ದಾವಣಗೆರೆಯ ಧಣಿಯೂ ಮತ್ತು ಮಂಡಕ್ಕಿ ಭಟ್ಟಿ ಸಾಬಿಯೂ!

ಮೊನ್ನೆ ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿದ ಘಟನೆಯ ಬಗ್ಗೆ ಹಲವಾರು ಓದುಗ ಮಿತ್ರರು ವಿಚಾರಿಸಿ, ದಾವಣಗೆರೆಯವರಾದ ನೀವು ಈ ಕುರಿತಾಗಿ ಒಂದು ಲೇಖನ ಬರೆಯಿರೆಂದೂ, ಅದಕ್ಕೂ ಮುಂಚೆ ಇಲ್ಲಿನ ದುರ್ಗಾಂಬಿಕಾ ಜಾತ್ರೆಗೆ ಕೋಣನ ಬಲಿ ನಡೆದುದನ್ನು ಖಂಡಿಸಿ ಒಂದು ಲೇಖನವನ್ನು ಬರೆಯಿರೆಂದು ಓದುಗ ಮಿತ್ರ ಸ್ವಾಮಿಯವರೂ ಕೇಳಿದ್ದರು. ಈಗ ಚುನಾವಣೆಯ ಸಮಯವಾದುದರಿಂದ ಮತ್ತು ಈ ವಿಷಯವಾಗಿ ನಮ್ಮ ಜನಗಳನ್ನು ಜಾಗೃತಗೊಳಿಸಬೇಕಾದ(??) ತೀವ್ರ ಅನಿವಾರ್ಯತೆ ಇರುವುದರಿಂದ ಚುನಾವಣಾ ಸಂಬಂಧಿಯಾಗಿ ಬರೆಯೋಣವೆಂದು ನಿರ್ಧರಿಸಿ ಮತ್ತೆ ದಾವಣಗೆರೆಯ ಬಗ್ಗೆ ಬರೆಯುತ್ತಿರುವೆ. ಇನ್ನೊಮ್ಮೆ ಖಂಡಿತವಾಗಿಯೂ ಅಲ್ಲಿನ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಾಣಿಬಲಿಯನ್ನು ಖಂಡಿಸಿಯೋ/ಪ್ರಶಂಸಿಸಿಯೋ ಬರೆಯುತ್ತೇನೆ. ಈ ಎರಡೂ ವಿಷಯಗಳೂ ನನಗೆ ಬಹು ಹತ್ತಿರ. ಏಕೆಂದರೆ ಈ ದಾವಣಗೆರೆ ಧಣಿಯ ಮನೆಯ ಹಿಂದೆಯೂ ಮತ್ತು ದುರ್ಗಾಂಬಿಕಾ ದೇವಸ್ಥಾನದ ಬೀದಿಯೂ ಆದ ಹಳೇಪೇಟೆ ನನ್ನ ದಾವಣಗೆರೆ ವಿಳಾಸ!

ವೃತ್ತಿಯಲ್ಲಿ ದಿನಸೀ ಮಂಡಿ ವರ್ತಕರಾದ ಧಣಿಗಳು ಕ್ರಮೇಣ ಸರಸ್ವತೀ ವರ್ತಕರಾಗಿ ಹೆಚ್ಚು ಹೆಚ್ಚು ಪ್ರವರ್ಧಮಾನಕ್ಕೆ ಬಂದುದು ನಿಮ್ಮೂರಿನ ಯಾವುದೇ ಪುಢಾರಿಯ ಕತೆಯಂತೆಯೇ ಇದೆ. ಈ ಲೇಖನ ಈ ಧಣಿಗಳ ಸಮಾಜಸೇವೆಯನ್ನು ಕುರಿತಾದುದರಿಂದ ಅದನ್ನು ಅಷ್ಟಕ್ಕೇ ಸೀಮಿತಗೊಳಿಸೋಣ. ಸುಮಾರು ಇಪ್ಪತ್ತಾರು/ಇಪ್ಪತ್ತೇಳು ವರ್ಷಗಳ ಹಿಂದೆ ಈ ಧಣಿಗಳ ಅಂದಿನ ವಾಸದ ಮನೆಯ ಹಿಂದೆ ಅವರ ಕೊಟ್ಟಿಗೆ ಇತ್ತು. ಧಣಿಗಳ ಹಿರಿಯ ಸೋದರರು ಇಲ್ಲಿ ಹಲವಾರು ಎಮ್ಮೆ, ಹೈಬ್ರಿಡ್ ಹಸುಗಳನ್ನು ಸಾಕಿದ್ದರು. ದಿನನಿತ್ಯ ಇವರ ಕೊಟ್ಟಿಗೆ ಶುದ್ಧಿಯಾಗುವಾಗ ಈ ಎಮ್ಮೆ/ಹಸುಗಳನ್ನು ತತ್ಕಾಲಿಕವಾಗಿ ಪಕ್ಕದ ಹಗೇದಿಬ್ಬ ಸರ್ಕಲ್ ಕಟ್ಟೆಯ ಕಲ್ಲಿನ ಕಂಬಗಳಿಗೆ ಕಟ್ಟುತ್ತಿದ್ದರು. ಈ ಎಲ್ಲಾ ಎಮ್ಮೆ/ಹಸುಗಳು ಹಗೇದಿಬ್ಬ ಸರ್ಕಲ್ಲಿನ ಸುತ್ತಲೂ ಗಂಜಲ/ಸಗಣಿಯನ್ನು ಹುಯ್ದು ಈ ಸರ್ಕಲ್ಲಿಗೆ ಒಂದು ವಿಶಿಷ್ಟ ಪರಿಮಳವನ್ನು ಪರ್ಮನೆಂಟಾಗಿ ಪಸರಿಸಿದ್ದವು. ದಾವಣಗೆರೆಯ ಧರ್ಮಬೀರು ಜನಗಳು ಗಂಜಲ ಹುಯ್ಯುವ ಯಾವುದೇ ಹಸು ಕಂಡರೂ ಅದರ ಬಾಲವನ್ನೆತ್ತಿ ಗಂಜಲವನ್ನು ತಮ್ಮ ಅಂಗೈಯಲ್ಲಿ ಹಿಡಿದು ಸೊರ್ರನೇ ಹೀರುವವರಾಗಿದ್ದರೂ, ಧಣಿಗಳ ಈ ಹಸುಗಳು ಹೈಬ್ರಿಡ್ ತಳಿಯಾದುದರಿಂದ ಇವುಗಳಿಗೆ ಆ ಭಾಗ್ಯವಿರಲಿಲ್ಲ. ಈಗ ಧಣಿಗಳ ಆ ಹಿರಿಯ ಸೋದರರಿಲ್ಲ. ಹಾಗೆಯೇ ಈ ಎಮ್ಮೆ/ಹಸುಗಳು ಕೂಡಾ ಇಲ್ಲವಾಗಿವೆ. ಹಗೇದಿಬ್ಬ ಸರ್ಕಲ್ಲಿನಲ್ಲಿರುತ್ತಿದ್ದ ಆ ದಿವ್ಯ ಗಂಜಲದ ಪರಿಮಳ, ಈಗ ಅಲ್ಲಿರುವ ಮಾನವ ಮೂತ್ರಿ ಮತ್ತು ಆ ಎಮ್ಮೆ / ಹಸುಗಳ ಸ್ಥಾನವನ್ನು ಆಕ್ರಮಿಸಿಕೊಂಡಿರುವ ಹಂದಿಗಳ ಮಲಮೂತ್ರದ ಪರಿಮಳದಿಂದ ಬದಲಾಯಿಸಲ್ಪಟ್ಟಿದೆ. ಆ ಹಳೆಯ ಗಂಜಲ / ಸಗಣಿಯ ನೆನಪುಗಳನ್ನು ಯಾರಾದರೂ ಮರೆತಾರೆಂದು ಧಣಿಗಳ ಗುಲಾಮರು ಆ ಪ್ರಾಣಿಪ್ರಿಯ ಧಣಿಯಣ್ಣನವರ ಸ್ಥಿರನೆನಪಿಗಾಗಿ "ಹಗೇದಿಬ್ಬ" ಎಂಬ ಜನಪದ ಸೊಗಡಿನ ಹೆಸರನ್ನು "ಓಲ್ಡ್ ಫ್ಯಾಷನ್" ಎಂದು ಅಳಿಸಿ, ಧಣಿಗಳ ಅಣ್ಣನವರ ಹೆಸರನ್ನು ಇಟ್ಟಿದ್ದಾರೆ!

ಇರಲಿ, ಈ ಶಾಶ್ವತ ಕೊಟ್ಟಿಗೆ ಮತ್ತು ತತ್ಕಾಲಿಕ ಕೊಟ್ಟಿಗೆ (ಹಗೇದಿಬ್ಬ ಸರ್ಕಲ್) ನಡುವೆ ಧಣಿಗಳ ಕಾರ್ ಶೆಡ್ ಒಂದು ಸರ್ಕಲ್ಲಿನೆಡೆ ಮುಖ ಮಾಡಿ ಇದ್ದಿತು. ಈ ಕಾರ್ ಶೆಡ್ ಮತ್ತು ಅದರ ಪಕ್ಕದಲ್ಲಿದ್ದ ಬಾಬಣ್ಣನ ಅಂಗಡಿ(ಈಗ ಹಲುವಾಗಲದ ಹಾಲಪ್ಪನವರ ಅಂಗಡಿ) ಮಧ್ಯದ ಓಣಿ, ಧಣಿಗಳ ಸೋದರ ಸಂಬಂಧಿಗಳ ಕಟ್ಟಡದಲ್ಲಿದ್ದ ಬಡ ಬಾಡಿಗೆದಾರರ ಓಡಾಟದ ಹಾದಿಯಾಗಿತ್ತು. ಈ ಹಾದಿಯಾಗಿ ನಾನು ಅನೇಕ ಸಾರಿ ಈ ಬಾಬಣ್ಣನ ಅಂಗಡಿಗೆ ಚಿಕ್ಕಪುಟ್ಟ ದಿನಸಿ ಸಾಮಾನು ತರಲು ಹೋಗುತ್ತಿದ್ದೆ. ಈ ಬಾಬಣ್ಣನ ಅಂಗಡಿಯ ಮುಂದಿನಿಂದ ಸುಮಾರು ೪ ಅಡಿ ಅಗಲ, ೫ ಅಡಿ ಆಳದ ದೊಡ್ಡ ಚರಂಡಿಯೊಂದು ಹಾದು ಹೋಗುತ್ತಿತ್ತು. ಸಾಕಷ್ಟು ದೊಡ್ಡದಿದ್ದ ಈ ಚರಂಡಿ ದಾವಣಗೆರೆಯ ಪ್ರಮುಖ ಚರಂಡೀ ಕಾಲುವೆಯಾಗಿದ್ದಿತೆಂದರೆ ಅದರ ಸೈಜನ್ನು ನೀವೇ ಊಹಿಸಿಕೊಳ್ಳಿ.

ಈ ಚರಂಡಿಯ ಆಳದಲ್ಲಿ, ಹರಿಯುವ ಕೊಚ್ಚೆಯ ಒಂದೆರಡು ಅಡಿಯಷ್ಟು ಎತ್ತರದಲ್ಲಿ ಒಂದು ಸರ್ಕಾರೀ ನಲ್ಲಿಯಿದ್ದಿತು. ಹರಿಯುವ ಕೊಚ್ಚೆ ತಗಲದಂತೆ ತುಸು ಎತ್ತರದ ಕಲ್ಲೊಂದನ್ನು ಹಾಕಿ ಅಲ್ಲಿನ ಬಡಜನರು ಚರಂಡಿಯಲ್ಲಿಳಿದು, ಆ ಕಲ್ಲಿನ ಮೇಲೆ ತಮ್ಮ ಕೊಡವನ್ನೂ, ತಮ್ಮ ಕಾಲುಗಳನ್ನೂ ಕೊಚ್ಚೆಯ ನೀರು ತಗಲದಂತೆ ಸರ್ಕಸ್ ಮಾಡುತ್ತ ನಿಂತು ತಮ್ಮ ದೈನಂದಿನ ನೀರನ್ನು ಹಿಡಿದಿಟ್ಟುಕೊಳ್ಳಬೇಕಿತ್ತು. ನನ್ನ ವಾರಿಗೆಯ ಹುಡುಗರ ಪೋಷಕರು ಅಲ್ಲಿಂದ ನೀರನ್ನು ತುಂಬಿಕೊಳ್ಳುವುದನ್ನು ನಿತ್ಯವೂ ನೋಡುತ್ತಿದ್ದ ನಾನು ಅವರುಗಳು ಅದು ಹೇಗೆ ಆ ಕೊಚ್ಚೆಯ ಚರಂಡಿಯಿಂದ ನೀರು ಹಿಡಿಯುವರೋ ಎಂದು ಹೇಸಿಗೆಯಾಗುತ್ತಿತ್ತು. ಆದರೆ ಬಡತನದ ಅನಿವಾರ್ಯ, ಅವರುಗಳಿಗೆ ಆ ನಲ್ಲಿಯೊಂದೇ ನೀರಿನ ಆಸರೆ, ಹಾಗಾಗಿ ಅವರೆಲ್ಲಾ ನಿಸ್ಸಹಾಯಕರಾಗಿದ್ದರು! ಅದಲ್ಲದೇ ಆ ನೀರನ್ನು ಹಿಡಿಯಲು ಆಗಾಗ್ಗೆ ಯುದ್ಧಗಳನ್ನೇ ಮಾಡಬೇಕಿತ್ತು! ಅದಾಗಲೇ ಸಾರ್ವಜನಿಕ ಸೇವೆಯಲ್ಲಿದ್ದ ಧಣಿಗಳು ಆಗಲೇ ದಾವಣಗೆರೆ ನಗರಸಭೆಯ ಅಧ್ಯಕ್ಷರಾಗಿ ಮಾಜಿಯಾಗಿದ್ದರು. ಪಾಪ ಅವರ ಕಣ್ಣಿಗೆ ಅವರ ಕಟ್ಟಡದಲ್ಲಿಯೇ ಬಾಡಿಗೆಯಿದ್ದ ಈ ಬಡವರ ನೀರಿನ ಬವಣೆ ಕಣ್ಣಿಗೆ ಬಿದ್ದಿರಲಿಲ್ಲ, ಬಿದ್ದಿದ್ದರೂ ಬೀಡಿ ಸೇದುವ ಈ ಬಡವರು ಹೀಗೆಯೇ ಇರಬೇಕೆಂದು ೫೫೫ ಸಿಗರೇಟಿನ ಧಣಿಗಳು ತೀರ್ಮಾನಿಸಿದ್ದರೇನೋ!

ಆಗ ನನಗೆ ಎಂಟು/ಹತ್ತರ ವಯಸ್ಸು. ಕಳೆದ ಈ ಇಪ್ಪತ್ತೇಳು ವರ್ಷಗಳಲ್ಲಿ ಧಣಿಗಳು ಸಾಕಷ್ಟು ಸಂಸ್ಥೆಗಳನ್ನು ಸ್ಥಾಪಿಸಿ, ಸ್ವತಃ ತಾವು ದಾವಣಗೆರೆಯ ಸಂಸದ/ಶಾಸಕರಾಗಿ, ತಮ್ಮ ಮಕ್ಕಳನ್ನು ಮಂತ್ರಿಗಳನ್ನಾಗಿಸಿ, ತಮ್ಮ ಪಟಾಲಂನ ಎಲ್ಲಾ ಸದಸ್ಯರಿಗೆ ಒಂದೊಂದು ಸ್ಥಾನಮಾನಗಳನ್ನು ಕೊಡಮಾಡಿಸಿ ತಾವೂ ಕೂಡ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಆದರೆ ಸುಮಾರು ಮೂವತ್ತು ವರ್ಷಗಳ ತರುವಾಯ ಕೂಡ ಆ ನಲ್ಲಿ ಈಗಲೂ ಅಲ್ಲಿದೆ. ಜನ ಈಗಲೂ ಆ ಚರಂಡಿಯಲ್ಲಿ ಇಳಿದೇ ನೀರು ತುಂಬುತ್ತಿದ್ದಾರೆ. ನೀವೇ ಹೇಳಿ, ಇದು ಕೊಡುಗೈ ದಾನಿಗಳ ವರಪ್ರಸಾದವೋ ಅಥವಾ ಬಡವರೆದುರು ದಾವಣಗೆರೆ ಧಣಿಗಳ ದರ್ಪವೋ?

ಲಾಭದ ವಾಸನೆಯಿಲ್ಲದೇ ಯಾವುದೇ ಕೆಲಸಕ್ಕೆ ದಾವಣಗೆರೆ ವರ್ತಕರು ಕೈಹಾಕುವುದಿಲ್ಲವೆಂಬ ನನ್ನ ಮೈಸೂರು ಸ್ನೇಹಿತನ ಅಭಿಪ್ರಾಯಕ್ಕೆ ಧಣಿಗಳೇನೂ ಹೊರತಾಗಿರಲಿಲ್ಲ, ಹೊರತಾಗಿಲ್ಲ.

ಇನ್ನು ದಾವಣಗೆರೆ ಸಮಾಜಕ್ಕೆ ಇವರ ಕೊಡುಗೆಯನ್ನು ಯಾವ ಪೂರ್ವಾಗ್ರಹವಿಲ್ಲದೇ ಅವಲೋಕಿಸುವ ಮುನ್ನ, ಇವರ ಅಧಿಪತ್ಯದಲ್ಲಿರುವ ಬಾಪೂಜಿ ಸಂಸ್ಥೆಯನ್ನೇ ಗಮನಿಸೋಣ. ನೀವು ಹೇಗಾದರೂ ಎಣಿಸಿಕೊಂಡು ಬನ್ನಿ. ನಿಮ್ಮ ಕಣ್ಣಿಗೆ ರಾಚುವಂತೆ ಕಾಣುವುದು, ಈ ಸಂಸ್ಥೆಯಲ್ಲಿನ ನೌಕರರಲ್ಲಿ ಶೇಕಡಾ ೫೦%ಕ್ಕೂ ಹೆಚ್ಚು ನೌಕರರು ಧಣಿಗಳ ಧರ್ಮದ ಸಾಧು ವೀರಶೈವ ಸಮಾಜದವರಾಗಿರುವುದು! ಇನ್ನು ಧಣಿಗಳ ಓಟಿನ ಬ್ಯಾಂಕಿಗಾಗಿ ಅಲ್ಪಸಂಖ್ಯಾತ ಮುಸಲ್ಮಾನರು, ಪರಿಶಿಷ್ಟರು....ಇತ್ಯಾದಿ, ಇತ್ಯಾದಿ. ಸರಿ, ಬಾಪೂಜಿ ಸಂಸ್ಥೆಯೊಂದು ಜಾತಿ/ಧರ್ಮದ ಸಂಸ್ಥೆಯಾಗಿದ್ದರೆ ಈ ಅನುಪಾತ ಪ್ರಶ್ನಾತೀತ. ಆದರೆ ಇದು ಸಾರ್ವಜನಿಕ ಸಂಸ್ಥೆ! ಇಲ್ಲಿ ಅನ್ಯ ವೀರಶೈವರೂ ಇನ್ನಿತರ ಮುಂದುವರಿದ ಜಾತಿಯ ವ್ಯಕ್ತಿಗಳೇನಾದರೂ ಕಂಡರೆ, ಅವರುಗಳೋ ಅಥವಾ ಅವರ ಪೋಷಕರೋ ಈ ಧಣಿಗಳ ಸೇವೆಯನ್ನು ಅವಿರತವಾಗಿ ಮಾಡಿದ್ದಾರೆಂದೇ ಅರ್ಥ! ಅರ್ಥಾತ್ ಈ ಅನ್ಯಕೋಮಿಗರು ಇವರ ಮನೆಯಲ್ಲಿ, ಅಂಗಡಿಯಲ್ಲಿ ಅಥವಾ ಕೊಟ್ಟಿಗೆ, ಹೊಲ/ತೋಟಗಳಲ್ಲಿ ಅವಿರತವಾಗಿ ಅನುಪಮ ಸೇವೆಯನ್ನು ಸಲ್ಲಿಸಿದ ಹಿನ್ನೆಲೆಯವರೆಂದೇ ಅರ್ಥ. ಈ ರೀತಿಯ ಸೇವಾ ಅರ್ಹತೆ, ಇಲ್ಲಾ ಸಂಬಂಧಾರ್ಹತೆಗಳಿದ್ದರೆ ಮಾತ್ರ ಬಾಪೂಜಿ ಸಂಸ್ಥೆಯಲ್ಲಿ ಉದ್ಯೋಗ! ಇದು ಇವರ ಸಮಾಜಸೇವೆಯ ಇನ್ನೊಂದು ಪರಿ. ಯಾವ ಸಮಾಜವೆಂದು ಮಾತ್ರ ಕೇಳಬೇಡಿ. ಒಟ್ಟಾರೆ ಒಂದು ಸಮಾಜ.

ಇಲ್ಲಿ ಅತೀ ತಮಾಷೆಯ ಸಂಗತಿಯೆಂದರೆ ಈ ಸಾಧು ಸಮಾಜದ ಬಹುಪಾಲು ಬಾಪೂಜಿ ಸಂಸ್ಥೆಯ ನೌಕರರು, ಧಣಿಗಳು ತಮಗೆ "ಮಾವನವರು" / "ಕಕ್ಕ (ಚಿಕ್ಕಪ್ಪ)/ದೊಡ್ಡಪ್ಪ"ನವರಾಗಬೇಕೆಂದು ಹೇಳಿಕೊಳ್ಳುತ್ತಾರೆ. ಈ ಬಾದರಾಯಣ ಸಂಬಂಧದಲ್ಲಿ ಎಂತಹ ಸಮಾನತೆಯೆಂದರೆ ಅದು ಬಾಪೂಜಿ ಬ್ಯಾಂಕಿನ ಒಬ್ಬ ಅಟೆಂಡರನಿರಬಹುದು ಅಥವಾ ಬಾಪೂಜಿ ಎಂಜಿನಿಯರಿಂಗ್ / ಮೆಡಿಕಲ್ ಕಾಲೇಜುಗಳ ಪ್ರಾಶುಂಪಾಲರಿರಬಹುದು. ಎಲ್ಲರಿಗೂ ಧಣಿಗಳು ಸಂಬಂಧಿಗಳೇ! ಆದರೆ ಇವರ್‍ಯಾರೂ ಧಣಿಗಳ ಎದುರಿನಲ್ಲಿ ಅವರನ್ನು ಮಾವ/ಕಕ್ಕ/ದೊಡ್ಡಪ್ಪ ಎಂದು ಸಂಭೋಧಿಸುವುದಿಲ್ಲ. ಯಾಕೆಂದರೆ ಧಣಿಗಳು "ಬಾಸ್" ಎಂದು ಕರೆಸಿಕೊಳ್ಳಲು ಇಚ್ಚಿಸುತ್ತಾರಂತೆ. ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಯುತ್ತಿದ್ದ ನಾನು, ಸಿನಿಮಾಗಳಲ್ಲಿ ಖಳನಾಯಕರುಗಳು "ಬಾಸ್" ಎಂದು ಕರೆಸಿಕೊಳ್ಳಲು ಇಚ್ಚಿಸುವಂತೆ ಇವರೇಕೆ ಹೀಗೆ ಕರೆಸಿಕೊಳ್ಳಲಿಚ್ಛಿಸುವರೋ(?) ಎಂದು ಆಶ್ಚರ್ಯಚಕಿತನಾಗುತ್ತಿದ್ದೆನು!

ಇವರ ಇನ್ನಿತರೇ ಸಮಾಜಸೇವೆಯೆಂದರೆ ತಮ್ಮ ಅತೀ ಹೆಣ್ಣು ಹಡೆದ ಬಂಧುಗಳ ಹೆಣ್ಣುಮಕ್ಕಳಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸಗಳನ್ನು ಕೊಟ್ಟೋ ಅಥವಾ ಆ ಹೆಣ್ಣುಗಳನ್ನು ಮದುವೆಯಾಗುವವರಿಗೆ ಉದ್ಯೋಗಗಳನ್ನು ಕೊಟ್ಟೋ ವರದಕ್ಷಿಣೆಯ ಭೂತವನ್ನು ದೂರಮಾಡಿರುವುದು, ನಗರದೇವತೆ ದುರ್ಗಾಂಬಿಕಾದೇವಿಯ ಪ್ರಾಣಿಬಲಿಯನ್ನೂ ಒಳಗೊಂಡು ಯಾವುದೇ ಅಡೆತಡೆಯಿಲ್ಲದಂತೆ ಧರ್ಮಕಾರ್ಯಗಳು ನೆರವೇರುವಂತೆ ಸಹಾಯಹಸ್ತವನ್ನು ಚಾಚುವುದು, ಕೇವಲ ಒಂದು ನಗರಸಭೆ ಚುನಾಯಿತ ಅವಧಿಯೊಳಗೆ ತಮ್ಮ ಪಕ್ಷದ ಎಲ್ಲಾ ಪ್ರಮುಖ ಬೆಂಬಲಿಗರನ್ನು, ಓರ್ವ ಪಕ್ಷೇತರನನ್ನೂ ಒಳಗೊಂಡು ಎಲ್ಲರನ್ನೂ ದಾವಣಗೆರೆ ನಗರಸಭೆ ಅಧ್ಯಕ್ಷರನ್ನಾಗಿ ಮಾಡಿ "ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು" ಎಂಬ ತತ್ವವನ್ನು ಅನುಷ್ಟಾನಗೊಳಿಸಿರುವುದು, ತಮ್ಮ ಪುತ್ರನ ಮಂತ್ರಿಗಿರಿಯಲ್ಲಿ ಧಣಿಗಳು ತಮ್ಮ ಸೋದರ ಸಂಬಂಧಿಗಳ ಬೂದಾಳ್ ರಸ್ತೆಯಲ್ಲಿದ್ದ ಹೊಲಗಳನ್ನು ಜನತಾಮನೆಗೆ ದೊಡ್ಡಬೆಲೆಯ ಲಾಭಕ್ಕೆ ಕ್ರಯವಾಗಿಸಿ ತಮ್ಮ ಬಡಬಂಧುಗಳನ್ನು ಕಾಪಾಡಿದುದು ಇನ್ನೂ ಹತ್ತು ಹಲವು.

ಇನ್ನು ದಾವಣಗೆರೆ ಬೆಳೆದಂತೆ ಅಲ್ಲಿನ ನೀರಿನ ಕೊರತೆಯೂ ಬೆಳೆಯುತ್ತ ಅದರ ಸರಬರಾಜು ಹರಿಹರದ ತುಂಗಭದ್ರ ನದಿಯಿಂದ ಒಳಗೊಂಡು ಟಿ.ವಿ. ರಿಲೇ ಸ್ಟೇಷನ್ ಹತ್ತಿರ ಇನ್ನೊಂದು ಕೆರೆಯಾಗಿ ನಂತರ ಇವರ ಕಾಲದಲ್ಲಿ ಕುಂದುವಾಡದ ಕೆರೆಯೂ ಕೂಡ ನೀರು ಸರಬರಾಜಿಗೆ ಕಾಲಕ್ಕನುಗುಣವಾಗಿ ಉಪಯೋಗವಾಗಲ್ಪಟ್ಟಿತು. ಇದರಲ್ಲಿ ಯಾವ ಶಾಸಕನಿದ್ದರೂ ಈ ಬೆಳವಣಿಗೆ ಅನಿವಾರ್ಯವಾಗಿದ್ದಿತು ಮತ್ತು ಆಗಲೇಬೇಕಿತ್ತು. ಇದು ಧಣೀ ಪುತ್ರರ ಮಹತ್ಸಾಧನೆ ಎಂದು ಧಣಿಗಳ ಭಟ್ಟಂಗಿಗಳು ಡಂಗುರ ಹೊಡೆಸಿ, ಮತ್ತದೇ ಜನಪದ ಸೊಗಡಿನ "ಕುಂದುವಾಡದ ಕೆರೆ" ಎಂಬ ಹೆಸರನ್ನು ಅಳಿಸಿ ತಮ್ಮ ಧಣೀಪುತ್ರ ಸಾಗರ ಎಂದು ಶಿಲಾಶಾಸನವನ್ನು ಕೆತ್ತಿ, ಜನರಿಗೆ ತಿಳಿಹೇಳಿದ್ದಾರೆ.

ಗಂಡುಮೆಟ್ಟಿನ ನಾಡೆನ್ನುವ ಈ ಊರಿನ ಜನ ನೇರ ಮಾತುಕತೆಯ, ಯಾವುದೇ ಮುಚ್ಚುಮರೆಯಿಲ್ಲದ, ಆದಷ್ಟು ಪ್ರಾಮಾಣಿಕ ನಡತೆಯ ಜನರಾಗಿದ್ದರು. ಆದರೂ ನನ್ನ ದಾವಣಗೆರೆಯ ಸ್ನೇಹಿತನೋರ್ವ ಹೇಳುತ್ತಿದ್ದ, "ನೀನು ತಪ್ಪು ತಿಳಿದಿದ್ದೀ. ಈ ದಾವಣಗೆರೆಯ ಜನ ಯಾರಾದರೂ ಬಿಳಿ ಅಂಗಿ ತೊಟ್ಟು, ಮೇಲಿನ ಜೇಬಿನಲ್ಲಿ ಗರಿ ಗರಿ ನೂರರ ನೋಟೊಂದು ಕಾಣುವಂತಿದ್ದರೆ ಮಾತ್ರ ಮರ್ಯಾದೆ ಕೊಡುವರು. ನಿನ್ನ ಮೇಲಿನ ಜೇಬಿನಲ್ಲಿ ಪಾರದರ್ಶಕವಾಗಿ ಕಾಣುವ ನೋಟಿನ ಮೇಲೆ ಇವರುಗಳು ಕೊಡುವ ಮರ್ಯಾದೆ ಮೀಟರ್ ನಿಂತಿದೆ"ಯೆನ್ನುತ್ತಿದ್ದನು. ಅಂದು ಅದನ್ನು ಒಪ್ಪದಿದ್ದರೂ, ಬಹುಪಾಲು ವರ್ತಕನಗರಿಯಾದ ದಾವಣಗೆರೆಯ ಬಹುಪಾಲು ಜನ ಈ ರೀತಿ ಇದ್ದರೂ ಇರಬಹುದು ಎಂದುಕೊಂಡು ಸುಮ್ಮನಾಗಿದ್ದೆನು. ಆದುದರಿಂದಲೇ ಇರಬಹುದು ದಾವಣಗೆರೆಯ ಜನತೆ ಈ ಧಣಿಯ ಸಂಪತ್ತಿನ ಗ್ರ್ಯಾಫ್ ಏರಿಕೆಗೆ ಅನುಪಾತವಾಗಿ ಅವರನ್ನು ಓಲೈಸುವ ಅನುಪಾತ ಕೂಡಾ ಏರುತ್ತಿದೆ!

ಮೊದಲೆಲ್ಲಾ ದಾವಣಗೆರೆಯಲ್ಲಿ ಅಷ್ಟೊಂದು ಭಟ್ಟಂಗಿಗಳಿರುತ್ತಿರಲಿಲ್ಲ. ಏಕೆಂದರೆ ಅದು ದಾವಣಗೆರೆಯ ಜನತೆಗೆ ಆಗಿಬರದ ವಿಷಯ. ಇಲ್ಲಿನ ಜನರು ಅತ್ಯಂತ ಸ್ವಾಭಿಮಾನಿಗಳಾಗಿದ್ದರು. ಕಾಲ ಬದಲಾದಂತೆ ಇಲ್ಲಿನ ಹತ್ತಿಮಿಲ್ಲುಗಳು ಮುಚ್ಚಿ, ಮಂಡಿ ವರ್ತಕರ ಮಂಡಿ ಮುರಿದು, ಪ್ರತಿಯೊಂದು ವರ್ತಕ ವ್ಯವಹಾರಗಳು ದಿಕ್ಕು ತಪ್ಪಲಾರಂಬಿಸಿದಂತೆಯೇ ಈ ಜನರಲ್ಲಿದ್ದ ದರ್ಪ, ಅಹಂ ನಾಶವಾಗಿ, ಅದು ಕ್ರಮೇಣ ಅವರಲ್ಲಿನ ಸ್ವಾಭಿಮಾನವನ್ನೂ ಅಳಿಸುತ್ತ, ಇಂದು ಇಡೀ ನಗರಿಯೇ ಧಣಿಗಳ ಭಟ್ಟಂಗಿಗಳ ನಗರಿಯಾದಂತೆ ಕಾಣುತ್ತದೆ. ಇಂದು ದಾವಣಗೆರೆಯ ಪ್ರತಿಯೊಂದು ಬೀದಿ, ಮುಖ್ಯಸ್ಥಾನಗಳಿಗೂ ಧಣಿಗಳ ಅಥವಾ ಅವರ ಪುತ್ರರ, ವಂಶದವರ ಹೆಸರುಗಳನ್ನಿಟ್ಟು ಜನ ತಮ್ಮ ಭಟ್ಟಂಗಿತನವನ್ನು ಮೆರೆದಿದ್ದಾರೆ. ಸ್ವಾಭಿಮಾನೀ ದಾವಣಗೆರೆ ಭಟ್ಟಂಗಿಗೆರೆಯಾದುದನ್ನು ಪ್ರಾಮಾಣೀಕರಿಸುವಂತೆ ಮಹಾಸ್ವಾಭಿಮಾನೀ, ಪ್ರಾಮಾಣಿಕ, ಜಗಜ್ಜೆಟ್ಟಿ, ಬೀರಲಿಂಗೇಶ್ವರ ವ್ಯಾಯಾಮಶಾಲೆಯ ಮಲ್ಲರಾದ ಮಾಜೀ ಶಾಸಕರೋರ್ವರು ಈ ಮೊದಲೆಲ್ಲಾ "ಬರೀ ಒಂದೊಂದು ಬೀದಿ, ಸರ್ಕಲ್, ಬಸ್ ನಿಲ್ದಾಣಗಳಷ್ಟೇ ಏಕೆ ದಾವಣಗೆರೆ ಎಂಬ ಹೆಸರನ್ನೇ ಅಳಿಸಿ ಧಣಿಗಳ ನಗರವೆಂದು ಪುನರ್ ನಾಮಕರಣ ಮಾಡಿ"ರೆಂದು ಹೀಗಳೆಯುತ್ತ ಪ್ರತಿಭಟಿಸುತ್ತಿದ್ದವರು, ತಮ್ಮ ಜಾತೀ ಬಾಂಧವ ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್ ಸೇರಿ, ಇಂದು ಧಣಿಗಳಿಗೆ "ಜೈ"ಕಾರವನ್ನು ಹಾಕುತ್ತಿದ್ದಾರೆ!!!

ಈ ಭಟ್ಟಂಗಿತನದ ಇನ್ನೊಂದು ಸ್ಯಾಂಪಲ್ ಹೇಗಿದೆ ಗೊತ್ತೆ? ಇಲ್ಲಿನ ಪ್ರಮುಖ ಬೀದಿಯೊಂದಕ್ಕೆ ದಾವಣಗೆರೆಯನ್ನು ಜಿಲ್ಲೆಯನ್ನಾಗಿಸಿದ ಜೆ.ಹೆಚ್.ಪಟೇಲರ ಹೆಸರನ್ನಿಟ್ಟಿದ್ದರು. ಸರಿ, ಎಲ್ಲಾ ಪ್ರಮುಖ ಸ್ಥಳಗಳಿಗೆ ಧಣಿಗಳ ಹೆಸರಿರುವಾಗಿ ಇದೊಂದನ್ನು ಬೇರೆ ಇಡಲಾಗುವುದೇ? ಆದರೆ ಇದನ್ನು ಹೇಗೆ ವಿರೋಧಿಸುವುದು, ಸರಿ ಈ ಭಟ್ಟಂಗೀ ಪಟಾಲಂ ಡಾ.ರಾಜಕುಮಾರ್ ಅವರ ಹೆಸರನ್ನು ಈ ಬೀದಿಗೆ ಇಡಬೇಕೆಂದು ಪ್ರತಿಭಟಿಸಿತು. ಕರ್ನಾಟಕದಲ್ಲಿ ಯಾರಾದರೂ ಡಾ.ರಾಜಕುಮಾರ್ ಹೆಸರಿಡುವುದನ್ನು ಬೇಡವೆನ್ನುವ ಧೈರ್ಯ ತೋರುವರೇ? ಹೇಗಿದೆ ಕಿಡಿಗೇಡಿತನ? ಈಗ ಈ ರಸ್ತೆಗೆ ಯಾರ ಹೆಸರಿಟ್ಟರೋ ಗೊತ್ತಿಲ್ಲ. ಈ ಎಲ್ಲಾ ಮಹತ್ಸಾಧನೆಯ ಹಿನ್ನೆಲೆಯಿರುವುದರಿಂದಲೇ ಇರಬೇಕು ಈ ಧಣೀಪುತ್ರರು ಇಂದು ಕಾಂಗ್ರೆಸ್ ಟಿಕೆಟ್ ಹೆಲಿಕಾಪ್ಟರ್ ನಲ್ಲಿ ಬರುವಂತೆಯೂ, ಮತ್ತದು ಕ್ಷಣಕ್ಷಣಂ ಥ್ರಿಲ್ಲರ್ ಸಂವೇದಿಯಾಗಿಯೂ ಆಗುವಂತೆ ನಿಭಾಯಿಸಿದುದು.

ಈಗ ಹೊಸ ಸಂತತಿಯ ಪಟಾಲಂ ಧಣಿಗಳನ್ನು "ಅಪ್ಪಾಜಿ" ಎಂದು ಕರೆಯುತ್ತಾರಂತೆ. ಧಣಿಗಳು ತಮ್ಮ ಚಪ್ಪಲಿ ಎಲ್ಲಿ ಹೋದವೆಂದು ಹುಡುಕುತ್ತಿದ್ದರೆ ಅದು ಅವರ ಪಟಾಲಂ ಕೈಯಲ್ಲಿರುತ್ತದಂತೆ. "ಅಪ್ಪಾಜಿ, ಇಲ್ಲಿವೆ ನಿಮ್ಮ ಚಪ್ಪಲಿಗಳು!" ಎನ್ನುತ್ತಾ ಧಣಿಗಳನ್ನು ಓಲೈಸುತ್ತಾರಂತೆ. ಒಮ್ಮೆ ಗಂಡುಮೆಟ್ಟಿನ ನಾಡಿನ ಜನ ಎನಿಸಿಕೊಂಡವರು ಇಂದು ಕೈಯಲ್ಲಿ ಮೆಟ್ಟು ಹಿಡಿದು ಓಲೈಸುತ್ತಿದ್ದಾರೆ!!!

ದಾವಣಗೆರೆಯ ಧಣಿಯಂತೆ ನಮ್ಮ "ಮಂಡಕ್ಕಿ ಭಟ್ಟಿ ಸಾಬಿ" ಯಾರೆಂದು ನಿಮಗೆ ಪರಿಚಯವಿರಲಾರದು. ಇವರೇ ತಮ್ಮ ಹೆಸರನ್ನು ಕಾಂಗ್ರೆಸ್ ಟಿಕೆಟ್ಟಿನಲ್ಲಿ ಹೊಡೆದು ಹಾಕಿ ಧಣಿಪುತ್ರರ ಹೆಸರನ್ನು ಕೆತ್ತಿ ಅನರ್ಹಗೊಂಡ ಇನ್ನೋರ್ವ ಕಾಂಗ್ರೆಸ್ ಅಭ್ಯರ್ಥಿ!

ಸುಮಾರು ಇಪ್ಪತ್ತೈದು ವರ್ಷಗಳ ಕೆಳಗೆ ದಾವಣಗೆರೆಯಲ್ಲೆಲ್ಲಾ ಕಮ್ಯುನಿಸ್ಟರ ಕಾಲ. ಆಗ ಈ ಮುಸ್ಲಿಂ ನಾಯಕರು ಕೌನ್ಸಿಲರ್ರೋ, ಕಾಂಗ್ರೆಸ್ ಕಮಿಟಿ ಮೆಂಬರ್ರೋ ಆಗಿ, ನಮ್ಮ ಹಗೇದಿಬ್ಬ ಸರ್ಕಲ್ಲಿನಲ್ಲೊಮ್ಮೆ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. ಆಗ ಇವರೂ ಕೂಡ ವರ್ತಕ ಹಿನ್ನೆಲೆಯ ವ್ಯವಹಾರಗಳನ್ನು ಮಾಡುತ್ತಿದ್ದವರು, ಇಂದು ಧಣಿಗಳ ಆದರ್ಶವಾಗಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿದ್ದಾರಂತೆ. ಇರಲಿ, ಅಂದಿನ ಚುನಾವಣಾ ಭಾಷಣದಲ್ಲಿ ಇವರು "ಕಮ್ಯುನಿಸ್ಟರು ಏನು ಹೇಳುತ್ತಾರಪ್ಪಾ ಎಂದರೆ, ಈ ನಿಮ್ಮ ನಗರದೇವತೆ ದುರ್ಗಾಂಬಿಕಾ ದೇವಸ್ಥಾನದ ಮೇಲೆ ಬುಲ್ಡೋಜರ್ ಹತ್ತಿಸಿ ಅಂತಾರೆ. ರಷ್ಯಾ, ಚೀನಾದಲ್ಲೆಲ್ಲಾ ಹಂಗೇ ಮಾಡಿದ್ದಾರೆ. ಹೇಳಿ ಅಂತಹ ಕಮ್ಯುನಿಸ್ಟರಿಗೆ ನೀವು ಓಟು ಹಾಕಬೇಕಾ?" ಎಂದು ನೆರೆದ ಜನರನ್ನು ಕೇಳಿ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡಿದ್ದರು.

ಈಗ ದಾವಣಗೆರೆಯಲ್ಲಿ ಕಮ್ಯುನಿಸ್ಟರಿಲ್ಲ. ಅಲ್ಲಿನ ಎಲ್ಲಾ ಮಿಲ್ಲುಗಳೂ ಮುಚ್ಚಿಹೋಗಿ ಮಿಲ್ಲುಗಳ ಕಾರ್ಮಿಕರು ಆಟೋರಿಕ್ಷಾ ಡ್ರೈವರ್ರುಗಳಾಗಿಯೋ, ಬೆಣ್ಣೆದೋಸೆ ಹೋಟೇಲುಗಳನ್ನು ಮಾಡಿಕೊಂಡೋ ಇದ್ದಾರೆ. ಬಹುಶಃ ಈಗ ಈ ಅಲ್ಪಸಂಖ್ಯಾತರ ನಾಯಕರು ಇದೇ ಭಾಷಣವನ್ನು ಕೊಂಚ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು, ಅಜಾದ್ ನಗರದ ಸರ್ಕಲ್ಲಿನಲ್ಲಿ ಚುನಾವಣಾ ಭಾಷಣ ಮಾಡುತ್ತ, "ಬಿಜೆಪಿಗಳು ಏನು ಹೇಳುತ್ತಾರಪ್ಪಾ ಅಂದರೆ, ಈ ನಿಮ್ಮ ಜುಮ್ಮಾ ಮಸೀದಿಯ ಮೇಲೆ ಬುಲ್ಡೋಜರ್ ಹತ್ತಿಸಿ ಅಂತಾರೆ. ಗುಜರಾತ್, ರಾಜಸ್ಥಾನದಲ್ಲೆಲ್ಲಾ ಹಂಗೇ ಮಾಡಿದ್ದಾರೆ. ಹೇಳಿ ಅಂತಹ ಬಿಜೆಪಿಗಳಿಗೆ ನೀವು ಓಟು ಹಾಕಬೇಕಾ?" ಎಂದು ನೆರೆದ ಮುಗ್ಧ, ಬಡ ಮಂಡಕ್ಕಿ ಭಟ್ಟಿ ಕಾರ್ಮಿಕರನ್ನೂ, ಗುಜರಿ ಅಂಗಡಿ ವರ್ತಕರನ್ನೂ ಪ್ರಶ್ನಿಸಿ ಕಾಂಗ್ರೆಸ್ ಬೆಂಬಲಿಸಲು ಕರೆ ನೀಡುವರೇನೋ?

ಒಟ್ಟಾರೆ ಇದು ಕೇವಲ ದಾವಣಗೆರೆಯ ವೈಶಿಷ್ಟ್ಯವಲ್ಲ. ಇದು ಇಂದಿನ ಕರ್ನಾಟಕದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳ ನೈಜ ಚಿತ್ರಣ. ಪ್ರತಿಯೊಂದು ಕ್ಷೇತ್ರಗಳೂ ಒಂದೇ ತರಹ. ಪಾತ್ರಧಾರಿಗಳು ಮಾತ್ರ ಬೇರೆ. ಹಾಗಾಗಿಯೇ ಈ ಲೇಖನದಲ್ಲಿ ಧಣಿಗಳ, ಧಣಿಪುತ್ರರ ಮತ್ತಿತರೆ ಪುಢಾರಿಗಳ ಹೆಸರುಗಳಿಲ್ಲ! ಇಲ್ಲಿ ದಾವಣಗೆರೆಗೆ ಬದಲಾಗಿ ನಿಮ್ಮೂರಿನ ಹೆಸರು ಹಾಕಿಕೊಳ್ಳಿ, ಧಣಿಗಳ ಬದಲಾಗಿ ನಿಮ್ಮೂರಿನ ಪುಢಾರಿಗಳ ಹೆಸರುಗಳನ್ನು ಹಾಕಿಕೊಳ್ಳಿ. ಆಗ ಈ ಲೇಖನ, ಕೂಡಲೇ ನಿಮ್ಮದೇ ಲೇಖನವಾಗುತ್ತದೆ. ಧಣಿ/ಧಣೀಪುತ್ರರು ನಿಮ್ಮೂರಿನ ಶಾಸಕ ಮತ್ತವನ ಮಕ್ಕಳಾಗಬಹುದು, ಸಾಂಸದ ಮತ್ತವನ ಸೋದರರಾಗಬಹುದು....ಹಾಗೆಯೇ ರವಿ ಹಂಜ್ ನೀವಾಗಬಹುದು! ಒಟ್ಟಾರೆ ಅದಮ್ಯ ಸಾಮ್ಯತೆಯನ್ನು ಕೂಡಲೇ ಕಂಡುಕೊಳ್ಳುವಿರಿ!

ಮುಖ್ಯ ಹೆಸರುಗಳನ್ನು ಛಾಪಿಸಲೇಬೇಕೆಂತಾದರೆ ಅದು ಜಾತ್ಯಾತೀತ ದಳದ ದೇವೇಗೌಡ ಮತ್ತು ಮಕ್ಕಳಾಗಬಹುದು, ಬಿಜೆಪಿಯ ರೆಡ್ಡಿ ಮತ್ತು ಸೋದರರಾಗಬಹುದು, ಕಾಂಗ್ರೆಸ್ಸಿನ ಕೃಷ್ಣ ಮತ್ತು ಕಂಪೆನಿಯಾಗಬಹುದು, ಡಿಕೆಶಿ ಮತ್ತು ಸೋದರರಾಗಬಹುದು, ಸಮಾಜವಾದಿಯ ಬಂಗಾರಪ್ಪ ಮತ್ತು ಕುಟುಂಬವಾಗಬಹುದು........ಗಂಡುಮಕ್ಕಳಿದ್ದವರು ಪುತ್ರರನ್ನೂ, ಹೆಣ್ಣುಮಕ್ಕಳಿದ್ದವರೂ ಆಳಿಯಂದಿರನ್ನು, ಇನ್ನೂ ಯುವ ಪುಢಾರಿಗಳಾದರೆ ಅವರ ಸೋದರರನ್ನು ಸ್ಥಾಪಿಸುತ್ತಾ ಒಂದು ರೀತಿ ಆಧ್ಯಾತ್ಮದ ಸಿ.ಇ.ಓ ರವಿಶಂಕರರ "ವಸುದೈವ ಕುಟುಂಬಕಂ" ತತ್ವವನ್ನು ಎತ್ತಿಹಿಡಿಯುವವರೇ!

ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಲ್ಲ, ಇಡೀ ಭಾರತದ ಯಾವುದೇ ಕ್ಷೇತ್ರವಾಗಬಹುದು! ಅಲ್ಲಿ ಲಾಲೂ ಮತ್ತವನ ಮೈದುನರಿರಬಹುದು, ಮುಲಾಯಂ ಮತ್ತವರ ಮಗನಿರಬಹುದು, ಸೋನಿಯಾ ಮತ್ತು ಮಕ್ಕಳಿರಬಹುದು, ಫಾರೂಕ್ ಮತ್ತು ಮಕ್ಕಳಾಗಬಹುದು, ಸಿಂಧಿಯಾ ಕುಟುಂಬವಿರಬಹುದು................ಬ್ರಹ್ಮಚಾರೀ ವಾಜಪೇಯಿ ಕೂಡಾ ತಮ್ಮ ಸೋದರಳಿಯನನ್ನೇ ಬೆಳೆಸುತ್ತಿರುವರಂತೆ! ಹಾಗಾಗಿಯೇ ಇದು ಭಾರತವ್ಯಾಪಿ! ಇನ್ನು ಸಮಾಜಸೇವೆಗಾಗಿ ಇವರಲ್ಲಿ ಕೆಲವರು ಬ್ರಾಹ್ಮಣರನ್ನು ಓಲೈಸಬಹುದು, ಹಲವರು ದಲಿತರನ್ನು ಮೆರೆಸಬಹುದು. ಆ ಪಕ್ಷದ ನಾಯಕರು ನರಮೇಧ ನಡೆಸಬಹುದು, ಈ ಪಕ್ಷದವರು ಭಯೋತ್ಪಾದಕರನ್ನು ನಾಯಕರನ್ನಾಗಿಸಬಹುದು. ಇಲ್ಲಿ ಕನ್ನಡ ಮಾತನಾಡಬಹುದು ಅಲ್ಲಿ ಹಿಂದಿ ಮಾತನಾಡಬಹುದು. ಅವರ ಗುರುತು ಹಸ್ತವಿರಬಹುದು ಇವರ ಗುರುತು ಮಹಿಳೆಯಿರಬಹುದು. ಇಲ್ಲಿನವರು ಪಂಚೆ, ಪ್ಯಾಂಟ್ ತೊಡಬಹುದು ಅಲ್ಲಿನವರು ಕುರ್ತಾ/ಪೈಜಾಮ ಹಾಕಬಹುದು. ಹಾಗೆಯೇ ಇಲ್ಲಿನ ಮತದಾರ ಬಡ ಬೋರೇಗೌಡನಾಗಿರಬಹುದು, ಅಲ್ಲಿನ ಮತದಾರ ಬಡ ಸಿಯಾರಾಮ್ ಇರಬಹುದು, ಅಷ್ಟೇ.

ಒಟ್ಟಾರೆ ಈ ರಾಜಕೀಯದಲ್ಲಿ ಎಲ್ಲರೂ ಸಮಾನರು! ಎಲ್ಲರೂ ಪಕ್ಷಾತೀತರು! ವೈವಿಧ್ಯತೆಯಲ್ಲಿ ಏಕತೆ! ಎಂತಹ ಸಮಾನತೆ! ಅಂಬೇಡ್ಕರ್ ಆಗಲೀ, ಗಾಂಧಿಯಾಗಲೀ ಇಂತಹ ರಾಜಕೀಯ ಸಮಾನತೆಯನ್ನು ಕನಸು ಮನಸಿನಲ್ಲಿಯೂ ಊಹಿಸಿಕೊಂಡಿರುವುದಿಲ್ಲವೇನೋ! ಆ ಮಟ್ಟಿಗೆ ಭಾರತದ ಈ ಸಮಾನತೆಯನ್ನು ಪ್ರಜಾಪ್ರಭುತ್ವದ ಯಾವ ದೇಶಗಳೂ ಇನ್ನೂ ಒಂದು ನೂರು ವರ್ಷಗಳ ಮಟ್ಟಿಗೆ ಹತ್ತಿರ ಕೂಡಾ ಸರಿಗಟ್ಟಲಾರವೇನೋ.

ಅಲ್ಲಾ, ಇಷ್ಟೆಲ್ಲಾ ಸಂಪತ್ತಿರುವ ಈ ಧಣಿ, ಗಣೀ, ಬಂಧು, ಹುಲಿ, ಸಿಂಹ, ಸ್ಟಾರ್ ಗಳಿಗೆ ಅದೇಕೆ ಹೀಗೆ ದೈನೇಸಿಯಾಗಿ ಈ ಪುಡಿಜನಗಳಿಗೆ ಕೈಮುಗಿದು ಓಟು ಬೇಡುವ ಅಭಿಲಾಷೆಯೋ? ಈ ರೋಗ ಇವರಿಗಷ್ಟೇ ಅಲ್ಲ, ದುಡ್ಡಿರುವ ಅನೇಕರು ಈ ರೀತಿ ಜನಸೇವೆ ಮಾಡಲು ಹಪಹಪಿಸುತ್ತಾರೆ. ಅಲ್ಲಾ ದುಡ್ಡಿಲ್ಲದವರು ಸಮಾಜಸೇವೆ ಮಾಡಲು ಸರ್ಕಾರೀ ಪ್ರತಿನಿಧಿತ್ವವನ್ನು ಪಡೆಯಲು ಪ್ರಯತ್ನಪಟ್ಟರೆ ಒಪ್ಪಬಹುದು. ಈ ಪಾಟಿ ದುಡ್ಡಿರುವವರು ಟ್ರಸ್ಟ್ ಗಳನ್ನೋ ಪ್ರತಿಷ್ಟಾನಗಳನ್ನೋ ಸ್ಥಾಪಿಸಿಕೊಂಡು ಸರ್ಕಾರದ ಹಂಗಿಲ್ಲದೆ ಸಮಾಜಸೇವೆಯನ್ನು ಮಾಡಬಹುದಲ್ಲವೇ? ಇನ್ಫೋಸಿಸ್ ನ ನಾರಾಯಣಮೂರ್ತಿ, ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ತರಹ. ಅವರೆಲ್ಲಾ ಚುನಾಯಿತ ಪ್ರತಿನಿಧಿಗಳಾಗಲು ಬಯಸುತ್ತಿದ್ದಾರೆಯೇ? ಸಮಾಜಸೇವೆಯೇ ನಿಜ ಉದ್ದೇಶವಾದರೆ, ಯಾವ ಶ್ರೀಮಂತನೂ ಸರ್ಕಾರದ ಕೆಂಪುಪಟ್ಟಿ ಆಡಳಿತವನ್ನು ನಂಬಿ ಸಮಾಜಸೇವೆ ಮಾಡಲು ಹೋಗುವುದಿಲ್ಲ. ಈ ಶ್ರೀಮಂತರ ಸಮಾಜಸೇವೆಯ ನಿಜಾರ್ಥವನ್ನು ಭಾರತೀಯ ಶ್ರೀಸಾಮಾನ್ಯ ಅದ್ಯಾವಾಗ ಕಂಡುಕೊಳ್ಳುವನೋ?

ಅಣಕ:

ಅಂದ ಹಾಗೆ ದಾವಣಗೆರೆಯ ಕ್ಷೇತ್ರವೊಂದರಲ್ಲಿ ಅಭ್ಯರ್ಥಿ ಇಲ್ಲದ ಕಾಂಗ್ರೆಸ್, "ಮಟನ್ ಆಲಿ" ಎಂಬುವವರನ್ನು ಬೆಂಬಲಿಸುತ್ತಿದೆ.

ಮುಂದೆ ಮಹಿಳಾ ಮೀಸಲಾತಿ ಬಂದರೆ "ಚಿಕನ್ ಚಮೇಲೀ" ದಾವಣಗೆರೆ ಅಭ್ಯರ್ಥಿಯಾಗಬಹುದೇನೋ?

ಅಂದ ಹಾಗೆ ಇದು ಅಣಕವಲ್ಲ. ಅರ್ಧ ವರ್ತಮಾನ, ಮತ್ತರ್ಧ ಭವಿಷ್ಯ!

1 comment:

Anonymous said...

ದಾವಣಗೆರೆ ಬಗ್ಗೆ ಒಂದು ವಸ್ತು ನಿಷ್ಠ ಬರಹ ಒದಗಿಸಿದ್ದಕ್ಕೆ ಧನ್ಯವಾದಗಳು. ದಾವಣಗೆರೆಯ ಒಳ ಹೊರಗುಗಳನ್ನ ಅತ್ಯಂತ ಚೆನ್ನಾಗಿ ಬಲ್ಲ, ಧಣಿಗಳನ್ನ ಹತ್ತಿರದಿಂದ ವಿಮರ್ಶಿಸಿದ, ಭಟ್ಟಂಗಿತನಗಳನ್ನ, ಭೋಳೇತನಗಳನ್ನ ಬಯಲುಮಾಡಿದ ರವಿ ಹಂಜ್ ರವರಿಗೆ ಧನ್ಯವಾದಗಳು.

ನಿಮ್ಮ ಚಿಂತನೆಗಳು ಚರ್ಚೆಯನ್ನು ಹುಟ್ಟುಹಾಕುತ್ತವೆ. ಕೆಲವು ಚರ್ಚೆಗಳಿಗೆ "ಭಯಾನಕ" ಪ್ರತಿಕ್ರಿಯೆಗಳು ಬಂದಿವೆ. ಯಾವುದಕ್ಕೂ ಎದೆಗುಂದದೇ ನಿಮ್ಮ ಬರಹಗಳು ಬರಲೆಂದು ಆಶಿಸುವೆ.