Selective ಹೋರಾಟಗಳು

 ಹದಿನೆಂಟನೇ ಶತಮಾನದ ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಬಹುಪಾಲು ಬುದ್ಧಿಜೀವಿಗಳು ತಟಸ್ಥರಾಗಿದ್ದರೂ ಬ್ಯಾರನ್ ಮಾಂಟೆಸ್ಕ್ಯೂ, ವಾಲ್ಟೇರ್, ಜೀನ್ ರೋಸ್ಯು ಅಂತಹ ತತ್ವಜ್ಞಾನಿ ಸಾಹಿತಿಗಳು ಫ್ರೆಂಚ್ ಜಾಗೃತಿಗೆ ಕಾರಣರಾಗಿದ್ದರು.


ಹಿಟ್ಲರ್ ಕಾಲದ ಜರ್ಮನಿಯಲ್ಲಿ ಯಹೂದಿಗಳ ರಕ್ಷಣೆಗೆ ಮುಂದಾಗಿದ್ದ ಮಾರ್ಥಾ ವೇಟ್ಸ್ಟಿಲ್ ಶಾರ್ಪ್ ದಂಪತಿ, ವೇರಿಯನ್ ಫ್ರೈ, ಜೀನೋ ಬರ್ತಾಲಿ, ಜಾನ್ ಸ್ವಾರ್ಟರ್ನ್ಜಿಕ್, ಜಾನ್ ಕರಾಸ್ಕಿ ಮುಂತಾದವರ ಬರಹ ಮತ್ತು ವರದಿಗಳಲ್ಲದೆ ಅವರು ಖುದ್ದು ರಿಸ್ಕ್ ತೆಗೆದುಕೊಂಡು ಯಹೂದಿಗಳನ್ನು ರಕ್ಷಿಸಿದ್ದರು.


ರಷ್ಯನ್ ಕ್ರಾಂತಿಯ ಉದಾರವಾದಿಗಳೆಂದು ಗುರುತಿಸಿಕೊಂಡಿದ್ದ intelligentsia ಗುಂಪಿನ ಆಂಟಾನ್ ಚೆಕೋವ್, ವಾಸಿಲಿ ಜುಕೊವ್ಸ್ಕಿ, ಅಲೆಕ್ಸಾಂಡರ್ ರಾಡಿಷ್ಚೆವ್, ಆಂಡ್ರೆ ಸಕರೋವರಂತಹ ಬುದ್ದಿಜೀವಿಗಳಲ್ಲದೆ ಲಿಯೋ ಟಾಲ್ಸ್ಟಾಯ್ ಅಂತಹ ಸಾಹಿತಿಗಳು ಸಹ ಕ್ರಾಂತಿಯ ಮೇಲೆ ಗಾಢ ಪ್ರಭಾವವನ್ನು ಬೀರಿದ್ದರು.


ಸಲ್ಮಾನ್ ರಶ್ದಿ ಅವರು ತಮ್ಮ ಕೃತಿ "ಸಟಾನಿಕ್ ವರ್ಸಸ್"ನಿಂದಾಗಿ ಫತ್ವಾಕ್ಕೊಳಗಾದಾಗ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದ ಭಾರತೀಯ ಸಾಹಿತ್ಯ ವಲಯವು ಚಾರ್ಲಿ ಹೆಬ್ಡೋ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾಲಕ್ಕಾಗಲೇ ಓಲೈಕೆಯ ಜಾಣ ಪ್ರಭಾವಕ್ಕೊಳಗಾಗಿ ಮೌನವಾಗಿತ್ತು. ರಶ್ದಿ ಫತ್ವಾ ವಿರೋಧಿಸಿದ್ದ ಸಾಹಿತಿಗಳೇ ಹೆಬ್ಡೋ ಫತ್ವಾಕ್ಕೆ ಮೌನ ವಹಿಸಿದ್ದರು ಎಂಬುದು ಗಮನಾರ್ಹ.  ಈ ಮಧ್ಯೆ ಬಂದ ತಸ್ಲೀಮಾ ನಸ್ರೀನ್ ಅವರಿಗೆ ಭಾರತೀಯ ಜನ ಸಾಮಾನ್ಯರ ಒಕ್ಕೊರಲಿನ ಬೆಂಬಲ ಸಿಕ್ಕರೂ ಭಾರತೀಯ ಸಾಹಿತಿಗಳ ಬೆಂಬಲ ರಶ್ದಿ ಕಾಲಕ್ಕಿಂತ ಇಲ್ಲವೇ ಇಲ್ಲ ಎನ್ನುವಷ್ಟು ಇಳಿಮುಖಗೊಂಡಿತ್ತು ಎಂಬುದೂ ಗಮನಾರ್ಹ! ಮಾತನಾಡಲೇಬೇಕಾದಾಗ ಇವರೆಲ್ಲಾ ಜಾಣಮೌನಕ್ಕೆ ಜಾರಿದ್ದರು.


ಭಾರತೀಯ ಉದಾರವಾದದ ಆಯ್ದ ಹೋರಾಟಗಳ, ಅತೀವ ಓಲೈಕೆಯ ಫಲವೇ ಇಂದಿನ ಹಿಜಾಬ್-ಕೇಸರಿಶಾಲು, ಹಲಾಲ್-ಜಟ್ಕಾ, ಜಾತ್ರೆ-ಉರ್ಸ್ ವ್ಯಾಪಾರಗಳ ಜಂಜಾಟಕ್ಕೆ ಸ್ಫೂರ್ತಿ! ರಶ್ದಿ ಕಾಲದಲ್ಲಿ ಧರ್ಮಾತೀತವಾಗಿದ್ದ ಎಡಪಂಥೀಯ ಹೋರಾಟವು ಹೆಬ್ಡೋ ಕಾಲಕ್ಕೆ ಧರ್ಮಾಧೀನವಾಗಿದೆ. ಹಾಗೆಯೇ ಧಾರ್ಮಿಕ ಅವಹೇಳನವೆನಿಸಿದ್ದ ಹುಸೇನರ ಕಲೆಯ ಎಡದ ಪುರಸ್ಕಾರ ಇಂದು ಫೋಟೋಶಾಪ್ ಕಲೆಯನ್ನು ಪರೋಕ್ಷವಾಗಿ ಪ್ರಚೋದಿಸಿ ಪ್ರೋತ್ಸಾಹಿಸಿ ಮುನ್ನೆಲೆಗೆ ತಂದಿದೆ.


ಜಾಗತಿಕವಾಗಿ ರೋಮನ್ ಸಾಮ್ರಾಜ್ಯದಲ್ಲಿ, ಯುರೋಪ್ ಕ್ರಾಂತಿಗಳಲ್ಲಿ, ಚೈನಾ ರಷ್ಯಾದಂತಹ ಕಮ್ಯುನಿಸ್ಟ್ ಆಡಳಿತಗಳಲ್ಲಿ, ಕಳೆದ ದಶಕದ ಈಜಿಪ್ಟ್ ಕ್ಷಿಪ್ರ ಕ್ರಾಂತಿಯಲ್ಲಿ ಸಹ ಅಭಿವ್ಯಕ್ತಿ ಸ್ವಾತಂತ್ರ್ಯದ ನಿಷ್ಪಕ್ಷಪಾತ ಹೋರಾಟಗಳ ಪ್ರಭಾವವನ್ನು  ಮನಗಾಣಬಹುದು. ಆದರೆ ಭಾರತದಲ್ಲಿ ಅದು selective ಹೋರಾಟವಾಗಿ ರೂಪುಗೊಂಡು ದೇಶವನ್ನು ದುರಂತದೆಡೆ ತಳ್ಳಿದೆ. ಬಲಪಂಥೀಯರ ಇಂದಿನ "ಪ್ರತಿಕ್ರಿಯೆ"ಗೆ ಕ್ರಿಯಾಶೀಲ ಎಡಪಂಥವು ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ. ಓಲೈಕೆ (appeasement), ಊಳಿಗಮಾನ ಪ್ರಜಾಪ್ರಭುತ್ವ (Feudal Democracy), ಮತ್ತು ಅಧಿನಾಯಕತ್ವ (Hegemony)ಗಳು ಒಂದು ದೇಶವನ್ನು ಏನು ಮಾಡಬಲ್ಲವು ಎಂಬುದಕ್ಕೆ ಇಂದಿನ ಏಕೈಕ ಉದಾಹರಣೆ, ಭಾರತ! 


ಇನ್ನು ಹೀಗಿದ್ದೂ ಭಾರತ ಮಿಂಚುತ್ತಿರುವುದೇಕೆ? (ಜನ)ಸಂಖ್ಯಾಕಾರಣ! ಇದನ್ನು ಮನಗಾಣಬೇಕೆ, ಓದಿ ಬಸವರಾಜಕಾರಣ! ;) 


BTW, Use your powerful left brain wisely and left hand cleanly!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಸಂವಿಧಾನ structure

 ಭಾರತ ಇಂದು ಎಡ ಬಲ ನಡುವೆ ಇಬ್ಭಾಗವಾಗಿರುವಾಗ

ಭಾರತೀಯ ಎಡ ಬಲ ಚಿಂತಕರು, ರಾಜಕಾರಣಿಗಳು, ನಾಗರೀಕರು ಅಸಲಿಗೆ ನೈಜ ಕಾಳಜಿಯಿದ್ದರೆ ಚಿಂತಿಸಬೇಕಾದ್ದು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತ.


ಒಂದು ಕಂಪೆನಿ ಹೇಗೆ ಒಂದು ಮಿಷನ್ ಸ್ಟೇಟ್ಮೆಂಟ್ ಹೊಂದಿ ಅದಕ್ಕೆ ತಕ್ಕಂತೆ KPI ಗಳನ್ನು ಹಾಕಿಕೊಂಡು ಅದರ ಅನುಷ್ಠಾನಕ್ಕೆ ನಿಯಮಗಳನ್ನು, ಗುರಿಗಳನ್ನು ಹೊಂದಿರುತ್ತದೋ ಅದೇ ರೀತಿಯಲ್ಲಿ ಒಂದು ದೇಶ ಸಹ. ಹಾಗೆ ನೋಡಿದಾಗ ನಮ್ಮದು:


ದೇಶ - ಭಾರತ (Entity)

ಉದ್ಘೋಷ - ಸತ್ಯಮೇವ ಜಯತೆ (Mission)

ಸಂವಿಧಾನ - ಭಾರತೀಯ ಸಂವಿಧಾನ (KPI)

ಕಾಯ್ದೆ - ಇಂಡಿಯನ್ ಪೀನಲ್ ಕೋಡ್ ಯಾನೆ ಐಪಿಸಿ, ಆಸ್ತಿ ಕಾಯ್ದೆ, ಕಾಂಟ್ರಾಕ್ಟ್ ಕಾಯ್ದೆ, ಟ್ರಸ್ಟ್ ಕಾಯ್ದೆ, ಕೌಟುಂಬಿಕ ಕಾಯ್ದೆ, ಕಾರ್ಮಿಕ ಕಾಯ್ದೆ ಇತ್ಯಾದಿ (Goals, Regulations, Tool, Governance and Plans aligned to KPIs)

ಆಡಳಿತ - ಸಾಂವಿಧಾನಿಕ ಪ್ರಜಾಪ್ರಭುತ್ವ (Execution)


ಹೀಗೆ ಯಾವುದೇ ದೇಶದ ಸಂವಿಧಾನವು ಆ ದೇಶದ ಮೂಲಭೂತ ಕಾನೂನು ಆಗಿರುತ್ತದೆ. ಅದು ತನ್ನ ನಾಗರಿಕ ಸಂಹಿತೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಆ ದೇಶದ ಆಡಳಿತವು ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳು ತನ್ನ ಸಂವಿಧಾನದ ಸಂಹಿತೆಯ ಪರಿಮಿತಿಗನುಗುಣವಾಗಿರಬೇಕು ಎಂದು ನಿರ್ದೇಶಿಸುತ್ತದೆ. ದೇಶದ ಎಲ್ಲಾ ಕಾನೂನುಗಳು ಸಂವಿಧಾನದ ಪರಿಮಿತಿಯೊಳಗಿರುವಂತೆ ನೋಡಿಕೊಳ್ಳುವುದು ಕೇಂದ್ರ ನ್ಯಾಯಾಂಗ ಸಮಿತಿಯ ಆದ್ಯ ಕರ್ತವ್ಯ. 


ಜಾಗತಿಕವಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇಂತಹ ಸಾಂವಿಧಾನಿಕ ವ್ಯವಸ್ಥೆ ಇರುವಾಗ, ಪ್ರಪಂಚದ ಎಲ್ಲಾ ಸಂವಿಧಾನಗಳನ್ನೂ ಪರಾಮರ್ಶಿಸಿ ರಚಿಸಿರುವ ಭಾರತೀಯ ಸಂವಿಧಾನವನ್ನು ಭಾರತ ಹೇಗೆ ಅನುಷ್ಠಾನಗೊಳಿಸಿದೆ?


"ಸತ್ಯಮೇವಜಯತೆ" ಎಂಬ ಉದ್ಘೋಷ ಹೊತ್ತ ಭಾರತದ ಸಂವಿಧಾನ ಜನವರಿ ೨೬, ೧೯೫೦ ರಲ್ಲಿ ಅನುಷ್ಠಾನಕ್ಕೆ ಬಂದಿತು. ಜಗತ್ತಿನಲ್ಲೇ ಅತ್ಯಂತ ಉದ್ದದ ಸಂವಿಧಾನ ಎನಿಸಿರುವ ಭಾರತೀಯ ಸಂವಿಧಾನದ ಬಹುಪಾಲು ಆಡಳಿತಾತ್ಮಕ ಅಧ್ಯಾಯಗಳು "Government of India Act 1935" ನಿಂದ ನಕಲುಗೊಂಡಿದ್ದರೆ ಉಳಿದ ವಿಷಯಗಳನ್ನು ಪ್ರಪಂಚದ ಇತರೆ ಸಂವಿಧಾನಗಳಿಂದ ಪಡೆದುಕೊಳ್ಳಲಾಗಿದೆ. 


ಆದರೆ ಸಂವಿಧಾನಕ್ಕೆ ಮುಂಚೆಯೇ ಉರ್ಜಿತವಾಗಿದ್ದು ಮತ್ತು ಯಥಾವತ್ತಾಗಿ ಜಾರಿಯಿದ್ದ ಕಾಯ್ದೆಗಳು ಎಷ್ಟರ ಮಟ್ಟಿಗೆ ವಿಶ್ಲೇಷಣೆಗೊಂಡು ಸಂವಿಧಾನಕ್ಕೆ ಅದರ ರಚನೆಯಲ್ಲಿ ಸಂಯೋಜಿಸಲ್ಪಟ್ಟವು? ಅಥವಾ ನೂತನ ಸಂವಿಧಾನದ ಪರಿಮಿತಿಯೊಳಗೆ ಈ ಕಾಯ್ದೆಗಳು ಇರುವವು ಎಂದು ಹೇಗೆ ದೃಢೀಕರಿಸಲಾಯಿತು? 


ಹಾಗೆ ಜಾರಿಯಲ್ಲಿದ್ದ ಕ್ರಿಮಿನಲ್ ಕಾಯ್ದೆಗಳು ಬ್ರಿಟಿಷ್ ಭಾರತದಲ್ಲಿ ೧೮೬೨ ರಿಂದ ಐಪಿಸಿ ಕಾಯ್ದೆಗಳಾಗಿ ಜಾರಿಯಿದ್ದರೆ ಕಾಂಟ್ರಾಕ್ಟ್ ಕಾಯ್ದೆ ೧೮೭೨, ಆಸ್ತಿ ಕಾಯ್ದೆ ೧೮೮೨, ಟ್ರಸ್ಟ್ ಕಾಯ್ದೆ ೧೮೮೨, ಕೌಟುಂಬಿಕ ಕಾಯ್ದೆಯು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಎಂದು ೧೭೭೨ ರಿಂದಲೂ ಜಾರಿಯಲ್ಲಿವೆ. ಇನ್ನು ಕಾರ್ಮಿಕ ಕಾಯ್ದೆ, ತೆರಿಗೆ ಕಾಯ್ದೆ, ಕಂಪೆನಿ ಕಾಯ್ದೆಗಳು ಕಾಲಕ್ಕೆ ತಕ್ಕಂತೆ ಸ್ವತಂತ್ರ ಭಾರತದಲ್ಲಿ ರಚನೆಯಾಗಿವೆ.  


೨೦೧೯ರವರೆಗೆ ೭೮ ಬಾರಿ ವಿವಿಧ ಐಪಿಸಿ ಕಾಯ್ದೆಗಳು ತಿದ್ದುಪಡಿಗೊಂಡಿರುವಂತೆ ಸ್ವಾತಂತ್ರ್ಯಪೂರ್ವದ ಇತರೆ ಕಾನೂನುಗಳು ಸಹ ಕಾಲಕ್ಕೆ ತಕ್ಕಂತೆ ತಿದ್ದುಪಡಿಗಳನ್ನು ಹೊಂದಿದ್ದರೂ ಸಾಕಷ್ಟು ಮೂಲ ಸ್ವರೂಪಗಳು ಈ ಎಲ್ಲಾ ಕಾಯ್ದೆಗಳಲ್ಲಿ ಹಾಗೆಯೇ ಉಳಿದಿವೆ. ಆದರೆ ಮೂಲಭೂತವಾಗಿ ಈ ಎಲ್ಲಾ  ಸ್ವಾತಂತ್ರ್ಯಾಪೂರ್ವ ಮತ್ತು ಸ್ವಾತಂತ್ರೋತ್ತರ ಕಾನೂನುಗಳು ಸಂವಿಧಾನಕ್ಕನುಗುಣವಾಗಿ ಇರುವವೋ ಇಲ್ಲವೋ ಎಂದು ಯಾವುದಾದರೂ ಸಮಿತಿಗಳು ವರದಿ ಕೊಟ್ಟು ಪುರಸ್ಕರಿಸಿವೆಯೇ? 


ಸಂವಿಧಾನ ರಚನೆಯ ಕಾಲದಲ್ಲಿ ಪಿತ್ರಾರ್ಜಿತವಾಗಿ ಬಂದ ಈ ಬ್ರಿಟಿಷ್ ವಸಾಹತು ಕಾನೂನುಗಳು ಹೊಚ್ಚ ಹೊಸ ಪ್ರಜಾಪ್ರಭುತ್ವ ಭಾರತದ ಆಶಯಕ್ಕೆ ಮತ್ತು ಸಂವಿಧಾನಕ್ಕೆ ಹೊಂದುತ್ತವೆಯೇ ಎಂದು ಸಂವಿಧಾನ ರಚನೆಯ ತಂಡ, ಶಿಲ್ಪಿ, ಆಡಳಿತ ಕಂಡುಕೊಂಡಿತ್ತೆ??? ಗೊತ್ತಿಲ್ಲ. ಈವರೆಗಿನ ನನ್ನ ಶೋಧನೆಗೆ ಅಂತಹ ಸಂಗತಿ, ಮಾಹಿತಿ ಕಣ್ಣಿಗೆ ಬಿದ್ದಿಲ್ಲ. ನಾನಾಭಾಯ್ ಪಾಲ್ಕಿವಾಲಾರ we the people, we the nation ಪುಸ್ತಕಗಳು ಕೊಂಚ ಮಾಹಿತಿ ನೀಡಿದರೂ ಎಲ್ಲಾ ಕಾಯ್ದೆಗಳು ಪರಾಮರ್ಶನಗೊಂಡಿವೆ ಎಂದು ಖಚಿತಪಡಿಸವು.


ಒಂದು ವೇಳೆ ಸಮಿತಿಯೊಂದು ವರದಿ ಕೊಟ್ಟಿದ್ದರೂ ಅದು ಎಲ್ಲವನ್ನೂ ಪರಿಶೀಲಿಸಿತ್ತೆ? ಹಾಗೆ ಪರಿಶೀಲಿಸಿದ್ದರೆ ಮೋದಿ ಸರ್ಕಾರ ಇಂತಹ ಹತ್ತು ಹಲವಾರು ಕಾಯ್ದೆಗಳನ್ನು ಇತ್ತೀಚೆಗೆ ರದ್ದುಗೊಳಿಸುವ ಪ್ರಮೇಯಯೇ ಬರುತ್ತಿರಲಿಲ್ಲವಲ್ಲವೇ?! 


ಇವು ಓರ್ವ ಸಾಗರೋತ್ತರ  ಕುತೂಹಲಿ ನಾಗರಿಕನ ಪ್ರಶ್ನೆಗಳು.


ಆದರೆ ಅಂತಹ ಪ್ರಯತ್ನ ಆಗಿಯೇ ಇಲ್ಲವೇನೋ ಎನ್ನುವ ಸಂಶಯ ಸಾಕಷ್ಟು ಬಲವಾಗಿದೆ. ಏಕೆಂದರೆ ಸಂವಿಧಾನದ ಆಶಯಕ್ಕೂ ಮತ್ತು ಜಾರಿಯಲ್ಲಿರುವ ಕಾನೂನುಗಳ ನ್ಯಾಯ ನಿಯಮಕ್ಕೂ ಸಾಕಷ್ಟು ಅಭಾಸಗಳಿವೆ.


ಅಂತಹ ಒಂದು ಸಾಮಾನ್ಯ ಅಭಾಸದ ಉದಾಹರಣೆ ಹೀಗಿದೆ:


"ಸತ್ಯಮೇವ ಜಯತೆ" ಎಂಬ ಉದ್ಘೋಷ ಹೊತ್ತ ರಾಷ್ಟ್ರದ ಒಬ್ಬ ಘನವೆತ್ತ "ಜನ"ಪ್ರತಿನಿಧಿ ತನ್ನ ಸಂವಿಧಾನಕ್ಕೆ ವಿರುದ್ಧವಾಗಿ ಬಹುಪತ್ನಿತ್ವವನ್ನು ಪಾಲಿಸುತ್ತಿದ್ದರೆ ಅದನ್ನು ಆತನ ಪತ್ನಿಯರು ಮಾತ್ರ ಪ್ರಶ್ನಿಸಬೇಕೇ ಹೊರತು ಜನರು ಪ್ರಶ್ನಿಸುವಂತಿಲ್ಲ. ಇದು ಕೌಟುಂಬಿಕ ಕಾಯ್ದೆಯ ಒಂದು ನಿಯಮ. ಆ ಜನಪ್ರತಿನಿಧಿ ಜನರಿಂದಲೇ ಚುನಾಯಿತನಾಗಿದ್ದು, ಅಸಂವಿಧಾನಿಕ ನಡೆ ಹೊಂದಿದ್ದರೂ ಅದನ್ನು "ಜನ" ಪ್ರಶ್ನಿಸಲಾಗದಂತೆ ಈ ನಿಯಮ ಸಂವಿಧಾನಬಾಹಿರವಾಗಿದೆ. 


ಇಲ್ಲಿ ದೇಶದ ಮಿಷನ್ ಸ್ಟೇಟ್ಮೆಂಟ್ ಮತ್ತು ಸಂವಿಧಾನ ಎರಡನ್ನೂ ಈ ಕೌಟುಂಬಿಕ ಕಾಯ್ದೆ ಹೇಗೆ ಬಾಯಿ ಮುಚ್ಚಿಸಿದೆ ಎಂದು ಕಂಡುಕೊಳ್ಳಬಹುದು. ಇಂತಹ ಸಾವಿರಾರು ಅಭಾಸಗಳು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತದಲ್ಲಿವೆ.


ಹೀಗಿದ್ದಾಗ ಸಂವಿಧಾನ ರಚನೆಯಲ್ಲಿ ಈ ಕಾಯ್ದೆಗಳನ್ನು ಗಮನದಲ್ಲಿಟ್ಟಕೊಳ್ಳಬೇಕಿತ್ತೋ ಅಥವಾ ಇದ್ದ ಕಾಯ್ದೆಗಳಿಗೆ ತಕ್ಕಂತೆ ಸಂವಿಧಾನ ರಚಿಸಬೇಕಿತ್ತೋ?!? ಐಪಿಸಿ ಸೇರಿ ಎಲ್ಲಾ ಸಮಗ್ರ ಕಾಯ್ದೆಗಳು ಸಮಗ್ರವಾಗಿ ತಿದ್ದುಪಡಿಯಾಗಬೇಕೊ ಅಥವಾ ಸಂವಿಧಾನ ಸಮಗ್ರವಾಗಿ ತಿದ್ದುಪಡಿಯಾಗಬೇಕೊ? ಇಂದು ಸಂವಿಧಾನ ಧರ್ಮಗ್ರಂಥವಾಗಿರುವಾಗ ಇಂತಹ ಆಮೂಲಾಗ್ರ ತಿದ್ದುಪಡಿ ಸಾಧ್ಯವೇ?!?


ಇತಿ ಸಂವಿಧಾನ ಸಂಪ್ರತಿ ಹೀ!!!!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಉಕ್ರೇನ್ ಚಿಂತನೆ

 ಶಿಕಾಗೋ ಏರಿಯಾದಲ್ಲಿ ಚಳಿಗಾಲ ಮುಗಿದು ವಸಂತ ಕಾಲಿಡುತ್ತಿದೆ. ಈವರೆಗೆ ಒಳಾಂಗಣದಲ್ಲಿರುತ್ತಿದ್ದ ಜನರು ಸುದೀರ್ಘ ಚಳಿಗಾಲದ hybernation ಇಂದ ತೆಳ್ಳನೆ ಬಟ್ಟೆ ತೊಟ್ಟು ಮೆಲ್ಲನೆ ಹೊರಬಂದು ಗಿಡ ನೆಡುವ, ಸೈಕಲ್ ಹೊಡೆಯುವ, ವಾಕಿಂಗ್, ಜಾಗಿಂಗ್ ಮಾಡುವ ಅಥವಾ ಸುಮ್ಮನೆ ಬಿಕಿನಿ ತೊಟ್ಟು ಸನ್ ಲೋಷನ್ ಹಚ್ಚಿಕೊಂಡು ತಮ್ಮ ಡೆಕ್ಕಿನಲ್ಲಿ ಬಿಸಿಲಿಗೆ ಮೈ ಒಡ್ಡುವ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ನಾನೂ ಸಹ ನನ್ನ ಹೊರಾಂಗಣದ ಚಟುವಟಿಕೆಯಾಗಿ ತೆಳ್ಳನೆಯ ಶರ್ಟು ಮತ್ತು ಶಾರ್ಟ್ಸ್ ತೊಟ್ಟು ಮರೆಯದೆ ತಲೆಗೊಂದು ಹ್ಯಾಟು ಕಣ್ಣಿಗೊಂದು ತಂಪು ಕನ್ನಡಕ ತೊಟ್ಟು ವಾಕಿಂಗ್ ಮಾಡುತ್ತ ಕಣ್ಣಿಗೆ ರಾಚುವ ಇತರರ ಚಟುವಟಿಕೆಗಳನ್ನು ಗಮನಿಸುತ್ತಿರುತ್ತೇನೆ. 


ದಿನಕ್ಕೆ ಮೂರು ಬಾರಿ ತಿಂಡಿ ಊಟ ಮಾಡಿದ ನಂತರ ಅರ್ಧರ್ಧ ಗಂಟೆ ನಾನು ವಾಕಿಂಗ್ ಮಾಡುತ್ತೇನೆ. ಈ ರೀತಿ ಆಹಾರ ಸೇವಿಸಿದ ನಂತರ ವಾಕ್ ಮಾಡುವುದು ಎಂಬತ್ತೈದು ತೂಗುತ್ತಿದ್ದ ನನ್ನನ್ನು ಎಪ್ಪತ್ತಕ್ಕೆ ಮೂರು ತಿಂಗಳಲ್ಲಿ ಇಳಿಸಿ ಕಳೆದ ಎಂಟು ವರ್ಷಗಳಿಂದ ಎಪ್ಪತ್ತರಲ್ಲೇ ನೆಲೆ ನಿಲ್ಲಿಸಿದೆ. ಚಳಿಗಾಲದಲ್ಲಿ ಮನೆಯೊಳಗೇ ಗಣಪತಿ ತನ್ನ ಮಾತಾಪಿತರನ್ನು ಪ್ರದಕ್ಷಿಣೆ ಹಾಕಿದಂತೆ ಪ್ರದಕ್ಷಿಣೆ ಹಾಕಿದರೆ ವಸಂತದಿಂದ ಗ್ರೀಷ್ಮದವರೆಗೆ ಹೊರಾಂಗಣದಲ್ಲಿರುತ್ತೇನೆ. 


ಇರಲಿ ಕ್ಷಮಿಸಿ, ವಿಷಯ ಅದಲ್ಲ. ಇಂದು ವಾಕಿಂಗ್ ಮಾಡುವಾಗ ನನ್ನ ಮುಂದಿನ ಬೀದಿಯ ಲಾರೆನ್ಸ್ ಲೇನಿನ ಕೊನೆಯಲ್ಲಿರುವ ನ್ಯಾನ್ಸಿ 'hello neighbor' ಎಂದು ಕೂಗಿ ಕರೆದಳು. ಹಾಯ್ ಎನ್ನುತ್ತಾ ಆಕೆಯೆಡೆ ಸಾಗಿದೆ. 'ನನ್ನ ಮನೆಯ ಬಾವುಟ ಗಮನಿಸಿದೆಯಾ' ಎಂದು ಕೇಳಿದಳು. ಆಕೆ ತೂಗು ಹಾಕಿದ್ದ ಯುಕ್ರೇನ್ ಬಾವುಟ ನೋಡಿ 'ಹೌದು, ನಿನ್ನ ಬಂಧುಗಳು ಆಲ್ಲಿ ಹೇಗಿದ್ದಾರೆ' ಎಂದೆ.


'not good, ನನ್ನ ಸಂಬಂಧಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ಅತ್ಯಂತ ಕಷ್ಟದಲ್ಲಿದ್ದಾರೆ.  ಬೈಡೆನ್ ಅವರನ್ನು ಅಮೆರಿಕೆಗೆ ಕರೆತರುತ್ತೇನೆ ಎಂದರೂ ಏನೂ ಮಾಡುತ್ತಿಲ್ಲ. ಪಾಸ್ಪೋರ್ಟ್, ವರ್ಕ್ ಪರ್ಮಿಟ್ ಇರಬೇಕು ಎನ್ನುತ್ತಾನೆ. ಯುದ್ಧಪೀಡಿತ ಪ್ರದೇಶದಲ್ಲಿ ಅವೆಲ್ಲವನ್ನೂ ನಾಶಗೊಂಡ ಮನೆಗಳಲ್ಲಿ ಹೇಗೆ ಹುಡುಕುವುದು!' ಎಂದಳು. ಅದಕ್ಕೆ ನಾನು 'ಅವೆಲ್ಲಾ ಇದ್ದರೆ ನೇರ ವಾರ್ಸಾ (ಪೋಲೆಂಡ್)ಗೆ ಹೋಗಿ ವಿಮಾನ ಹತ್ತಿಕೊಂಡೆ ಬರಬಹುದಲ್ಲ! ಅದಕ್ಕೆ ಬೈಡೆನ್ ಏಕೆ ಬೇಕು?' ಎಂದು ಸಹಮತ ತೋರಿದೆ.


ತನ್ನ ಕಷ್ಟಗಳನ್ನು ತಲೆಯೂರಿ ಹೇಳಿಕೊಳ್ಳಲು ಹೆಗಲೊಂದು ಬೇಕಿದ್ದ ನ್ಯಾನ್ಸಿಗೆ ನಾನು ಹೆಗಲಾದೆನು. ನ್ಯಾನ್ಸಿಯ ಎಪ್ಪತ್ತೈದು ವರ್ಷದ ಹಿರಿಯಕ್ಕ ಇಪ್ಪತ್ತನೇ ಅಂತಸ್ತಿನಲ್ಲಿದ್ದರೆ ಆಕೆಯ ಎಂಬತ್ತೈದರ ಚಿಕ್ಕಮ್ಮ ಹದಿನಾರನೇ ಮಹಡಿಯಲ್ಲಿದ್ದಾಳಂತೆ. ನೀರು, ವಿದ್ಯುತ್, ಅನಿಲ ಸರಬರಾಜಿಲ್ಲದೆ ಅಕ್ಷರಶಃ ಅವರ ಜೀವನ ನರಕಕ್ಕಿಂತಲೂ ಕಡೆಯಾಗಿದೆ. ಅನ್ನಾಹಾರಗಳಿಲ್ಲದಿರುವುದು ಒಂದು ಕಡೆಯಾದರೆ ಮನೆಯಲ್ಲಿನ ಶೌಚಗಳು ತುಂಬಿ ತುಳುಕುತ್ತಿದ್ದು ಅಪಾರ್ಟ್ಮೆಂಟಿನಿಂದ ಹೊರಬರಲಾಗದೆ ಜನರು ಸಾಯುತ್ತಿದ್ದಾರೆ. ಯುಕ್ರೇನಿ ಸೈನ್ಯ ಆಗಾಗ್ಗೆ ತಂದು ಕೊಡುವ ಆಹಾರ ಸಾಮಗ್ರಿಯಲ್ಲಿ ಜೀವ ಹಿಡಿದಿಟ್ಟುಕೊಂಡಿದ್ದರೂ ನೀರು, ಅನಿಲ, ವಿದ್ಯುತ್ ಸರಬರಾಜಿಲ್ಲದೆ ಜನರು ರೋಗಗ್ರಸ್ಥರಾಗುತ್ತಿದ್ದಾರಂತೆ.


ನ್ಯಾನ್ಸಿಯ ಅಕ್ಕಳೊಬ್ಬಳು ನಗರ ಪ್ರದೇಶದ ಹೊರಗಿರುವವಳು ಸ್ವಲ್ಪ ಉತ್ತಮ ಎನ್ನಬಹುದಾದ ಸನ್ನಿವೇಶದಲ್ಲಿದ್ದಾಳೆ. ಆದರೆ ಆಕೆಯ ಮಗಳು ಮತ್ತು ಮಗನ ಕುಟುಂಬಗಳು ನಗರ ಪ್ರದೇಶದಿಂದ ಬಂದು ಆಕೆಯ ಮನೆಯಲ್ಲೇ ಇದ್ದಾರಂತೆ. 'ಒಟ್ಟು ಇಪ್ಪತ್ತು ಮಂದಿ ಮೂರು ಬೆಡ್ ರೂಮಿನ ಮನೆಯಲ್ಲಿ ಕಟ್ಟಿದ ಶೌಚಾಲಯ, ನೀರು ವಿದ್ಯುತ್ ಅನಿಲ ಸರಬರಾಜಿಲ್ಲದೆ ಕಿಟಕಿ ಬಾಗಿಲುಗಳಿಗೆ ಪ್ಲೈವುಡ್ ಬಡಿದು ಮುಚ್ಚಿ ವಾಸಿಸುತ್ತಿರುವ ನರಕ ಇಪ್ಪತ್ತೊಂದನೇ ಶತಮಾನದ ಅತ್ಯಂತ ದೊಡ್ಡ ನರಕ. ಇದಕ್ಕೆ ಕಾರಣನಾದ ಬಂಕರ್ನಲ್ಲಿ ಅಡಗಿರುವ ನರಹಂತಕ ವಾರ್ ಕ್ರಿಮಿನಲ್ ಪುಟಿನ್ ಅನ್ನು ಜೈಲಿಗೆ ಹಾಕಬೇಕು. ಅವನನ್ನು ಕೊಲ್ಲಬಾರದು, ಜೈಲಿಗೆ ಹಾಕಬೇಕು' ಎಂದು ಹನಿಗಣ್ಣಾದಳು.


ನಾನು ಮುಗ್ಧನಂತೆ 'ಪುಟಿನ್ ಬಂಕರನಲ್ಲಿ ಅಡಗಿರುವನೇ! ಮತ್ತೆ ಟಿವಿಯಲ್ಲಿ ಬರುತ್ತಾನಲ್ಲ' ಎಂದೆ. ಅದಕ್ಕೆ ನ್ಯಾನ್ಸಿ 'ಅಯ್ಯೋ, ಟಿವಿಯಲ್ಲಿ ಕಾಣಿಸಿಕೊಳ್ಳುವವನು ಅವನ ಡಬಲ್! ಪುಟಿನ್ ಬಂಕರ್ ಬಿಟ್ಟು ಈವರೆಗೆ ಹೊರಗೆ ಬಂದೇ ಇಲ್ಲ' ಎಂದಳು. ಹಾಗೆಯೇ 'ಅಮೇರಿಕನ್ ಜನರು ಸಾಕಷ್ಟು ದಾನ ಕೊಟ್ಟು ನಮ್ಮ ಜನರನ್ನು ಕಾಪಾಡಿದ್ದಾರೆ. ನನ್ನ ಚರ್ಚಿನಲ್ಲೇ ಒಂದೂವರೆ ಲಕ್ಷ ಡಾಲರ್ ಹಣ ಅಲ್ಲದೇ ಸಾಕಷ್ಟು ಬಟ್ಟೆ, ಆಹಾರ ಸಾಮಗ್ರಿ, ಔಷಧಿ, ಮಕ್ಕಳ ಡೈಪರ್ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸಿ ಯುಕ್ರೇನಿಗೆ ಕಳುಹಿಸಿದ್ದೇವೆ' ಎಂದಳು.


ಒಟ್ಟಾರೆ ನೀರು ವಿದ್ಯುತ್ ಅನಿಲವಿಲ್ಲದೆ ಕಟ್ಟಿದ ಶೌಚಾಲಯಗಳೊಡನೆ ಕಿಟಕಿ, ಬಾಗಿಲುಗಳನ್ನು ಮುಚ್ಚಿಕೊಂಡು ಸೇನೆಯು ಯಾವಾಗಲೋ ತಂದು ಕೊಡುವ ಒಣ ಬ್ರೆಡ್ ನಂಬಿಕೊಂಡು ಇಪ್ಪತ್ತೊಂದನೇ ಶತಮಾನದಲ್ಲಿ ತಿಂಗಳುಗಟ್ಟಲೆ ಇರುವುದಿದೆಯಲ್ಲ ಅದನ್ನು ಒಮ್ಮೆ ಊಹಿಸಿಕೊಳ್ಳಿ. ಇಂತಹ ಸನ್ನಿವೇಶ ಯಾವ ಶತ್ರುವಿಗೂ ಬೇಡ. 


ಈಗಷ್ಟೇ ಚಳಿಗಾಲ ಮುಗಿದು ಕಾಲಿಡುತ್ತಿರುವ ವಸಂತ ಋತುವಿನಂತೆಯೇ ಯುಕ್ರೇನಿಗೂ ಯುದ್ಧದ ಚಳಿಗಾಲ ಮುಗಿದು ವಸಂತ ಬಂದು ಜನರು ಮತ್ತೆ ಜೀವನವನ್ನು ಆರಂಭಿಸುವಂತಾಗಲಿ ಎಂದು ನ್ಯಾನ್ಸಿಗೆ ಸಮಾಧಾನದ ಮಾತುಗಳನ್ನು ಹೇಳಿ ಸಂತೈಸಿ ಮನೆಯ ಕಡೆ ನಡೆದೆ.


ಅಂದಹಾಗೆ ಭಾರತೀಯ ಕಾಮ್ರೇಡರು ಈ ಯುದ್ಧದ ಬಗ್ಗೆ, ಮಾನವೀಯ ಹಕ್ಕುಗಳ ಉಲ್ಲಂಘನೆಗೆ, ರಷ್ಯಾ ಸೈನಿಕರು ಯುಕ್ರೇನಿನ ಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಿರುವುದರ ಬಗ್ಗೆ ಏನಾದರೂ ಹೇಳುತ್ತಿದ್ದಾರೆಯೇ!


ಲಾಲ್ ಸಲಾಂ ನಿಜಕ್ಕೂ ಲಾಲ್ ಆಗಿರುತ್ತದೆಯೇ ಹೊರತು ಅದೆಂದೂ ಶಾಂತಿಯ ಸಂಕೇತದ ಬಿಳಿಯಾಗಿಲ್ಲ, ಹಿಂದೆಯೂ ಮುಂದೂ! ಇದು ಕಮ್ಯುನಿಸ್ಟ್ ನ ಇತಿಹಾಸ ಮತ್ತು ಭವಿಷ್ಯ. ಇದು ನನ್ನ ಮಾತಲ್ಲ, ಕಾಮ್ರೇಡುಗಳ ಸಾಕಷ್ಟು ಡೌ ನೋಡಿರುವ ಅನುಭವಿಸಿರುವ ಜೀವಿಸಿರುವ ನ್ಯಾನ್ಸಿಯ ಮಾತು.


Peace be with you!

ಪಠ್ಯ ಪರಿಷ್ಕರಣೆ

 ಆಗಷ್ಟೇ ಬೆಂಗಳೂರಿನಲ್ಲಿ ನಾನು ಮತ್ತು ನನ್ನ ಸ್ನೇಹಿತ ಸೇರಿ ಕಂಪ್ಯೂಟರ್ ಬಿಡಿ ಭಾಗಗಳನ್ನು SJP ರಸ್ತೆಯ ಮತ್ತೊಬ್ಬ ಸ್ನೇಹಿತನಲ್ಲಿ ಖರೀದಿಸಿ ಜೋಡಿಸಿ ಕಂಪ್ಯೂಟರ್ ಆಗಿಸಿ ಮಾರುತ್ತಿದ್ದೆವು. ಕೆಲವು ಸಮಯದ ಹಿಂದೆಯಷ್ಟೇ ಕ್ಲಾಸಿಕ್ ಕಂಪ್ಯೂಟರ್ ಹಗರಣ ಮುಗಿದು ಅಂದಿನ ಮುಖ್ಯಮಂತ್ರಿ ರಾಜ್ಯದ ಪ್ರತಿಯೊಂದು ಊರಿನಲ್ಲೂ ಒಂದೊಂದು ಸಿನೆಮಾ ಮಂದಿರ ಖರೀದಿ ಮಾಡಿದ್ದಾರೆ ಎಂಬ ಸುದ್ದಿಯಾಗಿತ್ತು. ನಂತರ ಮುಖ್ಯಮಂತ್ರಿ ಬದಲಾಗಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದರು. ಅವರ ಗೃಹ ಕಚೇರಿಯಲ್ಲಿ ನನ್ನ ಮಿತ್ರನೊಬ್ಬ ಉದ್ಯೋಗಿಯಾಗಿದ್ದ. ನಾನವನಿಗೆ ಕಂಪ್ಯೂಟರ್ ಸರಬರಾಜು ಕಾಂಟ್ರಾಕ್ಟ್ ಆಗದಿದ್ದರೆ ಬೇಡ ಡೇಟಾ ಎಂಟ್ರಿ ಕಾಂಟ್ರಾಕ್ಟ್ಗಳನ್ನಾದರೂ ಕೊಡಿಸು ಎನ್ನುತ್ತಿದ್ದೆ. ಅದೇ ರೀತಿ ನನ್ನ ಆರ್ಕಿಟೆಕ್ಟ್ ಮಿತ್ರನು ಆ ಮುಮ ಕಾರ್ಯದರ್ಶಿಗೆ ಕಾಮಗಾರಿ, ಇಂಟೀರಿಯರ್ ಡಿಸೈನ್ ಕಾಂಟ್ರಾಕ್ಟ್ ಕೇಳುತ್ತಿದ್ದ. ಆದರೆ ಅವನಿಂದ ಒಂದೇ ಒಂದು ಉಪಯೋಗ ನಮಗಾಗಲಿಲ್ಲ. ಹಾಗೆಯೇ ಅವನೂ ಸಹ ತನ್ನ ಹಳೆಯ ಬೈಕ್ ಬಿಟ್ಟು ಕಾರ್ ಇರಲಿ ಇನ್ನೊಂದು ಬೈಕ್ ಸಹ ಕೊಳ್ಳ(ಲಾಗ)ಲಿಲ್ಲ.

ನಂತರ JH ಪಟೇಲ್ ಸರ್ಕಾರ ಬಂದಿತು. ಅಲ್ಲಿ ಮುಖ್ಯಮಂತ್ರಿಯವರ ಬಂಧುವೂ ಆಗಿದ್ದ ನನ್ನ ಸಹಪಾಠಿಯೊಬ್ಬ ಮುಖ್ಯಮಂತ್ರಿ ಕಚೇರಿಯಲ್ಲಿ ಸಿಬ್ಬಂದಿಯಾದ. ಮತ್ತದೇ ರಾಗ, ಮತ್ತದೇ ಹಾಡು! ಆದರೆ  ಇವನಿಂದ ಆದ ಒಂದೇ ಒಂದು ಉಪಯೋಗವೆಂದರೆ ಅಮಿತಾಭ್ ಬಚ್ಚನ್ ಅನ್ನು ಭೇಟಿಯಲ್ಲ, ನೋಡಿದ್ದು ಮಾತ್ರ! ಅಂದು ನನ್ನ ಮಿತ್ರನನ್ನು ಮಾತನಾಡಿಸಲು ವಿಧಾನಸೌಧಕ್ಕೆ ಹೋಗಿದ್ದೆ. ಅಂದು ಅಮಿತಾಭ್ ಬೆಂಗಳೂರಿನಲ್ಲಿ ನಡೆಯಲಿದ್ದ ವಿಶ್ವಸುಂದರಿ ಸ್ಪರ್ಧೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಪತ್ರಿಕಾ ಗೋಷ್ಠಿ ನಡೆಸಿದರು. ಆ ಗೋಷ್ಠಿಗೆ ಅವನು ನನ್ನನ್ನು ಕರೆದೊಯ್ದದ್ದು ಬಿಟ್ಟರೆ ಇನ್ಯಾವ ಉಪಯೋಗವೂ ಆಗಲಿಲ್ಲ. ಅವನೂ ಅಷ್ಟೇ ಪಟೇಲರ ಅಧಿಕಾರ ಮುಗಿದ ಮೇಲೆ ದಾವಣಗೆರೆಗೆ ಮರಳಿದ.

ಆ ನಂತರದ ಸರ್ಕಾರಗಳಿಂದ ಬೆಂಗಳೂರು ಸಿಂಗಾಪುರವಾಗಿ ಕರ್ನಾಟಕದಲ್ಲಿ ಸುವರ್ಣಯುಗ ಆರಂಭವಾಯಿತು!

ಸ್ವಿಸ್ ಬ್ಯಾಂಕ್ ಸೇರುತ್ತಿದ್ದ ಕಪ್ಪು ಹಣ ಮಾರ್ಗ ಬಂದ್ ಆದ ಕಾರಣ ರಿಯಲ್ ಎಸ್ಟೇಟಿಗೆ ಭೋರ್ಗರೆಯಲಾರಂಭಿಸಿತು. ಅದಕ್ಕೆ ತಕ್ಕಂತೆ ಸರ್ಕಾರದ ಆದಾಯ ಸಹ! ಅಲ್ಲಿಯವರೆಗೆ ತಮ್ಮ ಊರಿನಿಂದ ಬಸ್ಸಿನ ಮುಂದಿನ ರಿಸರ್ವ್ ಸೀಟಿನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಶಾಸಕರು ವೈಭವೋಪೇತ ಕಾರುಗಳಲ್ಲಿ ಬರುತ್ತಾ ತಮ್ಮ ಚೇಲಾಗಳು ಸಹ ಬಸ್ ಹತ್ತದಷ್ಟು ಸುವರ್ಣ ಕರ್ನಾಟಕ ನಿರ್ಮಿಸಿದರು. ಇದರ ಮುಂದಿನ ಹಂತವಾಗಿ ನಿಗಮ, ಮಂಡಲಿಗಳಿಂದ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯತ್ವ, ಪರಿಷತ್ತು, ರೈಲ್ವೆ ಸಲಹಾ ಮಂಡಳಿ ಸದಸ್ಯತ್ವ, ಮಲೆನಾಡು ಅಭಿವೃದ್ದಿ, ಬಯಲು ಸೀಮೆ ನೀರಾವರಿ ಸಮಿತಿ, ಬಯಲು ಶೌಚಮುಕ್ತ ಸಮಿತಿ, ಮಾಧ್ಯಮ ಸಲಹೆಗಾರ ಸಮಿತಿ, ಪೇಜ್ ಪ್ರಮುಖ್ ಇನ್ನೂ ಅನೇಕಾನೇಕ ಕಂಡು ಕೇಳರಿಯದ ಸುವರ್ಣ ಅವಕಾಶಗಳನ್ನು ಸೃಷ್ಟಿಸಿ ರಾಜಕಾರಣಿಗಳು ತಮ್ಮ ತಮ್ಮ ಬೆಂಬಲಿಗರಿಗೆ ಪೊಡಮಟ್ಟರು. ನಂತರ ಎಲ್ಲಾ ಪಕ್ಷಗಳ ಒಬ್ಬೊಬ್ಬ ಶಾಸಕನ ವಾಹನ ಚಾಲಕ, ಗನ್ಮನ್, ಪಾತ್ರೆ ತೊಳೆಯುವ ಸಿಬ್ಬಂದಿ ಸಹ ಕೋಟ್ಯಾಧಿಪತಿಗಳಾದರು. ನಾನು ಕಂಡಂತೆ ಮಾಜಿ ಮುಖ್ಯಮಂತ್ರಿಗಳ ಮಗನ ಮನೆಯಲ್ಲಿ ಕರೆಂಟ್ ಬಿಲ್ಲು, ಫೋನ್ ಬಿಲ್ಲು ಕಟ್ಟಲು, ತರಕಾರಿ ತರಲು ಇದ್ದ ಈಗಲೂ ಅದೇ ಹುದ್ದೆಯಲ್ಲಿರುವ ಒಬ್ಬ ಸಹಾಯಕ ಇಂದು ಎಪ್ಪತ್ತು ಕೋಟಿಗೂ ಮೀರಿ ಆಸ್ತಿವಂತನಾಗಿದ್ದಾನೆ. ಅದೇ ರೀತಿ ಮಾಧ್ಯಮ ಸಲಹೆಗಾರರು ಕೋಟ್ಯಾಧಿಪತಿಯಾಗಿ ಸಾಮರಸ್ಯ, ಸಾಹಿತ್ಯ ಸಮ್ಮೇಳನಗಳ ಪ್ರಾಯೋಜಕರಾಗಿದ್ದಾರೆ ಎಂದು ನನ್ನ ಮಾಧ್ಯಮ ಮಿತ್ರರು ಹೇಳುತ್ತಾರೆ. ಕೆಲವರಿಗೆ ಹಣದ ವ್ಯಾಮೋಹ, ಇನ್ನೂ ಕೆಲವರಿಗೆ ಪ್ರಚಾರದ ತೀಟೆ. ಅವೆಲ್ಲವನ್ನೂ ಈ "ಗಿರಿ"ಗಳು ಒದಗಿಸುತ್ತವೆ.

ಇದಕ್ಕೆ ಪಠ್ಯ ಪರಿಷ್ಕೃತ ಸಮಿತಿಗಿರಿ ಸಹ ಬೆಂಬಲಿಗರಿಗೆ ಪೊಡಮಾಡುವ ಅಂತಹ ಒಂದು ಸುವರ್ಣ ಅವಕಾಶಗಿರಿ! 

ಈ ಹಿಂದೆ ಖ್ಯಾತ ಸಾಹಿತಿಗಳು ಪರಿಷ್ಕರಣ ಸಮಿತಿ ಅಧ್ಯಕ್ಷರಾಗಿದ್ದಾಗ ಅವರಿಗೆ ಬೇಕಾದ ಅಜೆಂಡಾ ಸೇರಿಸಿದರು ಎಂದು ಇಂದಿನಂತೆಯೆ ಅಂದೂ ಹುಯಿಲೆಬ್ಬಿತ್ತು. ಆ ಸಮಿತಿಯ ಎಡ ತೊಡೆ ತಟ್ಟುವಿಕೆಯ ಸವಾಲಿಗೆ ಇಂದು ಈ ಹೊಸ ಸಮಿತಿ ಬಲ ತೊಡೆ ತಟ್ಟಿ ಉತ್ತರ ನೀಡಿದೆ. 

ಆದರೆ ಇಲ್ಲಿ ವಿರೋಧಕ್ಕೆ ಗುರಿಯಾಗಿರುವುದು ಪರಿಷ್ಕರಣೆ ಆಗಿರುವ ಕನ್ನಡ ಭಾಷಾ ಪಠ್ಯ ಎಂದು ಗಮನಿಸಿದ್ದೇನೆ! ಆದರೆ ಪಠ್ಯವೆಂದರೆ ಕೇವಲ ಕನ್ನಡ ಭಾಷಾ ವಿಷಯ ಮಾತ್ರವೇ? ಅದರಲ್ಲೂ ನನ್ನ ಹೈಸ್ಕೂಲ್ ದಿನಗಳಿಂದಲೂ ಕನ್ನಡಕ್ಕೆ ಪರ್ಯಾಯವಾಗಿ ಅಂಕ ಮಿತ್ರ ಸಂಸ್ಕೃತ, ಉರ್ದು ಆಯ್ಕೆ ಮಾಡಿಕೊಳ್ಳುವವರು ಹೆಚ್ಚಿದ್ದರು. ಅದು ಈಗಲೂ ಹಾಗೆಯೇ ಇದೆ. ಉಳಿದಂತೆ ಇಂಗ್ಲಿಷ್, ವಿಜ್ಞಾನ, ಗಣಿತ, ಇತಿಹಾಸ, ಗಣಕ ವಿಷಯಗಳ ಪರಿಷ್ಕರಣೆ ಹೇಗಿದೆ? ಒಂದು ವೇಳೆ ಆ ವಿಷಯಗಳು ಪರಿಷ್ಕರಣೆ ಆಗಿಲ್ಲದಿದ್ದರೆ, ಏಕಾಗಿಲ್ಲ? ಅವು ಬದಲಾಗದ static ಶಾಸ್ತ್ರಗಳೆಂದೆ? 

ಆಯಾಯ ಪಕ್ಷಗಳ ಬೆಂಬಲಿಗರ ಸಿಂಡಿಕೇಟ್ ಸದಸ್ಯರನ್ನು ಓಲೈಸಿ ಉದ್ಯೋಗ, ಬಡ್ತಿ, ಪದವಿ, ಪಿಹೆಚ್ಡಿ ಪಡೆದ, ಅದರಲ್ಲೂ ಕನ್ನಡ ಉಪನ್ಯಾಸಕ ಎಡಪಂಥೀಯ ಸಾಹಿತಿವರ್ಗ ತಾವು ಪಿಹೆಚ್ಡಿ ಪಡೆದದ್ದು ತಮ್ಮ ವಿರೋಧಿ ಬಣವನ್ನು ವಾಚಾಮಗೋಚರ ಬೈಯುವುದರಲ್ಲಿ ಎಂದು ಸಾಬೀತು ಮಾಡುತ್ತಿದ್ದಾರೆ. ಕೇವಲ ಕನ್ನಡವಲ್ಲದೆ ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಉನ್ನತ ಪದವಿ ಪಡೆದಿರುವಂತೆ ನಿರರ್ಗಳವಾಗಿ ಮಾತನಾಡುವ ಈ ಸುಜ್ಞಾನಿಗಳು ಇಂತಹ ಬಂದ-ಹೋದ ಸಮಿತಿಗಳನ್ನು ನಿಷೇಧಿಸಿ ಶಿಕ್ಷಣ ಇಲಾಖೆಯಲ್ಲಿಯೆ ಉದ್ಯೋಗದಲ್ಲಿರುವ ತಜ್ಞರಿಂದ ಪಠ್ಯ ರಚಿಸಿ ಎಂದೇಕೆ ಕಳೆದ ಬಾರಿ ಸಾಹಿತಿ ಅಧ್ಯಕ್ಷರ ವಿರುದ್ಧ ಹುಯಿಲೆದ್ದಾಗಲೇ ನೈತಿಕವಾಗಿ ಪ್ರಶ್ನಿಸಲಿಲ್ಲ! ಹೋಗಲಿ, ಈಗಲಾದರೂ ಏಕೆ ಅಂತಹ ದೂರಾಲೋಚನೆಯ ಕುರಿತು ಪ್ರಶ್ನಿಸುತ್ತಿಲ್ಲ?

ಕುಲುಮೆಗೆ ನಿಲುಮೆ, ಹಿಂದುತ್ವಕ್ಕೆ ಸಾಮರಸ್ಯ, ಲಿಂಗಕ್ಕೆ ಕಾರಂಜಿ, ಬರಗೂರಿಗೆ ಚಕ್ರತೀರ್ಥ, ಕಾಂಗ್ರೆಸ್ಸಿಗೆ ಬಿಜೆಪಿ...ಇದರಾಚೆಗೆ ಚಿಂತಿಸಲಾಗದ ಚಿಂತನೆಯನ್ನು ಸಪ್ತ ಸಾಗರದಾಚೆಯಿಂದಲೂ ನೋಡಲಾಗುತ್ತಿಲ್ಲ. 

ಒಟ್ಟಿನಲ್ಲಿ ಈ ಪಠ್ಯ ಪರಿಷ್ಕರಣೆ ನಿಜಕ್ಕೂ ಒಂದು ಅತ್ಯುತ್ತಮ ಬೆಳವಣಿಗೆ! ಏಕೆಂದರೆ ಈ ಮುಂಚೆ ಇಂತಹದ್ದನ್ನು ಗಮನಿಸುತ್ತಲೇ ಇರದಿದ್ದ ಪ್ರಜೆಗಳು ಈಗ ಈ ಬಗ್ಗೆಯೂ ಆಲೋಚಿಸಲಾರಂಭಿಸಿದ್ದಾರೆ.  ಈ ಆಲೋಚನೆ ಮುಂದೆ ಒಂದು ಶಾಶ್ವತ ಪರಿಹಾರಕ್ಕೆ ನಾಂದಿಯಾಗಬಹುದು! ಹಾಗೆಯೇ ಅಂಕದ ಕೋಳಿಗಳ ಮಂಕು ಕಳೆಯಬಹುದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಬಸವರಾಜಕಾರಣ - A Clarification.

 ನನ್ನ "ಬಸವರಾಜಕಾರಣ" ಕೃತಿಯಲ್ಲಿ ಕೆಲವು ವಚನಗಳನ್ನು ತಪ್ಪಾಗಿ ವ್ಯಾಖ್ಯಾನಿಸಿದ್ದೇನೆ ಎಂದು ಒಬ್ಬ ಓದುಗರು ದೂರಿದ್ದರು. ಕೆಲವು ಸಾಂಕೇತಿಕ ಮತ್ತು ಬೆಡಗಿನ ವಚನಗಳನ್ನು ಸಾಕಷ್ಟು ಜನರು ತಮ್ಮ ಗ್ರಹಿಕೆಗೆ ತಕ್ಕಂತೆ ವರ್ಣಿಸಿದ್ದಾರೆ. ಅದನ್ನು ನಮ್ಮ ಸಮಾಜ ಮಹಾಪ್ರಸಾದ ಎಂಬಂತೆ ಸ್ವೀಕರಿಸಿಬಿಟ್ಟಿದೆ. ಈ ಸಿದ್ಧ ವ್ಯಾಖ್ಯಾನಗಳಿಗೆ ಯಾವುದೇ ವ್ಯತಿರಿಕ್ತ ವ್ಯಾಖ್ಯಾನಗಳನ್ನು ಕೊಂಚವೂ ತರ್ಕಿಸದೆ ತಿರಸ್ಕರಿಸುವ ವಾತಾವರಣದ ಅರಿವು ನನಗಿದೆ.

ಅಣ್ಣನು ಹೇಳಿಹನೆಂದು ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ, ತರ್ಕದ ಬೆನ್ನ ಬಾರನೆತ್ತುವ, ಆಗಮದ ಮೂಗ ಕೊಯಿವೆ ಎಂದರೆ ಅದು ಕೇವಲ ಮೌಢ್ಯ ಮಾತ್ರ. ಏಕೆಂದರೆ ವೇದವೆಂಬುದು ಒಂದು ಕಾಲದ ಸಂವಿಧಾನ, ಶಾಸ್ತ್ರವೆಂಬುದು ವಿಜ್ಞಾನ, ತರ್ಕವೆಂಬುದು ಈಗಲೂ ಇಂದಿನ ಮೊಬೈಲಿನಲ್ಲಿರುವ ತಂತ್ರಾಶ! ಇದೆಲ್ಲವೂ ಜಡವಲ್ಲದೆ ಬದಲಾಗುತ್ತಲೇ ಬದಲಾಗಲೇಬೇಕಾದ ಚಲನಶೀಲ ಅಂಶಗಳು. ಅದನ್ನೇ ಬಸವ ಬದಲಾಯಿಸಿದ್ದು, ಇಂದು ನಾವುಗಳು ಬದಲಾಯಿಸಬೇಕಾದ್ದು! ಇದೆಲ್ಲಕ್ಕೂ ತರ್ಕ ಮೂಲದ್ರವ್ಯ.
ಹಾಗಾಗಿ ಆ ವ್ಯಾಖ್ಯಾನಗಳನ್ನು ಕಟ್ಟಿಕೊಡದಿದ್ದರೆ ತಾರ್ಕಿಕ ಸಿದ್ಧಾಂತಗಳು ಹುಟ್ಟುವುದಾದರೂ ಎಂತು? ಅಂತಿಮವಾಗಿ ಈ ವಿವರಣೆಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನಲು ಮೂಲ ವಚನಕಾರನು ಮಾತ್ರ ಹಕ್ಕುದಾರ!
ತಾರ್ಕಿಕ ವಿಶ್ಲೇಷಣೆಗೆ ಸಾಂದರ್ಭಿಕ ಸಾಕ್ಷ್ಯ, ಸನ್ನಿವೇಶ, ಮತ್ತು ಇತಿಹಾಸ ನನಗೆ ಬಹು ಮುಖ್ಯ. ಅಂತಹ ಒಂದು ತಾರ್ಕಿಕ ವಿಶ್ಲೇಷಣೆ ಹೀಗಿದೆ. ಕೃತಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದನ್ನು ಇಲ್ಲಿ ಹೆಚ್ಚಿನ ವಿವರಣೆಯೊಂದಿಗೆ ಪರಿಷ್ಕರಿಸಿದ್ದೇನೆ. ಈ ವಿವರಗಳು ಬರಲಿರುವ "ಬಸವರಾಜಕಾರಣ" ಇ-ಪುಸ್ತಕದಲ್ಲಿರುತ್ತವೆ.
ಕೋಣನ ಕೊಂಬಿನ ತುದಿಯಲ್ಲಿ,
ಏಳುನೂರೆಪ್ಪತ್ತು ಸೇದೆಯ ಬಾವಿ.
ಬಾವಿಯೊಳಗೊಂದು ಬಗರಿಗೆ,
ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ
ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು
ಆನೆ ನೇರಿತ್ತ ಕಂಡೆ ಗುಹೇಶ್ವರಾ.
'ಕೋಣನ ಕೊಂಬಿನ ತುದಿಯಲ್ಲಿ' ಎಂದರೆ ಬಸವಣ್ಣನ ಮಹತ್ವಾಕಾಂಕ್ಷೆಯ ಉತ್ತುಂಗದ ಕಲ್ಯಾಣ ಕ್ರಾಂತಿ. 'ಏಳುನೂರೆಪ್ಪತ್ತು ಸೇದೆಯ ಬಾವಿ' ಎಂದರೆ ಸಮಾಜಮುಖಿ ಏಳುನೂರೆಪ್ಪತ್ತು ಗಣಂಗಳು! ಸೇದೆಯ ಬಾವಿ ಎಂಬ ಉಪಮೆಯು ನೀರಿರುವ ಮತ್ತು ನಿತ್ಯ ಬಳಕೆಯಲ್ಲಿರುವ ಯಾ ಸೇದುತ್ತಿರುವ ಬಾವಿ. ಅಂದರೆ ಸಮಾಜಕ್ಕೆ ನೀರುಣ್ಣಿಸುತ್ತಿರುವ ಉಪಯೋಗಿ ಎಂಬರ್ಥದಲ್ಲಿ ಹೇಳಲಾಗಿದೆ. ಹಾಗಾಗಿ ಇದನ್ನು ಸಮಾಜಮುಖಿ ಏಳುನೂರೆಪ್ಪತ್ತು ಗಣಂಗಳು ಎನ್ನಬಹುದು.
ಈ ಏಳನೂರೆಪ್ಪತ್ತನ್ನು ನರನಾಡಿ, ಏಳನೂರೆಪ್ಪತ್ತು ಪಂಚೇಂದ್ರಿಯಗಳ ವಿಸ್ತೃತ ಭಾಗಗಳ ಸಂಖ್ಯೆ, ಏಳನೂರೆಪ್ಪತ್ತು ಅಳತೆ ಎಂದೆಲ್ಲಾ ಕೆಲವರು ಅರ್ಥೈಸಿದ್ದಾರೆ. ಅದು ತಾರ್ಕಿಕವಾಗಿ ಸಮಂಜಸವಲ್ಲ. ಏಕೆಂದರೆ ಮಾನವನಿಗೆ ಮಿಲಿಯನ್ನುಗಟ್ಟಲೆ ನರನಾಡಿಗಳಿವೆ. ಹಾಗೆಯೇ ಪಂಚೇಂದ್ರಿಯ ಮತ್ತದರ ವಿಸ್ತೃತ ಭಾಗ ಇತ್ಯಾದಿಗೆ ಹೋಲಿಸುವುದು ಸಹ ಕಾಲ್ಪನಿಕವೇ ಹೊರತು ಹಕೀಕತ್ತಲ್ಲ. ಹಾಗಾಗಿದ್ದರೆ ಅಲ್ಲಮ 'ಅಗಣಿತ' ಎಂಬ ಪದ ಅಥವಾ ಇತರೆ ಪರ್ಯಾಯ ಪದವನ್ನು ಬಳಸುತ್ತಿದ್ದ. ಇನ್ನು ಅಳತೆ ಮಾಪಕವಾಗಿದ್ದರೆ ಏಳನೂರೆಪ್ಪತ್ತು ಜಂಘೆಯ ಬಾವಿ ಎಂದಾಗುತ್ತಿತ್ತು.
ಇನ್ನು 'ಬಾವಿಯೊಳಗೊಂದು ಬಗರಿಗೆ' ಎಂದರೆ ನೀರಿನ ಒರತೆ. ಸಾಮಾನ್ಯವಾಗಿ ಒಣಗಿದ ಬಾವಿಯಲ್ಲಿ ನೀರಿನ ಒರತೆಗೆ ಬಗರಿಗೆ ತೋಡಿರುತ್ತಾರೆ. ಇಲ್ಲಿ ಬಗರಿಗೆ ಎಂದರೆ ಆದ್ಯರ ಶೈವಾಚಾರ. ಬಗರಿಗೆಯನ್ನು ಕೆಲವರು ಪ್ರಾಣ, ಚೈತನ್ಯ ಎಂದು ಸೃಜನಶೀಲವಾಗಿ ಅರ್ಥೈಸಿದ್ದಾರೆ.
'ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯಾ' ಎಂದರೆ ಅಂದು ಹುಟ್ಟಿನಿಂದ ಜಾತಿ, ಅಂತರ್ಜಾತಿ ವಿವಾಹ ನಿರ್ಬಂಧ, ಇತ್ಯಾದಿ ನವ ನೀತಿಗಳನ್ನು ಅಪ್ಪಿದ ಆದ್ಯರು. ಆದ್ಯರನ್ನು ಈ ನೀತಿಗಳಿಂದಾಗಿ ಸೂಳೆ ಎಂದು ತಮ್ಮ ವಚನಗಳಲ್ಲಿ ಸಾಕಷ್ಟು ವಚನಕಾರರು ಕರೆದಿದ್ದಾರೆ.
'ಆ ಸೂಳೆಯ ಕೊರಳಲ್ಲಿ ಏಳುನೂರೆಪ್ಪತ್ತು ಆನೆ ನೇರಿತ್ತ ಕಂಡೆ ಗುಹೇಶ್ವರಾ.' ಎಂದರೆ ಈ ಎಲ್ಲಾ ಸಮಾಜಮುಖಿ ಅಮರ ಗಣಂಗಳು ಕಲ್ಯಾಣ ಕ್ರಾಂತಿಯಲ್ಲಿ ಸೋತು ಸತ್ತು ಆದ್ಯರ ಕೊರಳ ಮಾಲೆಯಾದರು. ಅಲ್ಲಿಗೆ ಶೈವವು ಹುಟ್ಟಿನಿಂದ ಜಾತಿ ಮತ್ತಿತರೆ ನವ ನಿಯಮಗಳನ್ನು ಒಪ್ಪಿ ಅಪ್ಪಿಕೊಂಡಿತು. ಹೀಗೆ ಕಲ್ಯಾಣ ಕ್ರಾಂತಿಯಿಂದ ಭ್ರಮನಿರಸನಗೊಂಡ ಅಲ್ಲಮನು ಬಯಲಾಗುತ್ತಾನೆ. ಹಾಗಾಗಿಯೇ ಅಲ್ಲಮನು ಕಲ್ಯಾಣ ಕ್ರಾಂತಿಯ ನಂತರ ಏನಾದನೆಂದಾಗಲಿ ಅಥವಾ ಅವನ ವಚನಗಳಾಗಲಿ ಕಾಣಬರುವುದಿಲ್ಲ. ಮಿತ್ರನೊಬ್ಬನ ಮಹತ್ವಾಕಾಂಕ್ಷೆ ಈಡೇರದೆ ದೇಶಾಂತರ ಹೋದ ಇನ್ನೊಬ್ಬ ಮಿತ್ರನಂತೆ ಅಲ್ಲಮ ಬಯಲಾಗಿ ಹೋಗಿದ್ದಾನೆನಿಸುತ್ತದೆ ಎಂಬ ಅರ್ಥವನ್ನೂ ಈ ವಚನ ಕೊಡುತ್ತದೆ.
ಅಲ್ಲಮನು ಸಾಕಷ್ಟು ಬೆಡಗಿನ ವಚನಗಳನ್ನು ಬರೆದಿದ್ದಾನೆ ನಿಜ. ಆದರೆ ಅಷ್ಟೇ ವಾಸ್ತವದ ನೇರ, ಮತ್ತು ಸಾಂಕೇತಿಕ ವಚನಗಳನ್ನೂ ಬರೆದಿದ್ದಾನೆ ಎಂಬುದೂ ಅಷ್ಟೇ ಸತ್ಯ. ಅಂತಹ ಐತಿಹಾಸಿಕ ದಾಖಲೆಯ ಸಾಂಕೇತಿಕ ವಚನವೇ ಇದಾಗಿದೆ ಎಂಬುದು ನನ್ನ ಅರ್ಥೈಸುವಿಕೆ.
ಇನ್ನು ಅಲ್ಲಮನ ಕುರಿತು ಹೇಳಲೇಬೇಕಾದ ಇನ್ನೊಂದು ವಿಷಯವೆಂದರೆ ಅಲ್ಲಮನ ಅಂಕಿತ "ಗುಹೇಶ್ವರ"!
ಗುಹ್ಯ + ಈಶ್ವರ = ಗುಹೇಶ್ವರ. ಗುಹ್ಯ ಎಂದರೆ ಯೋನಿ, ವಾಂಛೆ, ಪಶು. ಈಶ್ವರ ಯೋನಿಯ ಪತಿಯಾಗಿ ಪಶು-ಪತಿ, ಯಾ ಶರಣಸತಿ-ಲಿಂಗಪತಿ ಎಂಬುದರ ಸಾಂಕೇತಿಕ ಪದವೇ ಅಲ್ಲಮನ ಅಂಕಿತವಾಗಿ ಪಾಶುಪತ-ಕಾಳಾಮುಖ-ವೀರಶೈವ ವಿಕಾಸದ ಸಂಕೇತವಾಗಿದೆ. ಇನ್ನು 'ಹ' ಕಾರಕ್ಕೆ 'ಗ' ಕಾರ ಉಪಯೋಗಿಸುವ ದಮಿಲ / ತಮಿಳ ಭಾಷೆಯಂತೆ ಗುಹೇಶ್ವರವು ಗೊಗ್ಗೇಶ್ವರ ಎಂದಾಗಿ ಸಹ ಕೆಲವು ವಚನಗಳಲ್ಲಿ ಬಳಕೆಯಾಗಿರಬಹುದು ಎಂಬುದು ನನ್ನ ಗ್ರಹಿಕೆ.
ಧನ್ಯವಾದಗಳು.
ರವಿ ಹಂಜ್

ಸಂವಿಧಾನ - A dissection!

 ಭಾರತ ಇಂದು ಎಡ ಬಲ ನಡುವೆ ಇಬ್ಭಾಗವಾಗಿರುವಾಗ

ಭಾರತೀಯ ಎಡ ಬಲ ಚಿಂತಕರು, ರಾಜಕಾರಣಿಗಳು, ನಾಗರೀಕರು ಅಸಲಿಗೆ ನೈಜ ಕಾಳಜಿಯಿದ್ದರೆ ಚಿಂತಿಸಬೇಕಾದ್ದು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತ.
ಒಂದು ಕಂಪೆನಿ ಹೇಗೆ ಒಂದು ಮಿಷನ್ ಸ್ಟೇಟ್ಮೆಂಟ್ ಹೊಂದಿ ಅದಕ್ಕೆ ತಕ್ಕಂತೆ KPI ಗಳನ್ನು ಹಾಕಿಕೊಂಡು ಅದರ ಅನುಷ್ಠಾನಕ್ಕೆ ನಿಯಮಗಳನ್ನು, ಗುರಿಗಳನ್ನು ಹೊಂದಿರುತ್ತದೋ ಅದೇ ರೀತಿಯಲ್ಲಿ ಒಂದು ದೇಶ ಸಹ. ಹಾಗೆ ನೋಡಿದಾಗ ನಮ್ಮದು:
ದೇಶ - ಭಾರತ (Entity)
ಉದ್ಘೋಷ - ಸತ್ಯಮೇವ ಜಯತೆ (Mission)
ಸಂವಿಧಾನ - ಭಾರತೀಯ ಸಂವಿಧಾನ (KPI)
ಕಾಯ್ದೆ - ಇಂಡಿಯನ್ ಪೀನಲ್ ಕೋಡ್ ಯಾನೆ ಐಪಿಸಿ, ಆಸ್ತಿ ಕಾಯ್ದೆ, ಕಾಂಟ್ರಾಕ್ಟ್ ಕಾಯ್ದೆ, ಟ್ರಸ್ಟ್ ಕಾಯ್ದೆ, ಕೌಟುಂಬಿಕ ಕಾಯ್ದೆ, ಕಾರ್ಮಿಕ ಕಾಯ್ದೆ ಇತ್ಯಾದಿ (Goals, Regulations, Tool, Governance and Plans aligned to KPIs)
ಆಡಳಿತ - ಸಾಂವಿಧಾನಿಕ ಪ್ರಜಾಪ್ರಭುತ್ವ (Execution)
ಹೀಗೆ ಯಾವುದೇ ದೇಶದ ಸಂವಿಧಾನವು ಆ ದೇಶದ ಮೂಲಭೂತ ಕಾನೂನು ಆಗಿರುತ್ತದೆ. ಅದು ತನ್ನ ನಾಗರಿಕ ಸಂಹಿತೆಯನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಆ ದೇಶದ ಆಡಳಿತವು ಜಾರಿಗೊಳಿಸುವ ಪ್ರತಿಯೊಂದು ಕಾನೂನುಗಳು ತನ್ನ ಸಂವಿಧಾನದ ಸಂಹಿತೆಯ ಪರಿಮಿತಿಗನುಗುಣವಾಗಿರಬೇಕು ಎಂದು ನಿರ್ದೇಶಿಸುತ್ತದೆ. ದೇಶದ ಎಲ್ಲಾ ಕಾನೂನುಗಳು ಸಂವಿಧಾನದ ಪರಿಮಿತಿಯೊಳಗಿರುವಂತೆ ನೋಡಿಕೊಳ್ಳುವುದು ಕೇಂದ್ರ ನ್ಯಾಯಾಂಗ ಸಮಿತಿಯ ಆದ್ಯ ಕರ್ತವ್ಯ.
ಜಾಗತಿಕವಾಗಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಇಂತಹ ಸಾಂವಿಧಾನಿಕ ವ್ಯವಸ್ಥೆ ಇರುವಾಗ, ಪ್ರಪಂಚದ ಎಲ್ಲಾ ಸಂವಿಧಾನಗಳನ್ನೂ ಪರಾಮರ್ಶಿಸಿ ರಚಿಸಿರುವ ಭಾರತೀಯ ಸಂವಿಧಾನವನ್ನು ಭಾರತ ಹೇಗೆ ಅನುಷ್ಠಾನಗೊಳಿಸಿದೆ?
"ಸತ್ಯಮೇವಜಯತೆ" ಎಂಬ ಉದ್ಘೋಷ ಹೊತ್ತ ಭಾರತದ ಸಂವಿಧಾನ ಜನವರಿ ೨೬, ೧೯೫೦ ರಲ್ಲಿ ಅನುಷ್ಠಾನಕ್ಕೆ ಬಂದಿತು. ಜಗತ್ತಿನಲ್ಲೇ ಅತ್ಯಂತ ಉದ್ದದ ಸಂವಿಧಾನ ಎನಿಸಿರುವ ಭಾರತೀಯ ಸಂವಿಧಾನದ ಬಹುಪಾಲು ಆಡಳಿತಾತ್ಮಕ ಅಧ್ಯಾಯಗಳು "Government of India Act 1935" ನಿಂದ ನಕಲುಗೊಂಡಿದ್ದರೆ ಉಳಿದ ವಿಷಯಗಳನ್ನು ಪ್ರಪಂಚದ ಇತರೆ ಸಂವಿಧಾನಗಳಿಂದ ಪಡೆದುಕೊಳ್ಳಲಾಗಿದೆ.
ಆದರೆ ಸಂವಿಧಾನಕ್ಕೆ ಮುಂಚೆಯೇ ಉರ್ಜಿತವಾಗಿದ್ದು ಮತ್ತು ಯಥಾವತ್ತಾಗಿ ಜಾರಿಯಿದ್ದ ಕಾಯ್ದೆಗಳು ಎಷ್ಟರ ಮಟ್ಟಿಗೆ ವಿಶ್ಲೇಷಣೆಗೊಂಡು ಸಂವಿಧಾನಕ್ಕೆ ಅದರ ರಚನೆಯಲ್ಲಿ ಸಂಯೋಜಿಸಲ್ಪಟ್ಟವು? ಅಥವಾ ನೂತನ ಸಂವಿಧಾನದ ಪರಿಮಿತಿಯೊಳಗೆ ಈ ಕಾಯ್ದೆಗಳು ಇರುವವು ಎಂದು ಹೇಗೆ ದೃಢೀಕರಿಸಲಾಯಿತು?
ಹಾಗೆ ಜಾರಿಯಲ್ಲಿದ್ದ ಕ್ರಿಮಿನಲ್ ಕಾಯ್ದೆಗಳು ಬ್ರಿಟಿಷ್ ಭಾರತದಲ್ಲಿ ೧೮೬೨ ರಿಂದ ಐಪಿಸಿ ಕಾಯ್ದೆಗಳಾಗಿ ಜಾರಿಯಿದ್ದರೆ ಕಾಂಟ್ರಾಕ್ಟ್ ಕಾಯ್ದೆ ೧೮೭೨, ಆಸ್ತಿ ಕಾಯ್ದೆ ೧೮೮೨, ಟ್ರಸ್ಟ್ ಕಾಯ್ದೆ ೧೮೮೨, ಕೌಟುಂಬಿಕ ಕಾಯ್ದೆಯು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಎಂದು ೧೭೭೨ ರಿಂದಲೂ ಜಾರಿಯಲ್ಲಿವೆ. ಇನ್ನು ಕಾರ್ಮಿಕ ಕಾಯ್ದೆ, ತೆರಿಗೆ ಕಾಯ್ದೆ, ಕಂಪೆನಿ ಕಾಯ್ದೆಗಳು ಕಾಲಕ್ಕೆ ತಕ್ಕಂತೆ ಸ್ವತಂತ್ರ ಭಾರತದಲ್ಲಿ ರಚನೆಯಾಗಿವೆ.
೨೦೧೯ರವರೆಗೆ ೭೮ ಬಾರಿ ವಿವಿಧ ಐಪಿಸಿ ಕಾಯ್ದೆಗಳು ತಿದ್ದುಪಡಿಗೊಂಡಿರುವಂತೆ ಸ್ವಾತಂತ್ರ್ಯಪೂರ್ವದ ಇತರೆ ಕಾನೂನುಗಳು ಸಹ ಕಾಲಕ್ಕೆ ತಕ್ಕಂತೆ ತಿದ್ದುಪಡಿಗಳನ್ನು ಹೊಂದಿದ್ದರೂ ಸಾಕಷ್ಟು ಮೂಲ ಸ್ವರೂಪಗಳು ಈ ಎಲ್ಲಾ ಕಾಯ್ದೆಗಳಲ್ಲಿ ಹಾಗೆಯೇ ಉಳಿದಿವೆ. ಆದರೆ ಮೂಲಭೂತವಾಗಿ ಈ ಎಲ್ಲಾ ಸ್ವಾತಂತ್ರ್ಯಾಪೂರ್ವ ಮತ್ತು ಸ್ವಾತಂತ್ರೋತ್ತರ ಕಾನೂನುಗಳು ಸಂವಿಧಾನಕ್ಕನುಗುಣವಾಗಿ ಇರುವವೋ ಇಲ್ಲವೋ ಎಂದು ಯಾವುದಾದರೂ ಸಮಿತಿಗಳು ವರದಿ ಕೊಟ್ಟು ಪುರಸ್ಕರಿಸಿವೆಯೇ?
ಸಂವಿಧಾನ ರಚನೆಯ ಕಾಲದಲ್ಲಿ ಪಿತ್ರಾರ್ಜಿತವಾಗಿ ಬಂದ ಈ ಬ್ರಿಟಿಷ್ ವಸಾಹತು ಕಾನೂನುಗಳು ಹೊಚ್ಚ ಹೊಸ ಪ್ರಜಾಪ್ರಭುತ್ವ ಭಾರತದ ಆಶಯಕ್ಕೆ ಮತ್ತು ಸಂವಿಧಾನಕ್ಕೆ ಹೊಂದುತ್ತವೆಯೇ ಎಂದು ಸಂವಿಧಾನ ರಚನೆಯ ತಂಡ, ಶಿಲ್ಪಿ, ಆಡಳಿತ ಕಂಡುಕೊಂಡಿತ್ತೆ??? ಗೊತ್ತಿಲ್ಲ. ಈವರೆಗಿನ ನನ್ನ ಶೋಧನೆಗೆ ಅಂತಹ ಸಂಗತಿ, ಮಾಹಿತಿ ಕಣ್ಣಿಗೆ ಬಿದ್ದಿಲ್ಲ. ನಾನಾಭಾಯ್ ಪಾಲ್ಕಿವಾಲಾರ we the people, we the nation ಪುಸ್ತಕಗಳು ಕೊಂಚ ಮಾಹಿತಿ ನೀಡಿದರೂ ಎಲ್ಲಾ ಕಾಯ್ದೆಗಳು ಪರಾಮರ್ಶನಗೊಂಡಿವೆ ಎಂದು ಖಚಿತಪಡಿಸವು.
ಒಂದು ವೇಳೆ ಸಮಿತಿಯೊಂದು ವರದಿ ಕೊಟ್ಟಿದ್ದರೂ ಅದು ಎಲ್ಲವನ್ನೂ ಪರಿಶೀಲಿಸಿತ್ತೆ? ಹಾಗೆ ಪರಿಶೀಲಿಸಿದ್ದರೆ ಮೋದಿ ಸರ್ಕಾರ ಇಂತಹ ಹತ್ತು ಹಲವಾರು ಕಾಯ್ದೆಗಳನ್ನು ಇತ್ತೀಚೆಗೆ ರದ್ದುಗೊಳಿಸುವ ಪ್ರಮೇಯಯೇ ಬರುತ್ತಿರಲಿಲ್ಲವಲ್ಲವೇ?!
ಇವು ಓರ್ವ ಸಾಗರೋತ್ತರ ಕುತೂಹಲಿ ನಾಗರಿಕನ ಪ್ರಶ್ನೆಗಳು.
ಆದರೆ ಅಂತಹ ಪ್ರಯತ್ನ ಆಗಿಯೇ ಇಲ್ಲವೇನೋ ಎನ್ನುವ ಸಂಶಯ ಸಾಕಷ್ಟು ಬಲವಾಗಿದೆ. ಏಕೆಂದರೆ ಸಂವಿಧಾನದ ಆಶಯಕ್ಕೂ ಮತ್ತು ಜಾರಿಯಲ್ಲಿರುವ ಕಾನೂನುಗಳ ನ್ಯಾಯ ನಿಯಮಕ್ಕೂ ಸಾಕಷ್ಟು ಅಭಾಸಗಳಿವೆ.
ಅಂತಹ ಒಂದು ಸಾಮಾನ್ಯ ಅಭಾಸದ ಉದಾಹರಣೆ ಹೀಗಿದೆ:
"ಸತ್ಯಮೇವ ಜಯತೆ" ಎಂಬ ಉದ್ಘೋಷ ಹೊತ್ತ ರಾಷ್ಟ್ರದ ಒಬ್ಬ ಘನವೆತ್ತ "ಜನ"ಪ್ರತಿನಿಧಿ ತನ್ನ ಸಂವಿಧಾನಕ್ಕೆ ವಿರುದ್ಧವಾಗಿ ಬಹುಪತ್ನಿತ್ವವನ್ನು ಪಾಲಿಸುತ್ತಿದ್ದರೆ ಅದನ್ನು ಆತನ ಪತ್ನಿಯರು ಮಾತ್ರ ಪ್ರಶ್ನಿಸಬೇಕೇ ಹೊರತು ಜನರು ಪ್ರಶ್ನಿಸುವಂತಿಲ್ಲ. ಇದು ಕೌಟುಂಬಿಕ ಕಾಯ್ದೆಯ ಒಂದು ನಿಯಮ. ಆ ಜನಪ್ರತಿನಿಧಿ ಜನರಿಂದಲೇ ಚುನಾಯಿತನಾಗಿದ್ದು, ಅಸಂವಿಧಾನಿಕ ನಡೆ ಹೊಂದಿದ್ದರೂ ಅದನ್ನು "ಜನ" ಪ್ರಶ್ನಿಸಲಾಗದಂತೆ ಈ ನಿಯಮ ಸಂವಿಧಾನಬಾಹಿರವಾಗಿದೆ.
ಇಲ್ಲಿ ದೇಶದ ಮಿಷನ್ ಸ್ಟೇಟ್ಮೆಂಟ್ ಮತ್ತು ಸಂವಿಧಾನ ಎರಡನ್ನೂ ಈ ಕೌಟುಂಬಿಕ ಕಾಯ್ದೆ ಹೇಗೆ ಬಾಯಿ ಮುಚ್ಚಿಸಿದೆ ಎಂದು ಕಂಡುಕೊಳ್ಳಬಹುದು. ಇಂತಹ ಸಾವಿರಾರು ಅಭಾಸಗಳು ದೇಶ -> ಉದ್ಘೋಷ -> ಸಂವಿಧಾನ -> ಕಾನೂನು -> ಆಡಳಿತದಲ್ಲಿವೆ.
ಹೀಗಿದ್ದಾಗ ಸಂವಿಧಾನ ರಚನೆಯಲ್ಲಿ ಈ ಕಾಯ್ದೆಗಳನ್ನು ಗಮನದಲ್ಲಿಟ್ಟಕೊಳ್ಳಬೇಕಿತ್ತೋ ಅಥವಾ ಇದ್ದ ಕಾಯ್ದೆಗಳಿಗೆ ತಕ್ಕಂತೆ ಸಂವಿಧಾನ ರಚಿಸಬೇಕಿತ್ತೋ?!? ಐಪಿಸಿ ಸೇರಿ ಎಲ್ಲಾ ಸಮಗ್ರ ಕಾಯ್ದೆಗಳು ಸಮಗ್ರವಾಗಿ ತಿದ್ದುಪಡಿಯಾಗಬೇಕೊ ಅಥವಾ ಸಂವಿಧಾನ ಸಮಗ್ರವಾಗಿ ತಿದ್ದುಪಡಿಯಾಗಬೇಕೊ? ಇಂದು ಸಂವಿಧಾನ ಧರ್ಮಗ್ರಂಥವಾಗಿರುವಾಗ ಇಂತಹ ಆಮೂಲಾಗ್ರ ತಿದ್ದುಪಡಿ ಸಾಧ್ಯವೇ?!?
ಇತಿ ಸಂವಿಧಾನ ಸಂಪ್ರತಿ ಹೀ!!!!

ಬಸವರಾಜಕಾರಣ - Review by Mala Akkisetti

 ಆಹಾರ ದೇಹಕ್ಕೆ ಆಧ್ಯಾತ್ಮ ಮನಸ್ಸಿಗೆ ಎನ್ನುವ ರವಿ ಹಂಜ್ ಅವರಿಗೆ ಶರಣು ಶರಣಾರ್ಥಿಗಳು.

ಅನಿವಾಸಿ ಭಾರತೀಯರಾದ ರವಿ ಹಂಜ್ ಅವರು ತಮ್ಮ ವೃತ್ತಿಯನ್ನು ಮಾಡುತ್ತಲೇ ಸಾಹಿತ್ಯ ಮತ್ತು ಸಂಶೋಧನೆಯೆಡಗೆ ಮನವೊಲಿಸಿದ್ದಾರೆ. ಸತತ 6 ವರ್ಷಗಳ ಕಾಲ ವಚನ ಸಾಹಿತ್ಯ ಮತ್ತು ವೀರಶೈವ ಲಿಂಗಾಯತ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು, ಆಕರಗಳನ್ನು ಓದಿದ್ದು ಅವರೊಂದಿಗೆ ಮಾತನಾಡಿದಾಗ ತಿಳಿಯಿತು. ಪುಸ್ತಕ ಒಟ್ಟು ಹದಿನೆಂಟು ಅಧ್ಯಾಯಗಳನ್ನು ಒಳಗೊಂಡಿದ್ದು, ಪ್ರತಿ ಅಧ್ಯಾಯದ ನಂತರ ಆಕರಗಳ ಪಟ್ಟಿಯನ್ನು ಕೊಡುತ್ತಾರೆ. ಅಷ್ಟೊಂದು ಓದಿಕೊಂಡಿದ್ದು ಮಾತ್ರ ಪ್ರಶಂಸನಾರ್ಹ.ರವಿ ಹಂಜ್ ಅವರ ಓದಿಗೆ ಮತ್ತು ಸಂಶೋಧನಾ ಪುಸ್ತಕಕ್ಕೆ ಅಭಿನಂದನೆಗಳು.
ಪುಸ್ತಕ: ಬಸವರಾಜಕಾರಣ
ಲೇಖಕರು: ರವಿ ಹಂಜ್
ಧರ್ಮಕ್ಕೆ ಸಂಬಂಧಿಸಿದ ಕೆಲವನ್ನು ಒಪ್ಪಿಕೊಂಡು, ಅದನ್ನು ಇನ್ನೂ ಅನುಸರಿಸುತ್ತಿರುವ ಕಾಲಘಟ್ಟದಲ್ಲಿದಾಗ ರವಿಯವರ ಕೆಲವು ಅಧ್ಯಾಯಗಳು, ಹೇಳಿಕೆಗಳು ದಿಗ್ಭ್ರಮೆಯನ್ನುಂಟು ಮಾಡುತ್ತವೆ. ಮೋಹೆಂಜದಾರೋ ಉತ್ಖನನದಲ್ಲಿ ಸಿಕ್ಕಿರುವ ಸಣ್ಣ ಲಿಂಗಾಕೃತಿಗಳು ವೀರಶೈವರೇ ಕೊರಳಿಗೆ ಕಟ್ಟಿಕೊಂಡಿರುವ ಕರಂಡಕದಲ್ಲಿ ಇಟ್ಟುಕೊಳ್ಳುವ ಲಿಂಗಗಳಷ್ಟು ಚಿಕ್ಕವಿವೆ ಎನ್ನುತ್ತಾರೆ. ಕಾನಿಷ್ಕನ ಕರಂಡಕವನ್ನು ಚಿತ್ರಸಹಿತ ಉದಾಹರಿಸಿದ್ದಾರೆ. ಆ ಕರಂಡಕದಲ್ಲಿಯೇ ಲಿಂಗವನ್ನು ಉಪಯೋಗಿಸುತ್ತಿದ್ದಾರಾ ಅನ್ನೋದು ಸ್ಪಷ್ಟವಿಲ್ಲ. ಕರಂಡಕ ಸಿಕ್ಕಿದೆ ಅಷ್ಟೇ."ಕಾಯಕವೇ ಕೈಲಾಸ" ಈ ಉದ್ಘೋಷ ಬಸವಣ್ಣದಲ್ಲ, ಆಯ್ದಕ್ಕಿ ಮಾರಯ್ಯನದು ಎನ್ನಲು ಕೆಲವು ವಚನಗಳನ್ನು ಕಲ್ಯಾಣಕ್ರಾಂತಿ ಅಧ್ಯಾಯದಲ್ಲಿ ಉದಾಹರಿಸುತ್ತಾರೆ.
ಬಸವಪುರಾಣ ಅಧ್ಯಾಯದಲ್ಲಿ ಹರಿಹರ ತನ್ನ "ಬಸವರಾಜದೇವರ ರಗಳೆ"ಯಲ್ಲಿ ತನ್ನ ಆರಾಧ್ಯದೈವ ಬಸವಣ್ಣನನ್ನು ಅತ್ಯುತ್ತಮ ಕುಲದವನ್ನೆನ್ನಲು "ಬ್ರಾಹ್ಮಣ" ಎಂದಿರುವ ಆತ ನಿಜವಾಗಲೂ ಬಸವಣ್ಣ ಒಬ್ಬ ಜಂಗಮ ಎನ್ನುತ್ತಾರೆ. ಬಿಜ್ಜಳನನ್ನು ಕೊಂದಿದ್ದು ಮಡಿವಾಳ ಮಾಚಿದೇವ ಎನ್ನುವ ಲೇಖಕರು ಮಡಿವಾಳ ಮಾಚಿದೇವ ರಚಿಸಿದ ವಚನವೊಂದನ್ನು ಉದಾಹರಿಸುತ್ತಾರೆ. ಬಸವಣ್ಣನನ್ನು ಭೇಟಿಯಾಗುವ ಮೊದಲೇ ಅಲ್ಲಮನ ಎದೆಗೆ ಲಿಂಗವಿತ್ತು ಮತ್ತು ಅಕ್ಕಮಹಾದೇವಿ ಬಾಲ್ಯದಲ್ಲೇ ಲಿಂಗಧಾರಿ ಯಾಗಿದ್ದಳು ಹೊರತು ಬಸವಣ್ಣನ ಭೇಟಿ ನಂತರ ಲಿಂಗಧಾರಿಯಾಗಿರಲಿಲ್ಲ ಅನ್ನೋದು ಒಪ್ಪಿಕೊಳ್ಳುವ ವಿಷಯ.ಪುಸ್ತಕದಲ್ಲಿ ಬಸವಣ್ಣ ಜಂಗಮ ಮೂಲ ಎಂದು ಕಲ್ಯಾಣೋತ್ತರ ವೀರಶೈವ ಲಿಂಗಾಯತ ಅಧ್ಯಾಯದಲ್ಲಿ ಜಂಗಮ ಮೂಲದ ಅಲ್ಲಮನನ್ನು ತೊರೆದು ಬ್ರಾಹ್ಮಣ ಮೂಲದ ಬಸವಣ್ಣನನ್ನು ಲಿಂಗಾಯತ ಧರ್ಮದ ಸಂಸ್ಥಾಪಕ ಎಂದು ಅತಿ ಪ್ರಾಮುಖ್ಯತೆಯನ್ನು ಕೊಟ್ಟುದು ಈ ಪಂಥದ ದುರಂತ ಎನ್ನುತ್ತಾರೆ. ಲೇಖಕರುಬಸವಣ್ಣನನ್ನು ಬ್ರಾಹ್ಮಣ ಎನ್ನುತ್ತಾರೋ ಅಥವಾ ಜಂಗಮನೆನ್ನು ತ್ತಾರೋ?.... ಗೊಂದಲವಿದೆ.
ಹೀಗೆ ಇನ್ನೂ ಅನೇಕ ವಿಚಾರಗಳನ್ನು ಪುಸ್ತಕದುದ್ದಕ್ಕೂ ರವಿ ಹಂಜಿ ಅವರು ಹೇಳುತ್ತಾ ಹೋಗುತ್ತಾರೆ. ಕೆಲವು ವಚನಗಳನ್ನು ಸಂದರ್ಭಕ್ಕೆ ತಕ್ಕಂತೆ( ತಮಗೆ ಬೇಕಾದಂತೆ) ಅರ್ಥೈಸಿಕೊಂಡಿದ್ದಾರೆ ಎನಿಸುತ್ತದೆ.(ಸ್ಪಷ್ಟನೆಗೆ ಆ ವಚನದ ಅರ್ಥವನ್ನು ಮೂಲ ವಚನಕಾರರೇ ಹೇಳಬೇಕಾಗುತ್ತದೆ.ಅದು ಅಸಾಧ್ಯ) ಸಾಮಾನ್ಯ ಕವಿಯ ಕವಿತೆಯನ್ನು ನಾನಾರ್ಥದಲ್ಲಿ ಅರ್ಥೈಸುವಾಗ, ವಚನಗಳನ್ನ ಹೀಗೆಯೇ ಅರ್ಥೈಸಲಾಗಿದೆ. ಅವರ ವಿಚಾರಗಳಿಗೆ ಅವರು ಆಕರಗಳನ್ನು ಕೊಟ್ಟಾಗ, ವಿರೋಧಿಸುವವರೂ ಆಕರಗಳನ್ನು ಕೊಡಬೇಕಾಗುತ್ತದೆ. ತಪ್ಪೆಂದು ಸಾಧಿಸಲು ಅವರು ಓದಿದ್ದನ್ನು ಓದಿ, ನಮ್ಮದು ಸರಿ ಎನ್ನಲು ಬೇರೆ ಆಕರಗಳನ್ನು ಓದಿ ಸಾಧಿಸಬೇಕು. ಇದು ಹೆಚ್ಚುಕಡಿಮೆ ಅವರಂತೆಯೇ ಅವರ ವಿರುದ್ಧವಾಗಿ ಮತ್ತೊಂದು ಪುಸ್ತಕವನ್ನು ರಚಿಸಿದಂತಾಗುತ್ತದೆ. ಇಂಗ್ಲಿಷ್ ಸಾಹಿತ್ಯದಲ್ಲಿ Pamela...a virtue rewarded ಎನ್ನುವ ಕೃತಿಯನ್ನು female character ಗೆ ಪ್ರಾಮುಖ್ಯತೆ ಕೊಟ್ಟು Samuel Richardson ಬರೆದಾಗ,ಅದರ counter ಆಗಿ male character ನ್ನು ಪ್ರತಿಬಿಂಬಿಸಲು Joseph Andrews ಕೃತಿಯನ್ನು Henry Fielding ಬರೆದ. ಈ ವಿಷಯದಲ್ಲೂ ಹಾಗೆಯೇ ಆಗುತ್ತದೆ. ವಿರೋಧಿಸಲು ಸರಿಯಾದ ಆಕರಗಳು ಅನಿವಾರ್ಯ.ಕೆಲವು ವಚನಗಳನ್ನು ಪ್ರಕ್ಷೇಪ ವಚನಗಳು ಎಂದಾಗ, ಅವುಗಳಾಧಾರಿತ ವಿಷಯವನ್ನು ನಂಬುವುದು ಕಷ್ಟ.
ಭಗತ್ ಸಿಂಗನನ್ನು( Bhagat Singh's last letter to the Second LCC convicts. Letter 2... 22 March 1931) ಗಲ್ಲಿಗೇರಿಸುವಾಗ ಭಗತನಿಗೆ ಆ ಒಂದು ಕ್ಷಣಕ್ಕೆ ತಾನೂ ಬದುಕುಳಿದು, ಇತರರಂತೆ ಸಾಮಾನ್ಯ ಜೀವನ ನಡೆಸಬಹುದಿತ್ತು, ಪ್ರಾಣ ಉಳಿಸಿಕೊಳ್ಳಬಹುದಿತ್ತು ಎಂದು ಅನಿಸುತ್ತದಂತೆ. ಮರುಕ್ಷಣವೇ ಆತ ತನ್ನನ್ನು ಗಲ್ಲಿಗೇರಿಸುತ್ತಿರುವುದು ತಾನು ಮಾಡಿದ ಸಾಧನೆಗಾಗಿ... ಅದು ವಿಶಿಷ್ಟವಾಗಿದೆ ಎಂದು ಸಾಯಲು ಅಣಿಯಾಗುತ್ತಾನೆ. ಆ ಕ್ಷಣದ ವಿಚಾರವನ್ನು ಗಾಳಿಗೆ ತೂರುತ್ತಾನೆ. ಹಾಗೆಯೇ ನನಗೆ ಒಂದು ಕ್ಷಣಕ್ಕೆ ಕೆಲವು ವಿಚಾರಗಳು ಸರಿ ಇವೆಯೇನೋ ಎಂದು ಅನಿಸಿದರೆ, ಮೊದಲೇ ಒಪ್ಪಿಕೊಂಡ ವಿಚಾರಗಳನ್ನು ದೂರಾಗಿಸಲು ಸಾಧ್ಯವಿಲ್ಲವಾಗಿದೆ. ಇದು ಪ್ರತಿ ಓದುಗನ ಅಭಿಪ್ರಾಯವೂ ಆಗಬಹುದು.
ಸಂಶೋಧನೆಯೆಂದರೆ ಒಬ್ಬ ಒಂದು, ಇನ್ನೊಬ್ಬ ಇನ್ನೊಂದು, ಮತ್ತೊಬ್ಬ ಮಗದೊಂದು ಕಾಲಕ್ಕೆ ತಕ್ಕಂತೆ ಸಿಕ್ಕ ಆಕರಗಳಂತೆ ಹೇಳುತ್ತಾನೆ ಹೋಗುತ್ತಾರೆ. ಇದು ಕಂಟಿನಿಯಸ್ ವರ್ಕ್. ಯಾವುದು ಸರಿ? ಯಾವುದು ತಪ್ಪು? ಮನ ಗೊಂದಲಕ್ಕೀಡಾಗುತ್ತದೆ. ಆಯಾ ರಾಜನ/ ವ್ಯಕ್ತಿಯ ಓಲೈಕೆಗಾಗಿ ಬರೆದ ಕೃತಿಗಳನ್ನು ನಂಬುವುದೆಷ್ಟು? ಕೆಲವು ಸಲ ಆಕರಗಳು ಸುಳ್ಳಾಗಿ, ಪೌರಾಣಿಕ ಕಥೆಗಳು, ಬಾಯಿ ಮಾತಿನ ಕಥೆಗಳು ಸತ್ಯವಾಗಿರಲೂಬಹುದು.History is mystery ಎನ್ನುವಂತೆ ಸಂಶೋಧನೆಯು ಒಂದು ತರಹದ mystery.
ಕವಿತೆ, ಲೇಖನ, ಲಲಿತ ಪ್ರಬಂಧಗಳನ್ನು ಬರೆದು ಹಾಯಾಗಿರುವ ನಾನು, ಪುಸ್ತಕ ಕಳಿಸಿಕೊಟ್ಟಿದ್ದಕ್ಕೆ ರವಿ ಹಂಜ್ ಯವರಿಗೆ ಆಭಾರಿಯಾಗಿದ್ದೇನೆ.
ಧನ್ಯವಾದಗಳು,
ಮಾಲಾ. ಮ. ಅಕ್ಕಿಶೆಟ್ಟಿ.
ಬೆಳಗಾವಿ.