ಕರ್ನಾಟಕದಲ್ಲೊಂದು ಗಾಂಧಿಪಕ್ಷ, ಹೊಳಲ್ಕೆರೆಯಲ್ಲೊಬ್ಬ ಆಧುನಿಕ ಗಾಂಧಿ!

ಅಂತೂ ಇಂತೂ ಕರ್ನಾಟಕಕ್ಕೆ ಮತ್ತೊಂದು ಚುನಾವಣೆ ಬಂದಿದೆ. ಜೆಡಿಎಸ್ ನಿಂದ ಧೃತರಾಷ್ಟ್ರ, ಕಾಂಗ್ರೆಸ್ಸಿನಿಂದ ಕೃಷ್ಣ ಸದ್ದು ಮಾಡುತ್ತಿದ್ದರೆ, ಬಿಜೆಪಿ ಯಥಾಪ್ರಕಾರ ವಚನಭ್ರಷ್ಟತೆಯ ಸದ್ದು ಮಾಡುತ್ತಿದ್ದರೂ ಅದಕ್ಕಿಂತ ಹೆಚ್ಚಾಗಿ ಅವರ ಪಕ್ಷದ ದ್ರೌಪದಿಯದೇ ಇತ್ತೀಚೆಗೆ ಹೆಚ್ಚು ಸದ್ದು ಕೇಳುತ್ತಿದೆ.

ಮೊನ್ನೆ ನನ್ನ ಬೆಂಗಳೂರಿನಲ್ಲಿರುವ ಸ್ನೇಹಿತನೊಬ್ಬ ಹೀಗೆಯೇ ಹರಟುತ್ತ "ಈ ರಾಜಕಾರಣಿಗಳು ಏನೇನು ತಿನ್ನಲು ಸಾಧ್ಯವೋ ಅದನ್ನೆಲ್ಲಾ ತಿಂದಾಗಿದೆ. ಕರ್ನಾಟಕದ ನೆಲವನ್ನೆಲ್ಲಾ ತಿಂದು, ನದಿ/ಕೆರೆ/ಡ್ಯಾಂಗಳನ್ನೆಲ್ಲಾ ಕುಡಿದು ಹೊಟ್ಟೆ ಕೆಟ್ಟು ಹೂಸಿಸುತ್ತ ಜನಸಾಮಾನ್ಯರಿಗೆ ಉಸಿರಾಡಲು ಶುದ್ಧ ಗಾಳಿಯೂ ಇಲ್ಲದೆ ಅಪಾಯವಾಯುವನ್ನು ಎಲ್ಲೆಡೆ ಪಸರಿಸಿದ್ದಾರೆ. ಇನ್ನು ಜನರನ್ನು ಮುಕ್ಕುವುದಷ್ಟೇ ಬಾಕಿಯಿರುವುದು. ಜನರನ್ನು ತಿನ್ನಲು ಈ ರಾಜಕಾರಣಿಗಳ ಹಲ್ಲುಗಳು ಕಟಕಟವೆನ್ನುತ್ತಿದ್ದರೂ ಕ್ರಾಂತಿಯಾದೀತೆಂದು ಹೇಗೋ ಆ ತೀಟೆಯನ್ನು ತಡೆದುಕೊಂಡಿರುವರು. ಇಂತಹ ರಾಜಕಾರಣಿಗಳಿಂದ ತುಂಬಿದ ಭಾರತದ ಭವಿಷ್ಯ, ಮುಂದಿನ ಜನಾಂಗದಲ್ಲಿ ಹೇಗಿರುತ್ತದೋ?" ಎಂದು ವಿಷಾದ ವ್ಯಕ್ತಪಡಿಸಿದನು.

ಯೋಚಿಸಿ ನೋಡಿ, ಈಗ ನಡೆಯುತ್ತಿರುವ ಚುನಾವಣೆಗಳನ್ನು, ಅಭ್ಯರ್ಥಿಗಳನ್ನು ನೆನೆಸಿಕೊಂಡರೆ ಅಸಹ್ಯವಾಗುತ್ತದೆ. ಈ ರಾಜಕಾರಣಿಗಳ ಮೇಲಿನ ಅಸಹ್ಯ ಎಲ್ಲಿ ಭಾರತದ ಮೇಲೆಯೇ ಅಸಹ್ಯ ಹುಟ್ಟಿಸುತ್ತದೋ ಎಂದು ದಿಗಿಲಾಗುತ್ತದೆ! ಪ್ರತಿ ಚುನಾವಣೆಗಳಲ್ಲಿಯೂ ಬಾಲಬಡುಕರು, ನೆಲಗಳ್ಳರು, ರ್‍ಔಡಿಗಳು, ದಗಾಕೋರರು ಪಕ್ಷಾತೀತವಾಗಿ ಅಲ್ಲಲ್ಲಿ ಇರುತ್ತಿದ್ದರೆ, ಈ ಬಾರಿ ಅವರುಗಳೇ ವಿಜೃಂಭಿಸುತ್ತಿದ್ದಾರೆ. ಭಾರತದ ಪ್ರಜೆಗಳೂ ಈ ಜನನಾಯಕರುಗಳಂತೆಯೇ ಭ್ರಷ್ಟರಾಗುತ್ತ ದೇಶ ಅಧಃಪತನದತ್ತ ದಾಪುಗಾಲಿಡುತ್ತಿದೆ ಎಂದೇ ಅನಿಸುತ್ತದೆ. ಇದು ಎಂದಾದರೂ ಬದಲಾದೀತೇ?

ನಾನೊಬ್ಬ ಆಶಾಜೀವಿ, ಹಾಗಾಗಿ ಭಾರತದ ಈ ರಾಜಕೀಯ ಗಾಢಾಂಧಕಾರದಲ್ಲಿ ಸಣ್ಣ ಬೆಳಕಿನ ಅಸ್ಪಷ್ಟ ರೇಖೆ ಕಂಡುಬಂದರೂ ಅದೊಂದು ಮಹಾ ಬದಲಾವಣೆಯ ಆರಂಭವೆಂದೇ ಅಂದುಕೊಳ್ಳುತ್ತೇನೆ. ನಮ್ಮ ನಿಮ್ಮಂಥ ಯಾವುದೇ ದೇಶಪ್ರೇಮಿಯು ಕೂಡಾ ಹೀಗೆಯೇ ಅಂದುಕೊಳ್ಳಬೇಕು. ಆ ಭರವಸೆಯ ಸಣ್ಣ ಆಶಾಕಿರಣ ಈ ಬಾರಿಯ ಕರ್ನಾಟಕದ ಚುನಾವಣೆಯಲ್ಲಿ ಕಾಣಿಸುತ್ತಿದೆ.

ಗಾಂಧಿತತ್ವಗಳನ್ನು ಮತ್ತೆ ಅರ್ಥಪೂರ್ಣವಾಗಿ ರಾಜಕೀಯದಲ್ಲಿ ಅನುಷ್ಟಾನಗೊಳಿಸುವ ಮಹಾಭಿಲಾಷೆಯಿಂದ ಮಹಿಮಾ ಪಟೇಲ್ ಸ್ವರ್ಣಯುಗವನ್ನು ಆರಂಭಿಸಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರ್‍ಅಪ್ರೇಮ, ಪ್ರಾಮಾಣಿಕತೆಯ ತತ್ವಗಳೊಂದಿಗೆ ಆಧ್ಯಾತ್ಮದ ಚಿಂತನೆಯನ್ನೂ ಒಗ್ಗೂಡಿಸಿಕೊಂಡು ರಾಜಕೀಯ ಕ್ರಾಂತಿಯನ್ನು ಮಾಡುವತ್ತ ಒಂದು ಅತೀ ಸಣ್ಣ ಹೆಜ್ಜೆಯನ್ನಿರಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಂಡ/ಹಣ ಹಂಚದೆ ಚುನಾವಣೆಯನ್ನು ನಡೆಸಿದ ಇವರು, ಈ ಬಾರಿ ತಮ್ಮ ತತ್ವಗಳಿಗೆ ಪಕ್ಷದ ರೂಪ ಕೊಟ್ಟು ತಾವಿಟ್ಟ ಚಿಕ್ಕ ಹೆಜ್ಜೆಯನ್ನು ಭಧ್ರ ಹೆಜ್ಜೆಯಾಗಿಸುವತ್ತ ತಮ್ಮ ಚಿತ್ತವನ್ನು ನೆಟ್ಟಂತಿದೆ. ಈ ಹಿಂದೆ ಇವರೂ ಕೂಡ ಇತರೆ ರಾಜಕಾರಣಿಗಳಂತೆಯೇ ಇದ್ದು, ಕಳೆದ ಚುನಾವಣೆಯ ಕಾಲದಿಂದ ಮನಪರಿವರ್ತಿತರಾದಂತಿರುವ ಇವರು ಒಂದು ನವ್ಯ ಕ್ರಾಂತಿಯ ಹರಿಕಾರರಾಗುತ್ತಾರೋ ಅಥವಾ "ದೆವ್ವದ ಬಾಯಲ್ಲಿ ಭಗವದ್ಗೀತೆ" ಎನ್ನುವಂತಾಗುತ್ತಾರೋ ಕಾಲವೇ ಬಲ್ಲದು.

ಇರಲಿ, ನನ್ನ ಆಶಾಕಿರಣಕ್ಕೆ ಇನ್ನೂ ಒಂದು ಕಾರಣವಿದೆ! ನಮ್ಮ ನಿಮ್ಮಂತೆಯೇ ಅಪಾರ ದೇಶಪ್ರೇಮಿಯಾದ, ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ, ಭಾರತಕ್ಕಾಗಿ ತುಡಿಯುವ, ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆಯನ್ನು ಬಯಸುವ, ಶ್ರೀಸಾಮಾನ್ಯನ ಹಕ್ಕುಗಳನ್ನು ಕಾಪಾಡುವ, ಮಾನವೀಯತೆಯನ್ನು ಕಾಪಾಡುವ, ಕನ್ನಡ ನಾಡು-ನುಡಿಗಾಗಿ ಮಿಡಿಯುವ ಓರ್ವ ಯುವಕ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಂತರರಾಷ್ಟ್ರ್‍ಈಯ ರಾಜನೈತಿಕತೆಯಲ್ಲಿ ಎಂ.ಫಿಲ್ ಪಡೆದು, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಕುರಿತು ಕೊರಿಯಾದ ಯೂನಿವರ್ಸಿಟಿಯೊಂದರಿಂದ ಪಿ.ಹೆಚ್.ಡಿ ಪಡೆದಿರುವ, ದಕ್ಷಿಣ ಕೊರಿಯಾದಲ್ಲಿ ಉದ್ಯೋಗದಲ್ಲಿದ್ದ, http://www.ourkarnataka.com/ ನಲ್ಲಿ, ಮತ್ತು ಕೊರಿಯಾ ಪತ್ರಿಕೆಗಳಲ್ಲಿ ಇಂಗ್ಲಿಷ್ ಅಂಕಣಕಾರರಾಗಿದ್ದ ಆದರ್ಶವಾದಿ ಯುವಕ ಶ್ರೀ. ತಿಪಟೂರು ಚಂದ್ರಶೇಖರ್ ಅವರು ಹೊಳಲ್ಕೆರೆ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅಂದು ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ವಾಪಸ್ಸಾದರೆ, ಈ ನಮ್ಮ ಚಂದ್ರಶೇಖರ್ ತಮ್ಮ ದಕ್ಷಿಣ ಕೊರಿಯಾ ಉದ್ಯೋಗವನ್ನು ತೊರೆದು ಭಾರತಕ್ಕೆ ವಾಪಸ್ಸಾಗಿದ್ದಾರೆ. ಕಳೆದ ನಾಲ್ಕು ತಿಂಗಳುಗಳಿಂದ ಕ್ಷೇತ್ರದಲ್ಲಿ ಅಡ್ಡಾಡಿ ತಮ್ಮ ಉದ್ದೇಶವನ್ನು ಜನರಿಗೆ ತಿಳಿಸುತ್ತಿದ್ದಾರೆ. ಇವರ ಉದ್ದೇಶವನ್ನು ಕೇಳಿ ಜನ ನಗಾಡಿ ಅನುಕಂಪ ಸೂಚಿಸಿದರೂ ಲೆಕ್ಕಿಸದೆ ಛಲದಿಂದಿದ್ದಾರೆ. ಅಂದು ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದರೆ, ಈ ಚಂದ್ರಶೇಖರರು ನೈತಿಕ ಮೌಲ್ಯಗಳ ಸ್ವಾತಂತ್ರ್ಯಕ್ಕಾಗಿ ನಮ್ಮೊಳಗಿನ ರಕ್ತಬೀಜಾಸುರರ ವಿರುದ್ಧ ಹೋರಾಡಲಿದ್ದಾರೆ. ಸತ್ಯ, ನಿಷ್ಟೆ, ರಾಷ್ಟ್ರಭಕ್ತಿ, ಪ್ರಾಮಾಣಿಕತೆ ಈ ಎಲ್ಲಾ ಜನಸಾಮಾನ್ಯ ಗುಣಗಳ ಈ ಆದರ್ಶ ಯುವಕ, ಜನಸಾಮಾನ್ಯರಿಗೆ ಒಂದು ನೀತಿಬದ್ಧ ಪ್ರಾಮಾಣಿಕ ಚುನಾವಣೆಯ ಅರಿವು ಮೂಡಿಸಲು ಈ ಸಾಹಸಕ್ಕೆ ಕೈಹಾಕಿದ್ದಾರೆ. ಅಂದಹಾಗೆ ಈ ಚಂದ್ರಶೇಖರ್ ಇತರೆ ಎನ್ನಾರೈಗಳಂತೆ/ಆದರ್ಶ ಯುವಕರಂತೆ ಚುನಾವಣಾ ಕಾಲಕ್ಕೆ ಟೆಂಪರರಿಯಾಗಿ ಬಂದು ಸುದ್ದಿ ಮಾಡಿ ಮರೆಯಾಗುವಂತೆ ಇವರು ಭಾರತ ಪ್ರವೇಶ ಮಾಡುತ್ತಿಲ್ಲ! ತಮ್ಮ ಹೋರಾಟವನ್ನು ಚುನಾವಣೆಯಿಲ್ಲದ ಕಾಲಕ್ಕೂ ನಿರಂತರವಾಗಿ ಮುಂದುವರಿಸುವ ಉದ್ದೇಶದಿಂದ ಪರ್ಮನೆಂಟಾಗಿ ಹಿಂದಿರುಗಿದ್ದಾರೆ!

ಇವರ ಈ ಸಾಹಸಕ್ಕೆ ಹೊಳಲ್ಕೆರೆಯೇ ಏಕೆ? ಸಾಮಾನ್ಯವಾಗಿ ವಿದ್ಯಾವಂತರು ಹೆಚ್ಚಿರುವ ಬೆಂಗಳೂರಿನ ಯಾವುದಾದರೂ ಒಂದು ಕ್ಶೇತ್ರದಲ್ಲಿ ಇವರು ನಿಲ್ಲಬಹುದಿತ್ತು. ಅಲ್ಲದೇ ಅಲ್ಲಿನ ವಿದ್ಯಾವಂತರ ಬೆಂಬಲದಿಂದ ಗೆಲ್ಲುವ ಪ್ರಯತ್ನವನ್ನೂ ಮಾಡಬಹುದಿತ್ತು. ಆದರೆ ಬೆಂಗಳೂರಿನಂಥ ಪಟ್ಟಣಗಳು ಭಾರತವನ್ನು ಪ್ರತಿನಿಧಿಸುವುದಿಲ್ಲ. ಕರ್ನಾಟಕದ ಬೆಂಗಳೂರು ಆಗಲೇ ಸಿಂಗಾಪುರವನ್ನು, ಅಮೇರಿಕಾದ ಸಿಲಿಕಾನ್ ವ್ಯಾಲಿಯನ್ನೂ ಪ್ರತಿನಿಧಿಸುತ್ತಿದೆ! ಆದುದರಿಂದ ಪ್ರಸ್ತುತ ಕರ್ನಾಟಕವನ್ನು/ ಭಾರತವನ್ನು ಪ್ರತಿನಿಧಿಸಬಲ್ಲ, ಸಾಕಷ್ಟು ಹಳ್ಳಿಗಳನ್ನೊಳಗೊಂಡ ಹೊಳಲ್ಕೆರೆ ಕ್ಷೇತ್ರ, ಇವರ ಪ್ರಯೋಗಕ್ಕೆ ತಕ್ಕ ಸ್ಥಳವಾಗಿದೆ. ಚುನಾವಣಾ ಆಯೋಗದ ಮಿತಿಯಲ್ಲಿ ಚುನಾವಣಾ ವೆಚ್ಚ ಮತ್ತು ಪ್ರಚಾರ ಮಾಡುವ ಇವರು ಪ್ಲಾಸ್ಟಿಕ್ ಬಳಸದೆ, ಪರಿಸರವನ್ನು ಕೆಡಿಸದೆ, ಪೊಳ್ಳು ಆಶ್ವಾಸನೆಗಳನ್ನು ನೀಡದೆ, ಹಣ/ಹೆಂಡಗಳಿಲ್ಲದೆ, ಕ್ಷೇತ್ರದ ಸಮಸ್ಯೆಗಳನ್ನು ಪ್ರತಿನಿಧಿಸಿ, ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳುತ್ತ, ಗಾಂಧಿತತ್ವ, ಆದರ್ಶ, ಪ್ರಾಮಾಣಿಕತೆಯ ಮೌಲ್ಯಗಳಿಗೆ ನಿಷ್ಟರಾಗಿರುವ ಜನಪ್ರತಿನಿಧಿಯಾಗಿರುವುದಕ್ಕೆ ಬದ್ಧರಾಗಿದ್ದಾರೆ. ಇವರ ಆದರ್ಶಪಾಲನೆಯನ್ನು ವೈಯುಕ್ತಿಕವಾಗಿ ಬಲ್ಲ ನಾನು ಇವರ ಈ ಪ್ರಯತ್ನಕ್ಕೆ/ ಚುನಾವಣಾ ವೆಚ್ಚಕ್ಕೆ ಒಂದು ಕಿರು ವಂತಿಗೆಯನ್ನು ಕೊಡುತ್ತಿದ್ದೇನೆ. ಈ ಒಂದು ನೈತಿಕ ಬದಲಾವಣೆ/ಬದ್ಧತೆಯ ಬೆಂಬಲಕ್ಕೆ ಸಹಕರಿಸಲು ಬಯಸುವ ಓದುಗರು ನೇರವಾಗಿ ತಿಪಟೂರು ಚಂದ್ರಶೇಖರ್ ಅವರನ್ನು ಇಮೈಲ್ ಮುಖಾಂತರ ತಮ್ಮ ಅಭಿಪ್ರಾಯ, ವಂತಿಗೆಯನ್ನು ಕಳುಹಿಸುವ ರೀತಿಗಳನ್ನು ತಿಳಿದುಕೊಳ್ಳಲು ಸಂಪರ್ಕಿಸಬಹುದು. ಅವರ ಇಮೈಲ್ ವಿಳಾಸ hoysalatiptur@hotmail.com ಮತ್ತು ಅವರ ಮೊಬೈಲ್ ಸಂಖ್ಯೆ: ೯೯೦೨೧೪೫೫೩೦ (9902145530).

ಅಂದಹಾಗೆ ಚಂದ್ರಶೇಖರ್ ಅವರು ಸಮಾನ ಮನಸ್ಕರಾದ ಮಹಿಮಾ ಪಟೇಲರ ಸ್ವರ್ಣಯುಗ ಪಕ್ಷದಿಂದ ಹೊಳಲ್ಕೆರೆಯ ಚುನಾವಣಾ ಕಣದಲ್ಲಿದ್ದಾರೆ. ತಮ್ಮ ತತ್ವ/ಆದರ್ಶಗಳಿಗೆ ಒಂದೇ ಒಂದು ಓಟು ಬಿದ್ದರೂ ಅದೇ ಮಹಾಪ್ರಸಾದವೆಂದುಕೊಳ್ಳುತ್ತೇನೆ ಎನ್ನುತ್ತಾರೆ.

ಇನ್ನು ಈ ಹೊಳಲ್ಕೆರೆ ಕ್ಷೇತ್ರವನ್ನು ಗಮನಿಸೋಣ. ಈಗ ಮೀಸಲು ಕ್ಷೇತ್ರವಾಗಿರುವ ಹೊಳಲ್ಕೆರೆಯಲ್ಲಿ ಎಲ್ಲಾ ಪಕ್ಷಗಳ ಅಭ್ಯರ್ಥಿಗಳೂ ಭರಮಸಾಗರ ಮೀಸಲು ಕ್ಷೇತ್ರದಿಂದ ವಲಸೆಗೈದವರು. ಈ ಕ್ಷೇತ್ರದಲ್ಲಿ ಯಾವುದೇ ಪಕ್ಷಗಳಿಗಿಂತ ಎರಡು ಮಠಗಳು ಚುನಾವಣೆಯನ್ನು ನಿರ್ಧರಿಸುತ್ತವೆ ಎಂದರೆ ನಿಮಗಾಶ್ಚರ್ಯವಾಗಬಹುದು. ಹೌದು, ಇಲ್ಲಿ ನಡೆಯುವುದು, ವೀರಶೈವ ವಿರಕ್ತ ಪರಂಪರೆಯ ಚಿತ್ರದುರ್ಗದ ಮುರುಘಾಮಠ ಮತ್ತು ವೀರಶೈವ ಸಾಧು ಧರ್ಮದ ತರಳಬಾಳು ಮಠಗಳ ಹುಕುಂ.

ಈ ಎರಡೂ ಮಠಗಳ ಮಠಾಧೀಶರು, ತಾವುಗಳು ಮಠಾಧಿಪತಿಗಳೆನಿಸಿಕೊಳ್ಳುವುದಕ್ಕಿಂತ ಸಮಾಜಸುಧಾರಕರೆನ್ನಿಸಿಕೊಳ್ಳಲು ಬಯಸುತ್ತೇವೆ ಎಂದು ಆಗಾಗ್ಗೆ ಅಭಿಪ್ರಾಯಿಸುತ್ತಿರುತ್ತಾರೆ. ಹಾಗೆಯೇ ಸಮಾಜಸುಧಾರಣೆಗಾಗಿ ಮುರುಘಾಮಠವು ವಿಧವಾ ವಿವಾಹ, ಅನಾಥಮಕ್ಕಳ ಪಾಲನೆ, ಅಬಲರಿಗೆ ಗುರುಪೀಠ ಸಂಸ್ಥಾಪನೆ, ವೈಚಾರಿಕತೆಗಳ ಹರಿಕಾರರಿಗೆ ’ಬಸವಶ್ರೀ’ ಪ್ರಶಸ್ತಿ ಸ್ಥಾಪನೆ, ಮುಂತಾದವುಗಳನ್ನು ಮಾಡುತ್ತಿದ್ದರೆ, ತರಳಬಾಳು ಮಠವೂ ಕೂಡ ಸಾರಾಯಿಮುಕ್ತ ಗ್ರಾಮ, ರಂಗ ಚಟುವಟಿಕೆ, ಕಂಪ್ಯೂಟರ್ ಕ್ರಾಂತಿ, ವಿದ್ಯಾರಂಗಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಎರಡೂ ಮಠಗಳೂ ಬಸವತತ್ವ ಮತ್ತು ವಚನ ಸಾಹಿತ್ಯಕ್ಕೆ ಮಹತ್ವ ಕೊಟ್ಟಿವೆ. ನಾನೂ ಕೂಡ ವಚನ ಸಾಹಿತ್ಯ ಪ್ರಿಯನಾದುದರಿಂದ ಇಲ್ಲಿ ಸಾಂದರ್ಭಿಕವಾಗಿ ಕೆಲವು ವಚನಗಳನ್ನು ಬಳಸಿದ್ದೇನೆ. ನಾನು ನನ್ನ ವಾರದ ವಿಮಾನಯಾತ್ರೆಯಲ್ಲಿ ಎಲ್.ಬಸವರಾಜು ಅವರು ಸಂಪಾದಿಸಿರುವ "ಅಲ್ಲಮನ ವಚನ ಚಂದ್ರಿಕೆ"ಯನ್ನು ಆಗಾಗ್ಗೆ ಓದುತ್ತೇನೆ. ವಿಮಾನ ಹಾರಾಟದಲ್ಲಿದ್ದಾಗ (ಏರ್ ಬೋರ್ನ್), ರೆಡ್ ವೈನ್ ಕುಡಿಯುತ್ತ ಅಲ್ಲಮನನ್ನು ಓದುತ್ತಿದ್ದರೆ ಅದರ ಅನುಭವವೇ ಬೇರೆ! ಅದರಲ್ಲೂ ಫಸ್ಟ್ ಕ್ಲಾಸಿಗೆ ಅಪ್ಗ್ರೇಡ್ ಅಗಿ, ಕಿಟಕಿಯ ಪಕ್ಕದ ಸೀಟು ದೊರೆತು, ಹೊರಗಡೆ ಮೋಡಗಳ ರಾಶಿ ತುಂಬಿ, "ಕಾಯಗುಣವಳಿದು ಮಾಯಾಜ್ಯೋತಿ ವಾಯುವ ಕೂಡುವ ಮುನ್ನ........" ಎಂದು ಓದುತ್ತಿದ್ದರಂತೂ ಅದರ ಮಜಾ ಇನ್ನೂ ಚೆನ್ನ! ಹಾಂ, ಚಿತ್ರದುರ್ಗದ ಶ್ರೀಗಳು ತಮ್ಮ ಧರ್ಮದ ಭಕ್ತರ ಇಮಾನಯಾತ್ರೆಯ (ಅಂತಿಮಯಾತ್ರೆ) ವಾಹನದಲ್ಲಿ ಕೂಡ ವಚನಗಳ ಕ್ಯಾಸೆಟ್ ಹಾಕಿಸುವ ವ್ಯವಸ್ಥೆ ಮಾಡಿದ್ದಾರಂತೆ. ಮೃತರ ಆತ್ಮ ವಾಯುವಿನಲ್ಲಿ ಲೀನವಾಗಿ, ಆಕಾಶದಲ್ಲಿ ತೇಲುತ್ತ ಆ ವಚನ ವಾಚನವನ್ನು ಅನುಭವಿಸಬಹುದಾದಂತಹ ಒಂದು ಅದ್ಭುತ ವಿಲಕ್ಷಣ ರಸಾನುಭವ, ನನಗೆ ಪ್ರತಿವಾರವೂ ಆಗುತ್ತದೆ! ನಾನು ನನ್ನ ಉದ್ಯೋಗಕ್ಕೆ/ಅಮೇರಿಕಾಕ್ಕೆ ಸದಾ ಋಣಿಯಾಗಿರಬೇಕು, ಪ್ರತಿ ವಾರವೂ ನನ್ನನ್ನು ಶಿಕಾಗೋನಿಂದ ನ್ಯೂಯಾರ್ಕ್/ ನ್ಯೂಯಾರ್ಕ್ ನಿಂದ ಶಿಕಾಗೋ ಸುತ್ತಿಸುತ್ತ ಬದುಕಿರುವಾಗಲೇ ನನಗೆ ಈ ಅನುಭಾವವನ್ನು ಕಂಡುಕೊಳ್ಳಲು ಅವಕಾಶವನ್ನು ನೀಡಿರುವುದಕ್ಕೆ!

ಕ್ಷಮಿಸಿ, ವಚನವೆಂದೊಡನೆಯೇ ನನ್ನ ಬರವಣಿಗೆಯ ರಚನಕ್ರಿಯೆ ದಾರಿ ತಪ್ಪುತ್ತದೆ! ಇರಲಿ, ಈಗಿನ ಚುನಾವಣೆಯಲ್ಲಿ ಈ ವಿರಕ್ತ ಬ್ರಹ್ಮಚಾರೀ ಸಾಧು ಸನ್ಯಾಸೀ ಸಮಾಜಸುಧಾರಕರು ಪ್ರತಿಪಾದಿಸುವ ಮತ್ತು ಭೋಧಿಸುವ ತತ್ವ, ನಿಷ್ಟೆ, ಪ್ರಾಮಾಣಿಕತೆ, ವೈಚಾರಿಕತೆ, ದೇಶಭಕ್ತಿಯಂತಹ ನೈತಿಕ ಮೌಲ್ಯಗಳ ಆದರ್ಶಗಳನ್ನು ಹೊಂದಿರುವ ಮೂವತ್ತೇಳರ ಹರೆಯದ ಈ ಯುವಕನನ್ನು, ಈ ಈರ್ವ ಮಠಾಧೀಶರು ಸಾರ್ವಜನಿಕವಾಗಿ ಬೆಂಬಲಿಸುವರೇ ನೋಡಬೇಕು!

ಹಾಂ! ಅಂದ ಹಾಗೆ ಈ ಮಠಾಧೀಶ್ವರರಿಗೆ ತಮ್ಮ ತಮ್ಮ ಜಾತಿಯ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂಬ ಧರ್ಮ ಸಂಕಟವೂ ಇಲ್ಲ. ಏಕೆಂದರೆ ಇದು ಮೀಸಲು ಕ್ಷೇತ್ರ! ಈ ಯಾವ ಕಟ್ಟುನಿಟ್ಟುಗಳಿಲ್ಲದೆ, ಈ ಮಠಾಧೀಶ್ವರರುಗಳು ತಮ್ಮ ತಮ್ಮ ಆಶೀರ್ವಚನಗಳಲ್ಲಿ ಚಂದ್ರಶೇಖರರನ್ನು ಬೆಂಬಲಿಸಿ ನೈತಿಕತೆಯ ಘನತೆಯನ್ನು ಉದ್ಧರಿಸುತ್ತಾರೆಂದು ಆಶಿಸುವೆ. ಇನ್ನೊಂದು ತಿಂಗಳಿನಲ್ಲಿಯೇ ತಿಳಿಯುವುದು "ಒಲೆ ಹತ್ತಿ ಉರಿದಡೆ ನಿಲಲುಬಹುದು, ಧರೆ ಹತ್ತಿ ಉರಿದೊಡೆ ನಿಲಬಹುದೇ, ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ, ನಾರಿ ತನ್ನ ಮನೆಯಲ್ಲಿ ಕಳುವಡೆ, ತಾಯ ಮೊಲೆವಾಲು ನಂಜಾಗಿ ಕೊಲುವಡೆ ಇನ್ನಾರಿಗೆ ದೂರುವೆ ತಂದೆ ಕೂಡಲಸಂಗಮದೇವ? ನೀ ಹುಟ್ಟಿಸಿ ಜೀವನ ಭವದುಖಿಃಯ ಮಾಡಿದ ಬಳಿಕ, ಬಿಡಿಸುವರುಂಟಾರು?" ಎಂದು!

ಒಟ್ಟಿನಲ್ಲಿ ಚಂದ್ರಶೇಖರರ ಈ ಪ್ರಯತ್ನಕ್ಕೆ ದೊರಕುವ ಮತ, ಗಾಂಧೀ ದೇಶ; ಸುಸಂಸ್ಕೃತ ದೇಶ; ತತ್ವನಿಷ್ಟೆಗಳ ದೇಶ; ಮೌಲ್ಯಾಧಾರಿತ ರಾಜಕಾರಣದ ದೇಶ; ಇನ್ನೂ ಏನೇನೋ ಅಲಂಕಾರಿಕ ಶಬ್ಧ/ವರ್ಣನೆಗಳಿಂದ ಹಾಡಿ ಹೊಗಳುವುದರ ನಿಜ ಮಾನದಂಡವಾಗುತ್ತದೆ ಎಂದುಕೊಂಡಿದ್ದೇನೆ. ಇಲ್ಲಿ ಇವರು ಠೇವಣಿ ಕಳೆದುಕೊಂಡರೆ ಅದು ಭಾರತೀಯ ಮೌಲ್ಯಗಳ ಠೇವಣಿಯಾಗುತ್ತದೆ. ಇಲ್ಲಿ ಚಂದ್ರಶೇಖರರೇನಾದರೂ ಗೆದ್ದರೆ, "ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ ಮೇದು ಬಂದೆನೆಂದರೆ-ಅದ ಕಂಡು ಬೆರಗಾದೆ! ರಕ್ಕಸಿಯ ಮನೆಗೆ ಹೋಗಿ ನಿದ್ದೆಗಯ್ದು ಬಂದೆನೆಂದರೆ-ಅದ ಕಂಡು ಬೆರಗಾದೆ! ಜವನ ಮನೆಗೆ ಹೋಗಿ ಸಾಯದೆ ಬದುಕಿ ಬಂದೆನೆಂದರೆ-ಅದ ಕಂಡು ಬೆರಗಾದೆ! ಗುಹೇಶ್ವರ" ಎಂದು ಅಲ್ಲಮನು ಬೆರಗಾದಂತೆ ನಾನು ಬೆಕ್ಕಸ ಬೆರಗಾಗುವೆ! ಏಕೆಂದರೆ ಭವ್ಯ ಸ್ವತಂತ್ರ ಭಾರತದಲ್ಲಿ "ಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೆಣ್ಣು-ಹೊನ್ನು-ಮಣ್ಣೆಂದು ಸತ್ತುದು ಕೋಟಿ, ಗುಹೇಶ್ವರ, ನಿಮಗಾಗಿ ಸತ್ತವನಾರನೂ ಕಾಣೆ" ಎಂಬಂತೆ ನಮ್ಮ ಹೆಮ್ಮೆಯ ಯೋಧರನ್ನು ಬಿಟ್ಟರೆ ದೇಶಕ್ಕಾಗಿ ಮತ್ಯಾರೂ ಸತ್ತುದನ್ನು ನಾ ಕಾಣೆ!

ಅಣಕ:

ನಮ್ಮ ವಚನಕಾರರು ಪ್ರಾಪಂಚಿಕ/ಪಾರಮಾರ್ಥಿಕ, ಲೌಕಿಕ/ಅಲೌಕಿಕ, ಮೂರ್ತ/ಅಮೂರ್ತಗಳನ್ನು ಸಾಮಾನ್ಯಭಾಷೆಯಲ್ಲಿ ಅಸಾಮಾನ್ಯವಾಗಿ ಹಿಡಿದಿಟ್ಟಿದ್ದಾರೆ. ಇವರ ಈ ಸರಳತೆಯೇ ಇವರುಗಳ ಕುರಿತಾದ ಎಲ್ಲಾ ವಿವಾದಗಳಿಗೆ ಕಾರಣವೆನಿಸುತ್ತದೆ. ಇವರುಗಳೂ ಕೂಡ ರನ್ನ, ಅಮೋಘವರ್ಷ, ಪಂಪ, ಕುಮಾರವ್ಯಾಸರಂತೆ ಕಬ್ಬಿಣದ ಕಡಲೆ ಕನ್ನಡದಲ್ಲಿ ತಮ್ಮ ಆಲೋಚನೆಗಳನ್ನು ಹರಿಯ ಬಿಟ್ಟಿದ್ದರೆ, ಅದನ್ಯಾವ ರಾಜಕಾರಣೀ ಪಂಡಿತನೂ ಓದಿ ವಿವಾದಗಳನ್ನು ಸೃಷ್ಟಿಸುತ್ತಿರಲಿಲ್ಲವೆನೋ? ಈ ವಚನಗಳು ಎಷ್ಟು ಸರಳವೆಂದರೆ, ನನ್ನ ಪೋಲೀ ಸ್ನೇಹಿತರುಗಳು ಕೂಡ ಬಸವ, ಅಲ್ಲಮ, ಮತ್ತು ಅಕ್ಕನ ಕುರಿತು ಒಂದು ಪೋಲೀ ವಿವಾದವನ್ನು ತೇಲಿಸಿದ್ದಾರೆ. ಆ ಪೋಲೀ ವಿವಾದವನ್ನು ಕೇಳಿರುವಿರಾ? ಹೀಗಿದೆ ನೋಡಿ ಅದು...

ಅಕ್ಕಮಹಾದೇವಿಯ ವಚನದ "ಚೆನ್ನ ಮಲ್ಲಿಕಾರ್ಜುನ" ಎಂಬ ಅಂಕಿತವನ್ನು ಪುಲ್ಲಿಂಗಕ್ಕೂ, ಅಲ್ಲಮಪ್ರಭುವಿನ "ಗುಹೇಶ್ವರ" ಎಂಬ ಅಂಕಿತವನ್ನು ಸ್ತ್ರೀಲಿಂಗಕ್ಕೂ ಮತ್ತು ಗುರು ಬಸವಣ್ಣನ "ಕೂಡಲಸಂಗಮದೇವ" ಎಂಬ ಅಂಕಿತವನ್ನು ಮಿಲನ ಮಹೋತ್ಸವಕ್ಕೂ ಹೋಲಿಸುತ್ತ, ನನ್ನ ಪೋಲೀ ಲಿಂಗಿಗಳು ವಚನಗಳ ಸಾರವನ್ನು ರಜನೀಶರ "ಸಂಭೋಗದಿಂದ ಸಮಾಧಿ" ತತ್ವದೊಂದಿಗೆ ಸಮೀಕರಿಸುತ್ತಾರೆ! ನನ್ನ ಇನ್ನೊಬ್ಬ ಪೋಲೀ ಸ್ನೇಹಿತ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ "ನೋಟದ ಭಕ್ತಿ ಬಸವನಿಂದಾಯಿತ್ತು, ಕೂಟದ ಜ್ಞಾನ ಬಸವನಿಂದಾಗಿತ್ತು ಕಾಣಾ" ಎಂಬ ಮಡಿವಾಳ ಮಾಚಿದೇವನ ವಚನವನ್ನು ಆಧಾರವಾಗಿಟ್ಟುಕೊಂಡು, ಬಂಜಗೆರೆ ಜಯಪ್ರಕಾಶರ ಪಂಡಿತ ಕೀಟಲೆ ತರ್ಕವನ್ನು ಪ್ರಯೋಗಿಸಿ, ಬಸವಣ್ಣನಿಗೂ ಮಾಚಯ್ಯನಿಗೂ ಸಂಬಂಧವನ್ನು ಕಲ್ಪಿಸುತ್ತಾನೆ!!! ಇದು ವಚನಗಳ ಸರಳತೆಯ ಶೋಷಣೆಯ ಪರಮಾವಧಿ! ಅದನ್ನೇ ಬಂಜಗೆರೆಯಂತಹ ಕೀಟಲೆ ಪಂಡಿತರು ಮಾಡಿದ್ದುದು. ಆದರೆ ಓಲೈಕೆಯ ಭರಕ್ಕೆ ಮೌಲ್ಯಗಳು ಮಣ್ಣುಪಾಲಾಗಿರುವ ಭಾರತದಲ್ಲಿ, ಇಂತಹ ಪರಮಾವಧೀ ಶೋಷಣೆಗಳೇ ವಿಜೃಂಭಿಸುತ್ತಿರುವುದು ಭಾರತದ ಸಾಂಸ್ಕೃತಿಕ/ಸಾಹಿತ್ಯಿಕ/ಐತಿಹಾಸಿಕ ದುರಂತ!

2 comments:

Anonymous said...

Hi Ravi,

It's nice to see foriegn returned people like Tiptur chandrashekar, who's desperately waiting to serve the ppl of his region.. I wish him all the best for his election contest.. Let us see what swamijis and ppl over there decide on chandrashekar.. Hoping for the best.. We need more and more ppl like chandrashekar to acquire different places of karnataka to give it a better future.. Thanks ravi.. I was pleased to know about Mr.Chandrashekar and his aspirations.

Thanks,
Narayan

Supreeth.K.S said...

ನಿಜಕ್ಕೂ ತಿಪಟೂರು ಚಂದ್ರಶೇಖರ್ ಅಭಿನಂದನೀಯರು... ಅವರು ಗೆಲ್ಲಲಿ ಎಂದು ಹಾರೈಸುವೆ


......
http://uniquesupri.wordpress.com/