ಏನಾಗಿದೆ ನಮ್ಮ ಮಠಾಧೀಶ್ವರರಿಗೆ?

ಮೊನ್ನೆ ವೀರಶೈವ ಪೀಠಾಧೀಶ್ವರರೊಬ್ಬರು, ಎಡೆಯೂರಪ್ಪನವರಿಗೆ ಅಧಿಕಾರ ಹಸ್ತಾಂತರವಾಗದಿದ್ದರೆ ವೀರಶೈವರು ಉಗ್ರ ಹೋರಾಟ ಮಾಡುವರೆಂದು ಹೇಳಿದ್ದನ್ನು, ಇತರೆ ಸ್ವಾಮೀಜಿಗಳು ಖಂಡಿಸಿದ್ದಾಗಿ ಓದಿ ನಮ್ಮ ಈ ಮಠಾಧೀಶರುಗಳಿಗೇನಾಗಿದೆ ಎಂದು ಯೋಚಿಸಿದೆ. ಆಲೋಚಿಸಿ ನೋಡಿ, ಪ್ರತಿಯೊಂದು ಧರ್ಮದವರು, ಕೋಮಿನವರು ತಮ್ಮ ತಮ್ಮ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಳಕಳಿಗಾಗೇ ಈ ಮಠಗಳನ್ನು ಕಟ್ಟಿ ಅಲ್ಲಿ ಮಠಾಧೀಶರುಗಳನ್ನು ಕೂರಿಸಿರುವುದು. ತಮ್ಮ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಈ ಸ್ವಾಮೀಜಿಗಳು ಹೋರಾಟ ಮಾಡಬೇಕಾದ್ದು ಅವರ ಆದ್ಯ ಕರ್ತವ್ಯ ಕೂಡ. ಈ ಹಿನ್ನೆಲೆಯಲ್ಲಿ ಆ ವೀರಶೈವ ಪೀಠಾಧೀಶರು ಸಮ್ಮಿಶ್ರ ಸರ್ಕಾರವು ತನ್ನ ಜಗಜ್ಜಾಹೀರಾಗಿರುವ ಒಪ್ಪಂದಕ್ಕೆ ತಕ್ಕಂತೆ ವಚನಬದ್ಧರಾಗಿ ಅಧಿಕಾರ ಹಸ್ತಾಂತರ ಮಾಡಿ ಪ್ರಾಮಾಣಿಕತೆಯನ್ನು ಮೆರೆಯಬೇಕೆಂದೂ ಇಲ್ಲದಿದ್ದರೆ ಜನರು ಅದರಲ್ಲೂ ವೀರಶೈವ ಜನಾಂಗವು ಉಗ್ರ ಹೋರಾಟ ಮಾಡುವುದೆಂದೂ ಪ್ರತಿಕ್ರಿಯಿಸಿ ತಮ್ಮ ಕೋಮಿನ ಧುರೀಣ ಎಡೆಯೂರಪ್ಪನವರನ್ನು ಬೆಂಬಲಿಸಿರುವುದರಲ್ಲಿ ಯಾವ ತಪ್ಪು ಕಾಣಿಸುತ್ತಿಲ್ಲ. ಒಂದು ಕೋಮಿನ ಪೀಠಾಧೀಶರಾಗಿ ಆ ಕೋಮಿನ ಧುರೀಣನನ್ನು ಬೆಂಬಲಿಸುವುದು ಮತ್ತು ಸಾತ್ವಿಕ ವ್ಯಕ್ತಿಯಾಗಿ ಪ್ರಾಮಾಣಿಕತೆಯನ್ನು ಪ್ರತಿಪಾದಿಸುವುದೆರಡೂ ಅವರ ಕರ್ತವ್ಯವೇ ಆಗಿದೆ.

ಆದರೆ ಹಲವಾರು ಮಠಾಧೀಶರುಗಳು ಇತ್ತೀಚೆಗೆ ಸಾಮಾಜಿಕ ಕಳಕಳಿಯ ಸೋಗು ಹಾಕಿ ರಾಜಕೀಯದಲ್ಲಿ ಕಾಣದ ಹಸ್ತವನ್ನಿಟ್ಟು ಪವಾಡಗಳನ್ನು ಮೆರೆಯುತ್ತಿರುವುದು ಇಂದು ಕಣ್ಣಿಗೆ ಕಾಣದ ವಿಷಯವೇನಲ್ಲ. ಇವರೆಲ್ಲ ತಮ್ಮ ಧಾರ್ಮಿಕ ಹೊಣೆಯನ್ನು ನಡುನೀರಲ್ಲಿ ಬಿಟ್ಟು ಸಂಪೂರ್ಣವಾಗಿ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದು ಸಂತೋಷದ ಸಂಗತಿಯೇ ಆದರೂ ಭಕ್ತರ ಅಭಿಲಾಷೆಗಳನ್ನು ಗಾಳಿಗೆ ತೂರಿ ತಮ್ಮ ತೆವಲಿಗಾಗಿ ಸೆಕ್ಯುಲರ್ ಸಾಹಿತಿಗಳನ್ನು ಮೀರಿಸುವಷ್ಟು ಮತ್ತು ಲಜ್ಜೆಗೆಟ್ಟ ರಾಜಕಾರಣಿಗಳನ್ನೂ ನಾಚಿಸುವಷ್ಟು ಜಾತ್ಯಾತೀತತೆಯನ್ನು, ಸಾಮಾಜಿಕ ಉದಾರತೆಯನ್ನು ಪ್ರದರ್ಶಿಸುವುದು ಪ್ರಶ್ನಾರ್ಹವಾಗಿದೆ. ಸರ್ವಸಂಗ ಪರಿತ್ಯಾಗಿಗಳಾದ ಇವರುಗಳಿಗೆ ಈ ಪರಿಯ ಪ್ರಚಾರಪ್ರಿಯತೆ ಏಕೋ?

ಚಿತ್ರದುರ್ಗದ ಒಬ್ಬ ಮಠಾಧೀಶರೋರ್ವರಂತೂ ವಾರ್ಷಿಕ ಕಾಲೆಂಡರ್ ಅನ್ನೇ ಸಿದ್ಧಪಡಿಸಿಕೊಂಡಿದ್ದಾರೆ. ನಾಗರಪಂಚಮಿಯಲ್ಲಿ ಕಲ್ಲಿನ ಹಾವಿಗೆ ಹಾಲೆರೆಯಬೇಡಿರೆಂದು ಬೀದಿಮಕ್ಕಳಿಗೆ ಹಾಲು ಕುಡಿಸಿ ಸುದ್ದಿ ಮಾಡುವುದು, ಯುಗಾದಿಗೆ ಕೊಳಚೆ ನಿವಾಸಿ ಮಕ್ಕಳಿಗೆ ಎಣ್ಣೆಮಜ್ಜನ ಮಾಡಿಸುವ ಸುದ್ದಿ, ಆಗಾಗ್ಗೆ ಪ್ರ್‍ಏಮಿಗಳನ್ನು ಒಂದುಗೂಡಿಸುವುದು, ವಿಧವಾವಿವಾಹಗಳನ್ನು ಮಾಡಿಸುವುದು ಅಷ್ಟೇ ಅಲ್ಲದೆ ಇನ್ಯಾವುದೇ ಸುದ್ದಿಯಾಗುವಂತಹ ಸಂಗತಿಯಿದ್ದರೆ ಅದನ್ನು ಶೋಧಿಸಿ ಸುದ್ದಿಯಾಗುವುದೇ ಇವರ ಹವ್ಯಾಸ.

ನಕ್ಸಲರೊ, ಉಗ್ರರೊ, ದೂರದ ಪಾಕಿಸ್ತಾನದ ಭೂಕಂಪದಲ್ಲಿ ಸತ್ತವರಿಗೆಲ್ಲ ಸಂತಾಪ ಸೂಚಿಸಿಯೋ ಅಥವಾ ತಮ್ಮ ಅಭಿಪ್ರ್‍ಆಯದ ಹೇಳಿಕೆಯನ್ನು ಬಿಡುಗಡೆ ಮಾಡಿಯೋ ಪ್ರತಿಕ್ರಿಯಿಸುತ್ತಿದ್ದ ಈ ಶರಣರಿಗೆ ಇತ್ತೀಚೆಗೆ ತಮ್ಮ ಶರಣ ಕುಲಸ್ಥ ಬಸವಣ್ಣನವರ ಕುಲಗೋತ್ರಗಳನ್ನು ಜಾಲಾಡಿದ್ದ ’ಅನುದೇವ ಹೊರಗಣವನು’ (ಇದರ ಸತ್ಯಾಸತ್ಯಗಳನ್ನು ಇನ್ನೊಮ್ಮೆ ಚರ್ಚಿಸೋಣ) ಕೃತಿಯ ಬಗ್ಗೆ ಚಕಾರವನ್ನೂ ಎತ್ತದೆ ತಮ್ಮ ಸ್ಥಾನದ ಆದ್ಯ ಕರ್ತವ್ಯವನ್ನೇ ಮರೆತುಬಿಟ್ಟಿದ್ದಾರೆ.

ಇನ್ನು ಪ್ರತಿದಿನವೂ ದಿನಪತ್ರಿಕೆಯ ಯಾವುದಾದರೊಂದು ಪುಟಗಳಲ್ಲಿ ಒಡಮೂಡುವ ಆದಿಚುಂಚನಗಿರಿ, ಸುತ್ತೂರು, ಮತ್ತು ಉಡುಪಿ ಶ್ರೀಗಳ ಬಗ್ಗೆಯಂತೂ ಹೇಳುವುದೇ ಬೇಡ.

ಇದ್ದುದರಲ್ಲಿ ಮೌಲ್ವಿಗಳು, ಪಾದ್ರಿಗಳು ತಮ್ಮ ಹೊಣೆಯರಿತು ತಮ್ಮ ತಮ್ಮ ಧರ್ಮದ ರಕ್ಷಣೆ ಮತ್ತು ಪ್ರಸಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ತಮ್ಮ ಧರ್ಮದ ಉಗ್ರರ ಬಗ್ಗೆಯಾಗಲೀ, ಮತಾಂತರಿಗಳ ಬಗ್ಗೆಯಾಗಲಿ ಯಾವುದಕ್ಕೂ ಪ್ರತಿಕ್ರಿಯಿಸದೆ ತಮ್ಮ ತಮ್ಮ ಕೈಂಕರ್ಯದಲ್ಲಿ ಕಿಂಕರ್ತವ್ಯಮೂಢರಾಗಿ ಹುದುಗಿಹೋಗಿದ್ದಾರೆ. ಇವರನ್ನು ನೋಡಿ ನಮ್ಮ ಹಿಂದೂ ಮಠಾಧೀಶ್ವರರು ’ಮನೆಗೆ ಮಾರಿ ಪರರಿಗೆ ಉಪಕಾರಿ’ ಯಂತಾಗದೆ ಕಲಿಯಬೇಕಾದ್ದು ಬೆಟ್ಟದಷ್ಟಿದೆ.

ಸೂಕ್ತಿ: ಮನೆ ಗೆದ್ದು ಮಾರು ಗೆಲ್ಲು.

ರವಿ ಹಂಜ್

No comments: