭಾರತೀಯ ಚಿಂತನೆಯು ಆತ್ಮರತಿ, ಓಲೈಕೆ, ಸ್ವಜನ ಪಕ್ಷಪಾತ

ಮತ್ತು ಜಾತಿ/ಪಂಥ ಆಧಿನಾಯಕತ್ವಕ್ಕೆ ಹೊರಳಿತ್ತು. ಅಂದು ಒಗ್ಗಟ್ಟಾಗಿ ಕ್ರಿಯಾಶೀಲವಾಗಿದ್ದ ಪ್ರಗತಿಪರ ಚಿಂತಕರು ಮುಂದೆ ಎಡ, ಬಲ ಎಂದು ಭಿನ್ನಗೊಂಡರು. ಆದರೂ ಬಲದ ಕಡೆ ವಾಲಿದವರು ಅತ್ಯಂತ ಕಡಿಮೆಯೇ.

ಈ ಮಧ್ಯೆ ಬಂದ ತಸ್ಲೀಮಾ ನಸ್ರೀನ್ ಅವರಿಗೆ ಭಾರತೀಯ ಜನ ಸಾಮಾನ್ಯರ ಒಕ್ಕೊರಲಿನ ಬೆಂಬಲ ಸಿಕ್ಕರೂ ಭಾರತೀಯ ಸಾಹಿತಿಗಳ ಬೆಂಬಲ ರಶ್ದಿ ಕಾಲಕ್ಕಿಂತ ಇಲ್ಲವೇ ಇಲ್ಲ ಎನ್ನುವಷ್ಟು ಇಳಿಮುಖಗೊಂಡಿತ್ತು ಎಂಬುದೂ ಗಮನಾರ್ಹ! ಮಾತನಾಡಲೇಬೇಕಾದಾಗ ಇವರೆಲ್ಲಾ ಜಾಣಮೌನಕ್ಕೆ ಜಾರಿದ್ದರು. ಆದರೆ ಜನಸಾಮಾನ್ಯರು ಇನ್ನೂ ಇವರಷ್ಟು ಭಿನ್ನಗೊಂಡಿರಲಿಲ್ಲ. ಅದನ್ನು ರಾಮಜನ್ಮಭೂಮಿ ಘಟನೆ ಸಮರ್ಥವಾಗಿ ನೆರವೇರಿಸಿತು.  ಆದರೆ ಆ ಕ್ರಿಯೆಗೆ ಪ್ರತಿಕ್ರಿಯೆಯಾಗಿ ರಶ್ದಿ ಕಾಲದಲ್ಲಿ ಧರ್ಮಾತೀತವಾಗಿದ್ದ ಪ್ರಗತಿಪರ ಚಿಂತನೆಯು ಹೆಬ್ಡೋ ಕಾಲಕ್ಕೆ ಎಡಬಲದ ಧರ್ಮಾಧೀನವಾಗಿ ಓಲೈಕೆಯನ್ನು ಅಪ್ಪಿಬಿಟ್ಟಿತು.

ಮುಂದೆ ಸಾಮಾಜಿಕ/ಸಂವಹನ ಮಾಧ್ಯಮ ತಂತ್ರಜ್ಞಾನದ ಆಸ್ಫೋಟವು ಚಿಂತಕರಿಗೆ ಸಾಕಷ್ಟು ಪ್ರಚಾರ ನೀಡಿ ಮುಂದೆ ಅವರ ಮುಳುವಾಗಲು ಕಾರಣವಾಯಿತು. ಏಕೆಂದರೆ ಈ ವರ್ಗವು ಒಂದೊಮ್ಮೆ ಯಾವ ಸಮಾಜವಾದಿ ಚಿಂತನೆಯಡಿಯಲ್ಲಿ ಒಂದು ಪಕ್ಷವನ್ನು ವಿರೋಧಿಸಿತ್ತೋ ಅದೇ ಪಕ್ಷದ ರಾಜಕಾರಣಿಗಳ ಹುನ್ನಾರಕ್ಕೆ ತಾಳ ಹಾಕುತ್ತಾ ತಾವೇ ಪ್ರತಿಪಾದಿಸುತ್ತಿದ್ದ "ವೈವಿಧ್ಯತೆಯಲ್ಲಿ ಏಕತೆ, ಸರ್ವಜನಾಂಗದ ಶಾಂತಿಯ ತೋಟ" ಎಂಬೆಲ್ಲ ಉದಾತ್ತ ಚಿಂತನೆಯ ಭಾರತೀಯತೆಯನ್ನು ದ್ವಂದ್ವ, ಓಲೈಕೆ, ಜನಾಂಗೀಯ ದ್ವೇಷ, ವೈಯಕ್ತಿಕ ಅವಹೇಳನ, ಸೋಶಿಯಲ್ ಮೀಡಿಯಾ ಬುಲ್ಲಿಯಿಂಗ್, ಜಾತೀಯತೆಯ ಭಾವನೆಗಳನ್ನು ಸಂಶೋಧನೆ, ಬಹುತ್ವ, ಅಸ್ಮಿತೆ, ಸನಾತನ, ಸಂಸ್ಕೃತಿ, ಒಳಗೊಳ್ಳುವಿಕೆಗಳೆಂಬ ಸುಂದರ ಭಾವುಕ ಪದಗಳಿಂದ ಆಯಾಯ ಪಂಥೀಯರು ಅಲಂಕರಿಸತೊಡಗಿದರು. ಹೀಗೆ ಆರಂಭವಾದ ಭಾರತೀಯ ಚಿಂತಕರ ವಿಭಜನೆ ಎರಡು ಪ್ರಮುಖ ಪಕ್ಷಗಳ ಭಜನೆಯಲ್ಲಿ ಲೀನವಾಯಿತು. ಈ ಮಧ್ಯೆ ಸಾಕಷ್ಟು ಹೋರಾಟಗಳನ್ನು ಬುದ್ಧಿಜೀವಿಗಳು ರೂಪಿಸಿದರೂ ಮೇಲ್ನೋಟಕ್ಕೆ ಆ ಹೋರಾಟಗಳೆಲ್ಲವೂ ಯಾವ ಪಕ್ಷದ ಮತ್ತು ಮುಖಂಡನ ಪ್ರಭಾವದಲ್ಲಿವೆ ಎಂದು ಜನ ಸುಲಭವಾಗಿ ಗ್ರಹಿಸುವಂತಿದ್ದವು. ಎಲ್ಲಾ ಚಿಂತಕರ ವೈಚಾರಿಕತೆಯು ಎಡ ಬಲ ಸಿದ್ಧಾಂತಕ್ಕೆ ಬದ್ಧವಾಗಿ ಚಿಂತಕರ ಪ್ರಗತಿಪರತೆಯು ರಾಜಾರೋಷವಾಗಿ ಪಕ್ಷಪರತೆಯಾಯಿತು. ಹಾಗಾಗಿ ಅವರ ಎಲ್ಲಾ ಹೋರಾಟಗಳೂ ಆಯಾಯ ಪಂಥನಿಷ್ಠರ ಮನ್ನಣೆ ಗಳಿಸದವೇ ಹೊರತು ಜನಮನ್ನಣೆಯನ್ನಲ್ಲ. 

೨೦೧೪ ರಿಂದ ಕೇಂದ್ರ ಮತ್ತು ರಾಜ್ಯದ ಆಡಳಿತ ಸರ್ಕಾರಗಳು ಸಾಕಷ್ಟು ಕಿವಿ ಹಿಂಡುವ ಅವಕಾಶಗಳನ್ನು ಕೊಟ್ಟರೂ ಈ ವರ್ಗದ ವಿಚಾರ ತೀಕ್ಷ್ಣತೆ ಯಕಶ್ಚಿತ್ ಟ್ರೋಲಿಗೆ ಸೀಮಿತವಾಯಿತು. ಯಾವುದೇ ತಾರ್ಕಿಕ ಮತ್ತು ನೈತಿಕ ಪ್ರಶ್ನಾರ್ಥಿಗಳನ್ನು ಪ್ರಶ್ನೆಯ ಆಧಾರದ ಮೇಲೆ ಎಡ ಬಲ ಎಂದು ಹಣೆಪಟ್ಟಿ ಹಚ್ಚಿ ತುಚ್ಚೀಕರಿಸಲಾಯಿತು. ಕೇಂದ್ರದ ಅಮಾನ್ಯೀಕರಣ, ಸ್ಮಾರ್ಟ್ ಸಿಟಿ, jಪುಲ್ವಾಮಾ, RCEP, CAA, NRC, GST, ಕಾಶ್ಮೀರ ಸ್ವಾಯತ್ತತೆ, ಕೋವಿಡ್ ನಿರ್ವಹಣೆ ಮುಂತಾದ ಸರಣಿ ಅವಕಾಶಗಳನ್ನು ಕೇಂದ್ರ ಸರ್ಕಾರವು ಬುದ್ದಿಜೀವಿಗಳ ಟೀಕೆಗೆ ಅವಕಾಶ ಮಾಡಿಕೊಟ್ಟಿತು. ಆದರೆ ಇಲ್ಲಿ  ಸಮರ್ಥ ಸಂಶೋಧನಾತ್ಮಕ, ತಾರ್ಕಿಕ ತೀಕ್ಷ್ಣ ವಾದವನ್ನು ಮಂಡಿಸಿ ಜನಜಾಗೃತಿಗೊಳಿಸದೆ ಬುದ್ಧಿಜೀವಿಗಳು ಕೇವಲ ಕರುಣಾಜನಕ ಸೃಜನಶೀಲ ಕತೆಗಳನ್ನು ಹೆಣೆದು, ಅತಾರ್ಕಿಕ ಟ್ರೋಲ್ ಮಾಡಿ ಖುದ್ದು ಟ್ರೋಲಿಗೆ ಒಳಗಾದರು. ಅತ್ತ ಟ್ರೋಲ್ ಆಗುತ್ತಾ/ಮಾಡುತ್ತಾ ಹಿಂದಿನ ರಾಜ್ಯ ಸರ್ಕಾರದ ಲಿಂಗಾಯತ ಪ್ರತ್ಯೇಕ ಧರ್ಮ ಸಮಿತಿಯ ಭಾಗವಾಗಿ ಎಲ್ಲಾ ಸಂಶೋಧನೆಗಳನ್ನು ತೂರಿ ಜೈಕಾರ ಹಾಕಿ ಸರ್ಕಾರದ ನಿರ್ಣಯ ಬೆಂಬಲಿಸಿದರು. ಬಹಳಷ್ಟು ಎಡದ ಬುದ್ದಿಜೀವಿಗಳು ಇದೇ ಸರ್ಕಾರದ ಕೆಲವು ಸ್ಥಾನಮಾನಗಳನ್ನು ಪಡೆದುಕೊಂಡರು. ಹಾಗೆ ಸ್ಥಾನಮಾನ ಪಡೆದುಕೊಂಡವರ ಪ್ರತಿರೋಧ, ಹೋರಾಟ, ಬೆಂಬಲಗಳೆಲ್ಲವೂ ಸಹಜವಾಗಿ "ಆಯ್ದ" ವಿಷಯಗಳಾದವು. ಅವರ ನೈತಿಕತೆ, ಬದ್ಧತೆ ಪ್ರಶ್ನಾರ್ಹವಾಯಿತು. ತಟ್ಟೆ ಕಾಸು, ಗಂಜಿ ಗಿರಾಕಿ ಮುಂತಾದ ಹೊಸ ಪರಿಭಾಷೆಗಳು ಸಾಹಿತ್ಯ ವಲಯಕ್ಕೆ ಕಾಲಿಟ್ಟವು. ಬದಲಾದ ರಾಜ್ಯ ಸರ್ಕಾರದಲ್ಲಿ ಬಲದ ಬುದ್ದಿಜೀವಿಗಳು ಸ್ಥಾನಮಾನ ಪಡೆದುಕೊಂಡರು. ಗೋಹತ್ಯೆ ನಿಷೇಧ, ಪಠ್ಯ ಪುಸ್ತಕ ಪರಿಷ್ಕರಣೆಯಂತಹ "ಆಯ್ದ" ವಿಷಯ ಅವರದಾಗಿತ್ತು. ಎಡ ಬಲರ ಚಿತ್ರ ವಿಚಿತ್ರ ಸಂಶೋಧನೆಗಳು ಯಾವುದೇ ಪುರಾವೆಗಳಿಲ್ಲದೆ ಅಥವಾ ಸೃಷ್ಟಿಸಿದ ಪುರಾವೆಗಳೊಂದಿಗೆ ವಿಶ್ವವಿದ್ಯಾಲಯಗಳ ಮಟ್ಟದಲ್ಲೇ ಸೃಷ್ಟಿಯಾದವು. ತಮ್ಮ ತಮ್ಮ ಪಂಥಕ್ಕೆ ಸೇರಿದ್ದ ಇವೆಲ್ಲ ಅಪಸವ್ಯಗಳನ್ನು ಎಡ ಬಲ ಬುದ್ಧಿಜೀವಿಗಳು ಬೆಂಬಲಿಸಿದರಲ್ಲದೆ ಪ್ರಮಾಣಪತ್ರಗಳನ್ನೂ ನೀಡಿ ಅಧಿಕೃತಗೊಳಿಸಿದರು.

ಹೀಗೆ ಎಡ ಬಲ ಪ್ರಗತಿಪರರ ಕ್ರಿಯೆ-ಪ್ರಕ್ರಿಯೆಗಳ ಆಯ್ದ ಹೋರಾಟಗಳ ಅತೀವ ಓಲೈಕೆಯ ಫಲವೇ ಇಂದು ಸಮಾಜದಲ್ಲಿ ಗೋಹತ್ಯೆ ನಿಷೇಧ, ಹಿಜಾಬ್-ಕೇಸರಿಶಾಲು, ಹಲಾಲ್-ಜಟ್ಕಾ, ಜಾತ್ರೆ-ಉರ್ಸ್ ಕ್ರಿಯೆ-ಪ್ರಕ್ರಿಯೆಗಳ ವ್ಯಾಪಾರದ ಜಂಜಾಟಕ್ಕೆ ಸ್ಫೂರ್ತಿ ಕೊಟ್ಟಿವೆ! ಸಾಂಸ್ಕೃತಿಕವಾಗಿ ರಿಕ್ಷಾ, ಟ್ಯಾಕ್ಸಿ, ಕಾರು, ಲಾರಿಗಳ ಮೇಲೆಲ್ಲಾ ಜಾತಿ ಪ್ರೌಢಿಮೆ ಮೆರೆಯುತ್ತಿದೆ.

ಇನ್ನು ಆಡಳಿತ ವಿರೋಧಿ ಎಡಬಣದ "ತೋಳ ಬಂತು ತೋಳ" ಕತೆಯಂತಹ ಅಕಾರಣ ಕೂಗನ್ನು ಕೇಳಿ ಕೇಳಿ ಬೇಸತ್ತಿದ್ದ ಜನ ಇವರನ್ನು ಅತ್ಯಂತ ತೀವ್ರ ಅನುಮಾನದಿಂದ ನೋಡತೊಡಗಿದರು. ಆ ಅನುಮಾನವನ್ನು ಹೆಚ್ಚಿಸುವಂತೆ ಆ ಬಣದ ಚಿಂತಕರು ಮತ್ತಷ್ಟು ಟ್ರೋಲೆಂಬ ಸುಳಿಯಲ್ಲಿ ಸಿಲುಕಿ ಹೊರಬರದಾದರು.

ಇಂತಹ ಸುಳಿಯಲ್ಲಿ ಸಿಕ್ಕವರು ಮೊನ್ನೆ ಮೊನ್ನೆ ಸಹ ಕನ್ನಡ ಸಾಹಿತ್ಯ ಸಮ್ಮೇಳನದ ಸಮತೋಲಿತ ಅಲ್ಪಸಂಖ್ಯಾತ ಪ್ರತಿನಿಧಿತ್ವವನ್ನು ಇವರು ಸಮರ್ಥವಾಗಿ ವಿರೋಧಿಸದಾದರು. ಪರ್ಯಾಯ ಎಂದು ಸಮ್ಮೇಳನ ಮಾಡಿದರೂ ಅಲ್ಲಿ ಓಲೈಕೆಯನ್ನೇ ಮೆರೆದರು. ಬೌದ್ಧ ತತ್ವದ ಚಿಂತಕ ಎನಿಸಿದವರು, ಬುದ್ಧನ ತತ್ವ ಹರಡಿ ಸ್ತೂಪಗಳನ್ನು ಕಟ್ಟಿದ ವೈಶ್ಯರನ್ನು ಮೂದಲಿಸಿ ಕವಿ ಸಾಹಿತಿಗಳೇ ದೇಶ ಕಟ್ಟುವವರು ಎಂದು ಜನಾಂಗೀಯ ದ್ವೇಷದ ಕರೆ ನೀಡಿದರು. ಮೂರ್ತರೂಪದ ವಂದೇ ಮಾತರಂ ವಿರೋಧಿಸುತ್ತ ಅದೇ ಮೂರ್ತರೂಪದ ಜಯಹೇ ಕರ್ನಾಟಕ ಮಾತೆ ನಾಡಗೀತೆಯನ್ನು ಎಲ್ಲರೂ ಹಾಡಿದರು. ಓಲೈಕೆಯ ಭರದಲ್ಲಿ ಟಿಪ್ಪು ಕರ್ನಾಟ(ಕ) ಎಂಬ ಹೆಸರನ್ನು ಮೊಟ್ಟ ಮೊದಲು ಬಳಸಿದ ವ್ಯಕ್ತಿ ಎಂದು ನಿವೃತ್ತ ಸಂಶೋಧಕರು ಅಮೋಘವರ್ಷ, ಕರ್ನಾಟಕ (ವಿಜಯನಗರ) ಸಾಮ್ರಾಜ್ಯ, ನಾಗಚಂದ್ರ ಕವಿಗಳು ಬಳಸಿದ್ದ ಈ ಪದದ ಈವರೆಗಿನ ಎಲ್ಲಾ ಸಂಶೋಧನೆಗಳನ್ನು ಗಾಳಿಗೆ ತೂರಿ ಕೋಮು ಓಲೈಕೆಯ ಕರೆ ನೀಡಿದರು. ಕೆಂಪು ಹಳದಿ ಬಣ್ಣದ ಕನ್ನಡ ಬಾವುಟವನ್ನು ಧ್ವಜಾರೋಹಣ ಮಾಡಿ ಜಯಹೇ ಕರ್ನಾಟಕ ಮಾತೆ ಎಂದು ಮೂರ್ತರೂಪವನ್ನು ಹಾಡಿದ ಸೆಕ್ಯುಲರ್ ಉದಾರವಾದಿ ಅಧ್ಯಕ್ಷರು ಭಾಷಣದಲ್ಲಿ ಕನ್ನಡ ಧ್ವಜವನ್ನು ಕುಂಕುಮ ಅರಿಶಿಣದ ಬಣ್ಣದ್ದು ಮಾಡಿ, ಕರ್ನಾಟಕ ಮಾತೆಗೆ ಭುವನೇಶ್ವರಿ ರೂಪ ಕೊಟ್ಟು ನಮ್ಮನ್ನು ಹೊರಗಿಡಲಾಗಿದೆ ಎಂದು ತಮ್ಮ ಧಾರ್ಮಿಕ ಸಂಕುಚಿತ ನಿಲುವು ತೋರಿದರು. ಆಯೋಜಕ ಪತ್ರಕರ್ತರು ಇಲ್ಲಿ ಸಾಹಿತ್ಯವಿಲ್ಲ, ನಮ್ಮದು ಪ್ರತಿರೋಧ ಅಷ್ಟೇ ಎಂದರು. ಆಹಾರತಜ್ಞೆಯೊಬ್ಬರು, 'ದಿನಕ್ಕೆ ಒಂದೂವರೆ ಸಾವಿರ ರೂಪಾಯಿ ದುಡಿಯುವ ವ್ಯಕ್ತಿಗೆ ಕುಟುಂಬಕ್ಕೆ ನಿತ್ಯ ತರಕಾರಿ ಕೊಳ್ಳುವ ಆರ್ಥಿಕ ಶಕ್ತಿ ಇರದು. ಆದರೆ ಮಾಂಸವನ್ನು ಕೊಂಡರೆ ಅದನ್ನು ಎರಡು ದಿನ ಊಟ ಮಾಡಬಹುದು' ಎಂದು ಸಸ್ಯಾಹಾರವನ್ನು ಖರ್ಚಿನ ಬಾಬ್ತು ಮಾಡಿದರು. ಬೀಫ್ ಬ್ಯಾನ್ ಹೇರಿಕೆಯಿಂದಾಗುವ ರಾಷ್ಟ್ರೀಯ ವಿಪತ್ತನ್ನು ವಿಶ್ಲೇಷಿಸದೆ ಕೇವಲ "ಸಸ್ಯಾಹಾರ ಮೇಲು, ಮಾಂಸಾಹಾರ ಕೀಳು" ಎಂಬ ಸತ್ತ ಪುರಾತನ ಭಾವುಕ ಹೆಣಕ್ಕೇ CPR ಕೊಟ್ಟರು. ಹೀಗೆ ಅತಾರ್ಕಿಕ ಅವಾಸ್ತವಿಕ, ಮೂರ್ಖ ಸಂಕಥನಗಳನ್ನು ಸೃಷ್ಟಿಸಿದರೆ, ಪುನರುಚ್ಚರಿಸಿದರೆ ಇಪ್ಪತ್ತೊಂದನೇ ಶತಮಾನದ ಯುಗದಲ್ಲಿ ಅದನ್ನು ಜನರು ಕೇಳಿಯಾರೆ!?

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಸಾಪ ಅಧ್ಯಕ್ಷರ ಪಕ್ಷಪಾತ, ಅದಕ್ಷತೆ, ಓಲೈಕೆ, ಆತ್ಮರತಿಗಳನ್ನು ಸಮರ್ಥವಾಗಿ ಅದೇ ವೇದಿಕೆಯಲ್ಲಿ ಪ್ರತಿಭಟಿಸುವ ತೀಕ್ಷ್ಣ ವೈಚಾರಿಕ ಪ್ರಯತ್ನವೇ ಆಗದೆ ಖುದ್ದು ಪರ್ಯಾಯ ಟ್ರೋಲ್ ಆದರು. ಒಟ್ಟಾರೆ ಇಂತಹ ಒಂದು ಅತಿ ಸಾಮಾನ್ಯ ವಿಷಯದ ಪ್ರತಿರೋಧದಲ್ಲಿಯೇ ದಾರುಣವಾಗಿ ಎಡವಿದ್ದಾರೆ.  ಒಂದೊಮ್ಮೆ ಪ್ರಖರ ಸಂಶೋಧನೆ, ತಾರ್ಕಿಕ ವಾದ ಮಂಡನೆ, ತೀಕ್ಷ್ಣ ವೈಚಾರಿಕತೆ, ವಿಷಯ ಸ್ಪಷ್ಟತೆ, ಆದರ್ಶತತ್ವಗಳ ಪರಿಚಾರಕರಾಗಿದ್ದ ಈ ವರ್ಗಕ್ಕೆ ಇಷ್ಟೊಂದು ವೈಚಾರಿಕ ದಾರಿದ್ರ್ಯತೆ ಏಕೆ ಬಂದಿತು ಎಂಬುದೇ ಇಂದಿನ ದುರಿತ ಕಾಲದ ರಾಷ್ಟ್ರೀಯ ದುರಂತ. 

ಸಾಮಾನ್ಯ ತಿಳಿವಳಿಕೆಯ ಓರ್ವ ನಾಗರಿಕನನ್ನೇ ಪ್ರಭಾವಿಸಲಾಗದೆ ಖುದ್ದು ಸ್ವಾಮಿಭಕ್ತಿಯಲ್ಲಿ ಲೆಂಕರಾಗಿರುವ ಈ ವರ್ಗವು ಸರ್ಕಾರವನ್ನು ಹೇಗೆ ಶೂಲಕ್ಕೇರಿಸಬಲ್ಲದು?!?

#

"ನುಡಿ ಸೂತಕ" - Blurb

 "ನುಡಿ ಸೂತಕ" ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನೂತನ ವಿಮರ್ಶಾ ಪ್ರಯೋಗವನ್ನು ಮಾಡಿದೆ. ’ಕೃತಿ’ ಮತ್ತು ’ಸಂಸ್ಕೃತಿ’ ಎಂಬ ಎರಡು ಭಾಗಗಳಲ್ಲಿ ಈ ವಿಮರ್ಶಾ ಕೃತಿಯನ್ನು ರಚಿಸಲಾಗಿದೆ. ಮಾನವಶಾಸ್ತ್ರದ ನೆಲೆಯಲ್ಲಿಯೇ ಜನಾಂಗೀಯ ಶೋಷಣೆಯನ್ನು ಮೆಟ್ಟಿ ನಿಂತ ಸಾಧಕರ ಜೀವನಗಾಥೆಗಳ ಪರಿಚಯಾತ್ಮಕ ವಿಮರ್ಶೆಯ ಆಯಾಮ ’ಕೃತಿ’ ಭಾಗದಲ್ಲಿಯೂ ಮತ್ತು ಬುಡಕಟ್ಟು ಸಂಸ್ಕೃತಿಗಳ ಪೂರ್ವಾಗ್ರಹಿತ ಸಂಶೋಧನೆಗಳ ಸಶಕ್ತ ಅನಾವರಣ ’ಸಂಸ್ಕೃತಿ’ ಭಾಗದಲ್ಲಿಯೂ ಇದೆ.


ಬ್ಯಾಪಾರಿ ಮನೋರಂಜನ್, ಫ್ರೆಡ್ ಡಗ್ಲಾಸ್, ವಾರಿಸ್ ಡಿರಿ ಅವರ ಸಂಘರ್ಷಗಾಥೆಯ ಜೊತೆಗೆ ಹಳಗನ್ನಡದಲ್ಲಿ ಗುಲಾಮಗಿರಿಯ ಪ್ರಸ್ತಾಪ ಮತ್ತು ಸ್ವರೂಪ, ಕರ್ನಾಟಕದ ಕೊರಚರು: ಒಂದು ಸಬಾಲ್ಟರ್ನ್ ನೋಟ, ಕೊರಮರ ಶೋಷಣೆ, ಮತ್ತು ನೀಹ ಅವರ ಲೇಖನ ಸಾಹಿತ್ಯದ ವಿಮರ್ಶೆಗಳು ಎಂತಹ ಅಪಾಯಕಾರಿ ಸನ್ನಿವೇಶಗಳನ್ನು ಆ ಸಾಧಕರು ಎದುರಿಸಿರಬಹುದು ಎಂಬ ಮಾನವಶಾಸ್ತ್ರದ ಹಿನ್ನೆಲೆಯನ್ನು "ಕೃತಿ" ಭಾಗವು ತೆರೆದಿಡುತ್ತದೆ.

"ಕೃತಿ"ಯು ಒಂದೆಡೆ ಶ್ರೀಸಾಮಾನ್ಯನನ್ನು ಪ್ರಚೋದಿಸಿ ಚೈತನ್ಯಿಸಿ ಧನಾತ್ಮಕವಾಗಿ ಸ್ಫೂರ್ತಿ ತುಂಬಿದರೆ, ಇನ್ನೊಂದೆಡೆ ಎಂತಹ ಸವಾಲುಗಳನ್ನು ಎದುರಿಸಿ ಸಾಧನೆಗೆ ಅಣಿಯಾಗಬೇಕಾಗುತ್ತದೆ ಎಂಬ ವಾಸ್ತವ ಚಿತ್ರಣವನ್ನು ತೋರಿಸುತ್ತದೆ.

ಮಾನವಶಾಸ್ತ್ರದ ನೆಲೆಯ ಮಹತ್ತರವಾದ ಭಾರತೀಯ ಕೃತಿಗಳಲ್ಲದೆ ಜಾಗತಿಕ ಕೃತಿಗಳೂ ಸೇರಿದಂತೆ ಮತ್ತು ಮಲಬಾರ್ ಅಡಿಯನ್ನರ ಕಥನದ ’ಕಾಲಾ’ ಸಿನಿಮಾವನ್ನೂ ವಿಮರ್ಶೆಯ ತೆಕ್ಕೆಗೆ ತೆಗೆದುಕೊಂಡು ವಿಶ್ಲೇಷಣಾತ್ಮಕವಾಗಿ ಕೃತಿಗಳ ವಿಮರ್ಶೆಯನ್ನು ’ಕೃತಿ’ ಭಾಗದಲ್ಲಿ ಕಟ್ಟಿಕೊಡುತ್ತ ಹೇಗೆ ಆ ಸಾಧಕರು ಎಲ್ಲಾ ಶೋಷಣೆಯನ್ನೂ ಮತ್ತು ಸಿದ್ಧಸೂತ್ರದ ನೆಪಗಳನ್ನು ಮೆಟ್ಟಿ ನಿಂತರು ಎಂಬ ಧನಾತ್ಮಕ ಚಿಂತನೆಯನ್ನು ಹರಿಸಲಾಗಿದೆ. ಶೋಷಣೆಯೇ ಸಾಧನೆಗೆ ಅಡ್ಡಿ ಎಂಬ ನೆಪಗಳನ್ನೊಡ್ಡಿ ಕಾಲಹರಣ ಮಾಡುವ ಎಲ್ಲರಿಗೂ ಈ ಕೃತಿಗಳು ಮತ್ತು ಮಲ್ಲಯ್ಯನವರ ಪರಿಚಯಾತ್ಮಕ ವಿಮರ್ಶೆ ದಾರಿದೀಪವಾಗಿದೆ. ಹಾಗೆಯೇ "ಸಂಸ್ಕೃತಿ"ಯಲ್ಲಿ ಋಣಾತ್ಮಕ ಸಂಶೋಧನೆಗಳನ್ನು ಖಂಡಿಸಿ ವಾಸ್ತವಿಕ ಸತ್ಯದ ಹಾದಿಯ ವಿಮರ್ಶೆಯ ಚಿಂತನೆಯ ಪ್ರಚೋದನೆಯನ್ನು ತೋರುತ್ತ ಕರ್ನಾಟಕ ಬುಡಕಟ್ಟು ಸಂಸ್ಕೃತಿಗಳಾದ ಮ್ಯಾಸಬೇಡ, ಗೊಲ್ಲರ ಮೇಲಿನ ಸಂಶೋಧನೆಗಳಲ್ಲಿನ ಸಂಕಥನವನ್ನು ಕಟು ವಾಸ್ತವದ ಹಿನ್ನೆಲೆ ಮತ್ತು ಆಕರಗಳ ನೆಲೆಯಲ್ಲಿ ತೀಕ್ಷ್ಣ ವಿಮರ್ಶೆಯಾಗಿಸಿ ಸಕಾರಣವಾಗಿ ಪ್ರಶ್ನಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಈ ಕೃತಿ ನೂತನ ಪ್ರಯೋಗ ಎನಿಸಿದೆ.

ಮುಖ್ಯವಾಗಿ ಮಾನವನ ಮೂಲವೃತ್ತಿಯ ಸಂಗ್ರಹಣೆ, ಬೇಟೆ, ಪಶುಪಾಲನೆ, ಬೇಸಾಯದ ಹಿನ್ನೆಲೆಯಲ್ಲಿ ರೂಪುಗೊಂಡ ಮಾನವ ಜನಾಂಗದ ಮೂಲ ಸಂಸ್ಕೃತಿಗಳು ಇಲ್ಲಿನ ’ಸಂಸ್ಕೃತಿ’ ಭಾಗದ ವಿಮರ್ಶೆಯ ಹೃದ್ಯಭಾಗವಾಗಿವೆ. ಇದು ಮೇಲ್ನೋಟಕ್ಕೆ ಕರ್ನಾಟಕ ಬುಡಕಟ್ಟು ಸಂಸ್ಕೃತಿಗಳ ಕುರಿತಾದ ವಿಷಯವೆನಿಸಿದರೂ ಈ ಸಂಸ್ಕೃತಿಯ ಪದ್ಧತಿಗಳು, ಆಚರಣೆಗಳು ವಿಶ್ವದೆಲ್ಲೆಡೆಯ ನೆಲಮೂಲ ಸಂಸ್ಕೃತಿಗಳ ಜೊತೆ ಅಗಾಧ ಸಾಮ್ಯತೆಯನ್ನು ಹೊಂದಿವೆ. ಉದಾಹರಣೆಗೆ ಈ ಭಾಗದ "ಮಾನವ ಚರಿತ್ರೆಯಲ್ಲಿ ಬಂಡವಾಳವಾದ ಹಸಿವು ಎಂಬ ಜಾತಿಗೆಟ್ಟ ಪ್ರತಿಮೆ" ಅಧ್ಯಾಯದಲ್ಲಿ ಬರುವ ಕನ್ನಯ್ಯನ ಬೇಟೆ ನೀತಿಯು ಜಾಗತಿಕವಾಗಿ ಬಹುಪಾಲು ಬುಡಕಟ್ಟು ಜನಾಂಗಗಳ ಬೇಟೆಯ ನೀತಿಯೇ ಆಗಿತ್ತು. ಅದೇ ರೀತಿ "ಮ್ಯಾಸಬೇಡರನ್ನು ಕುರಿತ ಸಂಶೋಧನೆ: ಮಿತಿ ಮೀರಬೇಕಾದ ಸ್ಥಿತಿ" ಅಧ್ಯಾಯದಲ್ಲಿ ವಿವರಿಸಿದ ಮ್ಯಾಸಬೇಡ ಸಂಸ್ಕೃತಿಯ ಪೋತರಾಜು ಆದವರಿಗೆ ಜೀವಂತ ಹೋತಗಳ ರಕ್ತ ಕುಡಿಸುವ ಪದ್ಧತಿಯು ಆಫ್ರಿಕಾದ ಮಸಾಯಿ ಬುಡಕಟ್ಟಿನೊಂದಿಗೆ ಸಾಮ್ಯತೆ ಹೊಂದಿದೆ. ಈಗಿನ ಆಧುನಿಕ ಮಾಸಾಯಿಗಳು ಬಾಯಿಯಿಂದ ಕಚ್ಚದೆ ಹಸು, ಹೋತಗಳ ರಕ್ತನಾಳಗಳಿಗೆ ಬಾಣದಿಂದ ಚುಚ್ಚಿ ಬೆಚ್ಚನೆಯ ರಕ್ತ ಹೀರುತ್ತಾರೆ.

ಇಂತಹ ಪ್ರಮುಖ ಸಾಮ್ಯತೆಗೆ ಇರುವ ಕಾರಣ, ಈ ಎಲ್ಲಾ ಸಂಸ್ಕೃತಿಗಳೂ ಮಾನವನ ವಿಕಾಸದ ಜೊತೆಜೊತೆಗೆ ಪ್ರಾಕೃತಿಕ ಧರ್ಮವಾಗಿ ರೂಪುಗೊಂಡು ವಿಕಾಸ ಹೊಂದಿದ "ಜಾಗತಿಕ ಪ್ರಾಕೃತಿಕ ಸಂಸ್ಕೃತಿ"ಗಳಾಗಿವೆ. ಹಾಗಾಗಿಯೇ ಆದಿಮಾನವರು (ನಿಯಾಂಡ್ರಥಲ್ ನಿಂದ ನಿಯೋಲಿಥಿಕ್ ವರೆಗೆ) ರಚಿಸಿದ ಗುಹಾ ರೇಖಾಚಿತ್ರಗಳು ಬಳ್ಳಾರಿಯ ಸಂಗನಕಲ್ಲು, ಆರಿಜೋನಾದ ಕ್ಯಾನ್ಯನ್ ಡಿ ಚೆಲ್ಲಿ, ಇಂಡೋನೇಷಿಯಾದ ಸುಲಾವೇಶಿ ಟಿಡಾಂಗ್ನೇ, ಸ್ಪೇನಿನ ಮಾಲ್ಟ್ರಾವಿಸೋ ಮತ್ತು ಆರ್ದೆಲ್ಸ್, ಜಗತ್ತಿನಲ್ಲಿಯೇ ಅತ್ಯಂತ ಹಳೆಯದು ಎನ್ನಲಾಗುವ ನಮೀಬಿಯಾದ ಅಪೋಲೋ ೧೧ರವರೆಗೆ ಸಾಮ್ಯತೆ ಹೊಂದಿವೆ ಮತ್ತವು ಕೂಡುಕಟ್ಟು ಸಂಸ್ಕೃತಿಯನ್ನೇ ಪ್ರತಿಪಾದಿಸಿವೆ. ಹಾಗಾಗಿ ಕೇವಲ ಬೇಟೆಯಂತಹ ಆಹಾರ ಸಂಗ್ರಹಣೆ ನಿಯಮವಲ್ಲದೆ ಕೂಡುಕಟ್ಟು ಸಂಸ್ಕೃತಿಯ ಫಲವಂತಿಕೆ, ಜೀವಸೃಷ್ಟಿ, ಆರಾಧನೆ, ಮತ್ತು ಅಂತಿಮ ಸಂಸ್ಕಾರಗಳವರೆಗಿನ ಎಲ್ಲಾ ಆಯಾಮಗಳೂ ಜಾಗತಿಕವಾಗಿ ಅಗಾಧ ಸಾಮ್ಯತೆಯನ್ನು ಹೊಂದಿವೆ. ಇದಕ್ಕೆ ಸಾಕ್ಷಿಯಾಗಿ ಜಗತ್ತಿನಾದ್ಯಂತ ನೋಡಲು ಸಿಗುವ ಟೋಟೆಮ್ ಚಿಹ್ನೆಗಳು, ಲಿಂಗಾರಾಧನೆ, ಯೋನಿಪೂಜೆಯಂತಹ ಫಲವಂತಿಕೆಯ ಶಿಲ್ಪಗಳು, ಬಳ್ಳಾರಿ ಜಿಲ್ಲೆಯ ಕುಡುತಿನಿಯ ಬೂದಿಗುಂಪಾಗಳ ರೀತಿಯಲ್ಲಿಯೇ ತಮಿಳುನಾಡಲ್ಲದೆ ಅಮೇರಿಕಾದ ಅರ್ಕನ್ಸಾಸಿನವರೆಗೆ ಹಬ್ಬಿರುವ ಶವಸಂಸ್ಕಾರ ತಿಟ್ಟಗಳು ಹಬ್ಬಿವೆ. ಶಿಲೆ, ಬೆರಣಿ, ಮಣ್ಣು, ಚಿಪ್ಪುಗಳಂತಹ ವಸ್ತುಗಳನ್ನು ಶವದ ಸುತ್ತ ಪೇರಿಸಿ ಸುಡುವಂತಹ ನಿಯೋಲಿಥಿಕ್ ಕಾಲದ ಜನರ ಈ ತಿಟ್ಟಗಳನ್ನು ಕಟ್ಟಿ ಶವಸಂಸ್ಕಾರ ಮಾಡುವ ಪದ್ಧತಿಯು ಪ್ರಪಂಚದಾದ್ಯಂತ ಬಳಕೆಯಲ್ಲಿತ್ತು. ಹೀಗೆ ಬೂದಿಗುಂಪಾಗಳನ್ನು ಸೃಷ್ಟಿಸಿ ಶವಸಂಸ್ಕಾರ ಮಾಡುವ ಪದ್ಧತಿಯಂತೆಯೇ ಅವರದೇ ಆದ ಶವಸಂಸ್ಕಾರ ಪದ್ಧತಿ ನಿಯಾಂಡ್ರಥಲ್ ಜನರದ್ದೂ ಜಾಗತಿಕವಾಗಿ ಒಂದೇ ರೀತಿಯದಾಗಿತ್ತು. ಒಟ್ಟಿನಲ್ಲಿ ಮಾನವ ಜನಾಂಗ ಮತ್ತು ಮಾನವ ಸಂಸ್ಕೃತಿಗಳು ಆರಂಭದಿಂದಲೂ ಜಾಗತಿಕವಾಗಿದ್ದವು.

ಹಾಗಾಗಿಯೇ ಮನಶ್ಯಾಸ್ತ್ರಜ್ಞರು, "ಮೇಲ್ನೋಟಕ್ಕೆ ಸಂಸ್ಕೃತಿಗಳು ಬೇರೆ ಬೇರೆ ಎನಿಸಿದರೂ ಆಳದಲ್ಲಿ ಒಂದೇ ಆಗಿವೆ. ಸಂಸ್ಕೃತಿ ಮತ್ತು ಸಾಮಾಜಿಕತೆಗಳು ಮಾನವನ ನಡವಳಿಕೆಯ ಮೇಲೆ ತಕ್ಕ ಮಟ್ಟಿಗೆ ಪರಿಣಾಮ ಹೊಂದಿದ್ದರೂ ಅದು ಆಳದಲ್ಲಿ ಪರಿಣಾಮ ಹೊಂದಿರದು. ಮಾನವನ ನಡವಳಿಕೆಯ ಮೇಲೆ ಸಂಸ್ಕೃತಿಯ ಪರಿಣಾಮ ಬೀರಿ ಹೇಗೆ ಬೇಕೋ ಹಾಗೆ ಮಾನವ ನಡವಳಿಕೆಯನ್ನು ಬದಲಾಯಿಸಬಹುದೆಂದು ಸಾಕಷ್ಟು ಸಮಾಜಶಾಸ್ತ್ರಜ್ಞರು ತಪ್ಪು ತಿಳಿದಿದ್ದಾರೆ. ಮೇಲ್ನೋಟಕ್ಕೆ ಸಂಸ್ಕೃತಿಗಳು ಬೇರೆ ಬೇರೆ ಎಂದು ಕಂಡರೂ ಆಳದಲ್ಲಿ ಹೇಗೆ ಒಂದೇ ಆಗಿರುವವೋ ಅದೇ ರೀತಿ ಮಾನವನ ನಡವಳಿಕೆಗಳು ಮೇಲ್ನೋಟಕ್ಕೆ ಭಿನ್ನವೆನಿಸಿದರೂ ಆಳದಲ್ಲಿ ಒಂದೇ ಆಗಿವೆ ಎಂದು ಖ್ಯಾತ ಮನಶಾಸ್ತ್ರಜ್ಞರಾದ ಲಿಡಾ ಕಾಸ್ಮೈಸ್ ಮತ್ತು ಜಾನ್ ಟೂಬಿ ತಮ್ಮ ಪ್ರಯೋಗಗಳ ಮೂಲಕ ಸಾಬೀತು ಪಡಿಸಿದ್ದಾರೆ. ಇದೇ ಅಭಿಪ್ರಾಯವನ್ನು ಖ್ಯಾತ ಮಾನವಶಾಸ್ತ್ರಜ್ಞರಾದ ಮಾರ್ವಿನ್ ಹ್ಯಾರಿಸ್ ತಮ್ಮ ಮಾತುಗಳಲ್ಲಿ ಹೀಗೆ ಹೇಳುತ್ತಾರೆ, "ಒಂದು ಸಂಸ್ಕೃತಿಯ ಜನರು ದನವನ್ನು ತಿಂದು ಹಂದಿಯನ್ನು ಪೂಜಿಸಿದರೆ, ಇನ್ನೊಂದು ಸಂಸ್ಕೃತಿಯ ಜನರು ದನವನ್ನು ಪೂಜಿಸಿ ಹಂದಿಯನ್ನು ತಿನ್ನುತ್ತಾರೆ. ಇದು ಎರಡು ಸಂಸ್ಕೃತಿಗಳ ಮೇಲ್ನೋಟದ ಸ್ಪಷ್ಟ ಭಿನ್ನತೆ! ಆದರೆ ದನ ಮತ್ತು ಹಂದಿಗಳು ಕೋತಿ, ನಾಯಿ, ತಿಮಿಂಗಿಲಗಳಂತೆಯೇ ಮಾನವನಿಗೆ ಪ್ರಾಣಿಜನ್ಯ ಪ್ರೋಟೀನ್ ಆಹಾರ ಪದಾರ್ಥಗಳಾಗಿವೆ ಮತ್ತು ಮಾನವನಿಂದ ತಿನ್ನಲ್ಪಡುತ್ತವೆ. ಆದಲ್ಲದೇ ಇದೇ ದನ ಮತ್ತು ಹಂದಿಗಳು ಬುದ್ಧ, ಅಲ್ಲಾಹ್, ಜೀಸಸ್ ಅವರಂತೆಯೇ ಮಾನವನಿಗೆ ಜೀವಚೈತನ್ಯ ತುಂಬುವ ಪೂಜ್ಯಾರ್ಹ ವಸ್ತುಗಳೂ ಆಗಿವೆ. ಹಾಗಾಗಿ ಎಲ್ಲಾ ಸಂಸ್ಕೃತಿಯ ತಳಹದಿಯಲ್ಲಿ ಪ್ರಾಣಿಜನ್ಯ ಪ್ರೋಟೀನ್ ಸೇವನೆ, ಪ್ರಾಣಿಗಳೆಡೆಗಿರುವ ಪೂಜ್ಯ ಅಥವಾ ಅಪೂಜ್ಯ ಭಾವನೆ ಮಾನವ ಸಹಜವಾಗಿ ಒಂದೇ ಆಗಿದೆ.

ಹ್ಯಾರಿಸ್ ಅವರ ಉದಾಹರಣೆಯ ಹಿನ್ನೆಲೆಯಲ್ಲಿ ಮಾನವ ಸಂವಹನದ ಭಾಷೆಗಳನ್ನು ಗಮನಿಸಿದಾಗ, ಭಾಷೆಗಳೂ ಸಹ ಮೇಲ್ನೋಟಕ್ಕೆ ಬೇರೆ ಬೇರೆ ಎನಿಸಿದರೂ ಅವುಗಳಲ್ಲಿನ ಭಾವಾರ್ಥ ಒಂದೇ ಆಗಿದೆ. ಇದಕ್ಕೆ ಉದಾಹರಣೆಯಾಗಿ ನಮ್ಮದೇ ಕನ್ನಡ ಭಾಷೆಯ ಕೆಲವು ನುಡಿಗಟ್ಟುಗಳನ್ನು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳ ನುಡಿಗಟ್ಟುಗಳಿಗೆ ಹೋಲಿಸಿ ನೋಡಿದಾಗ ಅವೆಲ್ಲವೂ ಒಂದೇ ಆಗಿವೆ, ಅಕ್ಷರಶಃ! ಅಂತಹ ಕೆಲವು ನುಡಿಗಟ್ಟುಗಳು ಹೀಗಿವೆ:

೧. ಸ್ಪ್ಯಾನಿಷ್ ಗಾದೆ: Donde hay gana, hay maña!
ಇಂಗ್ಲಿಷ್ ಗಾದೆ: Where there is a will, there is a way!
ಕನ್ನಡ ಗಾದೆ: ಮನಸ್ಸಿದ್ದರೆ ಮಾರ್ಗ!

೨. ಸ್ಪ್ಯಾನಿಷ್ ಗಾದೆ: Donde hay humo, hay calor!
ಇಂಗ್ಲಿಷ್ ಗಾದೆ: There is no smoke without fire!
ಕನ್ನಡ ಗಾದೆ: ಬೆಂಕಿಯಿಲ್ಲದೆ ಹೊಗೆ ಏಳುವುದಿಲ್ಲ!

೩. ಸ್ಪ್ಯಾನಿಷ್ ಗಾದೆ: Con paciencia y saliva, un elefante se tiro a una hormiga!
ಇಂಗ್ಲಿಷ್ ಗಾದೆ: Little strokes fell great oaks!
ಕನ್ನಡ ಗಾದೆ: ಹನಿಹನಿಗೂಡಿದರೆ ಹಳ್ಳ!

೪. ಸ್ಪ್ಯಾನಿಷ್ ಗಾದೆ: Con su pan se lo coma!
ಇಂಗ್ಲಿಷ್ ಗಾದೆ: Reap what you sow!
ಕನ್ನಡ ಗಾದೆ: ಮಾಡಿದ್ದುಣ್ಣೋ ಮಹಾರಾಯ!

೫. ಸ್ಪ್ಯಾನಿಷ್ ಗಾದೆ: Mucho ruido y pocas nueces!
ಇಂಗ್ಲಿಷ್ ಗಾದೆ: Empty vessels make much noise!
ಕನ್ನಡ ಗಾದೆ: ತುಂಬಿದ ಕೊಡ ತುಳುಕುವುದಿಲ್ಲ!

ಮೂರು ಬೇರೆ ಬೇರೆ ಭಾಷೆಗಳ ಬೇರೆ ಬೇರೆ ಸಂಸ್ಕೃತಿಯ ಗಾದೆಗಳು ಮೂಲದಲ್ಲಿ ಸಮಾನಾರ್ಥ ಹೊಂದಿವೆ. ಹೀಗೆ ಆಳವಾಗಿ ನೋಡಿದಾಗ ಮಾನವನ ಮೂಲ ಸ್ವರೂಪಿ ಸಾಂಸ್ಕೃತಿಕ ಸಾಮ್ಯತೆ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲಿಯೂ ಸಮಾನವಾಗಿ ಕಾಣುತ್ತದೆ. ಇಂತಹ ಮನೋವೈಜ್ಞಾನಿಕ ಮಾನವಶಾಸ್ತ್ರದ ನೆಲೆಯಿಂದ ಸಮಾಜಶಾಸ್ತ್ರವನ್ನು ಅವಲೋಕಿಸುವ ಸಂಶೋಧನೆಗಳು ಈಗೀಗ ಹೆಚ್ಚಾಗಿ ನಡೆಯುತ್ತಿವೆ.

ಹೀಗೆ ಅಗಾಧವಾಗಿ ಸಾಮ್ಯತೆಯಿಂದಿದ್ದ "ಜಾಗತಿಕ ಪ್ರಾಕೃತಿಕ ಸಂಸ್ಕೃತಿ"ಗಳು ಕಾಲಾಂತರದಲ್ಲಿ ಹೇಗೆ ಕೃತ್ರಿಮ ಅಪ್ರಾಕೃತಿಕ ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾದವು?

ಎಂಬ ಮೂಲಭೂತ ಪ್ರಶ್ನೆಯ ಹಿನ್ನೆಲೆಯಲ್ಲಿ ಲೇಖಕರಾದ ಆರಡಿ ಮಲ್ಲಯ್ಯ ಕಟ್ಟೇರ ಅವರು ಕರ್ನಾಟಕದ ಬುಡಕಟ್ಟು ಸಂಸ್ಕೃತಿಗಳ ಕುರಿತಾದ ಸಂಶೋಧನೆಗಳನ್ನು ತಾರ್ಕಿಕವಾಗಿ ಪ್ರಶ್ನಿಸುತ್ತಾ ಈ ಸಂಶೋಧನೆಗಳು ಮೂಲತಃ ಹೇಗೆ ದಾರಿ ತಪ್ಪಿವೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತು ಪಡಿಸುತ್ತಾರೆ. ಈ ಪ್ರಶ್ನಿಸುವಿಕೆಯಲ್ಲಿ ಮಲ್ಲಯ್ಯನವರ ನೇರ ನಡೆ, ತಾತ್ವಿಕ ಸಿಟ್ಟು, ಅಲ್ಲಲ್ಲಿ ಇಣುಕುವ ವ್ಯಂಗ್ಯ ಹೆಚ್ಚು ಇಷ್ಟವಾಗುತ್ತದೆ. ಇದಕ್ಕೆ ಆಯಾಯ ಸಂಶೋಧಕರನ್ನು ಮತ್ತು ಅಂತಹ ಕೃತ್ರಿಮ ಅಪ್ರಾಕೃತಿಕ ಸಂಸ್ಕೃತಿಯ ಸಂಕಥನಕ್ಕೆ ಪೂರಕವಾಗಿ ದೃಷ್ಟಾಂತ ಕಥೆಗಳನ್ನು ಸೃಷ್ಟಿಸಿದ ಖ್ಯಾತನಾಮರನ್ನೂ ನೇರವಾಗಿ ಹೆಸರಿಸಿ ಪ್ರಾಕೃತಿಕ ಸಂಸ್ಕೃತಿಯ ಉದಾರತೆ, ಮಹಿಳಾ ಸಮಾನತೆ, ಮಾನವೀಯ ಕಳಕಳಿಯನ್ನು ಎತ್ತಿ ಹಿಡಿಯುತ್ತಾರೆ. ಇಂತಹ ಪ್ರಶ್ನಿಸುವಿಕೆಯು ಈ ಹಿಂದೆ ಮತ್ತು ಈಗಲೂ ಆಗುತ್ತಿದೆ. ಆದರೆ ಆ ಬಹುಪಾಲು ಪ್ರಶ್ನಿಸುವಿಕೆಗಳು ಪೂರಕ ಆಕರಗಳೊಂದಿಗೆ ಅಂಕಿ‌ಅಂಶಗಳಿಲ್ಲದೆ ಕೇವಲ ಭಾವನಾತ್ಮಕ ನೆಲೆಯಿಂದ ಕೇಳಲ್ಪಟ್ಟು ಹಿನ್ನೆಲೆಗೆ ಸರಿದಿವೆ ಮತ್ತು ತಂತ್ರಜ್ಞಾನದ ಆಸ್ಫೋಟದೊಂದಿಗೆ ವರ್ತಮಾನದಲ್ಲಿ "ಟ್ರೋಲ್" ಆಗಿವೆ.

ಆದರೆ ಮಲ್ಲಯ್ಯನವರು ಸ್ಪಷ್ಟವಾಗಿ ಮತ್ತು ಸ್ಫುಟವಾಗಿ ಪ್ರಾಕೃತಿಕ ಐತಿಹ್ಯದ ಜನಪದ ವ್ಯಕ್ತಿಗಳಾದ ಬಂದಮ್ಮ ಭಾಗೀರತಿಯಾದುದು, ಅಜೀವಕ ತಿಪ್ಪಯ್ಯ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯಾದುದು, ಮದ್ದಾನಸ್ವಾಮಿಯ ಸಂಗಾತಿ ಬೇಡರ ಕನಕಮ್ಮನ ಕತೆಯನ್ನು ಮಠಸ್ಥರು ಮುಚ್ಚಿದುದನ್ನು ವಿವರಿಸುತ್ತಾರೆ. ಈ ಚಿಂತನೆಗಳು ಜನಪದದ ಪ್ರಾಕೃತಿಕ ಮುಂದಾಳುಗಳು ಹೇಗೆ ಅಪ್ರಾಕೃತಿಕ ಪೂಜಾವಸ್ತುಗಳಾದರು ಎಂಬ ಸಂಕಥನವನ್ನು ಪರಾಮರ್ಶಿತ ದಾಖಲೆಯೊಂದಿಗೆ ತೆರೆದು ಚಿಂತನೆಗೆ ಹಚ್ಚುತ್ತವೆ.

ಈ ಎಲ್ಲಾ ಕಾರಣಗಳಿಗಾಗಿ ಸಿದ್ಧ ಸಿದ್ಧಾಂತಗಳ ಹೇರಿಕೆಯ ಸಂಶೋಧನೆಗಳನ್ನು ತಾರ್ಕಿಕವಾಗಿ ಮತ್ತು ಪೂರಕ ಸಂಶೋಧನ ಆಕರಗಳೊಂದಿಗೆ ಪ್ರಶ್ನಿಸುವ ಮಾದರಿಗಳಲ್ಲಿರುವ ಕೆಲವೇ ಕೆಲವು ಕೃತಿಗಳಲ್ಲಿ "ನುಡಿ ಸೂತಕ" ಕೃತಿಯೂ ಒಂದಾಗಿದೆ. ಆದರೆ ಈ ಕೃತಿಯು ಮಾನವಶಾಸ್ತ್ರದ ಹಿನ್ನೆಲೆಯಲ್ಲಿದೆಯಷ್ಟೆ. ಇನ್ನುಳಿದ ಕ್ಷೇತ್ರಗಳಲ್ಲಿಯೂ ಇಂತಹ ಪ್ರಯತ್ನಗಳು ಆಗಬೇಕಿದೆ.

ಪ್ರಾದೇಶಿಕ ವೈಶಿಷ್ಟ್ಯವನ್ನು ಮೈಗೂಡಿಸಿಕೊಂಡು ವಿಶಿಷ್ಟವೆನಿಸಿದ ಜಾಗತಿಕ ಪಶುಪಾಲಕ, ಬೇಟೆಗಾರ, ವ್ಯವಸಾಯಿ ಸಂಸ್ಕೃತಿಗಳ ವಿಶಿಷ್ಟ ಆಚರಣೆಗಳನ್ನು ದಾಖಲಿಸಿ ಅವುಗಳನ್ನು ಮತ್ತೊಮ್ಮೆ ಜಾಗತಿಕ ಪ್ರಾಕೃತಿಕ ಸಂಸ್ಕೃತಿಗಳ ಜೊತೆ ಸಮೀಕರಿಸಿದಾಗ ಕೂಡುಕಟ್ಟು ಪದದ ವಿಶಾಲಾರ್ಥ ವಿಸ್ತರಿಸುತ್ತದೆ. ಅಂದಹಾಗೆ ಈ ಜಾಗತಿಕ ಪ್ರಾಕೃತಿಕ "ಕೂಡುಕಟ್ಟು" ಪದವೇ ಅಪ್ರಾಕೃತಿಕ ಸಂಸ್ಕೃತಿಯ "ವಸುದೈವ ಕುಟುಂಬಕಂ" ಎಂದಾಗಿದೆ. ಈ ನಿರ್ಧಾರಕ್ಕೆ ಬರಲು ಪ್ರಾದೇಶಿಕ ಪಶುಪಾಲಕ, ಬೇಟೆಗಾರ, ವ್ಯವಸಾಯಿ ಸಂಸ್ಕೃತಿಗಳ ವಿಶಿಷ್ಟತೆಯ ಸ್ಪಷ್ಟ ದಾಖಲಾತಿ ಅಗತ್ಯ. ಅಂತಹ ದಾಖಲಾತಿ ಹೇಗೆ ಪೂರ್ವಾಗ್ರಹ ಮತ್ತು ತಪ್ಪು ಗ್ರಹಿಕೆಗಳಿಂದ ದಾರಿ ತಪ್ಪಿದೆ ಎಂದು ಕರ್ನಾಟಕದ ಆದಿಮ, ಮ್ಯಾಸಬೇಡರ, ಗೊಲ್ಲರ ಆಚರಣೆ ಮತ್ತು ವಿಶಿಷ್ಟತೆಯನ್ನು ಸವಿಸ್ತಾರವಾಗಿ ವಿವರಿಸುತ್ತಾ ಮಲ್ಲಯ್ಯ ತಾತ್ವಿಕವಾಗಿ ಪ್ರಶ್ನಿಸುತ್ತಾರೆ. ಈ ದಾಖಲಾತಿ ಸರಿಯಾದರೆ ಮುಂದಿದನ್ನು ಜಾಗತಿಕ ಬೇಟೆಗಾರ ಆಚರಣೆಗಳೊಂದಿಗೆ ಸಮೀಕರಿಸಿ ಅವುಗಳಲ್ಲಿನ ವ್ಯತ್ಯಾಸಗಳು ಹೇಗೆ ಭೌಗೋಳಿಕ, ಹವಾಮಾನ, ಪರಿಸರ ಇತ್ಯಾದಿಗಳಿಂದ ಪ್ರಭಾವಿತಗೊಂಡವು ಮತ್ತು ಈ ಸಂಸ್ಕೃತಿಗಳ ಮೇಲೆ ನಿಯೋಲಿಥಿಕ್ ಕ್ರಾಂತಿ, ಜನಾಂಗೀಯ ವಲಸೆ, ಪುರೋಹಿತಶಾಹಿಯ ಪ್ರಭಾವಗಳನ್ನು ಸಹ ಸ್ಪಷ್ಟವಾಗಿ ನಿರೂಪಿಸಬಹುದು. ಆದರೆ ಆ ನಿಟ್ಟಿನಲ್ಲಿ ಸಾಗಲು ಇಲ್ಲಿನ ಪ್ರಾದೇಶಿಕ ಸಂಶೋಧನೆಗಳನ್ನು ಸರಿದಾರಿಗೆ ತರುವುದು ಅವಶ್ಯ ಎಂಬ ಚಿಂತನೆ ಮಲ್ಲಯ್ಯನವರದು ಎನಿಸುತ್ತದೆ.

ಈ ಕೃತಿಯ ಸಂಸ್ಕೃತಿ ಭಾಗದಲ್ಲಿ ಆಯಾಯ ಸಂಸ್ಕೃತಿಗಳ ವಿಕಾಸವನ್ನು ಜಾಗತಿಕ ಮಾನವೀಯ ಶಾಸ್ತ್ರದ ಹಿನ್ನೆಲೆಯಿಂದ ವಿಶ್ಲೇಷಿಸುವ ಪ್ರಯತ್ನವನ್ನು ಸೂಕ್ಷ್ಮವಾಗಿ ಕರ್ನಾಟಕದ ಮ್ಯಾಸಬೇಡ (ಬೇಟೆಗಾರ) ಸಂಸ್ಕೃತಿಯ ಹಿನ್ನೆಲೆಯವರೇ ಆದ ಉತ್ತರ ಭಾರತದ ಬಿಲ್ಲುಗಾರರೊಂದಿಗೆ ತೂಲಿಸುತ್ತ ಮುಂದೆ ಆಗಬೇಕಾದ ಜಾಗತಿಕ ಬೇಟೆಗಾರ ಸಮುದಾಯಗಳ ಸಂಸ್ಕೃತಿಯೊಂದಿಗೆ ತೂಲಿಸುವ ಸಾಧ್ಯತೆಯ ಸೂಚನೆಯನ್ನು ಮಲ್ಲಯ್ಯನವರು ಕೊಡುತ್ತಾರೆ. ಆ ನಿಟ್ಟಿನಲ್ಲಿ ಮಲ್ಲಯ್ಯನವರು ಯಶ ಸಿಗಲಿ.

ಇನ್ನುಳಿದಂತೆ ಮಾನವಶಾಸ್ತ್ರದ ಹಿನ್ನೆಲೆಯ ವಿಷಯಗಳೇ ಆದ ಲೋಕಾಯತ, ತಂತ್ರ ಪಂಥ, ಚಾರ್ವಾಕ ಸಂಸ್ಕೃತಿಗಳ ವಿಮರ್ಶೆಯೂ ಆಸಕ್ತಿದಾಯಕ ಮತ್ತು ಒಟ್ಟಾರೆ ಕೃತಿಯ ಆಶಯಕ್ಕೆ ಪೂರಕ.

ವಿಮರ್ಶೆ, ಸಂಶೋಧನೆಯ ನಿಲುವನ್ನು ಕೃತಿ ಮತ್ತು ಸಂಸ್ಕೃತಿಗಳ ಎರಡು ಭಾಗಗಳಲ್ಲಿರುವ ಬಿಡಿಬಿಡಿಯಾಗಿರುವ ಲೇಖನಗಳ ನಡುವೆ ಮುಖಾಮುಖಿಯಾಗಿಸಬಲ್ಲ, ಒಂದನ್ನೊಂದು ಬೆಸೆಯಬಲ್ಲ ಒಂದು ತಂತು ಬೇಕೆನಿಸುತ್ತದೆ. ಎಲ್ಲಾ ವಿಷಯಗಳೂ ಮಾನವಶಾಸ್ತ್ರದ ವಿಷಯಗಳೇ ಆದ್ದರಿಂದ ಆ ಬೆಸೆಯುವ ತಂತು ಸಾಧ್ಯವೆನಿಸುತ್ತದೆ. ಅಧ್ಯಾಯಗಳ ನಡುವೆ ಆ ತಂತುಗಳು ಅಲ್ಲಲ್ಲಿ ಕಂಡುಬಂದರೂ ಅದು ಆಯಾಯ ಅಧ್ಯಾಯದ ವಿಷಯಕ್ಕೆ ಮಾತ್ರ ಸೀಮಿತ ಎನಿಸುತ್ತದೆ. ಅಧ್ಯಾಯದಿಂದ ಅಧ್ಯಾಯಕ್ಕೆ ಖೋ ಕೊಡುವಂತಹ ಒಂದು ತಂತು ಯಾ ಥೀಮ್ ಓದನ್ನು ಆಪ್ತವಾಗಿಸಿ ಸೃಜನಶೀಲ ಓದುಗರಿಗೆ ರುಚಿಸಬಹುದು ಎಂಬ ಆಶಯ ನನ್ನದು. ಮಲ್ಲಯ್ಯನವರು ಆ ನಿಟ್ಟಿನಲ್ಲಿ ಕ್ರಿಯಾಶೀಲರಾಗಲಿ ಎಂದು ಆಶಿಸುವೆ.

ಒಟ್ಟಾರೆ ಇಂತಹ ವಿಶೇಷ ಪ್ರಯೋಗಗಳು ಇಂದಿನ ತುರ್ತು! ಅದಕ್ಕಾಗಿ ಆರಡಿ ಮಲ್ಲಯ್ಯ ಕಟ್ಟೇರ ಅವರು ಅಭಿನಂದನಾರ್ಹರು.

ರವಿ ಹಂಜ್
ಶಿಕಾಗೊ.