2019 ಲೋಕಸಭಾ ಚುನಾವಣೆ

ಇಂದಿನ ಉದಯಕಾಲದಲ್ಲಿ:

ಅಂತೂ ಇಂತೂ ಭರತವರ್ಷದ ಚುನಾವಣೆ ಬಂದಿದೆ. ಈ ಧರ್ಮಯುದ್ಧದಲ್ಲಿ ಜೆಡಿಎಸ್ ನಿಂದ ಧೃತರಾಷ್ಟ್ರ, ಕಾಂಗ್ರೆಸ್ಸಿನಿಂದ ರಾಜಮಾತೆ, ಅಳಿದುಳಿದ ಸಾಮಂತರೊಟ್ಟಿಗೆಲ್ಲಾ  ತಮ್ಮ ಸ್ವಂತಿಕೆಯನ್ನು ಮರೆತು ದೇಶಕಾರಣ ಕೈ ಜೋಡಿಸಿದ್ದರೆ, ಬಿಜೆಪಿ ಯಥಾಪ್ರಕಾರ ದೇಶಭಕ್ತಿಯ ಪರಾಕಾಷ್ಠೆಯನ್ನು ನೆಚ್ಚಿಕೊಂಡಿದೆ.

ಮೊನ್ನೆ ನನ್ನ ಬೆಂಗಳೂರಿನಲ್ಲಿರುವ ಸ್ನೇಹಿತನೊಬ್ಬ ಹೀಗೆಯೇ ಹರಟುತ್ತ "ಈ ರಾಜಕಾರಣಿಗಳು ಏನೇನು ತಿನ್ನಲು ಸಾಧ್ಯವೋ ಅದನ್ನೆಲ್ಲಾ ತಿಂದಾಗಿದೆ. ಕರ್ನಾಟಕದ ನೆಲವನ್ನೆಲ್ಲಾ ತಿಂದು, ನದಿ/ಕೆರೆ/ಡ್ಯಾಂಗಳನ್ನೆಲ್ಲಾ ಕುಡಿದು ಹೊಟ್ಟೆ ಕೆಟ್ಟು ಹೂಸಿಸುತ್ತ ಜನಸಾಮಾನ್ಯರಿಗೆ ಉಸಿರಾಡಲು ಶುದ್ಧ ಗಾಳಿಯೂ ಇಲ್ಲದೆ ಅಪಾಯವಾಯುವನ್ನು ಎಲ್ಲೆಡೆ ಪಸರಿಸಿದ್ದಾರೆ. ಇನ್ನು ಜನರನ್ನು ಮುಕ್ಕುವುದಷ್ಟೇ ಬಾಕಿಯಿರುವುದು. ಜನರನ್ನು ತಿನ್ನಲು ಈ ರಾಜಕಾರಣಿಗಳ ಹಲ್ಲುಗಳು ಕಟಕಟವೆನ್ನುತ್ತಿದ್ದರೂ ಕ್ರಾಂತಿಯಾದೀತೆಂದು ಹೇಗೋ ಆ ತೀಟೆಯನ್ನು ತಡೆದುಕೊಂಡಿರುವರು. ಇಂತಹ ರಾಜಕಾರಣಿಗಳಿಂದ ತುಂಬಿದ ಭಾರತದ ಭವಿಷ್ಯ, ಮುಂದಿನ ಜನಾಂಗದಲ್ಲಿ ಹೇಗಿರುತ್ತದೋ?" ಎಂದು ವಿಷಾದ ವ್ಯಕ್ತಪಡಿಸಿದನು.

ಯೋಚಿಸಿ ನೋಡಿ, ಈಗ ನಡೆಯುತ್ತಿರುವ ಚುನಾವಣೆಗಳನ್ನು, ಅಭ್ಯರ್ಥಿಗಳನ್ನು ನೆನೆಸಿಕೊಂಡರೆ ಅಸಹ್ಯವಾಗುತ್ತದೆ. ಈ ರಾಜಕಾರಣಿಗಳ ಮೇಲಿನ ಅಸಹ್ಯ ಎಲ್ಲಿ ಭಾರತದ ಮೇಲೆಯೇ ಅಸಹ್ಯ ಹುಟ್ಟಿಸುತ್ತದೋ ಎಂದು ದಿಗಿಲಾಗುತ್ತದೆ! ಪ್ರತಿ ಚುನಾವಣೆಗಳಲ್ಲಿಯೂ ಬಾಲಬಡುಕರು, ನೆಲಗಳ್ಳರು, ರೌಡಿಗಳು, ದಗಾಕೋರರು, ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು, ಇತ್ಯಾದಿ ಇತ್ಯಾದಿ ವಂಶಜರು  ಪಕ್ಷಾತೀತವಾಗಿ ಅಲ್ಲಲ್ಲಿ ಇರುತ್ತಿದ್ದರೆ, ಈ ಬಾರಿ ಅವರುಗಳೇ ವಿಜೃಂಭಿಸುತ್ತಿದ್ದಾರೆ. ಭಾರತದ ಪ್ರಜೆಗಳೂ ಈ ಜನನಾಯಕರುಗಳಂತೆಯೇ ಭ್ರಷ್ಟರಾಗುತ್ತ ದೇಶ ಅಧಃಪತನದತ್ತ ದಾಪುಗಾಲಿಡುತ್ತಿದೆ ಎಂದೇ ಅನಿಸುತ್ತದೆ. ಇದು ಎಂದಾದರೂ ಬದಲಾದೀತೇ?

ನಾನೊಬ್ಬ ಆಶಾಜೀವಿ, ಹಾಗಾಗಿ ಭಾರತದ ಈ ರಾಜಕೀಯ ಗಾಢಾಂಧಕಾರದಲ್ಲಿ ಸಣ್ಣ ಬೆಳಕಿನ ಅಸ್ಪಷ್ಟ ರೇಖೆ ಕಂಡುಬಂದರೂ ಅದೊಂದು ಮಹಾ ಬದಲಾವಣೆಯ ಆರಂಭವೆಂದೇ ಅಂದುಕೊಳ್ಳುತ್ತೇನೆ. ನಮ್ಮ ನಿಮ್ಮಂಥ ಯಾವುದೇ ದೇಶಪ್ರೇಮಿಯು ಕೂಡಾ ಹೀಗೆಯೇ ಅಂದುಕೊಳ್ಳಬೇಕು. ಹಾಗಾಗಿ ಈ ಎಲ್ಲಾ ಅಭ್ಯರ್ಥಿತನಗಳನ್ನು ಆಶಾವಾದದಿಂದ ಕಾಣಬೇಕು.  ಆ ಭರವಸೆಯ ಸಣ್ಣ ಆಶಾಕಿರಣ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಣಿಸುತ್ತಿದೆ.

ಪ್ರಮುಖವಾಗಿ ಆ ಆಶಾಕಿರಣ ಮಂಡ್ಯ ಮತ್ತು ಹಾಸನದ ಎರಡು ಕ್ಷೇತ್ರಗಳಲ್ಲಿ ಕಾಣಿಸುತ್ತಿದೆ. ಈ ಎರಡೂ  ಕ್ಷೇತ್ರಗಳಲ್ಲಿ ಉತ್ಸಾಹಿ ಯುವಕರೀರ್ವರು ಅಭ್ಯರ್ಥಿಗಳಾಗಿದ್ದಾರೆ. ಯುವಜನತೆಯ ಆಶಾಕಿರಣ ರಾಹುಲ್ ಗಾಂಧಿಯವರ ಕಾಂಗ್ರೆಸ್ ಪಕ್ಷ ಮತ್ತು ರಾಜಕೀಯ ಪಟ್ಟುಗಳ ಭೀಷ್ಮ ಪಿತಾಮಹರೆನಿಸಿದ ದೇವೇಗೌಡರ ಜೆಡಿಎಸ್ ಪಕ್ಷಗಳು ಒಟ್ಟಾಗಿ ಈ ಯುವಶಕ್ತಿಗಳಿಗೆ ಬೆಂಬಲವಾಗಿ ನಿಂತಿದೆ. ಇಲ್ಲಿ ಜನತೆ ಪ್ರಮುಖವಾಗಿ ಈ ಯುವಕರ ಕೌಟುಂಬಿಕ ಹಿನ್ನೆಲೆಯನ್ನು ನೋಡದೆ ಅವರ ಅಭ್ಯರ್ಥಿತನ ತರುವ ಅಮೋಘ ಯುವಶಕ್ತಿಯನ್ನು ಗಮನದಲ್ಲಿರಿಸಿಕೊಳ್ಳಬೇಕು. ಏಕೆಂದರೆ ನಾವು ಎಲ್ಲದರಲ್ಲೂ ಹುಳುಕನ್ನು ಹುಡುಕದೆ ಒಳ್ಳೆಯದನ್ನು ಮಾತ್ರ ಪರಿಗಣಿಸಬೇಕು. ಹಾಗಾಗಿ ಇಲ್ಲಿ ಪ್ರಮುಖವಾಗಿ ಯುವಶಕ್ತಿ ಅದರಲ್ಲೂ ಈ ಎರಡು ಜಿಲ್ಲೆಗಳಲ್ಲಿನ ಪ್ರಮುಖ ಜಾತಿ ಜನಾಂಗೀಯ ಅಸ್ಮಿತೆಯನ್ನು ಪ್ರತಿನಿಧಿಸುವ ಶಕ್ತಿ ಕೂಡ ಆಗಿರುವುದರಿಂದ ಇದೊಂದು ಆಶಾಕಿರಣವೇ ಆಗಿದೆ.

ಇನ್ನು ಈ ಮೊಮ್ಮಕ್ಕಳ ಕುರಿತು ಯೋಚಿಸುವುದಕ್ಕಿಂತ ಅವರ ಹಿರಿಯರ ದೇಶಕಾರಣವನ್ನು ಗಮನಿಸೋಣ.

ಫ್ಯಾಸಿಸ್ಟ್ ಶಕ್ತಿಗಳನ್ನು ಮತ್ತು ಸರ್ವಾಧಿಕಾರವನ್ನು ಕಿತ್ತೊಗೆಯುವ  ಮಹಾಭಿಲಾಷೆಯಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಒಗ್ಗಟ್ಟಾಗಿ  ಭಾರತದಲ್ಲಿ ಇತರೆ ಸಮಾನ ಮನಸ್ಕರಾದ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ, ಮಾಯಾವತಿ, ಯಾದವೀ ಕುಟುಂಬ, ದ್ರಾವಿಡ ಶಿಶು ಸ್ಟ್ಯಾಲಿನ್ ಮುಂತಾದವರನ್ನು ಒಡಗೂಡಿಕೊಂಡು  ಸ್ವರ್ಣಯುಗವನ್ನು ಆರಂಭಿಸಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರಪ್ರೇಮ, ಪ್ರಾಮಾಣಿಕತೆಯ ತತ್ವಗಳೊಂದಿಗೆ ಆಧ್ಯಾತ್ಮದ ಚಿಂತನೆಯನ್ನೂ ಒಗ್ಗೂಡಿಸಿಕೊಂಡು ಭ್ರಷ್ಟಾಚಾರವನ್ನು ನಿರ್ಮೂಲನೆಗಾಗಿ ರಾಜಕೀಯ ಕ್ರಾಂತಿಯನ್ನು ಮಾಡುವತ್ತ ಒಂದು ಅತೀ ಮಹತ್ವದ ಹೆಜ್ಜೆಯನ್ನಿರಿಸಿದ್ದಾರೆ.

ಇವರು ಸದ್ಯಕ್ಕೆ ಯಾವುದನ್ನು ವಿರೋಧಿಸಿ ನಿರ್ನಾಮ ಮಾಡುತ್ತೇವೆನ್ನುತ್ತಿರುವರೋ ಆ ವಿಚಾರಗಳಲ್ಲಿ ಇವರುಗಳ ಪಾತ್ರವೇನು ಎಂದು ನೋಡೋಣ.

ಫ್ಯಾಸಿಸ್ಟ್ ಶಕ್ತಿ: ಪ್ರಮುಖವಾಗಿ ಒಂದು ಪಕ್ಷವೇ ಪ್ರಮುಖವಾಗಿ ಆಡಳಿತ ನಡೆಸುತ್ತ, ಪ್ರಜಾಪ್ರಭುತ್ವವನ್ನು ಸಂಕಷ್ಟಕ್ಕೀಡುಮಾಡಿ, ಯುದ್ಧೋತ್ಸಾಹ ಮೆರೆಯುತ್ತ ದೇಶಕ್ಕೆ ಆರ್ಥಿಕ ಸಂಕಷ್ಟಗಳನ್ನು ತರುವುದನ್ನು ಫ್ಯಾಸಿಸ್ಟ್ ಶಕ್ತಿ ಎಂದು ಭಾರತದ ಮಟ್ಟಿಗೆ ಹೇಳಬಹುದು. ಯೂರೋಪಿನ ಮಟ್ಟಿಗಾದರೆ ಇದನ್ನು "ಚರ್ಚು-ಆಡಳಿತ" ಇತ್ಯಾದಿಯಾಗಿ ಕೂಡ ವ್ಯಾಖ್ಯಾನಗೊಳಿಸಬಹುದು. ಚರ್ಚು ಎಂದೊಡನೆ ಅದನ್ನು ಗುಡಿ, ಮಸೀದಿಗಳೆಂದು ಭಾರತಕ್ಕೆ ಕೂಡ ಅನ್ವಯಿಸಲಾಗದು. ಹತ್ತೊಂಬತ್ತನೇ ಶತಮಾನದ ಯೂರೋಪಿನ ಚರ್ಚ್ ಕೇಂದ್ರಿತ ಆಡಳಿತವೇ ಬೇರೆ ಮತ್ತು ಆ ಫ್ಯಾಸಿಸ್ಟ್ ವ್ಯಾಖ್ಯಾನವೇ ಬೇರೆ.

ಈಗ ಬಿಜೆಪಿ ಅಂತಹ ಫ್ಯಾಸಿಸ್ಟ್ ಶಕ್ತಿ ಎಂಬುದು ಇವರೆಲ್ಲರ ಅಭಿಪ್ರಾಯ. ಅದು ಅಲ್ಲವೇ ಹೌದೇ ಎಂಬುದಕ್ಕಿಂತ ಅದನ್ನು ವಿರೋಧಿಸುವ ಇವರು ಫ್ಯಾಸಿಸ್ಟರಲ್ಲವೆಂಬುದು ಮೊದಲು ಸಾಬೀತಾಗಬೇಕಲ್ಲವೇ?

ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಕೇವಲ ಐದು ವರ್ಷಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿದ್ದಿತು, ಅದೂ  ಪ್ರಜಾಪ್ರಭುತ್ವದ ಚುನಾವಣೆಯ ಆಧಾರದ ಮೇಲೆ. ಹಾಗೆಯೇ  ಈ ಹಿಂದೆ ಕಾಂಗ್ರೆಸ್ ಒಂದಲ್ಲ ಸಾಕಷ್ಟು ಚುನಾವಣೆಗಳಲ್ಲಿ ಇದೇ ರೀತಿ ಚುನಾವಣೆಗಳಲ್ಲಿ ಅತಿ ದೊಡ್ಡ ಪಕ್ಷವಾಗಿ ಅಧಿಕಾರಕ್ಕೆ ಚುನಾಯಿತವಾಗಿದ್ದಿತು. ಹಾಗಾಗಿ ಕಾಂಗ್ರೆಸ್ ಬಿಜಿಪಿಗಿಂತ ಅತಿ ದೊಡ್ಡ ಫ್ಯಾಸಿಸ್ಟ್ ಶಕ್ತಿಯೆನಿಸಿಬಿಡುತ್ತದೆ. ಏಕೆಂದರೆ ಫ್ಯಾಸಿಸ್ಟ್ ವ್ಯಾಖ್ಯಾನವೇ ಹಾಗಿದೆ.   ಅದನ್ನೇ ಸಾಕಷ್ಟು ಅಂದಿನ ಬುದ್ಧಿಜೀವಿಗಳು ವಿರೋಧಿಸಿಕೊಂಡು ಬಂದು ಲೋಹಿಯಾ, ಜೆಪಿ ಚಳುವಳಿಗಳನ್ನು ರೂಪಿಸಿ ಸಂಚಲನ ಮೂಡಿಸಿದ್ದರು. ದೇವೇಗೌಡ, ವಾಜಪೇಯಿಗಳೆಲ್ಲ ಆ ಚಳುವಳಿಗಳ ಬಾಧ್ಯಸ್ಥರಾಗಿದ್ದವರೇ.  ಕೇವಲ ಐದು ವರ್ಷಗಳಲ್ಲಿ ತಮಗೆ ಅಧಿಕಾರ ಸಿಗದಿದ್ದುದಕ್ಕೆ ಈ ಶಕ್ತಿಗಳೆಲ್ಲ ತಮ್ಮ ತತ್ವ ಸಿದ್ಧಾಂತಗಳನ್ನೆಲ್ಲ ತೂರಿ ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ಕೈಜೋಡಿಸಿರುವುದು ಹೇಗೆ ಫ್ಯಾಸಿಸ್ಟ್ ಅನ್ನಿಸದು ಎಂಬುದು ಶ್ರೀಸಾಮಾನ್ಯನ ಪ್ರಶ್ನೆ!

ಸರ್ವಾಧಿಕಾರ: ಕಳೆದ ನಲವತ್ತು ವರ್ಷಗಳ ಸುದ್ದಿಗಳನ್ನು, ಪ್ರಗತಿಪರರ ಚಿಂತನೆಗಳನ್ನು ಓದಿದರೆ ಶ್ರೀಮತಿ ಇಂದಿರಾ ಗಾಂಧಿಯವರು ಇಂತಹ ಸರ್ವಾಧಿಕಾರಿಗಳಾಗಿದ್ದರು ಎಂಬುದರ ಚಿತ್ರಣ ಸಿಗುತ್ತದೆ. ಅಂದು ಕಾಂಗ್ರೆಸ್ಸಿನ ಒಬ್ಬ ಪ್ರಮುಖ ಕೂಡ ಒಂದು ಪತ್ರಿಕಾ ಹೇಳಿಕೆಗೆ ದೆಹಲಿಗೆ ಟ್ರಂಕ್ ಕಾಲ್ ಮಾಡಿದ ನಂತರವೇ ಮಾತನಾಡಬೇಕಿದ್ದಿತು. ಇಂದು ಮೋದಿ ಸರ್ವಾಧಿಕಾರಿಯಾಗಿದ್ದರೆ ಅವರ ಪಕ್ಷದ ಮಂತ್ರಿಗಳು, ವಕ್ತಾರರು ಬೇಕಾಬಿಟ್ಟಿಯಾಗಿ ಉಚ್ಛೆಯಿಂದ ಯೂರಿಯಾ ಉತ್ಪಾದನೆ, ಕಣ್ಣು ಹೊಡೆದರೆ ಕಣ್ಣು ಕೀಳುವ, ಮುಟ್ಟಿದರೆ ಕೈ ಕತ್ತರಿಸುವ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.  ಇನ್ನು ದೇವೇಗೌಡರ ಕೌಟುಂಬಿಕ ಅಭ್ಯರ್ಥಿತನ ಸರ್ವಾಧಿಕಾರವನ್ನಲ್ಲದೆ, ಫ್ಯಾಸಿಸ್ಟ್ ಧೋರಣೆಯನ್ನಲ್ಲದೆ ಇನ್ನೇನನ್ನು ಹೇಳುವುದಿಲ್ಲ.

ಭ್ರಷ್ಟಾಚಾರ: ಈ ವಿಚಾರವಾಗಿ ಇಂದು ಘಟಬಂಧನದಲ್ಲಿ ಜೊತೆಯಾಗಿರುವ ಯಾದವ ಕುಟುಂಬ, ಗೌಡ ಕುಟುಂಬ, ಗಾಂಧೀ ಕುಟುಂಬ, ಮಾಯಾವತಿ ನಿಷ್ಠಮಂಡಳಿ, ಮಮತಾ ಮಿತ್ರಮಂಡಳಿ , ನಾಯ್ಡು ಕುಟುಂಬ, ಕರುಣಾನಿಧಿಯವರ ಕರುಣಾ ಪ್ರಸಾದಗಳು ಇತ್ಯಾದಿ ಇತ್ಯಾದಿಗಳ ಭ್ರಷ್ಟಾಚಾರದ ಆರೋಪಗಳನ್ನೊಮ್ಮೆ ಅವಲೋಕಿಸಿದರೆ ಸಾಕು, ಇನ್ನೇನು ಹೇಳುವುದೇ ಬೇಕಿಲ್ಲ. ಅದಲ್ಲದೆ ಭ್ರಷ್ಟಾಚಾರದ ಕುರಿತು ಮಾತನಾಡುವ ಹಕ್ಕು ನಮಗ್ಯಾರಿಗೂ ಇಲ್ಲ. ಏಕೆಂದರೆ ಕೋಟಿಗಟ್ಟಲೆ ಹಣ ಸುರಿದು ಚುನಾವಣೆಗೆ ನಿಲ್ಲುವುದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಅಷ್ಟು ಹಣ ಸುರಿದವ ಅದನ್ನು ಬಡ್ಡಿ ಸಮೇತವಾದರೂ ಮರಳಿ ಪಡೆಯುವುದು ಬೇಡವೇ ಎಂದು ಆತನ ಭ್ರಷ್ಟತೆಯನ್ನು ಸಮರ್ಥಿಸುತ್ತೇವೆ.

ಎಲ್ಲಾ ಮಾರ್ಗ, ಪಕ್ಷಗಳಿಂದ ನೋಡಿದಾಗ ಭಾರತದ ಪ್ರಜಾಪ್ರಭುತ್ವ ಫ್ಯಾಸಿಸ್ಟ್ ಧೋರಣೆಯ ಊಳಿಗಮಾನ್ಯ ಪ್ರಜಾಪ್ರಭುತ್ವ ಎನಿಸುತ್ತದೆ.

ಇನ್ನು ಭಾರತೀಯ ಸಂವಿಧಾನ ಕೂಡ ಯಾವುದಾದರೂ ಒಂದು ಪಕ್ಷ ನಿಗದಿತ ಪ್ರಮಾಣದ ಸ್ಥಾನಗಳನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದರೆ ಸರ್ಕಾರ ರಚಿಸಬಹುದೆಂದು ಹೇಳಿದೆ. ಅಂದರೆ ಸಂವಿಧಾನ ಕೂಡಾ ಫ್ಯಾಸಿಸ್ಟ್ ಧೋರಣೆಯನ್ನು ಪ್ರತಿಪಾದಿಸುತ್ತದೆನ್ನಬೇಕೆ? ಹೌದೆನ್ನುವುದಾದರೆ ಭಾರತೀಯ ಬಹುತ್ವವನ್ನು ಒಂದು ದೊಡ್ಡ ಪಕ್ಷವಾಗಿ ಚುನಾಯಿತ ಪಕ್ಷಕ್ಕಿಂತ ಬಹುಪಕ್ಷಗಳು ಒಡಗೂಡಿ ಸರ್ಕಾರವನ್ನು ರಚಿಸಬೇಕೆಂದು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಹಾಗಾಗಿ ಫ್ಯಾಸಿಸ್ಟ್ ಎಂಬುವ ದ್ವಂದ್ವದ ಫ್ಯಾಷನ್ನಿಗೊಳಗಾಗದೆ ವಾಸ್ತವಿಕವಾಗಿ ಚಿಂತಿಸಬೇಕಾಗುತ್ತದೆ. ಭಾರತದ ಇಲ್ಲಿಯವರೆಗಿನ ಸಮ್ಮಿಶ್ರ ಸರ್ಕಾರಗಳು ಏಳಿಗಿಂತ ಬೀಳುಗಳ ಸರಮಾಲೆಯನ್ನೇ ತಂದೊಡ್ಡಿವೆ. ಸಮ್ಮಿಶ್ರ ಸರ್ಕಾರಗಳು ಯಾವುದೇ ತತ್ವ ಸಿದ್ಧಾಂತಗಳಿಗೆ, ವೈಚಾರಿಕತೆಗೆ, ಪ್ರಾಮಾಣಿಕತೆಗೆ, ರಾಷ್ಟ್ರಹಿತಕ್ಕೆ ಬದ್ಧರಾಗಿರದೆ ತಮ್ಮ ಅನುಕೂಲಗಳಿಗೆ ಬದ್ಧತೆಯನ್ನು ಮೆರೆದ ಇತಿಹಾಸವನ್ನೇ ಕಳೆದೆರಡು ದಶಕಗಳಿಂದ ನೋಡಿದ್ದೇವೆ. ಹೀಗಿದ್ದಾಗ ಯಾವುದು ಹಿತ?

ಈ ಎಲ್ಲಾ ನಿದರ್ಶನಗಳು ಬಿಜೆಪಿಯಲ್ಲಿಯೂ ದಂಡಿಯಾಗಿ ಇವೆ. ಇದುವರೆಗೆ ಮೋದಿ ಸುಳ್ಳನೆಂದು ವಿರೋಧಿಗಳೆಲ್ಲ ಘೋಷಿಸಿಯಾಗಿದೆ.  ಹಾಗಾಗಿ ಇದ್ದುದರಲ್ಲಿ ಕಳ್ಳರಿಗಿಂತ ಸುಳ್ಳ ವಾಸಿಯೋ ಅಥವಾ ಕಳ್ಳರೇ ಲೇಸೋ ಎಂಬುದು ಮಾತ್ರ ಈ ಚುನಾವಣೆಯಲ್ಲಿರುವ ಆಯ್ಕೆ ಮತ್ತು ನಿರ್ಧಾರವಾಗುವುದು. ಬೇರೆಲ್ಲಾ ವಿಚಾರಗಳೂ ಭಾರತೀಯ ಸಿನಿಮಾಗಳಲ್ಲಿನ ಐಟಂ ಸಾಂಗು, ಚಿಂದಿ ಡೈಲಾಗು, ಆ ಡೈಲಾಗು ತಾಳ ತಪ್ಪಿದರೆ ಕಣ್ಣೀರ ಕೋಡಿ ಅಥವಾ ಪುಂಖಾನುಪುಂಖ ಬುದ್ಧಿಜೀವಿಗಳ ಲೇಖನಮಾಲೆ (ಡಿಸ್ಲೆಕ್ಸಿಯಾ, ಮೀಟು, ಇತ್ಯಾದಿ ಕುರಿತು ಬರೆದಂತೆ)! ಒಟ್ಟಾರೆ ಚುನಾವಣೆ ಎಂಬುದು ಅವರವರ ಅಭಿರುಚಿಗೆ ತಕ್ಕಂತೆ, ಅವರವರ ಭಾವಕ್ಕೆ ಹೊಂದುವ ಒಂದು ಸಾರ್ವತ್ರಿಕ ಪಂಚವಾರ್ಷಿಕ ಯೋಜನೆ.  ಚಲನಚಿತ್ರ ಅಭಿಮಾನಿಗಳಿಗೆ ಒಂದು ಭರ್ಜರಿ ಸಿನೆಮಾ, ಮಾಧ್ಯಮಕ್ಕೆ ಒಂದು ರೇಟಿಂಗ್ ಅವಕಾಶ, ಪುಗುಸಟ್ಟೆಗಳಿಗೆ ಭೂರಿ ಭೋಜನ! ಇನ್ನೊಂದೆರಡು ತಿಂಗಳು ಭಾರತವೆಂಬೋ ಹುಚ್ಚಾಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸೆಗಳೂ ಭರದಿಂದ ಸಾಗುತ್ತವೆ.

ಅಂದಹಾಗೆ ಭಾರತವೆಂಬೋ ಹುಚ್ಚಾಸ್ಪತ್ರೆ ಎಂದು ನಾನು ಹೇಳುತ್ತಿಲ್ಲ, ನನ್ನ ಬಾಲ್ಯದಲ್ಲೇ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಶಿವರಾಮ ಕಾರಂತರು  "ಈ ದೇಶ ಎತ್ತ ಹೋಗುತ್ತಿದೆಯೋ ಗೊತ್ತಿಲ್ಲ. ಏನು ಮಾಡಿದರೂ ನಾನು ಪತ್ರಿಕೆಗಳಲ್ಲಿ ಬರಬೇಕು ನಾನು ಇಂಥವನು ಎಂದು ಹೇಳಿಕೊಳ್ಳುವ ಆತ್ಮರತಿಯಲ್ಲಿ ಮುಳುಗಿದ್ದೇವೆ. ನಮ್ಮನ್ನು ನಾವೇ ದೊಡ್ಡವರು ಎಂದು ಕರೆದುಕೊಳ್ಳುತ್ತಿರುವ 'ಆಸ್ಪತ್ರೆ' ಆಗುತ್ತಿದೆ ಈ ದೇಶ" ಎಂದು ಹೇಳಿದ್ದಾರೆ. (ಕಾರಂತ ನುಡಿ - ೫೮)

No comments: