ಲೈಂಗಿಕ ಅಭಿವ್ಯಕ್ತಿ ಮತ್ತು ಲೈಂಗಿಕ ದೌರ್ಜನ್ಯ : ಅಧ್ಯಯನ ವೈಧಾನಿಕತೆಯ ತೊಡಕುಗಳು

ಪೀಠಿಕೆ:

Lets discuss openly with no prejudices as stated by Shailaja that teaching about Draupadi case

ಸಿಗ್ಮಂಡ್ ಫ್ರಾಯ್ಡ್ ಸಿದ್ಧಾಂತದ ಪ್ರಕಾರ "ಜೀವನವು ಒತ್ತಡ ಮತ್ತು ಉಲ್ಲಾಸಗಳಿಂದ ಆವೃತಗೊಂಡಿದೆ. "ಕಾಮಾಸಕ್ತಿ" ಮೂಲ

ಕಾರಣವಾಗಿ ಮಾನವನ ಎಲ್ಲಾ ಒತ್ತಡಗಳು ಬೆಳೆದು "ಕಾಮಾಶಕ್ತಿ"ಯು (sexual energy or libido) ಆಸ್ಫೋಟಿಸುವ ಹಂತಕ್ಕೆ

ಏರುತ್ತದೆ. ಆ ಶಕ್ತಿಯ ಆಸ್ಫೋಟನೆಯೇ ಉಲ್ಲಾಸದ ಚಿಲುಮೆಯಾಗಿ ಹರಿದು ಆನಂದವನ್ನು ತರುತ್ತದೆ". ಇಲ್ಲಿ ಮಾನವ ಸಹಜವಾದ

ಎಲ್ಲಾ ಉಲ್ಲಾಸದಾಯಕ ಕ್ರಿಯೆ ಮತ್ತು ಚಿಂತನೆಗಳನ್ನು ಸಾಮಾನ್ಯಿಕರಿಸಿ ಕಾಮ ಎಂದು ಫ್ರಾಯ್ಡ್ ಕರೆದಿದ್ದಾನೆ. ಈ ಸೂತ್ರವು ಹೆಣ್ಣು

ಮತ್ತು ಗಂಡು ಎಂಬ ಭೇದವಿಲ್ಲದೆ ಮಾನವರೆಲ್ಲರಿಗೂ ಅನ್ವಯಿಸುತ್ತದೆ.

ಈ ಕಾಮವನ್ನು ಅಭಿವ್ಯಕ್ತಿಸುವ ಪರಿ ಗಂಡು ಮತ್ತು ಹೆಣ್ಣುಗಳಲ್ಲಿ ಭಿನ್ನವಾಗಿರುತ್ತದೆ. ಈ ಅಭಿವ್ಯಕ್ತಿಸುವುದನ್ನು ಅವರಿರುವ ಸಮಾಜ

ಮತ್ತು ಸಂಸ್ಕೃತಿಗಳು ಪ್ರಭಾವಿಸಿರುತ್ತವೆ ಕೂಡ. ಇದಕ್ಕೆ ದೈಹಿಕ ಭಿನ್ನತೆ ಕೂಡ ಕಾರಣವೆನ್ನಬಹುದು. ನಿಸರ್ಗದತ್ತವಾಗಿ ಒಂದು ಗಂಡು

ಲೈಂಗಿಕ ಉದ್ರೇಕಕ್ಕೊಳಗಾದರೆ ಅದನ್ನು ಆತ ಎಷ್ಟೇ ಮುಚ್ಚಿಡಲು ಪ್ರಯತ್ನಿಸಿದರೂ ದೈಹಿಕವಾದ ಆ ಬದಲಾವಣೆಯನ್ನು ಇತರರು

ಗಮನಿಸಿಬಿಡಬಹುದು. ಅದೇ ಹೆಣ್ಣಿಗೆ ಅಂತಹ ಸಮಸ್ಯೆ ಇಲ್ಲ. ಆ ದೈಹಿಕ ತೋರ್ಪಡಿಕೆಯ ಕಾರಣವಾಗಿಯೇ ಗಂಡಿನಲ್ಲಿ ಒಂದು

ಧಾರ್ಷ್ಟ್ಯ ಭಾವನೆ ಇರುತ್ತದೆ. ಅದೇ ಹೆಣ್ಣಿಗೆ ಒಂದು ನಿಯಂತ್ರಣ ಯಾ ಸಹನಾ ಗುಣವು ಪ್ರಕೃತಿದತ್ತವಾಗಿ ಬಂದಿರುತ್ತದೆ. ಗಂಡಿನ

ಅಂತಹ ಧಾರ್ಷ್ಟ್ಯತನವೇ ಅವನು ಮಹಿಳೆಯನ್ನು ಚುಡಾಯಿಸುವಂತೆ ಪ್ರಚೋದಿಸುತ್ತಿರುತ್ತದೆ. ಆದರೆ ಎಲ್ಲಿ ಲೈಂಗಿಕ ಸ್ವಚ್ಛಂದತೆ

ಸಾಧ್ಯವೋ ಅಂತಹ ಪರಿಸರದಲ್ಲಿ ಆ ಚುಡಾಯಿಸುವ ಪಿಡುಗು ಇರುವುದಿಲ್ಲ. ಉದಾಹರಣೆಗೆ ಭಾರತದಲ್ಲಿರುವಂತಹ eve teasing

(ಯುವತಿಯರನ್ನು ಚುಡಾಯಿಸುವುದು) ಯುರೋಪಿಯನ್ ರಾಷ್ಟ್ರಗಳಲ್ಲಿ ಇಲ್ಲವಾದರೂ ಇಟಲಿಯಲ್ಲಿ ಇದೆ. ಏಕೆಂದರೆ ಕಡು

ಕ್ಯಾಥೋಲಿಕ್ ಸಂಸ್ಕೃತಿಯ ಇಟಲಿಯಲ್ಲಿ ಯುರೋಪಿನ ಇತರೆಡೆ ಇರುವಷ್ಟು ಲೈಂಗಿಕ ಸ್ವಚ್ಛಂದತೆ ಇಲ್ಲ. ಎಲ್ಲೆಲ್ಲಿ ಮಡಿವಂತಿಕೆ

ಇರುವುದೋ ಅಲ್ಲೆಲ್ಲಾ eve teasing ಪಿಡುಗು ಇದೆ.

ಮಕ್ಕಳಿದ್ದಾಗ ಅನುಭವಿಸಿದ ಲೈಂಗಿಕ ಶೋಷಣೆಯೇ ಮುಂದೆ ಹಿಸ್ಟಿರಿಯ, obsessionನಂತಹ ಮಾನಸಿಕ ಕಾಯಿಲೆಗಳನ್ನು

ತರುತ್ತದೆ ಎಂದು ಫ್ರಾಯ್ಡ್ ತನ್ನ seduction ಥಿಯರಿಯಲ್ಲಿ ಪ್ರತಿಪಾದಿಸಿ ನಂತರ ಇದು ಮಕ್ಕಳ imaginary fantasy ಸಹ

ಕಾರಣವಾಗಿರಬಹುದು ಎಂದು ಬದಲಾಯಿಸಿದ್ದು ಇಂದಿಗೂ ವಿವಾದಗ್ರಸ್ತವಾಗಿದೆ.

ಫ್ರಾಯ್ಡ್ seduction theory ಎಂದಿದ್ದನೇ ಹೊರತು ಅದು ಲೈಂಗಿಕ ಶೋಷಣೆ ಅಥವಾ ಲೈಂಗಿಕ ದೌರ್ಜನ್ಯ ಎಂದು

ಪ್ರಸ್ತುತಗೊಳಿಸಿರಲಿಲ್ಲ. ಅಷ್ಟೇ ಏಕೆ 1970 ರವರೆಗೆ ಲೈಂಗಿಕ ದೌರ್ಜನ್ಯ ಎಂಬ ವಿಷಯವೇ ಇರಲಿಲ್ಲ! ಆದರೂ 1970ರಿಂದ

ಇಲ್ಲಿಯವರೆಗೆ ಲೈಂಗಿಕ ದೌರ್ಜನ್ಯ/ಶೋಷಣೆಯನ್ನು ಗುರುತಿಸಿ ಶಿಕ್ಷಿಸುವುದಲ್ಲದೆ ಮಹತ್ತರವಾಗಿ ಈ ಕುರಿತು ಸಮಾಜದಲ್ಲಿ ಅರಿವು

ಮೂಡಿಸಲಾಗಿದೆ. ಇದು ಕ್ರಾಂತಿಕಾರಕ ಬದಲಾವಣೆಯೇ ಎನ್ನಬಹುದು. ಇಷ್ಟೆಲ್ಲಾ ಪ್ರಗತಿಯನ್ನು ಹೊಂದಿದ್ದರೂ ಮಹಿಳಾ

ಸಮಾನತೆ ಮತ್ತು ದೌರ್ಜನ್ಯವನ್ನು ತಡೆಯುವಲ್ಲಿ ಇನ್ನೂ ಮಹತ್ತರ ಬದಲಾವಣೆಗಳು ಆಗಬೇಕಿವೆ.


ಪ್ರವೇಶಿಕೆ:

ಹೀಗೆ ಹುಟ್ಟಿನಿಂದಲೂ ಸಮಾನ ಲೈಂಗಿಕಾಸಕ್ತಿಯನ್ನು ಹೊಂದಿದ್ದರೂ ಗಂಡು-ಹೆಣ್ಣುಗಳು ಅದನ್ನು ಅಭಿವ್ಯಕ್ತಿಸುವಾಗ ಮಾತ್ರ ಅವರ


ಮೂಲಭೂತ ದೈಹಿಕ ಭಿನ್ನತೆಗಿಂತ ಸಾಮಾಜಿಕ ಸಂಸ್ಕೃತಿಗಳ ಪ್ರಭಾವವೇ ಹೆಚ್ಚು ಪರಿಣಾಮ ಬೀರುತ್ತವೆ. ಇದು ಜಗತ್ತಿನಾದ್ಯಂತ

ಆಯಾಯ ಸ್ಥಳೀಯ ಸಂಸ್ಕೃತಿಗೆ ತಕ್ಕಂತೆ ಒಂದು ಅನುಪಾತದಲ್ಲಿರುತ್ತದೆ.

ಈ ಎಲ್ಲಾ ವ್ಯತ್ಯಯಗಳೇನೇ ಇದ್ದರೂ ಮಹಿಳೆಯ ಲೈಂಗಿಕ ಅಭಿವ್ಯಕ್ತಿತನವನ್ನು ತಪ್ಪಾಗಿ ಗ್ರಹಿಸಿ ಲೈಂಗಿಕ ದೌರ್ಜನ್ಯಗಳು

ನಡೆಯುತ್ತಲೇ ಇವೆ. ಮಹಿಳೆಯ ಉಡುಗೆ ತೊಡುಗೆಗಳಲ್ಲದೆ ಲಿಂಗಬೇಧವಿಲ್ಲದೆ ಆಕೆ ಸಮಾಜದೊಂದಿಗೆ ಬೆರೆಯುವ

ಸಾಮಾಜಿಕತೆಯನ್ನೇ ಅಪಾರ್ಥ ಮಾಡಿಕೊಂಡು ಲೈಂಗಿಕ ದೌರ್ಜನ್ಯವೆಸಗುವ ಸಾಕಷ್ಟು ನಿದರ್ಶನಗಳಿರುವಾಗ ಇನ್ನು ಆಕೆ ನಿರ್ಭಿಡೆಯಿಂದ

ತನ್ನ ಲೈಂಗಿಕಾಸಕ್ತಿಯ ಕುರಿತು ಹೇಳಿಕೊಂಡರೆ ಏನಾಗಬಹುದೆಂದು ಊಹಿಸಿ! ಮಹಿಳೆ ಉದಾರವಾದಿ, ಪ್ರಗತಿಪರ ಎನ್ನುವುದನ್ನು

ಗಂಡಾಳ್ವಿಕೆಯ ಸಮಾಜದಲ್ಲಿ ಉದಾರವಾದಿ, ಪ್ರಗತಿಪರ ಗಂಡುಗಳು ಸಹ ಉದಾರವಾದಿ ಮಹಿಳೆಯನ್ನು ಉದಾರ

ಲೈಂಗಿಕತೆಯವಳೆಂದೂ, ಪ್ರಗತಿಪರಳನ್ನು ಕೈಗೆಟುಕುವವಳೆಂಬ ಒಳನೋಟವಿಟ್ಟುಕೊಂಡೇ ನೋಡುವುದು

ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಆದರೆ ಹಾಗೆ ದೌರ್ಜನ್ಯಕ್ಕೆಡೆ ಮಾಡಿಕೊಡುವ ಅವಕಾಶಗಳು ಇರುವಂತೆಯೇ ಆಕೆಯು ತನ್ನ ಬಯಕೆ ಈಡೇರಿಸಿಕೊಂಡದ್ದನ್ನು ಸಹ

ಲೈಂಗಿಕ ದೌರ್ಜನ್ಯ ಎಂದು ಹಲವಾರು ಭಾರಿ ಪರಿಗಣಿಸಿದ ಅನಾಹುತಕಾರಿ ಘಟನೆಗಳೂ ಸಾಕಷ್ಟಿವೆ. ಆದರೆ ಅಂತಹ ಅವಘಡಗಳ ಹಿಂದೆ

ಮತ್ತದೇ ಸಮಾಜ, ಸಂಸ್ಕೃತಿಗಳ ಪ್ರಭಾವವೇ ಹೆಚ್ಚು ಗಾಢವಾಗಿರುತ್ತದೆ.

ಈ ಪ್ರಭಾವಗಳು ಕೇವಲ ಆಯಾಯ ಘಟನೆಗಳ ಮೇಲಲ್ಲದೆ ಲೈಂಗಿಕ ದೌರ್ಜನ್ಯ ಅಧ್ಯಯನ ವೈಧಾನಿಕತೆಯ ಮೇಲೂ ಗಾಢ

ಪರಿಣಾಮಗಳನ್ನು ಹೊಂದಿದೆ. ಇಂತಹ ಕೇಸುಗಳ ಕುರಿತಾಗಿ ನಮ್ಮ ಅಧ್ಯಯನಗಳು ಹೆಚ್ಚು ಗಮನ ಹರಿಸಿಲ್ಲ. ಈ ದಿನದ

ಉಪನ್ಯಾಸದಲ್ಲಿ ಲೈಂಗಿಕ ದೌರ್ಜನ್ಯದ ಅಧ್ಯಯನದ ವೈಜ್ಞಾನಿಕ ತೊಡಕುಗಳ ಜೊತೆಗೆ ಇಂತಹ ಕೇಸುಗಳ ಬಗ್ಗೆ ಸಹ ಸ್ವಲ್ಪ ಗಮನ

ಹರಿಸೋಣ.

ಎಲ್ಲಾ ರೀತಿಯ ಲೈಂಗಿಕ ದೌರ್ಜನ್ಯದ ಕೇಸುಗಳು ದಾಖಲಾತಿಗೆ ಸಿಗುವುದಕ್ಕಿಂತ ಎರಡರಷ್ಟು ಪಾಲು ಸಿಗದೆ ಹೋಗುತ್ತಿರುವುದು ಸಹ

ಅಧ್ಯಯನ ವೈಧಾನಿಕತೆಯ ತೊಡಕೇ ಆಗಿದೆ. ಅಮೆರಿಕಾದ ಪ್ರತಿಷ್ಠಿತ ವಿಶ್ವವಿದ್ಯಾಲಯ ಮತ್ತು ಸರ್ಕಾರಿ ಸಂಸ್ಥೆಯೊಂದು ಜಂಟಿಯಾಗಿ

ವಿಶ್ಲೇಷಿಸಿ ಏಳು ಪ್ರಮುಖ ವೈಧಾನಿಕತೆಯ ತೊಡಕುಗಳನ್ನು ದಾಖಲಿಸಿವೆ:

1. ಪ್ರಕರಣ ಸಿಂಧುತ್ವ ಸ್ಥಾಪಿಸುವಲ್ಲಿನ ದಿವ್ಯ ನಿರ್ಲಕ್ಷ್ಯ - ಲೈಂಗಿಕ ದೌರ್ಜನ್ಯ ಪ್ರಕರಣಗಳ ದೂರು ದಾಖಲಾತಿ, ನಿರೂಪಣೆ,

ವಿವಾದಾಂಶಗಳ ದಾಖಲಾತಿಯಲ್ಲಿ ಗಮನಾರ್ಹ ವಿವರಗಳ ಕಡೆ ದಿವ್ಯ ನಿರ್ಲಕ್ಷ್ಯ ಅಥವಾ ಯಾಂತ್ರಿಕೃತ ವರದಿ ನೀಡುವಿಕೆ.


2. ಪ್ರಕರಣದ ದುರ್ಬಲ ಹೇಳ್ಮೆಯ (theoretical development) ದಾಖಲಾತಿ - ಪ್ರಕರಣಗಳನ್ನು ಥಿಯರೆಟಿಕಲ್ ಆಗಿ

ಕಟ್ಟಿಕೊಡದೆ ದುರ್ಬಲಗೊಳಿಸುವುದು. ಅಂದರೆ ಭಾವನಾತ್ಮಕ ನೆಲೆಗೆ ಒತ್ತುಕೊಟ್ಟು ಹೇಳ್ಮೆಯ ಚೌಕಟ್ಟನ್ನು ದೌರ್ಜನ್ಯದ

ಪರಿಧಿಯೊಳಗೆ ಗಟ್ಟಿಯಾಗಿ ಕಟ್ಟಿಕೊಡಲಾಗದಿರುವುದು. ಎಷ್ಟೋ ಬಾರಿ ಮೇಲ್ನೋಟಕ್ಕೆ ಒಪ್ಪಿತ ಕಾಮವೆನಿಸಿದರೂ ಹಿಂದಿನ

ಆಮಿಷಗಳನ್ನು ಗೌಣವಾಗಿಸುವುದು. ಅಂದರೆ ಪ್ರಭಾವಶಾಲಿ ಗಂಡಾಳ್ವಿಕೆಯು ಅಬಲ ಅಸಹಾಯಕ ಹೆಣ್ಣು ಒಪ್ಪಲೇಬೇಕಾದಂತಹ

ಸನ್ನಿವೇಶಗಳನ್ನು ಸೃಷ್ಟಿಸಿ ಆಮಿಷಗಳಿಗೆ ಬಲಿಯಾಗಿಸುವುದು. ಈ ಸನ್ನಿವೇಶಗಳಲ್ಲಿ ಸಮಾಜವು ಸಹ ಹೆಣ್ಣನ್ನೇ ಬೊಟ್ಟು ಮಾಡಿ

ನಿಂದಿಸುವುದೇ ಹೊರತು ಆಕೆ ಅಸಹಾಯಕಳಾಗುವಂತಹ ಸನ್ನಿವೇಶ, ಸಾಮಾಜಿಕ ಪರಿಸ್ಥಿತಿ, ಪರಿಸರ, ಸಂಸ್ಕೃತಿಗಳನ್ನು ಅಲ್ಲ.


3. ಚಲನಶೀಲ (dyanamic) ಸಮಸ್ಯೆಗೆ ಜಡ ಮತ್ತು ಬಹು ಪರಿಚ್ಛೇದಿಕ ಸೂತ್ರ (cross sectional) - ಜ್ವಲಂತ

ಸಮಸ್ಯೆಯಾದರೂ ಹೊಸ ಹೊಸ ಸ್ವರೂಪಗಳನ್ನು ಪಡೆಯುತ್ತಿರುವ ಸಮಸ್ಯೆಗೆ ಅದೇ ಜಡ ಮತ್ತು ವಿವಿಧ ಇಲಾಖೆಗಳಲ್ಲಿ

ಹಂಚಿಹೋಗಿರುವ ಸಂಶೋಧನಾ ಸ್ವರೂಪವನ್ನೇ ಅವಲಂಬಿಸಿರುವುದು. ತಂತ್ರಜ್ಞಾನ, ನವ ಸಾಮಾಜಿಕ ಪಲ್ಲಟಗಳ ಹಿನ್ನೆಲೆಯಲ್ಲಿ


ನಡೆಯುವ ದೌರ್ಜನ್ಯಗಳನ್ನು ದೌರ್ಜನ್ಯವೆಂದು ನೋಡದೆ ಇರುವುದು. ಕ್ಯಾಮೆರಾ ಫೋನುಗಳಿವೆಯೆಂದು ಖಾಸಗಿ ವ್ಯಕ್ತಿಗಳ ವಿಡಿಯೋ

ತೆಗೆದು ಜಾಲತಾಣಗಳಲ್ಲಿ ಹರಿಯಬಿಡುವುದು. ದಂಪತಿಗಳು ಸೆಕೆ ಇರುವುದೆಂದು ಕಿಟಕಿಗಳನ್ನು ತೆರೆದು ಮಲಗಿ ಸರಸದಲ್ಲಿ

ತೊಡಗಿದ್ದಾಗ ಅದನ್ನು ಕ್ಯಾಮೆರಾ ಫೋನುಗಳಲ್ಲಿ ಸೆರೆ ಹಿಡಿದು ಜಾಲತಾಣಗಳಲ್ಲಿ ಹರಿಯಬಿಟ್ಟ ಸಾವಿರಾರು ಪ್ರಕರಣಗಳಿವೆ.

ಇಂತಹ ಪ್ರಕರಣಗಳಲ್ಲಿ ಸಮಾಜವು ಸಹ ಆ ದಂಪತಿಯನ್ನೇ "ಕಿಟಕಿ ಹಾಕಿಕೊಳ್ಳದೆ ಏಕೆ ಸರಸದಲ್ಲಿ ತೊಡಗಿದ್ದರು" ಎಂದು

ನಿಂದಿಸುವುದೇ ಹೊರತು ಅದನ್ನು ಚಿತ್ರೀಕರಿಸಿ ಜಾಲತಾಣದಲ್ಲಿ ಹರಿಯಬಿಟ್ಟ ವ್ಯಕ್ತಿಗಳನ್ನು ಪ್ರಶ್ನಿಸುವುದಿಲ್ಲ. ಇಲ್ಲಿ ವ್ಯಕ್ತಿಗಳ

"ಖಾಸಗೀತನ"ವನ್ನು ಕಾಪಾಡುವುದಕ್ಕಿಂತಲೂ "ಮಡಿವಂತಿಕೆ"ಯನ್ನು ಕಾಪಾಡಲು ಸಮಾಜ ಉತ್ಸುಕವಾಗುವಷ್ಟು ಸಮಾಜವನ್ನು

ಪುರುಷಶಾಹಿ ಮತ್ತು ಪುರೋಹಿತಶಾಹಿಗಳು ಪ್ರಭಾವಿಸಿಬಿಟ್ಟಿವೆ.


4. ಸಂಶೋಧನೆಗೆ ಸಿದ್ಧ ಮತ್ತು ಅನುಕೂಲಸಿಂಧು ಸಮೀಕ್ಷಾ ವಿಧಾನಗಳ ಬಳಕೆ - ನಿತ್ಯನೂತನ ಸ್ವರೂಪ ಪಡೆಯುವ ಈ ಸಮಸ್ಯೆಗೆ

ಶಾಸ್ತ್ರೀಯ ಸಮೀಕ್ಷೆ ಮತ್ತು ವಿಧಾನಗಳನ್ನೇ ಬಳಸುತ್ತಿರುವುದು. ಉದಾಹರಣೆಗೆ ಅತ್ಯಾಚಾರಕ್ಕೊಳಗಾದವರ ಜಾತಿಯನ್ನು

ಪ್ರಮುಖವಾಗಿ ಗುರುತಿಸಿಕೊಂಡು ಅದಕ್ಕೆ ತಕ್ಕಂತಹ ಜಾತಿವಾರು ವಿಶ್ಲೇಷಣೆಗಳನ್ನು ಬಳಸುವುದಲ್ಲದೆ ಅಪ್ರಾಪ್ತೆ, ವಿವಾಹಿತೆ ಹೀಗೆ

ವಿಭಾಗೀಕರಿಸಿದ ಸಿದ್ಧಾಂತಗಳನ್ನು ಅನ್ವಯಿಸಿ ಮೂಲ ಸಮಸ್ಯೆಗೆ ಭಿನ್ನ ರೂಪವನ್ನು ಕೊಡುವುದು.

5. ವಿವರಣೆ ಮತ್ತು ಶ್ವೇತಪತ್ರಗಳ ಮೇಲೆ ಹೆಚ್ಚು ಅವಲಂಬನೆ - ಸಿದ್ಧ ಮಾದರಿಯ ಜನಪ್ರಿಯ ಶ್ವೇತಪತ್ರ ಮತ್ತು ಸೈದ್ಧಾಂತಿಕ

ನಿಲುವುಗಳ ಮೇಲೆಯೇ ಹೆಚ್ಚಾಗಿ ಅವಲಂಬನೆ.


6. ಪ್ರತಿವರ್ತನೆ/ಪ್ರತಿಕ್ರಿಯೆಗಳಾಧರಿತ ಸೂತ್ರಗಳ ಸಂಪೂರ್ಣ ಅವಗಣನೆ - ಪ್ರತಿವರ್ತನೆಗಳ ಆಧಾರವಾಗಿ ವಿಶ್ಲೇಷಣಾತ್ಮಕವಾಗಿ

ರೂಪಿಸಬೇಕಾದ ವಿಧಾನಗಳನ್ನು ರಚಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು. ಇದರಿಂದ ಕೇಸ್ construct ಹಾದಿ ತಪ್ಪುತ್ತಿವೆ.

7. ಏಕರೂಪಿ ವಿಧಾನದ ಪೂರ್ವಾಗ್ರಹಿಕೆ - ಎಲ್ಲಾ ಪ್ರಕರಣಗಳನ್ನೂ ಏಕರೂಪವಾಗಿ ಅವಲೋಕಿಸುವ ಮಾನದಂಡಗಳನ್ನು

ಬಳಸುವುದು.

ಇತ್ತೀಚೆಗೆ ಅಮೆರಿಕಾದ ಯುನೈಟೆಡ್ ಏರ್ ಲೈನ್ಸ್ ವಿಮಾನವೊಂದರಲ್ಲಿ ಓರ್ವ ಯುವತಿ ಪ್ರಯಾಣಿಸುತ್ತಿದ್ದಳು. ಆಕೆಯ ಪಕ್ಕದ

ಸೀಟಿನಲ್ಲಿ ಕುಳಿತಿದ್ದ ಒಬ್ಬ ಮಧ್ಯವಯಸ್ಕ ಆಕೆಗೆ 'ಹಾಯ್, you look gorgeous! ಎಂದು ಸೌಜನ್ಯದ compliment

ಹೇಳಿದ. ಆಕೆ ಸಹ ಮುಗುಳ್ನಕ್ಕು ಥ್ಯಾಂಕ್ ಯೂ ಎಂದಳು. ಸ್ವಲ್ಪ ಹೊತ್ತಿನ ನಂತರ ಆಕೆಯನ್ನೇ ದಿಟ್ಟಿಸುತ್ತ ಕುಳಿತ ಅವನು

ಬ್ಲ್ಯಾಂಕೆಟ್ ಒಂದನ್ನು ಸೊಂಟದ ಮೇಲೆ ಹೊದ್ದು ಮುಷ್ಠಿಮೈಥುನದಲ್ಲಿ ತೊಡಗಿದ. ಇದರಿಂದ ಕಸಿವಿಸಿಗೊಂಡು ಮಾನಸಿಕ

ಆಘಾತಕ್ಕೊಳಗಾದ ಯುವತಿ ವಿಮಾನದ ಸಿಬ್ಬಂದಿಗೆ ಸೀಟ್ ಬದಲಾಯಿಸಿಕೊಡಲು ಕೇಳಿದಳು. ಆದರೆ ಯಾವುದೇ ಸೀಟ್ ಲಭ್ಯವಿರದ

ಕಾರಣ ಸೀಟ್ ಬದಲಿಸಿ ಕೊಡಲಾಗಲಿಲ್ಲ. ನಂತರ ಆ ಯುವತಿ ಆ ವ್ಯಕ್ತಿಯ ಮೇಲೆ ಲೈಂಗಿಕ ಶೋಷಣೆ ಕೇಸ್ ದಾಖಲಿಸಿದ್ದಲ್ಲದೆ

ಏರ್ ಲೈನ್ ಸಹಾಯ ಮಾಡಲಿಲ್ಲವೆಂದು ಸಹ ದೂರು ದಾಖಲಿಸಿದಳು. ಈ ಕೇಸಿನಲ್ಲಿ ಅವನಿಗೆ ಶಿಕ್ಷೆಯಾಗಿದ್ದಲ್ಲದೆ ಏರ್ ಲೈನ್ಸ್

ಕಂಪೆನಿಗೆ ಸಹ ದಂಡ ವಿಧಿಸಲಾಯಿತು. ಈ ಪ್ರಕರಣದಲ್ಲಿ ದೈಹಿಕವಾಗಿ ಮುಟ್ಟದೆ, ದೈಹಿಕವಾಗಿ ತನ್ನ ಲಿಂಗವನ್ನು ತೋರದೆ ಆತ

ಮುಷ್ಠಿ ಮೈಥುನ ನಡೆಸಿದ್ದರೂ ಸಹ ಅದು ಆ ಹೆಣ್ಣಿನಲ್ಲಿ ಉಂಟು ಮಾಡಿದ ಮಾನಸಿಕ ಆಘಾತವು ದೈಹಿಕ ಲೈಂಗಿಕ

ದೌರ್ಜನ್ಯದಷ್ಟೇ ಪರಿಣಾಮಕಾರಿ. ಈ ಮಾನಸಿಕ ಆಘಾತದ ಅನುಪಾತವು ಮಹಿಳೆಯಿಂದ ಮಹಿಳೆಗೆ ವ್ಯತ್ಯಯದಲ್ಲಿರಬಹುದು. ಆದರೆ

ಅದು ಆಘಾತವನ್ನಂತೂ ಉಂಟುಮಾಡಿರುತ್ತದಲ್ಲವೇ! ಇಂತಹ ಕೇಸುಗಳನ್ನು ಕೇವಲ ಸಮಾಜದಲ್ಲಿ ಹಿಡಿದು ಬಡಿದು ನ್ಯಾಯ

ತೀರ್ಮಾನಿಸುವುದಕ್ಕಿಂತಲೂ ಕೋರ್ಟಿನ ಮೊಕದ್ದಮೆಗಳಾಗಿ ಆಯಾಯ ವ್ಯಕ್ತಿಗಳನ್ನು sexual predators ಎಂದು ಗುರುತಿಸಿದಾಗ

ಸಮಾಜ ಹೆಚ್ಚು ಎಚ್ಚೆತ್ತುಕೊಳ್ಳುತ್ತದೆ ಮತ್ತು ಅಂತಹ ಅಪರಾಧಿಗಳ ಮೇಲೆ ನಿಗಾ ವಹಿಸುವುದು ಸುಲಭವಾಗುತ್ತದೆ.

ಪ್ರಮುಖವಾಗಿ ಮೇಲಿನ ಎಲ್ಲಾ ಏಳು ವೈಧಾನಿಕ ತೊಡಕುಗಳು ದೂರುವುದು ಜಡರೂಪಿ, ಏಕಮುಖಿ, ಸಿದ್ಧ ಮಾದರಿಯ ತಂತ್ರ ಮತ್ತು


ಸೈದ್ಧಾಂತಿಕರಿಸಿದ ದೌರ್ಜನ್ಯದ ಸ್ವರೂಪಗಳನ್ನೇ. ಹಾಗಾಗಿ ಈ ಜಡ ಸ್ವರೂಪದ ವೈಧಾನಿಕತೆಯಿಂದಲೇ ದಾಖಲಾಗುತ್ತಿರುವ

ದೌರ್ಜನ್ಯದ ಪ್ರಕರಣಗಳಿಗಿಂತ ಎರಡು ಪಟ್ಟು ಪ್ರಕರಣಗಳು ದಾಖಲಾಗದೆ ತಪ್ಪಿ ಹೋಗುತ್ತಿವೆ ಎನ್ನಲಾಗಿದೆ.

ಅದಲ್ಲದೆ ಲೈಂಗಿಕ ದೌರ್ಜನ್ಯದ ಕೇಸುಗಳನ್ನು ಪಕ್ಕಕ್ಕಿಟ್ಟು, ಇದರ ಹೆಸರಿನಲ್ಲಿ ಆಗುವ ದೌರ್ಜನ್ಯಗಳನ್ನು ಬಿಂಬಿಸುವ ಹೆಚ್ಚು ಹೆಚ್ಚು

ಪ್ರಕರಣಗಳು ಇತ್ತೀಚೆಗೆ ಸುದ್ದಿ ಮಾಡುತ್ತಿವೆ. ಈ ಜಡ ಸ್ವರೂಪದ ವೈಧಾನಿಕತೆ ಮತ್ತು ಪೂರ್ವಾಗ್ರಹಗಳ ಕಾರಣ ಈ ರೀತಿಯ ಹುಸಿ

ಕೇಸುಗಳ ಸ್ವರೂಪದ ಬಗ್ಗೆ ತೀವ್ರವಾಗಿ ಯಾರೂ ಗಮನ ಹರಿಸುತ್ತಿಲ್ಲ. ಈ ಮೊದಲೇ ಹೇಳಿದಂತೆ ನಮ್ಮ ಇಂದಿನ ಉಪನ್ಯಾಸದ

ಅಂಶಗಳಾದ ಲೈಂಗಿಕ ಅಭಿವ್ಯಕ್ತಿ ಮತ್ತು ವೈಧಾನಿಕತೆಯ ತೊಡಕುಗಳನ್ನು ಬಿಂಬಿಸುವ ನನ್ನ ಅನುಭವದ ಎರಡು ಘಟನೆಗಳನ್ನಲ್ಲದೆ

ಇನ್ನಷ್ಟು ಉದಾಹರಣೆಗಳನ್ನು ಗಮನಿಸೋಣ.


ಘಟನೆ 1:


ನಾನು ಎಂಬತ್ತರ ದಶಕದಲ್ಲಿ ಗುಮಾಸ್ತನಾಗಿ ಹತ್ತಿ ಗಿರಣಿಗಳಲ್ಲಿ ಹತ್ತಿ ಜಿನ್ನಿಂಗ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಆಲ್ಲಿನ ಕೆಲಸ

ಬಹುಪಾಲು ಮಹಿಳೆಯರೇ ಮಾಡುತ್ತಿದ್ದರು. ಈ ಹೆಣ್ಣಾಳುಗಳ ಮುಖ್ಯಸ್ಥೆಯನ್ನು ’ಮಕದುಮ್ಮಿ’ ಎನ್ನುತ್ತಿದ್ದರು. ಈ ಮಕದುಮ್ಮಿ

ಹೆಣ್ಣಾಳುಗಳ ಎಲ್ಲಾ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಳು. ಯಾವುದೇ ರೀತಿಯ ’ಮಹಿಳಾ ಶೋಷಣೆ’ಯನ್ನು ತಡೆಯುವ

ಮತ್ತು ಪ್ರೊತ್ಸಾಹಿಸುವ ಜವಾಬ್ದಾರಿ ಈ ಮಕದುಮ್ಮಿಗಳದಾಗಿತ್ತು. ಅಂದರೆ ಇಲ್ಲಿ ಯಾವುದೇ ಗಂಡಾಳು ಇರುತ್ತಿರಲಿಲ್ಲ. ಎಲ್ಲರೂ

ಮಹಿಳೆಯರೇ ಆದ್ದರಿಂದ ಮಹಿಳೆಯರೇ ಮಹಿಳೆಯರನ್ನು ಶೋಷಿಸಿದರೆ ಅದನ್ನು ನಿಭಾಯಿಸುವ ಹೊಣೆ ಮಕದುಮ್ಮಿಯದಾಗಿತ್ತು.

ಹಾಗಾಗಿ ಶೋಷಣೆಯನ್ನು ಪುರಸ್ಕರಿಸುವ ಅಥವಾ ತಿರಸ್ಕರಿಸುವ ಜವಾಬ್ದಾರಿ ಈ ಮಕದುಮ್ಮಿ ಎಂಬ ಮಹಿಳೆಯದೇ ಆಗಿತ್ತು.

ಒಮ್ಮೊಮ್ಮೆ ಸಾವ್ಕಾರರು, ಗುಮಾಸ್ತರು ಮತ್ತು ಹಮಾಲರು ತಮ್ಮ ಪೋಲಿ ಮಾತುಗಳಿಂದ ’ಮೇಲ್’ಉಸ್ತುವಾರಿ ಮಾಡುತ್ತಿದ್ದರು.

ಅದಕ್ಕೆ ಈ ಮಹಿಳೆಯರೂ ಸಹ ಮಹಾ ಪೋಲಿ ಮಾತುಗಳಿಂದ ಪ್ರತಿಸ್ಪಂದಿಸಿ ತಮಾಷೆ ಮಾಡುತ್ತಿದ್ದರು. ಆದರೆ ಇದೆಲ್ಲವೂ ಕೆಲಸದ

ಏಕತಾನತೆಯನ್ನು ಮುರಿದು ಮನಸ್ಸನ್ನು ಉಲ್ಲಸಿತಗೊಳಿಸಿ ಮತ್ತೆ ಕೆಲಸದಲ್ಲಿ ತೊಡಗಲು ಪ್ರೊತ್ಸಾಹಿಸುವ ಪರಿಯಾಗಿತ್ತೇ ವಿನಃ

’ಶೋಷಣೆ’ಯಾಗಿಯಲ್ಲ!

ಈ ರೀತಿಯ ಪೋಲಿ ಮಾತುಗಳು, ರಸಿಕ ಆಲಾಪನೆಗಳು ಎಲ್ಲಾ ಶ್ರಮಿಕ ವರ್ಗದಲ್ಲಿ ಹಾಸುಹೊಕ್ಕಾಗಿವೆ. ಏಕೆಂದರೆ ನಮ್ಮ ಜನಪದವೇ

ಸಾಕಷ್ಟು ಇಂತಹ ಲೈಂಗಿಕ ಅಂಗಚೇಷ್ಟೆ, ರಸ ಸಂಭಾಷಣೆ, ಸರಸ ಸಲ್ಲಾಪಗಳಿಂದ ಕೂಡಿರುವಾಗ ಅಂತಹ ಜನಪದ ಸಮೂಹದ ಮಣ್ಣಿನ

ಜನ ಇದನ್ನು ತಮ್ಮ ದೈನಂದಿನ ಜಂಜಾಟದ ಏಕತಾನತೆಯ ಕಾರ್ಯಗಳನ್ನು ಉಲ್ಲಸಿತಗೊಳಿಸಲು ಜನಪದದಂತೆಯೇ

ಮುಂದುವರಿಸಿಕೊಂಡು ಬಂದಿದ್ದಾರೆ. ಹಾಗಾಗಿಯೇ ಇಂತಹ ಚೇಷ್ಟೆಗಳು ನಾನು ಕಂಡ ಹಳ್ಳಿಯ ಕೃಷಿಕರಲ್ಲದೇ ದಾವಣಗೆರೆಯ

ಕೈಗಾರಿಕಾ ವಲಯದ ಶ್ರಮಿಕರು ಸಹ ಕೃಷಿಕರಷ್ಟಲ್ಲದಿದ್ದರೂ ತಮ್ಮ ಪ್ರಾದೇಶಿಕತೆಗೆ ತಕ್ಕಂತೆ ಈ ರೀತಿಯ ರಸ(ತಿ), ಮನ್

ಮಾತು(ಮನ್ಮಥ) ಸಂಭಾಷಣೆಗಳಲ್ಲಿ ತೊಡಗುತ್ತಿದ್ದರು. ಆ ಸಂಭಾಷಣೆಗಳಲ್ಲಿ ಕೆಲವು ಸಾವ್ಕಾರರು, ಗುಮಾಸ್ತರು, ಹಮಾಲರು ಭಲೇ

ಹುರುಪಿನಿಂದ ಭಾಗಿಯಾಗುತ್ತಿದ್ದರು. ಮುಂದೆ ಅವರೊಡನೆ ಕೆಲವು ಹೆಣ್ಣಾಳುಗಳಿಗೆ ಮನಸ್ಸಾಗಿ ಸಂಬಂಧಗಳುಂಟಾಗುತ್ತಿದ್ದವು.

ಹಾಗೆಂದು ಇಂತಹ ಮುಕ್ತ ಮಾನವ-ಸಹಜ ಮಧುರ ಸಂಬಂಧಗಳನ್ನು ಯಾವುದೇ ರೀತಿಯ ಶೋಷಣೆ ಎನ್ನುವುದು ಮುಕ್ತ ಸಮಾಜದ

ಶೋಷಣೆ ಎನಿಸುತ್ತದೆ! ಇದು ನೈತಿಕತೆಯ ಪ್ರಶ್ನೆ(?) ಎನಿಸಬಹುದೇ ಹೊರತು ಖಂಡಿತ ಶೋಷಣೆಯಲ್ಲ!

ಸಾಕಷ್ಟು ಬಾರಿ ಕೆಲವು ಜೋರಿದ್ದ ಹೆಣ್ಣಾಳುಗಳೇ ಹಮಾಲರನ್ನು, ಗುಮಾಸ್ತರನ್ನು, ಸಾವ್ಕಾರರನ್ನು ಕೆಡವಿಕೊಳ್ಳುತ್ತಿದ್ದರು. ಇಲ್ಲಿ

ಇವರೆಲ್ಲಾ ಬೇಕೆಂದೇ ಕೆಡವಿಕೊಳ್ಳುವುದಕ್ಕಿಂತ ನಿತ್ಯ ಒಡನಾಟದಲ್ಲಿ ಸ್ಪಂದಿಸಿ ಆಕರ್ಷಣೆಯುಂಟಾಗಿ ಪರಸ್ಪರ

ಸಂಬಂಧಗಳುಂಟಾಗುತ್ತಿದ್ದವು. ಹೀಗೆ ಹೆಣ್ಣಾಳುಗಳು ಹಮಾಲರಿಂದ ಗುಮಾಸ್ತರು, ಫಿಟ್ಟರುಗಳು, ಮಾಲೀಕರಲ್ಲದೆ ಯಾವ ಗಂಡುಗಳು

ತಮ್ಮ ಕೆಲಸದ ನಡುವೆ ಪರಿಚಯವಾಗುತ್ತಿದ್ದರೋ ಅವರೊಟ್ಟಿಗಿನ ಪ್ರಣಯ ಪ್ರಸಂಗಗಳನ್ನು ನಡೆಸುತ್ತಿದ್ದರು. ಇದು ನಾನು ಕಂಡ

ಹಳ್ಳಿ, ಪಟ್ಟಣ ಮಾರುಕಟ್ಟೆಗಳ ಶ್ರಮಿಕ ವರ್ಗದಲ್ಲೆಲ್ಲಾ ಹಾಸುಹೊಕ್ಕಾಗಿದ್ದಿತು.

ಈ ಶ್ರಮಿಕ ವರ್ಗದ ಮಹಿಳೆಯರಷ್ಟು ಮುಕ್ತವಾಗಿ ಕಾಮವನ್ನು ಮಾತನಾಡುವ, ಪ್ರಯೋಗಿಸುವ, ತಮ್ಮ ಮನಸ್ಸಿಗೆ ಬಂದವರ ಜೊತೆ

ಸಂಬಂಧ ಹೊಂದುವ, ಹಾಗೆಯೇ ಮನಸ್ಸಿಗೆ ಹಿಡಿಸದವನು ಬೆನ್ನು ಬಿದ್ದರೆ ಅವನನ್ನು ಹಿಡಿದು ಜಾಡಿಸುವ ಅತ್ಯಂತ ಸಮಾನ, ಉದಾತ್ತ,

ನಿರ್ಭಿಡೆಯ ಮನೋಭಾವನೆಯನ್ನು ನಾನು ಯಾವುದೇ ಉನ್ನತ ಕಛೇರಿಯ ಸುಶಿಕ್ಷಿತ ಮಹಿಳೆಯರಲ್ಲಿ ಕಂಡಿಲ್ಲ. ಆಗೆಲ್ಲಾ ನಮ್ಮ ಶಿಕ್ಷಣ

ಅಂತಹ ಉದಾತ್ತ ಉದಾರ, ನಿರ್ಭೀತಿಯನ್ನು ಕಳಚಿ ಸಂಕುಚಿತ, ಸಂತುಲಿತ, ಭೀತಿಯ ಗುಣಗಳನ್ನು ನೈತಿಕತೆಯ ಲೇಪನದೊಂದಿಗೆ

ತುಂಬುವುದಾದರೆ ಈ ಶಿಕ್ಷಣವಾದರೂ ಏಕೆ ಎನಿಸುತ್ತಿತ್ತು.

ಇಲ್ಲಿ ನಾನು ಒಬ್ಬ ಸಾಮಾನ್ಯ ಬಾಲ ಗುಮಾಸ್ತನಾಗಿ ಕಂಡಂತೆ ಈ ಶ್ರಮಿಕವರ್ಗದಲ್ಲಿ ಎಲ್ಲಾ ಆರ್ಥಿಕ ಬಂಧಗಳ ನಡುವೆಯೂ

ಇದ್ದದ್ದು ಬಹು ಮುಕ್ತತೆ, ಉದಾರತೆ, ಮತ್ತು ತತ್ ಕ್ಷಣದ ಪ್ರೀತಿ ಕಾಮನೆಗಳು ತಪ್ಪಲ್ಲವೆಂಬ ಪ್ರಜ್ಞೆ! ಯಾವ ಸುಶಿಕ್ಷಿತ ವರ್ಗ ಪಾಪ


ಪ್ರಜ್ಞೆಯೆಂಬಂತೆ ಅದುರಿಬಿದ್ದು ಮುದುರಿಕೊಳ್ಳುವುದೋ ಅಂತಹ ಕಾಮದ ವಸ್ತುವಿನಲ್ಲಿಯೂ ಇವರು ನಿರ್ಭಿಡೆಯಿಂದ ಗಂಡುಗಳ

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವಷ್ಟು ಮುಕ್ತವಾಗಿ ಸಮಾನತೆಯನ್ನು ಈ ಮಹಿಳೆಯರು ಪಾಲಿಸುತ್ತಿದ್ದರು.

ಇದಕ್ಕೆ ಯಾವುದೇ ಜಾತಿ, ಧರ್ಮದ ಬಂಧವಿರಲಿಲ್ಲ!

ಸಾಕಷ್ಟು ಸಲ ಇಂತಹ ಒಂದು ತಳಮಟ್ಟದ ಅನುಭವವಿಲ್ಲದೆ ನೋಡುಗರು ಊಹಾತ್ಮಕವಾಗಿ ಕಾವ್ಯಮಯ ಭಾಷೆಯಲ್ಲಿ ಮಹಿಳಾ

ಶೋಷಣೆ, ಹಣವಂತರ ದರ್ಪ ಇತ್ಯಾದಿಯಾಗಿ ಶೋಷಣೆಯ ಕಥೆಗಳನ್ನು ಹೆಣೆದು ಇಲೈಟ್ ವರ್ಗದ ’ಶಬ್ಬಾಸಿ’ ಗಳಿಸಿಬಿಡುತ್ತಾರೆ.

ಅಂತಹ ಕತೆಗಳನ್ನು ಓದಿದ್ದ ನಾನೂ ಈ ಅನುಭವಗಳನ್ನು ಪಡೆಯುವ ಮುನ್ನ ಅಂತಹುದೇ ಅಭಿಪ್ರಾಯ ಹೊಂದಿದ್ದೆ ಎಂದು ಈ

ಮೊದಲೇ ಹೇಳಿದೆನಲ್ಲವೇ! ಭಾವನಾತ್ಮಕವಾಗಿ ’ರವಿ ಕಾಣದ್ದನ್ನು ಕವಿ ಕಂಡ’ ಎಂಬುದನ್ನು ವಾಸ್ತವದ ಹಿನ್ನೆಲೆಯಲ್ಲಿ ’ಕವಿ

ಕಾಣದ್ದನ್ನು ರವಿ ಕಂಡ’ ಎಂದೂ ಹೇಳಬಹುದೇನೋ!

ಅಧ್ಯಯನಶೀಲರಿಗೆ ಇಂತಹ ಸಾಕಷ್ಟು ಅನುಭವಗಳಾಗಿದ್ದರೂ ಅವರ ಯಾವ ಅಧ್ಯಯನಗಳು ಇಂತಹ ಅನುಭವವನ್ನು ದಾಖಲಿಸಿ

ಭಾರತದಲ್ಲಿ ಹಾಸುಹೊಕ್ಕಾಗಿರುವ ಇಂತಹ ಮುಕ್ತತೆಯ ಬಗ್ಗೆ ಮಾತನಾಡಿವೆ? ಅದೇ ಅಧ್ಯಯನಶೀಲರು ಈ ಕುರಿತು ಸೃಜನಶೀಲ ಕತೆ

ಬರೆಯುತ್ತಾರೆಯೇ ಹೊರತು ಸೃಜನೇತರ ಅಧ್ಯಯನವನ್ನಲ್ಲ. ಏಕೆಂದರೆ ಅವರನ್ನು ಹೀಗೆ ದಾಖಲಿಸದಂತೆ ಪೂರ್ವಾಗ್ರಹಗಳು

ಹಿಡಿದಿಟ್ಟಿರುತ್ತವೆಯೇನೋ ಅಲ್ಲವೇ!

ಇದಕ್ಕೆ ಪ್ರಮುಖ ಕಾರಣ ಮೇಲಿನ ಎಲ್ಲಾ ಏಳು ವೈಧಾನಿಕ ತೊಡಕುಗಳು ಎನ್ನಬಹುದು. ಏಕೆಂದರೆ ಜಡ, ಸಿದ್ಧ ಮಾದರಿ ತಂತ್ರ, ಬಹು

ಪರಿಚ್ಛೇದಿಕ ಸೂತ್ರ, ಅನುಕೂಲಸಿಂಧು ಸಮೀಕ್ಷೆ, ಪೂರ್ವಾಗ್ರಹಿತ ಸಿದ್ಧಾಂತ, ಪ್ರತಿವರ್ತನೆಗಳ ಅವಗಣನೆಗಳೆಲ್ಲವೂ ಇಲ್ಲಿ

ಅನ್ವಯಗೊಂಡಿವೆ.

ಅದಲ್ಲದೆ ಮುಕ್ತವಾದಿಗಳು, ಪ್ರಗತಿಪರರು, ಬಂಡಾಯ ಸಾಹಿತಿಗಳೆನಿಸಿಕೊಂಡವರು ಈ ಶ್ರಮಿಕವರ್ಗದ ಮುಕ್ತತೆಯ ಅರಿವಿದ್ದರೂ

ಉದ್ದೇಶಪೂರ್ವಕವಾಗಿ ತಮ್ಮ ಸುಪ್ತ ಸಂಕುಚಿತತನವನ್ನು ನೈತಿಕತೆಯನ್ನು(?) ಶೋಷಣೆಯ ಕವಚದಲ್ಲಿ ತುರುಕಿ ಹೇರಿದ

ಹಿನ್ನೆಲೆಯಲ್ಲಿ ಲೈಂಗಿಕ ದೌರ್ಜನ್ಯದ ಆ ಎಲ್ಲಾ ಕತೆ, ಕಾವ್ಯ, ಅಧ್ಯಯನ, ಚಿಂತನೆಗಳನ್ನು ಕೂಲಂಕಷವಾಗಿ ವಿಮರ್ಶಿಸುವ ಅಗತ್ಯವಿದೆ

ಎನಿಸಿ ಅವುಗಳ ಅಸ್ತಿತ್ವವನ್ನೇ ಅಲುಗಾಡಿಸಿಬಿಡುತ್ತದೆ. ಅದಲ್ಲದೆ ಯಾವ ಪುರೋಹಿತಶಾಹಿಯನ್ನು ಬ್ರಾಹ್ಮಣ್ಯ ಎಂದು ಇದೇ

ಅಧ್ಯಯನಕಾರರು ವಿರೋಧಿಸಿಕೊಂಡು ಬಂದಿರುವರೋ ಅದೇ ಅಧ್ಯಯನಕಾರರ ಸಂಶೋಧನೆಗಳು ಪುರೋಹಿತಶಾಹಿಯ ಮಡಿಯನ್ನು

ಮುಡಿದುಬಿಟ್ಟಿವೆ ಎನಿಸಿ ಅವರೊಳಗಿನ ದ್ವಂದ್ವವನ್ನು ಅನಾವರಣಗೊಳಿಸುತ್ತದೆ!

ಆದರೆ ಅದೇ ನಮ್ಮ ಜನಪದ ಇದನ್ನು ಸರಿಯಾಗಿ ಗ್ರಹಿಸಿದೆ ಎನಿಸುತ್ತದೆ.

ಈ ಪರಸ್ಪರ ವೈರುಧ್ಯಗಳ ಜನಪದರ ಮುಕ್ತತೆ ಮತ್ತು ಪ್ರಗತಿಪರರ ಚಿಂತನೆ ಎರಡೂ ನಮ್ಮ ವಿಶ್ವವಿದ್ಯಾಲಯದ ಅಧ್ಯಯನಗಳಲ್ಲಿ

ಸಾಕಷ್ಟು ಕಂಡುಬರುತ್ತವೆ. ಆದರೆ ಅವೆರಡನ್ನು ಸಂಚಯಿಸಿ, ತೂಲಿಸಿ ಸತ್ಯವನ್ನು ಕಂಡುಕೊಳ್ಳುವ ವಿಶ್ಲೇಷಣಾ ದೃಷ್ಟಿಗೆ ಹಾಕಿರುವ

ಕುದುರೆಗಣ್ಣಿನ ಕಣ್ತಡೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆ ತೆಗೆಯುವುದೆಂದು ಎಂದು ಈ ಮೇಲಿನ ಏಳು ತೊಡಕುಗಳು ನೇರವಾಗಿ

ಪ್ರಶ್ನಿಸುತ್ತವಲ್ಲವೇ? ಇದಕ್ಕೆ ಬಹು ಮುಖ್ಯ ಕಾರಣ ನಮ್ಮ ವಿಶ್ವವಿದ್ಯಾಲಯಗಳ ವಿಭಾಗಗಳ ನಡುವಿನ ಸಮನ್ವಯದ ಕೊರತೆ

ಕಾರಣವಿರಬಹುದೇನೋ ಗೊತ್ತಿಲ್ಲ!

ಇಂತಹ ಪೂರ್ವಾಗ್ರಹಗಳು ಲೈಂಗಿಕ ದೌರ್ಜನ್ಯದ ಅಧ್ಯಯನದ ವೈಧಾನಿಕತೆಯ ಪ್ರಮುಖ ತೊಡಕು.

ಘಟನೆ 2:


ವಿವಾಹ ವಿಚ್ಚೇದಿತನಾದ ಆತ ಒಳ್ಳೆಯ ಉದ್ಯೋಗದಲ್ಲಿದ್ದ ಶ್ರೀಮಂತ. ಸ್ನೇಹಜೀವಿ, ಪ್ರಾಮಾಣಿಕನಾಗಿದ್ದ ಆತ ವೈವಾಹಿಕವಾಗಿ

ಡಾಕ್ಟರ್ ಓರ್ವಳನ್ನು ಮದುವೆಯಾಗಿ ಕಹಿಯುಂಡಿದ್ದವನು ಮುಂದೆಂದೂ ಮದುವೆಯಾಗುವುದಿಲ್ಲ ಎಂದು ತೀರ್ಮಾನಿಸಿದ್ದ.

ಅಕಸ್ಮಾತ್ ಹಾಗೇನಾದರೂ ಮದುವೆಯಾದರೆ ಓರ್ವ ಬಡ ಹುಡುಗಿಯನ್ನು ಮಾತ್ರ ಎಂದು ನಿರ್ಧರಿಸಿದ್ದ. ಸ್ನೇಹಜೀವಿಯ ಸ್ನೇಹಿತರು

ಆತನ ಒಳ್ಳೆಯತನಕ್ಕೆ ಮರುಗಿ, ಅವನ ಕೊರಗನ್ನು ತಾವೇ ಅನುಭವಿಸುತ್ತಿರುವಂತೆ ಕೊರಗಿ ಒಂದು ಬಡ ಹುಡುಗಿಯನ್ನು ಹುಡುಕಿ

ತೋರಿದರು. ಆತ ಹುಡುಗಿಯ ಪ್ರಸ್ತಾಪವನ್ನು ಒಪ್ಪಿ ಮದುವೆಯಾದ. ಒಂದೇ ತಿಂಗಳಲ್ಲಿ ಹುಡುಗಿ ಅವನೊಂದಿಗೆ

ಹೊಂದಾಣಿಕೆಯಾಗದು ಎಂದು ಅಕಾರಣವಾಗಿ ಆತನನ್ನು ಶೋಷಿಸಿ ತೊರೆದು ಓಡಿದಳು. ನಂತರ ಒಂದು "ದೊಡ್ಡ" ಮೊತ್ತದ

ಜೀವನಾಂಶ ಕೋರಿದಾಗ, ಕೋರ್ಟು ಶ್ರೀಮಂತನ ಲೈಫ್ ಸ್ಟೈಲ್ ಆಧಾರದ ಮೇಲೆ "ಬಹುದೊಡ್ಡ" ಮೊತ್ತದ ಜೀವನಾಂಶ ಕೊಡುವಂತೆ

ತೀರ್ಮಾನ ಕೊಟ್ಟಿತು.

ಇದು ಮೇಲ್ನೋಟಕ್ಕೆ ಶ್ರೀಮಂತನ ಬಗ್ಗೆ ಕಕ್ಕುಲಾತಿ ಹುಟ್ಟಿಸುತ್ತದೆ, ಮತ್ತು ಅದೇ ರೀತಿ ಕೋರ್ಟ್ ಸಹ ಏಕಮುಖವಾಗಿ ತೀರ್ಪು

ಕೊಟ್ಟಿದೆಯೆನಿಸುತ್ತದೆ. ಆದರೆ ಇಲ್ಲಿ ಕೋರ್ಟ್ ಮತ್ತು ಆ ಶ್ರೀಮಂತನ ಆಚೆ ಕೇಸಿನ ಆಳಕ್ಕೆ ಇಳಿದಾಗ ಕಾಣುವ ಚಿತ್ರಣವೇ ಬೇರೆ! ಆ

ಮಹಿಳೆಯನ್ನು ಆಕೆಯ ಬಾಯ್ಫ್ರೆಂಡ್ ಓರ್ವ ದಾಳವಾಗಿ ಬಳಸಿಕೊಂಡು ಆ ಶ್ರೀಮಂತನ ಆಸ್ತಿಯನ್ನು ಲಪಟಾಯಿಸಲು ಮಾಡಿದ ಸಂಚಿನ

ಅರಿವಾಗಬಹುದು. ಅಥವಾ ಆ ಮಹಿಳೆಯೇ ಖುದ್ದು ದುರಾಸೆಗೊಳಗಾಗಿ ಹೀಗೆ ಸ್ವ‌ಇಚ್ಛೆಯಿಂದ ಮಾಡಿರಬಹುದು. ಮೊದಲೆಲ್ಲಾ

ಇಂತಹ ಪ್ರಕರಣಗಳಲ್ಲಿ ಶ್ರೀಮಂತ ಗಂಡ ಕೊಲೆಯಾಗುತ್ತಿದ್ದರೆ, ಈಗ ವೈವಾಹಿಕ ಕಾನೂನಿನ ಅರಿವಿರುವ ಬಹುತೇಕರು

ವಿಚ್ಛೇದನವನ್ನೇ ಒಂದು tool ಆಗಿ ಬಳಸುತ್ತಿದ್ದಾರೆ. ಆದರೆ ಅಂತಹ ಸಂಚನ್ನು ಬಯಲು ಮಾಡಿ ತಪ್ಪೆಂದು ನಿರ್ಧರಿಸುವುದು ಹೇಗೆ?

ಏಕೆಂದರೆ ಇದೊಂದು ಕೌಟುಂಬಿಕ ಕಲಹವಾಗಿರುವುದಲ್ಲದೆ ಮತ್ತು ಇಂತಹ ಸಂಚು ಯಾವುದೇ ಕಾನೂನಿನ ವ್ಯಾಪ್ತಿಯ ಮಿತಿಗೆ ಬಾರದೆ

ಅಪರಾಧವೆಂದು ಪರಿಗಣಿಸಲಾಗದು. ಹಾಗಾಗಿ ಈ ರೀತಿಯ ಸಾಕಷ್ಟು ಕೇಸುಗಳು ಹೀಗೆಯೇ ನ್ಯಾಯ ತೀರ್ಮಾನವಾಗುತ್ತವೆ. ಆದರೆ

ಸಾಮಾಜಿಕವಾಗಿ ಜನರಿಗೆ ಇದು ತಪ್ಪು ನ್ಯಾಯ ತೀರ್ಮಾನವೆನಿಸಿಬಿಡುತ್ತವೆ!

ಆದರೂ ಒಂದು ವೇಳೆ ಆ ಮಹಿಳೆ ಪ್ರಜ್ಞಾಪೂರ್ವಕವಾಗಿ ಪುರುಷಶಾಹಿ ಸಮಾಜವನ್ನು ಬಳಸಿಕೊಂಡು ಇಂತಹ ಸಂಚನ್ನು ರೂಪಿಸುತ್ತಿದ್ದರೆ

ಆ ಕುರಿತು ಹೇಗೆ ತೀರ್ಮಾನ ಕೈಗೊಳ್ಳುವುದು ಎಂಬುದನ್ನು ಅಮೆರಿಕಾವೂ ಸೇರಿದಂತೆ ಇನ್ನೂ ಯಾವ ಕೋರ್ಟುಗಳೂ ವಿಶೇಷ

ಕಾನೂನನ್ನು ರಚಿಸಿಲ್ಲ, ಅದನ್ನು ರಚಿಸಲು ಸಾಧ್ಯವೂ ಇಲ್ಲ. ಪರಸ್ಪರ ವ್ಯಕ್ತಿತ್ವವನ್ನು ಅರಿತುಕೊಳ್ಳದೆ ಆಗುವ ಇಂತಹ ಅವಗಢಗಳಿಗೆ

ಕಾನೂನಾತ್ಮಕ ಪರಿಹಾರವಿಲ್ಲ. ಅಬ್ಬಬ್ಬಾ ಎಂದರೆ ಇದು ನೈತಿಕವಾಗಿ ತಪ್ಪೆನ್ನಿಸಬಹುದೇ ಹೊರತು ಕಾನೂನಾತ್ಮಕವಾಗಿ ಅಲ್ಲ.

ಆದರೆ ಸಾಮಾಜಿಕವಾಗಿ ಯಾವಾಗ ಕಾನೂನುಗಳಿಗೆ ಒಂದು ನಿಯಂತ್ರಣ ಮತ್ತು ಸಮತೋಲನಗಳ

(Checks and Balanaces) ಪ್ರತಿರೂಪಗಳು (counter clauses) ಇರದಿದ್ದರೆ ಇಂತಹ ದುರುಪಯೋಗ

ಸಾಮಾನ್ಯವಾಗಿಬಿಡುತ್ತದೆ. ಇಲ್ಲಿ ವಿವಾಹಪೂರ್ವ ಒಪ್ಪಂದದ (Preneptial Agreement) ನಿಯಂತ್ರಣ ಮತ್ತು ಸಮತೋಲನ

(Chek and Balance) ಇಲ್ಲದ ಕಾರಣ ವಿಚ್ಛೇದನಗಳು ಹಣದ ಗಣಿಯಂತೆ ಉಪಯೋಗಿಸಲ್ಪಡುತ್ತಿವೆಯಷ್ಟೇ.

ಆದರೆ ವಿದೇಶಗಳಲ್ಲಿ ಇಂತಹ ಅವಘಡಗಳನ್ನು ತಡೆಯಲೆಂದೇ ಮದುವೆಗೆ ಮುಂಚೆ ಮಾಡಿಕೊಂಡ ವಿವಾಹಪೂರ್ವ ಒಪ್ಪಂದಗಳು

(Prenuptial Agreements) ಇರುವವು. ಇಂತಹ ವಿವಾಹಪೂರ್ವ ಒಪ್ಪಂದಗಳು ಭಾರತದಲ್ಲಿ ಅಷ್ಟೊಂದು ಪ್ರಚಲಿತವಿಲ್ಲದ

ಕಾರಣ ಈ ರೀತಿ ನ್ಯಾಯ ತೀರ್ಮಾನಗಳು ಕಾನೂನಿನನ್ವಯ ಆಗುತ್ತವೆ. ಹಾಗಾಗಿ ಇಂತಹ "ಮಹಿಳಾ" ದೌರ್ಜನ್ಯಗಳ ಕುರಿತು ಅರಿವು

ಮೂಡಿಸಿ ವಿವಾಹಪೂರ್ವ ಒಪ್ಪಂದಗಳ (prenuptial agreements) ಅಗತ್ಯತೆಯ ಬಗ್ಗೆ ತಿಳಿಸಿಕೊಡಬಹುದೇ ಹೊರತು ಯಾವುದೇ

ಕಾನೂನು ಕ್ರಮ ಸಾಧ್ಯವಿಲ್ಲ!

ಭಾರತದ ಕಾನೂನುಗಳು ಮದುವೆ ಕುರಿತಂತೆ ಎಲ್ಲಾ ಒಪ್ಪಂದಗಳನ್ನು ಅನೂರ್ಜಿತವೆಂದು ಘೋಷಿಸಿದೆ. ಹಾಗಾಗಿ ವಿಚ್ಛೇದನವನ್ನು

ಒಂದು tool ಆಗಿ ಬಳಸುತ್ತಿರುವುದನ್ನು ತಡೆಯಲು ಸದ್ಯಕ್ಕೆ ಸಾಧ್ಯವಿಲ್ಲ. ಆದರೆ ಈ ಕುರಿತು ಬದಲಾವಣೆಗಳು ತುರ್ತಾಗಿ ಆಗಬೇಕಿವೆ.

ಏಕೆಂದರೆ ಭಾರತದ ಸಾಮಾಜಿಕ ಬದಲಾವಣೆಯ ದಾಪುಗಾಲಿನ ವೇಗಕ್ಕೆ ಹೊಸ ಕಾನೂನುಗಳ ರಚನೆ ಆಮೆಗಾಲಾಗಿದೆ. ಹಾಗಾಗಿ ಇಂತಹ

ವ್ಯತ್ಯಯವುಂಟಾಗಿ ಜನರು ಕಾನೂನಿನ ಮೇಲೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ.


ಇನ್ನೊಂದು ನಾನು ಬಲ್ಲ ಕೇಸಿನಲ್ಲಿ, ಹೆಂಡತಿಯ ಅಕ್ರಮ ಸಂಬಂಧದಿಂದ ಬೇಸತ್ತಿದ್ದ ಗಂಡ ತನ್ನ ಹೆಂಡತಿ ಪ್ರಿಯಕರನೊಂದಿಗಿರುವ

ವಿಡಿಯೋ ಸಾಕ್ಷಿಯೊಂದಿಗೆ adultery ಕೇಸ್ ಹಾಕಿ ವಿಚ್ಛೇದನ ಕೇಳಿದ. ಅಲ್ಲಿಯೂ ಆತನಿಗೆ ವ್ಯತಿರಿಕ್ತವಾಗಿ ಆತನ "ಅರ್ಧದಷ್ಟು

ಆಸ್ತಿ"ಯನ್ನು ಕೊಡಿಸಿ ವಿಡಿಯೋ ಮಾಡಿದ್ದಕ್ಕೆ ಆಕೆಯ ಕ್ಷಮಾಪಣೆ ಕೇಳುವಂತೆ ಕೋರ್ಟ್ ಆದೇಶ ನೀಡಿತು. ಇಲ್ಲಿಯೂ ಸಮಾಜವು

ಆಕೆಯ ನೈತಿಕತೆಯನ್ನು ದೂಷಿಸಿ, ನ್ಯಾಯ ತೀರ್ಮಾನವನ್ನು ತಪ್ಪೆಂದಿತೇ ಹೊರತು ವಿಷಯದ ಆಳಕ್ಕಿಳಿಯಲಿಲ್ಲ. ಪುರುಷಶಾಹಿ

ಸಾಮಾಜಿಕ ರಚನೆಯ ಹಿನ್ನೆಲೆಯಲ್ಲಿ ಪುರುಷನಿಗೆ ಅನ್ಯಾಯವಾಗಿದೆ ಎಂಬುದನ್ನು ಸಮಾಜ ಪ್ರತಿಪಾದಿಸುತ್ತದೆಯೇ ಹೊರತು ಆ ಮಹಿಳೆ

ಏಕೆ ವಿವಾಹೇತರ ಸಂಬಂಧವನ್ನು ಹೊಂದಿದ್ದಳು ಎಂದು ವಿಚಾರಿಸುವುದಿಲ್ಲ. ಇಬ್ಬರು ಖಾಸಗಿ ವ್ಯಕ್ತಿಗಳು ಖಾಸಗಿಯಾಗಿರುವುದನ್ನು

ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾರ್ವತ್ರಿಕಗೊಳಿಸಿದ್ದನ್ನು ಪ್ರಶ್ನಿಸದೆ ಸಮಾಜವು ಆಕೆ ವಿವಾಹಿತಳಾಗಿ ಬೇರೆಯ ಸಂಬಂಧವನ್ನು

ಹೊಂದಿರುವುದೇ ತಪ್ಪೆನ್ನುತ್ತದೆ. ಆದರೆ ಈ ಉದಾಹರಣೆಯಲ್ಲಿ ಗಂಡನು adultery ಕಾರಣವೊಡ್ಡಿ ವಿಚ್ಛೇದನ ಬಯಸಿದ್ದನ್ನು

ಕೇವಲ ವಿಚ್ಛೇದನಕ್ಕೆ ಬಳಸಬಹುದೇ ಹೊರತು ಪರಿಹಾರ ಮೊತ್ತದ ನಿರ್ಧಾರಕ್ಕಲ್ಲ. ಹಾಗಾಗಿ ಇಲ್ಲಿ ಪರಸ್ಪರ ನಿಯಂತ್ರಣ ಮತ್ತು

ಸಮತೋಲನದ ಕಾನೂನು ಅಂಶಗಳು ಇರುವುದನ್ನು ಮನಗಾಣಬಹುದು.

ಇನ್ನು ನನ್ನ ಕಾರ್ಪೊರೇಟ್ ವಲಯದಲ್ಲಿ ಕೂಡ ಸಾಕಷ್ಟು ಭಾರತದ ಶಾಖೆಗಳಲ್ಲಿರುವ ಮಹಿಳೆಯರು ಕೆಲಸದ ಒತ್ತಡವನ್ನು

ತಾಳಲಾರದೆ, ಲೈಂಗಿಕ ಶೋಷಣೆಯ ನೆಪವೊಡ್ಡಿ ತಮ್ಮ ತಮ್ಮ ಬಾಸ್ಗಳ ನೌಕರಿಗೆ ಕುತ್ತು ತಂದು ಬೆವರಿಳಿಸಿದ್ದಾರೆ. ಕೆಲಸದ ಒತ್ತಡ

ಹೆಚ್ಚಾದೊಡನೆ ಆರೋಗ್ಯದಿಂದ ಶುರುವಾಗುವ ನೆಪಗಳು ಕ್ರಮೇಣ ಅಜ್ಜಿ, ಅಜ್ಜರ ಸಾವಿಗೆ ಬಂದು ಕಟ್ಟಕಡೆಗೆ ಲೈಂಗಿಕ ಶೋಷಣೆಗೆ

ಬಂದು ನಿಂತಿದ್ದ ಹಲವಾರು ಘಟನೆಗಳನ್ನು ನಾನೇ investigator ಆಗಿ ಪರಿಹರಿಸಿದ್ದೇನೆ. ಇದು ಭಾರತದಲ್ಲಿನ ಐಟಿ ಕಂಪೆನಿಗಳಿಗೆ

ಮಾತ್ರ ಸೀಮಿತವಾದ ಸಂಗತಿ. ಏಕೆಂದರೆ ವಿದೇಶಿ ಕಂಪೆನಿಗಳು ಲೈಂಗಿಕ ಕಿರುಕುಳದ ದೂರುಗಳನ್ನು ಗಂಭೀರವಾಗಿ ಪರಿಗಣಿಸುತ್ತವೆ ಮತ್ತು

ಅಷ್ಟೇ ಪ್ರಾಮುಖ್ಯತೆಯನ್ನು ಕೊಡುತ್ತವೆ. ಹಾಗಾಗಿ ಇದನ್ನು ಕೆಲವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ tool ಆಗಿ ಬಳಸುತ್ತಾರೆ.

ಇದೇ ರೀತಿ ಜನಾಂಗೀಯ ತಾರತಮ್ಯದ ದೂರುಗಳು ಸಹ ತಪ್ಪನ್ನು ಮುಚ್ಚಿಕೊಳ್ಳುವ tool ಆಗಿ ಬಳಸಲ್ಪಡುತ್ತವೆ. ಆದರೆ ಈ ಎರಡು

ನಿಯಮಗಳಿಗೂ ನಿಯಂತ್ರಣ ಮತ್ತು ಸಮತೋಲನದ (checks and balances) ಪ್ರತಿರೂಪಿ ನಿಯಮಗಳಿವೆ. ಇವೆಲ್ಲವೂ

ಕಾರ್ಪೊರೇಟ್ ವಲಯದಲ್ಲಿಯೇ ಇತ್ಯರ್ಥವಾಗುವುದರಿಂದ ಇಲ್ಲಿನ ನ್ಯಾಯ ನಿರ್ಣಯದಲ್ಲಿ ಗೊಂದಲವುಂಟಾಗುವುದಿಲ್ಲ.

ಇರಲಿ, ಮೇಲಿನ ಏಳು ಅಂಶಗಳೊಟ್ಟಿಗೆ ಅಧ್ಯಯನಕಾರರು "Neutral Gender"ಗಳಾಗಬೇಕಿರುವುದು ಮತ್ತೊಂದು ಗಮನಾರ್ಹ

ಅಂಶ!

ಮೊಲೆ, ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು

ನಡುವೆ ಸುಳಿವ ಆತ್ಮನು

ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ

ಎಂಬ ವಚನದ ಆಶಯದಂತೆ ಗಂಡೂ ಅಲ್ಲದ, ಹೆಣ್ಣೂ ಅಲ್ಲದ, ತೃತೀಯವೂ ಅಲ್ಲದ ತಟಸ್ಥ ಆತ್ಮವಾಗಿರುವುದು ಅವಶ್ಯ.

ಅಧ್ಯಯನಕಾರರು ಎಲ್ಲಿಯವರೆಗೆ ಗಂಡು, ಹೆಣ್ಣು, ಗೇ, ಲೆಸ್ಬಿಯನ್ ಎಂದು ತಮ್ಮನ್ನು ತಾವು ಗುರುತಿಸಿಕೊಂಡು ಈ

ಅಧ್ಯಯನಕ್ಕಿಳಿಯುತ್ತಾರೋ ಅಲ್ಲಿಯವರೆಗೆ ಅವರಿಗೆ ಆಯಾಯ ಜೆಂಡರಿನ ಗುಣಗಳು ಅಧ್ಯಯನಕ್ಕಂಟಿದ

ಪೂರ್ವಾಗ್ರಹಗಳಾಗಿಬಿಡುತ್ತವೆ. ಹಾಗಾಗಿ ಉದ್ದೇಶಪೂರ್ವಕವಾಗಿ ಚಿತ್ತಪೂರ್ವಕವಾಗಿ ಅಧ್ಯಯನವನ್ನು ಆರಂಭದಿಂದ ಅಂತ್ಯದವರೆಗೆ

"ತಟಸ್ಥ ಲಿಂಗಿ (neutral gender)"ಗಳಾಗಿ ಪರಿಶೀಲಿಸಬೇಕಾಗುತ್ತದೆ.

ಮೇಲಿನ ಘಟನೆಗಳಲ್ಲದೆ ಇಂತಹ ಸಾಕಷ್ಟು ಕೇಸುಗಳು ರಾಜಕಾರಣಿಗಳನ್ನು, ಸಿನೆಮಾ ನಟರನ್ನು, ಮೀಡಿಯಾ ಪ್ರಮುಖರನ್ನು

ಆವರಿಸಿಕೊಂಡು ದೊಡ್ಡ ಮಟ್ಟದ ಸುದ್ದಿಗಳಾಗಿದ್ದನ್ನು (MeToo, Casting Couch, etc) ನಾವೆಲ್ಲರೂ ಕಂಡಿದ್ದೇವೆ! ಈ

ಸ್ವರೂಪದ dynamic ಪ್ರಕರಣಗಳನ್ನು ಈಗಿರುವ ಯಾವುದೇ ಜಡ ಸ್ವರೂಪಿ ವೈಧಾನಿಕತೆಯಲ್ಲಿ ತೊಡಗಿಸುವುದು ಕಷ್ಟ. ಹಾಗಾಗಿ


ಇಂತಹ ಆಯಾಮಗಳನ್ನು ಸಹ ವೈಧಾನಿಕತೆಯಲ್ಲಿ ಅಳವಡಿಸಿಕೊಳ್ಳುವ ತುರ್ತು ಜರೂರಿಯಿದೆ. ಒಟ್ಟಿನಲ್ಲಿ ಈ ಎಲ್ಲಾ ಕೇಸುಗಳಲ್ಲಿ

ಸಹ "ಪುರುಷಶಾಹಿ ಪುರೋಹಿತಶಾಹಿ ಪ್ರಣೀತ ನೈತಿಕತೆ" ಢಾಳಾಗಿದೆ.

ಇದೀಗ USA  ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಟೀಮಿನ ಕ್ರೀಡಾಪಟುಗಳ ಮೇಲೆ ಲೈಂಗಿಕ ಶೋಷಣೆ ನಡೆಸಿದ್ದ ಕೋಚ್ ಆದ ಲ್ಯಾರಿ

ನಸ್ಸಾರ್ ವಿಚಾರಣೆಯಲ್ಲಿಯೂ ಈ ಏಳು ವೈಧಾನಿಕ ತೊಡಕುಗಳು ಢಾಳಾಗಿ ಕಂಡು ಇದೇ ಸೆಪ್ಟೆಂಬರ್ ೧೫ರಂದು ಅಮೇರಿಕದ

ಸಂಸತ್ತಿನಲ್ಲಿ ಶೋಷಣೆಗೊಳಗಾದ ಕ್ರೀಡಾಪಟುಗಳನ್ನು ಕರೆಸಿ ಮಾತನಾಡಿಸಿದ್ದಾರೆ. ಶೋಷಣೆಗೊಳಗಾಗಿದ್ದ ಮಕೇಲಾ ಮರೋನಿ,

ಮತ್ತು ಸಿಮೋನ್ ಬೈಲ್ಸ್ ಸಂಸತ್ತಿನಲ್ಲಿ ಹೇಳಿಕೆ ನೀಡಿ ಹೇಗೆ ಈ ವಿಚಾರಣೆ ಜಡಸ್ಥ ಪದ್ಧತಿಗಳ ದೆಸೆಯಿಂದ ಆರೋಪಿಯು ತನ್ನ

ಶೋಷಣೆಯನ್ನು ಮತ್ತಷ್ಟು ಕಾಲ ನಡೆಸಲು ಸಹಕಾರಿಯಾಯಿತು ಎಂದು ತಿಳಿಸಿದ್ದಾರೆ.

ಜಿಮ್ನಾಸ್ಟಿಕ್ಸ್ ಎಂದರೆ ಸಾಮಾನ್ಯವಾಗಿ ಹದಿಹರೆಯದ ಯುವತಿಯರು ಕನಿಷ್ಠ ಬಟ್ಟೆ ತೊಟ್ಟು ಮಾಡುವ ಕಸರತ್ತುಗಳು. ಇಲ್ಲಿ

ತರಬೇತುದಾರರು ಈ ಸ್ಪರ್ಧಾಳುಗಳನ್ನು ದೈಹಿಕವಾಗಿ ಮುಟ್ಟಿ, ತಟ್ಟಿ, ಎತ್ತಿ, ಇಳಿಸಿಯೇ ಕಲಿಸಬೇಕಾದಂತಹ ವ್ಯವಸ್ಥೆಯಿರುತ್ತದೆ.

ಇದು ಈ ಆಟದ ಮೂಲಭೂತ ಸ್ವರೂಪ. ಈ ದೈಹಿಕ ಮುಟ್ಟುವಿಕೆಯಲ್ಲಿ ಸುರಕ್ಷಿತ ಮತ್ತು ಅಸುರಕ್ಷಿತ ಎಂಬ ಸೂಕ್ಷ್ಮ

ಸ್ಪರ್ಶಗಳಿರುತ್ತವೆ. ಇದನ್ನು ಸ್ಪರ್ಷಣೆಗೊಳಗಾದವರು ತಕ್ಷಣಕ್ಕಲ್ಲವಾದರೂ ಕ್ರಮೇಣವಾಗಿ ಅರಿತುಕೊಳ್ಳುತ್ತಾರೆ. ಈ ಸ್ಪರ್ಶ

ಕ್ರಮೇಣ ಲೈಂಗಿಕಾಸಕ್ತಿಯ ಸಂದೇಶವಾಗಿ ನಂತರ ಹಲವಾರು ಶೋಷಣೆಗಳಿಗೆಡೆ ಮಾಡಿಕೊಡುತ್ತದೆ. ಹೀಗೆ ಆರಂಭಗೊಂಡಿದ್ದ ಕೋಚ್

ನಸ್ಸಾರ್ ಹಲವಾರು ಸ್ಪರ್ಧಾಳುಗಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದನು. ಈ ಕುರಿತು ದೂರು ಬಂದಾಗ ತಕ್ಷಣಕ್ಕೆ ನ್ಯಾಯ

ನಿರ್ಧರಿಸಲಾಗದೆ ಉಂಟಾದ ವಿಳಂಬವು ಆ ಕೋಚ್ ಮತ್ತಷ್ಟು ಯುವತಿಯರನ್ನು ಶೋಷಿಸಲು ಕಾಲಾವಕಾಶ ಮಾಡಿಕೊಟ್ಟಿತ್ತು

ಎಂದು ನಂತರ ಸಾಬೀತಾಯಿತು. ಆ ವಿಳಂಬವನ್ನು ಅರಿತು ಸರಿಯಾದ ಕ್ರಮಗಳನ್ನು ಕಾನೂನಿನಲ್ಲಿ ಅಳವಡಿಸಲು ಅಮೇರಿಕನ್ ಸೆನೆಟ್

ಈ ಯುವತಿಯರನ್ನು ಸೆನೆಟ್ಟಿಗೆ ಕರೆಸಿ ಮಾಹಿತಿ ಮತ್ತು ಸಲಹೆಗಳನ್ನು ಪಡೆದುಕೊಂಡಿತು. ಇಂತಹ ತ್ವರಿತ ಕ್ರಮಗಳು ಅಮೆರಿಕದಲ್ಲಿ

ತಕ್ಕ ಮಟ್ಟಿಗೆ ಈ ಜ್ವಲಂತ ಸಮಸ್ಯೆಗೆ dynamic ಪರಿಹಾರವನ್ನು ಕಂಡುಕೊಳ್ಳಲು ಸಹಕಾರಿಯಾಗಿವೆ.

ಇನ್ನು ಲೈಂಗಿಕ ದೌರ್ಜನ್ಯ ಎಂದರೆ ಅದು ಗಂಡು ಹೆಣ್ಣಿನ ನಡುವೆ ಮಾತ್ರ ಎಂದೇಕೆ ಅಂದುಕೊಳ್ಳಬೇಕು?

ಸಲಿಂಗ ಕಾಮದ ಕುರಿತು ವಾತ್ಸಾಯನ ಸಹ ಬರೆದಿದ್ದಾನೆ. ಅಂದಿನ ಸನಾತನ ಧರ್ಮ ಒಪ್ಪಿಕೊಂಡಿದ್ದ ಸಲಿಂಗ ಕಾಮ, 2021ರ ಸನಾತನ

ಧರ್ಮದ ವ್ಯಾಖ್ಯಾನದಲ್ಲಿ ಏಕೆ ವಿಭಿನ್ನವಾಗಿ ಬಿಂಬಿಸಿ ಅಪರಾಧವೆನಿಸುತ್ತಿದೆ? ಸಲಿಂಗ ಲೈಂಗಿಕ ದೌರ್ಜನ್ಯದ ಆಯಾಮದ ಕುರಿತು ನಮ್ಮ

ವಿಶ್ಲೇಷಣಾ ವಿಧಾನಗಳು ಏನು ಹೇಳುತ್ತವೆ?

ಕೆಲವು ಕಾನೂನುಗಳ ಕಪಿಮುಷ್ಟಿಯಿಂದ ಅತ್ಯಾಚಾರ ಮಾಡದ, ಆದರೆ ಆರೋಪಕ್ಕೊಳಗಾದವ ಕೂಡ ಅತ್ಯಾಚಾರಿಯಾಗಿ ಶಿಕ್ಷೆಗೆ

ಗುರಿಯಾಗುವ ಅವಕಾಶಗಳು ಹೆಚ್ಚಿವೆ. ಉದಾಹರಣೆಗೆ ಸಮಾಜದ ಕಟ್ಟುಪಾಡುಗಳ ಉಲ್ಲಂಘನೆಗೊಳಗಾಗಿ ಪ್ರೇಮಿಗಳು ಸಿಕ್ಕಿಬಿದ್ದಾಗ

ಹುಡುಗಿ ನಿರ್ಭಾವುಕವಾಗಿ ತನ್ನ ಪ್ರಿಯತಮನನ್ನು "ಅಣ್ಣಾ" ಎಂದುಬಿಡುವ ಸಾಕಷ್ಟು ಪ್ರಕರಣಗಳನ್ನು ನೀವೆಲ್ಲರೂ ಕೇಳಿಯೇ

ಇರುತ್ತೀರಿ. ನಂತರ ಉಂಟಾಗುವ ಸಾಮಾಜಿಕ ನ್ಯಾಯದಲ್ಲಿ ಆ ಪ್ರೇಮಿ ಸಮಾಜದ ಕಣ್ಣಿಗೆ ಶಾಶ್ವತ ಲೈಂಗಿಕ ದೌರ್ಜನ್ಯದ ಅಪರಾಧಿ

ಎನಿಸಿಬಿಡುತ್ತಾನಲ್ಲವೇ! ಒಂದು ವೇಳೆ ಅವನು ನನ್ನ ಪ್ರೇಮಿ ಎಂದು ಸತ್ಯವನ್ನು ಹೇಳಿದ್ದರೆ...ಈ ಸಮಾಜ ಅವರ ಮದುವೆ

ಮಾಡಿಸುತ್ತಿತ್ತು ಇಲ್ಲವೇ ಆಕೆಯನ್ನು ಶಾಶ್ವತವಾಗಿ ವೇಶ್ಯೆ ಎಂದುಬಿಡುತ್ತಿತ್ತು.

ಆಕೆ ನಿಜ ಹೇಳುವಂತಹ ಸಾಮಾಜಿಕ ರಚನೆ ನಮ್ಮಲ್ಲಿನ್ನೂ ಸೃಷ್ಟಿಯಾಗಿಲ್ಲದಿರುವುದೇ ಈ ಎಲ್ಲಾ ಅವಘಡಗಳಿಗೆ ಮುಖ್ಯ ಕಾರಣ!

ಇದೆಲ್ಲದನ್ನೂ ಮೀರಿ ಕೆಲವು ಮಹಿಳೆಯರೇ ಖುದ್ದು ಪುರುಷರನ್ನು ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ದೌರ್ಜನ್ಯದ

ಕಾನೂನುಗಳನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಗಳನ್ನು ನಾವೆಲ್ಲರೂ ಸಾಕಷ್ಟು ನೋಡಿದ್ದರೂ ಅವು ದೌರ್ಜನ್ಯದ

ಅಧ್ಯಯನಗಳಲ್ಲಿ ಅಷ್ಟಾಗಿ ದಾಖಲಾಗಿಲ್ಲ, ಚರ್ಚೆಯಾಗಿಲ್ಲ! ಅಂತಹ ಪ್ರಕರಣಗಳನ್ನು ಚರ್ಚಿಸಿದರೆ ಮಹಿಳಾ ಸಬಲೀಕರಣದ

ಹೋರಾಟಕ್ಕೆ ಎಲ್ಲಿ ಅಡ್ಡಿಯುಂಟಾಗಿಬಿಡುತ್ತದೆ ಎಂಬ ಪೂರ್ವಾಗ್ರಹದ ದಿಗಿಲು ಹೋರಾಟಗಾರರಲ್ಲಿ ಸಾಕಷ್ಟಿದೆ. ಇದಕ್ಕೆ ಪ್ರಮುಖ


ಕಾರಣವೆಂದರೆ ಎಲ್ಲಿ ಪುರುಷಶಾಹಿ ಸಮಾಜ ಪ್ರತಿಯೊಂದು ದೌರ್ಜನ್ಯದ ಪ್ರಕರಣಗಳನ್ನು ಇಂತಹ ಪೂರ್ವಾಗ್ರಹಕ್ಕೆ

ಒಳಪಡಿಸಿಬಿಡುತ್ತದೋ ಎಂಬ ಆತಂಕ ಕಾರಣವಾಗಿದೆ. ಇದೊಂದು ರೀತಿಯ ದ್ವಂದ್ವಗಳ ಗೊಂದಲ.

ಇನ್ನು ಇದೇ ಕಾನೂನುಗಳ ಇನ್ನೊಂದು ಮುಖವನ್ನು ನೋಡೋಣ:

ವ್ಯಾಟಿಕನ್ ಚರ್ಚಿನ ಮಾಜಿ ಕಾರ್ಡಿನಲ್ ಟೆಡ್ ಮ್ಯಾಕ್ ಕಾರಿಕ್ 50 ವರ್ಷಗಳ ಹಿಂದೆ ಬಾಲಕನೊಬ್ಬನನ್ನು ಶೋಷಿಸಿದ್ದಕ್ಕೆ ಇತ್ತೀಚೆಗೆ

ದೂರು ದಾಖಲಾಗಿ ಶಿಕ್ಷೆಗೊಳಗಾಗಿದ್ದಾರೆ. ಅದೇ ರೀತಿ ಅಮೆರಿಕಾದ ಖ್ಯಾತ ನಟ ಬಿಲ್ ಕಾಸ್ಬಿ ಹಲವು ಕನ್ಯೆಯರನ್ನು ಹಲವಾರು

ದಶಕಗಳ ಹಿಂದೆ ಶೋಷಿಸಿದ್ದು ಇತ್ತೀಚೆಗೆ ಕೇಸ್ ದಾಖಲಾಗಿ, ಅಪರಾಧ ಸಾಬೀತಾಗಿ ಜೈಲು ಪಾಲಾಗಿದ್ದಾನೆ.

ಬಿಲ್ ಕಾಸ್ಬಿ ಒಬ್ಬ ಖ್ಯಾತ ನಟ. ಈತ ಅನೇಕ ಆದರ್ಶ ಮಾದರಿ ವ್ಯಕ್ತಿತ್ವದ ಪಾತ್ರಗಳಲ್ಲಿ ನಟಿಸಿ ಯಶಸ್ವಿಯಾಗಿದ್ದಲ್ಲದೆ, ಸಾಕಷ್ಟು

ಅಮೆರಿಕನ್ನರಿಗೆ ಆದರ್ಶ ಪುರುಷನಾಗಿದ್ದನು. ಒಬ್ಬ ಆದರ್ಶ ಶಿಕ್ಷಕ, ಆದರ್ಶ ತಂದೆ, ಆದರ್ಶ ಪತಿ, ಆದರ್ಶ ನಾಗರಿಕ...ಹೀಗೆಲ್ಲ

ಎಲ್ಲೆಲ್ಲಿ ಆದರ್ಶ ಎನ್ನುವಂತಹ ವ್ಯಕ್ತಿತ್ವ ಬೇಕೆನಿಸುವುದೋ ಅದೆಲ್ಲದಕ್ಕೂ ಬಿಲ್ ಕಾಸ್ಬಿ ಆದರ್ಶವೆನಿಸಿಬಿಟ್ಟಿದ್ದ. ಅಂತಹ ಬಿಲ್

ಕಾಸ್ಬಿ ನಿವೃತ್ತಿ ಹೊಂದಿ ಹಾಯಾಗಿದ್ದಾಗ ಅವನು ನಡೆಸಿದ್ದ ಲೈಂಗಿಕ ಶೋಷಣೆಯ ಒಂದು ಕೇಸ್ ದಾಖಲಾಯಿತು. ಅದು

ದಾಖಲಾಗುತ್ತಿದ್ದಂತೆಯೇ ಒಂದರ ಹಿಂದೆ ಒಂದರಂತೆ ಅನೇಕ ಕೇಸುಗಳು ದಾಖಲಾಗುತ್ತಾ ಸಾಗಿದವು. ಹಲವಾರು ದಶಕಗಳ ಹಿಂದೆ

ನಡೆದಿದ್ದ ಈ ಎಲ್ಲಾ ಪ್ರಕರಣಗಳನ್ನು ಈಗ ದುಡ್ಡಿನ ಆಸೆಗೆ ಅವನನ್ನು ಶೋಷಿಸಲು ದಾಖಲಾಗುತ್ತಿವೆ ಎಂದು ಸಾಕಷ್ಟು ಜನ

ಅವನನ್ನು ಬೆಂಬಲಿಸಿದರು. ಕಡೆಗೆ ಯಾವಾಗ ಒಂದೊಂದೇ ಪ್ರಕರಣಗಳು ಸಾಬೀತಾಗುತ್ತಾ ಸಾಗಿದವೋ ಆಗ ಈ ಆದರ್ಶ ಪುರುಷನ

ಆದರ್ಶ ಸಾಮ್ರಾಜ್ಯ ನಶಿಸಿಹೋಯಿತು.

ಈ ಪ್ರಕರಣದಿಂದ ಸ್ಫೂರ್ತಿಗೊಂಡೇ ವಿಶ್ವಾದ್ಯಂತವಲ್ಲದೆ ಭಾರತದಲ್ಲಿ ಸಹ MeToo ಮತ್ತು Casting Couch ಅಭಿಯಾನಗಳು

ಶುರುವಾದದ್ದು ಎಂಬುದು ಗಮನಿಸಬೇಕಾದ ಅಂಶ.

ಆದರೆ ಇಂತಹ ಪ್ರಕರಣಗಳನ್ನು ನಿಭಾಯಿಸುವ ಕಾನೂನು ಭಾರತದಲ್ಲಿದೆಯೇ?

ಕ್ರಿಮಿನಲ್ ಪ್ರೋಸಿಜರ್ ಕೋಡ್ CrPC ಸೆಕ್ಷನ್ 468 ಪ್ರಕಾರ ಗರಿಷ್ಠ ಮೂರು ವರ್ಷ ಶಿಕ್ಷೆಯಾಗುವಂತಹ ಅಪಾರಾಧದ ಲೈಂಗಿಕ

ಶೋಷಣೆ ದೂರನ್ನು ಮೂರು ವರ್ಷಗಳೊಳಗೆ ದಾಖಲಿಸಬೇಕು. ಅದೇ ದಂಡ ಕಟ್ಟುವಂತಹ ಲೈಂಗಿಕ ಅಪರಾಧವಾಗಿದ್ದರೆ ಅದು ಆರು

ತಿಂಗಳೊಳಗೆ ದಾಖಲಾಗಬೇಕು. ಅದಕ್ಕಿಂತ ಹೆಚ್ಚಿನ ಕಾಲವಾಗಿದ್ದರೆ ಅದು ಪೋಕ್ಸೋ POCSO ಖಾಯ್ದೆ ಅನ್ವಯ

ದಾಖಲಾಗಬೇಕಾಗುತ್ತದೆ. ಹೆಚ್ಚಿನ ಕಾಲಾವಕಾಶ ಬೇಕಾದಂತಹ ಲೈಂಗಿಕ ಶೋಷಣೆಗೆ ಪೋಕ್ಸೋ ಕಾಯ್ದೆಯಲ್ಲಿ ತಿದ್ದುಪಡಿಯನ್ನು

2012ರಲ್ಲಿ ತರಲಾಯಿತು. ಆದರೆ ಈ ಕೇಸುಗಳನ್ನು ಸಾಬೀತು ಮಾಡಲು ಸಾಕ್ಷ್ಯಾಧಾರಗಳನ್ನು ಹೊಂದಿಸುವುದು ಕಷ್ಟ ಸಾಧ್ಯವೇ ಸರಿ.

ಇನ್ನು ಶಿಕ್ಷೆಯಾಗುವುದು ಸಹ ಕಷ್ಟಸಾಧ್ಯ. ಹಾಗಾಗಿಯೇ MeToo ಮತ್ತು Casting Couch ಅಭಿಯಾನಗಳು ಕೇವಲ ಸುದ್ದಿ ಮಾಡಿ

ಹೋದವೇ ಹೊರತು ಕಾನೂನು ಕ್ರಮಗಳು ಜರುಗಿದ್ದು ಅಷ್ಟಕ್ಕಷ್ಟೇ! ಶೈಕ್ಷಣಿಕ ಪ್ರಗತಿ, ಉದ್ಯೋಗಾವಕಾಶ, ಔದ್ಯೋಗಿಕ ಉನ್ನತಿ,

ಜನಪ್ರಿಯ ಪ್ರಭಾವಿ ರಂಗಗಳಲ್ಲಿನ ಅವಕಾಶ, ಕ್ರೀಡೆ, ಸಿನೆಮಾ, ರಾಜಕಾರಣ, ಸಾಹಿತ್ಯ ಇನ್ನಿತರೆ ಅವಕಾಶಗಳಿಗಾಗಿ

ಶೋಷಣೆಗೊಳಗಾಗುವುದು ಯಾ ಒಪ್ಪಿತ ಒಡಂಬಡಿಕೆಗೊಳ್ಳುವುದು ಸಹ ಲೈಂಗಿಕ ದೌರ್ಜನ್ಯಗಳೇ ಆಗಿವೆ. ಆದರೆ ಇವುಗಳನ್ನು

ಯಶಸ್ವಿಯಾಗಿ ದೂರುಗಳಾಗಿಸಿ ವಿಚಾರಣೆಗೊಳಗಾಗಿಸುವ ಸಮರ್ಥ ಕಾನೂನುಗಳು ಎಷ್ಟು ಸಮರ್ಥವಾಗಿವೆ ಎಂಬುದು ಚಿಂತನಾರ್ಹ.

ಹಾಗೆಯೇ ಎಲ್ಲಾ ವೈಧಾನಿಕಗಳ ಮೇಲೆ ಕಾನೂನಿನ ನಿಯಮಗಳೂ ಪ್ರಭಾವಿಸಿವೆ.


ಜಾಗತಿಕ ಲೋಕದ ಈ ವಿದ್ಯಮಾನಗಳನ್ನು ಮತ್ತು ವೈಧಾನಿಕತೆಯ ತೊಡಕುಗಳ ಪ್ರಸ್ತುತಿ ಮತ್ತು ಸ್ವರೂಪಗಳು ಹೇಗೆ ನಮಗೆ

ನಮ್ಮದೇ ಆದ ಪ್ರಾದೇಶಿಕ ವೈಧಾನಿಕತೆಯ ತೊಡಕುಗಳನ್ನು ಗುರುತಿಸುವಲ್ಲಿ ಮತ್ತು ವಿಶ್ಲೇಷಿಸುವಲ್ಲಿ ಸಹಾಯಕಾರಿ ಎಂಬುದನ್ನು

ಮನಗಾಣಬೇಕು. ಇವುಗಳು ಕೇವಲ ತೋರುಗಂಬಗಳೇ ಹೊರತು ಇದೇ ನಿಶ್ಚಿತ ನಿರ್ಧರಿತ ಪರಿಹಾರಗಳಲ್ಲ. ಆಯಾಯ ಪರಿಸರ ಮತ್ತು


ಸಂಸ್ಕೃತಿಗನುಗುಣವಾಗಿ ವೈಧಾನಿಕತೆಯ ತೊಡಕುಗಳಿರುತ್ತವೆ. ಅವುಗಳನ್ನು ಗುರುತಿಸಲು ಈ ಮೇಲಿನ ವೈಧಾನಿಕ ತೊಡಕುಗಳು,

ಘಟನೆಗಳು ಮತ್ತು ಮಹಿಳಾ ಧರ್ಮಸೂಕ್ಷ್ಮಗಳು ಮಾರ್ಗದರ್ಶನ ನೀಡುವಲ್ಲಿ ಖಂಡಿತ ಸಹಾಯಕಾರಿ.


ಒಟ್ಟಾರೆ ಬದಲಾವಣೆ ಜಗದ ನಿಯಮ ಎಂಬ ಸಿದ್ಧಾಂತಕ್ಕನುಗುಣವಾಗಿ ಎಲ್ಲಾ ವೈಧಾನಿಕಗಳ ಜಡತ್ವವನ್ನು ಕೊಡವಿ ತುರ್ತಾಗಿ

ಚಲನಶೀಲಗೊಳಿಸಬೇಕಿದೆ. ಇಲ್ಲದಿದ್ದರೆ ಬದಲಾಗುವ ಜಗತ್ತಿನಲ್ಲಿ ನಮ್ಮ ಪ್ರಸ್ತುತಿ ಮತ್ತು ಅಸ್ತಿತ್ವವನ್ನು ಕಳೆದುಕೊಂಡುಬಿಡುತ್ತೇವೆ.

ರವಿ ಹಂಜ್

ಜೀವ ವಿಜ್ಞಾನ ಆಡಳಿತ ತಜ್ಞ,

ಶಿಕಾಗೋ, ಯು. ಎಸ್.ಎ.

ravihanj@gmail.com

ಸಿಪಾಯಿ ದಂಗೆ!

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ "ಆ" ತಾವರೆಕನ್ನಿಗರ ಪಕ್ಷದವರ ಕೊಡುಗೆ ಏನು ಎಂದು ಕೇಳುವ ಸ್ವಾತಂತ್ರ್ಯ ಹೋರಾಟದ "ಈ" ಕೈಕೆಲಸದ ಪಕ್ಷಿಗರೇ ಕೇಳಿ:

ಭಾರತದ ಪ್ರಪ್ರಥಮ ಸ್ವಾತಂತ್ರ್ಯ ಚಳುವಳಿ ಎಂದು ಖ್ಯಾತವಾಗಿರುವ "ಸಿಪಾಯಿ ದಂಗೆ"ಯ ಅಜ್ಞಾತ ಕಾರಣೀಪುರುಷನೇ "ಆ" ತಾವರೆಕನ್ನಿಗರ ಪಕ್ಷದ ಅಗೋಚರ ಸಂಸ್ಥಾಪಕ!

ಹೀಗೆಂದರೆ ನಿಮಗೆ ಆಶ್ಚರ್ಯವೇ! ಕೇವಲ ಬುದ್ದಿಜೀವಿಗಳ ಪಡೆಯನ್ನು ನಿಮ್ಮೊಟ್ಟಿಗೆ ಇಟ್ಟುಕೊಂಡರೆ ಏನು ಫಲ, ಮುಂದೆ ಓದಿ.

ಕ್ರಿ.ಶ. 1857ರ ಆರಂಭದ ಅಂದು ಹೊಸ ಮಾದರಿಯ ಎನ್ಫೀಲ್ಡ್ ತುಪಾಕಿಗಳ ತೋಟಾಗಳಿಗೆ ಗ್ರೀಸ್ (ಪ್ರಾಣಿಜನ್ಯ ಕೊಬ್ಬು) ಸವರುವುದು ಆಧುನಿಕ ತಂತ್ರಜ್ಞಾನವಾಗಿತ್ತು. ಅಂದು ಗ್ರೀಸನ್ನು ಹಂದಿ ಮತ್ತು ದನದ ಕೊಬ್ಬನ್ನು ಕಸಾಯಿಖಾನೆಗಳಿಂದ ಒಟ್ಟಾಗಿ ಶೇಖರಿಸಿಯೇ ತಯಾರಿಸುತ್ತಿದ್ದರು. ಅದನ್ನು ಹಂದಿಯದು ಬೇರೆ, ದನದ್ದು ಬೇರೆ ಎಂಬ ವರ್ಗೀಕರಣ ಇರುತ್ತಿರಲಿಲ್ಲ.ಎರಡೂ ಕಲಸಿಕೊಂಡಿರುತ್ತಿತ್ತು. ಆದರೆ ಕೆಲವು ಕುಲೀನ ಅಡುಗೆಗಳಿಗೆ ಹೆಚ್ಚಿನ ಬೆಲೆ ತೆತ್ತು ಬೇರೆ ಬೇರೆ ಕೊಬ್ಬನ್ನು ಬಳಸುತ್ತಿದ್ದರು. ಅಮೆರಿಕಾದ ಖ್ಯಾತ ಮ್ಯಾಕ್ಡೋನಾಲ್ಡ್ ಸಹ ಇಪ್ಪತ್ತೊಂದನೇ ಶತಮಾನದ ಆರಂಭದವರೆಗೆ ತನ್ನ ಫ್ರೆಂಚ್ ಫ್ರೈಸ್ ಕರಿಯಲು ಈ ಸಮ್ಮಿಶ್ರ ಪ್ರಾಣಿಜನ್ಯ ಕೊಬ್ಬನ್ನೇ ಬಳಸುತ್ತಿತ್ತು. ಇರಲಿ, ಅಂದು ಇಂಗ್ಲೆಂಡಿನಿಂದ ಇದನ್ನು ತರಿಸಿಕೊಳ್ಳುವುದು ವೆಚ್ಚದಾಯಕ ಎಂದು ಬ್ರಿಟಿಷರು ಕಲ್ಕತ್ತಾದ ಗಂಗಾಧರ್ ಬ್ಯಾನರ್ಜಿ ಕಂಪೆನಿಗೆ ಸರಬರಾಜು ಮಾಡುವಂತೆ ಗುತ್ತಿಗೆ ಕೊಟ್ಟಿದ್ದರು.

ಈ ವಿಷಯ ಅರಿತ "ಸತ್ಯಶೋಧಕ"ನೊಬ್ಬ ಬ್ರಿಟಿಷರು ಹಿಂದೂಗಳಿಗೆ ದನದ ಗ್ರೀಸನ್ನೂ, ಮುಸ್ಲಿಮರಿಗೆ ಹಂದಿಯ ಗ್ರೀಸನ್ನೂ ಕೊಟ್ಟು ಧರ್ಮ ಭ್ರಷ್ಟರನ್ನಾಗಿ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು "ಸತ್ಯ ಶೋಧಿಸಿ" ಬಿಟ್ಟ. ಈ ಸತ್ಯಸುದ್ದಿಯಿಂದ ಎಚ್ಚೆತ್ತ ಬ್ರಿಟಿಷ್ ಅಧಿಕಾರಿ ಕರ್ನಲ್ ರಿಚರ್ಡ್ ಬರ್ಚ್, ಜನವರಿ ಇಪ್ಪತ್ತೇಳರಂದು 'ಗ್ರೀಸ್ ಇಲ್ಲದ ತೋಟಾಗಳನ್ನು ನೀಡುತ್ತೇವೆ. ನಿಮಗೆ ಯಾವ ಗ್ರೀಸ್ ಬೇಕೋ ಅದು ಅಥವಾ ನಿಮ್ಮ ಆಯ್ಕೆಯ ಪರ್ಯಾಯ ಎಣ್ಣೆ ಉಪಯೋಗಿಸಿ. ಹಾಗೆಯೇ ತೋಟಾಗಳನ್ನು ಹಲ್ಲಿನಿಂದ ಕೀಳದೆ ಕೈಯಿಂದ ಸಹ ಕೀಳಬಹುದು' ಎಂದ. ಆಗ ನಮ್ಮ ಸತ್ಯಶೋಧಕರು ಗ್ರೀಸ್ ಇಲ್ಲದ ತೋಟಾ ಮೇಲಿನ ಪೇಪರ್ ಅನ್ನು ಧರ್ಮಭೃಷ್ಟ ಮಾಡುವ ಗ್ರೀಸ್ ಹಾಕಿಯೇ ತಯಾರು ಮಾಡಲಾಗಿದೆ. ಹಾಗಾಗಿಯೇ ಆ ಪೇಪರ್ ಗಟ್ಟಿಯಾಗಿರುವುದು ಮತ್ತು ಹೊಳೆಯುವುದು ಎಂದು ಆಳದ "ಸತ್ಯ" ತಿಳಿಸಿದರು. ಈ ರೋಚಕ "ಸತ್ಯಶೋಧನೆ"ಯ ಆಧಾರದ ಮೇಲೆ ಕ್ರಿ.ಶ. 1857ರ ಮೇ ಹತ್ತರಂದು ಸಿಪಾಯಿ ದಂಗೆ ಭೀಕರವಾಗಿ ಎದ್ದು ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿತು!

ಇದೀಗ ಸಿಪಾಯಿ ದಂಗೆ ನಡೆದು ನೂರ ಅರವತ್ತೈದು ವರ್ಷಗಳಾಗಿ, ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳಾದರೂ ಈ "ಸತ್ಯಶೋಧನೆ" ಬೆಳಕಿಗೆ ಬಂದಿಲ್ಲ!

ಇಂದಿಗೂ ಅಂದು ಕಿಚ್ಚು ಹಚ್ಚಿದ ಅಂದಿನ ಸನಾತನ ತಾವರೆಕನ್ನಿಗ ಸತ್ಯಶೋಧಕರ ಅನುವಂಶೀಯರೇ ಆದ ಆಧುನಿಕ "ಸತ್ಯಶೋಧನಾ" ದೇಶಭಕ್ತರು ಜನರನ್ನು ತಮ್ಮ "ಸತ್ಯಶೋಧನೆ"ಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕ್ಷಿಪ್ರಗತಿಯಲ್ಲಿ ಜಾಗೃತಿಗೊಳಿಸುತ್ತಿದ್ದಾರೆ. ಅವರನ್ನು ಜನ ಹೆಮ್ಮೆಯಿಂದ ಬ್ರಿಗೇಡ್, ನಿಲುಮೆ..... ಇತ್ಯಾದಿ ಇತ್ಯಾದಿಯಾಗಿ ಗುರುತಿಸಿ ಜೈಕಾರ ಹಾಕುತ್ತಾರೆ. ಇಂತಹ ಸಾಂಘಿಕ, ವ್ಯಕ್ತಿಗತ, ನಿಗೂಢ ಇರವುಗಳಂತೆಯೇ ಅಂದೂ "ಆ" "ಸತ್ಯಶೋಧಕ" ತಾವರೆಕನ್ನಿಗರು ನಿಗೂಢವಾಗಿ ಇದ್ದರು. ದೇಶಕ್ಕಾಗಿ ಅವರ ಹೃದಯವೂ ಇಂದಿನವರಂತೆಯೇ ಮಿಡಿಯುತ್ತಿತ್ತು. 

ಇಂತಹ ತಾವರೆಕನ್ನಿಗರ ಸತ್ಯವನ್ನು ಅರಿಯದೆ "ಈ" ಪಕ್ಷೀಯರೆ, ಸುಖಾಸುಮ್ಮನೆ ಹುಂಬರಾಗಿ ಕಳಲೆ ತಿಂದು ಬಾಡೇ ಗಾಡು, ನೀನ್ಯಾವನಯ್ಶಾ ಕೇಳಾಕೆ ಎಂದು ಹೇಳಿಕೊಡುವ ಸದ್ಬುದ್ಧಿಜೀವಿ ಪಡ್ಡೆಗಳ ಬಿಟ್ಟು ಅದರಾಚೆಯ ಸತ್ಯವನ್ನು ಅರಿಯಿರಿ. ಇಲ್ಲದಿದ್ದರೆ ಬಾಡು ಬಿಡಿ, ಮೈಲಾರ ಜಾತ್ರೆಯ ಬೆಂಡು ಬತ್ತಾಸು ಸಹ ಸಿಕ್ಕದು.

ವಿ. ಸೂ: ಇಲ್ಲಿ "ಸತ್ಯ" ಇರುವಲ್ಲಿ ವಿರುದ್ಧ ಪದ ಹಾಕಿಕೊಳ್ಳಿ. ಆಗ ನಿಮಗೆ "ಸತ್ಯಮೇವ ಜಯತೆ" ಎಂಬ ಉದ್ಘೋಷದ ಸ್ವತಂತ್ರ ಭಾರತದಲ್ಲಿ ಏಕೆ ರೋಚಕ ಗಾಳಿಸುದ್ದಿಗಳು ಅತ್ಯಂತ ಪ್ರಾಮುಖ್ಯತೆ ಗಳಿಸಿವೆ ಎಂದು ಅರಿವಾಗುತ್ತದೆ. ಹಾಂ, ಸಿಪಾಯಿ ದಂಗೆಯ ಸಂಗತಿಯನ್ನು ತಾವರೆಕನ್ನಿಗರು, ಕೈಕೆಲಸದವರು, ಕುಡುಗೋಲು ತೆನೆ/ಸುತ್ತಿಗೆ, ಸೈಕಲ್ಲು, ಚಕ್ರ, ಭಕ್ರಾ ಪಕ್ಷಗಳೆಲ್ಲ ಇಪ್ಪತ್ತೊಂದನೇ ಶತಮಾನದಲ್ಲಿಯೂ ಸತ್ಯವೆಂದರೆ "ನಮ್ಮ ಇಸ್ವಗುರು ಇಸ್ವಗುರುವೇ" ಎಂದು ಸುವರ್ಣಾಕ್ಷರಗಳಲ್ಲಿ ಬರೆದು ತೂಗಿಸಿಬಿಡಿ.
 
#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಸೌಹಾರ್ದ ಕರ್ನಾಟಕ ೨ ರ ಲೇಖನ

 ನಾನು ಆಗಷ್ಟೇ ದಾವಣಗೆರೆಯಲ್ಲಿ ಶಾಲೆಗೆ ಸೇರಿದ್ದೆ. ಮಸೀದಿಯೊಂದರ ಮುಂದೆ ಆಗಾಗ್ಗೆ ಹಾದು ಹೋಗುತ್ತಿದ್ದಾಗ ನನ್ನ ಹಿರಿಯ ಸಹಪಾಠಿಗಳು "ಇಸೀ ಸಾಬ್ರದು ಒಳಗೆಲ್ಲಾ ಕೋಳಿ ಕೊಯ್ದಿರ್ತಾರ" ಎನ್ನುತ್ತಾ ಮೂಗು ಮುಚ್ಚಿಕೊಂಡು ಮಸೀದಿ ದಾಟುತ್ತಿದ್ದರು. ಇದನ್ನೇ ನಾನೂ ಅನುಕರಿಸುತ್ತಿದ್ದೆ. ನನ್ನೊಂದಿಗೆ ಬರುತ್ತಿದ್ದ ಖಲೀಲ ಸಹ ಇದನ್ನೊಂದು ಆಟ ಎಂಬಂತೆ ಅನುಕರಿಸುತ್ತಿದ್ದ. ಒಮ್ಮೆ 

ನಮ್ಮಮ್ಮನ ಜೊತೆ ಪೇಟೆಗೆ ಹೋಗುವಾಗ ಮಸೀದಿ ಹತ್ತಿರ ಬರುತ್ತಿದ್ದಂತೆಯೇ ಮೂಗು ಮುಚ್ಚಿ "ಇಸಿ, ಸಾಬ್ರುದು" ಎಂದೆ. ಆಗ ನಮ್ಮಮ್ಮ "ಹಂಗನ್ನಬಾರದು. ಇದು ಸಾಬ್ರು ಗುಡಿ ಇದ್ದಂಗ. ಇದರೊಳಗೆಲ್ಲಾ ಕೋಳಿ ಕೊಯ್ಯಲ್ಲ. ಮೂಗು ತೆಗೆದು ನಡಿ" ಎಂದಾಗ ಹೊಳ್ಳೆ ಅಘ್ರಾಣಿಸಿ ನಡೆದೆ. ಮುಂದೆ ನನ್ನ ಸಹಪಾಠಿಗಳೂ ನನ್ನಂತೆಯೇ ಮೂಗು ಅಘ್ರಾಣಿಸಿಯೇ ನಡೆಯಹತ್ತಿದ್ದರು, ಖಲೀಲನೂ ಸೇರಿ.

***

ಶಿವಮೊಗ್ಗ ನಮ್ಮಮ್ಮನ ತವರುಮನೆ. ನಮ್ಮ ಅಜ್ಜಿಯ ಬೃಹತ್ ಸಂಸಾರದೊಡನೆ ನಾವು ಮೂವರು ಸೋದರರು ಮತ್ತು ಅರಸೀಕೆರೆಯ ನಮ್ಮ ದೊಡ್ಡಮ್ಮನ ಮಕ್ಕಳು ನಾಲ್ವರು ಸೇರಿ ಇಡೀ ಮನೆ ಗಜಿಬಿಜಿಯಿಂದ ಕೂಡಿರುತ್ತಿತ್ತು. ಆದರೆ ಯಾರ‍್ಯಾರು ಎಲ್ಲಿದ್ದಾರೆಂದು ಗೊತ್ತಾಗದಷ್ಟು ನಮ್ಮಜ್ಜಿಯ ಮನೆ ದೊಡ್ಡದಾಗಿತ್ತು. ಮುಂದೆ ನಮ್ಮ ಚಿಕ್ಕಮ್ಮಂದಿರ ಮದುವೆಗಳಾಗಿ ಮಕ್ಕಳಾಗಿ ಆ ಮಕ್ಕಳು ಕೂಡ ಬೇಸಿಗೆ ರಜೆಗೆ ಇಲ್ಲಿ ಜೊತೆಯಾಗುತ್ತಿದ್ದರು.

ಮೂರು ದೊಡ್ಡ ಹಾಲುಗಳು, ಕಟಾಂಜನ, ವಿಶಾಲವಾದ ಮಹಡಿ ಮತ್ತು ನಾಲ್ಕು ರೂಮುಗಳು ಒಂದು ಕಟ್ಟಡದಲ್ಲಿದ್ದರೆ ದೊಡ್ಡದಾದ ಅಡುಗೆ ಮನೆ, ಊಟದ ಮನೆ, ದೇವರಮನೆ, ಬಚ್ಚಲುಮನೆ ಮತ್ತು ಕಕ್ಕಸ್ಸುಗಳು ಇನ್ನೊಂದು ಕಟ್ಟಡದಲ್ಲಿದ್ದವು. ಎರಡೂ ಕಟ್ಟಡಗಳ ನಡುವೆ ವಿಶಾಲವಾದ ಕೈತೋಟವಿದ್ದಿತು. ಆ ಕೈತೋಟದಲ್ಲಿ ಮಾವು, ಪಪ್ಪಾಯಿ, ಪೇರಳೆ, ಸೀತಾಫಲ, ದಾಳಿಂಬೆ, ಕಂಚಿಕಾಯಿ, ನಿಂಬೆಕಾಯಿಯ ಗಿಡಮರಗಳಲ್ಲದೆ ಯಥೇಚ್ಛವಾಗಿ ಗೊರಟೆ ಹೂವಿನ ಗಿಡಗಳಿದ್ದವು. ಅದಲ್ಲದೆ ಕೊಟ್ಟಿಗೆಯೊಂದಿದ್ದು ಅಲ್ಲಿ ಎರಡು ಹಸುಗಳನ್ನು ನಮ್ಮಜ್ಜಿ ಸಾಕುತ್ತಿತ್ತು. ಸಂಸಾರದ ಖರ್ಚನ್ನು ಸರಿತೂಗಿಸಲು ನಮ್ಮಜ್ಜಿ ಮುಂದಿನ ನಾಲ್ಕು ರೂಮುಗಳನ್ನು ಸಹ ಬಾಡಿಗೆಗೆ ಕೊಟ್ಟಿತ್ತು.

ನಮ್ಮ ಅಜ್ಜನ ಈ ಮನೆ ಅವರ ಒಬ್ಬ ಮುಸ್ಲಿಮ್ ಸ್ನೇಹಿತರದಾಗಿತ್ತು. ಸ್ವಾತಂತ್ರ್ಯದ ನಂತರದ ಒಂದು ಕೋಮು ಗಲಭೆಯ ಸಮಯದಲ್ಲಿ ಈ ಮನೆಯನ್ನು ಸುಟ್ಟೇ ಬಿಡುತ್ತಾರೆನ್ನುವಾಗ ಅವರನ್ನು ರಕ್ಷಿಸಿ ನಮ್ಮಜ್ಜ ತನ್ನ ಮನೆಯನ್ನು ಅವರಿಗೆ ನೀಡಿ ತನ್ನ ಸಂಸಾರವನ್ನು ರಾತ್ರೋರಾತ್ರಿ ಅಲ್ಲಿಗೆ ವರ್ಗಾಯಿಸಿತ್ತು. ಅದಲ್ಲದೆ ಅದಕ್ಕೆ ಬಾಡಿಗೆಯನ್ನು ಸಹ ಕೊಡುತ್ತಿತ್ತು. ನಮ್ಮಜ್ಜ ಅಲ್ಲಿ ಬಾಡಿಗೆಗಿದ್ದ ಸಮಾಚಾರ ಯಾರಿಗೂ ಗೊತ್ತಿರಲಿಲ್ಲ.

ಹೀಗೆ ಸುಮಾರು ಐವತ್ತಕ್ಕೂ ಹೆಚ್ಚು ವರ್ಷ ನಮ್ಮ ಅಜ್ಜಿಯ ಸಂಸಾರ ಆ ಮನೆಯಲ್ಲಿತ್ತು. ನಮ್ಮಜ್ಜಿಯ ಬಾಣಂತನವನ್ನು ಆ ಮುಸ್ಲಿಂ ಮನೆಯ ಒಡತಿಯೂ, ಆಕೆಯ ಬಾಣಂತನವನ್ನು ನಮ್ಮಜ್ಜಿಯೂ ಪರಸ್ಪರ ಮಾಡಿಕೊಂಡಿದ್ದರೆಂದು ಆ ಇಬ್ಬರು ಆಜ್ಜಿಯರು ಪರಸ್ಪರ ಭೇಟಿಯಾದಾಗ ಮಾತನಾಡಿಕೊಳ್ಳುತ್ತಿದ್ದರು.

ನಮ್ಮಜ್ಜನ ಎಲ್ಲಾ ಹೆಣ್ಣುಮಕ್ಕಳ ಮದುವೆಯಾಗಿ ನಮ್ಮಜ್ಜ ತೀರಿಕೊಂಡು ಎಷ್ಟೋ ವರ್ಷಗಳ ನಂತರ ಆ ಮುಸ್ಲಿಂ ಸ್ನೇಹಿತರ ಮಕ್ಕಳು ಆಸ್ತಿಪಾಲಾಗಿ ಈ ಮನೆಯನ್ನು ಕೇಳಲಾರದೆ ತೊಳಲಾಡುತ್ತಿದ್ದಾಗ ನಮ್ಮಜ್ಜಿ ಆ ಮನೆಯನ್ನು ಅವರಿಗೆ ಬಿಟ್ಟುಕೊಡಲು ನಿರ್ಧರಿಸಿತ್ತು.

ಆಗ ಆ ಮುಸ್ಲಿಂ ಕುಟುಂಬ ಮುಖ್ಯ ಕಟ್ಟಡವನ್ನು ತಾವಿಟ್ಟುಕೊಂಡು ಹಿಂದಿದ್ದ ಅಡುಗೆಮನೆ, ದೇವರಮನೆ, ಊಟದಮನೆ, ಬಚ್ಚಲುಮನೆಯಿದ್ದ ಕಟ್ಟಡವನ್ನು ನಮ್ಮಜ್ಜಿಗೆ ಉಡುಗೊರೆಯಾಗಿ ನೀಡಿದರು.

***


ನಾನು ನಾಲ್ಕನೇ ತರಗತಿಗೆ ಬರುವ ಹೊತ್ತಿಗೆ ಬಿದ್ದು ಮಾಡಿಕೊಂಡ ಗಾಯಗಳು ಒಣಗಿ ಬಿಳಿಯ ಕಲೆಯಾಗುತ್ತಿದ್ದವು. ಅತ್ಯಂತ ’ಸೂಕ್ಷ್ಮಮತಿ’ಯಾದ ನಮ್ಮಪ್ಪ ಇದು ತೊನ್ನೆಂದು ಪರಿಹಾರ ಹುಡುಕತೊಡಗಿತು. ನಮ್ಮಪ್ಪನ ಸ್ನೇಹಿತರೊಬ್ಬರು ಹರಿಹರದ ಮುಸ್ಲಿಂ ಪಂಡಿತರೊಬ್ಬರ ಗುಣಗಾನ ಮಾಡಿ ಅವರನ್ನು ಪರಿಚಯಿಸಿದರು. ಆ ಮುಸ್ಲಿಂ ಪಂಡಿತರು ಯಾವುದ್ಯಾವುದೋ ಪುಡಿಗಳನ್ನು ನಮ್ಮ ಅಪ್ಪಾಜಿ ಕೈಗೆ ಕೊಟ್ಟು ನನಗೆ ಮಂತ್ರಿಸಿದರು. ಆ ಪುಡಿಗಳನ್ನು ಆರು ತಿಂಗಳು ತೆಗೆದುಕೊಳ್ಳಬೇಕು ಮತ್ತು ಆ ಆರು ತಿಂಗಳು ಕಟ್ಟುನಿಟ್ಟಿನ ಪಥ್ಯೆ ಮಾಡಬೇಕು ಎಂದು ತಿಳಿಸಿದರು.

ಆ ಹರಿಹರದ ಪಂಡಿತರ ಪಥ್ಯೆಯ ಪ್ರಕಾರ ಎಣ್ಣೆ, ಗೋಧಿ, ಅಕ್ಕಿ, ಈರುಳ್ಳಿ, ಕೆಲವು ತರಕಾರಿಗಳು ವರ್ಜ್ಯವಿದ್ದು ಕೇವಲ ನವಣಕ್ಕಿಯನ್ನು ಮಾತ್ರ ತಿನ್ನಬಹುದಿತ್ತು. ಅದೆಲ್ಲಕ್ಕಿಂತ ನನ್ನನ್ನು ಮಾನಸಿಕವಾಗಿ ಜರ್ಜರಿತಗೊಳಿಸಿದ್ದು ಆರು ತಿಂಗಳ ಕಾಲ ಪಂಡಿತರು ನನ್ನ ಇಡೀ ಮೈಗೆ ಹಚ್ಚಿಕೊಳ್ಳಲು ಹೇಳಿದ್ದ ’ಮುಲಾಮು’!

ಕೋಣನ ಸಗಣಿಯನ್ನು ನಿತ್ಯ ಬೆಳಿಗ್ಗೆ ಮೈಗೆ ಬಳಿದುಕೊಂಡು ಬಿಸಿಲಿನಲ್ಲಿ ಅರ್ಧ ಗಂಟೆ ಕೂರಬೇಕೆಂಬುದೇ ಆ ಅತ್ಯುಗ್ರ ಶಿಕ್ಷೆ! ಇಂತಹ ಮುಲಾಮು, ಪಥ್ಯೆಯನ್ನು ಅವರು ತಜ್ಞ ನಾಟಿ ವೈದ್ಯರಾಗಿ ಆಚರಿಸುತ್ತಿದ್ದರು ಎಂದು ಈ ಮೊದಲೇ ಔಷಧಿ ಕೊಟ್ಟಿದ್ದ ದೀಪದಯ್ಯ ಅವರಿಂದ ನನ್ನ ಅನುಭವಕ್ಕೆ ಬಂದಿತ್ತು.

ಈ ಮಧ್ಯೆ ಆ ಪಂಡಿತರು ತಾವು ನಡೆಸುವ ಹರಿಹರ ಸಮೀಪದ ನಂದ್ಯಾಲ ಉರುಸಿಗೆ ಎರಡು ದಿನ ಬರಬೇಕೆಂದು ಪ್ರೀತಿಯಿಂದ ತಾಕೀತು ಮಾಡಿದರು. ಪಂಡಿತರ ದಾವಣಗೆರೆಯ ವೈಶ್ಯ ವರ್ತಕ ಭಕ್ತರೊಟ್ಟಿಗೆ ನಾನು ನಮ್ಮ ಅಪ್ಪಾಜಿಯೂ ಉರುಸಿಗೆ ಹೋದೆವು. ದಾವಣಗೆರೆಯ ವಿಶೇಷ ವರ್ತಕ ಭಕ್ತರಾಗಿದ್ದುದರಿಂದ ನಮಗೆಲ್ಲ ವಿಶೇಷ ಊಟ ವಸತಿಯ ವ್ಯವಸ್ಥೆಯಿತ್ತು. ಕೇವಲ ಹೊರಗಿನಿಂದ ಮಸೀದಿಗಳನ್ನು ಕುತೂಹಲದಿಂದ ನೋಡುತ್ತಿದ್ದ ನನಗೆ ಒಳಹೊಕ್ಕು ಅರಿತುಕೊಳ್ಳಲು ನಂದ್ಯಾಲ ಉರ್ಸ್ ಉತ್ತಮ ಅವಕಾಶವಾಯಿತು. ಅಲ್ಲಿನ ದರ್ಗಾದ ಎಲ್ಲಾ ಪೂಜಾ ಕಾರ್ಯಕ್ರಮಗಳನ್ನು ನೋಡುತ್ತ ಅವರೆಲ್ಲರೂ ’ಆಮೀನ್ ಆಮೀನ್’ ಎನ್ನುತ್ತಿದ್ದಾಗ ನಾನೂ ’ಆಮೀನ್, ಆಮೀನ್’ ಎನ್ನುತ್ತಿದ್ದೆ. ನಮ್ಮ ಸ್ವಾಮೀಜಿಗಳು ವಿವಿಧ ಮಂತ್ರಗಳನ್ನು ಹೇಳುವಾಗ ಇತರರು ಕೋರಸ್ ರೀತಿಯಲ್ಲಿ ’ ಓಂ ಶಿವಾಯ ನಮಃ’ ಅಥವಾ ’ಸ್ವಾಹಾ’ ಎನ್ನುವಂತೆ ಈ ಆಮೀನ್ ಸಹ ಎಂದು ಅರ್ಥೈಸಿಕೊಂಡಿದ್ದೆ. ಆಲ್ಲದೆ ನನಗೆ ಮಸೀದಿ ದರ್ಗಾದ ಕಾರ್ಯಕ್ರಮ, ಪೂಜಾವಿಧಿ ವಿಧಾನಗಳು ನಮ್ಮ ಗುಡಿ ಮಠಗಳಿಗಿಂತ ಬೇರೆಯದಾಗಿ ಕಾಣಲಿಲ್ಲ. ಅವುಗಳಂತೆಯೇ ಇಲ್ಲಿಯೂ ಧೂಪ, ದೀಪ, ಚಾಮರ, ಮಂತ್ರಪಠಣಗಳಿದ್ದವು. ಸಂಜೆ ಭಜನೆಗಳ ರೀತಿ ಕವ್ವಾಲಿ ಇದ್ದು, ಆಕರ್ಷಕ ಬಾಣ ಬಿರುಸಿನ ಮತಾಪು ಪ್ರದರ್ಶನ ಸಹ ಇರುತ್ತಿತ್ತು. ನಮ್ಮ ಪಂಡಿತರು ಟಾರ್ಚ್ ಹಿಡಿದು ಒಂದೊಂದು ದಿಕ್ಕಿನತ್ತ ಬೆಳಕು ಬಿಡುತ್ತಿದ್ದಂತೆಯ ಆ ದಿಕ್ಕಿನಿಂದ ಮಾತಾಪುಗಳು ಸಿಡಿದು ಆಕಾಶದಲ್ಲೆಲ್ಲಾ ಬೆಳಕಿನ ಹೂವು, ನಕ್ಷತ್ರಗಳ ಮಳೆಗರೆಯುತ್ತಿದ್ದವು.

ಆದರೆ ಇತ್ತ ನಮ್ಮ ’ಸೂಕ್ಷ್ಮಮತಿ’ ಅಪ್ಪಾಜಿಗೆ ನಾನು ’ಆಮೀನ್ ಆಮೀನ್’ ಎನ್ನುವುದು ಚಿಂತೆಗೀಡುಮಾಡಿಬಿಟ್ಟಿತ್ತು. ಏಕೆಂದರೆ ’ಆಮೀನ್ ಆಮೀನ್’ ಎಂದರೆ ಏನೆಂದು ಅದಕ್ಕೆ ಗೊತ್ತಿರಲಿಲ್ಲ. ಉರ್ಸಿನಿಂದ ವಾಪಸ್ ಬಂದ ನಂತರ ತನ್ನ ಮಿತ್ರನಾದ ಶಫಿಯನ್ನು ಮನೆಗೆ ಕರೆದು "ಲೇ ಶಫಿ, ಆಮೀನ್ ಆಮೀನ್ ಅಂದ್ರ ಏನಲೇ" ಎಂದು ಕೇಳಿತು. ಅದಕ್ಕೆ ಶಫಿ "ನೀವು ಶಿವ ಶಿವ, ಬಸವ ಬಸವ ಅಂತೀರಲ್ಲ ಹಂಗ ನಾವು ಆಮೀನ್ ಆಮೀನ್" ಅಂತೇವಿ ಎಂದಾಗ "ಹೌದಾ, ನಾನೆಲ್ಲೋ ನಮ್ಮಡುಗುನ್ನ ಸಾಬ್ರ ಮಾಡಿಬಿಟ್ರೇನ ಪಂಡಿತರು ಅನ್ಕಂಡಿದ್ದೆ" ಎಂದಿತು. ಆಗ ಶಫಿ "ಮಾಡ್ಲಿ ತಗಳಪಾ, ಒಳ್ಳೆ ಕೋಳಿ ಕುರಿ ತಿಂದು ಸ್ವಾಮಿ ಪೈಲ್ವಾನ್ ಅಕ್ಕನ" ಎಂದಾಗ ನಾನು ’ಆಹಾ! ಹಾಗಾದರೆ?!’ ಎಂದು ಕನಸು ಕಾಣಲಾರಂಭಿಸಿಬಿಟ್ಟಿದ್ದೆ.

***

ಮುಂದೆ ನಾನು ಬಂಡಾಯಕ್ರಾಂತಿಗೆ ಮರುಳಾಗಿ ಎಸ್ಸೆಸ್ಸಲ್ಸಿಯಲ್ಲಿ ವಿಜ್ಞಾನದ ಮೇಷ್ಟ್ರೊಬ್ಬರು ಪಾಠವನ್ನೇ ಮಾಡಿರದ ಕಾರಣವಾಗಿ ಬಂಡೆದ್ದು ವಿಜ್ಞಾನದ ಪರೀಕ್ಷೆ ಬರೆಯದೆ ಫೇಲ್ ಆಗಿ ದಲಾಲಿ ಕಂ ಖರೀದಿ ಅಂಗಡಿ ಕಂ ಜಿನ್ನಿಂಗ್ ಫ್ಯಾಕ್ಟರಿಯೊಂದರಲ್ಲಿ ಗುಮಾಸ್ತನಾಗಿದ್ದೆ. ಹೀಗೆ ಒಂದು ದಿನ ’ಬೀಬಿ ಜಾನ್’ ಎನ್ನುವ ನನಗಿಂತ ಒಂದೆರಡು ವರ್ಷ ದೊಡ್ಡವಳಿರಬಹುದಾದ ಹುಡುಗಿ ನನ್ನನ್ನು ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಬೀಜದಿಂದ ಬೇರ್ಪಟ್ಟ ಅರಳೆಯು ಬೀಳುವ ನೆಲಮಾಳಿಗೆಯನ್ನು ತೋರಿಸುವುದಾಗಿ ಕರೆದುಕೊಂಡು ಹೋಗಿ ನನ್ನನ್ನು ಅರಳೆಯ ಮೇಲೆ ನೂಕಿದ್ದಳು. ಆಕೆ ನನ್ನನ್ನು ಯಾವ ಉದ್ದೇಶದಿಂದ ನೂಕಿದ್ದಳೋ ಎಂದು ಅರಿಯುವ ಮುನ್ನವೇ ನನ್ನನ್ನು ಅಕ್ಕರೆಯಿಂದ ಕಾಣುತ್ತಿದ್ದ ಖಾತುಂ ಬೀ ಎನ್ನುವ ಅಜ್ಜಿ ಮಕದುಮ್ಮಿ (ಮುಖ್ಯಸ್ಥೆ) ಹಿಂದೆಯೇ ಬಂದು ಬೀಬಿ ಜಾನಳನ್ನು ಗದರಿಸಿ ಕಳಿಸಿ ನನ್ನ ಶೀಲ ಕಾಪಾಡಿದ್ದಳು! ಮುಂದೆ ಈ ಬೀಬಿ ಜಾನಳು ಖಾತುಂ ಬೀಯ ಮೊಮ್ಮಗನನ್ನು ಮದುವೆಯಾದಳು. ಮುಕ್ತವಾದದ ಖಾತುಂ ಬೀ ಅಷ್ಟರ ಮಟ್ಟಿಗೆ ಉದಾರವಾದಿಯಲ್ಲದೆ ಜೀವನಾರ್ಥದಲ್ಲೂ ಮಕದುಮ್ಮಿ ಎನಿಸಿದ್ದಳು. ಮುಂದೆ ನಮ್ಮ ಅಂಗಡಿ ಸಾಹುಕಾರರು ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ನನ್ನ ಮತ್ತು ಸಂಗನಬಸಯ್ಯ ಎಂಬ ಕಲಾಕಾರರ ಜಂಟಿ ಸಹಯೋಗದಲ್ಲಿ ಚುನಾವಣೆಯ ಪ್ರಚಾರದ ಉಸ್ತುವಾರಿಯನ್ನು ಸಾಹುಕಾರರು ನಮಗೆ ವಹಿಸಿದರು. ಅಂದಿನ ನಾಯಕಿ ಮಾಜಿ ತಾರೆ ವೈಜಯಂತಿಮಾಲಾ ಅವರ ಪ್ರಚಾರ ಭಾಷಣವನ್ನು ಅಜಾದ್ ನಗರದ ಹೋಟೆಲ್ ಮೇಲ್ಛಾವಣಿಯೊಂದರ ಮೇಲೆ ಆಯೋಜಿಸಿದ್ದವು. ಆ ಹೋಟೆಲ್ಲಿನ ಮುಂದೆ ಭಾರೀ ಜನಸಂದಣಿ ಸೇರಿಬಿಟ್ಟಿತು. ಆ ಜನಸಂದಣಿಯ ನಡುವೆ ಬೀಬಿ ಜಾನ್ ಕಂಡಳು. ಅವಳು ನನ್ನನ್ನು ಅರಳೆಯ ಮೇಲೆ ನೂಕಿದ್ದ ಸಂಗತಿಯನ್ನು ಸಂಗನಬಸಯ್ಯನವರಿಗೆ ಈ ಮೊದಲೇ ಹೇಳಿದ್ದೆ. ಹಾಗಾಗಿ ಅವಳನ್ನು ಸಂಗನಬಸಯ್ಯನವರಿಗೆ ತೋರಿಸಿ ಇವಳೇ ಅವಳು ಎಂದು ಹೇಳಿದೆ. "ಎಲಾ ಅವ್ನೌನ ಮೇಕಪ್ ಇಲ್ಲದ ಮಧುಬಾಲಾ ಇದ್ದಾಂಗ್ ಅದಾಳಲ್ಲೋ! ಥೇಟ್ ಮಧುಬಾಲಾನ ಇಕಿ...ಅಕಿ ಹಿಂಗ ಇರೂದು! ಎಂಥಾ ಲುಕ್ಸಾನು ಮಾಡ್ಕೊಂಡಿ, ಆ ಖಾತುಂ ಬೀ ನಿಂದ್ ಖತಮ್ಮಾ ಮಾಡಿದ್ಲು ನೋಡು ಛೇ ಛೇ" ಎಂದು ಮಮ್ಮಲ ಮರುಗಿದರು.

ಬೀಬಿ ಜಾನ್ ಅಕ್ಷರಶಃ ಮೊಘಲ್-ಎ-ಆಜಮ್ ಮಧುಬಾಲಾಳಂತೆ ಸಹಸ್ರಾರು ಕನ್ನಡಿಗಳಲ್ಲಿ ಕಣ್ಣ ಕೊರೈಸಿದಳು.

***

ನನ್ನೊಟ್ಟಿಗೆ ಯೋಗಾಸನ ಮಾಡುತ್ತಿದ್ದ ದಾದಾ ಪೀರ್, ಸಾಮು ತೆಗೆಯುತ್ತಿದ್ದ ರಶೀದ್ ಇಬ್ಬರೂ ಆಂಜನೇಯನ ಪರಮಭಕ್ತರಾಗಿದ್ದರು. ನನ್ನನ್ನೂ ಪೈಲ್ವಾನ್ ಮಾಡಬೇಕೆಂದು ರಂಜಾನ್ ಹಬ್ಬದಲ್ಲಿ ಅವರ ಮನೆಗೆ ಕರೆದುಕೊಂಡು ಹೋಗಿ ಬಿರಿಯಾನಿಯನ್ನು ಬಿಸ್ಮಿಲ್ಲಾ ಮಾಡಿಸುತ್ತಿದ್ದರು. ನಮ್ಮಮ್ಮ ’ಏನು ತಿಂದು ಬಂದೆ’ ಎಂದರೆ "ಶ್ಯಾವಿಗೆ ಪಾಯಸ" ಎನ್ನುತ್ತಿದ್ದೆ. ’ಎಲ್ಲಿ ಉಸಿರು ಬಿಡು ನೋಡೋಣ’ ಎಂದು ಪರೀಕ್ಷೆಯೊಡ್ಡಿದಾಗ ಉಸಿರನ್ನು ಗಟ್ಟಿಯಾಗಿ ಸಶಬ್ಧವಾಗಿ ಒಳಗೆಳೆದುಕೊಂಡು ’ಬಿಟ್ಟೆ’ ಎನ್ನುತ್ತಿದ್ದೆ. ಉಸಿರು ಎಳೆದುಕೊಂಡ ಶಬ್ಧ ಬಿಟ್ಟಂತೆ ಕೇಳಿಸಿ ನಮ್ಮಮ್ಮನ ಪರೀಕ್ಷೆಯಲ್ಲಿ ಪಾಸಾಗಿಬಿಡುತ್ತಿದ್ದೆ! ಇದು ಯೋಗಾಸನದಿಂದ ನನಗಾದ ಅಂದಿನ ಏಕಮಾತ್ರ ಉಪಯೋಗ.

ಇದರಲ್ಲಿ ದಾದಾ ಪೀರ್ ಆಗಷ್ಟೇ ಮದುವೆಯಾಗಿದ್ದ. ಅವನ ಮದುವೆಯನ್ನು ನಮ್ಮ ಯೋಗಾಸನ ಕ್ಲಬ್ಬಿನ ಖಾಯಂ ಸದಸ್ಯರಾಗಿದ್ದ ವರದಿಚಂದ್, ಮಾಣಿಕ್ ಲಾಲ್, ಕಾಳಪ್ಪ, ಬ್ರಷ್ಮನ್, ಅಧ್ಯಕ್ಷರಾದ ಕೆ. ಮಲ್ಲಪ್ಪ ಎಲ್ಲರೂ ಸೇರಿ ಓಡಾಡಿ ಸಂಭ್ರಮಿಸಿ ಮಾಡಿದ್ದರು. ನಾನು ಅವನ ಪ್ರಾಥಮಿಕ ಪ್ರೇಮಪತ್ರಗಳನ್ನು ಬರೆದುಕೊಡುತ್ತಿದ್ದೆ. ಆದರೆ ಅವೆಲ್ಲಾ ನಮ್ಮ ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿ ತೀರ್ಥರೂಪು, ಮಾತೋಶ್ರೀ, ಪಿತಾಶ್ರೀ ಎನ್ನುವಂತೆ ಅತ್ಯಂತ ಸೌಮ್ಯವಾಗಿ ಪ್ಯಾರೆ ಜಾನ್ ..... ಇನ್ಶಾ ಅಲ್ಲಾಹ್ ಯಹ ಸಬ್ ಕೈರಿಯತ್....ಎಂದಷ್ಟೇ ಬರೆಸುವಷ್ಟು ದಾದಾ ಪೀರ್ ವಿಧೇಯ ಪತಿಯಾಗಿದ್ದ!

***

ನಾನು MCA ಓದಲು ಹಾಸನದ ಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿದ್ದೆ. ಮೈಸೂರಿನಿಂದ ಬಂದಿದ್ದ ಅರ್ಷದ್ ಅಹ್ಮದ್ ನನ್ನ ಸಹಪಾಠಿಯಾಗಿದ್ದ. ಅಲ್ಲದೆ ಹಾಸನದ ಖ್ಯಾತ ಮುಸ್ಲಿಂ ಮನೆತನದ ಹುಡುಗಿ ಶಾಹಿಸ್ತಾ ಸಹ ನನ್ನ ಸಹಪಾಠಿ. ನಾವು BCom, BBM ಮಾಡಿ MCA ಸೇರಿದ್ದರಿಂದ ಗಣಿತವಲ್ಲದೆ ಎಲ್ಲಾ ಇಂಜಿನಿಯರಿಂಗ್ ಪಠ್ಯಗಳೂ ನಮಗೆ ಉಕ್ಕಿನ ಕಡಲೆಗಳಾಗಿದ್ದವು. ಅದಕ್ಕೆ ಟ್ಯೂಷನ್ ತೆಗೆದುಕೊಳ್ಳಲು ನಿರ್ಧರಿಸಿ ಪ್ರೊಫೆಸರರೊಬ್ಬರನ್ನು ಕೇಳಿದಾಗ ಸ್ನಾತಕೋತ್ತರ ಪದವಿಗೆ ಟ್ಯೂಷನ್ ಮಾಡಬೇಕೆ ಎನ್ನುತ್ತಾ ಮೊದಲ ಸೆಮಿಸ್ಟರ್ ಗೆ ಮಾತ್ರ ಪಾಠ ಮಾಡಲು ಒಪ್ಪಿಕೊಂಡರು. ಪಾಠಕ್ಕೆ ಶಾಹಿಸ್ತಾಳ ಭವ್ಯ ಬಂಗಲೆಗೆ ಹೋಗುತ್ತಿದ್ದೆವು. ಅಲ್ಲಿ ಅವರ ಇಡೀ ಕುಟುಂಬ ನಮ್ಮನ್ನು ಆದರದಿಂದ ಕಾಣುತ್ತಿತ್ತು. ಶಾಹಿಸ್ತಾ ಅವರ ತಂದೆ ನಿವೃತ್ತ ಪ್ರೊಫೆಸರರು ಮುಸ್ಲಿಂ ಹಾಸ್ಟೆಲ್ಲಿನ ಗೌರವ ವಾರ್ಡನ್ ಸಹ ಆಗಿದ್ದರು. ಈ ಮಧ್ಯೆ ಅರ್ಷದ್ ನನಗೆ ‘ಟೈಗರ್ ಮಾಮ’ ಎನ್ನುತ್ತಿದ್ದ. ನಾನವನಿಗೆ ‘ಬೇಟಾ’ ಎನ್ನುತ್ತಿದ್ದೆ. ಮುಂದೆ ಇಡೀ ಕ್ಲಾಸ್ ಅವನಿಗೆ ಬೇಟಾ ಎನ್ನತೊಡಗಿತು. ಏಕೆಂದರೆ ಅವನು ಅಂತಹ ಮುಗ್ಧ ಬೇಟಾ ಆಗಿದ್ದ. 

ಕಾಲೇಜ್ ಹಾಸ್ಟೆಲಿನಲ್ಲಿ ಜಂಡಾ ಊರುತ್ತಿದ್ದಂತೆಯೆ ನಮ್ಮೆಲ್ಲಾ ವಿದ್ಯಾರ್ಥಿ ಆನುಷಂಗಿಕ ಗುಣಗಳು ಆನಾವರಣಗೊಳ್ಳತೊಡಗಿದವು. ಎರಡನೇ ಸೆಮಿಸ್ಟರಿಗೆ ಟ್ಯೂಷನ್ ಬಿಟ್ಟಿದ್ದೆವು, ಸಬ್ಜೆಕ್ಟುಗಳಲ್ಲಿ ಪಳಗಿದ್ದೆವು. ಹಾಗೆಯೇ ಪ್ರತಿ ತಿಂಗಳ ಕೊನೆಯ ಭೂರೀ ಭೋಜನಕ್ಕೆ ಮುಸ್ಲಿಂ ಹಾಸ್ಟೆಲ್ಲಿನ ಖಾಯಂ ಅತಿಥಿಗಳಾಗಿದ್ದೆವು. ಅದೇ ರೀತಿ ಬೇಟಾ ನಮ್ಮ ಹಾಸ್ಟೆಲ್ಲಿನ ಖಾಯಂ ನಿವಾಸಿಯಾಗಿದ್ದ. ಹಾಸ್ಟೆಲಿನಲ್ಲಿ ಬಕೆಟ್ಟಿನಲ್ಲಿ ಸಾರಾಯಿ, ರಮ್ಮು, ವಿಸ್ಕಿ ಎಲ್ಲಾ ಸುರಿದು "ಜುಮ್ಮಾ ಚುಮ್ಮಾ ದೇ ದೇ" ಎಂದು ಹಾಡಿ ಕುಣಿಯುವುದರಿಂದ ಎಲ್ಲಾ ರೀತಿಯ ಆಟಗಳಿಗೆ ಖ್ಯಾತರಾಗಿದ್ದೆವು. ಬೇಟಾ ನಮ್ಮ designated driver ಆಗಿ ಹೆಗಲು ಕೊಟ್ಟು ರೂಮಿಗೆ ಸೇರಿಸುತ್ತಿದ್ದ. ಇಷ್ಟೆಲ್ಲಾ ವ್ಯವಹಾರಿಕ ವಾಸ್ತವಗಳಲ್ಲಿ ಮುಳುಗಿದ್ದರೂ ಪ್ರತಿಬಾರಿ ಅರ್ಷದ್ ಕಾಲೇಜಿನಿಂದ ತನ್ನ ಹಾಸ್ಟೆಲ್ಲಿಗೆ ಹೋಗುವಾಗ ಹನಿಗಣ್ಣನಾಗುವಷ್ಟು ಭಾವುಕಜೀವಿಯಾಗಿ ಬೇಟಾ ಪದಕ್ಕೆ ವಾರಸುದಾರನೆನಿಸಿದ್ದ.

ಇಂತಿಪ್ಪ ಸೌಮ್ಯ ಬೇಟಾ ಎರಡನೇ ವರ್ಷಕ್ಕೆ ಬಂದಾಗ ತಾನೂ ಹೊಸ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಬೇಕು ಆದರೆ ಅದು ಖುಷಿಯ ಮಿತಿಯಲ್ಲಿರಬೇಕು ಎಂದು ನನ್ನ ಸಲಹೆ ಕೇಳಿದ. ನಾನು "ಲೋ ಬೇಟಾ, ನಿಮ್ ಮುಸ್ಲಿಂ ಹಾಸ್ಟೆಲ್ ಎಲ್ಲಾ ಜ್ಯೂನಿಯರರುಗಳಿಗೆ ಒಂದೊಂದು ನಿರೋಧ್ ಪಾಕೆಟ್ ಕೊಟ್ಟು ಅದರ ಮೇಲೆ ಅವರವರ ಪಾಸ್ಪೋರ್ಟ್ ಫೋಟೋ ಅಂಟಿಸಿಕೊಂಡು ಸೀನಿಯರ್ ಒಬ್ಬರ ಸಹಿ ಮಾಡಿಸಿಟ್ಟುಕೊಳ್ಳಲು ಹೇಳು. ಸೀನಿಯರ್ಸ್ ’ಐಡಿ ಕಾರ್ಡ್ ಎಲ್ಲಿ’ ಎಂದು ಕ್ಯಾಂಪಸಿನಲ್ಲಿ ಕೇಳಿದಾಗಲೆಲ್ಲಾ ಅವರು ಅದನ್ನು ತೋರಿಸುವಂತೆ ಹೇಳು. ಸೀನಿಯರುಗಳು ಆದಷ್ಟು ಹುಡುಗಿಯರು ಸುತ್ತಮುತ್ತ ಇದ್ದಾಗ ಈ ಐಡಿ ಕೇಳಲಿ. ಮಜಾ ಇರುತ್ತದೆ" ಎಂದು ಹೇಳಿಕೊಟ್ಟೆ. ಅದನ್ನು ಸೀನಿಯರ್ ಜೂನಿಯರ್ ಅಲ್ಲದೇ ಎಲ್ಲರೂ ಆನಂದದಿಂದ ಪುಳಕಗೊಂಡು ಪಾಲಿಸುತ್ತಿದ್ದರು. ಹುಡುಗಿಯರೂ ಮುದಗೊಂಡು ಕಿಸಿಕಿಸಿ ನಗುತ್ತಿದ್ದರು. ಆದರೆ ಒಬ್ಬ ಮಾತ್ರ ಮುಸ್ಲಿಂ ಹಾಸ್ಟೆಲ್ ವಾರ್ಡನ್ ಅವರಿಗೆ ದೂರು ಕೊಟ್ಟುಬಿಟ್ಟ. ಬೇಟಾ ಸೈಕಲ್ ಮೇಲೆ ಏದುಸಿರುಬಿಡುತ್ತಾ ಬಂದವನೇ "ಮಾಮಾ, ವಾರ್ಡನ್ ಐಡಿ ಕಾರ್ಡ್ ಹಿಡದುಬುಟ್ರು. ಪ್ಯಾಕೆಟ್ ಒಳ್ಗೆ ಇರೋದು ತೆಗ್ದು ’ನಂದು ಜೀವನಾದಲ್ಲೇ ಇದು ನೋಡಿಲ್ಲ!’ ಅಂತ surprise ಆಗಿ ಹಿಂದೆ ಮುಂದೆ ಮೇಲೆ ಕೆಳ್ಗೆ ಅದನ್ನ ನೋಡ್ತಾ ಇದ್ರೆ ನಮ್ಗೆ ನಗಾ ಬರ್ತಿತ್ತು. ಆದ್ರೆ ನಗಂಗಿಲ್ಲ. ತಡ್ಕೊಂಡು ಬಂದೆ. ಇಷ್ಟಾದರೂ ವಾರ್ಡನ್ಗೆ ನಂದು ಮೇಲೆ ನಂಬಿಕೆ ಅದೆ. ಅವ್ರು ಇದು ನಮ್ದು ಹಾಸ್ಟೆಲ್ ಹುಡ್ಗ ಅರ್ಷದ್ ಒಳ್ಳೆ cultured ಇದಾನೆ. ಇದು ಹೊರಗಿನವರ್ದು ಯಾರದೋ ಕಿತಾಪತಿ. ಇಲ್ಲಿ ಯಾರು ಹೊರಗಿನವರು ಬರ್ತಾರೆ ಅಂದಾಗ ಒಂದಿಬ್ಬರು ಹೆದರ್ಕೊಂಡು ನಿಂದು ಹೆಸ್ರು ಹೇಳಿಬಿಟ್ಟಿದಾರೆ. ಅವ್ರು HODಗೆ ಪ್ರಿನ್ಸಿಪಾಲ್ಗೆ ಹೇಳಬೈದು. ನೀನು ಹುಷಾರು" ಎಂದ. ಎಂತೆಂಥದೋ ಕೀಟಲೆ ತಮಾಷೆ ಮಾಡಿದ್ದ ನಮಗೆ ಇದನ್ನೆಲ್ಲಾ ನಿಭಾಯಿಸುವುದು ಸಮಸ್ಯೆಯೇ ಎನಿಸಲಿಲ್ಲ. ಆದರೆ ಆ ವಾರ್ಡನ್ ತಮ್ಮ ಮಗಳ ಬಳಿ ನನ್ನ ಹೆಸರು ಹೇಳಿ ’ಈ ಹುಡ್ಗ ಹಿಂಗಾ’ ಎಂದು ನನ್ನನ್ನು ವಿಲನ್ ಮಾಡಿಬಿಟ್ಟಿದ್ದರು. ಇರಲಿ, ಹೀಗೆ ನಮ್ಮ ಮತ್ತು ಮುಸ್ಲಿಂ ಹಾಸ್ಟೆಲ್ ನಡುವಿನ ಬಾಂಧವ್ಯ ಸುಗಮವಾಗಿ ಸಾಗುತ್ತಿತ್ತು. ಪ್ರತಿ ಸೆಮಿಸ್ಟರ್ ಮುಗಿಸಿ ಎಲ್ಲರೂ ಬೀಳ್ಕೊಡುವಾಗ ಈ ಹನಿಗಣ್ಣೀಶ್ವರನ ಕಂಡು ಎಂದೂ ಅಳದ ನಾನೂ ಕಣ್ಣೀರು ಹರಿಸಿಬಿಡುತ್ತಿದ್ದೆ. ಜೀವನದಲ್ಲಿ ಎಂತೆಂತಹ ಸಾವು ನೋವುಗಳನ್ನು ಅನುಭವಿಸಿದ್ದರೂ ಕಣ್ಣೀರು ಹಾಕದ ನನಗೆ ಈ ಬೇಟಾ ಭೇಟಿಯಾಗಿ ಬೀಳ್ಕೊಡುವಾಗಲೆಲ್ಲಾ ಕಣ್ಣೀರು ಸುರಿಯುತ್ತದೆ, ಇಂದಿಗೂ. ಯಾಕೋ ಗೊತ್ತಿಲ್ಲ!

***


ಸ್ಯಾನ್ ಫ್ರಾನ್ಸಿಸ್ಕೋದಿಂದ ಆಗಷ್ಟೇ ಶಿಕಾಗೋಕ್ಕೆ ಬಂದಿದ್ದೆ. ನಾನು ನನ್ನ ಹೆಂಡತಿ ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಆಗಷ್ಟೇ ಮೂರು ತಿಂಗಳು ತುಂಬಿದ್ದ ನನ್ನ ಹೆಂಡತಿಗೆ ಕೇವಲ ಭಾರತೀಯ ತಿನಿಸುಗಳನ್ನು ತಿನ್ನುವ ಬಯಕೆ! 


ಶಿಕಾಗೋದಂತಹ ಮಹಾನಗರದ ಗಗನಚುಂಬಿ ಕಟ್ಟಡಗಳ ನಡುವೆ ಸಾಕಷ್ಟು ಭಾರತೀಯ ಹೋಟೆಲ್ಲುಗಳಿದ್ದರೂ ಅವುಗಳಲ್ಲಿ ವೆರೈಟಿಗಳಿರಲಿಲ್ಲ. ಹೀಗಿದ್ದಾಗ ನಮ್ಮ ಆಫೀಸ್ ಬಳಿಯ ಕಟ್ಟಡದ ತಳಮಹಡಿಯಲ್ಲಿ ಬೋರ್ಡಿಲ್ಲದ ಜೈಕಾ ಎನ್ನುವ ಪಾಕಿಸ್ತಾನಿ ಡಾಬಾವೊಂದನ್ನು ಟ್ಯಾಕ್ಸಿ ಡ್ರೈವರ್ ಒಬ್ಬ ತೋರಿಸಿಕೊಟ್ಟ. ಅಲ್ಲಿನ ಅಡುಗೆ ಭಟ್ಟ ಅಹ್ಮದ್ ನಿತ್ಯವೂ "ಬೆಹೆನ್ ಜೀ, ಮೆ ಆಪ್ಕೊ ರೋಜ್ ಸ್ಪೆಷಲ್ ಬನಾಕೆ ದೇತಾ ಹೂಂ. ಆಪ್ ಸಿರ್ಫ್ ವಹಿ ಖಾಯಿಯೆಗಾ" ಎಂದು ಮೆನು ಬಿಟ್ಟು ಬೇರೆಯದೇ ಆದ ವಿಶೇಷವನ್ನು ನಿತ್ಯ ಮಧ್ಯಾಹ್ನ ಮಾಡಿಕೊಟ್ಟು ಬಸುರಿಯ ಬಯಕೆ ತೀರಿಸುತ್ತಿದ್ದ. 


ಪಾಕಿಸ್ತಾನಿ ವಿಶೇಷ ಖಾದ್ಯವಾದ ಬೀಫ್ ಚಪ್ಲಿ ಕಬಾಬನ್ನು ನಾನು ಹೇಗಿರುತ್ತದೆ ನೋಡೋಣ ಎಂದು ತಿಂದಾಗ "ಅರೆ ಯಾರ್ ಜಬ್ ಮೆ ಜರ್ಮನಿ ಮೆ ಥಾ, ತಬ್ ಸುವ್ವರ್ ಭಿ ಖಾಲಿಯಾ ಥಾ. ಬಿಯರ್ ಬೀ ಪೀತಾ ಥಾ. ಶಿಕಾಗೋ ಆಖೇ ಲೋಗ್ ಕುಚ್ ಜ್ಯಾದಾ ಹಿ ಮುಸಲ್ಮಾನ್ ಬನ್ ಗಯೇ ಹೈ. May be because of famous Chicago tagline 'holy cow', you know! ಅಬ್ ಮೇ ಯಹಾ ಸುವ್ವರ್ ಖಾವೂ ತೋ ಗೂರ್ ಕೆ ದೇಖ್ ಥೆ ಹೈ ಲೋಗ್" ಎಂದು ಕಣ್ಣು ಮಿಟುಕಿಸುತ್ತಿದ್ದ. ಮುಂದೆ ಈ ಜೈಕಾ ನಮ್ಮ ಆಫೀಸಿನಲ್ಲೆಲ್ಲಾ ಖ್ಯಾತಗೊಂಡು ಅದರಲ್ಲೂ ಶುಕ್ರವಾರದಂದು ಇಡೀ ಆಫೀಸ್ ಬಿರ್ಯಾನಿ ಘಮಗುಟ್ಟವಂತಾಗತೊಡಗಿತು. ಮುಂದೆ ಬಿರಿಯಾನಿಯನ್ನು ಮಧ್ಯಾಹ್ನ ತಿಂದು ರಾತ್ರಿಗೆ ಕಟ್ಟಿಸಿಕೊಂಡು ಬಂದು ಆಫೀಸ್ ಫ್ರಿಡ್ಜ್ ನಲ್ಲಿ ಇಡುವುದನ್ನು ಘಮ್ಮೆನ್ನುವ ಕಾರಣ ನಿಷೇಧಿಸಲಾಗುವಷ್ಟು ಜೈಕಾ ಖ್ಯಾತಿ ಗಳಿಸಿತ್ತು.


ಶಿಕಾಗೋ ಬಂದು ಎರಡು ವರ್ಷದ ನಂತರ ನಾನು ಮನೆ ಖರೀದಿಸಿ ಹಾಲು ಉಕ್ಕಿಸಿದಾಗ ನನ್ನ ಹೆಂಡತಿ "ಯಾವುದಾದರೂ ಭಕ್ತಿ ಗೀತೆ ಹಾಕು" ಎಂದಳು. ನನ್ನ ಬಳಿ ಆಗ ಯಾವುದೇ ಭಕ್ತಿಗೀತೆಯ ಕ್ಯಾಸೆಟ್ ಇರಲಿಲ್ಲ. ಇದ್ದುದರಲ್ಲಿ ಭಕ್ತಿ ಎನ್ನಬಹುದಾದ ನುಸ್ರತ್ ಫತೇ ಅಲಿಖಾನ್ ನ "ಧಮಾ ಧಮ್ ಮಸ್ತ್ ಖಲಂದರ್" ಇತ್ತು. ಭಕ್ತಿಲೋಲುಪ್ತತೆಯ ಉತ್ಕೃಷ್ಠ ಸಂಗೀತ ನನ್ನ ಹೊಸ ಮನೆಯ ಮೂಲೆ ಮೂಲೆಗಳಲ್ಲಿ "ಜೂಲೆ ಲಾಲ್ ಖಲಂದರ್" ಎಂದು ಅಲೆ ಅಲೆಯಾಗಿ ಜೂಲಿಸಿತು.

***


ಹೀಗೆ ಬಾಲ್ಯದಿಂದ ಓರ್ವ ಬಾಲಕನ ತಂದೆಯಾಗುವವರೆಗಿನ ನನ್ನ ಈ ಅನುಭವಗಳು ವಿಶೇಷವೋ ಅಪರೂಪವೋ ಅಲ್ಲವೇ ಅಲ್ಲ! ಇವು ನನ್ನ ಕಾಲಮಾನದ ಬಹುಪಾಲು ಜನರ ಸಾಮಾಜಿಕ ಸಹಜ ಜೀವನದ ಮಾನವಿಕ ಚಿತ್ರಣಗಳು. ಭಾರತದ ಭವ್ಯ ಪರಂಪರೆಯ ಕೂಡು ಕುಟುಂಬ, ಪ್ರೀತಿ ವಾತ್ಸಲ್ಯ, ಹೃದಯ ವೈಶಾಲ್ಯ, ಕಕ್ಕುಲಾತಿ, ಸಹಬಾಳ್ವೆ, ಸೌಹಾರ್ದತೆಗಳ ಸ್ಥಿತಪ್ರಜ್ಞ ಜೀವನದ ಭರಪೂರ ಭಾವನೆಗಳು! ಈ ಮಾನವಿಕ ಮಹಾ ಪ್ರವಾಹದಲ್ಲಿ ಶಿವಮೊಗ್ಗೆಯ ತುಂಗೆ ನನ್ನನ್ನು ಹುಟ್ಟಿನಿಂದಲೇ ತೇಲಿಸಿ, ತುಂಗಾಭದ್ರೆಯಲ್ಲಿ ಆಡಿಸಿ, ಹೇಮೆ-ಕಾವೇರಿಯರಲ್ಲಿ ಮುಳುಗಿಸಿ ಮಿಷಿಗನ್ ಮಹಾಸರೋವರದಲ್ಲಿ ನೆಲೆ ನಿಲ್ಲಿಸಿದ್ದಾಳೆ. ಇದೇನೂ ಯಾವುದೋ ಗತ ಶತಮಾನದ ಕತೆಯಲ್ಲ, ನೆನ್ನೆಮೊನ್ನೆಯದಷ್ಟೇ.

ಶಾಟವೂ ಲಂಡ್ ಡಿ ಬರ್ಟನ್ನೂ, ಕೈಮಾ ಶೇರ್ವಾವೂ ಮತ್ತು ಮಲ್ಟೈ ಸ್ಟಾರರ್ ಕಾಲಾ ಪತ್ತರ್ರೂ!

 ಈ ವೀಕೆಂಡ್ ವಿಲಾಸಕ್ಕೆ ವಾರವೆಲ್ಲಾ ಕಾಡುತ್ತಿದ್ದ ಅಂಬಾಭವಾನಿ ಮಿಲ್ಟ್ರಿ ಹೋಟೆಲ್ಲಿನ ಕೈಮಾ, ಶೇರ್ವಾ ಮತ್ತು ಮುದ್ದೆಯ ನೆನಪನ್ನು ಶ್ರಮಿಸಬೇಕೆಂದು ನಿರ್ಧರಿಸಿದ್ದೆ. ಅದಕ್ಕೆ ಸಾಥ್ ಕೊಡಲು ಅಮೆಜಾನ್ ಪ್ರೈಮ್ನಲ್ಲಿ ಕಾಲಾಪತ್ತರ್ ಸಿನೆಮಾ ಕಂಡಿತು. ಈ ಕಾಲಾಪತ್ತರ್ ನನ್ನಲ್ಲಿ ಒಂದು ತಾಜಾ ನೆನಪಿನೊಂದಿಗೆ ಬೆಸೆದುಕೊಂಡಿದೆ.


ಮೊದಲಿಗೆ ಬೆಂಗಳೂರಿಗೆ ಬಂದ ಎಂಟು ತಿಂಗಳು ಕೃಷ್ಣರಾಜಪುರದ ಐಟಿಐ ಕಾರ್ಖಾನೆಯ ಯಂಗ್ ಆಫೀಸರ್ಸ್ ಹಾಸ್ಟೆಲ್ಲಿನಲ್ಲಿ ಕಳೆದಿದ್ದೆ. ಸ್ನಾತಕೋತ್ತರ ಇಂಜಿನಿಯರಿಂಗ್ ಮಾಡಿ ಪ್ರಾಜೆಕ್ಟ್ ಕೆಲಸಕ್ಕೆ ಬರುವವರನ್ನು ಯಂಗ್ ಆಫೀಸರ್ಸ್ ಎಂದು ಉದಾರವಾಗಿ ಸರ್ಕಾರಿ ಸ್ವಾಮ್ಯದ ಐಟಿಐ ಪರಿಗಣಿಸಿತ್ತು. ಹಾಗೆಯೇ ಅಲ್ಲಿನ ಆಫೀಸರ್ಸ್ ಕ್ಲಬ್ಬಿಗೆ ಪ್ರವೇಶವನ್ನು ಸಹ ಕೊಟ್ಟಿತ್ತು. ಸ್ವಾತಂತ್ರ್ಯಪೂರ್ವ ಬ್ರಿಟಿಷ್ ಅಥವಾ ಭಾರತೀಯ ಸೇನೆಯ "ಆಫೀಸರ್ಸ್" ವೈಭವೋಪೇತ ಅನುಭವವನ್ನು ಸ್ವಾತಂತ್ರೋತ್ತರ ಕಾಲದಲ್ಲಿ ನನಗೆ ಈ ಕ್ಲಬ್ ಕೊಟ್ಟಿತ್ತು. ಕ್ಲಬ್ಬಿನ ಬಾರಿನಲ್ಲಿದ್ದ ಏಕೈಕ ವಿಸಿಆರ್ (ವಿಡಿಯೋ ಪ್ಲೇಯರ್) ಸೆಟ್ಟಿನಲ್ಲಿ ಒಬ್ಬ ಪಂಜಾಬಿ ಅಧಿಕಾರಿ ನಿತ್ಯ ಹೆಲೆನ್ ಳ ಕ್ಯಾಬರೆ ವಿಡಿಯೋಗಳನ್ನು ಹಾಕಿ ಅಧಿಕಾರಶಾಹಿಯೊಂದಿಗೆ ತನ್ನ ಊಳಿಗಮಾನಶಾಹಿ ರಸಿಕತೆಯನ್ನು ನೆನಪು ಮಾಡಿಕೊಂಡು ನಿಟ್ಟುಸಿರು ಬಿಡುತ್ತಿದ್ದ. 


ನನ್ನಂತಹ ಪ್ರಾಜೆಕ್ಟ್ ಕೆಲಸಕ್ಕೆ ಬರುತ್ತಿದ್ದವರಿಗೆ ಇದೊಂದು ಅತ್ಯಂತ ದೊಡ್ಡ ಲಕ್ಸುರಿ ಆಗಿತ್ತು. ಏಕೆಂದರೆ ಹತ್ತಿರದಲ್ಲಿ ಯಾವುದೇ ಊಟದ ವ್ಯವಸ್ಥೆಗೆ ಒಂದೆರಡು ಕಿಲೋಮೀಟರ್ ನಡೆಯಬೇಕಿತ್ತು. ಆದರೆ ಈ ಕ್ಲಬ್ಬಿನ ಸದಸ್ಯತ್ವ ಯಾವುದೇ ವೈಭವೋಪೇತ ಪಂಚತಾರಾ ಹೋಟೆಲ್ಲಿಗೂ ಕಡಿಮೆ ಇಲ್ಲದ ಉತ್ತಮ ಊಟದ ವ್ಯವಸ್ಥೆಯನ್ನು ಅತ್ಯಂತ ಕಡಿಮೆ ಬೆಲೆಗೆ ಒದಗಿಸಿತ್ತು. ನನಗೋ ಈ ಸದಾವಕಾಶವನ್ನು ಇದ್ದಷ್ಟು ದಿನ ಅನುಭವಿಸಿಬಿಡಬೇಕೆಂದು ಉಮೇದಿನ ಹುಕಿಯಲ್ಲಿ ಅಲ್ಲಿನ ಬಾರಿಗೆ ಆಗಾಗ್ಗೆ ನುಗ್ಗಿ ಶ್ರೀಮಂತ ವಸಾಹತುಶಾಹಿ/ಅಧಿಕಾರಶಾಹಿ/ಮೊಗಲ್ ಶಾಹಿ/ಪುರೋಹಿತಶಾಹಿ/ಕಾಮ್ರೇಡ್ ಶಾಹಿ ಅನುಭವವನ್ನು ನನ್ನದಾಗಿಸಿಕೊಳ್ಳುತ್ತಿದ್ದೆ. 


ಎಷ್ಟೋ ವರ್ಷಗಳ ಕಾಲ ಕಾರ್ಮಿಕರಾಗಿ ದುಡಿದು ನಿವೃತ್ತಿಯ ವಯಸ್ಸಿಗೆ ಭಡ್ತಿ ಪಡೆದು ಆಫೀಸರ್ ಆದ ಕೆಲವು ಮುದುಕರು ಆ ಕ್ಲಬ್ಬಿನ ಸದಸ್ಯತ್ವವನ್ನು ಪಡೆದು ತಮ್ಮ ಜೀವನ ಪಾವನವಾಯಿತೆಂದು ಹಲುಬುವುದನ್ನು ಕಂಡು ವಿಚಿತ್ರವೆನಿಸುತ್ತಿತ್ತು. ಏಕೆಂದರೆ ಅಂತಹ ಬಹುಪಾಲು ಜನರು ಕಾಮ್ಯೂನಿಸ್ಟ್ ಪಕ್ಷ, ಕಾರ್ಮಿಕ ನೀತಿ, ಲಾಲ್ ಸಲಾಂ ಎಂದು ಜೀವನಪರ್ಯಂತ ಹೋರಾಡಿ ತಮ್ಮ ಮಕ್ಕಳಿಗೆ ಲೆನಿನ್, ಸ್ಟಾಲಿನ್ ಎಂದು ಹೆಸರಿಟ್ಟವರಿದ್ದರು. ಅಮಿತಾಬ್, ಶತ್ರುಘ್ನ, ಶಶಿಕಪೂರರ "ಕಾಲಾ ಪತ್ತರ್" ಅಂತಹ ಕಾರ್ಮಿಕ ಹೋರಾಟ, ಗಣಿ/ಭೂ ಮತ್ತಿತರೆ ಮಾಲೀಕ - ಕಾರ್ಮಿಕ ಸಿನೆಮಾವನ್ನು ಕ್ಲಬ್ಬಿನ ವಿಸಿಆರ್ನಲ್ಲಿ ಹಾಕಿ ನೋಡುತ್ತಿದ್ದ ಈ ಮಾಜಿ ಕಾರ್ಮಿಕರು ಸರ್ದಾರ್ಜಿ ಬಂದೊಡನೆ ಅವನು ಹಾಕುತ್ತಿದ್ದ ಹೆಲೆನ್ ನೃತ್ಯ ನೋಡುತ್ತಾ ತಮ್ಮದೇ ಭಡ್ತಿ ಹೊಂದದ "ನಾನ್ - ಆಫೀಸರ್" ಸ್ನೇಹಿತರ ಕುರಿತು ತುಚ್ಛವಾಗಿ ಅಧಿಕಾರಶಾಹಿ ಉಕ್ತಿಗಳನ್ನು ಉದುರಿಸುತ್ತಿದ್ದರು. ದಾವಣಗೆರೆಯ ಪಂಪಾಪತಿ, ಮೇ ದಿನಾಚರಣೆಯ ಪರೇಡುಗಳನ್ನು ನೋಡುತ್ತಾ ಏನೋ ಒಂದು ಕಾರ್ಮಿಕ ಆದರ್ಶ ನಂಬಿದ್ದ ನನಗೆ ಈ ಕಾರ್ಮಿಕ ಪೊರೆ ಕಳಚಿದ ನವ ಅಧಿಕಾರಶಾಹಿಗಳಷ್ಟೇ ಅಲ್ಲದೆ ಇಂದಿನ, ಹಿಂದಿನ ಎಂದೆಂದಿನ ಕಾಮ್ಯುನಿಸ್ಟ್ ನಾಯಕವರ್ಗಕ್ಕೂ ಯಾವುದೇ ವ್ಯತ್ಯಾಸ ಇಲ್ಲವೆಂದು ನನಗೆ ಅರಿವು ಮೂಡಿಸಿ ದೊಡ್ಡ ಭ್ರಮೆಯನ್ನು ಕಳಚಿಹಾಕಿಸಿದ್ದರು.


ಈ ಭ್ರಮೆ ಕಳಚಿಕೊಂಡು, ಪ್ರಾಜೆಕ್ಟ್ ಮುಗಿಸಿ ಊರ ಹೊರಗಿದ್ದ ಐಟಿಐ ಕ್ಯಾಂಪಸ್ಸಿನಿಂದ ಜನನಿಬಿಡ ಮಾಗಡಿ ರಸ್ತೆಯ ರಹೇಜಾ ಟವರ್ರಿನ ಗೋವಿಂದರಾಜನಗರಕ್ಕೆ ಪದಾರಿಸಿದ್ದೆ. ಆ ರಹೇಜಾ ಅಪಾರ್ಟ್ಮೆಂಟಿನ ಎದುರಿಗಿದ್ದದ್ದೇ ಈ "ಅಂಬಾಭವಾನಿ ಮಿಲ್ಟ್ರಿ ಹೋಟೆಲ್!" ಎಂತದೋ ಒಂದು ಕೆಲಸ ಹಿಡಿದು ಉತ್ತಮ ಅವಕಾಶಕ್ಕೆ ಹುಡುಕುತ್ತಾ ಆ ಹುಡುಕಾಟದ ನೀರಸ ಕ್ಷಣಗಳನ್ನು ರಸಗಳಿಗೆಗಳಾಗಿಸುವ ಒಂದು ಓಯಸಿಸ್ ಈ ಅಂಬಾಭವಾನಿ ಆಗಿತ್ತು. ಅಲ್ಲಿನ ಬಾಯಲ್ಲಿ ಕರಗುತ್ತಿದ್ದ ಕೈಮಾ, ಮುದ್ದೆ, ಶೇರ್ವಾ ಜೊತೆಗೆ ನಂಚಿಕೊಳ್ಳಲು ನಿಮ್ಮದೇನು ಮಹಾ ನೀರಸ ಎಂದು ಜಗತ್ತನ್ನೇ ಹೊತ್ತು ನಿಂತ ಹರ್ಕ್ಯುಲಿಸ್ ರಮ್ ರಸ ನನ್ನೆಲ್ಲಾ ಸಸ್ಯಾಹಾರಿ ಮಿತ್ರರ ಬಹು ಆಪ್ಯಾಯಮಾನ ಖಾದ್ಯವಾಗಿತ್ತು!


ಅದೇಕೋ ದಶಕಗಳ ನಂತರ ಈ ವಾರ ಐಟಿಐ, ಆಫೀಸರ್ಸ್ ಕ್ಲಬ್, ಕಾಮ್ಯುನಿಸ್ಟ್ , ಅಂಬಾಭವಾನಿ ಮತ್ತಲ್ಲಿನ ನಾಟಿ ಮಾತುಗಳು ನನ್ನನ್ನು ಕಾಡತೊಡಗಿದವು. ಈ ನೆನಪುಗಳನ್ನು ತೀವ್ರಗೊಳಿಸಿ ಕಾಡಲು ನಾಟಿ ಮಾತು ಹೋಲುವ ಶಾಟವೂ/ಬರ್ಟನ್ನನ್ನ ಲಂಡವೋ (Chateau Lande De Buetin) ಎಂಬ ಫ್ರಾನ್ಸಿನ ವೈನ್ ಉತ್ತೇಜಿಸಿ ಉನ್ಮಾದಿಸಿತು. ಇದನ್ನು ತೀವ್ರವಾಗಿ ಅನುಭವಿಸುವ ಹೊತ್ತಿನಲ್ಲಿ ಆಕೆಯ ಕರೆ ರಿಂಗಣಿಸಿತು!!!

ಸಿದ್ದರಾಮೋತ್ಸವ

 ಭಾರತದ ಪ್ರಜಾಪ್ರಭುತ್ವವಾದ "ಊಳಿಗಮಾನ" ಪ್ರಜಾಪ್ರಭುತ್ವವನ್ನು ಸ್ವಾತಂತ್ಯ ತಂದುಕೊಟ್ಟು ಪ್ರಜಾಪ್ರಭುತ್ವ ಸ್ಥಾಪಿಸಿದೆವು ಎನ್ನುವ ಪಕ್ಷದಿಂದಲೇ ಮತ್ತು ಸಮಾಜವಾದಿ ಎನ್ನುವ ನಾಯಕನಿಂದಲೇ ಆತನ ಹುಟ್ಟಿನ ವಿಜೃಂಭಣೆ 'ಶಾಮನೂರು ಶಿವಶಂಕರಪ್ಪ "ಅರಮನೆ" ಮೈದಾನ' ಎನ್ನುವ ಐತಿಹಾಸಿಕವಾಗಿ "ಅರಮನೆ"ಯಿರದ ಆಧುನಿಕ ಊಳಿಗಮಾನ ಪ್ರಜಾಪ್ರಭುತ್ವದ ವ್ಯಕ್ತಿಯ ಅರಮನೆ ಹೆಸರಿನ ಮೈದಾನದಲ್ಲಿ ಯಾವ ರಾಜಪ್ರಭುತ್ವದ "ರಾಜ"ನೂ ಲಕ್ಷೋಪಲಕ್ಷ "ವಂಧಿಮಾಗದ"ರ ಸಮ್ಮುಖದಲ್ಲಿ ಅದರಲ್ಲೂ "ಭರತ" ಎಂಬ ಹೆಸರಿನ ಭಾರತ ಖಂಡದ ಅಧಿಪತಿಯೂ ಆಚರಿಸಿಕೊಳ್ಳದ ಹುಟ್ಟಿನ "ಉತ್ಸವ"ಕ್ಕೆ ಕರುನಾಡು ಸಾಕ್ಷಿಯಾಗುತ್ತದೆ!


ಪ್ರಜಾಪ್ರಭುತ್ವದ ಸಹಸ್ರಮಾನದ ಅಣಕವು ಇಂದಿನ "ಇಪ್ಪತ್ತೊಂದ"ನೇ ಶತಮಾನದಲ್ಲೂ ರಾಜಪ್ರಭುತ್ವದ ಆಶ್ರಯದಲ್ಲಿದ್ದ ಪಂಡಿತರಂತೆಯೇ ಇಂದಿನ ಬುದ್ದಿಜೀವಿಗಳ "ಬಹುಪರಾಕ್" ಜಯಜಯಕಾರದಲ್ಲಿ ಅನಾವರಣಗೊಳ್ಳುತ್ತಿರುವುದು ಕೇವಲ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವದ್ದಷ್ಟೇ ಅಲ್ಲ, ಅದನ್ನು ತಂದುಕೊಟ್ಟೆವು ಎಂಬ ಪಕ್ಷದ, ರಾಷ್ಟ್ರದ, ನೂರಾಮೂವತ್ತು ಕೋಟಿ ನಾಗರಿಕರ ದುರಂತ!


ವಿಶೇಷ ಸೂಚನೆ: ಭರತ ಖಂಡದ ಅಧಿಕಾರದಲ್ಲಿರುವ ಪಕ್ಷದ ರಾಜನ ಬಗ್ಗೆ ಬರೆಯಿರಿ, ಉಗಿಯಿರಿ ಎಂದು ಉಗಿಯುವ ಉತ್ಸಾಹದ "ಸಂಧಿಮಾಗದ"ರೇ, ನಾನೊಬ್ಬ ಜಾಗತಿಕವಾಗಿ ಪ್ರಚಲಿತವಿರುವ ಉದಾರವಾದದ ಅನುಯಾಯಿ. ಹಾಗಾಗಿ ನನ್ನ ಉದಾರವಾದದ ಹೆಸರನ್ನು ತಮ್ಮ ಅನೈತಿಕ ಬಸಿರಿಗೆ ಬಳಸಿಕೊಳ್ಳುವವರನ್ನು ಖಂಡಿಸುವುದು ನನ್ನ ಜನ್ಮಸಿದ್ಧ ಉದಾರ ಹಕ್ಕು, ನೆನಪಿಡಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ರಾಕೆಟ್ರಿ ಸಿನೆಮಾ ಅಭಿಪ್ರಾಯ

 ಕೇವಲ ರಾಕೆಟ್ರಿ ಸಿನೆಮಾ ನೋಡಿ ಮಾಡಿದ ಟಿಪ್ಪಣಿ ಇದಾಗಿದೆ. ಅದರಾಚೆಗೆ ಏನನ್ನೂ ತಿಳಿದು ವಿಶ್ಲೇಷಿಸಲು ಹೋಗಿಲ್ಲ. ಏಕೆಂದರೆ ಈ ಸಿನೆಮಾದಲ್ಲಿ ಅಸಲಿ ರಾಕೆಟ್ರಿ ನಾಯಕರು ಸಹ ಭಾಗವಹಿಸಿದ್ದರಿಂದ ಈ ಕತೆ ಸತ್ಯವೆಂದು ಅವರು ಅನುಮೋದಿಸಿದಂತಾಗಿರುವುದರಿಂದ ಬೇರೆಯದನ್ನು ಅರಿಯುವ ನೌಬತ್ತು ಬೇಕಿಲ್ಲ ಎಂದುಕೊಂಡಿದ್ದೇನೆ.


ಕಥಾನಾಯಕ ನಂಬಿಗೆ ಲಿಕ್ವಿಡ್ ತಂತ್ರಜ್ಞಾನ ಕಲಿಸಿದ್ದು ಅಮೆರಿಕಾದ ಪ್ರಿನ್ಸ್ಟನ್ (ಅದಕ್ಕಾಗಿ ಆತ ಪ್ರೊಫೆಸರ್ ಒಬ್ಬರ ಮನೆಯಲ್ಲಿ ಕಸ ಹೊಡೆದು ಪಾತ್ರೆ ತಿಕ್ಕಿ ಅಡುಗೆಯನ್ನೂ ಮಾಡುತ್ತಾನೆ. ನಮ್ಮ ದೇಶಭಕ್ತರ ಭಾಷೆಯಲ್ಲಿ ಇದನ್ನು ಬಕೆಟ್ ಹಿಡಿಯುವುದು ಎನ್ನುತ್ತಾರೆ ಎಂಬುದು ಉಲ್ಲೇಖಾರ್ಹ), ಪ್ರೋತ್ಸಾಹ ಕೊಟ್ಟಿದ್ದು ವಿದೇಶಿ ಸಂಸ್ಥೆ ನ್ಯಾಸಾ, ಪುಗುಸಟ್ಟೆ ಸಲಕರಣೆ ಕೊಟ್ಟದ್ದು ಓರ್ವ ಸ್ಕಾಟಿಷ್, ನಂಬಿಯ ಐವತ್ತೆರಡು ಬಂಟರಿಗೆ ಕೆಲಸ ಕೊಟ್ಟು ತಂತ್ರಜ್ಞಾನ ಕದಿಯಲು ಬಿಟ್ಟು ವಿಕಾಸಕ್ಕೆ ಎಡೆ ಮಾಡಿಕೊಟ್ಟದ್ದು ಫ್ರಾನ್ಸ್, ಕಡೆಗೆ ಹಣಕ್ಕೆ ತಂತ್ರಜ್ಞಾನ ಮಾರಿದ್ದು ರಷ್ಯಾ! ಸ್ವಂತದ್ದು ಏನು ಎಂಬುದನ್ನು ಸಿನೆಮಾ ತೋರಿಸಿಲ್ಲ!!!! ರಾಕೆಟ್ರಿಯಲ್ಲಿ ಕೇವಲ ರಾಕೆಟೀಯರಿಂಗ್ ಆಯಾಮವಿದೆಯೆ ಹೊರತು ಇಂಜಿನಿಯರಿಂಗ್ ಆಯಾಮ ಅಯೋಮಯವಾಗಿದೆ.


ವಿದೇಶಿಯರ ಇಷ್ಟೆಲ್ಲಾ ಉತ್ಕೃಷ್ಠ ತಂತ್ರಜ್ಞಾನ ಬಿಡಿ, ಸಹಕಾರ ಉದಾರತೆಯನ್ನು ಶೋಷಿಸಿದ ವ್ಯಕ್ತಿ ಇನ್ನೇನು ದ್ರೋಹ ಮಾಡಿರಬಲ್ಲ ಎಂಬ ಅನುಮಾನ "ಕಿಡಿಯಿಲ್ಲದೆ ಹೊಗೆ ಏಳುವುದಿಲ್ಲ" ಎಂಬಂತೆ ಸತ್ಯವೇ ಆಗಿರಬಾರದೇಕೆ?!? ಎಂಬ ಅನುಮಾನವನ್ನು ಇಟ್ಟುಕೊಂಡು 'ಸದಾ ಪಿತೂರಿಯ ದಂತಕತೆಗಳ ಇತಿಹಾಸವನ್ನೇ ಹೊಂದಿರುವ ಕಾಮ್ಯುನಿಸ್ಟ್' ಪ್ರಭಾವದ ಕೇರಳ ಕೆಲವು ಅತೃಪ್ತ ಇಸ್ರೋ ಆತ್ಮಗಳು ಮತ್ತು ಸ್ಥಳೀಯ ಪೊಲೀಸ್ ಸಹಕಾರದೊಂದಿಗೆ ಪಿತೂರಿ ಮಾಡಿ ನಂಬಿಯನ್ನು ಜೈಲಿಗೆ ಹಾಕಿ ಚಿತ್ರಹಿಂಸೆ ಕೊಡುವುದು ಅತ್ಯಂತ ನಾಟಕೀಯ ಎನಿಸುವುದಿಲ್ಲವೇ!


ಇನ್ನು ಇಂತಹ ಯಕಶ್ಚಿತ್ ಮೊಕದ್ದಮೆ ಸುಪ್ರೀಂ ಕೋರ್ಟಿಗೆ ಹೋಗಿ ಇಪ್ಪತ್ತು ವರ್ಷಕ್ಕೂ ಮಿಕ್ಕಿ ನ್ಯಾಯ ನಿರ್ಣಯಕ್ಕೆ ಸಮಯ ತೆಗೆದುಕೊಂಡಿರುವುದರ ಬಗ್ಗೆ ಕಿಂಚಿತ್ತೂ ಕಳವಳ ಪಡದೆ ದೇಶದ ಬಹುಪಾಲು ಜನ ಈ ಕರುಣಾಜನಕ ಕತೆ ಕೇಳಿ/ನೋಡಿ ದೇಶಭಕ್ತಿಯನ್ನು ತುಂಬಿಕೊಳ್ಳುತ್ತಿರುವುದನ್ನು ಬಹುಪರಾಕ್ ಹೇಳುತ್ತಿರುವುದನ್ನು ನೋಡಿದರೆ ಭಾವುಕ ಲೋಲುಪ್ತತೆಯ ಇತಿಹಾಸ ಅನಾವರಣಗೊಳ್ಳುತ್ತದೆ. ಸಿಪಾಯಿ ದಂಗೆ, ಬ್ರಿಟಿಷ್ - ಭಾರತೀಯ ಎಂಬ ಸ್ವಾತಂತ್ಯ ಚಳುವಳಿ, ನಂತರದ ಹಿಂದೂ - ಮುಸ್ಲಿಂ ವಿಭಜನೆ, ಮುಂದೆ ಸ್ಪೃಶ್ಯ - ಅಸ್ಪ್ರಶ್ಯ, ಮನುಸ್ಮೃತಿ, ಆರ್ಯ - ದ್ರಾವಿಡ, ಎಡ - ಬಲ ಮುಂತಾದ ಪಿತೂರಿಗಳ ಮೇಲೆ ಪಿತೂರಿಗಳ ಭಾವುಕ ಲೋಲುಪ್ತತೆಯಲ್ಲಿ ಇಂದಿನವರೆಗೂ ಮುಳುಗಿರುವ ಮತ್ತು ವಿಭಜನೆ ಆಗುತ್ತಲೇ ಇರುವ ದೇಶದ ಜನರನ್ನು ನಂಬಿಸಿ ಮೋಸ ಮಾಡುವ ಪರಿ ರಾಕೆಟ್ರಿ ನಂಬಿಯ ಇಡೀ ಕತೆಯಲ್ಲೇ ಇಂಜಿನಿಯರಿಂಗಿಗಿಂತ ಹೆಚ್ಚಾಗಿ ರಾಕೆಟೀಯರಿಂಗ್ ಆಗಿ ತೆರೆದುಕೊಂಡಿದೆ. ರಾಕೆಟೀಯರಿಂಗೇ ರಾಕೆಟ್ರಿ ಎನಿಸುವುದಲ್ಲದೆ ಪ್ರಚ್ಛನ್ನ ಪ್ರಾಮಾಣಿಕತೆಯ ದೇಶಭಕ್ತಿಯೂ ಎನಿಸಿ ಪರಮೋಚ್ಚ ಗೌರವವನ್ನು ಗಳಿಸಿದ್ದು ಸಹ ರಾಕೆಟೀಯರಿಂಗ್ ಎನಿಸಿಬಿಡುತ್ತದೆ.


ನಾನು ಖುದ್ದು ಕಂಡಂತೆ ಇಸ್ರೋ ಮತ್ತು DRDO ಸಂಸ್ಥೆಗಳಲ್ಲಿ ಸಾಕಷ್ಟು ದೇಶನಿಷ್ಠ ಪ್ರತಿಭಾವಂತ ಮತ್ತು ನಿರ್ಭೀತ ಇಂಜಿನಿಯರುಗಳಿದ್ದಾರೆ. ಅಂತಹ ಪ್ರತಿಭಾವಂತ ನಿರ್ಭೀತರು ಇಂತಹ ಅನ್ಯಾಯದ ವಿರುದ್ಧ ದನಿಯೆತ್ತದೆ ಇರುತ್ತಿದ್ದರೇ?!


 ಒಟ್ಟಿನಲ್ಲಿ ಈ ಎಲ್ಲಾ ರಾಕೆಟೀಯರಿಂಗ್ ಮೀರಿ ಸತ್ಯದ ಭಾರತ ದರ್ಶನವನ್ನು ಭಾರತ ಕಂಡುಕೊಳ್ಳುವುದು ಯಾವಾಗ ಎಂದು ನಿತ್ಯವೂ ಪರಿತಪಿಸುವ ನನ್ನಂತಹ ಅನಿವಾಸಿ ಸಾಗರೋತ್ತರ ಭಾರತೀಯನ ಅಳಲು ಮಾತ್ರ ರಾಕೆಟ್ಟಿನಂತೆ ಮುಗಿಲು ಮುಟ್ಟಿದೆ. ಒಂದೊಮ್ಮೆ ತರ್ಕದ ತವರೂರಾಗಿದ್ದ ಭಾರತ ತರ್ಕದ ಎಳೆಯನ್ನಾದರೂ ಗ್ರಹಿಸಲಿ.


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ