ಬಸವರಾಜಕಾರಣ ಬಿಡುಗಡೆ ಮಾತು

 ನಮಸ್ತೆ,

"ನಿಮಗೆ ಸ್ವಯಾರ್ಜಿತ ಅರಿವು ಬೇಕೆ? ಹಾಗಿದ್ದರೆ ಅಮೆರಿಕೆಗೆ ಬನ್ನಿ. ಹೇಗೆ ಮಹಾತ್ಮ ಗಾಂಧಿಯವರು ಜೈಲಿಗೆ ತೆರಳಿ ತಮ್ಮ ಆತ್ಮಚರಿತ್ರೆಯನ್ನು ಬರೆದರೋ, ಅಥವಾ ನೆಹರೂ ಹೇಗೆ ಇಂಗ್ಲೆಂಡಿಗೆ ತೆರಳಿ Discovery of India ಬರೆದರೋ ಹಾಗೆ. ದೂರಳತೆಯಿಂದ ವಸ್ತುಗಳು ಸ್ಪಷ್ಟವಾಗಿ ಕಂಡು ಅಂತಹ ಒಂದು ಅನುಭೂತಿ ಮೂಡುವುದು!"

– “Annayya’s Anthropology” by A.K. Ramanujan. 

ರಾಮಾನುಜನ್ ಅವರ ನುಡಿಯಂತೆ ಅನುಭವದಂತೆ ನನಗೂ ನನ್ನದೇ ಆದ ಕುತೂಹಲವು ಸ್ವಯಂಭು ಜ್ಞಾನದ ಹೊಳಹನ್ನು ತೋರುತ್ತ ಮಾತೃದೇಶದ ಆಗುಹೋಗುಗಳಿಗೆ ನನ್ನದೇ ಆದ ಭಿನ್ನ ದೃಷ್ಟಿಕೋನವನ್ನು ಕಟ್ಟಿಕೊಡತೊಡಗಿತು. ಇದೇ ದೃಷ್ಟಿಕೋನವು ನನ್ನ ಎಲ್ಲಾ ಕೃತಿಗಳಲ್ಲಿ ಸ್ಪಷ್ಟವಾಗಿ ಕಾಣುತ್ತದೆಂದು ಸಾಕಷ್ಟು ಓದುಗರು  ಸಹ ತಿಳಿಸಿದ್ದಾರೆ.  ಇದು ಏಕೆ ಸಾಧ್ಯವೆಂದರೆ from a distance whole world looks clear. ಒಂದು ಸಮಗ್ರ ಚಿತ್ರಣ ಸಿಗುತ್ತದೆ. ಹಾಗಾಗಿಯೇ ಹಿಂದೆಲ್ಲ ಋಷಿ ಮುನಿಗಳು ತಪಸ್ಸಿಗೆ ಕಾಡಿಗೆ ಹೋಗುತ್ತಿದ್ದರು, ಬುದ್ಧನು ಸಹ ಹಾಗೆಯೇ ಸಮಾಜದಿಂದ ಹೊರನಡೆದು ಮುಕ್ತಿ ಪಡೆದದ್ದು. ಒಟ್ಟಾರೆ ಈ ರೀತಿಯ ಒಂದು isolation ಸ್ವಯಾರ್ಜಿತ ಜ್ಞಾನವನ್ನೋ ಅರಿವನ್ನೋ ಅನುಭೂತಿಯನ್ನೋ ನೀಡುತ್ತದೆ.  ಕೇವಲ ಏಕಲವ್ಯ ಇಂತಹ ಸ್ವಯಂ ಬಿಲ್ವಿದ್ಯೆ ಕಲಿಯಲಿಲ್ಲ, ಕಾಡಿಗೆ ಹೋಗಿ ತಪಂಗೈದ ಎಲ್ಲಾ ಋಷಿಮುನಿಗಳೂ ಅವರವರ ಕ್ಷೇತ್ರದಲ್ಲಿ ಏಕಲವ್ಯರೆ ಆಗಿರುವರು! ಆದರೆ ನಾವೆಲ್ಲಾ ಏಕಲವ್ಯನನ್ನು ಮಾತ್ರ ಇಂತಹ ಸಾಧನೆ ಮಾಡಿದ್ದನು ಎಂದುಕೊಂಡಿದ್ದೇವೆ. That's the difference from seeing things from a distance!

ಇರಲಿ, Solitary confinement ಎಂಬುದು ನಿಜಕ್ಕೂ ಒಂದು ಅರಿವಿನ ವೈಧಾನಿಕತೆ!

ಆದರೆ ಅದಕ್ಕೆ ಮೂಲತಃ ಮಾನವ ಸಹಜ ಕುತೂಹಲವಿರಬೇಕು. ಅಂತಹ ಕುತೂಹಲ ನನಗೆ ಕಲ್ಯಾಣ ಕ್ರಾಂತಿಯ ಬಗ್ಗೆಯೂ ಇತ್ತು. ಆದರೆ ಆ ಕುರಿತು ಈವರೆಗಿನ ಎಲ್ಲಾ ಸಿದ್ಧಾಂತಗಳು, ಸಂಶೋಧನೆಗಳು ಒಂದು ರೀತಿಯ ಪೂರ್ವಾಗ್ರಹಗಳಿಂದ ಕೂಡಿವೆ ಎಂಬ ಅಭಿಪ್ರಾಯ ಕಾಡತೊಡಗಿತ್ತು. ಈ ಅಭಿಪ್ರಾಯ ಬಹುಶಃ ರಾಮಾನುಜನ್ ಹೇಳಿರುವಂತಹ ಅನಿವಾಸಿ ಆನುಷಂಗಿಕ ಗುಣದ ಪ್ರಭಾವವಾಗಿದೆಯೇನೋ ಗೊತ್ತಿಲ್ಲ. ಆದರೆ ಆ ಅನಿವಾಸಿತನ ನನ್ನಿಂದ ನನ್ನೆಲ್ಲಾ ಕೃತಿಗಳನ್ನು ಬರೆಸಿದೆ. 

ಇನ್ನು ಬಸವರಾಜಕಾರಣ ಕುರಿತಂತೆ ಹೇಳಬೇಕೆಂದರೆ, ಸಹಜವಾಗಿ ಕಾಣುವ ಸತ್ಯವನ್ನು ತರ್ಕದ ಒರೆಗೆ ಹಚ್ಚಿ ಅಂದರೆ ನನ್ನ ವೃತ್ತಿಪರ ವಿಶ್ಲೇಷಣಾ ತಂತ್ರವನ್ನು ಬಳಸಿ ಈ ಕೃತಿಯನ್ನು ರಚಿಸಿದ್ದೇನೆ. ಭಾರತದ ಭವ್ಯವಾದ ಆವಿಷ್ಕಾರಗಳಲ್ಲಿ ಒಂದಾದ ತರ್ಕಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ನೋಡಿದಾಗ ಅದು ಇಂದಿನ ಮೊಬೈಲ್ ತಂತ್ರಜ್ಞಾನದಂತಹ ತಂತ್ರಕ್ಕೆ ಬುನಾದಿಯಾಗಿದೆ ಎಂದರೆ ನಿಮಗೆಲ್ಲಾ ಆಶ್ಚರ್ಯವಾಗಬಹುದು. ಚಾರ್ಲ್ಸ್ ಬ್ಯಾಬೇಜ್, ಜಾರ್ಜ್ ಬೂಲಿಯನ್, ಮೇರಿ ಬೂಲಿಯನ್ ಅವರ ಗಣಿತ ಸೂತ್ರಗಳ ಬುನಾದಿಯಾದ ತರ್ಕ ಇಂದಿನ ಮೊಬೈಲ್ ಅವಿಷ್ಕಾರಕ್ಕೆ ನಾಂದಿಯಾಗಿದೆ. ಆ ಲೆಕ್ಕದಲ್ಲಿ ಭಾರತ ವಿಶ್ವಗುರು ಆಗಿದೆ. ಆದರೆ ಇಂದು ಭಾರತ ಅದೆಷ್ಟೇ ಉನ್ನತವಾಗಿದೆ ಎಂದುಕೊಂಡರೂ ನೈತಿಕತೆಯಲ್ಲಿ ಅಷ್ಟೇ ಅಧಃಪತನಕ್ಕೊಳಗಾಗಿರುವುದು ನಗ್ನ ಸತ್ಯ. ಇಂತಹ ಸಂದಿಗ್ಧ ಕಾಲದಲ್ಲಿ ಇದೇ ಭಾರತೀಯ ತರ್ಕದ ಬುನಾದಿಯ ಮೇಲೆ ರಚಿಸಿದ "ಬಸವರಾಜಕಾರಣ*ದಂತಹ ನಿಷ್ಠುರವಾದ ಕೃತಿಯನ್ನು ಪ್ರಕಟ ಮಾಡುವಂತಹ ಧೈರ್ಯವನ್ನು ಅಷ್ಟೇ ಸಾತ್ವಿಕರಾದ ಲೋಕಪ್ಪನವರು ಮಾಡಿದ್ದಾರೆ. ನಾನು ಅವರನ್ನು ಒತ್ತಿ ಒತ್ತಿ ಕೇಳಿದಾಗ ಅವರು "ಇಂಥ ಸಂಶೋಧನಾತ್ಮಕ ಕೃತಿಗಳು ಸಾರ್ವಕಾಲಿಕವಾಗಿ ಜನರನ್ನು ತಲುಪಬೇಕು ಎಂದರು. ಅವರ ಸೋದರಾರಾದ ಚಂದ್ರಪ್ಪನವರು ಕರಡನ್ನು ಓದಿ ಅಪಾರವಾಗಿ ಮೆಚ್ಚಿಕೊಂಡರು. ಇವರ ಈ ನಡೆ ನನಗೆ ಸಖೇದಾಶ್ಚರ್ಯವನ್ನು ಉಂಟುಮಾಡಿದ್ದಲ್ಲದೆ ನೈತಿಕತೆಯ ಆಶಾಕಿರಣ ಕಂಡಿತು.

ಅಂದ ಹಾಗೆ 'ಸಾವಿರ ಪುಸ್ತಕಗಳ ಸರದಾರ' ಎಂದೇ ಖ್ಯಾತವಾಗಿರುವ ಲೋಕಪ್ಪನವರ ಪ್ರಕಾಶನಗಳಲ್ಲಿ ಸಂಶೋಧನ ಕೃತಿಗಳದೆ ಸಿಂಹಪಾಲು. 

ಅದಕ್ಕಿಂತಲೂ ಆಶ್ಚರ್ಯಕರವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಲೆಯೂರು ಗುರುಸ್ವಾಮಿಯವರು ಕೃತಿಯನ್ನು ಬಿಡುಗಡೆ ಮಾಡಲು ಒಪ್ಪಿದ್ದು, ಹಾಗೆಯೇ ಶ್ರೀ ಕಾಳೇಗೌಡರು ಅಧ್ಯಕ್ಷತೆ ವಹಿಸಿದ್ದು ಮತ್ತು ಎಲ್ಲದ್ದಕ್ಕೂ ಹೆಚ್ಚಾಗಿ ಪೂಜ್ಯ ಗುರುಗಳು ಈ ಕಾರ್ಯಕ್ರಮದ ಸಾನಿಧ್ಯ ವಹಿಸಿಕೊಂಡಿದ್ದು ಎಲ್ಲವೂ ಒಂದು ಕನಸಂತಿದ್ದರೂ ಇಂದು ಅಸಹಿಷ್ಣುತೆ, ಪ್ರಾಬಲ್ಯ ಅಧಿನಾಯಕತ್ವ ತುಂಬಿ ತುಳಕುತ್ತಿದೆ ಎನ್ನುವ ಸನ್ನಿವೇಶದ ನಡುವೆ ಸಹಿಷ್ಣುತೆ, ಸಹಬಾಳ್ವೆ, ಮತ್ತು ತಾರ್ಕಿಕ ಸಂಶೋಧನೆಗಳನ್ನು ಬೆಂಬಲಿಸುವ ಆಶಾಕಿರಣ ಈ  ಸಮಾರಂಭವಾಗಿದೆ. ಈ ಅಂಶವನ್ನು ಇಂದು ಇಲ್ಲಿರುವ ಮಾಧ್ಯಮ ಮಿತ್ರರು ಎತ್ತಿಹಿಡಿಯಬೇಕೆಂದು ಕೇಳಿಕೊಳ್ಳುವೆ.

ಇನು ಈ ಕೃತಿಯಲ್ಲಿನ ಸುದೀರ್ಘ ವಿಶ್ಲೇಷಣೆಯಾದ್ಯಂತ ತಾರ್ಕಿಕ ಸಂಶೋಧನೆಗಳು ಸನಾತನ ಭಾರತದಲ್ಲಿ ಹೇಗೆ ಶಾಸ್ತ್ರ, ಸೂತ್ರಗಳಾಗಿ ವಿಕಸಿಸಿ ನಂತರ ನಶಿಸುತ್ತ ಹೋದವೆಂಬುದರ ಒಂದು ಸ್ತಬ್ಧಚಿತ್ರ ನಮೂನೆ (pattern) ಕಾಣುತ್ತದೆ. ಆ ಸೃಜನೇತರ ವೈಜ್ಞಾನಿಕ ಶಾಸ್ತ್ರಗಳ ಪರೋಕ್ಷ ವಿನಾಶಕ್ಕೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳ ಸೃಜನಶೀಲ ಭಾವೋತ್ಕರ್ಷಗಳ ನಮೂನೆಯು ಹೇಗೆ ಪ್ರಭಾವಿಸಿತು, ನಂತರದ ಇಸ್ಲಾಮಿ ದಾಳಿಕೋರರ ಅಧಿನಾಯಕತ್ವವು ಹೇಗೆ ಆ ಶಾಸ್ತ್ರಗಳಿಗೆ ಭಾವೋತ್ಕರ್ಷದ ಮರ್ಮಾಘಾತವನ್ನು ತಂದೊಡ್ಡಿತು, ಆ ಪಲ್ಲಟದಿಂದಾದ ಭಾವೋತ್ಕರ್ಷದ ಸೃಜನಶೀಲ ಕಥನಗಳು, ಭಕ್ತಿಪಂಥದ ರೂಪು ತಳೆದು ಹೇಗೆ ಭಾರತವನ್ನು ಮತ್ತಷ್ಟು ಭಾವೋತ್ಕರ್ಷಕ್ಕೆ ತಳ್ಳಿದವು, ನಂತರದ ಬ್ರಿಟಿಷ್ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲೂ ಭಾವೋತ್ಕರ್ಷದ ಸಿಪಾಯಿದಂಗೆಯಂತಹ ಸುದ್ದಿಗಳು

ಹೇಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದವು ಎಂಬುದರೊಂದಿಗೆ ಭಾರತದಲ್ಲೇಕೆ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಹೇಗೆ ಸೃಜನಶೀಲ ಕಥನಗಳಾಗುತ್ತ ಸಾಗಿದವು ಎಂಬುದನ್ನು ತೋರುತ್ತ ಈಗಲೂ ಗಾಳಿಸುದ್ದಿಗಳೇ ಹೆಚ್ಚು ಪ್ರಭಾವಶಾಲಿ ಎಂಬ ಯಕ್ಷಪ್ರಶ್ನೆಗೆ ಈ ಐತಿಹಾಸಿಕ "ಐತಿಹಾಸಿಕ-ನಮೂನೆ" ಉತ್ತರ ಕೊಡುತ್ತದೆ. ಸಮಾಜಮುಖಿ-ಭಾರತ ಹೇಗೆ ಸೋಪಾನಪಾತವಾಗಿ ಪತನಮುಖಿ- ಭಾರತವಾಯಿತು ಎಂದೂ ಕಾಣಿಸುತ್ತದೆ.

ಮಹಾಕಾವ್ಯಗಳಂತೆಯೇ ಇಂದಿನ ಸಾಕಷ್ಟು ಸಾಹಿತಿಗಳು ಸಂಶೋಧನೆಗಳನ್ನು ಕಾದಂಬರಿ ರೂಪದಲ್ಲಿ ಕಟ್ಟಿಕೊಟ್ಟು anticipatory bail ಪಡೆದುಕೊಂಡಿರುತ್ತಾರೆ. ಇದೇ ಬಸವಣ್ಣ, ಅಲ್ಲಮ, ಅಕ್ಕರಲ್ಲದೆ ಶರಣ ಚಳುವಳಿಯ ಕುರಿತಾಗಿ ರಚಿತಗೊಂಡಿರುವ ಸಾಕಷ್ಟು ಅಂತಹ ಪೂರ್ವಭಾವಿ ಜಾಮೀನಿನ ಕಾದಂಬರಿ, ನಾಟಕಗಳ ಉದಾಹರಣೆಗಳು ನಮ್ಮ ಮುಂದಿವೆ. ಅಲ್ಲಿಗೆ ಅವರ ಸಂಶೋಧನೆಯ ಬಗ್ಗೆ ಅವರಿಗೇ ನಂಬಿಕೆಯಿಲ್ಲ ಎಂದಲ್ಲವೇ!

Anyways, ಇಂತಹ ಒಂದು ಕ್ರಮಬದ್ಧ ಸ್ಥಿತ್ಯಂತರ ಬೇರಾವ ದೇಶದ ಇತಿಹಾಸದಲ್ಲೂ ಕಾಣುವುದಿಲ್ಲ. ಇತಿಹಾಸ ಮರುಕಳಿಸುತ್ತದೆ ಎಂಬಂತೆ ನಿಯಮಿತವಾಗಿ ಒಂದು ಸ್ಥಿತ್ಯಂತರದ ಋತುಚಕ್ರದನುಕ್ರಮವಾಗಿ ಭಾರತ ಸಾಗಿಬರುತ್ತಿದೆ. ಆ ಚಕ್ರದ ಜಾಡನ್ನು ಒಂದು ಅಂತರರಾಷ್ಟ್ರೀಯ ಮತ್ತು ಅಂತರಶಿಸ್ತೀಯ ವೈಧಾನಿಕತೆಗೆ ಬದ್ಧವಾಗಿಸಿ ನೋಡಿದಾಗ ಭಾರತದ ಪಥ ಸುಸ್ಪಷ್ಟವಾಗಿ ಗೋಚರಿಸುತ್ತದೆ! 

ಅದು ಪ್ರಗತಿಯೋ ಪರಗತಿಯೋ ಎಂದು ಕೋಡಿ ಮಠದ ಹೊತ್ತಿಗೆಗಳು ಅಗಸ್ತ್ಯ ಮುನಿಯ ನಾಡಿ ಶಾಸ್ತ್ರವೂ ಮತ್ತು ನಾಸ್ಟರ್ಡಾಮಸ್ ನ ಪುಸ್ತಿಕೆಯೂ ಜಂಟಿಯಾಗಿ ತಿಳಿಸಬಹುದೇನೋ ಗೊತ್ತಿಲ್ಲ. ಆದರೆ ಈ ವಿಡಂಬನೆಯಾಚೆ ನೋಡಿದಾಗ ನಮ್ಮ ಸಂಶೋಧನೆಗಳು ಹೇಗೆ ವಿವಿಧ Hegemonyಗಳಿಗೊಳಗಾಗಿ ಭಾರತದ ಪ್ರಸ್ತುತ ವರ್ತಮಾನಕ್ಕೆ ಕೊಡುಗೆ ನೀಡಿವೆ ಎಂಬುದರ ಬಗ್ಗೆ ಸಹ ಒಂದು ಅನಿವಾಸಿ ಹೊಳಹನ್ನು ಈ ಕೃತಿಯಲ್ಲಿ ಕೊಟ್ಟಿದ್ದೇನೆ. ಈ ಹೊಳಹನ್ನು ವಿಸ್ತೃತಗೊಳಿಸುತ್ತ ಸಾಗುವ ದೃಷ್ಟಿಕೋನ ಎಲ್ಲರದೂ ಆಗಲಿ.

ಧನ್ಯವಾದಗಳು!


No comments: