ಅವಾರ್ಡುಗಳ ರಾಜಕೀಯ.

ಸುಮಾರು ಇಪ್ಪತ್ತೈದು ವರ್ಷಗಳಿಗೂ ಮುಂಚೆ ನಾನು ದಾವಣಗೆರೆಯ ಮಹರಾಜಪೇಟೆ ಸೊಸೈಟಿಯಲ್ಲಿ ಸಕ್ಕರೆ, ಗೋಧಿಗಳನ್ನು ಪಡೆಯಲು ಗಂಟೆಗಟ್ಟಲೆ ಕ್ಯೂ ನಿಂತು ಐದು ಕಿಲೊ ಸಕ್ಕರೆ ಬದಲಿಗೆ ಎರಡೂವರೆ ಕಿಲೊ ಅಥವ ಅಲ್ಲಿರುತ್ತಿದ್ದ ಸದಾ ಮುಖ ಗಂಟಿಕ್ಕಿಕೊಂಡಿರುತ್ತಿದ್ದ, ಸೊಸೈಟಿಗೆ ದಿನಸಿ ಕೊಳ್ಳಲು ಬರುತ್ತಿದ್ದವರನ್ನು ಭಿಕ್ಷುಕರಂತೆ ಕಾಣುತ್ತಿದ್ದ ವ್ಯಕ್ತಿಯೊಬ್ಬರು ದಯಪಾಲಿಸಿದಷ್ಟು ತೆಗೆದುಕೊಂಡುಬರುತ್ತಿದ್ದೆನು. ಆ ವ್ಯಕ್ತಿಯನ್ನು ಸರದಿಯಲ್ಲಿ ನಿಂತಿರುತ್ತಿದ್ದ ಜನರು ಮನಸಾರೆ ಶಪಿಸುತ್ತ ಸಕ್ಕರೆ, ಗೋಧಿಗಳನ್ನು ಯಾರಿಗೋ ಮಾರಿಕೊಂಡಿದ್ದಾರೆಂದು ಮಾತನಾಡಿಕೊಳ್ಳುತ್ತಿದ್ದರು. ಇದು ನಾನು ಆ ಸೊಸೈಟಿಗೆ ಹೋದಾಗಲೆಲ್ಲ ನಿರಂತರ ನಡೆಯುತ್ತಿದ್ದ ಪ್ರಕ್ರಿಯೆಯಾಗಿತ್ತು. ಬಾಲ್ಯದಲ್ಲಿ ನಾನು ನನ್ನ ಮನೆಯವರನ್ನು ಅಲ್ಲಿಗೆ ಕಳಿಸಿದ್ದಕ್ಕಾಗಿ ಶಪಿಸುತ್ತಿದೆನು.

ನಾನು ದಾವಣಗೆರೆಯನ್ನು ಖಾಲಿ ಮಾಡಿ ಬೆಂಗಳೂರು, ಬಾಂಬೆ ಮತ್ತು ಶಿಕಾಗೊ ನಗರಗಳಲ್ಲಿ ಇಪ್ಪತ್ತು ವರ್ಷಗಳೇ ಕಳೆದಿದ್ದರೂ ಆ ಸೊಸೈಟಿಯ ಅನುಭವವನ್ನೂ ಮತ್ತು ಗಂಟಿಕ್ಕಿಕೊಂಡಿರುತ್ತಿದ್ದ ಆ ಮುಖವನ್ನು ಮರೆಯಲು ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ದಾವಣಗೆರೆಯ ಜನತಾವಾಣಿ ಅಂತರ್ಜಾಲ ಆವೃತ್ತಿಯನ್ನು ನೋಡುತ್ತಿದ್ದಾಗ ಏನಾಶ್ಚರ್ಯ! ಆ ವ್ಯಕ್ತಿಯ ನಗುತ್ತಿರುವ ಭಾವಚಿತ್ರ ಮತ್ತು ಆ ಮಹಾಶಯರಿಗೆ ’ಸಹಕಾರಿ ಧುರೀಣ’ ಎಂಬ ಬಿರುದು ಗೌರವವು ದೊರೆತಿರುವುದಾಗಿ ಸುದ್ದಿ ಪ್ರಕಟವಾಗಿತ್ತು.

ಬಹುಶಃ ಅಂದು ಸರದಿ ನಿಂತು ಇವರನ್ನು ಹಾರೈಸುತ್ತಿದ್ದ ಜನರ ಹಾರೈಕೆಯು ಫಲ ನೀಡಿ ಇಂದು ಆ ಮಹಾಶಯರು ನಗುನಗುತ್ತಿರುವರೆಂದೆನಿಸಿ ಮೇರಾ ಭಾರತ್ ಮಹಾನ್ ಎಂದುಕೊಂಡು ೬೦ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ನನಗೆ ನಾನೆ ಹೇಳಿಕೊಂಡೆನು.

No comments: