ಚೈನಾದ(?) ಟಿಬೆಟ್ಟೂ, ಭಾರತದ ಕಮ್ಯುನಿಸ್ಟರೂ.

ಈ ಬಾರಿ ಚೈನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಹತ್ತಿರ ಬರುತ್ತಿದ್ದಂತೆಯೇ ಚೈನಾದಿಂದ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವ ಟಿಬೆಟ್ ಹೋರಾಟ ತೀವ್ರವಾಗುತ್ತಿದೆ.

ಹಾಗೆಯೇ ಟಿಬೆಟ್ ಇತಿಹಾಸವನ್ನು ಗಮನಿಸಿದಾಗ, ೧೬೪೪ ರಿಂದ ೧೯೧೨ರವರೆಗೆ ಚೈನಾವನ್ನಾಳಿದ ಕಿಂಗ್ಃ ರಾಜಪರಿವಾರದವರು ಟಿಬೆಟ್ಟಿಗೆ ದಲೈ ಲಾಮಾರನ್ನು ಧಾರ್ಮಿಕ ಮತ್ತು ರಾಜ್ಯಾಡಳಿತದ ಆಧಿಕಾರಿಯಾಗಿ ನೇಮಿಸಿದ್ದರು. ೧೯೧೧ರ ವರೆಗೆ ಚೈನಾದ ಅಧಿಪತ್ಯವನ್ನೊಪ್ಪಿಕೊಂಡು ಟಿಬೆಟ್ಟಿನ ಆಗಿಹೋದ ಎಲ್ಲಾ ದಲೈಲಾಮಾರು ಟಿಬೆಟ್ಟಿನ ಆಡಳಿತವನ್ನು ನಡೆಸಿದ್ದರು. ಐತಿಹಾಸಿಕವಾಗಿ ೧೯೧೧ರಲ್ಲಿ ಕಿಂಗ್ಃ ರಾಜಪರಿವಾರವು ಚೈನಾ ಅಧಿಪತ್ಯದ ಅಧಿಕಾರವನ್ನು ಕಳೆದುಕೊಂಡಾಗ ಟಿಬೆಟ್ ತನ್ನನ್ನು ಸ್ವತಂತ್ರ ದೇಶವೆಂದು ಘೋಷಿಸಿಕೊಂಡಿತು. ಹಾಗೆ ಸ್ವತಂತ್ರವನ್ನು ಘೋಷಿಸಿಕೊಂಡ ಟಿಬೆಟ್ ೧೯೫೧ರವರೆಗೆ ದಲೈ ಲಾಮಾರ ಅಧಿಕಾರದಲ್ಲಿ ಸ್ವತಂತ್ರ ದೇಶದಂತೆಯೇ ವ್ಯವಹರಿಸಿತು. ೧೯೧೧ರ ನಂತರದಲ್ಲಾದ ರಾಜಕೀಯ ಪರಿವರ್ತನೆ, ಅಂತರಿಕ ಕಲಹಗಳಿಂದಾಗಿ ಚೈನಾ ಕಮ್ಯುನಿಸ್ಟ್ ದೇಶವಾಗಿ ಹೊರಹೊಮ್ಮಿ ಚೈನಾದ ಮೇಲೆ ಹಿಡಿತವನ್ನು ಸಾಧಿಸುವ ಸುಧೀರ್ಘ ಪಯಣದಲ್ಲಿ ಟಿಬೆಟ್ ನ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ತಲೆ ಕೆಡಿಸಿಕೊಳ್ಳಲು ಚೈನಾಕ್ಕೆ ಸಾಕಷ್ಟು ಚೈನಾ ಮುಖ್ಯಭೂಮಿಯ ಅಂತರಿಕ ವ್ಯವಹಾರಗಳೇ ಸಾಕಷ್ಟಿದ್ದವು. ಟಿಬೆಟ್ ತನ್ನನ್ನು ಸ್ವತಂತ್ರ ರಾಷ್ಟ್ರವೆಂದುಕೊಂಡಿದ್ದರೂ ಇನ್ನಿತರೆ ಯಾವುದೇ ರಾಷ್ಟ್ರಗಳು ಟಿಬೆಟ್ಟನ್ನೊಂದು ರಾಷ್ಟ್ರವೆಂದು ಅಧಿಕೃತವಾಗಿ ಗುರುತಿಸಿ ಮಾನ್ಯತೆಯನ್ನು ಕೊಟ್ಟ ದಾಖಲೆಯಿಲ್ಲ. ಅಕ್ಟೋಬರ್ ೧, ೧೯೪೯ರಲ್ಲಿ ಕಡೆಗೂ "ಪೀಪಲ್ ರಿಪಬ್ಲಿಕ್ ಆಫ್ ಚೈನಾ" ಸ್ಥಾಪನೆಗೊಂಡು, ಬೀಜಿಂಗ್ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿ, ಮರುವರ್ಷವೇ ಟಿಬೆಟ್ ಅನ್ನು ವಶಪಡಿಸಿಕೊಳ್ಳಲು ತನ್ನ ನಲವತ್ತು ಸಾವಿರ ಸೈನಿಕರನ್ನು ಕಳುಹಿಸಿತು.

ಧರ್ಮ, ಶಾಂತಿ, ಬುದ್ಧ, ಹಿಮಾಲಯ, ದಲೈಲಾಮಾ, ಟಿಬೆಟ್ ಇಷ್ಟೇ ಜೀವನವೆಂದು, ತಾವಿರುವುದೇ ಸ್ವರ್ಗವೆಂದು ಮುಗ್ಧರಾಗಿ ಜೀವಿಸುತ್ತಿದ್ದ ಟಿಬೆಟನ್ನರಿಗೆ ಚೈನಾದ ಆಕ್ರಮಣ ದಿಗ್ಭ್ರಾಂತರನ್ನಾಗಿಸಿತು. ಶಸ್ತ್ರಾಸ್ತ್ರಗಳೇ ಇಲ್ಲದ, ಕೇವಲ ಐದು ಸಾವಿರ ಸೈನಿಕರಿದ್ದ ಟಿಬೆಟ್ ಸೈನ್ಯದ ಗುಬ್ಬಿ ಚೈನಾದ ಬ್ರಹ್ಮಾಸ್ತ್ರದೆದುರು ಸುಟ್ಟು ಕರಕಲಾಗಿಹೋಯಿತು.

ಈ ಮಧ್ಯೆ ಬ್ರಿಟಿಷರು ೧೯೧೪ರಲ್ಲಿ ಟಿಬೆಟ್ಟಿನ ಮೇಲೆ ಒತ್ತಡವನ್ನು ತಂದು ಟಿಬೆಟ್ಟನ್ನು ಒಳ ಟಿಬೆಟ್ ಮತ್ತು ಹೊರ ಟಿಬೆಟ್ ಎಂದು ವಿಭಜಿಸಿ ಒಳ ಟಿಬೆಟ್ಟನ್ನು ಟಿಬೆಟ್ ಎಂದೂ ಹೊರ ಟಿಬೆಟ್ಟನ್ನು (ಇಂದಿನ ಅರುಣಾಚಲ ಪ್ರದೇಶ) ಭಾರತದ ಭೂಭಾಗಕ್ಕೆ ಸೇರಿಸಿಕೊಂಡು "ಮೆಕ್ ಮಹಾನ್’ಎಂಬ ಗಡಿಯ ಗೆರೆಯನ್ನು ಎಳೆದರು. ಇದನ್ನೊಪ್ಪಿ ದಲೈ ಲಾಮಾ ಮತ್ತು ಅಂದಿನ ಭಾರತದ ಬ್ರಿಟಿಷ್ ಸರ್ಕಾರಗಳು ಒಡಂಬಡಿಕೆಗೆ ಸಹಿ ಹಾಕಿದವು. ಇದನ್ನೇ ಚೈನಾ, ಎಂದೂ ಸ್ವತಂತ್ರ ರಾಷ್ಟ್ರವಾಗಿರದ ಟಿಬೆಟ್ ಸಹಿ ಹಾಕಿದ ಈ ’ಮೆಕ್ ಮಹಾನ್’ ಒಪ್ಪಂದ ಕಾನೂನುಬಾಹಿರವೆನ್ನುತ್ತ, ಭಾರತದ ಅರುಣಾಚಲ ಪ್ರದೇಶ ತನ್ನ ಭೂಭಾಗವೆಂದು ಹೇಳಿಕೊಳ್ಳುವುದು.

ಇರಲಿ ಚೈನಾ ಏನೇ ಹೇಳಿಕೊಂಡರೂ, ಯಾವುದೇ ಇತರೆ ರಾಷ್ಟ್ರಗಳು ಟಿಬೆಟ್ಟನ್ನು ಒಂದು ರಾಷ್ಟ್ರವಾಗಿ ಮಾನ್ಯ ಮಾಡಿರದಿದ್ದರೂ ಟಿಬೆಟ್ ೧೯೧೨ರಿಂದ ೧೯೫೧ ರವರೆಗೆ ಸ್ವತಂತ್ರವಾಗಿದ್ದುದು ಸತ್ಯ! ಅದಕ್ಕೂ ಮೊದಲಿನಿಂದಲು ಕೂಡ ಟಿಬೆಟ್ ಸ್ವತಂತ್ರವಾಗಿ ತನ್ನ ಅಂತರಿಕ ವ್ಯವಹಾರಗಳನ್ನು ನಡೆಸುತ್ತಿತ್ತು. ಕಿಂಗ್ಃ ರಾಜಪರಿವಾರವು ಕೂಡ ದಲೈ ಲಾಮಾ ತಮ್ಮ ಧರ್ಮಗುರುಗಳೆಂದೋ, ಪೂಜ್ಯರೆಂದೋ ಅಥವ ಟಿಬೆಟನ್ನರ ಸಂಸ್ಕೃತಿ ಮುಖ್ಯ ಚೈನಾದಿಂದ ಭಿನ್ನವೆಂದೋ ಗೌರವಿಸಿ, ಟಿಬೆಟ್ ಮೇಲೆ ಯಾವುದೇ ತೆರಿಗೆಗಳನ್ನು ವಿಧಿಸದೆ ಸಂಪೂರ್ಣ ಸ್ವಾಯತ್ತತೆಯನ್ನು ಕೊಟ್ಟಿದ್ದರು. ಹಾಗಾಗಿ ಒಂದು ಪುರಾತನ ಸಂಸ್ಕೃತಿಯ ರಾಷ್ಟ್ರವಾಗಿ ತಮ್ಮ ಪಾಡಿಗೆ ತಾವಿರುತ್ತಿದ್ದ ಟಿಬೆಟನ್ನರು ಕೂಡ ಯಾವುದೇ ರಾಷ್ಟ್ರಗಳ ಮಾನ್ಯತೆಯನ್ನಾಗಲಿ, ಪುರಸ್ಕಾರವನ್ನಾಗಲಿ ಕೇಳುವ/ದಾಖಲಿಸುವ ಗೋಜಿಗೆ ಹೋಗಲಿಲ್ಲ. ಶಾಂತಿಯೇ ಜೀವನವೆನ್ನುವ, ಧಾರ್ಮಿಕ ಗುರುವೇ ರಾಜನೆನ್ನುವದು ಟಿಬೆಟನ್ನರ ವಿಶಿಷ್ಟ ಸಂಸ್ಕೃತಿ. ವ್ಯಾಟಿಕನ್ ಮಾದರಿಯಲ್ಲಿ ಟಿಬೆಟ್ ಕೂಡ ಬಹುಕಾಲದಿಂದಲೂ ಧಾರ್ಮಿಕ ಹಿನ್ನೆಲೆಯ ರಾಷ್ಟ್ರವಾಗಿದ್ದಿತೆನ್ನುವುದು ಅದರ ಹಿನ್ನೆಲೆಯನ್ನು ನೋಡಿದರೆ ಯಾರಿಗಾದರೂ ಅರ್ಥವಾಗುತ್ತದೆ.

ಆ ಎಲ್ಲಾ ವಿಷಯಗಳನ್ನರಿತು, ಟಿಬೆಟ್ಟಿನ ಸಂಸ್ಕೃತಿಯನ್ನು ಗೌರವಿಸಿ ಉಳಿಸಬೇಕಾದ ನಿಜ ಕಳಕಳಿಯಿಂದಲೇ ಜಗತ್ತಿನ ಎಲ್ಲಾ ಬುದ್ಧಿಜೀವಿಗಳು ಟಿಬೆಟ್ಟನ್ನು ಇಂದು ಒಕ್ಕೊರಲಿನಿಂದ ಬೆಂಬಲಿಸುತ್ತಿದ್ದಾರೆ. ಹಾಗೆಯೇ ಭಾರತವು ಕೂಡ ಬೆಂಬಲಿಸಬೇಕು, ಇಲ್ಲವೆಂದರೆ ಭಾರತ ಚೈನಾ ತರ್ಕವನ್ನು ಒಪ್ಪುವುದಾದರೆ ಅರುಣಾಚಲ ಪ್ರದೇಶವನ್ನು ಬಿಟ್ಟುಕೊಡಬೇಕೇನೋ!

ಈಗ ನಮ್ಮೊಳಗಿರುವ ರಾಜಕಾರಣೀ ಕಮ್ಯುನಿಸ್ಟರ ಟಿಬೆಟ್ ಕುರಿತಾದ ಹೇಳಿಕೆಗಳನ್ನು ಗಮನಿಸಿ. ಟಿಬೆಟ್ಟನ್ನು ಕಾಶ್ಮೀರಕ್ಕೆ ಹೋಲಿಸುತ್ತ, ಇದು ಚೈನಾದ ಆಂತರಿಕ ವಿಷಯವಾದ್ದರಿಂದ ನಾವುಗಳು ಇದನ್ನು ಬೆಂಬಲಿಸಬಾರದು ಎನ್ನುತ್ತಿದ್ದಾರೆ. ಆ ತರ್ಕವನ್ನು ಒಪ್ಪುವುದಾದರೆ, ಶತಮಾನಗಳಿಂದ ಇತ್ತೀಚಿನವರೆಗೆ ಭಾರತದ ಅವಿಭಾಜ್ಯ ಅಂಗಗಳಾಗಿದ್ದ ಅಫ್ಘನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶಗಳನ್ನು ಮುಂದೊಂದು ದಿನ ಸಧೃಢ ಭಾರತವು ಆಕ್ರಮಿಸಿಕೊಂಡು ತನ್ನನ್ನು ಸಮಗ್ರವಾಗಿ ಒಗ್ಗೂಡಿಸಿಕೊಳ್ಳಲು ಮುಂದಾಗಬಹುದೆಂದೇ?

ಯಾವುದೋ ಕಾಲದ ಸತ್ತ ತತ್ವಗಳನ್ನಿಟ್ಟುಕೊಂಡು ಬೊಗಳೆ ಬಿಡುತ್ತ ರಾಜಕೀಯದಲ್ಲಿ ತೊಡಗಿರುವ ಈ ಕಮ್ಯುನಿಸ್ಟರು, ಕನಿಷ್ಟ ಆ ತತ್ವಗಳಿಗೆ ಬದ್ಧರಾಗಿದ್ದಾರೆಯೇ? ಕಮ್ಯುನಿಸ್ಟ್ ಪಾರ್ಟಿಗಳೆಲ್ಲ ರಾಜಕೀಯ ಪಕ್ಷಗಳಾಗಿ, ಕಮ್ಯುನಿಸ್ಟರು ಫ್ಯಾಕ್ಟರೀ ಮಾಲೀಕರನ್ನು ಬೆದರಿಸುತ್ತ ಹಫ್ತಾ ವಸೂಲಿಸುತ್ತ ಬಂಡವಾಳಶಾಹಿಗಳೂ ನಾಚುವಂತೆ ಆಸ್ತಿಗಳನ್ನು ಮಾಡಿಕೊಂಡಿದ್ದಾರೆ. ಕೇರಳದಲ್ಲಿ ಈ ಕಾಮ್ರೇಡುಗಳ ಉಪಟಳದಿಂದಲೇ ಉದ್ದಿಮೆದಾರರು ಜಾಗ ಖಾಲಿ ಮಾಡಿದ್ದಾರೆ. ಹಾಗಾಗಿಯೇ ಅಲ್ಲಿನ ನೌಕರಶಾಹೀ ಉದ್ಯೋಗವನ್ನರಸಿ ದೇಶದೆಲ್ಲೆಡೆ ಉದ್ಯೋಗದಲ್ಲಿರುವುದು. ಇಂದು ಬೆಂಗಳೂರಿನಲ್ಲಿ ಅಧಿಕ ಮಲೆಯಾಳಿಗಳಿರುವುದಕ್ಕೆ ಈ ಕಾಮ್ರೇಡರೂ ಕಾರಣರು! ಈ ಕಾಮ್ರೇಡುಗಳು ತಮ್ಮ ಮಕ್ಕಳನ್ನು ಬಂಡವಾಳಶಾಹೀ ಅಮೇರಿಕಾಗೆ ಓದಲು ಕಳುಹಿಸಿ, "ಅಲ್ಲಿಯೇ ಸೆಟ್ಲ್ ಆಗು" ಎಂದು ಆಶೀರ್ವದಿಸುತ್ತಾರೆ. ನಾನೇ ನೋಡಿದಂತೆ ಆಂಧ್ರದ ಎಷ್ಟೋ ಕಮ್ಯುನಿಸ್ಟರು ತಮ್ಮ ಮಕ್ಕಳಿಗೆ ತಮ್ಮದೇ ಜಾತಿಯ, ತಮ್ಮ ಅಂತಸ್ತಿಗೆ ಹೊಂದುವಂತಹವರಲ್ಲಿ ಮಾತ್ರ ಸಂಬಂಧಗಳನ್ನು ಬೆಳೆಸಿರುವರೇ ವಿನಹ ಅಂತರ್ಜಾತೀಯ ಬಡ ಕುಟುಂಬಗಳೊಡನೆ ಸಂಬಂಧಗಳನ್ನು ಮಾಡಿರುವುದನ್ನು ನಾನು ನೋಡಿಯೇ ಇಲ್ಲ. ಈ ಕ್ಯಾಪಿಟಲಿಸ್ಟ್ ಕಮ್ಯುನಿಸ್ಟರು ಘನತೆಗಾಗಿ ವರದಕ್ಷಿಣೆಯನ್ನು ಕೇಳುವುದಿಲ್ಲ ಆದರೆ ಹುಡುಗಿಯ ಪಾಲಿನ ಎಲ್ಲಾ ಆಸ್ತಿಯೂ ಇವರಿಗೆ ಬೇಕೆನ್ನುತ್ತಾರೆ!

ಇವರನ್ನು ಬಿಡಿ, ಎಷ್ಟೇ ಆಗಲಿ ರಾಜಕಾರಣಿಗಳು, ಅದರಲ್ಲೂ ಭಾರತೀಯ ರಾಜಕಾರಣಿಗಳು! ಆದರೆ ಇಡೀ ಜಾಗತಿಕ ಜಗತ್ತಿನ ಬುದ್ಧಿಜೀವಿಗಳೆಲ್ಲ ಒಕ್ಕೊರಲಿನಿಂದ ಟಿಬೆಟ್ ಹೋರಾಟವನ್ನು ಬೆಂಬಲಿಸುತ್ತಿದ್ದರೆ, ನಮ್ಮ ಭಾರತದ ಅತೀ ಬುದ್ಧಿಜೀವಿಗಳು ಕೊಂಚವಾದರೂ ಉಸಿರೆತ್ತುತ್ತಿಲ್ಲ. ಚೈನಾದ ಅಂದಿನ ಆಕ್ರಮಣದಲ್ಲಿ ಸಾವಿರಾರು ಟಿಬೆಟನ್ನರು ಸತ್ತು, ಅದನ್ನು ಮುಂದುವರಿದ ಕೆಲ ರಾಷ್ಟ್ರಗಳು ’ಜೆನೊಸೈಡ್’/ಮಾರಣಹೋಮ ಎಂದು ಅಭಿಪ್ರಾಯಿಸಿ, ಟಿಬೆಟ್ ಹೋರ್‍ಆಟವನ್ನು ಜಾಗತಿಕ ಜಗತ್ತಿನ ಬುದ್ಧಿ ಇರುವ ಎಲ್ಲಾ ವರ್ಗದ ಜನಗಳು ಬೆಂಬಲಿಸುತ್ತಿದ್ದರೆ, ನಮ್ಮ ಬಲ ಪಂಥೀಯ/ಎಡ ಪಂಥೀಯ ಬುದ್ಧಿಜೀವಿಗಳಾಗಲಿ ಇನಿತಾದರೂ ಉಸಿರೆತ್ತದೆ ಜಾಣ ಮರೆವು ತೋರಿಸುತ್ತಿದ್ದಾರೆ. ಬಹುಶಃ ಇವರುಗಳ ಮಟ್ಟಿಗೆ ಭಾರತದ ಬಹುಸಂಖ್ಯಾತ ಅಥವ ಅಲ್ಪಸಂಖ್ಯಾತರನ್ನೊಳಗೊಂಡಿರದ ಯಾವುದೇ ಸಮಸ್ಯೆಗಳೂ ಸಮಸ್ಯೆಗಳೇ ಅಲ್ಲವೇನೋ!

ಸರಿ ಈ ಅತೀ ಬುದ್ಧಿವಂತರನ್ನು ಬಿಡಿ, ಶತಮಾನಗಳಿಂದ ತುಳಿತಕ್ಕೊಳಗಾಗಿದ್ದ, ಆದರೆ ಈಗ ಹೋರಾಟದ ಮಂಚೂಣಿಯಲ್ಲಿರುವ, ಬುದ್ಧನನ್ನು ಮೆಚ್ಚಿ, ಸಾಮಾಜಿಕ ಸಮಾನತೆಯ ಸಮನ್ವಯಕ್ಕಾಗಿ ಬೌದ್ಧಮತವನ್ನು ಸ್ವೀಕರಿಸಿರುವ ಲಕ್ಷೋಪಲಕ್ಷ ದಲಿತರು ಕೂಡ ಟಿಬೆಟ್ ಹೋರಾಟಕ್ಕೆ ಸಹಾನುಭೂತಿಯನ್ನು ತೋರದಿರುವುದು ಬುದ್ಧನ ದುರಾದೃಷ್ಟವೇ ಆಗಿದೆ!

ಅಂದು ಟಿಬೆಟನ್ನರು ಟಿಬೆಟ್ಟಿನಿಂದ ಓಡಿಬಂದಾಗ ಆಶ್ರಯ ಕೊಟ್ಟು ಆಗಷ್ಟೆ ಸ್ವತಂತ್ರನಾಗಿದ್ದ ಭಾರತೀಯ ವಿಶಾಲಹೃದಯವನ್ನು ಮೆರೆದರೆ, ಇಂದು ಆ ಸ್ವಾತಂತ್ರ್ಯದ ಅಮಲಿನಲ್ಲಿ ಅದೇ ಭಾರತೀಯ ಟಿಬೆಟನ್ನರ ಸ್ವಾತಂತ್ರ್ಯದ ಹೋರಾಟವನ್ನೇ ಮರೆತಿದ್ದಾನೆ. ಹೇಗೂ ಇತ್ತೀಚಿನ ಒಲಿಂಪಿಕ್ಸ್ ಗಳಲ್ಲಿ ಒಂದೂ ಪದಕ ಪಡೆಯದ ನಾವುಗಳು, ಈ ಬಾರಿ ಟಿಬೆಟ್ ನೆಪದಲ್ಲಿ ಒಲಿಂಪಿಕ್ಸ್ ಬಹಿಷ್ಕರಿಸಿ, ಆಟಗಳಲ್ಲಿ ಸೋಲುವ ಮುಖಭಂಗ ಮತ್ತು ಟಿಬೆಟನ್ನರಿಗೆ ಸಹಾನುಭೂತಿಯ ಆಂತಃಕರಣ ತೋರಿಸುವ, ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಆಲೋಚನೆ ನಮ್ಮ ಕುಟಿಲ ನಾಯಕರುಗಳಿಗೆ ಹೊಳೆದಿಲ್ಲವೇಕೋ? ಬಹುಶಃ ಅವರ ಸರ್ಕಾರದಲ್ಲಿನ ಪಾಲುದಾರ ಮಿತ್ರ ಕಮ್ಯುನಿಸ್ಟರ ಭಯವಿರಬೇಕು.

ಅಣಕ:

ಒಮ್ಮೆ ಕ್ರಿಶ್ಚಿಯನ್ ಮಿಷನರಿಯೊಬ್ಬ ಒಂದು ಹಳ್ಳಿಗೆ ಮತಪ್ರಚಾರಕ್ಕೆ ಹೋಗಿದ್ದ. ಜನರಲ್ಲಿ ವಿಶ್ವಾಸ ಹುಟ್ಟಿಸಲೋ ಅಥವ ಮಕ್ಕಳ ಬಗೆಗಿನ ನಿಜ ಕಕ್ಕುಲಾತಿಯೋ ಅಂತೂ ಅಲ್ಲಿ ಬೀದಿಯಲ್ಲಿ ಕಂಡ ಕೊಳಕು ಮಗುವನ್ನೆತ್ತಿ ಮುದ್ದಿಸುತ್ತ ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಒಂದು ಚಾಕೋಲೇಟ್ ಕೊಟ್ಟ. ಇದನ್ನು ಕಂಡ ಆ ಊರಿನ ಬಲಪಂಥೀಯ ಬುದ್ದಿಜೀವಿಯೊಬ್ಬ "ಹೋ! ಇವನೊಬ್ಬ ಮಕ್ಕಳ ಕಾಮಿ, ಹೊಡೆಯಿರಿ ಬಡಿಯಿರಿ" ಎಂದು ಬೊಬ್ಬೆ ಹಾಕಿದ. ಸರಿ, ಗ್ರಾಮಸ್ಥರೆಲ್ಲಾ ಸೇರಿಕೊಂಡು ಆ ಮಿಷನರಿಯನ್ನು ಹಿಗ್ಗಾಮುಗ್ಗಾ ಥಳಿಸಿದರು.

ಮರುದಿನ ಈ ಸುದ್ದಿಯನ್ನು ಕೇಳಿದ ಎಡಪಂಥೀಯ ಬುದ್ದಿಜೀವಿಗಳು "ಹಿಂದೂ ಮತೀಯವಾದಿಗಳು ಈ ಕೃತ್ಯದ ಹಿಂದಿದ್ದಾರೆ. ಅವರನ್ನು ಬಂಧಿಸಿ" ಎಂದು ಆಂದೋಲನ ನಡೆಸಿದರು. ಇದಕ್ಕೆ ಪ್ರತಿಸ್ಪಂದಿಸಿದ ಸರ್ಕಾರ ಆ ಗ್ರಾಮಸ್ಥರನ್ನೆಲ್ಲಾ ಬಂಧಿಸುವಂತೆ ಆದೇಶಿಸಿತು. ಆದರೆ ದುರದೃಷ್ಟವಶಾತ್ ಆ ಗ್ರಾಮದಲ್ಲಿದ್ದವರೆಲ್ಲಾ ಮುಸಲ್ಮಾನರಾಗಿದ್ದರು! ಹಾಗೆ ಬಂಧನಗೊಂಡು ಪೋಲೀಸರಿಂದ ಹಿಗ್ಗಾಮುಗ್ಗಾ ಥಳಿಸಿಕೊಂಡು ಬಿಡುಗಡೆಗೊಂಡ ಗ್ರಾಮಸ್ಥರು ಮುಸಲ್ಮಾನರೆಂದು ತಿಳಿದು ಮತ್ತೆ ಬುದ್ದಿಜೀವಿಗಳು "ಇದು ಪೊಲೀಸ್ ದೌರ್ಜನ್ಯ. ಪೊಲೀಸರು ಬೇಕೆಂತಲೇ ಪಕ್ಕದ ಹಳ್ಳಿಯ ಮುಸಲ್ಮಾನರನ್ನು ಬಂಧಿಸಿ ಥಳಿಸಿದ್ದಾರೆ. ಪಕ್ಕದ ಹಳ್ಳಿಯವರನ್ನು ಬಂಧಿಸಿ" ಎಂದು ಬೊಬ್ಬೆ ಹಾಕಿದರು. ಅಲ್ಲಿಗೆ ತಮಗರಿವಿಲ್ಲದಂತೆಯೇ ಆ ಸುತ್ತಮುತ್ತಲ ಗ್ರಾಮಸ್ಥರೆಲ್ಲಾ ಶಾಶ್ವತ ಮತೀಯವಾದಿಗಳಾಗಿ ಪರಿವರ್ತಿತರಾದರು!

ಇದು ಉತ್ಪ್ರೇಕ್ಷೆ ಎನಿಸಿದರೂ ಇಂದಿನ ಭಾರತದಲ್ಲಿ ಇದೇ ಆಗುತ್ತಿರುವುದು! ಹಿಂದೆ ರಾಜಕಾರಣಿಗಳು ಮಾಡುತ್ತಿದ್ದುದನ್ನು ಇಂದು ರಾಜಕಾರಣಿ ಪ್ರೇರಿತ ಬುದ್ದಿಜೀವಿಗಳು ಮಾಡುತ್ತಿದ್ದಾರೆ.

ಸಾಮಾನ್ಯಜೀವಿಗಳೇ ನಿಮ್ಮ ನಿಮ್ಮ ಬುದ್ದಿಯನ್ನು ಉಪಯೋಗಿಸಿ. ಅದನ್ನು ಈ ಬುದ್ದಿಜೀವಿಗಳಿಗೆ ಔಟ್ ಸೋರ್ಸ್ ಮಾಡಬೇಡಿ!

No comments: