ವಿಶ್ವವಾಣಿ - ಬಸವ ಮೂಲ, ಸನಾತನ ಶೈವ ಮೂಲ!

"ಷಣ್ಮುಖನಿಗೆ ಪ್ರಸಾದ ಕೊಡುವುದನ್ನು ಮರೆತ ವೃಷಭನೆನ್ನುವ ಗಣನನ್ನು ಶಿವನು ಬಸವನಾಗಿ ಭೂಮಿಯಲ್ಲಿ ಜನಿಸಿ ಶಿವಭಕ್ತ ಜಂಗಮರಿಗೆ ಪ್ರಸಾದ ವಿನಿಯೋಗಿಸಿ ಪ್ರಾಯಶ್ಚಿತ್ತ ಮಾಡಿಕೊಂಡು ಕೈಲಾಸಕ್ಕೆ ಹಿಂತಿರುಗು ಎಂದು ಶಪಿಸುತ್ತಾನೆ. ಹೀಗೆ ವೃಷಭನು ಬಸವನಾಗಿ ಬಾಗೇವಾಡಿ ಅಗ್ರಹಾರದ (ಸಂದಣಿಪ ವಿಪ್ರಸಂತಾನದಿಂಡಿದಿಡಿರ್ಪ, ಶಿವಪುರಾಣಾಗಮಕುಲಂಗಳಿಂದೆಸೆದಿರ್ಪ ಶಿವಶಾಸ್ತ್ರಘೋಷ ಸಂಗೀತದಿಂದಿಡಿದಿರ್ಪ ಅಗ್ರೇಶ್ವರಂ ಕಮ್ಮೆ ಕುಲದಿಂದೆ ಮೆರೆದಿರ್ಪ ವಿಪ್ರನಿರ್ಪಂ ಮಾದಿರಾಜ) ಮಾದಿರಾಜನ ಪತ್ನಿ ಮಾದಲಾಂಬೆಯ ಗರ್ಭದಲ್ಲಿ ಜನ್ಮವೆತ್ತಿ ಜಂಗಮ ಸೇವೆ ಕೈಗೊಂಡು ಪ್ರಾಯಶ್ಚಿತ್ತಕ್ಕೆ ಅನುವಾದನು" ಎಂಬುದು ’ಬಸವರಾಜ ದೇವರ ರಗಳೆ’ಯ ಸಂಕ್ಷಿಪ್ತ ಬಸವಮೂಲ.

ಬಸವನಂತೆಯೇ ರೇಣುಕ, ನಂಬಿಯಣ್ಣ, ಮಹಾದೇವಿಯಕ್ಕರೂ ಶಾಪಗ್ರಸ್ತರಾಗಿ ಭೂಲೋಕದಲ್ಲಿ ಜನ್ಮವೆತ್ತಿದರು ಎಂಬ ಪೌರಾಣಿಕ ಕತೆಗಳು ಈ ರಗಳೆಯಂತೆಯೇ ರಚಿತಗೊಂಡಿವೆ. ಈ ರಗಳೆಯು ಸಾಹಿತ್ಯಕ ಅಂಶಗಳಿಂದ ಮಹತ್ವದ್ದೆನ್ನಿಸಬಹುದೇ ಹೊರತು ಕಥನದಿಂದಲ್ಲ. ಇದರ ಕಥನವು ಅತ್ಯಂತ ಕಾಲ್ಪನಿಕವೂ ರೋಚಕವೂ ಮತ್ತು ಪವಾಡ ಮಹಿಮೆಯನ್ನೂ ಒಳಗೊಂಡ ಭಾರತದ ಅನೇಕ ಪುರಾಣ ಪುಣ್ಯಕತೆಗಳಂತೆಯೇ ಇದೆ. ಅದಲ್ಲದೆ ಈ ರಗಳೆಯ ಸಾಹಿತ್ಯಿಕ ತಂತ್ರವು ಭೋಗಣ್ಣ, ನಂಬಿಯಣ್ಣ, ಮಹಾದೇವಿಯಕ್ಕನ ಪುರಾಣಗಳಲ್ಲಿಯೂ ಕಾಣುವುದರಿಂದ ಇಂತಹ ಕಥಾತಂತ್ರವು ಅಂದಿನ ಕಾಲದಲ್ಲಿ ಮೇಲ್ಪಂಕ್ತಿಯಾಗಿತ್ತೆನಿಸುತ್ತದೆ. ಹಾಗೆ ನೋಡಿದರೆ ಈ ರೀತಿಯ ಕಥಾ ತಂತ್ರ ಮಾದರಿಯು ಇತ್ತೀಚಿನವರೆಗಿನ ಪುರಾಣ ಹರಿಕಥೆಗಳಲ್ಲದೆ ಪೌರಾಣಿಕ ನಾಟಕ ಸಿನೆಮಾಗಳಲ್ಲಿಯೂ ಕಾಣಬಹುದು. ಅಂತಹ ಒಂದು ಜನಪ್ರಿಯ ಮಾದರಿಯನ್ನು ಹರಿಹರ ಸೃಷ್ಟಿಸಿದ್ದಾನೆ. ಅಥವಾ ಆಗಲೇ ಜಾರಿಯಿದ್ದ ಒಂದು ಸಿದ್ಧ ಮಾದರಿಯನ್ನು ರಗಳೆಯ ತಂತ್ರಕ್ಕೆ ಅಳವಡಿಸಿಕೊಂಡಿದ್ದಾನೆ. 

ಬಿ. ಎಲ್. ರೈಸ್ ಅವರ ಮೈಸೂರು ಗೆಜೆಟಿಯರ್ ಪ್ರಕಾರ "ಬಸವಣ್ಣ ಆರಾಧ್ಯನೊಬ್ಬನ ಮಗ. ಬಿಜ್ಜಳನ ಮಹಾಮಂತ್ರಿಯ ಮಗಳನ್ನು ಮದುವೆಯಾಗಿ ಮಂತ್ರಿಯ ಅಳಿಯನೆನಿಸಿಕೊಂಡಿದ್ದನು. ಅವನ ಸೋದರಿ ಪದ್ಮಾವತಿ ಓರ್ವ ಅನುಪಮ ಸುಂದರಿ. ಆಕೆಯನ್ನು ಮೋಹಿಸಿ ಮದುವೆಯಾದ ಬಿಜ್ಜಳ ಬಸವಣ್ಣನನ್ನು ತನ್ನ ಮಹಾಮಂತ್ರಿಯಾಗಿಸಿ ಕಾಲಾಂತರದಲ್ಲಿ ದಂಡನಾಯಕನನ್ನಾಗಿಯೂ ಮಾಡಿಕೊಂಡಿದ್ದನು. ಸುಂದರ ಹೆಂಡತಿಯ ಮೋಹದಲ್ಲಿ ಬಿಜ್ಜಳನು ಮೈಮರೆತಿರುವಾಗ ಎಲ್ಲಾ ಆಡಳಿತವನ್ನು ವಹಿಸಿಕೊಂಡಿದ್ದ ಬಸವಣ್ಣನು ಹಳೆಯ ಅಧಿಕಾರಿಗಳನ್ನು ತೆಗೆದು ತನ್ನ ನಿಷ್ಠರನ್ನು ಆಯಕಟ್ಟಿನ ಜಾಗಗಳಲ್ಲಿ ಕೂರಿಸಿದನು. ಅದಲ್ಲದೆ ತನ್ನ ಅಳಿಯ ಯುವ ರಾಜಕುಮಾರನನ್ನು ತನ್ನ ಪಂಥದ ಶ್ರದ್ಧಾಳುವಾಗಿ ಮಾರ್ಪಾಡಿಸಿ ಅಧಿಕಾರವನ್ನು ಮತ್ತಷ್ಟು ಕೈವಶಮಾಡಿಕೊಂಡಿದ್ದನು. ಬಿಜ್ಜಳನಿಗೆ ಇದೆಲ್ಲವೂ ಅರಿವಾಗಿ ಬಸವನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲು ಯತ್ನಿಸಿದನು. ಆದರೆ ಬಸವಣ್ಣನಿಗಿದ್ದ ಬೆಂಬಲವನ್ನು ಗ್ರಹಿಸಿ ಅವನನ್ನು ದಂಡನಾಯಕ ಪದವಿಯಿಂದ ತೆಗೆದು ಕೇವಲ ಮಂತ್ರಿಸ್ಥಾನಕ್ಕೆ ಸೀಮಿತಗೊಳಿಸಿದನು. ಮುಂದೆ ಬಸವಣ್ಣನು ಬಿಜ್ಜಳನನ್ನು ಕೊಲ್ಲಿಸಿದನು. ಬಿಜ್ಜಳನ ಹಿರಿಯ ಮಗನು ತನ್ನ ತಂದೆಯ ಕೊಲೆಯ ಸೇಡು ತೀರಿಸಿಕೊಳ್ಳಲು ಬಸವಣ್ಣನನ್ನು ಬೆಂಬತ್ತಿ ಬಂದಾಗ ಬಸವಣ್ಣನು ಆತ್ಮಹತ್ಯೆ ಮಾಡಿಕೊಂಡನು. ಆದರೆ ಲಿಂಗಾಯತರ ಬಸವ ಪುರಾಣವು ಅವನು ಕೂಡಲಸಂಗಮದ ಲಿಂಗದಲ್ಲಿ ಐಕ್ಯನಾಗಿ ಮಾಯವಾದನು ಎನ್ನುತ್ತದೆ" ಎಂದು ಜೈನರ ಬಿಜ್ಜಳಾಂಕ ಕಾವ್ಯ / ಬಿಜ್ಜಳರಾಯ ಚರಿತ ಮತ್ತು ಬಸವ ಪುರಾಣಗಳ ಆಧಾರದಲ್ಲಿ ರೈಸ್ ಅವರು ದಾಖಲಿಸಿದ್ದಾರೆ. (ಪುಟ ೩೩೨, ಮೈಸೂರು ಗೆಜೆಟಿಯರ್, V.1) ರೈಸ್ ಅವರು ಬಸವಣ್ಣನನ್ನು ಓರ್ವ ಆರಾಧ್ಯನ ಮಗ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಪುರಾಣಗಳ ಮತ್ತು ಮೌಖಿಕ ಇತಿಹಾಸದ ಹಿನ್ನೆಲೆಯ ಈ ಗೆಜೆಟಿಯರ್ ಸಂಕಥನದಲ್ಲಿ ಬಸವಣ್ಣನು "ಆರಾಧ್ಯ"ನಾಗಿದ್ದನು ಎಂಬುದು ಮತ್ತು "ದಂಡನಾಯಕ"ನಾಗಿದ್ದನು ಎಂಬುದು ಗಮನಿಸಬೇಕಾದ ಅಂಶ. ಈ ಆರಾಧ್ಯರೇ ಲಿಂಗಿ ಬ್ರಾಹ್ಮಣರು, ಜಂಗಮರು ಎಂದು ಪ್ರೊ. ಎಂ ಎಂ. ಕಲಬುರ್ಗಿಯವರು ಒತ್ತಿ ಒತ್ತಿ ಪ್ರತಿಪಾದಿಸಿದ್ದಾರೆ ಎಂಬುದು ಇನ್ನೂ ವಿಶೇಷವಾಗಿ ಗಮನಿಸಬೇಕಾದ ಅಂಶ.

ಉತ್ಖನನ ತಜ್ಞರಾದ ಜೆ. ಎಫ್. ಫ್ಲೀಟ್ ಅವರು ೧೮೯೯ ರಲ್ಲಿ ಭಾರತದ ಇತರೆ ಪ್ರದೇಶಗಳಿಗಿಂತ ಕರ್ನಾಟಕವು ಹೆಚ್ಚಿನ ಸಂಖ್ಯೆಯ ಶಿಲಾಶಾಸನಗಳನ್ನು ಹೊಂದಿದೆ. ಇಲ್ಲಿನ ಉತ್ಖನನವು ಅತ್ಯಂತ ಆಶಾದಾಯಕವಾಗಿದೆ ಎಂದಿದ್ದಾರೆ. ಅದನ್ನು ಪುಷ್ಟೀಕರಿಸುವಂತೆ ಆ ಕಾಲಘಟ್ಟದಲ್ಲಿ ೨೬ ಸಾವಿರ ಶಾಸನಗಳು ಕರ್ನಾಟಕದಲ್ಲಿ ಸಿಕ್ಕಿದ್ದವು. ಆದರೆ ಇವುಗಳಲ್ಲಿ ಒಂದೇ ಒಂದು ಶಾಸನ ಬಸವಣ್ಣ ಅಥವಾ ಮತ್ಯಾವುದೇ ಶರಣರ ಕುರಿತು ಸಿಕ್ಕಿರಲಿಲ್ಲ. ಹಾಗಾಗಿ ಬಸವಣ್ಣನೆಂಬ ವ್ಯಕ್ತಿ ಕಾಲ್ಪನಿಕ ವ್ಯಕ್ತಿ ಎನಿಸಿತ್ತು. ಕೆಲವು ವಿದ್ವಾಂಸರು ಬಿಜ್ಜಳನ ಮಂತ್ರಿಯಾಗಿದ್ದ ಕಾಸಪ್ಪಯ್ಯನೇ ಬಸವಣ್ಣ ಎಂಬುವ ವಾದವನ್ನೂ ಮಂಡಿಸಿದ್ದರು. ಆದರೆ ಕಾಸಪ್ಪಯ್ಯ ಅತ್ಯಂತ ಕ್ರೂರಿಯಾಗಿದ್ದನು. ಇನ್ನು ಕೆಲವರು ಬಸವಣ್ಣನು ನಾಥಪಂಥದ ಅನುಯಾಯಿ ಎಂದೂ ಅನುಮಾನಿಸಿದ್ದರು. ಆದರೆ ಇವೆಲ್ಲವೂ ಊಹಾತ್ಮಕ ಸಂಕಥನಗಳೇ ಹೊರತು ಯಾವುದೇ ಆಧಾರಯುಕ್ತ ಸಂಶೋಧನೆಗಳೆನಿಸಿಕೊಳ್ಳಲು ಅರ್ಹವಾದವುಗಳಲ್ಲ. ಅದಕ್ಕೆ ಯಾವುದಾದರೂ ಒಂದು ಪೂರಕ ಶಾಸನದ ಪುರಾವೆಯ ಬಲ ಬೇಕಿತ್ತು. ಹಾಗಿದ್ದಾಗ ಆ ಎಲ್ಲಾ ಊಹಾಪೋಹಗಳಿಗೆ ತೆರೆಯೆಳೆದಂತೆ ಬಸವಣ್ಣನ ಕುರಿತು ೧೯೨೮ ರಲ್ಲಿ ಫ.ಗು. ಹಳಕಟ್ಟಿಯವರು ಕ್ರಿ. ಶ. ೧೨೬೦ ರ ಅರ್ಜುನವಾಡದ ಶಿಲಾಶಾಸನವನ್ನು ಬೆಳಕಿಗೆ ತಂದರು.

ಈ ಶಾಸನದ ಪ್ರಕಾರ "ಬಾಗೇವಾಡಿಯಲ್ಲಿ ಮಾದರಸ ಮತ್ತು ಮಾದಲಾಂಬಿಕೆಯರ ಮಗನಾಗಿ ಬಸವ ಉರ್ಫ್ ಸಂಗನಬಸವನು ಜನಿಸಿದ್ದನು. ಇವನ ತಂದೆಯು ಬಾಗೇವಾಡಿಯ ’ಪುರವರಧೀಶ್ವರ’ನಾಗಿದ್ದನೆಂದು ತಿಳಿದುಬರುವುದಲ್ಲದೇ ಇದೇ ರೀತಿಯಲ್ಲಿ ಬಸವಣ್ಣನ ಅಣ್ಣ ಹಾಲಬಸವಿದೇವನು ಕವಿಳಾಸ(ಪುರ)ದ ಪುರವರಧೀಶ್ವರನಾಗಿದ್ದನೆಂದೂ ತಿಳಿದುಬರುತ್ತದೆ. ಹಾಲಬಸವಿದೇವನನ್ನು ಮಾನವದೇವ, ಯತಿರಾಯ ಮತ್ತು ಮಹಾಮಾಹೇಶ್ವರ ಎಂದೆಲ್ಲಾ ಎನ್ನಲಾಗಿದೆ" ಎಂದು ಅರ್ಜುನವಾಡದ ಶಿಲಾಶಾಸನದ ವಿವರಗಳನ್ನು ಸಂಶೋಧಕರಾದ ಕೆ. ಈಶ್ವರನ್ ಅವರು ಸಂಕ್ಷಿಪ್ತವಾಗಿ ತಮ್ಮ Speaking Of Basava: Lingayat Religion And Culture In South Asia, By K. Ishwaran (Chapter - Inscriptions) ಕೃತಿಯಲ್ಲಿ ವಿವರಿಸಿದ್ದಾರೆ.

ಇಲ್ಲಿ ಬಸವಣ್ಣನ ಅಣ್ಣನನ್ನು "ಮಹಾಮಾಹೇಶ್ವರ" ಎಂದಿರುವುದು ಗಮನಿಸಬೇಕಾದ ಸಂಗತಿ!

ಇನ್ನು ಕನ್ನಡ ಸಂಸ್ಕೃತಿ ಇಲಾಖೆಯು ಪ್ರಕಟಿಸಿರುವ ’ಮಧುರಚೆನ್ನರ ಲೇಖನಗಳು, ಸಂ. ಗುರುಲಿಂಗ ಕಾಪಸೆ’ ಕೃತಿಯಲ್ಲಿ ಅರ್ಜುನವಾಡ ಶಿಲಾಶಾಸನದ ಪೂರ್ಣಪಾಠವನ್ನು ಕೊಟ್ಟಿದ್ದಾರೆ. ಆಸಕ್ತರು ಗಮನಿಸಬಹುದು. ಅದೇ ರೀತಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ’ಶಾಸನ ಸಂಗ್ರಹ, ಸಂ. ಎ.ಎಮ್. ಅಣ್ಣೀಗೇರಿ’ ಕೃತಿಯಲ್ಲಿ ಸಹ ಈ ಶಾಸನದ ಪೂರ್ಣಪಾಠವಿದೆ.

ಇರಲಿ, ಇಲ್ಲಿ ಬಸವಣ್ಣನ ಪರಿವಾರದ ಕುರಿತಾದ ಬಹುಮುಖ್ಯ ಸಾಲುಗಳು ಹೀಗಿವೆ:

"ಸಂಗನ ಬಸವನ ಅಗ್ರ* 

*ಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ***ರ

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||"

ಇಲ್ಲಿ * ಇರುವ ಅಕ್ಷರಗಳು ಲುಪ್ತಗೊಂಡಿರುವುದರಿಂದ ಅನೇಕ ವಿದ್ವಾಂಸರು ಸಹಮತದಿಂದ ಕೆಳಗಿನಂತೆ ಲುಪ್ತ ಅಕ್ಷರಗಳನ್ನು ತುಂಬಿದ್ದಾರೆ:

"ಸಂಗನ ಬಸವನ ಅಗ್ರಜ ಲಿಂಗೈಕ್ಯಂ ದೇವರಾಜಮುನಿಪನ ತನಯಂ|

ಜಂಗಮ ಪರಸುಂ ಕಾವ(ಬಸವ)ರ 

ಸಂಗಂ ಪ್ರಿಯಸುತನೆನಿಪ್ಪ ಕಲಿದೇವರಸಂ||


ಕಲಿದೇವಮುನಿಪನಾತ್ಮಜ

ಸಲೆ ಮೂಜಗದೊಳಗೆ ಮೆರೆದ ಮಾನವದೇವಂ|

ಗೆಲಿದಂ ಅಶನ ಬೆಸೆನವ

ಛಲರಧಿಕಂ ಹಾಲಬಸವಿದೇವ ಮುನೀಶಂ||"

ಇಲ್ಲಿ ಲುಪ್ತವಿರದೆ ಸ್ಪಷ್ಟವಾಗಿರುವ "ಜಂಗಮ ಪರುಸ" ಎಂಬುದು ಗಮನಿಸಬೇಕಾದ ಸಂಗತಿ!

ಈ ಶಾಸನದ ಪ್ರಕಾರ ಬಸವಣ್ಣ ಓರ್ವ ಜಂಗಮನೆನಿಸಿಕೊಳ್ಳುತ್ತಾನೆ. ಅದನ್ನು ಅನುಮೋದಿಸುವಂತೆ ಮಹಾಮಾಹೇಶ್ವರ ಎಂಬ ಪದವೂ ಇದೆ. ಈ ಮಹಾಮಾಹೇಶ್ವರ (ವೀರ ಮಾಹೇಶ್ವರ, ಪರಮ ಮಾಹೇಶ್ವರ) ಪದಗಳು ಕಾಳಾಮುಖರನ್ನು ಗುರುತಿಸುತ್ತಿದ್ದ ಪದಗಳಲ್ಲದೇ ಶರಣರು ಸಹ ಮಾಹೇಶ್ವರ ಪದವನ್ನು ೫೨೫ ಕಡೆ ೩೫೫ ವಚನಗಳಲ್ಲಿ ಬಳಸಿದ್ದಾರೆ. ಕಾಳಾಮುಖರು ವೀರಮಾಹೇಶ್ವರರೆಂದೂ ಜಂಗಮರೆಂದೂ ಗುರುತಿಸಿಕೊಂಡಿದ್ದರು.

ಹಾಗಿದ್ದರೆ ಬಸವಣ್ಣನು ಜಂಗಮ ಎನ್ನಲು ಇದೊಂದೇ ಶಾಸನವೇ ಆಧಾರವೇ? ಇದಕ್ಕೆ ಸಂಬಂಧಿಸಿದಂತೆ ಬೇರೇನಾದರೂ ಪುರಾವೆಗಳಿವೆಯೇ ಎಂದು ನೋಡಿದಾಗ ಸಿಗುವುದು ಮುನವಳ್ಳಿಯ ಶಾಸನ. ಕಾಳಾಮುಖರ ಕುರಿತು ಸಾಕಷ್ಟು ಸಂಶೋಧನೆ ಮಾಡಿರುವ ಡೇವಿಡ್ ಲೊರೆಂಜನ್ ತಮ್ಮ ಕಾಳಾಮುಖರ ಕುರಿತಾದ ಕೃತಿಯಲ್ಲಿ ಈ ಶಾಸನದ ಬಗ್ಗೆ ದಾಖಲಿಸಿದ್ದಾರೆ. ಈಗ ಆ ಶಾಸನ ಬಸವಣ್ಣನಿಗೆ ಹೇಗೆ ಸಂಬಂಧಿಸುತ್ತದೆ ಎಂದು ನೋಡೋಣ.

ಕ್ರಿ.ಶ. ೧೨೫೨ ರ ಜಗದೀಶ್ವರ ದೇವರ ಕುರಿತಾದ ಶಾಸನವು ಕಾಳಾಮುಖರ ಸರ್ವೇಶ್ವರ ಯತಿಯ ಮಗ ಕ್ರಿಯಾಶಕ್ತಿಯ ಮಗನಾದ ಸೋಮೇಶ್ವರನನ್ನು ಕೊಂಡಾಡಿ ಉಂಬಳಿ ದಾನವನ್ನು ಕೊಟ್ಟ ಶಾಸನವಾಗಿದೆ. ಇದನ್ನು ಕೊಟ್ಟವರು "ಶ್ರೀಪತು ಪರಮಮಾಹೇಶ್ವರ ದಂಣನಾಯಕ ಬಸವಿದೇವನ ಮುದ್ದು ಶ್ರೀ ಕಲಿದೇವರ ದಾಸ ಬೊಮ್ಮರಸ" ಎಂದಿದೆ. ಇದೇ ರೀತಿ ಅರ್ಜುನವಾಡದ ಶಾಸನದಲ್ಲಿಯೂ ಬಸವಣದಂಣನಾಯಕ ಅಲ್ಲದೆ ಬಸವಿದೇವ ಪದವೂ ಇದೆ. ಹಾಗಾಗಿ ಇವೆರಡೂ ಶಾಸನಗಳು ಬಸವಣ್ಣನನ್ನು ಕುರಿತಾಗಿದೆ ಎಂದು ’ಕನ್ನಡ ಶಾಸನ ಸಾಹಿತ್ಯ’ (ಸಂ ಎಂ.ಎಂ. ಕಲ್ಬುರ್ಗಿ, ಪ್ರಕಾಶನ ಚೇತನಾ ಬುಕ್ ಹೌಸ್) ಕೃತಿಯಲ್ಲಿನ ಅಧ್ಯಾಯವಾದ ’ಅರ್ಜುನವಾಡ ಶಾಸನದ ತ್ರುಟಿತಪದ್ಯ’ ಪುಟ ೨೭೦ ರಿಂದ ೨೭೭ ರಲ್ಲಿದೆ.

ಹಾಗಿದ್ದಾಗ ಬಸವಣ್ಣ ನಿಸ್ಸಂಶಯವಾಗಿ ಕಾಳಾಮುಖ ಪರಂಪರೆಯ ಜಂಗಮನೆನ್ನಬಹುದು.

ಬಿ.ಎಲ್. ರೈಸ್ ಅವರ ಮೈಸೂರು ಗೆಜೆಟಿಯರಿನ ’ದಂಡನಾಯಕ ಆರಾಧ್ಯ ಬಸವ’, ಅರ್ಜುನವಾಡ ಶಾಸನದ ’ಜಂಗಮ ಪರುಸ ಮಹಾಮಾಹೇಶ್ವರ ಬಸವಣ ದಂಣಾಯಕ’ ಮತ್ತು ಮುನವಳ್ಳಿ ಶಾಸನದ ’ಪರಮಮಾಹೇಶ್ವರ ದಂಣಾಯಕ ಬಸವಿದೇವ’ ಎಲ್ಲವೂ ಬಸವಣ್ಣನನ್ನು ಜಂಗಮ ಎನ್ನುತ್ತವೆ, ಹರಿಹರನ ಪೌರಾಣಿಕ ರಗಳೆಯೊಂದನ್ನು ಹೊರತುಪಡಿಸಿ! 

ಹರಿಹರನ ರಗಳೆಯ ’ಪರಮ ಶಿವಭಕ್ತ ವಿಪ್ರನ ಮಗ ಬಸವ’ ಎಂದಿರುವುದು ರೋಚಕ ಪೌರಾಣಿಕ ಕಥಾಮಾದರಿಯ ಹಿನ್ನೆಲೆಯಲ್ಲಿ ರೋಚಕತೆಯನ್ನು ಹೇರಲೋ, ಮಹತ್ವವನ್ನು ಮೆರೆಯಲೋ, ವಿಪ್ರದ್ವೇಷವನ್ನು ರಂಜನೀಯಗೊಳಿಸಲೋ ಪರಮ ಶಿವಭಕ್ತನಾದ ಬಸವಣ್ಣನನ್ನು ವಿಪ್ರನಾಗಿಸಲಾಗಿದೆ ಎನಿಸುತ್ತದೆ. ಉಳಿದೆಲ್ಲಾ ಹೆಚ್ಚು ಪ್ರಬಲವೆನಿಸುವ ಸಾಕ್ಷ್ಯಗಳು ಬಸವಣ್ಣನನ್ನು ಜಂಗಮ ಎಂದಿರುವಾಗ ಕೇವಲ ಪೌರಾಣಿಕ ರಗಳೆಯ ಆಧಾರದ ಮೇಲೆ ಬಸವಣ್ಣನನ್ನು ಬ್ರಾಹ್ಮಣ ಎನ್ನಲಾಗದು. ಈ ರಗಳೆಗೂ ಉಳಿದ ಸಾಕ್ಷ್ಯಗಳಲ್ಲೂ ಬಸವ, ಬಸವಣ್ಣ, ಬಸವಿದೇವ, ಸಂಗನಬಸವ ಮತ್ತು ದಂಣಾಯಕ ಪದಗಳ ಸಾಮ್ಯವಿರುವುದರಿಂದ ಈ ಎಲ್ಲವೂ ಒಬ್ಬನೇ ವ್ಯಕ್ತಿಯ ಕುರಿತಾಗಿವೆ ಎಂದು ಮಾತ್ರ ಖಚಿತವಾಗಿ ಹೇಳಬಹುದು.

ಅಲ್ಲದೆ ಅರ್ಜುನವಾಡದ ಶಿಲಾಶಾಸನವು ಕ್ರಿ.ಶ. ೧೨೬೦ ನೇ ಇಸವಿಯದಾಗಿದ್ದರೆ, ಮುನವಳ್ಳಿ ಶಾಸನ ಕ್ರಿ. ಶ. ೧೨೫೨ ಇಸವಿಯದಾಗಿದೆ. ಹಾಗಾಗಿ ಈ ಎರಡೂ ಶಾಸನಗಳು ಒಬ್ಬನೇ ವ್ಯಕ್ತಿಯ ಕುರಿತಾಗಿವೆ ಎಂದು ಮತ್ತಷ್ಟು ಖಚಿತವಾಗುತ್ತದೆ. 

ಆದರೆ ಸಂಶೋಧಕ ಹೆಚ್. ದೇವೀರಪ್ಪನವರು "ಸಂಗನ ಬಸವನ ಅಣ್ಣ ದೇವರಾಜ. ಈಗ ಲಿಂಗೈಕ್ಯನಾಗಿರುವ ಆ ದೇವರಾಜ ಮುನಿಪನ ಔರಸಪುತ್ರನೂ ಜಂಗಮ ಪರುಷಪ್ರಾಯನಾದ ಬಸವರಸ (ಬಸವಣ್ಣ)ನ ಕರಕಮಲ ಸಂಜಾತನೂ ಆಗಿರುವ ಕಲಿದೇವರಸನು, ’ಉಳ್ಳವರು ಶಿವಾಲಯವ...’ ಎಂದು ಮೆದುವಾದ ಮಾತಿನಲ್ಲಿ ಬಹು ಸಮರ್ಥರೀತಿಯಲ್ಲಿ ಲಿಂಗವಂತ ಧರ್ಮದ ತಿರುಳನ್ನೇ ಪುದುಗೊಳಿಸಿ ಧ್ವನಿ ತುಂಬಿ ಸ್ಥಾವರ ಲಿಂಗಪೂಜೆಯನ್ನು ಖಂಡಿಸಿರುವ ಬಸವಣ್ಣನವರ ಅಣ್ಣನ(?) ಮಗನೋ ಮೊಮ್ಮಗನೋ ಮರಿಮಗನೋ ಒಂದು ಸಾಮಾನ್ಯವಾದ ಶಿವಮಂದಿರದ ಪೂಜಾರಿಯಾಗಿದ್ದನೆನ್ನುವುದು, ಹಾಗೆ ನಂಬುವುದು, ಅದನ್ನು ಪ್ರಚಾರ ಮಾಡುವುದು ಬಸವಣ್ಣನವರನ್ನೂ ಅವರ ವಿಶ್ವಮಾನ್ಯ ತತ್ವಗಳನ್ನೂ ಕೊಲೆ ಮಾಡಿದಂತೆ" ಎಂದು ತಮ್ಮ ’ಅರ್ಜುನವಾಡದ ಶಿಲಾಲೇಖ’ ಎಂಬ ಲೇಖನದಲ್ಲಿ ಈ ಶಾಸನವೊಂದು ’ಕೂಟಶಾಸನ’ ಎಂದು ಖಂಡಿಸಿ ಈ ಶಾಸನದ ಔಚಿತ್ಯವನ್ನೇ ಪ್ರಶ್ನಿಸಿದ್ದಾರೆ. (ಪುಟ ೪೮೪, ಕೃತಿ ’ಸಂಶೋಧನ ಸಂಪುಟ’ ಲೇ. ಹೆಚ್. ದೇವೀರಪ್ಪ, ಪ್ರಕಾಶಕರು ಎನ್. ಆರ್. ವಿಶುಕುಮಾರ್, ನಿರ್ದೇಶಕರು, ಕನ್ನಡ ಸಂಸ್ಕೃತಿ ಇಲಾಖೆ).

ಆದರೆ ಈ ಕೂಟ ಶಾಸನವನ್ನು ಬಿಟ್ಟರೆ ಬಸವಣ್ಣನ ವಂಶವನ್ನಾಗಲಿ ದೈವತ್ವವನ್ನಾಗಲಿ ಕಟ್ಟಿಕೊಡಲು ಯಾವ ’ಮಾಟ ಶಾಸನ’ಗಳೂ ಇಲ್ಲ ಎಂಬುದು ವಾಸ್ತವ. ಅಲ್ಲದೆ ೧೯೪೦ ರಲ್ಲಿ ಮುಂಬಯಿ ಸರ್ಕಾರದ ಕನ್ನಡ ಸಂಶೋಧನ ಸಮಿತಿಯು ತನ್ನ ಧಾರವಾಡದ ಕನ್ನಡ ರೀಸರ್ಚ್ ಆಫೀಸು ಮೂಲಕ ಪ್ರಕಟಿಸಿರುವ ಗೋವಿಂದ ಪೈಗಳ "ಮೂರು ಉಪನ್ಯಾಸಗಳು" ಕೃತಿಯಲ್ಲಿ ಎರಡನೇ ಉಪನ್ಯಾಸವಾದ ’ಬಸವೇಶ್ವರನ ಕಾಲನಿರ್ಣಯ’ವು ಸಮಗ್ರವಾಗಿ ಬಸವಣ್ಣ ಮತ್ತು ಬಿಜ್ಜಳರ ಕುರಿತಾದ ಹಲವಾರು ಶಾಸನಗಳನ್ನು ಪರಿಗಣಿಸಿ ಬಸವಣ್ಣನ ಕಾಲ ನಿರ್ಣಯಿಸುವಲ್ಲಿ ಅರ್ಜುನವಾಡದ ಶಾಸನವನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. 

ಅರ್ಜುನವಾಡ ಶಾಸನವು ಕೂಟ ಶಾಸನವಾಗಿದ್ದರೆ ಇದರ ಕಾಲಮಾನವಲ್ಲದೆ ಬಸವಿದೇವ ಸಾಮ್ಯತೆಯನ್ನು ಮುನವಳ್ಳಿಯ ಶಾಸನದ ಜೊತೆ ಗುರುತಿಸಲಾಗಿದೆ. ಹಾಗಾಗಿ ಮುನವಳ್ಳಿಯ ಶಾಸನ ಸಹ ಕೂಟ ಶಾಸನವೇ? 

ಇನ್ನು ಶಿವಮೊಗ್ಗ, ಬೆಳಗಾವಿ, ಬಳ್ಳಾರಿ, ಬಿಜಾಪುರ, ಧಾರವಾಡ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೋಲಾರ, ತುಮಕೂರು ಜಿಲ್ಲೆಗಳಾದ್ಯಂತ ಇರುವ ಹನ್ನೊಂದು ಮತ್ತು ಹನ್ನೆರಡನೇ ಶತಮಾನದ ಕಾಳಾಮುಖ ದೇವಸ್ಥಾನಗಳನ್ನು, ಶಾಸನಗಳನ್ನು ಡೇವಿಡ್ ಲೊರೆಂಜೆನ್ ಗುರುತಿಸಿ ದಾಖಲಿಸಿದ್ದಾರೆ. ಈ ಎಲ್ಲಾ ದೇವಸ್ಥಾನಗಳ ಕಾಲಮಾನ, ಖಚಿತ ದಾಖಲೆ, ಶಿಲಾಶಾಸನದ ವಿವರಗಳು, ಮತ್ತು ಪುರಾವೆಗಳು ಸಂಶೋಧಕ ಡೇವಿಡ್ ಲೊರೆಂಜೆನ್ ಅವರ "The Kapalikas and Kalamukhas Two Lost Saivite Sects" ಕೃತಿಯ ಪುಟ ೨೧೮ ರಿಂದ ೨೪೫ ಪುಟಗಳವರೆಗಿದೆ. ಇಲ್ಲಿನ ಶಿಲಾಶಾಸನಗಳು ಆದಷ್ಟೂ ಮುನವಳ್ಳಿಯ ಶಾಸನದ ರೂಪದಲ್ಲೇ ಇವೆ. ಹಾಗಾಗಿ ಮುನವಳ್ಳಿಯ ಶಾಸನವನ್ನು ಕೂಟ ಶಾಸನ ಎನ್ನಲಾಗದು, ಹಾಗೆಯೇ ಅದರ ಸಾಮ್ಯತೆಯಿರುವ ಅರ್ಜುನವಾಡದ ಶಾಸನವನ್ನು ಸಹ!

ಹಾಗಾಗಿ ಈ ಎಲ್ಲಾ ಕೂಟ ಶಾಸನ / ಮಾಟ ಶಾಸನ, ಪ್ರಕ್ಷೇಪ ವಚನ / ನಿಕ್ಷೇಪ ವಚನಗಳ ಹಿನ್ನೆಲೆಯಲ್ಲಿ ಮತ್ತು ವಚನಗಳ ಆಧಾರದಲ್ಲಿಯೇ ಬಸವಣ್ಣನನ್ನು ಕಟ್ಟಿಕೊಳ್ಳಬೇಕಿರುವುದು ಅನಿವಾರ್ಯ. ಈ ಸಂಪನ್ಮೂಲಗಳನ್ನು ಬಿಟ್ಟರೆ ಬೇರೆ ಯಾವುದೇ ಆಕರಗಳು ಲಭ್ಯವಿಲ್ಲ. ಹಾಂ, ಚೆನ್ನಬಸವಣ್ಣ, ಅಲ್ಲಮಪ್ರಭು, ನಾಗಲಾಂಬಿಕೆ, ಬಹುರೂಪಿ ಚೌಡಯ್ಯ ತಮ್ಮ ವಚನಗಳಲ್ಲಿ "ಬಸವಿದೇವ" ಎಂದು ಬಸವಣ್ಣನನ್ನು ಕರೆದಿದ್ದಾರೆ ಸಹ. ಬಸವಣ್ಣನು ತನ್ನನ್ನು ತಾನೇ "ಬಸವದಣ್ಣಾಯಕ"ನೆಂದು ಕರೆದುಕೊಂಡಿರುವುದಲ್ಲದೆ, ಅಕ್ಕಮಹಾದೇವಿ ಮತ್ತು ಚೆನ್ನಬಸವಣ್ಣರು ಸಹ ಬಸವಣ್ಣನನ್ನು "ದಣ್ಣಾಯಕ" ಎಂದಿದ್ದಾರೆ. ಹಾಗಾಗಿ ವಚನಗಳ ಮೂಲದಿಂದಲೂ "ಬಸವಿದೇವ" ಮತ್ತು "ದಂಣಾಯಕ" ಎಂಬ ಅಂಶಗಳು ಪೂರಕ ಆಕರವಾಗುತ್ತವೆ.

ಆದರೆ ಇವುಗಳಲ್ಲಿ ಪ್ರಕ್ಷೇಪಗಳನ್ನು ಪ್ರಕ್ಷೇಪವೆನ್ನಲು ತಾರ್ಕಿಕ ಕಾರಣಗಳಿರಬೇಕೇ ಹೊರತು ಸಂಶೋಧಕನ ಭಾವನೆಗಳಲ್ಲ. ಹಾಗಾಗಿ ಇಲ್ಲಿ ದೇವೀರಪ್ಪನವರ ಬರಹದ ಹಿಂದಿನ ಭಾವುಕ ಭಕ್ತಿಯ ಭಾವನೆಯನ್ನು ಮತ್ತು "ಸಾಮಾನ್ಯ ಪೂಜಾರಿ" ಎಂಬ ದನಿಯ ಹಿಂದಿನ ಜಂಗಮ ದ್ವೇಷವನ್ನು ನಿರ್ಲಕ್ಷಿಸಬೇಕಾಗುತ್ತದೆ. ಇಷ್ಟೆಲ್ಲಾ ಬಸವಣ್ಣನ ಜಾತಿಯ ಕುರಿತಾದ ವೈಜ್ಞಾನಿಕ ವಿಧದ ಐತಿಹಾಸಿಕ ಮಾಹಿತಿಯಿದ್ದೂ ಕಾಲ್ಪನಿಕ ಪುರಾಣವನ್ನು ಸಾಕ್ಷಿ ಮಾಡಿಕೊಂಡು ಬ್ರಾಹ್ಮಣ ಎಂದು ಸಂಶೋಧಕರು ನಿರ್ಣಯಿಸಿರುವುದು ಏಕೆ?!? ಕಮ್ಯೂನಿಸ್ಟ್-ಪ್ರಣೀತ ಚಿಂತಕರ ಸಂಶೋಧಕರ ಹೇರಿಕೆ ಅವರ ಪ್ರತಿಯೊಂದು ನಡೆನುಡಿಯಲ್ಲೂ ಸ್ಪಟಿಕದ ಶಲಾಕೆಯಂತೆ ಸುಸ್ಪಷ್ಟವಾಗಿದೆ. 

ಇನ್ನು ಸಂಶೋಧಕರು ಬಸವಣ್ಣನು ತನ್ನನ್ನು ಹಾರುವ ಎಂದು ಕರೆದುಕೊಂಡಿದ್ದಾನೆನ್ನುವ ಈ ಎರಡು ವಚನಗಳನ್ನು ಸಹ ಈ ಹಿನ್ನೆಲೆಯಲ್ಲಿ ಅವಲೋಕಿಸೋಣ:

"ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ,

ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.

ಹಾರುವೆನಯ್ಯಾ ಭಕ್ತರ ಬರವ ಗುಡಿಗಟ್ಟಿ,

ಹಾರುವೆನಯ್ಯಾ ಶರಣರ ಬರವ ಗುಡಿಗಟ್ಟಿ,

ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ,

ಅಶುದ್ಧನ ಶುದ್ಧನ ಮಾಡಿದನಾಗಿ."

(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೭೧೬)


"ಸೆಟ್ಟಿಯೆಂದೆನೆ ಸಿರಿಯಾಳನ

ಮಡಿವಾಳನೆಂಬೆನೆ ಮಾಚಯ್ಯನ

ಡೋಹರನೆಂಬೆನೆ ಕಕ್ಕಯ್ಯನ

ಮಾದಾರನೆಂಬೆನೆ ಚೆನ್ನಯ್ಯನ

ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯಾ."

(ಸಮಗ್ರ ವಚನ ಸಂಪುಟ: ೧ ವಚನದ ಸಂಖ್ಯೆ: ೩೪೫)

ಅನುಭವ ಮಂಟಪದಲ್ಲಿ ನಡೆದ ಚರ್ಚೆಗಳ ದಾಖಲೆಯಾಗಿ ವಚನಗಳನ್ನು ರಚಿಸಲಾಗಿದೆ ಎಂದು ಶೂನ್ಯ ಸಂಪಾದನೆಯಲ್ಲಿ ಹೇಳಲಾಗಿದೆ. ಹಾಗಾಗಿ ವಚನಗಳನ್ನು ಸಭಾ ಸಂಭಾಷಣಾ ಹಿನ್ನೆಲೆಯಲ್ಲಿ ಗ್ರಹಿಸಬೇಕು. ಆ ಹಿನ್ನೆಲೆಯಲ್ಲಿ ಮೊದಲ ವಚನದಲ್ಲಿ ಕರ್ಮ ಸಿದ್ಧಾಂತವನ್ನು ಎತ್ತಿಹಿಡಿಯುವ ಬ್ರಾಹ್ಮಣರನ್ನು ಉದ್ದೇಶಿಸಿ ಬಸವಣ್ಣನು ನೀವು ಹಾಗೆಂದು ನುಡಿಯದೆ ಹೀಗೆ ಬ್ರಾಹ್ಮಣರಾಗಿದ್ದೇವೆ ಎಂದು ನುಡಿಯಿರಿ ಎಂದು ಸೂಚ್ಯವಾಗಿ ಹೇಳಿರುವ ಸಾಧ್ಯತೆ ಹೆಚ್ಚಿದೆ. ಅದೇ ರೀತಿ ಚರ್ಚಾಗೋಷ್ಠಿಯಲ್ಲಿ ನೆರೆದವರಿಗೆ ನೀವು ಇತರರನ್ನು ಹೀಗಳೆದು ನಿಮ್ಮನ್ನು ನೀವು (ಆನು) ಉತ್ತಮ ಕುಲಸ್ಥನು ಎಂದರೆ ನಗು ಬರುತ್ತದೆ ಎಂಬರ್ಥದಲ್ಲಿ ವಾಚ್ಯವಾಗಿ ಹೇಳಿದ್ದಾನೆ. ಏಕೆಂದರೆ ಇಂತಹ ವಾಚ್ಯ ಸೂಚ್ಯಗಳ ಬಳಕೆಯನ್ನು ವಚನಗಳಾದ್ಯಂತ ಕಾಣಬಹುದು. ಬಸವಣ್ಣನ ಅನೇಕ ವಚನಗಳೂ ಸಹ ಹೀಗೆಯೇ ವಾಚ್ಯ ಸೂಚ್ಯವಾಗಿವೆ. ಹಾಗಾಗಿ ಚರ್ಚೆಯ ಹಿನ್ನೆಲೆಯಲ್ಲಿ ಹೇಳಿದ ಈ ವಚನವನ್ನು ಬಸವಣ್ಣನು ತನ್ನನ್ನೇ ಉದ್ದೇಶಿಸಿ ಹೇಳಿಕೊಂಡಿದ್ದಾನೆ ಎಂದು ಹೇಳಲಾಗದು.

"ನಾನೇ ದೇವರು, ನಾನೇ ಮಾರ್ಗ" ಎಂಬ ಯೇಸುವಿನ ವಾಣಿ ಯೇಸುವೇ ದೇವರು, ಯೇಸುವೇ ಮಾರ್ಗವೆನಿಸದೆ "ನಾನು" ಎಂಬ ಆತ್ಮವಿರುವ ಪ್ರತಿಯೊಬ್ಬನೂ ದೇವನಾಗಿ ಆತನ ಮಾರ್ಗವನ್ನು ಕಂಡುಕೊಳ್ಳಬಹುದು ಎಂಬ ಪಾರಮಾರ್ಥವನ್ನು ಕೊಡುತ್ತದೋ ಅಂತಹ ಪಾರಮಾರ್ಥದಲ್ಲಿ ಈ ಎರಡು ವಚನಗಳನ್ನು ಪರಿಗಣಿಸಬೇಕು. 

ಎಲ್ಲಾ ವಚನ ಸಂಪಾದಕರೂ ವಚನಗಳನ್ನು ಮತ್ತು ವಚನ ಚಳವಳಿಯನ್ನು ತಮ್ಮ ತಮ್ಮ ಭಾವನೆ, ಸಿದ್ಧಾಂತ, ಬೌದ್ಧಿಕ ಮಟ್ಟ, ನಂಬಿಕೆ, ಪಂಥಗಳಿಗೆ ಕಟ್ಟಿಹಾಕಿದ್ದಾರೆಯೇ ಹೊರತು ಆ ಚಳವಳಿಯ ಸಂಘರ್ಷ, ಸಾಮಾಜಿಕ ಸನ್ನಿವೇಶ, ರಾಜಕೀಯ ಪಲ್ಲಟ, ವಿದೇಶಿ ಆಕ್ರಮಣಗಳು ಸೃಷ್ಠಿಸಿದ ಧಾರ್ಮಿಕ ನಿರ್ವಾತಗಳ ಆಯಾಮಗಳ ಹಿನ್ನೆಲೆಯಲ್ಲಿ ಅಲ್ಲ. ವಚನಕಾರರನ್ನು ದಾರ್ಶನಿಕ ಮಹಾಮಾನವರೆಂದು ಅವಲೋಕಿಸಿದ್ದಾರೆಯೇ ಹೊರತು ಅಂದಿನ ಸಾಮಾಜಿಕ ಸಹಮಾನವರಾಗಿಯಲ್ಲ. ತಮ್ಮ ತಮ್ಮ ಮಾನಸಿಕ ತುಮುಲ, ಅಸಹನೆ, ಅಸಹಾಯಕತೆ, ಪಲ್ಲಟಗೊಂಡ ಆದ್ಯರ ಮಾರ್ಗದರ್ಶನ, ತಬ್ಬಲಿತನಗಳೆಲ್ಲವನ್ನು ಎಲ್ಲಾ ವಚನಕಾರ/ರ್ತಿಯರು ಸಮರ್ಪಕವಾಗಿ ಕಟ್ಟಿಕೊಟ್ಟಿದ್ದರೂ ಅದನ್ನು ಸಂಶೋಧಕರು ಅಷ್ಟಾಗಿ ಗಮನ ಕೊಟ್ಟಿಲ್ಲ. ಧಾರ್ಮಿಕ ನೆಲೆಯ ಕುದುರೆಯ ಕಣ್ಪಟ್ಟಿ ಕಟ್ಟಿಕೊಂಡು ವಚನ ಸಾಹಿತ್ಯವನ್ನು ಧರ್ಮದ ಹಿನ್ನೆಲೆಯಲ್ಲಿ ಅಬ್ಬಬ್ಬಾ ಎಂದರೆ ಅಸಮಾನತೆಯ ವಿರುದ್ಧದ ಹೋರಾಟ ಎಂಬ ತಮ್ಮ ವರ್ತಮಾನದ ಸೀಮಿತ ದೃಷ್ಟಿಯಲ್ಲಿ ಸಂಕಥನಗಳನ್ನು ಕಟ್ಟಿಕೊಡಲಾಗಿದೆ ಎಂಬುದು ಅವಲೋಕಿಸಿದಷ್ಟೂ ಮತ್ತೆ ಮತ್ತೆ ಸಾಬೀತಾಗುತ್ತದೆ. ಇದೆಲ್ಲವೂ ವಚನಗಳಲ್ಲೇ ವಚನಗಳಷ್ಟೇ ಸರಳ ಸತ್ಯವಾಗಿ ಸುಂದರವಾಗಿ ಸನಾತನ ಶೈವವಾಗಿ ಅಡಕವಾಗಿದೆ. ಇದನ್ನು ಅಷ್ಟೇ ಸತ್ಯವಾಗಿ ಸುಂದರವಾಗಿ ಶೈವವಾಗಿ ಕಾಣುವ ಸರಳ ವೈಧಾನಿಕ ದೃಷ್ಟಿ ಮಾತ್ರ ಸಾಕಾಗಿತ್ತು. ಆದರೆ ಆ ಸರಳತೆಯನ್ನು ಸಿದ್ಧಾಂತಗಳ ಸಂಕೀರ್ಣತೆಯ ರೂಪದಲ್ಲಿ ಸಂಶೋಭಿ(ಧಿ)ಸಿದಾಗ ಈಗಿರುವಂತಹ ಕುರುಡು ಸಂಕಥನಗಳು ಹುಟ್ಟಿಬಿಡುತ್ತವೆ. 

ಆದರೆ ಇದೆಲ್ಲಕ್ಕಿಂತ ಪ್ರಮುಖವಾಗಿ ಬಸವನು ಜಂಗಮ, ಬ್ರಾಹ್ಮಣ, ಮಾದಾರ ಅಲ್ಲದೆ ಈ ಶಾಸನದಲ್ಲಿ ಹಾಲಬಸವಿದೇವನೆಂದಿದೆಯೆಂದು ಅವನು ಹಾಲುಮತದವನೆಂದೋ, ದಂಣಾಯಕ ಪದವಿದೆಯೆಂದು ಬೇಡರ ನಾಯಕ ಪಡೆಯವನೆಂದೋ ಮತ್ತೊಂದೆಂದೋ ಜಾತಿಯವನೆನ್ನುವುದು ಅರ್ಥಹೀನ. ಏಕೆಂದರೆ ಅವನು ಹುಟ್ಟಿದ ಕಾಲಘಟ್ಟದಲ್ಲಿ ಜಾತಿಯು ಹುಟ್ಟಿನಿಂದ ನಿರ್ಧಾರವಾಗುತ್ತಲೇ ಇರಲಿಲ್ಲ! ಇಸ್ಲಾಂ ಬಂಡುಕೋರರು ಸೃಷ್ಟಿಸಿದ ಧಾರ್ಮಿಕ ನಿರ್ವಾತವನ್ನು ತಕ್ಷಣಕ್ಕೆ ತುಂಬಿಕೊಳ್ಳಲು ಹಿಂದೂ ಸಂಸ್ಕೃತಿಯು "ಹುಟ್ಟಿನಿಂದ ಜಾತಿ" ನೀತಿಯನ್ನು ಅಪ್ಪಿಕೊಂಡಿತು.

ಸಾಮಾಜಿಕ ಪಲ್ಲಟದಿಂದ ಜಾರಿಯಾದ ಈ ’ಹುಟ್ಟಿನಿಂದ ಜಾತಿ’ ನೀತಿಯನ್ನು ವಿರೋಧಿಸಿ ಸನಾತನವಾಗಿದ್ದ ’ವೃತ್ತಿಯಿಂದ ಜಾತಿ’ಯೇ ಇರಲೆಂದು ಕಾಯಕಕ್ಕೆ ಒತ್ತು ಕೊಟ್ಟು ’ಕಾಯಕವೇ ಕೈಲಾಸ’ ಎನ್ನುತ್ತ ಭಾರತದಲ್ಲೇ ಯಾರೂ ಈ ನೀತಿಗಾಗಿ ಹೋರಾಡಲಾರದಷ್ಟು ಸಾಮೂಹಿಕವಾಗಿ ಸಾಮಾಜಿಕವಾಗಿ ಹೋರಾಡಿದ ಶರಣರನ್ನು ಚಿಂತಕರೆನಿಸಿಕೊಂಡವರೇ ಜಾತಿಗೆ ಅಂಟಿಸುವುದು, ಮತ್ತವರ ಅನುಯಾಯಿಗಳೆಂದು ಕರೆದುಕೊಳ್ಳುವವರು, ಧಾರ್ಮಿಕ ಪ್ರತ್ಯೇಕತೆಗೆ ಹೋರಾಡುವುದು ಶರಣರ ಉಗ್ರ ವಿಪರ್ಯಾಸವೇ ಸರಿ!

- ರವಿ ಹಂಜ್

ವಿಶ್ವವಾಣಿ - ಪೂಜೆ ಪಾರ್ಟಿ ಟೈಮ್ ಸಮಾಜ ಸೇವೆ ಫುಲ್ ಟೈಮ್

 ಚಿತ್ರದುರ್ಗದ ಜಿಲ್ಲೆಯ ಅನೇಕ ಸ್ವಾಮಿಗಳಿಗೆ ಅದೇನೋ ಪ್ರಚಾರದ ತೆವಲು. ಹೇಗಾದರೂ ಮಾಡಿ ಪತ್ರಿಕೆಗಳಲ್ಲಿ ತಮ್ಮದೊಂದು ಸುದ್ದಿ ಇರಬೇಕು ಎಂದು ಸದಾ ತುರಿಸಿಕೊಳ್ಳುತ್ತಿದ್ದರು. ಭಾರತದಲ್ಲಿ ಉಂಟಾದ ಮಾಧ್ಯಮರಂಗ ಅಸ್ಫೋಟದೊಂದಿಗೆ ಇವರ ತುರಿಕೆ ಅತಿಯಾಗಿ "ಪೂಜೆ ಪಾರ್ಟಿ ಟೈಮ್, ಸಮಾಜ ಸೇವೆ ಫುಲ್ ಟೈಮ್" ಎಂಬ ಉದ್ಘೋಷದೊಂದಿಗೆ ಈ ಹುಚ್ಚು ಇಂದು ಉತ್ತುಂಗದ ತುತ್ತ ತುದಿಯನ್ನು ಏರಿದೆ. ಈ ಉತ್ತುಂಗದ ತುದಿಯಲ್ಲಿರುವ ಓರ್ವ ರಂಗ ಜಂಗಮ ಎನಿಸಿದ ಸ್ವಾಮಿಗಳು, "ಗಣಪತಿ ಪೂಜೆ ಮಾಡಬಾರದು" ಎಂದು ಹೇಳಿ ಕಳೆದ ವರ್ಷ ಕರ್ನಾಟಕದ ತುಂಬಾ ಬಯಲಾಟ ಆಡಿಸಿದ್ದರು.


ಆಗ ಅದನ್ನು ಸಕಾರಣವಾಗಿ ವಿಮರ್ಶಿಸಿದ್ದ ವಿಶ್ವವಾಣಿ ಸಂಪಾದಕರ ಮೇಲೆ ತಮ್ಮ ಬೆಂಬಲಿಗರಿಂದ ಫತ್ವಾ ಹೊರಡಿಸಿದ್ದರು. ಯಾವಾಗ ವಿರೋಧ ಪ್ರಬಲವಾಯಿತೋ ಆಗ, "ನಾನು ಕರೆ ನೀಡಿದ್ದು ಲಿಂಗಾಯತರಿಗೆ ಮಾತ್ರ ಎಲ್ಲರಿಗೂ ಅಲ್ಲ" ಎಂದು ಪರದೆ ಇಳಿಬಿಟ್ಟರು. ಅಲ್ಲಿಗೆ ಗಣಪತಿ ಪ್ರಸಂಗ ರಂಗ ಪ್ರಯೋಗ ಯಶಸ್ವಿಯಾಗಿ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಟ್ಟಿತು.


ಕಳೆದ ವಾರ ಹೊಳಲ್ಕೆರೆಯಲ್ಲಿ "ಚಿನ್ಮೂಲಾದ್ರಿ ಚಿತ್ಕಳೆ" ಎಂಬ ಸಂಪಾದಿತ ಗ್ರಂಥದ ಸ್ಪೂರ್ತಿಯಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಜಗದ್ಗುರುಗಳ ಒಂದೊಮ್ಮೆಯ ಬದ್ಧ ವಿರೋಧಿಗಳಾಗಿದ್ದ ಇವರು ಅವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪುಢಾರಿ ಭಕ್ತರ ದೆಸೆಯಿಂದ ಹಾಜರಿದ್ದು, "ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ...." ಇತ್ಯಾದಿಯಾಗಿ ಹಿಂದೂ ಧರ್ಮದ ಅವಹೇಳನ ಮಾಡಿದರು. ಇದನ್ನು ಟೀಕಿಸಿ ವಿಶ್ವವಾಣಿಯ ವಿಶ್ವೇಶ್ವರ ಭಟ್ಟರು, "...ಸಾಕು ಮಾಡಿ ನಿಮ್ಮ ಗೊಡ್ಡು ಪುರಾಣ" ಎಂಬ ಲೇಖನವನ್ನು ಬರೆದರು. ಈಗ ಮತ್ತೊಮ್ಮೆ ಲಿಂಗಾಯತ ಅನ್ಯಧರ್ಮ ಎಂಬ ನಶೆಯ ಭಕ್ತರು ಭಟ್ಟರ ಮೇಲೆ ಫತ್ವಾ ಹೊರಡಿಸಿದ್ದಾರೆ. 


ಇರಲಿ, ಈ ಎಲ್ಲಾ ರಂಗನಾಟಕಗಳ ಆಚೆ ಲಿಂಗಾಯತ ಹಿಂದೂ ಧರ್ಮದ ಭಾಗವಾಗಿತ್ತೇ? ನೋಡೋಣ ಬನ್ನಿ.


ಮೊದಲಿಗೆ ಲಿಂಗಾಯತರಿಗೆ ಒಂದು ಧರ್ಮಗ್ರಂಥವಿದೆ. ಈ ಅರೆಬೆಂದ ಸ್ವಾಮಿಗಳು ಹೇಳುವಂತೆ ಕೇವಲ ವಚನಗಳ ಕಟ್ಟು ಲಿಂಗಾಯತರ ಧರ್ಮಗ್ರಂಥವಲ್ಲ! ಚೆನ್ನಬಸವಣ್ಣನು ರಚಿಸಿದ "ಕರಣ ಹಸಿಗೆ" ಲಿಂಗಾಯತರ ಧರ್ಮಗ್ರಂಥ ಎಂದು ಮಾನ್ಯತೆ ಪಡೆದಿದೆ. ವಿಪರ್ಯಾಸವೆಂಬಂತೆ ಮೊನ್ನೆ ಯಾವ ವೇದಿಕೆಯಲ್ಲಿ ರಂಗಜಂಗಮರು ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ ಎಂದು ಭಾಷಣ ಮಾಡಿದ್ದರೋ ಅದೇ ಸ್ಮರಣೋತ್ಸವ ಆಚರಿಸಿದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳೇ ಇದರಲ್ಲಿ ಪ್ರಕಾಂಡ ಪಂಡಿತರಾಗಿದ್ದರು!


ಇರಲಿ, ಈಗ ಲಿಂಗಾಯತರಲ್ಲಿ ಓಂ ಇಲ್ಲ, ವೇದವಿಲ್ಲ, ಆಗಮವಿಲ್ಲ, ಅದಿಲ್ಲ ಇದಿಲ್ಲ ಎನ್ನುತ್ತಾ ವಿಶ್ವವಾಣಿಗೆ ಬಸವಲಿಂಗ ಸವಾಲ್ ಎಂದು ಸವಾಲು ಹಾಕುತ್ತಿರುವ ಅಜ್ಞಾನಿ ಅಧಮ ಆಧುನಿಕ ಹೆಡ್ಡ ಧರ್ಮಾಂಧರಿಗಾಗಿ "ಲಿಂಗಾಯತ"ರು ಪಾಲಿಸಬೇಕಾದ ಚೆನ್ನಬಸವಣ್ಣ ವಿರಚಿತ "ಕರಣ ಹಸಿಗೆ" ಗ್ರಂಥದಿಂದ ಆಯ್ದ ಭಾಗ:


ಅಕಾರವೆಂಬ ಪ್ರಣವದಲ್ಲಿ - 

ಅಗ್ನಿಶ್ಚ ಋಗ್ವೇದಸ್ತಥಾ ರುದ್ರೋಧಿದೇವತಾ | 

ಆಕಾರ ಚಯಂಯಾತಿ ಪ್ರಥಮೇ ಪ್ರಣವಾಂಶಿಕೆ|| 


ಉಕಾರನೆಂಬ ಪ್ರಣವದಲ್ಲಿ - 


ಅಂತರಿಕ್ಷೇ ಯಜುರ್ವೇದೋಭವೇತ್ ಓಂ ಈಶ್ವರೋದೇವತಾ|

ಉಕಾರೇಚ ಲಯಂಯಾತಿ ದ್ವಿತೀಯಂ ಪ್ರಣವಾಂಶಿಕೆ| 


ಮಕಾರವೆಂಬ ಪ್ರಣವದಲ್ಲಿ -

ವಿದ್ಯೇಷು ಸಾಮವೇದೋಭವೇತ್ ಓಂ ಸದಾಶಿವೋ ದೇವತಾ|

ಮಕಾರೇಚ ಲಯಂಯಾಕಿ ತೃತೀಯೇ ಪ್ರಣವಾಂಶಿಕೆ||


ಅಕಾರೇಚ ಉಕಾರೇಚ ಮಕಾರೇಚ ತೃತೀಯಕೆ|

ಇದಮೇಕಂ ಸಮುತ್ಪನ್ನಂ ಓಂ ಇತಿಜ್ಯೋತಿಃ ರೂಪಕಂ||


ಓಂಕಾರಾತ್ಪ್ರಭವಾವೇದಂ | ಓಂಕಾರಾತ್ಪ್ರಭವಾಸ್ವರಂ 

ಓಂಕಾರಾತ್ಪ್ರಭವಾ ಸರ್ವಂ | ತ್ರೈಲೋಕ್ಯಂ ಸಚರಾಚರಂ 

ಸರ್ರವ್ಯಾಪಕಮೋಂಕಾರಂ ಮಂತ್ರೋನ್ಯತ್ರ ನಶೋಭತೆ |

ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ | 

ಓಂಕಾರಂ ನಾದರೂಪಂಚ ಓಂಕಾರಂ ಬಿಂದುರೂಪಕಂ | 

ಓಂಕಾರಂ ವ್ಯಾಪಿ ಸರ್ವತ್ರಂ ಓಂಕಾರ ಗೋಪ್ಯಮಾನಸಂ | 

ಎಂದಿದು ಪ್ರಣವದುತ್ಪತ್ತಿ. 


ಮೇಲಿನ ಅಕಾರ ಉಕಾರ ಮಕಾರ ಪ್ರಣವದ ಮೂರು ಶ್ಲೋಕಗಳ ಅರ್ಥವು - 


ಅಕಾರವೆಂದು ಹೇಳಿಸಿಕೊಳ್ಳುವ ಪ್ರಣವದ ಅಕ್ಷರದೊಳಗೆ ಅಗ್ನಿಃ ತೇಜವೆಂಬುದೊಂದು ತತ್ತ್ವವು, 

ಋಗ್ವೇದವೆಂಬ ವೇದವು, ರುದ್ರಮೂರ್ತಿಯೆಂಬುದೊಂದು ಅಧಿದೇವತೆಯು, ಇಂದ್ರಾದಿ ನಿರ್ಜರರೆಂಬ ದೇವತೆಗಳು ಉತ್ಸತ್ತಿಯಾದರು. ಉತ್ಪತ್ತಿಯಾಗಿ ಪರಶಿವನ ಸಗುಣಾನಂದ ಸೃಷ್ಟಿಯ ಲೀಲಾವಿಲಾಸ ಉಂಟಾಗಿರುವ ಪರಿಯಂತರ ಉಂಟಾಗಿರ್ದು ಲೀಲೆ ಸಾಕಾದ ಬಳಿಕ ಓಂಕಾರ ಪ್ರಣವದ ಒಂದನೇ ಅಂಶವಾದ ಅಕಾರ ಪ್ರಣವದಲ್ಲಿಯೇ ವಿಶ್ರಾಂತಿಯನ್ನು ಐದುತ್ತಿಹವು. - ಇದು ಮೇಲಿನ ಅಕಾರ ಪ್ರಣವ ಶ್ಲೋಕದ ಅರ್ಥವು. 


ಉಕಾರ ಪ್ರಣವದಲ್ಲಿ ವರ್ಣದೊಳಗಂತರಿಕ್ಸ, ಆಕಾಶ ತತ್ತ್ವ, ಯಜುರ್ವೇದ, ಈಶ್ವರನೆಂಬ ಅಧಿದೇವತೆ, ಇಂದ್ರಾದಿ ಅಪ್ಸರರೆಂಬ ದೇನತೆಗಳು ಉತ್ಪತ್ತಿಯಾದರು. ಲೀಲೆ ಸಾಕಾದ ಬಳಿಕ ಪ್ರಣವದ ಎರಡನೇ ಅಂಶವಾದ ಉಕಾರದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. - ಇದು ಉಕಾರ ಪ್ರಣವಡ ಶ್ಲೋಕಾರ್ಥವು.  


ಮಕಾರ ಪ್ರಣವದಲ್ಲಿ ಸುಜ್ಞಾನ ಕಲಾತ್ಮ ತತ್ತ್ವ, ಚತುಸ್ಪಷ್ಠಿ ಕಳಾವಿದ್ಯೆಗಳು, ಸಾಮವೇದವು, ಸದಾಶಿವನೆಂಬ ಅಧಿದೇವತೆಯು ಇಂದ್ರಾದಿ ಅಷ್ಟ ದಿಕ್ಟಾಲಕರು ಉದಯವಾದರು. ಲೀಲೆ ಸಾಕಾದ ಬಳಿಕ ಪ್ರಣವದ ತೃತೀಯಾಂಶವಾದ ಮಕಾರ ಪ್ರಣವದಲ್ಲಿ ವಿಶ್ರಾಂತಿಯನ್ನು ಐದುತ್ತಿಹವು. 


ಓಂಕಾರದ ಅರ್ಥ - ಇನ್ನು ಓಂಕಾರ ಪ್ರಣವದಿಂದ ನಾಲ್ಕು ವೇದಗಳು, ನಾಲ್ಕು ಉಪ ವೇದಗಳು, ಆಗಮಗಳು, ಶಾಸ್ತ್ರ ಪುರಾಣಗಳು, ಷಡಧ್ವ ಷಡ್ಗುಣ ವಸ್ತು, ತತ್ತ್ವಪಂಚಕವು, ಸಪ್ತ ಭುವನಂಗಳು ಹುಟ್ಟಿದವು.


ಈಗ ನೀವೇ ನಿರ್ಧರಿಸಿ, ಲಿಂಗಾಯತವು ಹಿಂದುವೋ ಅಹಿಂದುವೋ?


ಇನ್ನು ಈ ರಂಗ ಜಂಗಮರು ತಮ್ಮ ಆರಂಭದ ವರ್ಷಗಳಲ್ಲಿ ಪ್ರಚಾರದ ಆಸ್ಥೆಯಿಂದ ನಮ್ಮ ದಾವಣಗೆರೆ ಹಳೆಪೇಟೆಯ ದುಗ್ಗಮ್ಮನ ಜಾತ್ರೆಯ ಸಮಯದಲ್ಲಿ "ಪ್ರಾಣಿಬಲಿ ಬೇಡ, ಬೇವಿನ ಉಡುಗೆಯ ಸೇವೆ ಬೇಡ" ಎಂದೆಲ್ಲಾ ಸ್ಥಳೀಯ ಪತ್ರಿಕೆಗಳಲ್ಲಿ ಕರೆ ನೀಡುತ್ತಿದ್ದರು. ವಿಪರ್ಯಾಸವೆಂದರೆ ಇವರ ಅಗ್ರಭಕ್ತರೇ ಮುಂದೆ ನಿಂತು ಕೋಣನ ಬಲಿ ನಡೆಯುವಂತೆ ಇಂದಿಗೂ ನೋಡಿಕೊಳ್ಳುತ್ತಿದ್ದಾರೆ.


ವಿಚಿತ್ರವೆಂದರೆ ಇವರ ಮಠ ಇರುವ ಹಳ್ಳಿಯ ಜಾತ್ರೆಯಲ್ಲಿ ಸಹ ಈವರೆಗೂ ಪ್ರಾಣಿಬಲಿ ನಿಂತಿಲ್ಲ. ಅಲ್ಲಿ ಇವರು ಪ್ರಾಣಿಬಲಿ ನಿಲ್ಲಿಸಿ ಎಂದು ಕರೆ ಕೊಟ್ಟಿದ್ದು ಈವರೆಗೂ ಕೇಳಿಲ್ಲ. ಏಕೆಂದರೆ ದೊಡ್ಡ ಪ್ರೇಕ್ಷಕರಿರುವ ರಂಗದಲ್ಲಿ ಮಾತ್ರ ನಾಟಕಗಳು ಕಳೆಗಟ್ಟುವುದು!


-ರವಿ ಹಂಜ್