ಪೂರ್ವಾಗ್ರಗಳ ಪೂರ್ವಾಪರ

 ಪೂರ್ವಾಗ್ರಹಗಳ ಪೂರ್ವಾಪರ


ಮಾನ್ಯ ರೇಣುಕಾ ರೂಪಾ ಎಂಬ ದ್ವಿ ಸ್ತ್ರೀಲಿಂಗ ನಾಮಧಾರಿ ಪುಲ್ಲಿಂಗದ(?) ಉಪನ್ಯಾಸಕರೋರ್ವರು ರವಿ ಹಂಜ್ ಅಂತಹ ಬಂಡವಾಳಶಾಹಿ ಭಕ್ತರ ಕೃತಿಗಳಿಂದ ಕನ್ನಡಿಗರಿಗೆ ಏನು ಲಾಭ ಎಂದು ತಮ್ಮ ಪಂಥಭಕ್ತಿಯ ಉನ್ಮಾದದಲ್ಲಿ ಪ್ರಶ್ನಿಸಿದ್ದಾರೆ. ನನ್ನ ಮಹಾಪಯಣ ಕೃತಿಯ ಮುನ್ನುಡಿ ಫೇಕ್ ಎಂದು ಇತ್ತೀಚೆಗೆ ಅಂಗಭಂಗಕ್ಕೊಳಗಾದ ಇವರು ಈಗ ಅವರ ಅಲ್ಲದ ಗುರುಗಳನ್ನು ಆವಾಹಿಸಿಕೊಂಡು ಅಲವತ್ತುಕೊಳ್ಳುತ್ತಿದ್ದಾರೆ.


ಇರಲಿ ಇದು ಕೇವಲ ರೇಣುಕಾ ರೂಪಾರ ಸಮಸ್ಯೆಯಲ್ಲ. ಇದು ಇಂದಿನ ದುರಿತ ಕಾಲದ ಅನೇಕ ಸಾಹಿತಿ ಗುರುಗಳ ಬಹುಪರಾಕು ಶಿಷ್ಯರ ಪರಿಸ್ಥಿತಿ. ಹಾಗೆಂದು ಇವರನ್ನು ಸಾಮಾನ್ಯರು ಎಂದು ಪರಿಗಣಿಸದಿರಿ. ಇವರು ಕನ್ನಡ ಎಂ.ಎ ಮಾಡಿದರೆ ಇಂಜಿನಿಯರಿಂಗಿನ ಎಲ್ಲಾ ವಿಭಾಗಗಳಲ್ಲದೆ, ವೈದ್ಯಕೀಯ, ಜಾಗತಿಕ ಇತಿಹಾಸ/ವಿದ್ಯಾಮಾನ/ಭಾಷಾಜ್ಞಾನ/ರಾಜಕೀಯ, ಸಮಾಜಶಾಸ್ತ್ರ, ಖಗೋಳ, ಭೂಗೋಳ, ಸಾಗರಾಳವಲ್ಲದೆ ಎಲ್ಲಾ ಜ್ಞಾನಗಳಲ್ಲಿ ಪರಿಣಿತಿ ಹೊಂದಿ ಯಾರು ಹೂಸಿದರೆ ಏನನ್ನು ಎಲ್ಲೆಲ್ಲಿ ತಿಂದಿದ್ದರು ಎಂದು ತಿಳಿಸುವಷ್ಟು ಅಪರಿಮಿತ ಬುದ್ಧಿವಂತಿಕೆಯನ್ನು ಪಡೆಯುವರು. 


ಇಂತಹ ಎಂ.ಎ ಪಡೆಯದೆ ಕೇವಲ ಕನ್ನಡದಲ್ಲಿ ಮಾತ್ರ ಎಂ.ಎ ಪಡೆದವರು ಇದಕ್ಕೆ ವರ್ಜ್ಯ! ಏಕೆಂದರೆ ಅವರು ವಿಶೇಷ ಚೇತನರಾಗಿರುವುದಿಲ್ಲ. ಹಾಗಾಗಿ ಇಂತಹ ಜ್ಞಾನಾರ್ಜನೆಯನ್ನು ವಿಶೇಷ ಚೇತನರಿಗೆ ವಿಶೇಷವಾಗಿ ಕರುಣಿಸಿದವರೇ ಇವರ ಆರಾಧ್ಯ ದೈವಗಳಾದ ಸಾಹಿತಿ ಸಂಶೋಧಕ ವಿಶ್ವವಿದ್ಯಾಲಯಗಳ ಪ್ರೊಫೆಸರರುಗಳು!


ಈ ಗುರುಶಿಷ್ಯಂದಿರ ಅಪರಿಮಿತ ಅಣಿಮು(ಮ)ತ್ತಿನ ಮಾತುಗಳು ನಿಮಗೆ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನವರೆಗೆ ಸಾಕಷ್ಟು ಸಿಗುತ್ತಿದ್ದವು. ಆದರೆ ಇತ್ತೀಚೆಗೆ ತುರ್ತುಪರಿಸ್ಥಿತಿ ಹೇರಿರುವ ಸರ್ಕಾರದ ದೆಸೆಯಿಂದ ಈ ಸರ್ಕಾರಿ ನೌಕರರು ತಕ್ಕಮಟ್ಟಿಗೆ ಭೂಗತರಾಗಿದ್ದಾರೆ. ತೇಜಸ್ವಿಯವರ ಕೃತಿಗಳ ಪ್ಯಾರಾಗಳನ್ನು ಮೊನ್ನೆಯಿಂದ ಓದುತ್ತಿರುವ ನಿಮ್ಮ ಮನದಲ್ಲಿ "ಪ್ರೊಫೆಸರ್ ಗಂಗೂಲಿ" ಹಾದು ಹೋದರೆ ಅದಕ್ಕೆ ನೀವೇ ಜವಾಬ್ದಾರರು!


ಮಾತೆತ್ತಿದರೆ ಸಮಾಜವಾದ, ಕಮ್ಯುನಿಸ್ಟ್, ಬದ್ಧತೆ ಮಾತನಾಡುವ ಶಿಷ್ಯ ಕೋಟಿಯ ಮಹಾನ್ ಗುರುಗಳೆಲ್ಲರೂ ವಿಶ್ವವಿದ್ಯಾಲಯ, ಕಾಲೇಜುಗಳಲ್ಲಿ ಪ್ರೊಫೆಸರರುಗಳಾಗಿದ್ದರು/ದ್ದಾರೆ. ಸರ್ಕಾರ ಆ ಉದ್ಯೋಗದಲ್ಲಿರುವವರಿಗೆ ಲಕ್ಷಗಟ್ಟಲೆ ಸಂಬಳ, ಸಂಶೋಧನೆ ಮಾಡಲು ಅನುದಾನ ಮತ್ತು ಸಹಾಯ ಮಾಡಲು ಸ್ನಾತಕೋತ್ತರ, ಪಿಹೆಚ್.ಡಿ, ಪೋಸ್ಟ್ ಡಾಕ್ಟೊರಲ್ ವಿದ್ಯಾರ್ಥಿಗಳ ಯೋಧರನ್ನೇ ಒದಗಿಸುತ್ತದೆ. ಇಂತಹ ಎಲ್ಲಾ ಸವಲತ್ತು ಪಡೆದು ನಡೆಸಿದ ಸಂಶೋಧನೆಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಈ "ಸಮಾಜವಾದಿ"ಗಳು ಅವೇ ಸಂಶೋಧನೆಗಳನ್ನೇ ಬಂಡವಾಳವಾಗಿಸಿಕೊಂಡು ಖಾಸಗಿಯಾಗಿ ರಾಯಧನ ಪಡೆದು ಪ್ರಕಟಿಸಿ ಪ್ರಕಾಶಿಸುವುದು ಎಷ್ಟು ಸರಿ?


ಹಾಗೆ ಪ್ರಕಾಶಿಸುವುದು ಬಂಡವಾಳಶಾಹಿತ್ವವೇ ಸಮಾಜವಾದವೇ? ಅಥವಾ ಕಮ್ಯುನಿಸ್ಟ್ ಸಿದ್ಧಾಂತವೇ? ಬಂಡವಾಳಶಾಹಿ ಅಂಬಾನಿ ಅದಾನಿಯರ ಪ್ರಶ್ನಿಸುವ ನೈತಿಕತೆ ಇವರಿಗಿದೆಯೇ?


ಗುಂಡು ತುಂಡಿಗೆ ಗುರುಗಳು ಶಿಷ್ಯರನ್ನು ಜೊತೆಗೆ ಕೂರಿಸಿಕೊಂಡು ಅದಕ್ಕೆ "ಸಮಾನತೆ"ಯ ಮೆರುಗು ಕೊಟ್ಟು ತಮ್ಮ ಪಲ್ಲಂಗ ಪುರಾಣ ಊದಿದರೆ ಅದು ಮಹಿಳಾ ಸ್ವಾತಂತ್ರ್ಯದ ಹೊಸ ವ್ಯಾಖ್ಯಾನ! ಪಿಹೆಚ್.ಡಿ ಮಾಡಲು ಬಂದು ಅರ್ಧಕ್ಕೆ ಬಿಟ್ಟು ಹೋದ ಮಹಿಳೆಯರ ಸಂಖ್ಯೆ, ಇವರು ವಿಮೋಚನೆಗೊಳಿಸಿದ ಮಹಿಳಾ ವಿಮೋಚನೆಯ ಅಭಿಯಾನ!


ಇರಲಿ, ನಾನೊಬ್ಬ ಬಂಡವಾಳಶಾಹಿ! ನನ್ನ ಕೃತಿಗಳನ್ನು ಕನ್ನಡಿಗರು ಏಕೆ ಓದಬೇಕು? ಅದರಿಂದ ಏನು ಲಾಭ ಎಂದು ನನ್ನನ್ನು "ಆರಾಧಿ"ಸುವ ಈ ಗುಂಪಿಗೆ ನಾನು ಸ್ವಲ್ಪವೇ ಸ್ವಲ್ಪ ಬಂಡವಾಳದ ಲೆಕ್ಕಾಚಾರ ಹೇಳಿಕೊಡುತ್ತೇನೆ.


ಪ್ರಕಟಗೊಳ್ಳುತ್ತಿರುವ ಇತ್ತೀಚಿನ ಕನ್ನಡ ಪುಸ್ತಕಗಳು ಮಾರಾಟವಾಗುವ ಸಂಖ್ಯೆ ಶೋಚನೀಯ. ಇಪ್ಪತ್ತೈದು ಸಾವಿರ ಪುಸ್ತಕಗಳನ್ನು ನೂರು ರೂಪಾಯಿಗೊಂದರಂತೆ ಮಾರಿ, ಹದಿನೈದು ಪರ್ಸೆಂಟ್ ರಾಯಧನ ಗಳಿಸಿದರೆ ಸಿಗುವುದು ಮೂರುಮುಕ್ಕಾಲು ಲಕ್ಷ! 


ಯಾವುದೇ ಒಂದು ಸಂಶೋಧನೆಗೆ ಸಂಪನ್ಮೂಲಗಳನ್ನು ಒಟ್ಟುಗೂಡಿಸಲು ತಿರುಗಾಡಿ ವ್ಯಯಿಸುವ ಹಣ, ಸುಮಾರು ಐದು ಲಕ್ಷಕ್ಕೂ ಹೆಚ್ಚು.  ಸಂಶೋಧನಾ ತಂಡಗಳ ಸ್ವರೂಪದ  ಸಂಶೋಧನೆಗಳಾದರೆ ಇನ್ನೂ ಅಧಿಕ. ಅದರಲ್ಲಿಯೂ ಆ ಸಂಶೋಧನೆಗಳು ನನ್ನ  ಹುಯೆನ್ ತ್ಸಾಂಗನ ಮಹಾಪಯಣ, ಅಗಣಿತ ಅಲೆಮಾರಿ, ಭಾರತ ಒಂದು ಮರುಶೋಧನೆ ಯಂತಹ ಅಂತರರಾಷ್ಟ್ರೀಯ ವಿಷಯ ವಸ್ತುಗಳಿದ್ದರೆ ಇನ್ನೂ ಹೆಚ್ಚು!


ಸರ್ಕಾರಿ ಅನುದಾನಗಳಿಲ್ಲದೆ ಈ ರೀತಿಯ ಪುಸ್ತಕಗಳು ಕಷ್ಟ!


ಆದರೆ  ನನ್ನೆಲ್ಲಾ ಸಂಶೋಧನೆಗಳು ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುವ ವೈಯಕ್ತಿಕ ಮೂಲೋದ್ದೇಶದ ಕಾರಣ ಇಲ್ಲಿ ಹಣ ಗೌಣ. 


ಹೌದು, ನಾನೊಬ್ಬ ಹಣ ಗೌಣವೆನ್ನುವ ಬಂಡವಾಳಶಾಹಿ!  


ಹೀಗೆ ನಾನು ವೈಯಕ್ತಿಕವಾಗಿ ಬಂಡವಾಳ ವ್ಯಯಿಸಿ ಕಂಡುಕೊಂಡ ಆ ಅರಿವನ್ನು ಸಮಾಜಕ್ಕೆ ಹಂಚಲು ಪುಸ್ತಕವಾಗಿಸಿದಾಗ, ಅಂತಹುದೇ ಲಾಭಾಂಶವನ್ನು ಬಯಸದೇ ಬಂಡವಾಳ ವ್ಯಯಿಸಿದ ಪ್ರಕಾಶನ ಸಂಸ್ಥೆಗಳು ನನ್ನ ಕೃತಿಗಳನ್ನು ಪ್ರಕಟಿಸಿದವು. ಇದರಲ್ಲಿ ಯಾವುದೇ ರಾಯಧನವಿಲ್ಲ. ಪದಕ್ಕೆರಡು ರೂಪಾಯಿ ಬಿಡಿ, ಇಡೀ ಪುಸ್ತಕಕ್ಕೆ ಒಂದು ರೂಪಾಯಿಯಿಲ್ಲ. 


ಈಗ ಹೇಳಿ ಕನ್ನಡಿಗರು ಏಕೆ ನನ್ನಂತಹ ಬಂಡವಾಳಶಾಹಿಯ ಕೃತಿಗಳನ್ನು ಓದಿ ಏನು ಲಾಭ? "ಅರಿವೇ ಗುರು" ಎಂಬುದು ಒಂದು ವಿಶ್ವವಿದ್ಯಾಲಯದ ಲಾಂಛನ. 


ಲಾಂಛನ ಮರೆತ ಈ ಸ್ನಾತಕಿ, ಸ್ನಾತಕೋತ್ತರಿಗಳು ಹಾಡುವುದು ಅದೇ ವಿಶ್ವವಿದ್ಯಾಲಯದ ಊರಿನ ಕವಿಗಳ ಪದ್ಯ "ಕುರುಡು ಕಾಂಚಾಣ!"


ಕನ್ನಡ ಎಂ.ಎ ಮಾಡಿ (ಕನ್ನಡ ಎಂ.ಎ. ಮಾಡಿ ಕೇವಲ ಕನ್ನಡ ಕಲಿತು ಕನ್ನಡ ಸೇವೆ ಮಾಡುತ್ತಿರುವವರು ದಯವಿಟ್ಟು ಕ್ಷಮಿಸಿ. ನೀವು ಇದಕ್ಕೆ ಹೊರತು!) ಸಕಲಕಲಾಪಾರಂಗತರಾಗಿರುವ ಸಮಾಜವಾದಿ, ಸಾಕ್ಷಿಪ್ರಜ್ಞೆ, ಆತ್ಮಸಾಕ್ಷಿ, ಬದ್ಧತೆ, ಸಿದ್ಧಾಂತ, ಚಿಂತನಶೀಲ, ವೈಚಾರಿಕ, ಬಹುತ್ವಗಳ ಪೂರ್ವಾಗ್ರಹಗಳ ಪೂರ್ವ ಗ್ರಹದ ಈ ಮಂದಿ ಪಶ್ಚಿಮ ಗ್ರಹದ ಆದರೆ ಪೂರ್ವಾಪರದ ನನಗೆ ಕೊಡುತ್ತಿರುವ ಪ್ರಚಾರಕ್ಕೆ ಚಿರಋಣಿ!


ಈ ಬಂಡವಾಳಶಾಹಿಯ ಎಲ್ಲಾ ಕೃತಿಗಳೂ ಮುದ್ರಿತ ಮತ್ತು ಇ-ಪುಸ್ತಕ ರೂಪದಲ್ಲಿ ಋತುಮಾನದಲ್ಲಿ ಲಭ್ಯ. ಹಾಂ ನೆನಪಿಡಿ, ನನ್ನ ಕೃತಿ 100% satisfaction guaranteed ಒಟ್ಟಿಗೆ ಬರುತ್ತದೆ. ಮೇಲಿನವರ ಸಾಕ್ಷಿಪ್ರಜ್ಞೆ, ಆತ್ಮಸಾಕ್ಷಿಗಳಿರದೆ ಸಹಜ ಮಾನವ ಕುತೂಹಲವಿದ್ದೂ ನಿಮಗೆ ತೃಪ್ತಿಯಾಗಲಿಲ್ಲವೆಂದರೆ ನನ್ನ ಮುಂದಿನ ಕೃತಿ ಉಚಿತ.


https://play.google.com/store/apps/details?id=ruthumana.app


#ಭಾರತವೆಂಬೋಹುಚ್ಚಾಸ್ಪತ್ರೆಯಲ್ಲಿ

#ಕರ್ನಾಟಕವೆಂಬೋಕಮಂಗಿಪುರದಲ್ಲಿ

No comments: