ಮಹಿಷ ಮತ್ತು ವಿದೂಷ!

ಇತ್ತೀಚೆಗೆ ದಸರಾ ಬಂದೊಡನೆಯೇ ಚಾಮುಂಡಿಗಿಂತ ಮಹಿಷ ಹೆಚ್ಚು ಹೂಂಕರಿಸುತ್ತಿದ್ದಾನೆ. ಈತ ಸ್ಥಳೀಯ ಬೌದ್ಧ ಬಿಕ್ಷು
ಜನಾನುರಾಗಿ ರಾಜನಾಗಿ ಆಡಳಿತ ನಡೆಸಿದ್ದನು. ಆದರೆ ವೈದಿಕ ಪುರೋಹಿತಶಾಹಿಗಳು ಹುನ್ನಾರದಿಂದ ಈತನನ್ನು ಕೊಂದು ರಾಕ್ಷಸನಾಗಿ ಬಿಂಬಿಸಿದ್ದಾರೆ ಎನ್ನುವ ಬಲವಾದ ವಾದಗಳು ಎಡದಿಂದ ಕೇಳಿಬರುತ್ತಿವೆ. ಈ ಕುರಿತಾಗಿ ಪ್ರಗತಿಪರರು ಹೋರಾಟವನ್ನೇ ರೂಪಿಸಿಕೊಂಡಿದ್ದಾರೆ. ಇನ್ನು ಕೆಲ ಬಲಪಂಥೀಯರು ಮಹಿಷನೆಂಬ ಸನ್ಯಾಸಿ ಬೌದ್ಧ ಭಿಕ್ಷು ರಾಜನಾಗಿದ್ದನೆಂಬುದೇ ಜೋಕು ಎಂದು ಅಪಹಾಸ್ಯ ಮಾಡುತ್ತಿದ್ದಾರೆ.

ಹಲವಾರು ಓದುಗ ಮಿತ್ರರು ನನ್ನ ಕೃತಿ "ಭಾರತ ಒಂದು ಮರುಶೋಧನೆ"ಯನ್ನು ಓದಿ ಕೌತುಕಗೊಂಡು ಮಹಿಷನ ಇತಿಹಾಸವನ್ನು ಬಲ್ಲಿರಾ ಮತ್ತು ಆ ಕುರಿತು ತಿಳಿಸಿಕೊಡುವಿರಾ ಎಂದು ಕೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಮಹಿಷ ಪುರಾಣ ಇತಿಹಾಸದ ಪುರಾವೆಯೊಟ್ಟಿಗೆ ಇಲ್ಲಿದೆ.

ಮೊದಲಿಗೆ, ಮಹಿಷ ದಸರಾ ಪರವಾಗಿ ನಿಂತಿರುವವರ ವಾದವನ್ನು ಗಮನಿಸೋಣ. ಈ ಗುಂಪಿನ ನಾಯಕರಾಗಿರುವ ಪ್ರೊ. ಬಿ.ಪಿ. ಮಹೇಶ್ ಚಂದ್ರ ಗುರು ಅವರು ಮಹಿಷನ ಬಗ್ಗೆ ಒಂದು ಲೇಖನವನ್ನೇ ಬರಿದಿದ್ದಾರೆ. ಹಾಗಾಗಿ ಅವರ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಇತಿಹಾಸ ಏನೆನ್ನುತ್ತದೆ ಎಂದು ವಿಶ್ಲೇಷಿಸೋಣ.

ಇಲ್ಲಿ ಐತಿಹಾಸಿಕವಾಗಿ ಮಹಿಷ ಒಬ್ಬ ಬೌದ್ಧ ಭಿಕ್ಷುವಲ್ಲ. ಆತ ಸಾಮ್ರಾಟ್ ಅಶೋಕನು ನೇಮಿಸಿದ ತೇರ ಮಹದೇವ ಎಂಬ ಆಡಳಿತಗಾರ. ಆತನು ಮಹಿಷ್ಮತಿ ಎಂಬ ವಂಶದವ. ಈ ವಂಶದ ಬಗ್ಗೆ ಮುಂದೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ. ಆತನ ಧರ್ಮ ಬೌದ್ಧಧರ್ಮ.

ಇನ್ನು ಪ್ರೊ. ಮಹೇಶ್ ಚಂದ್ರ ಗುರುಗಳು 'ನಾನುಗೌರಿ' ಪತ್ರಿಕೆಯಲ್ಲಿ ಬರೆದಿರುವ "ಮೂಲನಿವಾಸಿಗಳ ಮಹಿಷ ದಸರಾದ ಇತಿಹಾಸ" ಲೇಖನದಲ್ಲಿ ಪ್ರಸ್ತಾಪಿಸಿದ ಕೆಲ ವಿಚಾರಗಳು ಹೀಗಿವೆ.
1. 'ಒಂದು ಕಾಲದಲ್ಲಿ ಮೂಲನಿವಾಸಿಗಳ ದೊರೆಯಾದ ಮಹಿಷ ಯುದ್ಧದಲ್ಲಿ ದೇವತೆಗಳನ್ನು ಗೆದ್ದು ಅವರನ್ನು ಯಾವ ಅಧೋಗತಿಗೆ ಇಟ್ಟಿದ್ದನೆಂದರೆ ಅವರು ಭೂಮಿಯ ಮೇಲೆ ಭಿಕ್ಷುಕರಾಗಿ ಅಲೆದಾಡುತ್ತಿದ್ದರು’ (ಡಾ.ಬಿ.ಆರ್.ಅಂಬೇಡ್ಕರ್, ಸಂ.3, ಪು.395) ಎನ್ನುತ್ತಾ ಅಂಬೇಡ್ಕರರ ಸಂಪುಟವನ್ನು ಸಾಕ್ಷಿಯಾಗಿಸುತ್ತಾರೆ.

ಅಂದರೆ ಅಂಬೇಡ್ಕರ್ ಇಂದ್ರ ಮುಂತಾದ ದೇವತೆಗಳು ಭೂಮಿ ಮೇಲೆ ಇದ್ದರೆಂದು ನಂಬಿದ್ದರೆ?!?!

ಅಂಬೇಡ್ಕರರು ತಮ್ಮ ಸಂಪುಟ 3ರ ಪುಟ 395ರಲ್ಲಿ ಹಿಂದು ಪೌರಾಣಿಕ ಕಥೆಗಳಲ್ಲಿ ಬರುವ ನಹುಷ ಎಂಬ ಕ್ಷತ್ರಿಯನ ಮತ್ತು ಬ್ರಾಹ್ಮಣರ ನಡುವಿನ ಸಂಘರ್ಷದ ಬಗ್ಗೆ ಹೇಳಿದ್ದಾರೆಯೇ ವಿನಃ ಯಾವುದೇ ಇತಿಹಾಸದ ಕುರಿತಲ್ಲ. ಈ ನಹುಷನಿಗೂ ಮತ್ತು ಮಹಿಷೂರಿಗೂ (ಮೈಸೂರು) ಯಾವುದೇ ಸಂಬಂಧವಿಲ್ಲ. ಮಹಾಭಾರತದಲ್ಲಿ ಬರುವ ಕಾರ್ತವೀರ್ಯನೆಂಬುವವನು  ಮಹಿಷ್ಮತಿ ಎನ್ನುವ ನಗರದಲ್ಲಿ ವಾಸವಾಗಿದ್ದಾನೆನ್ನಲಾಗುವ ಕಥೆಯನ್ನು  ಉಲ್ಲೇಖಿಸಿದ್ದಾರೆ. ಈ ಮಹಿಷ್ಮತಿ ನಗರಕ್ಕೂ ಮೈಸೂರಿಗೂ ಯಾವುದೇ ಸಂಬಂಧವನ್ನು ಅವರು ಜೋಡಿಸಿಲ್ಲ.

2. "ಸಾಮ್ರಾಟ್ ಅಶೋಕನು ಮಹಾದೇವತೇರ ಎಂಬ ಬುದ್ಧನ ಅನುಯಾಯಿಯನ್ನು ದಕ್ಷಿಣ ಭಾರತಕ್ಕೆ ಬೌದ್ಧ ಧರ್ಮ ಪ್ರಚಾರ ಮತ್ತು ಮೌಲ್ಯಾಧಾರಿತ ಆಡಳಿತ ನೀಡುವ ಸಲುವಾಗಿ ಕಳುಹಿಸಿದನು. ಬೌದ್ಧ ಭಿಕ್ಕು ಮಹಾದೇವತೇರ ಅಂದು ಆಳಿದ ಮಹಿಷ ಮಂಡಲವೇ ಇಂದಿನ ಮೈಸೂರು ಎಂಬುದನ್ನು ಪ್ರಸಿದ್ಧ ಇತಿಹಾಸಕಾರ ಸೂರ್ಯನಾಥ ಕಾಮತ್ ಮೈಸೂರು ಗೆಜೆಟಿಯರ್‌ನಲ್ಲಿ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಮಂಡಿಸಿದ್ದಾರೆ. ಮಹಿಷ ಮಂಡಲ, ಮಹಿಷ ಪುರಿ, ಮಹಿಷೂರು ಮೊದಲಾದ ಹೆಸರಿನಿಂದ ಮಹಿಷನ ಸಾಮ್ರಾಜ್ಯವು ಕರೆಯಲ್ಪಟ್ಟಿದೆ.

ಭಾರತದ ವೈದಿಕಶಾಹಿ ಮೂಲನಿವಾಸಿಗಳ ಶ್ರೇಷ್ಠ ದೊರೆಗಳಾದ ಬಲಿಚಕ್ರವರ್ತಿ, ರಾವಣ, ನರಕಾಸುರ, ಮಹಿಷಾಸುರ ಮೊದಲಾದವರನ್ನು ತುಚ್ಛೀಕರಿಸಿ ಬೌದ್ಧ ಪರಂಪರೆಯನ್ನು ನಾಶಮಾಡುವ ಹುನ್ನಾರ ನಡೆಸಿದ್ದಾರೆ" ಎಂದು ಪ್ರೊಫೆಸರರು ಆರೋಪಿಸುತ್ತಾರೆ.

ಆದರೆ ಅವರ ಲೇಖನವೇ ಹೇಳುವಂತೆ ಉತ್ತರ ಭಾರತದಿಂದ ಬಂದ ತೇರ ಮಹದೇವನೆಂಬ ಮಹಿಷ ಅದು ಹೇಗೆ ಸ್ಥಳೀಯ ಮೂಲನಿವಾಸಿಯಾಗುವನು?!  ಅಶೋಕನ ಅಜ್ಜಿ ಅಂದರೆ ಚಂದ್ರಗುಪ್ತ ಮೌರ್ಯನ ಹೆಂಡತಿಯಾದ ಹೆಲೀನ ಗ್ರೀಕ್ ರಾಜಕುಮಾರಿ ಎಂಬುದು ನಿಮ್ಮ ಗಮನದಲ್ಲಿರಲಿ. ಏಕೆಂದರೆ ಇಂದಿನ ಪ್ರಗತಿಪರರು ಹೇಳುವಂತೆ ಮಹಿಷ ಮೈಸೂರು ಸೀಮೆಯ ಮೂಲನಿವಾಸಿ ಅಲ್ಲ. ಆತ ಶಕ ಅಥವಾ ಸೈಥಿಯನ್ ಮೂಲದವನು. ಅಂದರೆ ಗ್ರೀಕ್ ಹಿನ್ನೆಲೆಯವನು.

ಇನ್ನು ಈ ಪ್ರಗತಿಪರರು ಉಲ್ಲೇಖಿಸಿದ ಸೂರ್ಯನಾಥ ಕಾಮತರು ಬರೆದ ಎಂಟನೂರು ಚಿಲ್ಲರೆ ಪುಟಗಳಿರುವ ಮೈಸೂರು ಗೆಜೆಟಿಯರ್ ನಲ್ಲಿ ತೇರ ಮಹದೇವ ಎಂಬ ಹೆಸರಿರುವ ಏಕೈಕ ಪುಟದ ಚಿತ್ರ ಕೆಳಗಿರುವ ಮೊದಲನೆಯದು. ನೀವೇ ಓದಿ ನೋಡಿ, ತೂಲಿಸಿ. ಮಹಿಷ ಸೈಥಿಯನ್/ಶಕ ಎಂಬ ಬಗ್ಗೆ ಪುರಾವೆ ಕೂಡ ಅಲ್ಲಿದೆ.



3. "ಮಹಿಷನು ಇಂದ್ರಾದಿ ದೇವತೆಗಳ ವಿರುದ್ಧ ವೀರೋಚಿತವಾಗಿ ಹೋರಾಟ ನಡೆಸಿ ಜಯಗಳಿಸಿದ ಸಂತಸದ ಸುದ್ದಿ ದಶ ದಿಕ್ಕುಗಳಲ್ಲಿಯೂ ಹರಡಿದ ಹಿನ್ನೆಲೆಯಲ್ಲಿ ಮೂಲನಿವಾಸಿಗಳು ಮಹಿಷನ ವಿಜಯವನ್ನು ‘ದಸರಾ’ ಎಂಬ ಹೆಸರಿನಲ್ಲಿ ದೊಡ್ಡ ಹಬ್ಬವನ್ನಾಗಿ ಆಚರಿಸುತ್ತಾರೆ" ಎಂದು ಮಹೇಶ್ ಚಂದ್ರ ಗುರುಗಳು ಪ್ರತಿಪಾದಿಸುತ್ತಾರೆ.

ಅಂದರೆ ದೇವಾನುದೇವತೆಗಳು ಐತಿಹಾಸಿಕವಾಗಿ ಇದ್ದರು ಎಂದು ನಾಸ್ತಿಕ ಪ್ರಗತಿಪರರು ಸಾಬೀತು ಮಾಡುತ್ತಿದ್ದಾರೆಯೇ? ಅವರೇ ಹೇಳಬೇಕು!

ಇರಲಿ, ಈ ಕುರಿತು ಮತ್ತದೇ ಸೂರ್ಯನಾಥ ಕಾಮತರ ಮೈಸೂರು ಗೆಜೆಟಿಯರ್ ನಲ್ಲಿ ಮಹಿಷ್ಮತಿಯರು ಸೈಥಿಯನ್ ಅಥವಾ ಶಕರು ಎಂಬ ಗ್ರೀಕ್ ಮೂಲದ ವಲಸೆಗಾರರು ಎಂಬ ವಿವರಗಳು ಸಿಗುತ್ತವೆ.  ಮಹಿಷ್ಮತಿಯರಿಗೆ ಹೆದರಿ ಇಲ್ಲಿನ ಆದಿವಾಸಿಗಳು ಕಾಡು ಬೆಟ್ಟಗಳಲ್ಲಿ ವಾಸಿಸುತ್ತಿದ್ದರು ಎಂದು ಕಾಮತರ ಗೆಜೆಟಿಯರ್ ಹೇಳುತ್ತದೆ. ಅದಲ್ಲದೇ ಈ ಬೆಟ್ಟದ ಜೀವಿಗಳು ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟದಲ್ಲಿರುವವರನ್ನು ಬೆಟ್ಟದ ತುದಿಯಿಂದ ಕೂಗಿ ವಿವಿಧ ಧ್ವನಿಗಳನ್ನು ಹೊರಡಿಸಿ ಪರಸ್ಪರ ಸಂವಹಿಸುತ್ತಿದ್ದರೆಂದೂ ಗೆಜೆಟಿಯರ್ ಹೇಳುತ್ತದೆ. ಆ ಸಂವಹನ ಪ್ರಕ್ರಿಯೆ ಸಾಕಷ್ಟು ಆದಿವಾಸಿಗಳಲ್ಲಿ ಇತ್ತೀಚಿನವರೆಗೆ ಚಾಲನೆಯಲ್ಲಿದ್ದಿತು. ಹಾಗಾಗಿಯೇ ಚಾಮುಂಡಿಯು ಬೆಟ್ಟದ ವಾಸಿ! ಈ ಸ್ಥಳೀಯ ಬುಡಕಟ್ಟು ಬೆಟ್ಟದ ವಾಸಿಗಳ ಚಾಮುಂಡಿಯೇ ವಲಸೆಗಾರ ಮಹಿಷನನ್ನು ಕೊಂದಳೆನ್ನಲಾಗುತ್ತದೆ ಎಂದು ಕಾಮತರು ದಾಖಲಿಸಿದ್ದಾರೆ. ಅವರೆಲ್ಲೂ ಇದು ವೈದಿಕ ಹೇರಿಕೆಯೆಂದಾಗಲಿ, ಅಥವಾ ಇದು ಪೌರಾಣಿಕ ಸಂಗತಿಯೆಂದಾಗಲಿ ಉಲ್ಲೇಖಿಸದೇ ಇದು ಇತಿಹಾಸದ ಸಂಗತಿ ಎನ್ನುತ್ತಾರೆ. ಈ ವಲಸಿಗ ಮಹಿಷನಿಂದ ಮಹಿಷೂರು ಎಂಬ ಹೆಸರು ಬಂದದ್ದು ನಿಜ. ಆದರೆ ಆತ ಇಲ್ಲಿನ ಮೂಲವಾಸಿ ಪಶುಪಾಲಕರವನಲ್ಲ.

ಕೆಳಗಿರುವ ಎರಡನೆಯ ಚಿತ್ರ ಈ ವಿವರಗಳನ್ನೊಳಗೊಂಡ ಮೈಸೂರು ಗೆಜೆಟಿಯರ್ ನ ಪುಟದ್ದು.

ಹಾಗೆಂದು ಬೌದ್ಧ/ಜೈನ/ವೈದಿಕ/ತಾಂತ್ರಿಕ ಪಂಥಗಳ ನಡುವೆ ಈರ್ಷ್ಯೆ ಇರಲಿಲ್ಲವೆಂದಲ್ಲ. ಅದೆಲ್ಲವೂ ಇದ್ದಿತು. ಆದರೆ ಅದು ಇಲ್ಲಿ ಅಪ್ರಸ್ತುತ.   ಪ್ರಸ್ತುತ ಎನ್ನುವುದಾದರೆ ಅದು ಮುಂದುವರಿದ ಜ್ವಲಂತ ಪಂಥವಾದ ಮಾತ್ರ. ಒಟ್ಟಿನಲ್ಲಿ ಮಹಿಷ ಹೊರಗಿನವ. ಇಲ್ಲಿನ ಪಶುಪಾಲಕ, ಅರಣ್ಯವಾಸಿ, ಆದಿವಾಸಿಗಳ ಅಧಿನಾಯಕಿ ಚಾಮುಂಡಿಯೇ ಹೊರತು ಮಹಿಷನಲ್ಲ.

ಹೀಗೆ ಪ್ರಗತಿಪರರು ಕೊಟ್ಟ ಸಾಕ್ಷಿಯಲ್ಲೇ ಇಂತಹ ವ್ಯತಿರಿಕ್ತ ವಿಚಾರವಿದ್ದಾಗ ಅದು ಹೇಗೆ ಈ ಪ್ರಗತಿಪರ ವಿಚಾರವಾದಿಗಳು ಘಂಟಾಘೋಷವಾಗಿ ಸುಳ್ಳನ್ನು ನುಡಿಯುತ್ತಿದ್ದಾರೆ?!? ಕೇವಲ ಮಹಿಷ ಬೌದ್ಧ ಧರ್ಮೀಯನಾಗಿದ್ದನೆಂಬ ಏಕೈಕ ಕಾರಣಕ್ಕೆ ಆತ ನಮ್ಮವನೆಂದು ನವಬೌದ್ಧಮತಿಗಳು ಪಕ್ಷಪಾತಗೈಯುತ್ತಿರುವರೇ? ಚಾಮುಂಡಿ ದಸರೆಗೆ ಪರ್ಯಾಯವಾಗಿ ಏಕೆ ನಾವೊಂದು ತೊಡೆ ತಟ್ಟಬಾರದೆಂಬ ಕದನೋತ್ಸಾಹವೆ? ದಸರಾ ಕುಸ್ತಿ ಪಂದ್ಯದಲ್ಲಿ ಅನ್ಯಪಂಥೀಯರಿಗೆ ತೊಡರುಗಾಲು ಹಾಕಿ ಮಣ್ಣು ಮುಕ್ಕಿಸಬೇಕೆಂಬ ಕುಸ್ತಿ ಪಟ್ಟೇ? ಇದು ನಮ್ಮ ನವ ಸಮಾಜದ ದುರಂತ.

ಒಟ್ಟಾರೆ ಸಮಾಜದಲ್ಲಿನ ಸ್ವಾಸ್ಥ್ಯವನ್ನು ಹೇಗೆ ಇಂದಿನ ವಿದ್ಯುನ್ಮಾನ ಯುಗದಲ್ಲೂ ಹಾಳುಗೆಡವಲಾಗುತ್ತಿದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ನಿದರ್ಶನ. ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತಿಗೇ ಅತ್ಯುತ್ತಮವೆಂದು, ವಿಶ್ವಗುರುವೆಂದು ಸ್ವಘೋಷಿಸಿಕೊಂಡಿರುವ, ಮತ್ತು ಕಿಂಡರ್ ಗಾರ್ಟನ್ನಿಗೆ ಲಕ್ಷ ಲಕ್ಷ ರೂಪಾಯಿಗಳ ಶುಲ್ಕ ವಿಧಿಸುವ ನಮ್ಮ ಶಿಕ್ಷಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದರ ಪ್ರಾತ್ಯಕ್ಷಿಕ ನಿದರ್ಶನವಿದು. ನಮ್ಮ ಸಮಾಜ ಸಮಗ್ರವಾಗಿ ವಿಮರ್ಶಿಸಿಕೊಳ್ಳಲೇಬೇಕಾದ "ದುರಿತ ಕಾಲ" ಕೂಡ.

ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡುವ ಈ "ಮಹಿಷ ಕಾಲ"ದಲ್ಲಿ ನಿಜ ಇತಿಹಾಸವನ್ನು ಎತ್ತಿ ಹಿಡಿಯೋಣ.  ಎಡ ಬಲ ಪಂಥಗಳು ಪರಸ್ಪರ ಸೈದ್ಧಾಂತಿಕ ವಾಗ್ವಾದಗಳಲ್ಲಿ ಜಯ ಸ್ಥಾಪಿಸಲು ಹೆಣಗುವ ಮತ್ತು ಹಣಿಯುವ ಈ ಕಾಲಘಟ್ಟದಲ್ಲಿ ಸತ್ಯದ ಇತಿಹಾಸ ಕೊಚ್ಚಿ ಹೋಗದಂತೆ, ವಿರೂಪಗೊಳ್ಳದಂತೆ ಕಾಪಾಡುವ ನಾಗರೀಕ ಜವಾಬ್ದಾರಿಯನ್ನು ನಾವೆಲ್ಲರೂ ಹೊರಲೇಬೇಕು. ಇಲ್ಲದಿದ್ದರೆ ಸುಳ್ಳಿನ ಪರಂಪರೆಯನ್ನೇ ನಾವು ನಮ್ಮ ಮುಂದಿನ ಸಂತತಿಗೆ ಬಿಟ್ಟು ಹೋಗಬೇಕಾಗುತ್ತದೆ, ಅದೂ ಲಕ್ಷ ಲಕ್ಷ ಶುಲ್ಕ ಪಡೆದು! ಇದು ಅಕ್ಷಮ್ಯ ಅಕ್ಷರ ವ್ಯಭಿಚಾರ. ಈ ಅಕ್ಷರ ವ್ಯಭಿಚಾರ, ಪಂಥ ಹೇರಿಕೆ, ಸಿದ್ದಾಂತ ಸಾಬೀತಿಗೆ ನಮ್ಮ ಇತಿಹಾಸ ಬಲಿಯಾಗುವುದನ್ನು ತಡೆಯಲು ಮತ್ತೊಂದು ಸತ್ಯಪಂಥದ ಚಳುವಳಿಯನ್ನೇ ಆರಂಭಿಸಬೇಕೇನೋ!?!

ಇನ್ನು ವಿಪರ್ಯಾಸವೆಂದರೆ ಯಾರಲ್ಲಿ ಅಸಹಿಷ್ಣುತೆ, ಅಸೂಯೆ, ಕುಚೋದ್ಯ, ಕುತಂತ್ರ, ಭಯೋತ್ಪಾದನೆ (ಪರಪಂಥದೆಡೆ), ಸಂಕುಚಿತತೆ, ಉದಾರತೆಯ ಸೋಗಿನಲ್ಲಿ ಸ್ತ್ರೀಶೋಷಣೆ, ಜಾತೀಯತೆಗಳೆಂಬ ದಶ ಗುಣಗಳು ತುಂಬಿ ತುಳುಕುತ್ತಿವೆಯೋ ಅದೇ ಪಟ್ಟಭದ್ರಹಿತಾಸಕ್ತಿಗಳು, ಈ ಎಲ್ಲಾ ಗುಣಗಳು ದೇಶದ ತುಂಬೆಲ್ಲಾ ತುಂಬಿ ತುಳುಕುತ್ತಿವೆಯೆಂದು ಕಳವಳ ವ್ಯಕ್ತಪಡಿಸುತ್ತಿರುವುದು!
ಆ ಎಲ್ಲಾ ಮಹಿಷ, ಚಾಮುಂಡಿ, ದುರ್ಗೆ, ಎಮ್ಮೆ ಮೈಯವರು, ಹುಲಿಸವಾರಿಯವರು, ಮತ್ತು ಮನುಷ್ಯರಾದಿಯಾಗಿ ಎಲ್ಲರಲ್ಲೂ ತುಂಬಿರುವ ದಶ ಅವಗುಣಗಳು ದಶಹರವಾಗಲಿ.

ಹೇ ರಾಮ್ ಮತ್ತು ಶ್ರೀರಾಮ್ ನಡುವಿನ ಹರಾಮಿತನವನ್ನು ಭಸ್ಮವಾಗಿ ಸತ್ಯಮೇವಜಯತೆ ಪ್ರಜ್ವಲಿಸಲಿ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ
#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: