ಮೇಕಿಂಗ್ ಆಫ್ ಹುಯೆನ್ ತ್ಸಾಂಗ್

 ನಮಸ್ಕಾರ,


ಭಾರತೀಯರಾದ ನಿಮಗೊಬ್ಬ ಚೀನಿ ಸಹೋದ್ಯೋಗಿ ಸಿಗುತ್ತಾನೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ಅವನ ಬಗ್ಗೆ ಇರುವ ಸಮಾನ ವಿಷಯ ಎಂದರೆ ಜನಸಂಖ್ಯೆ, ಇಂಡೋ ಚೈನಾ ಯುದ್ಧ, ಕಮ್ಯುನಿಸಂ, ಬಿಟ್ಟರೆ ಹುಯೆನ್ ತ್ಸಾಂಗ್! ಹಾಗಾಗಿ ಹುಯೆನ್ ತ್ಸಾಂಗ್ ಬಗ್ಗೆ ಅವನು ಗೊತ್ತಾ, ಓದಿದ್ದೀಯಾ ಇತ್ಯಾದಿ ಮಾತನಾಡುತ್ತೀರಿ.

ಆ ರೀತಿಯಾಗಿ ಆರಂಭಗೊಂಡ ನನ್ನ ಮೇಜುವಾನಿ ಸಂಭಾಷಣೆ ಪುಸ್ತಕವಾಗಿದೆ.


ನಂತರ ಭಾರತದ ಹುಯೆನ್ ತ್ಸಾಂಗ್ ನೇ ಚೀನಾದ ಝುಎನ್ ಜಿಯಂಗ್ ಎಂದು ಅರಿಯಲು ಒಂದು ತಿಂಗಳು ಬೇಕಾಯಿತು. ನಂತರ ಚೀನೀ ದೃಷ್ಟಾಂತ, ಕಾರ್ಟೂನಗಳು, ಮ್ಯೂಸಿಯಂ ದಾಖಲೆ, ಸಂಗ್ರಹ, ಫೋಟೋಗಳನ್ನೆಲ್ಲ ವಿಂಗಡಿಸಿ ವಿಶ್ಲೇಷಿಸುತ್ತ ನಡೆಯಬೇಕಿತ್ತು. ಕಾರ್ಟೂನ್ ಪ್ರಕಾರ ಈತನಿಗೆ ಮಂಗವೊಂದು ಸಹಾಯ ಮಾಡಿದಂತೆ ಚಿತ್ರಿಸಿ ರಾಮನ ಮಾಡಿದ್ದರು! ಹನುಮಂತ ರಾಮನಿಗೆ ಸಮುದ್ರ ದಾಟಲು ಸಹಾಯಿಸಿದ ರಾಮಾಯಣದಂತೆ, ಕೋತಿಯೊಂದು ಇವನಿಗೆ ಮರುಭೂಮಿ ದಾಟಲು ಸಹಾಯಿಸಿದಂತೆ. 


ಆದರೆ ಯಾವಾಗ ಈ ಚೀನೀ ಯಾತ್ರಿಕ ಭಾರತದ ಇತಿಹಾಸಕ್ಕೆ ಅನಿವಾರ್ಯವೆನ್ನುವಷ್ಟು ಪ್ರಮುಖನೆನಿಸಿದನೋ ಆಗ ಈತನ ಬಗ್ಗೆ, ಈತ ದಾಖಲಿಸಿದ ಭಾರತದ ಇತಿಹಾಸದ ಬಗ್ಗೆ ಕುತೂಹಲಕ್ಕಿಂತ ಸಂಶಯ ಮೂಡಿತು.  ಈ ಸಂಶಯಕ್ಕೆ ಕಾರಣ, ಚೀನಿಯರೊಂದಿಗಿನ ನನ್ನ ವೃತ್ತಿನಿರತ ಅನುಭವ, ಅವರ ಅನ್ಯಭಾಷಾ ಜ್ಞಾನದ ಅರಿವು, ಮತ್ತು  ಚೀನೀಯರ "ತಳ್ಳು" ಪ್ರವೃತ್ತಿಯ ನಿಕಟ ಪರಿಚಯ . ಈ ತಳ್ಳುವ ಪ್ರವೃತ್ತಿ ಭಾರತೀಯರನ್ನೊಳಗೊಂಡಂತೆ ಎಲ್ಲಾ ಏಷಿಯನ್ನರಲ್ಲಿಯೂ ಇದೆ. ಚೀನೀ ರೆಸ್ಟೋರೆಂಟುಗಳಲ್ಲಿ ನಿಮಗೆ ತಂದಿಟ್ಟ ಊಟತಿಂಡಿಯ ಬಗ್ಗೆ ಅನುಮಾನ ಮೂಡಿ ಇದು ಸಸ್ಯಾಹಾರವೇ ಎಂದು ಕೇಳಿದರೆ ಹಿಂದುಮುಂದು ನೋಡದೆ "ಹೌ"ದೆನ್ನುತ್ತಾರೆ. ಒಟ್ಟಾರೆ ಕೊಟ್ಟ, ಮಾರಿದ ವಸ್ತು ಹಿಂದಕ್ಕೆ ಬರಬಾರದು ಎಂಬ ತಳ್ಳುವ ಉದ್ದೇಶದಿಂದ ಕೇಳಿದ್ದಕ್ಕೆಲ್ಲ "ಹೌ"ದೆನ್ನುತ್ತಾರೆ!


ನನ್ನ ಕ್ಲೀಷಾ ಪ್ರವೃತ್ತಿ ಇವನ ಇತಿಹಾಸವನ್ನು ಕೆದಕುವಂತೆ ಮಾಡಿತು. ಮೇಲ್ನೋಟಕ್ಕೆ ಈತ ಇತರೆ ಚೀನಿಯರಂತೆ ತಳ್ಳು ಪ್ರವೃತ್ತಿಯವನಾಗಿರಲಿಲ್ಲವೆಂದು ತಿಳಿಯಿತು. ನಂತರ ಕೆದಕಿದಷ್ಟೂ ಈತನ ನಿಖರತೆ, ಪ್ರಖರತೆ, ಸ್ಪಷ್ಟತೆ ಕಾಣುತ್ತಾ ಸಾಗಿ ಪುಸ್ತಕವಾಯಿತು. 


ಬಿಗ್ ಡೇಟಾ, ಬಿಸಿನೆಸ್ ಇಂಟೆಲಿಜೆನ್ಸ್, ಮಷಿನ್ ಲರ್ನ್ನಿಂಗ್ ಎನ್ನುವ ನನಗೆ, ಸಮುದ್ರಮಥನದಿಂದ ಅಮೃತ ಸೃಷ್ಟಿಯಾಯಿತೆಂಬುವ ಪೌರಾಣಿಕ ಕತೆ ಪ್ರಪ್ರಥಮ ಮಾಹಿತಿ ತಂತ್ರಜ್ಞಾನದ ವಿಶ್ಲೇಷಣೆಯ ದೃಷ್ಟಾಂತ ಸೂಚಿಯಾದರೆ, ಹುಯೆನ್ ತ್ಸಾಂಗ್ ಅಗಣಿತ ಮಾಹಿತಿಯನ್ನು ಮಥಿಸಿ, ಭಾರತದ ಇತಿಹಾಸದ ಉಪಯುಕ್ತ ನಿಖರ ಮಾಹಿತಿಯನ್ನು ನೀಡಿ ಮಾಹಿತಿ ವಿಶ್ಲೇಷಣೆಯನ್ನು ಸಾಕಾರಗೊಳಿಸಿದ ಆದಿಪುರುಷನೆನಿಸುತ್ತಾನೆ.


ಹಾಗಾಗಿ ಈತ ಕೇವಲ ಒಬ್ಬ ಬೌದ್ಧಭಿಕ್ಷು, ಸಾಹಸಿ, ವಿದ್ವಾಂಸ, ರಾಜತಾಂತ್ರಿಕ, ಸಂಚಾರಿಯಲ್ಲದೆ ಮಾಹಿತಿ ವಿಶ್ಲೇಷಣೆಯ ಪಿತಾಮಹನೂ ಎನಿಸುತ್ತಾನೆ. ಚಾರ್ಲ್ಸ್ ಬ್ಯಾಬೇಜ್ ಕಂಪ್ಯೂಟರ್ ಪಿತಾಮಹನೆನ್ನಿಸಿದರೆ, ಹುಯೆನ್ ತ್ಸಾಂಗ್ ಮಾಹಿತಿ ವಿಶ್ಲೇಷಣೆಯ ಪಿತಾಮಹ!!!


ಇನ್ನು ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಶ್ರಮ ಸುಮಾರು ಐದು ಲಕ್ಷಕ್ಕೂ ಹೆಚ್ಚು. ಅದರಲ್ಲಿಯೂ ಸಂಶೋಧನೆ, ಹುಯೆನ್ ತ್ಸಾಂಗನಂತಹ ಅಂತರರಾಷ್ಟ್ರೀಯ ವ್ಯಕ್ತಿ ವಿಷಯವಾಗಿದ್ದರೆ ಇನ್ನೂ ಹೆಚ್ಚು!  

ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕ ಕಷ್ಟ.


ಆದರೆ ಇದು ನನ್ನ ಅರಿವಿನ ಪರಿಧಿಯ ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ  ಕಾರಣ ಇಲ್ಲಿ ಹಣ ಗೌಣ.  ನಾನು ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅದೇ ಸಾಮಾಜಿಕ ಕಳಕಳಿಯ, ಚಿಂತನೆಗಳನ್ನು ಮೀರಿದ ವೈಚಾರಿಕತೆಯ ಸಮಾಜಮುಖಿ ಬಳಗ ಪ್ರಕಟಿಸಲು ಉತ್ಸಾಹ ತೋರಿತು. 


ಇಂದು ಸಿದ್ಧಾಂತ ಬದ್ಧ ಕರ್ನಾಟಕದ ಕನ್ನಡದಲ್ಲಿ ಸಿದ್ಧಾಂತಕ್ಕೆ ಜೋಡಣೆಯಾದ, ಲಿಯೋ ಟಾಲ್ಸ್ಟಾಯ್, ಲೆನಿನ್, ಚೆ ಗುವೆರಾ ಮುಂತಾದವರ ಬಗ್ಗೆ ಅನೇಕ ಪುಸ್ತಕಗಳಿವೆ. ಆದರೆ ಭಾರತದ ಇತಿಹಾಸದ ಅನಿವಾರ್ಯನಾದ, ಸಿದ್ಧಾಂತಕ್ಕೆ ಅನ್ವಯಿಸದ ಹುಯೆನ್ ತ್ಸಾಂಗ್ ಬಗ್ಗೆ ಎಷ್ಟು ಪುಸ್ತಕಗಳಿವೆ? 


ಇನ್ನು ಏಳನೇ ಶತಮಾನದ ಅಂದಿನ ಚೀನಾ/ಭಾರತಕ್ಕೂ ಇಂದಿನ ಇಪ್ಪತ್ತೊಂದನೇ ಶತಮಾನದ ಆ ದೇಶಗಳಿಗೂ ವ್ಯತ್ಯಾಸವಿದೆಯೇ?  


ಆಗಿನಿಂದಲೂ ಚೈನಾದಲ್ಲಿ ಚಕ್ರಾಧಿಪತ್ಯ. ಈಗಲೂ ಚುನಾಯಿತ ಚಕ್ರಾಧಿಪತ್ಯ!

ಅಂದು ಭಾರತದಲ್ಲಿ ರಾಜರು, ಸರದಾರರು, ಸಾಮಂತರು, ಪಾಳೆಗಾರರು. ಈಗಲೂ ಚುನಾಯಿತ ರಾಜರ, ಸಾಮಂತರ, ಪಾಳೆಗಾರರ ಊಳಿಗಮಾನ್ಯ, ಚುನಾಯಿತ ಊಳಿಗಮಾನ್ಯ Elected feudalism! 


ಇನ್ನು ಸಿದ್ದಾಂತಗಳ ಮೀರಿದ ವೈಚಾರಿಕ ಚಿಂತನೆಯ ಕಾಡುಸಿದ್ದರಾದ ನನ್ನ ಮತ್ತು ಸಮಾಜಮುಖಿ ಬಳಗದ ಒಂದು axis of civil ಏರ್ಪಟ್ಟು ಹುಯೆನ್ ತ್ಸಾಂಗ್ ಪುಸ್ತಕ ಇಂದು ಬಿಡುಗಡೆಗೊಂಡಿದೆ.


ನಿಮ್ಮ ಪ್ರೋತ್ಸಾಹ ನಮಗಿರಲಿ. 


ಧನ್ಯವಾದಗಳು.

No comments: