ಸೆಕ್ಯುಲರಿಸಂ ಹೋಯ್ತು ಟೋಟಲಿಟೇರಿಯನ್ ಬಂತು ಡುಂ ಡುಂ!

ಇಂದಿನ ಉದಯಕಾಲದಲ್ಲಿ ನನ್ನ ಒಂದು ಲೇಖನ:

ದೇಶ ಇಂದು ಅತ್ಯಂತ ವಿಭಜಿತಗೊಂಡಿದೆ ಅಥವಾ ಆ ರೀತಿಯಾಗಿ ಬಿಂಬಿಸಲಾಗಿದೆ. ಮೋದಿ ಎಂಬ ವ್ಯಕ್ತಿಯ ಆರಾಧನೆಯಲ್ಲಿ ತೊಡಗಿದ ದೇಶ ಕ್ರಮೇಣ ಟೋಟಲಿಟೇರಿಯನ್ ಆಗುತ್ತಾ ನಂತರ ಸರ್ವಾಧಿಕಾರಿಯನ್ನು ಹೊಂದುವತ್ತ ಭಾರತ ದಾಪುಗಾಲಿಡುತ್ತಿದೆ ಎಂಬ ಪ್ರಜ್ಞಾವಂತರ ಕಳವಳದ ಕೂಗು ತೀವ್ರವಾಗಿ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಂಚ ಇದರ ಪರಿಣಾಮಗಳನ್ನು ಅವಲೋಕಿಸೋಣ.

ಮೊದಲಿಗೆ ಟೋಟಲಿಟೇರಿಯನ್ ಎಂದರೆ ಸಾಕಷ್ಟು ಸಂಖ್ಯೆಯಲ್ಲಿ ವಿರೋಧಪಕ್ಷಗಳಿಲ್ಲದೇ ಆಡಳಿತ ಏಕಪಕ್ಷೀಯವಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಟೋಟಲಿಟೇರಿಯನ್ ವ್ಯವಸ್ಥೆ ಎನ್ನಬಹುದು. ಅದಕ್ಕೆ ಕಾರಣ ಒಂದು ಪ್ರಜಾಪ್ರಭುತ್ವ ದೇಶದ ಜನರೆಲ್ಲಾ ಒಂದು ಪ್ರಮುಖ ಪಕ್ಷವನ್ನು ಏಕಪಕ್ಷೀಯವಾಗಿ ಚುನಾವಣೆಗಳಲ್ಲಿ ಗೆಲ್ಲಿಸುವುದು. ಇದನ್ನು ತಪ್ಪಿಸಲು ಸಾಧ್ಯವಿಲ್ಲ. ಅದಕ್ಕೆ ಆ ಪಕ್ಷಗಳು ಯಾವುದೇ ರೀತಿಯ ಕಾನೂನಾತ್ಮಕ ವಾಮಮಾರ್ಗಗಳನ್ನು ಬಳಸಿಕೊಂಡು ಅಧಿಕಾರ ಹಿಡಿಯುವುದನ್ನು ಇಂದಿನ ಸಂವಿಧಾನ ಮತ್ತು ಕಾನೂನುಗಳು ತಪ್ಪಿಸುವುದು ಸಾಧ್ಯವಾಗಿದ್ದರೆ ಇಂದು ಇಂತಹ ಕೂಗು ಇರುತ್ತಿರಲಿಲ್ಲ. ಹಾಗಾಗಿ ಇದು ವ್ಯವಸ್ಥೆಯ ದೋಷ. ಈ ರೀತಿಯ ಟೋಟಲಿಟೇರಿಯನ್ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ. ಆದರೆ ಬರುವುದನ್ನು ತಡೆಯಲು ಸಾಧ್ಯವಿಲ್ಲ.

ಆದರೆ ಆ ರೀತಿಯ ಟೋಟಲಿಟೇರಿಯನ್ ಪರಿಸ್ಥಿತಿ ಆಗಲೇ ಸೃಷ್ಟಿಯಾಗಿ ಮೋದಿ ಅದರ ಚುಕ್ಕಾಣಿ ಹಿಡಿದಿದ್ದಾನೆ ಎಂಬುದು ಪ್ರಜ್ಞಾವಂತರ ಪ್ರಬಲ ಅನಿಸಿಕೆ ಮತ್ತು ವಿರೋಧ.

ಸರಿ, ಪರ್ಯಾಯವೇನು?

ನಮ್ಮ ಪ್ರಜ್ಞಾವಂತರು ಇದಕ್ಕೆ ಪರಿಹಾರವಾಗಿ ಬಹುತ್ವವೇ ಮಾರ್ಗವೆನ್ನುತ್ತಾರೆ. ಅಂದರೆ ಸಧೃಢ ವಿರೋಧಪಕ್ಷ, ಮತ್ತು ಎಲ್ಲಾ ವರ್ಗಗಳ ಸಮತೋಲಿತ ಪ್ರತಿನಿಧಿತ್ವವನ್ನು ಹೊಂದಿದಾಗ ಅದು ಆರೋಗ್ಯಕರ ಪ್ರಜಾಪ್ರಭುತ್ವವಾಗುತ್ತದೆ ಎನ್ನುತ್ತಾರೆ. ಅದು ಅಕ್ಷರಶಃ ಸತ್ಯ ಕೂಡ.

ಹಾಗಿದ್ದರೆ ಅಂತಹ ಬಹುತ್ವದ ಸರ್ಕಾರ ಹೇಗಿರುತ್ತದೆ?

ಈಗ ಅಂತಹ ಆರೋಗ್ಯಕರ ಬಹುತ್ವವನ್ನು ಪ್ರತಿನಿಧಿಸುವ ಪ್ರಜಾಪ್ರಭುತ್ವ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿದೆ. ಯಾರಿಗೂ ಮೆಜಾರಿಟಿ ಬರದೆ ಎರಡು ಪಕ್ಷಗಳ ಸಮ್ಮಿಶ್ರ ಸರ್ಕಾರ ಆಡಳಿತ ಹಿಡಿದಿದ್ದು, ನೂರಾನಾಲ್ಕು ಸದಸ್ಯರ ಸಂಖ್ಯೆಯ ಪ್ರಬಲ ವಿರೋಧಪಕ್ಷವನ್ನು ಹೊಂದಿ ಕರ್ನಾಟಕದಲ್ಲಿ ಮಾದರೀ ಪ್ರಜಾಪ್ರಭುತ್ವ ಜಾರಿಯಲ್ಲಿದೆ.

ಹಾಗೆಂದು ಕರ್ನಾಟಕದಲ್ಲಿ ಈ ಬಹುತ್ವದ ವ್ಯವಸ್ಥೆ ಅಸಲಿಗೆ ಮಾದರಿಯಾಗಿದೆಯೇ?

ಕರ್ನಾಟಕದಲ್ಲಿ ಸರ್ಕಾರವಿದೆಯೇ ಎಂಬಷ್ಟು ಸರ್ಕಾರ ನಿಷ್ಕಿಯವಾಗಿದೆ, ವಿರೋಧಪಕ್ಷಗಳೂ ಸೇರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕದ ಮಂತ್ರಿಯೊಬ್ಬನ ಐನೂರು ಕೋಟಿಯಷ್ಟು ಅಕ್ರಮ ಆಸ್ತಿ ಜಪ್ತಿಗೊಂಡಿದ್ದರೂ ಸರ್ಕಾರ, ವಿರೋಧಪಕ್ಷಗಳು ಆತನ ರಾಜೀನಾಮೆಯನ್ನು ಕೇಳಿಲ್ಲ. ಕತ್ತೆ ಮೆರವಣಿಗೆಯಂತಹ ವಿಭಿನ್ನ ಚಳುವಳಿಗಳ ಮಾಡಿ ಸುದ್ದಿಯಾಗುತ್ತಿದ್ದ ವಾಟಾಳ್ ಕೂಡಾ ಈ ಕುರಿತು ಸುದ್ದಿ ಮಾಡುತ್ತಿಲ್ಲ. ಇನ್ನು ಮಳೆ ಬಾರದಿದ್ದುದಕ್ಕೆ ಕಪ್ಪೆ ಮದುವೆ ಮಾಡುವ ಜನತೆ, ಟೌನ್ ಹಾಲ್ ಮುಂದೆ ತೌಡು ಕುಟ್ಟುವ ಹಣತೆಗಳೂ ಮೌನಕ್ಕೆ ಜಾರಿವೆ. ಅಂದರೆ ರಾಮರಾಜ್ಯಕ್ಕೆ ಅತ್ಯಂತ ಸಮೀಪವೆನ್ನಬಹುದಾದ ಬಹುತ್ವದ ವ್ಯವಸ್ಥೆ ಕೂಡಾ ಅತ್ಯಂತ ಕಳಪೆಯಾಗುವುದಕ್ಕೆ ಇದು ನಿದರ್ಶನವಾಗಿದೆ. ಅಂದರೆ ಈ ಬಹುತ್ವದ ಮಾದರಿ ಎನ್ನಬಹುದಾದ ಕಲ್ಪನೆ ಕೂಡಾ ಹುಸಿಯಾಗಿದೆ.

ಹಾಗಿದ್ದರೆ ಇದನ್ನು ಸರಿಪಡಿಸುವ ಮಾರ್ಗ?

ಇದನ್ನು ಸರಿಪಡಿಸಲೆಂದೇ ಸಂವಿಧಾನಿಕವಾಗಿ ಸಮತೋಲನ ಮತ್ತು ನಿಯಂತ್ರಣಗಳನ್ನು ಹೊಂದಿ, ಅಧಿಕಾರವನ್ನು ವಿಭಜಿಸಲಾಗಿರುತ್ತದೆ. ಅಂತಹ ಸಮತೋಲಿತ ನಿಯಂತ್ರಣ ಮತ್ತು ಪ್ರತಿಬಂಧನ ಮತ್ತು ಅಧಿಕಾರ ವಿಕೇಂದ್ರೀಕರಣಗಳು ನಮ್ಮ ಸಂವಿಧಾನದಲ್ಲಿ ಇಲ್ಲವೇ? ಇರಬಹುದು, ಆದರೆ ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಈ ಎಲ್ಲಾ ಪರಿಸ್ಥಿತಿಗಳು ತೋರಿಸಿಕೊಡುತ್ತಿವೆ.

ಮೇಲಾಗಿ ಇಂತಹ ಬಹುತ್ವದ ಸರ್ಕಾರ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ಕೇಂದ್ರದಲ್ಲಿ ಕೂಡಾ ಈ ಮೊದಲು ಇದ್ದಿತು.  ಆ ಬಹುತ್ವದ ಸರ್ಕಾರದ ವೈಫಲ್ಯವನ್ನು ಮನಗಂಡೇ  ಜನ ಇಂದಿನ ಟೋಟಲಿಟೇರಿಯನ್ ಸರ್ಕಾರವನ್ನು ಆರಿಸಿದ್ದಲ್ಲದೇ ಮತ್ತೊಮ್ಮೆ ಅದನ್ನೇ ಆರಿಸಿ ಅನುಮೋದಿಸಲಿದೆಯೆಂದು ಸಮೀಕ್ಷೆಗಳು ತಿಳಿಸಿವೆ. ಏತಕ್ಕಾಗಿ ಜನತೆ ಇಂತಹ ಟೋಟಲಿಟೇರಿಯನ್ ಯಾ ಸರ್ವಾಧಿಕಾರಿ ಸರ್ಕಾರವನ್ನು ಆರಿಸುತ್ತಿದ್ದಾರೆ?

ಕೇವಲ ಸ್ವಲ್ಪ ಪ್ರಾಮಾಣಿಕತೆ, ಗಟ್ಟಿ ನಿಲುವು, ದಿಟ್ಟ ಮಾತಿಗೆ ಇಡೀ ದೇಶ ಮರುಳಾಗುವಂತಾಗಿದೆ ಎಂದರೆ ಅದಕ್ಕೆ ಆ ವ್ಯಕ್ತಿ ಕಾರಣನಲ್ಲ, ಆತನ ಯಾವುದೇ ತಂತ್ರಗಳೂ ಕಾರಣವಲ್ಲ.  ಕಿಂದರಿಜೋಗಿಯ ತುತ್ತೂರಿಗೆ ತಲೆದೂಗಿ ಬಲಿಯಾಗುವಷ್ಟು ಜನ ಮೂರ್ಖರೇ?

ಆದರೆ ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುವುದಾದರೆ ಅದಕ್ಕೆ ಅಂತಹ ದೇಶ ಸಾಗಿಬಂದ ಸುಧೀರ್ಘ ಬೌದ್ಧಿಕ ದಿವಾಳಿತನ, "ಆತ್ಮಸಾಕ್ಷಿ" ಮತ್ತದರ ಧಾಷ್ಟ್ಯತೆಗಳು ಕಾರಣಗಳೇ ಹೊರತು, ಭಾರತದಂತಹ ವೈವಿಧ್ಯತೆಯ ದಟ್ಟ ಜನಸಂಖ್ಯೆಯ ನಾಡು ಯಾವುದೇ ರೀತಿಯ ತಂತ್ರಗಳಿಗೆ ಏಕಪಕ್ಷೀಯವಾಗಿ ತುತ್ತೂರಿಯ ಸಂಗೀತ ನಿನಾದಕ್ಕೆ ಬಲಿಯಾಗುತ್ತಿದೆ ಎಂಬುದು ಸುಳ್ಳು.

ಹತಾಶೆಗೊಳಗಾದ ಜನತೆ, ’ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ’ ಎಂಬ ಭರವಸೆಯನ್ನು ನೆಚ್ಚಿಕೊಂಡು ಮೋದಿಯೊಂದಿಗಿದ್ದಾರೆಯೇ ಹೊರತು ಯಾವುದೇ ಪವಾಡಸದೃಶ ಬದಲಾವಣೆಯನ್ನು ಬಯಸಿಯಲ್ಲ. ಭರವಸೆಗಳನ್ನು ಇಟ್ಟುಕೊಳ್ಳುವುದು ಭಕ್ತಿ ಎನಿಸಿದರೆ ಅದಕ್ಕಿಂತ ಬೌದ್ಧಿಕ ದಿವಾಳಿತನ ಮತ್ತೊಂದಿಲ್ಲ.

ಇಂದು ದೇಶವನ್ನು ವಿಭಜಿಸುತ್ತಿರುವವರು ಯಾವುದೋ ಒಂದು ಭರವಸೆಯನ್ನು ಹೊತ್ತ ಜನರಲ್ಲ. ಸತ್ತ ಸಂಚಲನಹೀನ ಪಂಥಗಳಿಗೆ ಅಲವತ್ತುಕೊಂಡ ಜನರು ವಿಭಜಿಸುತ್ತಿದ್ದಾರೆ. ಅವರ ನಿಲುವು ಅಭಿಪ್ರಾಯಗಳೇ ದ್ವಂದ್ವದ ಗೂಡಾಗಿವೆ.  ಒಂದೆಡೆ ಸಂವಿಧಾನ ಸಧೃಢವಾಗಿದೆ ಎನ್ನುತ್ತಾರೆ. ಮತ್ತೊಂದೆಡೆ ವ್ಯವಸ್ಥೆ ಟೋಟಲಿಟೇರಿಯನ್ ಆಗಿದೆ ಬಹುತ್ವ ಬೇಕೆನ್ನುತ್ತಾರೆ. ಆ ದ್ವಂದ್ವವನ್ನು ಇಂದಿನ ವಾಸ್ತವದ ಹಿನ್ನೆಲೆಯಲ್ಲಿ ಅರ್ಥಮಾಡಿಕೊಂಡಿದ್ದಾರೋ ಅಥವಾ ಕುರುಡು ಜಾಣತನವನ್ನು ತೋರುತ್ತಿದ್ದರೋ ಅರಿಯದು. 

ಒಟ್ಟಿನಲ್ಲಿ, ಮುಕ್ತ ಮನಸ್ಸಿನ ಕ್ರಿಯಾಶೀಲ ವೈಚಾರಿಕತೆಯ ಮೇಲೆ ಪ್ರಜ್ಞಾವಂತರ ಚಿಂತನೆ ರೂಪುಗೊಂಡಿದ್ದರೆ ಇಂದು ದ್ವಂದ್ವ, ವಿಭಜನೆ, ನಿಷ್ಕ್ಟ್ರಿಯತೆಗಳೇ ಇರುತ್ತಿರಲಿಲ್ಲ. ಅಂದಹಾಗೆ, ಮೋದಿಯ ಸರ್ಕಾರ ಬಹುತ್ವದ ಸರ್ಕಾರ. ಅದರಲ್ಲೂ ಅನೇಕ ಮಿತ್ರಪಕ್ಷಗಳಿದ್ದು ಅವೆಲ್ಲವೂ ತಮ್ಮ ಮೋದಿಯನ್ನು ತಮ್ಮ ಸಂಸದೀಯ ನಾಯಕನೆಂದು ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ಈ "ಟೋಟಲಿಟೇರಿಯನ್" ಪದ ಹೇಗೆ ಎಲ್ಲಿಂದ ಯಾರಿಂದ ಬಂದಿತು? ಜನರನ್ನು ಏನೂ ಗೊತ್ತಿರದ ಮತ್ಸ್ಯಬುದ್ಧಿ ಮೂರ್ಖರೆಂದು ತಿಳಿದು ಈ ರೀತಿ ಬಣ್ಣ ಹಚ್ಚುತ್ತಿದ್ದಾರೆಯೇ ಅಥವಾ ನಿಜಕ್ಕೂ ಕಸಿವಿಸಿಯ ಆಘಾತದಲ್ಲಿ ಬಡಬಡಾಯಿಸುತ್ತಿರುವರೇ?!?

ಈ ರೀತಿಯ ದ್ವಂದ್ವಗಳ ಗೂಡಾಗಿರುವುದರಿಂದಲೇ  ಇಂದು ಬುದ್ಧಿಜೀವಿಗಳು ನಗೆಪಾಟಲಿಗೀಡಾಗುತ್ತಿರುವುದು. ಮಂತ್ರಕ್ಕಿಂತ ಉಗುಳು ಜಾಸ್ತಿಯಾದರೆ ಏನಾಗುತ್ತದೋ ಅದಾಗಿ ನೈಜ ಸಮಸ್ಯೆಗಳು ಮರೆಗೆ ಸೇರಿವೆ.  ಏನನ್ನು ಕಂಡು ಚರ್ಚಿಲ್ ಕೆಳಕಂಡಂತೆ ಹೇಳಿದ್ದನೋ ಗೊತ್ತಿಲ್ಲ. ಆದರೆ ಅದನ್ನು ನಿಜ ಮಾಡಿಯೇ ತೀರುವೆವೆಂದು ಭಾರತೀಯ ಸಮಾಜವಾದಿಗಳು ಪಣ ತೊಟ್ಟು ಇಂದು ಜಾರಿಗೊಳಿಸಿರುವಂತಿದೆ.

Socialism is a philosophy of failure, the creed of ignorance, and the gospel of envy, its inherent virtue is the equal sharing of misery.

Winston Churchill.


No comments: