ವ್ಯಂಗ್ಯ

ಇದು ಭಾರತದ ವರ್ತಮಾನವನ್ನು ಯಥಾವತ್ತಾಗಿ ತೆರೆದಿಡುವ ವ್ಯಂಗ್ಯ!  ಇಲ್ಲಿ ಇದು ಸಾಧ್ವಿಯೋರ್ವಳ ಮತ್ತು ಸೈನಿಕನೋರ್ವನ ನಾಮಪತ್ರಕ್ಕಿಂತ ಭಾರತದ ಅಸ್ಮಿತೆ, ಪ್ರಜಾಪ್ರಭುತ್ವವನ್ನೇ ವ್ಯಂಗಿಸುವ ಚಿತ್ರ! ಆದರೆ ಅದು ಆ ರೀತಿಯಾಗಿ ಎಲ್ಲಿಯೂ ಬಿಂಬಿತಗೊಂಡಿಲ್ಲ. ಇಲ್ಲಾ ಸಾಧ್ವಿಯೆಡೆ ಅಥವಾ ಸೈನಿಕನೆಡೆ ವಾಲಿಕೊಂಡು ಬಿಂಬಿತಗೊಂಡಿದೆ.

ಗಾಬರಿಯ ಸಂಗತಿ ಯಾವುದೆಂದರೆ ಇಂತಹ ಯಕಶ್ಚಿತ್ ಸಂಗತಿಯನ್ನು ನನ್ನ ಬಳಗದಲ್ಲಿರುವ ಮುಗ್ಧ ಭಕ್ತರಾಗಲೀ ಅಥವಾ ಮಾಧ್ಯಮ/ಬುದ್ಧಿಜೀವಿಗಳಾಗಲಿ ಭಿನ್ನವಾಗಿ ಎತ್ತದೇ, ಎಡ ಅಥವಾ ಬಲ ಆಗಿ ವಾಲಿಕೊಂಡು ಸಮಾನತೆಯನ್ನು ಮೆರೆದಿರುವುದು!!!

ಪೂಲನ್ ದೇವಿಯಿಂದ ಪಪ್ಪು ಯಾದವನವರೆಗೆ, ಮತ್ತು ಈಗಿನ ಸಾಧ್ವಿ ಸೈನಿಕನವರೆಗೆ ಸಮಾಜದಲ್ಲಿ ಕ್ರಿಮಿನಲ್ ಅಥವಾ ಸ್ಪರ್ಧಿಸಲು ಅಸಿಂಧು ಎನ್ನಿಸಿಕೊಂಡವರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಆಗೆಲ್ಲಾ ಮೋದಿ ಇರಲಿಲ್ಲ, ಈಗಿದ್ದಾನೆ. ಅಂದರೆ ಮೋದಿ ಒಂದು ವ್ಯತ್ಯಾಸವೇ ಆಲ್ಲ!

ಇಲ್ಲಿ ಘನವಾಗಿ ಎತ್ತಬೇಕಾದ ವಿಷಯ, ನಮ್ಮ ಸಂವಿಧಾನ ಮತ್ತು ನಮ್ಮ ನ್ಯಾಯಾಂಗ!

ಇಂತಹದ್ದಕ್ಕೆ ಅವಕಾಶ ನೀಡಿರುವುದು ಆ ಸಾಂವಿಧಾನಿಕ ಮತ್ತು ನ್ಯಾಯಾಂಗ ವ್ಯವಸ್ಥೆಯ ವಿಫಲತೆ ಎಂದೇಕೆ ಈ ಪ್ರಜ್ಞಾವಂತ ಬಳಗ ಪ್ರಸ್ತುತ ಪಡಿಸುತ್ತಿಲ್ಲ, ಅದರಲ್ಲೂ ಸಂವಿಧಾನವನ್ನು ಉಳಿಸುವುದೇ ತಮ್ಮ ಜೀವನದ ಪರಮೋಚ್ಚ ಗುರಿ ಎಂದು ಬಿಂಬಿಸಿಕೊಂಡ ಪತ್ರಕರ್ತರು, ಪ್ರೊಫೆಸರರುಗಳು, ಕಲಾವಿದರು, ಮತ್ತು ಬುದ್ಧಿಜೀವಿಗಳು...? 

ಇಂದು ಇಂತಹ ಸಾಮಾನ್ಯ ಸಂಗತಿಯನ್ನು ಅರಿಯದಷ್ಟು ಮೌಢ್ಯವನ್ನು ಶಿಶುವಿಹಾರದಿಂದಲೇ ಲಕ್ಷ ಲಕ್ಷ ಫೀಯನ್ನು ಕಕ್ಕಿ ಪ್ರಜ್ಞಾವಂತರಾದ ವಿದ್ಯಾವಂತ ಸಮಾಜ ಪಡೆದುಕೊಂಡ ಶಿಕ್ಷಣದ ಬಳುವಳಿಯೋ, ಅಂಬೇಡ್ಕರರ ಹೆಸರು ಹೇಳುತ್ತಾ ಸಂವಿಧಾನದ/ಸಮಾನತೆಯ ದಿವ್ಯಜ್ಞಾನವನ್ನು ಪಡೆದುಕೊಂಡೆವೆಂಬುವರ ಮತಿ(ತೀ)ಯೋ, ಪೂರ್ವಯೋಜಿತ ನಿಯಮಬದ್ಧತೆಯೋ, ಅಥವಾ ಪಾಪಿ ಪೇಟ್ ಕಾ ಸವಾಲೋ... ಎಸ್ಸೆಸ್ಸೆಲ್ಸಿಯಲ್ಲಿ ಫೇಲಾದ ನಾನು ಅರಿಯೆ!

ಇಂತಹ ಅತೀ ಸಾಮಾನ್ಯ ಸಂಗತಿ, ಅಂತಹ ಅಪ್ರಮೇಯ, ಅದ್ವಿತೀಯ, ಅಸಾಮಾನ್ಯರಿಗೆ ಹೊಳೆಯದಿರುವುದು ನನ್ನ ಮೂಢಮತಿಯ ಎಲ್ಲೆಯನ್ನು ಮೀರಿದೆ.

#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

No comments: