ಟಿಪ್ಪು ಸುಲ್ತಾನ!

ಪ್ರಜಾಪ್ರಭುತ್ವದ ರಾಜ್ಯವೊಂದು ರಾಜಪ್ರಭುತ್ವದ ವ್ಯಕ್ತಿಯೋರ್ವನ ಹುಟ್ಟನ್ನು ಸಂಭ್ರಮಿಸುವುದು ಗುಲಾಮಿತನದ ಸಂಕೇತ ಮತ್ತು ಪ್ರಜಾಪ್ರಭುತ್ವದ ಅಣಕ. ಇದು ಟಿಪ್ಪು, ಕೆಂಪೇಗೌಡ, ಕಿತ್ತೂರು ರಾಣಿ ಜಯಂತಿಗಳಿಗೆಲ್ಲ ಅನ್ವಯ.  ಈ ಮೂಲ ಪ್ರಭುತ್ವಗಳ ವ್ಯತ್ಯಾಸವರಿಯದೆ ರಾಜಜಯಂತಿಗಳ ಸಮರ್ಥಿಸಿಕೊಳ್ಳುವ ಜ್ಞಾನಪೀಠಿ, ವಿಶ್ವವಿದ್ಯಾಲಯದ ಪ್ರೊಫೆಸರ್ಗಳು, ಪ್ರಜಾಪ್ರಭುತ್ವದ ಪ್ರತಿನಿಧಿಗಳು, ಮತ್ತವರ ಬುದ್ಧಿಮಟ್ಟ, ಬುದ್ಧಿಮತ್ತೆ, ಸೊಗಲಾಡಿತನ, ಓಲೈಕೆ, ತಲೆಹಿಡುಕುತನ ಸಂವಿಧಾನವನ್ನೇನು ಉಳಿಸೀತು?
ಅವರೆಲ್ಲ ಹುಚ್ಚು ಮುಂಡೆ ಮದುವೆಯಲ್ಲಿ ಉಂಬುವ ಜಾಣರು!!

ದಸರಾ ಆಚರಣೆಯಲ್ಲಿ ಮೈಸೂರಿನ ಅರಸು ಮನೆತನದ ಭಾಗವಹಿಸುವಿಕೆಯನ್ನು ಊಳಿಗಮಾನ್ಯದ ವಿಜೃಂಭಣೆ, ಗುಲಾಮಿತನದ ಸಂಕೇತವೆಂದು "ಪರ್ಯಾಯ ದಸರಾ" ಆಚರಿಸುವ ಪ್ರಗತಿಪರ ವರ್ಗ, ಊಳಿಗಮಾನ್ಯದ ಟಿಪ್ಪುವನ್ನು ಸಮರ್ಥಿಸಿಕೊಳ್ಳುತ್ತಾರೆ. ವೈಚಾರಿಕತೆ, ಜಾತಿ ಓಲೈಕೆಗನುಗುಣವಾಗಿ ಊಳಿಗಮಾನ್ಯ ವ್ಯವಸ್ಥೆಯನ್ನು ಬೆಂಬಲಿಸೆನ್ನುತ್ತದೆಯೇ?

ಯಾವುದೇ ಊಳಿಗಮಾನ್ಯ ಪ್ರಭುತ್ವದ ವ್ಯಕ್ತಿ ಹೋರಾಡಿದ್ದುದು ತನ್ನ ಪ್ರಭುತ್ವಕ್ಕಾಗಿಯೇ ಹೊರತು ಪ್ರಜಾಪ್ರಭುತ್ವಕ್ಕಲ್ಲ! ಈ ನಿಟ್ಟಿನಲ್ಲಿ ಅವರ್ಯಾರೂ ಸ್ವಾತಂತ್ರ್ಯ ಹೋರಾಟಗಾರರಲ್ಲ. ಹಾಗಾಗಿ ಆತನ ಪರವಾದ ಎಲ್ಲಾ ಸಮರ್ಥನೆ ಅರ್ಥಹೀನ.

ಒಬ್ಬ ರಾಜನಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವಾಗ ಆಗುವ ಸಾವು ನೋವುಗಳಂತೆಯೇ ಕೊಡಗು ಕೇರಳದಲ್ಲಿ ಆತ ನಡೆಸಿದ ಹತ್ಯೆಗಳೆಂದು ಸಮರ್ಥಿಸಿಕೊಳ್ಳುತ್ತಾರೆ. ಅದೇ ವಾದವನ್ನಿಟ್ಟುಕೊಂಡು ನೋಡಿದಾಗ ಬ್ರಿಟಿಷರ ವಿರುದ್ಧ  ಅವರ ಸಾಮ್ರಾಜ್ಯ ವಿಸ್ತರಣೆಯ ಕಾರಣವಾಗಿ ಟಿಪ್ಪು ಕೂಡ ಹತನಾದ. ಊಳಿಗಮಾನ್ಯ ಪ್ರಭುತ್ವದ ಅರಸರು ಅನ್ಯರಾಜ್ಯದ ವಿರುದ್ಧ ಹೋರಾಡುವುದನ್ನು ಒಪ್ಪುವ ನಾವು ಅನ್ಯದೇಶದವರೆಂದೊಡನೆ ಭಕ್ತಿಪರಾಕಾಷ್ಟೆಯನ್ನು ಮೆರೆಸುವುದೇಕೆ?

ಭಾರತ ಸ್ವಾತಂತ್ರ್ಯ ಹೋರಾಟದ ಆರಂಭವನ್ನು ಯಾವುದೇ ದೇಶೀ ರಾಜ ರಾಣಿಯರು ಆರಂಭಿಸಿದ್ದರೆಂಬುದನ್ನು ಪುನರ್ ಪರಿಶೀಲಿಸಬೇಕಿದೆ.

ಒಡೆತನದ ದಾಖಲೆಯಿರದ ಭೂಮಿಯನ್ನು ಕಂದಾಯ ಕಟ್ಟುವವರಿಗೆ ಪುಕ್ಕಟೆಯಾಗಿ ಇತಿಹಾಸದುದ್ದಕ್ಕೂ ಎಲ್ಲಾ ರಾಜರುಗಳೂ ಕೊಡುತ್ತಾ ಬಂದಿದ್ದಾರೆ. ಇದನ್ನು ಪ್ರಜಾಪ್ರಭುತ್ವದ ರಾಜ್ಯ ಸರ್ಕಾರ ಕೂಡ ಭೂಮಿಗೆ ಬೆಲೆಯಿಲ್ಲದ ಕಾಲಘಟ್ಟದಲ್ಲಿ ಕಾಫಿ ತೋಟ ಮಾಡಲು, ಗೇರು ಬೆಳೆಯಲು, ತೋಟಗಾರಿಕೆಯ ಕೆಲವು ಬೆಳೆಗಳನ್ನು ಪ್ರೋತ್ಸಾಹಿಸಲು ಈ ರೀತಿಯಾಗಿ ಮಾಡಿದೆ. ಆದರೆ ಈ ಸಾಮಾನ್ಯ ಐತಿಹಾಸಿಕ ಆಡಳಿತಾತ್ಮಕ ಸಂಗತಿಯನ್ನು ಟಿಪ್ಪುವಿಗೆ ಮಾತ್ರ ಅನ್ವಯಿಸಿ "ಉಳುವವನೇ ಒಡೆಯ" ಎಂಬ ನೀತಿಯ ಹರಿಕಾರ ಟಿಪ್ಪು ಎಂದು ಅಸಂಬದ್ಧವಾಗಿ ಊಳಿಗಮಾನ್ಯವನ್ನು ಸಮಾಜವಾದಕ್ಕೆ ಜೋಡಿಸುತ್ತಾರೆ.

ಇತಿಹಾಸದಲ್ಲಿ ಲಾವಣಿಕಾರರು ಆಸ್ಥಾನ ಕೃಪಾಪೋಷಿತರಾಗಿದ್ದರು. ಪ್ರಭುತ್ವದ ಸಾಧನೆಯನ್ನು ಇಂದಿನ ಸರ್ಕಾರೀ ಸಾಧನೆಗಳ ಜಾಹೀರಾತಿನ ಮಾದರಿ ಪ್ರಚಾರ ಮಾಡುವುದು ಲಾವಣಿಗರ ಕರ್ತವ್ಯವಾಗಿತ್ತು. ಹಾಗಾಗಿ ಆತನ ಕುರಿತಾಗಿ ಕೃಪಾಪೋಷಿತ ಲಾವಣಿ ಪದಗಳು ಸೃಷ್ಟಿಯಾಗಿರಬಹುದು. ಆ ಕೃಪಾಪೋಷಿತ ಲಾವಣಿಯನ್ನೇ ಇತಿಹಾಸ ಎನ್ನಲಾಗುತ್ತದೆಯೇ?

ಆತ ಪ್ರಬಲ ಸಂಖ್ಯೆಯ ಕೋಮಿನ ಒಕ್ಕಲಿಗ, ಲಿಂಗಾಯತ, ನಾಯಕರ ಭಾಷೆ, ಧರ್ಮವನ್ನ ಒಂದೆಡೆ ಓಲೈಸುತ್ತ ಇನ್ನೊಂದೆಡೆ ಆಯ್ದ ಅಲ್ಪ ಸಂಖ್ಯಾತ ಅಯ್ಯಂಗಾರರನ್ನು ಹತ್ಯೆಗೈದ. ಆತನ  ಕನ್ನಡ ಪ್ರೋತ್ಸಾಹ, ಹಿಂದೂ ಧಾರ್ಮಿಕ ದತ್ತಿಗಳು,  ಬಹುಸಂಖ್ಯಾತರ ಓಲೈಕೆಯ ಒಂದು ಭಾಗ.

ಆಧುನಿಕತೆಯ ಎಲ್ಲ ಆಕರ ಪರಿಕರಗಳನ್ನು ಹೊಂದಿದ್ದರೂ ಕೂಡಾ ಕೇವಲ ಹದಿನೆಂಟನೇ ಶತಮಾನದ ಟಿಪ್ಪು ಇತಿಹಾಸವನ್ನೇ ಸರಿಯಾಗಿ ವಿಶ್ಲೇಷಿಸಲಾಗದ ಬುದ್ಧಿವಂತರು ಹಿಂದೂ-ಬೌದ್ಧ-ಜೈನ-ಶೈವ ಪಂಥಗಳು ಪರಸ್ಪರ ರಕ್ತಕ್ರಾಂತಿ ನಡೆಸುತ್ತ ಸಾಗಿಬಂದ ಕರ್ನಾಟಕದ ಧಾರ್ಮಿಕ ವಿಕಸನವನ್ನು ಹೇಗೆಂದು ವಿಶ್ಲೇಷಿಸಿಯಾರು!?!

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರ

No comments: