ಒಕ್ಕಲಿಂಗ

ಕರ್ನಾಟಕದಲ್ಲಿ ರಂಗೇರಿರುವ ಜಾತಿ ಜಟಾಪಟಿಗೆ ಅಮೇರಿಕಾದ ಸ್ವಾತಂತ್ರ್ಯ ದಿನಾಚರಣೆಯ ಕಡು ಬೇಸಿಗೆ, ಕೆಂಪು-ಬಿಳಿ ಪಟ್ಟಾಪಟ್ಟಿ ಮತ್ತು ನಕ್ಷತ್ರಗಳ ಲಂಗೋಟಿ ಹಾಕಿಸಿ ಅಖಾಡ ಸಿದ್ದ ಪಡಿಸಿದೆ ಎಂದೆಲ್ಲಾ ನೀವು ಅಂದುಕೊಂಡಿದ್ದರೆ ತಪ್ಪು. ಆ ಜಾತಿ ಜಟಾಪಟಿಯೇನಿದ್ದರೂ ಕರ್ನಾಟಕದಲ್ಲಿ ಮಾತ್ರ!

ಅಮೇರಿಕಾದ ನ್ಯೂಜೆರ್ಸಿಯಲ್ಲಿ ಒಕ್ಕಲಿಗ ಪರಿಷತ್ ಮತ್ತು ಶಿಕಾಗೋದಲ್ಲಿ ವೀರಶೈವ ಸಮಾಜಗಳು ತಮ್ಮ ತಮ್ಮ ಸಮ್ಮೇಳನಗಳನ್ನು ಏರ್ಪಡಿಸಿಕೊಂಡಿವೆ.  ಆದರೆ ಇದನ್ನು ಈ ಎರಡು ಜಾತಿಗಳ ಶಕ್ತಿ ಪ್ರದರ್ಶನವೆಂಬಂತೆ ಕರ್ನಾಟಕದ ಜಾತಿ ಬೆಂಬಲಿಗರು ಬಣ್ಣಿಸಿಕೊಳ್ಳುತ್ತಿದ್ದಾರೆ. ಅದೆಲ್ಲವೂ ಸುಳ್ಳು.  ಇಲ್ಲಿ ಒಕ್ಕಲಿಗರೂ ಮತ್ತು ವೀರಶೈವರು ಸೇರಿ ’ಒಕ್ಕಲಿಂಗ’ರಾಗಿದ್ದಾರೆ.  ಈ ಸಂಘಗಳನ್ನು ಪ್ರಮುಖವಾಗಿ ತಮ್ಮ ಮುಂದಿನ ಪೀಳಿಗೆಗೆ ತಮ್ಮ ಸಂಸ್ಕೃತಿಯ ಪರಿಚಯವಿರಲಿ ಎಂಬುದೊಂದೇ ಈ ಸಂಘಗಳ ಘನ ಉದ್ದೇಶ.

ಒಕ್ಕಲಿಗ ಪರಿಷತ್ ಕೃಷ್ಣೇಗೌಡರ ಹಾಸ್ಯ, ನವೀನ್ ಸಜ್ಜು ಮತ್ತು ಶಮಿತಾ ಮಲ್ನಾಡ್ ಸಂಗೀತವೇರ್ಪಡಿಸಿದ್ದರೆ, ವೀರಶೈವ ಸಮಾಜ ಸಿದ್ದೇಶ್ವರ ಸ್ವಾಮೀಜಿ,ಸುತ್ತೂರು ಸ್ವಾಮಿಗಳು, ಸಿರಿಗೆರೆ ಮತ್ತು ವಚನಾನಂದ ಸ್ವಾಮಿಗಳ ಆಶೀರ್ವಚನಗಳೊಂದಿಗೆ ಡಾ. ಮೃತ್ಯುಂಜಯ ಶೆಟ್ಟರ್ ಅವರ ವಚನ ಸಂಗೀತ, ಅನುಭವ ಗೋಷ್ಠಿಗಳನ್ನು ಏರ್ಪಡಿಸಿದೆ.

ಒಕ್ಕಲಿಗ ಸಮಾಜದ ಕಾರ್ಯಕ್ರಮಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಬರುತ್ತಿದ್ದಾರೆಂದು ಕರ್ನಾಟಕದ ತುಂಬ ಸುದ್ದಿಯಾಗಿದ್ದರೂ, ಒಕ್ಕಲಿಗ ಪರಿಷತ್ ಆ ಕುರಿತು ಯಾವುದೇ ಕಾರ್ಯಕ್ರಮವನ್ನು ಪ್ರಕಟಿಸಿಲ್ಲ.  ಹಾಗಾಗಿ ದೇವೇಗೌಡ ಮತ್ತು ಮಕ್ಕಳು ಈ ಕಾರ್ಯಕ್ರಮಕ್ಕೇ ಬರುತ್ತಿದ್ದಾರೋ ಅಥವಾ ಬೇರೆ ಉದ್ದೇಶಕ್ಕೆ ಬರುತ್ತಿದ್ದಾರೋ ಗೊತ್ತಿಲ್ಲ. ದೇವೇಗೌಡರ ಒಳಸುಳಿಗಳನ್ನು ಬಲ್ಲವರಾರು?  ಸಾಮಾನ್ಯವಾಗಿ ಒಕ್ಕಲಿಗ ಪರಿಷತ್ ಅಮೆರಿಕ, ಸಭ್ಯ ರಾಜಕಾರಣಿ ಎನ್ನುವ ಎಸ್.ಎಮ್. ಕೃಷ್ಣ ಅವರನ್ನು ಇಷ್ಟಪಡುತ್ತದೆ.

ಸಾಮಾನ್ಯವಾಗಿ ಇಲ್ಲಿನ ಭಾರತೀಯರು ತಮ್ಮ ಅಲ್ಪಸಂಖ್ಯೆಯ ಕಾರಣದಿಂದಲೋ,ವಿಶಿಷ್ಟ ಸಂಸ್ಕೃತಿಯ ದೆಸೆಯಿಂದಲೋ ಅಷ್ಟಾಗಿ ಮುಖ್ಯವಾಹಿನಿಯಲ್ಲಿ ಬೆರೆಯದೇ ತಮ್ಮ ತಮ್ಮ ಭಾರತೀಯ ಮೂಲದ ಸ್ನೇಹಿತರುಗಳನ್ನೇ ಕಂಡುಕೊಂಡು ಸ್ನೇಹಸಂಬಂಧಗಳನ್ನು ಹೊಂದಿರುತ್ತಾರೆ.  ಎಪ್ಪತ್ತರ ದಶಕ ಭಾರತೀಯ ಮೂಲದ ಡಾಕ್ಟರರುಗಳ ವಲಸೆಯ ಅಲೆಯಾದರೆ, ತೊಂಬತ್ತರ ದಶಕ ಐ.ಟಿ. ವಲಸಿಗರ ಅಲೆಯಾಯಿತು.  ಈ ಅಲೆಗಳಲ್ಲಿ ಬಂದು ನೆಲೆಸಿರುವ ಭಾರತೀಯ ಮೂಲದವರು ತಮ್ಮ ತಮ್ಮ ಭಾಷೆಗಳ/ರಾಜ್ಯಗಳ ಹೆಸರಿನಲ್ಲಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡು ತಮ್ಮ ಸಂಸ್ಕೃತಿಯ ನೆನಹನ್ನು ತಮ್ಮತಮ್ಮಲ್ಲೇ ಹಂಚಿಕೊಳ್ಳುತ್ತಾರೆ.

ವೀರಶೈವರೆಲ್ಲಾ ಉತ್ತರ ಅಮೇರಿಕಾ ವೀರಶೈವ ಸಮಾಜವನ್ನು ಎಪ್ಪಂತೆಂಟರಲ್ಲೇ ಸ್ಥಾಪಿಸಿಕೊಂಡಿದ್ದರೆ, ಅಮೇರಿಕಾ ಒಕ್ಕಲಿಗರ ಪರಿಷತ್ ತೊಂಬತ್ತೊಂದರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಹಾಗೆಯೇ ಹವ್ಯಕರ ಸಂಘ, ಮಾಧ್ವರ ಸಂಘ, ಇತ್ಯಾದಿ,ಇತ್ಯಾದಿಗಳೂ ಇವೆ. ಈ ಸಂಘಗಳ ಮೂಲ ಉದ್ದೇಶ ತಮ್ಮ ಮಕ್ಕಳಿಗೆ ಆದಷ್ಟೂ ತಮ್ಮ ಜಾತಿ ಬಳಗದಲ್ಲೇ ಸ್ನೇಹ, ಪ್ರೇಮಗಳಾಗಿ ಮದುವೆಯಾಗುವಂತಾಗಲಿ ಎಂಬುದು. ಅದು ತಕ್ಕ ಮಟ್ಟಿಗೆ ಆಗಿದೆ ಕೂಡ.

ಭಾರತೀಯಮೇರಿಕನ್ನರಲ್ಲಿ ಆದಿ ವಲಸೆಗಾರ ವರ್ಗದ ಕೆಲವರು ಅಮೇರಿಕಾದಲ್ಲಿದ್ದಾಗ ಇಡ್ಲಿ, ದೋಸೆ,ಭಾರತೀಯ ತಿನಿಸು ಬಿಟ್ಟರೆ ಮತ್ತಿನ್ನೊಂದನ್ನು ಮೂಸದ,ಭಾರತಕ್ಕೆ ರಜೆಗೆ ಹೋದಾಗ ಪಿಜ್ಜಾ,ಬರ್ಗರ್, ಪಾಸ್ತಾ ಎಂದೆಲ್ಲಾ ತಮ್ಮ ಸಂಬಂಧಿಗಳನ್ನು ಗೋಳು ಹುಯ್ದುಕೊಳ್ಳುವ; ಅಮೇರಿಕಾದ ಸುಡು ಬೇಸಿಗೆಯಲ್ಲಿ ದುಪ್ಪಟ್ಟಾಗಳನ್ನು ಚಳಿ ಬಂದವರಂತೇ ಹೊದ್ದು ಭಾರತೀಯ ಸಂಸ್ಕೃತಿಯ ರಾಯಭಾರಿಗಳಂತೆ ತಿರುಗುವ, ಬೆಂಗಳೂರಿಗೆ ಬಂದೊಡನೆ ಅಮೇರಿಕಾದ ರಾಯಭಾರಿಗಳಾಗುವ ವರ್ಗ. "ವೆನ್ ಯು ಆರ್ ಇನ್ ರೋಮ್, ಬಿ ಲೈಕ್ ರೋಮನ್" ಎಂಬ ನಾಣ್ಣುಡಿಯನ್ನು ಇವರನ್ನು ನೋಡಿಯೇ ಸೃಷ್ಟಿಸಿದರೆಂದೆನಿಸುತ್ತಹ ವರ್ಗ! ಇಂತಹ ವರ್ಗ ಈ ಸಂಘಗಳ ಪ್ರಮುಖ ಪೋಷಕರು ಮತ್ತು ಸದಸ್ಯರು.

ಇರಲಿ, ಸಾಮಾನ್ಯವಾಗಿ ಉನ್ನತ ಶಿಕ್ಷಣವನ್ನು ಪಡೆದು, ಉತ್ತಮ ಬುದ್ದಿಮತ್ತೆಯನ್ನು ಹೊಂದಿ,ಅಮೇರಿಕಾ ಸೇರಿ, ಇಲ್ಲಿನ ಪ್ರಜೆಗಳಾದರೂ ತಮ್ಮ ಸುಪ್ತ ಜಾತೀಯತೆಯನ್ನು ತೊರೆಯಲಾಗದಷ್ಟು ಜಾತಿಗಳು ನಮ್ಮನ್ನು ಆವರಿಸಿಕೊಂಡಿವೆ.  ಭಾರತದಲ್ಲಿಯೂ ಕೂಡ ವಿದ್ಯಾವಂತರಾದಷ್ಟು ಜಾತಿಜಾಗೃತರಾಗುತ್ತಾರೆಯೇ ಹೊರತು ಜಾತಿಪರಿಧಿಯ ಹೊರಕ್ಕೆ ಬರುವವರು ಕಡಿಮೆಯೇ! ಇದು ಸ್ವತಂತ್ರ ಭಾರತದ ಸಾಮಾಜಿಕತೆಯ ವಿಕಾಸವೋ ವಿಕಾರವೋ, ಅಥವಾ ಭಾರತ ಸ್ವಾತಂತ್ರ್ಯಾ ನಂತರದ ಶಿಕ್ಷಣ ಕ್ರಾಂತಿಯ ಪರಿಣಾಮವೋ ಅರಿಯೇ! ಒಟ್ಟಾರೆ ಭಾರತ ಎತ್ತಲೋ ಪ್ರಗತಿಸುತ್ತಿದೆ.

’ಹಲವು ಕಾಲ ಹಂಸೆಯ ಸಂಗದಲ್ಲಿದ್ದರೇನು, ಬಕ ಶುಚಿಯಾಗಬಲ್ಲುದೇ?ಗಂಗಾನದಿಯಲ್ಲಿದ್ದರೇನು, ಪಾಷಾಣ ಮೃದುವಾಗಬಲ್ಲುದೇ? ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು, ಒಣ ಕೊರಡು ಕೊನರಿ ಫ಼ಲವಾಗಬಲ್ಲುದೇ?ಕಾಶೀಕ್ಷೇತ್ರದಲ್ಲಿ ಒಂದು ಶುನಕವಿದ್ದರೇನು, ಅದರ ಹಾಲು ಪಂಚಾಮೃತಕ್ಕೆ ಸಲುವುದೇ?ತೀರ್ಥದಲೊಂದು ಗಾರ್ದಭನಿದ್ದರೇನು,ಕಾರಣಿಕನಾಗಬಲ್ಲುದೇ? ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು,ಬಿಳುಹಾಗಬಲ್ಲುದೇ? ಇದ ಕಾರಣ ಕೂಡಲಸಂಗನ ಶರಣರ ಸನ್ನಿಧಿಯಲ್ಲಿ ಅಸಜ್ಜನನಿದ್ದರೇನು,ಸದ್ಭಕ್ತನಾಗಬಲ್ಲನೇ?’ ಅಮೇರಿಕಾದಲ್ಲಿದ್ದರೇನು ಭಾರತದಲ್ಲಿದ್ದರೇನು,ವಿದ್ಯೆಯಿದ್ದರೇನು ಅವಿದ್ಯೆಯಾದರೇನು, ಭಾರತೀಯ ಜಾತಿಮುಕ್ತನಾಗಬಲ್ಲನೇ?

ಈ ಮೊದಲನೇ ಹೊಚ್ಚ ಹೊಸ ಭಾರತೀಯ ವಲಸೆಗಾರರ ವರ್ಗ,ಏನೇ ಸಂಘ, ದತ್ತಿ,ಸಮ್ಮೇಳನಗಳೆಂದು ತಿಪ್ಪರಲಾಗ ಹಾಕಿದರೂ ಇವರ ಮಕ್ಕಳುಗಳ ಎರಡನೇ ಪೀಳಿಗೆ, ಇದನ್ನು ಗಂಭೀರವಾಗಿ ಪರಿಗಣಿಸದೇ "ಸಮ್ ಕಲ್ಚರಲ್ ಫ಼ೆಸ್ಟಿವಲ್’ ಅಥವಾ ’ಫ಼್ಯಾನ್ಸಿ ಡ್ರೆಸ್ಸಿಂಗ್’ ಎಂದು ಸಂತೋಷಿಸುತ್ತಾರೆಯೇ ಹೊರತು ಅದಕ್ಕಿಂತ ಹೆಚ್ಚಾಗಿ ಏನನ್ನೂ ಈ ಸಂಘಗಳಿಂದ ಅರ್ಥೈಸಿಕೊಳ್ಳಲಾರರು. ಈ ಮಕ್ಕಳು ಯಾವುದೇ ಜಾತಿಗಳ ಪರಿಚಯವಿಲ್ಲದೇ ಎಲ್ಲಾ ಭಾರತೀಯರನ್ನು ಒಂದೇ ಎಂದು ಪರಿಗಣಿಸುತ್ತಾರೆ. ಅಬ್ಬಬ್ಬಾ ಎಂದರೆ ಹಿಂದೂ/ಮುಸ್ಲಿಂ ಎಂದೋ,ಸಸ್ಯಹಾರೀ/ಮಾಂಸಹಾರೀ ಎಂದೋ ಹೆಚ್ಚೆಂದರೆ ಉತ್ತರ ಭಾರತೀಯ/ದಕ್ಷಿಣ ಭಾರತೀಯ ಎಂಬಲ್ಲಿಗೆ ತಮ್ಮನ್ನು ಸೀಮಿತಗೊಳಿಸುತ್ತಾರೆಯೇ ವಿನಹಾ ಯಾವುದೇ ಜಾತಿಗಳಿಂದ ಗುರುತಿಸಲಾಗದಷ್ಟರ ಮಟ್ಟಿಗೆ ಮುಗ್ಧರಾಗಿದ್ದಾರೆ.

ಇನ್ನು ಮೊದಲನೇ ಪೀಳಿಗೆ, ತಮ್ಮ ನವ್ಯ ಪೀಳಿಗೆಗೆ ತಮ್ಮ ಭಾಷೆಗಳನ್ನು ಕಲಿಸಲು ಏನೆಲ್ಲಾ ಪ್ರಯತ್ನ ಪಟ್ಟರೂ ಅದು ಅಳಿಸಿಹೋಗುತ್ತಿದೆಯೆಂದೇ ಹೇಳಬೇಕು.  ಇದೇಕೆ ಹೀಗೆ ಎಂದು ನನಗೂ ಅರ್ಥವಾಗಿಲ್ಲ. ಆದರೂ ಭಾರತದಲ್ಲಿ ಅನೇಕರು ಬಹುಭಾಷಾ ಪಂಡಿತರಾಗಿರುತ್ತಾರೆ. ಮನೆಮಾತು ಬೇರೆಯದೇ ಭಾಷೆಯಿದ್ದರೂ ತಾವು ವಾಸಿಸುವ ಆಯಾ ಪ್ರದೇಶದ ಪ್ರಾದೇಶಿಕ ಭಾಷೆಯನ್ನೂ ಮಾತನಾಡಬಲ್ಲವರಾಗಿರುತ್ತಾರೆ. ಬೆಂಗಳೂರು ಸೇರುವವರೆಗೆ ಕೇವಲ ಕನ್ನಡದಲ್ಲಷ್ಟೇ ನಿರರ್ಗಳವಾಗಿ ಮಾತನಾಡಲು ಬರುತ್ತಿದ್ದ ನನಗೆ,ಕೆಲವೇ ವರ್ಷಗಳ ಬೆಂಗಳೂರು ಕೃಪೆಯಿಂದ ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕನ್ನಡದಷ್ಟೇ ನಿರರ್ಗಳವಾಗಿ ಮಾತನಾಡುವುದು ಸಾಧ್ಯವಾಯಿತು.  ಇಲ್ಲಂತೂ ಕನ್ನಡದವರು, ತೆಲುಗರು, ತಮಿಳರು ನನ್ನ ಸ್ವಲ್ಪ ವಿಚಿತ್ರ ಎನ್ನುವಂತಹ ’ರವಿ ಹಂಜ್’ ಹೆಸರಿನ ದೆಸೆಯಿಂದಾಗಿ ನನ್ನ ಹಿನ್ನೆಲೆಯನ್ನು ಗುರುತಿಸಲಾಗದೆ,ನನ್ನನ್ನು ತಮ್ಮ ತಮ್ಮ ರಾಜ್ಯಗಳಲ್ಲಿ ಸೆಟ್ಲ್ ಆಗಿರುವ "ಬಡ್ಡಿ ಲೇವಾದೇವಿಯ ಮಾರ್ವಾಡಿಯವನಿರಬಹುದು" ಎಂದುಕೊಳ್ಳುತ್ತಾರೆ.  ಇನ್ನು ಉತ್ತರ ಭಾರತೀಯರೋ ನನ್ನನ್ನು ತಮ್ಮವನೆಂದೇ ಪರಿಗಣಿಸುತ್ತಾರೆ.  ಒಟ್ಟಾರೆ ನನ್ನ ಹೆಸರಿನ ದೆಸೆಯಿಂದಂತೂ ನಾನು ಎಲ್ಲರಿಗೂ ಸಲ್ಲುವ ಭಾರತೀಯನಾಗಿದ್ದೇನೆ!

ಇರಲಿ, ಆದರೆ ಇಲ್ಲಿನ ಬಹುತೇಕ ಭಾರತೀಯ ಮೂಲದ ಮಕ್ಕಳಿಗೆ ಮಾತ್ರ ಇಂಗ್ಲಿಷ್ ಬಿಟ್ಟರೆ ತಮ್ಮ ಮನೆಮಾತಾಗಲೀ ಇನ್ಯಾವ ಭಾಷೆಯಾಗಲಿ ಕಲಿತರೂ ಮಾತನಾಡಲಾಗದಷ್ಟು ಪರಿಣಿತಿ ಬರುವುದೇ ಇಲ್ಲ.  ಇದು ಅಮೇರಿಕಾದ ಗಾಳಿ, ನೀರಿನ ಪರಿಣಾಮವೆಂದೇ ನನಗನಿಸುತ್ತದೆ.  ಭಾಷಾ ಪಂಡಿತ ಪೋಷಕರಿದ್ದರೂ ಅಷ್ಟೇ, ಅನ್ಯಭಾಷಾ ತರಗತಿಗಳಿಗೆ ಕಳುಹಿಸಿದರೂ ಅಷ್ಟೇ. ಈ ಮಕ್ಕಳು ತಮ್ಮ ಮಾತೃಭಾಷೆಯನ್ನಷ್ಟೇ ಮಾತನಾಡುವವರಾಗಿದ್ದರೂ ಶಾಲೆಗೆ ಸೇರಿದೊಡನೆ ತಮ್ಮ ಮಾತೃಭಾಷೆಯನ್ನು ಕೆಲವೇ ತಿಂಗಳುಗಳಲ್ಲಿ ಮರೆತುಬಿಡುತ್ತಾರೆ. ನಂತರ ಅದು ಅಳಿಸಿಯೇ ಹೊಗುತ್ತದೆ. ಇವರು ತಮ್ಮ ಮಾತೃಭಾಷೆಯಲ್ಲಿ ಓದಲು/ಬರೆಯಲು ಕಲಿತರೂ ಅದು ಕೇವಲ ಓದಲು ಮತ್ತು ಬರೆಯುವಲ್ಲಿಗೆ ಸೀಮಿತವಾಗುತ್ತದಲ್ಲದೇ, ಅದರ ಅರ್ಥವೇ ಇವರಿಗೆ ಗೊತ್ತಾಗುವುದಿಲ್ಲ. ಅವರ ಮನೆಗಳಲ್ಲಿ ಇಂಗ್ಲಿಷ್ ಮಾತನಾಡದೇ ಅವರವರ ಮನೆಮಾತಿನಲ್ಲಿಯೇ ಅವರ ಪೋಷಕರು ಮಾತನಾಡುತ್ತಿದ್ದರೂ ಕೂಡ ಅವರುಗಳ ಮಾತೃಭಾಷೆ ಈ ಮಕ್ಕಳಿಗೆ ಅಷ್ಟಕ್ಕಷ್ಟೇ. ಇದು ಏಕೆ ಹೀಗೆಂದು ನನಗೆ ಇದುವರೆಗೂ ಅರ್ಥವಾಗದೇ ಒಂದು ರೀತಿಯ ಚಿದಂಬರ ರಹಸ್ಯವೇ ಆಗಿದೆ.

ಎರಡನೇ ಪೀಳಿಗೆಯ ವಿಷಯ ಹೀಗಿರುವಾಗ, ಮೊದಲ ಪೀಳಿಗೆಯ ಹಲವರು ಕನ್ನಡ ಪೀಠ, ತಮಿಳು ಪೀಠ, ತೆಲುಗು ಪೀಠ....ಇನ್ನಿತರೆ ಭಾಷೆಗಳ ಪೀಠಗಳನ್ನು ಇಲ್ಲಿನ ಯಾವುದಾದರೂ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲು ಪ್ರಯತ್ನಪಡುತ್ತಿರುತ್ತಾರೆ.  ಮನೆಯಲ್ಲೇ ತಮ್ಮ ಮಕ್ಕಳಿಗೆ ತಮ್ಮ ಮನೆಮಾತು ಕಲಿಸಲಾಗದ ಇವರು ಪೀಠಗಳನ್ನು ಸ್ಥಾಪಿಸಿ ಅದ್ಯಾರಿಗೆ ಭಾರತೀಯ ಭಾಷೆಗಳನ್ನು ಕಲಿಸುವರೋ ನಾನರಿಯೆ!  ಬಹುಶಃ ಇದು ತಾಯ್ನಾಡಿನಲ್ಲಿನ ಪ್ರಶಸ್ತಿಗಳ ಹಪಹಪಿಯೋ ಅಥವಾ ಪ್ರಚಾರಪ್ರಿಯತೆಯ ತೀಟೆಯೋ ಇರಬಹುದು.

ಈ ಮಾತೃಭಾಷೆ ಬಾರದು ಎಂಬ ಕೊರತೆಯೊಂದನ್ನು ಬಿಟ್ಟರೆ, ಈ ಮಕ್ಕಳು ಭಾರತೀಯರು ಹೆಮ್ಮೆ ಪಡಬೇಕಾದಂತಹ ಪೀಳಿಗೆ ಎಂದೇ ಹೇಳಬಹುದು. ಇಲ್ಲಿನ ಪರಿಸರ,ಶಿಕ್ಷಣ, ಮೌಲ್ಯಗಳನ್ನು (ಭಾರತದಲ್ಲಿ ಈ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಯ ಅಪಪ್ರಚಾರವೇ ಇದ್ದು, ಇಲ್ಲಿನ ಅಸಲೀ ವಿಷಯಗಳ ನೈಜ ತಿಳುವಳಿಕೆ ಅಷ್ಟಾಗಿ ಇಲ್ಲ) ನೋಡುತ್ತ, ಕೇಳುತ್ತ ಬೆಳೆಯುವ ಈ ಮಕ್ಕಳು ಇದ್ದುದರಲ್ಲಿ ಅತ್ಯಂತ ಬುದ್ದಿವಂತರೂ,ವಿವೇಚನೆಯಿರುವವರೂ ಮತ್ತು ಪ್ರಾಮಾಣಿಕರೂ ಆಗಿರುತ್ತಾರೆ.  ಇವರ ಪೋಷಕರು ಏನೇ ಸಂಘ/ಸಮ್ಮೇಳನಗಳನ್ನು ಮಾಡಿ,ಸಂಸ್ಕೃತಿಯ ನೆಪವಾಗಿ ತಮ್ಮ ಜಾತಿಯ ಅರಿವು ಮೂಡಿಸುವ ಪ್ರಯತ್ನಗಳು ಎಳ್ಳಷ್ಟೂ ಫ಼ಲಪ್ರದವಾಗಿರುವುದನ್ನು ನಾನಂತೂ ನೋಡಿಲ್ಲ.
ನನ್ನ ಕಂಪೆನಿ ಪರವಾಗಿ ಸಾಕಷ್ಟು ಕ್ಯಾಂಪಸ್ ಇಂಟರ್ವ್ಯೂಗಳನ್ನು ಮಾಡಿ, ಈ ರೀತಿಯ ಭಾರತೀಯ ಮೂಲದ ಎರಡನೇ ಪೀಳಿಗೆಯ ಅನೇಕರನ್ನು ನಮ್ಮ ಕಂಪೆನಿಗೆ ಸೇರಿಸಿಕೊಂಡಿದ್ದೇನೆ. ಹಾಗೆಯೇ ಅವರೊಂದಿಗೆ ಕೆಲಸವನ್ನೂ ಮಾಡಿದ್ದೇನೆ. ಆ ಒಂದು ಅನುಭವವಿರುವುದರಿಂದ ಮೇಲಿನ ಮಾತುಗಳನ್ನು ನಾನು ಧೃಢವಾಗಿ ಹೇಳಬಲ್ಲೆ. ಅಷ್ಟೇ ಅಲ್ಲ, ಇದೇ ರೀತಿ ಭಾರತದಲ್ಲಿಯೂ ನಮ್ಮ ಯುವಜನತೆಗೆ ಜಾತಿ ಪರಿಧಿಯ ಪರಿಮಿತಿಗೆ ಸಿಕ್ಕದಂತಹ ಮುಕ್ತ ಪರಿಸರವಿರುವಂತಿದ್ದರೆ? ಎಂದು ಇವರನ್ನು ನೋಡಿದಾಗೆಲ್ಲ ಅಂದುಕೊಳ್ಳುತ್ತೇನೆ.

ಇರಲಿ, ಭಾರತದಲ್ಲಿಯೇ ಹದಿಹರೆಯದವರು ಏನೇನೋ ಸಮಸ್ಯೆಗಳಿಗೆ ಸಿಲುಕುತ್ತಿರುವಾಗ ಅಮೇರಿಕಾದ ಸ್ವಚ್ಛಂದ ವಾತಾವರಣದಲ್ಲಿ ಈ ಯುವಕರು ಹದಿಹರೆಯದ ಸಮಸ್ಯೆಗಳಿಗೆ ಸಿಲುಕದೇ ಇರಲು ಹೇಗೆ ಸಾಧ್ಯ?ಇಲ್ಲದ್ದನ್ನೆಲ್ಲಾ ಹೇಳಬೇಡಿ ಎನ್ನುವಿರಾ?  ನಾನು ಗಮನಿಸಿದಂತೆ,ಈ ಸಮಸ್ಯೆ ಭಾರತೀಯ ಮೂಲದವರನ್ನು ಅಷ್ಟಾಗಿ ಕಾಡುತ್ತಿಲ್ಲವೆಂದೇ ಅನಿಸುತ್ತದೆ. ಈ ನವಪೀಳಿಗೆ ತಮ್ಮ ಅಲ್ಪಸಂಖ್ಯಾತತೆಯ ಕಾರಣದಿಂದಲೋ ಏನೋ ಒಂದು ರೀತಿಯಲ್ಲಿ ಸದಾ ಜಾಗೃತರಾಗಿರುತ್ತಾರೆ.

ಹಾಗೆಯೇ ಯಾರಾದರೂ ತಕ್ಷಣಕ್ಕೆ ಭಾರತೀಯರೆಂದು ಗುರುತಿಸಬಹುದಾದ ಚಹರೆಯಿಂದಾಗಿ ಈ ರೀತಿಯ ಜಾಗೃತಿ ಬೆಳೆದುಬಂದಿದೆಯೆಂದೇ ನನಗನಿಸುತ್ತದೆ! ಈ ಜಾಗೃತಿಯ ಪರಿಣಾಮದಿಂದಲೇ ಏನೋ ಅಷ್ಟಾಗಿ ಯುವ ಸಮಸ್ಯೆಗಳಿಗೆ ಸಿಲುಕದೇ ತಮ್ಮ ಹದಿಹರೆಯದ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸುತ್ತ ಬಹುಪಾಲು ಯುವಜನತೆ ಯಶಸ್ವಿಯಾಗಿದ್ದಾರೆ ಮತ್ತು ಆಗುತ್ತಿದ್ದಾರೆ ಎಂದೇ ಅನಿಸುತ್ತದೆ.

’ಪ್ರತ್ಯಕ್ಷವಾಗಿ ನೋಡಿದ್ದರೂ ಪರಾಮರ್ಶಿಸಿ ನೋಡು’ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ಈ ಮಕ್ಕಳು ಯಾವುದೇ ತತ್ವವನ್ನೋ,ವಿಚಾರವನ್ನೋ ಹೇಳಿದರೆ ಅದಕ್ಕೆ ನೂರೆಂಟು ಪ್ರಶ್ನೆಗಳನ್ನು ಹಾಕಿ,ಅರಿತು ನಂತರವೇ ಒಪ್ಪಿಕೊಳ್ಳುವಂತಹ ಶಾಲಾ ವಾತಾವರಣದಲ್ಲಿ ಬೆಳೆದಿರುವುದರಿಂದಲೂ ಮತ್ತು ಅವರುಗಳ ಪೋಷಕರು ತಮ್ಮ ಜಾತಿ/ಧರ್ಮಗಳ ಆಚರಣೆಗಳ ಬಗ್ಗೆ ತಿಳಿಸಿ, ಅವರುಗಳ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡುವ ಶಕ್ತಿಯನ್ನು ಹೊಂದಿರದ ಕಾರಣದಿಂದಲೂ, ಮತ್ತು ಪೋಷಕರು ಭಾರತದಲ್ಲಿಯ ಗದರಿಸುವಿಕೆಯ ರೀತಿ "ತಲೆಪ್ರತಿಷ್ಠೆ ಮಾಡಬೇಡ ಹೇಳಿದ್ದಷ್ಟನ್ನು ಮಾಡು" ಎಂದು ಇಲ್ಲಿನ ಪರಿಸರದಲ್ಲಿ ಹೇಳಲಾಗದ ಪರಿಣಾಮವಾಗಿಯೂ,ಈ ಯುವಶಕ್ತಿ ಜಾತಿ, ಅಂಧಶ್ರದ್ಧೆಗಳ ಬಗ್ಗೆ ಅಷ್ಟೊಂದು ಮಾಹಿತಿಯನ್ನು ಪಡೆದಿರಲಾರರು.

ಒಟ್ಟಾರೆ ಈ ಭಾರತೀಯ ಅಮೇರಿಕನ್ ಯುವ ಪೀಳಿಗೆ, "ಯಾತರ ಹೂವೇನು? ನಾತವಿದ್ದರೆ ಸಾಕು, ಜಾತಿಯಲಿ ಜಾತಿಯೆನಬೇಡ ಶಿವನೊಲಿದಾತನೇ ಜಾತ ಸರ್ವಜ್ಞ" ಎಂಬಂತೆ ಜಾತಿಪರಿಧಿಯ ಪರಿವೆ ಇಲ್ಲದೆ ಒಟ್ಟಿನಲ್ಲಿ ’ಭಾರತೀಯ ಅಮೇರಿಕನ್’ ಆಗಿದ್ದಾರೆ. ಇದೇ ರೀತಿ ಭಾರತದ ನಮ್ಮ ಸಮಾಜದಲ್ಲಿಯೂ "ಎಲುವಿನಾ ಕಾಯಕ್ಕೆ ಸಲೆ ಚರ್ಮದ ಹೊದಿಕೆ ಮಲಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ ಕುಲವಾವುದಯ್ಯ ಸರ್ವಜ್ಞ" ಎಂಬಂತಹ ಸ್ವಚ್ಛ ವಾತಾವರಣವಿದ್ದಿದ್ದರೆ ಭಾರತದಲ್ಲಿ ಇಂದು ’ಅಮೇರಿಕನ್ ಭಾರತೀಯ’ರಿರುತ್ತಿದ್ದರೋ ಏನೋ!

ಕಾಫಿ ಡೇ, ತೆರಿಗೆ ಭಯೋತ್ಪಾದನೆ!

ಒಂದು ಉದ್ಯಮ ಯಶಸ್ವಿಯಾಗಲು ಬಂಡವಾಳ, ಸಂಪನ್ಮೂಲ, ಗ್ರಾಹಕ ಶಕ್ತಿ, ಮತ್ತು ಯೋಜನೆ ಅವಶ್ಯಕ. ಅದರಲ್ಲೂ ಪ್ರಾಮಾಣಿತ ಸಿದ್ದ ಮಾದರಿಯ ವ್ಯವಹಾರ ಸೂತ್ರವಿದ್ದರಂತೂ ಅಂತಹ ವ್ಯವಹಾರಗಳು ಸೋಲುವ ಅವಕಾಶಗಳು ಕಡಿಮೆ. ಕೆಲವೊಮ್ಮೆ ಅಂತಹ ವ್ಯವಹಾರಗಳು ಕುದುರಲು ಕೊಂಚ ಸಮಯ ತೆಗೆದುಕೊಳ್ಳಬಹುದು. ಆದರೆ ಅದಕ್ಕೆ ತಕ್ಕಂತೆ ನಿರ್ವಹಣಾ ಬಂಡವಾಳವನ್ನು ಜೋಡಿಸಿಕೊಂಡಿದ್ದರೆ ಅಂತಹ ವ್ಯವಹಾರಗಳನ್ನು ಸ್ಥಿರವಾಗಿ ನಿಲ್ಲಿಸಬಹುದು. ಅದರಲ್ಲೂ ಮಾಡಲಿಚ್ಚಿಸಿರುವ ವ್ಯವಹಾರದಲ್ಲಿ ವಿದೇಶಿ ಶಿಕ್ಷಣ, ಅನುಭವ, ಕಾರ್ಯಕ್ಷಮತೆ, ನಿಷ್ಠೆ ಇರುವ ಸಹಾಯಹಸ್ತವಿದ್ದರಂತೂ ಯಶಸ್ಸು ಕಟ್ಟಿಟ್ಟದ್ದು.  ಅಂತಹ ಸೂತ್ರವಿದ್ದುದರಿಂದಲೇ ಕಾಫ಼ಿ ಡೇ ಮೊದಲ್ಗೊಂಡು ಇನ್ನೂ ಅನೇಕ ಕಂಪೆನಿಗಳು ಬೆಳೆದದ್ದು.  ಇಂತಹ ಯಶಸ್ವೀ ಉದ್ಯಮಗಳು ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿವೆ. ಟಾಟಾ, ಬಿರ್ಲಾ, ನಾರಾಯಣಮೂರ್ತಿ, ಮಲ್ಯ, ನೀರವ್ ಮೋದಿ, ಸಿದ್ದಾರ್ಥ ಮುಂತಾಗಿ ಪ್ರತಿಯೊಬ್ಬ ಉದ್ಯಮಿಯೂ ತಮ್ಮ ತಮ್ಮ ಉದ್ಯಮಗಳಲ್ಲಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ. ಅಲ್ಲಿನ ಉದ್ಯೋಗಿಗಳಲ್ಲಿ ಆಯಾಯ ಉದ್ದಿಮೆದಾರರ ಬಗ್ಗೆ ಹೆಮ್ಮೆ,ಅಭಿಮಾನ ಮೂಡುವುದು ಸಹಜ ಕೂಡ. ಅದರಲ್ಲೂ ಅವರು ಸ್ವಜಾತಿಯವರಾದರೆ ರೋಮಾಂಚನ!

ಹಾಗೆಯೇ ಅಂತಹ ಉದ್ಯಮಗಳು ನಲುಗಿದಾಗ, ಆ ನಲುಗುವಿಕೆಗೆ ಭಾವನಾತ್ಮಕ ಕಾರಣಗಳು ಸೇರಿಕೊಂಡರೆ ಹೊರಹೊಮ್ಮುವ ಅಭಿಪ್ರಾಯಗಳು ಪರಸ್ಪರ ವಿರೋಧಾಭಾಸಗಳಿಂದ ದ್ವಂದ್ವದ ಗೊಂದಲದ ಗೂಡಾಗಿರುತ್ತವೆ.

ಅಂತಹ ಒಬ್ಬ ಯಶಸ್ವೀ ಉದ್ಯಮಿ, ಹೊಸದಾಗಿ ಇನ್ಯಾವುದೋ ಉದ್ಯಮಕ್ಕೆ ಕೈ ಹಾಕಿ ನಷ್ಟ ಮಾಡಿಕೊಂಡು ದೇಶ ಬಿಟ್ಟು ಓಡಿಹೋದರೆ ಆತನ ಬಗ್ಗೆ ಮೂಡುವ ಅಭಿಪ್ರಾಯ, ಆತ ಆತ್ಮಹತ್ಯೆ ಮಾಡಿಕೊಂಡರೆ ಮೂಡುವ ಅಭಿಪ್ರಾಯಕ್ಕೆ ವಿರುದ್ಧವಾಗಿರುತ್ತದೆ. ಈ ಎರಡೂ ನಿದರ್ಶನಗಳು ನಮ್ಮ ಕರ್ನಾಟಕದಲ್ಲಿಯೇ ಆಗಿವೆ.

ಲಕ್ಷಾಂತರ ಹುದ್ದೆಗಳನ್ನು ಸೃಷ್ಟಿಸಿದ್ದ ವಿಜಯ್ ಮಲ್ಯ ತಮ್ಮ ಅದಮ್ಯ ಉತ್ಸಾಹದಲ್ಲಿ ನಾಗರೀಕ ವಿಮಾನಯಾನ ಉದ್ದಿಮೆ ಸ್ಥಾಪಿಸಿ ನಷ್ಟ ಅನುಭವಿಸಿ ದೇಶ ತೊರೆದಾಗ ಅವರ ಮೇಲೆ ಇಡೀ ದೇಶವೇ ಹರಿಹಾಯ್ದಿದ್ದಿತು.  ಯಾವುದೇ ತೆರಿಗೆ ವಂಚನೆಯಂತಹ ಅಪರಾಧವಿರದಿದ್ದ ಅವರು ಬ್ಯಾಂಕುಗಳ ಸಾಲ ತೀರಿಸದೆ ಓಡಿಹೋಗಿದ್ದರು. ಆಗ ಯಾವೊಬ್ಬ ಕನ್ನಡಿಗನೂ ಮಲ್ಯ ನಮ್ಮ ದ್ರಾವಿಡ, ಕನ್ನಡ ಹೆಮ್ಮೆ, ಅನ್ನ ಕೊಟ್ಟ ಧಣಿ, ಲಕ್ಷಾಂತರ ಉದ್ಯೋಗ ಸೃಷ್ಟಿಸಿದ ಸಂತ, ನಾವೆಲ್ಲಾ ಚಂದಾ ಎತ್ತಿ ಅವರ ಸಾಲ ತೀರಿಸುತ್ತೇವೆ ಎನ್ನಲಿಲ್ಲ.

ಈಗ ಅದೇ ಅದಮ್ಯ ಉತ್ಸಾಹದಲ್ಲಿ ಹೊಸ ಹೊಸ ಉದ್ದಿಮೆಗಳಲ್ಲಿ ತೊಡಗಿಸಿಕೊಳ್ಳುತ್ತಾ ನಷ್ಟ ಅನುಭವಿಸುವುದರೊಂದಿಗೆ ತೆರಿಗೆ ವಂಚನೆಯನ್ನು ಎದುರಿಸುತ್ತಿದ್ದ ಸಿದ್ದಾರ್ಥ ದುರದೃಷ್ಟವಶಾತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಅದರೊಟ್ಟಿಗೆ ಇಡೀ ದೇಶದ ಮರುಕವನ್ನೂ ಪಡೆದುಕೊಂಡಿದ್ದಾರೆ.  ಅದರಲ್ಲೂ ಕನ್ನಡಿಗರು ಇವರು ನಮ್ಮವರು ದ್ರಾವಿಡರು, ಇವರ ವಿರುದ್ಧ ಜಾತಿವ್ಯವಸ್ಥೆ, ಧರ್ಮ, ರಾಜಕೀಯ ಷಡ್ಯಂತ್ರ ಮಾಡಲಾಗಿದೆ ಎನ್ನುತ್ತ ಎಲ್ಲಾ ಸೂಕ್ಷ್ಮಗಳನ್ನೂ ಬಲ್ಲ ದಿವ್ಯಜ್ಞಾನಿಗಳಂತೆ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಒಂದು ವೇಳೆ ಮಲ್ಯ ಇದೇ ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಸಿದ್ಧಾರ್ಥರ ಕುರಿತಾದ ಅಭಿಪ್ರಾಯದಂತೆಯೇ ಜನತೆಯ ಅಭಿಪ್ರಾಯ ಇರುತ್ತಿದ್ದಿತೇ?  ಖಂಡಿತಾ ಇಲ್ಲ. ಏಕೆಂದರೆ ಮಲ್ಯ, ಜಾತಿ ಸಂಖ್ಯಾಶಾಸ್ತ್ರದ ಬೆಂಬಲವಿಲ್ಲದ ಒಬ್ಬ ನತದೃಷ್ಟ. ಜಾತಿ ಉಂಟು ಮಾಡುವ ರೋಮಾಂಚನವನ್ನು ಯಾವ ನೀತಿಯೂ ಉಂಟು ಮಾಡುವುದಿಲ್ಲವೆಂದು ರೈತ ಮುಖಂಡ ಪುಟ್ಟಣ್ಣಯ್ಯ ಹೇಳುತ್ತಿದ್ದರು. ಆ ಅಭಿಪ್ರಾಯ ಈ ಘಟನೆಯಲ್ಲಿ ಜ್ವಲಂತವಾಗಿ ಹೊಮ್ಮಿದೆ.

ಜಾತಿ, ಧರ್ಮ, ಆರ್ಯ, ದ್ರಾವಿಡ, ಕನ್ನಡ/ಕನ್ನಡೇತರ ಇಂತಹ ವಿಷಯಗಳು ವ್ಯವಹಾರ/ಉದ್ದಿಮೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆಂಬುದನ್ನು ನಾನಂತೂ ಅರಿಯೆ. ಉದ್ದಿಮೆಯೆಂದರೆ ಕೇವಲ ಬಂಡವಾಳ, ಸಂಪನ್ಮೂಲ, ಪ್ರಾಮಾಣಿತ ವ್ಯವಹಾರಸೂತ್ರ, ಗ್ರಾಹಕ ಆಕರ್ಷಣಾ ಸೂತ್ರ, ನಿರ್ವಹಣೆ ಮತ್ತು ವಿಸ್ತರಣಾ ಸೂತ್ರಗಳು ಮಾತ್ರ ಮುಖ್ಯವೆಂದುಕೊಂಡಿರುವ ನನಗೆ ಜಾತಿ, ಧರ್ಮಗಳೂ ಬಹುಮುಖ್ಯವೆಂಬುದುದನ್ನು ಒಪ್ಪಲಾಗುತ್ತಿಲ್ಲ. ಈ ರೀತಿ ಜಾತಿ/ಧರ್ಮಗಳು ಮುಖ್ಯವೆನ್ನುವ ಜಾಣರಿಗೆ ಮಲ್ಯ, ಸಿದ್ಧಾರ್ಥರು ಕೂಡ ಪ್ರಭಾವಿ ಕುಟುಂಬದಿಂದ ಬಂದವರಾದ್ದರಿಂದ ಯಶಸ್ಸು ಮಾಡಲು ಸಾಧ್ಯವಾಯಿತೆನ್ನಿ, ನಿಮ್ಮ ಮೇಲೆ ಹರಿಹಾಯುತ್ತಾರೆ. ಭಾರತದಲ್ಲಿ ಪಿತ್ರಾರ್ಜಿತವು ಇಂದಿರಾ, ರಾಜೀವ್, ರಾಹುಲ್, ಕುಮಾರಸ್ವಾಮಿ, ಸ್ಟಾಲಿನ್, ಜಗನ್, ಅಖಿಲೇಶ್, ಅಂಬಾನಿ ಪುತ್ರರು, ಸಿನೆಮಾದ ರಾಜಕುಮಾರ್ ಪುತ್ರರು ಹೀಗೆ ಎಲ್ಲಾ ರಂಗಗಳಲ್ಲಿಯೂ ಹಾಸುಹೊಕ್ಕಾಗಿದ್ದರೂ, ಸಾವು ಅದೆಲ್ಲವನ್ನೂ ತೊಳೆದು ಪ್ರತಿಭೆಯೆನ್ನುವ ಸರ್ಟಿಫಿಕೇಟ್ ಕೊಡಿಸಿಬಿಡುತ್ತದೆ. ಹಾಗೊಂದು ಭಾವುಕತೆಯನ್ನು ಹೊರಗಿಟ್ಟು ಸ್ಥಿತಪ್ರಜ್ಞತೆಯಿಂದ ಸನ್ನಿವೇಶವನ್ನು ಅವಲೋಕಿಸುವ ಶಕ್ತಿಯಿದ್ದರೂ ಹೇಳಲಾಗದ ಸಂದಿಗ್ಧತೆಯನ್ನು ಜಾತಿಯೆನ್ನುವ ಭ್ರಾಂತಿ ಸೃಷ್ಟಿಸಿಬಿಡುತ್ತದೆ.

ಒಂದೇ ಆಯಾಮದ, ಈ ಎರಡು ಸನ್ನಿವೇಶಗಳಲ್ಲಿ ವ್ಯಕ್ತಗೊಂಡ ಜನಾಭಿಪ್ರಾಯಗಳು ಅಥವಾ ಮಾಧ್ಯಮಗಳಲ್ಲಿ ಮೂಡಿಬಂದ ಅಭಿಪ್ರಾಯಗಳು ಪರಸ್ಪರ ತದ್ವಿರುದ್ಧವಾಗಿವೆ. ಆದರೂ ಎರಡೂ ಘಟನೆಗಳಿಗೂ ಮೋದಿ ಸರ್ಕಾರ ಕಾರಣವೆಂಬ ಸಮೀಕರಣವೂ ಇದೆ.

ಇದೆಲ್ಲಕ್ಕೂ ಮೋದಿ ಸರ್ಕಾರ ಕಾರಣವೇ?

ವಾರ್ಷಿಕ ಬಜೆಟ್ಟುಗಳ ಸಮಯದಲ್ಲಿ ಆಗಾಗ್ಗೆ ತೆರಿಗೆ ಹಾಕುವ ಆದಾಯದ ಮಿತಿಯನ್ನು ಪರಿಷ್ಕರಿಸಿ ಮತ್ತದಕ್ಕೆ ತಕ್ಕಂತಹ ನಿಯಮಗಳ ಬದಲಾವಣೆಗಳನ್ನು ಮಾಡಲಾಗಿದೆಯೇ ಹೊರತು, ಯಾವುದೇ ಗಹನವಾದ ಗುರುತರ ಬದಲಾವಣೆಗಳನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಇತ್ತೀಚೆಗೆ ಮಾಡಿದ ಉದಾಹರಣೆಗಳಿಲ್ಲ. ಮಲ್ಯರ ಸಾಲ ವಸೂಲಾತಿಗೆ ಬ್ಯಾಂಕುಗಳು ಮಾಡಬೇಕಾದ ಕರ್ತವ್ಯದಂತೆಯೇ ತೆರಿಗೆ ಅಧಿಕಾರಿಗಳು ತೆರಿಗೆ ವಸೂಲಾತಿಯ ಕ್ರಮಗಳನ್ನು ಸಿದ್ದಾರ್ಥರ ಮೇಲೆ ಕೈಗೊಂಡಿರುತ್ತಾರೆ. ಬ್ಯಾಂಕ್ ಅಧಿಕಾರಿಗಳ ಕ್ರಮವನ್ನು ಒಪ್ಪುವ ನಾವುಗಳು, ತೆರಿಗೆ ಅಧಿಕಾರಿಗಳ ಕ್ರಮವನ್ನು "ತೆರಿಗೆ ಭಯೋತ್ಪಾದನೆ" ಎಂಬುದು ಅಸಹಿಷ್ಣುತೆಯ ಪ್ರತಿರೂಪವೆನಿಸಿಬಿಡುತ್ತದೆ. ಹಾಗೊಂದು ವೇಳೆ ಇದು ಕಿರುಕುಳವೆನಿಸಿದರೆ ಪ್ರಶ್ನಿಸಲಾಗದಷ್ಟು ನಮ್ಮ ಸಂವಿಧಾನ, ಕಾನೂನುಗಳು ಅಶಕ್ತವಾಗಿವೆಯೇ?

ಸಬಲರಿಗೇ ರಕ್ಷಣೆ ಕೊಡಲಾಗದ ಕಾನೂನು ವ್ಯವಸ್ಥೆ, ಮತ್ತು ಸಂವಿಧಾನಗಳು ಸಾಮಾನ್ಯರನ್ನು ಹೇಗೆ ರಕ್ಷಿಸಿಯಾವು ಎಂಬ ವಿಕಲ್ಪವನ್ನು ಈ "ತೆರಿಗೆ ಭಯೋತ್ಪಾದನೆ" ಎನ್ನುವುದು ಮೂಡಿಸಿಬಿಡುತ್ತದೆ.

ಕಾಂಗ್ರೆಸ್, ಬಿಜೆಪಿ, ಅಥವಾ ಇನ್ಯಾರದ್ದೇ ಸರ್ಕಾರ ಬರಲಿ ಮತ್ತು ಸುಧಾರಣಾ ನಿಯಮಗಳನ್ನು ಜಾರಿಗೆ ತರಲಿ. ಇವುಗಳ ಅನುಷ್ಟಾನ ಅಧಿಕಾರಶಾಹಿಗಳ ಕೈಯಲ್ಲಿದೆ.
ಇದೆಲ್ಲದಕ್ಕೂ ಕಾರಣ ಆ ಚುನಾಯಿತ ಸರ್ಕಾರಗಳಾಗಲಿ, ಅವುಗಳು ತಂದ ಸುಧಾರಣಾ ಕ್ರಮಗಳಷ್ಟೇ ಕಾರಣವಾಗಿಬಿಡುವುದಿಲ್ಲ. ಸರ್ಕಾರ ಯಾವುದೇ ಬರಲಿ ಮತ್ತು ಅವುಗಳ ಉದ್ದೇಶ ಎಷ್ಟೇ ಪ್ರಾಮಾಣಿಕವಾಗಿರಲಿ, ಅವುಗಳ ಸುಧಾರಣಾ ನಿಯಮಗಳ ಅನುಷ್ಠಾನಕ್ಕೆ ಕಾಂಪ್ಲೆಕ್ಸ್ ನಿಯಮಗಳನ್ನು ರೂಪಿಸಿ ಅನಿಷ್ಟಗಳಾಗಿಸುತ್ತಿರುವುದು ಅಧಿಕಾರಶಾಹಿ ಬಾಬುಗಿರಿ. ಹುಚ್ಚಾಪಟ್ಟೆ ಸಾಲ ಕೊಟ್ಟು ಉದ್ಯಮಿಗಳು ದೇಶ ಬಿಟ್ಟು ಹೋಗುವಂತೆ ಮಾಡಿದ್ದುದು ಆ ಬಾಬುಗಿರಿಯ ಅಧಿಕಾರಶಾಹಿ. ಅದೇ ರೀತಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದೂ ಇದೇ ಅಧಿಕಾರಶಾಹಿಗಳ ಬಾಬುಗಿರಿಯ ಕಾರಣದಿಂದಲೇ! ಭ್ರಷ್ಟ್ರ, ಶತದಡ್ಡ ಮಂತ್ರಿಗಳಿಗೆ ಆಯಾಯ ಆಯಕಟ್ಟಿನ ಜಾಗ, ದುಡ್ಡು ಹೊಡೆಯುವ ವಾಮಮಾರ್ಗಗಳನ್ನು ತೋರಿಸಿಕೊಡುವುದೂ ಕೂಡ ಇದೇ ಬಾಬುಗಿರಿ ಯಾ ಚಮಚಾಗಿರಿ. ಪ್ರೈವಸಿ ಯಾ ಖಾಸಗಿತನದ ಕುರಿತಾಗಿ ಯಾವುದೇ ಗಹನವಾದ ಬದಲಾವಣೆಗಳನ್ನು ತಾರದೆ ಖಾಸಗಿತನದವೆಂಬುದು ಸಾರ್ವಜನಿಕವಾಗಿ ಬಟಾಬಯಲಾಗುತ್ತಿದೆ. ಇಂತಹ ಮಾನಹಾನಿಗಳಿಂದಾಗಿ ಬಡವ ಬಲ್ಲಿದ, ಶಕ್ತ ಅಶಕ್ತ, ಪುರುಷ ಮಹಿಳೆಯರೆಲ್ಲರೂ ಸಮಾನತೆಯನ್ನು ಕಾಣುತ್ತಿದ್ದಾರೆ. ಇದು ಕೂಡಾ ದೂರದರ್ಶಿತ್ವವಿಲ್ಲದ , ಸರಿಯಾದ ನಿಯಮಗಳನ್ನು ರೂಪಿಸದೆ ತಂತ್ರಜ್ಞಾನವನ್ನು ಅಪ್ಪಿಕೊಂಡುದರ ಪರಿಣಾಮ. ಇದೂ ಕೂಡ ಅಧಿಕಾರಿಶಾಹಿಯ ಚರ್ಬಿಯ ಮದ.

ಒಂದು ಬ್ಯಾಂಕ್ ಖಾತೆ ತೆಗೆಯುವುದಾಗಲಿ, ಶಾಲೆಗೆ ಸೇರಿಸುವುದಿರಲಿ ಯಾ ಚಾಲನಾ ಪರವಾನಗಿಯಿರಲಿ...ಈ ಅಧಿಕಾರಶಾಹಿಗಳು ರೂಪಿಸಿರುವ ನಿಯಮಗಳು ತಲೆ ತಿರುಗಿಸಿಬಿಡುತ್ತವೆ.  ಸುಮ್ಮನೆ ಭಾರತದ ಕೆಲವು ವೆಬ್ಸೈಟುಗಳನ್ನು ಮತ್ತು ಕೆಲವು ವಿದೇಶಿ ವೆಬ್ಸೈಟುಗಳನ್ನು ತುಲನೆ ಮಾಡಿ ನೋಡಿ, ನಮ್ಮವರೆಷ್ಟು ಕಾಂಪ್ಲೆಕ್ಸ್ ಎಂದು ಗೊತ್ತಾಗುತ್ತದೆ. ಆದರೆ ಯಾರೂ ಇತ್ತ ಕಡೆ ಗಮನ ಹರಿಸುವುದಿಲ್ಲ. ಕೇವಲ ಸರ್ಕಾರಿ ನೌಕರರ ದೈನಂದಿನ ವ್ಯವಹಾರಗಳಲ್ಲಿನ ಭ್ರಷ್ಟಾಚಾರದ ಕಡೆ ಜನ ಗಮನ ಹರಿಸುತ್ತಾರೆಯೇ ಹೊರತು, ನೀತಿ ನಿಯಮಗಳ ಸೃಷ್ಟಿಸುವ ಬಾಬುಗಿರಿಯತ್ತವಲ್ಲ.  ಜನತೆ ಇತ್ತಕಡೆ ಗಮನ ಹರಿಸದಂತೆ ಮಾಡಿರುವುದು ಕೂಡಾ ಇದೇ ಬಾಬುಗಿರಿ. ಸ್ವಲ್ಪ ಒಳಹೊಕ್ಕು ನೋಡಿದರೆ ಇದು ಕಾಣದಂತಹ ಬುದ್ದಿವಂತ ವ್ಯವಸ್ಥೆಯೇನೂ ಅಲ್ಲ!  ಆದರೆ ಇತ್ತಕಡೆ ಏಕೋ ಬುದ್ದಿವಂತರ ಚಿತ್ತ ಹರಿದಿಲ್ಲದಿರುವುದು ಒಂದು ಮಹಾ ದುರಂತ.

ಆದರೆ ಸಿದ್ದಾರ್ಥರ ಸಾವಿನ ಹಿಂದೆ ಅಧಿಕಾರಶಾಹಿ ಇರಲಾರದು. ಒಬ್ಬ ಅಧಿಕಾರಯುತ ಮಹತ್ವಾಕಾಂಕ್ಷಿ, ಕೇವಲ ಸಂಬಳದ/ಗಿಂಬಳದ ಅಧಿಕಾರಶಾಹಿಗೆ ಹೆದರುವುದಿಲ್ಲ. ಅವರ ಉದ್ದಿಮೆಯ ಸೋಲು ಅವರಿಗೆ ಬಹುಶಃ ನುಂಗಲಾರದ ತುತ್ತೆನಿಸಿತ್ತೇನೋ.

http://epaper.udayakala.news/