Abdul Razak of Gadag

ತಿಳಿರುಗನ್ನಡದ , ಸಾಮರಸ್ಯದ ಸ್ವರ್ಗವಾದ ಗದುಗಿನ ನಡೆದಾಡುವ ಇತಿಹಾಸ ಕೋಶ ಅಬ್ದುಲ್ ರಜಾಕ್ ಅವರೊಟ್ಟಿಗೆ ಕಳೆದ ಎರಡು ದಿನಗಳು ಅದ್ಭುತ ಅನುಭವವನ್ನು ಕೊಟ್ಟವು.
ನನ್ನ "ಭಾರತ ಒಂದು ಮರುಶೋಧನೆ"ಯನ್ನು ಓದಿ ಸಹಮತ ತೋರಿ ಕಾಳಮುಖರ ಕಲಾಮುಖ ಶಿಲ್ಪಶಾಸ್ತ್ರ ಹೇಗೆ ದಕ್ಷಿಣಾಚಾರ, ದಖನಾಚಾರ, ಜಕಣಾಚಾರವೆನಿಸಿಕೊಳ್ಳುತ್ತ ಮುಂದೆ ಹೇಗೆ ಜಕಣಾಚಾರಿ ಎಂಬ ಕಾಲ್ಪನಿಕ ವ್ಯಕ್ತಿ ಸ್ವರೂಪ ತಾಳಿತು ಎಂಬ ಸಾಕಷ್ಟು ಸಂಶೋಧಕರ ಸಂಶೋಧನೆಯನ್ನು ಅಬ್ದುಲ್ ರಜಾಕ್ ಎತ್ತಿ ಹಿಡಿದರು.
ತಮ್ಮ ಯೌವನವನ್ನು ಉತ್ಖನನ ಸಹಾಯಕರಾಗಿ ಅನೇಕ ಸಂಶೋಧಕರೊಂದಿಗೆ ಕೆಲಸ ಮಾಡಿ, ಇತಿಹಾಸ, ಸ್ಮಾರಕ, ಸಂಶೋಧನೆಗಳನ್ನೇ ಉಸಿರಾಗಿಸಿಕೊಂಡು ಅವುಗಳ ಸಂರಕ್ಷಣೆಗೆ ಮ್ಯೂಸಿಯಂ ತೆರೆದು ಸರ್ಕಾರಕ್ಕೆ ದಾನವಾಗಿ ಕೊಟ್ಟ ಸತ್ಯ ಸಂಶೋಧಕರಾದ ಅಬ್ದುಲ್ ರಜಾಕರ
ಸತ್ಯನಿಷ್ಠೆ, ಉದಾರವಾದ, ಇತಿಹಾಸದ ಆಳ ಅರಿವು, ಓದು, ಸ್ಮಾರಕಗಳ ಕುರಿತಾದ ಕಳಕಳಿ ಯಾವುದೇ ಪೋಸ್ಟ್ ಡಾಕ್ಟೋರಲ್ ಸಂಶೋಧಕರಿಗಿಂತ ಕಡಿಮೆ ಇಲ್ಲ. ಹಾಂ, ಗದುಗಿನ ವಾಸಿಯಾದ ಇವರು ನಿವೃತ್ತಿಯ ನಂತರ ಲಕ್ಕುಂಡಿಯಲ್ಲಿ ಗೈಡ್ ಆಗಿ ಸ್ಮಾರಕಗಳ ರಕ್ಷಣೆಯನ್ನು ಪರೋಕ್ಷವಾಗಿ ಮಾಡುತ್ತಿದ್ದಾರೆ.
ರಾಜೀವ್ ದೀಕ್ಷಿತರ ಜಯಂತುತ್ಸವದಲ್ಲಿ ಇತಿಹಾಸದ ಕುರಿತು ಮಾತನಾಡಲು ಸ್ವದೇಶಿ ಆಂದೋಲನದ ಸಂಚಾಲಕರು ನನ್ನನ್ನು ಗದಗಿಗೆ ಆಹ್ವಾನಿಸಿ ಅಬ್ದುಲ್ ರಜಾಕರ ಭೇಟಿಗೆ ಕಾರಣವಾದರು. ಅದಲ್ಲದೇ ನಾನು ರಜಾಕರ ಕುರಿತು ತಿಳಿಸಿದಾಗ ತಕ್ಷಣಕ್ಕೆ ಅವರನ್ನು ಸನ್ಮಾನಿಸಿ ಗೌರವಿಸಿದರು ಕೂಡ. ಇದು ನಿಜವಾದ ಉದಾರವಾದ!
ಇಂತಹ ಉದಾರವಾದವನ್ನು ಮಾತಿನಲ್ಲಿ ಉದ್ಘೋಷಿಸುತ್ತ ಉದರವಾದವನ್ನು ಪಾಲಿಸುವವರು ಇನ್ನಾದರೂ ತಮ್ಮ ಅಸಹನೆ, ಸಂಕುಚಿತತೆ, ಅಸ್ಪೃಶ್ಯತೆ, ದ್ವೇಷ, ಪೂರ್ವಾಗ್ರಹಗಳನ್ನು ಮೀರಿ ಸಮಾಜದಲ್ಲಿ ಸಂಭಾಷಿಸಬಲ್ಲರೆ?!? ಗೊತ್ತಿಲ್ಲ. ಒಟ್ಟಿನಲ್ಲಿ ಆ ವೈರುಧ್ಯದ ಉದರವಾದಿ ಪಂಥದವರು ನನ್ನನ್ನಷ್ಟೇ ಅಲ್ಲದೇ ಅವರದೇ ಪಂಥಬಳಗದವರಿಗೆ "ನೀವು ಅಲ್ಲಿಗೆ ಹೋಗಬಾರದು, ಇವರೊಟ್ಟಿಗೆ ಕೂರಬಾರದು, ಇವರೊಂದಿಗೆ ಮಾತನಾಡಬಾರದು, ಕೈಕುಲುಕಬಾರದು, ಬಾರಿಗೆ ಕುಡಿಯಲು ಹೋದರೆ ಅಲ್ಲಿ ಯಾವುದಾದರೂ ಬಲಪಂಥೀಯ/ದೇಶಭಕ್ತನಿದ್ದಾನೆಯೇ ಎಂದು ಪರಿಶೀಲಿಸಿ ಕುಳಿತುಕೊಳ್ಳಬೇಕು" ಎಂದು
ಸೆಕ್ಷನ್ 144, ಕರ್ಫ್ಯೂಗಳನ್ನು ಹಾಕಿ ದಾದಾಗಿರಿ ನಡೆಸುತ್ತಾರೆ.
ವಿಶ್ವದೆಲ್ಲೆಡೆ ಇರುವ ಲಿಬರಲ್ (ಉದಾರವಾದ) ಮತ್ತು ಕನ್ಸರ್ವೇಟಿವ್ (ಸಂಪ್ರದಾಯವಾದ) ಪಂಥಗಳು ಭಾರತದ ಎಡ ಮತ್ತು ಬಲ ಎಂದಾಗುವುದಿಲ್ಲ. ಹಾಗೆಂದುಕೊಂಡಿದ್ದರೆ ಅದು ತಪ್ಪು ಗ್ರಹಿಕೆ. ಭಾರತದ ಎಡ/ಬಲಗಳೆರಡೂ ಪೂರ್ವಾಗ್ರಹದ ಪಂಥಗಳು.

No comments: