ಸಮಾಜಮುಖಿ ಲೇಖನ - ಸಂವಿಧಾನವನ್ನು ಬದಲಿಸಿದರೆ ತಪ್ಪೇನು?

ಎಲ್ಲ ಮಹಾನ್ ಚಿಂತನೆಗಳು, ಅವಿಷ್ಕಾರಗಳು ಆರಂಭದಲ್ಲಿ ಅಸಂಬದ್ಧ ಹಾಗೂ ಹಾಸ್ಯಾಸ್ಪದ ಎನ್ನಿಸುತ್ತವೆ. ಇದು ಭೂಮಿ ದುಂಡಾಗಿದೆ ಎಂದ ಗೆಲೆಲಿಯೋನಿಂದ ಹಿಡಿದು ಇಂದಿನ ವಿಡಿಯೋ ಫ಼ೊನುಗಳ ಅವಿಷ್ಕಾರಿಯವರೆಗೆ ಎಲ್ಲವೂ ಒಂದೊಮ್ಮೆ ಅಸಂಬದ್ಧವೆನಿಸಿತ್ತು. ಆದರೆ ನವ್ಯ ಭಾರತದಲ್ಲಿ ದಿಟವಾದ ಹತ್ತು ಹಲವಾರು ಅಸಂಬದ್ಧತೆಗಳು ಜನಪರ ಹೋರಾಟ, ಕಾನೂನು, ಶಾಸನಗಳಾಗುತ್ತ ಇಡೀ ದೇಶವನ್ನೇ ಅಸಂಬದ್ಧ ಅತಾರ್ಕಿಕ ಸಂಕೀರ್ಣ ವ್ಯವಸ್ಥೆ ಎನಿಸಿಬಿಡುತ್ತಿವೆ. ಉದಾಹರಣೆಗೆ ಸದ್ಯದ ಪ್ರಸ್ತುತ ಸಂಗತಿಗಳನ್ನು ಗಮನಿಸೋಣ.

ಸಂಪರ್ಕ ವ್ಯವಸ್ಥೆ - ವಾಹನಗಳ ನೋಂದಾವಣೆಯ ಭಾಗವಾಗಿ ಅಜೀವಪರ್ಯಂತ ರಸ್ತೆ ತೆರಿಗೆ ಕಟ್ಟಿದರೂ ರಸ್ತೆಗಳಿಗೆ ಟೋಲು ಹಾಕುವ ಪರಿ ಅಸಂಬದ್ಧವಾಗಬೇಕಿದ್ದು ಇಂದು ಸರ್ಕಾರದ ಅಧಿನಿಯಮವಾಗಿದೆ. ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಈ ಅಸಂಬದ್ಧ ನಿಯಮ ರಾಜ್ಯ ಹೆದ್ದಾರಿಗಳಿಗೂ ಅನ್ವಯವಾಗಲಿದೆ. ರಾಜ್ಯದ ಅನೇಕ ಹೆದ್ದಾರಿಗಳಲ್ಲಿ ಈಗಾಗಲೇ ಟೋಲ್ ಬೂತುಗಳು ಕಟ್ಟಲ್ಪಟ್ಟಿದ್ದು ಸದ್ಯದಲ್ಲೇ ಟೋಲ್ ಪಾವತಿಸಬೇಕಾಗುತ್ತದೆ. ಇದೇ ಮಾದರಿಯಾಗಿ ಮುಂದೆ ಜಿಲ್ಲಾ ಹೆದ್ದಾರಿಗಳಿಂದ ನಿಮ್ಮ ಮನೆಯ ರಸ್ತೆಗಳಿಗೂ ಬರಬಹುದು. ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಸಂಚಾರ ಸ್ವಾತಂತ್ರ್ಯಕ್ಕೇ ಸಂಚಕಾರ ಬಂದಿದ್ದರೂ ಅದು ಒಪ್ಪಿತ! ಸಾರಿಗೆ ಸಮಯದಲ್ಲೇನಾದರೂ ಉಳಿತಾಯವಾಗಿದೆಯೇ? ನನಗಂತೂ ಕಂಡಿಲ್ಲ.

ಆರೋಗ್ಯ - ಪ್ರಧಾನಿ ಇಂದಿರಾಗಾಂಧಿ 35 ವರ್ಷಗಳ ಹಿಂದೆಯೇ ಭಾರತ ಕುಷ್ಠ ರೋಗ ಮುಕ್ತ ಎಂದು ಘೋಷಿಸಿದ್ದರು. ಕಳೆದ ವಾರ ಬೆಂಗಳೂರಿನಲ್ಲೇ 1200 ಹೊಸ ಕುಷ್ಠ ರೋಗಿಗಳು ಪತ್ತೆಯಾಗಿದ್ದಾರೆ. ಬೇರೆಲ್ಲೆಡೆ ಗಾಳಿಯಂತೆ ಬೀಸಿ ಹೋದ ಡೆಂಗ್ಯೂ, ಚಿಕೂನ್ ಗುನ್ಯಾ, ಭಾರತದಲ್ಲಿ ಮಾತ್ರ ಖಾಯಂ ಬಿಡಾರ ಹೂಡಿವೆ.

ಕಾನೂನು - ದ್ವಿಪತ್ನಿತ್ವ ಕಾನೂನು ರೀತ್ಯ ಒಂದು ಅಪರಾಧ. ಆದರೆ ಕಾನೂನು ಇದನ್ನು ಕೇವಲ ದ್ವಿಪತ್ನಿತ್ವಕ್ಕೊಳಗಾದ ವ್ಯಕ್ತಿ ಮಾತ್ರ ಪ್ರಶ್ನಿಸಬೇಕು ಎನ್ನುತ್ತದೆ, ದ್ವಿಪತ್ನಿತ್ವದ ವ್ಯಕ್ತಿ ಸಾರ್ವಜನಿಕ ಸೇವೆಯಲ್ಲಿದ್ದರೂ ಕೂಡ. ಇದು ಅಸಂಬದ್ಧವಲ್ಲವೇ? ಮಹಿಳಾ ಶೋಷಣೆಗಳನ್ನು ಹತ್ತಿಕ್ಕಲು ಮಾಡಿದ ಕಾನೂನು ಸರ್ವಾಧಿಕಾರಿ ಧೋರಣೆಯ ಏಕಪಕ್ಷೀಯವಾಗಿ ಪುರುಷ ವಿರೋಧಿ ಕಾನೂನಾಗಿದೆ. ಇದು ಸೌದಿಯಲ್ಲಿರುವಂತಹ ಜಿಹಾದಿ ಕಾನೂನಿನಂತಿದೆ.

ಇಂತಿಷ್ಟು ವರ್ಷದ ಹಳೆಯ ವಾಹನಗಳನ್ನು ಬಹಿಷ್ಕರಿಸುವುದು ಕೂಡ ಇಂತಹ ಮೂರ್ಖತನದ ಪರಮಾವಧಿ. ವಾಹನ ಸಧೃಢವಾಗಿದೆಯೆಂದು ಪ್ರಮಾಣೀಕರಿಸಿ ಎನ್ನುವುದನ್ನು ಬಿಟ್ಟು ಬಹಿಷ್ಕರಿಸುವುದು, ಬಯಲುಶೌಚವನ್ನು ನಿರ್ಮೂಲನೆ ಮಾಡಲಾಗದ್ದಕ್ಕೆ ಶೌಚವನ್ನೇ ಬಹಿಷ್ಕರಿಸಿದಂತಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಬಹುಚರ್ಚಿತ ವೀರಶೈವ/ಲಿಂಗಾಯತ, ಶಬರಿಮಲೆ, ಮೀಟೂ, ಪಕ್ಷಮೈತ್ರಿ, ಇತ್ಯಾದಿ - ಈ ವಿಷಯಗಳ ಕುರಿತು ಸಾಕಷ್ಟು ತಿಳಿದುಕೊಂಡಿರುತ್ತೀರಿ. ಹಾಗಾಗಿ ಇವುಗಳ ಉಲ್ಲೇಖ ಮಾತ್ರ ಸಾಕು.

ಈಗ ಈ ಎಲ್ಲಾ ಸಂಗತಿಗಳಲ್ಲಿ ಯಾವುದು ಜನಪರ ಯಾವುದು ಪ್ರಚಾರಪರ?

ವೀರಶೈವ/ಲಿಂಗಾಯತ, ಶಬರಿಮಲೆ, ಮೀಟೂ, ಪಕ್ಷಮೈತ್ರಿ, ಇತ್ಯಾದಿಗಳು ತರ್ಕಬದ್ಧ ಮೂಲಭೂತ ಹೋರಾಟಗಳೆನಿಸಿ, ನೀರಿನ ಬವಣೆ, ವಿದ್ಯುತ್ ಅಭಾವ, ಅವೈಜ್ಞಾನಿಕ ಕೃಷಿಉತ್ಪನ್ನಗಳ ಬೆಲೆ, ಇನ್ಫಲೇಷನ್, ಹವಾಮಾನ ವೈಪರೀತ್ಯ, ಶೈಕ್ಷಣಿಕ ದೊಂಬರಾಟ, ಓಲೈಕೆ/ಹಾರೈಕೆಯ ರಾಜಕಾರಣ, ರೋಗಗಳು, ಭ್ರಷ್ಟಾಚಾರ ಇವೆಲ್ಲವೂ ಅಸಂಬದ್ಧ ಹಾಸ್ಯಾಸ್ಪದದ ಯಕಶ್ಚಿತ್ ಸಂಗತಿಗಳಾಗಿವೆ.

ಭಾರತ ವಿಶ್ವಗುರು, ಬೆಂಗಳೂರನ್ನು ಸಿಂಗಾಪುರ ಮಾಡುತ್ತೇನೆ, ಭಾರತ ಪ್ರಕಾಶಿಸುತ್ತಿದೆ, ಗರೀಬಿ ಹಠಾವೋ, ಕುಷ್ಠ ರೋಗ ಮುಕ್ತ, ಪೋಲಿಯೋ ಮುಕ್ತಗಳೆಲ್ಲವೂ ಭವ್ಯವಾದ ಉದ್ಘೋಷಗಳಲ್ಲಿವೆ!

ಸಾಕಷ್ಟು ಕಪ್ಪುಹಣ ಭಾರತದಿಂದಾಚೆ ರವಾನೆಯಾಗುವುದು  2003 ರಿಂದ ಸಾಕಷ್ಟು ನಿಂತಿದೆ. ಇದಕ್ಕೆ ಕಾರಣ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಆದ ಕೆಲ ಗಟ್ಟಿ ಬ್ಯಾಂಕಿಂಗ್ ನಿಯಮಗಳ ಬದಲಾವಣೆಗಳು. ಅಂದರೆ ಆ ಕಪ್ಪುಹಣ ಅಂದಿನಿಂದ ಭಾರತದ ರಿಯಲ್ ಎಸ್ಟೇಟ್ ಉದ್ದಿಮೆಯನ್ನು ಹೊಕ್ಕಿದೆ. ಭಾರತದ ರಿಯಲ್ ಎಸ್ಟೇಟ್ ಬೆಲೆ ಸುಯ್ಯನೇ ಮೇಲೆ ಹೋಗುತ್ತಿರುವುದು ಕಪ್ಪುಹಣಕ್ಕೆ ಉದ್ಘೋಷಗಳು ಕೊಟ್ಟ ಮೆರುಗು ಲೇಪನದಿಂದ. ಜನಸಂಖ್ಯೆಯ ಏಕೈಕ ಕಾರಣಗಳಿಂದಾಗಿ ರಿಯಲ್ ಎಸ್ಟೇಟ್ ಬೆಲೆ ನಿಯಂತ್ರಣದಲ್ಲಿದೆಯೇ ಹೊರತು ಇಲ್ಲದಿದ್ದರೆ ಎಂದೋ ಪಾತಾಳ ಸೇರಿರುತ್ತಿತ್ತು.

ಇನ್ನು ಈ ಎಲ್ಲ ಅಸಂಬದ್ಧಗಳಿಗೆ ನಮ್ಮ ಪ್ರಗತಿಪರರು ಹೋರಾಟದ ಆಯಾಮ ಕೊಟ್ಟಿದ್ದಾರೆ. ಉದ್ಘೋಷಗಳ ಪರಿಯಲ್ಲೇ ಲಿಂಗಾಯತ-ವೀರಶೈವ, ಆಯ್ದ ಮೀಟೂ (ಜಾಗತಿಕ ಮೀಟೂ ಚಳುವಳಿಯ ಮೂಲೋದ್ದೇಶ ಅಪ್ರಾಪ್ತರ ಮೇಲಾದ ಲೈಂಗಿಕ ಶೋಷಣೆಯನ್ನು ಬಯಲು ಮಾಡುವುದು, ವೃತ್ತಿಗಳಲ್ಲಿ ನಡೆವ ಲೈಂಗಿಕ ಶೋಷಣೆಯನ್ನಲ್ಲ. ಅದಕ್ಕೆ ವೃತ್ತಿಪರತೆಯಲ್ಲಿಯೇ ಪರಿಹಾರವಿದೆ), ಅರ್ಬನ್ ನಕ್ಸಲರ ಬಂಧನಕ್ಕೆ ತುರ್ತು ಪರಿಸ್ಥಿತಿಯ ಮೆರುಗು ಕೊಟ್ಟದ್ದು, ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ ಎನ್ನುತ್ತಾ ಅಯ್ಯಪ್ಪನ ದೇವಸ್ಥಾನಕ್ಕೆ ಅಂಟಿಕೊಂಡದ್ದು, ಇತ್ಯಾದಿ, ಇತ್ಯಾದಿ "ಉದ್ಘೋಷ ಹೋರಾಟ"ಗಳಿಂದ ಹೋರಾಟದ ಮೂಲಭೂತ ಉದ್ದೇಶವನ್ನೇ ಬದಲಾಯಿಸಿಬಿಟ್ಟಿದ್ದಾರೆ.

ಗಂಭೀರ ಗಾಬರಿ ಹುಟ್ಟಿಸುವುದು ಈ ಎಲ್ಲ ಅಸಂಬದ್ಧತೆಗಳ "ಉದ್ಘೋಷ ಹೋರಾಟ"ಗಳ ಮುಂಚೂಣಿಯಲ್ಲಿ ಖ್ಯಾತ ವಿಶ್ವವಿದ್ಯಾಲಯಗಳ ಪ್ರೊಫೆಸರರುಗಳಿರುವುದು! ಹಿಂದಿದ್ದ ಇದೇ ಹಿನ್ನೆಲೆಯ ಕುವೆಂಪು, ಅಡಿಗ, ಅನಂತಮೂರ್ತಿ, ಲಂಕೇಶ್ ಮುಂತಾದವರ ತರ್ಕಬದ್ಧ ವೈಚಾರಿಕತೆಗೂ ಇಂದಿನ ಪ್ರೊಫೆಸರರುಗಳ ಅಸಂಬದ್ಧ ಪ್ರಲೋಭನೆಗಳಿಗೂ ಇರುವ ವಿಪರ್ಯಾಸ ಅಜಗಜಾಂತರ!

ಯಾವುದೇ ಘಟನೆಗೆ ಪ್ರತಿಭಟಿಸಿ ಪ್ರತಿಕ್ರಿಯಿಸುವುದನ್ನೇ ಹೋರಾಟ ಮಾಡಿಕೊಂಡಿದ್ದಾರೆ.
ಇವೆಲ್ಲವೂ ಟ್ರೋಲು, ಕಾಲೆಳೆಯುವಿಕೆಯಾಗುತ್ತವೇ ಹೊರತು ಹೋರಾಟಗಳಲ್ಲ.

ಪದೇ ಪದೇ ಕಮ್ಯುನಿಸ್ಟ್ ಉಲ್ಲೇಖಿಸುವ ಈ ಉದಾರವಾದಿಗಳು ಯಾವ ಕಮ್ಯುನಿಸ್ಟ್ ರಾಷ್ಟ್ರವನ್ನು ಕಂಡಿದ್ದಾರೆ?  ಜಗತ್ತಿನ ಎಲ್ಲ ಕಮ್ಯುನಿಸ್ಟ್ ಪ್ರಭುತ್ವಗಳು ಪ್ರಜಾಪೀಡಕವಾಗಿ, ಸರ್ವಾಧಿಕಾರವಾಗಿ, ಏಕವ್ಯಕ್ತಿ ಆರಾಧಕವಾಗಿ ಪರಿವರ್ತಿತಗೊಂಡಿರುವುದು ಸಾರ್ವಕಾಲಿಕ ವಾಸ್ತವ ಸತ್ಯ! ಉದಾರವಾದಿಗಳನ್ನು ಸೆರೆಮನೆಗೆ ತಳ್ಳಿ ಅತ್ಯಂತ ಹಿಂಸಾತ್ಮಕ ಕಿರುಕುಳ ನೀಡಿ ಕೊಲೆಗೈಯುವುದರಲ್ಲಿ ಕಮ್ಯುನಿಸ್ಟ್ ಸರ್ಕಾರಗಳು ಮುಂಚೂಣಿಯಲ್ಲದ್ದವು, ಇವೆ.

ಇನ್ನು ಇವರ ಸಂವಿಧಾನ ತಿದ್ದುಪಡಿ ಹೋರಾಟದ ಕುರಿತು, ಯಾವುದೇ ದೇಶದ ಸಂವಿಧಾನಗಳು ಉಸಿರಾಡುವ ಜೀವಂತ ದಸ್ತಾವೇಜುಗಳು. ಕಾಲಕ್ಕನುಗುಣವಾಗಿ ಹೊಸತಾಗುತ್ತ "ಬದಲಾಗಲೆಂಬ" ಉದ್ದೇಶಕ್ಕಾಗೆ ರಚಿಸಲ್ಪಟ್ಟಿವೆ. ನ್ಯಾಯಾಂಗ, ಶಾಸಕಾಂಗ ಮತ್ತು ಆಡಳಿತ ವರ್ಗ ಸಂವಿಧಾನದ ಭಾಗಗಳನ್ನು ಜಡವಾಗಿರಿಸದೆ ವರ್ತಮಾನದ ಅವಶ್ಯಕತೆಗೆ ತಕ್ಕಂತೆ "ಬದಲಾಯಿಸಿ" ಕ್ರಿಯಾಶೀಲವಾಗಿರಿಸಬೇಕೆಂಬುದೇ ಸಂವಿಧಾನ ರಚನೆಯ ಮೂಲೋದ್ದೇಶ. ಜೀವಂತ ಸಮಾಜಕ್ಕೆ ತಕ್ಕಂತೆ ವಿಕಸಿಸುವ ವೈಜ್ಞಾನಿಕ ಅನುಶಾಸನವಿರಬೇಕೇ ಹೊರತು ಶಾಸ್ತ್ರಪುರಾಣಗಳಂತಹ ಜಡಗ್ರಂಥವಲ್ಲ!

ಊಳಿಗಮಾನ್ಯ ವ್ಯವಸ್ಥೆ, ಜಾತೀಯತೆಯನ್ನು ವಿರೋಧಿಸಿ ನಡೆದ ಹೋರಾಟಗಳ ಸಿದ್ದಾಂತದ ಇತಿಹಾಸವನ್ನು ಮರೆತು ಊಳಿಗಮಾನ್ಯ ಪ್ರಜಾಪ್ರಭುತ್ವವನ್ನು ಮಾನ್ಯ ಮಾಡುತ್ತಾ, ಜಾತೀಯತೆಯನ್ನು ಅಸ್ಮಿತೆಯ ಹೆಸರಲ್ಲಿ ಬೆಂಬಲಿಸುತ್ತಿರುವ ಈ "ಉದರವಾದಿ"ಗಳಿಂದ "ಉದಾರವಾದ"ವನ್ನು ಬಿಡಿಸಿಕೊಳ್ಳಬೇಕಾದ ಅಸಂಬದ್ಧ ತುರ್ತು ಪರಿಸ್ಥಿತಿ ಇದೆ. 

No comments: