ಮಲೆಕುಯ್ಲು

 ಮೂವತ್ತೈದು ವರ್ಷಗಳ ಹಿಂದೆ ಬೇಸಿಗೆ ರಜೆಗೆ ಬಸ್ಸು ಹತ್ತಿ ದಾವಣಗೆರೆಯಿಂದ ಶಿವಮೊಗ್ಗ ಕಡೆ ಹೊರಟರೆ ದಾರಿಯಲ್ಲಿ ಸಿಗುವ ಕೆರೆಗಳಲ್ಲಿ ನೀರಿರುತ್ತಿತ್ತು. ರಸ್ತೆಯ ಇಕ್ಕೆಲಗಳಲ್ಲಿನ ಕಾಲುವೆಗಳಲ್ಲಿ ಮತ್ತು ಗುಂಡಿಗಳಲ್ಲಿ ನೀರು ಕಾಣುತ್ತಿದ್ದಿತು.  ಪ್ರಾಯಶಃ ಗದ್ದೆಗಳ ನೀರು ಬಸಿದು ಈ ಕಾಲುವೆಗಳಲ್ಲಿ ನೀರಿರುತ್ತಿತ್ತೇನೋ! ತುಂಗೆಯಲ್ಲಿ ನೀರು ಹರಿಯುತ್ತಿದ್ದಿತು. ಅದರಲ್ಲಿ ಮೀನು ಹಿಡಿಯುವವರೂ ಬಲೆ ಹಾಕುತ್ತಿದ್ದರು.

 

ಈಗ ಮಳೆಗಾಲ ಮುಗಿದ ನಂತರದ ಸೆಪ್ಟೆಂಬರ್ ತಿಂಗಳಿನಲ್ಲಿ ಈ ರೂಟಿನಲ್ಲಿ ಹೊರಟರೆ ಸಿಕ್ಕುವ ಯಾವ ಕೆರೆಗಳಲ್ಲಿಯೂ ನೀರು ಕಾಣದು. ರಸ್ತೆಯ ಇಕ್ಕೆಲಗಳಲ್ಲಿ ಕಾಲುವೆಗಳೇ ಕಣ್ಮರೆಯಾಗಿವೆ. ಅಂದು ಬೇಸಿಗೆಯಲ್ಲಿ ಕೆರೆಯ ತುಂಬ ತೆಳ್ಳಗೆ ನೀರಿರುತ್ತಿದ್ದ ಕೊಮಾರನಹಳ್ಳಿ ಕೆರೆಯಲ್ಲಿ ಇಂದು ಸೆಪ್ಟೆಂಬರಿನಲ್ಲಿ ಅದರ  ಒಂದೆರಡು ಗುಂಡಿಗಳಲ್ಲಿ ಮಾತ್ರ ನೀರು ಕಂಡೀತು.

 

ಇನ್ನು ಶಿವಮೊಗ್ಗದಿಂದ ಬೆಂಗಳೂರು ಕಡೆ ಹೊರಟರೆ ಕಡೂರುಬೀರೂರುಅರಸೀಕೆರೆತಿಪಟೂರುತುಮಕೂರಿನ ತನಕ ಎಲ್ಲೆಲ್ಲೂ ತೆಂಗಿನ ತೋಟಗಳು ಕಾಣುತ್ತಿದ್ದವು. ಈ ಎಲ್ಲಾ ತೆಂಗಿನ ತೋಟಗಳು ಮಳೆಯಾಶ್ರಿತ ತೆಂಗಿನ ತೋಟಗಳಾಗಿದ್ದವು.  ಆ ತೋಟಗಳಲ್ಲಿ ತೆರೆದಬಾವಿಗಳಿದ್ದರೂ ಅವುಗಳಿಂದ ಯಾರೂ ತೆಂಗಿನಮರಗಳಿಗೆ ನೀರು ಹಾಯಿಸುತ್ತಿರಲಿಲ್ಲ. ಆ ಬಾವಿಯ ನೀರನ್ನು ಕುಡಿಯಲು ಹೆಚ್ಚೆಂದರೆ ತರಕಾರಿ ಬೆಳೆಯಲು ಮತ್ತು ತೆಂಗಿನ ಸಸಿಗಳನ್ನು ಮಾಡಿ ಆರೈಸಲು ಉಪಯೋಗಿಸುತ್ತಿದ್ದರು. ಬೋರ‍್ವೆಲ್ ಎಂಬುದು ಎಲ್ಲಿಯೂ ಇರಲಿಲ್ಲ.  ಇದೇ ಪರಿಸ್ಥಿತಿ ಹೊಳಲ್ಕೆರೆಹೊಸದುರ್ಗಚಿಕ್ಕಜಾಜೂರುರಾಮಗಿರಿಚನ್ನಗಿರಿಹಿರಿಯೂರು ಸುತ್ತಮುತ್ತ ಕೂಡ.  ಮಳೆಯಾಶ್ರಿತ ಈ ತೆಂಗಿನ ಮರಗಳಿಂದ ಎರಡು ತಿಂಗಳಿಗೊಮ್ಮೆ ಕಾಯಿ ಕೆಡವುತ್ತಿದ್ದರು. ಒಂದೊಂದು ವರ್ಷ ಮಳೆ ಕೈಕೊಟ್ಟರೂ ಈ ಮರಗಳು ಒಣಗದೇ ಮುಂದಿನ ಮಳೆಗಾಲದವರೆಗೆ ಸುಧಾರಿಸಿಕೊಳ್ಳುತ್ತಿದ್ದವು. ಹೆಚ್ಚೆಂದರೆ ಇಳುವರಿ ಕಡಿಮೆಯಾಗುತ್ತಿತ್ತೇ ವಿನಹಃ ಮರಗಳು ಒಣಗುತ್ತಿರಲಿಲ್ಲ.  ಅದಲ್ಲದೇ ಈ ರೈತರು ಆ ತೆಂಗಿನ ತೋಟಗಳಲ್ಲಿ ಬೇರೆ ಯಾವುದೇ ಬೆಳೆ ಬೆಳೆದರೂ ಅದು ವಾಣಿಜ್ಯ ಬೆಳೆಯಾಗಿರದೆ ಕೇವಲ ಸ್ವಂತವಾಗಿ ಬಳಸುವ ರಾಗಿಎಳ್ಳುಸಾಮೆಕೊತ್ತಂಬರಿಒಮ್ಮೊಮ್ಮೆ ತೊಗರಿಯಂತಹ ಮಳೆಯಾಶ್ರಿತ ಬೆಳೆಗಳನ್ನು ಮಾತ್ರ ಬೆಳೆಯುತ್ತಿದ್ದರು.

 

ಇಂದು ಈ ಎಲ್ಲಾ ತೆಂಗಿನತೋಟಗಳಿಗೆ ಒಂದೆರಡು ತಿಂಗಳು ಡ್ರಿಪ್ಪಿನಲ್ಲಿ ನೀರು ಕೊಡುವುದು ವ್ಯತ್ಯಾಸವಾದರೂ ಗರಿಗಳು ಬಾಡಿ ಒಣಗಲಾರಂಭಿಸುತ್ತವೆ. ಅದೇ ಹಿಂದಿನ ಹಳೆಯ ಮರಗಳೂ ವರ್ಷಗಟ್ಟಲೇ ಮಳೆಯಿಲ್ಲದಿದ್ದರೂ ಒಣಗದಿದ್ದವು ಇಂದು ಡ್ರಿಪ್ ಇಲ್ಲದಿದ್ದರೆ ಎರಡು ತಿಂಗಳಲ್ಲೇ ಬಾಡುತ್ತಿವೆ.

 

ಮೇಲ್ಕಾಣಿಸಿದ ಹೊಳಲ್ಕೆರೆಹೊಸದುರ್ಗಕಡೂರುಅರಸೀಕೆರೆತಿಪಟೂರುಚಿಕ್ಕನಾಯಕನಹಳ್ಳಿಜಾವಗಲ್ಹಳೇಬೀಡುಕಳಸ ಮುಂತಾದ ತೆಂಗಿನ ಬೆಲ್ಟ್ ಎನ್ನಬಹುದಾದ ಈ ಪ್ರದೇಶದ ಕಳೆದ ಐವತ್ತು ವರ್ಷಗಳ ವಾರ್ಷಿಕ ಸರಾಸರಿ ಮಳೆ ೬೦೦ ಮಿಲಿ ಮೀಟರ್. ಇಂದಿಗೂ ಕೂಡಾ ಈ ಪ್ರದೇಶದ ವಾರ್ಷಿಕ ಮಳೆ ಇದೇ ೬೦೦ ಮಿಲಿ ಮೀಟರಿನ ಆಜುಬಾಜು ಇದೆ.  ಮಳೆ ಬರುವ ಕಾಲ ಹೆಚ್ಚು ಕಮ್ಮಿಯಾಗಿದೆಯೇ ಹೊರತು ಮಳೆಯ ಪ್ರಮಾಣ ಅಷ್ಟೇ ಇದೆ. ಇಲ್ಲಿನ ಎಲ್ಲಾ ತೋಟಗಳಲ್ಲೂ ಅಂದಿನಿಂದ ಇಂದಿನವರೆಗೂ ತಟಾಕು/ಪಟ್ಟೆಗಳಿದ್ದು ಅವುಗಳು ಬದುಗಳಿಂದಾವೃತಗೊಂಡಿವೆ. ಅಂದರೆ ಮಳೆ ನೀರು ಬಿದ್ದದ್ದು ಆಯಾಯಾ ಪಟ್ಟೆ/ತಟಾಕಿನಲ್ಲಿ ಸಾಕಷ್ಟು ಇಂಗುತ್ತಿತ್ತು. ಹೆಚ್ಚಾದದ್ದು ಹತ್ತಿರದ ಹಳ್ಳಕ್ಕೆ ಹರಿದು ಹೋಗಿ ಕೆರೆ ಕೊಳ್ಳಗಳನ್ನು ಸೇರುತ್ತಿದ್ದಿತು.  ಈ ಪ್ರಕ್ರಿಯೆಗೆ ಮಳೆಗಾಲದಲ್ಲೇ ಮಳೆ ಬರಬೇಕೆಂಬ ನಿಯಮವೇನೂ ಇಲ್ಲ. ಒಟ್ಟಾರೆ ಮಳೆಯಾದರೆ ಈ ನೀರು ಹಳ್ಳಕೊಳ್ಳಗಳ ಮೂಲಕ ಕೆರೆಗಳನ್ನು ಸೇರುತ್ತಿದ್ದಿತು.

 

ಈಗ ನೀರಿನ ಕುರಿತು ಜನ ಹೆಚ್ಚು ಜಾಗೃತರಾಗಿದ್ದಾರೆ. ಈಗ ಇನ್ನೂ ಹೆಚ್ಚಿನ ಬದುಇಂಗುಗುಂಡಿಗಳನ್ನು ನಿರ್ಮಿಸಿ ತಮ್ಮ ತೋಟದಲ್ಲಿ ಬೀಳುವ ಮಳೆಯ ನೀರು ಎಲ್ಲಿಯೂ ಹರಿಯದಂತೆ ಇಂಗಿಸುತ್ತಿದ್ದಾರೆ. ಅಂದು ತೆಂಗಿನಮರಗಳೇ ಅಂತರ್ಜಲದಿಂದ ನೀರನ್ನು ಎಳೆದುಕೊಳ್ಳುತ್ತಿದ್ದರೆಇಂದು ಬೋರ್ವೆಲ್ಲಿನಿಂದ ಎಳೆದು ತೆಂಗಿಗೆ ನೀರು ಕೊಡುತ್ತಿದ್ದಾರೆಅಷ್ಟೇ ವ್ಯತ್ಯಾಸ. ಹಾಗಿದ್ದರೂ ಈ ತೋಟಗಳಲ್ಲಿ ಜಲಕ್ಷಾಮದಂತಹ ವ್ಯತ್ಯಯವುಂಟಾಗಲು ಏನು ಕಾರಣ?

 

ಅಮೇರಿಕಾದಲ್ಲಿನ ಹತ್ತೊಂಬತ್ತನೇ ಶತಮಾನದ ಆಣೆಕಟ್ಟುಗಳನ್ನು ಕಟ್ಟುವ ಕ್ರಾಂತಿ ಬಹುಪಾಲು ಇಂದು ಕರ್ನಾಟಕದಲ್ಲಿ ಚೆಕ್ ಡ್ಯಾಂಗಳನ್ನು ಕಟ್ಟುವ ಉಮೇದಿನಲ್ಲಿಯೇ ಕಟ್ಟಲ್ಪಟ್ಟಿದ್ದವು. ಉಪಯೋಗವಿರಲಿ ಬಿಡಲಿ ಆಣೆಕಟ್ಟುಗಳು ಪ್ರಗತಿಯ ಸಂಕೇತವೆಂಬಂತೆ ವಿಪರೀತವಾಗಿ ಕಟ್ಟಲ್ಪಟ್ಟಿದ್ದವು.  ಹಾಗಾಗಿ ಅಂದು ಕಟ್ಟಿದ ಅನೇಕ ಆಣೆಕಟ್ಟುಗಳು ಲಾಭದಾಯಕವಲ್ಲವೆಂದು ನಿರ್ವಹಣಾ ವೆಚ್ಚವನ್ನು ಉಳಿಸಲು ಇಂದು ಕೆಡವಲಾಗುತ್ತಿದೆ. ಹಾಗೆ ಕೆಡವುದರಿಂದ ಕೆಲ ಪರಿಸರಸ್ನೇಹೀ ಉಪಯೋಗಗಳೂ ಇವೆಯೆಂದು ಹೇಳಲಾಗುತ್ತದೆ. ಆದರೆ ಈ ಆಣೆಕಟ್ಟುಗಳಿಂದಾದ ಪರಿಸರನಾಶ, ಗುರುತಿಸಿಕೊಳ್ಳುವಷ್ಟು ನಾಶವಾಗಿರಲಿಲ್ಲ. ಹಾಗಾಗಿ ಇವುಗಳನ್ನು ಕೆಡುವುದರಿಂದ ನಿರ್ವಹಣಾ ವೆಚ್ಚದ ಉಳಿತಾಯ ಮುಖ್ಯವಾಗಿ ಕಾಣುವುದೇ ಹೊರತು ಪರಿಸರಸ್ನೇಹೀ ಉಪಯೋಗಗಳು ಅಷ್ಟಾಗಿ ಕಾಣುವುದಿಲ್ಲ.

 

ಆದರೆಅಮೇರಿಕಾದ ಆಣೆಕಟ್ಟುಗಳನ್ನು ಕೆಡುವುದನ್ನು ಎತ್ತಿ ಹಿಡಿದು ಭಾರತದ ಪರಿಸರವಾದಿಗಳು ಆಣೆಕಟ್ಟುಗಳು ಪರಿಸರಕ್ಕೆ ಮಾರಕವೆಂದು ಪ್ರತಿಪಾದಿಸುತ್ತಿರುವುದು ತಪ್ಪು.  ಆದರೆ ಈ ಪರಿಸರವಾದಿಗಳು ಯಾವುದು ಪರಿಸರಪೂರಕ ಎಂಬುವರೋ ಅದೇ ಪರಿಸರಕ್ಕೆ ಮಾರಕವಾಗಿರುವ ಉದಾಹರಣೆಯನ್ನು ಗಮನಿಸೋಣ.

 

ಓಡುವ ನೀರನ್ನು ನಡೆಸುನಡೆಯುವ ನೀರನ್ನು ನಿಲ್ಲಿಸುನಿಂತ ನೀರನ್ನು ಇಂಗಿಸು ಎಂಬುದು ಸರಿ. ಆದರೆ ಎಷ್ಟರ ಮಟ್ಟಿಗೆ ಇದನ್ನು ಅಳವಡಿಸಿಕೊಳ್ಳಬೇಕುಅತಿಯಾದರೆ ಅಮೃತವೂ ವಿಷವೆಂಬಂತೆ ಒಂದೆಡೆ ಎಂತಹ ಮಳೆ ಬಂದರೂ ಹಳ್ಳಗಳಲ್ಲಿ ನೀರು ಹರಿದು ಕೆರೆಗಳನ್ನು ಸೇರುವುದೇ ಇಲ್ಲ. ಅದೇ ಇನ್ನೊಂದೆಡೆ ಸಾಧಾರಣ ಮಳೆಯಾದರೂ ಪ್ರವಾಹ ಉಂಟಾಗಿಬಿಡುತ್ತದೆ ಹೀಗೇಕೆ?

 

ಅದೇ ರೀತಿಇಂದು ಸರ್ಕಾರ ಯಾವುದೇ ಧೀರ್ಘಾಲೋಚನೆಯಿಲ್ಲದೇಗುತ್ತಿಗೆದಾರರ ಮುಖಾಂತರ ಚರಂಡಿಯಂತಹ ಸಣ್ಣ ಹಳ್ಳಗಳಿಗೂ ಚೆಕ್ ಡ್ಯಾಂಗಳನ್ನು ಕಟ್ಟುತ್ತಿದೆ.  ಮಳೆಯ ನೀರು ಈಗ ಈ ಎಲ್ಲಾ ಚೆಕ್ ಡ್ಯಾಂಗಳಲ್ಲಿ ನಿಂತು ಇಂಗಿಮಿಕ್ಕಿ ಹರಿದು ನದಿಗಳನ್ನುಕೆರೆಗಳನ್ನು ಸೇರಬೇಕಾಗಿದೆ. ಒಟ್ಟಿನಲ್ಲಿ ಈ ಎಲ್ಲಾ ಜಲಸಾಕ್ಷರತೆಯಿಂದಾಗಿ ಮಳೆಯನೀರು ಇಂಗಿ ಇಡೀ ಕರ್ನಾಟಕದ ಭೂಪ್ರದೇಶ ಪಸೆಯ ಸ್ಪುರಿಸುವ ಜೌಗುತಾಣವಾಗಬೇಕಿದ್ದಿತು. ಆದರೆ ಇಂಗಿಸಿದಷ್ಟೂ ಇಂಗದ ದಾಹ ಉಂಟಾಗಿದೆ. ಹೀಗೇಕೆ?

 

ಈ ವಿಪರೀತ ನೀರಿನ ಕಾಳಜಿಯಿಂದ ಉಂಟಾದ ಒಂದು ದುಷ್ಪರಿಣಾಮವೆಂದರೆ ಒಂದು ಸಮತೋಲಿತ ಮಟ್ಟಿನ ಚೆಕ್ ಡ್ಯಾಂಗಳಿಲ್ಲದೆ ಹೆಜ್ಜೆ ಹೆಜ್ಜೆಗೂ ಚೆಕ್ ಡ್ಯಾಂಗಳಿದ್ದು ನೀರು ಹರಿಯುವುದೇ ನಿಂತಿದೆ. ಆ ಹರಿಯುವ ನೀರಿನ ಮೇಲಾಧರಿತವಾದ ಪರಿಸರ ಇಂಗಿಕೆರೆಗಳು ಮಾಯವಾಗಿನದಿಗಳು ಮಾಯವಾಗುತ್ತಿವೆ.  ಈಗೇನಿದ್ದರೂ ನದಿಗಳು ಅತಿವೃಷ್ಟಿಯಲ್ಲಿ ನೀರನ್ನು ಹರಿಸುವ ಕಾಲುವೆಗಳಾಗಿಮಳೆ ನಿಂತ ಬಳಿಕ ಒಣಗಿದ ಚರಂಡಿಗಳಾಗಿ ಮಾರ್ಪಾಟಾಗಿವೆ.

 

ಇದೆಲ್ಲದಕ್ಕೂ ಕಾರಣ ಮತ್ತದೇ ಉತ್ಕಟ ಆಸೆ ಮೂಡಿಸುವ ಬೋರ್ವೆಲ್ಲುಗಳು. ತಮ್ಮ ತೆಂಗಿನತೋಟಗಳಲ್ಲಿ ಇತರೆ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಅತ್ಯುತ್ಸಾಹದಿಂದ ರೈತರು ಬೋರ್ವೆಲ್ಲುಗಳ ಮೊರೆಹೋದರು. ಮೊದಲೆಲ್ಲಾ ನೂರು ಅಡಿಗಳಲ್ಲಿ ಸಿಗುತ್ತಿದ್ದ ಅಂತರ್ಜಲ ಇನ್ನೂರು ಮುನ್ನೂರು ಅಡಿಗಳಿಗೆ ಕುಸಿಯುತ್ತಾ ಇಂದು ಸಾವಿರ ಅಡಿಗಳನ್ನು ತಲುಪಿದೆ. ಈಗ ರೈತರು ಇತರೆ ವಾಣಿಜ್ಯ ಬೆಳೆಯಿರಲಿ ತಮ್ಮ ಸಾಂಪ್ರದಾಯಿಕ ತೆಂಗಿನಬೆಳೆಯನ್ನು ಉಳಿಸಿಕೊಳ್ಳಲು ಹೆಣಗಿ ಸೋತುಹೋಗಿದ್ದಾರೆ.  ಮೊದಲೆಲ್ಲಾ ನೂರು ಅಡಿಗಳಲ್ಲಿರುತ್ತಿದ್ದ ಅಂತರ್ಜಲ ಕ್ಯಾಪಿಲರಿ ಸಿದ್ದಾಂತಕ್ಕನುಗುಣವಾಗಿ ನೀರಿನ ಪಸೆ ಮೇಲೇರುತ್ತಾ ತೆಂಗಿನ ಬೇರುಗಳಿಗೆ ಸಿಗುವ ಮಟ್ಟಕ್ಕೆ ಏರಿ ಬರುತ್ತಿದ್ದಿತು.  ಬೋರ್ವೆಲ್ಲುಗಳು ಹೆಚ್ಚಾದಂತೆ ಅದಕ್ಕೆ ತಕ್ಕನಾಗಿ ಅಂತರ್ಜಲ ಇಳಿಯುತ್ತಾ ಸಾಗಿ ಸಾವಿರ ಆಡಿಗಳ ಆಸುಪಾಸಿನಲ್ಲಿದೆ. ಈಗ ಸಾವಿರ ಅಡಿಗಳಿಂದ ಪಸೆ ಬೇರುಗಳನ್ನು ತಲುಪುವ ಮಟ್ಟಕ್ಕೆ ಏರಿ ಬರಲಾರದು. ಮತ್ತು ಬೇರುಗಳು ಕೂಡಾ ಅಷ್ಟು ಆಳಕ್ಕೆ ಇಳಿದು ಹೋಗಲಾರವು. ಹಾಗಾಗಿ ಇಂದು ಡ್ರಿಪ್ ಮಧ್ಯಂತರ ಪ್ರಕ್ರಿಯೆಯಾಗಿ ಅವಶ್ಯಕವಾಗಿ ಬೇಕಾಗಿರುವುದು.  ಆದರೆ ಈ ವ್ಯವಸ್ಥೆಯೇನಿದ್ದರೂ ತತ್ಕಾಲಿಕ ವ್ಯವಸ್ಥೆ. ಬೋರ್ವೆಲ್ಲುಗಳ ಪರ್ವ ಆರಂಭವಾದಾಗಲೇ ಅಂದಿನ ಸರ್ಕಾರಗಳು ಎಚ್ಚೆತ್ತು ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ನಿರ್ಮಿಸಬೇಕಿದ್ದಿತು. ಆದರೆ ಸರ್ಕಾರಗಳು ಕೂಡ ಈ ತಾತ್ಕಾಲಿಕ ವ್ಯವಸ್ಥೆಯನ್ನೇ ಖಾಯಂ ವ್ಯವಸ್ಥೆ ಎಂದುಕೊಂಡುಬಿಟ್ಟವು. ಈಗ ರೈತನಿಗೆ ಬೋರುಗಳು ಇಲ್ಲಇತ್ತ ನೀರಿನ ಪರ್ಯಾಯವೂ ಇಲ್ಲ.

 

ಈಗಲೂ ಕೂಡಾ ಈ ಕೃಷಿಯ ಭೂಭಾಗಗಳನ್ನು ಅಲ್ಲಿನ ಸಾಂಪ್ರದಾಯಿಕ ಬೆಳೆಗಳಿಗನುಗುಣವಾಗಿ ವಿಂಗಡಿಸಿ ಬೋರ್ವೆಲ್ಲುಗಳನ್ನು ನಿಷೇಧಿಸಿದರೆ ಇಲ್ಲೆಲ್ಲಾ ಮತ್ತೆ ತೆಂಗು ಮಳೆಯಾಧಾರಿತವಾಗಿ ಬೆಳೆಯಬಲ್ಲದು. ಆದರೆ ಸರ್ಕಾರಗಳು ಈಗಲೂ ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.  ಮತ್ತದೇ ಚೆಕ್ ಡ್ಯಾಂಇಂಗುಗುಂಡಿಯಂತಹ ಗುತ್ತಿಗೆ ಕಾಮಗಾರಿಗಳಲ್ಲಿ ಆಸಕ್ತವಾಗಿದೆಯೇ ಹೊರತು ಪ್ರವಾಹ ನಿರ್ವಹಣೆ ಕಂ ನೀರಾವರಿ ಯೋಜನೆಯಂತಹ ಸಮರ್ಪಕ ಯೋಜನೆಗಳನ್ನು ಹಾಕಿಕೊಳ್ಳುತ್ತಿಲ್ಲ.   ಅಂದು ಸರ್ಕಾರ ಸಮರ್ಪಕವಾಗಿ ನೀರಾವರಿಯನ್ನು ನಿರ್ವಹಿಸದಿದ್ದರಿಂದ ರೈತ ಬೋರ್ವೆಲ್ ಪರ್ಯಾಯವನ್ನು ಕಂಡುಕೊಂಡನು.  ಇಂದು ಚೆಕ್ ಡ್ಯಾಂ ಎಂಬ ಮಾಯಾಂಗನೆಯ ಬೆನ್ನು ಬಿದ್ದು ಹಳ್ಳಕೆರೆನದಿಗಳನ್ನು ಮಾಯವಾಗಿಸುತ್ತಿದ್ದಾನೆ. ಭಾರತದಲ್ಲಿನ ನೀರಾವರಿ ವ್ಯವಸ್ಥೆ ಇನ್ನೂ ಒಂದು ಸಮತೋಲಿತ ಮಟ್ಟವನ್ನು ಮುಟ್ಟಿಯೇ ಇಲ್ಲ. ಆ ಮಟ್ಟವನ್ನು ಮುಟ್ಟಿ ನಂತರ ಹಂತ ಹಂತವಾಗಿ ಬೋರ್ವೆಲ್ಲುಗಳನ್ನು ನಿಷೇಧಿಸಿದರೆ ಮತ್ತೊಮ್ಮೆ ಹಸಿರು ಚಿಗುರೊಡೆದೀತು. ಆದರೆ ಅಂತಹ ಇಚ್ಚಾಶಕ್ತಿಯನ್ನು ತೋರುವವರ‍್ಯಾರು?

 

ಒಂದೆಡೆ ಭೋರ್ಗರೆವ ವಿವೇಚನಾರಹಿತ ಪರಿಸರವಾದಮತ್ತೊಂದೆಡೆ ತತ್ಕಾಲದ ಪರಿಹಾರವಾಗಿ ವಿವೇಚನಾರಹಿತ ಬೋರ್ವೆಲ್ ಕೊರೆಸುವಿಕೆಈ ವಿವೇಚನಾರಹಿತ ವಿರೋಧಾಭಾಸಗಳ ಜಟಾಪಟಿಗಳ ಮಧ್ಯೆ ಸಮತೋಲಿತ ಚಿಂತನೆಯ ಸಮಾಧಾನವನ್ನು ಹೇಳುವವರ‍್ಯಾರುಕೇಳುವವರ‍್ಯಾರು?

 

ಅಮೆರಿಕಾ ಬರ್ನಿಂಗ್


ಅಮೆರಿಕಾ ಈಗ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಒಂದೆಡೆ ಕೊರೋನಾ ಮತ್ತದರಿಂದಾದ ಆರ್ಥಿಕ ಹಿಂಜರಿತ, ಈಗ ಪೊಲೀಸ್ ಕಸ್ಟಡಿಯಲ್ಲಿ ಸಾವಿಗೀಡಾದ ಜಾರ್ಜ್ ಫ್ಲಾಯ್ಡ್  ಘಟನೆಯಿಂದ ಭುಗಿಲೆದ್ದ ಪ್ರತಿಭಟನೆ ಲೂಟಿಯ ರೂಪ ಪಡೆದುಕೊಂಡಿದೆ.

ಕಪ್ಪು ವರ್ಣದ ಆಫ್ರಿಕನ್ ಅಮೇರಿಕನ್ನನೊಬ್ಬ ಕಾರಿನಲ್ಲಿ ಕುಳಿತುಕೊಂಡು ಚೆಕ್ ಫೋರ್ಜರಿ ಮಾಡುವ ಪ್ರಯತ್ನದಲ್ಲಿದ್ದಾನೆ ಎಂಬ ಫೋನಿನಲ್ಲಿ ಬಂದ ದೂರಿನನ್ವಯ ವಿಚಾಸರಿಸಲು ತೆರಳಿದ ಮಿನಿಯಾಪೊಲೀಸ್ ಪೊಲೀಸರು ಒಬ್ಬನನ್ನು ಕಸ್ಟಡಿಗೆ ತೆಗೆದುಕೊಂಡು ಅನವಶ್ಯಕ ಶಕ್ತಿ ಬಳಸಿ ಆತನ ಸಾವಿಗೆ ಕಾರಣರಾಗಿದ್ದಾರೆ. ಇದು ಬಿಳಿಯ ಪೊಲೀಸ್ ಅಧಿಕಾರಿಗಳು, ಜಾರ್ಜ್ ಫ್ಲಾಯ್ಡ್ 
ಕಪ್ಪು ವರ್ಣದವನೆಂಬ ಹಿನ್ನೆಲೆಯಲ್ಲಿ ಹೆಚ್ಚಿನ ಶಕ್ತಿ ಬಳಸಿ ಕ್ರೌರ್ಯವನ್ನು ಮೆರೆದ ಜನಾಂಗೀಯ ದ್ವೇಷ ಎಂದು ಸುದ್ದಿಯಾಗಿದೆ.

ಇಲ್ಲಿ ಶಂಕಿತನನ್ನು ಬಂಧಿಸುವ ಪ್ರಕ್ರಿಯೆಯಲ್ಲಿ ಕೋಳ ಹಾಕಿದ್ದ ಮತ್ತು ಯಾವುದೇ ಅಸ್ತ್ರಗಳನ್ನು ಹೊಂದಿಲ್ಲದ ಫ್ಲಾಯ್ಡ್ ನ ಕುತ್ತಿಗೆಯ ಮೇಲೆ ಪೊಲೀಸ್ ಆಫೀಸರ್ ಡೆರಿಕ್ ಶೌವಿನ್ ಮಂಡಿಯೂರಿ ಎಂಟು ನಿಮಿಷ ನಲವತ್ತಾರು ಸೆಕೆಂಡುಗಳ ಕಾಲ ಅದುಮಿ ಹಿಡಿದದ್ದರಿಂದ ಉಸಿರು ಕಟ್ಟಿ ಜಾರ್ಜ್ ಫ್ಲಾಯ್ಡ್ ಸಾವಿಗೀಡಾಗಿದ್ದಾನೆ ಎಂದು ದೂರಲಾಗಿದೆ.

ಈ ರೀತಿಯ ಪೊಲೀಸ್ ಕ್ರೌರ್ಯ ಅದರಲ್ಲೂ ಕಪ್ಪು ಜನಾಂಗದವರ ವಿಚಾರಣೆಯಲ್ಲಿ ಆಗೊಮ್ಮೆ ಈಗೊಮ್ಮೆ ಘಟಿಸುತ್ತಲೇ ಇದೆ. ಅಂತಹ ಘಟನೆಗಳು ನಡೆದಾಗ ಅಮೆರಿಕಾದ ನ್ಯಾಯಾಂಗ ವ್ಯವಸ್ಥೆ ಕ್ಷಿಪ್ರವಾಗಿ ಸ್ವಯಂ ದೂರು ದಾಖಲಿಸಿಕೊಂಡು ಅಂತಹ ಅಧಿಕಾರಿಗಳ ಮತ್ತು ಸಂಬಂಧಿಸಿದ ಪೊಲೀಸ್ ಇಲಾಖೆಯ ವಿರುದ್ಧ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತದೆ. ಹಾಗಿದ್ದೂ ಇಂತಹ ಘಟನೆಗಳು ಒಮ್ಮೊಮ್ಮೆ ನಡೆಯುತ್ತಲೇ ಇರುತ್ತವೆ.

ದೇಶಾದ್ಯಂತ ಈ ರೀತಿಯ ಪ್ರತಿಭಟನೆ ಮತ್ತು ದೊಂಬಿ ನಾ ಕಂಡ ಕಳೆದ ಇಪ್ಪತೈದು ವರ್ಷಗಳಲ್ಲಿ ಇದೇ ಮೊದಲು! ಈ ಮೊದಲೆಲ್ಲಾ ಇಂತಹ ದೊಂಬಿಗಳು ಘಟನೆ ನಡೆದ ಪ್ರದೇಶಕ್ಕೆ ಸೀಮಿತವಾಗಿರುತ್ತಿದ್ದವೇ ಹೊರತು ದೇಶವ್ಯಾಪಿಯಾಗಿರಲಿಲ್ಲ. ಆದರೆ ಈ ಆಸ್ಫೋಟಕ್ಕೆ ಕೊರೋನಾ ಪಿಡುಗಿನಿಂದುಂಟಾಗಿದ್ದ ನಿರುದ್ಯೋಗ, ಮುಚ್ಚಿದ್ದ ಅಂಗಡಿಗಳು, ಲಾಕ್ಡೌನ್,  ಕುಸಿಯುತ್ತಿರುವ ಆರ್ಥಿಕತೆಗಳ ಜೊತೆಗೆ ಒಳಗೇ ಹೊಗೆಯಾಡುತ್ತಿದ್ದ ಆಕ್ರೋಶಕ್ಕೆ ಊದುಗೊಳವೆಯಾಗಿ ಬೆಂಕಿಯಾಗಿಸಿದ್ದು ಈ ಪೊಲೀಸ್ ಆಫೀಸರನ ವಿರುದ್ಧ ದೂರು ದಾಖಲಿಸಿಕೊಳ್ಳುವಲ್ಲಿ ಆದ ವಿಳಂಬ!

ಮಿನಿಯಾಪೊಲೀಸ್ನಲ್ಲಿ ಶಾಂತಿಯುತವಾಗಿ ಆರಂಭವಾದ ಈ ಪ್ರತಿಭಟನೆ ಲೂಟಿಗೆ ತಿರುಗಿದ್ದುದಕ್ಕೆ ಕಾರಣ ಪ್ರತಿಭಟನಾಕಾರರಲ್ಲ! ಸಾಕಷ್ಟು ಜನಾಂಗೀಯ ದ್ವೇಷದ ಹಿನ್ನೆಲೆಯವರು ಮಿನಿಯಾಪೊಲೀಸ್ ಹೊರಗಿನಿಂದ ಬಂದು ಪ್ರತಿಭಟನೆಯಲ್ಲಿ ನುಸುಳಿಕೊಂಡು ಪ್ರತಿಭಟನೆಗೆ ಕೆಟ್ಟ ಹೆಸರನ್ನು ತರಲೆಂದೇ ದೊಂಬಿ ಲೂಟಿಯನ್ನು ಆರಂಭಿಸಿದರು. ಆ ರೇಸಿಸ್ಟ್ ನುಸುಳುಕೋರರು ಹಚ್ಚಿದ ಕಿಡಿ, ಮಾಬ್ ಮೆಂಟಾಲಿಟಿಯಲ್ಲಿ ಭಗಭಗನೆ ಉರಿದು ದೇಶಾದ್ಯಂತ ಹಬ್ಬಿತು.

ಈ ಪೊಲೀಸ್ ಆಫೀಸರ್ ಡೆರಿಕ್ ಶೌವಿನ್ ಹಿಂದೆ ಕೂಡ ಅನವಶ್ಯಕವಾಗಿ ಶಂಕಿತ ಅಪರಾಧಿಗಳ ಮೇಲೆ ಗುಂಡು ಹಾರಿಸಿದ್ದು, ವಿಚಾರಣೆಯ ಸಮಯದಲ್ಲಿ ಬೇರೆ ಜನಾಂಗದ ಶಂಕಿತ ಅಪರಾಧಿಗಳ ಮೇಲೆ ಅವಶ್ಯಕ್ಕಿಂತ ಹೆಚ್ಚು ಬಲ ಪ್ರಯೋಗ ಮಾಡಿದ ಬಗ್ಗೆ ಗುರುತರ ದೂರುಗಳಿದ್ದವು. ಅಂತಹ ಅಧಿಕಾರಿಯನ್ನು ಉಳಿಸಿಕೊಂಡಿದ್ದರಿಂದ ಇಂದು ಇಡೀ ಮಿನಿಯಾಪೊಲೀಸ್ ಪೊಲೀಸ್ ಇಲಾಖೆ ಜನಾಂಗೀಯ ಭೇಧಕ್ಕೆ ಗುರಿಯಾಗಿದೆ. ಹಾಗಾಗಿ ಇವರ ವಿರುದ್ಧದ ಪ್ರತಿಭಟನೆಗೆ ಕೆಟ್ಟ ಹೆಸರು ತರಲೆಂದೇ ರೇಸಿಸ್ಟುಗಳೆಲ್ಲಾ ಹೊರಗಿನಿಂದ ಬಂದು ಪ್ರತಿಭಟನೆಯನ್ನು ದೊಂಬಿ ಮತ್ತು ಲೂಟಿಯಾಗಿಸಿದ್ದಾರೆ ಎನ್ನುವುದು ಸುದ್ದಿಯಾಗಿದೆ.

ಬಹುಪಾಲು ಅಮೆರಿಕಾದ ಪೊಲೀಸರು ಸ್ನೇಹಶೀಲ ವರ್ತನೆ ಮತ್ತು ವೃತ್ತಿಪರರಾಗಿರುತ್ತಾರೆ. ಆದರೆ ಅವರಲ್ಲಿಯೂ ಅಲ್ಲಲ್ಲಿ ಇಂತಹ ಜನಾಂಗೀಯ ದ್ವೇಷಿ ಅಧಿಕಾರಿಗಳು ಇದ್ದೇ ಇದ್ದಾರೆ.  ಏನೇ ಹಿರಿಯಣ್ಣನೆನಿಸಿದರೂ ಏನೂ ಇಲ್ಲದ ಸ್ವರ್ಗ ಸಮಾನ ದೇಶ ಅಮೆರಿಕಾ ಅಲ್ಲ. ಆ ರೀತಿಯ ದೇಶ ಈ ಭೂಮಿಯ ಮೇಲೆ ಎಲ್ಲೂ ಇಲ್ಲ.  ಆದರೆ  ಒಳಿತು ಕೆಡುಕಿನ ಅಂತರದಲ್ಲಿ ಸಾಕಷ್ಟು ವ್ಯತ್ಯಾಸ ಖಂಡಿತವಾಗಿ ಅಮೆರಿಕಾದಲ್ಲಿ ಇದೆ. ಹಾಗಾಗಿಯೇ ಇದನ್ನು ವಲಸಿಗರ ದೇಶ ಎನ್ನುವುದು.

ಈ ಮಿನಿಯಾಪೊಲೀಸ್ ಪೊಲೀಸರ ದೌರ್ಜನ್ಯವನ್ನು ನಾನೂ ಒಮ್ಮೆ ಕಂಡಿದ್ದೇನೆ. ಕಳೆದ ವರ್ಷ ಒಮ್ಮೆ ರೆಸ್ಟೋರೆಂಟ್ ಒಂದರಿಂದ ಊಟ ಮುಗಿಸಿ ನನ್ನ ಹೋಟೆಲ್ ರೂಮಿಗೆ ನಡೆದು ಹೋಗುತ್ತಿದ್ದೆ. ಹತ್ತಿರದಲ್ಲೇ ಇದ್ದುದರಿಂದ ಕಾರ್ ತೆಗೆದುಕೊಂಡು ಹೋಗಿರಲಿಲ್ಲ. ಚಳಿಗಾಲದ ಹಿಮವನ್ನು ಗುಡಿಸಿ ರಸ್ತೆಯ ಬದಿಯಲ್ಲಿ ಗುಡ್ಡೆ ಹಾಕಿದ್ದರು.  ಆಗಲೇ ಬ್ಯಾಟರಿ ಡೆಡ್ ಆದ ನನ್ನ ಫೋನನ್ನು ಜೇಬಿನಲ್ಲಿಟ್ಟುಕೊಳ್ಳುವಾಗ ಅದು ಕೈತಪ್ಪಿ ಹಿಮದ ಗುಡ್ಡೆಯಲ್ಲಿ ಬಿದ್ದುಹೋಯಿತು.

ಅದನ್ನು ಹುಡುಕುತ್ತಿದ್ದಾಗ ಪೊಲೀಸ್ ಕಾರೊಂದು ಬಂದು ಅಧಿಕಾರಿ ನನ್ನನ್ನು ಏನಾಯ್ತು, ಎಲ್ಲಿಂದ ಬರುತ್ತಿರುವುದು, ಎಲ್ಲಿಗೆ ಹೋಗುತ್ತಿರುವುದು ಇತ್ಯಾದಿ ವಿಚಾರಿಸಿದ. ಆಗ ನಾನು ವಿಷಯ ತಿಳಿಸಿದೆ.  ನನಗೆ ಅಬ್ಬಾ ಈ ಪೊಲೀಸ್ ನನ್ನ ಫೋನ್ ಹುಡುಕಿಕೊಡುತ್ತಾನೆಂಬ ಖುಷಿ. ಆದರೆ ಅವನಿಗೆ ಬೇರೆಯದೇ ಇರಾದೆಯಿತ್ತು.

ಡಿನ್ನರ್ ಸಮಯದಲ್ಲಿ ಏನಾದರೂ ಆಲ್ಕೋಹಾಲ್ ಕುಡಿದಿರೇ ಎಂದಾಗ ಹೌದು ಮಾಮೂಲಿಯಾಗಿ ಒಂದು ಗ್ಲಾಸ್ ವೈನಿನೊಂದಿಗೆ  ಊಟ ಮಾಡಿದ್ದು ಎಂದೆ. ಒಂದು ಗ್ಲಾಸ್ ವೈನ್ ಲೀಗಲ್ ಲಿಮಿಟ್ಟಿನೊಳಗಿರುತ್ತದೆ ಮೇಲಾಗಿ ನಾನೇನೂ ಕಾರ್ ಓಡಿಸುತ್ತಿಲ್ಲವಲ್ಲ!

ಆಗ ಆತ "ಸರ್, ನೀವು ಸ್ವಲ್ಪ ಡಿಸೋರಿಯೆಂಟೆಡ್ ಆಗಿದ್ದೀರಿ. ನಿಮ್ಮನ್ನು ಹೀಗೆಯೇ ನಡೆದುಕೊಂಡು ಹೋಗಲು ಬಿಡುವುದು ನಿಮ್ಮ ಆರೋಗ್ಯದ ದೃಷ್ಟಿಯಿಂದ ಆಗದು. ನಿಮ್ಮನ್ನು ಈ ರಾತ್ರಿ ಆಸ್ಪತ್ರೆಯಲ್ಲಿಸಿ ನಾಳೆ ನಿಮ್ಮ ಹೋಟೆಲ್ಲಿಗೆ ಹೋಗಲು ಬಿಡುತ್ತೇವೆ" ಎಂದನು!

ವ್ಹಾರೆವ್ಹಾ, ಏನೂ ಕಾರಣ ಸಿಗದಿದ್ದರೆ ಹೀಗೂ ಒಂದು ಕಾರಣ ಕೊಟ್ಟು ಇಲಾಖೆಗಲ್ಲದಿದ್ದರೆ ಆಸ್ಪತ್ರೆಗಾದರೂ ದಂಡ ಕಕ್ಕಿಸಬಹುದೆಂಬ ಬ್ರಹ್ಮಾಂಡ ಐಡಿಯಾ ಆತನದಾಗಿತ್ತು.

ಯಾವ ಅಪರಾಧದ ಹಿನ್ನೆಲೆಯಿಲ್ಲದ ಕಂದು ಬಣ್ಣದ ನನ್ನನ್ನು ಆತ ಏನೂ ಮಾಡದಾಗಿದ್ದರೂ ಈ ರೀತಿ ಕೂಡ ಮಸಲತ್ತು ಮಾಡಬಹುದೆಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ.  ಆಸ್ಪತ್ರೆಯಲ್ಲಿ ಡಾಕ್ಟರನೂ ನಸುನಗುತ್ತ ಕೆಲವು ಟೆಸ್ಟುಗಳನ್ನು ಮಾಡುವೆ. ಪೊಲೀಸರು ಹೇಳಿದಂತೆ ಈ ರಾತ್ರಿ ಇಲ್ಲಿದ್ದು ಬೆಳಿಗ್ಗೆ ಹೋಗಿರೆಂದನು. ಒಟ್ಟಿನಲ್ಲಿ ಪೊಲೀಸ್ ಇಲಾಖೆಗೆ ದಂಡ ಹಾಕಲಾಗದಿದ್ದರೂ ನನ್ನ ಆರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ದಂಡ ಕಟ್ಟಿಸಿದ್ದರು ಮಿನಿಯಾಪೊಲೀಸ್ ಪೊಲೀಸರು!

ಅಂತಹ ಒಂದು ಸಾಮಾನ್ಯ ಘಟನೆಯನ್ನು ಉಪಕಾರದ ರೂಪದಲ್ಲಿ ಸುಖಾಸುಮ್ಮನೆ ಆಸ್ಪತ್ರೆಯ ಬಿಲ್ (ದಂಡ) ಕಟ್ಟಿಸುವಷ್ಟು ಪರಿಣಿತ ಪೊಲೀಸರನ್ನು ನಾನೆಂದೂ ಕಂಡಿರಲಿಲ್ಲ. ಅದು ಮಿನಿಯಾಪೊಲೀಸ್ ಪೊಲೀಸರು! ನಾಜೂಕಿನ ನಾಗರೀಕ ಸಮಾಜದಲ್ಲಿ ಜನಾಂಗೀಯ ಶೋಷಣೆ ಹೀಗೂ ನಡೆಯುತ್ತದೆ. ಇದು ಮುಂದುವರಿದ ದೇಶಗಳ ಜನಾಂಗೀಯ ಭೇಧದ ಒಂದು ಸೂಕ್ಷ್ಮ ರೂಪ ಕೂಡ.

ಇರಲಿ, ಕೊರೋನಾ, ಟ್ರಂಪ್ ಟ್ವೀಟ್, ಚೈನಾ, ಹೈಡ್ರಾಕ್ಸಿಕ್ಲೋರೋಕ್ವಿನಿನಲ್ಲಿ ಮುಳುಗಿಹೋಗಿದ್ದ ವಿಶ್ವಕ್ಕೆ ಈ ರೀತಿಯ ಜನಾಂಗೀಯ ದ್ವೇಷ, ಅಮೆರಿಕಾದಲ್ಲಿ ಲೂಟಿ ಎಂದು ಮೂ(ಹೀ)ಗಳೆಯಲು ಅಮೆರಿಕಾದ ಅಧ್ಯಕ್ಷ ಟ್ರಂಪ್ ಅವರೇ ಕಾರಣ. ಎಲ್ಲವೂ ನನ್ನಿಂದಲೇ ಎನ್ನುವ ಟ್ರಂಪ್ ಅವರೇ ಈ ಜನಾಂಗೀಯ ಶೋಷಣೆಗೆ ಕೂಡ ಹೊಣೆಗಾರರು. ಏಕೆಂದರೆ ಅವರು ಅಧಿಕಾರಕ್ಕೆ ಬಂದ ನಂತರ ಈ ಜನಾಂಗಿಯ ಅವಹೇಳನ, ಶೋಷಣೆ ಹೆಚ್ಚಾಗಿದೆ. ಆ ಭಾವನೆಗಳನ್ನವರು ತಮ್ಮ ಟ್ವೀಟುಗಳ ಮೂಲಕ ಮೀಟುತ್ತಲೇ ಬಂದಿದ್ದಾರೆ. ಮೇಲಾಗಿ ಇಂತಹ ಘಟನೆಯನ್ನು ಸರಿಯಾಗಿ ನಿಭಾಯಿಸಲೂ ಆಗದಷ್ಟು ಅಶಕ್ತ ಟ್ರಂಪ್ ಎಂಬುದೇ ಜನರ ಆಕ್ರೋಶದ ಪ್ರತಿಭಟನೆಗೆ ಕಾರಣ. ಇಂತಹ ಅಶಕ್ತ, ಕ್ಷುಲ್ಲಕ, ಯಕಶ್ಚಿತನನ್ನು "ಅಬ್ ಕಿ ಬಾರ್ ಟ್ರಂಪ್ ಸರ್ಕಾರ್' ಎಂದು ಮೆರೆಸಿದ್ದು ಸಮರ್ಥ, ದೂರದರ್ಶಿ ಎಂದೆನಿಸಿದ ಮೋದಿಯವರು ತಾವೇ ತಾವಾಗಿ ಹಚ್ಚಿಕೊಂಡ ಬಹುದೊಡ್ಡ ಕಪ್ಪುಚುಕ್ಕೆ.

ಇನ್ನು ಭಾರತದ ಮಾಧ್ಯಮಗಳಿಂದ ಪ್ರಭಾವಿತರಾಗಿ ಬಲದ ಭಕ್ತರು ಅಮೆರಿಕಾದ ಪೊಲೀಸರ ಸ್ಟನ್ ಗನ್ ಅನ್ನು ಆರಿಂಚಿನ ಲಾಠಿ ಎಂದುಕೊಂಡು ನಮ್ಮ ಫೈಬರ್ ಲಾಠಿ ಮತ್ತು ಯೋಗಿ ಆದಿತ್ಯನಾಥರನ್ನು ಕಳಿಸಿದರೆ ಅಮೆರಿಕಾದ ಗಲಭೆಕೋರರ ಹುಟ್ಟಡಗಿಸುತ್ತಾರೆ ಎಂತಲೂ, ಇತ್ತ ಎಡ ವಿಭಕ್ತರು ವರ್ಣಭೇದ ಮತ್ತು ಸವರ್ಣೀಯ ಒಂದೇ ಮನಸ್ಥಿತಿಯ ಚಿಂತನೆ. ಹಾಗಾಗಿ ಟ್ರಂಪ್-ಮೋದಿ ಒಂದೇ ಎಂತಲೂ ವಿಷಯದ ಆಳಕ್ಕಿಳಿಯದೆ ಸಂತೆಗೆ ಮೂರು ಮೊಳ ಎಂಬಂತೆ
ತಮ್ಮ ತಮ್ಮ ಅನುಭೂತಿಗೆ ಸುದ್ದಿಯನ್ನು ದಕ್ಕಿಸಿಕೊಂಡು ನಮ್ಮಂತಹ ಸತ್ಯಪಂಥಿಗಳ ಎಳೆದೆಳೆದು ನಮ್ಮನ್ನು ಕೆಡವಿ ನಮ್ಮ ಮೇಲೆ ಅವರ ಬಾವುಟ ಹಾರಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಆ ಪ್ರಯತ್ನದಲ್ಲಿ ಕೆಳಗಿರುವ ನಮಗೆ ಅನತಿ ಎತ್ತರದಲ್ಲಿರುವ ಅವರ ಒಳಉಡುಪಿಲ್ಲದ ಬೆತ್ತಲೆತನ ಕಾಣುತ್ತಿದೆಯೆಂದು ಹೇಳುವುದಾದರೂ ಹೇಗೆ! ಹೇಳಿದರೂ ಬೆತ್ತಲೆರಾಜನ ದಿರಿಸು ತೊಟ್ಟವರು ಒಪ್ಪಬೇಕಲ್ಲವೇ? ಮುಂದುವರಿದ ದೇಶಗಳ ಜನಾಂಗೀಯ ಭೇಧದ ಸೂಕ್ಷ್ಮಗಳನ್ನು ಅವರಷ್ಟು ಯಕಶ್ಚಿತವಾಗಿ ಸಮೀಕರಿಸಿ ಹೇಳಲಾಗದು.

ಇನ್ನು ಮೊಮ್ಮಕ್ಕಳ ಹೆರಿಗೆ ಮಾಡಿಸಲೊ, ಪ್ರವಾಸಕ್ಕೆ ಬಂದವರೊ ತಕ್ಷಣಕ್ಕೆ ಷರಾ ಬರೆದಂತೆ ಅಮೆರಿಕಾದಲ್ಲೂ ಜಾತೀಯತೆ ಇದೆ, ಅಲ್ಲಿಯೂ ಕರಿ, ಬಿಳಿ, ಕಂದು ಎಂಬ ಭೇಧ ನಮ್ಮಲ್ಲಿನ ಜಾತೀಯತೆ, ಬಡತನ, ಇತ್ಯಾದಿ ದಾರಿದ್ರ್ಯತೆಯನ್ನು ಮೀರಿಸುವಂತಿದೆ ಎಂದು ಬರೆದೆಸೆಯುತ್ತಾರೆ. ಅವರುಗಳು ಫ್ಲಾಯ್ಡ್ ದುರ್ಘಟನೆಯ ಪ್ರತಿಭಟನೆಯಲ್ಲಿ ಬಿಳಿ, ಕರಿ, ಕಂದಲ್ಲದೆ ಇಡೀ ಅಮೆರಿಕಾ ತೊಡಗಿರುವುದನ್ನು ಕಾಣಲು ಸಾಧ್ಯವೇ ಇಲ್ಲ.  USA ಎಂಬುದರ ಮೊದಲ ಪದವೇ ಯುನೈಟೆಡ್! ಅಮೆರಿಕಾದ ಯಾವುದೇ ದುರ್ಘಟನೆಯ ನಂತರ ಆ ದೇಶ ಹೇಗೆ ಒಗ್ಗೂಡಿ ಕೆಲಸ ಮಾಡುತ್ತದೆ ಎಂಬ ನಿದರ್ಶನಕ್ಕೆ ಆ ದೇಶದ ಇತ್ತೀಚಿನ ಇತಿಹಾಸವನ್ನು ಕೊಂಚ ಅಗೆದು ನೋಡುವ ತಾಳ್ಮೆಯನ್ನು ಈ ಬರಹಗಾರರು ತೋರಬೇಕು.

ಜನಾಂಗೀಯ ಭೇಧದ ಇಂತಹ ದುರ್ಘಟನೆಗಳಲ್ಲಿ ಪಾಲ್ಗೊಂಡವರಿಗೆ ಆದ ಕಾನೂನು ಕ್ರಮ, ಶಿಕ್ಷೆಗಳ ಅರಿವೇ ಅವರಿಗಿರುವುದಿಲ್ಲ. ಚಳಿಗಾಲದ ಹಿಮ, ಅದನ್ನು ಕರಗಿಸಲು ಹಾಕುವ ಉಪ್ಪು ಎಂತಹ ರಸ್ತೆಯಲ್ಲೂ ಗುಂಡಿಗಳನ್ನು ಮಾಡುತ್ತದೆ. ಆ ಗುಂಡಿಗಳನ್ನು ಚಳಿಗಾಲ ಮುಗಿದೊಡನೆಯೇ ಮುಚ್ಚಲಾಗುತ್ತದೆ. ಹಾಗೆಯೇ ಆನ್ಇನ್ಕಾರ್ಪೊರೇಟೆಡ್ ಏರಿಯಾದಲ್ಲಿರುವ ರಸ್ತೆಗಳನ್ನು ತೆರಿಗೆ ಕಟ್ಟದ ಅಲ್ಲಿನ ನಿವಾಸಿಗಳೇ ಸರಿಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಆಳ ಅರಿಯದ ಚಳಿಗಾಲದಲ್ಲಿ ಬಂದ ಪ್ರವಾಸಿ ಅಂಕಣಕಾರರು ಅಮೆರಿಕಾದಲ್ಲೂ ನಮ್ಮಲ್ಲಿಯಂತೆಯೇ ರಸ್ತೆ ಗುಂಡಿಗಳಿವೆ ಎಂದು  ಷರಾ ಬರೆದುಹಾಕುತ್ತಾರೆ. ಒಂದು ಕಾಫಿಗೆ ಮೂರು ಡಾಲರ್ ಅಂದರೆ ಇನ್ನೂರು ರೂಪಾಯಿಗಳು ಎನ್ನುವ ಅವರು ಕೊಂಚ ಆಳಕ್ಕಿಳಿದು ಐದು ಸಾವಿರ ಡಾಲರ್ ಸಂಬಳ ಬರುವವನಿಗೆ ಮೂರು ಡಾಲರ್ ಕಾಫಿ ಕೊಳ್ಳುವುದು ಕಷ್ಟವೇ ಅಥವಾ ಐದು ಸಾವಿರ ರೂಪಾಯಿ ಸಂಬಳ ಬರುವವನಿಗೆ ಮೂರು ರೂಪಾಯಿಗೆ ಕಾಫಿ ಸಿಗುತ್ತದೆಯೇ ಎಂದು ವಾಸ್ತವದ ಹಿನ್ನೆಲೆಯಲ್ಲಿ ಎಂದೂ ಯೋಚಿಸುವುದಿಲ್ಲ. ಇಂತಹವರೊಂದಿಗೂ ಸತ್ಯಪಂಥಿಗಳು ಜಂಜಾಡಬೇಕಿದೆ.

ಮುಂದುವರಿದ ರಾಷ್ಟ್ರಗಳ ನಾಗರಿಕತೆ ಒಂದು ಸಂಕೀರ್ಣ ವ್ಯವಸ್ಥೆ. ಅದು ಹೀಗೆ ಎಂದು ಒಂದೆರಡು ಪ್ರವಾಸಗಳಲ್ಲಿ ಷರಾ ಬರೆಯಲಾಗದು.

ಇರಲಿ, ವಿದೇಶಿ ಆಕ್ರಮಣಕ್ಕೆ ಸದ್ದಾಂ ಹುಸೇನ್ ಬಿಲದಲ್ಲಿ ಅಡಗಿದ್ದರ ಅಣಕು ಪ್ರದರ್ಶನದಂತೆ ಟ್ರಂಪ್, ಶ್ವೇತ ಭವನಕ್ಕೆ ತಮ್ಮದೇ ಜನ ಲಗ್ಗೆಯಿಟ್ಟಾಗ ಬಂಕರ್ ಎಂಬೋ ಬಿಲದಲ್ಲಿ ಸುಭದ್ರವಾಗಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶ್ವೇತ ಭವನದ ಮೇಲೆ ಲಗ್ಗೆಯಿಟ್ಟ ಪ್ರತಿಭಟನಾಕಾರರ ಮೇಲೆ ಯಾವುದೇ ಶೂಟ್ ಔಟ್ ಯಾ ಗೋಲಿಬಾರ್ ಆಗಿಲ್ಲ. ಹಾಗೆಯೇ ಈ ಪ್ರತಿಭಟನೆಯಲ್ಲಾಗಲಿ ದೊಂಬಿಯಲ್ಲಾಗಲಿ ಯಾವುದೇ ಸಾವು ಸಂಭವಿಸಿಲ್ಲ. ಅಷ್ಟರಮಟ್ಟಿಗೆ ಅಮೆರಿಕಾ ಪ್ರಬುದ್ಧ ಪ್ರಜ್ಞೆಯನ್ನು ಹೊಂದಿದೆ.

ಒಟ್ಟಿನಲ್ಲಿ ಆಗಿದ್ದೇನೆಂದರೆ ಒಂದೆಡೆ ಶಾಂತಿಯಿಂದ ಪ್ರತಿಭಟನೆಯಲ್ಲಿ ತೊಡಗಿರುವ ಪ್ರತಿಭಟನೆಕಾರರು, ಅವರ ಹೆಸರಿನಲ್ಲಿ ಗಲಭೆಕೋರರ ಗುಂಪೊಂದು ಹಿಂಸಾತ್ಮಕ ಪ್ರತಿಭಟನೆಯ ಬತ್ತಿ ಇಟ್ಟು ಕಿಡಿ ಹಚ್ಚಿ Mob mentality ಅನ್ನು ಪ್ರಚೋದಿಸಿದರೆ ಮುಗಿಯಿತು! ಮುಂದಾಗುವುದೇ ಗಲಭೆ, ದೊಂಬಿ, ಲೂಟಿ.

ಅದರಲ್ಲೂ ಜನಾಂಗ, ಧರ್ಮದ ಲೇಪವಿದ್ದರೆ ಅದು ವಿಶ್ವವ್ಯಾಪಿ.

ಗುಂಪಿನಲ್ಲಿ ಗೋವಿಂದಕ್ಕೆ ಯಾವ ದೇಶಗಳೂ ಹೊರತಲ್ಲ.

ಹಾಂ, ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ಇರುವುದಿಲ್ಲ! ಏಕೆಂದರೆ ಅವರ ಖ್ಯಾತ ಟಿವಿ ರಿಯಾಲಿಟಿ ಶೋ ಆಗಿದ್ದ "ಅಪ್ರೆಂಟಿಸ್" ಶೋದಲ್ಲಿ ಅವರು ಹೇಳುವ "ಯೂ ಆರ್ ಫೈಯರ್ಡ್" ಎಂಬ ಮಾತನ್ನು ಅವರಿಗೆ ಓಟು ಹಾಕುವವರು ಹೇಳಲಿದ್ದಾರೆ.