ಅಸಹಿಷ್ಣ ಭಾರತ

“ತಮ್ಮದೇ ಸರಿ ಅಂದುಕೊಳ್ಳುವ 'ಬಲಪಂಥೀಯರಿಗೆ', ಹಿಂದುಗಳಾಗಲಿ ಮುಸಲ್ಮಾನರಾಗಲಿ, ಸಾಮಾಜಿಕ ಕಟ್ಟುಪಾಡುಗಳು ಸ್ವಲ್ಪ ಸಡಿಲವಾದರೂ ಭಯವಾಗುತ್ತದೆ. ಯಾಕೆಂದರೆ ಇದರಿಂದ ಯಾವುದೇ ಸಾಂಪ್ರದಾಯಿಕ ಧರ್ಮಗಳ ಶ್ರೇಷ್ಠತೆಯ ಮುದ್ರೆಗಳಾದ ಪುರಾತನ ಪಿತೃಪ್ರಾಧಾನ್ಯ ಮತ್ತು ಮೇಲ್ಗಾರಿಕೆಗಳು ಅಲ್ಲಾಡತೊಡಗುತ್ತವೆ.

ಮಹಿಳೆಯರು ತಮ್ಮ ಆಯ್ಕೆಗಳನ್ನ ತಾವೇ ಮಾಡಿಕೊಳ್ಳುತ್ತಾರೆ ಅಥವಾ ಹಾಗೆ ಮಾಡುವ ಸ್ವಾತಂತ್ರವನ್ನು ಕೇಳುತ್ತಾರೆ ಅಂದಾಗ ಪ್ರತಿಯೊಂದು ಧರ್ಮದ ಮೂಲಗಳಾದ ಪಿತೃಪ್ರಧಾನತ್ವ ಮತ್ತು ಸ್ತ್ರೀ ವಿರುದ್ಧದ ಪೂರ್ವಗ್ರಹಗಳಿಗೆ ಸವಾಲು ಹಾಕಿದಂತಾಗುತ್ತದೆ.”

ಇದು ಚಿದಾನಂದ ರಾಜಘಟ್ಟ ಗೌರಿ ಲಂಕೇಶ್ ಕುರಿತು ಬರೆದಿರುವ "ಇಲ್ಲಿಬರಲ್ ಇಂಡಿಯಾ" ಪುಸ್ತಕದಿಂದ.

ಪ್ರಸ್ತುತ ಭಾರತದಲ್ಲಿ ವೈಚಾರಿಕತೆ ಹೇಗೆ ಎಡ, ಬಲ ಎಂಬ ಸಿದ್ಧಾಂತಗಳಿಗೆ ಕಟ್ಟುಬಿದ್ದು ನರಳುತ್ತಿದೆ ಎಂಬುದನ್ನು ಈ ಪುಸ್ತಕದಿಂದ ಅವಲೋಕಿಸೋಣ. ಬಲಪಂಥವನ್ನು ಮೋದಿ ಭಕ್ತರೆಂದು ಬ್ರ್ಯಾಂಡು ಮಾಡಿರುವ ಎಡಪಂಥೀಯರು ಈ ಭಕ್ತಿಯಿಂದ ವಿಮುಕ್ತಿ ಹೊಂದಿದ್ದಾರೆಯೇ? ಈ ಪಂಥಗಳು ಪರಸ್ಪರ ದ್ವಂದನಿಲುವಿನಲ್ಲಿ ತಮ್ಮನ್ನು ತಾವೇ ಬಿಚ್ಚಿಕೊಳ್ಳುತ್ತಿದ್ದಾರೆ. ಬಲಪಂಥೀಯರು ಮುಗ್ಧಭಕ್ತರೆಂದು ಮನ್ನಿಸೋಣ, ಏಕೆಂದರೆ ಅವರನ್ನು ಮುಗ್ದಭಕ್ತರೆಂದು ಎಡಪಂಥವೇ ಸಾರಿ ಹೇಳುತ್ತಿದೆ. ಆದರೆ ಬುದ್ಧಿಜೀವಿಗಳೆಂಬ ಎಡಪಂಥೀಯರು!

ಈ ಪುಸ್ತಕದಲ್ಲಿ ಆದಿಯಿಂದ ಅಂತ್ಯದವರೆಗೆ ಒಂದು ಗುಂಪನ್ನು ಮೆಚ್ಚಿಸಲು ಬರೆದಂತಿದೆ. ಪುಸ್ತಕದ ಮೇಲಿನ ಪ್ಯಾರಾದಲ್ಲಿ "ಬಲಪಂಥೀಯ" ಪದವನ್ನು ಬಿಟ್ಟು ಓದಿ ನೋಡಿದರೆ ತೂಕವೆನಿಸುವ  ಪ್ಯಾರಾ, ಆ ಪದದಿಂದ ತೂಕ ಕಳೆದುಕೊಂಡು ಬಿಡುತ್ತದೆ. ಅನವಶ್ಯಕವಾಗಿ ಯಾರನ್ನೋ ಮೆಚ್ಚಿಸಲು "ಬಲಪಂಥೀಯ" ಪದವನ್ನು ತುರುಕಿದಂತಿದೆ. ಏಕೆಂದರೆ ಬಲಪಂಥೀಯರು ಈ ಪುಸ್ತಕವನ್ನು ಮೂಸಿಯು ನೋಡಲಾರರೆಂದು ಪೂರ್ವಾಲೋಚಿಸಿ, ಎಡಪಂಥೀಯರ ಮಾರುಕಟ್ಟೆಗೆ ತಕ್ಕಂತೆ ಬರೆಯಲಾಗಿದೆ. ಈ ರೀತಿಯ ಸಾಕಷ್ಟು "ಮೆಚ್ಚಿಸುವ" ಅಂಶಗಳೇ ಈ ಪುಸ್ತಕದಲ್ಲಿ ತುಂಬಿದೆ. ಅದೇ ರೀತಿ "ಪಿತೃಪ್ರಧಾನ". ಭಾರತದಲ್ಲಿ ಹಿರಿಯ ಗಂಡುಮಗನಿಗೆ ಪಿತ್ರಾರ್ಜಿತ ಆಸ್ತಿ ಎಂದು ಆರಂಭಗೊಂಡ ವ್ಯವಸ್ಥೆ, ಮಂಗಮಾನವ ಮರದಿಂದ ಇಳಿದು ಕೃಷಿಯಲ್ಲಿ ತೊಡಗಿನಂದಿನಿಂದ ವಿಕಾಸಗೊಂಡ ವ್ಯವಸ್ಥೆ. ಅದು ನಂತರ ಎಲ್ಲಾ ಗಂಡುಮಕ್ಕಳಿಗೆ ಎಂದಾಗಿ, ಕಳೆದ ಇಪ್ಪತ್ತನೇ ಶತಮಾನದಲ್ಲಿ ಅಂದರೆ ನಲವತ್ತೈದು ವರ್ಷಗಳ ಹಿಂದೆ ಹೆಣ್ಣು ಮತ್ತು ಗಂಡುಮಕ್ಕಳಿಗೆ ಸಮಾನ ಹಕ್ಕಿದೆ ಎಂದಾಗಿದೆ. ಹೀಗಿದ್ದಾಗ ಪಿತೃಪ್ರಧಾನ ವ್ಯವಸ್ಥೆ ಕಾನೂನಿನ ಪ್ರಕಾರ ಇಲ್ಲವಾಗಿದೆ. ಆದರೆ "ಪಿತೃಪ್ರಧಾನ" ಪದ ಎಡಪಂಥೀಯರ ಕಿವಿಗೆ ಮಧುರ ಸಂಗೀತ! ಹಾಗಾಗಿ ಆ ಗುಂಪು ತಲೆದೂಗುವ ಅಂಶಗಳು ಸಾಕಷ್ಟಿವೆ.

ಇನ್ನು ಕೇವಲ ಗೌರಿಯ ಓದುಗರಾಗಿ ಆಕೆಯ ಬಗ್ಗೆ ತಿಳಿದುಕೊಂಡಿರುವವರಿಗೆ ಅಥವಾ ಆಕೆಯ ಆಸ್ಥಾನದಲ್ಲಿದ್ದು ಹೊರಬಂದೋ ಯಾ ನೂಕಿಸಿಕೊಂಡಿದ್ದ ಬರಹಗಾರರು ಆಕೆಯ ಕುರಿತು ಬರೆದ ಬರಹಗಳಿಂದ ಆಕೆಯ ವ್ಯಕ್ತಿತ್ವದ ಅರಿವು ಸಾಕಷ್ಟು ಜನರಿಗೆ ತಿಳಿದಿದೆ.

ಅವುಗಳಲ್ಲಿ ಪ್ರಮುಖವಾಗಿ ತಾನು ಬರೆದದ್ದೇ ಸರಿ, ಅದನ್ನು ಪ್ರಶ್ನಿಸುವವರ ವಿರುದ್ಧ ದ್ವೇಷ ಕಾರುವುದು. ತನ್ನ ಬಳಗದ ಲೇಖಕರು ಯಾರಾದರೂ ಆಕೆಗಿಂತ ಚಂದ ಬರೆದರೆ ಅಂತವರ ವಿರುದ್ಧ ತನ್ನ ಭಯಾನಕ ಟ್ಯಾಬ್ಲಾಯ್ಡ್ ಲೇಖನಿಯಿಂದ ಬಾಯಿ ಮುಚ್ಚಿಸುತ್ತಿದ್ದುದು, #JustAsking ನ ಗೆಳೆಯರಷ್ಟೇ ಅಲ್ಲದೆ ಇಡೀ ನಾಡಿಗೇ ತಿಳಿದಿತ್ತು.  ಇಂತಹ ಸಾಮಾನ್ಯ ವಿಷಯಗಳ ಕುರಿತು ತಮ್ಮ ಮಾಜಿ ಶ್ರೀಮತಿಯ ಬಗ್ಗೆ ದೂರದಲ್ಲಿದ್ದ ಲೇಖಕರಿಗೆ ಗೊತ್ತಿರಲಿಲ್ಲವೆನಿಸುತ್ತದೆ! ಹಾಗಾಗಿ ಆ ಕುರಿತು ಏನೂ ಬರೆದಿಲ್ಲವೆಂದುಕೊಳ್ಳಬಹುದಿತ್ತು. ಅದಲ್ಲದೆ ಲೇಖಕರು ಬೇರೆ ಯಾವುದೋ ರಂಗದಲ್ಲಿದ್ದಿದ್ದರೆ ಕೂಡಾ ಈ ವಿಷಯಗಳ ಅರಿವಿಲ್ಲವೆಂದುಕೊಳ್ಳಬಹುದಿತ್ತು. ಆದರೆ ಲೇಖಕರು ಪತ್ರಿಕಾರಂಗದಲ್ಲಿ ದೇಶಾದ್ಯಂತ ಖ್ಯಾತರಿದ್ದಾರೆ! ತಾವು ಗೌರಿಯಿಂದ ಬೇರೆಯಾದರೂ, ಒಳ್ಳೆಯ ಸ್ನೇಹಿತರಂತೆ ಪರಸ್ಪರ ಸಂಪರ್ಕದಲ್ಲಿದ್ದೆವೆಂದು ಅವರೇ ಹೇಳಿಕೊಂಡಿದ್ದಾರೆ.

ವಿಷಯಗಳ ಆಳ ಹರಿವು, ವಿಶ್ಲೇಷಣಾ ತಂತ್ರಗಳ ಅರಿವಿಲ್ಲದೆ, ಧೀರ್ಘಾಲೋಚನೆಯ ದೃಷ್ಟಿಕೋನವಿರದೆ, ಲಂಕೇಶರು ಎಂತಹವರನ್ನು ಕೊಂಚ ದೂರದಲ್ಲಿಟ್ಟಿದ್ದರೋ ಆ ಎಲ್ಲರನ್ನೂ ಗೌರಿ ತಲೆಯ ಮೇಲೆ ಕೂರಿಸಿಕೊಂಡಿದ್ದರು. ಭಟ್ಟಂಗಿಗಳ ಕೋಡಂಗಿತನಕ್ಕೆ ಬಲಿಯಾಗುತ್ತ ಗೌರಿ ಹಂತ ಹಂತವಾಗಿ ಕುಗ್ಗುತ್ತ, ತಾನು ಕುಗ್ಗುತ್ತಿಲ್ಲವೆಂದು ಸಾರಲು ಪ್ರಚಾರದ ಹಪಾಹಪಿಯಲ್ಲಿ ವೈರತ್ವದ ಸುಂಟರಗಾಳಿಯನ್ನು ಎಬ್ಬಿಸುತ್ತ, ತೊಡೆತಟ್ಟಿ ಸಂಪ್ರದಾಯವಾದಿಗಳನ್ನು ರೊಚ್ಚಿಗೆಬ್ಬಿಸಿ ಕಡೆಗೆ ಅದಕ್ಕೇ ಬಲಿಯಾದ "ಪರಿ"ಯ, ಉದಾರವಾದದ ಮುಕ್ತ ಅಂಶಗಳಿರುವ, ತಮ್ಮಿಬ್ಬರ ಪ್ರೇಮ, ಪ್ರಣಯ, ಜಗಳ, ಜಿಪುಣತನ, ಧಾರಾಳತನಗಳನ್ನೊಳಗೊಂಡ Tell All ಪುಸ್ತಕ ಇದಾಗಿರಬಹುದೆಂಬ ನಿರೀಕ್ಷೆಯನ್ನಿಟ್ಟುಕೊಂಡಿದ್ದೆ. 

ಆದರೆ ಆಕೆಯ ಆ ಎಲ್ಲಾ ವಿಕ್ಷಿಪ್ತ ವ್ಯಕ್ತಿತ್ವದ ಒಳನೋಟಗಳನ್ನು ಕೈಬಿಟ್ಟು ದಿವಂಗತರಾದವರೆಲ್ಲ ದೇವರೆಂಬಂತೆ ಸ್ತುತಿಸುವ ಗೌರಿಪಾರಾಯಣ ಗ್ರಂಥ ಇದಾಗಿಬಿಟ್ಟಿದೆ. ದೇವಿಯೊಬ್ಬಳು ಬಲಪಂಥೀಯ, ಪಿತೃಪ್ರಧಾನ, ಅಧ್ಯಾತ್ಮವೆಂಬ ರಾಕ್ಷಸರುಗಳನ್ನು ಹೇಗೆ ಕಮ್ಯುನಿಸಂ, ಲಿಬರಲಿಸಂ ಶಸ್ತ್ರಗಳ ನಂಬಿ ಹೋರಾಡಿದಳೆಂಬ ಅಂಶಗಳ ವೈಭವವಿದೆ.

ದೇಶ ಸುತ್ತಿ ಕೋಶ ಓದಿ ವೈಚಾರಿಕ ಜಾಗತೀಕರಣದ ಬಗ್ಗೆ ಬರೆಯುವ ಉದ್ಯೋಗದಲ್ಲಿರುವವರಿಗೆ, ಗೌರಿ ಪ್ರತಿಪಾದಿಸುತ್ತಿದ್ದ ನಕ್ಸಲಿಸಮ್, ಕಮ್ಯುನಿಸಂಗಳು  ಜಾಗತಿಕವಾಗಿ ಏನಾಗಿವೆಯೆಂದು ತಿಳಿಯದೆ? ಪಿತೃಪ್ರಧಾನ ವ್ಯವಸ್ಥೆ ಭಾರತೀಯ ಕಾನೂನಿನಲ್ಲಿ ನಲವತ್ತೈದು ವರ್ಷಗಳ ಹಿಂದೆಯೇ ಇತಿಹಾಸವಾಗಿದೆ ಎಂಬುದು ಅರಿಯದೆ? ಒಬ್ಬ ಗಾಢ ಅನುಭವ, ವಿಶ್ಲೇಷಣ ಪ್ರತಿಭೆ, ಪಂಥೀಯ ಜ್ಞಾನ, ಜಾಗತಿಕ ವಿದ್ಯಾಮಾನಗಳ ಅರಿವಿರುವ ವಿಚಾರವಂತನೆಂದು ಬಿಂಬಿಸಿಕೊಂಡಿರುವ ಲೇಖಕ, ಭಾವನೆಗಳ ಬೆನ್ನತ್ತಿಯೋ ಅಥವಾ ಇನ್ಯಾವುದೋ ಪ್ರಭಾವಕ್ಕೊಳಗಾದರೆ ಏನಾಗಬಹುದೋ ಅದಾಗಿ ಈ ಪುಸ್ತಕ ಏಕಪಕ್ಷೀಯವೆನಿಸುತ್ತದೆ.

ಯಾರು ಕಾರಣರೋ ಅವರನ್ನು ಕೇಳದ ಜಸ್ಟ್ ಅಸ್ಕಿಂಗ್ ಎಂಬ ಜಾಣಮರೆವಿನ ಬಡಬಡಿಕೆಯನ್ನು ಚಳುವಳಿ ಎನ್ನುವ, "ಬಂಡವಾಳಶಾಹಿ" ದೇಶದಲ್ಲಿದ್ದು ಗೌರಿಯ ಸಾವಿನ ಅನುಕಂಪವನ್ನು ಬಂಡವಾಳ ಮಾಡಿಕೊಂಡು,  ಬಿಸಿ ಆರುವ ಮುನ್ನ ತಮ್ಮ ರೊಟ್ಟಿ ಬೇಯಿಸಿಕೊಳ್ಳುವ ಯಾದಿಯಲ್ಲಿ, ಗೌರೀವೃತ ಕೈಗೊಂಡಿರುವವರ ಭಕ್ತಿಯನ್ನು ನಗದಾಗಿಸಿಕೊಳ್ಳಲು ಪುಸ್ತಕ ಮಾರಿಕೊಳ್ಳುತ್ತಿದ್ದಾರೆಂಬ ಅಪವಾದವನ್ನು ಅದೇ ಗೌರೀವೃತನಿರತರ ಪಡೆ ಗುಸುಗುಸು ಹಬ್ಬಿಸಿದೆ.

ಈ ಗುಸುಗುಸುವಿನ ಹಿನ್ನೆಲೆ, ಮತ್ತು ಚಿಂತಕ ಭಗವಾನರನ್ನು ಒಟ್ಟಾಗಿ ದೂಷಿಸಲು ಶುರುಹಚ್ಚಿಕೊಂಡ ಬುದ್ಧಿಜೀವಿಗಳ ತಲೆಯಲ್ಲಿ ಅದ್ಯಾವ ನವ್ಯ ಚಿಂತನೆ ಮೂಡುತ್ತಿದೆಯೋ! ಬಹುಶಃ ಮೃದುಹಿಂದುತ್ವವನ್ನು ಅಪ್ಪಿಕೊಳ್ಳಿರೆಂದು ಹೈಕಮಾಂಡ್ ವಿಶ್ವವಿದ್ಯಾಲಯದ ಆಜ್ಞೆ ಇರಬಹುದು. ಏಕೆಂದರೆ ಭಗವಾನರ ಈ ಕುಚೋದ್ಯದ ಪುಸ್ತಕ ಹೊಸದಲ್ಲ! ಇದು ಅವರೇ ತಿಳಿಸಿದಂತೆ ಹಳೆಯ ಪುಸ್ತಕದ ಎರಡನೇ ಮುದ್ರಣ. ಮೊದಲ ಮುದ್ರಣದಲ್ಲಿ ಜೊತೆಯಿದ್ದ ಬುದ್ಧಿಜೀವಿಗಳೆಲ್ಲ ಎರಡನೇ ಮುದ್ರಣದ ಹೊತ್ತಿಗೆ ಅವರನ್ನು ಕೈಬಿಟ್ಟಿದ್ದಾರೆ. ಏಕೆ!?!
–----

 ಭಗ"ವಾನರ"ರಿಗೆ ರಾಮ ಚಾತುರ್ವರ್ಣ ಪಾಲಕ ಯಾ ರಕ್ಷಕನಾಗಿದ್ದ ಎಂದರೆ ಸರ್ವೇಜನೌ ಸುಖೀನೌಭವಂತು ಎಂದು ಅರಿಯುವಷ್ಟು ತಿಳುವಳಿಕೆಯಿಲ್ಲವೇ? ಏಕೆಂದರೆ ಆ ಕಾಲದಲ್ಲಿದ್ದುದು ಎಲ್ಲಾ ಜನಗಳನ್ನೊಳಗೊಂಡ ನಾಲ್ಕೇ ನಾಲ್ಕು ವರ್ಣಗಳು! ಮತ್ತು ಆ ವರ್ಣಗಳು ಹುಟ್ಟಿನಿಂದ ನಿರ್ಧಾರವಾಗುತ್ತಿರಲಿಲ್ಲ. ಅಂದರೆ ರಾಮ ಎಲ್ಲಾ ಜನಗಳ ಪಾಲಕ ಯಾ ರಕ್ಷಕ ಎಂದರ್ಥ. ಕಾಲಕ್ಕೂ, ಕಲರ್ರಿಗೂ (ವರ್ಣ), ವ್ಯತ್ಯಾಸವರಿಯದ ಈ ಸುಬುದ್ಧಿ ಕರ್ನಾಟಕದ ಅಪ್ರತಿಮ ಬುದ್ದಿ! ಕಾಲದ ಜೊತೆಗೆ ಅವರ ಜೊತೆಗಾರರು ಕಲರ್ ಬದಲಾಯಿಸಿದ್ದು ಅವರ ದುರದೃಷ್ಟ. ಅವರ ಸಂಶೋಧನೆಯ ಬಗ್ಗೆ ಎರಡು ಮಾತಿಲ್ಲ. ಆದರೆ ಅವರದನ್ನು ತಳುಕು ಹಾಕಿ ಮಂಡಿಸುವ ಕುಚೋದ್ಯ, ಪ್ರಚಾರಪ್ರಿಯತೆಯ ಹಸಿವು ಪ್ರಶ್ನಾರ್ಹ. ರಾಮನನ್ನು ಮತ್ತು ರಾಮಭಕ್ತ ಗಾಂಧಿಯನ್ನು ವಿರೋಧಿಸುವ ಭಗವಾನರು, ರಾಮಾಯಣದರ್ಶನಂ ಬರೆದು ಜ್ಞಾನಪೀಠ ಪಡೆದ ಕುವೆಂಪುರನ್ನು ಮಾತ್ರ ತಮ್ಮ ಅದರ್ಶವೆನ್ನುತ್ತಾರೆ, ಏಕೆ?!?! 

ಇರಲಿ, ಒಟ್ಟಾರೆ ತಲೆ ಗಟ್ಟಿಯಿದೆಯೆಂದು ಬಂಡೆಗೆ ಚಚ್ಚಿಕೊಳ್ಳಲು ಉತ್ತೇಜಿಸಿದ ಗೌರಿಯ just asking ಮಿತ್ರರೆಲ್ಲರೂ ಆಕೆಯ ಕೊಲೆಗೆ ಕಾರಣರು. ಸಮಾಜದ ಸ್ವಾಸ್ಥ್ಯವನ್ನು ಕೆಡಿಸದೇ ವೈಚಾರಿಕತೆಯ ಮಂಡನೆ ಸಾಧ್ಯವೇ ಇಲ್ಲವೆಂಬಂತೆ ಬಲಪಂಥೀಯರ ಮೇಲೆ ಯುದ್ಧ ಸಾರಲು ಗೌರಿಯನ್ನು ದಾಳವಾಗಿ ಬಳಸಿಕೊಂಡ ಈ ಎಲ್ಲಾ ಬುದ್ದಿಜೀವಿಗಳು, ಅಂದಿನ ರಾಜ್ಯಸರ್ಕಾರ, ರಾಜಕಾರಣಿಗಳು, ಮಾಧ್ಯಮಗಳೆಲ್ಲವೂ ಆಕೆಯ ಹತ್ಯೆಗೆ ಕಾರಣೀಭೂತರು.  ಡಚ್ ಪತ್ರಿಕೆ ಜಿಲ್ಲೆನ್ಡ್ ಪೋಸ್ಟನ್ ಪ್ರವಾದಿಯ ಚಿತ್ರವನ್ನು ಪ್ರಕಟಿಸಿದ್ದುದು ಹಿಂಸೆಗೆ ಪ್ರಚೋದನೆಯೋ, ಹಾಗೆಯೇ ಹಿಂದೂ ಧರ್ಮದ ಅಪ್ಪ ಅಮ್ಮ ಎಂದೆಲ್ಲಾ ಹೀಯಾಳಿಸಿದ್ದು ಕೂಡಾ ಪ್ರಚೋದನಕಾರಿಯೇ ಎಂದು ಎಡಪಂಥೀಯರಿಗೆ ಅನ್ನಿಸಲಿಲ್ಲವೇ!

ಸಮಾಜ, ಸಂಘಟನೆ, ಸಮೂಹವೆಂದು ಹೋರಾಡುವ ಈ ಬುದ್ಧಿಜೀವಿಗಳಿಗೆ ಆರ್ಯ/ಅನಾರ್ಯರ ಬಹುಸಮಾಜ ಸಂಘಟಿತವಾಗಿ ವಿಕಸಿಸಿದ ಸಂಸ್ಕೃತಿಯ ರೂಪವೇ ಹಿಂದೂಧರ್ಮ ಎನಿಸದಿದ್ದುದು ಅವರ ಬೌದ್ಧಿಕ ವಿಕಾಸವನ್ನೇ ಪ್ರಶ್ನಿಸುತ್ತದೆ.

ಇನ್ನು ಈ ಸೆಲೆಬ್ರಿಟಿಗಳಿಗೇ ಭದ್ರತೆಯಿಲ್ಲ, ದೇಶ ಬಿಟ್ಟು ಹೋಗಬೇಕೆಂದೆನಿಸಿದರೆ ನಮ್ಮ ನಿಮ್ಮಂಥ ಶ್ರೀಸಾಮಾನ್ಯರು ಬಾಡಿಗಾರ್ಡುಗಳನ್ನಿಟ್ಟುಕೊಂಡು ಆಫೀಸು, ಶಾಪಿಂಗು, ಹೋಟೆಲು, ಸಿನಿಮಾಗಳಿಗೆ ಹೋಗುವಂತಹ ಪರಿಸ್ಥಿತಿ ಇರಬೇಕಿತ್ತು. ಹಾಗಿದೆಯೇ? ನಿಮ್ಮ ಬೀದಿಗಳಲ್ಲಿ ಕರ್ಫ್ಯೂ ಇದೆಯೇ? ನಿಮ್ಮ ನಿಮ್ಮ ಬೀದಿಗಳಲ್ಲಿ ಕೊನೆಯ ಬಾರಿಗೆ ಕರ್ಫ್ಯೂ ಎಂದಿತ್ತು? ಚಿಂತಕರಿಗೆ ತಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳುವ ಸ್ವಾತಂತ್ರ್ಯವಿದ್ದೇ ಇದೆ. ಆದರೆ ಅದನ್ನು ನಿಮ್ಮ ಧರ್ಮಕ್ಕೆ ಅಪ್ಪ ಇಲ್ಲ ಅಮ್ಮ ಇಲ್ಲ ಎಂಬುವಂತಹ ಕೊಳಕು ಭಾಷೆಯಲ್ಲಿ ಪ್ರಚೋದಿಸಿದರೆ  ಪರಿಣಾಮ ಕೂಡಾ ಕೊಳಕಾಗಿಯೇ ಇರತ್ತದಲ್ಲವೇ. ಇಂತಹ ಕೊಳಕು ಜಗಳಗಳನ್ನು ಸಾಕಷ್ಟು ಬೀದಿಗಳಲ್ಲಿ ನಿಮ್ಮ ದಿನನಿತ್ಯ ಜೀವನದಲ್ಲಿ ಕಂಡಿರುತ್ತೀರಿ. ಅಭಿಪ್ರಾಯಗಳ ಮಂಡನೆಯ ರೀತಿ, ಅಂಶ, ಸ್ಪಷ್ಟತೆ ಮುಖ್ಯವಾಗಬೇಕೇ ಹೊರತು ಪ್ರಚೋದನೆಯಲ್ಲ. "ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ", ಮತ್ತು "ಕರ್ನಾಟಕವೆಂಬೋ ಕಮಂಗಿಪುರದಲ್ಲಿ" ಎಂಬ ಹ್ಯಾಷ್ಟ್ಯಾಗ್ ಬಳಸುವ ನನಗೆ ಇದುವರೆಗೆ ಯಾವುದೇ ಬೆದರಿಕೆಗಳು ಬಂದಿಲ್ಲ. ನನ್ನೆಲ್ಲ ಅನಿಸಿಕೆಗಳನ್ನು ನಿರ್ಭಿಡೆಯಿಂದ ಬರೆದಿದ್ದೇನೆ.  ಆದರೆ ಇದುವರೆಗೆ ನನಗ್ಯಾವ ಬೆದರಿಕೆಗಳು ಬಂದಿಲ್ಲವೆಂದರೆ ನೀವು ನಿಮ್ಮ ಅಭಿಪ್ರಾಯಗಳನ್ನು ನಿರ್ಭಿಡೆಯಿಂದ ಹೇಳಬಹುದಾದ ವಾತಾವರಣವಿದೆಯೆಂದಲ್ಲವೇ!

ಭಾರತದ ಎಡಪಂಥೀಯರು, ಸಮಾಜವಾದ, ಕಮ್ಯುನಿಸಂ, ನಕ್ಸಲಿಸಮ್ ಭಜನೆಗಳನ್ನು ಮಾಡುತ್ತಾ ಹಣಕಾಸಿನ ಐಶ್ವರ್ಯ, ಅಂತಸ್ತುಗಳ ಆರಮನೆಯ ಬಂಡವಾಳಶಾಹಿತ್ವವನ್ನು ಅಪ್ಪಿಕೊಂಡಿದ್ದಾರೆ. ಅಂದ ಹಾಗೆ ಈ ವಿಚಾರವಂತರ ಕೈಯಲ್ಲಿರುವ ಐಫೋನು ಬಂಡವಾಳಶಾಹಿ ಅಮೆರಿಕಾದ್ದು! ಇವರ ಟೀಶರ್ಟುಗಳ ಮೇಲೆ ರಾರಾಜಿಸುವ ಚೆ ಗುವೇರಾ ನ ಕ್ಯೂಬಾದಲ್ಲಿ ಸೆಲ್ ಫೋನು ಬಿಡಿ, ಟಿವಿ ಕೂಡಾ ಮೊನ್ನೆಯವರೆಗೆ ಇರಲಿಲ್ಲ.

ಇನ್ನು ಭಾರತದ ಎಡಪಂಥೀಯರ ಆರಾಧ್ಯದೈವ ಕೇರಳದ ಮುಖ್ಯಮಂತ್ರಿ ಪಿಣರಾಯಿ ಕೂಡಾ ತಾನು ಕಮ್ಯುನಿಸ್ಟನೆಂದು ಕಮ್ಯುನಿಸ್ಟ್ ಚೈನಾ/ರಷ್ಯಾ/ಕ್ಯೂಬಾಕ್ಕೊ ತಮ್ಮ ಚಿಕಿತ್ಸೆಗೆ ತೆರಳದೆ ಬಂಡವಾಳಶಾಹಿ ಅಮೆರಿಕಾಕ್ಕೆ "ತಾನು ಕಮ್ಯುನಿಸ್ಟನಲ್ಲ"ವೆಂದೇ ಅರ್ಜಿ ಹಾಕಿ ಚಿಕಿತ್ಸೆಗೆ ಬರಲಿದ್ದಾರೆ. ಅಮೆರಿಕೆಗೆ ಬರುವ ಎಲ್ಲರೂ ತಾವು ಕಮ್ಯುನಿಸ್ಟರಲ್ಲವೆಂದೇ ಅರ್ಜಿ ಹಾಕಿ ಬರಬೇಕು. ನಮ್ಮ ಕಮ್ಯುನಿಸ್ಟ್ ನಾಯಕರು ಅಮೆರಿಕಾಕ್ಕೆ ಭೇಟಿ ಕೊಟ್ಟಿದ್ದಾರೆಂದರೆ ಅವರೆಲ್ಲಾ ಸುಳ್ಳರೆಂದೇ ಪ್ರಮಾಣಿಸಿದಂತೆಯೇ!

ಇತ್ತ ಬಂಡವಾಳಶಾಹಿ ಬಲಪಂಥೀಯರು ಧರ್ಮ, ಜಾತಿ ಜನಾಂಗೀಯ ಸಮಾನತೆ, ಮಂದಿರ ನಿರ್ಮಾಣದಂತಹ ಬಂಡವಾಳ ನಷ್ಟದ ಸಮಾನ ಕಾನೂನುಗಳಿಗೆ ಹೋರಾಡುತ್ತಿದ್ದಾರೆ. ಬಲಪಂಥೀಯರ ಬಗ್ಗೆ ಎಡಪಂಥೀಯರೇ ಸಾಕಷ್ಟು ದಿನನಿತ್ಯ ತುತ್ತೂರಿ ಊದುತ್ತಿರುವುದರಿಂದ ಹೆಚ್ಚಿಗೆ ಹೇಳಬೇಕಾದ್ದಿಲ್ಲ. ಒಟ್ಟಾರೆ ಭಾರತದ ವೈಚಾರಿಕತೆಯ ಬಲಪಂಥೀಯರು ಮತ್ತು ಎಡಪಂಥೀಯರು ಹೇಗೆ ತಮ್ಮ ತಮ್ಮ ಸಿದ್ಧಾಂತಗಳಿಗೆ ಬದ್ಧತೆ ತೋರುತ್ತ, ಆದರೆ ಆ ಸಿದ್ಧಾಂತಗಳ ವೈರುಧ್ಯತೆಯಲ್ಲಿ ಬಾಳುತ್ತಿರುವರೆಂದು ಗಮನಿಸಿ. ಸಿದ್ಧಾಂತಗಳನ್ನು ಮೀರಿ ಬೆಳೆಯದ ವೈಚಾರಿಕತೆ, ಧರ್ಮವಾಗಿಬಿಡುತ್ತದೆ. ಆ ನಿಟ್ಟಿನಲ್ಲಿ ಬಹುಧರ್ಮಗಳ ಭಾರತದಲ್ಲಿ ಎಡ ಮತ್ತು ಬಲ ಸಿದ್ದಾಂತಗಳು ಮತ್ತೆರಡು ಧರ್ಮವಾಗಿಬಿಟ್ಟಿವೆ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಅಸ್ಪೃಶ್ಯತೆ ಧರ್ಮದ ಸೃಷ್ಟಿಯೇ ಅಥವಾ ವ್ಯವಸ್ಥೆಯ ಸೃಷ್ಟಿಯೇ?

ಭಾಗ ೧:
ಏಳನೇ ಶತಮಾನದ ಚೀನೀ  ಪ್ರವಾಸಿ ಹುಯೆನ್ ತ್ಸಾಂಗ್, ಜಾತಿಪದ್ದತಿಗಳನ್ನು ದಾಖಲಿಸುತ್ತ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಬೌದ್ಧರೆಂದು ಗುರುತಿಸಿ, ಭಾರತದಲ್ಲಿ ಇಂದಿಗೂ ಪ್ರಸ್ತುತವಾಗಿರುವ ಸದಾ ಸಂಚಾರಿಗಳಾದ ಸಾಧು ಸನ್ಯಾಸಿಗಳನ್ನು ಯಾವುದೇ ಜಾತಿ ಇಲ್ಲದ ವರ್ಗಕ್ಕೆ ಸೇರಿಸುತ್ತ, ಎಲ್ಲಿಯೂ ಅಸ್ಪೃಶ್ಯತೆಯ ಬಗ್ಗೆ ಯಾವುದೇ ಮಾಹಿತಿಯನ್ನು ದಾಖಲಿಸಿಲ್ಲವೆಂಬುದು ಗಮನಾರ್ಹ ಸಂಗತಿ!

ಅಂದರೆ ಅಸ್ಪೃಶ್ಯತೆ ಆ ಕಾಲದಲ್ಲಿ ಇತ್ತೇ ಇಲ್ಲವೇ? ಅಥವಾ ಹುಯೆನ್ ತ್ಸಾಂಗ್ ಇದನ್ನು ಕಂಡುಕೊಳ್ಳುವಲ್ಲಿ ವಿಫಲನಾದನೇ?

ಮೊದಲು ಹುಯೆನ್ ತ್ಸಾಂಗ್ ಅಸ್ಪೃಶ್ಯತೆಯನ್ನು ಗುರುತಿಸುವಲ್ಲಿ ವಿಫಲನಾದನೇ ನೋಡೋಣ.
 
ಹುಯೆನ್ ತ್ಸಾಂಗನು ಭಾರತದ ಉದ್ದಗಲಕ್ಕೂ ಸಂಚರಿಸಿ ತನ್ನ ಜ್ಞಾನಾರ್ಜನೆಯೊಂದಿಗೆ ಮುಂದಿನ ಜನಾಂಗಕ್ಕೆ ಭಾರತದ ಇತಿಹಾಸದ ನೈಜ ಜೀವನದ ಚಿತ್ರಣವನ್ನು ಕೊಟ್ಟಿದ್ದಾನೆ. ಆತನಲ್ಲಿದ್ದ ಸ್ಥಿತಪ್ರಜ್ಞತೆ, ವಿವರಣಾ ಕೌಶಲ್ಯ, ವಿಮರ್ಶೆ, ಮತ್ತು ಜನಜೀವನ ಚಿತ್ರಣ ಅಂದಿನ ಭಾರತದ ಇತಿಹಾಸವನ್ನು ಯಾವುದೇ ಉತ್ಪ್ರೇಕ್ಷೆಯಿಲ್ಲದೆ ತೆರೆದಿಡುತ್ತದೆ.

ಈತ ದಾಖಲಿಸಿದಂತಹ ಭೌಗೋಳಿಕ ವಿಶೇಷಣಗಳಾದ ಹಾಮೀ ಮರುಭೂಮಿಯಲ್ಲಿನ ಕರಬೂಜಗಳು ಅಂದಿಗೂ ಖ್ಯಾತಗೊಂಡಿದ್ದವು ಹಾಗೂ ಇಂದಿಗೂ ಕೂಡಾ! ಶತಶತಮಾನಗಳೇ ಕಳೆದು ಹೋಗಿದ್ದರೂ ಹಾಮೀ ಕರಬೂಜಗಳು ಜಗತ್ತಿನಲ್ಲೇ ಅತ್ಯಂತ ರುಚಿಕರ ಎಂಬುದು ಈಗಲೂ ಸತ್ಯ.  ಆತನ ವರ್ಣನೆಯ ಸಿಂಧ್ ಪರ್ವತಶ್ರೇಣಿಗಳು, ಗಂಗಾನದಿ, ಕಶ್ಮೀರದ ಕಣಿವೆಗಳು, ಅರಣ್ಯಶ್ರೇಣಿಗಳು, ಅಸ್ಸಾಮಿನ ಮಳೆಗಾಲ, ಅಲ್ಲಿನ ವನ್ಯಪ್ರಾಣಿ ಸಮೂಹವಾದ ಆನೆ, ಘೇಂಡಾಮೃಗ, ಕಪ್ಪುಚಿರತೆ ಹೇಗಿದ್ದವೋ ಹಾಗೆಯೇ ಇರುವವು, ಸಂಖ್ಯೆಗಳ ವ್ಯತ್ಯಾಸವಿರಬಹುದು. ಆದರೆ ಭಾರತೀಯ ಭೌಗೋಳಿಕತೆ ಯಥಾವತ್ತಾಗಿದೆ. 

ಇನ್ನು ಭಾರತದ ಜನತೆ, ಹುಯೆನ್ ತ್ಸಾಂಗನು ವರ್ಣಿಸಿದ ಗಂಗಾತೀರದ ದರೋಡೆಕೋರರ ಖ್ಯಾತಿ ಕೂಡಾ! ಇಂದಿಗೂ ಬಿಹಾರ್, ಉತ್ತರಪ್ರದೇಶಗಳಲ್ಲಿ ದರೋಡೆಕೋರರ ಹಾವಳಿ. ಉದಾಹರಣೆಗೆ ಪ್ರಖ್ಯಾತ ಚಂಬಲ್ ಕಣಿವೆಯ ದರೋಡೆಕೋರರು. ಆತ ಕಂಡಂತೆ ಗುಜರಾತಿನಲ್ಲಿ ಕೃಷಿಕರಿಗಿಂತ ಹೆಚ್ಚಾಗಿ ವ್ಯಾಪಾರಿಗಳಿದ್ದ ಚಿತ್ರಣ ಕೂಡಾ ಇಂದೇನು ಬದಲಾಗಿಲ್ಲ. ಇಂದು ವಿಶ್ವದಲ್ಲೇ ಗುಜರಾತಿನವರು ವ್ಯಾಪಾರಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಆತನ ವರ್ಣನೆಯ ಮಹಾರಾಠರು ಮಹಾನ್ ಪರಾಕ್ರಮಶಾಲಿಗಳೆಂಬುದನ್ನು ಪ್ರಮಾಣೀಕರಿಸುವಂತೆ ಬ್ರಿಟಿಷರಿಗೆ ಕಟ್ಟಕಡೆಯದಾಗಿ ಶರಣಾದವರು ಮರಾಠರು. 

ಒಟ್ಟಾರೆ ಭಾರತ ಇತಿಹಾಸದ ರಾಯಭಾರಿಯಾಗಿ ಹುಯೆನ್ ತ್ಸಾಂಗ್ ಎದ್ದು ಬಂದು ಚರಿತ್ರೆಯ ಪುಟಗಳನ್ನು ಯಥಾವತ್ತಾಗಿ ತೆರೆದಿಡುತ್ತಾನೆ. ಇಂತಹ ಒಂದು ಖಚಿತತೆ ವಿಶ್ವದ ಇನ್ಯಾವ ಇತಿಹಾಸದ ಪುಟಗಳಲ್ಲಿಯೂ ಕಾಣಬರುವುದಿಲ್ಲ. 

ಅಂತಹ ಖಚಿತತೆಯ ಹುಯೆನ್ ತ್ಸಾಂಗ್ ಅಸ್ಪೃಶ್ಯತೆಯನ್ನು ಗುರುತಿಸುವಲ್ಲಿ ಎಡವಿಲ್ಲವೆನಿಸುತ್ತದೆ. ಆದರೂ  ಅದನ್ನು ಖಚಿತ ಪಡಿಸಿಕೊಳ್ಳಲು ಹುಯೆನ್ ತ್ಸಾಂಗನಿಗಿಂತ ಎರಡು ಶತಮಾನಗಳ ಮೊದಲೇ ಬಂದಿದ್ದ ಮತ್ತೊಬ್ಬ ಚೀನೀ ಯಾತ್ರಿಕ ಫಾಹಿಯಾನನ ಕಡೆ ನೋಡೋಣ. ಏಕೆಂದರೆ ಪ್ರಸ್ತುತ ದಲಿತ ಇತಿಹಾಸ ಕೂಡಾ ಚೀನೀ ಯಾತ್ರಿಕ ಫ಼ಾಹಿಯಾನನೆಡೆಗೇ ಬೆರಳು ತೋರುತ್ತದೆ. ಕ್ರಿ.ಶ. ಐದನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ಟಿದ್ದ ಫ಼ಾಹಿಯಾನ್ ಮೊಟ್ಟಮೊದಲ ಬಾರಿಗೆ ಚಾಂಡಾಲರ ಕುರಿತಾಗಿ ಟಿಪ್ಪಣಿ ಬರೆದಿದ್ದುದನ್ನು ತೋರುತ್ತಾ, ಅಸ್ಪೃಶ್ಯತೆಯ ಇತಿಹಾಸವನ್ನು ಐದನೇ ಶತಮಾನಕ್ಕೆ ಕರೆದೊಯ್ಯುತ್ತದೆ. ದಲಿತ ಇತಿಹಾಸ.  ಅದಕ್ಕೂ ಮುಂಚಿನ ಯಾವುದೇ ಐತಿಹಾಸಿಕ ಗ್ರಂಥಗಳಲ್ಲಿ ಅಸ್ಪೃಶ್ಯತೆಯ ಉಲ್ಲೇಖವಿಲ್ಲದಿರುವುದರಿಂದ ಫಾಹಿಯಾನನ ಕಾಲದಿಂದ ಅಸ್ಪೃಶ್ಯತೆ ಇದೆ ಎನ್ನುತ್ತದೆ ಇತಿಹಾಸ.

ಇನ್ನು ಋಗ್ವೇದದ ನಂತರದ ವೇದಗಳಲ್ಲಿ ಚಾಂಡಾಲರ ಕುರಿತು ಉಲ್ಲೇಖವಿದ್ದರೂ ಅವರ ಕೈಯಿಂದ ಆಹಾರ ಸ್ವೀಕಾರಯೋಗ್ಯವೆಂದಿದೆ ಎಂಬ ವಾದವಾಗಲೀ, ಕೆಳಸ್ತರದ ಉದ್ಯೋಗಗಳ ಕೊಳಕುತನದಿಂದ ಅಸ್ಪೃಶ್ಯತೆ ಉದಯವಾಗಿರಬಹುದೆಂಬ ವಿಶ್ಲೇಷಣೆಗಳಾಗಲಿ ಒಪ್ಪತಕ್ಕದ್ದವಾದರೂ ಯಾವುದೇ ಕಾಲದ ಖಚಿತತೆಯನ್ನು ಕೊಡುವುದಿಲ್ಲ. ಅದಲ್ಲದೇ ವೇದಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಗಿದೆ ಎನ್ನುತ್ತದೆ ಇತಿಹಾಸ.

ಅದೇ ರೀತಿ ಫ಼ಾಹಿಯಾನನ ಟಿಪ್ಪಣಿಯನ್ನು ಕೂಡಾ "ಅಸ್ಪೃಶ್ಯತೆ"ಯ ಖಚಿತ ದಾಖಲೆಯೆಂದು ಪರಿಗಣಿಸಲು ಸಾಧ್ಯವಿಲ್ಲ. ಏಕೆಂದರೆ ಫ಼ಾಹಿಯಾನನು ತನ್ನ ದಾಖಲೆಯಲ್ಲಿ ಅಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಮಾಂಸವನ್ನು ಮಾರಾಟ ಮಾಡಲು "ಚಾಂಡಾಲ", "ಬೆಸ್ತ" ಮತ್ತು "ಬೇಟೆಗಾರ"ರು ಮಾತ್ರ ಅರ್ಹರಾಗಿದ್ದರು ಎನ್ನುತ್ತಾನೆ. ಈ ಚಾಂಡಾಲರು ರಕ್ತಸಿಕ್ತ ವಸ್ತ್ರಗಳಿಂದ ವಿಕಾರವಾಗಿಯೂ  ಭೀಬತ್ಸರಾಗಿಯೂ ಕಾಣುವುದಲ್ಲದೇ  "ಪಾಪಿಗಳು", "ಕಟುಕರು" ಎಂದು  ಕರೆಸಿಕೊಳ್ಳುತ್ತಾ ಊರಿನ ಹೊರಗೆ ವಾಸಿಸಬೇಕಿದ್ದಿತು ಎಂದು ದಾಖಲಿಸಿದ್ದಾನೆ.  ಮಾಂಸ ಮಾರಾಟದೊಂದಿಗೆ ಶವಸಂಸ್ಕಾರವನ್ನು ಕೂಡ ಚಾಂಡಾಲರು ನಿಭಾಯಿಸುತ್ತಿದ್ದರು. ಇವರು ನಗರ ಪ್ರದೇಶಗಳನ್ನು ಪ್ರವೇಶಿಸುವಾಗ ತಮ್ಮ ಆಗಮನವನ್ನು ಸೂಚಿಸಲು ಮರದ ಹಲಗೆಯಿಂದ ಶಬ್ದ ಮಾಡುತ್ತ ಸಂಚರಿಸಬೇಕಿದ್ದಿತು. ಈ ಶಬ್ದ ಕೇಳಿದ ಜನ (ಇವರನ್ನು ನೋಡಲು ಬಯಸದ) ಇವರಿಗೆ ದಾರಿಯನ್ನು ಬಿಟ್ಟು ಮನೆ ಸೇರಿಕೊಳ್ಳುತ್ತಿದ್ದರು.  ಫ಼ಾಹಿಯಾನ್ ತನ್ನ ಟಿಪ್ಪಣಿಯನ್ನು ಮುಂದುವರಿಸುತ್ತಾ ಚಾಂಡಾಲರು ತಮ್ಮ ಕಟುಕ ವೃತ್ತಿಯನ್ನು ಬಿಟ್ಟು ಪರಿವರ್ತನೆಗೊಂಡಲ್ಲಿ  (ಮತಾಂತರವಲ್ಲ) ಪುರೋಹಿತರಾಗುವ ವ್ಯವಸ್ಥೆ ಕೂಡಾ ಇತ್ತೆಂದು ಸ್ಪಷ್ಟಪಡಿಸುತ್ತಾನೆ. ಪ್ರಾಣಿವಧೆ ಮಹಾಪಾಪ ಎಂಬ ಧಾರ್ಮಿಕಾರ್ಥದಲ್ಲಿ ಪಾಪಿಗಳೆಂದು, ಕನಿಕರವಿಲ್ಲದ ಕಟು ಹೃದಯದವರೆಂಬ ಭಾವಾರ್ಥದಲ್ಲಿ ಕಟುಕರೆಂದೂ ಇವರು ಈ ರೀತಿ ಕರೆಸಿಕೊಂಡಿರಬಹುದು. ಅದೇ ರೀತಿ ರಕ್ತಸಿಕ್ತವಾದ ವಸ್ತ್ರಗಳಿಂದ ವಿಕಾರವಾಗಿ ಕಾಣುತ್ತಿದ್ದ ಇವರನ್ನು ನೋಡಲಾಗದವರನ್ನು, ಶುಚಿರಭೂತ  ಯಾ ಮಡಿವಂತರು, ರಕ್ತ, ಮಾಂಸ ನೋಡಲಾಗದ ಅಳ್ಳೆದೆಯ ಜನರೆಂದೂ ಪರಿಗಣಿಸಬಹುದು. 

ಹಾಗಿದ್ದಾಗ ಫಾಹಿಯಾನ್ ಕಂಡದ್ದು ಅಸ್ಪೃಶ್ಯತೆಯೇ ಅಥವಾ ಮಾಂಸೋದ್ಯಮದೆಡೆಗಿದ್ದ ಸಾಮಾಜಿಕ ವ್ಯವಸ್ಥೆಯೇ?  ಈ ಹಿನ್ನೆಲೆಯಲ್ಲಿ ಆತ ದಾಖಲಿಸಿರುವುದು ಒಂದು "ಸಾಮಾಜಿಕ ವ್ಯವಸ್ಥೆ"ಯ ಶ್ರೇಣೀಕೃತ ವರ್ಣಸಂಕರ ಎನ್ನಬೇಕಾಗುತ್ತದೆಯೇ ಹೊರತು "ಧರ್ಮಾಧರಿತ" ವರ್ಣಸಂಕರವಾಗಿಯಲ್ಲ.

ಅದಲ್ಲದೇ ಆತ ಎಲ್ಲಿಯೂ ಇವರು ಮುಟ್ಟಲು ಯಾ ಮುಟ್ಟಿಸಿಕೊಳ್ಳಲು ಅನರ್ಹರೆಂದು ಹೇಳಿಲ್ಲ. ಅದನ್ನು ಹೇಳುವ ಅವಶ್ಯಕತೆಯೇ ಅವನಿಗಿರಲಿಲ್ಲ! ಏಕೆಂದರೆ ಜನ ಅವರ ಕೈಯಿಂದ ಮಾಂಸವನ್ನು ಕೊಳ್ಳುತ್ತಿದ್ದರು ಮತ್ತು ಪರಿವರ್ತಿತರಾದರೆ ಅವರನ್ನು ಆರಾಧಿಸುತ್ತಿದ್ದರು. 

ಹಾಗಾಗಿ ಅಸ್ಪೃಶ್ಯತೆಯ ಕಾಲ ಖಚಿತವಾಗಿ ಐದನೇ ಶತಮಾನವಲ್ಲ!

ಇಂದಿನ ಜಾಗತಿಕ ಪ್ರಪಂಚದಲ್ಲಿ ಐಟಿ ಪಾರ್ಕ್, ಆಹಾರ ಪಾರ್ಕ್, ಜವಳಿ ಪಾರ್ಕ್, ಕರಕುಶಲ ಪಾರ್ಕ್, ಡೈಮಂಡ್ ಹಬ್ ಇತರೆ ವಾಣಿಜ್ಯ ಉದ್ಯಮಗಳಿಗೆ ಮೀಸಲಾದ ಪಾರ್ಕ್ ಯಾ ನಗರಪ್ರದೇಶಗಳಿಂದ ಬೇರ್ಪಡಿಸಿದಂತಿರುವ ಮೀಸಲು ಜಾಗಗಳಿವೆ. ಅದೇ ರೀತಿ ಮಾಂಸೋದ್ಯಮ, ಚರ್ಮೋದ್ಯಮ, ಮತ್ಸ್ಯೋದ್ಯಮ ಮತ್ತು ಕಸ ವಿಲೇವಾರಿ ಉದ್ಯಮ ಕೂಡಾ!  ಇವೆಲ್ಲದಕ್ಕೂ ಆಯಾಯ ಉದ್ಯಮಕ್ಕೆ ಸಂಬಂಧಿಸಿದ ಸಕಾರಣಗಳಿರುವುದರಿಂದಲೇ ಅವನ್ನು ವಸತಿಪ್ರದೇಶಗಳಿಂದ ಬೇರ್ಪಡಿಸಿರುತ್ತಾರೆ. ಇದು ಯಾವುದೇ ಶಿಸ್ತುಬದ್ಧ ನಗರಾಭಿವೃದ್ದಿಯ ಪ್ರಪ್ರಥಮ ವರ್ಗೀಕರಣ ಆಯಾಮ. ಕ್ರಿಸ್ತಪೂರ್ವ ಸಿಂಧೂ ಕೊಳ್ಳದ ನಾಗರೀಕತೆಯಿಂದ ಹಿಡಿದು ಇಂದಿನ ಜಾಗತಿಕ ನಗರಗಳ ನವ್ಯ ನಾಗರೀಕತೆಯವರೆಗೆ ಕೂಡಾ!  ಕೇವಲ ವಾಣಿಜ್ಯ ಕೇಂದ್ರಿತ ನಗರ ವಿಭಜನೆಯಲ್ಲದೆ ಜನಾಂಗೀಯ ವಿಭಜನೆ ಕೂಡಾ ಇರುತ್ತಿತ್ತು. ಬ್ರಾಹ್ಮಣರ ಕೇರಿ, ಕುರುಬರ ಕೇರಿ, ಕುಂಬಾರರ ಕೇರಿ, ಇತ್ಯಾದಿ ಇತ್ಯಾದಿ. ಇಲ್ಲಿ ಬ್ರಾಹ್ಮಣ ಮಡಿಯುಟ್ಟು ಶುಚಿರಭೂತನಾಗಿದ್ದು, ಕುಂಬಾರ ಮಣ್ಣು ಮೆತ್ತಿಕೊಂಡಿದ್ದರೆ ಅದು ಕೇವಲ ಅವರ ಔದ್ಯೋಗಿಕ ಕಾರಣವೇ ಹೊರತು ವರ್ಣಸಂಕರವಾಗಿರಲಿಲ್ಲ.  ಇದು ಆಧುನಿಕ ಸಮಾಜದ ಬಿಳಿಯ ಕಾಲರ್ ಮತ್ತು ನೀಲಿ ಕಾಲರ್ ವ್ಯತ್ಯಾಸವಿದ್ದಂತೆ, ಕಂಪ್ಯೂಟರ್ ತಜ್ಞ ಮತ್ತು ಕಾರ್ ಮೆಕ್ಯಾನಿಕ್ಕುಗಳ ವೃತ್ತಿಯ ಸ್ಥಳಗಳ ವ್ಯತ್ಯಾಸವಿದ್ದಂತೆಯೇ ಹೊರತು ಜಾತಿ, ಧರ್ಮಗಳಿಂದಾದ ವ್ಯತ್ಯಾಸವಲ್ಲ!  

ಕೇವಲ ಹೂಸಿದರೆ ಯಾರೂ ಪಕ್ಕದಲ್ಲಿ ಕೂರದ ಮಾನವ ಸಹಜ ಸ್ವಭಾವ, ರಕ್ತಸಿಕ್ತವಾಗಿರುವ ಸ್ವಂತ ಸೋದರನನ್ನ ಮುಟ್ಟಿ ತಬ್ಬಿಕೊಂಡೀತೇ?

ಫಾಹಿಯಾನನು ಕಂಡಿದ್ದ ಚಾಂಡಾಲರು ಸಮಾಜದ ಭಾಗವಾಗಿ ಎಂದಿನಿಂದಲೋ ಇದ್ದರೂ ಅಸ್ಪೃಶ್ಯತೆ ಆಗಿನ್ನೂ ಸಮಾಜದ ಭಾಗವಾಗಿರಲಿಲ್ಲ. ಹಾಗಾಗಿಯೇ ಏಳನೇ ಶತಮಾನದ ಹುಯೆನ್ ತ್ಸಾಂಗ್ ಚಾಂಡಾಲರನ್ನು ಕಂಡಿದ್ದರೂ ಅಸ್ಪೃಶ್ಯತೆಯನ್ನು ಕಂಡಿರಲಿಲ್ಲವೆಂದು ಖಚಿತವಾಗಿ ಹೇಳಬಹುದೆನಿಸುತ್ತದೆ.

ಇತಿಹಾಸ ಹೀಗಿರಬೇಕಿದ್ದರೆ ಅಸ್ಪೃಶ್ಯತೆ ಹೇಗೆ, ಯಾವ ಕಾಲದಲ್ಲಿ ಸೃಷ್ಟಿಯಾಯಿತು?

ಭಾಗ ೨:
ಭಾರತ ಮೂಲತಃ ಜೈನ ರಾಷ್ಟ್ರವೆನ್ನಬಹುದು. ಪ್ರಥಮ ತೀರ್ಥಂಕರ ರಿಷಭನಾಥನ ಪುತ್ರನೆನ್ನಲಾದ ಭರತನ ಹೆಸರು ಹೊತ್ತ ಭರತಶಕೆಯ ಭಾರತದಲ್ಲಿ ಜೈನ ಧರ್ಮ ಪ್ರಮುಖವಾಗಿ ಕ್ಷತ್ರಿಯರ ಧರ್ಮವಾಗಿ ಕ್ರಮೇಣ ಬ್ರಾಹ್ಮಣರನ್ನು ಆಕರ್ಷಿಸುತ್ತ ಸಾಹಿತ್ಯಿಕವಾಗಿ ಬೆಳೆದು ಎಲೈಟ್ ಜನಗಳ ಧರ್ಮವೆನಿಸಿತ್ತು. ಇತ್ತ ಬೌದ್ಧಧರ್ಮ ವಣಿಕ/ವರ್ತಕ/ವೈಶ್ಯರ ಧರ್ಮವಾಗಿ ಬೆಳೆಯಿತು. ಇನ್ನು ಹಿಂದೂ ಧರ್ಮ ವರ್ಣಸಂಕರಗಳ ಒಂದು ಸಾಮಾಜಿಕ ವ್ಯವಸ್ಥೆಯಾಗಿಯೇ ಮುಂದುವರಿದಿತ್ತು. ಈ ವರ್ಣಸಂಕರದ ಧರ್ಮರಹಿತರು ಜೈನ, ಬೌದ್ಧಕ್ಕೆ ಪರ್ಯಾಯವಾಗಿ ತಮ್ಮ ಸಾಮಾಜಿಕ ವ್ಯವಸ್ಥೆಯನ್ನೇ ಧರ್ಮವಾಗಿ ಬಿಂಬಿಸಿದರು. ಆ ಪರ್ಯಾಯ ವ್ಯವಸ್ಥೆಗನುಗುಣವಾಗಿ ರಾಮಾಯಣ, ಮಹಾಭಾರತಗಳು ಸೃಷ್ಟಿಯಾದವು.  ಹಿಂದೂ ಧರ್ಮ ಪೌರಾಣಿಕತೆಯನ್ನು ಮೆರೆದರೆ, ಬೌದ್ಧ ಧರ್ಮ ತತ್ವಜ್ಞಾನಕ್ಕೆ, ಮತ್ತು ಜೈನ ಧರ್ಮ ಶೌರ್ಯ, ತ್ಯಾಗ, ಸಾಹಿತ್ಯಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದವು. ಆದರೆ ಈ ಮೂರೂ ಧರ್ಮಗಳೂ ಕ್ರಮೇಣ  ಈರ್ಷ್ಯೆಯಿಂದ ಪರಸ್ಪರ ಧರ್ಮಯುದ್ಧದಲ್ಲಿ ತೊಡಗಿದವು.

ಕ್ರಿ. ಶ. 647ರಲ್ಲಿ ಚಕ್ರವರ್ತಿ ಹರ್ಷನ ಮರಣಾನಂತರ ಹರ್ಷನ ಸಾಮ್ರಾಜ್ಯ ಛಿದ್ರವಾಯಿತು. ಹರ್ಷನ ಸಾಮಂತರು ಸ್ವತಂತ್ರರಾದರು.  ಅರಾಜಕತೆ, ದಂಗೆ, ಮತ್ತು ತೀವ್ರ ಬರಗಾಲಗಳು ಭಾರತವನ್ನು ಅಪ್ಪಳಿಸಿದವು. ಎಲ್ಲೆಲ್ಲೂ ಕೋಲಾಹಲ, ಹತಾಶೆ, ಸುಲಿಗೆಗಳು ಮೆರೆದವು. ಹರ್ಷನ ನಂತರದ ಮುಂದಿನ ಆರನೂರರಿಂದ ಏಳುನೂರು ವರ್ಷಗಳವರೆಗೆ ಭಾರತ ಒಂದು ಸಂಯುಕ್ತ ರಾಷ್ಟ್ರವಾಗಿರದೇ ಅನೇಕ ಸಣ್ಣ ಸಣ್ಣ ಸಂಸ್ಥಾನಗಳ ಛಿದ್ರ ರಾಷ್ಟ್ರವಾಗಿದ್ದಿತು. ಅಷ್ಟೇ ಅಲ್ಲದೇ ಹರ್ಷನ ನಂತರದ ಮುಂದಿನ  ಆರು ಶತಮಾನಗಳಲ್ಲಿ ಹಿಂದೂಧರ್ಮದ ಪಂಥಗಳು ಮತ್ತೆ ಮಂಚೂಣಿಗೆ ಬಂದವು. ತಮ್ಮ ತಮ್ಮ ಅನುಯಾಯೀ ರಾಜರುಗಳ ಮೇಲೆ ಪ್ರಭಾವ ಬೀರುತ್ತ ಶೈವರು, ವೈಷ್ಣವರು, ಜೈನರು  ಯಶಸ್ವಿಯಾಗಿ ಬೌದ್ಧ ಧರ್ಮವನ್ನು ತುಳಿದುಹಾಕಿದರು.  ಗುರ್ಜರರು, ರಾಷ್ಟ್ರಕೂಟರು, ಚೋಳರು ಪ್ರಮುಖವಾಗಿ ಆಳಿದರೂ ಕ್ರಮೇಣ ಬಂಡುಕೋರರ ಕೈ ಮೇಲಾಗಿ ಭಾರತ ಮತ್ತಷ್ಟು ಚಿಕ್ಕ ಚಿಕ್ಕ ಸಂಸ್ಥಾನಗಳಾಗಿ ಛಿದ್ರವಾಯಿತು.  ಹಿಂದೂ ಧರ್ಮ ಕೂಡಾ ಧರ್ಮದ ಸ್ವರೂಪವಾಗಿರದೆ ಜಾತಿ, ಪಂಥಗಳಾಗಿ ಛಿದ್ರವಾಯಿತು. 

ಆ ಒಂದು ರಾಜಕೀಯ/ಧಾರ್ಮಿಕ/ಸಾಮಾಜಿಕ ಪಲ್ಲಟ ಪರ್ವದಲ್ಲಿ ದಬ್ಬಾಳಿಕೆಯ, ಸ್ವೇಚ್ಚಾಚಾರದ ಊಳಿಗಮಾನ್ಯ ವ್ಯವಸ್ಥೆ ಎಲ್ಲಾ ಸ್ತರಗಳಲ್ಲಿ ಬಲವಾಗುತ್ತಾ ಸಾಗಿತು. ಬಲವಾದ ಊಳಿಗಮಾನ್ಯ ವ್ಯವಸ್ಥೆಯಲ್ಲಿ ಗುಲಾಮಗಿರಿಗೆ ಸುಲಭವಾಗಿ ಚಾಂಡಾಲರನ್ನೊಳಗೊಂಡಂತೆ ಕೆಳಸ್ತರದ ಜನ ತುತ್ತಾದರು. ಆ ಒಂದು ದಬ್ಬಾಳಿಕೆ ಕ್ರಮೇಣ ಅಸ್ಪೃಶ್ಯತೆಯ ವಿಕೃತ ರೂಪವನ್ನು ಪಡೆದುಕೊಂಡಿರಬಹುದು. ಹಾಗಾಗಿ ಎಂಟನೇ ಶತಮಾನದಿಂದ ಅಸ್ಪೃಶ್ಯತೆ ಆರಂಭವಾಯಿತು ಎನ್ನಬಹುದು. ಈ ವಿಶ್ಲೇಷಣೆಗೆ ಪೂರಕವಾಗಿ ಶಂಕರಾಚಾರ್ಯರು ಮತ್ತು ಚಾಂಡಾಲನೋರ್ವನ ನಡುವೆ ವಾರಾಣಾಸಿಯಲ್ಲಿ ನಡೆಯಿತೆನ್ನಲಾದ ಸಂವಾದ ಅಸ್ಪೃಶ್ಯತೆಯ ಪದ್ದತಿ ಜಾರಿಯಲ್ಲಿದ್ದುದನ್ನು ಸ್ಪಷ್ಟಪಡಿಸುತ್ತದೆ. ಈ ಘಟನೆ  ನಡೆದದ್ದು ಹರ್ಷನ ಸಾವಿನ 170 ವರ್ಷಗಳ ನಂತರ. ಶಂಕರಾಚಾರ್ಯರ ಕಾಲಘಟ್ಟ ಕ್ರಿ. ಶ.788 ರಿಂದ ಕ್ರಿ. ಶ. 820!

ಹಾಗಿದ್ದರೆ ಇದನ್ನು ವಿರೋಧಿಸಿ ತುಳಿತಕ್ಕೊಳಗಾದವರು ದಂಗೆ ಏಳಲಿಲ್ಲವೇ? 

ಖಂಡಿತ ಜನ ದಂಗೆದ್ದಿದ್ದರು. ಈ ಆಕ್ರೋಶವನ್ನು ಬಳಸಿಕೊಂಡು ಸಾಕಷ್ಟು ನವ ಪ್ರಭುತ್ವಗಳು, ಭಕ್ತಿಪಂಥಗಳು ಉದಯವಾದವು. ಉದಾಹರಣೆಗೆ ಕರ್ನಾಟಕದಲ್ಲಿ ಹತ್ತನೇ ಶತಮಾನದಿಂದ ಆರಂಭವಾದ ವೀರಶೈವ ಯಾ ಲಿಂಗಾಯತ ಶರಣ ಚಳುವಳಿ, ಹಕ್ಕ ಬುಕ್ಕರಿಂದ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ಇವೆಲ್ಲವೂ ಆ ಆಕ್ರೋಶದ ಧ್ರುವೀಕರಣ.  ಈ ಧ್ರುವೀಕರಣದ ಭಾಗವಾಗಿ ಅಸ್ಪೃಶ್ಯರು ಪ್ರಭುತ್ವಗಳಲ್ಲಿ ಸೈನಿಕರಾಗಿ, ಭಕ್ತಿಪಂಥಗಳಲ್ಲಿ ಭಕ್ತರಾಗಿ ಪಾಲ್ಗೊಂಡಿದ್ದರು.  ದುರಾದೃಷ್ಟವಶಾತ್ ಇವೆಲ್ಲವೂ ಊಳಿಗಮಾನ್ಯ ವ್ಯವಸ್ಥೆಯಿಂದ ತುಳಿಯಲ್ಪಟ್ಟವು ಯಾ ಊಳಿಗಮಾನ್ಯ ವ್ಯವಸ್ಥೆಯನ್ನು ಅಪ್ಪಿಕೊಂಡವು. ಹರ್ಷನ ಸಾವಿನ ನಂತರ ಪಂಥಗಳಾಗಿ ವಿಭಜನೆಗೊಂಡಿದ್ದ ಹಿಂದೂಧರ್ಮ, ಭಕ್ತಿಪಂಥ ಚಳುವಳಿಗಳಲ್ಲಿ ಮತ್ತು ಸಿಡಿದೆದ್ದ ನವ್ಯ ಪ್ರಭುತ್ವಗಳ ಈ ಹೊಸ ಭರಾಟೆಯಲ್ಲಿ ಮತ್ತಷ್ಟು ಪಂಥ/ಜಾತಿಗಳಾಗಿ ವಿಭಜನೆಗೊಂಡಿತು.  ಅದಲ್ಲದೇ ತನ್ನ ವಿಭಜನೆಯಲ್ಲೂ "ವೈವಿಧ್ಯತೆಯಲ್ಲಿ ಏಕತೆ"  ಸಾಧಿಸುತ್ತ ಹಿಂದೂ ಧರ್ಮ, ಜೈನರನ್ನು ತನ್ನ ಮುಂದಿನ ಗುರಿಯಾಗಿಸಿಕೊಂಡು ಜೈನಧರ್ಮವನ್ನು ಯಶಸ್ವಿಯಾಗಿ ತುಳಿದುಹಾಕಿತು.  ಇದನ್ನು ಹಲವು ಭಕ್ತಿಪಂಥ ಚಳುವಳಿಗಳು ಕೂಡ ಪ್ರೋತ್ಸಾಹಿಸಿದವು.  ಯಾವ ಎಗ್ಗಿಲ್ಲದೇ ಸಾಮ, ದಾನ, ದಂಡ, ಭೇದ ನೀತಿಯನ್ನು ಭಕ್ತಿಪಂಥಗಳು ಕೂಡ ಎಗ್ಗಿಲ್ಲದೆ ಪ್ರಯೋಗಿಸಿದವು.  ಈ ಐತಿಹಾಸಿಕ ಧರ್ಮಯುದ್ಧಗಳ ಧರ್ಮಕಾಂಡದ ಮೇಲ್ಪಂಕ್ತಿಯನ್ನೇ ನಂತರದ ಇಸ್ಲಾಂ ಕೂಡ ಅನುಸರಿಸಿತು. ಇನ್ನು  ಉಳಿಗಮಾನದಲ್ಲಿ ಗುಲಾಮರಿರದಿದ್ದರೆ ಹೇಗೆ? ಹಾಗಾಗಿ ಮತ್ತೆ ಅಸ್ಪೃಶ್ಯತೆ ಬಲಗೊಂಡಿತು.

ಇಂದಿನ ಸ್ವಾತಂತ್ರ್ಯ ಭಾರತದಲ್ಲಿನ ಪ್ರಜಾಪ್ರಭುತ್ವ ಕೂಡಾ ಊಳಿಗಮಾನ್ಯ ಪ್ರಜಾಪ್ರಭುತ್ವ!  ಐತಿಹಾಸಿಕವಾಗಿ ಹಿಂದೂ ಧರ್ಮ ಹೇಗೆ ವಿಭಿನ್ನ ಕಾಲಘಟ್ಟದಲ್ಲಿ ಪಂಥ, ಜಾತಿಯಾಗಿ ವಿಭಜನೆಗೊಂಡಿತೋ ಅದೇ ರೀತಿ ಇಪ್ಪತ್ತನೇ ಶತಮಾನದಲ್ಲಿ ಜಾತಿಗಳು ವಿಭಜನೆಯಾಗುತ್ತಿವೆ.  ಒಕ್ಕಲಿಗರು ಗಂಗಡಿಕಾರ, ಮೊರಸು, ಕುಂಚಿಟಿಗ (ಇದರಲ್ಲಿ ಕುಂಚಿಟಿಗ ಲಿಂಗಾಯತ, ಕುಂಚಿಟಿಗ ಒಕ್ಕಲಿಗ ಬೇರೆ ಇದೆ) , ವೀರಶೈವರು ಪಂಚಮಸಾಲಿ, ಬಣಜಿಗ, ಸಾದರು, ಇತ್ಯಾದಿ, ಇತ್ಯಾದಿ.  ಇಂದು ಉಳಿಗಮಾನ್ಯದ ಜೊತೆ ಚುನಾಯಿತ ಪ್ರತಿನಿಧಿಗಳ ವಂಶಪಾರಂಪರ್ಯ ಸೇರಿಕೊಂಡಿದೆ. ಈ ಉಳಿಗಮಾನ್ಯದ ಅಮಲು, ದಲಿತರನ್ನು ಕೂಡಾ ಬಿಟ್ಟಿಲ್ಲ. ದಲಿತರು ಎಡಗೈ, ಬಲಗೈ ಎಂದು ವಿಭಜನೆಗೊಂಡಿದ್ದಾರೆ.

ಹಾಗಾಗಿಯೇ ರಾಜಕಾರಣಿಯ ಮಗನನ್ನೇ ನಾವು ಅವನ ಉತ್ತರಾಧಿಕಾರಿಯಾಗಿ "ಚುನಾಯಿಸು"ವುದು. ಇಲ್ಲದಿದ್ದರೆ ನಮ್ಮ ಜಾತಿಯವನನ್ನೇ ನಮ್ಮ "ಪ್ರತಿನಿಧಿ"ಯಾಗಿ ಬಯಸುವುದು. ಸರ್ಕಾರಿ ಉದ್ಯೋಗಿ ಸತ್ತರೆ ಆತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡುವುದು ವ್ಯವಸ್ಥೆಯಲ್ಲಿಯೇ ಒಪ್ಪಿತವಾಗಿದೆ.  ಅದೇ ರೀತಿ "ಮೀಸಲಾತಿ" ಕೂಡಾ ಊಳಿಗಮಾನ್ಯ ಯಾ ವಂಶಪಾರಂಪರ್ಯದ ಹಕ್ಕಾಗಿ ಆಗಲೇ ಮೀಸಲಾತಿಯ ಸವಲತ್ತು ಪಡೆದುಕೊಂಡಿರುವವರ ಮಕ್ಕಳು ಕೂಡಾ ಅದು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ತಲೆಮಾರುಗಳಿಂದ  ಬಯಸುವುದು. 

ಇಂದು ಜಾತಿ ಗೌರವ, ಅಭಿಮಾನ, ಹೆಮ್ಮೆ, ಪ್ರೌಢಿಮೆಯ ಸಂಕೇತ! ಯಾವ ಜಾತಿ ನಾಶಕ್ಕಾಗಿ ಸ್ವಾಭಿಮಾನಿ ದ್ರಾವಿಡರು ಜಾತಿಸೂಚಕ ಕುಲನಾಮ / ಅಡ್ಡಹೆಸರುಗಳನ್ನುಬಹಿಷ್ಕರಿಸಿ ಇನಿಷಿಯಲ್ ಇಟ್ಟುಕೊಳ್ಳುವ ಚಳುವಳಿ ಆರಂಭಿಸಿದ್ದರೋ ಅದೇ ಜನನಾಯಕರ ಕುಲತಿಲಕರತ್ನಗಳು ಇಂದು ಅಸ್ಮಿತೆಯ ಹೆಸರಲ್ಲಿಅಹಂನಿಂದ  ಗೊಲ್ಲರು "ಯಾದವ", ದಲಿತರು "ಮೌರ್ಯ" ಮುಂತಪ್ಪು ಉತ್ತರ ಭಾರತೀಯ ವರಸೆಯ ಜಾತಿಪ್ರೌಢಿಮೆಯನ್ನು ಮೆರೆಯುತ್ತಿರುವರು!

ಇದೆಲ್ಲವೂ ಮೀಸೆ ತಿರುವಿ ದಬ್ಬಾಳಿಕೆ ಮಾಡಬೇಕೆಂಬ ಊಳಿಗಮಾನ ಮನಸ್ಥಿತಿ!  ಅವರು ಇಷ್ಟು ದಿನ ಮೆರೆದಿದ್ದರು, ಈಗ ನಾವು ಮೆರೆಯಬೇಕೆಂಬ ಊಳಿಗಮಾನ ಕೆಚ್ಚು.  ಶತಶತಮಾನಗಳಿಂದ ಬೇರೂರಿರುವ ಧರ್ಮ, ಜಾತಿಗಳನ್ನು ತಳುಕು  ಹಾಕಿಕೊಂಡಿರುವ ಊಳಿಗಮಾನ ಪದ್ದತಿಯನ್ನು, ಭಾರತ  ಕೇವಲ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವವಾದ ಮಾತ್ರಕ್ಕೆ ತೊರೆದುಕೊಳ್ಳುವುದು ಸಾಧ್ಯವೇ!

ಸಮಾಜಮುಖಿ ಲೇಖನ - ಸಂವಿಧಾನವನ್ನು ಬದಲಿಸಿದರೆ ತಪ್ಪೇನು?

ಎಲ್ಲ ಮಹಾನ್ ಚಿಂತನೆಗಳು, ಅವಿಷ್ಕಾರಗಳು ಆರಂಭದಲ್ಲಿ ಅಸಂಬದ್ಧ ಹಾಗೂ ಹಾಸ್ಯಾಸ್ಪದ ಎನ್ನಿಸುತ್ತವೆ. ಇದು ಭೂಮಿ ದುಂಡಾಗಿದೆ ಎಂದ ಗೆಲೆಲಿಯೋನಿಂದ ಹಿಡಿದು ಇಂದಿನ ವಿಡಿಯೋ ಫ಼ೊನುಗಳ ಅವಿಷ್ಕಾರಿಯವರೆಗೆ ಎಲ್ಲವೂ ಒಂದೊಮ್ಮೆ ಅಸಂಬದ್ಧವೆನಿಸಿತ್ತು. ಆದರೆ ನವ್ಯ ಭಾರತದಲ್ಲಿ ದಿಟವಾದ ಹತ್ತು ಹಲವಾರು ಅಸಂಬದ್ಧತೆಗಳು ಜನಪರ ಹೋರಾಟ, ಕಾನೂನು, ಶಾಸನಗಳಾಗುತ್ತ ಇಡೀ ದೇಶವನ್ನೇ ಅಸಂಬದ್ಧ ಅತಾರ್ಕಿಕ ಸಂಕೀರ್ಣ ವ್ಯವಸ್ಥೆ ಎನಿಸಿಬಿಡುತ್ತಿವೆ. ಉದಾಹರಣೆಗೆ ಸದ್ಯದ ಪ್ರಸ್ತುತ ಸಂಗತಿಗಳನ್ನು ಗಮನಿಸೋಣ.

ಸಂಪರ್ಕ ವ್ಯವಸ್ಥೆ - ವಾಹನಗಳ ನೋಂದಾವಣೆಯ ಭಾಗವಾಗಿ ಅಜೀವಪರ್ಯಂತ ರಸ್ತೆ ತೆರಿಗೆ ಕಟ್ಟಿದರೂ ರಸ್ತೆಗಳಿಗೆ ಟೋಲು ಹಾಕುವ ಪರಿ ಅಸಂಬದ್ಧವಾಗಬೇಕಿದ್ದು ಇಂದು ಸರ್ಕಾರದ ಅಧಿನಿಯಮವಾಗಿದೆ. ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಈ ಅಸಂಬದ್ಧ ನಿಯಮ ರಾಜ್ಯ ಹೆದ್ದಾರಿಗಳಿಗೂ ಅನ್ವಯವಾಗಲಿದೆ. ರಾಜ್ಯದ ಅನೇಕ ಹೆದ್ದಾರಿಗಳಲ್ಲಿ ಈಗಾಗಲೇ ಟೋಲ್ ಬೂತುಗಳು ಕಟ್ಟಲ್ಪಟ್ಟಿದ್ದು ಸದ್ಯದಲ್ಲೇ ಟೋಲ್ ಪಾವತಿಸಬೇಕಾಗುತ್ತದೆ. ಇದೇ ಮಾದರಿಯಾಗಿ ಮುಂದೆ ಜಿಲ್ಲಾ ಹೆದ್ದಾರಿಗಳಿಂದ ನಿಮ್ಮ ಮನೆಯ ರಸ್ತೆಗಳಿಗೂ ಬರಬಹುದು. ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಸಂಚಾರ ಸ್ವಾತಂತ್ರ್ಯಕ್ಕೇ ಸಂಚಕಾರ ಬಂದಿದ್ದರೂ ಅದು ಒಪ್ಪಿತ! ಸಾರಿಗೆ ಸಮಯದಲ್ಲೇನಾದರೂ ಉಳಿತಾಯವಾಗಿದೆಯೇ? ನನಗಂತೂ ಕಂಡಿಲ್ಲ.

ಆರೋಗ್ಯ - ಪ್ರಧಾನಿ ಇಂದಿರಾಗಾಂಧಿ 35 ವರ್ಷಗಳ ಹಿಂದೆಯೇ ಭಾರತ ಕುಷ್ಠ ರೋಗ ಮುಕ್ತ ಎಂದು ಘೋಷಿಸಿದ್ದರು. ಕಳೆದ ವಾರ ಬೆಂಗಳೂರಿನಲ್ಲೇ 1200 ಹೊಸ ಕುಷ್ಠ ರೋಗಿಗಳು ಪತ್ತೆಯಾಗಿದ್ದಾರೆ. ಬೇರೆಲ್ಲೆಡೆ ಗಾಳಿಯಂತೆ ಬೀಸಿ ಹೋದ ಡೆಂಗ್ಯೂ, ಚಿಕೂನ್ ಗುನ್ಯಾ, ಭಾರತದಲ್ಲಿ ಮಾತ್ರ ಖಾಯಂ ಬಿಡಾರ ಹೂಡಿವೆ.

ಕಾನೂನು - ದ್ವಿಪತ್ನಿತ್ವ ಕಾನೂನು ರೀತ್ಯ ಒಂದು ಅಪರಾಧ. ಆದರೆ ಕಾನೂನು ಇದನ್ನು ಕೇವಲ ದ್ವಿಪತ್ನಿತ್ವಕ್ಕೊಳಗಾದ ವ್ಯಕ್ತಿ ಮಾತ್ರ ಪ್ರಶ್ನಿಸಬೇಕು ಎನ್ನುತ್ತದೆ, ದ್ವಿಪತ್ನಿತ್ವದ ವ್ಯಕ್ತಿ ಸಾರ್ವಜನಿಕ ಸೇವೆಯಲ್ಲಿದ್ದರೂ ಕೂಡ. ಇದು ಅಸಂಬದ್ಧವಲ್ಲವೇ? ಮಹಿಳಾ ಶೋಷಣೆಗಳನ್ನು ಹತ್ತಿಕ್ಕಲು ಮಾಡಿದ ಕಾನೂನು ಸರ್ವಾಧಿಕಾರಿ ಧೋರಣೆಯ ಏಕಪಕ್ಷೀಯವಾಗಿ ಪುರುಷ ವಿರೋಧಿ ಕಾನೂನಾಗಿದೆ. ಇದು ಸೌದಿಯಲ್ಲಿರುವಂತಹ ಜಿಹಾದಿ ಕಾನೂನಿನಂತಿದೆ.

ಇಂತಿಷ್ಟು ವರ್ಷದ ಹಳೆಯ ವಾಹನಗಳನ್ನು ಬಹಿಷ್ಕರಿಸುವುದು ಕೂಡ ಇಂತಹ ಮೂರ್ಖತನದ ಪರಮಾವಧಿ. ವಾಹನ ಸಧೃಢವಾಗಿದೆಯೆಂದು ಪ್ರಮಾಣೀಕರಿಸಿ ಎನ್ನುವುದನ್ನು ಬಿಟ್ಟು ಬಹಿಷ್ಕರಿಸುವುದು, ಬಯಲುಶೌಚವನ್ನು ನಿರ್ಮೂಲನೆ ಮಾಡಲಾಗದ್ದಕ್ಕೆ ಶೌಚವನ್ನೇ ಬಹಿಷ್ಕರಿಸಿದಂತಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಬಹುಚರ್ಚಿತ ವೀರಶೈವ/ಲಿಂಗಾಯತ, ಶಬರಿಮಲೆ, ಮೀಟೂ, ಪಕ್ಷಮೈತ್ರಿ, ಇತ್ಯಾದಿ - ಈ ವಿಷಯಗಳ ಕುರಿತು ಸಾಕಷ್ಟು ತಿಳಿದುಕೊಂಡಿರುತ್ತೀರಿ. ಹಾಗಾಗಿ ಇವುಗಳ ಉಲ್ಲೇಖ ಮಾತ್ರ ಸಾಕು.

ಈಗ ಈ ಎಲ್ಲಾ ಸಂಗತಿಗಳಲ್ಲಿ ಯಾವುದು ಜನಪರ ಯಾವುದು ಪ್ರಚಾರಪರ?

ವೀರಶೈವ/ಲಿಂಗಾಯತ, ಶಬರಿಮಲೆ, ಮೀಟೂ, ಪಕ್ಷಮೈತ್ರಿ, ಇತ್ಯಾದಿಗಳು ತರ್ಕಬದ್ಧ ಮೂಲಭೂತ ಹೋರಾಟಗಳೆನಿಸಿ, ನೀರಿನ ಬವಣೆ, ವಿದ್ಯುತ್ ಅಭಾವ, ಅವೈಜ್ಞಾನಿಕ ಕೃಷಿಉತ್ಪನ್ನಗಳ ಬೆಲೆ, ಇನ್ಫಲೇಷನ್, ಹವಾಮಾನ ವೈಪರೀತ್ಯ, ಶೈಕ್ಷಣಿಕ ದೊಂಬರಾಟ, ಓಲೈಕೆ/ಹಾರೈಕೆಯ ರಾಜಕಾರಣ, ರೋಗಗಳು, ಭ್ರಷ್ಟಾಚಾರ ಇವೆಲ್ಲವೂ ಅಸಂಬದ್ಧ ಹಾಸ್ಯಾಸ್ಪದದ ಯಕಶ್ಚಿತ್ ಸಂಗತಿಗಳಾಗಿವೆ.

ಭಾರತ ವಿಶ್ವಗುರು, ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ, ಭಾರತ ಪ್ರಕಾಶಿಸುತ್ತಿದೆ, ಗರೀಬಿ ಹಠಾವೋ, ಕುಷ್ಠ ರೋಗ ಮುಕ್ತ, ಪೋಲಿಯೋ ಮುಕ್ತಗಳೆಲ್ಲವೂ ಭವ್ಯವಾದ ಉದ್ಘೋಷಗಳಲ್ಲಿವೆ!

ಸಾಕಷ್ಟು ಕಪ್ಪುಹಣ ಭಾರತದಿಂದಾಚೆ ರವಾನೆಯಾಗುವುದು  2003 ರಿಂದ ಸಾಕಷ್ಟು ನಿಂತಿದೆ. ಇದಕ್ಕೆ ಕಾರಣ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆದ ಕೆಲ ಗಟ್ಟಿ ಬ್ಯಾಂಕಿಂಗ್ ನಿಯಮಗಳ ಬದಲಾವಣೆಗಳು. ಅಂದರೆ ಆ ಕಪ್ಪುಹಣ ಅಂದಿನಿಂದ ಭಾರತದ ರಿಯಲ್ ಎಸ್ಟೇಟ್ ಉದ್ದಿಮೆಯನ್ನು ಹೊಕ್ಕಿದೆ. ಭಾರತದ ರಿಯಲ್ ಎಸ್ಟೇಟ್ ಬೆಲೆ ಸುಯ್ಯನೇ ಮೇಲೆ ಹೋಗುತ್ತಿರುವುದು ಕಪ್ಪುಹಣಕ್ಕೆ ಉದ್ಘೋಷಗಳು ಕೊಟ್ಟ ಮೆರುಗು ಲೇಪನದಿಂದ. ಜನಸಂಖ್ಯೆಯ ಏಕೈಕ ಕಾರಣಗಳಿಂದಾಗಿ ರಿಯಲ್ ಎಸ್ಟೇಟ್ ಬೆಲೆ ನಿಯಂತ್ರಣದಲ್ಲಿದೆಯೇ ಹೊರತು ಇಲ್ಲದಿದ್ದರೆ ಎಂದೋ ಪಾತಾಳ ಸೇರಿರುತ್ತಿತ್ತು.

ಇನ್ನು ಈ ಎಲ್ಲ ಅಸಂಬದ್ಧಗಳಿಗೆ ನಮ್ಮ ಪ್ರಗತಿಪರರು ಹೋರಾಟದ ಆಯಾಮ ಕೊಟ್ಟಿದ್ದಾರೆ. ಉದ್ಘೋಷಗಳ ಪರಿಯಲ್ಲೇ ಲಿಂಗಾಯತ-ವೀರಶೈವ, ಆಯ್ದ ಮೀಟೂ (ಜಾಗತಿಕ ಮೀಟೂ ಚಳುವಳಿಯ ಮೂಲೋದ್ದೇಶ ಅಪ್ರಾಪ್ತರ ಮೇಲಾದ ಲೈಂಗಿಕ ಶೋಷಣೆಯನ್ನು ಬಯಲು ಮಾಡುವುದು, ವೃತ್ತಿಗಳಲ್ಲಿ ನಡೆವ ಲೈಂಗಿಕ ಶೋಷಣೆಯನ್ನಲ್ಲ. ಅದಕ್ಕೆ ವೃತ್ತಿಪರತೆಯಲ್ಲಿಯೇ ಪರಿಹಾರವಿದೆ), ಅರ್ಬನ್ ನಕ್ಸಲರ ಬಂಧನಕ್ಕೆ ತುರ್ತು ಪರಿಸ್ಥಿತಿಯ ಮೆರುಗು ಕೊಟ್ಟದ್ದು, ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಎನ್ನುತ್ತಾ ಅಯ್ಯಪ್ಪನ ದೇವಸ್ಥಾನಕ್ಕೆ ಅಂಟಿಕೊಂಡದ್ದು, ಇತ್ಯಾದಿ, ಇತ್ಯಾದಿ "ಉದ್ಘೋಷ ಹೋರಾಟ"ಗಳಿಂದ ಹೋರಾಟದ ಮೂಲಭೂತ ಉದ್ದೇಶವನ್ನೇ ಬದಲಾಯಿಸಿಬಿಟ್ಟಿದ್ದಾರೆ.

ಗಂಭೀರ ಗಾಬರಿ ಹುಟ್ಟಿಸುವುದು ಈ ಎಲ್ಲ ಅಸಂಬದ್ಧತೆಗಳ "ಉದ್ಘೋಷ ಹೋರಾಟ"ಗಳ ಮುಂಚೂಣಿಯಲ್ಲಿ ಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರರುಗಳಿರುವುದು! ಹಿಂದಿದ್ದ ಇದೇ ಹಿನ್ನೆಲೆಯ ಕುವೆಂಪು, ಅಡಿಗ, ಅನಂತಮೂರ್ತಿ, ಲಂಕೇಶ್ ಮುಂತಾದವರ ತರ್ಕಬದ್ಧ ವೈಚಾರಿಕತೆಗೂ ಇಂದಿನ ಪ್ರೊಫೆಸರರುಗಳ ಅಸಂಬದ್ಧ ಪ್ರಲೋಭನೆಗಳಿಗೂ ಇರುವ ವಿಪರ್ಯಾಸ ಅಜಗಜಾಂತರ!

ಯಾವುದೇ ಘಟನೆಗೆ ಪ್ರತಿಭಟಿಸಿ ಪ್ರತಿಕ್ರಿಯಿಸುವುದನ್ನೇ ಹೋರಾಟ ಮಾಡಿಕೊಂಡಿದ್ದಾರೆ.
ಇವೆಲ್ಲವೂ ಟ್ರೋಲು, ಕಾಲೆಳೆಯುವಿಕೆಯಾಗುತ್ತವೇ ಹೊರತು ಹೋರಾಟಗಳಲ್ಲ.

ಪದೇ ಪದೇ ಕಮ್ಯುನಿಸ್ಟ್ ಉಲ್ಲೇಖಿಸುವ ಈ ಉದಾರವಾದಿಗಳು ಯಾವ ಕಮ್ಯುನಿಸ್ಟ್ ರಾಷ್ಟ್ರವನ್ನು ಕಂಡಿದ್ದಾರೆ?  ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು ಪ್ರಜಾಪೀಡಕವಾಗಿ, ಸರ್ವಾಧಿಕಾರವಾಗಿ, ಏಕವ್ಯಕ್ತಿ ಆರಾಧಕವಾಗಿ ಪರಿವರ್ತಿತಗೊಂಡಿರುವುದು ಸಾರ್ವಕಾಲಿಕ ವಾಸ್ತವ ಸತ್ಯ! ಉದಾರವಾದಿಗಳನ್ನು ಸೆರೆಮನೆಗೆ ತಳ್ಳಿ ಅತ್ಯಂತ ಹಿಂಸಾತ್ಮಕ ಕಿರುಕುಳ ನೀಡಿ ಕೊಲೆಗೈಯುವುದರಲ್ಲಿ ಕಮ್ಯುನಿಸ್ಟ್ ಸರ್ಕಾರಗಳು ಮುಂಚೂಣಿಯಲ್ಲದ್ದವು, ಇವೆ.

ಇನ್ನು ಇವರ ಸಂವಿಧಾನ ತಿದ್ದುಪಡಿ ಹೋರಾಟದ ಕುರಿತು, ಯಾವುದೇ ದೇಶದ ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು. ಕಾಲಕ್ಕನುಗುಣವಾಗಿ ಹೊಸತಾಗುತ್ತ "ಬದಲಾಗಲೆಂಬ" ಉದ್ದೇಶಕ್ಕಾಗೆ ರಚಿಸಲ್ಪಟ್ಟಿವೆ. ನ್ಯಾಯಾಂಗ, ಶಾಸಕಾಂಗ ಮತ್ತು ಆಡಳಿತ ವರ್ಗ ಸಂವಿಧಾನದ ಭಾಗಗಳನ್ನು ಜಡವಾಗಿರಿಸದೆ ವರ್ತಮಾನದ ಅವಶ್ಯಕತೆಗೆ ತಕ್ಕಂತೆ "ಬದಲಾಯಿಸಿ" ಕ್ರಿಯಾಶೀಲವಾಗಿರಿಸಬೇಕೆಂಬುದೇ ಸಂವಿಧಾನ ರಚನೆಯ ಮೂಲೋದ್ದೇಶ. ಜೀವಂತ ಸಮಾಜಕ್ಕೆ ತಕ್ಕಂತೆ ವಿಕಸಿಸುವ ವೈಜ್ಞಾನಿಕ ಅನುಶಾಸನವಿರಬೇಕೇ ಹೊರತು ಶಾಸ್ತ್ರಪುರಾಣಗಳಂತಹ ಜಡಗ್ರಂಥವಲ್ಲ!

ಊಳಿಗಮಾನ್ಯ ವ್ಯವಸ್ಥೆ, ಜಾತೀಯತೆಯನ್ನು ವಿರೋಧಿಸಿ ನಡೆದ ಹೋರಾಟಗಳ ಸಿದ್ದಾಂತದ ಇತಿಹಾಸವನ್ನು ಮರೆತು ಊಳಿಗಮಾನ್ಯ ಪ್ರಜಾಪ್ರಭುತ್ವವನ್ನು ಮಾನ್ಯ ಮಾಡುತ್ತಾ, ಜಾತೀಯತೆಯನ್ನು ಅಸ್ಮಿತೆಯ ಹೆಸರಲ್ಲಿ ಬೆಂಬಲಿಸುತ್ತಿರುವ ಈ "ಉದರವಾದಿ"ಗಳಿಂದ "ಉದಾರವಾದ"ವನ್ನು ಬಿಡಿಸಿಕೊಳ್ಳಬೇಕಾದ ಅಸಂಬದ್ಧ ತುರ್ತು ಪರಿಸ್ಥಿತಿ ಇದೆ. 

ಜಾತ್ಯಾತೀತ ಅಮೆರಿಕಾದಲ್ಲಿ ಜಾತೀಯತೆ


ಜಾತಿ ಕೊಡುವಷ್ಟು ರೋಮಾಂಚನವನ್ನು ಯಾವ ನೀತಿಯೂ ಕೊಡುವುದಿಲ್ಲ! ರೈತ ಮುಖಂಡ ಪುಟ್ಟಣ್ಣಯ್ಯ

ರೈತ ಮುಖಂಡರಾದ ಪುಟ್ಟಣ್ಣಯ್ಯನವರ ಮೇಲಿನ ಮಾತು ಅತ್ಯಂತ ಮಾರ್ಮಿಕವಾಗಿದೆ.  ಈ ಜಾತೀಯತೆ ಎಂಬುದು ಭಾರತದಲ್ಲಷ್ಟೇ ಅಲ್ಲದೇ  ಭಾರತೀಯರಿರುವ ವಿಶ್ವದೆಲ್ಲೆಡೆ ಪಸರಿಸಿದೆ.  ’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ? ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರ್‍ಅಡು ಕೊನರಿ ಫಲವಾಗಬಲ್ಲುದೇ? ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ? ತೀರ್ಥದಲೊಂದು ಗಾರ್ದಭನಿದ್ದರೇನು, ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು, ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು, ಸದ್ಭಕ್ತನಾಗಬಲ್ಲನೇ?’ ಎಂಬ ವಚನದಂತೆ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು, ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ, ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ. ಹಾಗೆಯೇ ನನಗೂ ಕೂಡ ಅನೇಕ ಭಾರತೀಯ ಮೂಲದ ಸ್ನೇಹಿತರಿದ್ದಾರೆ. ಅವರಲ್ಲಿ ಅನೇಕರು ಹೆಚ್ಚಿನದಾಗಿ ಆಂಧ್ರಪ್ರದೇಶದವರಾಗಿದ್ದಾರೆ. ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು. ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ. ಹೀಗಿದ್ದ ಸಂಘ/ಸಂಸ್ಥೆಗಳಲ್ಲಿ ತಮ್ಮ ತಮ್ಮ ಪ್ರೋತ್ಸಾಹಕರ ಸಂಖ್ಯೆ ಏರಿದಂತೆ ನಿಧಾನವಾಗಿ ಭಾರತದ ಇತರೆ ಸಂಸ್ಕೃತಿಗಳಾದ ಜಾತೀಯತೆ, ಗುಂಪುಗಾರಿಕೆ, ರಾಜಕೀಯ, ಪಕ್ಷಭೇದಗಳು ಏರುತ್ತಿವೆ.

ವೈಯುಕ್ತಿಕವಾಗಿ ಇಂತಹ ಯಾವುದೇ ಸಂಘಗಳೊಂದಿಗೆ ಸಂಬಂಧವಿರದ ನನಗೆ ಪ್ರತ್ಯಕ್ಷ ಅನುಭವವಾಗಿರದಿದ್ದರೂ ಪರೋಕ್ಷವಾಗಿ ಆಗಿದೆ. ಕೆಲವು ವರ್ಷಗಳ ಹಿಂದೆ ಕೆಲಸದ ನಿಮಿತ್ತ ಪ್ರತಿ ವಾರವೂ ನ್ಯೂಯಾರ್ಕ್ ನಗರಕ್ಕೆ ಹೋಗುತ್ತಿದ್ದ ನಾನು, ಕೆಲವು ವರ್ಷಗಳ ಹಿಂದೆ ಒಂದು ಬೇಸಿಗೆಯಲ್ಲಿ ನನ್ನ ತೆಲುಗು ಮಿತ್ರರನ್ನು ಕಾಣುವ ಎಂದು ಒಂದು ವೀಕೆಂಡ್ ಅಲ್ಲಿಯೇ ಉಳಿದುಕೊಂಡೆನು. ಅವರೆಲ್ಲ ನನ್ನನ್ನು "ಈ ದಿನ ಆಂಧ್ರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬುನಾಯ್ಡುಗೆ ಒಂದು ಸನ್ಮಾನವನ್ನು ಮಾಡುತ್ತಿದ್ದೇವೆ ನಡೆ ಹೋಗುವ" ಎಂದು ಕರೆದುಕೊಂಡು ಹೋದರು. ಎಲ್ಲಿ ನೋಡಿದರೂ ಹಳದಿ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದ ಜನರು ಕಾಣುತ್ತಿದ್ದರು. ಯಾವುದೋ ಒಂದು ಜಾತಿಯವರು ವೃತಗಳನ್ನೋ ಹಬ್ಬಗಳನ್ನೋ ಆಚರಿಸುವಾಗ ಹಳದಿ ಬಟ್ಟೆ ತೊಡುವುದನ್ನು ಬೆಂಗಳೂರಿನಲ್ಲಿ ನೋಡಿದ್ದೆನು. ಆ ರೀತಿಯ ವೃತವನ್ನು ಈ ಹಳದಿ ಪಟ್ಟಿ ಜನರು ಆಚರಿಸುತ್ತಿರಬಹುದೆಂದುಕೊಂಡು ಸುಮ್ಮನಾದರೂ ಅದು ನನ್ನನ್ನು ಭಾಧಿಸುತ್ತಿದ್ದಿತು. ಪಕ್ಕದಲ್ಲಿದ್ದ ನನ್ನ ಸ್ನೇಹಿತನನ್ನು ಮೆಲ್ಲಗೆ ಕೇಳಿದಾಗ ಅದು ತೆಲುಗುದೇಶಂ ಪಕ್ಷದ ಬಣ್ಣವೆಂದು ಹೇಳಿದನು! ನಂತರ ತಿಳಿದುದುದೇನೆಂದರೆ ಅದೊಂದು ತೆಲುಗು ಕಂ ದೇಶಂ ಸಭೆಯೆಂದೂ, ಚಂದ್ರಬಾಬುನಾಯ್ಡು ತಮ್ಮ ಪಕ್ಷಕ್ಕೆ ಅಮೇರಿಬೆಂಬಲಿಗರಿಂದ ಹಣ ಶೇಖರಿಸಲು ಒಂದು ತಿಂಗಳ "ಫಂಡ್ ರೈಸಿಂಗ್" ಕ್ಯಾಂಪೇನ್ ಗೆ ಬಂದಿರುವುದಾಗಿಯೂ, ಮತ್ತವರಿಗೆ ಇಲ್ಲಿ ತಿರುಗಲು ಒಬ್ಬ ಅಭಿಮಾನಿ ಚಾರ್ಟರ್ಡ್ ಫ್ಲೈಟ್ ಅನ್ನು ಇಪ್ಪತ್ತು ದಿನಗಳಿಗೆ ಕೊಡಿಸಿರುವುದಾಗಿಯೂ ಮತ್ತು ಈ ರೀತಿಯ ಸಾಕಷ್ಟು ಅಭಿಮಾನಿಗಳು ಟಿಕೇಟ್ ಆಕಾಂಕ್ಷಿಗಳಾಗಿ, ರಾಜ್ಯಪ್ರಶಸ್ತಿ ಆಕಾಂಕ್ಷಿಗಳಾಗಿ, ಇಲ್ಲವೇ ಮತ್ಯಾವುದೋ ಉದ್ದೇಶದ ಆಕಾಂಕ್ಷಿಗಳಾಗಿ ಸಾಕಷ್ಟು ಬೆಂಬಲವನ್ನು ನಾಯ್ಡುಗಳಿಗೆ ತೋರುತ್ತಾರಂತೆ! ಅದಕ್ಕೆ ಪೂರಕವಾಗಿ ಆ ಸಭೆಯಲ್ಲಿ ಒಬ್ಬ ಉದ್ಯಮಿ, ಬಹುಶಃ ಟಿಕೆಟ್ ಆಕಾಂಕ್ಷಿ ಇರಬಹುದೇನೋ, ಒಂದು ಚಿನ್ನದ ಗದೆ ಮತ್ತು ಕಿರೀಟವನ್ನು ನಾಯ್ಡುಗೆ ಅರ್ಪಿಸಿದನು.

ನಾಯ್ಡುರವರಿಗೆ ಏನೆನ್ನಿಸಿತೋ ಕೂಡಲೇ ತಮ್ಮ ಪಕ್ಕದಲ್ಲಿ ಕೂತಿದ್ದ ಎಡಿಸನ್ ಸಿಟಿ ಮೇಯರ್ ಅವರಿಗೆ ಆ ಕಿರೀಟವನ್ನು ತೊಡಿಸಿ, ಗದೆಯನ್ನು ಕೂಡ ಅವರ ಹೆಗಲಿಗೇರಿಸಿದರು! ಇದರಿಂದ ಆನಂದಗೊಂಡ ಎಡಿಸನ್ ಮೇಯರ್ ಆ ಕೊಡುಗೆಗಳನ್ನು ತನ್ನ ಮನೆಗೆ ಹೊತ್ತೊಯ್ದರೆ, ಕೊಟ್ಟ ಉದ್ಯಮಿ ಪೆಚ್ಚಾಗಿದ್ದ! ಅಂದು ನನಗೆ ಅಪ್ಪಟ ಭಾರತದ ಒಂದು ರಾಜಕೀಯ ಸಭೆಯ ಅನುಭವ ಬಹುಕಾಲದ ನಂತರ ಆಗಿತ್ತು. ಮರುದಿನ ಮೋಟಾರ್ ಸೈಕಲ್ ರ್‍ಯಾಲಿ ಕೂಡ ಇರುವುದೆಂದೂ, ರ್‍ಯಾಲಿಯ ನಂತರ ಉಚಿತ "ವೈನ್ ಅಂಡ್ ಡೈನ್" ಪಾರ್ಟಿ ಇರುವುದೆಂದನು. ಸಾಮಾನ್ಯವಾಗಿ ಮೋಟಾರ್ ಸೈಕಲ್ಲುಗಳನ್ನು ಹೊಂದಿರದ ಇಲ್ಲಿನ ಭಾರತೀಯರಲ್ಲಿ ಅದೆಷ್ಟು ಮಂದಿ ಆ ರ್‍ಯಾಲಿಗೆ ಬರುವರೋ ಎಂದು ನಾನು ಸಂದೇಹವನ್ನು ವ್ಯಕ್ತಪಡಿಸಿದ್ದಕ್ಕೆ, ನನ್ನ ಮಿತ್ರನು ರ್‍ಯಾಲಿಗಾಗಿಯೇ ಇಲ್ಲಿನ ಮೋಟಾರ್ ಸೈಕಲ್ ಕ್ಲಬ್ಬುಗಳನ್ನು ಬುಕ್ ಮಾಡಿಕೊಂಡಿದ್ದು, ಈ ರ್‍ಯಾಲಿಗೆ ಬರುವವರೆಲ್ಲಾ ಬಿಳಿ/ಕರಿಯ ಅಮೇರಿಕನ್ನರೆಂದನು! ಒಂದು ರೀತಿ ಭಾರತೀಯ ಸಿನೆಮಾಗಳಲ್ಲಿ ಬಿಳಿ ಸಹನಟ/ನಟಿಯರ ನೃತ್ಯಗಳಿರುವಂತೆ! ಭಾರತದ ಚುನಾವಣಾ ಸಮಯದಲ್ಲಿ ಹೆಂಡ, ಬಿರ್ಯಾನಿ ಹಂಚುವುದರ ಸುಧಾರಿತ ಕ್ರಮದಂತೆ, ಅಂದಿನ ಸಭೆಯಲ್ಲಿ ಕೂಡಾ ಉಚಿತ ವೈನ್ ಇದ್ದಿತು!

ಮತ್ತೊಮ್ಮೆ ಮತ್ತದೇ ಸ್ನೇಹಿತರನ್ನು ಕಾಣಲು ಮತ್ತೆ ನ್ಯೂಜೆರ್ಸಿಗೆ ಹೋಗಿದ್ದೆನು. ಈ ಬಾರಿ ತೆಲುಗು ನಟ ಬಾಲಕೃಷ್ಣನ ಯಾವುದೋ ಸಿನಿಮಾ ಇಲ್ಲಿಯೂ ಬಿಡುಗಡೆಯಾಗಿ ಅದರ ಪ್ರಚಾರಕ್ಕೆ ಖುದ್ದು ಬಾಲಕೃಷ್ಣ ಬಂದಿದ್ದನು. ಅವನ ಸಿನಿಮಾ ಬಿಡುಗಡೆಯ ದಿನ ಮತ್ತದೇ ಹಳದಿ ಪಟ್ಟಿಯ ಅಭಿಮಾನಿಗಳು ಹಳದಿ ಬಾವುಟಗಳನ್ನ್ಹಿಡಿದು ಬೆಂಬಲವನ್ನು ವ್ಯಕ್ತಪಡಿಸಿದರೆ, ಚಿರಂಜೀವಿ ಅಭಿಮಾನಿಗಳು ಕಪ್ಪು ಪಟ್ಟಿ, ಬಾವುಟಗಳನ್ನ್ಹಿಡಿದು ವಿರೋಧವನ್ನು ತೋರಿಸಿದ್ದರು. ವಿಚಾರಿಸಲಾಗಿ ಕಮ್ಮ ಜಾತಿಯ ಬಾಲಕೃಷ್ಣನನ್ನು ಕಾಪು ಜಾತಿಯವರು ವಿರೋಧಿಸುತ್ತಿದ್ದಾರೆ ಎಂದು ತಿಳಿಯಿತು. ಅದಕ್ಕೂ ಮುನ್ನ ಚಿರಂಜೀವಿಯ ಒಂದು ಚಿತ್ರಕ್ಕೂ ಇದೇ ಮರ್ಯಾದೆ ಸಿಕ್ಕಿತ್ತಂತೆ!

ಇಲ್ಲಿನ ತೆಲುಗು ಸಂಘಗಳು ತಾನಾ, ಬಾನಾ ಗಾನಾಗಳೆಂದು ಕಮ್ಮ, ರೆಡ್ಡಿ, ಕಾಪು ಜಾತಿಗಳಿಗನುಗುಣವಾಗಿ ಒಂದೊಂದು ತಲೆಯೆತ್ತಿವೆ!

ಹಾಗೆಯೇ ಆಂಧ್ರದಲ್ಲಿ ಚುನಾವಣೆಗಳಾದರೆ ಇಲ್ಲಿನ ತೆಲುಗರ ಬಿ.ಪಿ ಏರುತ್ತದೆ. ಆ ಬಿ.ಪಿ.ಯನ್ನು ಇಳಿಸಲು ಹಳದಿ ಪಟ್ಟಿ ಕಟ್ಟಿಕೊಂಡು ಕ್ಯಾಲಿಫೋರ್ನಿಯಾದ ಉದ್ದಗಲಕ್ಕೂ ಸೈಕಲ್ ಹೊಡೆಯುತ್ತಾರೆ!

ಇದು ಮೇಲ್ನೋಟಕ್ಕೆ ಸಿನಿಮಾ ಅಭಿಮಾನಿಗಳಂತೆ ಕಂಡರೂ ಇಲ್ಲಿ ಜಾತಿಗಳೇ ಪ್ರಮುಖವಾಗಿವೆ. ಕಮ್ಮ ಜಾತಿಯ ಪ್ರಾಬಲ್ಯವನ್ನು ಮುರಿಯಲು ಚಿರಂಜೀವಿ ಕಾಪು ಜನಗಳನ್ನು ಬೆಂಬಲಿಸಿ ರಾಜಕೀಯ ಎಂಟ್ರಿ ಆಗುತ್ತಿದ್ದಂತೆಯೇ ಈ ಜಾತೀಯತೆಯ ವಿಷ ಇಲ್ಲಿನ ತೆಲುಗು ಮೂಲದ ಭಾರತೀಯರನ್ನು ಬಹುವಾಗಿ ಆವರಿಸಿಕೊಂಡು ಬಿಟ್ಟಿತ್ತು. ಇದು ಕೇವಲ ತೆಲುಗರ ಕುರಿತಾಗಿ ಅಷ್ಟೇ ಅಲ್ಲ, ಉತ್ತರ ಭಾರತೀಯರಲ್ಲಿ ಇದು ಇನ್ನೂ ಭಯಂಕರವಾಗಿದೆ. ಅಮೇರಿಕಾದಲ್ಲಿದ್ದರೂ ಅವರು ತಮ್ಮ ರಾಜ್ಯದ ಅನ್ಯಜಾತಿಯವನಲ್ಲಿ ಸ್ನೇಹವನ್ನೂ ಮಾಡುವುದಿಲ್ಲ! ಬಿಹಾರೀ ಬ್ರಾಹ್ಮಣರು ಬನಿಯಾ ಜನಗಳನ್ನು ಸ್ವಲ್ಪ ದೂರವೇ ಇಡುತ್ತಾರೆ. ನನ್ನ ಆಪ್ತ ಬಿಹಾರೀ ಸ್ನೇಹಿತನ ಮನೆಗೆ ಅವರ ಸಂಬಂಧಿ ಶತ್ರುಘ್ನ ಸಿನ್ಹಾರವರು ಬಂದಾಗ ನಡೆದ ಗುಂಡಿನ ಪಾರ್ಟಿಯಲ್ಲಿ ಈ ವಿಷಯ ನನಗೆ ತಿಳಿಯಿತು. ಬಿಹಾರಿ ಸಂಘಗಳಲ್ಲಿ ಇದು ಇನ್ನೂ ವಿಕೋಪಕ್ಕೆ ಹೋಗುತ್ತದೆಂದು ನನ್ನ ಸ್ನೇಹಿತನು ತಿಳಿಸಿದನು.  ಅದೇ ರೀತಿ ಪಂಜಾಬಿ ಮೂಲದ ಸಿಖ್ಖರ ಗುರುದ್ವಾರಗಳಲ್ಲಿ ಒಳಪಂಗಡಗಳ ನಡುವೆ ಹೊಡೆದಾಟಗಳೇ ನಡೆದಿವೆ.

ಇದೆಲ್ಲವನ್ನು ಅರಿಯದೇ ನೋಡುವ ಇತರೇ ಅಮೇರಿಕನ್ನರು ಈ ಭಾರತೀಯರುಗಳೇ ವಿಚಿತ್ರ ಎಂದು ಮೂಗುಮುರಿಯುತ್ತಾರೆ! ಅದಕ್ಕೆ ಇರಬೇಕು, ಅನೇಕ ವಿದೇಶೀಯರು ಭಾರತೀಯರೆಂದರೆ ಪುಂಗಿ ನುಡಿಸಿ ಹಾವಾಡಿಸುವವರು, ಕೋತಿಗಳನ್ನು ಕುಣಿಸುವವರು, ಇಲಿ ಹಿಡಿದು ತಿನ್ನುವವರು, ಕತ್ತೆ, ನಾಯಿಗಳೊಂದಿಗೆ ಮುದುವೆಯಾಗುವವರು (ಮಳೆಯಾಗಲೆಂದೋ, ಪಾಪ ಪರಿಹಾರದ ನಿಮಿತ್ತವಾಗಿಯೋ ಇರಬಹುದು) ಇನ್ನೂ ಏನೇನೋ ವಿಚಿತ್ರ ಭಾರತೀಯ ಸುದ್ದಿಗಳನ್ನು ಕೇಳಿ, ಅದಕ್ಕೆ ತದ್ವಿರುದ್ಧವಾಗಿ ಇಲ್ಲಿನ ಭಾರತೀಯರು ಶುದ್ಧ ಸಸ್ಯಾಹಾರಿಗಳಾಗಿಯೋ, ಹಂದಿ/ದನವನ್ನು ತಿನ್ನದೆಯೋ, ಕತ್ತೆ ನಾಯಿಗಳನ್ನು ಬಿಡಿ, ಇಲ್ಲಿನ ಬಿಳಿ ಹುಡುಗಿಯರನ್ನೂ ಪರಿಗಣಿಸದೇ ಭಾರತೀಯರನ್ನೇ ಮದುವೆಯಾಗುವ ಭಾರತೀಯ ಸಂಸ್ಕೃತಿಯ ಇನ್ನೊಂದು ಬಗೆಯನ್ನು ನೋಡಿ, "ಇಂಡಿಯನ್ಸ್ ಆರ್ ಕ್ರೇಜಿ" ಎನ್ನುತ್ತಾರೆ.

ಈ ಜಾತಿಯ ವಿಷಗಾಳಿ ಅಮೇರಿಕಾದ ಕನ್ನಡ ಸಂಘಗಳಲ್ಲಿ ಎಷ್ಟರಮಟ್ಟಿಗಿದೆಯೋ ಗೊತ್ತಿಲ್ಲ. ನನ್ನ ಹಲವು ಕನ್ನಡ ಸ್ನೇಹಿತರು ಹೇಳುವುದೇನೆಂದರೆ ಅಲ್ಲಿಯೂ ಕೂಡ ಇದು ಸಂಖ್ಯೆಯೇರಿದಂತೆ ನಿಧಾನವಾಗಿ ಕಾಣಿಸುತ್ತಿದೆಯೆಂದು. ಮೊದಲೆಲ್ಲಾ ಇಲ್ಲಿನ ಕನ್ನಡ ಸಂಘಗಳ ಸಭೆಗಳಲ್ಲಿ, ವನಭೋಜನಗಳಲ್ಲಿ ಕೇವಲ ಸಸ್ಯಹಾರೀ ಊಟವಿರುತ್ತಿದ್ದರೆ, ಕೆಲವರು ಪ್ರತಿಭಟಿಸಿ ಭೋಜನಗಳಲ್ಲಿ ಮಾಂಸಹಾರವೂ, ವನಭೋಜನಗಳಲ್ಲಿ ಸುಟ್ಟ ಕೋಳಿಗಳೂ (ಗ್ರಿಲ್ಡ್ ಚಿಕನ್) ಸಿಗುವಂತೆ ಮಾಡಿದ್ದಾರೆಂದೂ, ಸದ್ಯಕ್ಕೆ ಈ ವಿವಾದವನ್ನು ಸಸ್ಯಾಹಾರ-ಮಾಂಸಹಾರದವರೆಗೆ ತಂದಿದ್ದಾರೆ.

ಬಹುವರ್ಷಗಳಿಂದಲೇ ಇಲ್ಲಿ ಸಾಕಷ್ಟು ಜಾತಿ ಕೂಟಗಳಿವೆ.  ಬಹುಶಃ  ತಮ್ಮ ಮಕ್ಕಳ ವಧುವರಾನ್ವೇಷಣೆಗೆ ಇವುಗಳನ್ನು ಹುಟ್ಟುಹಾಕಿದರೋ ಏನೋ ತಿಳಿಯದು ಒಟ್ಟಾರೆ ಜಾತಿಕೂಟಗಳು ಇಲ್ಲಿನ ಕನ್ನಡ ಅನಿವಾಸಿಗಳಲ್ಲಿ ಅದ್ಯಾವಾಗಲೋ ಬಂದಾಗಿದೆ. ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ, ಕೊಡವ ಸಂಘ, ಬಂಟರ ಸಂಘ, ಗೌಡ ಸಾರಸ್ವತ ಸಂಘ,  .................ಇತ್ಯಾದಿ, ಇತ್ಯಾದಿಗಳೂ ಇವೆ.

ವೀರಶೈವವೋ ಲಿಂಗಾಯತವೋ ಎಂಬ ಜಿಜ್ಞಾಸೆಯನ್ನು ಬದಿಗಿಟ್ಟು ಇಲ್ಲಿನ ವೀರಶೈವ/ಲಿಂಗಾಯತರು ತಮ್ಮ ಉತ್ತರ ಅಮೇರಿಕಾ ವೀರಶೈವ ಸಂಘವನ್ನು ಧಾರ್ಮಿಕ ಆಚರಣೆ, ಸಂಸ್ಕೃತಿ, ವಚನ ಪಾಠಗಳಿಗೆ ಸೀಮಿತಗೊಳಿಸಿದ್ದರೆ, ಒಕ್ಕಲಿಗ ಪರಿಷತ್ ನೇರವಾಗಿ ’ಅಕ್ಕ’ ರಾಜಕೀಯದಲ್ಲಿ ಸಕ್ರಿಯವಾಗಿದೆ.  ಈ ಜಾತಿ ರಾಜಕಾರಣದಿಂದಾಗಿಯೇ ಅಕ್ಕದಿಂದ ಒಂದು ಗುಂಪು ಬೇರೆಯಾಗಿ ನಾವಿಕ ಎಂಬ ಇನ್ನೊಂದು ಸಂಘವನ್ನು ಸ್ಥಾಪಿಸಿಕೊಂಡಿದೆ.  ಅಮೆರಿಕದಾದ್ಯಂತವಿರುವ ಕನ್ನಡ ಸಂಘಗಳು ತಮ್ಮ ತಮ್ಮ ಸಂಖ್ಯೆಗಳಿಗನುಗುಣವಾಗಿ ಅಕ್ಕ ಮಾತು ನಾವಿಕದೊಂದಿಗೆ ಗುರುತಿಸಿಕೊಂಡಿವೆ. ಇನ್ನಿತರೆ ಕನ್ನಡ ಮೂಲದ ಜಾತಿ ಸಂಘಗಳ ಬಗ್ಗೆ ನನಗೆ ಅಷ್ಟಾಗಿ ಪರಿಚಯವಿಲ್ಲ, ಹಾಗಾಗಿ ಅವುಗಳ ಬಗೆಗೆ ಏನನ್ನೂ ಹೇಳಲಾರೆ.

ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ, ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ. ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ್ಯ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.

ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ. ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ. ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೇ, ಅನ್ಯಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೇ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೊಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.

ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರು ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ, ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ. ಇದರ ಬಗ್ಗೆ ಮತ್ತೊಮ್ಮೆ ಬರೆಯುವೆ.) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ದಿವಂತರೂ, ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ. ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ, ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ. ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ಧೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಕ್ಕದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.

ಇರಲಿ, ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ? ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ? ನಾನು ಗಮನಿಸಿದಂತೆ, ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ.  ಹಾಗೆಯೇ ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದುಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.

’ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು’ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ, ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ, ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಟೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ, ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿರಲಾರರು ಎಂದುಕೊಂಡಿದ್ದೇನೆ.

ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ’ಭಾರತೀಯ ಅಮೇರಿಕನ್’ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿ ಇಂದು ’ಅಮೇರಿಕನ್ ಭಾರತೀಯ’ರಿರುತ್ತಿದ್ದರೋ ಏನೋ!

 http://epaper.udayakala.news/


ಅಯೋಧ್ಯೆಯೇ? ಸಾಕೇತವೇ? ವಿನೀತವೇ?


ಅಯೋಧ್ಯೆ ಮತ್ತೆ ಸುದ್ದಿಯಾಗುತ್ತಿದೆ. ಈ ಬಾರಿ ಮಂದಿರವಾಗಿಬಿಡುವುದು ಎನ್ನುತ್ತಿದ್ದಂತೆಯೇ ಇದು ಬುದ್ಧನ ಸಾಕೇತ ಪಟ್ಟಣ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇತಿಹಾಸದಲ್ಲೊಮ್ಮೆ ಇಣುಕಿ ನೋಡೋಣ.

ಹಿಂದೂ ಧರ್ಮಗ್ರಂಥಗಳಾದ, ಮಹಾಭಾರತ ಮತ್ತು ರಾಮಾಯಣದಲ್ಲಿ ಅಯೋಧ್ಯೆಯ ಉಲ್ಲೇಖವಿದ್ದರೂ ಸಾಕೇತದ ಉಲ್ಲೇಖವಿಲ್ಲ! ಆದರೆ ಈ ಧರ್ಮಗ್ರಂಥಗಳ ರಚನೆಯ ಕಾಲಕ್ಕೆ ಇತಿಹಾಸದ ಪುರಾವೆಯಿಲ್ಲ. ಪುರಾವೆಯಿಲ್ಲದ ಕಾರಣಕ್ಕಾಗಿ ಇವುಗಳನ್ನು ಸದ್ಯಕ್ಕೆ ಕಲ್ಪಿತ ಪೌರಾಣಿಕಗಳೆಂದು ಪರಿಗಣಿಸಬೇಕಾಗುತ್ತದೆ.

ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ರಚಿತ ಬೌದ್ಧ ಗ್ರಂಥವಾದ ಮಹಾವಸ್ತು ಸಾಕೇತವು ಇಕ್ಷಾವಕು ರಾಜ ಸುಜಾತನ ರಾಜಧಾನಿಯಾಗಿತ್ತು. ನಂತರ ಈ ಸುಜಾತನ ವಂಶಸ್ಥರೇ ಶಾಕ್ಯ ಮತ್ತು ಕಪಿಲವಸ್ತುಗಳನ್ನು ಕಟ್ಟಿದರೆನ್ನುತ್ತದೆ. ಈ ಗ್ರಂಥದಲ್ಲಿ ಅಯೋಧ್ಯೆಯ ಉಲ್ಲೇಖವಿಲ್ಲ. ಆದರೆ ಮಹಾವಸ್ತು ಒಂದು ಐತಿಹಾಸಿಕ ಗ್ರಂಥ. ಇದರ ರಚನೆಯ ಕಾಲವನ್ನು ಇತಿಹಾಸ ಪುಷ್ಟೀಕರಿಸುತ್ತದೆ.

ರಾಮಾಯಣ/ಮಹಾಭಾರತಗಳಲ್ಲಿರದ ಸಾಕೇತ, ಮತ್ತು ಮಹಾವಸ್ತುವಿನಲ್ಲಿರದ ಅಯೋಧ್ಯೆ ಏನನ್ನು ಹೇಳುತ್ತವೆ?

ಧರ್ಮ ಸಂಘರ್ಷ ಇಂದು ನೆನ್ನೆಯದಲ್ಲ!

ಹಾಗಾಗಿ ಧರ್ಮಗ್ರಂಥವಲ್ಲದ, ಪೌರಾಣಿಕವಲ್ಲದ,  ಕಥಾನಕವಲ್ಲದ ಯಾವುದಾದರೂ ಐತಿಹಾಸಿಕ ಗ್ರಂಥವನ್ನು ಪರಿಗಣಿಸೋಣ. ಪಾಣಿನಿಯ ಅಷ್ಟಾಧ್ಯಾಯಿ ಗ್ರಂಥದಲ್ಲಿ ಸಾಕೇತ ಪಟ್ಟಣದ ಉಲ್ಲೇಖವಿದೆ. ಅದಲ್ಲದೇ ಮಹಾಭಾಷ್ಯ ಎಂಬ ಸಂಸ್ಕೃತ ಭಾಷಾ ವಿಮರ್ಶೆಯನ್ನು ಬರೆದ ಪತಂಜಲಿ ಕೂಡಾ ಸಾಕೇತ ಪಟ್ಟಣದ ಕುರಿತಾಗಿ ಉಲ್ಲೇಖಿಸಿದ್ದಾನೆ.  ಇವೆರಡರಲ್ಲಿ ಅಯೋಧ್ಯೆಯ ಉಲ್ಲೇಖವಿಲ್ಲ. ಸಂಸ್ಕೃತ ವ್ಯಾಕರಣದ ಪಿತಾಮಹನೆನ್ನಿಸಿದ ಪಾಣಿನಿಯ ಕಾಲ ಕ್ರಿಸ್ತಪೂರ್ವ ನಾಲ್ಕು ಅಥವಾ ಐದನೇ ಶತಮಾನವಾದರೆ, ಸಂಸ್ಕೃತ ಭಾಷೆಯಲ್ಲದೆ ಯೋಗ, ವ್ಯಾಕರಣ, ತತ್ವಜ್ಞಾನದ ಪಿತಾಮಹನೆನಿಸಿದ ಪತಂಜಲಿಯ ಕಾಲ ಕ್ರಿಸ್ತಪೂರ್ವ ಎರಡನೇ ಶತಮಾನ!

ಸಾಕೇತಕ್ಕೆ ಇತಿಹಾಸದ ಪುಷ್ಟೀಕರಣವಿದ್ದರೆ,  ಅಯೋಧ್ಯೆಗೆ ಪೌರಾಣಿಕ ನಂಬಿಕೆಯ ಬೆಂಬಲವಿದೆ.

ಅದಲ್ಲದೇ ಬುದ್ಧ ಮತ್ತು ಮಹಾವೀರರಿಬ್ಬರೂ ಸಾಕೇತದಲ್ಲಿ ಕೆಲಕಾಲ ವಾಸವಿದ್ದರೆಂದು ಇತಿಹಾಸ ತಿಳಿಸುತ್ತದೆ.

ಇನ್ನು ಅಯೋಧ್ಯೆ ಮತ್ತು ಸಾಕೇತ ಒಂದೇ ಊರಿನ ಎರಡು ಹೆಸರುಗಳೇ?

ಹೌದೆನ್ನುತ್ತದೆ ಇತಿಹಾಸ! ಕ್ರಿಸ್ತಶಕ ನಾಲ್ಕನೇ ಶತಮಾನದ ಕಾಳಿದಾಸನ ರಘುವಂಶ ಸಾಕೇತ ಮತ್ತು ಅಯೋಧ್ಯೆಗಳೆರಡೂ ಒಂದೇ ಎನ್ನುತ್ತದೆ. ನಂತರದ ಜೈನಗ್ರಂಥಗಳು ಸಾಕೇತ/ಅಯೋಧ್ಯೆ ವಿನೀತ ಯಾ ವಿನಿಯ ಯಾ ಸಗೇಯಾ (ಸಾಕೇತದ ಅಪಭ್ರಂಶ) ಪಟ್ಟಣ ತಮ್ಮ ಆದಿ ತೀರ್ಥಂಕರನಾದ ರಿಷಭನಾಥನ ಜನ್ಮಸ್ಥಳವೆಂದು ಗುರುತಿಸುತ್ತವೆ. ಈ ರಿಷಭ 1200 ಅಡಿ ಎತ್ತರವಿದ್ದನೆಂದು ಜೈನ ಪುರಾಣಗಳು ಹೇಳುತ್ತವೆ. ಹಾಗಾಗಿಯೇ ಜೈನರು ಎತ್ತರದ ಮೂರ್ತಿಗಳನ್ನು ಸ್ಥಾಪಿಸುತ್ತಿದ್ದುದು. ಇದನ್ನೇ ಬೌದ್ಧರು ನಕಲು ಮಾಡಿ ಬುದ್ಧನ ಎತ್ತರದ ಪ್ರತಿಮೆಗಳನ್ನು ಕಟ್ಟಿದರು. ಇತ್ತೀಚೆಗೆ ಮೂರ್ತಿಸ್ಥಾಪನೆ ಸುದ್ದಿಯಾಗುತ್ತಿರುವುದರಿಂದ ಸಾಂದರ್ಭಿಕವಾಗಿ ಈ ಉಲ್ಲೇಖ ಅವಶ್ಯವೆನಿಸುತ್ತದೆ.

ಸಾಮಾಜಿಕವಾಗಿ ಪ್ರಚಲಿತವಿರುವ ಸಾಕೇತರಾಮ, ಸಗಾಯಿರಾಮ, ಸಗಾಯಪ್ಪನ್ ಎಂಬ ಹೆಸರುಗಳು ಕೂಡಾ ಇವೆರಡೂ ಒಂದೆಂದು ಅನುಮೋದಿಸುತ್ತವೆ.

ಐತಿಹಾಸಿಕವಾಗಿ ಈ ನಗರ ಅದೇಕೆ
ಧರ್ಮಗಳಷ್ಟೇ ಆಲ್ಲದೇ ಲಲಿತಕಲೆ, ತತ್ವಜ್ಞಾನಿ, ಸಂಗೀತಗಾರರು, ಪಂಡಿತರು, ವಣಿಕರೆಲ್ಲರಿಗೂ ಅಷ್ಟೊಂದು ಪ್ರಮುಖವಾಗಿತ್ತು?!

ಆ ಪ್ರಶ್ನೆಗೆ ಉತ್ತರವಾಗಿ ಮತ್ತೆರಡು ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ.

ಜಾಗತಿಕವಾಗಿ ಇಂದು ಎಲ್ಲರೂ ಏಕೆ ಅಮೆರಿಕಕ್ಕೆ ಹೋಗಬಯಸುವರು? ಅಥವಾ ರಾಜ್ಯದ ಮೂಲೆ ಮೂಲೆಯಿಂದ ಜನ ಬೆಂಗಳೂರಿಗೇ ಏಕೆ ವಲಸೆ ಬರುತ್ತಿದ್ದಾರೆ?

ಎಲ್ಲಾ ಪ್ರಮುಖ ವಾಣಿಜ್ಯ ನಗರಿಗಳು ವಾಣಿಜ್ಯವನ್ನಷ್ಟೇ ಆಲ್ಲದೆ ಉನ್ನತ ಲಲಿತಕಲೆ, ಸಾಹಿತ್ಯ, ತತ್ವಜ್ಞಾನ, ಕುಶಾಗ್ರತೆ, ಮತ್ತು ಪಾಂಡಿತ್ಯವನ್ನು ಆದರಿಸುತ್ತಿದ್ದವು. ಹಾಗಾಗಿಯೇ ಉತ್ತಮ ಅವಕಾಶಗಳಿಗಾಗಿ ಪ್ರತಿಭಾವಂತರು ಇಲ್ಲಿಗೆ ವಲಸೆ ಬಂದರೆ, ಪ್ರಭುತ್ವಗಳು ಇಂತಹ ನಗರಗಳ ಮೇಲೆ ಹಕ್ಕು ಸ್ಥಾಪಿಸುತ್ತಿದ್ದವು. ಅದೇ ರೀತಿ ಧರ್ಮಗಳು ಆ ಪ್ರಭುತ್ವಗಳ ಮೇಲೆ ಹಿಡಿತ ಸಾಧಿಸುತ್ತಿದ್ದವು.

ಸಾಕೇತ, ಹಲವು ಪ್ರಮುಖ ಹೆದ್ದಾರಿಗಳ ನಡುವೆ ಬರುವ ಒಂದು ಜಂಕ್ಷನ್ ಆಗಿತ್ತು. ಸರಕು ಸಾಮಗ್ರಿಗಳ ಹೇರಿಕೊಂಡು ಉತ್ತರದಿಂದ ದಕ್ಷಿಣಕ್ಕೂ, ಪೂರ್ವದಿಂದ ಪಶ್ಚಿಮಕ್ಕೂ ಸಾಗುವ ಹೆದ್ದಾರಿಗಳು ಕೂಡುವ ಮತ್ತು ತಕ್ಷಶಿಲೆ, ವಾರಣಾಸಿ, ರಾಜಗೃಹ, ಕಪಿಲವಸ್ತು, ಸ್ರವಸ್ತಿ ನಗರಗಳನ್ನು ಬೆಸೆಯುವ ತಂಗುದಾಣವಾಗಿತ್ತು.

ಈ ತಂಗುದಾಣವನ್ನು ಪ್ರಮುಖ ನಗರವಾಗಿ ಕಟ್ಟಿದವನು ಧನಂಜಯನೆಂಬ ಕ್ರಿಸ್ತಪೂರ್ವ ಐದನೇ ಶತಮಾನದ ವರ್ತಕ! ತನ್ನ ರಾಜನಾದ ಪ್ರಸನ್ನಜೀತನ ಅಣತಿಯಂತೆ ಇದನ್ನು ಪ್ರಮುಖ ನಗರವಾಗಿಸಿದ. ಹುಯೆನ್ ತ್ಸಾಂಗನ ಕಾಲಕ್ಕೆ ಆಗಲೇ ಧನಂಜಯನ ಕುರಿತು ದಂತಕತೆಗಳಿದ್ದವು. ತನ್ನ ಯಾತ್ರೆಯಲ್ಲಿ ಹುಯೆನ್ ತ್ಸಾಂಗ್ ಈ ದಂತಕತೆಯನ್ನು ನೆನೆದು ಭಕ್ತಿಪರವಶನಾದದ್ದನ್ನು ನನ್ನ ಮಹಾಪಯಣ ಕೃತಿಯಲ್ಲಿ ಹೆಚ್ಚಿನ ಮಾಹಿತಿಗೆ ಓದಬಹುದು. ಈ ಧನಂಜಯನ ಪುತ್ರಿಯೇ ಖ್ಯಾತ ಬೌದ್ಧಭಿಕ್ಷುಣಿ ವಿಶಾಖ!

ಸಾಕೇತ/ಅಯೋಧ್ಯೆ/ವಿನೀತವಿರಲಿ ಅಥವಾ ಮೊಹೆಂಜೋದಾರ, ನಾಸಿಕ, ಹಂಪಿ, ಮುಂಬೈ ಆಗಲೀ ಖ್ಯಾತವಾಗಿದ್ದಿದು ಅವು ಪ್ರಮುಖ ವಾಣಿಜ್ಯ ಕೇಂದ್ರಗಳಾಗಿದ್ದುದಕ್ಕೆ! ವಾಣಿಜ್ಯವೇ ಎಲ್ಲ ಧರ್ಮ, ಪ್ರಭುತ್ವ, ಲಲಿತಕಲೆ, ಸಾಹಿತ್ಯಗಳ ಮಹಾಪೋಷಕ. ಇದು ಗತಕಾಲದ ಮೊಹೆಂಜೋದಾರೋದಿಂದ ಇಂದಿನ ನ್ಯೂಯಾರ್ಕ್ ವರೆಗಿನ ಸಾರ್ವಕಾಲಿಕ ಸತ್ಯ!

ಭಾರತದ ನವನಾಗರೀಕತೆಗೆ ಬುನಾದಿ ಹಾಕಿದ ಮೊಹೆಂಜೋದಾರೋದಿಂದ ಇಲ್ಲಿಯವರೆಗೆ ಎಲ್ಲಾ ನಾಗರೀಕ ಆಯಾಮಗಳಿಗೆ ತನುಮನಧನದಿಂದ ಕಾಣಿಕೆ ಸಲ್ಲಿಸಿರುವುದು ಬಂಡವಾಳಶಾಹಿಯ ವಣಿಕ ವರ್ಗ. ಇದು ಬೌದ್ಧ ಸ್ತೂಪಗಳನ್ನು ಕಟ್ಟಲು ಆರಂಭಿಸಿದ ಕ್ರಿಸ್ತಪೂರ್ವ ವರ್ತಕರಿಂದ ಹಿಡಿದು ಕರ್ನಾಟಕದಾದ್ಯಂತ ಛತ್ರಗಳನ್ನು ಕಟ್ಟಿಸಿದ ವೈಶ್ಯ ವರ್ಗದವರೆಗಿನ ವಾಸ್ತವ! ಇತ್ತೀಚಿನವರೆಗೂ ಯಾವುದೇ ಊರಿನಲ್ಲಿ ಒಂದು ನಾಟಕವನ್ನು ಆಡಿಸಲೋ, ಅಥವಾ ಉಚಿತ ಊಟ ವ್ಯವಸ್ಥೆಗೋ ಮೊದಲು ಚಂದಾ ಕೇಳುತ್ತಿದ್ದುದು ಶೆಟ್ಟರನ್ನೇ.

ಈ ವರ್ತಕರ ಸರಕು ಸಾಗಣೆ ಬಂಡಿಗಳು ಕೇವಲ ಸರಕು ಸಾಗಿಸದೆ ಧರ್ಮ, ಸಾಹಿತ್ಯ, ಲಲಿತಕಲೆ, ವಿಜ್ಞಾನ, ತಂತ್ರಜ್ಞಾನದ ಪ್ರಸಾರಕವಾಗಿದ್ದವು. ಮಾನವ ವಿಕಾಸ, ನಾಗರೀಕತೆಯ ವಿಕಾಸಕ್ಕೆ ವಣಿಕ ವರ್ಗದ ಕೊಡುಗೆ ಅಪಾರ. ಬೌದ್ಧಧರ್ಮ ಈ ವಣಿಕ/ವರ್ತಕ/ವೈಶ್ಯರ ಧರ್ಮವಾಗಿ, ಅವರ ಸರಕು ಸಾಗಣೆಯೊಂದಿಗೆ ತ್ವರಿತವಾಗಿ ಏಷ್ಯಾದಂತ ಪ್ರಸರಿಸಿತ್ತು.

ಶಿವನ ಮಾನಸಪುತ್ರ ವೀರಭದ್ರನಂತೆಯೇ ರೂಪಿಸಿದ್ದ ರಿಷಭ, ಬಾಹುಬಲಿ ಮುಂತಾದ ಜೈನ ರೂಪಗಳು ಕ್ಷತ್ರಿಯರನ್ನು ಜೈನಧರ್ಮಕ್ಕೆ ಆರಂಭದಲ್ಲಿ ಆಕರ್ಷಿಸುತ್ತ ಸಾಹಿತ್ಯಿಕ ಧರ್ಮವಾಗಿ ಬೆಳೆಯುತ್ತಾ ನಡೆದಿತ್ತು.

ಇರಲಿ, ಐತಿಹಾಸಿಕ ಭಾರತದ ಅಸ್ಮಿತೆಯನ್ನು ಹೊಂದಿರುವ "ಪೌರಾಣಿಕ" ಹಿಂದೂ, "ತಾತ್ವಿಕ" ಬೌದ್ಧ, ಮತ್ತು "ಸಾಹಿತ್ಯಿಕ" ಜೈನ ಧರ್ಮಗಳ ಸಮ್ಮಿಳಿತದ ಸಂಕೇತವಾದ ಈ "ವಣಿಕ" ಪಟ್ಟಣ, ಕಾಲಘಟ್ಟದಲ್ಲಿ "ಅಲ್ಪಸಂಖ್ಯಾತ" ಮುಸ್ಲಿಮರ ನಾಡಾಗಿ ಇಂದು "ದಲಿತ" ಬೌದ್ಧರು ರಾಮಮಂದಿರದ ಬದಲಾಗಿ ಬೌದ್ಧಮಂದಿರವನ್ನು ಕಟ್ಟಿರೆಂಬ ಆಧುನಿಕ ಭಾರತದ ಸಂದಿಗ್ಧ ತಿರುವಿನಲ್ಲಿ ನಿಂತಿದೆ.

ಇಲ್ಲಿ ಮಂದಿರವಾಗಬೇಕೆ? ಗೊತ್ತಿಲ್ಲ! ಆದರೆ ಈ ಎಲ್ಲಾ ಐತಿಹಾಸಿಕ ಅಸ್ಮಿತೆಗಳನ್ನೊಳಗೊಂಡ ಬುದ್ಧ, ರಾಮ, ಮತ್ತು ಜಿನ ಮೂರ್ತಿಗಳ ಒಂದು ಅಂತರರಾಷ್ಟ್ರೀಯ ವಾಣಿಜ್ಯ ಸಂಕೀರ್ಣ ಕಟ್ಟಬೇಕೇ? ತುಂಬಾ ಸಂಕೀರ್ಣ ಪ್ರಶ್ನೆ!

ಒಟ್ಟಾರೆ ಎಲ್ಲಾ ಧರ್ಮಗಳಿಗೂ ಬೇಕಿದ್ದ ಈ ನಗರಕ್ಕಾಗಲಿ ಅಥವಾ ಆ ಧರ್ಮಗಳಿಗಾಗಲಿ ಯುಗಯುಗಗಳೇ ಕಳೆದಿದ್ದರೂ "ಹಿಂದೂ" ಮೋಕ್ಷವಾಗಲಿ, "ಬೌದ್ಧ" ನಿರ್ವಾಣವಾಗಲಿ  ಅಥವಾ "ಜೈನ" ಕೈವಲ್ಯವಾಗಲಿ ಸಿಕ್ಕಿಲ್ಲ.



Brahminical Patriarchy

Patriarchy ಯಾ ಪಿತೃಪ್ರಧಾನ ಯಾ ಪಿತೃಪ್ರಭುತ್ವದಲ್ಲಿ ಬ್ರಾಹ್ಮಣ್ಯ, ಶೂದ್ರ, ದಲಿತ ಎಂಬ ವರ್ಗೀಕರಣವಿದೆಯೆಂದು ಭಾರತದ ಪ್ರಬುದ್ಧತೆ ಇತ್ತೀಚೆಗೆ ತನ್ನ "Brahminical Patriarchy" ಮುಖಾಂತರ ತಿಳಿಸಿಕೊಟ್ಟಿದೆ.
ಮಂಗನಿಂದ ಮಾನವ ಮರವಿಳಿದು ಗುಂಪಿನಲ್ಲಿ ಬೇಟೆಯಾಡುತ್ತ ಬೇಟೆಯನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದ. ಬೇಟೆಯಿಂದ ವಿಕಾಸಗೊಳ್ಳುತ್ತ ಅದಿಮಾನವ ಕೃಷಿಯಲ್ಲಿ ಯಾವಾಗ ತೊಡಗಿಕೊಂಡನೋ ಆಗಿನಿಂದ ಪಿತೃಪ್ರಧಾನ ವ್ಯವಸ್ಥೆ ರೂಪುಗೊಂಡಿತು. ಇದು ಜಾಗತಿಕ ಮಾನವ ವಿಕಾಸವನ್ನು ಓದಿಕೊಂಡ ಸಾಮಾನ್ಯನ ತಿಳಿವಳಿಕೆ. ಪುರೋಹಿತಶಾಹಿಯ ಉದಯಕ್ಕೂ ಅದೆಷ್ಟೋ ಶತಮಾನಗಳ ಮುಂಚೆಯೇ ಪಿತೃಪ್ರಧಾನ ವ್ಯವಸ್ಥೆ ಜಾರಿಯಲ್ಲಿದ್ದಿತು.
ಈ ವಿಕಾಸವನ್ನು ಕೊಡವರಲ್ಲಿ ಇಂದು ಕೂಡಾ ಯಥಾವತ್ತಾಗಿ ಕಾಣಬಹುದು. ಕೊಡವರು ಪುರೋಹಿತದಿಂದ ಸಾಕಷ್ಟು ದೂರವಿದ್ದಾರೆ.
ಇನ್ನು ಒಬ್ಬ ಮಂತ್ರಿ ಮಂಗನಿಂದ ಮಾನವ ಒಪ್ಪತಕ್ಕದ್ದಲ್ಲ ಎಂದುದನ್ನು ತೀವ್ರವಾಗಿ ಟ್ರೋಲಿಸಿದ್ದ ಬುದ್ದಿಜೀವಿಗಳು, "ಜಾಗತಿಕ ಪಿತೃಪ್ರಧಾನ" ವ್ಯವಸ್ಥೆಯನ್ನು ಅದೆಷ್ಟೋ ಶತಮಾನಗಳಷ್ಟು ಮುಂದಕ್ಕೆ ಹಾರಿಸಿ "ಭಾರತೀಯ ಪುರೋಹಿತಶಾಹಿ" ಗೆ ಜೋಡಿಸಿದ್ದಾರೆ.
ಈ ಪುರಾವೆಗಳಿಲ್ಲದ ಪುರೋಗಾಮಿಗಳ ಪುಕಾರಿನ ಪುರೋಗಾಮಿತ್ವಕ್ಕೂ, ಆ ಮಂತ್ರಿಯ ತೀವ್ರವಾದಕ್ಕೂ ವ್ಯತ್ಯಾಸ ಏನಿದೆ?!?

ಮೋದಿಯ ಹೂಸು, ಬುದ್ದಿಜೀವಿಗಳ ಪೂಸು!

ಮೋದಿ ಹೂಸಿದರೂ ಅದು ಸುವಾಸಿತವಾಗಿರಬೇಕು ಎಂದು ಫರ್ಮಾನು ಹೊರಡಿಸುವ ಕಾಮಿ ಬುದ್ದಿಜೀವಿಗಳ ಬೇಡಿಕೆ ಅತ್ಯಂತ ಸಹಜವಾದದ್ದು.

ಏಕೆಂದರೆ ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸ್ತ್ರೀಸ್ವಾತಂತ್ರ್ಯ, ಆಹಾರಸ್ವಾತಂತ್ರ್ಯ, ಮುಂತಾದ "ಸ್ವಾ"ಗಳನ್ನೆಲ್ಲ "ಸ್ವಾಹ" ಮಾಡಿವೆ.

ಈ ಎಲ್ಲ ಸ್ವಾಹ ಮಾಡಿದ ಕಮ್ಯುನಿಸ್ಟ್ ನಾಯಕ ಹೂಸಿದರೆ ಅದು ಸುವಾಸಿತವಾಗಿರುತ್ತದೆ. ಇಲ್ಲದಿದ್ದರೆ ಆತನ ಅಡುಗೆಯವ ಗಲ್ಲಿಗೇರುತ್ತಾನೆ.

ತಮ್ಮ ಪ್ರೀತಿಪಾತ್ರ ಕಮ್ಯುನಿಸ್ಟ್ ತತ್ವಗಳಾದ ಎಲ್ಲ ಸ್ವಾತಂತ್ರ್ಯಗಳ ಹರಣ "ಸ್ವಾಹ" ಮಾಡಿ ಸರ್ವಾಧಿಕಾರವನ್ನು ಸ್ಥಾಪಿಸುತ್ತಿರುವ ಮೋದಿ ಈ ಬುದ್ಧಿಜೀವಿಗಳ ಅಪ್ರತಿಮ ನಾಯಕ! ಆತನ ಕೇಸರಿ ಧ್ವಜ ಅಸಲಿಗೆ ಕೆಂಪು ಧ್ವಜ. ಆತನ ಭಾರತ್ ಮಾತಾಕಿ, ಲಾಲ್ ಸಲಾಂ!

ಕಮ್ಯುನಿಸ್ಟರ ಕ್ರಾಂತಿ ಭೂಗತವಾಗಿ ನಿರ್ಧಾರವಾಗುವಂತೆ ಈ ಕಾಮಿ ಬುದ್ದಿಜೀವಿಗಳು ಕೂಡಾ ಒಂದು ಭೂಗತ ಉದ್ದೇಶವನ್ನಿಟ್ಟುಕೊಂಡು ಚಳುವಳಿಗಳು ಮಾಡುತ್ತಿದ್ದಾರೆ. ತಮ್ಮ ಅಪ್ರತಿಮ ನಾಯಕನಿಗೆ ಅತ್ಯಂತ ಪ್ರಚಾರ ಗಳಿಸಿಕೊಡುವ ಚಳುವಳಿಗಳನ್ನು ಮಾತ್ರ ಅವರು ಏರ್ಪಡಿಸುತ್ತಿದ್ದಾರೆ. ಆತನನ್ನು ಒಂದಿಪ್ಪತ್ತು ವರ್ಷಗಳ ಕಾಲ ಅಧಿಕಾರದಲ್ಲಿರಿಸುವುದು ಅವರ ಒಳ ಉದ್ದೇಶ. ಹಾಗಾಗಿ ಇವರು ಅನ್ಯಪಕ್ಷ ಜಪದ ಬಿಜೆಪಿ ಡಬಲ್ ಏಜೆಂಟರು!

ಅಂದಹಾಗೆ ಕಮ್ಯುನಿಸ್ಟರಿಗೆ ಡಬಲ್ ಏಜೆಂಟ್ ಎಂಬುದು ಒಂದು ಜೇಮ್ಸ್ಬಾಂಡ್ ರೋಲಿನಂತಹ ರೋಚಕ ಹುದ್ದೆ. ಬಾಂಡನ ಗೆಳತಿಯರಿಗಿಂತ  ಸ್ನಾತಕೋತ್ತರ ಪದವಿಯನ್ನು ಪಡೆದ ಲಾಲ್ ಲಾಲ್ ಕಾಮಿ ಪ್ರೇಯಸಿಯರು, ಕಾಮಿ ಡಬಲ್ ಏಜೆಂಟರಿಗಿರುತ್ತಾರೆ. ಕಾಮಿ ಎಂದರೆ ಕಾಮ್ಯುನಿಸ್ಟರು.

ಫಿಡೆಲ್ ಕ್ಯಾಸ್ಟ್ರೊ ತನ್ನ ದೇಶದ ಸೂಳೆಯು ಕೂಡ ಸ್ನಾತಕೋತ್ತರ ಪದವೀಧರೆಯಾಗಿರುವಳೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದುದನ್ನು ಒಮ್ಮೆ ನೆನಪಿಸಿಕೊಳ್ಳಿ. ಇವರ ಹೆಮ್ಮೆಯ ಕುವರ, ಗುವೆರಾ ಬದುಕಿರುತ್ತಿದ್ದರೆ ಇಂದು ಆ "ಸ್ನಾತಕೋತ್ತರ" ಮಹಿಳೆಯರೊಂದಿಗೆ ಕಾಲ ಕಳೆಯುತ್ತಿದ್ದ!

ಮುಂಬಯಿಯ ಅಪಾರ್ಟುಮೆಂಟುಗಳ ಮೆಟ್ಟಿಲುಗಳ ಪ್ರತಿ ಮೂಲೆಗಳಲ್ಲಿ ಯಾರೂ ಉಗುಳಬಾರದೆಂದು ಎಲ್ಲಾ ಧರ್ಮದ ದೇವರುಗಳ ಟೈಲ್ಸ್ ಅಂಟಿಸಿರುವಂತೆ, ಇವರ ಹುನ್ನಾರವನ್ನು ಯಾರೂ ಕೆಣಕಬಾರದೆಂದು ಕಡೆಯಲ್ಲಿ ಒಂದು  "ಜೈಭೀಮ್" ಘೋಷಣೆಯನ್ನು  ಅಸ್ತ್ರವಾಗಿಸಿಕೊಂಡಿರುವ ಕಿಲಾಡಿಗಳು ಇವರು.

ಇಷ್ಟೆಲ್ಲಾ ತಯಾರಾಗಿ ಅಲ್ಲಲ್ಲಿ ಕಲ್ವರ್ರುಗಳನ್ನು ಒಡೆಯುತ್ತಾ ಜುಗಾರಿ ಕ್ರಾಸಿನ ಪ್ರೊ. ಗಂಗೂಲಿ ಶಿಷ್ಯರು ಮಾಡುತ್ತಿರುವ ಕ್ರಾಂತಿಯನ್ನು ಭಕ್ತರೇ ಅರಿತುಕೊಳ್ಳಿ. ಇವರೂ ಕೂಡಾ ನಿಮ್ಮವರೇ.

Disclaimer:
ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು
ಪ್ರಜಾಪೀಡಕವಾಗಿ, ಸರ್ವಾಧಿಕಾರವಾಗಿ, ಏಕವ್ಯಕ್ತಿ ಆರಾಧಕವಾಗಿ ಪರಿವರ್ತಿತಗೊಂಡಿರುವುದು ಸಾರ್ವಕಾಲಿಕ  ವಾಸ್ತವ ಸತ್ಯ!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಟಿಪ್ಪು ಸುಲ್ತಾನ!

ಪ್ರಜಾಪ್ರಭುತ್ವದ ರಾಜ್ಯವೊಂದು ರಾಜಪ್ರಭುತ್ವದ ವ್ಯಕ್ತಿಯೋರ್ವನ ಹುಟ್ಟನ್ನು ಸಂಭ್ರಮಿಸುವುದು ಗುಲಾಮಿತನದ ಸಂಕೇತ ಮತ್ತು ಪ್ರಜಾಪ್ರಭುತ್ವದ ಅಣಕ. ಇದು ಟಿಪ್ಪು, ಕೆಂಪೇಗೌಡ, ಕಿತ್ತೂರು ರಾಣಿ ಜಯಂತಿಗಳಿಗೆಲ್ಲ ಅನ್ವಯ.  ಈ ಮೂಲ ಪ್ರಭುತ್ವಗಳ ವ್ಯತ್ಯಾಸವರಿಯದೆ ರಾಜಜಯಂತಿಗಳ ಸಮರ್ಥಿಸಿಕೊಳ್ಳುವ ಜ್ಞಾನಪೀಠಿ, ವಿಶ್ವವಿದ್ಯಾಲಯದ ಪ್ರೊಫೆಸರ್ಗಳು, ಪ್ರಜಾಪ್ರಭುತ್ವದ ಪ್ರತಿನಿಧಿಗಳು, ಮತ್ತವರ ಬುದ್ಧಿಮಟ್ಟ, ಬುದ್ಧಿಮತ್ತೆ, ಸೊಗಲಾಡಿತನ, ಓಲೈಕೆ, ತಲೆಹಿಡುಕುತನ ಸಂವಿಧಾನವನ್ನೇನು ಉಳಿಸೀತು?
ಅವರೆಲ್ಲ ಹುಚ್ಚು ಮುಂಡೆ ಮದುವೆಯಲ್ಲಿ ಉಂಬುವ ಜಾಣರು!!

ದಸರಾ ಆಚರಣೆಯಲ್ಲಿ ಮೈಸೂರಿನ ಅರಸು ಮನೆತನದ ಭಾಗವಹಿಸುವಿಕೆಯನ್ನು ಊಳಿಗಮಾನ್ಯದ ವಿಜೃಂಭಣೆ, ಗುಲಾಮಿತನದ ಸಂಕೇತವೆಂದು "ಪರ್ಯಾಯ ದಸರಾ" ಆಚರಿಸುವ ಪ್ರಗತಿಪರ ವರ್ಗ, ಊಳಿಗಮಾನ್ಯದ ಟಿಪ್ಪುವನ್ನು ಸಮರ್ಥಿಸಿಕೊಳ್ಳುತ್ತಾರೆ. ವೈಚಾರಿಕತೆ, ಜಾತಿ ಓಲೈಕೆಗನುಗುಣವಾಗಿ ಊಳಿಗಮಾನ್ಯ ವ್ಯವಸ್ಥೆಯನ್ನು ಬೆಂಬಲಿಸೆನ್ನುತ್ತದೆಯೇ?

ಯಾವುದೇ ಊಳಿಗಮಾನ್ಯ ಪ್ರಭುತ್ವದ ವ್ಯಕ್ತಿ ಹೋರಾಡಿದ್ದುದು ತನ್ನ ಪ್ರಭುತ್ವಕ್ಕಾಗಿಯೇ ಹೊರತು ಪ್ರಜಾಪ್ರಭುತ್ವಕ್ಕಲ್ಲ! ಈ ನಿಟ್ಟಿನಲ್ಲಿ ಅವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರಲ್ಲ. ಹಾಗಾಗಿ ಆತನ ಪರವಾದ ಎಲ್ಲಾ ಸಮರ್ಥನೆ ಅರ್ಥಹೀನ.

ಒಬ್ಬ ರಾಜನಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವಾಗ ಆಗುವ ಸಾವು ನೋವುಗಳಂತೆಯೇ ಕೊಡಗು ಕೇರಳದಲ್ಲಿ ಆತ ನಡೆಸಿದ ಹತ್ಯೆಗಳೆಂದು ಸಮರ್ಥಿಸಿಕೊಳ್ಳುತ್ತಾರೆ. ಅದೇ ವಾದವನ್ನಿಟ್ಟುಕೊಂಡು ನೋಡಿದಾಗ ಬ್ರಿಟಿಷರ ವಿರುದ್ಧ  ಅವರ ಸಾಮ್ರಾಜ್ಯ ವಿಸ್ತರಣೆಯ ಕಾರಣವಾಗಿ ಟಿಪ್ಪು ಕೂಡ ಹತನಾದ. ಊಳಿಗಮಾನ್ಯ ಪ್ರಭುತ್ವದ ಅರಸರು ಅನ್ಯರಾಜ್ಯದ ವಿರುದ್ಧ ಹೋರಾಡುವುದನ್ನು ಒಪ್ಪುವ ನಾವು ಅನ್ಯದೇಶದವರೆಂದೊಡನೆ ಭಕ್ತಿಪರಾಕಾಷ್ಟೆಯನ್ನು ಮೆರೆಸುವುದೇಕೆ?

ಭಾರತ ಸ್ವಾತಂತ್ರ್ಯ ಹೋರಾಟದ ಆರಂಭವನ್ನು ಯಾವುದೇ ದೇಶೀ ರಾಜ ರಾಣಿಯರು ಆರಂಭಿಸಿದ್ದರೆಂಬುದನ್ನು ಪುನರ್ ಪರಿಶೀಲಿಸಬೇಕಿದೆ.

ಒಡೆತನದ ದಾಖಲೆಯಿರದ ಭೂಮಿಯನ್ನು ಕಂದಾಯ ಕಟ್ಟುವವರಿಗೆ ಪುಕ್ಕಟೆಯಾಗಿ ಇತಿಹಾಸದುದ್ದಕ್ಕೂ ಎಲ್ಲಾ ರಾಜರುಗಳೂ ಕೊಡುತ್ತಾ ಬಂದಿದ್ದಾರೆ. ಇದನ್ನು ಪ್ರಜಾಪ್ರಭುತ್ವದ ರಾಜ್ಯ ಸರ್ಕಾರ ಕೂಡ ಭೂಮಿಗೆ ಬೆಲೆಯಿಲ್ಲದ ಕಾಲಘಟ್ಟದಲ್ಲಿ ಕಾಫಿ ತೋಟ ಮಾಡಲು, ಗೇರು ಬೆಳೆಯಲು, ತೋಟಗಾರಿಕೆಯ ಕೆಲವು ಬೆಳೆಗಳನ್ನು ಪ್ರೋತ್ಸಾಹಿಸಲು ಈ ರೀತಿಯಾಗಿ ಮಾಡಿದೆ. ಆದರೆ ಈ ಸಾಮಾನ್ಯ ಐತಿಹಾಸಿಕ ಆಡಳಿತಾತ್ಮಕ ಸಂಗತಿಯನ್ನು ಟಿಪ್ಪುವಿಗೆ ಮಾತ್ರ ಅನ್ವಯಿಸಿ "ಉಳುವವನೇ ಒಡೆಯ" ಎಂಬ ನೀತಿಯ ಹರಿಕಾರ ಟಿಪ್ಪು ಎಂದು ಅಸಂಬದ್ಧವಾಗಿ ಊಳಿಗಮಾನ್ಯವನ್ನು ಸಮಾಜವಾದಕ್ಕೆ ಜೋಡಿಸುತ್ತಾರೆ.

ಇತಿಹಾಸದಲ್ಲಿ ಲಾವಣಿಕಾರರು ಆಸ್ಥಾನ ಕೃಪಾಪೋಷಿತರಾಗಿದ್ದರು. ಪ್ರಭುತ್ವದ ಸಾಧನೆಯನ್ನು ಇಂದಿನ ಸರ್ಕಾರೀ ಸಾಧನೆಗಳ ಜಾಹೀರಾತಿನ ಮಾದರಿ ಪ್ರಚಾರ ಮಾಡುವುದು ಲಾವಣಿಗರ ಕರ್ತವ್ಯವಾಗಿತ್ತು. ಹಾಗಾಗಿ ಆತನ ಕುರಿತಾಗಿ ಕೃಪಾಪೋಷಿತ ಲಾವಣಿ ಪದಗಳು ಸೃಷ್ಟಿಯಾಗಿರಬಹುದು. ಆ ಕೃಪಾಪೋಷಿತ ಲಾವಣಿಯನ್ನೇ ಇತಿಹಾಸ ಎನ್ನಲಾಗುತ್ತದೆಯೇ?

ಆತ ಪ್ರಬಲ ಸಂಖ್ಯೆಯ ಕೋಮಿನ ಒಕ್ಕಲಿಗ, ಲಿಂಗಾಯತ, ನಾಯಕರ ಭಾಷೆ, ಧರ್ಮವನ್ನ ಒಂದೆಡೆ ಓಲೈಸುತ್ತ ಇನ್ನೊಂದೆಡೆ ಆಯ್ದ ಅಲ್ಪ ಸಂಖ್ಯಾತ ಅಯ್ಯಂಗಾರರನ್ನು ಹತ್ಯೆಗೈದ. ಆತನ  ಕನ್ನಡ ಪ್ರೋತ್ಸಾಹ, ಹಿಂದೂ ಧಾರ್ಮಿಕ ದತ್ತಿಗಳು,  ಬಹುಸಂಖ್ಯಾತರ ಓಲೈಕೆಯ ಒಂದು ಭಾಗ.

ಆಧುನಿಕತೆಯ ಎಲ್ಲ ಆಕರ ಪರಿಕರಗಳನ್ನು ಹೊಂದಿದ್ದರೂ ಕೂಡಾ ಕೇವಲ ಹದಿನೆಂಟನೇ ಶತಮಾನದ ಟಿಪ್ಪು ಇತಿಹಾಸವನ್ನೇ ಸರಿಯಾಗಿ ವಿಶ್ಲೇಷಿಸಲಾಗದ ಬುದ್ಧಿವಂತರು ಹಿಂದೂ-ಬೌದ್ಧ-ಜೈನ-ಶೈವ ಪಂಥಗಳು ಪರಸ್ಪರ ರಕ್ತಕ್ರಾಂತಿ ನಡೆಸುತ್ತ ಸಾಗಿಬಂದ ಕರ್ನಾಟಕದ ಧಾರ್ಮಿಕ ವಿಕಸನವನ್ನು ಹೇಗೆಂದು ವಿಶ್ಲೇಷಿಸಿಯಾರು!?!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರ
FIRE ಸಂಸ್ಥೆಯ ಸಹಾಯ ಕೋರಿ ಸಂಗೀತಾ ಭಟ್ ಬರದಿದ್ದುದರಿಂದ ಸಂಸ್ಥೆ ಆಕೆಗೆ ಸಹಾಯ ಮಾಡುತ್ತಿಲ್ಲವಂತೆ. ಸಂಸ್ಥೆಗೆ ಅದರದೇ ಆದ "ಚೌಕಟ್ಟು" ಇದೆಯಂತೆ. ಹಾಗೆಂದು ಸಂಸ್ಥೆಯ ಪರಿಚಯವಿರುವ ಸ್ನೇಹಿತ ನಿತೇಶ್ ಕುಂಟಾಡಿ Kuntady Nithesh ತಿಳಿಸಿದ್ದಾರೆ.

ಶೋಷಿತ ಮಹಿಳೆ ತನ್ನ ಬಾಗಿಲಿಗೆ ಬಂದು ಸಹಾಯ ಕೇಳಲಿ ಎಂಬ ನಿಯಮವೇ ಊಳಿಗಮಾನ್ಯ ಪದ್ದತಿ!

ಪದೇ ಪದೇ ಊಟಕ್ಕೆ ಕರೆದನೆಂಬ ಒಬ್ಬ ನಟಿಯ ದೂರಿಗೆ ಅಲ್ಲೋಲಕಲ್ಲೋಲ ಮಾಡುತ್ತಿರುವ ಚಳುವಳಿ ವೀರರು, ಬಿಡಿಬಿಡಿಯಾಗಿ ಪೀಡನೆಯನ್ನು ವರ್ಣಿಸಿರುವ ಸಂಗೀತಾ ಭಟ್ ರನ್ನೇಕೆ ಮೂಲೆಯಲ್ಲಿರಿಸಿದ್ದಾರೆ? ಆಕೆಗೆ ಸಾಂತ್ವನ, ಧೈರ್ಯ ನೀಡಿ ಆಕೆಯ ಪೀಡನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಸಹಾಯ ಮಾಡುತ್ತಿಲ್ಲವೇಕೆ? ಆಕೆ ಕನ್ನಡ ಚಿತ್ರರಂಗದ ಕುರಿತು ಪ್ರಪ್ರಥಮವಾಗಿ ದೂರಿದ್ದಾಳೆಂದು ಹೆಸರಿಸಿದ್ದು ಬಿಟ್ಟರೆ ಲಕ್ಷ್ಯವೆಲ್ಲಾ ಸೋಲುವ ಕುದುರೆಯ ಮೇಲಿದೆ.

ಒಬ್ಬ ಸ್ನೇಹಿತ ಯಾ ಸಹೋದ್ಯೋಗಿ ಪದೇ ಪದೇ ಊಟಕ್ಕೆ ಆಟದ ಉದ್ದೇಶದಿಂದಲೇ ಕರೆದರೆ ಅದು ವೃತ್ತಿರಂಗದ ಕಾಮಪೀಡನೆ ಆಗುವುದಿಲ್ಲ. ಆತ ಅದರೊಂದಿಗೆ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಆಮಿಷವನ್ನೊಡ್ಡಿದಾಗ ಮಾತ್ರ ಅದು ಕಾಮಪೀಡಿತ. ಇಲ್ಲದಿದ್ದರೆ ಅದು ಇಬ್ಬರು ವಯಸ್ಕರ ನಡುವಿನ ಮಾತುಕತೆ ಮಾತ್ರ, ಇದು ಸಾಮಾನ್ಯ ಜ್ಞಾನ.

ಆಯ್ದ ಆಯ್ಕೆಯ ಶೋಷಿತರನ್ನು ಮಾತ್ರ (ಮ)ಮೆರೆಸುವ ಇಂತಹ ಚಳುವಳಿ, ಬುದ್ಧಿಜೀವಿ, ನಿವೇದನೆ, ಸಂಸ್ಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಿಯಾವೆಯೇ?

ಯಾವುದೇ ನಿವೇದನೆಗಳನ್ನು ಸಹಿ ಹಾಕಿ ಹಂಚಿಕೊಳ್ಳುವ ಮುಂಚೆ ಸಂಚಿನ ಅರಿವಿರಲಿ.

#ಸೂಚನೆ: ನನ್ನ ಹಿಂದಿನ ಪೋಸ್ಟಿನಲ್ಲಿ ಉದ್ದೇಶಪೂರ್ವಕವಾಗಿ ಲಂಕೇಶರನ್ನು ಎಳೆದು ತಂದಿದ್ದೆ. ಏಕೆಂದರೆ ಲಂಕೇಶ್ ಆರತಿಗೆ ಹಾಗೆ ಹೇಳಿದ್ದರೋ ಇಲ್ಲವೋ ಅವರ ಭಕ್ತರು ಮಾತ್ರ ಆ ಕುರಿತಾಗಿ ಅವರು ತೀರಿಕೊಂಡ ನಂತರ ಬರೆದದ್ದೇ ಬರೆದದ್ದು!

ಲಂಕೇಶರ ಪರಂಪರೆ(?)ಯನ್ನು ಗುತ್ತಿಗೆ ಹಿಡಿದಿರುವ ಒಂದು ಬಹುದೊಡ್ಡ ಗುಂಪು ಅವರ ಅಮಾಯಕ ಮಗಳನ್ನು ಹುಯಿಲೆಬ್ಬಿಸಿ ದಿಕ್ಕೆಡಿಸಿ ಆದ ಅನಾಹುತ ದೇಶ ನೋಡಿದೆ.

ಈಗ ಅದೇ ಗುಂಪು, ದೇಶದ ಎಲ್ಲ ವಿವಾದಗಳಲ್ಲಿ ತಮಗೆ ಮೈಲೇಜ್ ಕೊಡುವ, ಸಂಗತಿಗಳನ್ನು ಮಾತ್ರ ಆಯ್ದುಕೊಂಡು (ವೀರಶೈವ ಲಿಂಗಾಯತ, ಅಯ್ಯಪ್ಪ, ಮೀಟೂ, ಇತ್ಯಾದಿ)
ತಮ್ಮ ವಿರೋಧಿಗಳಿಗೆ "F" ಮಾಡುವ ಏಕಮಾತ್ರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆ ಆ ಉದ್ದೇಶಕ್ಕೆ ವ್ಯಾಸಲಿನ್ ಆಗಬಾರದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಲಂಕೇಶ್ ಆರತಿಯನ್ನು ಹಾಕಿಕೊಂಡು ಸಿನೆಮಾ ಮಾಡುತ್ತಿದ್ದಾಗ, ಪ್ರಣಯ ಸನ್ನಿವೇಶವೊಂದರಲ್ಲಿ ಆರತಿ "ಕಣ್ಣಲ್ಲೇ ಎಲ್ಲಾ ಕಾಮನೆ/ಭಾವನೆಗಳನ್ನು ತೋರಿಸುತ್ತೇನೆ" ಎಂದಳಂತೆ.

ಆಗ ಕಣ್ಣಲ್ಲೇ ಎಲ್ಲಾ ತೋರ್ಸೋದಾದ್ರೆ ಬೇರೇ ಅಂಗಾಗಗಳು ಏಕಿರಬೇಕು ಎಂದು ತಪರಾಕಿ ತಟ್ಟಿ ತಮಗೆ ಬೇಕಾದಂತೆ ಲಂಕೇಶ್ ಚಿತ್ರೀಕರಿಸಿಕೊಂಡರಂತೆ! ಇದು ಲಂಕೇಶರ ಒಂದು "ಕೋಡು", "ಕ್ರಿಯಾಶೀಲತೆ", "ಸೃಜನಶೀಲತೆ" ಎಂಬಂತೆ ಹೆಮ್ಮೆಯಿಂದ ಅವರ ಭಕ್ತರನೇಕರು ಬರೆದಿದ್ದನ್ನು ಸಾಕಷ್ಟು ಸಾರಿ ಓದಿದ್ದೇವೆ.

ಈಗ ಆ ಲಂಕೇಶರ ನಿರ್ದೇಶನದ, ಸಾಮಾಜಿಕ ಕಳಕಳಿಯ ಪರಂಪರೆಯನ್ನು (ವ್ಯಕ್ತಿತ್ವ, ವೈಯಕ್ತಿಕ ಜೀವನವಲ್ಲದ) ಹೊತ್ತಿರುವ ಪುತ್ರಿ, ಮತ್ತು ಲಂಕೇಶರನ್ನು ಆರಾಧಿಸುವ ಅಭಿಮಾನಿಗಳ ಪಡೆಯಿರುವ FIRE ಸಂಸ್ಥೆ, ನಿಜಕ್ಕೂ MeToo ಪರ ನಿಷ್ಪಕ್ಷಪಾತವಾಗಿರುತ್ತದೆಯೇ?

ಆತ ಒಂದು ಕ್ರಿಯಾಶೀಲ ಹೆಣ್ಣಿಗೆ ಅಂಗಾಂಗ ತೋರೆಂದುದು ಕ್ರಿಯಾತ್ಮಕವೂ, ಮತ್ತೊಬ್ಬ ಗಂಡು ಒಂದು ಹೆಣ್ಣನ್ನು ಊಟಕ್ಕೆ (ಆಟಕ್ಕೇ ಎಂದುಕೊಳ್ಳಿ) ಯಾವುದೇ ವೃತ್ತಿ ಸಂಬಂಧೀ ನಿಬಂಧನೆಗಳ ಒತ್ತಡವಿಲ್ಲದೆ ಕರೆದುದು ಕಾಮಪೀಡನೆ ಎಂದು ಪ್ರತಿಪಾದಿಸುವುದೇ ಹಾಸ್ಯಾಸ್ಪದ. ಹಾಗಿದ್ದರೆ ಸಂಗಾತಿಯನ್ನು ಬಯಸಿ ನಡೆಸುವ ಎಲ್ಲಾ ಸಾಮಾಜಿಕ ಪ್ರಕ್ರಿಯೆಗಳಾದ ವಧುವರಾನ್ವೇಷಣೆ, ಡೇಟಿಂಗ್, ಇತ್ಯಾದಿ ಕೂಡ ಕಾಮಪೀಡನೆಯೇ?!

ಡೇಟಿಂಗಿಗೆಂದೇ ಹೊರಕ್ಕೆ ಕರೆಯುವುದು ಕಾಮಪೀಡನೆಯಾಗುವುದಿಲ್ಲ. ಭಾರತೀಯ ಸಿನೆಮಾ ಉದ್ಯಮದಲ್ಲಿ ನಿಜ ಕಾಮಪೀಡನೆಯ ಪ್ರಕರಣಗಳು ಸಾರ್ವಭೌಮನಿಂದ ಹಿಡಿದು ಕ್ಲ್ಯಾಪ್ಬಾಯ್ಸ್ ವರೆಗೆ ಅಗಣಿತವಾಗಿವೆ. ಇದ್ದುದರಲ್ಲಿ ಸಂಗೀತಾ ಭಟ್ ಎತ್ತಿರುವ ದೂರು ಸತ್ಯಕ್ಕೆ ಸಮಂಜಸವಾಗಿದೆ. ಅಂತಹ ಪ್ರಕರಣಗಳನ್ನು ಬೆಳೆಕಿಗೆ ತರುವತ್ತ FIRE ಕಾರ್ಯೋನ್ಮುಖವಾಗಲಿ.

"Asking Out" doesn't constitute as "Sexual Harassment". You need a stronger case than mere "he asked me out"! The Indian film industry is full of such real strong cases. Hope FIRE would work to bring the real cases out.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಅನುವಾದದ ವಿಪತ್ತು

ಒಂದು ಕೃತಿಯನ್ನು ಮತ್ತೊಂದು ಭಾಷೆಗೆ ಅನುವಾದಿಸುವಾಗ ಅನುವಾದಕನಿಗೆ ಆ ಭಾಷೆಗಳಲ್ಲಿ ಅದೇನೇ ಪಾಂಡಿತ್ಯವಿದ್ದರೂ ಆಯಾಯ ಭಾಷೆಯನ್ನು ಮಾತನಾಡುವ ಪರಿಸರದಲ್ಲಿ ಅದನ್ನು ಮಾತನಾಡಿ ವ್ಯವಹರಿಸುವ ಅನುಭವವಿರದಿದ್ದರೆ ಆ ಅನುವಾದ ಅಭಾಸವೆನಿಸುತ್ತದೆ. ಒಂದು ಭಾಷಾ ಪರಿಸರದ ನುಡಿಗಟ್ಟು, ಪದ ಪ್ರಯೋಗ, ಹೆಸರುಗಳ ಉಚ್ಚಾರ ಮತ್ತೊಂದು ಭಾಷೆಯಲ್ಲಿ ಯಥಾವತ್ತಾಗಿ ಅನುವಾದಿಸಿದರೆ ವಿಪರ್ಯಾಸಕ್ಕೀಡಾಗುತ್ತದೆ.

ಒಂದು ನಾಟಿ ಆಡುಮಾತಿನ ಕನ್ನಡ ಕೃತಿಯನ್ನು ಇಂಗ್ಲೀಷ್ ನ ಗ್ರಾಂಥಿಕ ಪರಿಭಾಷೆಯಲ್ಲಿ ಅನುವಾದಿಸುವುದು ಎಷ್ಟು ಸರಿ? ಆ ಕೃತಿಯ ಲೇಖಕನ ಮೂಲ ಆಶಯ ಅನ್ಯಭಾಷಿಗರಿಗೆ ತಲುಪೀತೆ?

ಒಂದು ಭಾಷೆಯ ವಾಕ್ಯದಲ್ಲಿ ಅಂತರ್ಗತವಾದ ಅರ್ಥವನ್ನು ಮತ್ತೊಂದು ಭಾಷೆಯಲ್ಲಿ ಕೆಲವೊಮ್ಮೆ ಒಡೆದು ಹೇಳಬೇಕಾಗುತ್ತದೆ, ಹಾಗೆಯೇ ವೈಸ್ ವರ್ಸಾ ಕೂಡ.  ಹಾಗಾಗಿ ಮೂಲ ಕೃತಿಗೆ ಚ್ಯುತಿ ಬರದಂತೆ ಅದರ ಭಾವಾರ್ಥಕ್ಕೆ ಬದ್ಧರಾಗಿ ಒಂದು ಪ್ರಾದೇಶಿಕ ಭಾಷೆಯ ಕೃತಿಯನ್ನು ಇಂಗ್ಲಿಷಿನ ಜಾಗತಿಕ ಪರಿಭಾಷೆಗನುಗುಣವಾಗಿ, ಆ ಪ್ರಾದೇಶಿಕತೆಯ ವಿಶಿಷ್ಟತೆಯನ್ನು ತೋರಿಸಿಕೊಡುತ್ತ ನಾಜೂಕಾಗಿ ಅನುವಾದಿಸಬೇಕೆಂಬುದು ನನ್ನ ಅಭಿಪ್ರಾಯ.

ಆ ರೀತಿಯ ಅನುವಾದದ ಪ್ರಯತ್ನವೇ ನನ್ನ ಅನುವಾದಿತ ಜುಗಾರಿ ಕ್ರಾಸ್!

ಇದರ ಸ್ಯಾಂಪಲ್ ಆಗಿ ಒಂದು ಮೂಲ ಅಧ್ಯಾಯ ಮತ್ತು ಅನುವಾದಿತ ಅಧ್ಯಾಯ ಇಲ್ಲಿದೆ. ದಯವಿಟ್ಟು ತಮ್ಮ ಅಭಿಪ್ರಾಯ ತಿಳಿಸಿ. ಈ ಕುರಿತು ಜ್ಞಾಪಿಸಿದ Vasant Shetty, ಹಾಗೂ Amar Holegadde ಅವರಿಗೆ ಧನ್ಯವಾದಗಳು!

ಕನ್ನಡತನ ಓಲಾಟವೋ, ಒಡಲಾಳವೋ?

ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ
ಕಲ್ಪವೃಕ್ಷವಾಗುತ್ತದೆಂದನಾ ಕವಿ.
ಖನ್ನಡವೆನಿ ಕೈ ಎತ್ತಿ ಕರವ(ವೇ) ಹೇರಿ
ಕಲ್ಪಕವ ಕಂಡುಕೊಂಡ ಭವಿ!
ಕವಿಯ ನುಡಿಗಿಂತ, ಭವಿಯ ಉದರಾಗ್ನಿ
ದಳ್ಳುರಿಯಾಗಿ ಆ ಬಣ ಈ ಬಣ ಸೇರಿ
ಹಿರಿಹಿರಿದು ಸಜ್ಜನರ
ಕಲ್ಪವೃಕ್ಷದೊಂದಿಗೆ ಕನ್ನಡ
ಕಾಮಧೇನುವ ಹಿಂಡುವುದ ಕಂಡು
ಬಸವಳಿದ ಹಗೆದಿಬ್ಬೇಶ್ವರ!

ಕಳೆದ ತಿಂಗಳು ನಾನು ಮುಖ್ಯ ಸಲಹೆಗಾರನಾಗಿರುವ ನನ್ನ ಸ್ನೇಹಿತನ ಬೆಂಗಳೂರು ಆಫೀಸಿನಲ್ಲಿ ಕುಳಿತಿದ್ದೆ.

ಕಳೆದ ಇಪ್ಪತ್ತು ವರ್ಷಗಳಿಗೂ ಮೀರಿ ಅಮೆರಿಕದಲ್ಲಿ ನನ್ನೊಂದಿಗೆ ಕೆಲಸ ಮಾಡಿ, ಉದ್ಯಮಿಯಾಗಿರುವ ಈತನೊಂದಿಗೆ ನನ್ನದು ಗುರು-ಶಿಷ್ಯ ಸಂಬಂಧ. ಘಟಾನುಘಟಿ ಆಂಧ್ರ ರಾಜಕಾರಣಿಗಳ ಸಂಬಂಧವಿದ್ದರೂ ಅದೆಲ್ಲ ಬಿಟ್ಟು  ಗುರುವಾದ ನನ್ನನ್ನು ಸಂಪ್ರೀತಗೊಳಿಸಲು ಬೆಂಗಳೂರಿನಲ್ಲಿ ಕಚೇರಿ ತೆರೆದ ಪುಣ್ಯಾತ್ಮ ಈತ.

ನನ್ನ ಸಲಹೆಯ ಮೇರೆಗೆ ತನ್ನ ಭಾರತದ ಶಾಖೆಯನ್ನು  ಕಳೆದ ವರ್ಷ ಬೆಂಗಳೂರಿನಲ್ಲಿ ತೆರೆದು ನೂರು ಜನಕ್ಕೆ ಐ.ಟಿ. ಉದ್ಯೋಗವನ್ನು ನೀಡಿದ್ದಾನೆ. ಆ ನೂರು ಜನರಲ್ಲಿ ಶೇಕಡಾ 90 ಭಾಗ ಕನ್ನಡಿಗರು, ಅದರಲ್ಲೂ ಒಳನಾಡು ಕನ್ನಡಿಗರಿಗೆ ಉದ್ಯೋಗ ನೀಡಿರುವ ತೆಲುಗು ಅಬ್ಬಾಯಿ ಈತ! ಜಗಳೂರಿನ ಸಿಕಂದರ್, ಹರಿಹರದ ಪಂಚಾಕ್ಷರಿ, ದಾವಣಗೆರೆಯ ಸಿಂಧು, ಬೆಂಗಳೂರಿನ ಲತಾ, ಮೈಸೂರಿನ ಕುಮಾರ್...ಹೀಗೆ ಪಟ್ಟಿ ಬೆಳೆಯುತ್ತದೆ.

ಇರಲಿ, ಆತನೊಂದಿಗೆ ಮಾತನಾಡುತ್ತ ಕುಳಿತಾಗ ನಾಲ್ಕು ಜನ ಆತನ ಛೇಂಬರಿಗೆ ಅಕ್ಷರಶಃ ನುಗ್ಗಿದರು. ಕೆಳಗಡೆ ಇದ್ದ ಸೆಕ್ಯೂರಿಟಿ, ಮೇಲ್ಮಹಡಿಯ ರಿಸೆಪ್ಸನ್ ದಾಟಿ ಮುಖ್ಯಾಧಿಕಾರಿಯ ಕೊಠಡಿಗೆ ದಬಾಯಿಸಿಕೊಂಡು ಕನ್ನಡ ರಾಜ್ಯೋತ್ಸವಕ್ಕೆ ಚಂದಾ ವಸೂಲಿಗೆ ಕರವೇ ಕಾರ್ಯಕರ್ತರೆಂದು ಹೇಳಿಕೊಂಡು ಬಂದಿದ್ದರು. ಕನ್ನಡ ಬಾರದ ನನ್ನ ಸ್ನೇಹಿತ ನನ್ನನ್ನು ತೋರಿ ಇವರೇ ಮುಖ್ಯಾಧಿಕಾರಿ ಎಂದು ಕೈಚೆಲ್ಲಿದ.

ಈಗಷ್ಟೇ ಸಾಲ ಸೋಲ ಮಾಡಿ ಕಂಪೆನಿ ನಡೆಸುವ ಕಷ್ಟಗಳ ಗೋಳಿಟ್ಟು, ಕೈಯಲ್ಲಿದ್ದ ಸಮಾಜಮುಖಿ ಪತ್ರಿಕೆ, ಹುಯೆನ್ ತ್ಸಾಂಗ್ ಪುಸ್ತಕದ ಹಿಂದಿದ್ದ ನನ್ನ ಚಿತ್ರ ತೋರಿಸಿ "ನಾವು ಸಾಕಷ್ಟು ಕನ್ನಡ ಸೇವೆ ಮಾಡುತ್ತಿದ್ದೇವೆ. ಸದ್ಯಕ್ಕೆ ಲಾಭದ ಹಾದಿ ಹಿಡಿದು ಮುಂದೆ ಹಣ ಸಹಾಯ ಮಾಡುವಷ್ಟು ಶಕ್ತಿ ಬರಲೆಂದು ಹಾರೈಸಿ" ಎಂದು ಚಹಾ ಕುಡಿಸಿ ಸಾಗಹಾಕಿದೆ.

ಆ ಕ್ಷಣದಲ್ಲಿ ನನ್ನ ಮೇಲಿನ ಅಭಿಮಾನಕ್ಕೆ ಮಹಾ ರಿಸ್ಕ್ ತೆಗೆದುಕೊಂಡಿದ್ದ ನನ್ನ ಶಿಷ್ಯನ ಕಣ್ಣಿನಲ್ಲಿ ಆ ನಿರ್ಧಾರದ ಕುರಿತು ಒಂದು ಸಣ್ಣ ಅಳುಕು ಕಂಡಿದ್ದು ಮಾತ್ರ ಸತ್ಯ!

ಕನ್ನಡ ಉಳಿಕೆ, ಬಳಕೆ ವ್ಯವಸ್ಥೆಯ ಒಂದು ಭಾಗವಾಗಿ ಬರಬೇಕೇ ಹೊರತು ಈ ರೀತಿಯ ಊಳಿಗಶಾಹಿ ಸಂಘ ಸಂಸ್ಥೆಗಳಿಂದಲೇ?

ವ್ಯಾಲೆಂಟೈನ್ಸ್ ದಿನ ಪ್ರೇಮಿಗಳ ಹಿಡಿದು ಮದುವೆ ಮಾಡಿಸುವ, ಮತ್ತದನ್ನು ವಿರೋಧಿಸಲು ಹ್ಯಾಲೋವೀನ್ ರೀತಿ ಚುಂಬಿಸಿ ನೈತಿಕ ಪೊಲೀಸುಗಿರಿ ಪ್ರತಿಭಟಿಸುವ, ಸಾವಿರ ಗುಡಿಗಳಿದ್ದರೂ ಆಯ್ದ ಗುಡಿಗೆ ಹೆಂಗಸರು ಹೋಗುವುದಕ್ಕೆ ಕ್ಯಾತೆ ಎತ್ತಿ ಕೋರ್ಟಿಗೆ ಹೋಗುವ, ಯಾರೋ ಯಾವುದೋ ಕಲ್ಲಿನ ಮೇಲೆ ಉಚ್ಚೆ ಹುಯ್ದುಕೊಂಡಿದ್ದಕ್ಕೆ ಹೇತುಕೊಳ್ಳುವ, ಊಟಕ್ಕೆ ಕರೆದದ್ದನ್ನು ಕಾಮಪೀಡನೆಯೆಂದು ಗೋಳಿಟ್ಟು "ಆಯ್ದ" ನಟಿಯ ಮೀಟೂ ಚಳುವಳಿಗೆ ಮಾತ್ರ ಬೆಂಬಲಿಸುವ, ಹುಡುಕಿ ಹುಡುಕಿ ಕ್ಷುಲ್ಲಕ ಸಂಗತಿಗಳಿಗೆ ರಾಷ್ಟ್ರವ್ಯಾಪಿ ಚಳುವಳಿ ನಡೆಸುವ ಚಿಂತಕರು, ಸಮಾಜ ಸುಧಾರಕರು, ನೈತಿಕಗಿರಿಕಾರರಿಂದ ಹಿಡಿದು, ಕನ್ನಡ ನಾಡು ನುಡಿಯೆಂದು ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಪತ್ರಿಕೆ, ಬಳಗ, ಸಿದ್ದಾಂತಿಗಳಿಗೆ ಈ ರೀತಿಯ ಕನ್ನಡಕ್ಕಾಗಿ "ಕೈಯೆತ್ತುವ" ಭಾಷಾ ಪೊಲೀಸುಗಿರಿ ಸಹ್ಯವಾಗಿರುವುದು ಏಕೆ?!

ಹಿಂದಿ ಹೇರಿಕೆ ಎಂದು ಬಡಬಡಿಸುವ ಅದೆಷ್ಟೋ ಕನ್ನಡ, ಪ್ರಾದೇಶಿಕತೆಯ ಓಲಾಟಗಾರರು ತಮ್ಮ ಜಾತಿಸೂಚಕವನ್ನು ಪ್ರಗತಿಯ ಸಂಕೇತವೆಂಬ ಲೋಲುಪ್ತತೆಯಲ್ಲಿ ಯಾದವ, ಮೌರ್ಯ ಎಂಬ ಹಿಂದಿ ಹೇರಿಕೆಯನ್ನು ಹೇರಿಕೊಂಡು "ಸುಪೀರಿಯಾರಿಟಿ ಕಾಂಪ್ಲೆಕ್ಸ್"ನಲ್ಲಿ ತೇಲುತ್ತ ಅದ್ಯಾವ ಕನ್ನಡತೆಯನ್ನು ಪ್ರತಿಪಾದಿಸುತ್ತಿದ್ದಾರೆ?

ಈ ಹುಚ್ಚು ಸದ್ಯದಲ್ಲೇ ಕಾರ್ಪೆಂಟರ್, ಶೆಪರ್ಡ್, ಸ್ಮಿತ್, ಶುಮಾಕರ್, ಕೌಬಾಯ್ ಎಂದು ಬಿಳಿಯತನದೊಂದಿಗೆ ಶ್ರೇಣೀಕರಿಸಿಕೊಂಡು ಹಮ್ಮಿನ ಬಿಮ್ಮಿನಿಂದ ಬೀಗುವ ಹಾದಿಯಲ್ಲಿದೆ.

ತಾವು "ಮೆಚ್ಚಿದ" ಸಿದ್ಧಾಂತ, ಪಂಥ, ಧರ್ಮದ ಕುರಿತಾಗಿ ಆಧುನಿಕ ಮಾನವನ ಮನದಾಳದಲ್ಲೆಲ್ಲೋ ಸುಪ್ತವಾಗಿರುವ ಭಾವನೆಯೇ ಸಿದ್ಧಾಂತವಾದ/ಪಂಥೀಯತೆ/ಜಾತೀಯತೆ/ಧಾರ್ಮಿಕ ಉಗ್ರವಾದಗಳನ್ನು ಪೋಷಿಸುತ್ತಿರುವಂತೆಯೇ, ಭಾಷಾಪ್ರೇಮಿಗಳ ಮನದಾಳದಲ್ಲಿ ಬೇರೂರಿರುವ ಆ ಒಂದು ಪಕ್ಷಪಾತೀ ಊಳಿಗಮಾನ್ಯ ಕ್ರೌರ್ಯದ ಭಾವ, ಈ ಭಾಷಾ ಉಗ್ರವಾದೀ ಸಂಘಟನೆಗಳನ್ನು ಪೋಷಿಸುತ್ತಿರುವುದು ಕನ್ನಡದಷ್ಟೇ ಸತ್ಯ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಮೀಟೂವಿನ ಆಚೆ ದಾಟು

ಲಂಕೇಶ್ ಆರತಿಯನ್ನು ಹಾಕಿಕೊಂಡು ಸಿನೆಮಾ ಮಾಡುತ್ತಿದ್ದಾಗ, ಪ್ರಣಯ ಸನ್ನಿವೇಶವೊಂದರಲ್ಲಿ ಆರತಿ "ಕಣ್ಣಲ್ಲೇ ಎಲ್ಲಾ ಕಾಮನೆ/ಭಾವನೆಗಳನ್ನು ತೋರಿಸುತ್ತೇನೆ" ಎಂದಳಂತೆ.

ಆಗ ಕಣ್ಣಲ್ಲೇ ಎಲ್ಲಾ ತೋರ್ಸೋದಾದ್ರೆ ಬೇರೇ ಅಂಗಾಗಗಳು ಏಕಿರಬೇಕು ಎಂದು ತಪರಾಕಿ ತಟ್ಟಿ ತಮಗೆ ಬೇಕಾದಂತೆ ಲಂಕೇಶ್ ಚಿತ್ರೀಕರಿಸಿಕೊಂಡರಂತೆ! ಇದು ಲಂಕೇಶರ ಒಂದು "ಕೋಡು", "ಕ್ರಿಯಾಶೀಲತೆ", "ಸೃಜನಶೀಲತೆ" ಎಂಬಂತೆ ಹೆಮ್ಮೆಯಿಂದ ಅವರ ಭಕ್ತರನೇಕರು ಬರೆದಿದ್ದನ್ನು ಸಾಕಷ್ಟು ಸಾರಿ ಓದಿದ್ದೇವೆ.

ಈಗ ಆ ಲಂಕೇಶರ ನಿರ್ದೇಶನದ, ಸಾಮಾಜಿಕ ಕಳಕಳಿಯ ಪರಂಪರೆಯನ್ನು (ವ್ಯಕ್ತಿತ್ವ, ವೈಯಕ್ತಿಕ ಜೀವನವಲ್ಲದ) ಹೊತ್ತಿರುವ ಪುತ್ರಿ, ಮತ್ತು ಲಂಕೇಶರನ್ನು ಆರಾಧಿಸುವ ಅಭಿಮಾನಿಗಳ ಪಡೆಯಿರುವ FIRE ಸಂಸ್ಥೆ, ನಿಜಕ್ಕೂ MeToo ಪರ ನಿಷ್ಪಕ್ಷಪಾತವಾಗಿರುತ್ತದೆಯೇ?

ಆತ ಒಂದು ಕ್ರಿಯಾಶೀಲ ಹೆಣ್ಣಿಗೆ ಅಂಗಾಂಗ ತೋರೆಂದುದು ಕ್ರಿಯಾತ್ಮಕವೂ, ಮತ್ತೊಬ್ಬ ಗಂಡು ಒಂದು ಹೆಣ್ಣನ್ನು ಊಟಕ್ಕೆ (ಆಟಕ್ಕೇ ಎಂದುಕೊಳ್ಳಿ) ಯಾವುದೇ ವೃತ್ತಿ ಸಂಬಂಧೀ ನಿಬಂಧನೆಗಳ ಒತ್ತಡವಿಲ್ಲದೆ ಕರೆದುದು ಕಾಮಪೀಡನೆ ಎಂದು ಪ್ರತಿಪಾದಿಸುವುದೇ ಹಾಸ್ಯಾಸ್ಪದ. ಹಾಗಿದ್ದರೆ ಸಂಗಾತಿಯನ್ನು ಬಯಸಿ ನಡೆಸುವ ಎಲ್ಲಾ ಸಾಮಾಜಿಕ ಪ್ರಕ್ರಿಯೆಗಳಾದ ವಧುವರಾನ್ವೇಷಣೆ, ಡೇಟಿಂಗ್, ಇತ್ಯಾದಿ ಕೂಡ ಕಾಮಪೀಡನೆಯೇ?!

ಡೇಟಿಂಗಿಗೆಂದೇ ಹೊರಕ್ಕೆ ಕರೆಯುವುದು ಕಾಮಪೀಡನೆಯಾಗುವುದಿಲ್ಲ. ಭಾರತೀಯ ಸಿನೆಮಾ ಉದ್ಯಮದಲ್ಲಿ ನಿಜ ಕಾಮಪೀಡನೆಯ ಪ್ರಕರಣಗಳು ಸಾರ್ವಭೌಮನಿಂದ ಹಿಡಿದು ಕ್ಲ್ಯಾಪ್ಬಾಯ್ಸ್ ವರೆಗೆ ಅಗಣಿತವಾಗಿವೆ. ಇದ್ದುದರಲ್ಲಿ ಸಂಗೀತಾ ಭಟ್ ಎತ್ತಿರುವ ದೂರು ಸತ್ಯಕ್ಕೆ ಸಮಂಜಸವಾಗಿದೆ. ಅಂತಹ ಪ್ರಕರಣಗಳನ್ನು ಬೆಳೆಕಿಗೆ ತರುವತ್ತ FIRE ಕಾರ್ಯೋನ್ಮುಖವಾಗಲಿ.

"Asking Out" doesn't constitute as "Sexual Harassment". You need a stronger case than mere "he asked me out"! The Indian film industry is full of such real strong cases. Hope FIRE would work to bring the real cases out.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

FIRE ಸಂಸ್ಥೆಯ ಸಹಾಯ ಕೋರಿ ಸಂಗೀತಾ ಭಟ್ ಬರದಿದ್ದುದರಿಂದ ಸಂಸ್ಥೆ ಆಕೆಗೆ ಸಹಾಯ ಮಾಡುತ್ತಿಲ್ಲವಂತೆ. ಸಂಸ್ಥೆಗೆ ಅದರದೇ ಆದ "ಚೌಕಟ್ಟು" ಇದೆಯಂತೆ. ಹಾಗೆಂದು ಸಂಸ್ಥೆಯ ಪರಿಚಯವಿರುವ ಸ್ನೇಹಿತ ನಿತೇಶ್ ಕುಂಟಾಡಿ Kuntady Nithesh ತಿಳಿಸಿದ್ದಾರೆ.

ಶೋಷಿತ ಮಹಿಳೆ ತನ್ನ ಬಾಗಿಲಿಗೆ ಬಂದು ಸಹಾಯ ಕೇಳಲಿ ಎಂಬ ನಿಯಮವೇ ಊಳಿಗಮಾನ್ಯ ಪದ್ದತಿ!

ಪದೇ ಪದೇ ಊಟಕ್ಕೆ ಕರೆದನೆಂಬ ಒಬ್ಬ ನಟಿಯ ದೂರಿಗೆ ಅಲ್ಲೋಲಕಲ್ಲೋಲ ಮಾಡುತ್ತಿರುವ ಚಳುವಳಿ ವೀರರು, ಬಿಡಿಬಿಡಿಯಾಗಿ ಪೀಡನೆಯನ್ನು ವರ್ಣಿಸಿರುವ ಸಂಗೀತಾ ಭಟ್ ರನ್ನೇಕೆ ಮೂಲೆಯಲ್ಲಿರಿಸಿದ್ದಾರೆ? ಆಕೆಗೆ ಸಾಂತ್ವನ, ಧೈರ್ಯ ನೀಡಿ ಆಕೆಯ ಪೀಡನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಲು ಸಹಾಯ ಮಾಡುತ್ತಿಲ್ಲವೇಕೆ? ಆಕೆ ಕನ್ನಡ ಚಿತ್ರರಂಗದ ಕುರಿತು ಪ್ರಪ್ರಥಮವಾಗಿ ದೂರಿದ್ದಾಳೆಂದು ಹೆಸರಿಸಿದ್ದು ಬಿಟ್ಟರೆ ಲಕ್ಷ್ಯವೆಲ್ಲಾ ಸೋಲುವ ಕುದುರೆಯ ಮೇಲಿದೆ.

ಒಬ್ಬ ಸ್ನೇಹಿತ ಯಾ ಸಹೋದ್ಯೋಗಿ ಪದೇ ಪದೇ ಊಟಕ್ಕೆ ಆಟದ ಉದ್ದೇಶದಿಂದಲೇ ಕರೆದರೆ ಅದು ವೃತ್ತಿರಂಗದ ಕಾಮಪೀಡನೆ ಆಗುವುದಿಲ್ಲ. ಆತ ಅದರೊಂದಿಗೆ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಆಮಿಷವನ್ನೊಡ್ಡಿದಾಗ ಮಾತ್ರ ಅದು ಕಾಮಪೀಡಿತ. ಇಲ್ಲದಿದ್ದರೆ ಅದು ಇಬ್ಬರು ವಯಸ್ಕರ ನಡುವಿನ ಮಾತುಕತೆ ಮಾತ್ರ, ಇದು ಸಾಮಾನ್ಯ ಜ್ಞಾನ. 

ಆಯ್ದ ಆಯ್ಕೆಯ ಶೋಷಿತರನ್ನು ಮಾತ್ರ (ಮ)ಮೆರೆಸುವ ಇಂತಹ ಚಳುವಳಿ, ಬುದ್ಧಿಜೀವಿ, ನಿವೇದನೆ, ಸಂಸ್ಥೆಗಳು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡಿಯಾವೆಯೇ?

ಯಾವುದೇ ನಿವೇದನೆಗಳನ್ನು ಸಹಿ ಹಾಕಿ ಹಂಚಿಕೊಳ್ಳುವ ಮುಂಚೆ ಸಂಚಿನ ಅರಿವಿರಲಿ.

#ಸೂಚನೆ: ನನ್ನ ಹಿಂದಿನ ಪೋಸ್ಟಿನಲ್ಲಿ ಉದ್ದೇಶಪೂರ್ವಕವಾಗಿ ಲಂಕೇಶರನ್ನು ಎಳೆದು ತಂದಿದ್ದೆ. ಏಕೆಂದರೆ ಲಂಕೇಶ್ ಆರತಿಗೆ ಹಾಗೆ ಹೇಳಿದ್ದರೋ ಇಲ್ಲವೋ ಅವರ ಭಕ್ತರು ಮಾತ್ರ ಆ ಕುರಿತಾಗಿ ಅವರು ತೀರಿಕೊಂಡ ನಂತರ ಬರೆದದ್ದೇ ಬರೆದದ್ದು!

ಲಂಕೇಶರ ಪರಂಪರೆ(?)ಯನ್ನು ಗುತ್ತಿಗೆ ಹಿಡಿದಿರುವ ಒಂದು ಬಹುದೊಡ್ಡ ಗುಂಪು ಅವರ ಅಮಾಯಕ ಮಗಳನ್ನು ಹುಯಿಲೆಬ್ಬಿಸಿ ದಿಕ್ಕೆಡಿಸಿ ಆದ ಅನಾಹುತ ದೇಶ ನೋಡಿದೆ.

ಈಗ ಅದೇ ಗುಂಪು, ದೇಶದ ಎಲ್ಲ ವಿವಾದಗಳಲ್ಲಿ ತಮಗೆ ಮೈಲೇಜ್ ಕೊಡುವ, ಸಂಗತಿಗಳನ್ನು ಮಾತ್ರ ಆಯ್ದುಕೊಂಡು (ವೀರಶೈವ ಲಿಂಗಾಯತ, ಅಯ್ಯಪ್ಪ, ಮೀಟೂ, ಇತ್ಯಾದಿ)
ತಮ್ಮ ವಿರೋಧಿಗಳಿಗೆ "F" ಮಾಡುವ ಏಕಮಾತ್ರ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಜನತೆ ಆ ಉದ್ದೇಶಕ್ಕೆ ವ್ಯಾಸಲಿನ್ ಆಗಬಾರದು.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಶರಣಂ ಅಯ್ಯಪ್ಪ, ಅಯ್ಯಯ್ಯಪ್ಪಾ

Activist Rehana Fathima's Eka movie poster: "I have a penis and vagina, I want to live."
Yes, this should qualify her to be the first female to visit Ayyappa. When Ayyappa represents the creation of life by male gods Hari and Hara with no females, Rehana is just extending the same "Genetical Engineering" to the next level! She deserves to be the first.
ಹೋರಾಟಗಾರ್ತಿ ರೆಹಾನಾ ಫಾತಿಮಾ ನಟಿಸಿರುವ ಏಕಾ ಚಿತ್ರದ ಪೋಸ್ಟರ್ "ನನಗೆ ಶಿಶ್ನ, ಯೋನಿ ಎರಡೂ ಇವೆ. ನಾನು ಬದುಕಲಿಚ್ಚಿಸುತ್ತೇನೆ".
ಮಹಿಳೆಯಿಲ್ಲದೆ ಸೃಷ್ಟಿ ಸಾಧ್ಯವೆಂಬ ಪುರುಷ ದೇವರುಗಳಾದ ಹರಿ ಹರರ ಮೂರ್ತರೂಪವಾದ ಅಯ್ಯಪ್ಪನನ್ನು ದರ್ಶಿಸುವ ಪ್ರಥಮ ಮಹಿಳೆಯಾಗಲು, ಇನ್ನೊಂದು ಜೀವಿಯ ಅಗತ್ಯವೇ ಇಲ್ಲದೆ ಸೃಷ್ಟಿ ಸಾಧ್ಯವೆಂಬ ಅಯ್ಯಪ್ಪನ ಜೆನೆಟಿಕಲ್ ಇಂಜಿನಿಯರಿಂಗ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಈಕೆ ಅತ್ಯಂತ ಅರ್ಹಳಾಗಿದ್ದಾಳೆ!

#IndiaTheMentalHospital

ಹುಯೆನ್ ತ್ಸಾಂಗ್ ನ ಮಹಾಪಯಣ: ಪ್ರತಿಕ್ರಿಯೆಗಳು

ಹುಯೆನ್ ತ್ಸಾಂಗ್ ನ ಮಹಾಪಯಣ
---------------------------------
ಹೈಸ್ಕೂಲ್ ನಲ್ಲಿ ಸಾಮಾಜಿಕ ವಿಜ್ಞಾನ ಪುಸ್ತಕ ಓದುವಾಗ ಅಂಕಗಳಿಗಾಗಿ ಆತನ ಹೆಸರನ್ನು ನೆನಪಿನಲ್ಲಿಟ್ಟುಕೊಂಡದ್ದು ಬಿಟ್ಟರೆ, ಆತನ ಕುರಿತಾಗಿ ಮತ್ತೇನೂ ತಿಳಿದಿರಲಿಲ್ಲ. ರವಿ ಹಂಜ್ ರವರು ' ಹುಯೆನ್ ತ್ಸಾಂಗನ ಮಹಾಪಯಣ ' ಪುಸ್ತಕದ ಮೂಲಕ ಆತನ ಚರಿತ್ರೆಯನ್ನು ಸೊಗಸಾಗಿ ನಿರೂಪಿಸಿದ್ದಾರೆ.ಪುಸ್ತಕ ಬಿಡುಗಡೆಯ ದಿನ ಹಂಜ್ ರವರು ತಿಳಿಸಿದಂತೆ ಸುಮಾರು ಆರು ವರ್ಷಗಳ ಕಾಲ ಅಧ್ಯಯನ ನಡೆಸಿ ಬರೆದಿರುವಂತ ಕೃತಿ.

ನಾನು ಒಂದೇ ಉಸಿರಿಗೆ,ಒಂದೇ ದಿನದಲ್ಲಿ ಓದಿ ಮುಗಿಸಿದ ಮೊಟ್ಟಮೊದಲ ಪುಸ್ತಕ.

ತನ್ನ ಅಣ್ಣನಂತೆ ತಾನೂ ಬೌದ್ಧ ಭಿಕ್ಷು ವಾಗಬೇಕೆಂಬ ಹಂಬಲದಿಂದ ನಿಗದಿತ ವಯಸ್ಸಿನ ಅರ್ಹತೆಗಿಂತ ಕಿರಿಯನಾಗಿದ್ದರೂ ಧರ್ಮಶಾಲೆಯ ಆಯ್ಕೆ ಸಮಿತಿಯ ಮುಂದೆ ದಿಟ್ಟ ವಾಗಿ ಉತ್ತರಿಸುವ ಮೂಲಕ ಆಯ್ಕೆಗೊಂಡು ಮಹಾಯಾನವನ್ನು ಆಳವಾಗಿ ಅಭ್ಯಸಿಸುತ್ತಾನೆ.
ಬೌದ್ಧ ಧರ್ಮದ ತವರೂರಾದ ಭಾರತವನ್ನು ದರ್ಶಿಸಬೇಕೆಂಬ ಮಹದಾಸೆ ಹೊತ್ತು ಅಂದಿನ ಚೀನೀ ಚಕ್ರವರ್ತಿಯ ಆಜ್ಞೆಯನ್ನು ಮೀರಿ ಟ್ಯಾಂಗ್ ಸಾಮ್ರಾಜ್ಯದ ರಾಜಧಾನಿ ಚಾಂಗಾನ್ ನಿಂದ ಹೊರಟು, ಹಗಲಿನಲ್ಲಿ ಅವಿತುಕೊಂಡು ರಾತ್ರಿಯಲ್ಲಿ ಪ್ರಯಾಣ ಬೆಳೆಸುತ್ತಾನೆ.ಸುಮಾರು 10000 ಮೈಲುಗಳ ದುರ್ಗಮಯಾತ್ರೆ ಕೈಗೊಳ್ಳುವ ತ್ಸಾಂಗನು ಕೇವಲ ಜ್ಞಾನದ ಶೋಧನೆಯ ಗುರಿಹೊತ್ತು ನಡೆಯುತ್ತಾನೆ.
ಭಾರತದಲ್ಲಿ ಬೌದ್ಧ ಧರ್ಮದ ಕುರಿತಾಗಿ ಅಧ್ಯಯನ ನಡೆಸುವುದರೊಂದಿಗೆ ಆಗಿನ ಇಲ್ಲಿನ ಜನರ ಸಂಸ್ಕ್ರತಿಯನ್ನು ದಾಖಲಿಸುವುದರ ಜೊತೆಗೆ ಭೌಗೋಳಿಕ ಹಿನ್ನೆಲೆ, ಹವಾಮಾನ ಮುಂತಾದ ಇತಿಹಾಸದಲ್ಲಿ ದಾಖಲಾಗುವಂತ ಅನೇಕ  ವಿಚಾರಗಳನ್ನು ದಾಖಲಿಸುತ್ತಾ ಸಾಗುತ್ತಾನೆ.ಬೌದ್ಧ ಧರ್ಮ ಅದಾಗಲೇ ಅವನತಿ ಹೊಂದುತ್ತಿದ್ದ ಕಾಲದಲ್ಲಿ ದರ್ಶಿಸುವ ತ್ಸಾಂಗನು ಅದರ ಕುರಿತಾಗಿ ನೊಂದುಕೊಳ್ಳುತ್ತಾನೆ.
ತ್ಸಾಂಗನ ಮಹಾಪಯಣದ ಈ ಪುಸ್ತಕ ರಹಮತ್ ತರೀಕೆರೆ ಯವರು ಹೇಳಿದಂತೆ ನಮಗೂ ಆ ಯಾತ್ರೆಯ ಸ್ಥಳಗಳನ್ನು ನೋಡಿ ಬರುವಂತೆ ಅನಿಸುವುದು ಸತ್ಯ.
ರವಿ ಹಂಜ್ ರವರು ತುಂಬಾ ಸೊಗಸಾಗಿ ನಿರೂಪಿಸಿದ್ದು, ರೋಮಾಂಚಕ ಕಾದಂಬರಿ ಓದಿದ ಅನುಭವ ಸಿಗುತ್ತದೆ.

ಎಲ್ಲರೂ "ಮಹಾಪಯಣ" ದ ಪುಸ್ತಕದ ಮೂಲಕ ಯಾತ್ರೆ ಕೈಗೊಳ್ಳಿ. ರೋಮಾಂಚಕ ಅನುಭವ ಪಡೆದುಕೊಳ್ಳಿ.

-ಪಂಪ ತೋರಣಗಲ್
----------------------------------------------
ಸರ್ ಪುಸ್ತಕ ಓದಿದೆ. ನನ್ನ ಕುತೂಹಲವನ್ನು ತಣಿಸಿದ್ದಲ್ಲದೆ ಹ್ಯುಯೆನ್ ತ್ಸಾಂಗ್‌ನ ಯಾತ್ರೆ ಬಗ್ಗೆ ನನಗಿದ್ದ ಅನೇಕ ಗೊಂದಲ ಗೋಜಲುಗಳಿಗೆ ಪರಿಹಾರ ಒದಗಿಸಿತು. ಹಿನಾಯಾನ, ಮಹಾಯಾನ, ಯೋಗಾಚಾರ ತತ್ವ, ಪಂಥಗಳ ಬಗ್ಗೆ ನನಗಿದ್ದ ಅನುಮಾನಗಳನ್ನು ಬಗೆ ಹರಿಸಿತು. ಹ್ಯುಯೆನ್ ತ್ಸಾಂಗ್ ದಕ್ಷಿಣ ಭಾರತಕ್ಕೆ ಬಂದಾಗ ಇಲ್ಲಿನ ದೊರೆಗಳ ಭೇಟಿ ಮಾಡಿದ್ದರ ಬಗ್ಗೆ ವಿವರ ಮಾಹಿತಿ ನೀಡದಿರುವುದು ನಿರಾಶೆ ತಂದರೂ. ಹರ್ಷವರ್ಧನ, ಅಸ್ಸಾಂನ ಮಹಾರಾಜ, ನಳಂದ ವಿಶ್ವವಿದ್ಯಾಲಯದಲ್ಲಿ ಜ್ಞಾನಾರ್ಜನೆಗೆ ಸೇರಿದ ಬಗೆಗಿನ ವಿವರಗಳು ಓದುಗರ ಜ್ಞಾನದಾಹ ನೀಗಿಸುವುದಲ್ಲದೆ ಇತಿಹಾಸದ ಬಗೆಗಿನ ಅನೇಕ ಗೊಂದಲಗಳನ್ನು ನಿವಾರಿಸುತ್ತವೆ. ಹ್ಯುಯೆನ್ ತ್ಸಾಂಗ್ ಸಿಲೋನ್‌ಗೆ ಭೇಟಿ ನೀಡಿರಲಿಲ್ಲ ಎನ್ನಲಾಗುತ್ತದೆ. ಆದರೆ ಅಲ್ಲಿಗೆ ಭೇಟಿ ನೀಡಿದ್ದ ಎಂದು ಚಿತ್ರಿಸಲಾಗಿದೆ ಆದರೆ ಅದರ ಬಗ್ಗೆಯೂ ಹೆಚ್ಚಿನ ವಿಚಾರಗಳಿಲ್ಲ. ತ್ಸಾಂಗ್ ಕೈಗೊಂಡ ಸಂಪೂರ್ಣ ಯಾತ್ರೆಯ ಮ್ಯಾಪ್ ಹಾಕಿ ಓದುಗರಿಗೆ ಆತನ ತಿರುಗಾಟದ ಸ್ಪಷ್ಟ ಗ್ರಹಿಕೆ ನೀಡಬಹುದಿತ್ತು. ಮತ್ತೊಂದು ಆತ ಟ್ಯಾಂಗ್ ಸಾಮ್ರಾಜ್ಯದ ಪಶ್ಚಿಮಕ್ಕೆ ಬಹುದೂರ ಸಾಗಿ ಮತ್ತೆ ದಕ್ಷಿಣಕ್ಕೆ ಸುತ್ತಿ ಬರುವ ಔಚಿತ್ಯ ಅರ್ಥವಾಗುವುದಿಲ್ಲ. ಕೃತಿಯಲ್ಲೂ ಆ ಬಗ್ಗೆ ಹೆಚ್ಚಿನ ಮಾಹಿತಿ ದೊರಕುವುದಿಲ್ಲ.
ಇರಲಿ.  ತಾಷ್ಕೆಂಟ್, ಕಿರ್ಗಿಸ್ತಾನ್, ಅಪ್ಘಾನಿಸ್ತಾನ, ಈಗಿನ ಪಾಕಿಸ್ತಾನ್ ಮೂಲಕ ಭಾರತದ ನೆಲ ತಲುಪುವ ಹ್ಯುಯೆನ್ ತ್ಸಾಂಗ್ ಭಾರತದ ಅಂದಿನ ಸ್ಥಿತಿಗತಿಗಳ ಬಗ್ಗೆ ದಾಖಲಿಸದೇ ಹೋಗಿದ್ದರೆ ನಮ್ಮ ದೇಶದ ಇತಿಹಾಸವೇ ಅಪೂರ್ಣವಾಗುತ್ತಿತ್ತು ಎನಿಸುತ್ತದೆ. ಭಾರತದ ಇತಿಹಾಸದ ಬಗ್ಗೆ ತಳಸ್ಪರ್ಶಿಯಾಗಿ ಅಧ್ಯಯನ ಕೈಗೊಳ್ಳುವವರಿಗೆ ಹ್ಯುಯೆನ್ ತ್ಸಾಂಗ್ ಎಂಬ ತಿರುಗಾಡಿ ಒಬ್ಬ ಮಾರ್ಗದರ್ಶಕನಂತೆ ಗೋಚರಿಸುತ್ತಾನೆ. ಈ ಕೃತಿ ಅತ್ಯಂತ ಮೌಲಿಕ ಕೃತಿಯಾಗಿದ್ದು ಎಲ್ಲಾ ಸಾಹಿತ್ಯಾಸಕ್ತರು. ಅಧ್ಯಯನಕಾರರು, ಇತಿಹಾಸ ತಜ್ಞರು ಒದಲೇಬೇಕಾದ ಕೃತಿ. ಓದದಿದ್ದರೆ ಇತಿಹಾಸದ ಲಿಂಕ್ ಮಿಸ್ ಆಗುವುದಂತೂ ಖಚಿತ.
- ನೀರಕಲ್ಲು ಶಿವಕುಮಾರ್
-----------------------------------
Ravi Hanj sir I read this book.
This is one of the best informative book especially for teachers and students
This book is of great importance and necessity to Kannada literature and education field
This should be kept in library of all schools and colleges
Your hard work of 5years is not wasted.
People will remember you for the contribution of this book.
Thank you sir.

-Bhagya Lakshmi
------------------------------------------
ಓದಿದೆ....ಸೊಗಸಾದ ಪುಸ್ತಕ..
ಹ್ಯುಯೆನ್ ತ್ಸಾಂಗ್ ಮಹಾಶಯ ಇಷ್ಟೆಲ್ಲಾ ಓಡಾಡಿ,ಸ್ಥಳಗಳಲ್ಲಿನ ವಿವರಗಳನ್ನು ಬಿಚ್ಚಿಡುತ್ತಾ ಹೋದಂತೆಲ್ಲಾ ಮನಸು ತುಂಬಿಬಂತು...ಆ ಕಾಲದಲ್ಲಿ ಈತನ ಪ್ರವಾಸದ ಕನಸು, ಕಷ್ಟ ಕಾರ್ಪಣ್ಯಗಳು ಸುಖ ದುಃಖ ಗಳೆನ್ನಲ್ಲಾ ಆತ ಅವಡುಗಚ್ಚಿಕೊಂಡು ಮೌನವಾಗಿ ಆದರೆ ಯಶಸ್ವಿಯಾಗಿ ದಾಖಲಿಸುತ್ತಾ ಹೋಗಿರೋದು ಇನ್ನೊಂದು ಅದ್ಭುತ...
ಇಂಡಿಯಾ ದವರ ಬಗ್ಗೆ ಆತನ ಅಭಿಪ್ರಾಯ ಈಗಲೂ ಚೂರೂ ಬದಲಾಗದೇ ಉಳಿದಿರೋದು ಇನ್ನೊಂದು ವಿಶಾದದ ಸಂಗತಿ

ಏನಾರ ಆಗ್ಲಿ..ರವಿ ಸರ್ ಅವರಿಗೆ
ಪ್ರಕಾಶಕರಿಗೂ ಅಭಿನಂದನೆಗಳು..

ಇಂಥದೊಂದು ವೈಶಿಷ್ಟ್ಯ ಪೂರ್ಣ ಪುಸ್ತಕ ಕೊಟ್ಟಿದ್ದಕ್ಕೆ!
- ಮೋಹನ್ ಕೋರಿ
-------------------------------------------
Ravi Hanj ಪುಸ್ತಕ ಒಂದೇ ಏಟಿಗೆ ಓದಿ ಮುಗಿಸಿದೆ. ಒಂದು ಅದ್ಭುತ ಪಯಣ. ನನ್ನ ಮಡದಿ Sowmya Suma ಓದಿ ತುಂಬಾ ಖುಷಿ ಪಟ್ಟಳು. ನನ್ನ ಮಗಳು Meghana Sudhindra ಹಾಗೂ ಮೂವರು ಆತ್ಮೀಯ ಮಿತ್ರರಿಗೂ ಪ್ರತಿಗಳನ್ನು ಕೊಂಡಿದ್ದೇನೆ. ಆಲ್ ದಿ ಬೆಸ್ಟ್.
ಒಳ್ಳೆಯ ಪ್ರಯತ್ನ Chandrakanta Vaddu ಅವರೆ.
- ಸುಧೀಂದ್ರ ಹಾಲ್ದೊಡ್ಡೇರಿ

ಲಿಂಗಾಯತ ನವ ಧರ್ಮ ಧುರೀಣರ ನಾಮಪರಿವಿಪರ್ಯಾಸ!

ಲಿಂಗಾಯತ ಎಂಬುದು ಪ್ರತ್ಯೇಕ ಧರ್ಮ, ಇದಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಕರ್ನಾಟಕ ಸರ್ಕಾರ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಈ ನಡುವೆ, ಬಸವ ತತ್ತ್ವದ ಮೇಲೆ ರೂಪಿತವಾಗಿರುವ ಹೊಸ ಲಿಂಗಾಯತ ಧರ್ಮಕ್ಕೆ ಸೇರಬಲ್ಲ ನಾಯಕರ ಹೆಸರುಗಳಲ್ಲಿ ಹಿಂದೂ ದೇವರ ಹೆಸರು ಬಳಕೆ ಮಾಡುವುದು ಎಷ್ಟು ಸರಿ?

ಇಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀ ಶ್ರೀ ಶ್ರೀ ಗಳ ನಾಮ ವಿಶೇಷಗಳನ್ನು ವಿಶ್ಲೇಷಿಸೋಣ. ಅಂದ ಹಾಗೆ ಈ ಹೆಸರುಗಳು ಸ್ವಾಮಿಗಳಿಗೆ ಬಂದ ಹುಟ್ಟುನಾಮವಲ್ಲ! ಸನ್ಯಾಸ ದೀಕ್ಷೆಯಾದಾಗ ಇಟ್ಟುಕೊಂಡ ಹೆಸರುಗಳು. 

ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮಿಗಳು: ಇವರ ಹೆಸರಿನಲ್ಲಿಯೇ ಶಿವನಿದ್ದಾನೆ. ಶಿವ ಹಿಂದೂ ದೇವ. ಲಿಂಗಾಯತರು ಯಾವುದೇ ಮೂರ್ತಿಪೂಜೆ, ಹಿಂದೂ ದೇವತೆಯ ಉಪಾಸನೆಯಲ್ಲಿ ತೊಡಗದಿದ್ದರೆ, ಇವರ ಹೆಸರಲ್ಲಿ ಶಿವ ಮತ್ತು ಮೂರ್ತಿಗೆ ಏಕೆ ಸ್ಥಾನ ಕೊಟ್ಟರು? 

ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು: ಶಿವ ಇವರ ಪ್ರಥಮ ಮತ್ತು ದ್ವಿತೀಯ ಎರಡು ಹೆಸರಲ್ಲಿಯೂ ಇದ್ದಾನೆ. ಅದಲ್ಲದೇ ಮೂರ್ತಿ ಮತ್ತು ಆಚಾರ್ಯ (ಗುರು) ಕೂಡ. ಹಾಗಿದ್ದರೆ ಇವರ ಹೆಸರಿನಲ್ಲಿರುವ ಶಿವ ಅದಾವ ಅಹಿಂದು ದೇವಾ/ದೇವತೆ? 

ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮಿಗಳು: ಪಂಡಿತಾರಾಧ್ಯ ಕಾಳಮುಖ ಯಾ ವೀರಶೈವರ ಪ್ರೀತ್ಯಾರ್ಥ ನಾಮ. ಅದರಲ್ಲೂ ರೇಣುಕರೊಬ್ಬರ ನಾಮ. ಈ ನಾಮವನ್ನು ಇವರ ಗುರುಗಳು ದಯಪಾಲಿಸಿದ್ದು. ಹಾಗಿದ್ದರೆ ಇವರ ಗುರುಗಳಿಗೆ ತಮ್ಮ ಧರ್ಮದ ಬಗ್ಗೆ ತಪ್ಪು ತಿಳುವಳಿಕೆಯಿತ್ತೇ? 

ಜಯ ಮೃತ್ಯುಂಜಯ ಸ್ವಾಮಿಗಳು: ಪಂಚಮಸಾಲಿ ಪೀಠಾಧೀಶರಾದ ಇವರ ಹೆಸರಿನಲ್ಲಿ ಉಗ್ರ ಶೈವ ಸಂಪ್ರದಾಯದ ಶಿವನಾಮವಿದೆ. ಮೃತ್ಯುಂಜಯ ಜಪ ಶೈವರ ಅತ್ಯಂತ ಉಗ್ರಪ್ರೀತಿಯ ಜಪ. ವೀರಶೈವ/ಲಿಂಗಾಯತರಲ್ಲಿ, ಗುರು ಪರಂಪರೆಯ ಮಠಾಧೀಶರು ಈ ಜಪದಲ್ಲಿ ಪರಿಣಿತರು. ಮೃತ್ಯುಂಜಯ ಅದು ಹೇಗೆ ಹಿಂದೂ ನಾಮಕ್ಕಿಂತ ಭಿನ್ನ? 

ಸಿದ್ದರಾಮ, ಸಿದ್ದಲಿಂಗ, ಇತ್ಯಾದಿ, ಇತ್ಯಾದಿ: ಈ ಸ್ವಾಮಿಗಳ ಹೆಸರಲ್ಲಿ ರಾಮನನ್ನು ಸಿದ್ಧಿಸಿದ, ಲಿಂಗವನ್ನು (ಇದು ಶಿವನಲ್ಲ ಎಂಬುದು ಇವರ ಅರಿಕೆ) ಸಿದ್ಧಿಸಿದ ಎಂಬರ್ಥ ಸಹಜ. ಹಾಗಿದ್ದರೆ ರಾಮ, ಲಿಂಗಾರ್ಥದ ಶಿವ, ಹಿಂದೂ ದೇವರುಗಳಲ್ಲವೇ? 

ಇನ್ನು ಲಿಂಗಾಯತ ಧರ್ಮಸಂಸ್ಥಾಪಕ ಬಸವಣ್ಣ! ಶಿವನ ವಾಹನ ನಂದಿಯ ಸಂಪ್ರೀತಿಯ ಕನ್ನಡ ನಾಮ. ಅಕ್ಕ ಮಹಾದೇವಿ ಪಾರ್ವತಿಯ ಅನ್ವರ್ಥಕ ನಾಮ, ಅಲ್ಲಮಪ್ರಭು ಶಿವನಾಮ!! 

ಇಂತಹ ಒಂದು ಸಾಮಾನ್ಯ ತಿಳುವಳಿಕೆ ಜನಸಾಮಾನ್ಯರಲ್ಲಿ ಜನಜನಿತ! ಅದ್ಯಾವ ಬೆಡಗಿನ ಒಡಪು, ದಿಜ್ಞಾನ, "ಅಹಿಂದ"ತ್ವ ಕರ್ನಾಟಕ ಸರ್ಕಾರ ರಚಿಸಿದ್ದ ಸಮಿತಿಯ ಹೊಳಹಿಗೆ ದಕ್ಕಿತು?!? ನ್ಯಾ. ಜಗಮೋಹನದಾಸ್ ಸಮಿತಿಯಾಗಲಿ, ಮುಖ್ಯಮಂತ್ರಿಗಳಾಗಲಿ, ಅಥವಾ ಮೇಲ್ಕಾಣಿಸಿದ ಶ್ರೀ ಶ್ರೀ ಶ್ರೀಗಳಾಗಲಿ ತಾವು ಕಂಡಕೊಂಡ ದಿಜ್ಞಾನದ ಸುಜ್ಞಾನವನ್ನು ನಾಡಿನ ಅಲ್ಪಜ್ಞ ಸಾಮಾನ್ಯರಿಗೆ ತಿಳಿಸಿ ಕಣ್ಣು ತೆರೆಸಬಲ್ಲುದೆ?

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ಕುರುಡೆನ್ನಿಸುವಷ್ಟು ಮಹಿಳಾ ಸಬಲೀಕರಣ

ವಿವಾಹ ವಿಚ್ಚೇದಿತ ಆತ ಉತ್ತರ ಭಾರತದ ಡೆಂಟಲ್ ಕಾಲೇಜಿನ ಡಿಪಾರ್ಟ್ಮೆಂಟ್ ಒಂದರ ಮುಖ್ಯಸ್ಥ, ಸ್ನೇಹಜೀವಿ, ಪ್ರಾಮಾಣಿಕ. ವೈವಾಹಿಕವಾಗಿ ಡಾಕ್ಟರ್ ಓರ್ವಳನ್ನು ಮದುವೆಯಾಗಿ ಕಹಿಯುಂಡಿದ್ದವ ಮುಂದೆಂದೂ ಮದುವೆಯಾಗುವುದಿಲ್ಲ. ಹಾಗೇನಾದರೂ ವಿವಾಹವಾದರೆ ಬಡ, ಅವಿದ್ಯಾವಂತೆಯೊಂದಿಗೆ ಮಾತ್ರ ಎಂದು ನಿರ್ಧರಿಸಿದ್ದ. ಸ್ನೇಹಜೀವಿಯ ಸ್ನೇಹಿತರು ಆತನ ಒಳ್ಳೆಯತನಕ್ಕೆ ಮರುಗಿ, ಅವನ ಕೊರಗನ್ನು ತಾವೇ ಅನುಭವಿಸುತ್ತಿರುವಂತೆ ಕೊರಗಿ ಒಂದು ಬಡ ಅವಿದ್ಯಾವಂತೆಯನ್ನು ಹುಡುಕಿ ತೋರಿದರು. ಅವನಿಚ್ಛೆಯಂತೆ ಆತ ಹುಡುಗಿಯ ಪ್ರಸ್ತಾಪವನ್ನು ಒಪ್ಪಿ ಮದುವೆಯಾದ. ಒಂದೇ ತಿಂಗಳಲ್ಲಿ ಹುಡುಗಿ ಅವನೊಂದಿಗೆ ಹೊಂದಾಣಿಕೆಯಾಗದು ಎಂದು ಅಕಾರಣವಾಗಿ ಆತನನ್ನು ಶೋಷಿಸಿ ತೊರೆದು ಓಡಿದಳು. ನಂತರ ಒಂದು "ದೊಡ್ಡ" ಮೊತ್ತದ ಜೀವನಾಂಶ ಕೋರಿದಾಗ, ಕೋರ್ಟು ಡಾಕ್ಟರರ ಲೈಫ್ ಸ್ಟೈಲ್ ಆಧಾರದ ಮೇಲೆ "ಬಹುದೊಡ್ಡ" ಮೊತ್ತದ ಜೀವನಾಂಶ ಕೊಡುವಂತೆ ತೀರ್ಮಾನ ಕೊಟ್ಟಿತು.
ಇನ್ನೊಂದು ಕೇಸಿನಲ್ಲಿ, ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಗಂಡ ತನ್ನ ಹೆಂಡತಿ ಪ್ರಿಯಕರನೊಂದಿಗಿರುವ ವಿಡಿಯೋ ಸಾಕ್ಷಿಯೊಂದಿಗೆ adultery ಕೇಸ್ ಹಾಕಿ ವಿಚ್ಛೇದನ ಕೇಳಿದ. ಅಲ್ಲಿಯೂ ಆತನಿಗೆ ವ್ಯತಿರಿಕ್ತವಾಗಿ ಆತನ " ಅರ್ಧದಷ್ಟು ಆಸ್ತಿ"ಯನ್ನು ಕೊಡಿಸಿ
ಕೋರ್ಟು ಆಕೆಯ ಕ್ಷಮಾಪಣೆ ಕೇಳುವಂತೆ ಆದೇಶ ನೀಡಿತು.
ಇನ್ನು ನನ್ನ ಕಾರ್ಪೊರೇಟ್ ವಲಯದಲ್ಲಿ ಕೂಡ ಸಾಕಷ್ಟು ಮಹಿಳೆಯರು ಕೆಲಸದ ಒತ್ತಡವನ್ನು ತಾಳಲಾರದೆ, ಲೈಂಗಿಕ ಶೋಷಣೆಯ ನೆಪವೊಡ್ಡಿ ತಮ್ಮ ತಮ್ಮ ಬಾಸ್ಗಳ ನೌಕರಿಗೆ ಕುತ್ತು ತಂದು ಬೆವರಿಳಿಸಿದ್ದಾರೆ. ಕೆಲಸದ ಒತ್ತಡ ಹೆಚ್ಚಾದೊಡನೆ ಆರೋಗ್ಯದಿಂದ ಶುರುವಾಗುವ ನೆಪಗಳು ಕ್ರಮೇಣ ಅಜ್ಜಿ, ಅಜ್ಜರ ಸಾವಿಗೆ ಬಂದು ಕಟ್ಟಕಡೆಗೆ ಲೈಂಗಿಕ ಶೋಷಣೆಗೆ ಬಂದು ನಿಂತಿದ್ದ ಹಲವಾರು ಘಟನೆಗಳನ್ನು ನಾನೇ ನೋಡಿದ್ದೇನೆ.
ಭಾರತದಲ್ಲಿನ ವೈವಾಹಿಕತೆ, ಅತ್ಯಾಚಾರ, ಮಹಿಳಾ ಶೋಷಣೆಯ ಬಗೆಗಿನ ಕಾನೂನುಗಳು ಏಕಪಕ್ಷೀಯವಾಗಿ ಕುರುಡೆನ್ನಿಸುವಷ್ಟು ಮಹಿಳಾ ಸಬಲೀಕರಣವನ್ನು ಪುಷ್ಟೀಕರಿಸುತ್ತಿವೆ. ಕಾನೂನುಗಳ ಈ ಕಪಿಮುಷ್ಟಿಯಿಂದ ಅತ್ಯಾಚಾರ ಮಾಡದ, ಆದರೆ ಆರೋಪಕ್ಕೊಳಗಾದವ ಕೂಡ ತಪ್ಪಿಸಿಕೊಳ್ಳಲಾರ. ಇಂತಹ ಕಠಿಣ ಕಾನೂನುಗಳು ಈಗಾಗಲೇ ಇರುವಾಗ ಹೊಸ ಕಾನೂನುಗಳ ಔಚಿತ್ಯವಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ಭಾವುಕತೆಯ ಹುಚ್ಚಿನಲ್ಲಿ, ಮೀಡಿಯಾದ ಅಬ್ಬರಕ್ಕೆ ಸೋತು ಈ ರೀತಿ ಹುಚ್ಚು ಕಾನೂನುಗಳನ್ನು ಮಾಡುತ್ತ ಹೋದರೆ...!
ಹಾಗಿದ್ದಾಗ ಭಾರತದಲ್ಲಿ ಅತ್ಯಾಚಾರ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವವೇ? ರಾಷ್ಟೀಯ ಕ್ರೈಮ್ ಬ್ಯುರೋ ಪ್ರಕಾರ ೨೦೧೩ ರಲ್ಲಿ ೨೪೯೨೩, ೨೦೧೫ ರಲ್ಲಿ ೩೪೬೫೧ ಅತ್ಯಾಚಾರ ಪ್ರಕರಣಗಳು ನಡೆದಿದ್ದು, ಇವುಗಳಲ್ಲಿ ೯೮% ಪರಿಚಿತರಿಂದ ನಡೆದಿವೆ ಎನ್ನುತ್ತದೆ. ಈ ೯೮ ಪ್ರತಿಶತ ಪರಿಚಿತರಿಂದ ನಡೆಯುವ ಅತ್ಯಾಚಾರಗಳಿಗೆ ಕಾರಣಗಳೇನು ಎಂದು ಹುಡುಕಬೇಕು. ಅದೇ ಅಮೇರಿಕಾದಲ್ಲಿ ವರ್ಷಕ್ಕೆ ಮೂರೂ ಲಕ್ಷಕ್ಕೂ ಹೆಚ್ಚು ಲೈಂಗಿಕ ಶೋಷಣೆಗಳು ನಡೆಯುತ್ತವೆ ಎನ್ನಲಾಗುತ್ತದೆ. ಇದ್ಯಾಕೆ ಸುದ್ದಿ ಮಾಧ್ಯಮದಲ್ಲಿ ಸುದ್ದಿಯಾಗುವುದಿಲ್ಲ?ಅಂದರೆ ಅಮೆರಿಕಾದಲ್ಲಿ ಅತ್ಯಾಚಾರಗಳ ಕುರಿತು ಜನ ಪ್ರತಿಭಟಿಸುವುದಿಲ್ಲವೇ? ಅಮೇರಿಕಾದ ಸುದ್ದಿ ಮಾಧ್ಯಮಗಳಲ್ಲಿ ನೈತಿಕತೆ ಭಾರತದಂತೆ ಅಧ್ಹಪತನಕ್ಕಿಳಿದಿಲ್ಲ, ಇಳಿಯಲಾರವು! ಏಕೆಂದರೆ ಅಲ್ಲಿನ ಕಾನೂನುಗಳು ಅಂತಹದಕ್ಕೆ ಆಸ್ಪದ ಕೊಡುವುದಿಲ್ಲ.
ಯಾವುದೇ ದೇಶವಾದರೂ ಆಯಾಯ ಅಪರಾಧವನ್ನು ತಮ್ಮ ತಮ್ಮ ಕಾನೂನುಗಳಿಗನುಗುಣವಾಗಿ ಶಿಸ್ತುಕ್ರಮ ಕೈಗೊಂಡು ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸುತ್ತವೆ. ಯಾವುದೇ ಹುಚ್ಚು ವರದಿ ಪ್ರಸಾರವಾಗುವುದಿಲ್ಲ. ಭಾರತದಲ್ಲಿಯೂ ಕೂಡ ಅಪರಾಧಗಳಿಗೆ ತಕ್ಕಂತೆ ನಿಯಮಗಳಿದ್ದು ಅವುಗಳ ಪರಿಪಾಲನೆಯಲ್ಲಿ ಲೋಪಗಳಾಗುತ್ತಿವೆ. ಆಯಾಯ ರಾಜ್ಯ ಸರ್ಕಾರಗಳು ಆ ನಿಯಮಪಾಲನೆಯಲ್ಲಿ ಶಿಸ್ತುಕ್ರಮಗಳನ್ನು ಕೈಗೊಂಡು ಪರಿಸ್ಥಿತಿಯನ್ನು ಹತೋಟಿಯಲ್ಲಿಡಬೇಕೆ ಹೊರತು ಹೊಸ ಹೊಸ ಕಾನೂನುಗಳನ್ನು ಮಾಡುವುದಲ್ಲವೆನಿಸುತ್ತದೆ. ಅತ್ಯಾಚಾರಗಳ, ಮಹಿಳಾಸಬಲೀಕರಣದ ಕುರಿತಾದ ಹೊಸ ಹೊಸ ಕಾನೂನುಗಳ ಬೇಡಿಕೆ ಹೇಗಿದೆಯೆಂದರೆ, ಪ್ಲಾಸ್ಟಿಕ್ ಅನ್ನು ಸರಿಯಾಗಿ ಮರುಬಳಕೆಗೆ ಒಳಪಡಿಸಲಾಗದ ಸರ್ಕಾರಗಳು ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವೆಂದು ಬಹಿಷ್ಕರಿಸುವ ( ಯಾವ ವಸ್ತು ಅತ್ಯಂತ ಸುಲಭವಾಗಿ ಮರುಬಳಕೆಗೆ ಒದಗಿಬರುವುದೋ ಅದು ಅತ್ಯಂತ ಪರಿಸರಸ್ನೇಹಿ ಕೂಡಾ), ಬಯಲು ಶೌಚವನ್ನು ನಿಯಂತ್ರಿಸಲಾಗದೇ ಮುಂದೆ ಶೌಚವನ್ನೇ ಬಹಿಷ್ಕರಿಸುವ ಆದೇಶ ನೀಡಬಹುದಾದಂತಹ ಮೂರ್ಖತನವೆನಿಸುತ್ತದೆ.
ಕಾನೂನು ಪರಿಪಾಲನೆಯಲ್ಲಿರುವ ಲೋಪಗಳನ್ನು ತಿದ್ದಿ ತೀಡಬೇಕಾದ ಸರ್ಕಾರಗಳ ಲೋಪ, ಹಾಗು ಆ ರೀತಿ ಆಗ್ರಹಿಸಬೇಕಾದ ಜನತೆ ಭಾಗವಾಗಿ ಎರಡು ಭಾರತದಲ್ಲಿ ಎಂದೋ ಕಳೆದುಹೋಗಿರುವವೆನಿಸುತ್ತದೆ.
ಮಾಹಿತಿತಂತ್ರಜ್ಞಾನದ ಆಸ್ಫೋಟನೆಗೊಂಡು ಕೈಗೊಂದು ಕ್ಯಾಮೆರಾ ಫೋನ್ ದೊರೆತು, ಆ ಆಟಿಕೆಗಳಿಗೆ ಕಾನೂನಿನ ಲಂಗುಲಗಾಮಿಲ್ಲದ ದುರವಸ್ಥೆಯಾಗಿ, ಸುದ್ದಿ ಮೀಡಿಯಾಗಳ ಅಬ್ಬರದಲ್ಲಿ ಭಾರತ ಕಳೆದುಹೋಗಿದೆ. ಈಗ ಭಾರತಕ್ಕೆ ಬೇಕಾದ್ದು ಮಹಿಳಾಸಬಲೀಕರಣದ ಕಾನೂನುಗಳಲ್ಲ, ಬದಲಾಗಿ ವೈಯುಕ್ತಿಕ ಘನತೆ, ಮಾಹಿತಿಯನ್ನು ಗೋಪ್ಯತೆಯನ್ನು ಕಾಪಾಡಬೇಕಾದ ಕಾನೂನುಗಳು!
ಇನ್ನು ಅದ್ಯಾವುದೋ ಬಿಜೆಪಿ ರಾಜಕಾರಣಿ ಸುದ್ದಿಮಾಧ್ಯಮಗಳಲ್ಲಿನ ಮಹಿಳೆಯರು ಔದ್ಯೋಗಿಕ ಲಾಭಕ್ಕೆ ಮಲಗುತ್ತಾರೆ ಎಂಬುದನ್ನು ಮಾಧ್ಯಮನಿರತರು ಪ್ರತಿಭಟಿಸುವ ಮುನ್ನ ತಮ್ಮ ಬಳಗದವರೇ ಅದ ಅನೇಕ ಮಹನೀಯರುಗಳು ತಮ್ಮ ಪಲ್ಲಂಗ ಪುರಾಣಗಳನ್ನು ಅಲೆಗ್ಸಾಂಡರನ ದಂಡಯಾತ್ರೆಯಂತೆ ಬರೆದುಕೊಂಡಿದ್ದನ್ನು ಪ್ರಶ್ನಿಸಲಿಲ್ಲವೇಕೆ? ನಿಮ್ಮ ಹೋರಾಟದ ಮಂಚೂಣಿಯಲ್ಲಿರುವ ನಟ ಕಮ್ ನೂತನ ಲೇಖಕ ಪ್ರಜಾವಾಣಿಯಲ್ಲಿ ಉಮೇದಿನಿಂದ ತನ್ನ ಕಾಮಸಂಬಂಧ ಕುರಿತು ಬರೆದುಕೊಂಡಿದ್ದಾರೆ. ನಿಮ್ಮ ಬಳಗದವರ ಅಲೌಕಿಕ, ಕ್ರಿಯಾತ್ಮಕ ಚಟುವಟಿಕೆಗಳ ಹೆಸರಲ್ಲಿ ನಡೆಸುವ ಲೈಂಗಿಕ ಶೋಷಣೆಯನ್ನು ಪ್ರಶ್ನಿಸದೇ, ಆ ರಾಜಕಾರಣಿ ತಾನು ಕಂಡಿರಬಹುದಾದ ಔದ್ಯೋಗಿಕ ಉನ್ನತಿಯ ಲೌಕಿಕ ಕಾರಣ ಕುರಿತು ಮಾತನಾಡಿದ್ದು ತಪ್ಪೇ?
ಅತಿಯಾಗಿ ತಿಂದು ಭೇಧಿಯಾದರೆ ಅದಕ್ಕೆ ಪ್ರಧಾನಮಂತ್ರಿ ಕಡೆ ಬೆರಳು ತೋರುವ, ಫೇಸ್ಬುಕ್ ಸ್ಟೇಟಸ್ , ವಾಟ್ಸಾಪ್ ಮೆಸೇಜ್ ಹರಡುವ ರೋಗ ನಿಲ್ಲಬೇಕು. ಈ ಬೆರಳು ತೋರುವ ಪ್ರವೃತ್ತಿಯಿಂದ ನಾಡಿನ ಬುದ್ದಿಜೀವಿಗಳು ಪ್ರಧಾನಿಯನ್ನು ಕೇಳಬೇಕಾದ ಅನೇಕ ಪ್ರಮುಖ ಸಂಗತಿಗಳ ಕುರಿತು ಸೊಲ್ಲೆತ್ತದೆ ಹುಚ್ಚು ಆರ್ಭಟದಲ್ಲಿ ಕಳೆದುಹೋಗಿದ್ದಾರೆ. ಬುದ್ಧಿಜೀವಿಗಳೇ ತಮ್ಮ ಬಾಯನ್ನು ಮುಚ್ಚಿಸಲಾಗುತ್ತಿದೆ ಎಂದು ನೀವು ತಿಳಿದಿದ್ದರೆ ನಿಮ್ಮನ್ನು ಬುದ್ದಿಜೀವಿಗಳೆಂದುಕೊಂಡದ್ದಕ್ಕೆ ನಾವು ನಮ್ಮನ್ನು ಹಳಿದುಕೊಳ್ಳಬೇಕು. ತಮ್ಮ ಈ ಬೆರಳು ತೋರುವ ಆರ್ಭಟದಲ್ಲಿ ನೀವಾಗಿಯೇ ನಿಮ್ಮ ಬಾಯಿ ಮುಚ್ಚಿಕೊಳ್ಳುತ್ತಿರುವಿರಿ. ಕಳೆದುಹೋಗಿರುವ ಅಥವಾ ಮಾರಿಕೊಂಡಿರುವ ನಿಮ್ಮ ಕ್ರಿಯಾಶೀಲತೆಯನ್ನು ದಯವಿಟ್ಟು ಮತ್ತೊಮ್ಮೆ ಪಡೆದುಬನ್ನಿ ಪಾಲನೆಯಾಗಬೇಕಾದ ನಿಯಮಗಳ ಕುರಿತು ಪ್ರತಿಭಟಿಸಿ, ದೇಶಕಾರಣ ನಿಮ್ಮ ಪ್ರತಿಭಟನೆಯ ಗುರಿಯಾಗಬೇಕಾದ್ದು ರಾಜಕಾರಣ ಗುರಿಯಾದದ್ದಕ್ಕೆ ವಿಷಾದವಿದೆ.
ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವ ವೀರನು ಅಲ್ಲ ಶೂರನೂ ಅಲ್ಲ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

ತಿಪ್ಪ, ತಿಪ್ಪು/ಟಿಪ್ಪು

ಓಲೈಕೆ ಇಂದಿನ ರಾಜಕಾರಣಿಗಳಿಗೆ ಎಷ್ಟು ಅನಿವಾರ್ಯವೋ ಅಶೋಕ, ಹರ್ಷ, ಹೊಯ್ಸಳ, ವಿಜಯನಗರ, ಹೈದರಾಲಿ, ಟಿಪ್ಪುಗಳಿಗೂ ಅಷ್ಟೇ ಅನಿವಾರ್ಯವಾಗಿತ್ತು. ಹೈದರಾಲಿ ಹೈದರಾಬಾದನ್ನು ಸೇರಲು ಆತನಿಗೆ ಅಗತ್ಯ ಸೇನಾ ನೆರವು ನೀಡಲು ಅಪಾರ ಸಂಖ್ಯೆಯಲ್ಲಿ ನಾಯಕ ಜನಾಂಗ ಒಡಂಬಡಿಕೆ ಮಾಡಿಕೊಂಡಿತ್ತು. ಹೈದರಾಬಾದ್ ಮಾರ್ಗಮಧ್ಯದಲ್ಲಿ ಬರುವ ಊರುಗಳನ್ನು ದೋಚಿದ ಸಿರಿ ತಮಗೆ ಸೇರಬೇಕೆಂಬುದೇ ಆ ಒಡಂಬಡಿಕೆ. ಅತ್ಯಂತ ನಿರ್ದಾಕ್ಷಿಣ್ಯವಾಗಿ ಹೋರಾಡಿ ವೈರಿಗಳನ್ನು ನಿರ್ನಾಮ ಮಾಡುತ್ತಿದ್ದ ಈ ಜನಾಂಗವನ್ನು ಎದುರು ಹಾಕಿಕೊಳ್ಳದೇ ಅವರನ್ನು ಓಲೈಸಿಕೊಂಡಿರಬೇಕೆಂಬುದನ್ನಾಗಲೇ ಹೈದರಾಲಿ ಕಂಡುಕೊಂಡಿದ್ದನು. ಆ ಓಲೈಕೆಯ ಫಲಶ್ರುತಿಯೇ ಟಿಪ್ಪು ನಾಮ! ನಾಯಕರುಗಳ ಆದ್ಯದೈವ ತಿಪ್ಪೇರುದ್ರನ ಹೆಸರನ್ನು ತನ್ನ ಮಗನಿಗೆ ತಿಪ್ಪ ಎಂದು ಇರಿಸಿದ.
ಮೈಸೂರು ಸೀಮೆಯ ಜನ ಪ್ರೀತಿಪೂರ್ವಕವಾಗಿ ಹೆಸರುಗಳ ಮುಂದೆ "ಉ"ಕಾರವನ್ನು ಸೇರಿಸುತ್ತಾರೆ. ಉದಾಹರಣೆಗೆ ಶಿವನನ್ನು ಶಿವು, ಶಂಕರನನ್ನು ಶಂಕ್ರೂ, ರಂಗ ರಂಗು, ಇತ್ಯಾದಿಯಂತೆ. ಆ ರೀತಿಯಾಗಿ ತಿಪ್ಪ, ತಿಪ್ಪು/ಟಿಪ್ಪು ಆಗಿರಬಹುದೆಂಬುದು ನನ್ನ ಗಟ್ಟಿ ಅನಿಸಿಕೆ.
ಇತಿಹಾಸದ ಅಂದಿನ ಭಾರತದಲ್ಲಿಯೂ, ವಾಸ್ತವದ ಇಂದಿನ ಭಾರತದಲ್ಲಿಯೂ ಜನಮನಸ್ಥಿತಿ ಯಥಾಸ್ಥಿತಿ! ಇನ್ನು ವಸ್ತುಸ್ಥಿತಿಯನ್ನು ವಿಶ್ಲೇಷಿಸದೆ ಇತಿಹಾಸಕಾ(ಕೋ)ರರು ಗುಂಗಿನಲ್ಲಿ ತಥಾಗತ ಬರೆದುದರ ಫಲಶ್ರುತಿಯೇ ಇಂದಿನ ರಂಗಿತರಂಗ ಭಾರತದ ಇತಿಹಾಸ. ಓಲೈಕೆಯೇ ಭಾರತದ ಭದ್ರ ಬುನಾದಿ, ಇದು ಐತಿಹಾಸಿಕ ಸತ್ಯ! ಇದು ನಮ್ಮ ನಿಮ್ಮೆಲ್ಲರ ಡಿಎನ್ಎ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ 

ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು

ಯಾವುದೇ ದೇಶದ ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು. ಕಾಲಕ್ಕನುಗುಣವಾಗಿ ಹೊಸತಾಗುತ್ತ ಬದಲಾಗಲೆಂಬ ಉದ್ದೇಶಕ್ಕಾಗೆ ರಚಿಸಲ್ಪಟ್ಟಿವೆ.
ನ್ಯಾಯಾಂಗ, ಶಾಸಕಾಂಗ ಮತ್ತು ಆಡಳಿತ ವರ್ಗ ಸಂವಿಧಾನದ ಭಾಗಗಳನ್ನು ಜಡವಾಗಿರಿಸದೆ ವರ್ತಮಾನದ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿ ಕ್ರಿಯಾಶೀಲವಾಗಿರಿಸಬೇಕೆಂಬುದೇ ಸಂವಿಧಾನ ರಚನೆಯ ಮೂಲೋದ್ದೇಶ.
ಜೀವಂತ ಸಮಾಜಕ್ಕೆ ತಕ್ಕಂತೆ ವಿಕಸಿಸುವ ವೈಜ್ಞಾನಿಕ ಅನುಶಾಸನವಿರಬೇಕೇ ಹೊರತು ಶಾಸ್ತ್ರಪುರಾಣಗಳಂತಹ ಜಡಗ್ರಂಥವಲ್ಲ!
ಇದು ವುಡ್ ರೋ ವಿಲ್ಸನ್ 1912ರಲ್ಲೇ ಪ್ರತಿಪಾದಿಸಿದ್ದು.
2018ರ ಪ್ರಕಾಶಿಸುತ್ತಿರುವ ಭಾರತದಲ್ಲಿ ಅರ್ಬನ್ ನಕ್ಸಲ್, ಹರ್ಬಲ್ ನಕ್ಸಲ್, ಕಮ್ಯುನಿಸ್ಟ್ ಮತ್ತು ಜಡ ಸಂವಿಧಾನ ಪ್ರತಿಪಾದಕರು ಫ್ಯಾಸಿಸ್ಟ್ ಅಮೆರಿಕಾದ ಐಫೋನು, ಐಪ್ಯಾಡು, ಫೇಸ್ಬುಕ್, ಗೂಗಲ್ ಬಳಸುತ್ತಾ ಏನನ್ನು, ಹೇಗೆ, ಯಾರಿಗೆ ಪ್ರತಿಪಾದಿಸುತ್ತಿದ್ದಾರೆ?!
ಇವರೆಲ್ಲ ಉದಾರವಾದಿಗಳಲ್ಲ, ಉದಾರವಾದ ಕಮ್ಯುನಿಸ್ಟ್, ನಕ್ಸಲ್, ಜಡ ಸಮಾಜವಾದವಂತೂ ಅಲ್ಲವೇ ಆಲ್ಲ!
ಸದ್ಯದ ಭಾರತದ ತುರ್ತು, ಅಪಹರಣಕ್ಕೊಳಗಾಗಿರುವ ಉದಾರವಾದ ಮತ್ತು ಸ್ಟಾಕ್ ಹೋಮ್ ಸಿಂಡ್ರೋಮಿಗೊಳಗಾಗಿರುವ ಉದಾರವಾದಿಗಳನ್ನು ಈ ಎಡಬಿಡಂಗಿತನದಿಂದ ಬಿಡಿಸುವುದು.
By living and breathing, they mean the Constitution was written as a “dynamic” document; flexible, so it can change with the times. Instead of maintaining a fixed meaning, judges, lawmakers and bureaucrats mold its various clauses and provisions to fit the needs of the day.
“Society is a living organism and must obey the laws of life, not of mechanics; it must develop. All that progressives ask or desire is permission – in an era when ‘development,’ ‘evolution,’ is the scientific word – to interpret the Constitution according to the Darwinian principle; all they ask is recognition of the fact that a nation is a living thing and not a machine.”
- Woodrow Wilson
In 2018, the urban naxals, herbal naxals, communists, and static constitution mongers of India using their fascist American iPhones, iPads, Facebook and Google are preaching whom, what, and why?!?
They are not liberals, liberalism has no affiliation with communism, leftist or naxal thoughts. Need of the hour is to separate liberalism from these proclaimed intellectuals and protect liberals from the Stockholm syndrome!

ಸಿದ್ಧಾಂತಕ್ಕೆ ಅನ್ವಯಿಸದ ಹುಯೆನ್ ತ್ಸಾಂಗ್ ಬಗ್ಗೆ ಎಷ್ಟು ಪುಸ್ತಕಗಳಿವೆ?


Image may contain: 5 people, including Puttaswamy Kempegowda, people smiling, people on stage and people standing
ನಮಸ್ಕಾರ,
ಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹಾಗಾಗಿ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.
ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ ಪುಸ್ತಕವಾಗಿದೆ.
ನಂತರ ಭಾರತದ ಹುಯೆನ್ ತ್ಸಾಂಗ್ ನೇ ಚೀನಾದ ಝುಎನ್ ಜಿಯಂಗ್ ಎಂದು ಅರಿಯಲು ಒಂದು ತಿಂಗಳು ಬೇಕಾಯಿತು. ನಂತರ ಚೀನೀ ದೃಷ್ಟಾಂತ, ಕಾರ್ಟೂನಗಳು, ಮ್ಯೂಸಿಯಂ ದಾಖಲೆ, ಸಂಗ್ರಹ, ಫೋಟೋಗಳನ್ನೆಲ್ಲ ವಿಂಗಡಿಸಿ ವಿಶ್ಲೇಷಿಸುತ್ತ ನಡೆಯಬೇಕಿತ್ತು. ಕಾರ್ಟೂನ್ ಪ್ರಕಾರ ಈತನಿಗೆ ಮಂಗವೊಂದು ಸಹಾಯ ಮಾಡಿದಂತೆ ಚಿತ್ರಿಸಿ ರಾಮನ ಮಾಡಿದ್ದರು! ಹನುಮಂತ ರಾಮನಿಗೆ ಸಮುದ್ರ ದಾಟಲು ಸಹಾಯಿಸಿದ ರಾಮಾಯಣದಂತೆ, ಕೋತಿಯೊಂದು ಇವನಿಗೆ ಮರುಭೂಮಿ ದಾಟಲು ಸಹಾಯಿಸಿದಂತೆ.
ಆದರೆ ಯಾವಾಗ ಈ ಚೀನೀ ಯಾತ್ರಿಕ ಭಾರತದ ಇತಿಹಾಸಕ್ಕೆ ಅನಿವಾರ್ಯವೆನ್ನುವಷ್ಟು ಪ್ರಮುಖನೆನಿಸಿದನೋ ಆಗ ಈತನ ಬಗ್ಗೆ, ಈತ ದಾಖಲಿಸಿದ ಭಾರತದ ಇತಿಹಾಸದ ಬಗ್ಗೆ ಕುತೂಹಲಕ್ಕಿಂತ ಸಂಶಯ ಮೂಡಿತು. ಈ ಸಂಶಯಕ್ಕೆ ಕಾರಣ, ಚೀನಿಯರೊಂದಿಗಿನ ನನ್ನ ವೃತ್ತಿನಿರತ ಅನುಭವ, ಅವರ ಅನ್ಯಭಾಷಾ ಜ್ಞಾನದ ಅರಿವು, ಮತ್ತು ಚೀನೀಯರ "ತಳ್ಳು" ಪ್ರವೃತ್ತಿಯ ನಿಕಟ ಪರಿಚಯ . ಈ ತಳ್ಳುವ ಪ್ರವೃತ್ತಿ ಭಾರತೀಯರನ್ನೊಳಗೊಂಡಂತೆ ಎಲ್ಲಾ ಏಷಿಯನ್ನರಲ್ಲಿಯೂ ಇದೆ. ಚೀನೀ ರೆಸ್ಟೋರೆಂಟುಗಳಲ್ಲಿ ನಿಮಗೆ ತಂದಿಟ್ಟ ಊಟತಿಂಡಿಯ ಬಗ್ಗೆ ಅನುಮಾನ ಮೂಡಿ ಇದು ಸಸ್ಯಾಹಾರವೇ ಎಂದು ಕೇಳಿದರೆ ಹಿಂದುಮುಂದು ನೋಡದೆ "ಹೌ"ದೆನ್ನುತ್ತಾರೆ. ಒಟ್ಟಾರೆ ಕೊಟ್ಟ, ಮಾರಿದ ವಸ್ತು ಹಿಂದಕ್ಕೆ ಬರಬಾರದು ಎಂಬ ತಳ್ಳುವ ಉದ್ದೇಶದಿಂದ ಕೇಳಿದ್ದಕ್ಕೆಲ್ಲ "ಹೌ"ದೆನ್ನುತ್ತಾರೆ!
ನನ್ನ ಕ್ಲೀಷಾ ಪ್ರವೃತ್ತಿ ಇವನ ಇತಿಹಾಸವನ್ನು ಕೆದಕುವಂತೆ ಮಾಡಿತು. ಮೇಲ್ನೋಟಕ್ಕೆ ಈತ ಇತರೆ ಚೀನಿಯರಂತೆ ತಳ್ಳು ಪ್ರವೃತ್ತಿಯವನಾಗಿರಲಿಲ್ಲವೆಂದು ತಿಳಿಯಿತು. ನಂತರ ಕೆದಕಿದಷ್ಟೂ ಈತನ ನಿಖರತೆ, ಪ್ರಖರತೆ, ಸ್ಪಷ್ಟತೆ ಕಾಣುತ್ತಾ ಸಾಗಿ ಪುಸ್ತಕವಾಯಿತು.
ಬಿಗ್ ಡೇಟಾ, ಬಿಸಿನೆಸ್ ಇಂಟೆಲಿಜೆನ್ಸ್, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ.
ಹಾಗಾಗಿ ಈತ ಕೇವಲ ಒಬ್ಬ ಬೌದ್ಧಭಿಕ್ಷು, ಸಾಹಸಿ, ವಿದ್ವಾಂಸ, ರಾಜತಾಂತ್ರಿಕ, ಸಂಚಾರಿಯಲ್ಲದೆ ಮಾಹಿತಿ ವಿಶ್ಲೇಷಣೆಯ ಪಿತಾಮಹನೂ ಎನಿಸುತ್ತಾನೆ. ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಪಿತಾಮಹನೆನ್ನಿಸಿದರೆ, ಹುಯೆನ್ ತ್ಸಾಂಗ್ ಮಾಹಿತಿ ವಿಶ್ಲೇಷಣೆಯ ಪಿತಾಮಹ!!!
ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಶ್ರಮ ಸುಮಾರು ಐದು ಲಕ್ಷಕ್ಕೂ ಹೆಚ್ಚು. ಅದರಲ್ಲಿಯೂ ಸಂಶೋಧನೆ, ಹುಯೆನ್ ತ್ಸಾಂಗನಂತಹ ಅಂತರರಾಷ್ಟ್ರೀಯ ವ್ಯಕ್ತಿ ವಿಷಯವಾಗಿದ್ದರೆ ಇನ್ನೂ ಹೆಚ್ಚು!
ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ.
ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. ನಾನು ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅದೇ ಸಾಮಾಜಿಕ ಕಳಕಳಿಯ, ಚಿಂತನೆಗಳನ್ನು ಮೀರಿದ ವೈಚಾರಿಕತೆಯ ಸಮಾಜಮುಖಿ ಬಳಗ ಪ್ರಕಟಿಸಲು ಉತ್ಸಾಹ ತೋರಿತು.
ಇಂದು ಸಿದ್ಧಾಂತ ಬದ್ಧ ಕರ್ನಾಟಕದ ಕನ್ನಡದಲ್ಲಿ ಸಿದ್ಧಾಂತಕ್ಕೆ ಜೋಡಣೆಯಾದ, ಲಿಯೋ ಟಾಲ್ಸ್ಟಾಯ್, ಲೆನಿನ್, ಚೆ ಗುವೆರಾ ಮುಂತಾದವರ ಬಗ್ಗೆ ಅನೇಕ ಪುಸ್ತಕಗಳಿವೆ. ಆದರೆ ಭಾರತದ ಇತಿಹಾಸದ ಅನಿವಾರ್ಯನಾದ, ಸಿದ್ಧಾಂತಕ್ಕೆ ಅನ್ವಯಿಸದ ಹುಯೆನ್ ತ್ಸಾಂಗ್ ಬಗ್ಗೆ ಎಷ್ಟು ಪುಸ್ತಕಗಳಿವೆ?
ಇನ್ನು ಏಳನೇ ಶತಮಾನದ ಅಂದಿನ ಚೀನಾ/ಭಾರತಕ್ಕೂ ಇಂದಿನ ಇಪ್ಪತ್ತೊಂದನೇ ಶತಮಾನದ ಆ ದೇಶಗಳಿಗೂ ವ್ಯತ್ಯಾಸವಿದೆಯೇ?
ಆಗಿನಿಂದಲೂ ಚೈನಾದಲ್ಲಿ ಚಕ್ರಾಧಿಪತ್ಯ. ಈಗಲೂ ಚುನಾಯಿತ ಚಕ್ರಾಧಿಪತ್ಯ!
ಅಂದು ಭಾರತದಲ್ಲಿ ರಾಜರು, ಸರದಾರರು, ಸಾಮಂತರು, ಪಾಳೆಗಾರರು. ಈಗಲೂ ಚುನಾಯಿತ ರಾಜರ, ಸಾಮಂತರ, ಪಾಳೆಗಾರರ ಊಳಿಗಮಾನ್ಯ, ಚುನಾಯಿತ ಊಳಿಗಮಾನ್ಯ Elected feudalism!
ಇನ್ನು ಸಿದ್ದಾಂತಗಳ ಮೀರಿದ ವೈಚಾರಿಕ ಚಿಂತನೆಯ ಕಾಡುಸಿದ್ದರಾದ ನನ್ನ ಮತ್ತು ಸಮಾಜಮುಖಿ ಬಳಗದ ಒಂದು axis of civil ಏರ್ಪಟ್ಟು ಹುಯೆನ್ ತ್ಸಾಂಗ್ ಪುಸ್ತಕ ಇಂದು ಬಿಡುಗಡೆಗೊಂಡಿದೆ.
ನಿಮ್ಮ ಪ್ರೋತ್ಸಾಹ ನಮಗಿರಲಿ.
ಧನ್ಯವಾದಗಳು.