ಮುಳುಗಲಿದೆ ಪ್ರಪಂಚ! ಆದರೂ ಇಡಿ ವಿಶ್ವಾಸ.

ಇಂಥದೊಂದು ದಿನ ವಿಶ್ವ ಮುಳುಗಲಿದೆ ಎಂದು ನಾಸ್ಟರ್ ಡಾಮಸ್ ಹೇಳಿರುವನೆಂದೋ; ವಿಜ್ಞಾನಿಗಳು ಮುಂದಿನ ಇಷ್ಟು ವರ್ಷಗಳಲ್ಲಿ ಮೀಟಿವೋರ್ ಒಂದು ಭೂಮಿಯನ್ನು ಅಪ್ಪಳಿಸಿ ವಿಶ್ವನಾಶವಾಗುತ್ತದೆಂದೋ ಆಗಾಗ್ಗೆ ಸುದ್ದಿಮಾಧ್ಯಮಗಳಲ್ಲಿ ಕೇಳಿಯೋ ಇಲ್ಲಾ ಓದಿಯೋ ಇದ್ದೀರಷ್ಟೆ.

ಹೆಚ್ಚಾಗುತ್ತಿರುವ ಮಾನವ ನಿರ್ಮಿತ ಆತಂಕವಾದದ ನ್ಯೂಕ್ಲಿಯರ್ ಬಾಂಬ್ ದಾಳಿಯಿಂದಾಗಲಿ, ಯುದ್ಧಗಳಿಂದಾಗಲಿ, ಹವಾಮಾನ ವೈಪರೀತ್ಯಗಳಿಂದಾಗಲಿ, ನೈಸರ್ಗಿಕ ವಿಕೋಪದಿಂದಾಗಲಿ, ಇಂತಹ ಒಂದು ವಿಶ್ವನಾಶದ ದಿನ ಘಟಿಸಿದರೆ, ಅನಾದಿ ಕಾಲದಿಂದಲೂ ಬೆಳೆದುಬಂದಿರುವ ನಾಗರೀಕತೆಯ ಪರಂಪರೆಯನ್ನು ಹೇಗೆ ಕಾಪಾಡಿ ಇಡುವುದು?

ಭಾರೀ ಮಳೆಯಾಗಿ ಇಡೀ ಭೂಮಂಡಲ ನೀರಿನಿಂದಾವೃತಗೊಳ್ಳುವುದೆಂಬ ಭವಿಷ್ಯನುಡಿಯನ್ನು ನಂಬಿ, ಆ ಮಳೆಯಿಂದ ಬಚಾವಾಗಲು ಒಂದು ಅದ್ಭುತ ಕಮಾನು ದೋಣಿಯನ್ನು ಕಟ್ಟಿ, ಸಕಲ ಜೀವಜಂತುಗಳ ತಳಿಗಳನ್ನು ತನ್ನ ಕಮಾನು ದೋಣಿಯಲ್ಲಿ ನೆಲೆಗೊಳಿಸಿ ಪ್ರಪಂಚದ ಜೀವಜಂತುಗಳನ್ನು ಆ ಮಹಾಮಳೆಯಿಂದ ಕಾಪಾಡಿದ ನೋಹನೆಂಬುವವನ ಕಾಲ್ಪನಿಕ ಕತೆಯಂತೆ ಇತ್ತೀಚೆಗೆ ಒಂದು ನೂತನ ನೋಹನ ಕಮಾನು ದೋಣಿ ಸಿದ್ಧಗೊಂಡಿದೆ. ಆದರೆ ಅದರಲ್ಲಿ ಸಕಲ ಜೀವ ಜಂತುಗಳಿಗೆ ಜಾಗವಿಲ್ಲ. ಇದು ಕೇವಲ ಕೃಷಿಸಂಬಂಧೀ ಆಹಾರ ಬೆಳೆಗಳ ತಳಿಗಳನ್ನು ಶೇಖರಿಸಿಡಸಲು, ಆ ಒಂದು ದುರಂತದಿನದಿಂದ ಆಹಾರ ಬೆಳೆಯ ಬೀಜಗಳನ್ನು ಸಂರಕ್ಷಿಸಲು ಸೃಷ್ಟಿಯಾದ ವಿಶ್ವದ ಬಹುದೊಡ್ಡ ಬೀಜದ ಬ್ಯಾಂಕ್!

ಪ್ರಪಂಚದಾದ್ಯಂತ ನಿತ್ಯವೂ ಅದೆಷ್ಟೋ ಪಾರಂಪಾರಿಕ ಬೆಳೆಗಳು ಕಣ್ಮರೆಯಾಗುತ್ತಿವೆ. ಎಪ್ಪತ್ತರ ದಶಕದಲ್ಲಿ ಅಮೇರಿಕವೊಂದರಲ್ಲೇ ಸುಮಾರು ಏಳು ಸಾವಿರಕ್ಕೂ ಹೆಚ್ಚಿನ ಸೇಬಿನ ತಳಿಗಳಿದ್ದುದು ಇಂದು ಕೇವಲ ಒಂದೂವರೆ ಸಾವಿರಕ್ಕೆ ಕುಸಿದಿದೆ. ಇದೊಂದು ಹಣ್ಣಿನ ತಳಿಗಳಲ್ಲೇ ಇಷ್ಟೊಂದು ಬಗೆಗಳು ಕಣ್ಮರೆಯಾಗಿರುವವೆಂದರೆ ಇನ್ನಿತರೆ ಬೆಳೆಗಳ ಕಣ್ಮರೆಯಾದ ತಳಿಗಳ ಸಂಖ್ಯೆಯನ್ನು ನೀವೇ ಊಹಿಸಿಕೊಳ್ಳಿ.

ಈ ಅಮೂಲ್ಯ ಬೇಸಾಯ ಬೆಳೆಗಳ ತಳಿಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಬೀಜ ನಿಗಮವು (ಗ್ಲೋಬಲ್ ಕ್ರಾಪ್ ಡೈವರ್ಸಿಟಿ ಟ್ರಸ್ಟ್) ಒಂದು ವಿಸ್ತಾರವಾದ, ಶಕ್ತಿಶಾಲಿಯಾದ, ಯಾವುದೇ ಶಕ್ತಿಗಳೂ ಅಲ್ಲಾಡಿಸದಂತಹ ಒಂದು ಸುಭದ್ರ ಬೀಜಗಳ ಕೋಠಿಯನ್ನು ಕಟ್ಟುವ ಕನಸು ಕಂಡಿತು. ಆ ಕನಸಿಗೆ ಪೂರಕವಾಗಿ ನಾರ್ವೆ ಸರ್ಕಾರ ಮುಂದಾಗಿ ತನ್ನ ಅತ್ಯಂತ ಕಠಿಣವಾದ ದುರ್ಗಮ ಹಿಮಚ್ಚಾದಿತ ಆರ್ಕ್ಟಿಕ್ ಪರ್ವತ ಪ್ರದೇಶದ ಸ್ವಲ್ಬಾರ್ಡ್ ನಲ್ಲೊಂದು ಬೃಹತ್ ಕೋಠಿಯೊಂದನ್ನು ಕಟ್ಟಿಸಿಕೊಡಲು ಮುಂದಾದರೆ, ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ಈ ಕಟ್ಟಡದ ಎಲ್ಲಾ ಸರಕು ಸಾಗಣೆ ವೆಚ್ಚವನ್ನು ವಹಿಸಿಕೊಂಡರು.

ಬೆಟ್ಟದ ಗರ್ಭದಲ್ಲಿರುವ ಉಗ್ರಾಣದ ಒಟ್ಟು ನಕ್ಷೆ.

ಈ ಎಲ್ಲರ ಪರಿಶ್ರಮದ ಫಲವಾಗಿ ಈ ಅತ್ಯದ್ಭುತ ಬೀಜದ ಬ್ಯಾಂಕ್ ಕಳೆದ ಫೆಬ್ರುವರಿ ೨೬ ರಂದು ಸದ್ದಿಲ್ಲದೆ ಕಾರ್ಯಾರಂಭಗೊಳಿಸಿತು. ಈಗಾಗಲೇ ಅಮೇರಿಕಾದ ಎಲ್ಲಾ ಸೇಬಿನ ತಳಿಗಳ ಬೀಜಗಳಿಂದ ಚೀನಾದ ಬಹುತೇಕ ಭತ್ತದ ತಳಿಗಳವರೆಗೆ ಆಹಾರ ಬೆಳೆಯ ತಳಿಗಳ ಬೀಜಗಳನ್ನು ಶೇಖರಿಸಿರುವ ಈ ಸಂಸ್ಥೆ, ಮಿಲಿಯನ್ನುಗಟ್ಟಲೆಯ ವಿವಿಧ ತಳಿಗಳನ್ನು ಶೇಖರಿಸಿ ಸಂರಕ್ಷಿಸಿಡುವ ಗುರಿಯನ್ನು ಹೊಂದಿದೆ. ಮುಂದೊಂದು ದಿನ ಅಂತಹ ಅವಗಢದ ದಿನವೊಂದು ಬಂದರೆ ಕನಿಷ್ಟ ಮುಂದಿನ ಪೀಳಿಗೆಗೆ ಆಹಾರ ಬೆಳೆಗಳ ಬೀಜ ಭಾಗ್ಯವನ್ನಾದರೂ ಉಳಿಸಿ ಹೋಗೋಣ ಎಂಬುದು ಈ ಸಂಸ್ಥೆಯ ಆಶಯ. ನೀವುಗಳು ಈ ಬೀಜಸಂಸ್ಥೆಯ ಉದ್ದೇಶಕ್ಕೆ ಕೈಜೋಡಿಸುವ ಆಸ್ಥೆಯಿದ್ದರೆ ನಿಮ್ಮಲ್ಲಿರುವ ಆಹಾರ ಬೆಳೆಯ ಬೀಜಗಳನ್ನು ನಿಮ್ಮ ಸ್ಥಳೀಯ ಬೀಜಬ್ಯಾಂಕ್ ಮುಖಾಂತರ ಈ ಸುಭದ್ರ ಕೋಠಿಗೆ ಕಳುಹಿಸಬೇಕು. ನೀವು ಕಳಿಸುವ ಬೀಜಗಳನ್ನು ನಿಮ್ಮ ಸಂಸ್ಥೆಗಾಗಿ ಪುಕ್ಕಟೆಯಾಗಿ ಈ ಸಂಸ್ಥೆಯು ಸಂರಕ್ಷಿಸಿಡುತ್ತದೆ.

ನಾರ್ಥ್ ಪೋಲ್ ನಿಂದ ಕೇವಲ ಒಂದು ಸಾವಿರ ಕಿಲೋಮೀಟರ್ ದೂರದಲ್ಲಿರುವ, ಹಿಮಕರಡಿಗಳು ಕಾವಲು ಕಾಯುವ, ಯಾವುದೇ ರಸ್ತೆಗಳಿಲ್ಲದೆ ಕೇವಲ ಸ್ನೊಮೊಬೈಲ್ ನಲ್ಲಿ ಅಲ್ಲಿಗೆ ಸೇರಬೇಕಾದ್ದರಿಂದ ಇದೊಂದು ಸುಭದ್ರ ಸ್ಥಾನವಾಗಿದೆ. ಗ್ಲೋಬಲ್ ವಾರ್ಮಿಂಗ್ ಪರಿಣಾಮದಿಂದ ಮುಂದೆದಾದರೂ ಹಿಮವೆಲ್ಲಾ ಕರಗಿ ಸಾಗರವಾದರೂ ಈ ಕೋಠಿಯನ್ನು ಮುಳುಗಿಸಲಾಗದಂತೆ ಇದನ್ನು ಕಟ್ಟಲಾಗಿದೆ!

ಉಗ್ರಾಣದ ದ್ವಾರ.

ಇದೊಂದು ಪರಿಸರ ಕುರಿತಾದ, ನಮ್ಮ ನಿಜ ಮಣ್ಣಿನ ಮಕ್ಕಳ ಕುರಿತಾದ ವಿಷಯವಾದ್ದರಿಂದ ಇದರ ಕುರಿತು ಮಾಹಿತಿ ಬರಹ ಬರೆಯಬೇಕೆನಿಸಿತು, ಬರೆದಿರುವೆ.

ಇರಲಿ, ನಮ್ಮಲ್ಲೂ ಸಾಕಷ್ಟು ರೈತರುಗಳು, ಸಂಘ/ಸಂಸ್ಥೆಗಳು ಆಹಾರ ಬೆಳೆಗಳ ಬೀಜಗಳನ್ನು ಸಂರಕ್ಷಿಸುತ್ತ, ಅವುಗಳನ್ನು ಹಂಚಿಕೊಳ್ಳುತ್ತ ಕೊಂಚವಾದರೂ ಆ ನಿಟ್ಟಿನಲ್ಲಿ ನಡೆಯುತ್ತಿದ್ದಾರೆ. ಆದರೆ ಅವರಿಗೆಲ್ಲಾ ನಮ್ಮ ಬಡವರ ತಾಯಿ, ಮಣ್ಣಿನ ಮಗ ಇನ್ನು ಏನೇನೋ ಬಿರುದು ಹೊತ್ತು ಬಿನ್ನಾಣ ಮೆರೆದ ನಾಯಕ/ನಾಯಕಿಯರುಗಳ ಘನ ಸರ್ಕಾರದಿಂದ ಯಾವ ಪ್ರೋತ್ಸಾಹ ಸಿಕ್ಕಿದೆಯೋ ಗೊತ್ತಿಲ್ಲ. ಸಿಕ್ಕಿದ್ದರೆ ನಮ್ಮಲ್ಲಿ ಈ ಪಾಟಿ ರೈತರುಗಳು ಪರಿಹಾರದಾಸೆಗೆ ನೇಣು ಹಾಕಿಕೊಳ್ಳುತ್ತಿರುವ ಪರಿಸ್ಥಿತಿ ಬರುತ್ತಿರಲಿಲ್ಲವೆಂದೇ ಅಂದುಕೊಳ್ಳುತ್ತೇನೆ. ಇನ್ನು ಅಳಿದುಳಿದ ರೈತರುಗಳು ಮಣ್ಣಿನ ಮೊಮ್ಮಗ, ಮರಿಮಗ, ಬಡವರ ತಾಯಿಯ ಬೆರೆಕೆ ಮೊಮ್ಮಕ್ಕಳ ಅಧಿಕಾರದಲ್ಲಿ ನೇಣು ಹಾಕಿಕೊಳ್ಳುವ ಮುನ್ನ ತಮ್ಮಲ್ಲಿರುವ ಅಸಲಿ ಬೀಜಸಿರಿಯನ್ನು ಈ ಕೋಠಿಗೆ ಕಳುಹಿಸಿ, ಆ ’ಅವಗಢದ ದಿನ’ ದ ನಂತರದಲ್ಲಿ ಬರುವ ನೂತನ ಪೀಳಿಗೆ, ಈ ಯಾವ ಹೊಲಸು ನಾಯಕರುಗಳಿಲ್ಲದ ಸ್ವಚ್ಚ ವಾತಾವರಣದಲ್ಲಿ ಸುಭೀಕ್ಷ ಜೀವನವನ್ನು ಕಂಡು ಕೊಳ್ಳಲು ಸಹಕರಿಸಬೇಕೇನೋ!

ಅಂದ ಹಾಗೆ ಈ ಬೀಜದ ಕೋಠಿ ವಂಶವಾಹೀ ಬದಲಿಸಿದ ಬೀಜಗಳನ್ನು ಶೇಖರಿಸಿಡುವುದಿಲ್ಲ. ನಿಮ್ಮಲ್ಲಿರುವ ಅಸಲೀ ತಳಿಗಳ ಬೀಜಗಳನ್ನು ಮಾತ್ರ ಕಳುಹಿಸಬೇಕು!

ಒಂದೆಡೆ ಸಾಂಪ್ರದಾಯಿಕ ರೈತರೆಲ್ಲಾ ರೈತಾಪಿತನದಿಂದ ಹೊರಹೋಗುವ ಮಾರ್ಗಗಳನ್ನು ಹುಡುಕುತ್ತಿದ್ದರೆ, ಇನ್ನೊಂದು ವರ್ಗದ ಜನತೆ ರೈತಾಪಿಗಳಾಗುವತ್ತ ಹಪಹಪಿಸುತ್ತಿದ್ದಾರೆ. ಅದೇಕೋ ಈ ಕೈ ಕೆಸರಾಗುವ, ಎಷ್ಟೇ ಸುರಿದರೂ ಇನ್ನಾವ ಉದ್ಯಮಗಳಷ್ಟು ಲಾಭವಿರದ, ಹಾಕಿದಷ್ಟೂ ಶ್ರಮವನ್ನು ಬೇಡುತ್ತಲೇ ಇರುವ ಈ ಬೇಸಾಯದ ಬೇನೆ ಬಹು ಜನಗಳಿಗೆ ತಗುಲಿದೆ, ತಗಲುತ್ತಿದೆ!

ಅದೇನು ಈ ಮಣ್ಣಿನ ಸೆಳೆತವೋ ನಾ ಕಾಣೆ! ರಾಷ್ಟ್ರಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಕಾಡು ಸೇರಿ ಕೃಷಿಕರಾಗಿದ್ದು; ಅಬ್ದುಲ್ ಕಲಾಂ ಅವರು ಎರಡನೇ ಹಸಿರು ಕ್ರಾಂತಿಯೇ ಭಾರತಕ್ಕೆ ಅನಿವಾರ್ಯವೆಂಬುದು; ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ ಕೂಡ ರ್‍ಯಾಂಚ್ (ಜಮೀನು, ಮನೆ, ಕೊಟ್ಟಿಗೆ ಎಲ್ಲಾ ಒಂದೆಡೆಯಿರುವುದು) ಹೊಂದಿರುವುದು; ದಾನವಾಗಿ ಕೊಟ್ಟಿದ್ದ ಜಮೀನನ್ನು, ನಾನು ಬಹುವಾಗಿ ಮೆಚ್ಚುವ ಸೂಪರ್ ಸ್ಟಾರ್ ಅಮಿತಾಭ್ ರವರೂ ವಾಪಸ್ ಕೇಳಿದ್ದುದು (ಬಹುಶಃ ಕೆಲ ಪುಂಡ ಮರಾಠಿಗರ ಕಿರುಕುಳದಿಂದ ಬೇಸತ್ತಿರಬೇಕು!); ಚರಂಡಿ ಕಾಂಟ್ರಾಕ್ಟರ್ ಹರದನಹಳ್ಳಿ ಗೌಡರು ’ಮಣ್ಣಿನ ಮಗ’ ಎನಿಸಿಕೊಳ್ಳಲು ಹಪಹಪಿಸುವುದು; ಇದೆಲ್ಲವನ್ನು ನೋಡಿದರೆ ಇದೊಂದು ತೀವ್ರವಾದ ಸೆಳೆತವೇ ಇರಬೇಕೆನ್ನಿಸುತ್ತದೆ. ಯಾಕೆಂದರೆ ಈ ಬೇನೆ ನನಗೂ ಇದೆ.

ನನ್ನೆಲ್ಲಾ ಸ್ನೇಹಿತರು ಹತ್ತಾರು ವರ್ಷಗಳ ಹಿಂದೆ ಬೆಂಗಳೂರಿನ ಆಸುಪಾಸಿನಲ್ಲಿ ಸಾಕಷ್ಟು ಲಕ್ಷಗಳನ್ನು ಹೂಡಿ ಇಂದು ಕೋಟಿ ಕೋಟಿ ಬಾಚಿಕೊಳ್ಳುತ್ತಿದ್ದರೆ, ನಾನು ಕೂಡ ಅವರಂತೆಯೇ ಹತ್ತಾರು ವರ್ಷಗಳ ಹಿಂದೆ ಲಕ್ಷ ಲಕ್ಷ ಹೂಡಿ ಅವರಂತೆ ಕೋಟಿಗಳನ್ನು ಬಾಚಿಕೊಳ್ಳದೆ ಇನ್ನೂ ಲಕ್ಷಗಳನ್ನು ಸುರಿಯುತ್ತಿದ್ದೇನೆ! ಅವರೆಲ್ಲ ಬೆಂಗಳೂರಿನ ಆಸುಪಾಸು ತುಂಡು ಜಮೀನುಗಳನ್ನು ಕೊಂಡರೆ ನಾನು ಯಾರು ಹೊಕ್ಕಲಾರದ ದೂರದ ಮೂಲೆಯೊಂದರಲ್ಲಿ ನಲವತ್ತಾರು ಎಕರೆಗಳಷ್ಟು ಕೃಷಿ ಜಮೀನನ್ನು ಕೊಂಡು ಜಮೀನುದಾರನಾಗಿದ್ದೇನೆ. ಅದರಲ್ಲಿನ್ನೇನು ತೆವಲೋ ನಾನಂತೂ ಅರಿಯೆ. ಆದರೂ ನನಗೀ ತೆವಲಿದೆ. ನಾನು ಹಾಕಿಸಿದ ತೆಂಗಿನ ಗಿಡಗಳಲ್ಲಿ ಗರಿಯೊಡೆದರೆ ಅದೇ ನನಗೆ ಕೋಟಿಯಾದಂತೆ ಖುಷಿಯಾಗಿ ನನ್ನ ವೈನ್ ಸೆಲ್ಲಾರಿನಿಂದ ಒಂದು ಇಟಾಲಿಯನ್ ವೈನ್ ಬಾಟಲಿಯನ್ನು ಹೊರ ತೆಗೆಯುತ್ತೇನೆ. ಒಂದು ವೇಳೆ ಅವು ಬಾಡಿವೆಯೆಂದರೆ ಸ್ಕಾಚಿಗೆ ಮೊರೆ ಹೋಗುತ್ತೇನೆ. ಒಟ್ಟಿನಲ್ಲಿ ನಾನೂ ಆಗಾಗ್ಗೆ ರೈತಾಪಿ ಕಟ್ಟೆ ಪುರಾಣಗಳನ್ನು ನಡೆಸುತ್ತೇನೆ, ಆದರವುಗಳು ಕನ್ನಡದಲ್ಲಿರುವುದಿಲ್ಲವೆಂಬುದೇ ಬೇಸರದ ಸಂಗತಿ. ಏಕೆಂದರೆ ನಾನಿರುವ ಊರಿನಲ್ಲಿ ಸಾಕಷ್ಟು ಕನ್ನಡಿಗರಿದ್ದರೂ, ಈ ರೀತಿಯ ಕಟ್ಟೆ ಪುರಾಣಗಳಿಗೆ ಅಗತ್ಯವಾದ ಮಣ್ಣಿನ ವಾಸನೆಯ ಕನ್ನಡಿಗರು ಸಿಕ್ಕುವುದು ಅಪರೂಪ. ಆದ್ದರಿಂದ ಮಣ್ಣಿನ ವಾಸನೆಯಿರುವ, ಕರ್ನಾಟಕದ ಜಮೀನುಗಳನ್ನು ಗುತ್ತಿಗೆ ಹಿಡಿದಿರುವ ತೆಲುಗು ಬಿಡ್ಡರ ನಡುವೆ ನಡೆಯುತ್ತದೆ ನನ್ನ ರೈತಾಪಿ ಕಟ್ಟೆ ಪುರಾಣ. ಇವರಾರೂ ಸಿಕ್ಕದಿದ್ದರೆ ನನ್ನ ಬೆಂಗಳೂರು ಹೆಂಡತಿಗೆ ಧಾರವಾಡ ಶೈಲಿ ಕನ್ನಡದಲ್ಲಿ ಛೇಡಿಸುತ್ತ ಮತ್ತು ನನ್ನ ಅಮೇರಿಕನ್ ಮಗನಿಗೆ ಹಳ್ಳಿ ಮೈಸೂರು ಶೈಲಿ ಕನ್ನಡದಲ್ಲಿ ಬೈಯುತ್ತ ನನ್ನ ಪುರಾಣ ಸಾಗುತ್ತಿರುತ್ತದೆ. ಈ ಎರಡೂ ಶೈಲಿಗಳೂ ಅರ್ಥವಾಗದ ಅವರಿಬ್ಬರೂ ಸುಮ್ಮನೆ ಗುಯ್ ಗುಡುತ್ತಾರೆ!

ಹಳ್ಳಿ ಹಿನ್ನೆಲೆಯಿಂದ ಬಂದವನಲ್ಲದ, ಜಾಗತಿಕ ಜಗತ್ತಿನ ಮೇರುಪಟ್ಟಣವಾದ ಶಿಕಾಗೋ ಮಹಾನಗರದಲ್ಲಿ ಮನೆಮಾಡಿಕೊಂಡಿರುವ, ಬಿಸಿನೆಸ್ ಪ್ಲಾನ್ಸ್, ಫಿನ್ಯಾನ್ಸಿಯಲ್ ಮಾಡೆಲ್ಲು, ಬಡ್ಜೆಟ್ಟು, ಪ್ರಪೋಸಲ್ಲು, ಪ್ರಾಸೆಸ್ ಇಂಪ್ರೂವ್ ಮೆಂಟ್, ಪ್ರೊಡಕ್ಟವಿಟಿ, ಸೊಲ್ಯೂಷನ್ ಬ್ಲೂಪ್ರಿಂಟ್, ಬಿಸಿನೆಸ್ ರೋಡ್ ಮ್ಯಾಪ್ ಎಂದೆಲ್ಲಾ ಉದ್ಯೋಗದಲ್ಲಿ ಬಡಬಡಿಸುವ ನಾನು, ವೈಯುಕ್ತಿಕವಾಗಿ "ನಮ್ಮ ಹಳ್ಳೀ ಊರ ನಮಗ ಪಾಡಾ ಯಾತಕ್ಕವ್ವ ಹುಬ್ಬಳ್ಳಿ ಧಾರವಾಡಾ" ಎನ್ನುತ್ತೇನೆ. ಇದು ಬೇನೆಯಲ್ಲದೇ ಮತ್ತಿನ್ನೇನೊ?

ನನ್ನ ಪುರಾಣವೇನೇ ಇರಲಿ, ಈ ಬೇನೆಗೆ ಬಿದ್ದ ಕೆಲವರು ನನ್ನ ಹಾಗೆ ನೇರ ಕೃಷಿಗೆ ಧುಮುಕಿದರೆ, ಇನ್ನು ಕೆಲವರು ಪರಿಸರಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪರೋಕ್ಷವಾಗಿ ಈ ಬೇನೆಗೆ ಸಿಲುಕುತ್ತಾರೆ. ಹಾಗೆ ಸಿಲುಕಿದ ಈ ಬೀಜದ ಸಂಸ್ಥೆ, ಬಿಲ್ ಗೇಟ್ಸ್, ನಾರ್ವೆ ಸರ್ಕಾರ ಅಲ್ ಗೋರ್ ರಂತೆಯೇ ನೊಬೆಲ್ ಪ್ರಶಸ್ತಿಗೆ ಅರ್ಹರೇನೋ! ಈ ಎಲ್ಲ ಕಾರ್ಪೋರೇಟ್ ವೀರರು ಮಣ್ಣಿಗೆ, ಪರಿಸರಕ್ಕೆ ಪ್ರಾಮಾಣಿಕವಾಗಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರೆ, ನಮ್ಮ ಭಾರತೀಯ ಇಂಪೋರ್ಟೆಡ್ ಬಡವರ ತಾಯಿಯಿಂದ ಹಿಡಿದು ಮರಿ/ಪುಡಿ ಪುಢಾರಿಗಳೆಲ್ಲರೂ ರೈತನೇ ನಮ್ಮ ದೇಶದ ಬೆನ್ನೆಲುಬೆಂದು ರೈತನ ಮೇಲೆ ಸವಾರಿ ಮಾಡಿ ರೈತನ ಪಕ್ಕೆಲುಬುಗಳನ್ನು ಮುರಿಯುತ್ತಿದ್ದಾರೆ. ನಮ್ಮ ರೈತರು ಇದನ್ನರಿಯಬೇಕಷ್ಟೆ!

ಇರಲಿ, ಒಟ್ಟಾರೆ ಕೃಷಿಯಿಂದ ಹೊರ್‍ಅ ಹೋಗುತ್ತಿರುವ ಕೃಷಿಕರಿಗೆ ವರ್ಕಿಂಗ್ ಕ್ಯಾಪಿಟಲ್, ಬಹುಮಹಡೀ ಕೃಷಿಪದ್ಧತಿ, ಸಮರ್ಥ ನೀರಿನ ನಿರ್ವಹಣೆ, ಮತ್ತು ಸರಳ ಮಾರುಕಟ್ಟೆಯ ಸೌಲಭ್ಯಗಳು ದೊರೆತರೆ ಕೃಷಿಯೇ ಉತ್ತಮ ಉದ್ಯಮವಾಗಬಲ್ಲುದೆಂಬುದು ನನ್ನ ಅನಿಸಿಕೆ.

ಅಣಕ:

ಶೇರುಪೇಟೆಯಲ್ಲಿ ಒಂದಕ್ಕೆ ಎರಡು ಅಥವಾ ಮೂರರಂತೆ ಸ್ಟಾಕ್ ಸ್ಪ್ಲಿಟ್ ಆಗುವಂತೆ, ಜಗತ್ತಿನ ಅತ್ಯಂತ ಹೆಚ್ಚಾಗಿ ತ್ವರಿತವಾಗಿ ಸ್ಪ್ಲಿಟ್ ಆಗುವ ಶೇರುಗಳು ಯಾವುವು ಗೊತ್ತೆ?

ಇದಕ್ಕೆಲ್ಲ ಷೇರುದರ್ಬಾರು, ಮಾರ್ಕೆಟ್ ವಾಚ್ ಪ್ರೋಗ್ರಾಮು, ಎಕನಾಮಿಕ್ಸ್ ಟೈಮ್ಸ್ ಓದಬೇಕಾಗಿಲ್ಲ ಕಣ್ರೀ. ಇದು ತೀರ ಸಿಂಪಲ್! ಮೇಲ್ಕಾಣಿಸಿದ ಒಂದು ಬೀಜ ಎಸೀರಿ, ಆರು ತಿಂಗಳಾದ ಮೇಲೆ ಅದು ನೂರು ಇನ್ನೂರು ಆಗದಿದ್ದರೆ ನೋಡಿ. ಹಿಡಿ ಬಿತ್ತಿ ಚೀಲದಲ್ಲಿ ತುಂಬಿಕೊಂಡು ಬರಬಹುದು!

1 comment:

ಅಮರ said...

ಒಂದು ಹೊಸ ವಿಷಯದ ಬಗ್ಗೆ ಸಾಕಷ್ಟು ಮಾಹಿತಿ ಕೊಟ್ಟಿದ್ದಿರ ಸರ್... ನಿಜ ಹೆಳ್ಬೆಕು ಅಂದ್ರೆ ಹೆಡ್ಡಿಂಗ್ ನೋಡಿ ಓದಬೇಕು ಅನ್ನಿಸಲಿಲ್ಲ ಆದರು ಫೋಟೊ ನೋಡಿ ಒಮ್ಮೆ ಕಣ್ಣಾಡಿಸಿದೆ... ಖುಷಿಯಾಯಿತು ವಿವರಗಳನ್ನು ತಿಳಿದು ..... ಕೊನೆ ಕೊನೆಯ ಸಾಲುಗಳನ್ನ ಓದಿ ಮೌನ ಆವರಿಸಿತು ಮನದ ತುಂಬ.... ಒಂದು ಮಾತಂತು ಸತ್ಯ ನಾವು ಎಲ್ಲೆ ಇರಬಹುದು ಹೇಗೆ ಬದುಕ ಬಹುದು ಈ ಭೂತಾಯಿ ಋಣ ಯಾವಾಗಲು ತನ್ನೆಡೆಗೆ ಸೆಳೆಯುತ್ತೆ ...... ನಿಮ್ಮ ಜಾಗದಲ್ಲಿ ನಾನಿದ್ದರು ಅದೆ ಮಾಡ್ತಿದ್ದೆ ...
ಈ ನಗರದಲ್ಲಿ ಮಲಗೊವಷ್ಟು ಜಾಗಕ್ಕೆ ಆಸೆ ಪಡದೆ ಎಲ್ಲೊ ಒಂದು ಪಾಳು ಭೂಮಿ ಕೊಳ್ಳುತ್ತಿದ್ದೆ ...... :)

ಆದರು ಒಂದು ಖುಷಿ ಈಗಲು ನಾನು ರೈತನೇ ಮನೆಗೆ ಹೋದರೆ ........ ಅಪ್ಪ ನಂಬಿರೋದು ಆ ಭೂಮಿಯನ್ನೆ.

-ಅಮರ