ಭಾವಿ ಪ್ರಧಾನಿಗಳ "ಸಂಪತ್ತು ಮರುಹಂಚಿಕೆ"

 ಈಗ ಕಾಂಗ್ರೆಸ್ಸಿನ ಭಾವಿ ಪ್ರಧಾನಿಗಳು "ಸಂಪತ್ತು ಮರುಹಂಚಿಕೆ" ಯಾನೆ Wealth Redistribution ಬಗ್ಗೆ ಫರ್ಮಾನು ಹೊರಡಿಸಿದ್ದಾರೆ. ಇದರ ಒಂದಂಶ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಭಾಗ ಸರ್ಕಾರಕ್ಕೆ ಸಲ್ಲಬೇಕು ಎನ್ನುವುದು ಅತ್ಯಂತ ಸಮಂಜಸ ಸಾಮಾಜಿಕ ನ್ಯಾಯ ಸಿದ್ಧಾಂತವಾಗಿದೆ. ಈ ಅಂಶವನ್ನು ನನ್ನದೇ ನೆರೆಹೊರೆಯ ಸ್ಯಾಮ್ ಪಿತ್ರೋಡ ಅವರ ಮೂಲಕ ಹೇಳಿಸಿದ್ದಾರೆ. ಅಮೇರಿಕಾದಲ್ಲಿ ಯಾವುದೇ ಫೆಡರಲ್ ತೆರಿಗೆ ಇಲ್ಲದೆ ಸುಮಾರು ನೂರಹತ್ತು ಕೋಟಿ ರೂಪಾಯಿಯಷ್ಟು ಪಿತ್ರಾರ್ಜಿತ ಆಸ್ತಿಯನ್ನು ಹೊಂದಬಹುದು. ಅದಕ್ಕಿಂತ ಹೆಚ್ಚಾದರೆ ತೆರಿಗೆ ಕಟ್ಟದೆ ಪಡೆದುಕೊಳ್ಳಲು ಟ್ರಸ್ಟ್ ರೂಪದ ಹಲವು ಮಾರ್ಗೋಪಾಯಗಳಿವೆ. ಇರಲಿ, ಒಟ್ಟಾರೆ ಸಾಮಾಜಿಕ ನ್ಯಾಯಕ್ಕಾಗಿ ಪಿತ್ರಾರ್ಜಿತ ಆಸ್ತಿ ತೆರಿಗೆ ಅವಶ್ಯ ಎಂದು ಕಾಂಗ್ರೆಸ್ ಪಕ್ಷ ನಿರ್ಧರಿಸಿರುವುದು ಅತ್ಯಂತ ಸ್ವಾಗತಾರ್ಹ. ಆದರ್ಶ ಉದಾರವಾದಿಯಾದ ನಾನು ಇದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.


ಇಂತಹ ಸಾಮಾಜಿಕ ನ್ಯಾಯವನ್ನು ಯಾವುದೇ ಅಧಿಕಾರವಿಲ್ಲದೆ ಕೇವಲ ಆದರ್ಶದ ಮೇಲೆ ಮಹಾತ್ಮ ಗಾಂಧಿ, ವಿನೋಬಾ ಭಾವೆ ಮುಂತಾದ ಸಾಮಾಜಿಕ ನಾಯಕರು ಜನರನ್ನು ಒಲಿಸಿ ಜನರ ಆಸ್ತಿಯನ್ನು ಸಮಾಜಕ್ಕೆ ಕೊಡಿಸಿದ ಇತಿಹಾಸವೇ ನಮ್ಮಲ್ಲಿದೆ. ಇವರ ಕರೆಗೆ ಓಗೊಟ್ಟು ಅನೇಕರು ತಮ್ಮ ಆಸ್ತಿಯನ್ನು ಸಮಾಜಕ್ಕೆ ಧಾರೆ ಎರೆದುದನ್ನು ನೀವೆಲ್ಲರೂ ಕೇಳಿದ್ದೀರಿ, ಓದಿದ್ದೀರಿ. ಭಾವೆಯವರ ಭೂದಾನ ಕರೆ ದೇಶವನ್ನೇ ಸಂಚಲಿಸಿದ್ದಿತು.


ಮಾನ್ಯ ರಾಹುಲ್ ಗಾಂಧಿಯವರು ಅಧಿಕಾರಕ್ಕೆ ಬರುತ್ತಾರೋ ಇಲ್ಲವೋ ಅದನ್ನು ಬದಿಗಿರಿಸಿ ಆ ಮಹನೀಯರುಗಳಂತೆ ಈ ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯವನ್ನು ಸ್ವಯಂ ಆಗಿ ಮತ್ತು ತಮ್ಮ ಪಕ್ಷದ ಮುಖಂಡರಲ್ಲಿ ಅಳವಡಿಸಲು ಅವರಿಗೆ ಯಾವುದೇ ಅಭ್ಯಂತರ ಇಲ್ಲ. ಅದಕ್ಕೆ ಯಾವ ಅಧಿಕಾರವೂ ಬೇಕಿಲ್ಲ.


ಹಾಗಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ತಮ್ಮ ಪಿತ್ರಾರ್ಜಿತ ಆಸ್ತಿಯ ನಲವತ್ತು ಚಿಲ್ಲರೆ ಪ್ರತಿಶತ ಭಾಗವನ್ನು ದೇಶಕ್ಕೆ ಸಮರ್ಪಿಸದಿದ್ದರೂ ಕನಿಷ್ಠ ಪಕ್ಷ ಕಾಂಗ್ರೆಸ್ ಪಕ್ಷದ ಚುನಾವಣಾ ಅಭ್ಯರ್ಥಿಗಳು ತಾವು ಘೋಷಿಸಿಕೊಂಡಿರುವ ತಮ್ಮ ಆಸ್ತಿಯ ನಲವತ್ತು ಚಿಲ್ಲರೆ ಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿ ಒಂದು ಮೇಲ್ಪಂಕ್ತಿ ಹಾಕಿದರೆ ಅವರ ಪಕ್ಷದ ಎಲ್ಲಾ ಅಭ್ಯರ್ಥಿಗಳೂ ಪ್ರಚಂಡ ಬಹುಮತದಿಂದ ಗೆಲ್ಲುತ್ತಾರೆ. ತಮ್ಮ ಹೆಸರಿನಲ್ಲಿರುವ ಗಾಂಧಿ ಮಹಾತ್ಮರಂತೆ ರಾಹುಲ್ ಮಹಾತ್ಮರೆನಿಸಿ ತಮ್ಮ ಪಕ್ಷದ ಅಭೂತಪೂರ್ವ ಗೆಲುವಿನ ರೂವಾರಿಯಾಗುತ್ತಾರಲ್ಲದೆ ಮೋದಿ ಎಂಬ ಮಾಯೆಯ ಅಣುರೇಣುತೃಣ ಛಾಯೆಯೂ ಇರದಂತೆ ಮೋಡಿಯನ್ನು ಮಾಯವಾಗಿಸಬಲ್ಲರು.


ಅವರ ಪಕ್ಷದವರು ಹೇಳುವ "ದೇಶಕ್ಕೆ ಅಂಟಿದ ಶನಿ"ಯನ್ನು ರಾಹುಲ್ ಬಾಬಾ ತಮ್ಮ ಸಿದ್ಧಾಂತ ಬದ್ಧತೆ ಮೆರೆದು, "ನುಡಿದಂತೆ ನಡೆದ ಸರ್ಕಾರ ನಮ್ಮದು" ಎನ್ನುವ ಉದ್ಘೋಷದ ಪಕ್ಷವನ್ನು ದೆಹಲಿಯಲ್ಲಿ ಪ್ರತಿಷ್ಠಾಪಿಸಿದರೆ.....ಆಹಾ!!! ನ ಭೂತೋ ನ ಭವಿಷ್ಯತೋ....ಭಾರತ ಭಾಗ್ಯ ವಿಧಾತ ಹ!!!!


ಬಾಬಾ ಸಂಚಲಿಸುವರೋ?! ಸ್ಖಲಿಸುವರೋ?!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission

 ರಾಜ್ಯದಲ್ಲಿ ಸಂಗ್ರಹಿಸುವ GST ಯ ೫೦% ರಾಜ್ಯದ್ದಾದರೆ, ೫೦% ಕೇಂದ್ರದ್ದು. ಕೇಂದ್ರದ ಭಾಗದ ೪೨% ಭಾಗ ಎಲ್ಲಾ ರಾಜ್ಯಗಳ ಅಭಿವೃದ್ಧಿಗೆ ಹಣಕಾಸು ಆಯೋಗದ ನಿರ್ದೇಶನದಂತೆ ಒಂದು ಸಾಮೂಹಿಕ ಖಾತೆಗೆ ಹೋಗುತ್ತದೆ. ಇದನ್ನು ಹೇಗೆ ವ್ಯಯಿಸಬೇಕು ಎಂಬುದನ್ನು ನಿರ್ಧರಿಸುವುದು ಸಹ ಅದೇ ಹಣಕಾಸು ಆಯೋಗ ಯಾನೆ वित्त आयोग ಯಾನೆ Finance Commission. ಇದು ಒಂದು ಸಾಂವಿಧಾನಿಕ ಸಂಸ್ಥೆ.

 

ಅಂಬೇಡ್ಕರ್ ಹೇಗೆ ಹಿಂದುಳಿದವರಿಗೆ ಮೀಸಲಾತಿ ಕೊಟ್ಟು ಸಮಾನತೆ ತಂದರೋ, ಸಿದ್ಧರಾಮಯ್ಯ ಹೇಗೆ ಅಹಿಂದದವರಿಗೆ ಸೌಭಾಗ್ಯಗಳನ್ನು ಕೊಟ್ಟರೋ ಅದೇ ರೀತಿ ಹಣಕಾಸು ಆಯೋಗ ರಾಜ್ಯಗಳಿಗೆ ತನ್ನ "ಹಿಂದುಳಿದ/ಮುಂದುವರಿದ" ಸೂತ್ರದ ಅನ್ವಯ ಹಣ ಕೊಡಿಸುತ್ತದೆ. ಇದನ್ನು ಸಿದ್ದರಾಮಯ್ಯ ಅಂಡ್ ಕಂಪೆನಿ ಮತ್ತು ಅವರ ಪಕ್ಷದ ಭಾವಿ ಪ್ರಧಾನಿ ಎನ್ನುವ ರಾಹುಲ್ ಹೇಗೆ ರಾಜ್ಯದ ನೂರು ರುಪಾಯಿ ತೆರಿಗೆಯಲ್ಲಿ ಕೇವಲ ೧೩ ರುಪಾಯಿ ಅಷ್ಟೇ ವಾಪಸ್ ಬರುತ್ತಿದೆ ಎನ್ನುತ್ತಿದ್ದಾರೆ?!?! 


ಅಂದರೆ "ಹಿಂದುಳಿದ/ಮುಂದುವರಿದ" ಎಂದು ನೋಡದೆ ಹಣಕಾಸು ಆಯೋಗ ಎಲ್ಲಾ ರಾಜ್ಯಗಳಿಗೂ ಸಮಾನವಾಗಿ ಹಂಚಬೇಕು ಎನ್ನುವುದು ಇವರ ವಾದವಾದರೆ, ಅದು ಅಂಬೇಡ್ಕರ್ ಅವರ ಸಾಂವಿಧಾನಿಕ ಮೀಸಲಾತಿ ಮತ್ತು ಇವರದೇ ಪಕ್ಷದ ಸಿದ್ಧಾಂತಗಳಿಗೆ ತದ್ವಿರುದ್ಧ.


ಈ ವಾಸ್ತವಿಕ ಅಂಶದ ಮೂಲಕ ನೋಡಿದರೆ, ಯಾರು ಸಂವಿಧಾನ ವಿರೋಧಿಗಳು? ಯಾರು ಮೀಸಲಾತಿ ವಿರೋಧಿಗಳು? ಯಾರು ಅಹಿಂದ ವಿರೋಧಿಗಳು? 


ಹೀಗೆ ರಾಜಾರೋಷವಾಗಿ ಸುಳ್ಳನ್ನು ನೂರು ಬಾರಿ ಸತ್ಯವೆಂದು ಹೇಳುವ, ಬುದ್ಧಿಜೀವಿಗಳು ಹೀಯಾಳಿಸುವ "ಗೋಬೆಲ್ಸ್" ತಂತ್ರವನ್ನು ಅವರ ಆರಾಧ್ಯ ದೈವವೇ ಬಳಸಿ ಇತರರ ಮೇಲೆ ಗೂಬೆ ಕೂರಿಸುತ್ತಿರುವಾಗ,  ಇದನ್ನೆಲ್ಲಾ ವಿವರಿಸುವ ಜಾಣತನ ಬಿಜೆಪಿಗರಲ್ಲಿ ಇದೆಯೇ?!?!


ಖಂಡಿತವಾಗಿ ಇಲ್ಲ. ಏಕೆಂದರೆ ರಾಜ್ಯದ ಕಾಂಗ್ರೆಸ್ಸಿಗರು ಬಿಜೆಪಿಗರು ಎಲ್ಲರೂ ಕೇವಲ ಪಂಚಾಯಿತಿ ಸದಸ್ಯರಾಗಬಲ್ಲ ಅರ್ಹತೆ ಉಳ್ಳವರು. ಇಂಥವರು ರಾಜ್ಯದ ಮುಖ್ಯಮಂತ್ರಿ, ಮಂತ್ರಿ ಎಲ್ಲಾ ಆದರೆ ಏನಾಗುವುದೋ ಅದೇ ರಾಜ್ಯದಲ್ಲಿ ಕಳೆದ ಐವತ್ತು ವರ್ಷದಿಂದ ಆಗುತ್ತಿರುವುದು. ಇನ್ನು ಬುದ್ದಿಜೀವಿಗಳ ಗೋಬೆಲ್ಸ್, ನೆರೂಡ, ಕಾಫ್ಕಾ ಉಲ್ಲೇಖ..... ವಾಡ್ಕಾ (ವೋಡ್ಕಾ - ಅವಾರ್ಡು) ಅಂಡ್ ಸಿಲೋಡ್ಕಾ(ಮೀನು - ಪ್ರಾಧಿಕಾರ)!


ಏಕೆಂದರೆ,


ಶಿವನಿಗೈದು ಮುಖ, ಭಕ್ತನಿಗೈದು ಮುಖ.

ಆವುವಾವುವೆಂದರೆ:

ಗುರುವೊಂದು ಮುಖ, ಲಿಂಗವೊಂದು ಮುಖ, ಜಂಗಮವೊಂದು ಮುಖ,

ಪಾದೋದಕವೊಂದು ಮುಖ, ಪ್ರಸಾದವೊಂದು ಮುಖ.

ಇಂತೀ ಪಂಚಮುಖವನರಿಯದ

ವೇಶಿ, ದಾಸಿ, ಸುಂಕಿಗ, ಮಣಿಹಗಾರ, ವಿದ್ಯಾವಂತ

ಇಂತೀ ಐವರಿಗೆ ಲಿಂಗವ ಕಟ್ಟಿದಡೆ

ಗುಡಿಯ ಮುಂದಣ ಶೃಂಗಾರದ ಗಂಟೆ, ಎಮ್ಮೆಯ ಕೊರಳಗಂಟೆ

ಕೊಟ್ಟಿಯ ಮೆಳೆಯೊಳಗೆ ಇಟ್ಟು ಸಿಕ್ಕಿದ ಕಲ್ಲು !

ಲಿಂಗ ವಿಭೂತಿ ರುದ್ರಾಕ್ಷಿ ಇವ ಮಾರಾಟಕ್ಕೆ ಹೇರಿಕೊಂಡು ತಿರುಗುವ

ಎತ್ತು ಕತ್ತೆಗೆ ಮುಕ್ತಿಯುಂಟೆ ? ಕೂಡಲಚೆನ್ನಸಂಗಮದೇವಾ

--- ಚನ್ನಬಸವಣ್ಣ


ಇಷ್ಟೇ, ಇಷ್ಟೇ, ಇಷ್ಟೇ, ಭಾರತೀಯ ಪ್ರಜಾಪ್ರಭುತ್ವ!


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ