ನಾನೇಕೆ ಬರೆಯುತ್ತೇನೆ?

೨೦೦೭ ಇನ್ನೇನು ಮುಗಿದು ೨೦೦೮ ಬರಲಿದೆ. ಹಾಗೆಯೇ ಕುಳಿತು ನನ್ನೆಲ್ಲ ಈ ವರ್ಷದ ಲೇಖನಗಳನ್ನೂ ಮತ್ತು ಸಹೃದಯೀ ಓದುಗರ ಓಲೆಗಳನ್ನು ಅವಲೋಕಿಸುತ್ತಿರುವಾಗ ಒಂದು ಗಮನಾರ್ಹ ವಿಚಾರವೊಂದು ನನ್ನ ಗಮನಕ್ಕೆ ಬಂತು. ನಿಮ್ಮೆಲ್ಲರಂತೆ ಭಾರತವನ್ನು ಅತೀವವಾಗಿ ಪ್ರ್‍ಈತಿಸುವ ನಾನು ಭಾರತವನ್ನು ಹೊಗಳದೇ ಅಲ್ಲಿನ ಹುಳುಕುಗಳನ್ನೇ ಕೆದಕಿ ಬರೆಯಲು ಕಾರಣವೇನೆಂದು ನನ್ನಲ್ಲೇ ಪ್ರ್‍ಅಶ್ನಿಸಿಕೊಂಡೆನು. ವ್ಯಾಪಾರೀ ಹಿನ್ನೆಲೆಯ, ಕೃಷಿ ಸಂಪರ್ಕದ, ಮಧ್ಯ ಕರ್ನಾಟಕದ ಪಟ್ಟಣವೊಂದರ, ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಜೀವನದ ಬಹುಸ್ತರಗಳನ್ನು ನೋಡುತ್ತ ಬೆಳೆಯುವ ಅವಕಾಶ ದೊರೆತಿತ್ತು. ಆಗೆಲ್ಲ ಪ್ರತಿಷ್ಟೆಯ ಶಾಲೆಗಳಿರದೆ ಎಲ್ಲಾ ವರ್ಗದ ಜನರೂ ಇದ್ದ ಕೆಲವೇ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಲಿಯಲು ಕಳಿಸಬೇಕಿತ್ತು. ಆ ಕಾರಣದಿಂದ ಭಾರತದ ಕೆಳವರ್ಗದಿಂದ ಮೇಲ್ವರ್ಗದ ಮಕ್ಕಳೆಲ್ಲರೊಂದಿಗೆ ಕಲೆತು ನಾನು ’ಏಕ ಕೊಠಡಿ ನಾಲ್ಕು ತರಗತಿ’ಗಳ ಶಾಲೆಗೆ ಹೋಗಿ, ತರಗತಿಯಲ್ಲಿ ಮೊದಲಿಗನೆನಿಸಿ, ಹೈಸ್ಕೂಲು ಸೇರಿದ ಮೇಲೆ ನನ್ನ ಸುತ್ತಲ ಬಾಹ್ಯ ಪ್ರಪಂಚವನ್ನು ಹೆಚ್ಚಾಗಿ ಗಮನಿಸುತ್ತ ಮತ್ತದರಿಂದ ಕಲಿಯುತ್ತ, ನಾಲ್ಕು ಗೋಡೆಗಳ ಮಧ್ಯದ, ಸೀಮಿತ ಪುಸ್ತಕಗಳ ಪಠ್ಯಶಾಸ್ತ್ರದಲ್ಲಿ ಆಸಕ್ತಿ ಕಳೆದುಕೊಂಡು ಎಸ್.ಎಸ್.ಎಲ್.ಸಿ ಫೇಲಾಗಿ, ಕೃಷಿ ಮಾರುಕಟ್ಟೆಯೊಂದರಲ್ಲಿ ರೈತರು, ಹಮಾಲರು, ದಲಾಲರು, ಖರೀದಿದಾರರೊಂದಿಗೆ ವ್ಯವಹರಿಸಿ ಮತ್ತೆ ನಂತರ ವಿದ್ಯಾಭ್ಯಾಸ ಮುಂದುವರಿಸಿ, ನನ್ನ ಪರಿಸರದಲ್ಲಿ ವಾಸಿಸುವ ರೈತಾಪಿಗಳು, ವರ್ತಕರು, ಮಾರ್ವಾಡಿಗಳು, ಅಕ್ಕಸಾಲಿಗರು, ಹಮಾಲರು, ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಕಾರ್ಮಿಕ ಮಹಿಳೆಯರು....ಈ ಎಲ್ಲ ವರ್ಗಗಳ ಜನ ಮತ್ತವರ ಜೀವನವನ್ನು ನೋಡಿ ಕಲಿಯುತ್ತ, ನನ್ನ ಪಠ್ಯಗಳಲ್ಲಿ ಎಡರುತ್ತ ತೊಡರುತ್ತ ನನ್ನ ಇಂದಿನ ಮಟ್ಟವನ್ನು ತಲುಪಿರುವ ನನಗೆ ನನ್ನೆಲ್ಲಾ ಆ ಸೋಲು ಗೆಲುವುಗಳು ಒಳ್ಳೆಯ ಜೀವನಾನುಭವವನ್ನು ಒದಗಿಸಿರುವುದು ಮತ್ತು ನಾ ಕಂಡ ಆ ಎಲ್ಲಾ ವರ್ಗದ ಜನರು ಇನ್ನೂ ಹಾಗೆಯೇ ಇರುವುದೂ ಕಾರಣವೆಂದುಕೊಳ್ಳುತ್ತೇನೆ!

ಊರ ಹೊರಗೆ ಬಡಾವಣೆಗಳಾಗುವುದು, ಹಳೆ ಮನೆಗಳನ್ನು ಕೆಡವಿ ಹೊಸದನ್ನು ಕಟ್ಟುವುದು, ಮೂಲಂಗಿ ಪ್ಯಾಂಟ್ ಹೋಗಿ ಬೆಲ್ ಬಾಟಮ್ ಪ್ಯಾಂಟ್ ಬಂದು ನಂತರ ಬ್ಯಾಗಿ ಆಗುವುದು, ಈ ಎಲ್ಲ ಬದಲಾವಣೆಗಳು ನಿರಂತರ. ಕಾಲಚಕ್ರ ಉರುಳಿದಂತೆ ಈ ಎಲ್ಲ ಬದಲಾವಣೆಗಳಾಗುವುದು ಸರ್ವೇಸಾಮಾನ್ಯ. ಇದರಲ್ಲಿ ಹೊಸತೆನ್ನಿಸಿಕೊಳ್ಳುವಂತಹುದೇನೂ ಇಲ್ಲವೆಂದೇ ನನ್ನ ಅನಿಸಿಕೆ. ಆದರೆ ಇದೇ ಬದಲಾವಣೆಯನ್ನೇ ಭಾರತದ ಉನ್ನತಿಯೆಂಬಂತೆ ತೋರುವುದನ್ನು ನಾನು ಒಪ್ಪುವುದಿಲ್ಲ. ಭಾರತದ ಜನಸಂಖ್ಯೆಯ ಶೇಕಡಾ ೦.೬% ಇರುವು ಐ.ಟಿ ಉದ್ಯೋಗಿಗಳ ಉನ್ನತಿಯನ್ನೇ ಭಾರತದ ಉನ್ನತಿಯೆಂದು ಅದು ಹೇಗೆ ಹೇಳಲಾಗುತ್ತಿದೆಯೋ ನಾನರಿಯೆ.

ಬೆಂಗಳೂರಿನ ಫ್ಲೈಓವರ್ ಗಳು, ಮಾಲುಗಳು, ಬಡಾವಣೆಗಳನ್ನು ಉದಾಹರಿಸಿ ಬೆಂಗಳೂರು ಅಮೇರಿಕಾ ಎನಿಸಿತೆಂದು ಬರೆಯುವವರಿಗೆ ಆ ಫ್ಲೈಓವರ್ ಕೆಳಗೆ ಕಣ್ಣಿಗೆ ರಾಚುವಂತೆ ಕಾಣುವ ನಿರ್ಗತಿಕರಾಗಲಿ, ದೇಹದ ಬಜಾರಾಗಲಿ; ಮಾಲುಗಳ ಹೊರಗೆ ಭಿಕ್ಷುಕ ಮಕ್ಕಳು ಮೈಮುಟ್ಟಿ, ಕಾಲು ಹಿಡಿದು ಭಿಕ್ಷೆ ಬೇಡುವುದಾಗಲಿ; ಈ ಬಡಾವಣೆಗಳಲ್ಲಿ ವಿಕೃತವಾಗಿ ಕತ್ತು ಕುಯ್ದು ದರೋಡೆಗಳಾಗುತ್ತಿರುವುದಾಗಲಿ ಕಾಣುವುದೇ ಇಲ್ಲ. ಈ ಐ.ಟಿ/ಬಿ.ಟಿ. ಉದ್ಯೋಗಿಗಳ ಸಂಬಳವೇ ಬೆಂಗಳೂರಿಗರೆಲ್ಲರ ಸಂಬಳವೆಂದು ಬಗೆದು ಸಾಮಾನ್ಯ ದರ್ಶಿನಿ ಹೋಟೇಲುಗಳು ತಮ್ಮ ತಿಂಡಿಗಳ ಬೆಲೆಯನ್ನು ನಿಗದಿ ಪಡಿಸಿರುವುದು, ಅಲ್ಲಿನ ಬಿಗ್ ಬಜಾರೊ ಫೋರ್ಂ ವೊ, ಅಥವ ಇನ್ಯಾವುದೋ ಅಂಗಡಿಗಳಲ್ಲಿ ಪೇರಿಸಿಟ್ಟಿರುವ ತರಕಾರಿಗಳನ್ನು ಹೊಗಳುವ ಈ ಮಂದಿಗೆ ನಿತ್ಯ ನಮ್ಮ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಗೊತ್ತೇ ಇಲ್ಲದಂತಿರುವುದು, ಕಾಫಿ ಡೇ ನಲ್ಲಿ ಐವತ್ತು ರೂಪಾಯಿ ತೆತ್ತು ಕಾಫಿ ಕುಡಿದು ಒಳಗೇ ನೊಂದುಕೊಂಡರೂ ’ವ್ಹಾ, ಅಮೇರಿಕಾ ತರಹವಿದೆ’ ಎಂದು ಸೋಗಲಾಡಿಗಳಾಗುವುದು. ಯಾವೊತ್ತೋ ಸತ್ತಿರುವ ಮೌಲ್ಯಗಳು, ಲಂಚವನ್ನು ಒಪ್ಪಿಕೊಂಡಿರುವ ಸಮಾಜ, ’ಬಾಯಲ್ಲಿ ಗುಟ್ಕಾ, ಕೈಯಲ್ಲಿ ಜಟ್ಕಾ’ ಎಂದು ಶಕ್ತಿಗುಂದಿದ ಯುವಜನತೆ, ಇದೆಲ್ಲವನ್ನು ಕಂಡೂ ಕಾಣದಂತಿರಲು ನನಗೆ ಸಾಧ್ಯವೇ ಆಗುವುದಿಲ್ಲ. ಭಾರತ ಒಂದು ಹೆಜ್ಜೆ ಮುಂದೆ ಹೋದರೆ ಅದನ್ನು ನೂರು ಹೆಜ್ಜೆ ಹಿಂದಿಕ್ಕುವಷ್ಟು ಈ ವೈಪರೀತ್ಯಗಳು ಬೆಳೆಯುತ್ತಿರುವ ಬದಲಾವಣೆಯನ್ನೇ ಉನ್ನತಿಯೆಂದುಕೊಳ್ಳಲು ಅದು ಹೇಗೆ ಸಾಧ್ಯವೋ ನಾ ಕಾಣೆ!

ಈಗಂತೂ ನನ್ನ ಆ ಪರಿಸರದ ಜನಜೀವನ ಇನ್ನಷ್ಟೂ ದುಸ್ತರವಾಗಿದೆ. ಖರೀದಿದಾರರು ನೇರ ರೈತರೊಂದಿಗೆ ಸಂಪರ್ಕ ಹೊಂದಿ ತಮ್ಮ ಖರೀದಿ ವಹಿವಾಟು ನಡೆಸುತ್ತಿರುವುದರಿಂದ, ಕೊಬ್ಬಿದ ಗೂಳಿಯಂತಿರುತ್ತಿದ್ದ ದಲಾಲಿ ಮಂಡಿ ಸಾಹುಕಾರರುಗಳು ನಿರ್ಗತಿಕರಾಗಿದ್ದಾರೆ. ಈ ದಲಾಲಿ ಮಂಡಿಗಳನ್ನು ನೆಚ್ಚಿಕೊಂಡಿದ್ದ ಹಮಾಲರು, ಜಿನ್ನಿಂಗ್ ಫ್ಯಾಕ್ಟರಿಗಳು ಮುಚ್ಚಿ, ಅಲ್ಲಿನ ಕಾರ್ಮಿಕರು ನೆಲೆ ಕಳೆದುಕೊಂಡು ದಿಕ್ಕೆಟ್ಟು ಹೋಗಿದ್ದಾರೆ. ಅದೇ ರೀತಿ ಒಂದೊಮ್ಮೆ ಕೈತುಂಬ ದುಡಿಯುತ್ತಿದ್ದ ಟೈಲರ್ ಗಳು ರೆಡಿಮೇಡ್ ಬಟ್ಟೆಗಳ ಭರಾಟೆಯಲ್ಲಿ ಬೇರೆ ಕೆಲಸ ಅರಿಯದೆ ಖಿನ್ನಮನಸ್ಕರಾಗಿದ್ದಾರೆ. ಅದೇ ರೀತಿ, ಬಟ್ಟೆ ವ್ಯಾಪಾರಸ್ತರು, ಮಾರ್ವಾಡಿಗಳು, ಗಿರ್ವಿ ಅಂಗಡಿಕಾರರು, ದಿನಸಿ ಅಂಗಡಿಕಾರರು, ಗೂಡಂಗಡಿಯವರು, ರೈತರು, ಚೀಲ ಹೊಲಿಯುವವರು ಮುಂತಪ್ಪು ಉದ್ಯೋಗ ವ್ಯವಹಾರಗಳಲ್ಲಿದ್ದ ಜನ ದಿಕ್ಕೇ ತೋಚದೆ ನಡೆಸಿದಂತೆ ನಡೆಯುತ್ತಿದ್ದಾರೆ. ಭಾರತದ ಬಹುಪಾಲು ಜನಸಂಖ್ಯೆ ಈ ವರ್ಗದ ಜನರಾಗಿರುವಾಗ, ಮತ್ತವರ ಜೀವನ ಇನ್ನಷ್ಟೂ ದುಸ್ತರವಾಗಿರುವಾಗ ಅದು ಹೇಗೆ ಭಾರತ ಉನ್ನತಿಯ ಶಿಖರದಲ್ಲಿದೆಯೋ? ಭಾರತದ ಸ್ಟಾಕ್ ಮಾರ್ಕೆಟ್ ನ ಸೂಚಕಕ್ಕೂ ಈ ಜನಸಾಮಾನ್ಯರ ಜೀವನಕ್ಕೂ ಯಾವುದೇ ತಾಳೆಯಿಲ್ಲದೆ ಇರುವಾಗ ಅದು ಹೇಗೆ ಭಾರತದ ಉನ್ನತಿಯ ಮಾಪಕವಾಗಿದೆಯೋ ಅರ್ಥಶಾಸ್ತ್ರಜ್ಞರೇ ಹೇಳಬೇಕು!

ಆದರೆ ನಮ್ಮೂರಲ್ಲಿ ಇದೇ ರೀತಿಯ ಶ್ರೀಸಾಮಾನ್ಯನೊಬ್ಬ ರಾಜಕೀಯಕ್ಕಿಳಿದು, ಹಸ್ತದ ಪಕ್ಷದ ರಾಜ್ಯ ಯುವ ಸಮಿತಿಯ ಮಸ್ತಕನಾಗಿ, ಮುಂದೇ ಕೊರಮಸಾಗರದ ಎಂ.ಎಲ್.ಎ ಕೂಡಾ ಆಗಿ, ಕೋಟಿ, ಕೋಟಿಗಳ ಆಸ್ತಿ ಮಾಡಿದ್ದಾನೆ. ನಾ ಕಂಡ ಹಾಗೆಯೇ ರೂಂ ಬಾಯ್ ಆಗಿದ್ದ ಈ ಜನನಾಯಕರು ಇಂದು ಕೋಟ್ಯಾಧೀಶರಾಗಿದ್ದಾರೆ. ಈ ರೀತಿಯ ಉನ್ನತಿಗಳನ್ನೇ ನಾನು ಕಾಣುತ್ತಿರುವುದು.

ನಾನು ಒಮ್ಮೊಮ್ಮೆ ಯೋಚಿಸುತ್ತೇನೆ ಏಕೆ ನಾನೂ ಕೂಡ ಕೆಲ ಎನ್ನಾರೈಗಳಂತೆ ’ಕನ್ನಡ ಕೂಟದಲ್ಲಿ ವನಭೋಜನ’, ’ಬೆಂಗಳೂರು ಬದಲಾಗಿದೆ’, ’ನಮ್ಮೂರಲ್ಲಿ ಸಖತ್ ಮುಂಗಾರುಮಳೆ’, ಚಿತ್ರಾನ್ನ ಘಮಗುಟ್ಟಿಸುವುದು ಹೇಗೆ, ಉಪ್ಪಿಟ್ಟು ಕೆಡಿಸುವುದು ಹೇಗೆ ಎಂದು ’ಅದಪ್ಪಾ ಕನ್ನಡ’ದಲ್ಲಿ ಬರುವ ಲೇಖನಗಳಂತೆ ಬರೆಯಬಾರದೆಂದು; ಹಾಗೆ ಬರೆದ ಲೇಖನಗಳನ್ನೇ ಒಟ್ಟುಗೂಡಿಸಿ ಒಂದು ಚೆಂದದ ಪುಸ್ತಕವನ್ನಾಗಿ ಪ್ರಕಟಿಸಿ ನನ್ನ ಮನೆಗೆ ಬಂದು ಹೋಗುವ ಗೆಳೆಯರಿಗೆಲ್ಲ ನನ್ನ ಒಂದೊಂದು ಪುಸ್ತಕವನ್ನು ಕೊಟ್ಟು ನಾನು ಕೂಡ ಕನ್ನಡ ಸಾಹಿತಿಯಾದೆನೆಂದು ಬೀಗಿ ಧನ್ಯನಾಗಬಾರದೆಂದು; ಅವರೆಲ್ಲರಿಗಿಂತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದಾದರೂ ಪ್ರಶಸ್ತಿಗೆ ಎನ್ನಾರೈ ಕೋಟಾದಲ್ಲಿ ಅರ್ಜಿ ಗುಜರಾಯಿಸಿ, ಇಲ್ಲಿನ ಕನ್ನಡ ಸಮ್ಮೇಳನಗಳಿಗೆ ಬರುವ ಸಾಹಿತಿಗಳನ್ನು, ರಾಜಕಾರಣಿಗಳನ್ನು ಇಲ್ಲಿನ ದೇವತಾ ಪ್ಲಾಜಾ (ಇಲ್ಲಿನ ’ಸ್ಟ್ರಿಪ್ ಕ್ಲಬ್’ಗಳಿಗೆ ನನ್ನ ಸ್ನೇಹಿತರಾದ ಮಂಜು ಕರೆಯುವಂತೆ)ಗಳಿಗೆ ಕರೆದೊಯ್ದು, ಸರ್ವ ವರ್ಣೀಯರ ಅಂಗರಚನೆಯ ಮಾನ(ವ)ಶಾಸ್ತ್ರದಲ್ಲಿ ತೀವ್ರ ಕುತೂಹಲಿಗಳಾಗಿರುವ ಈ ಕಥಾನಾಯಕರು, ಜನನಾಯಕರುಗಳಿಗೆ ಅದರ ಮರ್ಮವನ್ನು ಪ್ರತ್ಯಕ್ಷವಾಗಿ ತೋರಿ ಅವರನ್ನು ನನ್ನ ಮರ್ಜಿಗೆ ಹಿಡಿದು ಪ್ರಶಸ್ತಿ ಗಿಟ್ಟಿಸಬೇಕೆಂದು.

ಬಹುಶಃ ೨೦೦೮ರಿಂದ ಹಾಗೆ ಬರೆಯಲು ಪ್ರಯತ್ನಿಸುತ್ತೇನೆ!

ಹಾಂ ಮರೆತಿದ್ದೆ, ಇನ್ನೊಂದು ಸಂಗತಿ, ನಾನು ಇನ್ನು ಒಂದು ತಿಂಗಳ ಕಾಲ ರಜೆಯ ಮೇಲೆ ವನಭೋಜನ ಮಾಡುತ್ತ, ಹಿಂಗಾರುಮಳೆಯಲ್ಲಿ ನೆನೆಯುತ್ತ, ಚಿತ್ರಾನ್ನ / ಉಪ್ಪಿಟ್ಟುಗಳ ಮೇಯುತ್ತ ಸೆಲ್ ಫೋನ್, ಇಂಟರ್ ನೆಟ್ ಇರದ ಕಗ್ಗಾಡುಗಳಲ್ಲಿ ತಿರುಗುತ್ತಿರುತ್ತೇನೆ. ಜನೆವರಿ ೧೫ ರ ನಂತರ ಮತ್ತೆ ಈ ಎಲ್ಲ ರಂಗಿನನುಭವಗಳೊಂದಿಗೆ ಮರಳಿ ಬರೆಯುತ್ತೇನೆ. ಹೊಸ ವರ್ಷ ನಿಮಗೆಲ್ಲರಿಗೂ ಶುಭವನ್ನು ತರಲೆಂದು ಕೋರುತ್ತಾ... ಧನ್ಯವಾದ.

ಅಣಕ

ಹಿಂದೊಮ್ಮೆ ಒಬ್ಬ ರಾಜಕಾರಣಿಯೋರ್ವರ ಸಂಪರ್ಕದಲ್ಲಿದ್ದೆ. ಆಗ ’ತರಂಗ’ ಪತ್ರಿಕೆಯಲ್ಲಿ ಏಪ್ರಿಲ್ ಫೂಲ್ ಅಂಗವಾಗಿ ’ಕಪ್ಪುಹಣವನ್ನೆಲ್ಲ ಬಿಳಿಯಾಗಿ ಪರಿವರ್ತನೆ’ ಎಂಬ ಕುಹಕ ಲೇಖನವೊಂದು ಬಂದಿತ್ತು. ಲೇಖಕರು ಅದನ್ನು ಅಂದಿನ ಹಣಕಾಸು ಸಚಿವರು ಕಪ್ಪುಹಣವನ್ನೆಲ್ಲಾ ಬಿಳಿಯಾಗಿ ಪರಿವರ್ತಿಸಿ ಕಪ್ಪುಹಣದ ಪೆಡಂಭೂತವನ್ನು ನಿವಾರಿಸಲು ಎಲ್ಲ ಸಿದ್ಧತೆಗಳಾಗಿದ್ದು, ಮುಂದಿನ ಎರಡು ತಿಂಗಳಲ್ಲೇ ಅದನ್ನು ಜಾರಿಗೊಳಿಸುವುದಾಗಿ ಹೇಳಿದಂತೆ ಬರೆದಿದ್ದರು. ಓದಿದವರಿಗೆ ಅದು ಕುಹಕವೆಂದು ತಿಳಿಯದಂತೆ ಎಚ್ಚರದಿಂದ ಬರೆದಿದ್ದ ಆ ಲೇಖನವನ್ನು ಓದಿ ಖುಷಿಗೊಂಡ ನನ್ನ ರಾಜಕಾರಣಿ ಗುರುಗಳು ಅಂದಿನ ಒಂದು ಸಾರ್ವಜನಿಕ ಸಭೆಯಲ್ಲಿ ಅದನ್ನು ತಮ್ಮ ಪಕ್ಷದ ಸಾಧನೆಯೆಂದು, ಕಪ್ಪುಹಣವೆಲ್ಲ ಬಿಳಿಯಾಗಿ ಅದು ಅನೇಕ ಉದ್ಯಮಗಳಲ್ಲಿ ಹರಿದು, ಭಾರೀ ಉದ್ಯೋಗಗಳನ್ನು ಸೃಷ್ಟಿಸುತ್ತದೆಯೆಂದು ಭಾಷಣವನ್ನು ಮಾಡಿಯೇಬಿಟ್ಟರು!

ನಾನು ಅವರ ಭಾಷಣದ ನಂತರ ನಿಜ ವಿಚಾರವನ್ನು ಹೇಳಿದಾಗ ಕೊಂಚ ವಿಚಲಿತಗೊಂಡರೂ, ’ಅದೇನು ಆಗಲ್ಲ ಬಿಡು. ನೀನಿನ್ನು ಪಿ.ಯು.ಸಿ. ಹುಡುಗ, ನಿನಗಿದೆಲ್ಲ ಗೊತ್ತಾಗಲ್ಲ’ ಎಂದು ಬುದ್ಧಿ ಹೇಳಿದರು!

ನಿಮ್ಮೂರಿನ ವೈದ್ಯರು ಮತ್ತು ಏಡ್ಸ್

ಇತ್ತೀಚೆಗೆ ನನ್ನ ಗುರುತಿನ ಹಲವಾರು ವ್ಯಕ್ತಿಗಳು ಹೃದಯಾಘಾತಕ್ಕೊ, ರಕ್ತದೊತ್ತಡ ಅಗತ್ಯಕ್ಕಿಂತ ಹೆಚ್ಚು ಕಡಿಮೆಯಾಗಿಯೋ ಕಿರಿಯ ವಯಸ್ಸೆನ್ನಬಹುದಾದಂತಹ ನಲವತ್ತು, ನಲವತ್ತೈದರ ಆಸುಪಾಸಿನಲ್ಲಿ ದಿಢೀರನೆ ಮೃತರಾಗುತ್ತಿರುವ ಸುದ್ದಿಗಳನ್ನು ಅಗಾಗ್ಗೆ ಕೇಳುತ್ತಿದ್ದೇನೆ. ಬಹುಶಃ, ನಿಮಗೆ ತಿಳಿದವರು ಕೆಲವರು ಕೂಡ ಈ ರೀತಿ ಮೃತರಾದ ಸುದ್ದಿಗಳನ್ನು ಕೇಳಿಯೇ ಇರುತ್ತೀರಿ. ಹಾಗೆಯೇ ಯೋಚಿಸಿದಾಗ ಈ ರೀತಿ ಮೃತರಾದವರ ಸುದ್ದಿಗಳನ್ನು ಈ ಮೊದಲೆಲ್ಲಾ ಕೇಳಿದ್ದರೂ ಆ ವ್ಯಕ್ತಿಗಳೆಲ್ಲ ಎಪ್ಪತ್ತು, ಎಂಬತ್ತು ವರ್ಷದ ವ್ಯಕ್ತಿಗಳಾಗಿರುತ್ತಿದ್ದು, ಆಗೊಮ್ಮೆ, ಈಗೊಮ್ಮೆ ಅರವತ್ತರ ಆಸುಪಾಸಿನ ವ್ಯಕ್ತಿಗಳು ತೀರಿಕೊಂಡಿರುತ್ತಿದ್ದರು. ಆದರೆ ಈ ರೀತಿ ಇನ್ನೂ ಯುವಕರೇ ಅನ್ನಬಹುದಾದಂತಹ ವಯೋಮಾನದವರು ಸಾಮಾನ್ಯವಾಗಿ ಅಪಘಾತಗಳಲ್ಲಿ ಸಾಯುತ್ತಿದ್ದವರು, ಈ ರೀತಿ ಎದೆಯೊಡೆದೋ, ಬಿಪಿ ಹೆಚ್ಚು ಕಡಿಮೆಯಾಗಿಯೋ ಸಾಯುತ್ತಿರುವುದನ್ನು ನೋಡಿ ದುಃಖವಾದರೂ ಆಶ್ಚರ್ಯವಾಗುತ್ತಿದೆ.

ಏನಿದು ನಮ್ಮ ಮಧ್ಯವಯಸ್ಕ ಯುವಕರ ಆರೋಗ್ಯ ಈ ರೀತಿ ಅವರನ್ನು ಕೊನೆಗಾಣಿಸುತ್ತಿದೆ?

ಅವರ ಜೀವನ ಶೈಲಿ ಇದಕ್ಕೆ ಕಾರಣವೆಂದುಕೊಂಡರೆ, ನನ್ನ ಕಣ್ಣೆದುರಿಗೇ ನಮ್ಮ ಅಜ್ಜ ದಿನಾಲೂ ಸಿಗರೇಟಿನ ಮೇಲೆ ಸಿಗರೇಟು ಸುಟ್ಟು ಎಪ್ಪತೈದರ ಆಸುಪಾಸಿನಲ್ಲಿ ಗಂಟಲು ಕ್ಯಾನ್ಸರ್ ತಗುಲಿಸಿಕೊಂಡು, ಗುಣಪಡಿಸಿಕೊಂಡು ನಂತರ ಇನ್ನೂ ಐದಾರು ವರ್ಷ ಸುಖವಾಗಿ ಬದುಕಿ ನಂತರ ಸತ್ತ ನಿದರ್ಶನವಿದೆ. ಅಷ್ಟೇ ಅಲ್ಲದೆ ಈ ರೀತಿಯ ಅನೇಕ ಜನರು ಬಹುಕಾಲ ಬದುಕಿ ಬಾಳಿದ್ದನ್ನು ನಾನು ನೋಡಿದ್ದೇನೆ.

ಸರಿ, ಕುಡಿತವೇನಾದರೂ ಈ ರೀತಿ ಮಾಡಿಸುತ್ತದೆಯೇ ಎಂದರೆ ಸಾಮಾನ್ಯ ಕುಡಿತದ ಕುಡುಕರು ಕೂಡ ಬಹುಕಾಲ ಜೀವಿಸಿದ್ದನ್ನು ಕೂಡ ನಾನು ನೋಡಿದ್ದೇನೆ. ಅದರಲ್ಲೂ ನಾನು ಚಿಕ್ಕವನಿದ್ದಾಗ ನಮ್ಮ ಮನೆಯ ಬಳಿ ಚಪ್ಪಲಿ ಹೊಲೆಯುತ್ತಿದ್ದವನೊಬ್ಬ ದಿನಾಲೂ ಕಂಠ ಮಟ್ಟ ಕುಡಿದು ’ಅಪ್ಪನು ನಮ್ಮ ಮಾದರ ಚೆನ್ನಯ್ಯಾ’ ಎಂದೋ, ’ಸೆಟ್ಟಿಯೆಂಬೆನೆ ಸಿರಿಯಾಳನಾ, ಡೋಹರನೆಂಬೆನೆ ಕಕ್ಕಯ್ಯನಾ, ನಾನು ಹಾರುವನೆಂದೆಡೆ ನಗುವನಯ್ಯಾ ಕೂಡಲಸಂಗಯ್ಯ’ ಎಂದೋ ಬಸವಣ್ಣನ ವಚನಗಳನ್ನು ಹಾಡುತ್ತ ಒಮ್ಮೊಮ್ಮೆ ತನ್ನ ಮೂಡ್ ಬದಲಾದಾಗ ಅಥವಾ ಆ ದಿನ ಒಳ್ಳೆ ವ್ಯಾಪಾರವಾಗದೆಲೆನೋ ಏನೋ ’ಬರಿಗಾಲಲಿ ನಡೆವವನ ಕರೆದು ಕೆರದಲಿ ಹೊಡೆ’ ಎಂದು ಸರ್ವಜ್ಞನಾಗಿ ಬಿಡುತ್ತಿದ್ದ. ನನ್ನ ಶಾಲಾ ದಿನಗಳ ಆ ಕಾಲದಲ್ಲಿ ನಾನು ಮತ್ತು ನನ್ನ ತಮ್ಮನೂ ಚಿಕ್ಕ ಚಿಕ್ಕ ಪದ್ಯಗಳನ್ನೇ ನೆನಪಿಟ್ಟುಕೊಳ್ಳಲು ಹೆಣಗುತ್ತಿದ್ದರೆ ಇವನ ಈ ತಪ್ಪಿಲ್ಲದ ವಚನ ಗಾಯನವು ನಮ್ಮಲ್ಲಿ ಅವನ ಬಗ್ಗೆ ಅತ್ಯಂತ ಗೌರವ ಭಾವನೆಯನ್ನು ಮೂಡಿಸಿದ್ದಿತು. ಬಸವಣ್ಣ, ಸರ್ವಜ್ಞರ ಕಾಲವನ್ನು ಕಂಡಿರದ ನಮಗೆ ಇವನೇ ಅವರಿಂದ ಪ್ರಭಾವಿತರಾಗಿ ಅಂದಿನ ಜನಸಾಮಾನ್ಯರು ಹೇಗೆ ಬಾಳುತ್ತಿದ್ದರೆಂಬುದರ ಜ್ವಲಂತ ನಿದರ್ಶನವಾಗಿ ಅಂದು ಕಾಣುತ್ತಿದ್ದನು. ಕ್ರಮೇಣ ನಮ್ಮ ಬುದ್ಧಿ ಬೆಳೆದಂತೆ ನಾವು ತಿಳಿದುಕೊಂಡ ಸಂಗತಿಯೇನೆಂದರೆ ಇವನು ತಾನು ಚಪ್ಪಲಿ ಹೊಲೆಯುತ್ತಿದ್ದ ಸ್ಥಳದ ಆಚೆ ಬದಿಯ ಮಠದಲ್ಲಿ ವಾಸವಿದ್ದ, ಅತ್ಯಂತ ಮಡಿವಂತಿಕೆಯನ್ನು ತೋರುತ್ತಿದ್ದ ನಮ್ಮೂರ ಶಾಸ್ತ್ರಿಗಳನ್ನು ಛೇಡಿಸಲು ಆ ಎಲ್ಲಾ ವಚನಗಳನ್ನು ಕಲಿತು ಹಾಡುತ್ತಿದ್ದನೆಂಬುದು! ಡಾ: ಬಂಜಗೆರೆ ಜಯಪ್ರಕಾಶರು ಇತ್ತೀಚೆಗೆ ಮಾಡಿದ ’ಪಂಡಿತ ಕೀಟಲೆ’ಯನ್ನು, ಈ ಪಾಮರ ಅಂದೇ ಪ್ರಯೋಗಿಸಿದ್ದ! ಅವನು ಇನ್ನೂ ಅದೇ ರೀತಿ ಹೊಟ್ಟೆ ತುಂಬ ಕುಡಿಯುತ್ತ ಇತ್ತೀಚಿನವರೆಗೆ ಸುಮಾರು ಅವನ ಎಪ್ಪತ್ತೈದರ ವಯಸ್ಸಿನವರೆಗೆ ಬದುಕಿದ್ದುದನ್ನು ನೋಡಿದ್ದೇನೆ.

ಒಟ್ಟಾರೆ ಮೂಗಿನಿಂದಲೂ ಬಾಯಿಯಿಂದಲೂ ಕುಡಿಯುವ ಚಟಗಳು (ಧೂಮಪಾನ, ಮದ್ಯಪಾನ) ಅಷ್ಟಾಗಿ ಜನರನ್ನು ಚಿಕ್ಕ ವಯಸ್ಸಿನಲ್ಲಿಯೇ ಸಾಯಿಸುವುದಿಲ್ಲವೆಂಬುದು ಗಮನಾರ್ಹ. ಆದರೆ ಇತ್ತೀಚೆಗೆ ಸತ್ತವರಲ್ಲಿ ಅನೇಕರು ಅಷ್ಟೆಲ್ಲಾ ಚಟಗಳಿಲ್ಲದವರೂ ಇದ್ದಾರೆ.

ನನ್ನ ಪ್ರಕಾರ ಭಾರತದ ಜನಸಾಮಾನ್ಯರ ಈ ರೀತಿಯ ದಿಢೀರ್ ಸಾವುಗಳಿಗೆ ಒಂದು ಪ್ರಬಲ ಕಾರಣವಿದೆ!

ನೀವುಗಳು ಗಮನಿಸಿದ್ದೀರೋ ಇಲ್ಲವೋ ಭಾರತದಲ್ಲಿನ ಅನೇಕ ವೈದ್ಯರುಗಳು ಕ್ಷಿಪ್ರ ಹೆಸರುವಾಸಿಯಾಗಲೋ ಅಥವಾ ತಾವು ವೈದ್ಯರಾಗಲು ತೊಡಗಿಸಿದ ಡೊನೇಷನ್ ಬಂಡವಾಳವನ್ನು ತ್ವರಿತವಾಗಿ ಹಿಂದಕ್ಕೆ ಪಡೆಯಲೋ ಒಂದು ಕೆಟ್ಟ ವೈದ್ಯಕೀಯ ಸಂಪ್ರದಾಯವನ್ನು ನೆಟ್ಟು ಹೆಮ್ಮರವಾಗಿ ಬೆಳೆಸಿದ್ದಾರೆ. ಇನ್ಫೆಕ್ಷನ್ / ವೈರಲ್ ಇರಲಿ, ಇಲ್ಲದಿರಲಿ ಸಾಮಾನ್ಯ ಜ್ವರ, ನೆಗಡಿಗಳಿಗೂ ಆಂಟಿಬಯಾಟಿಕ್ ಗಳನ್ನು ಕೊಡುತ್ತಾರೆ. ಇದನ್ನು ಪ್ರಶ್ನಿಸಿದಾಗ ನನ್ನ ವೈದ್ಯ ಮಿತ್ರರೋರ್ವರು ’ಗೆಳೆಯ, ಇಲ್ಲಿ ಬರುವವರಿಗೆ ಜ್ವರ ಈ ಕೂಡಲೇ ವಾಸಿಯಾಗಿಬಿಡಬೇಕು. ನಾನು ಇವರಿಗೆ ಸಾಮಾನ್ಯ ಜ್ವರದ ಮಾತ್ರೆಗಳನ್ನು ಕೊಟ್ಟು, ಅವರ ಜ್ವರ ಮೂರು ದಿನದ ನಂತರ ವಾಸಿಯಾದರೆ, ಈ ರೋಗಿ ಮತ್ತೆಂದೂ ನನ್ನ ಬಳಿಗೆ ಬರಲಾರ. ಹತ್ತಿರದಲ್ಲೇ ಇರುವ ಇನ್ನೊಬ್ಬ ಡಾಕ್ಟರನ ಬಳಿ ಹೋಗಿ ಅವನು ಕೊಡುವ ಆಂಟಿಬಯಾಟಿಕ್ ನುಂಗಿ ಮರುದಿನವೇ ಗುಣವಾಗಿಬಿಡುತ್ತಾನೆ. ಅದಲ್ಲದೇ ನನ್ನ ಬಳಿ ಹೋದರೆ ಮೂರು ದಿನವಾದರೂ ಸುಖವಿಲ್ಲವೆಂದು ಅಪಪ್ರಚಾರ ಮಾಡುತ್ತಾನೆ. ಅವನಿಗೆ ಆಂಟಿಬಯಾಟಿಕ್ ಬಗ್ಗೆ ನಾನು ಗಂಟೆಗಟ್ಟಲೆ ಕೊರೆದರೂ ಅದನ್ನು ಅವನು ಪರಿಗಣಿಸುವುದಿಲ್ಲ. ಏಕೆಂದರೆ ಅವನು ಮರುದಿನ ತನ್ನ ಕೆಲಸವನ್ನೋ, ವ್ಯಾಪಾರವನ್ನೋ ತತ್ಕಾಲವಾಗಿ ನಿಲ್ಲಿಸಲು ಸಿದ್ಧನಿರುವುದಿಲ್ಲ. ಒಟ್ಟಿನಲ್ಲಿ ಅವನಿಗೆ ಬೇಕಾದದ್ದು ತನ್ನ ಜ್ವರ ಮರುದಿನ ವಾಸಿಯಾಗುವುದೋ ಇಲ್ಲವೋ, ಅಷ್ಟೆ" ಎಂದರು. ಅದಲ್ಲದೇ, "ಇಲ್ಲಿ ನಾವು ಕೇವಲ ವೈದ್ಯರಾಗಿ ಕೆಲಸ ಮಾಡದೆ ನಮ್ಮ ರೋಗಿಗಳ ಕಷ್ಟ, ಸುಖ, ಅವರಿರುವ ಪರಿಸ್ಥಿತಿ, ಅನಿವಾರ್ಯತೆ, ಆರ್ಥಿಕ ಮಟ್ಟ ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಅವರ ಕೌನ್ಸೆಲರ್ ಆಗಿ ವರ್ತಿಸುತ್ತೇವೆ. ಒಮ್ಮೊಮ್ಮೆ ನಮ್ಮ ರೋಗಿಯೋರ್ವಳ ಮಗು ಹಟ ಬಿದ್ದು ಅಳುತ್ತಿದ್ದರೆ ಅದಕ್ಕೆ ಸೂಜಿ ತೋರಿಸಿ ಹೆದರಿಸುವ ಬೆದರುಬೊಂಬೆಗಳಾಗಿಯೂ ಕೆಲಸ ಮಾಡಬೇಕಾಗುತ್ತದೆ" ಎಂದು ನಕ್ಕರು.

ಅಷ್ಟೇ ಅಲ್ಲದೆ ತಾವು ಮೆಡಿಕಲ್ ಓದಲು ಪಟ್ಟ ಕಷ್ಟ, ಖರ್ಚು-ವೆಚ್ಚ, ಅದಲ್ಲದೇ ಪ್ರತಿಯೊಂದು ಗಲ್ಲಿಗಲ್ಲಿಗಳಲ್ಲಿಯೂ ನಾಯಿಕೊಡೆಯಂತಿರುವ ಕ್ಲಿನಿಕ್ಕುಗಳು, ವೈದ್ಯರುಗಳಲ್ಲಿನ ಪೈಪೋಟಿ, ಇತ್ತ ಜನಸಾಮಾನ್ಯರ ಕಷ್ಟ, ದುಸ್ತರ ಜೀವನ ಕತೆಗಳನ್ನೆಲ್ಲ ನನ್ನ ಮುಂದೆ ತೋಡಿಕೊಂಡು ಭಾರತದಂತಹ ಬಡದೇಶದ ನಿತ್ಯ ಹೋರ್‍ಆಟದ ಜನಜೀವನದಲ್ಲಿ ಆ ಕ್ಷಣಕ್ಕೆ ಜನಸಾಮಾನ್ಯರ ಕಾಯಿಲೆಯನ್ನು ಗುಣಪಡಿಸಿ ಆ ರೋಗಿಗಳ ಸಂಸಾರ ರಥ ಸಾಂಗವಾಗಿ ಸಾಗಲು ಈ ಆಂಟಿಬಯಾಟಿಕ್ ಥೆರಪಿಯ ಕೀಲೆಣ್ಣೆ ಅನಿವಾರ್ಯವೆಂದು ಫಿಲಾಸಾಫಿಕಲ್ ಆಗಿ ನನ್ನನ್ನೂ ಕೂಡ ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತೆ ಮಾಡಿದರು. ಅದಲ್ಲದೇ ಈ ರೀತಿಯ ಜನಸಾಮಾನ್ಯನು ನಲ್ವತ್ತಕ್ಕೆ ಸತ್ತರೇನು, ಎಂಬತ್ತಕ್ಕೆ ಸತ್ತರೇನು? ಹೋರಾಡಿದಷ್ಟೂ ಸೋಲುತ್ತಿರುವ ಮತ್ತು ಸೋಲಲೇಬೇಕಾದ ಅನಿವಾರ್ಯತೆಯಿರುವ ಸಾಮಾನ್ಯ ಭಾರತೀಯನ ಜೀವನ ಸಂಘರ್ಷದಲ್ಲಿ, ದುರಂತಗಳ ಸರಮಾಲೆಗಳೇ ಅವನನ್ನು ಕಾಯುತ್ತಿರುವಾಗ, ಒಂದು ರೀತಿಯಲ್ಲಿ ಅವರನ್ನು ಹೆಚ್ಚಿಗೆ ಕಾಯಿಸದೇ ನಲ್ವತ್ತಕ್ಕೆ ಈ ದುರಂತಗಳಿಂದ ಮುಕ್ತಿ ಕೊಡುತ್ತಿರುವ ಈ ಪದ್ದತಿ ಪ್ರಸ್ತುತ ಭಾರತಕ್ಕೆ ಅತೀ ಅನಿವಾರ್ಯವೆಂದರು. ಅವರ ಪ್ರಕಾರ ಈ ಎಲ್ಲ ಪಿಡುಗಿಗೆ ಭಾರತದ ಭ್ರಷ್ಟ ವ್ಯವಸ್ಥೆ, ಪೊಳ್ಳು ಪ್ರಜಾಪ್ರಭುತ್ವ, ಅತೀವ ಸ್ವಾತಂತ್ರ್ಯ ಇವುಗಳೇ ಇದೆಲ್ಲದರ ಮೂಲವೆಂದೂ ’ಆಲ್ ರೋಡ್ಸ್ ಲೀಡ್ ಟು ರೋಮ್’ ಎಂದರು.

ಇನ್ನು ಕೆಲವು ವಿದ್ಯಾವಂತರು ಸ್ವಲ್ಪದರಲ್ಲೇ ತಾವು ಡಾಕ್ಟರರಾಗುವುದು ತಪ್ಪಿತೆಂದೋ ಅಥವಾ ’ಅವನೇನು ಹೇಳುವುದು ಇದು ನನ್ನ ದೇಹ’ವೆಂದೋ ತಾವೇ ಡಾಕ್ಟರರಾಗಿಬಿಡುತ್ತಾರೆ. ತಮಗೆ ಜ್ವರವೋ, ಕೆಮ್ಮೋ ಬರುವ ಅನಿಸಿಕೆಯಿದ್ದರೂ ಸಾಕು, ನೇರ ಔಷಧಿ ಅಂಗಡಿಗೆ ಲಗ್ಗೆ ಇಟ್ಟು ’ಟೆಟ್ರಾಸೈಕ್ಲಿನ್’, ’ಅಮಾಕ್ಸಿಸಿಲಿನ್’, ’ಆಂಪಿಸಿಲಿನ್’ ಬೇಕೆನ್ನುತ್ತಾರೆ. ಆ ಅಂಗಡಿಯವನು ಕೂಡ ’ಆ ಔಷಧಿಯಿಲ್ಲ, ಅದೇ ತರಹದ ಇನ್ನೊಂದಿದೆ’ ಎಂದು ಇನ್ನೆಂತದೋ ’ಲಿನ್’ ಎಂದು ಕೊನೆಗೊಳ್ಳುವ ಔಷಧಿ ಕೊಟ್ಟು ಕಳುಹಿಸುತ್ತಾನೆ. ಅಥವಾ ಆ ಆಂಟಿಬಯಾಟಿಕ್ ಅಷ್ಟೊಂದು ಪರಿಣಾಮಕಾರಿಯಲ್ಲ, ನೀವು ಈ ’ಸಲ್ಫಾ ಡ್ರಗ್’ ಎಂಬ ’ಸಿನ್’ ಎಂದು ಕೊನೆಗೊಳ್ಳುವ ಹೆಸರಿನ ಇನ್ನೊಂದು ಬಗೆಯ ಆಂಟಿಬಯಾಟಿಕ್ ತೆಗೆದುಕೊಳ್ಳಿರೆಂದು ತನ್ನ ಬುದ್ದಿಮತ್ತೆಯನ್ನು ಪ್ರದರ್ಶಿಸುತ್ತಾನೆ. ಇಷ್ಟೊಂದು ಸುಲಭವಾಗಿ ಸ್ವರ್ಗಕ್ಕೆ ವೀಸಾ ಸಿಕ್ಕುತ್ತಿರುವಾಗ ಯಾರಪ್ಪಣೆ ಬೇಕು ಇಮಾನವೇರಲು?

ಕೂಲಂಕುಷವಾಗಿ ನೋಡಿದರೆ, ಆಂಟಿಬಯಾಟಿಕ್ ಗಳು ವೈದ್ಯಪ್ರಪಂಚದ ಅದ್ಭುತವೆಂದಾದರೂ ಅದರ ಅತೀ ಬಳಕೆ ಆರೋಗ್ಯಕ್ಕೆ ಹಾನಿಕರ. ಅದಲ್ಲದೆ ಇವುಗಳು ಉತ್ತಮ ಬ್ಯಾಕ್ಟಿರಿಯಾಗಳು, ಕೆಟ್ಟ ಬ್ಯಾಕ್ಟಿರಿಯಾಗಳೆಂದು ಭಿನ್ನವಿಲ್ಲದೇ ಎಲ್ಲಾ ಬ್ಯಾಕ್ಟಿರಿಯಾಗಳನ್ನು ಕೊಲ್ಲುತ್ತವೆ. ಇದರಿಂದ ಉತ್ತಮ ಬ್ಯಾಕ್ಟಿರಿಯಾಗಳು ನಾಶವಾಗಿ ದೇಹದ ಸಹಜ ರೋಗನಿರೋಧಕ ಶಕ್ತಿ ಕುಗ್ಗುತ್ತ ಇಲ್ಲವಾಗಿಬಿಡುತ್ತದೆ. ಇತ್ತೀಚಿನ ಇಪ್ಪತೈದು ಮೂವತ್ತು ವರ್ಷಗಳಿಂದ ಈ ಪದ್ದತಿ ಬೆಳೆದು ಬಂದಿದ್ದು ಅದರ ಕಾರಣವಾಗಿಯೇ ಈ ರೀತಿಯ ಅಸಹಜ ವಯಸ್ಸಿನಲ್ಲಿ ಜನರು ಸಾಯುತ್ತಿದ್ದಾರೆಂದು ನನ್ನ ಬಲವಾದ ಅನಿಸಿಕೆ.

ಈ ಅನಿಸಿಕೆಯನ್ನು ಪರಿಶೀಲಿಸುತ್ತ ಇವುಗಳ ಪರಿಣಾಮದ ಮಾಹಿತಿಯನ್ನು ಶೋಧಿಸಿದಾಗ ಅಘಾತಕಾರೀ ಸಂಶೋಧನಾ ಪ್ರಬಂಧವೊಂದನ್ನು ಓದಿದೆನು. ಆ ಪ್ರಬಂಧದ ಪ್ರಕಾರ, ಅತಿ ಹೆಚ್ಚು ಆಂಟಿಬಯಾಟಿಕ್ ಸೇವಿಸುವ ಅಭ್ಯಾಸವಿರುವವರು ಏಡ್ಸ್ ಪರೀಕ್ಷೆಗೊಳಗಾದಾಗ ಏಡ್ಸ್ ಪಾಸಿಟಿವ್ ಆಗಿರುತ್ತಾರೆಂದೂ ಹೆಚ್.ಐ.ವಿ. ಇಲ್ಲದೆಲೆಯೂ ಏಡ್ಸ್ ಇರುತ್ತದೆಂಬುದೇ ಆ ಪ್ರಬಂಧದ ಸಾರಾಂಶವಾಗಿತ್ತು!

ಒಟ್ಟಾರೆ ಏಡ್ಸ್ (ಅಕ್ವೈರಡ್ ಇಮ್ಮ್ಯೂನ್ ಡಿಫಿಷಿಯನ್ಸಿ ಸಿಂಡ್ರೋಮ್) ನ ಅರ್ಥ (ಎಲ್ಲಾ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ದೇಹವು ಸರ್ವ ರೋಗಗಳಿಗೆ ’ತೆರೆದಿದೆ ಮನೆ ಓ ಬಾ ಅತಿಥಿ’ ಎಂದು ಆಹ್ವಾನವೀಯುವುದು) ಮತ್ತು ಆಂಟಿಬಯಾಟಿಕ್ ಅತಿ ಸೇವನೆಯ ದುಷ್ಪರಿಣಾಮಗಳು ತಾಳೆಯಾಗುವುದರಿಂದ ನನಗೆ ಈ ಭಾರತದ ವೈದ್ಯರುಗಳು ಪ್ರತಿಯೊಂದು ಕಾಯಿಲೆಗಳಿಗೂ ಆಂಟಿಬಯಾಟಿಕ್ ಕೊಡುವ ಪದ್ದತಿ / ಅನಿವಾರ್ಯತೆ, ಭಾರತದ ಏಡ್ಸ್ ರೋಗಿಗಳ ಒಟ್ಟು ಸಂಖ್ಯೆಗೆ ಕೆಲವಾರು ಸಂಖ್ಯೆಗಳನ್ನಾದರೂ ಸೇರಿಸಿದೆಯೇನೋ ಎನ್ನುವ ಹೊಸ ಗುಮಾನಿ ಶುರುವಾಗಿದೆ!

ಪರಿಸ್ಥಿತಿ ಹೀಗಿರುವಾಗ ಭಾರತದ ಕೆಲವು ಪ್ರಚಾರಪ್ರಿಯ ವೈದ್ಯರುಗಳು ತಮ್ಮದೇ ವೃತ್ತಿಯ ಈ ಪಿಡುಗಿನ ವಿರುದ್ಧ ದಿವ್ಯ ಮೌನವನ್ನು ತಾಳಿ, ಮತ್ತೊಂದೆಡೆ ಬೀದಿ ಮಕ್ಕಳ ಕಣ್ಣು ಪರೀಕ್ಷೆ, ಪಾಕಿಸ್ತಾನದ ಬಾಲೆಯ ಹೃದಯ ಶಸ್ತ್ರಚಿಕಿತ್ಸೆ ಎಂದೆಲ್ಲ ಪ್ರಚಾರಿಸಿಕೊಂಡು ದಿನಪತ್ರಿಕೆಗಳಲ್ಲಿ ಫೋಟೋ ಛಾಪಿಸಿಕೊಳ್ಳುತ್ತಾರೆ. ಇತ್ತೀಚೆಗಂತೂ ಚತುರ್ಭುಜ ಬಾಲೆಯ ಅಧಿಕ ಕೈಗಳನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆಗೆ ದೊರಕಿದ ಭಾರೀ ಪಬ್ಲಿಸಿಟಿಯನ್ನು ಗಮನಿಸಿದರೆ, ಇವರುಗಳು ಈ ರೀತಿಯ ಪ್ರಚಾರಕ್ಕೆ ಬೇಕಾದ ರೋಗಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೇನೋ ಎನ್ನಿಸುತ್ತದೆ! ಸಾರ್ವಜನಿಕ ಸೇವೆಯ ತೀವ್ರ ತೀಟೆಯಿದ್ದರೆ ಯಾವುದೇ ಪ್ರಚಾರ ಬಯಸದೆ ಬಿಳಿಗಿರಿ ರಂಗನ ಬೆಟ್ಟದ ಸೋಲಿಗರ ಸೇವೆ ಮಾಡುತ್ತಿರುವ ಡಾ: ಸುದರ್ಶನ್ ರಂತೆ ತಣ್ಣಗೆ ಸೇವೆ ಮಾಡಬೇಕಲ್ಲವೆ?

ಇದೆಲ್ಲವನ್ನು ನೋಡಿ ಈ ಸಂದರ್ಭಕ್ಕೆ ಅನ್ವಯವಾಗುವಂತೆ ನಾನು ಬಹುವಾಗಿ ಮೆಚ್ಚುವ ಅಲ್ಲಮನ ವಚನವೊಂದು ಜ್ಞಾಪಕವಾಗುತ್ತಿದೆ, ’ಅರುಹ ಪೂಜಿಸಲೆಂದು ಕುರುಹು ಕೊಟ್ಟೆಡೆ, ಅರುಹ ಮರೆತು ಕುರುಹ ಪೂಜಿಸುವ ಹೆಡ್ಡರಾ ನೋಡಾ ಗುಹೇಶ್ವರಾ!’

ಅಣಕ:

ನನ್ನ ಕಾಲೇಜಿನ ದಿನಗಳಲ್ಲಿ ನನ್ನ ಆತ್ಮೀಯ ಮಿತ್ರನೋರ್ವನು ಮುಸ್ಲಿಂ ಹಾಸ್ಟೆಲ್ಲಿನಲ್ಲಿದ್ದನು. ತಾನು ತಮ್ಮ ಹಾಸ್ಟೆಲ್ಲಿಗೆ ಬರುವ ಜೂನಿಯರ್ ವಿದ್ಯಾರ್ಥಿಗಳಿಗೆ ಸ್ನೇಹಮಯ, ಕ್ರಿಯಾಶೀಲ, ತಮಾಷೆಯೂ ಆಗಿರುವ ರೀತಿಯಲ್ಲಿ ರ್‍ಯಾಗಿಂಗ್ ಮಾಡುವ ವಿಧವೇನಾದರೂ ಇದೆಯೇ ಎಂದು ಕೇಳಿದ್ದನು. ಅದಕ್ಕೆ ನಾನು ಎಲ್ಲರಿಗೂ ಒಂದೊಂದು ’ನಿರ್‍ಓಧ್’ ಪ್ಯಾಕ್ ಕೊಟ್ಟು ಅದರ ಮೇಲೆ ಅವರವರ ಭಾವಚಿತ್ರ ಲಗತ್ತಿಸಿ, ’ಐಡೆಂಟಿಟಿ ಕಾರ್ಡ್’ ಮಾದರಿಯಲ್ಲಿ ತಮ್ಮ ಜೇಬಿನಲ್ಲಿ ಸದಾ ಇಟ್ಟುಕೊಂಡು, ಕೇಳಿದಾಗ ತೋರುವಂತೆ ಹೇಳೆಂದೆನು. ಇದರಿಂದ ಉತ್ಸಾಹಿತಗೊಂಡು ಅವನು, ಅದನ್ನು ತಮ್ಮ ಹಾಸ್ಟೆಲ್ಲಿನಲ್ಲಿ ಅಳವಡಿಸಿದಾಗ ಎಲ್ಲರೂ ಅದನ್ನು ಮೆಚ್ಚಿ ಖುಷಿಯಿಂದ ಪಾಲ್ಗೊಂಡರೂ ಓರ್ವನು ಹಾಸ್ಟೆಲ್ ವಾರ್ಡನ್ ರಿಗೆ ಕಂಪ್ಲೇಂಟ್ ಕೊಟ್ಟನು. ಸರಿ, ವಾರ್ಡನ್ ಇವನನ್ನು ಕರೆದು, ಆ ಐಡೆಂಟಿಟಿ ಕಾರ್ಡ್ ’ನಿರೋಧ್’ ಅನ್ನು ಯಾವುದೋ ಅಸಹ್ಯ ವಸ್ತುವೆಂಬಂತೆ ಎತ್ತಿ ಹಿಡಿದು, ಆದರೂ ನಿಲ್ಲದ ಸಹಜ ಕುತೂಹಲದಿಂದ ಅದನ್ನು ತೆರೆದು ಪರಿಶೀಲಿಸುತ್ತ ’ಇದೇ ಫಸ್ಟ್ ಟೈಮ್ ನಾನು ಕಾಂಡೋಂ ನೋಡುತ್ತಿರುವುದು! ಅರವತ್ತರ ಆಸುಪಾಸಿನಲ್ಲಿರುವ ನಾನೇ ಇದುವರೆಗೂ ಇಂತಹದ್ದನ್ನೂ ನೋಡಿಲ್ಲ. ನಿಮಗ್ಯಾಕೆ ಈ ರೀತಿಯ ಹುಡುಗಾಟ?’ ವೆಂದಾಗ, ಅವರ ಮಾತುಗಳಿಂದ ಉಕ್ಕಿ ಬರುತ್ತಿದ್ದ ನಗುವನ್ನು ತಡೆದು ಗಂಭೀರವದನನಾಗಿ ನನ್ನ ಸ್ನೇಹಿತ ’ಈ ಕಾಲದಲ್ಲಿ ಯಾವುದಕ್ಕೂ ಇದರ ಬಗ್ಗೆ ತಿಳಿದುಕೊಂಡಿದ್ದರೆ ಉತ್ತಮವೆಂದೂ, ಕೆಲವೊಂದು ಪರಿಸ್ಥಿತಿಗಳಲ್ಲಿ ಇದು ಇರದಿದ್ದರೆ ’ಏಡ್ಸ್’ ನಂತಹ ಭೀಕರ ರೋಗ ಬರುತ್ತದೆಂದೂ, ’ಏಡ್ಸ್’ ಬಗ್ಗೆ ಒಂದು ಭಾಷಣವನ್ನು ಬಿಗಿದು, ಈ ರೀತಿಯ ವಿಷಯವನ್ನು ನಾವಲ್ಲದೇ ಪೋಷಕರು ಹೇಳಲಾರರೆಂದೂ, ಯಾವುದಕ್ಕೂ ಈ ರೀತಿಯ ಶಿಕ್ಷಣವಿರಲೆಂದು ತಾನು ಆ ಪದ್ದತಿಯನ್ನು ಅಳವಡಿಸಿದೆನೆಂದು ಸಮರ್ಥಿಸಿಕೊಂಡು ಬಚಾವಾದನು. ಅದಾಗಲೇ ನಮ್ಮ ಕ್ಲಾಸ್ ಮೇಟ್ ಕೂಡ ಆಗಿದ್ದ ಅವರ ಮಗಳಿಂದ ನಮ್ಮ ಸ್ನೇಹಿತನ ಬಗ್ಗೆ ತಿಳಿದುಕೊಂಡಿದ್ದ ವಾರ್ಡನ್ನರು ಅತ್ಯಂತ ಮೃದು ಸ್ವಭಾವದ, ಉತ್ತಮ ಸಚ್ಚಾರಿತ್ರ್ಯದ ವಿದ್ಯಾರ್ಥಿಯೆಂದು ಹೆಸರು ಗಳಿಸಿದ್ದ ನನ್ನ ಸ್ನೇಹಿತನ ಮಾತನ್ನು ನಂಬಿ, ’ಬೇಕಿರಬಹುದೇನೋ ಈ ರೀತಿಯ ನವಯುವಕರ ಶಿಕ್ಷಣ’ ವೆಂದು ವಿಷಯವನ್ನು ಅಲ್ಲಿಗೇ ಬಿಟ್ಟರು.

ಗೆಂಡೆತಿಮ್ಮನ ಪ್ರಸಂಗವೂ, ಪಡುವಾರಹಳ್ಳಿಯ ಹುಚ್ಚಿಯೂ!

ಕಳೆದೆರೆಡು ವಾರಗಳ ಹಿಂದಿನ ಲೇಖನದ ಮೃತ್ಯುಂಜಯನು ಮೃತನಾದುದಕ್ಕೆ ಅನೇಕ ಓದುಗರು ಸಂತಾಪ ಸೂಚಿಸಿ ಮೃತ್ಯುಂಜಯನು ’ಮುತ್ತು’ ಎಂದೋ, ’ಜಯ್’ ಎಂದೋ ಆಗಬೇಕಿತ್ತೆಂದು ತಮ್ಮ ತಮ್ಮ ಸಲಹೆಗಳನ್ನು ನೀಡಿದ್ದರು. ಆದರೆ ಈ ಹೆಸರುಗಳು ಭಾರತದ ಸಾಮಾನ್ಯ ರೀತಿಯ ಅರ್ಧನಾಮಗಳಾದುದರಿಂದ ಈ ಮೊದಲೇ ಈ ರೀತಿಯ ನಾಮಾರ್ಧಗಳು ಗೊತ್ತಿದ್ದರೂ ಅವುಗಳೆಡೆ ಗಮನ ಕೊಡದೆ ವಿಶಿಷ್ಟತೆಯ ಅನ್ವೇಷಣೆಯಲ್ಲಿ ವಿಶೇಷ ಶೈಲಿಯ ಅನುಕರಣಾ ದಾಸನಾಗಿದ್ದ ಮೃತ್ಯುಂಜಯನು ’ಮೃತ್’ ಆಗಿ ಪರಿವರ್ತಿತಗೊಂಡಿದ್ದನು. ಇಂತಹ ಅನುಕರಣಾ ಸಂಸ್ಕೃತಿಯ ವ್ಯಕ್ತಿಗೆ ’ಪೂಜಾರಿ ಕೊಟ್ಟರೆ ಮಾತ್ರ ತೀರ್ಥ’ವಾದುದರಿಂದ ನಮ್ಮ ಮೈಕೆಲ್ ಡಫ್ ನು ’ಮೃತ’ನ ಹಿಂದೆ ಒಂದು ’ಅ’ ಸೇರಿಸಿ ’ಅಮೃತ’ ಪಾನ ಮಾಡಿಸಿ ’ಅಮೃತ್’ನಾಗಿಸಿದನು. ಮತ್ತೆ ತನ್ನ ಹೆಸರು ವಿಶೇಷತೆಯಿಂದ ಸಾಮಾನ್ಯವಾದುದಕ್ಕೆ ಒಳಗೆ ವ್ಯಥೆ ಪಟ್ಟರೂ ಅದು ಅಮೇರಿಕನ್ ಓರ್ವನು ಕೊಟ್ಟುದಾದುದರಿಂದ ಅದನ್ನು ಒಪ್ಪಿಕೊಂಡು ’ಅಮೃತ್’ ಅನ್ನು ’ಎಮೃತ್’ ಎಂದು ಹೇಳಿಕೊಳ್ಳುತ್ತಾ ಮೃತ್ಯುಂಜಯನು ಸಾಗಿದನು.

ಇನ್ನು ಇತ್ತೀಚಿನ ಸುದ್ದಿಯಂತೆ ಕನ್ನಡಿಗರಿಗೆ ದೇವೇಗೌಡ ಒಳ್ಳೆಯ ಪಾಠ ಕಲಿಸಿದ್ದಾರೆ. ತನ್ನಂಥಹ ಸ್ವಾರ್ಥಿ, ಕುಟುಂಬ ಪ್ರ್‍ಏಮಿ, ಸ್ನೇಹಿತರನ್ನು / ವಿರೋಧಿಗಳನ್ನು ಯಾರಾದರೇನಂತೆ ಅವರನ್ನು ಒಮ್ಮೆ ಕೆಡವೇ ತೀರುವ, ಕಂದಾಚಾರಗಳಿಗೂ ವಾಮಾಚಾರಗಳಿಗೂ ಕಟ್ಟುಬಿದ್ದಿರುವ, ನಂಬಿದವರು ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತೆ ’ಫ್’ ಮಾಡುವ, ರಾಜ್ಯದ ಯಾವುದೇ ದನ ಕಾಯುವವನೊಂದಿಗೂ ಪೈಪೋಟಿಗಿಳಿದು ಅವನ ಲಂಗೋಟಿಯನ್ನೆಳೆದು ಲಾತ ಕೊಡುವ, ರಾಜ್ಯ, ದೇಶಗಳೆಂದರೆ ಛಾಪಾ ಕಾಗದದ ಮೇಲೆ ತನ್ನಿತರೇ ಸ್ತಿರಾಸ್ಥಿ, ಚರಾಸ್ತಿಗಳಂತೆಯೇ ಕರಾರು ಪತ್ರ, ಹಕ್ಕು ಪತ್ರದಂತೆ ಬರೆಸಿಕೊಳ್ಳಬೇಕೆನ್ನುವ ತನ್ನಂಥಹ ಯಕಶ್ಚಿತ್ ಮುಗ್ಧ ಮಾನವನನ್ನು ಮುಖ್ಯಮಂತ್ರಿಯಾಗಿಸಿ, ಈ ದೇಶದ ಪ್ರಧಾನಿ ಪಟ್ಟಕ್ಕೇರಿಸಿದ್ದೇ ಅಲ್ಲದೇ ತನ್ನ ಪುತ್ರರತ್ನಗಳನ್ನೂ ಮಂತ್ರಿ ಮುಖ್ಯಮಂತ್ರಿಯಾಗಿಸಿದ್ದ ಮೂರ್ಖ ಕನ್ನಡಿಗರಿಗೆ ತಮ್ಮದೇ ಆದ ’ಫ್’ ಮಾಡುವ ಶೈಲಿಯಲ್ಲಿ ಸೊಂಟ ಮುರಿದಿದ್ದಾರೆ. ಇದನ್ನೆಲ್ಲಾ ಕಂಡು ಇತರೆ ರಾಜ್ಯದವರು ಕನ್ನಡಿಗರಿಗೆ ಐಯೋಡೆಕ್ಸ್ ಬೇಕೇ ಎಂದು ತಮ್ಮ ಮರುಕ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಮಣ್ಣಿನ ಮಗ ಮತ್ತು ಮೊಮ್ಮಕ್ಕಳಿಗೆ ಅತ್ಯಂತ ಅಪ್ಯಾಯಮಾನವಾಗಿ, ಅವರು ಬಹುಪಾಲು ತಮ್ಮ ಪ್ರತಿಯೊಂದು ವಾಕ್ಯಗಳಲ್ಲೂ ಬಳಸುವಂತಹ ಎರಡು ಅತೀ ಕನ್ನಡವೆನ್ನುವಂತಹ ಶಬ್ದಗಳಿವೆ. ಅದರಲ್ಲಿ ಒಂದನ್ನು ಆಲೋಚಿಸಿ ಸಭ್ಯವಾದ ರೀತಿಯಲ್ಲಿ ಹೇಗೆ ಪ್ರಯೋಗಿಸಬಹುದೆಂದು ತಲೆಕೆರೆದುಕೊಂಡು ’ನಿಕೃಷ್ಟ ರೋಮ’ವೆಂದು ಹಿಂದೆ ಬಳಸಿದ್ದೆ. ಆದರೆ ಅವರ ಇನ್ನೊಂದು ಪ್ರೀತಿ ಪಾತ್ರ, ಕಾಂಗ್ರೆಸ್ ನ ಗುರುತಾದ ’ಕೈ’ ಪದದಂತಿರುವ ಪದದ ಸಭ್ಯರೂಪ ದೊರಕದೆ ಅದನ್ನು ’ಫ್’ ಎಂದಿದ್ದೇನೆ. ನನ್ನ ಮಟ್ಟಿಗೆ ಈ ಎರಡೂ ಕನ್ನಡ ಪದಗಳನ್ನು ಕೇಳದವರು ಕನ್ನಡಿಗರೇ ಅಲ್ಲವೆಂದು ಭಾವಿಸಿದ್ದೇನೆ. ಏಕೆಂದರೆ ಉತ್ತರ ಕರ್ನಾಟಕದಲ್ಲಿ ಈ ಪದಗಳಿಗೆ ಬೇರೆ ಪರ್ಯಾಯ ಪದಗಳು ಬಳಕೆಯಲ್ಲಿದ್ದರೂ ಅಲ್ಲಿನ ಕನ್ನಡ ಬಂಧುಗಳು ಈ ಪದಗಳಿಗೆ ದಕ್ಷಿಣ ಕರ್ನಾಟಕದವರು ಏನೆನ್ನುತಾರೆಂದು ಕುತೂಹಲಿಗಳಾಗಿ ಅರಿತುಕೊಂಡು ತಮ್ಮ ಕನ್ನಡ ಜ್ಞಾನವನ್ನು ವಿಸ್ತರಿಸಿಕೊಂಡಿರುತ್ತಾರೆ!

ಇರಲಿ, ಮೇಲಿನೆರಡೂ ಘಟನೆಗಳನ್ನು ಸಮೀಕರಿಸಿ ನೋಡಿದಾಗ ಅವುಗಳಲ್ಲಿ ಒಂದು ಬಹುಮುಖ್ಯ ಸಾಮ್ಯತೆಯಿದೆ! ವ್ಯತ್ಯಾಸವಿದೆ!

ಮೊದಲನೇ ಘಟನೆಯಲ್ಲಿ ತನ್ನ ಬೇರುಗಳನ್ನು ಸರಿಯಾಗಿ ಗ್ರಹಿಸದೆ, ದೀಪಕ್ಕೆ ಹುಳುವು ಆಕರ್ಷಿತಗೊಂಡು ದಹಿಸಿಹೋಗುವಂತೆ, ಶ್ರೀ ಕೃಷ್ಣ ಆಲನಹಳ್ಳಿಯವರ ’ಪರಸಂಗದ ಗೆಂಡೆತಿಮ್ಮ’ ನ ಕತೆಯಲ್ಲಿನ ಗೆಂಡೆತಿಮ್ಮನ ಹೆಂಡತಿ ಘಮಲುದೆಣ್ಣೆ (ಸೆಂಟ್ / ಪರ್ಫ್ಹೂಮ್) ಪೂಸಿಕೊಂಡು, ಲಂಗ, ಬ್ರಾ ಗಳ ತೊಟ್ಟುಕೊಂಡು ತಾನು ಇತರೆ ಹಳ್ಳಿ ಹೆಂಗಸರಿಗಿಂತ ಭಿನ್ನವೆಂದು ತೋರಿಸುತ್ತ ಈ ಆಧುನಿಕತೆಯ ತಪ್ಪು ಗ್ರಹಿಕೆಯಿಂದಾಗಿ ತನಗರಿವಿಲ್ಲದಂತೆಯೇ ಅದಕ್ಕೆ ಬಲಿಯಾಗಿ ತನ್ನ ಸಂಸಾರವನ್ನೂ ಬಲಿಯಾಗಿಸಿಕೊಂಡಂತೆಯೇ ನಮ್ಮ ನವ ಯುವಕ ಮೃತ್ಯುಂಜಯನು ಬಲಿಯಾಗುವುದನ್ನು, ತನಗೆ ಆತನ ಹಿತಾಸಕ್ತಿಯಲ್ಲಿ ಯಾವುದೇ ಸಂಬಂಧವಿರದಿದ್ದರೂ ಆಧುನಿಕತೆಯ ಹರಿಕಾರ ಅಮೇರಿಕನ್ ಪ್ರಜೆಯೊಬ್ಬ ಅದನ್ನು ತಪ್ಪಿಸಿ ಸರಿದಾರಿಗೆ ತಂದರೆ, ಎರಡನೇ ಘಟನೆಯಲ್ಲಿ ಜನನಾಯಕ, ಜನೋದ್ಧಾರಕ ತನ್ನನ್ನು ನಂಬಿ ಗೆಲ್ಲಿಸಿ ಕಳುಹಿಸಿದ ಜನಗಳ ಹಿತಾಸಕ್ತಿಯನ್ನು ಆದ್ಯ ಕರ್ತವ್ಯದಂತೆ ಕಾಪಾಡಬೇಕಾದ ಧುರೀಣನೊಬ್ಬ ಹೇಗೆ ತನ್ನ ರಾಜ್ಯದ ಜನಾಸಕ್ತಿಯನ್ನು ತನ್ನ ವೈಯುಕ್ತಿಕ ಬಳಕೆಗೆ ಬಳಸಿಕೊಳ್ಳುತ್ತಿದ್ದಾನೆಂದು ತೋರಿಸುತ್ತದೆ.

ಒಟ್ಟಿನಲ್ಲಿ ವಿದೇಶೀ ಮೈಕೆಲ್ ಡಫ್ ನಮ್ಮ ಮೃತ್ಯುಂಜಯನ ಹಿತಾಸಕ್ತಿಯನ್ನು ಕಾಪಾಡಿದರೆ, ನಮ್ಮ ಅತೀ ಸ್ವದೇಶೀ ನಾಯಕ ರಾಜ್ಯವನ್ನು ತನ್ನ ಹೆಸರಿಗೆ ನಮೂದಿಸಿ ಕೊಡೆನ್ನುತ್ತಿದ್ದಾನೆ. ಈ ಪ್ರಸಕ್ತ ವಿದ್ಯಾಮಾನಗಳನ್ನು ಗಮನಿಸಿದರೆ ಕೆಲವು ಹಿರಿಯರು ಹೇಳುವಂತೆ ಬ್ರಿಟಿಷ್ ಆಳ್ವಿಕೆ ಭಾರತದಲ್ಲಿ ಇನ್ನೂ ಬಹುಕಾಲವಿರಬೇಕಿತ್ತೇನೋ?

ಪ್ರಜಾಪ್ರಭುತ್ವದ ಯಾವ ರಾಷ್ಟ್ರಗಳಲ್ಲಿಯೂ ಈ ರೀತಿ ಅತ್ಯಂತ ಕಡಿಮೆ ಸಂಖ್ಯೆಯನ್ನು ಹೊಂದಿದ ಪಕ್ಷಗಳು ಬಹುಮುಖ್ಯ ಪ್ರಧಾನಿ, ಮುಖ್ಯಮಂತ್ರಿಯಂತಹ ಹುದ್ದೆಗಳನ್ನು ಪಡೆದ ಘಟನೆಗಳಿಲ್ಲ. ಈ ಮಟ್ಟಿಗೆ ಇದು ಭಾರತದ ಪ್ರಜಾಪ್ರಭುತ್ವದ ಅಭೂತಪೂರ್ವ ಸಾಧನೆ, ಇರಾಕ್ ಒಂದನ್ನು ಹೊರತುಪಡಿಸಿ! ಏಕೆಂದರೆ ಅಲ್ಲಿಯೂ ಬಹುಪಕ್ಷಗಳ ಸರ್ಕಾರವಿದ್ದು ಮತ್ತು ನೀವದನ್ನು ಪ್ರಜಾಪ್ರಭುತ್ವದ ರಾಷ್ಟ್ರವೆಂದು ಪರಿಗಣಿಸಿದ್ದರೆ, ಅದನ್ನು ಹೊರತುಪಡಿಸಬೇಕಾಗುತ್ತದೆ.

ಈ ತಲೆಹಿಡುಕ ಸಂತತಿಯ ನಾಯಕರು ಮತ್ತೆ ಮುಂದಿನ ಚುನಾವಣೆಗಳಲ್ಲಿ ಮತ ಯಾಚಿಸುತ್ತ ಬಂದಾಗ ಮತದಾರರು ಏನು ಮಾಡಬೇಕೆಂದು ಯೋಚಿಸಿದಾಗ ನನಗೆ ಹೊಳೆದಿದ್ದು ಇಷ್ಟು... ಅತ್ಯಂತ ಬುದ್ಧಿವಂತ ಮತದಾರರೆಂದು ಖ್ಯಾತಿಗೊಂಡಿದ್ದ ಕನ್ನಡಿಗರಿಗೆ ’ಪಡುವಾರಹಳ್ಳಿ ಪಾಂಡವರು’ ಚಿತ್ರದ ಕ್ಲೈಮಾಕ್ಸ್ ದೃಶ್ಯದಲ್ಲಿ ಹುಚ್ಚಿಯೊಬ್ಬಳನ್ನು ’ಇಂತಹ ನಾಯಕರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು?" ಎಂದು ಕೇಳಿದಾಗ, ಅವಳು "ಇಂತವ್ರು ಬರ್‍ತಲೇ ಇರ್‍ತಾರೆ, ನೀವು ಅವ್ರನ್ನ ಓಡುಸ್ತಲೇ ಇರ್ಬೇಕು. ಇಂತವ್ರು ಬರ್‍ತಲೇ ಇರ್‍ತಾರೆ, ನೀವು ಓಡುಸ್ತಲೇ ಇರ್ಬೇಕು" ಎನ್ನುವ ಸಲಹೆ ಅತ್ಯಂತ ಅನಿವಾರ್ಯವಾಗಿದೆಯೇನೋ ಅನ್ನಿಸಿತು!

ಆದರೂ ಇಂದಿನ ನವೀನ ತಂತ್ರಜ್ಜಾನದ ಬೌದ್ಧಿಕ ಉನ್ನತಿಯ ಬುದ್ಧಿವಂತ ಜನರಿಗೆ ಹಳೇ ಸಿನಿಮಾದ ಹಳ್ಳಿಯ ಅನಕ್ಷರಸ್ಥ, ಮತಿಭ್ರಮಣೆಗೊಂಡ, ಹುಚ್ಚಿಯೊಬ್ಬಳ ಸಲಹೆ ಅನ್ವಯವಾಗುತ್ತಿರುವುದು ವಿಪರ್ಯಾಸವೇ ಸರಿ.

ಆಣಕ:

ಯಥಾಪ್ರಕಾರ ಈ ವಾರದ ಆಣಕವನ್ನು ದೇವೇಗೌಡ ಮಂಡಳಿ ನೈಜವಾಗಿ ಅಭಿನಯಿಸುತ್ತ ನಿತ್ಯವೂ ನವ್ಯ ಪ್ರಯೋಗಗಳನ್ನು ಪ್ರಯೋಗಿಸುತ್ತ ತಮ್ಮ ಎಲ್ಲಾ ರಸಗಳನ್ನು ಹೊಮ್ಮಿಸುತ್ತಿದೆ! ಆದನ್ನು ನೋಡಿ ಆನಂದಿಸಿ.

ವಿಶೇಷ ಸೂಚನೆ: ಈ ರಸಗಳು ನೋಡಲು ಮಾತ್ರ ದಯವಿಟ್ಟು ಆ ರಸಗಳನ್ನು ’ಅಮೃತ’ವೆಂದು ಸೇವಿಸಲು ಹೋಗಬೇಡಿ!

ದಾವಣಗೆರೆಯ ಹಂದಿಗಳು ಮತ್ತದರ ಆಕಾಶದಲ್ಲಿನ ಗಿಳಿಗಳು

ಈ ಶೀರ್ಷಿಕೆ ನೋಡಿ ಈ ಲೇಖನ ದಾವಣಗೆರೆಯ ರಾಜಕಾರಣಿಗಳನ್ನು ಹಂದಿಗಳಾಗಿಯೂ ಅಲ್ಲಿನ ಕನ್ಯೆಯರನ್ನು ಗಿಳಿಗಳಾಗಿಯೂ ಊಹಿಸಿಕೊಂಡು ನೀವು ಏನೇನೋ ಕಲ್ಪಿಸಿಕೊಂಡಿದ್ದರೆ ಕ್ಷಮಿಸಿ. ಅಲ್ಲಿನ ವರ್ತಕರು, ರಾಜಕಾರಣಿಗಳು ವರಾಹಾವತಾರವನ್ನು ಎತ್ತಿದ್ದರೂ ಇದು ಅವರನ್ನು ಕುರಿತಾಗಲೀ ಅಥವ ಯುವಕರು ಮಾತನಾಡಿಸಿದರೆ ಮಕ್ಕಳಾಗುತ್ತವೆಂಬ ಮಹಾ ಕಲ್ಪನೆಯ ಅಲ್ಲಿನ ಕನ್ಯಾಮಣಿಗಳನ್ನು ಕುರಿತಾಗಿಯೂ ಅಲ್ಲವೀ ಲೇಖನ.

ಮಧ್ಯ ಕರ್ನಾಟಕದ ವಿಶಿಷ್ಟ ಪಟ್ಟಣವಾದ ದಾವಣಗೆರೆ ಎಂದರೆ ಬಹುಜನರಿಗೆ ಅಲ್ಲಿನ ಮಂಡಕ್ಕಿ, ಮೆಣಸಿನಕಾಯಿ ಭಜ್ಜಿಯೋ, ಬೆಣ್ಣೆದೋಸೆಯೋ ನೆನಪಾಗಬಹುದು. ಅಥವಾ ಗಂಭೀರವಾಗಿ ಯೋಚಿಸುವವರಿಗೆ ಅಲ್ಲಿನ ಹತ್ತಿ ಮಿಲ್ಲುಗಳ ಆರ್ಥಿಕ ಉನ್ನತಿ, ಅವನತಿಗಳೂ ಮತ್ತದರ ಜೊತೆ ಜೊತೆಗೆ ಬೆಳೆದು ಕುಸಿದ ಕಮ್ಯುನಿಸ್ಟ್ ಪಕ್ಷವೂ ಮತ್ತದರ ಕಾಮ್ರೇಡ್ ಪಡೆಯೂ ನೆನಪಾಗಬಹುದು. ಇಲ್ಲಾ, ಅಲ್ಲಿನ ವರ್ತಕರ ವಹಿವಾಟು, ದಲಾಲರು, ಹಮಾಲರು, ಕುಬೇರರು ಮತ್ತಲ್ಲಿನ ವಿದ್ಯಾಸಂಸ್ಥೆಗಳೋ ನೆನಪಾಗಬಹುದು.

ದವಸ ಧಾನ್ಯಗಳ ವಹಿವಾಟುಗಳ ಭರಾಟೆಯ ದೆಸೆಯಿಂದ ಲೋಡುಗಟ್ಟಲೆ ಅಕ್ಕಿ,ಬೇಳೆಕಾಳುಗಳು ಅಲ್ಲಿನ ವರ್ತಕರ ಅಂಗಡಿಗಳಿಗೆ ಸರಬರಾಜಾಗಿಯೋ ಅಥವ ಆ ಅಂಗಡಿಗಳಿಂದ ಬೇರೆಡೆ ಸರಬರಾಜಾಗುತ್ತಲೋ ಒಟ್ಟಿನಲ್ಲಿ ಆ ನಗರ ಧೂಳುಮಯವಾಗಿ ಅಲ್ಲಲ್ಲಿ ಚೆಲ್ಲಿದ ಕಾಳುಕಡಿಗಳು ಆಹಾರದ ಮೂಲವಾಗಿ ಅದು ಹಂದಿಗಳಿಗೆ ಆಶ್ರಯತಾಣವಾಗಿದೆ. ದಾವಣಗೆರೆಯ ಉದ್ದಗಲ ಎತ್ತಲಾದರೂ ಹೋಗಿ, ನಿಮಗೆ ಅಲ್ಲಿನ ಗಣನೀಯ ಸಂಖ್ಯೆಯ ಹಂದಿಗಳು ನಿಮ್ಮ ಗಮನವನ್ನು ಸೆಳೆಯದಿದ್ದರೆ ಕೇಳಿ. ಈ ಹಂದಿಗಳನ್ನು ಅವುಗಳ ಮಾಲೀಕರು ದಾವಣಗೆರೆ ತುಂಬಾ ಗಸ್ತು ತಿರುಗಲು ಬಿಟ್ಟು, ನಗರದ ಮಲಮೂತ್ರ ಶುಚೀಕರಣಕ್ಕೆ ಉಚಿತ ಸೇವೆ ಸಲ್ಲಿಸುವ ಕೈಂಕರ್ಯವನ್ನು ಮನಗಂಡೇ ಇಲ್ಲಿನ ಪುರಪಿತೃಗಳು ಈ ಹಂದಿಗಳನ್ನು ತಮ್ಮ ಸಹೋದ್ಯೋಗೀ ಮಿತ್ರರೆಂದು ಭಾವಿಸಿ ಗೌರವಿಸುತ್ತಿದ್ದಾರೆಂದೇ ನನ್ನ ಭಾವನೆ. ಈ ದಾವಣಗೆರೆ ಹಂದಿಗಳು ಎಷ್ಟೊಂದು ಕಾರ್ಯಶೀಲವೆಂದರೆ ಬಯಲು ಬಹಿರ್ದೆಶೆಗೆ ಕುಳಿತ ಜನಸಾಮಾನ್ಯರಿಗೆ ಅವರವರ ಶಕ್ತಿಗನುಗುಣವಾಗಿ ಟೈಮರ್ ಸೆಟ್ ಮಾಡಿ, ಅವರ ಕಾಲ ಮೀರುತ್ತಿದ್ದಂತೆಯೆ ಅವರನ್ನು ತಮ್ಮ ಮೂತಿಯಿಂದ ತಿವಿದು ನೂಕಿ ಶುಚೀಕರಣಕ್ಕೆ ಮೊದಲ್ಗೊಳ್ಳುತ್ತವೆ.

ಹೀಗೆ ಕೊಬ್ಬಿದ ಈ ಹಂದಿಗಳನ್ನು ಅವುಗಳ ಮಾಲೀಕರು ಆಗಾಗ್ಗೆ ಹಿಡಿದು ತೂಕ ಹಾಕಿ ಹಾಸನ, ಮೈಸೂರಿಗೆ ಸರಬರಾಜು ಮಾಡುತ್ತಾರೆ. ನಿತ್ಯವೂ ಅಲ್ಲಿನ ರೈಲ್ವೆ ಸ್ಟೇಷನ್ನಿನಿಂದ ಕನಿಷ್ಟ ಐವತ್ತು ಹಂದಿಗಳು ಹಾಸನದೆಡೆಗೆ ಸಾಗಿ ’ಪಿಗ್ ಮಟನ್’ ಆಗಿಯೂ ಮುಂದೆ ಮೈಸೂರನ್ನೂ ಸೇರಿ ’ಚಿಲ್ಲಿ ಪೋರ್ಕ್’ ಆಗಿಯೂ ಅಲ್ಲಿನ ಹೋಟೇಲುಗಳ ತಟ್ಟೆಗಳ ಮೇಲೆ ಕಂಗೊಳಿಸುತ್ತವೆ. ಆಗಾಗ್ಗೆ ದಾವಣಗೆರೆಯಿಂದ ಹಾಸನದೆಡೆಗೆ ರೈಲಿನಲ್ಲಿ ಸಾಗುತ್ತಿದ್ದ ನನ್ನೊಂದಿಗೆ ಈ ಹಂದಿಗಳೂ ಬಹಳ ಸಾರಿ ಆ ದಾರಿಯಲ್ಲಿ ಸಾಗಿವೆ. ಬಹುಶಃ, ದಾವಣಗೆರೆಯ ಪ್ರಮುಖ ಜನಾಂಗವು ಹಂದಿಯನ್ನು ತಿನ್ನದೇ ಇರುವುದೂ ಅವುಗಳ ಸಂಖ್ಯೆಗೆ ಒಂದು ಕಾರಣವಿರಬಹುದು ಅಥವಾ ಅಲ್ಲಿನ ಮಾಂಸಹಾರಿಗಳು ಹಂದಿ ತಿನ್ನುವ ಹಂಬಲವಿದ್ದರೂ "ದಾವಣಗೆರೆಯ ಹಂದಿ"ಗಳ ಪ್ರಮುಖ ಆಹಾರ ಪದ್ಧತಿಯನ್ನು ಗಮನದಲ್ಲಿಟ್ಟುಕೊಂಡು ಅವುಗಳನ್ನು ವರ್ಜಿಸಿರಬಹುದು!

ಆದರೆ ಈ ಎಲ್ಲ ಸಾಮಾನ್ಯ ಸಂಗತಿಗಳನ್ನೂ ಮೀರಿ ಪರಿಸರಕ್ಕೆ ಸಂಬಂಧಿಸಿದ ಕೌತುಕವೊಂದು ಅಲ್ಲಿದೆಯೆಂದರೆ ನಿಮಗೆ ಆಶ್ಚರ್ಯವಾಗಬಹುದು!

ದಟ್ಟ ಅರಣ್ಯ ಪ್ರದೇಶವಲ್ಲದ, ಕುರುಚಲು ಕಾಡುಗಳೂ ಇಲ್ಲದ, ಭಾರೀ ಬಂಡೆಗಲ್ಲುಗಳ ಬೆಟ್ಟಗುಡ್ಡಗಳಿಲ್ಲದ ಸಮತಟ್ಟಾದ ಈ ನಗರದ ಮಧ್ಯಭಾಗದಲ್ಲಿ ಸಹಸ್ರಾರು ಹಸಿರು ಗಿಳಿಗಳು ಶತಮಾನದಿಂದಲೂ ವಾಸಿಸುತ್ತಿವೆ. ಹಾಗೆಂದ ಮಾತ್ರಕ್ಕೆ ಆ ಗಿಳಿಗಳೆಲ್ಲ ಇಲ್ಲಿನ ದವಸಧಾನ್ಯದ ವಹಿವಾಟಿನ ಭರದಲ್ಲಿ ಚೆಲ್ಲುವ ಕಾಳುಗಳನ್ನು ಹಂದಿಗಳೊಂದಿಗೆ ಹಂಚಿಕೊಂಡಾಗಲಿ, ನೆಚ್ಚಿಕೊಂಡಾಗಲಿ ಇಲ್ಲಿ ನೆಲೆಸಿಲ್ಲ. ’ಕಾಯಕವೇ ಕೈಲಾಸ’ವೆಂದು ನಂಬಿರುವ ಈ ಕರ್ಮಜೀವೀ ಗಿಳಿಗಳು ತಮ್ಮದೇ ಆದ ಕರಾರುವಕ್ಕಾದ ಟೈಂ ಟೇಬಲ್ ಹಾಕಿಕೊಂಡಿವೆ. ನಿತ್ಯವೂ ಬೆಳಗಿನ ಮುಂಜಾನೆ ತಮ್ಮ ತಮ್ಮ ನೆಲೆಯಿಂದ ಉತ್ತರ ದಿಕ್ಕಿಗೆ ಹಾರುತ್ತ ದೂರದ ಹೊಲಗದ್ದೆಗಳೆಡೆಯೋ, ಅಡವಿಯನ್ನೋ ಹುಡುಕಿಕೊಂಡು ಆಹಾರ ಬೇಟೆಗೆ ಹೊರ್‍ಅಡುತ್ತವೆ. ನಿತ್ಯವೂ ತಂಡ ತಂಡಗಳಲ್ಲಿ ಹಾರುವ ಆ ಗಿಳಿಗಳು ಪರೇಡಿನಲ್ಲಿ ಸಾಗುವ ಸ್ತಬ್ಧಚಿತ್ರಗಳಂತೆ ಸರಮಾಲೆಯಾಗಿ ಸಾಗುತ್ತಲೇ ಇರುತ್ತವೆ. ಸುಮಾರು ಬೆಳಗಿನ ಐದೂವರೆಯಿಂದ ಶುರುವಾಗಿ ಏಳರವರೆಗೆ ಹಳೇ ದಾವಣಗೆರೆಯ ಆಕಾಶದಲ್ಲಿ ಹಸಿರು ಗಿಳಿಗಳ ನಿತ್ಯ ಮೆರವಣಿಗೆ. ಮತ್ತದೇ ದೃಶ್ಯ ಸಂಜೆ ಸೂರ್ಯಾಸ್ತದ ಮೊದಲೆರಡು ಗಂಟೆಯಿಂದ ಸೂರ್ಯ ಮುಳುಗುವವರೆಗೆ. ಚಳಿಯಾಗಲಿ, ಮಳೆಯಾಗಲಿ ಅಥವ ಸುಡುಬಿಸಿಲಿರಲಿ, ಈ ಮೆರವಣಿಗೆಯಲ್ಲಿ ಯಾವುದೇ ವ್ಯತ್ಯಾಸವಿರುತ್ತಿರಲಿಲ್ಲ.

ದಾವಣಗೆರೆಯ ಅಸಂಖ್ಯಾತ ಘಟನೆಗಳಿಗೆ ಸಾಕ್ಷಿಯಾಗಿರುವ ಈ ಗಿಳಿಗಳು ಅಲ್ಲಿನ ನಗರಸಭೆ ಕಟ್ಟಡ, ಕೋರ್ಟ್, ಪೊಲೀಸ್ ಠಾಣೆ ಆವರಣ, ಪ್ರವಾಸಿ ಮಂದಿರ ಮತ್ತು ಸುತ್ತಮುತ್ತಲ ರಸ್ತೆಗಳ ಇಕ್ಕೆಲಗಳಲ್ಲಿರುವ ಮರಗಳ ಮೇಲೆ ತಮ್ಮದೇ ಆದ ನಗರವನ್ನು ನಿರ್ಮಿಸಿಕೊಂಡಿವೆ. ದಾವಣಗೆರೆಯಂತಹ ಪಕ್ಕಾ ವ್ಯಾಪಾರೀ ನಗರದಲ್ಲಿ, ನವಿರೇಳುವಂತಹ ಭಾವನೆಗಳನ್ನು ಮೂಡಿಸುವಂತಹ ಸಂಗತಿಯೋ ಆಕರ್ಷಣೆಯೋ ಎಂದರೆ ನನಗೆ ಕಾಣುವುದು ಈ ಗಿಳಿಪಟ್ಟಣವೊಂದೇ. ಬೇಕಿದ್ದರೆ ಒಮ್ಮೆ ಸುಮ್ಮನೆ ಅಲ್ಲಿ ಸುತ್ತಿ ಬನ್ನಿ. ಆ ಗಿಳಿಗಳ ಕಲರವ ಕೇಳಿಸಿಕೊಂಡರೆ ಸಾಕು ನಿಮಗರಿವಾಗುತ್ತದೆ ಆ ಮರಗಳ ಮೇಲೇನಾಗುತ್ತಿದೆಯೆಂದು. ಇತ್ತೀಚೆಗೆ ನಾನು ಅಲ್ಲಿಗೆ ಹೋದಾಗ ಅಲ್ಲಿನ ಜನಪಟ್ಟಣ ಉನ್ನತಿಗೇರಿದಂತೆ ಈ ಗಿಳಿಪಟ್ಟಣ ಅವನತಿಯ ಅಂಚಿನಲ್ಲಿ ಬಂದು ನಿಂತಿರುವುದನ್ನು ಕಂಡೆ. ರಸ್ತೆ ಅಗಲೀಕರಣಕ್ಕೋ, ಆ ಮರಗಳು ಮುದಿಯಾಗಿ ಸಾಯುತ್ತಿರುವುದರಿಂದಲೋ ಒಟ್ಟಿನಲ್ಲಿ ದಾವಣಗೆರೆ ನಗರಸಭೆಯಾಗಿ, ಜಿಲ್ಲೆಯಾಗಿ, ಮಹಾಪಾಲಿಕೆಯಾಗಿ ಉನ್ನತಿ ಹೊಂದುತ್ತಾ ಸಾಗಿದಂತೆ, ಈ ಗಿಳಿಗಳು ಆಹಾರಕ್ಕೆ ನಂಬಿಕೊಂಡಿದ್ದ ತಾಣಗಳು, ಹೊಲಗಳೂ ’ಆಶ್ರಯ ಯೋಜನೆ’ ಯ ಮನೆಗಳಾಗಿ ಈ ಗಿಳಿಗಳ ಆಶ್ರಯಕ್ಕೆ ಕುತ್ತು ತಂದು ಇವುಗಳನ್ನು ಅವನತಿಯ ಅಂಚಿಗೆ ತಂದಿವೆ. ನಿತ್ಯವೂ ಉತ್ತರ ದಿಕ್ಕಿಗೆ ಹಾರಿ ಮತ್ತೆ ಸಂಜೆ ದಕ್ಷಿಣ ದಿಕ್ಕಿಗೆ ಮುಖ ಮಾಡುತ್ತಿದ್ದ ಈ ಗಿಳಿಗಳು ಇಂದು ತಮ್ಮ ಜೀವಸೆಲೆಯನ್ನು ಕಳೆದುಕೊಂಡು ದಿಕ್ಕು ತಪ್ಪಿ ಎತ್ತೆತ್ತಲೋ ಹಾರುತ್ತಿವೆ! ಈ ಗಿಳಿಗಳ ತಪ್ಪಿದ ಪಥಚಲನೆ ಮನುಕುಲದ ಪ್ರಗತಿ ಪಥದ ತುಲನೆಯೇನೋ ಅನ್ನಿಸುತ್ತಿದೆ.

ಇದು ಕೇವಲ ದಾವಣಗೆರೆ ನಗರದ ಕಥೆಯಾಗಿರದೇ ಭಾರತದ ಪ್ರತಿಯೊಂದು ಉದಯೋನ್ಮುಖ ನಗರಗಳಲ್ಲಿಯೂ ಈ ರೀತಿಯ ಹಲವಾರು ಜೀವಸಂಕುಲಗಳು ನಾಶವಾಗುತ್ತಿರುವುದರ ಭೀಕರ ಕಥಾನಕವೇ ಆಗಿದೆ. ಇದು ಹಾಸನ, ಮೈಸೂರು ಭಾಗದಲ್ಲಿ ವರ್ಷಕ್ಕೊಮ್ಮೆ ಕಾಣಬರುತ್ತಿದ್ದ ಕಂಬಳಿಹುಳುಗಳದ್ದಾಗಿರಬಹುದು, ರ್‍ಆಣಿಬೆನ್ನೂರಿನ ಕೃಷ್ಣಮೃಗಗಳದ್ದಾಗಿರಬಹುದು, ಬಯಲುಸೀಮೆಯ ಬೆಳವ, ಬ್ಯಾಡಗಿ / ಕೊಪ್ಪಳಗಳ ನವಿಲುಗಳದ್ದಾಗಿರಬಹುದು, ಆಥವಾ ನಿಮ್ಮೂರು ಹಳ್ಳಿಗಳಲ್ಲಿ ಯಥೇಚ್ಚವಾಗಿ ಕಾಣುತ್ತಿದ್ದ ಗುಬ್ಬಿ ಕಾಗೆಗಳಿರಬಹುದು. ಮಾನವ ಪ್ರಗತಿಪಥದತ್ತ ಸಾಗುವ ದೆಸೆಯಲ್ಲಿ ತನ್ನಂತೆಯೇ ಈ ಭೂಮಂಡಲದಲ್ಲಿ ವಾಸಿಸುವ ಇತರೆ ಜೀವಸಂಕುಲಗಳನ್ನು ವಿನಾಶದ ಅಂಚಿಗೆ ತಳ್ಳಿರುವುದನ್ನು ಮುಂಬರುವ ಜನಾಂಗ ಹೇಗೆ ಸ್ವೀಕರಿಸುವುದೋ ನಾನರಿಯೆ.

ಈ ಗಿಳಿಗಳ ಹಾರಾಟದಿಂದ ಹೊರಪ್ರಪಂಚದ ಜೀವಜಾಲದ ಪರಿಚಯವನ್ನು ಮಾಡಿಕೊಳ್ಳುತ್ತ ಬೆಳೆದ ನಾನು, ಪರಿಸರದ ಬಗ್ಗೆ ಕುತೂಹಲ ಮೂಡಿಸಿಕೊಂಡು ಕಾಲೇಜು ದಿನಗಳಲ್ಲಿ ಪಶ್ಚಿಮಘಟ್ಟಗಳಲ್ಲಿ ಸುತ್ತಿ, ಅಮೇರಿಕೆಗೆ ಬಂದು ನೆಲೆಸಿದ ನಂತರ ಅಮೆಜಾನ್ ಕೊಳ್ಳ ಸುತ್ತಿದರೂ ತೀರದ ಈ ಪರಿಸರದ ಕುತೂಹಲ ನನ್ನಲ್ಲಿ ಇನ್ನೂ ಹೆಚ್ಚಾಗುತ್ತಲೇ ಇದೆ. ಈ ಗಿಳಿಗಳಿಲ್ಲದ ದಾವಣಗೆರೆ, ಗುಬ್ಬಿ / ಕಾಗೆಗಳಿಲ್ಲದ ಊರುಕೇರಿಗಳು ಸ್ಮಶಾನಸದೃಶವಾಗಿ ಮುಂದಿನ ಜನಾಂಗಕ್ಕೆ ಹೇಗೆ ಸ್ಪೂರ್ತಿದಾಯಕವಾಗಿರುತ್ತವೋ?

ದಾವಣಗೆರೆಯ ಜನನಾಯಕರು, ಅಧಿಕಾರಿಗಳು, ವರ್ತಕರು, ಮಾಜಿ ಕಾಮ್ರೇಡುಗಳು, ಮಹಾಜನತೆಯೂ ಈ ಗಿಳಿಗಳ ಅಸ್ತಿತ್ವದ ಪರಿವೆಯೇ ಇಲ್ಲದೆ ತಮ್ಮೂರಿನ ಮಂಡಕ್ಕಿ ಮೆಣಸಿನಕಾಯಿ ಭಜ್ಜಿಗಳನ್ನು ಮೆಲ್ಲುತ್ತ, ಅರ್ಧ ’ಚ್ಚಾ’ (ಚಹಾ) ಹೀರಿ, ಯಾವ ಎಗ್ಗಿಲ್ಲದೇ ಸಶಬ್ದವಾಗಿ ಢರ್ರನೇ ಹೂಸಿಸುವುದರಲ್ಲೇ ಸ್ವರ್ಗ ಸುಖ ಕಾಣುತ್ತ, ಅಭಿವೃದ್ದಿಯ ಪಥದತ್ತ ಕಿಂಕರ್ತವ್ಯಮೂಢರಾಗಿ ಸಾಗುತ್ತಿರುವ ಪರಿಯನ್ನು ನೋಡಿದರೆ, ಆ ನಗರದ ಪ್ರಮುಖ ಜೀವಸಂಕುಲವೊಂದು ಮುಂದಿನ ಕಾಲಮಾನಗಳಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಮನುಕುಲದ ನೆಲೆಯ ಭದ್ರ(?) ಬುನಾದಿಗೆ ಬಲಿಯಾಗಿ, ಅದರ ತ್ಯಾಗದ ಕತೆ ಈ ನಗರದ ಇತಿಹಾಸದ ಪುಟಗಳನ್ನೂ ಸೇರದೆ ಕಣ್ಮರೆಯಾಗುವುದೇನೋ!

ಅಣಕ:

ಬೆಂಗಳೂರಿನ ’ಏನು ಗುರು’, ’ಏನ್ಲಾ ಮಗಾ’, ’ಮಚ್ಚಾ’ ಪದಗಳಂತೆ, ಶಿವಮೊಗ್ಗೆಯ ’ಲೋ’ ಪದದಂತೆ, ಹಾಸನದವರ ’ಏನ್ಲಾ’ ಎಂದಂತೆ ದಾವಣಗೆರೆ ಜನ ಏನೆಂದು ತಮ್ಮ ಸಂಭಾಷಣೆಯನ್ನು ಆರಂಭಿಸುತ್ತಾರೆ, ಗೊತ್ತೆ?

ಆಪ್ತಮಿತ್ರನಾಗಿರಲೀ ಅಥವ ಬದ್ಧಶತ್ರುವಾಗಿರಲೀ ಯಾವುದೇ ಭೇಧದಂಡವನ್ನು ಅನುಸರಿಸದೆ ಎಲ್ಲರನ್ನೂ ಸಮಾನ ದೃಷ್ಟಿಯಿಂದ ’ಬಾರ್ಲೇ ಮಿಂಡ್ರಿಗುಟ್ಟಿದವನೇ’ ಎಂದೇ ಸಂಭೋಧಿಸುತ್ತಾರೆ.

ಅಪ್ಪ, ಮಗ, ಆಪ್ತರು, ಬಂಧು, ಮಿತ್ರರು, ಶತ್ರುಗಳನ್ನೆಲ್ಲಾ ಹೀಗೆಯೇ ಸಂಭೋಧಿಸುವುದರ ರಹಸ್ಯವನ್ನು ಭೇಧಿಸೋಣವೆಂದರೆ ಇಲ್ಲಿನ ಹುಡುಗಿಯರು ಹುಡುಗರು ಮಾತನಾಡಿಸಿದರೇ ಮುಟ್ಟು ನಿಲ್ಲುತ್ತದೆಂದು ಮುಗುಮ್ಮಾಗಿ, ಹುಡುಗರೆಡೆ ಕಣ್ಣೆತ್ತಿಯೂ ನೋಡದೆ ಅತ್ಯಂತ ಮಡಿವಂತಿಕೆಯಿಂದ ಇರುತ್ತಾರೆ. ಅಷ್ಟೊಂದು ಮಡಿವಂತಿಕೆಯ, ಪಾತಿವೃತ್ಯದ ಧರ್ಮಬೀರುಗಳ ನಗರವಾದ ಇಲ್ಲಿ ಅದು ಹೇಗೆ ಎಲ್ಲರೂ ಈ ರೀತಿ ಸಂಭೋಧಿಸುವಂತಾಯಿತೋ?

ಹೊಮ್ಮುತ್ತಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತ

ಕಳೆದ ವಾರ ನನಗೊಂದು ’ಎಮರ್ಜಿಂಗ್ ಇಕಾನಮೀಸ್’ ಎಂಬ ವಿಷಯವಾಗಿ ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳುವಂತೆ ನನ್ನ ಕಂಪೆನಿ ಕಳುಹಿಸಿಕೊಟ್ಟಿತ್ತು. ಸಾಮಾನ್ಯವಾಗಿ ಶಿಕಾಗೋ ಅಥವಾ ನ್ಯೂಯಾರ್ಕ್ ನಗರಗಳಲ್ಲಿ ಹೆಚ್ಚಾಗಿ ಆಯೋಜಿತಗೊಳ್ಳುತ್ತಿದ್ದ ಆರ್ಥಿಕ ಗೋಷ್ಠಿ, ಸಮಾವೇಶಗಳಿಗಿಂತ ಈ ಬಾರಿ ’ಫಾರ್ ಎ ಚೇಂಜ್’ ಎಂಬಂತೆ ಜಗಮಗಿಸುವ ಲಾಸ್ ವೇಗಸ್ ನಲ್ಲಿ ಈ ಸಮಾವೇಶ ಆಯೋಜಿತಗೊಂಡಿತ್ತು. ನನ್ನ ಸಹೋದ್ಯೋಗಿ ಮಿತ್ರ ಫ್ರ್ಯಾಂಕ್ ನನ್ನು ವೇಗಸ್ ನ ಏರ್ ಪೋರ್ಟ್ ನಲ್ಲಿ ಕಲೆತು ಬಾಡಿಗೆ ಕಾರು ಪಡೆದುಕೊಂಡು ನಾವಿಳಿದುಕೊಳ್ಳಬೇಕಿದ್ದ ಹೋಟೆಲ್ ನೆಡೆಗೆ ಲಾಸ್ ವೇಗಸ್ ನ ಪ್ರಮುಖ ಸ್ಟ್ರಿಪ್ ಮೂಲಕ ಹಾದು ನಾನು ಮತ್ತು ಫ್ರ್ಯಾಂಕ್ ಹೋಗುತ್ತಿದ್ದೆವು.

ಅದಾಗಲೇ ಸಂಜೆ ಆರರ ಸಮಯವಾಗಿ ಲಾಸ್ ವೇಗಸ್ ಎಂದಿನಂತೆ ಜಗಮಗಿಸುತ್ತ ಸಂಪೂರ್ಣ ಜಾತ್ರೆಯ ಕಳೆ ತುಂಬಿಕೊಂಡು ಜನಜಂಗುಳಿಯಿಂದ ತುಂಬಿತುಳುಕುತ್ತಿತ್ತು. ಹಾಗೆಯೇ ಪ್ರಮುಖ ಲಾಸ್ ವೇಗಸ್ ಸ್ಟ್ರಿಪ್ ನ ಟ್ರ್ಯಾಫಿಕ್ ಕೂಡ. ಸರಿ, ಹಾಗೆಯೇ ತೆವಳುತ್ತ ಸಾಗುತ್ತಿದ್ದ ಟ್ರಾಫಿಕ್ಕಿನಲ್ಲಿ ಇತರೆ ಕಾರುಗಳೆಡೆ ಕಣ್ಣಾಡಿಸುತ್ತ ಅಲ್ಲಿರಬೇಕಾದ ಎರಡು ಸಂಜೆಗಳಲ್ಲಿ ಏನೇನು ಮಾಡಬೇಕೆಂದು ಚರ್ಚಿಸುತ್ತ ಸಾಗುತ್ತಿದ್ದ ನಮಗೆ ಪಕ್ಕದಲ್ಲಿಯೇ ಸಾಗಿ ಬಂದ ಕನ್ವರ್ಟಿಬಲ್ ಫೋರ್ಡ್ ಮಸ್ಟ್ಯಾಂಗ್ ಕಾರಿನಲ್ಲಿದ್ದ ನಾಲ್ಕು ಲಲನೆಯರು ನಮ್ಮೆಡೆಗೆ ಮುಗುಳ್ನಗೆ ಹಾಯಿಸಿದರು. ಆ ಟ್ರಾಫಿಕ್ ನಲ್ಲಿ ಬೇಯುತ್ತಿದ್ದ ನಮಗೆ ಆ ಹರೆಯದ ಹೆಣ್ಣುಗಳ ಮುಗುಳ್ನಗೆ ತಂಗಾಳಿಯಂತೆ ಬೀಸಿತು. ಈ ಹುಡುಗಿಯರ ವಿಷಯದಲ್ಲಿ ಪರಿಣಿತನಾಗಿದ್ದ ನನ್ನ ಗೆಳೆಯ ಫ್ರ್ಯಾಂಕ್ ಅವರೊಂದಿಗೆ ಹರಟತೊಡಗಿದ. ಆಗಷ್ಟೇ ಇಪ್ಪತ್ತೊಂದಕ್ಕೆ ಕಾಲಿಟ್ಟು ಮದ್ಯಪಾನ / ಧೂಮಪಾನ ಮಾಡಲು ಲೈಸೆನ್ಸ್ ಗಿಟ್ಟಿಸಿಕೊಂಡಿದ್ದ ಆ ಕನ್ಯೆಯರು ಅದನ್ನು ಆಚರಿಸಿಕೊಳ್ಳಲು ಲಾಸ್ ವೇಗಸ್ ಗೆ ಬಂದಿದ್ದರು. ಆಗಷ್ಟೇ ದೊರಕಿದ ಸ್ವಾತಂತ್ರ್ಯದ ಉನ್ಮಾದದಲ್ಲಿದ್ದ ಆ ತರುಣಿಯರು ಅದನ್ನಾಚರಿಸಿಕೊಳ್ಳುವ ವಿಶಿಷ್ಟ ವಿಧಗಳ ಬಗೆಗೆ ಫ್ರ್ಯಾಂಕ್ ನ ಸಲಹೆ ಕೇಳಿದಾಗ, ನನ್ನ ಗೆಳೆಯನು ಅವರಿಗೆ "ಈ ದರಿದ್ರ ಟ್ರಾಫಿಕ್ಕಿನಲ್ಲಿ ನೀವು ಎಲ್ಲರಿಗೂ ಮನರಂಜನೆಯನ್ನು ಒದಗಿಸುತ್ತ ಆಚರಿಸಿಕೊಳ್ಳುವ ಬಗೆಯೆಂದರೆ ಅತ್ತಿತ್ತ ಇರುವ ಕಾರಿನ ಚಾಲಕರಿಗೆ ’ಇಪ್ಪತ್ತು ಡಾಲರ್ ಕೊಟ್ಟರೆ ತೆರೆದೆದೆಯ ಸುಂದರಿಯರಾಗಿ ಎದೆ ಕುಣಿಸುತ್ತೇವೆ’ ಎನ್ನಿರಿ. ಅದು ನಿಮಗೆ ದೊರೆತ ಸ್ವಾತಂತ್ರ್ಯದ ಸಂಕೇತವೂ ಆಚರಣೆಯೂ ಆಗಿ, ಈ ಸಂಜೆಯ ಪಾರ್ಟಿಗೆ ಹಣ ಮತ್ತು ಟ್ರಾಫಿಕ್ ನಲ್ಲಿ ಸಿಕ್ಕಿರುವ ಎಲ್ಲರಿಗೂ ಕೊಂಚ ಮನರಂಜನೆ" ಎನ್ನುತ್ತ ಇಪ್ಪತ್ತು ಡಾಲರ್ ನ ನೋಟನ್ನು ಅವರೆಡೆಗೆ ಚಾಚಿದ. ಕೂಡಲೇ ಆ ಯುವತಿಯರು ’ಗ್ರೇಟ್ ಐಡಿಯಾ’ ಎನ್ನುತ್ತ ಫ್ರ್ಯಾಂಕ್ ಚಾಚಿದ ಇಪ್ಪತ್ತರ ನೋಟನ್ನು ತೆಗೆದುಕೊಂಡು ತೆರೆದ ಕಾರಿನಲ್ಲಿ ಎದ್ದು ನಿಂತು ಬಿಚ್ಚೆದೆಯ ಸುಂದರಿಯರಾಗಿ ತಮ್ಮ ಕೆಚ್ಚೆದೆಯನ್ನು ಕುಲುಕಿಸಿದರು. ಹಾಗೆಯೇ ಮುಂದೆ ಸಾಗುತ್ತ ಇತರೆ ಕಾರುಗಳ ಚಾಲಕರಿಂದ ಇಪ್ಪತ್ತು ಡಾಲರ್ ಪಡೆದು ತಮ್ಮ ಎದೆ ಕುಣಿಸುತ್ತ ಸಂಭ್ರಮಿಸುತ್ತ ಸಾಗಿದರು. ಲಾಸ್ ವೇಗಸ್ ನಲ್ಲಿ ಇದೇನು ಅಶ್ಲೀಲವಾಗಿರದೇ ತಮ್ಮ ಸ್ವಾತಂತ್ರ್ಯವನ್ನು, ಸಂತೋಷವನ್ನು ವ್ಯಕ್ತಪಡಿಸುವ / ಆಚರಿಸಿಕೊಳ್ಳುವ ಬಗೆಬಗೆಯ ಜನರ ಒಂದು ವಿಧವಾಗಿತ್ತು ಈ ತೆರೆದೆದೆಯ ಕುಣಿತ! ಆ ಎರಡು ಮೈಲಿಗಳ ದೂರದ ಪ್ರಮುಖ ರಸ್ತೆಯ ಟ್ರಾಫಿಕ್ಕಿನಲ್ಲಿ ಸುಮಾರು ಎಂಟುನೂರು ಡಾಲರ್ ಗಳನ್ನು ತಮ್ಮ ಸಾಯಂಕಾಲದ ಪಾರ್ಟಿಗೆ ಹುಡುಗಾಟದ ಚೇಷ್ಟೆಯಾಗಿ ಸಂಪಾದಿಸಿಕೊಂಡವು ಆ ಬಂಧಮುಕ್ತ ಹಕ್ಕಿಗಳು. ಬಹುಶಃ ಭಾರತದಲ್ಲಿ ಈ ರೀತಿಯಾಗಿದ್ದರೆ ಆ ತರುಣಿಯರ ಗತಿ ಏನಾಗುತ್ತಿತ್ತೋ ಊಹಿಸಲೂ ಅಸಾಧ್ಯ!

ಸರಿ, ಮರುದಿನ ಆ ಆರ್ಥಿಕ ಸಮಾವೇಶದಲ್ಲಿ ಕ್ರಿ.ಶ. ೨೦೨೦ ರ ಹೊತ್ತಿಗೆ ಕ್ರಮವಾಗಿ ಚೀನಾ, ಅಮೇರಿಕಾ, ಭಾರತ, ಜಪಾನ್, ಯುರೋಪ್ ಮತ್ತು ಬ್ರೆಜಿಲ್ ಗಳು ಆರ್ಥಿಕ ದೈತ್ಯರಾಗಿ ಹೊರಹೊಮ್ಮುತ್ತಾರೆಂದು, ಅದಕ್ಕೆ ಪರ್ಯಾಯವಾಗಿ ಕಂಪೆನಿಗಳು ಹೇಗೆ ಸಿದ್ಧವಾಗಿರಬೇಕೆಂದೂ, ಯಾವ ಯಾವ ಕೈಗಾರಿಕೆಗಳಲ್ಲಿ ಬಂಡವಾಳವನ್ನು ತೊಡಗಿಸಬೇಕೆಂದೂ ವಿವಿಧ ಪ್ರತಿಷ್ಟಿತ ಬಂಡವಾಳ ಹೂಡಿಕೆ ಕಂಪೆನಿಗಳ ದೊಡ್ಡ ಅಧಿಕಾರಿಗಳು ಅಂಕಿಸಂಖ್ಯೆಗಳೊಂದಿಗೆ ವಿಷಯವನ್ನು ಪ್ರಸ್ತುತಪಡಿಸಿದರು. ಈ ಅಂಕಿಸಂಖ್ಯೆಗಳನ್ನು ಪ್ರಸ್ತುತಪಡಿಸಿದ ಅಧಿಕಾರಿಗಳಲ್ಲಿ ಭಾರತೀಯ ಸಂಜಾತರೊಬ್ಬರೂ ಇದ್ದರು. ಮುಂಬೈನ ಕಾನ್ವೆಂಟ್ ಒಂದರಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿ, ಪ್ರತಿಷ್ಟಿತ ಕಾಲೇಜೊಂದರಲ್ಲಿ ಪದವಿ ಪಡೆದು, ಅಮೇರಿಕಾದಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದ ಅವರಿಗೆ ಭಾರತವೆಂದರೆ ಡೆಲ್ಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಗಳೇ ಆಗಿದ್ದವು.

ಸಂಜೆಯ ಪಾರ್ಟಿಯಲ್ಲಿ ನನ್ನ ಮಿತ್ರ ಫ್ರ್ಯಾಂಕ್ ಮತ್ತೆ ಆ ವ್ಯಕ್ತಿಯೊಂದಿಗೆ ಸಂಭಾಷಿಸುತ್ತ, ಮುಂಬೈನ ಜನನಿಬಿಡ ರೈಲುಗಳಲ್ಲಿ ಅವರು ಯಾವತ್ತಾದರೂ ಪ್ರಯಾಣಿಸಿದ್ದಾರೆಯೇ ಎಂದು ಕೇಳುತ್ತ ತನಗೆ ತುಂಬಿದ್ದ ಆ ರೈಲಿನಲ್ಲಿ ಒಮ್ಮೆ ಸಲಿಂಗಕಾಮಿಯೊಬ್ಬನು ತನ್ನ ಚಡ್ಡಿಯೊಳಗೆ ಕೈತೂರಿಸಿದ್ದ ಅನುಭವವನ್ನು ಹೇಳುತ್ತ, ಜನಭರಿತ ಆ ರೈಲಿನಲ್ಲಿ ಅದಾವ ಮಹಾಶಯನೆಂದು ಕಂಡುಹಿಡಿಯಲಾಗದೆ ಹಾಗೆಯೇ ಆ ಕೈಯನ್ನು ಹಿಡಿದು ತಿರುವಿ ಆ ಸಂಧಿಗ್ದತೆಯಿಂದ ಪಾರಾದ ಕತೆಯನ್ನು ಹೇಳಿದನು. ಹಾಗೆಯೇ ಅವರು ಹೇಳಿದ ಭಾರತದ ಐ.ಟಿ/ಬಿ.ಟಿ ಯಶೋಗಾಥೆಗಳು ಸೃಷ್ಟಿಸಿರುವ ಕೆಲವು ಸಂಕೀರ್ಣತೆಗಳನ್ನು ಬಿಡಿಸಿಡುತ್ತಾ ತನಗೆ ಬೆಂಗಳೂರಿನ ಪಬ್ ಗಳಲ್ಲಿ ಇನ್ನೂ ಹದಿನೆಂಟು ಮುಟ್ಟದ ಯುವಕ/ಯುವತಿಯರು ಯಾವುದೇ ಅಡೆತಡೆಗಳಿಲ್ಲದೆ ಸಿಗರೇಟು ಸೇದುತ್ತ ಬಿಯರ್ ಹೀರುವುದನ್ನು, ಮತ್ತು ತಾನು ನಿರ್ವಹಿಸಲು ಹೋಗಿದ್ದ ಕಾಲ್ ಸೆಂಟರ್ ನ ಯುವಕ ಯುವತಿಯರು ಅಮೇರಿಕೆಯ ಮಾದರಿಯಲ್ಲಿಯೇ ಜೊತೆಗೂಡಿ ವಾಸ ಮಾಡುತ್ತಿದ್ದುದು, ಅವರೆಲ್ಲ ನೀರು ಕುಡಿಯದೆ ಕೋಕ್ ಕುಡಿಯುತ್ತಿದುದನ್ನು ಉದಹರಿಸಿದನು. ಭಾರತದ ಬಗ್ಗೆ ಅಪಾರವಾಗಿ ಓದಿಕೊಂಡು ಪ್ರತ್ಯಕ್ಷವಾಗಿಯೂ ಭಾರತದ ಬಗ್ಗೆ ತಿಳಿದುಕೊಂಡಿದ್ದ ಬಿಳಿಯ ಫ್ರ್ಯಾಂಕ್ ನೊಂದಿಗೆ ವಾದಿಸುವುದರಲ್ಲಿ ಆ ಚಾಕೋಲೇಟ್ ಭಾರತೀಯ ಕಕ್ಕಾಬಿಕ್ಕಿಯಾಗಿದ್ದ. ಕಡೆಗೆ ಅವರು ತೋರಿಸಿದ್ದ ಭಾರತದ ಶೇರು ಮಾರುಕಟ್ಟೆಯ ಬೆಳವಣಿಗೆಯನ್ನು ಎತ್ತುತ್ತಾ ಅದರಲ್ಲಿ ಭಾರತೀಯ ಕಂಪೆನಿಗಳೆಷ್ಟು ಹಣ ತೊಡಗಿಸಿದ್ದಾವೆ ಮತ್ತು ವಿದೇಶೀ ಕಂಪೆನಿಗಳೆಷ್ಟು ಹಣ ತೊಡಗಿಸಿದ್ದಾವೆಂದು ವಿಶ್ಲೇಷಿಸುತ್ತ ಈ ವಿದೇಶೀ ಬಂಡವಾಳ ಹೂಡಿಕೆ ಕಂಪೆನಿಗಳ ’ಪಂಪ್ ಅಂಡ್ ಡಂಪ್’ ನ ಹುನ್ನಾರವಾಗಿ ಭಾರತದ ಶೇರು ಮಾರುಕಟ್ಟೆ ಈ ಪಾಟಿ ಮೇಲೇರಿರುವುದಾಗಿಯೂ ಅದೇ ರೀತಿ ಸುಲಭ ಸಾಲ ಸೌಲಭ್ಯಗಳ ಹುನ್ನಾರವಾಗಿ ಭಾರತದ ನಗರಗಳ ರಿಯಲ್ ಎಸ್ಟೇಟ್ ಗಗನಕ್ಕೇರಿರುವುದಾಗಿಯೂ ಹೇಳಿದನು. ಹಾಗೆಯೇ ತಾನು ಬೆಂಗಳೂರ್‍ಇನಲ್ಲೊಮ್ಮೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ವಿರುದ್ಧವಾಗಿ ’ಬಂದ್’ ನಡೆದುದನ್ನು ನೋಡಿದ್ದಾಗಿಯೂ, ಅದೇ ಮಾದರಿಯಲ್ಲಿ ಮುಂದೆ ಭಾರತೀಯರು ಶೇರುಪೇಟೆ ಬಿದ್ದಾಗ ಮತ್ತು ರಿಯಲ್ ಎಸ್ಟೇಟ್ ಮಾರುಕಟ್ಟೆ ಸೋತಾಗ ಬಡ ಭಾರತೀಯ ಹೂಡಿಕೆದಾರರು ಭಾರತದ ರೈತರ ಮಾದರಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವರೆಂದನು.

ಹಾಗೆಯೇ ಭಾರತದಲ್ಲಿನ ಅಗ್ಗದ ಕಾರ್ಮಿಕರು ಇಂದು ಅಗ್ಗವಾಗಿರದೇ ರಷ್ಯಾ/ ಜೆಕ್ ರಿಪಬ್ಲಿಕ್ ಮತ್ತಿತರೆ ಪೂರ್ವ ಯುರೋಪಿನ ರಾಷ್ಟ್ರಗಳು ಭಾರತಕ್ಕಿಂತ ಅಗ್ಗವಾಗಿ, ಈ ಹೊರಗುತ್ತಿಗೆ ವ್ಯವಸ್ಥೆಯ ಕಂಪೆನಿಗಳು ಅಲ್ಲಿಗೆ ಸ್ಥಾನಪಲ್ಲಟ ಮಾಡುವತ್ತ ಯೋಚಿಸುತ್ತಿರುವುದರ ಬಗೆಗೆ ತಮ್ಮ ಅಭಿಪ್ರಾಯವೇನೆಂದು ಕೇಳಿ ಅವರನ್ನು ಸುಸ್ತುಗೊಳಿಸಿದನು. ಕಡೆಗೆ ಭಾರತದಲ್ಲಿ ತಾನು ಕಳೆದ ಎಂಟು ತಿಂಗಳುಗಳಲ್ಲಿ ತಾನು ಗೋವೆಯಲ್ಲಿ ಮಾಡಿದ ಮಜಾ, ಮುಂಬೈನ ರೆಡ್ ಲೈಟ್ ಏರಿಯಾದಲ್ಲಿ ಸಾರ್ವತ್ರಿಕವಾಗಿ ಕಾಣುವ ದೇಹದ ಮಾರುಕಟ್ಟೆ ಮತ್ತು ಮನುಕುಲದ ಮೇಲೆಯೇ ಜುಗುಪ್ಸೆ ತರಿಸುವಂತೆ ಅಲ್ಲಿ ಸಾಲು ಸಾಲಾಗಿ ನಿಲ್ಲಿಸಿರುವ ಅಬಾಲವೃದ್ಧ ವೇಶ್ಯೆಯರು, ಗೋಕರ್ಣದ ಓಂ ಬೀಚಿನಲ್ಲಿ ಒಂದಕ್ಕೆ ಹತ್ತರಷ್ಟು ಜಡಿದು ಸುಲಿಗೆ ಮಾಡುವ ಸ್ಥಳೀಯರು, ಭಾರತ ಸರಕಾರವೇ ತನ್ನ ಐತಿಹಾಸಿಕ ಆಕರ್ಷಣಾ ಸ್ಥಳಗಳಲ್ಲಿ ವಿದೇಶೀಯರಿಗೊಂದು ದರ / ದೇಶೀಯರಿಗೊಂದು ದರವೆಂದು ಭೇಧನೀತಿಯನ್ನು ಸಾರುತ್ತಿರುವುದು, ಹಂಪಿಯಲ್ಲಿನ ಗಲೀಜು, ಬೆಂಗಳೂರು ಬಾಲೆಯರ ಸ್ವೇಚ್ಛಾಚಾರ್‍ಅ, ಕೂರ್ಗ್ ನಲ್ಲಿ ಹೋಂ ಸ್ಟೇ ಎಂದು ಪಂಚತಾರಾ ಹೋಟೆಲ್ಲಿನ ಛಾರ್ಜು ಛಾರ್ಜಿಸುವ ಗತ್ತು, ’ಬಂದ್’ ಒಂದರಲ್ಲಿ ಸಿಲುಕಿ ಊಟಿ-ಮೈಸೂರು ಮಧ್ಯದಲ್ಲೆಲ್ಲೋ ವಿದೇಶೀಯನಾದ ತಾನು ರಾತ್ರಿ ವೀರಪ್ಪನ್ ನ ಭಯದಲ್ಲಿ ಕಾಲ ಕಳೆದಿದ್ದು ಮತ್ತವನನ್ನು ಹಿಡಿಯಲಾಗದ ಭಾರತ ಸರ್ಕಾರದ ಪೋಲೀಸರು, ಯಾವುದನ್ನೂ ವಿರೋಧಿಸದ ಸಾಮಾನ್ಯ ಜನತೆ...ಇತ್ಯಾದಿಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದನು.

ಹಾಗೆಯೇ ತಮ್ಮ ಈ ಸಂಶೋಧನೆಯಲ್ಲಿ ಭಾರತದ ರಾಜಕಾರಣಿಗಳ ಭ್ರಷ್ಟಾಚಾರವನ್ನು ಹತ್ತಿಕ್ಕಿಯೋ ಅಥವಾ ಅದನ್ನು ಆಫ್ ಸೆಟ್ ಮಾಡಿ ಈ ಮಟ್ಟವನ್ನು ಭಾರತವು ಹೇಗೆ ಮುಟ್ಟುವುದೆಂಬುದಕ್ಕೇನಾದರೂ ಪೂರಿತ ಅಂಶಗಳಿವೆಯೇ ಎಂದು ವಿಚಾರಿಸಿದನು. ಇದನ್ನೆಲ್ಲಾ ಕೇಳಿದ ಆ ಭಾರತೀಯ ಸಂಜಾತ ತನ್ನ ಅಂಕಿಆಂಶಗಳನ್ನು ತಲೆಕೆಳಗು ಮಾಡಿದ ಫ್ರ್ಯಾಂಕ್ ನ ವಾದದಿಂದ ಪೇಲವಗೊಂಡು ನಿರುತ್ತರನಾಗಿದ್ದ. ಕಡೆಗೆ ಫ್ರ್ಯಾಂಕ್, ಕ್ರಿ.ಶ. ೨೦೫೦ ಬಂದರೂ ಭಾರತವು ತನ್ನ ಪ್ರಜೆಗಳಿಗೆ ಒಂದೊಂದು ಪಾಯಿಖಾನೆಯನ್ನೂ ಕಟ್ಟಿಸಿಕೊಡಲಾಗದ ಸ್ಥಿತಿಯಲ್ಲಿಯೇ ಇರುತ್ತದೆಂದೂ, ತಾನು ಪ್ರತಿ ಸಾರಿ ಮುಂಬೈ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಮುಂಜಾನೆ ಹಾರುವಾಗ ರನ್ ವೇ ಯ ಕೊನೆ ಭಾಗದ ಸಮೀಪದಲ್ಲಿಯೇ ಸಾಲು ಸಾಲಾಗಿ ಚಡ್ಡಿ ಬಿಚ್ಚಿ ಬೆಳಗಿನ ಬಹಿರ್ದೆಶೆಗೆ ಕುಳಿತ ಅಸಂಖ್ಯಾತ ಜನಗಳ ಆ ದೃಶ್ಯ ಈಗಲೂ ಕೂಡ ಹಾಗೆಯೇ ಇರುವುದನ್ನು ಹೇಳಿ ಮತ್ತೊಂದು ಬಿಯರ್ ಪಡೆಯಲು ಬಾರ್ ನೆಡೆಗೆ ನಡೆದ.

ಈ ಫ್ರ್ಯಾಂಕ್ ಮತ್ತು ನಾನು ಸುಮಾರು ಹತ್ತು ವರ್ಷಗಳಿಂದ ಸಹೋದ್ಯೋಗಿಗಳಾಗಿ, ಒಮ್ಮೊಮ್ಮೆ ಅವನಿಗೆ ನಾನು ಬಾಸ್ ಆಗಿಯೂ ಮಗದೊಮ್ಮೆ ಅವನು ನನಗೆ ಬಾಸ್ ಆಗಿಯೂ ಹಲವಾರು ಕಂಪೆನಿಗಳಲ್ಲಿ ಕೆಲಸ ಮಾಡಿದ್ದೇವೆ. ಅಮೇರಿಕೆಯ ಜೀವನದ ಬಹು ಮಜಲುಗಳನ್ನು ನನಗೆ ಪರಿಚಯಿಸಿದ ಫ್ರ್ಯಾಂಕ್ ನಿಗೆ ನಾನೊಮ್ಮೆ ಭಾರತದಲ್ಲಿನ ಹೊರಗುತ್ತಿಗೆ ಪ್ರಾಜೆಕ್ಟ್ ನಿಭಾಯಿಸಲು ಕಳುಹಿಸಿದ್ದೆ. ಆಗ ಭಾರತದಾದ್ಯಂತ ಸುತ್ತಿ, ನನ್ನ ಅನೇಕ ಭಾರತದಲ್ಲಿನ ಸ್ನೇಹಿತರುಗಳನ್ನು ಭೇಟಿಸಿ, ಎಲ್ಲೆಡೆ ತಿರುಗಿ ಬಂದಿದ್ದ ಈ ಫ್ರ್ಯಾಂಕ್. ಹಾಗೆಯೇ ತಾನು ಉಳಿದುಕೊಂಡಿದ್ದ ಹೋಟೇಲಿನಲ್ಲಿ ನಿತ್ಯವೂ ಹಾಕುತ್ತಿದ್ದ ಭಾರತೀಯ ದಿನಪತ್ರಿಕೆಗಳನ್ನೂ ಓದಿದ್ದ. ಅವನ ಆ ದಿನಗಳ ಅನುಭವದ ನುಡಿಯೇ ಅವನ ಮೇಲಿನ ವಾದಕ್ಕೆ ಪುಷ್ಠಿ ನೀಡಿದ್ದವು. ಯಾರಾದರೂ ನಮ್ಮ ಸ್ನೇಹಿತರು ಬೆಂಗಳೂರಿನಲ್ಲಿ ಮನೆಯನ್ನೋ, ಸೈಟನ್ನೋ ಕೊಂಡೆವೆಂದು ಹೇಳಿದಾಗ ಅವರೆಲ್ಲ ಹುಚ್ಚರೆಂದು ಕರೆಯುವ ಫ್ರ್ಯಾಂಕ್ ಹಿಂದೊಮ್ಮೆ ಗೋವೆಯಲ್ಲೊಂದು ಬಾರ್ ಅನ್ನು ತೆರೆದು ವಿಶ್ರಾಂತ ಜೀವನ ನಡೆಸುವ ಯೋಜನೆಯಲ್ಲಿದ್ದು ತಾನು ವಾಪಸ್ ಬರುವುದಿಲ್ಲವೆಂದು ನನಗೆ ಈಮೈಲ್ ಮಾಡಿದ್ದ. ಆದರೆ ಭಾರತವನ್ನು ಪ್ರತ್ಯಕ್ಷ ದರ್ಶಿಸಿ ಪ್ರಮಾಣಿಸಿ ನೋಡಿದ ಮೇಲೆ ಜ್ಞಾನೋದಯಗೊಂಡು ’ಒಂದು ರಾಷ್ಟ್ರ ಎಷ್ಟೇ ಬಡವಾಗಿದ್ದರೂ ಅದರ ಪ್ರಜೆಗಳು ಪ್ರಾಮಾಣಿಕರಾಗಿ ದೇಶಭಕ್ತರಾಗಿದ್ದರೆ ಅದು ಮುಂದೊಂದು ದಿನ ಉನ್ನತಿಗೇರಿಯೇ ಏರುತ್ತದೆ. ಆದರೆ ಎಲ್ಲಿ ಜನರು ಅಪ್ರಮಾಣಿಕರೂ, ಭ್ರಷ್ಟರೂ ಆಗಿರುವರೋ ಆ ದೇಶ ಎಷ್ಟೇ ಉನ್ನತಿಯಲ್ಲಿದ್ದರೂ ಅದರ ಅವನತಿ ಕಟ್ಟಿಟ್ಟಿದ್ದೇ’ ಎಂದುಕೊಂಡು ತನ್ನ ತಾಯ್ನಾಡಾದ ಅಮೇರಿಕೆಯೇ ವಾಸಿಯೆಂದು ಭ್ರಮನಿರಸನಗೊಂಡು ಹಿಂದಿರುಗಿದ್ದ.

ಕೇವಲ ಕೆಲವಾರು ತಿಂಗಳು ಭಾರತದಲ್ಲಿ ಸುತ್ತಿ, ಅಲ್ಲಿನ ಪತ್ರಿಕೆಗಳನ್ನು ಓದಿ ಫ್ರ್ಯಾಂಕ್ ನು ಕಂಡುಕೊಂಡ ಭಾರತವು, ಭಾರತದಲ್ಲಿಯೇ ಹುಟ್ಟಿ ಬೆಳೆದ ನಮಗೇಕೆ ಹಾಗೆ ಕಾಣುವುದಿಲ್ಲವೋ?

ಅಣಕ:

ಹಿಂದೊಮ್ಮೆ ನನಗೆ ಫ್ರ್ಯಾಂಕ್ ನಂತೆಯೇ ಭಾರತದ ಇತಿಹಾಸ, ಹಿಂದೂ ಧರ್ಮವನ್ನು ಓದಿಕೊಂಡಿದ್ದ ಮೈಕೆಲ್ ಡಫ್ ಎಂಬ ಸಹೋದ್ಯೋಗಿಯೊಬ್ಬನಿದ್ದ. ನಮ್ಮ ಕಂಪೆನಿಯ ಮತ್ತೊಂದು ಡಿಪಾರ್ಟಮೆಂಟಿನಲ್ಲಿ ಮೃತ್ಯುಂಜಯ ಎಂಬ ಭಾರತೀಯ ಸಂಜಾತನೋರ್ವನಿದ್ದು ಅವನು ತನ್ನ ಹೆಸರನ್ನು ’ಮೃತ್’ ಎಂದು ತುಂಡರಿಸಿಕೊಂಡಿದ್ದ (ಕೃಷ್ಣಮಾಚಾರಿ ಕ್ರಿಸ್ ಆದಂತೆ). ಅದನ್ನು ನಾನೂ ಹೆಚ್ಚಾಗಿ ಗಮನಿಸದೆ ’ಮೃತ್’ ಎಂದೇ ಸಂಭೋಧಿಸುತ್ತಿದ್ದೆನು. ಆದರೆ ಈ ಮೈಕೆಲ್ ಒಮ್ಮೆ ತುಂಬಿದ ಸಭೆಯಲ್ಲಿ "ಭಾರತೀಯರು ತಮ್ಮ ಹೆಸರುಗಳನ್ನು ಹೆಚ್ಚು ವಿಶ್ಲೇಷಿಸದೆ ತುಂಡರಿಸಿಕೊಳ್ಳುವ ಹವ್ಯಾಸ ಎಷ್ಟು ಅನರ್ಥವಾಗಿರುತ್ತದೆಂದು ವರ್ಣಿಸಿತ್ತ ’ಮೃತ್ಯುವನ್ನು ಜಯಿಸಿ ಮೃತ್ಯುಂಜಯನಾಗೆಂದು ಹರಸಿ ಹೆಸರಿಟ್ಟರೆ, ನಮ್ಮ ಸಹೋದ್ಯೋಗಿ ಮಿತ್ರ ’ಮೃತ್’ ತನ್ನ ಹೆಸರಿನ ಅರ್ಥದ ತದ್ವಿರುದ್ಧವಾಗಿ ’ಡೆಡ್ ಮ್ಯಾನ್’ ಆಗಿರುವುದೂ ಒಂದು ಉದಾಹರಣೆ" ಎಂದು ನಮ್ಮ ’ಮೃತ್’ ನಿಗೆ ಮೃತ್ಯು ಸಂದೇಶವನ್ನು ಕೊಟ್ಟನು.

ಮೃತ್ಯುಂಜಯನು ’ಮೃತ’ನಾದದ್ದು ಅತ್ಯಂತ ಸಣ್ಣ ನಿರ್ಲಕ್ಷಿಸುವಂತಹ ಘಟನೆಯಾದರೂ ಅದರರ್ಥ ಸುಧೀರ್ಘವೂ ಅತ್ಯಂತ ಗಾಢವೂ ಆಗಿದೆಯೇನೋ ಎಂದಿನಿಸುತ್ತದೆ!

ಹಳಸಿದ ಜೆಡಿಎಸ್, ಹಸಿದ ಬಿಜೆಪಿ, ಹೊಂಚುತ್ತಿರುವ ಕಾಂಗ್ರೆಸ್

ಮತ್ತೊಂದು ಸರ್ವಪಕ್ಷ ಪ್ರಹಸನ ಶುರುವಾಗಿದೆ. ಇದುವರೆಗೂ ಮಂತ್ರಿಗಳಷ್ಟೇ ಕಂತ್ರಿಯಾಗಿದ್ದ ಕಾಲ ಹೋಗಿ ರಾಜ್ಯಪಾಲರೂ ಲಜ್ಜೆಗೆಟ್ಟ ರಾಜಕೀಯ ದುಷ್ಟಕೂಟದಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ವಿಶ್ರಾಂತ ರಾಜಕಾರಣಿಗಳೇ ರಾಜ್ಯಪಾಲರುಗಳಾಗಿ ನೇಮಕಗೊಂಡರೂ ಯಾವುದೇ ರಾಜಕಾರಣಕ್ಕಿಳಿಯದೇ ಆ ಹುದ್ದೆಗೆ ಒಂದು ಘನತೆಯನ್ನು ಮೆರೆಯುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿದ್ದರು. ಇದೀಗ ನಮ್ಮ ಮಣ್ಣಿನಮಗ ತಮ್ಮ ಘನತೆಯನ್ನೆಲ್ಲಾ ರಾಜ್ಯಕ್ಕಾಗಿ ತ್ಯಾಗ ಮಾಡಿ ಮಣ್ಣಿನ ಮೊಮ್ಮಕ್ಕಳ ಹಕ್ಕಿಗಾಗಿ ಹೋರಾಡುವ ಪರಿಯನ್ನು ನೋಡಿ ಇತರೆ ಘನವೆತ್ತ ಹುದ್ದೆಯ ಮಂದಿಯೆಲ್ಲ ಅವರ ಹಾದಿಯಲ್ಲಿ ನಡೆಯುವುದನ್ನು ನೋಡಿದರೆ ಭಾರತವು ನವ ನಾಗರೀಕತೆಯ ಪ್ರಗತಿಯ ಪಥದಲ್ಲಿದೆಯೋ ಅಥವಾ ತತ್ವ ಸಿದ್ಧಾಂತಗಳನ್ನೆಲ್ಲಾ ತೂರಿ ದುರ್ಗತಿಯ ಅಂಚಿನಲ್ಲಿದೆಯೋ ನಾನರಿಯೆ!

ಕೊನೆಯುಸಿರಿರುವ ತನಕ ಕೋಮುವಾದಿ ಬಿಜೆಪಿಗೆ ಅಧಿಕಾರ ಕೊಡೆನೆಂದು ಮಣ್ಣಿನ ಮಗ, ಮೊಮ್ಮಕಳು ಮತ್ತವರ ಪಡೆಯು ವಾಚಾಮಗೋಚರವಾಗಿ ಬಿಜೆಪಿಯನ್ನು ಜಾಡಿಸಿ, ಎಡೆಯೂರಪ್ಪನವರನ್ನು ’ಅಯೋಗ್ಯ’, ’ಕೈಲಾಗದವನು’ ಇನ್ನೂ ಏನೇನೋ ಅವರವರ ನಾಗರೀಕತೆಯನುಸಾರವಾಗಿ ಬೈಯ್ದವರು ಕೇವಲ ಎರಡೇ ವಾರಗಳ ಅಂತರದಲ್ಲಿ ಇದೇ ಅಯೋಗ್ಯ ಎಡೆಯೂರಪ್ಪ ತಮ್ಮ ಜಂಟೀ ಪಕ್ಷಗಳ ಶಾಸಕಾಂಗ ನಾಯಕನೆಂದು ಫೋಸ್ ಕೊಡುತ್ತಿರುವುದನ್ನು ನೋಡಿದರೆ ನಮಗೇ ನಾಚಿಕೆಯಾಗಬೇಕು, ಇಂತಹವರು ನಮ್ಮನ್ನು ಪ್ರತಿನಿಧಿಸುತ್ತಿದ್ದಾರೆಂದು.

ಮಾಜಿ ಪ್ರಧಾನಿಯವರಿಗೆ ಜನತೆಯಾದರೂ ಆ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ವಿಷವನ್ನೋ ಹಗ್ಗವನ್ನೋ ಕೊಟ್ಟು ಮಣ್ಣಿನ ಮಗ ಮಾತಿಗೆ ತಪ್ಪಿದ ಮಗನಾಗುವುದನ್ನು ತಪ್ಪಿಸಬೇಕು. ಬಹುಶಃ ಜನತೆಯೂ ಕೂಡ ಇದು 'ಮಾತಿಗೆ ತಪ್ಪಿದ ಮಗ' ಬಯಲಾಟದ ಮುಂದುವರಿದ ಭಾಗವಾಗಿ 'ಮಾತಿಗೆ ತಪ್ಪಿದ ಅಪ್ಪ' ಎಂದುಕೊಂಡಿರುವರೇನೋ?

ಕೊನೆಯುಸಿರು ಹೋಗುವಂತಹದ್ದು ಏನೇನೂ ಆಗದೆ, ಕೇವಲ ಅಧಿಕಾರ ದಾಹದ ಕೆಲವು ಶಾಸಕರು ಪಕ್ಷ ತೊರೆದು ಹೋಗುತ್ತೇವೆಂಬುದಕ್ಕೇ ನಮ್ಮ ಮಾಜಿ ಪ್ರಧಾನಿ ತಮ್ಮ ಮಾತನ್ನು ತಪ್ಪುವುದಾದರೆ ಇನ್ನು ದೇಶದ ಗಂಭೀರ ಸಮಸ್ಯೆಗಳ ವಿಷಯಗಳು ಬಂದಾಗ ಏನೇನು ತಪ್ಪುವರೋ? ಪಾಪ, ಕೇವಲ ಎರಡು ವಾರಗಳ ಹಿಂದಷ್ಟೇ ಕೋಮುವಾದಿ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಿದರೆ ನೇಣು ಹಾಕಿಕೊಳ್ಳುವೆನೆಂದ ಮಣ್ಣಿನಮಗ, ’ಅಯ್ಯೋ, ನನ್ನ ಮಾಂಗಲ್ಯ ಉಳಿಸಿ’ ಎಂದು ಇನ್ನೊಂದೆಡೆ ಒರಲಿಟ್ಟ ಮಣ್ಣಿನ ಸೊಸೆ, ’ಅಪ್ಪಯ್ಯನ್ನ ಏನಾದರೂ ಮಾಡಿ ಉಳಿಸು, ಕುಮ್ಮಿ’ ಎಂದು ಗಳಗಳನೆ ಅತ್ತ ಮಣ್ಣಿನ ಮೊಮ್ಮಗ, ’ವಚನಭ್ರಷ್ಟನೆಂಬ ಅಪವಾದವನ್ನು ಹೊತ್ತರೂ ಸರಿಯೇ, ಯಾವುದೇ ಕಾರಣಕ್ಕೂ ಕೋಮುವಾದಿಗಳಿಗೆ ಅಧಿಕಾರ ಹಸ್ತಾಂತರ ಮಾಡೆ’ ಎಂದು ಸಿನಿಮಾ ಹುಚ್ಚಿನ ಮತ್ತೊಂದು ಮೊಮ್ಮಗು ಅಂತಿಮವಾಗಿ ಘೋಷಿಸಿದಾಗ, ಇದಕ್ಕೆಲ್ಲ ’ಬಹುಪರಾಕ್, ಬಹುಪರಾಕ್’ ಎಂದ ಚೆಲುವ, ಚೆನ್ನಿಗರು, ’ಸುಭಾನ್ ಅಲ್ಲಾಹ್, ಸುಭಾನ್ ಅಲ್ಲಾಹ್’ ಎಂದ ಬಿಸಿಲ್ಗುದುರೆ ಮಿರಾಜ್...ಈ ಎಲ್ಲ ಭಯಂಕರ ಬಯಲಾಟ/ದೊಡ್ಡಾಟ/ಯಕ್ಷಗಾನ/ ಸೋಪ್ ಒಪೆರಾ ಗಳನ್ನು ನೋಡಿದ್ದ ಜನತೆಗೆ ಈಗ ಅದರ ಮುಂದಿನ ಭಾಗವಾಗಿಯೋ / ಅಂತಿಮ ಭಾಗವಾಗಿಯೋ ತೀವ್ರ ತಿರುವು ಬಂದು ಮತ್ತೊಂದಿಷ್ಟು ಕಾಲ ಮನರಂಜನೆಯೊದಗಿಸಲಿದೆ.

ಮೊದಲಾಟದಲ್ಲಿ ನಿರುಪದ್ರವೀ ಅಮವಾಸ್ಯೆ ಕಾಂತಿಯ ಪ್ರಕಾಶ, ದಿಢೀರನೆ ಕಾಂಗ್ರೆಸ್ ನ ಅನುಭವಿಗಳು ಕೊಟ್ಟ ವೈಯಾಗ್ರ ನುಂಗಿ ವೀರಾವೇಷ ಬಂದು ಗ್ರಹಣ ಬಿಟ್ಟ ಚಂದ್ರನಂತೆ ಪ್ರಕಾಶಿಸುತ್ತ ’ಪಢಪಢಾ ಶಿಖಂಡಿಯೆಂದಡಿಗಡಿಗೆ ನುಡಿಯಬೇಡೆಲೋ ಮೂಢ!’ ಎಂದು ತಮ್ಮ ಹಳೆಯ ನಾಟಕದ ಪಾತ್ರವೊಂದು ಪರಕಾಯ ಪ್ರವೇಶಗೊಂಡಂತೆ ಎಲ್ಲೆಡೆ ಮಿಂಚಿನ ಸಂಚಲನ ಮೂಡಿಸಿ ಸರ್ವಪಕ್ಷಗಳಿಗೂ ವೈಯಾಗ್ರ ಇಫೆಕ್ಟ್ ಮೂಡಿಸಿ, ತಕ್ಷಣ ಯಾವುದೋ ಒಂದು ಪಕ್ಷದ ಸಂಗವನ್ನು ಮಾಡಿ ಬಿಸಿ ಆರಿಸಿಕೊಂಡರೆ ಸಾಕೆಂಬುವಂತೆ ತೀವ್ರ ರೋಚನೆಯನ್ನೋ ಕಾಮನೆಯನ್ನೂ ಉಂಟುಮಾಡಿದ್ದಾರೆ. ಆದರೆ ಅವರ ಕಾಮನೆಯಾರುವ ಮುನ್ನವೇ, ಸಂಗ ಮಾಡುವುದರಲ್ಲಿ ಈಗಾಗಲೇ ಪರಿಣಿತರಾಗಿರುವ ಜೆಡಿಎಸ್ ನ ಅಧಿನಾಯಕರು ಈ ಪ್ರಕಾಶರ ಉತ್ಸಾಹ ಚುಂಬನದಲ್ಲೇ ಕೊನೆಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಗಿಸಿದ್ದಾರೆ.

ಇನ್ನು ಎಡೆಯೂರಪ್ಪ ಮತ್ತು ಪಡೆ ಕರ್ನಾಟಕದ ಕಂಟಕ ಈ ಗೌಡ ಮತ್ತವರ ಕುಟುಂಬ, ಇದನ್ನು ಸಂಪೂರ್ಣ ನಾಶಮಾಡಿ ಎಂದು ಜಾಗಟೆ ಹೊಡೆದು, ಮಂಗಳಾರತಿ ಎತ್ತಿದ್ದು, ಈಗ ದಿಢೀರನೇ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಬಣ್ಣವನ್ನೂ ಬದಲಿಸಿಕೊಂಡಿರುವುದನ್ನು ನೋಡಿದರೆ ಅಧಿಕಾರದ ದಾಹ ಎಂತಹವರನ್ನು ಯಾವ ಯಾವ ಮಟ್ಟಕ್ಕೆ ತರುತ್ತದಲ್ಲವೆಂದು ವ್ಯಥೆಯಾಗುತ್ತದೆ. ಜೆಡಿಎಸ್ ಸಂಪೂರ್ಣ ಛಿದ್ರಗೊಂಡು ಕರ್ನಾಟಕಕ್ಕೆ ಅಂಟಿದ ಈ ಜೆಡಿಎಸ್ ಶಾಪ ವಿಮೋಚನೆಗೊಂಡು ಯಾವುದಾದರೂ ಒಂದು ಪಕ್ಷಕ್ಕೆ ಬಹುಮತ ಬಂದು ಇನ್ನೊಂದು ಪಕ್ಷದ ಹಂಗಿಲ್ಲದೆ ಏಕಪಕ್ಷೀಯ ಸರ್ಕಾರವೇರ್ಪಡುವಂತಿದ್ದ ಅವಕಾಶವನ್ನು ಶಾಪ ವಿಮೋಚನೆಗೊಳಿಸಬೇಕಾದ ಬಿಜೆಪಿಗಳೇ ಇನ್ನಷ್ಟು ಶಾಪವನ್ನು ತಗಲಿಸುವತ್ತ ಹೊರಟಿರುವುದು ನೈತಿಕತೆಯ ಅಧಃಪತನವೇ ಸರಿ. ’ವಚನಭ್ರಷ್ಟತೆ’ಯ ಸಂಪೂರ್ಣ ಫಲವನ್ನು ಪಡೆದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯುವ ಎಲ್ಲಾ ಅವಕಾಶಗಳಿದ್ದರೂ ಈ ಅನುಮಾನದ ಹದಿನೆಂಟು ತಿಂಗಳುಗಳ ಅಧಿಕಾರಕ್ಕೆ ಹಪಹಪಿಸುತ್ತಿರುವುದು ಅವರುಗಳ ಅಧಿಕಾರದ ಹಸಿವಲ್ಲದೇ ಇನ್ನೇನೋ?

ಇನ್ನು ಸದಾ ಅಧಿಕಾರವನ್ನು ಅನುಭವಿಸುತ್ತಲಿದ್ದ ಕಾಂಗ್ರೆಸ್ಸಿಗರೋ ತಾವೇನೂ ಕಡಿಮೆಯವರಲ್ಲವೆಂದು ತೋರಿಸಲು ರಾಜ್ಯಪಾಲರನ್ನೂ ತಮ್ಮ ’ಮೇಡಂ’ರಿಂದ ಮೋಡಿಗೊಳಿಸಿ ತಮಗಿಷ್ಟದಂತೆ ಕುಣಿಸುತ್ತ ಮತ್ತೊಂದೆಡೆ ಶಾಸಕರ ಕೊಳ್ಳುವಿಕೆಯಲ್ಲಿ ತೊಡಗಿರುವುದನ್ನು ನೋಡಿದರೆ ಅವರ ಅಧಿಕಾರ ಲೋಲುಪತೆ ಎಂತಹವರನ್ನೂ ಅಸಹ್ಯಗೊಳಿಸುತ್ತದೆ.

ಒಟ್ಟಾರೆ ಈ ಎಲ್ಲಾ ವರ್ತಮಾನಗಳನ್ನು ದೂರದಿಂದ ಏನೇನೂ ವಿಶ್ಲೇಷಣೆಯಿಲ್ಲದೆ ಕನಿಷ್ಟವಾಗಿ ಅವಲೋಕಿಸಿದರೇ ಸಾಕು, ಈ ವರ್ತಮಾನಗಳು ಇಂದಿನ ಭಾರತದ ನೈತಿಕತೆ, ಪ್ರಾಮಾಣಿಕತೆ, ದೇಶಭಕ್ತಿ, ಪ್ರಜಾಪ್ರಭುತ್ವದ ಪ್ರಗತಿ(?) ಗಳ ಪ್ರತಿರೂಪವೆನಿಸಿ ಕರ್ನಾಟಕವಷ್ಟೇ ಅಲ್ಲದೆ ಸಂಪೂರ್ಣ ನೈಜ ಭಾರತದ ಸಮಗ್ರ ದರ್ಶನವನ್ನು ನೀಡುತ್ತಿದೆ.

ಆರ್ಥಿಕವಾಗಿ ಏನೇ ಸಾಧನೆ ಮಾಡಿದ್ದರೂ, ಭಾರತದ ಕಣಕಣದಲ್ಲೂ ಹಬ್ಬಿರುವ ಅನೈತಿಕತೆ, ಭ್ರಷ್ಟಾಚಾರದ ಜ್ವಾಲೆಯು ಈ ಎಲ್ಲಾ ಪ್ರಗತಿಯನ್ನು ಕ್ವಚಿತ್ತಾಗಿ ಸುಟ್ಟುಹಾಕಲಿದೆ. ಸದ್ಯಕ್ಕೆ ಭಾರತ ಪ್ರಕಾಶಿಸುವಂತೆ ಕಂಡರೂ ಒಳಗಣ್ಣಿಂದ ನೋಡಿದಾಗ, ಭಾರತ ಉರಿಯುತ್ತಿದೆ!

ಅಣಕ:

ಅಯ್ಯೋ, ಇಲ್ಲಿ ಏನೇ ತಿಣುಕಿ ಅಣಕ ಬರೆದರೂ ಅವು ಜೆಡಿಎಸ್ ನವರ ಪ್ರಹಸನಗಳ ಮುಂದೆ ಅತ್ಯಂತ ಗಂಭೀರವೆನಿಸಿಬಿಡುತ್ತವೆ. ಅವರ ಪ್ರಹಸನಗಳು ಅಷ್ಟೊಂದು ರೋಚನೀಯವಾಗಿರುವಾಗ ನಮ್ಮ ಅಣಕಗಳೆಲ್ಲಾ ಶೋಚನೀಯವೆನಿಸುತ್ತಿವೆ.

ಕನ್ನಡ ವಿರೋಧಿಗಳಿಗೆ ಮಸಿ ಬಳಿಯುವ ಮುನ್ನ...




ಕಳೆದ ವಾರ ಕನ್ನಡ ಚಿತ್ರರಂಗದ ಕುರಿತು ಹಾಸ್ಯವಾಗಿ ಬರೆದಿದ್ದರೂ ಅದು ಇಂದಿನ ಚಿತ್ರರಂಗದ ನೈಜ ಚಿತ್ರಣವೇ ಅಗಿತ್ತೆಂದು ಓದುಗರು ತಿಳಿಸಿದಾಗ ಖುಷಿಗೊಳ್ಳುತ್ತ ಈ ಬಾರಿ ಕೊಂಚ ಸೀರಿಯಸ್ ಆಗಿ ಕನ್ನಡ ರಕ್ಷಣೆ ಹೇಗಿದ್ದರೆ ಚೆನ್ನವೆಂದು ಯೋಚಿಸಿದಾಗ ಕಂಡದ್ದು ಬಹಳಷ್ಟು...

ಅಲ್ಲ ನಮ್ಮ ಕನ್ನಡ ಹೋರಾಟಗಾರರಿಗೆ ಕನ್ನಡ ಹೋರಾಟವೆಂದರೆ ಬೆಂಗಳೂರಿನ ದಂಡು ಪ್ರದೇಶದ ಅಂಗಡಿಗಳ ಮುಂದೆ ಕನ್ನಡ ಫಲಕಗಳನ್ನು ಹಾಕಿಸುವುದೇ ಅಂದುಕೊಂಡಿದ್ದಾರೇಕೆ? ಆ ಪ್ರದೇಶದ ಹೆಸರೇ ಹೇಳುವಂತೆ ಅದು ಮಿಲಿಟರಿ ಪ್ರದೇಶವಾಗಿ ಭಾರತದೆಲ್ಲೆಡೆಯ ಯೋಧರು, ವಲಸೆಗಾರರು ನೆಲೆಗೊಂಡು ಬೆಂಗಳೂರಿನಲ್ಲಿಯೇ ಭಾರತದ ದರ್ಶನದ ಜೊತೆಗೆ ಐ.ಟಿ/ಬಿ.ಟಿ ಗಳ ದೆಸೆಯಿಂದ ವಿಶ್ವದರ್ಶನವನ್ನೂ ನೀಡುತ್ತಿರುವ ಪ್ರದೇಶವಾಗಿರುವಾಗ ಅಲ್ಲಿ ಕನ್ನಡ ಫಲಕಗಳಿದ್ದರೂ ಒಂದೆ ಇಲ್ಲದಿದ್ದರೂ ಒಂದೇ. ಯಾಕೆಂದರೆ ಅದನ್ನು ಓದಲು ನಮ್ಮ ಬೆಂಗಳೂರು ಕನ್ನಡಿಗರಿಗೂ ಬರುವುದಿಲ್ಲ.

ಯೋಚಿಸಿ, ಕೇವಲ ನಾಮಫಲಕಗಳಿಂದ ಕನ್ನಡ ಉದ್ಧಾರವಾಗುವುದೇ?

ಈ ಹೋರಾಟಗಾರರ ಹೋರಾಟದ ಕೆಲವು ಸ್ಯಾಂಪಲ್ಲುಗಳನ್ನು ನೋಡಿ, ಇಂಗ್ಲಿಷ್ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿಯುವುದು, ಐ.ಟಿ ಕಂಪೆನಿಗಳು ಕನ್ನಡಿಗರಿಗೆ ಉದ್ಯೋಗ ಕೊಡಬೇಕೆಂದು ಪ್ರದರ್ಶನ ಏರ್ಪಡಿಸುವುದು, ಭಾರೀ ನಿರೀಕ್ಷೆಯಲ್ಲಿರುವ ತಮಿಳು/ತೆಲುಗು ಸಿನೆಮಾದ ಪ್ರದರ್ಶನವನ್ನು ಬಂದ್ ಮಾಡಿಸುವುದು, ಬೆಳಗಾವಿಯ ಮರಾಠಿ ಹೋರಾಟಗಾರರು ಕೈಗೆ ಸಿಕ್ಕಿದಾಗ ಅವರ ಮುಖಕ್ಕೆ ಮಸಿ ಬಳಿಯುವುದು ಇನ್ನು ಇಂತಹುದೇ ಮಾದರಿಯ ಚಳವಳಿಗಳನ್ನು ಆಗಾಗ್ಗೆ ತಮ್ಮ ಕ್ಯಾಲೆಂಡರ್ ಪ್ರಕಾರ ಮಾಡುವುದು. ಒಟ್ಟಾರೆ ಇವರ ನಡುವಳಿಕೆ ನಮ್ಮ ಇತರೆ ಅಲ್ಪಜ್ಞ ರಾಜಕಾರಣಿಗಳಂತೆಯೇ ಬೆಂಗಳೂರೇ ಕರ್ನಾಟಕವೆಂದುಕೊಂಡತೆಯೇ ಇದೆ. ಅಲ್ಲ, ಬೆಂಗಳೂರು ಕನ್ನಡಿಗರು ತಮಿಳು/ತೆಲುಗು ಕಲಿತು ತಮ್ಮ ಭಾಷಾ ಪ್ರೌಢಿಮೆ ಮೆರೆಯುತ್ತಿದ್ದರೆ ಅದಕ್ಕೆ ತೆಲುಗರು ತಮಿಳರು ಕಾರಣರೇ ಇಲ್ಲಾ ಆ ಭಾಷೆಯ ಚಲನಚಿತ್ರಗಳು ಕಾರಣವೆ? ಈ ಹೋರಾಟಗಾರರಿಗೆ ಕರ್ನಾಟಕದ ಇತರೆ ಪಟ್ಟಣಗಳಾದ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಹುಬ್ಬಳ್ಳಿ, ಮಂಗಳೂರು, ಬಿಜಾಪುರ ಮತ್ತಿತರೆ ಪಟ್ಟಣಗಳಲ್ಲಿ ವಾಸವಾಗಿರುವ ಮಾರ್ವಾಡಿಗಳು, ತೆಲುಗರು, ತಮಿಳರು, ಮರಾಠಿಗರು, ಸುಲಲಿತವಾಗಿ ಕನ್ನಡ ಮಾತನಾಡುತ್ತ ಕನ್ನಡದವರೇ ಆಗಿ ಇಲ್ಲಿಯೇ ಜೀವನವನ್ನು ಕಂಡುಕೊಂಡು, ಕನ್ನಡ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸುತ್ತಿರುವುದು ಕಣ್ಣಿಗೆ ಕಾಣದೇ? ಕರ್ನಾಟಕದಲ್ಲಿ ವ್ಯಾಪಕವಾಗಿ ಕನ್ನಡದವರೇ ಆಗಿಹೋಗಿರುವ ಸವಿತಾ ಸಮಾಜದ ತೆಲುಗು ಭಾಷಿಗರು, ಮರಾಠಿ ಮನೆಮಾತಿನ ದರ್ಜಿಗಳು, ತಮಿಳು ಮನೆಮಾತಿನ ಐಯಂಗಾರರು...ಇನ್ನು ಅನೇಕರು ಬೆಂಗಳೂರು ಕನ್ನಡಿಗರಿಗಿಂತ ಹೆಚ್ಚಾಗಿ ಕನ್ನಡದವರೇ ಆಗಿಲ್ಲವೆ?

ಈ ಸಮಸ್ಯೆ ಬೆಂಗಳೂರಿನಲ್ಲೇ ಏಕಿದೆ? ಇದಕ್ಕೆಲ್ಲ ಮೂಲ, ಬೆಂಗಳೂರೇ ಕರ್ನಾಟಕ, ಬೆಂಗಳೂರು ಸಮಸ್ಯೆ ಕರ್ನಾಟಕದ ಸಮಸ್ಯೆ ಎಂದುಕೊಂಡಿರುವ ಅಲ್ಪ ದೃಷ್ಟಿಯ ರಾಜಕಾರಣೀ ಹೋರಾಟಗಾರರು, ಮೂಲತಃ ಕನ್ನಡಿಗರಾಗಿ ಯಾರಾದರೂ ಕನ್ನಡದಲ್ಲಿ ಮಾತನಾಡಿಸಿದರೆ ’ಐ ಡೋಂಟ್ ನೊ ಕನ್ನಡ’ ಎಂಬ ಬೆಂಗಳೂರು ಕನ್ನಡಿಗರು, ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆಂದು ಬೆಂಗಳೂರಿನ ಸೂಪರ್ ಮೇಯರ್ ಅಂತೆ ವರ್ತಿಸುತ್ತ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳು ಹಾಕಿಕೊಟ್ಟ ಪೀಠಿಕೆ, ಕೊಟ್ಟ ಕೆಲಸ ಮಾಡಲಾಗದೆ ನೆಪ ಹೇಳಿ ತಪ್ಪಿಸಿಕೊಳ್ಳುವ ಸೋಮಾರಿ ಕನ್ನಡಿಗ ನೌಕರರು, ಪ್ರತಿಯೊಬ್ಬ ರಾಜಕಾರಣಿಯೂ ಬೆಂಗಳೂರಿನ ತಲೆಹಿಡಿಯುತ್ತ, ಉತ್ತರ ಭಾರತದ ತಮ್ಮ ತಮ್ಮ ಪಕ್ಷಗಳ ಮರಿ,ಪುಡಿ,ಪುಂಡ ರಾಜಕಾರಣಿಗಳಿಗೆಲ್ಲ ಬೆಂಗಳೂರಿನಲ್ಲಿ ಸೈಟ್ ಕೊಡಿಸುವ ವ್ಯವಹಾರಗಳನ್ನು ಮಾಡುತ್ತ ಬೆಂಗಳೂರನ್ನು ಮಾರುತ್ತಿರುವುದರ ಪರಿಣಾಮವೇ ಇಂದಿನ ಬೆಂಗಳೂರು ಮತ್ತದರ ಅಲ್ಪಸಂಖ್ಯಾತನಾದ ಕನ್ನಡಿಗನ ಸಮಸ್ಯೆ.

ದೂರದಲ್ಲೆಲ್ಲೋ ಸುನಾಮಿ ಬಂದಾಗ, ಅಮೇರಿಕಾದಲ್ಲಿ ಕಟ್ರೀನಾ ಬೀಸಿದಾಗ, ಪಾಕಿಸ್ತಾನದಲ್ಲಿ ಭೂಕಂಪವಾದಾಗ ತಮ್ಮ ಮನೆಯಲ್ಲೇ ಯಾರೋ ಸಂಕಷ್ಟಕ್ಕೆ ಬಿದ್ದಂತೆ ಚಡಪಡಿಸುವ ಬೆಂಗಳೂರಿಗರಿಗೆ ಶತಮಾನದಿಂದಲೂ ಬರ ಬಿದ್ದೋ ಇಲ್ಲ ನೆರೆ ಬಂದೋ ಮನೆ ಮಠ ಕಳೆದುಕೊಂಡು ಗುಳೇ ಹೋಗುತ್ತಿರುವ ಉತ್ತರ ಕರ್ನಾಟಕದವರ ಕಷ್ಟ ಕಾಣದೇ? ಇಪ್ಪತ್ತೊಂದನೇ ಶತಮಾನದಲ್ಲೂ ಹದಿನೆಂಟನೇ ಶತಮಾನದಂತಿರುವ ಮಧ್ಯ / ಉತ್ತರ ಕರ್ನಾಟಕವು ಅಭಿವೃದ್ಧಿಯ ಪರಿಚಯವೂ ಇಲ್ಲದೆ ಹಾಳು ಸುರಿಯುತ್ತಿರುವುದು ಕಾಣದೆ? ಬೆಂಗಳೂರಿಗರು ಅತ್ತ ಸುಳಿದಿದ್ದರೆ ತಾನೆ ಕಾಣುವುದು? ಬೆಂಗಳೂರು ಕನ್ನಡಿಗರು ತಮ್ಮ ತಮ್ಮ ನೆರೆಹೊರೆಯಲ್ಲಿರುವ ಕನ್ನಡಿಗರೊಂದಿಗೆ ಇಂಗ್ಲಿಷ್ ನಲ್ಲಿ ಮಾತನಾಡುತ್ತ, ದರ್ಶಿನಿ ಹೋಟೆಲ್ಲಿಗೆ ಹೋಗಿ ಅಲ್ಲಿನ ಬಡಪಾಯಿ ಕನ್ನಡ ಸಪ್ಲೈಯರ್ ಗೆ ಇಂಗ್ಲಿಷ್ ನಲ್ಲಿ ಆರ್ಡರ್ ಮಾಡುವ ಇವರು, ಗರುಡಾ ಮಾಲ್ ಇಲ್ಲ ಬ್ರಿಗೇಡ್ ನ ಪಬ್ ಗಳಿಗೆ ಹೋಗಿ ದಿಢೀರನೆ ಕನ್ನಡಿಗರಾಗಿ ಬಿಡುತ್ತಾರೆ. ಇಲ್ಲಾ, ಲೀಲಾ ಪ್ಯಾಲೇಸ್ ಗೆ ಹೋಗಿ ಅಲ್ಲಿನ ಕನ್ನಡ ಬಾರದ ವ್ಹೇಟರ್ ಗಳಿಗೆ ಕನ್ನಡದಲ್ಲಿ ಆಜ್ಞಾಪಿಸುವ ಇವರು, ಇದೀಗ ಬೆಂಗಳೂರಿಗೆ ಕಷ್ಟ ಬಂದೊಡೆ, ಅದು ಕನ್ನಡದ ಕಷ್ಟ, ಕರ್ನಾಟಕದ ಕಷ್ಟ ಅಂದರೆ ಹೇಗೆ? ಇದನ್ನೆಲ್ಲ ನೋಡಿ ಬೇಸತ್ತ ಕರ್ನಾಟಕ ಏಕೀಕರಣದ ಹೋರಾಟಗಾರ ಪಾಟೀಲ ಪುಟ್ಟಪ್ಪನವರೇ ಉತ್ತರ ಕರ್ನಾಟಕವನ್ನು ವಿಭಜಿಸಿ ಬೇರೆ ರಾಜ್ಯ ಬೇಡುವ ಸ್ಥಿತಿಗೆ ಬಂದಿದ್ದರೆ, ಅದನ್ನು ಸರಿಯಾಗಿ ಗ್ರಹಿಸುವ ಶಕ್ತಿಯೇ ಇಲ್ಲದ ಕನ್ನಡ ಹೋರಾಟದ ಕಾಂಟ್ರ್ಯಾಕ್ಟರರುಗಳು ಅವರನ್ನು ’ಕನ್ನಡದ್ರ್‍ಓಹಿ’ ಎಂದು ಕರೆದು ಅವರ ವಿರುದ್ಧ ಬೆಂಗಳೂರಿನಲ್ಲಿ ಮೆರವಣಿಗೆ ಮಾಡಲಿಲ್ಲವೆ?
ಇನ್ನು ಕನ್ನಡ ರಾಜಕಾರಣಿಗಳೋ ಆ ಕನ್ನಡಮ್ಮನಿಗೇ ಪ್ರೀತಿ. ಯಾವೊಬ್ಬ ರಾಜಕಾರಣಿಯಾಗಲಿ ತನ್ನ ಮುಂದಿನ ಎರಡು ವರ್ಷಗಳ ಯೋಜನೆಗಳ ಬಗ್ಗೆ ಒಂದು ನೀಲಿನಕಾಶೆ ತೋರಿಸೆಂದರೆ ಸೋಮಯಾಜಿಯೋ, ಜೈನ್ ವೊ, ನಾಡಿಶಾಸ್ತ್ರದವನ ಬಳಿಯೋ ಇಲ್ಲವೇ ಹಾರನಹಳ್ಳಿ ಮಠದಲ್ಲಿ ಹೊತ್ತಿಗೆ ತೆಗೆಸಲೋ ಓಡುವ, ಇಲ್ಲವೇ ನಮ್ಮದೆಲ್ಲ ಹೈಕಮ್ಯಾಂಡ್ ಹೇಳಿದಂತೆ ಎಂದು ತಲೆಯಾಡಿಸುವವರೇ ಆಗಿದ್ದಾರೆ. ಅಂತಹ ಅತಿರಥ ಮಹಾನಟ ಡಾ: ರಾಜ್ ಅವರೇ ತಮ್ಮ ಬಕ್ಕತಲೆಯನ್ನು ಮುಚ್ಚಿಕೊಳ್ಳದೆ ತೋರುತ್ತಿದ್ದರೆ, ಈ ಜನಸೇವಕ ನಂ. ೧ ಮುಖ್ಯಮಂತ್ರಿ ತಮ್ಮ ನೈಜ ರೂಪ ತೋರದೆ, ವಿಗ್ ಹಾಕಿ ತಲೆ ಮುಚ್ಚಿಕೊಳ್ಳುತ್ತಿರುವುದನ್ನು ನೋಡಿದರೆ ಅರ್ಥವಾಗದೇ ಇವರೆಷ್ಟು ಮುಕ್ತ ಮನಸ್ಸಿನವರೆಂದು? ಅದೇ ರೀತಿಯ ಫೋಟೋ ಪ್ರಿಯ ವಾಟಾಳು ಯಾವತ್ತಾದರೂ ಟೋಪಿ ತೆಗೆದಿದ್ದುದು ನೋಡಿರುವಿರೇ? ತಮ್ಮ ತಮ್ಮ ರೂಪವನ್ನೇ ಎದುರಿಸಲಾಗದ ಈ ಸುರಸುಂದರಾಂಗರು ಇನ್ನು ನಾಡಿನ ಸಮಸ್ಯೆಗಳನ್ನು ಎದುರಿಸುವರೇ? ಇನ್ನು ಕ.ರ.ವೇ ಎಂಬ ಕನ್ನಡ ಹೋರಾಟಗಾರರ ಸಂಘವು ಶುರುವಾಗುತ್ತಿದ್ದಂತೆಯೇ ಅವರ ಬಣ, ಇವರ ಬಣ, ಮಗದೊಬ್ಬರ ಬಣವೆಂದು ವಿಭಜನೆಗೊಂಡು ಕನ್ನಡಿಗರ ಒಗ್ಗಟ್ಟಿನ ಪ್ರದರ್ಶನ ನೀಡಲಿಲ್ಲವೇ? ಇಂದು ಇಂಜಿನಿಯರಿಂಗ್ ನ ಯಾವುದೇ ವಿಷಯದಲ್ಲಿ ಪದವಿ ಪಡೆದ ರಾಜ್ಯದೆಲ್ಲೆಡೆಯ ಯುವಕರು ನೌಕರಿ ಪಡೆಯಬೇಕಾದರೆ ಬೆಂಗಳೂರಿಗೇ ಗುಳೇ ಹೋಗಬೇಕಾದಂತಹ ಸ್ಥಿತಿ ರಾಜ್ಯದ ತುಂಬೆಲ್ಲಾ ಇರಲು ಯಾರು ಕಾರಣರು? ಸೋನಿಯಾ ನಮ್ಮ ಮನೆ ಸೊಸೆ ಎನ್ನುತ್ತ ತಮ್ಮ ಪುತ್ರನೋ / ಪುತ್ರಿಯೋ ಅಂತರ್ಜಾತೀಯ ವಿವಾಹವಾದರೆ ಅವರನ್ನು ಕೊಲ್ಲುತ್ತೇವೆನ್ನುವ, ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟಿಸೆಂದು ಸಾಮರಸ್ಯದ ಪಾಠ ಹೇಳಿ ಓಟು ಬಾಚಿಕೊಳ್ಳುತ್ತ ಅಧಿಕಾರ ನನ್ನ ಪುತ್ರರಿಗೆ ಮಾತ್ರವೆನ್ನುವ, ಒಟ್ಟಿನಲ್ಲಿ ದೇಶ ಹಾಳಾಗಲಿ, ನಮ್ಮ ಮನೆ ಹಾಳಾಗಬಾರದೆಂಬ ಶೂನ್ಯ ದೇಶಾಭಿಮಾನಿ ನಾಯಕರುಗಳೂ ಜನರೂ ಇರುವವರೆಗೆ ದೇಶ, ಭಾಷೆ, ಸಂಸ್ಕೃತಿಯ ಉದ್ಧಾರ ಆಗುವುದೆ?

ಮಸಿ ಬಳಿಯುವುದಾದರೆ, ಬಳಿಯಬೇಕಾದ್ದು ನಮ್ಮ ನಾಯಕರುಗಳಿಗೇ ವಿನಹ ಮರಾಠಿಗರಿಗಲ್ಲ ಅಥವ ಕನ್ನಡ ಫಲಕ ತೂಗುಹಾಕದೇ ಇರುವ ಬ್ರಿಗೇಡ್/ ಎಮ್.ಜಿ. ರೋಡಿಗರಿಗಲ್ಲ. ಬಳಿಯಬೇಕಾದ್ದು ತಮ್ಮ ತಮ್ಮ ಹೈಕಮ್ಯಾಂಡ್ ಗಳನ್ನು ಮೆಚ್ಚಿಸಲು ರಾತ್ರೋರಾತ್ರಿ ಕಾವೇರಿ ನೀರು ಬಿಡುವ ಕನ್ನಡ ಮಂತ್ರಿಗಳಿಗೆ, ತಮ್ಮ ಸಂಸಾರವನ್ನು ಎಲ್ಲೋ ಬಿಟ್ಟು ತನ್ನ ರಾಜ್ಯಕ್ಕೆ ಉತ್ತಮ ರಸ್ತೆಗಳನ್ನು ಕೊಡಬೇಕೆಂದು ಬಂದಿರುವ ಕನ್ನಡಿಗನ ಕಾಲೆಳೆಯುವ ಕನ್ನಡದ ಮಣ್ಣಿನ ಮಗನಿಗೆ, ಕನ್ನಡ ಸಿನೆಮಾ ಎನ್ನುತ್ತ, ಸಂಪೂರ್ಣ ಪರಕೀಯ ಸಂಸ್ಕೃತಿಯನ್ನು ಮೆರೆಸುವ ಕನ್ನಡ ಚಿತ್ರರಂಗದ ಕನ್ನಡ ಕಂದಮ್ಮಗಳಿಗೆ.

ಇದನ್ನು ಬಿಡಿ, ಕೇವಲ ಭಾಷೆಯ ಬಗ್ಗೆ ಹೋರಾಡಿದರೆ ಸಾಕೆ? ನಮ್ಮ ಸಂಸ್ಕೃತಿ ಪರಂಪರೆಯ ಸ್ಮಾರಕಗಳಿಗೆ ಹೋರಾಡುವವರ್‍ಯಾರು? ಇಂದು ಹಂಪಿಯ ಐತಿಹಾಸಿಕ ಸ್ಮಾರಕವೊಂದರ ಮೇಲೆ ಹಸಿರು ಬಾವುಟದ ಪ್ರಾರ್ಥನಾ ಧ್ವಜವೆದ್ದಿರುವುದು, ಬಾದಾಮಿಯ ಕೋಟೆಯ ಮೇಲೆ ಕಟ್ಟಿರುವ ಇದೇ ರೀತಿಯ ಇನ್ನೊಂದು ಕಟ್ಟಡ (ಇಲ್ಲಿ ಟಿಪ್ಪು ಕಟ್ಟಿಸಿರುವ ಐತಿಹಾಸಿಕ ಮಸೀದಿಯೊಂದಿದ್ದು, ಅದು ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತದಂತೆ ಕಂಗೊಳಿಸುತ್ತಿದೆ. ಇದರ ಬಗ್ಗೆ ನಾನು ಹೇಳುತ್ತಿಲ್ಲ.) ಹಾಗೆಯೇ ಬಿಜಾಪುರದ ಸುಲ್ತಾನರು ಕಲಾಪೋಷಕರಾಗಿ, ತಮ್ಮ ಆಸ್ಥಾನದಲ್ಲಿದ್ದ ಉತ್ತಮ ಸಂಗೀತ ಕಲಾವಿದರುಗಳ ಸಂಗೀತವನ್ನು ಸವಿಯಲು ವಾಸ್ತುಶಿಲ್ಪದ ಆಶ್ಚರ್ಯವೇ ಎನ್ನುವಂತಹ ರಂಗಮಂದಿರವಾಗಿ ಕಟ್ಟಿಸಿರುವ ಗೋಲ್ ಗುಂಬಜ್ ನ ಮೂಲ ಉದ್ದೇಶವನ್ನು ಮರೆಮಾಚಿ, ಇಲ್ಲಿ ಒಮ್ಮೆ ಕೂಗಿದರೆ ಏಳು ಬಾರಿ ಪ್ರತಿಧ್ವನಿಸುತ್ತದೆಂಬ ಸಂಗತಿಯನ್ನೇ ಏಖಾಂಶ ಮಾಡಿ ನಮ್ಮ ಮಕ್ಕಳಿಗೆ ಬೋಧಿಸಿ, ಅದನ್ನೋದಿದ ಜನರು ಗುಂಬಜ್ ಗೆ ಭೇಟಿ ನೀಡಿ ’ಕುರ್‍ಯೋ’ ’ಮರ್‍ಯೋ’ ಎಂದು ಕರ್ಕಶವಾಗಿ ಕಿರುಚುವುದನ್ನು ಕೇಳಿ, ಮುಂದಿನ ಪೀಳಿಗೆ ಇಲ್ಲಿ ಸದಾ ಸಂಗೀತೋತ್ಸವವನ್ನು ಆಚರಿಸಲೆಂದು ಅದನ್ನು ಕಟ್ಟಿಸಿದ ಸುಲ್ತಾನರು ಗೋರಿಯಲ್ಲೇ ತಮ್ಮ ತಲೆಯನ್ನು ಚಚ್ಚಿಕೊಳ್ಳುತಿರಬಹುದು. ಇನ್ನು ಈ ರಂಗಸ್ಥಳದಲ್ಲಿ ಸರ್ಕಾರವೇ ಕೃತಕ ಸಮಾಧಿಗಳನ್ನು ಪ್ರತಿಷ್ಟಾಪಿಸಿ ಇದರ ಐತಿಹಾಸಿಕ ಪರಂಪರೆಗೆ ಚ್ಯುತಿ ತಂದಿರುವುದಕ್ಕೆ ಏನು ಹೇಳೋಣ (ಮೂಲ ಸಮಾಧಿಗಳು ನೆಲಮಾಳಿಗೆಯಲ್ಲಿವೆ)... ಈ ರೀತಿಯ ಇನ್ನು ಹತ್ತು ಹಲವಾರು ಅಭಾಸಗಳನ್ನು ತೊಡೆದು ರಕ್ಷಿಸುವವರ್‍ಯಾರು. ಹಂಪಿಯಂತಹ ಪ್ರಮುಖ ಐತಿಹಾಸಿಕ ಪರಂಪರೆಯ ಪಳೆಯುಳಿಕೆಗಳು ಮೂತ್ರಿಗಳಾಗಿ, ಪಾಯಿಖಾನೆಗಳಾಗಿ ಉಪಯೋಗಿಸಲ್ಪಡುತ್ತಿರುವಾಗ, ಇನ್ನು ಹಂಪಿಯಷ್ಟು ವಿಶೇಷವಿಲ್ಲದ ನಮ್ಮ ಇತರೆ ಐತಿಹಾಸಿಕ ಸ್ಮಾರಕಗಳ ಸ್ಥಿತಿಗತಿಗಳ ಕುರಿತಂತೂ ಹೇಳುವುದೇ ಬೇಡ. ಅವುಗಳೆಲ್ಲ ಇನ್ನೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಕಟ್ಟಿಸಿದ್ದ ವೀರ ಕನ್ನಡಿಗರ ಪ್ರೇತಾತ್ಮಗಳೂ ಅವುಗಳನ್ನು ನೋಡಿ, ನೇಣು ಹಾಕಿಕೊಳ್ಳಬೇಕಾದಂತಹ ಸ್ಥಿತಿಯಲ್ಲಿವೆ.
ಚಿತ್ರ: ಹಂಪಿ ವಿರುಪಾಕ್ಷೇಶ್ವರನ ಆವರಣದಲ್ಲಿಯೇ ಇರುವ ಒಂದು ಸ್ಮಾರಕದ ಸ್ಥಿತಿ. ಬಹುಶಃ ಅರ್ಚಕರ / ಕಾವಲುಭಟನ ವಾಸಸ್ಥಳವಾಗಿದ್ದಿರಬಹುದು.

ಇದಕ್ಕೆಲ್ಲ ಪರಿಹಾರ ಬೇಡವೆ? ಕಡೇ ಪಕ್ಷ, ಈ ಉದ್ದೇಶದಿಂದ ವಸ್ತುನಿಷ್ಟವಾಗಿ ದನಿ ಎತ್ತಿರುವ ಚಿದಾನಂದಮೂರ್ತಿಗಳನ್ನು ’ಚಡ್ಡಿ’ ಎಂದು ನಮ್ಮ ಕನ್ನಡ ಮುಖಂಡರೇ ಬ್ರ್ಯಾಂಡಿಸುತ್ತಿರುವುದರ ವಿರುದ್ಧವೆಂದಾದರೂ ಚಿದಾನಂದಮೂರ್ತಿಗಳ ಕಳಕಳಿಯನ್ನು ಎತ್ತಿ ಹಿಡಿದು ಅವರಾಸೆಗೆ ಒತ್ತಾಸೆಯಾಗಿದ್ದಾರೆಯೆ ಕನ್ನಡ ಹೋರಾಟಗಾರರು? ಬಹುಶಃ ತಮ್ಮ ಚಡ್ಡಿಯೊಳಗಿರಬೇಕಿದ್ದ ಪ್ರಮುಖ ಆಂಗಗಳನ್ನು ಕಳೆದುಕೊಂಡಿರುವ ಅಸೂಯೆ ಅವರನ್ನು ಭಾದಿಸುತ್ತಿರಬೇಕು.

ಎರಡನೇ ಪುಲಕೇಶಿ ಮರಾಠಿಗನೆಂದು ಐತಿಹಾಸಿಕವಾಗಿ ದಾಖಲಾಗಿರುವ ಸಂಗತಿಯಿದ್ದು, ಇತಿಹಾಸವನ್ನು ಕೊಂಚ ಆಳವಾಗಿ ಓದಿದವರಿಗೆ ಅವನು ಕನ್ನಡಿಗನೋ ಮರಾಠಿಗನೋ ಎಂಬ ಸಂದೇಹ ಬರುವಂತಿದ್ದರೂ, ಇದರ ಪರಿವೆಯೇ ಇಲ್ಲದಿರುವಂತಿರುವುದು, ವಿಜಯನಗರದ ಕೃಷ್ಣದೇವರಾಯ ಇಂದಿನ ರಾಜಕಾರಣಿಗಳಂತೆ ಅಂದೇ ಕನ್ನಡಿಗರಿಗೆ ನಾನು ಕನ್ನಡಿಗನೆಂದೂ ಅತ್ತ ತೆಲುಗರಿಗೆ ’ದೇಸಭಾಷಲಂದು ತೆಲುಗು ಲೇಸ’ (ದೇಶಭಾಷೆಗಳಲ್ಲೆಲ್ಲ ತೆಲುಗು ಲೇಸು) ಎಂದಿರುವುದು...ಪಟ್ಟಿ ಬೆಳೆಯುತ್ತಾ ಹೋಗುತ್ತದೆ ಸರಿಪಡಿಸಬೇಕಾದ ಇತಿಹಾಸದ ಸಂಗತಿಗಳದ್ದು ಮತ್ತು ಕನ್ನಡಕ್ಕೊಂದು ಸರಿಯೆನ್ನಿಸುವಂತಹ ಕಾಯಕಲ್ಪ ಸೃಷ್ಟಿಸಬೇಕಾದ ಅನಿವಾರ್ಯತೆಯದ್ದು. ಇಂತಹ ವಿಷಯಗಳನ್ನೆಲ್ಲಾ ಮರೆತು ನಮ್ಮ ಸಂಶೋಧಕ ಸಾಹಿತಿ ವರ್ಗವೂ ಕೂಡ ಬಸವಣ್ಣನ ಮೂಲದಂತಹ ಇಲ್ಲದ ವಿವಾದಗಳನ್ನು ಸೃಷ್ಟಿಸುವ ವಿಷಯಗಳಲ್ಲಿ ಮಗ್ನರಾಗಿರುವುದು.. ಇವುಗಳಿಗೆಲ್ಲಾ ಕನ್ನಡ ಹೋರಾಟ ಬೇಡವೇ?

ಕನ್ನಡವು ಹೆಚ್ಚಿನ ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿ, ಸಾಹಿತ್ಯಿಕವಾಗಿ ಮುಂಚೂಣಿಯಲ್ಲಿದ್ದ ಬೆಂಗಾಳಿ, ಮರಾಠಿ ಭಾಷೆಗಳನ್ನು ಹಿಂದಿಕ್ಕಿ ಮುನ್ನುಗ್ಗಿರುವಾಗಿ, ನಮಗೇಕೆ ಬೇಕು ಈ ಶಾಸ್ತ್ರ್‍ಈಯ ಭಾಷೆಯ ಭಿಕ್ಷೆ? ಪ್ರತಿಯೊಂದು ಪ್ರಶಸ್ತಿ / ಸ್ಥಾನಮಾನಗಳಿಗೆ ಅರ್ಜಿ ಹಾಕಿ, ಮರ್ಜಿ ಹಿಡಿಯಬೇಕಾದ ಇಂದಿನ ಪರಿಸ್ಥಿಯಲ್ಲಿ ಅವುಗಳೆಲ್ಲ ತಲೆಹಿಡುಕರ ಪಾಲಾಗುತ್ತಿರುವುದು ಕಣ್ಣೆದುರೇ ಕಾಣುತ್ತಿರುವಾಗ ನಾವೇಕೆ ಅದಕ್ಕೆ ಹೋರಾಡಿ ಅಂತಹವರೆನ್ನಿಸಿಕೊಳ್ಳಬೇಕು? ಸಾಹಿತ್ಯ ಕ್ಷೇತ್ರದ ಮೇರು ಶಿಖರದಲ್ಲಿರುವ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನವನ್ನು ಕೇಂದ್ರವು ಅಂಗೀಕರಿಸದಿದ್ದರೆ ಅದು ಕೇಂದ್ರ ಸರ್ಕಾರವು ನಾಚಿಕೆ ಪಡಬೇಕಾದ ವಿಷಯವೇ ಹೊರತು ಕನ್ನಡಿಗರಲ್ಲ.

ಹೋರ್‍ಆಟ ಬೇಕಿರುವುದು ಕರ್ನಾಟಕದ ನಿಜ ಏಕೀಕರಣಕ್ಕೆ. ಕೊಡವರು, ಕೊಂಕಣರು, ಡೆಂಕಣರು ನಮ್ಮವರೆಂದು ಭರವಸೆ ಮೂಡಿಸುವುದಕ್ಕೆ, ಕರ್ನಾಟಕದ ಸಮತೋಲನದ ಬೆಳವಣಿಗೆಗೆ, ಸಮಗ್ರ ಕರ್ನಾಟಕದ ಸಮೃದ್ಧಿಗೆ, ನಮ್ಮ ಸಂಸ್ಕೃತಿಯ ರಕ್ಷಣೆಗೆ.

ಕರ್ನಾಟಕ ಏಕೀಕರಣಗೊಂಡು ಅದೆಷ್ಟೋ ವರ್ಷಗಳೇ ಕಳೆದು ಆಂದು ಅಂದುಕೊಂಡ ಕನಸುಗಳೆಲ್ಲ ಇನ್ನೂ ಕನಸಾಗಿರುವುದಕ್ಕೆ ನಮಗೆ ನಾವೇ ಮಸಿ ಬಳಿದುಕೊಳ್ಳೋಣ.

ಅಣಕ:

ಮೊನ್ನೆ ಅರೇಕಲ್ ಎಂಬ ಸಂಸ್ಥೆಯ ನೌಕರರು ಮುತ್ತೆತ್ತಿಯಲ್ಲಿ ಕ್ಯಾಂಪ್ ಮಾಡಿ, ಪ್ಲಾಸ್ಟಿಕ್ ಮತ್ತಿತರೆ ತ್ಯಾಜ್ಯ ವಸ್ತುಗಳನ್ನು ಆರಿಸಿ ಸ್ವಚ್ಚಗೊಳಿಸಿದರೆಂದು ಓದಿ ಖುಷಿಗೊಂಡೆ. ನಂತರ ಇದ್ಯಾವುದಪ್ಪ, ಅರೇಕಲ್ ಸಂಸ್ಥೆ? ಪರವಾಗಿಲ್ಲ ಯಾರೋ ಕನ್ನಡಿಗರೋ, ಕೇರಳಿಗರೋ, ತಮಿಳರೋ ತಮ್ಮ ಹಳ್ಳಿಯ (ಆನೇಕಲ್, ಮೂರ್ಕಲ್, ಇಳಕಲ್ ನಂತೆ) ಹೆಸರಲ್ಲೇ ತಂತ್ರಜ್ಞಾನ ಸಂಸ್ಥೆ ಸ್ಥಾಪಿಸಿ ಸ್ಥಳೀಯ ಹೆಸರನ್ನು ಮೆರೆಸಿದ್ದಾರೆ ಎಂದು ಹೆಮ್ಮೆ ಪಡುತ್ತ ಇದು ಮಲಯಾಳೀ ಊರೋ ಕೊಡಗಿನ ಹಳ್ಳಿಯೋ ಕಂಡುಕೊಳ್ಳಬೇಕೆಂದು ಎಷ್ಟು ಹುಡುಕಿದರೂ ಈ ಸಂಸ್ಥೆಯ ಜಾತಕ ದೊರೆಯದಾಯಿತು. ಕಡೆಗೆ ಅದರ ಮೂಲಕ್ಕಿಂತ ಆ ಸಂಸ್ಥೆ ಸ್ಥಳೀಯತೆಯನ್ನು ಮೆರೆಸಿರುವುದು ಮುಖ್ಯವೆಂದು ಇದರ ಕುರಿತು ನನ್ನ ಸ್ನೇಹಿತರ ಮುಂದೆ ಕೊಚ್ಚಿಕೊಂಡು, ಕಡೆಗಾದರೂ ಒಂದು ಅಪ್ಪಟ ದೇಸೀ ಹೆಸರಿನ ತಂತ್ರಜ್ಞಾನ ಸಂಸ್ಥೆಯೊಂದಿದೆಯಲ್ಲ ಎಂದಾಗ, ಅವರು ಕೊಂಚ ಆಲೋಚಿಸಿ ನಂತರ ನನ್ನೆಡೆಗೆ ಮುಸಿಮುಸಿ ನಕ್ಕರು. ಇದು ಪ್ರಖ್ಯಾತ ಒರ್‍ಯಾಕಲ್ ಸಂಸ್ಥೆಯ ಬೆಂಗಳೂರಿನ ಕಟ್ಟಡದ ಮೇಲಿರುವ ಕನ್ನಡ ನಾಮಫಲಕ ’ಅರೇಕಲ್’ ಎಂದು ಸಾರುತ್ತಿರುವುದೆಂದು ಅವರು ಹೇಳಿದಾಗ ಏನೇನೋ ಯೋಚಿಸಿದ್ದ ನನಗೆ ಪೆಚ್ಚಾಯಿತು.

ಬೇಕೇ ನಮಗೆ ಈ ರೀತಿಯ ಕನ್ನಡ ಫಲಕ?

ಮತ್ತೊಂದು ರಾಜ್ಯೋತ್ಸವ

ಮತ್ತೊಂದು ರಾಜ್ಯೋತ್ಸವ ಬರುತ್ತಿದೆ. ಬಹುಶಃ ಅಣ್ಣಮ್ಮ ದೇವಿ ಕನ್ನಡ ಸಂಘದವರು ಈ ಸಾರಿ ಕೂಡ ಚಂದಾ ಎತ್ತಿ ಆರ್ಕೆಸ್ಟ್ರಾ ಹೂಡಿಸಿ ’ಮಾರಿ ಕಣ್ಣು ಹೋರಿ ಮ್ಯಾಗೆ, ನನ್ನ ಕಣ್ಣು ನಿನ್ನ ಮ್ಯಾಗೆ’ ಎಂದು ತಮ್ಮ ತಮ್ಮ ಕೇರಿಯ ಹುಡುಗಿಯರಿಗೆ ಸಂದೇಶ ಕಳುಹಿಸಿ ಕುಣಿದು ಕುಪ್ಪಳಿಸುವ ಕನಸು ಕಾಣುತ್ತ, ಯಾರಾದರೂ ಅಡ್ಡ ಬಂದರೆ ’ಹೊಡಿ ಮಗಾ, ಹೊಡಿ ಮಗಾ’ ಎಂದು ಮಟ್ಟ ಹಾಕಿ ’ರಾಜ್ಯೋಸ್ತವ’ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರಬಹುದು.

ಹಾಗೆಯೇ ಯೋಚಿಸಿ ನೋಡಿ, ಈ ’ರಾಜ್ಯೋಸ್ತವ’ಕ್ಕೆ ಕನ್ನಡ ಚಿತ್ರರಂಗದ ಕೊಡುಗೆ ಅಪಾರ. ಕನ್ನಡಕ್ಕೆ ಹೊಸ ಹೊಸ ಚಿತ್ರ ವಿಚಿತ್ರ ಪದಪುಂಜಗಳಾದ ಪೆಟ್ರೋಮ್ಯಾಕ್ಸ್, ಢಗಾರ್, ಡೌವ್, ಉಡೀಸ್ ಇನ್ನೂ ಮುಂತಾದ ಪದಗಳನ್ನು ಸೇರಿಸಿ, ದ್ರಾವಿಡ ಮಕ್ಕಳೂ ಗಾಬರಿಯಾಗುವಷ್ಟು ಗಿರಿಜಾಮೀಸೆ, ಜರಿಪಂಚೆ ತೊಟ್ಟು, ಮಹಿಳೆಯರೂ ಅಸೂಯೆ ಪಡುವಷ್ಟು ಆಭರಣಭೂಷಿತರಾದ ನಾಯಕನಟನ ಗೆಟಪ್ ನಲ್ಲಿ ನಮ್ಮ ಸಾಹಸಸಿಂಹ, ರೆಬೆಲ್ ಸ್ಟಾರ್ ಅಷ್ಟೇ ಅಲ್ಲದೆ ಇತ್ತೀಚಿನ ಉಪ್ಪಿ ತುಪ್ಪಗಳೂ ಮೆರೆದು, ಕನ್ನಡಾಂಭೆಯ ಸಂಸ್ಕೃತಿ ಸೌರಭವನ್ನು ಶ್ರೀಮಂತಗೊಳಿಸಿದ್ದಾರೆ. ಕೆಲವು ಕನ್ನಡ ಚಿತ್ರಗಳ ಹೆಸರುಗಳನ್ನೇ ಗಮನಿಸಿ, ಮೆಂಟಲ್ ಮಂಜ, ಸೈಕಲ್ ನಂಜನೆಂದೋ, ಇಲ್ಲಾ, ಕುರಿಗಳು, ಕತ್ತೆಗಳೆಂದೋ ಅಥವಾ ಬರೀ ’ಶ್’ ಎಂದೂ ಉಸ್ಸಪ್ಪಾ ಎನಿಸುವರು.

ಉದಾಹರಣೆಗೆ ಈಗಷ್ಟೇ ಸುಪರ್ ಹಿಟ್ ಆದ ’ಮುಂಗಾರುಮಳೆ’ ಯನ್ನೇ ತೆಗೆದುಕೊಳ್ಳಿ. ನಾಯಕ ಫ್ರ್ಇಜ್ ನಿಂದ ಬಿಯರ್ ಬಾಟಲ್ ತೆಗೆಯುತ್ತ ತನ್ನ ಅಮ್ಮನಿಗೆ ತನ್ನಪ್ಪ ಹೇಗೆ ಕಾಳು ಹಾಕಿದನೆಂದು ಕೇಳುವುದನ್ನು ನೋಡಿದ ನನಗೆ ಕೊಂಚ ಕಸಿವಿಸಿಯಾಯಿತು. ಅರೆ ಇದೇನಪ್ಪಾ! ಕಾಳು ಹಾಕುವುದೆಂದರೆ? ಆಗ ಆ ನಾಯಕನ ಮಾತೆ ’ಸನ್ನಿ, ಅದೊಂದು ದೊಡ್ಡ ಕತೆ. ನನಗೊಂದು ವೊಡ್ಕಾ, ಜಿನ್ ಟಾನಿಕ್ ಬೆರೆಸಿ, ಡ್ರಿಂಕ್ ಮಾಡಿಕೊಂಡು ಬಾ. ಹಾಗೆಯೇ ಪಿಜ್ಜಾ ಡೆಲಿವರಿಗೆ ಫೋನ್ ಮಾಡಿಬಿಡು. ಎಲ್ಲಾ ಹೇಳುತ್ತೇನೆ’ ಎನ್ನುತ್ತಾಳೆಂದುಕೊಂಡೆ! ಸದ್ಯ, ಕಾಳು ತಿಂದ ಆ ಕೋಳಿ ತಾಯಿ ಹಾಗೆನ್ನಲಿಲ್ಲ. ಬಹುಶಃ ’ಮುಂಗಾರು ಮಳೆ-೨’ ರಲ್ಲಿ ಈ ಸೀನ್ ಇರಬಹುದು!

ಹೇಮಾವತಿಯ ಹಿನ್ನೀರು, ಜೋಗ, ಸಕಲೇಶಪುರದಂತಹ ಸ್ಥಳಗಳಲ್ಲಿ ಚಿತ್ರಿತವಾಗಿ ಕೊಡಗೆನ್ನುವ, ಕೊಡವರೆನ್ನುತ್ತ ಭಾಂಗ್ರಾ ಕುಣಿತ ಕುಣಿಯುವ, ಧಿಡೀರನೆ ಪಾಪ್ ಆಲ್ಬಮ್ ನಂತಹ ಹಾಡು ನೃತ್ಯಗಳು ಬಂದೆರಗಿ ಹಾಗೆಯೇ ಮಾಯವಾಗಿಬಿಡುವ, ಹಲ್ಲಂಡೆ ತಿರುಗುತ್ತ, ಹುಚ್ಚುಹುಚ್ಚಾಗಿ ಮಾತನಾಡುವುದೇ ಜೀವನ, ಎಂತಹುದೋ ಒಂದು ಹುಡುಗಿಯನ್ನು ಪ್ರೀತಿಸುವುದೇ ಜೀವನದ ಮಹತ್ತರ ಗುರಿ ಎಂಬುವ, ಹುಡುಗಿ ’ಅಯ್ಯೋ’ ಎಂದರೆ ಮದುವೆಯಾಗೆಂದು ಪೀಡಿಸುವ ಈ ಪರಿಯ ಸಿನಿಮಾವು ನೂರಿನ್ನೂರು ದಿನ ಓಡುತ್ತಿರುವುದೆಂದರೆ ಇದಕ್ಕಿಂತ ಕಡಿಮೆ ಓಡಿದ ಅಥವಾ ಡಬ್ಬ ಸೇರಿದ ಚಿತ್ರಗಳು ಹೇಗಿದ್ದವೆಂಬುದನ್ನು ಅವುಗಳನ್ನು ನೋಡಿದ ಚಿತ್ರಪ್ರೇಮಿಗಳೇ ಹೇಳಬೇಕು! ಇದ್ದುದರಲ್ಲಿ ಈಗ ಬರುತ್ತಿರುವ ಕನ್ನಡ ಚಿತ್ರಗಳಲ್ಲಿ ಇದು ಓ.ಕೆ. ಎನ್ನಬಹುದಾದ ಚಿತ್ರವೆಂದು ’ಹಾಳು ಊರಿಗೆ ಉಳಿದವನೇ ಗೌಡ’ ನೆಂಬಂತೆ ಇದು ಯಶಸ್ವಿಯಾಯಿತೆಂದು ನನ್ನ ಬಹುಪಾಲು ಕನ್ನಡ ಚಿತ್ರಪ್ರೇಮೀ ಸ್ನೇಹಿತರು ಅಭಿಪ್ರಾಯಿಸಿದ್ದಾರೆ.

ಒಟ್ಟಿನಲ್ಲಿ ನಿರ್ಮಾಪಕರ ಜೇಬನ್ನಷ್ಟೇ ತುಂಬುವುದಲ್ಲದೆ ’ಮುಂಗಾರುಮಳೆ’ಯು ಜೋಗದ ಗುಂಡಿಗೆ ಹೆಚ್ಚಿನ ಮಟ್ಟಿಗೆ ಪ್ರವಾಸಿಗರನ್ನು ಸೆಳೆಸಿ, ಆ ಪ್ರವಾಸಿಗರು ನಾಯಕ ನಟ ಗಣೇಶನಂತೆ ಬಿಯರ್ ಹಿಗ್ಗಿ ತಾವು ಅವನ ಧಾಟಿಯಲ್ಲಿಯೇ ತಮ್ಮ ತಮ್ಮ ಮಮ್ಮಿ-ಡ್ಯಾಡಿಯರನ್ನು ಪ್ರಶ್ನಿಸುವುದನ್ನು ಕಲ್ಪಿಸಿಕೊಂಡು, ಅದಕ್ಕವರ ಹಿರಿಯರು ಹೇಗೆ ಪ್ರತಿಕ್ರಿಯಿಸಬಹುದೆಂಬ ಕಲ್ಪನೆಯಿಂದ ಬೆಚ್ಚಿ ಬಿದ್ದು ತಾವು ಗಣೇಶನಂತೆ ಕಸದ ಗುಂಡಿಗೆ ಬೀಳದೆ, ತಮ್ಮ ಖಾಲಿ ಬಿಯರ್ ಬಾಟಲಿಗಳನ್ನು ಮಾತ್ರ ಎಸೆದು ಜೋಗವನ್ನು ತಿಪ್ಪೇಗುಂಡಿಯಾಗಿ ಮಾಡಿಸಿರುವ ಮುಂಗಾರುಮಳೆ, ಜೋಗದ ಗುಂಡಿಯನ್ನೂ ಭರ್ಜರಿಯಾಗಿಯೇ ತುಂಬಿಸಿದೆ.

ಸರಿ, ನಂತರ ಕೊಂಚ ವಿಚಾರಿಸಲಾಗಿ ಇತ್ತೀಚಿನ ಯುವಪೀಳಿಗೆ ’ಕಾಳು ಹಾಕುವುದು’, ’ಬಿಸ್ಕೀಟು ಹಾಕುವುದು’ ಎಂದು ಪರೋಕ್ಷವಾಗಿ ಹುಡುಗಿಯರ ಹಿಂದೆ ಸುತ್ತುವುದನ್ನು ಹಾಗೆ ಕರೆಯುತ್ತಾರೆಂದು ತಿಳಿಯಿತು. ಬಹುಶಃ, ಇದು ಅಮೇರಿಕಾವನ್ನು ಅನುಕರಿಸುತ್ತ ಅಲ್ಲಿ ಹುಡುಗಿಯರನ್ನು ಪಡ್ಡೆಗಳು ಬಿಚ್ಚ್, ಚಿಕ್ ಎಂದು ಸಂಭೋದಿಸುವುದರ ವಿಸ್ತೃತ ಭಾಗವಾಗಿ, ಸದಾ ಅಮೇರಿಕಾದ ಕನಸಿಗೆ ಹಾತೊರೆಯುತ್ತಿರುವ ಬೆಂಗಳೂರಿನ ಕನ್ನಡದ ಕಂದಮ್ಮಗಳು, ಈ ಬಿಚ್ಚ್, ಚಿಕ್ ಗಳು ಬಿಸ್ಕೀಟು ಮತ್ತು ಕಾಳು ತಿನ್ನುತ್ತವೆಂದು ಊಹಿಸಿ ಈ ರೀತಿಯ ಭಾಷಾ ಪ್ರಯೋಗ ಜಾರಿಯಾಗಿರಬಹುದೆಂದುಕೊಂಡೆನು!

ಬಹುಶಃ ಬೆಂಗಳೂರಿನ ಕನ್ನಡಮ್ (ಇದೇನು ಕನ್ನಡಮ್ ಎಂದಿರಾ? ಇಂದು ಕನ್ನಡಮ್ಮ ಕೂಡ ಇದು ಓಲ್ಡ್ ಫ್ಯಾಷನ್ ಎಂದು ನೀಲಮ್ಮ ನೀಲಂ ಆದಂತೆ, ಹಾಲಮ್ಮ ಹಲಂ ಆದಂತೆ ತಾನೂ ಮಿನಿ ಸ್ಕರ್‍ಟ್ ತೊಟ್ಟು ’ಕನ್ನಡಮ್’ ಎಂದು ಹೆಸರು ಬದಲಾಯಿಸಿಕೊಂಡಿದ್ದಾಳೆ!) ನ ಲಲನೆಯರು ಬಿಸ್ಕೀಟು ತಿಂದು, ಥೇಟ್ ಪ್ಯಾರಿಸ್ ಹಿಲ್ಟನ್ ಳಂತೆ ’ಹೇ ಬಿಚ್ಚ್, ಇಟ್ಸ್ ಹಾಟ್!’ ಅನ್ನುತ್ತಿರಬಹುದು ಅಥವಾ ಕಾಳು ತಿಂದು ಹಾಲಿವುಡ್ ನ ಹಾಟ್ ಚಿಕ್ ಬ್ರಿಟ್ನಿ ಸ್ಪಿಯರ್ಸ್ ಧಾಟಿಯಲ್ಲಿ ’ಊಪ್ಸ್, ಐ ಡಿಡ್ ಇಟ್ ಅಗೈನ್!’ ಎಂದು ತಮಿಳು, ತೆಲುಗು, ಮತ್ತು ಹಿಂದಿಯ ಬಿಚ್ಚ್-ಅಮ್ಮಗಳಿಗೆ ಸವಾಲು ಹಾಕುತ್ತಿರಬಹುದು.

ಇನ್ನು ಬೆಂಗಳೂರಿನಲ್ಲಿ ಕನ್ನಡವನ್ನು ಆದಷ್ಟೂ ಅಶಿಕ್ಷಿತ / ಅಸಂಸ್ಕೃತ ರೀತಿಯಲ್ಲಿ ಮಾತನಾಡುವುದೇ ಈಗಿನ ಸ್ಟೈಲ್ ಎಂಬಂತೆ ಬೆಂಗಳೂರಿಗರು ಮಾತನಾಡುತ್ತಾರೆ. ಮೊದಲಿನಿಂದಲೂ ಕರ್ನಾಟಕದ ಇತರೆಲ್ಲೆಡೆಗಿಂತ ಭಿನ್ನವಾಗಿ ’ಏನ್ ಗುರು’, ’ಏನಮ್ಮಾ’, ’ಏನ್ಸಾರ್’ ಎಂಬ ವಿಶಿಷ್ಟ ನುಡಿಗಟ್ಟುಗಳನ್ನು ಬಳಸುತ್ತಿದ್ದ ಬೆಂಗಳೂರಿಗರು ಅಪ್ಪಿತಪ್ಪಿ ಯಾರಾದರೂ ಈ ನುಡಿಗಟ್ಟುಗಳಿಲ್ಲದೆ ಸಂಭಾಷಣೆಯನ್ನು ಆರಂಭಿಸಿದರೆ ’ಬಿಟ್ಬಂದಹಳ್ಳಿ’ಯವನೆಂದು ಹೀಗಳೆಯುತ್ತಿದ್ದವರು ತಮ್ಮ ವೈಶಿಷ್ಟವನ್ನು ಮೆರೆವ ಭರದಲ್ಲಿ ಈಗೆಲ್ಲ ’ಏನ್ಲಾ ಮಗಾ’, ’ಬಾರ್‍ಲಾ ಮಚ್ಚಾ’, ಸ್ಕೆಚ್ಚು ಮಚ್ಚು ಎನ್ನುತ್ತಿದ್ದಾರೆ. ಇದು ಕನ್ನಡ ಭಾಷಾ ವಿಕಾಸವೋ ವಿನಾಶವೋ ನಾನರಿಯೇ!

ಬೇಕಿದ್ದರೆ ಬೆಂಗಳೂರು ಕನ್ನಡವನ್ನು ಗಮನಿಸಿ ನೋಡಿ! ಅದು ಯಾವಾಗಲೂ ಕರ್ನಾಟಕದ ಇತರೆ ಪ್ರದೇಶಗಳಿಗಿಂತ ಭಿನ್ನವೆಂಬುದಕ್ಕೆ ಟಿ.ಪಿ. ಕೈಲಾಸಂ ರವರ ನಾಟಕಗಳನ್ನೇ ಓದಿ ನೋಡಿ, ಬೆಂಗಳೂರು ಕನ್ನಡ ಆವಾಗಿನಿಂದಲೂ ಭಿನ್ನವೆಂಬುದು ಮನವರಿಕೆಯಾಗುತ್ತದೆ.

ಇನ್ನು ಇತ್ತೀಚಿನ ಬೆಂಗಳೂರೇ ಕರ್ನಾಟಕವೆಂದು ತಿಳಿದಿರುವ ಐಟಿ/ಬಿಟಿ, ರಾಜಕೀಯ ಧುರೀಣರಿಗೆ ಪೈಪೋಟಿಯೆಂಬಂತೆ ಕನ್ನಡ ಚಿತ್ರರಂಗವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನ್ನಡ ಮಾತನಾಡುವವರೆಲ್ಲ ಕೊಳಚೆ ಪ್ರದೇಶದವರು, ಕೂಲಿಗಳು, ಗಾಡಿ ಎಳೆಯುವವರೆಂದು ವರ್ಗೀಕರಿಸಿ, ವಿಶಾಲ ಸಾಮರ್ಥ್ಯದ ಕನ್ನಡ ಭಾಷೆಯನ್ನು ಕತ್ತರಿಸಿ ಈ ಬೆಂಗಳೂರು ಕನ್ನಡವನ್ನೇ ಕನ್ನಡವೆಂದು ಎತ್ತಿ ತನ್ನ ಕಲಾಕೃತಿಗಳಿಂದ ಇಡೀ ಕರ್ನಾಟಕಕ್ಕೆ ಈ ಭಾಷಾ ವಿಕಾಸವನ್ನು ಪಸರಿಸುತ್ತಿದೆ. ಕಳೆದ ಜೂನ್ ನಲ್ಲಿ ನಾನು ಪ್ರವಾಸದಲ್ಲಿದ್ದಾಗ ಅಪ್ಪಟ ಗಂಡುಮೆಟ್ಟಿನ ಪ್ರದೇಶಗಳಾದ ಹುಬ್ಬಳ್ಳಿ, ಬಿಜಾಪುರದಲ್ಲಿಯೂ ಅಲ್ಲಿನ ಯುವಜನಾಂಗವು ಬೆಂಗಳೂರು ಶೈಲಿಯಲ್ಲಿ ’ಏನ್ಲಾ ಸಿಸ್ಯಾ’, ’ಓಯ್ತಿಯಾ ಮಗಾ’ ಎಂದು ಮಾತನಾಡಿಕೊಳ್ಳುವುದನ್ನು ನಾನು ಕೇಳಿದಾಗ ನನಗೇ ನಂಬಲಾಗಲಿಲ್ಲ! ಅಲ್ಲಿಯ ಗಡಸು ಶೈಲಿಯೊಂದಿಗೆ ಮಿಶ್ರಿತಗೊಂಡು ಈ ಬೆಂಗಳೂರು-ವಿಕಸಿತ-ಕನ್ನಡ ಅತ್ಯಂತ ನಾಟಕೀಯವೆನಿಸಿದರೂ ಆ ಯುವಕರು ಮಾತನಾಡಿಕೊಳ್ಳುತ್ತಿದ್ದುದನ್ನು ನೋಡಿದರೆ ಕುಲಗೆಟ್ಟ ನಮ್ಮ ದೃಶ್ಯಮಾಧ್ಯಮಗಳು ಒಂದು ಪರಿಸರದ ಮೇಲೆ ಯಾವ ರೀತಿಯ ಅಡ್ಡ ಪರಿಣಾಮವನ್ನುಂಟು ಮಾಡಬಹುದೆಂಬ ಸತ್ಯದ ದರ್ಶನ ಬಾದಾಮಿಯಂತಹ ಆ ಸಣ್ಣ ಊರಿನಲ್ಲಿ ನನಗಾಯಿತು.

’ಅವಳ ರಾತ್ರಿಗಳು’, ’ಇವನ ಭ್ರಾಂತಿಗಳು’ ಎಂದು ಸಿನಿಮಾ ಮಾಡುತ್ತಿದ್ದ ಕೇರಳಿಗರು ಅವುಗಳಿಗೆಲ್ಲ ತಿಲಾಂಜಲಿಯಿಟ್ಟು, ಸೀಮಿತ ಮಾರುಕಟ್ಟೆಯಿದ್ದರೂ ಕಲಾಕೃತಿಗಳೆನ್ನುವಂತಹ ಚಿತ್ರಗಳನ್ನು ಮಾಡುತ್ತಿದ್ದರೆ, ಆರು ಜ್ಞಾನಪೀಠಗಳ ಹಿನ್ನೆಲೆಯ, ಅಸಾಧಾರಣ ಸಾಹಿತಿ, ಕತೆಗಾರರಿರುವ, ನಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಕಲೆಗಳಿದ್ದರೂ, ಬರ ಬಿದ್ದವರಂತೆ ಪರಭಾಷೆಯ ಕತೆ, ಸಂಸ್ಕೃತಿಗೆ ಚಿತ್ರರಂಗದವರು ಮುಗಿಬಿದ್ದಿರುವುದು ನಿಜಕ್ಕೂ ನಾಚಿಕೆಗೇಡು. ಉದಾಹರಣೆಗೆ ಮೇಲೆ ಹೇಳಿದ ಜರಿಪಂಚೆ, ದಪ್ಪ ಮೀಸೆ, ಬಿಳಿ ಚಪ್ಪಲಿ ತೊಟ್ಟ ಪಾತ್ರದ ಗಂಡುತನಕ್ಕೂ, ನಮ್ಮ ಉತ್ತರ ಕರ್ನಾಟಕದ ರುಮಾಲು ಸುತ್ತಿ, ಕಚ್ಚೆ ಕಟ್ಟಿ, ಜಿರ್ ಜಿರ್ ಎನ್ನುವ ಜೀರಿಕಿ ಚಪ್ಪಲಿ ತೊಟ್ಟ, ಗಿರಿಜಾ ಮೀಸೆ / ಕತ್ತಿ ಮೀಸೆ ಹೊತ್ತ, ಗಡಸು ಭಾಷೆಯ ಗಂಡುತನಕ್ಕೂ (ಬಾಳಪ್ಪ ಹುಕ್ಕೇರಿ ಮತ್ತು ’ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿನ ದೃಶ್ಯದಲ್ಲಿ ಡಾ:ರಾಜ್ ಅವರು ತೊಟ್ಟ ವೇಷ) ಹೋಲಿಸಿ ನೋಡಿ. ಯಾವುದು ಗಟ್ಟಿ ಎಂಬುದು ತಮಗೇ ತಿಳಿಯುತ್ತದೆ!

ಕಡೆಯ ಪಕ್ಷ ತಮಿಳು ಸಿನೆಮಾ ರೀಮೇಕಿಸುವ ಇವರು, ತಮಿಳರು ಪರಭಾಷೆಯ ನಟ ನಟಿಯರನ್ನು ಪ್ರೋತ್ಸಾಹಿಸಿದರೂ ಅವರುಗಳೆಲ್ಲ ದ್ರಾವಿಡ ಲಕ್ಷಣಗಳನ್ನೇ ಹೊಂದಿರುವಂತೆ ನೋಡಿಕೊಳ್ಳುವ ಬಗೆಯನ್ನಾದರೂ ಕಲಿಯುವುದು ಬಾರದೆ? ಉದಾಹರಣೆಗೆ ಕಪ್ಪು ಬಣ್ಣದ ರಜನೀಕಾಂತ್, ಮುರಳಿ, ದಪ್ಪ ತುಟಿಯ ಅರ್ಜುನ್ ಸರ್ಜಾ, ಗುಂಗುರು ಕೂದಲಿನ ಕೋಕಿಲ ಮೋಹನ್. ಇನ್ನು ಸೌಂದರ್ಯವೆಂದರೆ ಗುಂಡು ಗುಂಡಾಗಿ, ಮುದ್ದಾಗಿರುವುದೇ ಎಂದು ತಿಳಿದಿರುವ ತಮಿಳರು ಬಳುಕುವ ಬಳ್ಳಿಗಳನ್ನು ಬಿಟ್ಟು ಗುಂಡು ಗುಂಡಾಗಿರುವ ಖುಷ್ಬು, ನಗ್ಮಾ ಮತ್ತವಳ ತಂಗಿ, ರೋಜಾ, ರಮ್ಯಕೃಷ್ಣ ರಂತವರನ್ನು ಅಮದು ಮಾಡಿಕೊಂಡರೂ ತಮ್ಮ ಸಂಸ್ಕೃತಿಗೆ ಕುಂದಾಗದಂತೆ ನೋಡಿಕೊಳ್ಳುತ್ತಾರೆ.

ಇದನ್ನೆಲ್ಲ ನೋಡಿದರೆ, ಕನ್ನಡಿಗರು ನಿಜ ಅರ್ಥದಲ್ಲಿ ರಾಜ್ಯೋತ್ಸವವನ್ನು ಮಾಡುವುದಾದರೆ ಭಾಷೆ, ಕಲೆ, ಸಂಸ್ಕೃತಿಗಳ ಗಂಧವಿಲ್ಲದೆ, ತೆವಲಿಗೆ ಸಿನೆಮಾ ಮಾಡಿ, ನಮ್ಮ ಭಾಷೆ, ಸಂಸ್ಕೃತಿಯನ್ನು ಕದಡುತ್ತಿರುವ ಇಂದಿನ ಬಹುತೇಕ ಕನ್ನಡ ಚಿತ್ರರಂಗದ ಕನ್ನಡ ಸಿನಿಮಾಗಳನ್ನು ನೋಡುವುದಕ್ಕೆ ಐದು ವರ್ಷಗಳಿಗೆ ರಜಾ ಘೋಷಿಸಿ, ಅರ್ಥಪೂರ್ಣ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಕೊಂಡು ಓದಿದರೆ ಅಥವ ಕನ್ನಡ ಪರ ಸಂಘ-ಸಂಸ್ಥೆಗಳು ಸಿನಿಮಾ ಹಾಡು ಕುಣಿತಗಳನ್ನೇರ್ಪಡಿಸುವುದನ್ನು ಬಂದ್ ಮಾಡಿ (ಕನ್ನಡ ರಾಜ್ಯೋತ್ಸವಕ್ಕಾಗಿಯಾದರೂ) ಆ ಹಣದಿಂದ ತಮ್ಮ ತಮ್ಮ ಬಡಾವಣೆಗಳಲ್ಲೋ, ಬೀದಿಗಳಲ್ಲೋ ಕನ್ನಡ ಪುಸ್ತಕಗಳನ್ನು ಹಂಚಿದರೆ ನಮ್ಮ ಹೆಮ್ಮೆಯ ಸಾಹಿತಿಗಳಾದರೂ ಬದುಕಿಕೊಳ್ಳುತ್ತಾರೆ.

ಅಣಕ:

ರಿಯಲ್ ಎಸ್ಟೇಟ್ ಕಂ ರೌಡಿಯಿಸಂ ನ ಕುಳವೊಂದು ಸಿನೆಮಾ ಮಾಡಬೇಕೆಂದು ನಿರ್ದೇಶಕ, ಚಿತ್ರಸಾಹಿತಿಯೊಂದಿಗೆ ಪಾನಗೋಷ್ಟಿ ನಡೆಸುತ್ತಿತ್ತು. ನಿರ್ಮಾಪಕ ಕುಳವು "’ಮಚ್ಚ’ ಅನ್ನೋ ಒಂದು ಸಿನೆಮಾ ಮಾಡವ್ಹಾ, ಮಚ್ಚನಿಗೊಂದು ಲವ್ವು ಸೈಡಿಗೊಂದು ಡವ್ವು ಸೇರಿಸಿ ಕತೆ ಮಾಡ್ರುಲ್ಹಾ ನನ್ಮಕ್ಳ" ಎಂದು ಅಪ್ಪಣಿಸುತ್ತಾನೆ.

ಆಗ ಚಿತ್ರಸಾಹಿತಿ "ಅಣ್ಣಾ, ನಡುವೆ ಒಂದು ’ಎಲ್ಲೋ ಜೋಗಪ್ಪ ನಿನ್ನರಮಾನೆ’ ಅನ್ನ ಐಟಂ ಥರ ಒಂದು ರಾಜ್ಯೋಸ್ತವ ಸೀನ್ ಆಕಿ, ಅದ್ರಲ್ಲಿ ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ಅಂತ ಸುರುವಾಗೊ ಐಟಂ ಸಾಂಗ್ ಬರಿತೀನಿ. ಮುಂದಿನ ನೂರು ವರ್ಸವಾದರೂವೆ ಪ್ರತೀ ರಾಜ್ಯೋಸ್ತವಕ್ಕೂ ಎಲ್ಲ ಕಡೆ ಇದೇ ಸಾಂಗ್ ಕೇಳ್ಬೇಕು ಅಂಗ್ ತೆಗಿಯವ್ಹಾ’ ಅಂದ.

ಇದರಿಂದ ಉತ್ಸಾಹಗೊಂಡ ನಿರ್ದೇಶಕ "ರಾಖಿ ಸಾವಂತ್ ನ ಬುಕ್ ಮಾಡವ್ಹ, ಕನ್ನಡ ಬಾವುಟದ ಬಣ್ಣದ್ದೇ ಕಾಸ್ಟೂಮ್ ಹಾಕಿಸಿ, ಕ್ಲೋಸ್-ಅಪ್ ನಲ್ಲಿ ಅವಳು ’ಕನ್ನಡವೆನೆ ಕುಣಿದಾಡುವುದೆನ್ನೆದೆ’ ಅಂತ ಎದೆ ಕುಣುಸ್ಲಿ ಹೀರೋ ’ಮಚ್ಚ’ ಇತ್ಲಗಿಂದ ’ಕನ್ನಡವೆನೆ ಮೈ ನಿಮಿರುವುದು’ ಅಂತ ಸೊಂಟ ತಿರುಗ್ಸದ ಅಂಗೇ ಲಾಂಗ್-ಶಾಟ್ ಮಾಡ್ತಾ ಮೆಜೆಸ್ಟಿಕ್, ಸಿಟಿ ಮಾರ್ಕೆಟಲ್ಲಿ ಕುಣುಸ್ತ ಅಂಗೇ ಆಸ್ಟ್ರೇಲಿಯಾ, ಜಪಾನ್, ಹಾಂಕಾಂಗ್ ಒಂದು ರೌಂಡ್ ಸುತ್ತಿಸಿ ಮತ್ತೆ ಮೆಜೆಸ್ಟಿಕ್ಕಲ್ಲಿ ಎಂಡ್ ಮಾಡವ್ಹಾ." ಎಂದು ಸೀನ್ ವರ್ಣಿಸಿದ.

ಇದರಿಂದ ಖುಷಿಗೊಂಡ ರಿಯಲ್ ಎಸ್ಟೇಟ್ ಕುಳ, ’ಚಿಯರ್ಸ್, ಇಂಗಾದ್ರೂ ನಾನು ಕನ್ನಡ ಸೇವೆ ಮಾಡ್ದಂಗಾಯ್ತದೆ’ ಎಂದ.

ಜೈ ಕರ್ನಾಟಕ ಮಾತೆ!

ಗ್ರಾಮ ವಾಸ್ತವ್ಯದ ಗ್ರಾಮಸಿಂಹ!

ಅಂತೂ ಅಧಿಕಾರ ಹಸ್ತಾಂತರದ ಪ್ರಹಸನ ಮುಕ್ತಾಯಗೊಂಡಿದೆ. ಜೆಡಿಎಸ್ ನ ಎಲ್ಲಾ ಪಾತ್ರಧಾರಿಗಳೂ ಭರ್ಜರಿಯಾಗಿ ತಮ್ಮ ತಮ್ಮ ಪಾತ್ರಗಳನ್ನು ನೆರವೇರಿಸಿದ್ದಾರೆ.

ಯಾವುದೇ ಪೂರ್ವಾಗ್ರಹವಿಲ್ಲದೆ, ವಿಧಾನಸಭೆಯ ಚುನಾವಣೆಯ ನಂತರ ನಡೆದ ಘಟನೆಗಳನ್ನು, ಸರ್ಕಾರದ ಸಾಧನೆಗಳನ್ನು ಸಮಗ್ರವಾಗಿ ಅವಲೋಕಿಸಿದಾಗ ಕಣ್ಣಿಗೆ ಕಾಣುವುದು ಇಷ್ಟು.

ಧರಮ್ ಸಿಂಗ್ ಮುಖ್ಯಮಂತ್ರಿಯಾಗಿ ಸಾಮಾನ್ಯ ಜನತೆಗೆ ಸುಲಭವಾಗಿ ಸಿಗುವಂತಹ ಮುಖ್ಯಮಂತ್ರಿಯೆನಿಸಿಕೊಳ್ಳಬೇಕೆಂಬ ಹಂಬಲದಲ್ಲಿ ಕರೆದವರ ಮದುವೆ, ತಿಥಿ, ಸಿನಿಮಾ ಮಹೂರ್ತಗಳಿಗೆಲ್ಲ ಹೋಗಿದ್ದು ಮತ್ತು ಅಕ್ಷರಶ: ದೇವೇಗೌಡರ ದಲ್ಲಾಳಿಯಂತೆ ವರ್ತಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವ ಹಂಬಲದಲ್ಲಿ ಜನತೆ ಅಷ್ಟೇನೂ ಕೇಳರಿಯದಿದ್ದ ’ಅಹಿಂದ’ ದ ಹಿಂದೆ ಬಿದ್ದು, ಕುಂಟು ನೆಪಕ್ಕೆ ಕಾಯುತ್ತಿದ್ದ ದೇವೇಗೌಡರಿಗೊಂದು ನೆಪ ಕೊಟ್ಟು ತಲೆ ಬೋಳಿಸಿಕೊಂಡು ತಮ್ಮೆಲ್ಲ ಆದರ್ಶಗಳೂ ಒಮ್ಮೆ ಮುಖ್ಯಮಂತ್ರಿಯಾಗುವುದೇ ಆಗಿದೆಯೆಂದು ಕಾಂಗ್ರೆಸ್ ಸೇರಿದ್ದು, ಧರಮ್ ಮಾದರಿಯಲ್ಲಿಯೇ ಕುಮಾರಸ್ವಾಮಿ ಕೂಡ ಜನರಿಗೆ ಸುಲಭವಾಗಿ ಸಿಕ್ಕುವ ಮುಖ್ಯಮಂತ್ರಿಯೆನಿಸಿಕೊಳ್ಳಬೇಕೆಂಬ ಪ್ರಚಾರಪ್ರಿಯತೆಗಾಗಿ ಗ್ರಾಮ ವಾಸ್ತವ್ಯ, ಶನಿ-ದರ್ಶನ (ಶನಿವಾರದ ದರ್ಶನ), ರಂಗಿನುಡುಪುಗಳಿಂದ ಆ ದಿಸೆಯಲ್ಲಿ ಕೊಂಚ ಯಶಸ್ವಿಯಾಗಿ ಕೊನೆಗೆ ಉತ್ತರಕುಮಾರನಂತೆ ’ಅಪ್ಪಯ್ಯಾ, ಎಡೆಯೂರಪ್ಪ ಕುರ್ಚಿ ಕೇಳ್ತನೆ ನೋಡು!’ ಎನ್ನುತ್ತ ಗ್ರಾಮಸಿಂಹವಾದದ್ದು, ಮುಂದಿನ ದೀಪಾವಳಿ ’ಅನುಗ್ರಹ’ ದಲ್ಲೇ ಎಂದು ಎಡೆಯೂರಪ್ಪನವರು ಡಂಗುರ ಸಾರಿದ್ದು, ಬಳ್ಳಾರಿಯ ಬಿಜೆಪಿ ಶಾಸಕರುಗಳು ಕುಮಾರಸ್ವಾಮಿ ಪಟಾಲಂ ನ ನೀರಿಳಿಸಿದ್ದು, ಇದಲ್ಲದೆ ಜೆಡಿಎಸ್ ನ ಬಿಸಿಲ್ಗುದುರೆ (ಮಿರಾಜ್), ಜಯಕುಮಾರ್, ಅನ್ಸಾರಿ ಮತ್ತಿತರು ನೀರಿಗೆ ಕಾದಾಡುವ ಬೀದಿ ಮಹಿಳೆಯರನ್ನೂ ಮೀರಿಸಿ ಎಡೆಯೂರಪ್ಪನವರನ್ನು ಜರೆದಿದ್ದು ಮತ್ತು ಅಕ್ಷರಶಃ ದೇವೇಗೌಡ ಕುಟುಂಬದ ಗುಲಾಮಗಿರಿಯನ್ನು ಮೆರೆಸಿದ್ದು, ಮತ್ತು ಹೊನ್ನಾಳಿ ಶಾಸಕ ರೇಣುಕಾಚಾರ್ಯರ ವೈಯುಕ್ತಿಕ ವಿಷಯ ಸಾರ್ವತ್ರಿಕವಾದದ್ದು.

ಮೊದಲರ್ಧದ ಕಾಂಗ್ರೆಸ್ಸಿನೊಂದಿಗಿನ ದೋಸ್ತಿಯಲ್ಲಿ ಸರ್ಕಾರವನ್ನು ರಚಿಸಿದ್ದು ಮತ್ತು ದೇವೇಗೌಡ/ಜನಾರ್ಧನ ಪೂಜಾರಿಯವರ ಪರಸ್ಪರ ಕೆಸರೆರೆಚಿದ್ದು ಸಾಧನೆಯಾದರೆ, ದ್ವಿತೀಯಾರ್ಧದಲ್ಲಿ ಬಿಜೆಪಿಯೊಂದಿಗೆ ಸೇರಿ ಜೆಡಿಎಸ್ ಸಂಪೂರ್ಣವಾಗಿ ಗಾಳಿಸುದ್ದಿಗಳನ್ನು ಹಬ್ಬಿಸುತ್ತ, ಎಡಿಯೂರಪ್ಪನವರನ್ನು ತುಛ್ಛೀಕರಿಸುವುದರಲ್ಲಿ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡದ್ದೇ ಸಾಧನೆ.

ಗ್ರಾಮ ವಾಸ್ತವ್ಯದ ಸುದ್ದಿಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಅಲ್ಲಿಗೆ ಸೇರುತ್ತಿದ್ದುದೇ ರಾತ್ರಿ ಹನ್ನೆರಡು ಹೊಡೆದ ಮೇಲೆ! ನಂತರ ಉಂಡ ಶಾಸ್ತ್ರ ಮಾಡಿ ಇನ್ನೊಂದೆರಡು ಗಂಟೆಗಳ ಕಾಲಹರಣ ಮಾಡಿ, ಮತ್ತೊಂದು ತಾಸು ಮಲಗೆದ್ದು, ಐದು ಗಂಟೆಗೆ ಹೆಲಿಕಾಪ್ಟರ್ ಏರುವುದೇ ಇರುತ್ತಿತ್ತು. ಆದರೂ ಜೆಡಿಎಸ್ ಪಕ್ಷದ ಏಜೆಂಟ್ ರಂತೆ ದಿನಪತ್ರಿಕೆಗಳು ಈ ಸುದ್ದಿಯನ್ನು ಹಿರಿದು ಮಾಡಿ ಪ್ರಕಟಿಸಿ ಕುಮಾರಸ್ವಾಮಿಯವರನ್ನು ಮೆರೆಸಿದ್ದು ನಿಜ.

ಸೆಕ್ಯುಲರ್ ಅಂದರೆ ಏನೆಂದು ಕೇಳುತ್ತ ಮುಖ್ಯಮಂತ್ರಿಯಾಗಿ ನಂತರ ವಚನಭ್ರಷ್ಟನಾದರೂ ಚಿಂತೆಯಿಲ್ಲ ಸೆಕ್ಯುಲರ್ ಅಲ್ಲದ ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವುದಿಲ್ಲವೆಂದದ್ದು ನೋಡಿದರೆ ’ಸೆಕ್ಯುಲರ್’ ಪದದ ಅರ್ಥ ಕಂಡುಕೊಳ್ಳಲು ಈ ವ್ಯಕ್ತಿ ಮುಖ್ಯಮಂತ್ರಿಯಾದನೇ? ಎಂದು ಜನ ಬೆರಗಾಗುವರೂ ಅಥವಾ ಎಂತಹ ಮೂರ್ಖನೆಂದು ಮರುಕ ಪಡುವರ್‍ಓ ಗೊತ್ತಿಲ್ಲ. ಒಟ್ಟಲ್ಲಿ ನಂಬಿಸಿ ಕೈ ಕೊಡುವ ವಿಷಯದಲ್ಲಿ ’ತಂದೆಯಂತೆ ಮಗ, ನೂಲಿನಂತೆ ಸೀರೆ’ ಎಂಬುದನ್ನು ತಮ್ಮ ಮೊದಲ ಇನ್ನಿಂಗ್ಸ್ ನಲ್ಲಿಯೇ ಅಮೋಘವಾಗಿ ಪ್ರದರ್ಶಿಸಿದ್ದಾರೆ!

ಸರ್ಕಾರ ಬಿದ್ದ ಅ ನಂತರದ ಪ್ರತಿಯೊಂದು ಹಂತದಲ್ಲಿಯೂ ಅತ್ಯಂತ ಕೀಳೆನ್ನಿಸಬಹುದಾದಂತಹ, ಚೆನ್ನಮ್ಮನವರು ಮಾಂಗಲ್ಯ ಉಳಿಸಿರೆಂದು ಅತ್ತಿದ್ದು, ದೇವೇಗೌಡರು ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದು, ರೇವಣ್ಣ ಗಳಗಳನೆ ಅತ್ತಿದ್ದು, ಇವರೆಲ್ಲರ ಗೋಳಾಟವನ್ನು ನೋಡಿ ಅಷ್ಟರಲ್ಲಾಗಲೇ ಮಾಜಿಯಾಗಿದ್ದ ಕುಮಾರಸ್ವಾಮಿ ಕೂಡ ಅತ್ತ ವರದಿಗಳನ್ನೆಲ್ಲ ನೋಡಿದರೆ, ತನ್ನ ಸ್ವಂತ ಸಹೋದರರ ಮನಸ್ಸನ್ನೇ ಗೆಲ್ಲದ (ದೇವೇಗೌಡ ಸೋದರರ ಪುತ್ರರೊಬ್ಬರು ಇವರ ಕಿರುಕುಳದಿಂದ ಬೇಸತ್ತು ಚೆನ್ನಮ್ಮನವರ ಮೇಲೆ ಆಸಿಡ್ ದಾಳಿ ಮಾಡಿ ಜೈಲು ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು) ಶೂನ್ಯ ಹೃದಯ ವೈಶಾಲ್ಯದ ದೇವೇಗೌಡ ಪ್ರಧಾನಮಂತ್ರಿಯಾಗಿದ್ದು ಹೃದಯ ವೈಶಾಲ್ಯವನ್ನು ಮೆರೆವ ಕನ್ನಡಿಗರ ಹೆಮ್ಮೆಯ ಸಂಗತಿಯೋ ಅಥವಾ ಇಂತಹ ಕ್ಷುಲ್ಲಕ ವ್ಯಕ್ತಿ ಕನ್ನಡಿಗನೆಂದು ಕನ್ನಡಿಗರು ತಲೆ ತಗ್ಗಿಸಬೇಕೊ ಎಂದು ಕನ್ನಡಿಗರೇ ಮುಂದಿನ ಚುನಾವಣೆಯಲ್ಲಿ ಹೇಳಬೇಕು!

ಹಾಗೆ ನೋಡಿದರೆ ಸಾರಾಯಿ ನಿಷೇಧ, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗಳಂತಹ ಮಹತ್ವದ ಯೋಜನೆಗಳ ಅನುಷ್ಟಾನಗಳು ಮತ್ತಿತರೆ ಅಭಿವೃದ್ದಿಗಳು ನಡೆದದ್ದು ಬಿಜೆಪಿಯೊಂದಿಗಿನ ದೋಸ್ತಿಯಲ್ಲಿ ಎಂಬುದು ಗಮನಾರ್ಹ ಆಶ್ಚರ್ಯವಾಗಿದೆ.

ಒಟ್ಟಾರೆ ಜೆಡಿಎಸ್ ನ ಎಲ್ಲಾ ಕಾಲೆಳೆತ ಕಿರುಕುಳಗಳ ನಡುವೆಯೂ ಕೂಡ ಕೆಲವು ಉತ್ತಮವಾದಂತಹ ಯೋಜನೆಗಳನ್ನು ಅನುಷ್ಟಾನಗೊಳಿಸಿದ್ದು ಸಮ್ಮಿಶ್ರ ಸರ್ಕಾರದ ಸಾಧನೆಯೆನ್ನದೇ ಬಿಜೆಪಿಯದೇ ಸಾಧನೆ ಎನ್ನಬಹುದಾಗಿದೆ. ಬಹುಶಃ ಬಿಜೆಪಿ ರಾಜ್ಯಕ್ಕೆ ಉತ್ತಮ ಅಭಿವೃದ್ದಿಯನ್ನು ಕೊಡಬೇಕೆಂಬ ವಸ್ತುನಿಷ್ಠ ಉದ್ದೇಶವನ್ನು ಹೊಂದಿದ್ದರೆ, ಈಗ ಅಧಿಕಾರ ಕಳೆದುಕೊಂಡ ಮೇಲೆ ತಮ್ಮ ಅಭಿವೃದ್ದಿ, ತಾಳ್ಮೆಗಳ ಶಕ್ತಿಯನ್ನು ಜನಗಳಿಗೆ ತಿಳಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳದೇ ಅನವಶ್ಯಕವಾಗಿ ಓಟಿನ ರಾಜಕಾರಣದ ದತ್ತ ಪೀಠದಂತಹ ವಿಚಾರಗಳನ್ನೆತ್ತಿ ಅನಗತ್ಯವಾಗಿ ತಮಗೆ ದೊರಕಿರುವ ’ವಚನಭ್ರಷ್ಟತೆ’ಯ ಪ್ರಚಾರವನ್ನು ಕಳೆದುಕೊಳ್ಳುತ್ತಿರುವರೇನೋ?

ಈ ಜನ ನಾಯಕರುಗಳು ಅಸಹ್ಯವೆನ್ನಿಸುವುದಕ್ಕಿಂತಲೂ ಕೀಳಾಗಿ, ಯಾವುದೇ ಮೌಲ್ಯವಾಗಲೀ, ಜನಹಿತ ಕಾಳಜಿಯಾಗಲೀ ಸಿದ್ಧಾಂತಗಳಾಗಲೀ ಇಲ್ಲದೆ ವ್ಯಕ್ತಿಪೂಜೆಯೇ ದೇವಪೂಜೆಯೆಂಬಂತೆ ತಮ್ಮ ಹಿರಿಯ ನಾಯಕರೊಂದಿಗೆ ವರ್ತಿಸುತ್ತ, ತಮ್ಮ ಕೈಕೆಳಗಿರುವವರಿಂದ ತಮ್ಮ ಪೂಜೆಯನ್ನು ಬಯಸುತ್ತ, ನೂರಾರು ಕೋಟಿಗಳ ಹಗರಣಗಳಲ್ಲಿ ತೊಡಗಿರುವುದೇ ಪ್ರತಿಷ್ಟೆ ಎಂಬಂತೆ ಗರ್ವದಿಂದ ಬೀಗುವುದನ್ನು ನೋಡಿದರೆ ’ಭಾರತಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ’ ಎಂದು ಬಡವರ ತಾಯಿ, ಬಂಧು ಇನ್ನು ಏನೇನೋ ಆಗಿದ್ದ ಮಹಾಮಾತೆಯೊಬ್ಬರ ಚುನಾವಣಾ ಉದ್ಘೋಷ ಬೇಡವೆಂದರೂ ಯಾಕೋ ನೆನಪಾಗುತ್ತಿದೆ.

ಒಟ್ಟಾರೆ ರಾಜಕೀಯದಲ್ಲಷ್ಟೇ ಇದ್ದ ನೈತಿಕ ಅಧ:ಪತನ, ಇಂದು ಚೆಲುವ, ಚೆನ್ನಿಗ, ರೆಡ್ಡಿ ಇನ್ನೂ ಹತ್ತು ಹಲವಾರು ಇಂತಹ ನಿಕೃಷ್ಟರನ್ನೇ ಆರಿಸಿ ಕಳುಹಿಸುತ್ತಿರುವ ಜನಸಾಮಾನ್ಯರಲ್ಲೂ ಗಾಢವಾಗಿ ಭಾರತದಾದ್ಯಂತ ಸುಪ್ತಗಾಮಿನಿಯಾಗಿ ಪಸರಿಸಿದೆಯೇನೋ ಅನಿಸುತ್ತಿದೆ!


ವಿನೋದ:

ಈ ವಾರದ ವಿನೋದವನ್ನು ದೇವೇಗೌಡ ಮತ್ತು ಕುಟುಂಬ ಕಸಿದುಕೊಂಡಿದೆ! :)

ಮಣ್ಣಿನ ಮಗನ ವಿರುದ್ಧ ಮಣ್ಣಿನ ಮಗ!

ಮೊನ್ನೆ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಯವರು ತಮ್ಮಲ್ಲಿ ದೇವೇಗೌಡ ಮತ್ತು ಮಕ್ಕಳ ಭ್ರಷ್ಟಾಚಾರದ ದಾಖಲೆಗಳಿವೆಯೆಂದೂ ಮತ್ತು ತಾವು ಅದನ್ನು ಸತ್ಯವೆಂದು ಪ್ರಮಾಣಿಸಲು ವಿಧಾನಸೌಧದ ಎದುರು ಸಾರ್ವಜನಿಕವಾಗಿ ಲೈ ಡಿಟೆಕ್ಟರ್ ಪರೀಕ್ಷೆ ತೆಗೆದುಕೊಳ್ಳುವುದಾಗಿಯೂ ಮತ್ತು ತಾಕತ್ತಿದ್ದರೆ ದೇವೇಗೌಡ ಮತ್ತು ಮಕ್ಕಳೂ ಈ ಪರೀಕ್ಷೆಯನ್ನು ತೆಗೆದುಕೊಳ್ಳಲೆಂದು ಸವಾಲೆಸೆದಿದ್ದಾರೆಂದು ಓದಿದೆ. ಪರವಾಗಿಲ್ಲ ಈ ಖೇಣಿ ಎನಿಸಿತು. ಸಾಮಾನ್ಯವಾಗಿ ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ಸವಾಲು ಮರುಸವಾಲುಗಳೆನ್ನೆಸೆಯುತ್ತಿದ್ದು, ಖೇಣಿಯವರ ಸವಾಲು ಜನಗಳಿಗೆ ವಿಭಿನ್ನವೆನಿಸಿರಬಹುದೆಂದುಕೊಂಡೆನು.

ಸಾಮಾನ್ಯವಾಗಿ ಸವಾಲುಗಳಿಗೆ ಜವಾಬುಗಳನ್ನೀಯದೆ ಮರುಸವಾಲುಗಳನ್ನೆಸೆಯುವ ರಾಜಕಾರಣಿಗಳಿಂದೇನೂ ಹೊರತಾಗದ ಮಣ್ಣಿನ ಮಗ, ಮೊಮ್ಮಕ್ಕಳು ನಾನು ನಿರೀಕ್ಷಿಸಿದಂತೆ ವೈಜ್ಞಾನಿಕ ಯಂತ್ರವು ಎಲ್ಲಿ ತಮ್ಮ ಅಸಲೀ ಜಾತಕವನ್ನು ಕಂಡುಹಿಡಿಯುವುದೆಂದು ಭಯಪಟ್ಟು, ತಮ್ಮದೇ ಆದ ಧಮ್ಕೀ ಶೈಲಿಯಲ್ಲಿ ತಾವೇ ತಮ್ಮ ಜಾತಕ, ನಕ್ಷತ್ರಗಳನ್ನು ಖೇಣಿಯವರಿಗೆ ಕಳುಹಿಸುವುದಾಗಿ ಎಚ್ಚರಿಸಿದ್ದಾರೆ!

ಮೇಲುನೋಟಕ್ಕೆ ಯೋಚಿಸಿ ನೋಡಿದರೆ, ತಮ್ಮ ಸಂಸಾರವನ್ನು ಬೇರೆ ದೇಶದಲ್ಲಿ ಬಿಟ್ಟು, ಬೆಂಗಳೂರಿನ ಯಾವುದೋ ಅಪಾರ್ಟಮೆಂಟ್ ಒಂದರಲ್ಲಿ ವಾಸಿಸುತ್ತ ತನ್ನ ರಾಜ್ಯಕ್ಕೆ ಉತ್ತಮ ರಸ್ತೆಗಳನ್ನು ನೀಡಬೇಕೆಂಬ ಕನಸನ್ನು ಹೊತ್ತು, ಅದಕ್ಕೆ ಬಂದ ಎಲ್ಲ ಅಡೆತಡೆ, ಬೆದರಿಕೆಗಳಿಗೆ ಭಾರತದ ನ್ಯಾಯಾಂಗದ ಚೌಕಟ್ಟಿನಲ್ಲಿಯೇ ಹೋರಾಡುತ್ತ ಛಲದಂಕಮಲ್ಲನಂತೆ ಮುನ್ನುಗ್ಗುತ್ತಿರುವ ಖೇಣಿ ಮಣ್ಣಿನಮಗನೆನಿಸಿ, ಮತ್ತೊಂದೆಡೆ ರೈತರ ಸಮಸ್ಯೆಗಳಿಗೆ ಮೊಸಳೆ ಕಣ್ಣೀರಿಡುತ್ತ, ಸ್ವಂತ ಆರೋಗ್ಯಕ್ಕಾಗಿ ಪಾದಯಾತ್ರೆ ಮಾಡುತ್ತ, ಜೆಡಿಎಸ್ ಶಾಸಕರು ಎಲ್ಲಿ ಮಲಗಬೇಕು, ಏನು ತಿನ್ನಬೇಕು, ಏನು ಮಾತನಾಡಬೇಕೆಂದು ಲೆಕ್ಕವಿಡುತ್ತ ಬೇರೆಯವರ ಹೊಲದಲ್ಲಿ ಪಾಯಿಖಾನೆ ಮಾಡಿ ಮಣ್ಣಿನ ಮಡಿಲನ್ನು ತುಂಬುವ, ಡಾ: ರಾಜ್ ರ ಅನೇಕ ರೈತಮಕ್ಕಳ ಸಿನೆಮಾಗಳಲ್ಲಿ ತೋರಿಸಿದಂತೆ ಪಕ್ಕದ ನೆರೆಹೊರೆ ರೈತನ ಮೇಲೆ ಕತ್ತಿ ಮಸೆಯುವ ಹುಂಬ ರೈತನಂತೆ (ಸಾಮಾನ್ಯವಾಗಿ ಡಾ: ರಾಜ್ ಅವರಿಂದ ಒದೆ ತಿನ್ನುವ), ಪ್ರಗತಿಗೆ ಮಾರಕನಾಗಿ (ಸ್ವಂತ) ಮಕ್ಕಳಿಗೆ ಪೂರಕವಾಗಿ, ಜನಾರ್ಧನ ಪೂಜಾರಿಯವರು ಹೇಳುವ ಏಕೈಕ ಸತ್ಯದಂತೆ ಅತ್ಯುತ್ತಮ ನಟನೂ ಆಗಿ ಮಾಜಿ ಪ್ರಧಾನಿಗಳು ಉದ್ಘೋಷಿತ ಮಣ್ಣಿನಮಗನೆನಿಸಿದರೂ, ಜನ ಏಕೆ ಅರಿಯುತ್ತಿಲ್ಲವೋ?

ಬಹುಶಃ, ಜೀವನವೆಂದರೆ ಗೋಳಾಟವೆಂದೇ ತೋರಿಸುವ, ಬಕೇಟುಗಟ್ಟಲೆ ಕಣ್ಣೀರಿಳಿಸುವ ’ಮಾಯಾಮೃಗ’, ’ಪ್ರೀತಿ ಇಲ್ಲದ ಮೇಲೆ’ ಮುಂತಾದ ಮೆಗಾಸೀರಿಯಲ್ ಗಳಿಂದ ಬೇಸತ್ತಿರುವವರಿಗೆ ಮಣ್ಣಿನಮಗನ ನಾಟಕ ಕಂಪೆನಿ ತನ್ನ ಅನುಭವೀ ನಟರುಗಳಾದ ಚೆಲುವ, ಚೆನ್ನಿಗ, ಪೋಷಕ ಪಾತ್ರದ ಪ್ರಕಾಶ ಮತ್ತು ಉದಯೋನ್ಮುಖ ನಟರಾದ ಬಿಸಿಲ್ಗುದುರೆ (ಮಿರಾಜ್), ದಳವಾಯಿ (ಇವು ರಂಗದ ಮೇಲಿನ ಹೆಸರುಗಳಷ್ಟೇ ಅಲ್ಲದೆ ಇವರುಗಳ ನಿಜನಾಮಗಳೂ ಇವೇ ಆಗಿವೆ ಎಂಬುದು ಮಣ್ಣಿನಮಗನ ನಿರ್ದೇಶನಾ ಚಾತುರ್ಯಕ್ಕೆ ಮತ್ತು ನೈಜತೆಗೆ ಅವರು ಕೊಡುವ ಪ್ರಾಮುಖ್ಯತೆಗೆ ಸಾಕ್ಷಿ) ಇನ್ನು ಮುಂತಾದವರಿಂದ ಒಳ್ಳೆಯ ಮನರಂಜನೆ ನೀಡುತ್ತಿದೆಯೆಂದೋ ಅಥವ ಮೇಲೆ ತಿಳಿಸಿದ ಗುಣಗಳಷ್ಟೇ ಅಲ್ಲದೆ ಯಾವ ಎಗ್ಗಿಲ್ಲದೆ ಸಭೆ ಸಮಾರಂಭಗಳಲ್ಲಿ ನಿದ್ದೆ ಮಾಡುವ, ಯಾವ ವಿದೇಶೀ ಸಭೆಯಾದರೂ ಪಂಚೆ ಎತ್ತಿ ಕಟ್ಟುವ, ಪ್ರಪಂಚದ ಯಾವ ಮೂಲೆಗೆ ಹೋದರೂ ಮುದ್ದೆ-ಸೊಪ್ಪಿನಸಾರೇ ಬೇಕೆನ್ನುವಷ್ಟು ಭಾರತೀಯತೆಯನ್ನು ಮೆರೆಸುವ, ಮಲ-ಮೂತ್ರ ವಿಸರ್ಜನೆಗೂ ರಾಹುಕಾಲ/ಗುಳಿಕಕಾಲಗಳನ್ನು ನೋಡುವ, ಕರ್ನಾಟಕವನ್ನಾಳಲು ತಮಿಳುನಾಡಿನ ದೇವರುಗಳಿಗೆ ಮೊರೆ ಹೋಗುವ, ಭಜರಂಗಿಗಳೂ ನಾಚುವಷ್ಟು ಹೋಮ ಹವನಗಳನ್ನು ಮಾಡುವ, ವೈರಿ ನಿವಾರಣೆಗೆ ಮಾಟಮಂತ್ರ, ಭಾನಾಮತಿಗಳಿಗೆ ಮೊರೆಹೋಗುವ, ಜಾತ್ಯಾತೀತವೆಂಬುತ್ತ ಮುಳ್ಳುಗೌಡ/ದಾಸಗೌಡನೆಂದು ತೂಗುವ, ನಂಬಿಕೆ ದ್ರೋಹದ ಇತಿಹಾಸದ ಇವರು, ಬಹುಶಃ ಮತದಾರರಿಗೆ ಅತ್ಯಂತ ಪರಿಪೂರ್ಣ ಭಾರತೀಯನಾಗಿ, ತಮ್ಮ ಪ್ರತಿಬಿಂಬವೇ ಇವರಾಗಿ, ಶುದ್ಧ ದೇಸೀ ’ಮಣ್ಣಿನಮಗ’ನಾಗಿ ಕಾಣುತ್ತಿರಬೇಕು!

ಖೇಣಿಯವರ ಅದೃಷ್ಟವೋ, ದುರಾದೃಷ್ಟವೋ ಅವರ ಯೋಜನೆ ಮತ್ತು ಐಟಿ/ಬಿಟಿ ಗಳ ಭರಾಟೆಯಲ್ಲಿ ಬೆಂಗಳೂರು ಸಿಂಗಾಪುರವಾಗುವ ಮುನ್ನ ಅದರ ನೆಲಕ್ಕೆ ಭೂಗಳ್ಳರ ಚದುರಂಗದಾಟದಿಂದ ನ್ಯೂಯಾರ್ಕ್ ನೆಲದ ಬೆಲೆ ಬಂದು, ಅದೇ ರೀತಿ ನಮ್ಮ ಮಣ್ಣಿನಮಗನ ಪಂಚೆಯೊಳಗಿನ ಒಂದೊಂದು ನಿಕೃಷ್ಟ ರೋಮಗಳೂ (ಕ್ಷಮಿಸಿ, ಈ ಪದವನ್ನು ಬಳಸಬಾರದೆಂದುಕೊಂಡರೂ ಇದು ನಮ್ಮ ಮಣ್ಣಿನ ಮಗ, ಮೊಮ್ಮಕ್ಕಳು ಅತಿಯಾಗಿ ಬಳಸಿ, ಪ್ರೀತಿಸುವ ಪದ) ಹುಲುಸಾಗಿ ಈ ನೆಲದಲ್ಲಿ ಹಬ್ಬಿ, ಖೇಣಿಯವರ ಯೋಜನೆಗೆ ಮೀಸಲಾಗಿಟ್ಟ ನೆಲವನ್ನು ಪಸರಿಸಿಕೊಳ್ಳಬೇಕಿರುವಾಗ, ಖೇಣಿಯವರ ಯೋಜನೆ, ಜನತೆಯ ಪ್ರಯೋಜನೆಯ ಬಗ್ಗೆ ಕೇಳುವವರ್‍ಯಾರು?

ಕ್ಷುಲ್ಲಕ ಕಾರಣ ಸಿಕ್ಕರೂ ರಸ್ತೆತಡೆ, ರೈಲುತಡೆ, ಬಂದ್ ಗಳಿಗೆ ಕರೆ ನೀಡುವ ಕಾಂಗ್ರೆಸ್ ಆಗಲೀ ಬಿಜೆಪಿಗಳಾಗಲಿ, ಸಿನಿಮಾ ನಟಿಯೊಬ್ಬಳು ಹೂಸಿದರೂ ತಿಂಗಳುಗಟ್ಟಲೆ ಅದರ ಸುವಾಸನೆಯ ಬಗ್ಗೆ ಸುದ್ದಿ ಮಾಡುವ ಪತ್ರಿಕೆಯವರಾಗಲೀ, ಯಾರೊಬ್ಬರೂ ಈ ಖೇಣಿಯವರ ಸವಾಲಿನ ವಿಷಯವನ್ನೆತ್ತಿ ಮಣ್ಣಿನಮಗ, ಮೊಮ್ಮಕ್ಕಳ ಧೂಳನ್ನು ಕೊಡವದೇ ಇರುವುದೇಕೆ ಗೊತ್ತೆ?

ಇಂದಿನ ಪ್ರತಿಯೊಂದು ಪಕ್ಷದ ರಾಜಕಾರಣಿಯೂ ಈ ಬೆಂಗಳೂರು ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವುದೂ ಮತ್ತು ಈಗ ಇದನ್ನು ಸುದ್ದಿ ಮಾಡಿದರೆ ಈ ಲೈ ಡಿಟೆಕ್ಟರ್ ಭೂತ ಮುಂದೆ ತಮ್ಮನ್ನು ಅದಾವ ಪರಿ ಭಾಧಿಸುವುದೋ ಎಂಬ ಭಯದಿಂದ. ಹಾಗೆಯೇ ಸುದ್ದಿಮಾಧ್ಯಮಗಳಿಗೂ ಮುಂದೆಲ್ಲಿ ತಮ್ಮ ರೋಚಕಸುದ್ದಿಗಳನ್ನು ಪ್ರಮಾಣಿಸಲು ಈ ಲೈ ಡಿಟೆಕ್ಟರ್ ಪರೀಕ್ಷೆ ಬರುವುದೋ ಎಂಬ ದಿಗಿಲಿರಬಹುದು.

ಒಟ್ಟಿನಲ್ಲಿ ಪರಸ್ಪರ ಕೆಸರೆರಚುತ್ತ, ಅಮ್ಮನ ಮಗನಾದರೆ...ಅಪ್ಪನಿಗೆ ಹುಟ್ಟಿದ್ದರೆ...ಇಲ್ಲಾ ಗಂಡಸಾಗಿದ್ದರೆ...ಎಂದು ಕೀಳು ಮಟ್ಟದ ಸವಾಲೆಸೆಯುತ್ತಿದ್ದ ರಾಜಕಾರಣಿಗಳಿಗೆ ನ್ಯಾಯಯುತವಾಗಿ, ವೈಜ್ಞಾನಿಕವಾಗಿ, ಆದರ್ಶಯುತವಾಗಿ ಸವಾಲೆಸೆದಿರುವ ಖೇಣಿಯವರ ಉದ್ದೇಶ ವಸ್ತುನಿಷ್ಟವಾಗಿದ್ದರೆ, ಇದು ಇಂದು ತಾಂತ್ರಿಕತೆಯ ದೆಸೆಯಿಂದಲಾದರೂ ಬದಲಾಗಲೇಬೇಕಾದ ಸಾಮಾಜಿಕತೆಯ ಆರಂಭವೇನೋ ಎಂದು ಸಂತಸವಾಗುತ್ತಿದೆ.

ವಿನೋದ:

ಬೆಂಗಳೂರಿಗೆ ನ್ಯೂಯಾರ್ಕ್ ಬೆಲೆ ಹೇಗೆ ಬಂತು ಗೊತ್ತೆ?

ಒಬ್ಬ ಮಾಮೂಲಿ ಮನೆ ಬ್ರೋಕರ್ ನ ಬಳಿ ಒಬ್ಬ ಬಾಂಬೆವಾಲಾ ಬಂದು, ಒಂದು ನಿವೇಶನ ಬೇಕೆಂದು ಕೇಳಿದ.

ಸರಿ, ಬ್ರೋಕರ್ ಒಂದು ನಿವೇಶನ ತೋರಿಸಿ ತನ್ನ ಹರಕು-ಮುರುಕು ಹಿಂದಿಯಲ್ಲಿ ಐನೂರು ರುಪಾಯಿ ಚದರಡಿ ಎಂಬುದಕ್ಕೆ "ಪಾಂಚ್ ಹಜಾರ್" ಎಂದ.

ಬಾಂಬೆವಾಲಾ ಕೂಡ ತನ್ನ ಪ್ರತಿಷ್ಟೆಯನ್ನು ಮೆರೆಸುತ್ತ ತನ್ನ ಹರಕು-ಮುರುಕು ಇಂಗ್ಲಿಷ್ ನಲ್ಲಿ "ಓನ್ಲೀ ಫೋರ್ ಥೌಸಂಡ್ ಫೈವ್ ಹಂಡ್ರೆಡ್" ಎಂದ.

ಅದನ್ನರಿತ ಬ್ರೋಕರ್ ಒಳಗೆ ಖುಷಿಯಾಗಿ ವ್ಯವಹಾರ ಮುಗಿಸಿದ.

ಅಂದಿನಿಂದ ಬೆಂಗಳೂರಿನ ಆ ಏರಿಯಾಕ್ಕೆ ೪೫೦೦/ಚದರಡಿ ಫಿಕ್ಸ್ ಆಯಿತು. ಅಷ್ಟೇ ಅಲ್ಲದೆ ಇಡೀ ಬೆಂಗಳೂರಿನ ಬ್ರೋಕರ್ ಮಂಡಳಿಗೆ ಈ ಬೆಲೆ ಮಾದರಿಯಾಯಿತು.

ಇಷ್ಟು ಸರಳವಾದ ಇಕನಾಮಿಕ್ಸ್ ಗೆ ಪಾಶ್ಚಿಮಾತ್ಯರು ಅದೇಕೆ ಇನಫಲೇಶನ್, ಡಿಫಲೇಶನ್, ರಿಸೆಷನ್ ಅಂತ ತಲೆ ಕೆರೆದುಕೊಳ್ಳುವರೋ?

ಗೊತ್ತೆ?

ಹೊಣೆಗೇಡಿ ಪತ್ರಕರ್ತರ ಸೋಗು

ಇತ್ತೀಚೆಗೆ ’ಹೋಯ್ ಬೆಂದಗಾಳೂರ್’ ಪತ್ರಿಕೆಯಲ್ಲಿ ’ಇಂಡಿಯಾ ಟುಡೇ ಯಾವ ಮಟ್ಟಕ್ಕಿಳಿದಿದೆ ನೋಡಿ’ ಲೇಖನವನ್ನು ನೋಡಿ ಗಲಿಬಿಲಿಗೊಂಡೆನು. ತಮ್ಮ ಲೇಖನದಲ್ಲಿ ’ಇಂಡಿಯಾ ಟುಡೆ’ಯು ತನ್ನ ಸಪ್ಲಿಮೆಂಟ್ ಪತ್ರಿಕೆಯಲ್ಲಿ ಕಾಮಪ್ರಚೋದಕ ಚಿತ್ರಗಳಿಂದೊಡಗೂಡಿದ ಐಷಾರಾಮಿ ವಸ್ತುಗಳನ್ನು ಕುರಿತಾದ ಲೇಖನಗಳನ್ನು ನಮ್ಮ ಬುದ್ದಿಜೀವಿ ಪತ್ರಕರ್ತ/ಸಾಹಿತಿ ಸಂಪಾದಕರು ಹೀಗಳೆದು ಬರೆದಿದ್ದರು. ತಮ್ಮ ’ಹೋಯ್ ಬೆಂದಗಾಳೂರ್’ ಪತ್ರಿಕೆಯಲ್ಲಿ ರೌಡಿಯಿಸಂ, ಕ್ರೈಂ, ರೇಪ್, ಮರ್ಡರ್ ಗಳನ್ನು ವಿಜೃಂಭಿಸಿ ಬರೆದೇ ಈ ಮಟ್ಟಕ್ಕೆ ಬೆಳೆದಿರುವ ಈ ಮಹಾಶಯರು ಇದನ್ಯಾಕೆ ಹೀಗಳೆದರೆಂದು ಆಶ್ಚರ್ಯವಾಯಿತು. ವಿಕೃತ ಮನಸ್ಸುಗಳು, ’ರತಿವಿಜ್ಞಾನ’ದಂತಹ ಕೆಳಮಟ್ಟದ ಪತ್ರಿಕೆ ದೊರಕದೆ ಚಡಪಡಿಸುತ್ತಿದ್ದಾಗ ’ಹೋಯ್ ಬೆಂದಗಾಳೂರ್’, ’ಪೋಲೀ(ಸ್) ನ್ಯೂಸ್’ ಮುಂತಾದ ಪತ್ರಿಕೆಗಳು ಪರ್ಯಾಯವಾಗಿ ಆ ಗ್ಯಾಪ್ ಅನ್ನು ತುಂಬಿ ವಿಕೃತತೆಯನ್ನು ತೃಪ್ತಿಪಡಿಸಿಯೇ ಈ ಮಟ್ಟಕ್ಕೆ ಬೆಳೆದುವೆಂಬುದನ್ನು ಯಾರೂ ಅರಿಯರೆ?. ಕಾಲಕ್ರಮೇಣ ’ಹೋಯ್ ಬೆಂದಗಾಳೂರ್’ ತನ್ನ ದೃಷ್ಟಿಕೋನವನ್ನು ಬದಲಿಸಿಕೊಂಡಿರಬಹುದು. ಆದರೆ ಇಂದು ಕನ್ನಡದ ಯುವಜನತೆ ರೌಡಿಯಿಸಂ ಕಡೆಗೆ ತೀವ್ರ ಆಕರ್ಷಿತಗೊಂಡಿರುವುದರಲ್ಲಿ ’ಹೋಯ್ ಬೆಂದಗಾಳೂರ್’ ಕೊಡುಗೆ ಗಣನೀಯವಾಗಿದೆಯೆಂಬುದನ್ನು ಇದರ ಸಂಪಾದಕರು ಮರೆತಿರಬೇಕು.

ಈಗಲೂ ಅದೆಂತದೋ ಸುಡುಗಾಡು ಕ್ರೈಂ...... ಧಾರಾವಾಹಿಯನ್ನು ತೆಗೆಯುತ್ತ, ಕೀಳುಮಟ್ಟದ ಗೂಂಡಾಗಿರಿ ಸಿನೆಮಾಗಳಲ್ಲಿ ನಟಿಸುತ್ತ ತಮ್ಮ ತಿಕ್ಕಲುತನವನ್ನು ಮೆರೆಯುತ್ತಿರುವ ಈ ಬುದ್ದಿಜೀವಿ ಪತ್ರಕರ್ತ ಕಂ ಸಾಹಿತಿ ಕಂ ನಟ, ಇತ್ತೀಚೆಗೆ ಮಕ್ಕಳಿಂದ ಮುದುಕರಾದಿಯಾಗಿ ಎಲ್ಲರಿಗೂ ಲೈಫ್ ಕೋಚ್ ರಂತೆ ಪೋಸ್ ಕೊಡುತ್ತಿದ್ದಾರೆ. ಒಮ್ಮೊಮ್ಮೆ ಹೃದಯ ಚೆಕ್ ಮಾಡಿಸಿಕೊಳ್ಳಿರೆಂದೋ, ಒಮ್ಮೊಮ್ಮೆ ಲೈಫ್ ಸ್ಟೈಲ್ ಬದಲಾಯಿಸಿಕೊಳ್ಳಿರೆಂದೋ, ಹುಡುಗಿಯರು ತಮ್ಮ ಬಾಯ್ ಫ್ರೆಂಡ್ ಗಳನ್ನು ಪರೀಕ್ಷಿಸಿರೆಂದೋ ಇಲ್ಲ ಗೃಹಿಣಿಯರು ತಮ್ಮ ಗಂಡಂದಿರ ನೆತ್ತಿಯನ್ನು ಕುಕ್ಕಿರೆಂದೋ ಉಚಿತ ಸಲಹೆ ಕೊಡುತ್ತಾರೆ. ಒಮ್ಮೊಮ್ಮೇ ದಿಢೀರೆಂದು ಅವರಲ್ಲಿನ ಕೀಳರಿಮೆ ಎದ್ದಾಗ ಇನ್ಫಿಯ ನಾರಾಯಣಮೂರ್ತಿಯವರನ್ನೋ ಅಥವಾ ಯು. ಆರ್. ಅನಂತಮೂರ್ತಿಯವರನ್ನೋ ಹೀಗಳೆದು ತಮ್ಮನ್ನು ಸಮಾಧಾನಿಸಿಕೊಳ್ಳುವುದು, ಮಗದೊಮ್ಮೆ ಗರ್ವದ ಮದವೇರಿದಾಗ, ಬದುಕಿದ್ದರೆ ಒಂದು ಕೈ ನೋಡಿಯೇ ಬಿಡುತ್ತಿದ್ದೆ ಎಂದು ಲಂಕೇಶ್ ರನ್ನು ಜರೆದು, ಮತ್ತೊಮ್ಮೆ ನೇರ ತಮ್ಮ ಲೆವೆಲ್ ಅನ್ನು ಇಂಟರ್ ನ್ಯಾಶನಲ್ ಮಟ್ಟಕ್ಕೆ ತೆಗೆದುಕೊಂಡುಹೋಗಿ ಬಿಲ್ ಗೇಟ್ಸ್, ಕ್ಲಿಂಟನ್ ರನ್ನೋ ಅಥವಾ ಒಟ್ಟಾರೆ ಅಮೆರಿಕಾವನ್ನು ಮೂದಲಿಸಿ ತಮ್ಮ ಲೆವೆಲ್ ಅನ್ನು ಐಟಿ/ಬಿಟಿಯಂತೆ ಗ್ಲೋಬಲ್ ಆಗಿ ಸಮೀಕರಿಸಿಕೊಳ್ಳುತ್ತ ತಮ್ಮನ್ನು ವಿಶ್ವದ ಒಬ್ಬ ವಿಶಿಷ್ಟ ಬುದ್ದಿಜೀವಿಯಂತೆ ಚಿತ್ರಿಸಿಕೊಳ್ಳುತ್ತಾರೆ.

ವಿಷಾದದ ಸಂಗತಿಯೆಂದರೆ ಬೆಂಗಳೂರಿನ ವಿಕೃತ ಪ್ರೇಮಿಯೊಬ್ಬನ ಆಸಿಡ್ ದಾಳಿಗೆ ತುತ್ತಾಗಿ ಇವರ ಸಹಾಯಹಸ್ತವನ್ನು ಪಡೆದಿರುವ ಮುಗ್ಧ ಯುವತಿಯೋರ್ವಳಿಗೆ ಈ ಮಹಾಶಯರು ಒಂದಾನೊಂದು ಕಾಲದಲ್ಲಿ ಕ್ರೌರ್ಯವನ್ನು ವಿಜೃಂಭಿಸಿ ಭೂಗತರಾಗಿದ್ದ ರೌಡಿಗಳಿಗೆಲ್ಲ ’ನಾಯಕ’ ಪಟ್ಟ ಕಟ್ಟಿ, ಆ ವಿಕೃತಪ್ರೇಮಿಯಷ್ಟೇ ಅಲ್ಲದೆ ಇಂದಿನ ಯುವಜನಾಂಗವೇ ಅಂತಹ ಕ್ರೌರ್ಯವನ್ನು ಮೆರೆಯುವ ರೌಡಿಯಿಸಂ ಗೆ ತೀವ್ರ ಆಕರ್ಷಿತರಾಗಿ ಅದನ್ನೇ ಮಾಡಹೊರಟಿರುವುದಕ್ಕೆ ಬೀಜ ನೆಟ್ಟಿದ್ದರೆಂಬುದನ್ನು ಅರಿಯದವಳಾಗಿದ್ದಾಳೆ.

ಹಾಗೆ ವಿಮರ್ಶಿಸುವುದಾದರೆ, ಕರ್ನಾಟಕದ ಇಂದಿನ ಸ್ಥಿತಿಗತಿಗಳಿಗೆ ಪತ್ರಕರ್ತರ (ದಿನಪತ್ರಿಕೆಗಳ) ಕೊಡುಗೆಯನ್ನೇ ಪ್ರಶ್ನಿಸಿಕೊಳ್ಳಿ. ಸುಮ್ಮನೆ ಇಂದಿನ ದಿನಪತ್ರಿಕೆಗಳ ಸುದ್ದಿಗಳೆಡೆ ಒಮ್ಮೆ ಕಣ್ಣು ಹಾಯಿಸಿ ನೋಡಿ. ಸಂಪುಟ ವಿಸ್ತರಣೆಯ ಸಮಯದಲ್ಲಾದರೆ ಒಬ್ಬ ರಾಜಕಾರಣಿ ತಾನು ಪ್ರಬಲ ಕೋಮಿನವನೆಂದೂ ತನಗೆ ಅಬಕಾರೀ ಖಾತೆ ಬೇಕೆಂದು ಹೇಳಿದ್ದನ್ನೋ ಅಥವ ಮತ್ತೊಬ್ಬ ತಾನು ಹಿಂದುಳಿದ ವರ್ಗದವನೆಂದೋ ತನಗೆ ಪ್ರಮುಖ ಖಾತೆ ಬೇಕೆಂತಲೂ ಕೇಳುವುದನ್ನೋ ರೋಚಕವಾಗಿ ವರದಿಸುವ ಈ ಪತ್ರಕರ್ತರು ಕಡೆಯಪಕ್ಷ ಕೊನೆಗೊಂದು ಸಾಲಾದರೂ ತಮ್ಮ ವಿವೇಚನೆಯ ವಾಕ್ಯವನ್ನು ಸೇರಿಸಿರುವುದಿಲ್ಲ. ಆ ರಾಜಕಾರಣಿಗೆ ಆ ಖಾತೆಯ ಕುರಿತಾದ ವಿದ್ಯಾಭ್ಯಾಸ, ಅನುಭವಗಳನ್ನು ಪ್ರಶ್ನಿಸಿಯೋ ಅಥವಾ ಆ ಖಾತೆಯಲ್ಲಿ ಅವನ ಉದ್ದೇಶ ಹೆಚ್ಚಿನ ಹಣ ಮಾಡುವುದೆಂದೋ ಒಂದು ವಾಕ್ಯವನ್ನಾದರೂ ಸೇರಿಸಿ, ಪ್ರಶ್ನಿಸಿ ಬರೆದರೆ ಎಷ್ಟೋ ಜನಜಾಗೃತಿಯನ್ನು ಮೂಡಿಸಬಹುದು. ಜಾತಿ ಪಂಗಡಗಳ ಸಂಘಗಳ ಸಭೆಗಳ ಕುರಿತು, ಬೇವಿನಮರದಲ್ಲಿ ಹಾಲು ಬರುವುದು, ಭಿಕ್ಷುಕನೊಬ್ಬ ಟ್ಯೂಬ್ ಲೈಟ್ ತಿನ್ನುವುದು, ತಲೆ ಕೆಟ್ಟ ಯಾವನೋ ಮರವೇರಿ ಕುಳಿತದ್ದು ಇನ್ನು ಮುಂತಾದ ವಿವೇಚನೆ, ವಿಶ್ಲೇಷಣೆ ಇಲ್ಲದ ವರದಿಗಳಿಂದ ಜಾತೀಯತೆ ಮೂಢತೆಗಳನ್ನು ಪ್ರಮುಖಾಂಶವಾಗಿ ಮೆರೆಸುವರು. ಕೆಲವೊಮ್ಮೆ ಪಾಶ್ಚಿಮಾತ್ಯ ಪತ್ರಿಕೆಗಳನ್ನು ಅನುಕರಿಸುತ್ತ ಜೂ ಒಂದರ ಹುಲಿ ನಾಲ್ಕು ಮರಿ ಹಾಕಿದ್ದು, ಒಬ್ಬ ಸಿನಿಮಾ ನಟ ಬಿರಿಯಾನಿ ತಿನ್ನುವುದೂ ಸುದ್ದಿಯಾಗುತ್ತವೆ. ನಿತ್ಯವೂ ಇಂತಹ ವರದಿಗಳನ್ನು ಓದಿದ ಜನರಲ್ಲಿ ಇನ್ನೆಲ್ಲಿಂದ ವಿವೇಚನೆಗಳು ಹುಟ್ಟುತ್ತವೆ?

ಗಮನಿಸಿ ನೋಡಿ, ಈ ವರದಿಗಾರರು ತಮ್ಮ ವರದಿಯನ್ನು ರೋಚಕಗೊಳಿಸುವ ಭರದಲ್ಲಿ, ’ಕುಮಾರಣ್ಣ’, ’ದಾವಣಗೆರೆ ದೊರೆ’, ’ಬಳ್ಳಾರಿ ಧಣಿ’, ’ಅಪ್ಪಾಜಿ’, ’ಅಮ್ಮ’, ’ನೀಲಿ ಕಣ್ಣಿನ ಹುಡುಗ’, ’ಮೇಡಂ’ ಇನ್ನು ಮುಂತಾದ ಪದಪ್ರಯೋಗದಿಂದ ಜನಗಳಲ್ಲಿ ಕೀಳರಿಮೆಯೆಂಬ ಮಾರಿಯನ್ನು ವ್ಯಾಪಕವಾಗಿ ಹಬ್ಬಿಸುತ್ತಿದ್ದಾರೆ. ಸಮಾಜದ ಸ್ವಾಸ್ಥ್ಯದ ಮೇಲೆ ಯಾವ ರೀತಿಯ ಪರಿಣಾಮಗಳಾಗಬಹುದೆಂಬ ಕಲ್ಪನೆಯೂ ಇಲ್ಲದೆ ತಮ್ಮ ವರದಿಗಳನ್ನು ರೋಚಕಗೊಳಿಸುತ್ತ ರಾಜಕಾರಣಿಗಳ ಬಾಲಬಡುಕರೇ ಆಗಿಬಿಟ್ಟಿದ್ದಾರೆ.

ವೃತ್ತಪತ್ರಿಕೆಗಳು ಪ್ರಸ್ತುತ ವಿದ್ಯಾಮಾನಗಳನ್ನು ವಿಶ್ಲೇಷಿಸಿ ಜಾಗೃತಿ ಮೂಡಿಸುತ್ತಿವೆ ನಿಜ. ಆದರೆ ಈ ಪತ್ರಿಕೆಗಳು ಎಷ್ಟು ಜನರನ್ನು ಮುಟ್ಟುತ್ತಿವೆ? ಸಹಜವಾಗಿ ಹೆಚ್ಚು ಸರ್ಕ್ಯುಲೇಷನ್ ಇರುವ ದಿನಪತ್ರಿಕೆಗಳೇ ಹೆಚ್ಚು ಜನರನ್ನು ಮುಟ್ಟುವುದು. ಆದ್ದರಿಂದ ಈ ಪತ್ರಿಕೆಗಳು ತಮ್ಮ ವರದಿಗಳನ್ನು ಪ್ರಾಮಾಣಿಕವಾಗಿ ವರದಿಸುತ್ತ, ದೇವೇಗೌಡರ ಬಾಲಬಡುಕರು ಅವರನ್ನು ’ಅಪ್ಪಾಜಿ’ಯೆಂದೋ, ಕುಮಾರಸ್ವಾಮಿಯನ್ನು ’ಕುಮಾರಣ್ಣ’ನೆಂದೋ, ಕಾಂಗ್ರೆಸ್ಸಿಗರು ಸೋನಿಯಾರನ್ನು ’ಮೇಡಂ’ ಎಂದೋ ಗುಲಾಮರಂತೆ ಕರೆದರೆ ಕರೆದುಕೊಳ್ಳಲು ಬಿಟ್ಟು ತಮ್ಮ ಪಾಡಿಗೆ ತಾವು ಸುದ್ದಿಯನ್ನು ಸುಶಿಕ್ಷಿತ ಶೈಲಿಯಲ್ಲಿ ಬರೆದರೆ ಸಮಾಜದಲ್ಲಿ ಎಷ್ಟೋ ಕೀಳರಿಮೆ ನಿಲ್ಲುತ್ತದೆ.

ವಿಷಾದ:

ಒಟ್ಟಿನಲ್ಲಿ ಬ್ರಿಟಿಷರಿಂದ ಭ್ರಷ್ಟ ನೇತಾರರಿಗೂ, ಬಲಾಢ್ಯರಿಗೂ ಸ್ವೇಚ್ಚಾಚಾರ (ಸ್ವಾತಂತ್ರ್ಯವಲ್ಲ) ಹಸ್ತಾಂತರಗೊಂಡು ದಿನಪತ್ರಿಕೆಗಳು ಜನಸಾಮಾನ್ಯರಿಗೆ ಈ ಪುಢಾರಿಗಳ, ಬಲಾಢ್ಯರ ದಾಸ್ಯವನ್ನು ಪ್ರಸರಿಸುವ ಮಾಧ್ಯಮವಾಗಿ ಪರಿವರ್ತಿತಗೊಳ್ಳುತ್ತಿವೆಯೇನೋ ಎಂದಿನಿಸುತ್ತಿದೆ.

ನಿಜಕ್ಕೂ "ಭಾರತ ಪ್ರಕಾಶಿಸುತ್ತಿದೆ!"

ಕುಟಿಲ ಬುದ್ದಿಜೀವಿಗಳ ಓಲಾಟ

ಕಳೆದೆರಡು ವಾರಗಳ ಹಿಂದೆ ಮಠಾಧೀಶ್ವರರೋರ್ವರ ಅಧಿಕಾರ ಹಸ್ತಾಂತರದ ಅಭಿಪ್ರಾಯವನ್ನು ಕುರಿತು ವಿಶ್ಲೇಷಿಸಿದ್ದ ನಮಗೆ, ಈಗ ಸಾಹಿತಿಗಳ ವಲಯದಲ್ಲಿ ಮೂಡಿರುವ ಭಿನ್ನಾಭಿಪ್ರಾಯ ಈ ವಾರದ ಅಂಕಣವಾಗುತ್ತಿದೆ. ಒಟ್ಟಿನಲ್ಲಿ ಎಲ್ಲೆಲ್ಲೂ ಅಧಿಕಾರ ಹಸ್ತಾಂತರವೇ ಸುದ್ದಿಗೆ ಗ್ರಾಸವಾಗಿದ್ದರೂ ಇಲ್ಲಿ ಅದು ನೆಪ ಮಾತ್ರವಾಗಿ ಈ ಲೇಖನದ ಮುಖ್ಯಾಂಶ ಬೇರೆಯದೇ ಆಗಿದೆ.

ಇತ್ತೀಚೆಗೆ ಚಾಮರಾಜನಗರದ ಜಿಲ್ಲಾ ಕಸಾಪ ಸಭೆಯಲ್ಲಿ ಹಿರಿಯ ಸಾಹಿತಿ ಹಂಪನಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಸಮ್ಮಿಶ್ರ ಸರಕಾರದ ಪಾಲುದಾರ ಜೆಡಿಎಸ್ ಪಕ್ಷವು ಅಧಿಕಾರವನ್ನು ಹಸ್ತಾಂತರಿಸದಿದ್ದರೆ ತಾವು ವಿಧಾನಸಭೆಯ ಮುಂದೆ ನಿರಶನ ಹೂಡುವುದಾಗಿ ಹೇಳಿದ್ದನ್ನೂ ಮತ್ತು ಅಲ್ಲಿಯೇ ಇದ್ದ ಕಸಾಪ ಅಧ್ಯಕ್ಷ ಚಂಪಾ ಅವರು ಇದನ್ನು ವಿರೋಧಿಸುತ್ತ "ಸಾಹಿತಿಗಳು ಮಾಡಲಿಕ್ಕಿರುವ ಅನೇಕ ಕೆಲಸಗಳನ್ನು ಮಾಡುವುದನ್ನು ಬಿಟ್ಟು ಹೀಗೆ ಅನವಶ್ಯಕವಾಗಿ ರಾಜಕೀಯವನ್ನು ಮಾತನಾಡಬಾರದು" ಎಂದು ವಿರೋಧಿಸಿದರೆಂದು ಪತ್ರಿಕೆಗಳಲ್ಲಿ ಓದಿದ ನನಗೆ ಆಶ್ಚರ್ಯವೇನೂ ಆಗಲಿಲ್ಲ.

ಸರಿಯಾಗಿ ಯೋಚಿಸಿದರೆ, ಸಾಮಾಜಿಕ ಬದ್ದತೆ ಮತ್ತು ಜವಾಬ್ದಾರಿಯನ್ನು ಹೊತ್ತ ಸಾಹಿತಿಗಳು ಸಾಮಾಜಿಕ ಕಳಕಳಿಗೆ, ಜನರಿಂದಾಗಲೀ, ಅಧಿಕಾರಿಗಳಿಂದಾಗಲೀ, ಮಠಾಧಿಪತಿಗಳಿಂದಾಗಲೀ, ಧೂರ್ತ ರಾಜಕಾರಣಿಗಳಿಂದಾಗಲೀ ಅಥವಾ ಅಂತಹ ಧೂರ್ತರೇ ತುಂಬಿರುವ ಸರ್ಕಾರದ ಯಾವುದೇ ಮೂರ್ಖ ನಿರ್ಧಾರಗಳಿಂದಾಗಲೀ ಧಕ್ಕೆಯುಂಟಾದಾಗ ಅಥವ ಅಂತಹ ಪರಿಸ್ಥಿತಿಯೊದಗಬಹುದೆಂಬ ಸುಳಿವು ಸಿಕ್ಕಾಗಲೆಲ್ಲ ದನಿಯೆತ್ತಿ ಜನಜಾಗೃತಿಗೊಳಿಸುವುದೂ ಮತ್ತು ಗಟ್ಟಿಯಾಗಿ ಹೋರಾಡುವುದೂ ಜವಾಬ್ದಾರಿಯುತ ಸಾಹಿತಿಗಳ ಕರ್ತವ್ಯವೇ ಆಗಿದೆ.

ನಮ್ಮ ಬುದ್ದಿಜೀವಿಗಳು ಹರೆಯದ ಬಿಸಿರಕ್ತದ ಹುರುಪಿನಲ್ಲಿ ಸಮಾಜದ ಹುಳುಕುಗಳನ್ನೆತ್ತಿ ತೋರಿಸುತ್ತ ತಮ್ಮ ಬರವಣಿಗೆಯಿಂದ ಕ್ರಾಂತಿಯನ್ನೇ ಮೆರೆದು, ಬೆಳೆಯುತ್ತಿದ್ದ ಅಂದಿನ ಯುವಪೀಳಿಗೆಗೆ ಮಾದರಿಯೆನಿಸಿ, ಯುವಜನಾಂಗದ ಅಘೋಷಿತ ’ರ್‍ಓಲ್ ಮಾಡೆಲ್’ಗಳೆನಿಸಿದ್ದ ಈ ಬುದ್ದಿಜೀವಿ ಸಾಹಿತಿಗಳು ವಯಸ್ಸಾದಂತೆ ಬಿಸಿ ಆರಿ, ಯಾವುದೇ ಒಬ್ಬ ಮಾಮೂಲೀ ವ್ಯಕ್ತಿಯಂತೆ ತಮ್ಮ ಆಸ್ತಿ, ಅಂತಸ್ತು, ಪ್ರತಿಷ್ಟೆ, ತಮ್ಮ ಮಕ್ಕಳ ಉನ್ನತಿ ಮತ್ತು ಅಧಿಕಾರದಾಹಗಳ ದಾಸರೇ ಆಗಿ ಮಾರ್ಪಾಟಾಗಿದ್ದಾರೆ.

ಇತ್ತೀಚಿನ ನಮ್ಮ ಬುದ್ದಿಜೀವಿ ಸಾಹಿತಿಗಳ ವರ್ತನೆಯನ್ನೇ ಗಮನಿಸಿ. ಬಹುಪಾಲು ಬುದ್ದಿಜೀವಿಗಳು ಜವಾಬ್ದಾರಿಯುತವಾಗಿ ವರ್ತಿಸದೆ ವಿವೇಚನೆಯಿಲ್ಲದೆ ಜಾತ್ಯಾತೀತ ರಾಜಕಾರಣಿಗಳನ್ನು ಮೀರಿಸುವಷ್ಟು ’ಓಲೈಕೆ’ ಗೆ ಶರಣಾಗಿದ್ದಾರೆ. ಒಂದು ಕೋಮಿನ ಜನ ಪೂಜಿಸುವ ದೇವತೆಗಳನ್ನು ಕಾಮಪ್ರಚೋದಕವಾಗಿ ಚಿತ್ರಿಸಿದ ಎಂ. ಎಫ್. ಹುಸೇನ್ ರನ್ನು ಅಪ್ರತಿಮ ಕಲಾಕಾರರೆಂದೂ ಮತ್ತೊಂದು ಕೋಮಿನ ದೇವನನ್ನು ಚಿತ್ರಿಸಿದ ನೆದರ್ ಲ್ಯಾಂಡಿನ ವ್ಯಂಗಚಿತ್ರಗಾರನನ್ನು ಕೋಮು ಗಲಭೆಯ ಪ್ರಚೋದಕನೆಂದೂ ಅಭಿವ್ಯಕ್ತಿತ್ವದ ಸಮನ್ವಯವನ್ನು ಮೆರೆಯುವುದು, ಇದನ್ನು ಪ್ರಶ್ನಿಸಿದವರನ್ನು ’ಚಡ್ಡಿ’ ಗಳೆಂದು (ಚಿದಾನಂದಮೂರ್ತಿಗಳನ್ನು ಜರೆದಂತೆ) ಜರೆಯುವುದು, ಒಂದೆಡೆ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಅರಿವಿದ್ದು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಸೇರಿಸಿ, ಬಡ ಮಕ್ಕಳು ಬರುವ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಯನ್ನು ಸಲ್ಲದ ನೆಪಗಳನ್ನು ನೀಡಿ ವಿರೋಧಿಸುವುದು ಮತ್ತು ಇಂದು ಕೃಷಿಕರು ಕೃಷಿಕಾರ್ಮಿಕರು ಸಿಗದೆ ನೊಂದು ಫಲವತ್ತಾದ ಭೂಮಿಯನ್ನು ಪಾಳು ಬಿಡುವಂತಹ ಪರಿಸ್ಥಿತಿ ಕರ್ನಾಟಕದ ಉದ್ದಗಲಕ್ಕೂ ಇದ್ದರೂ ಈ ನಿಜಪರಿಸ್ಥಿತಿಯ ಅರಿವಿದ್ದೂ ಇಲ್ಲದಂತೆ ಯಾವೊತ್ತೋ ಸತ್ತು ಇತಿಹಾಸವಾಗಿ ಇಂದಿನ ಸಾಮಾಜಿಕ ಪರಿಸ್ಥಿತಿಗೆ ಅಪ್ರಸ್ತುತವೂ ಅಭಾಸವೂ ಆದ ನಕ್ಸಲ್ (ಆದರ್ಶ?) ವಾದವನ್ನು ಬೆಂಬಲಿಸುತ್ತಿರುವ ಸಂಗತಿಗಳನ್ನು ನೋಡಿದರೆ ನಗಬೇಕೋ ಅಳಬೇಕೋ ತಿಳಿಯದು.

ಅಷ್ಟೇ ಅಲ್ಲದೆ ಪ್ರಶಸ್ತಿಗಳ ಲಾಬಿಗೋ, ಪ್ರಚಾರದ ಹಪಾಹಪಿಗೋ, ತಮಗೊಂದು ಬೆಂಗಳೂರಿನಲ್ಲಿ ಸರ್ಕಾರೀ ಸೈಟು ಗಿಟ್ಟಿಸಿಕೊಳ್ಳಬೇಕೆಂದೋ ಅಥವಾ ತಮ್ಮೊಳಗೆ ಅವಿತಿರುವ ಕುಟಿಲ ಕಾಮನೆಯ ಕಡಿತದ ದೆಸೆಯಿಂದಲೋ ಇಂದು ಕನ್ನಡದ ಬಹುತೇಕ ಬುದ್ದಿಜೀವಿ ಸಾಹಿತಿಗಳು ಸೆಕ್ಯುಲರ್ ಪದದ ನಿಜ ಅರ್ಥವನ್ನು ’ಓಲೈಕೆ’ ಗೆ ವ್ಯಾಖ್ಯಾನಿಸಿ, ತಮ್ಮ ಅನುಕೂಲಕ್ಕನುಗುಣವಾಗಿ ಸೆಕ್ಯುಲರ್ ಪದವನ್ನು ತಿರುಚಿ, ಈ ಬುದ್ಧಿಜೀವಿ ಸಾಹಿತಿಗಳನ್ನು ತಮ್ಮ ’ರೋಲ್ ಮಾಡೆಲ್’ ಗಳೆಂದು ಬಗೆದು ಬೆಳೆದ ಯುವ ಜನಾಂಗವು ತಮ್ಮ ಅಂದಿನ ’ರ್‍ಓಲ್ ಮಾಡೆಲ್’ಗಳ ಬಗೆಗೆ ಅಸಹ್ಯ ಪಡುವಷ್ಟು ಲದ್ಧಿಜೀವಿಗಳೆನಿಸಿದ್ದಾರೆ.

ಇಂತಹ ಮೂರ್ಖರನ್ನು ’ರ್‍ಓಲ್ ಮಾಡೆಲ್’ಗಳೆಂದುಕೊಂಡಿದ್ದೆವೆಲ್ಲಾ ಎಂದು ಕೊರಗುತ್ತಿರುವ ಸಂದರ್ಭದಲ್ಲಿ ಹಂಪನಾ ಅವರು ದನಿಯೆತ್ತಿ, ರಾಜಕೀಯ ಪಕ್ಷಗಳ ಸಾಮಾಜಿಕ ವಚನಬದ್ಧತೆಯನ್ನು ಪ್ರಶ್ನಿಸಿ, ಸಾಹಿತಿಗಳಿಗೆ ತಕ್ಕುದಾದ ಕಾರ್ಯವನ್ನು ಮಾಡಹೊರಟಿರುವುದು ಒಂದು ಅತ್ಯಂತ ಸಮಾಧಾನಕರ ಬೆಳವಣಿಗೆ.

ಯಾಕೋ ಇದನ್ನೆಲ್ಲಾ ನೋಡಿದರೆ, ಕನ್ನಡ ಸಾರಸ್ವತ ಲೋಕದಲ್ಲಿ ಬರೆದಂತೆ ಬಾಳಿ, ಪ್ರತಿಪಾದಿಸಿದ್ದನ್ನು ಜೀವಿಸಿದ ಏಕೈಕ ನಿಜ ಬುದ್ದಿಜೀವಿ ಸಾಹಿತಿಗಳಾದ ಮತ್ತು ನಮ್ಮ ಯುವಜನಾಂಗಕ್ಕೆ ಹೆಮ್ಮೆಯ ಮಾದರೀ ವ್ಯಕ್ತಿಯಾಗಿದ್ದ ಶ್ರೀ ಪೂರ್ಣಚಂದ್ರ ತೇಜಸ್ವಿಯವರು ಇನ್ನೂ ಬಹುಕಾಲ ನಮ್ಮೊಂದಿಗಿರಬೇಕಿತ್ತು ಎನಿಸುತ್ತದೆ.

ವಿನೋದ:

ಸಾಹಿತಿ ಚಂಪಾ ರವರಿಗೆ ಅವರದೇ ಸಾಹಿತ್ಯ ಶೈಲಿ ಚುಟುಕು ಮಾದರಿಯ ಕುಟುಕು.

ಚಂಪಾ,
ನೀವೇನಾ ಅಭಿವ್ಯಕ್ತಿತ್ವತೆಯ ಪಂಪ
ಇಲ್ಲಾ ಹಾಗೆಂದುಕೊಂಡವರ ಪಿಂಪಾ? (ಇಂಗ್ಲಿಷ್ ಪದ)
ಹಾಗಿದ್ದರೆ ನಿಮಗಿದೆ ನಮ್ಮ ಅನುಕಂಪ,
ಚಂಪಾ.

ದಿಕ್ಕೆಟ್ಟ ರೈತರೂ, ಔಷಧೀಯ ಬೆಳೆಗಳೂ.

ಮೊನ್ನೆ ಒಬ್ಬ ಮಾದರೀ(?) ರೈತರೊಬ್ಬರು ತಾವು ಕೌಡಿಸಿಫಾರ್ಮ್ ಎಂಬ ಔಷಧೀಯ ಗಡ್ಡೆಗಳನ್ನು ಬೆಳೆದಿರುವುದಾಗಿಯೂ ಅವಕ್ಕೆ ಅಮೇರಿಕಾದಲ್ಲಿ ಮಾರುಕಟ್ಟೆಯನ್ನೊದಗಿಸಿಕೊಡಬೇಕೆಂದು ಈಮೈಲ್ ಕಳುಹಿಸಿದ್ದರು. ಅಮೇರಿಕಾದ (ಎಫ್.ಡಿ.ಎ) ಆಹಾರ ಮತ್ತು ಔಷಧ ನಿಯಂತ್ರಣ ಸಂಸ್ಥೆಯ ಬಗ್ಗೆ ಅರಿವಿಲ್ಲದೆ, ಅಮೇರಿಕನ್ನರೆಲ್ಲ ಮಲಗಲು ನಿದ್ರೆಮಾತ್ರೆಯನ್ನು, ಎದ್ದಾಗ ಮಲವಿಸರ್ಜನೆಗೆ ಇನ್ನೊಂದು ಮಾತ್ರೆಯನ್ನು, ನಂತರ ವಿಟಮಿನ್ ಗಳನ್ನೂ ಕಾಮಕ್ಕೆ ವೈಯಾಗ್ರವನ್ನು ನಿತ್ಯವೂ ಸೇವಿಸುವರೆಂಬ ಮಾಧ್ಯಮದವರು ಕಲ್ಪಿಸಿರುವ ಕಲ್ಪನೆಯಿರುವ ಇವರಿಗೆ ಅವನ್ನೆಲ್ಲ ತಪ್ಪೆಂದೂ, ಅದೆಲ್ಲ ಮಾಧ್ಯಮದವರು ಸೃಷ್ಟಿಸಿರುವ ಕಪೋಲಕಲ್ಪಿತ ಸಂಗತಿಗಳೆಂದು ಮನವರಿಕೆ ಮಾಡಿಕೊಡುವುದು ಹೇಗೆಂದು ನನಗೆ ತೋಚದಾಯಿತು.

ಸರಿ, ಇದಾವುದು ಆ ಮಾಯಾಗಡ್ಡೆಯೆಂದು ಹುಡುಕಿದಾಗ ಅದೊಂದು ದಕ್ಷಿಣ ಅಮೇರಿಕಾದಲ್ಲಿ ಯಥೇಚ್ಚವಾಗಿ ಬೆಳೆಯುವ ’ಮೊಸಳೆಗಡ್ಡೆ’ ಯೆಂದು ಕರೆಯಲ್ಪಡುವ ಸಾಮಾನ್ಯ ಕಾಡುಗಡ್ಡೆಯಾಗಿತ್ತು. ಇದನ್ನು ದಕ್ಷಿಣ ಅಮೇರಿಕೆಯಲ್ಲಿ ತರಕಾರಿಯಾಗಿಯೂ, ಭಾರತದಲ್ಲಿ ’ವಿಧಾರಿಕಾಂಡ’ವೆಂದು ಆಯುರ್ವೇದದಲ್ಲಿ ಉಪಯೋಗಿಸುವ ಗಡ್ಡೆಯೂ ಆಗಿತ್ತು.

ಎಷ್ಟೊಂದು ಸುಲಭವಾಗಿ ನಮ್ಮ ರೈತರು ಈ ಔಷಧೀಯ ಸಸ್ಯಗಳನ್ನೊ, ಗಡ್ಡೆಗಳನ್ನೊ, ಬೀಜಗಳನ್ನೋ ಕೇವಲ ಗಾಳಿಸುದ್ದಿಗಳನ್ನು ನಂಬಿ ಲಕ್ಷಾಂತರ ಸುರಿದು, ಬೆಳೆದು, ಕನಸಿನರಮನೆಯನ್ನು ಕಟ್ಟಿ, ಕಡೆಗೆ ಮಾರುಕಟ್ಟೆಯಿಲ್ಲದೆ ಕೈಹೊತ್ತು ಕುಳಿತುಕೊಳ್ಳುವಂತಹ ಸ್ಥಿತಿಯನ್ನು ತಂದುಕೊಳ್ಳುತ್ತಿರುವರು.

ಕೆಲವು ವರ್ಷಗಳ ಹಿಂದಿದ್ದ ವೆನಿಲ್ಲಾ ಬೆಳೆಯ ಭರಾಟೆಯನ್ನು ನೆನಪಿಸಿಕೊಳ್ಳಿ. ಇದನ್ನು ಬೆಳೆದ ರೈತರು ವೆನಿಲ್ಲಾ ಹುರುಳಿಯನ್ನು ಕಾಯಲು ಬಂದೂಕುಧಾರಿಗಳನ್ನು ನೇಮಿಸಿಕೊಂಡಿದ್ದರೆಂದೂ, ಅಂದು ಆ ಎಲ್ಲಾ ರೈತರು ಬೆಳೆದ ವೆನಿಲ್ಲಾ ಇತರೆ ರೈತರುಗಳಿಗೆ ಬೀಜವಾಗಿ ಮಾರಲು ಕೂಡಾ ಸಾಕಾಗಲಾರದೆಂದೂ, ಆ ಬೇಡಿಕೆಯನ್ನು ಸರಿತೂಗಿಸಲು ಗೃಹಿಣಿಯರೂ ತಮ್ಮ ಕೈತೋಟದಲ್ಲಿಯೂ ವೆನಿಲ್ಲಾ ಬೆಳೆಯುವಷ್ಟು ಇದು ಪ್ರಚಾರ ಪಡೆದಿತ್ತು.

ಬಹುತೇಕ ಬೀಜವಾಗಿ ನಮ್ಮ ರೈತಬಾಂಧವರಿಗೇ ವೆನಿಲ್ಲಾ ಬಂಗಾರದ ಬೆಲೆಗೆ ಮಾರಾಟವಾಯಿತೇ ವಿನಹ ಅದು ಅಮೇರಿಕಾಕ್ಕೋ ಅಥವಾ ಇನ್ನಾವುದೇ ರಾಷ್ಟ್ರಕ್ಕೋ ರಫ್ತಾಗಿದ್ದು ನಾ ಕಾಣೆ. ಮುಂದಿನ ದಿನಗಳಲ್ಲಿ ವೆನಿಲ್ಲಾ ಬೆಳೆ ಏನಾಯಿತೆಂಬುದನ್ನು ನಾನೇನು ಬಿಡಿಸಿಹೇಳಬೇಕಾದ್ದಿಲ್ಲ. ನಾನು ರಜೆಗೆ ಭಾರತಕ್ಕೆ ಬಂದಿದ್ದಾಗ ನನ್ನ ಕಾಫೀ ಬೆಳೆಗಾರ ಮಿತ್ರರೊಬ್ಬರಲ್ಲಿದ್ದ ವೆನಿಲ್ಲಾ ಬಳ್ಳಿಗಳನ್ನು ನೋಡಿ ಅವರನ್ನು ಪ್ರಶಂಸಿಸಿದಾಗ ಅವರು ತಮ್ಮಲ್ಲಿದ್ದ ಅಷ್ಟೂ ವೆನಿಲ್ಲಾ ಬಳ್ಳಿಗಳನ್ನು ಕೇವಲ ನನ್ನ ತೋಟಕ್ಕೆ ಸಾಗಿಸುವ ಸಾಗಣೆ ವೆಚ್ಚವನ್ನು ಕೊಟ್ಟು ಬೇಕಾದರೆ ಅವುಗಳನ್ನು ಹೇರಿಕೊಂಡು ಹೋಗಿ ನಿಮ್ಮ ತೋಟದಲ್ಲಿ ಹಾಕಿಕೊಳ್ಳಿರೆಂದು ನನಗೆ ಹೇಳಿದರು.

ಇನ್ನು ನಮ್ಮ ನಾಯಕರುಗಳೋ ರೈತರ ಹಿತದ ಅಧ್ಯಯನಕ್ಕಾಗಿ ವಿದೇಶ ಪ್ರವಾಸಗಳನ್ನು ಮಾಡುತ್ತ ಅಲ್ಲಿ ತಮಗೆ ತಿನ್ನಲು ಇಡ್ಲಿ-ವಡೆ, ಚಿತ್ರಾನ್ನ, ಮೊಸರನ್ನ ಸಿಕ್ಕಿತೆಂದೋ ಇಲ್ಲವೆ ಕನ್ನಡ ಮಾತನಾಡಲು ತುಂಬಾ ಕನ್ನಡಿಗರು ಸಿಕ್ಕಿದರೆಂದೋ, ಅಥವಾ ಅಲ್ಲಿನ ಹೆಂಗಸರು ಲಜ್ಜೆಗೆಟ್ಟವರೆಂದೋ ತಮ್ಮ ಅಧ್ಯಯನ ವರದಿಯನ್ನು ಪತ್ರಕರ್ತರಿಗೆ ನೀಡುವರು. ಪತ್ರಕರ್ತರು ಕೂಡ ಅಲ್ಲಿನ ಹೆಂಗಸರು ಲಜ್ಜೆಗೆಟ್ಟದ್ದು ಹೇಗೆ ತಿಳಿಯಿತೆಂದು ಆ ನಾಯಕರನ್ನು ಪ್ರಶ್ನಿಸದೇ ಆಲ್ಲಿನ ಹೆಂಗಸರು ಲಜ್ಜೆಗೆಟ್ಟ ಸಂಗತಿಯನ್ನೇ ಪ್ರಮುಖಾಂಶವಾಗಿ ರೋಚಕ ವರದಿಯನ್ನು ಬರೆಯುವರು. ಅದನ್ನು ಜನರೂ ಕೂಡ ’ಓಹ್, ನಮ್ಮ ಮಂತ್ರಿಗಳಿಗೆ ಅಲ್ಲಿ ಇಡ್ಲಿ, ವಡೆ ಸಿಕ್ಕಿತಂತೆ, ಅಲ್ಲಿ ಬಹಳ ಕನ್ನಡಿಗರಿದ್ದಾರಂತೆ, ಅಲ್ಲಿನ ಹೆಂಗಸರು ತುಂಬಾ ಸಲೀಸಂತೆ’ ಎಂದುಕೊಂಡು ಮನಸ್ಸಿನಲ್ಲಿಯೇ ಆ ಲಜ್ಜೆಗೆಟ್ಟ ಹೆಂಗಸರನ್ನು ಕಲ್ಪಿಸಿಕೊಂಡು ಬೆಚ್ಚಗಾಗುವರು.

ನಮ್ಮಲ್ಲೇ ಅಪಾರ ಬೇಡಿಕೆಯಿರುವ ನಮ್ಮ ಪಾರಂಪಾರಿಕ ಆಹಾರಬೆಳೆಗಳಿಗೆ ಸರಿಯಾಗಿ ಮಾರುಕಟ್ಟೆಯೊದಗಿಸಿ, ಬೆಲೆನಿಯಂತ್ರಣವನ್ನು ತಾರದೆ, ಕೊನೆಯಪಕ್ಷ ರಿಲೈಯನ್ಸ್ ಟಾಟಾ ಸಂಸ್ಥೆಗಳು ಸ್ಥಾಪಿಸುತ್ತಿರುವ ಸೂಪರ್ ಮಾರ್ಕೆಟ್ ಗಳು ರೈತರ ಉತ್ಪನ್ನಗಳಿಗೆ ತಾವಾಗಿಯೇ ಸೃಷ್ಟಿಸಬಹುದಾದ ಮಾರುಕಟ್ಟೆ, ಬೆಲೆನಿಯಂತ್ರಣಗಳ ಅರಿವಿಲ್ಲದೆ ಅವುಗಳನ್ನು ವಿರೋಧಿಸುತ್ತ ರೈತಾಪಿಗಳನ್ನು ದಿಕ್ಕೆಟ್ಟಿಸುತ್ತಿದ್ದಾರೆ.

ಈ ನಮ್ಮ ನಾಯಕರುಗಳು ವಿದೇಶಗಳಿಗೆ ಹೋದಾಗ ಯಾವುದೇ ಅಧ್ಯಯನ ಮಾಡದೆ ಕೇವಲ ಅಲ್ಲಿನ ಸೂಪರ್ ಮಾರ್ಕೆಟ್ ಗಳಲ್ಲಿ ಕಂಡುಬರುವ ಒಣಗಿಸಿದ ಟೊಮ್ಯಾಟೊ, ಒಣಗಿಸಿದ ಮಾವು, ಅನಾನಸ್ ಗಳನ್ನು ಕಂಡಾದರೂ ದಂಡಿಯಾಗಿ ನಮ್ಮಲ್ಲಿ ಪುಕ್ಕಟೆ ದೊರಕುವ ಬಿಸಿಲನ್ನು ಉಪಯೋಗಿಸಿ ಹೆಚ್ಚಿನ ಖರ್ಚಿಲ್ಲದೆ ನಮ್ಮ ರೈತರು ಬೆಳೆದ ಮೆಣಸಿನಕಾಯಿ, ಟೊಮ್ಯಾಟೊಗಳನ್ನು ರಸ್ತೆಗೆ ಸುರಿಯದೆ, ಒಣಗಿಸಿ ಶೇಖರಿಸಿಡುವ ವಿಧಾನವನ್ನು ಅಳವಡಿಸುವತ್ತ ಯೋಚಿಸದೆ, ನಮ್ಮ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿರುವ ಅಮೇರಿಕಾದವರಿಗೆ ವೆನಿಲ್ಲಾ ಬೇಕಂತೆ ಎಂದೋ, ಔಷಧೀಯ ಸಸ್ಯಗಳು ಬೇಕಂತೆ ಎಂತಲೋ, ಅಂತೆಕಂತೆಗಳನ್ನೋ ಬೆಳೆಯುತ್ತ ಹತ್ತಿ, ತೊಗರಿ, ಕಬ್ಬು, ಮತ್ತಿತರೆ ದೇಶೀ ಬೆಳೆಗಳನ್ನು ಬೆಳೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಆತ್ಮಹತ್ಯೆಯ ಪಟ್ಟಿಗೆ ವಿದೇಶೀ ಬೆಳೆಗಳನ್ನು ಸೇರ್ಪಡೆಗೊಳಿಸುತ್ತಿರುವುದು ನಮ್ಮ ದುರಂತವೇ ಸರಿ.

ವಿನೋದ:

ಒಮ್ಮೆ ಮೇಲೆ ತಿಳಿಸಿದ ಮಾದರೀ ರೈತರ ಮಾದರಿಯಲ್ಲೆ ನನ್ನ ಯುವ ರಾಜಕಾರಣಿ ಮಿತ್ರರೋರ್ವರು ಒಂದು ಅತಿ ವೈಯುಕ್ತಿಕವಾದಂತಹ ಈಮೈಲ್ ಕಳುಹಿಸಿದ್ದರು. ಅವರ ಜನನಾಂಗವು ಚಿಕ್ಕದಿರಬಹುದೆಂದೂ ಅದನ್ನು ಕನಿಷ್ಟ ಯಾವುದಕ್ಕೂ ಒಂದೆರಡಂಗುಲದಷ್ಟು ದೊಡ್ಡದು ಮಾಡಿಕೊಳ್ಳುವುದು ಒಳಿತೆಂದೂ, ಹಾಗೆ ಮಾಡುವ ಔಷಧಿಯನ್ನು ಮಾರುವ ಒಂದು ಅಂತರ್ಜಾಲತಾಣವೊಂದರ ಲಿಂಕ್ ಅನ್ನು ತಮ್ಮ ಈಮೈಲ್ ಜೊತೆ ಸೇರಿಸಿ, ಅದನ್ನು ಅಮೇರಿಕನ್ ಡಾಲರ್ ನಲ್ಲಿ ಕೊಳ್ಳಬೇಕಾಗಿರುವುದರಿಂದ ಅದನ್ನು ನಾನು ಕೊಂಡು ಅವರಿಗೆ ಕಳುಹಿಸಬೇಕೆಂದು ಕೇಳಿಕೊಂಡಿದ್ದರು.

ಆ ಅಂತರ್ಜಾಲತಾಣಕ್ಕೆ ನನ್ನ ಕ್ರೆಡಿಟ್ ಕಾರ್ಡ್ ಸಂಖ್ಯೆಯನ್ನು ಕೊಟ್ಟು ಮಂಗನಾಗಲಾರದೆ ನಾನು ನನ್ನ ಆ ಯುವ ರಾಜಕಾರಣಿ ಮಿತ್ರರಿಗೆ ಇದೊಂದು ಪರವಾನಗಿಯಿಲ್ಲದ ಔಷಧಿಯೆಂದೂ ಇದನ್ನು ಸೇವಿಸಿದ ಬಹುತೇಕ ಜನರಿಗೆ ಬೆಳೆಯಬೇಕಾದ್ದು ಬೆಳೆಯದೆ ಯಾವುದಾದರೊಂದು ಬೆರಳೋ, ಕೈಯೋ ಕಾಲೋ ಬೆಳೆದಿರುವ ನಿದರ್ಶನಗಳು ಬೇಕಾದಷ್ಟಿವೆಯೆಂದೂ, ಆದ ಕಾರಣ ಅನವಶ್ಯಕವಾಗಿ ಅವರ ಭಾವೀ ಅಂಗಊನತೆಗೆ ನಾನು ಕಾರಣನಾಗಲಾರೆನೆಂದು ಸಮಜಾಯಿಷಿ ಕೊಟ್ಟು ಪಾರಾದೆನು.

ರವಿ ಹಂಜ್.

ಏನಾಗಿದೆ ನಮ್ಮ ಮಠಾಧೀಶ್ವರರಿಗೆ?

ಮೊನ್ನೆ ವೀರಶೈವ ಪೀಠಾಧೀಶ್ವರರೊಬ್ಬರು, ಎಡೆಯೂರಪ್ಪನವರಿಗೆ ಅಧಿಕಾರ ಹಸ್ತಾಂತರವಾಗದಿದ್ದರೆ ವೀರಶೈವರು ಉಗ್ರ ಹೋರಾಟ ಮಾಡುವರೆಂದು ಹೇಳಿದ್ದನ್ನು, ಇತರೆ ಸ್ವಾಮೀಜಿಗಳು ಖಂಡಿಸಿದ್ದಾಗಿ ಓದಿ ನಮ್ಮ ಈ ಮಠಾಧೀಶರುಗಳಿಗೇನಾಗಿದೆ ಎಂದು ಯೋಚಿಸಿದೆ. ಆಲೋಚಿಸಿ ನೋಡಿ, ಪ್ರತಿಯೊಂದು ಧರ್ಮದವರು, ಕೋಮಿನವರು ತಮ್ಮ ತಮ್ಮ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಗಾಗೇ ಈ ಮಠಗಳನ್ನು ಕಟ್ಟಿ ಅಲ್ಲಿ ಮಠಾಧೀಶರುಗಳನ್ನು ಕೂರಿಸಿರುವುದು. ತಮ್ಮ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಈ ಸ್ವಾಮೀಜಿಗಳು ಹೋರಾಟ ಮಾಡಬೇಕಾದ್ದು ಅವರ ಆದ್ಯ ಕರ್ತವ್ಯ ಕೂಡ. ಈ ಹಿನ್ನೆಲೆಯಲ್ಲಿ ಆ ವೀರಶೈವ ಪೀಠಾಧೀಶರು ಸಮ್ಮಿಶ್ರ ಸರ್ಕಾರವು ತನ್ನ ಜಗಜ್ಜಾಹೀರಾಗಿರುವ ಒಪ್ಪಂದಕ್ಕೆ ತಕ್ಕಂತೆ ವಚನಬದ್ಧರಾಗಿ ಅಧಿಕಾರ ಹಸ್ತಾಂತರ ಮಾಡಿ ಪ್ರಾಮಾಣಿಕತೆಯನ್ನು ಮೆರೆಯಬೇಕೆಂದೂ ಇಲ್ಲದಿದ್ದರೆ ಜನರು ಅದರಲ್ಲೂ ವೀರಶೈವ ಜನಾಂಗವು ಉಗ್ರ ಹೋರಾಟ ಮಾಡುವುದೆಂದೂ ಪ್ರತಿಕ್ರಿಯಿಸಿ ತಮ್ಮ ಕೋಮಿನ ಧುರೀಣ ಎಡೆಯೂರಪ್ಪನವರನ್ನು ಬೆಂಬಲಿಸಿರುವುದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ. ಒಂದು ಕೋಮಿನ ಪೀಠಾಧೀಶರಾಗಿ ಆ ಕೋಮಿನ ಧುರೀಣನನ್ನು ಬೆಂಬಲಿಸುವುದು ಮತ್ತು ಸಾತ್ವಿಕ ವ್ಯಕ್ತಿಯಾಗಿ ಪ್ರಾಮಾಣಿಕತೆಯನ್ನು ಪ್ರತಿಪಾದಿಸುವುದೆರಡೂ ಅವರ ಕರ್ತವ್ಯವೇ ಆಗಿದೆ.

ಆದರೆ ಹಲವಾರು ಮಠಾಧೀಶರುಗಳು ಇತ್ತೀಚೆಗೆ ಸಾಮಾಜಿಕ ಕಳಕಳಿಯ ಸೋಗು ಹಾಕಿ ರಾಜಕೀಯದಲ್ಲಿ ಕಾಣದ ಹಸ್ತವನ್ನಿಟ್ಟು ಪವಾಡಗಳನ್ನು ಮೆರೆಯುತ್ತಿರುವುದು ಇಂದು ಕಣ್ಣಿಗೆ ಕಾಣದ ವಿಷಯವೇನಲ್ಲ. ಇವರೆಲ್ಲ ತಮ್ಮ ಧಾರ್ಮಿಕ ಹೊಣೆಯನ್ನು ನಡುನೀರಲ್ಲಿ ಬಿಟ್ಟು ಸಂಪೂರ್ಣವಾಗಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ಸಂತೋಷದ ಸಂಗತಿಯೇ ಆದರೂ ಭಕ್ತರ ಅಭಿಲಾಷೆಗಳನ್ನು ಗಾಳಿಗೆ ತೂರಿ ತಮ್ಮ ತೆವಲಿಗಾಗಿ ಸೆಕ್ಯುಲರ್ ಸಾಹಿತಿಗಳನ್ನು ಮೀರಿಸುವಷ್ಟು ಮತ್ತು ಲಜ್ಜೆಗೆಟ್ಟ ರಾಜಕಾರಣಿಗಳನ್ನೂ ನಾಚಿಸುವಷ್ಟು ಜಾತ್ಯಾತೀತತೆಯನ್ನು, ಸಾಮಾಜಿಕ ಉದಾರತೆಯನ್ನು ಪ್ರದರ್ಶಿಸುವುದು ಪ್ರಶ್ನಾರ್ಹವಾಗಿದೆ. ಸರ್ವಸಂಗ ಪರಿತ್ಯಾಗಿಗಳಾದ ಇವರುಗಳಿಗೆ ಈ ಪರಿಯ ಪ್ರಚಾರಪ್ರಿಯತೆ ಏಕೋ?

ಚಿತ್ರದುರ್ಗದ ಒಬ್ಬ ಮಠಾಧೀಶರೋರ್ವರಂತೂ ವಾರ್ಷಿಕ ಕಾಲೆಂಡರ್ ಅನ್ನೇ ಸಿದ್ಧಪಡಿಸಿಕೊಂಡಿದ್ದಾರೆ. ನಾಗರಪಂಚಮಿಯಲ್ಲಿ ಕಲ್ಲಿನ ಹಾವಿಗೆ ಹಾಲೆರೆಯಬೇಡಿರೆಂದು ಬೀದಿಮಕ್ಕಳಿಗೆ ಹಾಲು ಕುಡಿಸಿ ಸುದ್ದಿ ಮಾಡುವುದು, ಯುಗಾದಿಗೆ ಕೊಳಚೆ ನಿವಾಸಿ ಮಕ್ಕಳಿಗೆ ಎಣ್ಣೆಮಜ್ಜನ ಮಾಡಿಸುವ ಸುದ್ದಿ, ಆಗಾಗ್ಗೆ ಪ್ರ್‍ಏಮಿಗಳನ್ನು ಒಂದುಗೂಡಿಸುವುದು, ವಿಧವಾವಿವಾಹಗಳನ್ನು ಮಾಡಿಸುವುದು ಅಷ್ಟೇ ಅಲ್ಲದೆ ಇನ್ಯಾವುದೇ ಸುದ್ದಿಯಾಗುವಂತಹ ಸಂಗತಿಯಿದ್ದರೆ ಅದನ್ನು ಶೋಧಿಸಿ ಸುದ್ದಿಯಾಗುವುದೇ ಇವರ ಹವ್ಯಾಸ.

ನಕ್ಸಲರೊ, ಉಗ್ರರೊ, ದೂರದ ಪಾಕಿಸ್ತಾನದ ಭೂಕಂಪದಲ್ಲಿ ಸತ್ತವರಿಗೆಲ್ಲ ಸಂತಾಪ ಸೂಚಿಸಿಯೋ ಅಥವಾ ತಮ್ಮ ಅಭಿಪ್ರ್‍ಆಯದ ಹೇಳಿಕೆಯನ್ನು ಬಿಡುಗಡೆ ಮಾಡಿಯೋ ಪ್ರತಿಕ್ರಿಯಿಸುತ್ತಿದ್ದ ಈ ಶರಣರಿಗೆ ಇತ್ತೀಚೆಗೆ ತಮ್ಮ ಶರಣ ಕುಲಸ್ಥ ಬಸವಣ್ಣನವರ ಕುಲಗೋತ್ರಗಳನ್ನು ಜಾಲಾಡಿದ್ದ ’ಅನುದೇವ ಹೊರಗಣವನು’ (ಇದರ ಸತ್ಯಾಸತ್ಯಗಳನ್ನು ಇನ್ನೊಮ್ಮೆ ಚರ್ಚಿಸೋಣ) ಕೃತಿಯ ಬಗ್ಗೆ ಚಕಾರವನ್ನೂ ಎತ್ತದೆ ತಮ್ಮ ಸ್ಥಾನದ ಆದ್ಯ ಕರ್ತವ್ಯವನ್ನೇ ಮರೆತುಬಿಟ್ಟಿದ್ದಾರೆ.

ಇನ್ನು ಪ್ರತಿದಿನವೂ ದಿನಪತ್ರಿಕೆಯ ಯಾವುದಾದರೊಂದು ಪುಟಗಳಲ್ಲಿ ಒಡಮೂಡುವ ಆದಿಚುಂಚನಗಿರಿ, ಸುತ್ತೂರು, ಮತ್ತು ಉಡುಪಿ ಶ್ರೀಗಳ ಬಗ್ಗೆಯಂತೂ ಹೇಳುವುದೇ ಬೇಡ.

ಇದ್ದುದರಲ್ಲಿ ಮೌಲ್ವಿಗಳು, ಪಾದ್ರಿಗಳು ತಮ್ಮ ಹೊಣೆಯರಿತು ತಮ್ಮ ತಮ್ಮ ಧರ್ಮದ ರಕ್ಷಣೆ ಮತ್ತು ಪ್ರಸಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ತಮ್ಮ ಧರ್ಮದ ಉಗ್ರರ ಬಗ್ಗೆಯಾಗಲೀ, ಮತಾಂತರಿಗಳ ಬಗ್ಗೆಯಾಗಲಿ ಯಾವುದಕ್ಕೂ ಪ್ರತಿಕ್ರಿಯಿಸದೆ ತಮ್ಮ ತಮ್ಮ ಕೈಂಕರ್ಯದಲ್ಲಿ ಕಿಂಕರ್ತವ್ಯಮೂಢರಾಗಿ ಹುದುಗಿಹೋಗಿದ್ದಾರೆ. ಇವರನ್ನು ನೋಡಿ ನಮ್ಮ ಹಿಂದೂ ಮಠಾಧೀಶ್ವರರು ’ಮನೆಗೆ ಮಾರಿ ಪರರಿಗೆ ಉಪಕಾರಿ’ ಯಂತಾಗದೆ ಕಲಿಯಬೇಕಾದ್ದು ಬೆಟ್ಟದಷ್ಟಿದೆ.

ಸೂಕ್ತಿ: ಮನೆ ಗೆದ್ದು ಮಾರು ಗೆಲ್ಲು.

ರವಿ ಹಂಜ್

ಅವಾರ್ಡುಗಳ ರಾಜಕೀಯ.

ಸುಮಾರು ಇಪ್ಪತ್ತೈದು ವರ್ಷಗಳಿಗೂ ಮುಂಚೆ ನಾನು ದಾವಣಗೆರೆಯ ಮಹರಾಜಪೇಟೆ ಸೊಸೈಟಿಯಲ್ಲಿ ಸಕ್ಕರೆ, ಗೋಧಿಗಳನ್ನು ಪಡೆಯಲು ಗಂಟೆಗಟ್ಟಲೆ ಕ್ಯೂ ನಿಂತು ಐದು ಕಿಲೊ ಸಕ್ಕರೆ ಬದಲಿಗೆ ಎರಡೂವರೆ ಕಿಲೊ ಅಥವ ಅಲ್ಲಿರುತ್ತಿದ್ದ ಸದಾ ಮುಖ ಗಂಟಿಕ್ಕಿಕೊಂಡಿರುತ್ತಿದ್ದ, ಸೊಸೈಟಿಗೆ ದಿನಸಿ ಕೊಳ್ಳಲು ಬರುತ್ತಿದ್ದವರನ್ನು ಭಿಕ್ಷುಕರಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರು ದಯಪಾಲಿಸಿದಷ್ಟು ತೆಗೆದುಕೊಂಡುಬರುತ್ತಿದ್ದೆನು. ಆ ವ್ಯಕ್ತಿಯನ್ನು ಸರದಿಯಲ್ಲಿ ನಿಂತಿರುತ್ತಿದ್ದ ಜನರು ಮನಸಾರೆ ಶಪಿಸುತ್ತ ಸಕ್ಕರೆ, ಗೋಧಿಗಳನ್ನು ಯಾರಿಗೋ ಮಾರಿಕೊಂಡಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದರು. ಇದು ನಾನು ಆ ಸೊಸೈಟಿಗೆ ಹೋದಾಗಲೆಲ್ಲ ನಿರಂತರ ನಡೆಯುತ್ತಿದ್ದ ಪ್ರಕ್ರಿಯೆಯಾಗಿತ್ತು. ಬಾಲ್ಯದಲ್ಲಿ ನಾನು ನನ್ನ ಮನೆಯವರನ್ನು ಅಲ್ಲಿಗೆ ಕಳಿಸಿದ್ದಕ್ಕಾಗಿ ಶಪಿಸುತ್ತಿದೆನು.

ನಾನು ದಾವಣಗೆರೆಯನ್ನು ಖಾಲಿ ಮಾಡಿ ಬೆಂಗಳೂರು, ಬಾಂಬೆ ಮತ್ತು ಶಿಕಾಗೊ ನಗರಗಳಲ್ಲಿ ಇಪ್ಪತ್ತು ವರ್ಷಗಳೇ ಕಳೆದಿದ್ದರೂ ಆ ಸೊಸೈಟಿಯ ಅನುಭವವನ್ನೂ ಮತ್ತು ಗಂಟಿಕ್ಕಿಕೊಂಡಿರುತ್ತಿದ್ದ ಆ ಮುಖವನ್ನು ಮರೆಯಲು ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ದಾವಣಗೆರೆಯ ಜನತಾವಾಣಿ ಅಂತರ್ಜಾಲ ಆವೃತ್ತಿಯನ್ನು ನೋಡುತ್ತಿದ್ದಾಗ ಏನಾಶ್ಚರ್ಯ! ಆ ವ್ಯಕ್ತಿಯ ನಗುತ್ತಿರುವ ಭಾವಚಿತ್ರ ಮತ್ತು ಆ ಮಹಾಶಯರಿಗೆ ’ಸಹಕಾರಿ ಧುರೀಣ’ ಎಂಬ ಬಿರುದು ಗೌರವವು ದೊರೆತಿರುವುದಾಗಿ ಸುದ್ದಿ ಪ್ರಕಟವಾಗಿತ್ತು.

ಬಹುಶಃ ಅಂದು ಸರದಿ ನಿಂತು ಇವರನ್ನು ಹಾರೈಸುತ್ತಿದ್ದ ಜನರ ಹಾರೈಕೆಯು ಫಲ ನೀಡಿ ಇಂದು ಆ ಮಹಾಶಯರು ನಗುನಗುತ್ತಿರುವರೆಂದೆನಿಸಿ ಮೇರಾ ಭಾರತ್ ಮಹಾನ್ ಎಂದುಕೊಂಡು ೬೦ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ನನಗೆ ನಾನೆ ಹೇಳಿಕೊಂಡೆನು.

ಕೊಟ್ಟದ್ದು ಸ್ವಾತಂತ್ರ್ಯ, ಗಳಿಸಿದ್ದು ಭ್ರಷ್ಟಾಚಾರ.

ಇತ್ತೀಚೆಗೆ ದಾವಣಗೆರೆಯ ಒಂದು ಸೊಸೈಟಿಯ ಒಬ್ಬ ಸಾಮಾನ್ಯ ಮೇಲ್ವಿಚಾರಕ ’ಸಹಕಾರಿ ಶ್ರೇಷ್ಠ’ ನಾಗಿದ್ದರ ಬಗ್ಗೆ ಬರೆದಿದ್ದೆ. ಸ್ವತಂತ್ರ್ಯ ಭಾರತದಲ್ಲಿ ಇದೇನು ಬೆಚ್ಚಿಬೀಳಿಸುವ ಮಹತ್ವದ ಸಂಗತಿಯೇನಲ್ಲ. ಸ್ವಾತಂತ್ರ್ಯ ಭಾರತದ ಅರವತ್ತು ವರ್ಷಗಳಲ್ಲಿ ಘಟಿಸಿದ ಅನೇಕ ಪವಾಡ ಸದೃಶ ಅಸಂಖ್ಯಾತ ಘಟನೆಗಳಲ್ಲಿ ಭಾರತದ ದಾವಣಗೆರೆಯೆಂಬ ಅಸಂಖ್ಯಾತ ನಗರಗಳಲ್ಲಿ ಸಂಭವಿಸಬಹುದಾದ, ಸಂಭವಿಸಿದ ಸಂಗತಿಗಳಲ್ಲಿ ಅತಿ ಸಾಮಾನ್ಯ ಸಂಗತಿ ಇದಾಗಿತ್ತು.

ಭಾರತದ ಒಬ್ಬ ಬಡ ಮೇಷ್ಟ್ರೊಬ್ಬರ ಮಗನೊಬ್ಬ ಭವ್ಯ ಭಾರತದ ಪ್ರಧಾನಿಯಾಗಿ ಮೆರೆದಿದಿರುವ ಸಾಹಸದ ಇದಿರು, ಯಾಕೋ ಆವರ ದಿನದ ಇಪ್ಪತ್ನಾಲ್ಕು ಗಂಟೆಯೂ ರಾಜಕೀಯವನ್ನೆ ಮಾಡಿ ಮತ್ತಿನ್ಯಾವ ವೃತ್ತಿಯನ್ನು ಮಾಡದೆ ಕೋಟ್ಯಾನುಕೋಟಿ ರೂಪಾಯಿಗಳ ಮೊತ್ತದ ಐಶ್ವರ್ಯ ಶೇಖರಣೆಯ ಸಾಹಸದ ಮುಂದೆ ಅವರ ಭಾರತ ಪ್ರಧಾನಿ ಹುದ್ದೆಯ ಸಂಗತಿ ಅತೀ ಗೌಣವೆನಿಸುತ್ತದೆ. ಅಷ್ಟೆ ಅಲ್ಲದೆ ಈ ಮಾಜಿ ಪ್ರಧಾನಿಯ ಜನಸೇವೆಯ ಕೂಗಿಗೆ ಓಗೊಟ್ಟು ಪೊಲೀಸ್ ಕನಿಷ್ಟಬಿಲ್ಲೆಯಾಗಿದ್ದ, ಉದ್ಯೋಗವಲ್ಲದೆ ಇನ್ಯಾವ ಪೂರ್ವಾಜಿತ ಆಸ್ತಿಯೂ ಇಲ್ಲದ ವ್ಯಕ್ತಿಯೋರ್ವರು ಜನಸೇವೆಯ ಕೈಂಕರ್ಯಕ್ಕೆ ಧುಮುಕಿ ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ ತೊಂಬತ್ತು ಕೋಟಿಗಳಿಗೂ ಮೀರಿ ಆಸ್ತಿಯನ್ನು ಗಳಿಸಿರುವುದರ ಮುಂದೆ ದಾವಣಗೆರೆಯಂತಹ ಸಾಮಾನ್ಯ ನಗರದ ಅತೀ ಸಾಮಾನ್ಯ ನ್ಯಾಯಬೆಲೆಯಂಗಡಿಯ ಗುಮಾಸ್ತನ ಅವಾರ್ಡು ಅತಿ ನಿಕೃಷ್ಟವೆನಿಸುತ್ತದೆ. ಅದಾವ ರಾಜಕಾರಣಿಯ ಕಳ್ಳ ವ್ಯವಹಾರಕ್ಕೆ ಸಕ್ಕರೆ, ಗೋಧಿಗಳನ್ನು ಪೂರೈಸಿದ್ದನೋ ಈ ಮಹಾಶಯ ಅದಕ್ಕೆ ಪ್ರತಿಫಲವಾಗಿ ಈ ಅವಾರ್ಡನ್ನು ಕೊಡಮಾಡಿಸಿರಬಹುದು. ಈ ಸುಧೀರ್ಘ ಅರವತ್ತು ವರ್ಷಗಳಲ್ಲಿ ಭಾರತದಲ್ಲಿ ಬೆಳೆದಿರುವ ಭ್ರಷ್ಟಾಚಾರದ ಬೇರುಗಳು ಎಂತಹ ಕೆಳಮಟ್ಟದಲ್ಲಿಯು ಹಬ್ಬಿರುವುದಕ್ಕೆ ಇದೇ ಸಾಕ್ಷಿ. ಇದನ್ನು ಯಾರು ಹೇಗೆ ಬೆಳೆಸಿದರೆಂಬುದು ಸಾರ್ವಜನಿಕ ಸತ್ಯವೇ ಆಗಿದೆ.

ಸಂತೋಷದ ಸಾಮರಸ್ಯದ ಸಂಗತಿಯೆಂದರೆ ಭ್ರಷ್ಟಾಚಾರವು ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ಜವಾನನಿಂದ ದಿವಾನನವರೆಗೂ ಯಾವುದೇ ಭೇದಭಾವವಿಲ್ಲದೆ ಭಾರತದ ಸಾಮರಸ್ಯವನ್ನು ಒಂದುಗೂಡಿಸಿದೆ. ಉದಾಹರಣೆಗೆ ಈ ಮುಂಚೆ ತರ್ಕಿಸಿದ ಜಾತ್ಯಾತೀತ ಪೊಲೀಸ್ ಕನಿಷ್ಟಬಿಲ್ಲೆಯಲ್ಲದೆ ಭಾರತದ ಮೊದಲ ಪ್ರಧಾನಿಯ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಪಟ್ಟದ ಪ್ರಬಲ ಆಕಾಂಕ್ಷಿಯಾದ, ಒಂದಾನೊಂದು ಕಾಲದಲ್ಲಿ (ಛೇ, ಛೇ, ಒಂದಾನೊಂದು ಕಾಲವೆನ್ನಲು ಇದೇನು ಶತಮಾನದಷ್ಟು ಹಳೆಯ ಸಂಗತಿಯೇನಲ್ಲ) ರಾಜಕೀಯ ನಾಯಕರುಗಳ ಸಭೆಗೆ ಕರ್ನಾಟಕದ ರಾಜಧಾನಿಯಲ್ಲಿ ಜನರನ್ನು ಸೇರಿಸುತ್ತಿದ್ದ ಪುಂಡನೋರ್ವನೂ ಅಷ್ಟೇ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಸಮಾನಮನಸ್ಕನಾಗಿ ಬೆಳೆದಿದ್ದಾನೆ.

ಇದೆಲ್ಲವನ್ನೂ ಪ್ರಶ್ನಿಸದೆ ಮತದಾರನೂ ತನ್ನ ಸೀರೆ, ಪಂಚೆ, ಸಾರಾಯಿ (ಅಲ್ಲಲ್ಲ, ಇನ್ನು ಮೇಲೆ ಬರೀ ವರ್ಣಮಯ ಸೋಮರಸ) ಇತ್ಯಾದಿ ಅನುಕೂಲಗಳಿಗನುಗುಣವಾಗಿ ಜಾತ್ಯಾತೀತ ಮತ್ತು ಪಕ್ಷಾತೀತನಾಗಿ ಸಮನ್ವಯವನ್ನು ಮೆರೆಯುತ್ತ ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದಿದ್ದಾನೆ.

ಒಟ್ಟಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾದವೋ ಇಲ್ಲವೋ ಭ್ರಷ್ಟಾಚಾರವಂತೂ ಷಷ್ಟ್ಯಾಭ್ದಿಯನ್ನು ಭವ್ಯವಾಗಿ ನಿತ್ಯವೂ ಆಚರಿಸಿಕೊಳ್ಳುತ್ತಿದೆ.

ವಿನೋದ:

ಇತ್ತೀಚೆಗೆ ಸಚಿವ ರೇವಣ್ಣನವರು ತಮ್ಮ ಹಾಸನದಲ್ಲಿ ಸರ್ಕಾರಿ ಅಧಿಕಾರಿಗಳ ಸಭೆಯನ್ನು ನಡೆಸುತ್ತಿದ್ದಾಗ ಅಲ್ಲಿನ ಸಬ್ ರಿಜಿಸ್ಟ್ರಾರ್ ಓರ್ವರು ಯಾವುದೋ ವಿಷಯಕ್ಕೆ ನಮ್ಮ ಹಾಸನ ಜಿಲ್ಲೆಯಲ್ಲಿ ವರ್ಷದಲ್ಲಿ ಒಂದು ಲಕ್ಷಕ್ಕೂ ಮೀರಿದ ಜನರು ಇಮಾನ (ಚಟ್ಟ) ಯಾನ ಕೈಗೊಳ್ಳುತ್ತಾರೆಂದು ಹಾಸ್ಯವಾಗಿ ಹೇಳಿದರು. ಅದನ್ನು ಕೇಳಿದ ಸಚಿವರು ’ಅರೆ, ಈ ವಿಷಯವನ್ನು ಇಷ್ಟು ದಿನ ನನ್ನ ಗಮನಕ್ಕೆ ಏಕೆ ತರಲಿಲ್ಲ’ ವೆಂದು ಕೂಡಲೆ ತಮ್ಮ ಮುಖ್ಯಮಂತ್ರಿ ಸಹೋದರರ ಕೈಯಲ್ಲಿ ಹೊಚ್ಚ ಹೊಸ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿಬಿಟ್ಟರು. ಪಾಪ, ಈಗ ಬಡ ಬೋರೇಗೌಡರು ತಮ್ಮ ಅಂತಿಮಯಾತ್ರೆಯ ಇಮಾನಯಾನ ಮಾಡುವ ಮುನ್ನ ತಮ್ಮ ಜಮೀನುಗಳನ್ನು ಮಾರಿಕೊಂಡು ಒಮ್ಮೆ ರೇವಣ್ಣನ ವಿಮಾನನಿಲ್ದಾಣವನ್ನು ಉಪಯೋಗಿಸಲು ವಿಮಾನಯಾನವನ್ನು ಮಾಡಬೇಕಾದ ಪರಿಸ್ಥಿತಿ ಬಂದೊದಗಲಿದೆ.
ರವಿ ಹಂಜ್